Saturday, May 4, 2013

ಚುನಾವಣೆ ಸಂಭ್ರಮ ಮಂಕುಗೊಳಿಸಿರುವ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಾ ಬಂದಿರುವ ಚುನಾವಣೆ  ತನ್ನ ಸಾಂಪ್ರದಾಯಿಕ ಸಂಭ್ರಮ-ಸಡಗರಗಳನ್ನು ಕಳೆದುಕೊಳ್ಳುತ್ತಿದೆಯೇ?.
ಚುನಾವಣಾ ಕಾಲದಲ್ಲಿ ಸಾಮಾನ್ಯವಾಗಿ ನಡೆಯುವ  ಚರ್ಚೆ -ಜಗಳಗಳೂ ಕೂಡಾ ಅಂಜಿಕೆ-ಅಳುಕಿನ ವಾತಾವರಣದಿಂದಾಗಿ ನಡೆಯದೆ  ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸಾರ್ವಜನಿಕ ಸಂವಾದ ನಡೆಯದಂತಾಗಿದೆಯೇ? ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಬೀದಿಗಳಲ್ಲಿ ನೋಡುತ್ತಾ ಬಂದವರನ್ನು ಇಂತಹ ಪ್ರಶ್ನೆಗಳು ಖಂಡಿತ ಕಾಡಬಹುದು.
ಇಪ್ಪತ್ತು ದಿನ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ನಾನು ಅಂದಾಜು ಎರಡುಸಾವಿರ ಕಿ.ಮೀ. ಪ್ರಯಾಣ ಮಾಡಿದ್ದೇನೆ. ರಾಜಕೀಯ ಸಭೆಗಳ ವೇದಿಕೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಪೋಸ್ಟರ್,ಬ್ಯಾನರ್, ಕರಪತ್ರ, ಬ್ಯಾಡ್ಜ್, ಪಕ್ಷಗಳ ಧ್ವಜಗಳು ಕಣ್ಣಿಗೆ ಬಿದ್ದಿಲ್ಲ. ನನ್ನ ಕಣ್ಣಿನಲ್ಲಿಯೇ ದೋಷ ಇರಬಹುದೇನೋ ಎಂಬ ಅನುಮಾನ ಮೂಡಿ ಎಲ್ಲಿಯಾದರೂ ಪೋಸ್ಟರ್-ಬ್ಯಾನರ್ ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸುವಂತೆ ಚಾಲಕನಿಗೂ ಹೇಳಿದ್ದೆ. ಅವನ ಕಣ್ಣಿಗೂ ಬೀಳಲಿಲ್ಲ. ಇದನ್ನು ಕಂಡು ಎಷ್ಟೊಂದು ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ ಎಂದು ಸಂತೋಷಪಡೋಣವೇ?
ಊರು ತುಂಬಾ ಪೋಸ್ಟರ್,ಬ್ಯಾನರ್‌ಗಳು,ಕಾರು-ಅಟೋರಿಕ್ಷಾಗಳಲ್ಲಿ ಮೈಕ್ ಪ್ರಚಾರ, ಕರಪತ್ರ, ಬ್ಯಾಡ್ಜ್‌ಗಳನ್ನು ಸಂಗ್ರಹಿಸಲು ಕಾರು-ರಿಕ್ಷಾಗಳ ಹಿಂದೆ ಓಡುವ ಬಾಲಕರು, ಪಕ್ಷ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವ ರೀತಿಯಲ್ಲಿ ಮನೆಗಳ ಮೇಲೆ ಹಾರಾಡುವ ಧ್ವಜಗಳು...ಇವೆಲ್ಲವೂ ಚುನಾವಣೆಯ ಕಾಲದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವೊಂದಿತ್ತು.
ಎಲ್ಲೆಲ್ಲೂ ಖಾಲಿ ಖಾಲಿ: ಪಕ್ಷಗಳ ಪರವಿರೋಧದಿಂದಾಗಿ ನಡೆಯುವ ಸಣ್ಣಪುಟ್ಟ ಜಗಳ ಮತ್ತು  ಕೋಪ-ದ್ವೇಷಗಳು ಒಂದಷ್ಟು ದಿನ ಸ್ನೇಹ-ಸಂಬಂಧಗಳನ್ನು ಕದಡಿ ನಂತರ ತಿಳಿಯಾಗುತ್ತಿತ್ತು. ಆದರೆ ಇಂದು ಯಾವುದಾದರೂ ಊರೊಳಗೆ ಪ್ರವೇಶಿಸಿದರೆ ಇಂತಹ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯೂ ಚುನಾವಣೆಯ ಸುಳಿವೇ ಇಲ್ಲ. ಎಲ್ಲವೂ ಖಾಲಿ-ಖಾಲಿ, ಬೋಳು-ಬೋಳು.
`ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವ ಇಂತಹ ಕ್ರಮಗಳು ಸ್ವಾಗತಾರ್ಹ' ಎಂದು ಹೇಳುವವರಿದ್ದಾರೆ. ಚುನಾವಣಾ ಪ್ರಚಾರದ ಅವಧಿಯನ್ನು ಒಂದುವಾರಕ್ಕೆ ಸೀಮಿತಗೊಳಿಸಿದರೆ ಮತದಾರರಿಗೆ ಒಡ್ಡುವ ಆಮಿಷ ಇನ್ನೂ ಕಡಿಮೆಯಾಗಬಹುದು' ಎಂದು ಸಲಹೆ ನೀಡುವವರೂ ಇದ್ದಾರೆ.
ಆದರೆ ದುಡ್ಡು,ಹೆಂಡ,ಬಾಡು,ಸೀರೆ ಹಂಚುವ, ಜಾತಿ-ಧರ್ಮವನ್ನು ಬಳಸಿಕೊಳ್ಳುವ ಚುನಾವಣಾ ಅಕ್ರಮಗಳ ಅತಿರೇಕ ಒಂದೆಡೆಯಾದರೆ, ಈ ಅಕ್ರಮಗಳನ್ನೆಲ್ಲ ತಡೆಯಲು ಹೊರಟು ಚುನಾವಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳದಂತೆ ಮಾಡುವುದು ಇನ್ನೊಂದು ಅತಿರೇಕದಂತೆ ಕಾಣಿಸುತ್ತದೆ.
`ದುಡ್ಡು ಹಂಚುವುದನ್ನು ತಡೆಯಲಿ, ಪ್ರಚಾರಕ್ಕೆ ಬಂದ ಕಾರ್ಯಕರ್ತರು ಊಟ ಮಾಡಿದ ತಟ್ಟೆಗಳನ್ನೂ ಲೆಕ್ಕ ಮಾಡುವುದು ಏನು ಅಸಹ್ಯ ಸಾರ್? ನಮಗಾಗಿ ಬಂದು ಈ ಬಿಸಿಲಿನಲ್ಲಿ ಅವರು ಬೆವರು ಸುರಿಸುತ್ತಾರೆ ಅವರಿಗೆ ಅಷ್ಟೂ ಕೊಡುವುದು ಬೇಡವೇ? ರೂ16 ಲಕ್ಷದಲ್ಲಿ ಚುನಾವಣೆ ಮಾಡ್ಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಗುಲ್ಬರ್ಗ ಜಿಲ್ಲೆಯ ಕ್ಷೇತ್ರವೊಂದರ ಅಭ್ಯರ್ಥಿಯೊಬ್ಬ.
`ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ನಿಜವಾಗಿ ನಿಮ್ಮ ಚುನಾವಣಾ ವೆಚ್ಚ ಕಡಿಮೆಯಾಗಿದೆಯೇ?' ಎಂಬ ಪ್ರಶ್ನೆಯನ್ನು ಹಲವಾರು ಅಭ್ಯರ್ಥಿಗಳನ್ನು ನಾನು ಕೇಳಿದ್ದೆ. ಕೆಲವರು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು, ಇನ್ನೂ ಕೆಲವರು ದುಡ್ಡು ಯಾಕೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬ ವಿವರ ನೀಡಿದರೇ ಹೊರತು  ಯಾರೊಬ್ಬರೂ `ಈ ಬಾರಿ ಖರ್ಚು ಕಡಿಮೆ' ಎಂದು  ಹೇಳಲಿಲ್ಲ.
ಈ ಪೋಸ್ಟರ್,ಬ್ಯಾನರ್,ಕರಪತ್ರ, ಟೋಪಿ, ಬ್ಯಾಡ್ಜ್‌ಗಳಿಗೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಕೆಲವು ಲಕ್ಷ         ರೂಪಾಯಿ ಮಾತ್ರ. ಸಾಮಾನ್ಯವಾಗಿ ಇವುಗಳನ್ನೆಲ್ಲ ಪಕ್ಷಗಳೇ ಪೂರೈಸುತ್ತವೆ. ಮತದಾರರಿಗೆ ಆಮಿಷವೊಡ್ಡಲು ನೀಡುವ ಹಣದ ಮೊತ್ತವೇ ದೊಡ್ಡದು. ಇದು ಕಡಿಮೆಯಾಗಿದೆಯೇ?
ಹಣದ ಪ್ರಭಾವ ಕಡಿಮೆ?: ಅಕ್ರಮವಾಗಿ ಹಣ ಸಂಗ್ರಹ ಮತ್ತು ಸಾಗಾಣಿಕೆಯ ವಿರುದ್ಧದ ಕ್ರಮದಿಂದಾಗಿ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ  ನಡೆಸಲಾಗುತ್ತದೆ.  ಪ್ರವಾಸದುದ್ದಕ್ಕೂ ಕನಿಷ್ಠ 25-30 ಕಡೆಗಳಲ್ಲಿ ನಮ್ಮ ಕಾರಿನ ತಪಾಸಣೆ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲಿ ತಪಾಸಣೆಯ ಕ್ರಮ ಒಂದೇ ರೀತಿಯದ್ದು. ಕಾರು ನಿಲ್ಲಿಸಿದ ಮೇಲೆ ಡಿಕ್ಕಿ ತೆರೆಯಲು ಹೇಳುವುದು, ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುವುದು, ಚಾಲಕನ ಹೆಸರು ಮತ್ತು ಕಾರಿನ ನಂಬರ್ ಬರೆದುಕೊಳ್ಳುವುದು-ಅಲ್ಲಿಗೆ ತಪಾಸಣೆ ಮುಗಿಯಿತು. ಯಾರೂ ಕೂಡಾ ಕಾರಿನಲ್ಲಿದ್ದ ನನ್ನನ್ನು ಯಾರು ಎಂದು ಕೇಳಿಲ್ಲ, ಕಾರಿನೊಳಗಿದ್ದ ನನ್ನ ಬ್ಯಾಗ್ ಚೆಕ್ ಮಾಡಿಲ್ಲ. `ಈ ರೀತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವುದರಿಂದ ಹಣದ ಸಾಗಾಣಿಕೆಗೆ ತೊಂದರೆಯಾಗಿದೆಯೇ?' ಎಂದು ರಾಜಕೀಯ ಪಕ್ಷದ ನಾಯಕರೊಬ್ಬರನ್ನು ಕೇಳಿದೆ. `ದುಡ್ಡು ಸಾಗಿಸುವವರು ಹೆದ್ದಾರಿಯಲ್ಲಿ  ಅದೂ ಕಾರುಗಳಲ್ಲಿ  ಹೋಗುತ್ತಾರೆಯೇ? ಹೆದ್ದಾರಿ ಬಿಟ್ಟು ಊರೊಳಗೆ ಒಳದಾರಿಗಳಿಲ್ಲವೇ? ಕಾರು ಯಾಕೆ ಬೇಕು, ಮೋಟಾರ್ ಸೈಕಲ್,ಬಸ್,ಲಾರಿಗಳಿಲ್ಲವೇ? ಎಂದು ಪ್ರಶ್ನಿಸಿದ, ಆತ ದುಡ್ಡು ಸಾಗಿಸುವ ಅನೇಕ ಹೊಸ ವಿಧಾನಗಳನ್ನು ತಿಳಿಸಿ ಅಚ್ಚರಿಗೊಳಿಸಿದ.
`ಚುನಾವಣಾ ಆಯೋಗದ ಕ್ರಮಗಳಿಂದಾಗಿ ಬರುವ ದುಡ್ಡು ಹೋಯಿತು' ಎಂದು ಹಳ್ಳಿಗಳಲ್ಲಿ ಜನ ಕೊರಗುತ್ತಿದ್ದಾರೆ. `ಖರ್ಚು ಕಡಿಮೆಯಾಗಿಲ್ಲ' ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಚುನಾವಣೆ ಘೋಷಣೆಯಾದ ಕೂಡಲೇ ಬಹಳಷ್ಟು ರಾಜಕಾರಣಿಗಳು  ಊರುಗಳಲ್ಲಿರುವ ತಮ್ಮ ಬೆಂಬಲಿಗರ ಮನೆಗಳಿಗೆ ಹಣ ಸಾಗಿಸಿದ್ದಾರೆ.
`ಸಮಸ್ಯೆ ಹಣದ್ದು ಸಾರ್, ಸಾಗಿಸುವುದು, ವಿತರಿಸುವುದು ಅಲ್ಲ. ಅದಕ್ಕೆ ಬೇಕಾದಷ್ಟು ದಾರಿಗಳಿವೆ ' ಎಂದ ಹಾಸನದ ರಾಜಕೀಯ ಕಾರ್ಯಕರ್ತನೊಬ್ಬ. `ನಮ್ಮ ಲೀಡರ್‌ಗಳಿಗೆ ದುಡ್ಡು ಕೊಟ್ಟಿದ್ದಾರಂತೆ, ಎಲೆಕ್ಷನ್ ಅಧಿಕಾರಿಗಳ ಭಯ ತೋರಿಸಿ ಅದನ್ನು ತಾವೇ ಇಟ್ಟುಕೊಂಡಿದ್ದಾರೆ' ಎಂದ ಬಳ್ಳಾರಿಯ ಮತದಾರನೊಬ್ಬ.
ಇದಕ್ಕೆಲ್ಲ ಏನು ಪರಿಹಾರ? ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಸಂಗ್ರಹಿಸಿದ್ದ ಮತ್ತು ಸಾಗಿಸುತ್ತಿದ್ದ ಹಲವಾರು ಕೋಟಿ ರೂಪಾಯಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹಣ ಸಾಗಿಸುತ್ತಿರುವವರನ್ನೂ ಬಂಧಿಸಿದ್ದರು. ಆ ಪ್ರಕರಣಗಳೇನಾಯಿತು? ಯಾರಿಗಾದರೂ ಶಿಕ್ಷೆಯಾಯಿತೇ? ಇಂತಹ ಅಕ್ರಮಗಳನ್ನು ಮಾಡಿದ್ದ ಎಷ್ಟು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ? ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಅದರಲ್ಲಿ ಒಂದಷ್ಟು ಪಾಲು ಕೈಬಿಟ್ಟುಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಿಕ್ಷೆಯ ಭಯದಿಂದ ಮಾತ್ರ ಅವರನ್ನು ಹದ್ದುಬಸ್ಸಿನಲ್ಲಿಡಲು ಸಾಧ್ಯ. ಅದು ಆಗುತ್ತಿಲ್ಲ.
ಕೋಟ್ಯಧಿಪತಿಗಳಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯನ್ನೂ ಮಾಡದಂತಹ ಸ್ಥಿತಿ ಇದೆ. ಯಾವ ರಾಜಕೀಯ ಪಕ್ಷವೂ ದುಡ್ಡಿಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಆಕಾಂಕ್ಷಿ ಕೋಟ್ಯಧಿಪತಿಗಳ ದುಡ್ಡಿನ ಮೂಲ ಯಾವುದು? ಅದು ಅಕ್ರಮವೇ,ಸಕ್ರಮವೇ? ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ನೀಡಿದ ಆಸ್ತಿವಿವರದ ಸತ್ಯಾಸತ್ಯತೆಯನ್ನು ಯಾರಾದರೂ ಪರಿಶೀಲಿಸುತ್ತಾರೆಯೇ? ಅದನ್ನು ಮಾಡಲು ಚುನಾವಣಾ ಆಯೋಗದಲ್ಲಿ ಸಿಬ್ಬಂದಿಯೂ ಇಲ್ಲ, ಅದಕ್ಕೆ ಸಮಯವೂ ಇಲ್ಲ.
ಚುನಾವಣೆ ಮುಗಿದ ನಂತರವಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಗೆ ಕಳುಹಿಸಿ ಎಂದು ಪರಿಶೀಲನೆಗೆ ಒಳಪಡಿಸಬಹುದಲ್ಲಾ? ಈ ರೀತಿ ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಅದರ ಮೂಲದಲ್ಲಿಯೇ ತಡೆಯುವ ಪ್ರಯತ್ನ ಮಾಡದೆ ಪೋಸ್ಟರ್,ಬ್ಯಾನರ್‌ಗಳ ಮೇಲೆ ಕಡಿವಾಣ ಹಾಕುವುದರಿಂದ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವೇ? ಇಂತಹ `ಕಟ್ಟುನಿಟ್ಟಿನ ಕ್ರಮಗಳು' ಚುನಾವಣೆಯ ಸಂಭ್ರಮವನ್ನು ಮಂಕುಗೊಳಿಸಬಹುದು ಅಷ್ಟೆ.

Friday, May 3, 2013

ಜಾತ್ಯತೀತ ಜನತಾದಳ ಕೈಗೆ ಎಟುಕದಿರುವ `ಉತ್ತರ'

ತುಮಕೂರು: ತಮ್ಮದು ರಾಷ್ಟ್ರೀಯ ಪಕ್ಷ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಷ್ಟೇ ಹೇಳಿಕೊಂಡರೂ ಮೂಲತಃ ಜಾತ್ಯತೀತ ಜನತಾದಳ ಹಳೆ ಮೈಸೂರು ಭಾಗಕ್ಕೆ ಸೇರಿರುವ ಒಂದು ಪ್ರಾದೇಶಿಕ ಪಕ್ಷ. ಈ ಇಮೇಜನ್ನು ತೊಡೆದುಹಾಕಿ ಕನಿಷ್ಠ ರಾಜ್ಯಮಟ್ಟದ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜೆಡಿ (ಎಸ್) ಅನ್ನು ಬೆಳೆಸಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಕಳೆದೆರಡು ಚುನಾವಣೆಗಳಲ್ಲಿ ಈ ಪ್ರಯತ್ನದಲ್ಲಿ ವಿಫಲವಾಗಿರುವ ಪಕ್ಷದ ನಾಯಕತ್ವ ವಹಿಸಿರುವ ದೇವೇಗೌಡರು ಮತ್ತು ಮಗ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕದ ಮತದಾರರು ಕೈಹಿಡಿದರೆ ಮಾತ್ರ ಈ ಕನಸು ನನಸಾಗಲು ಸಾಧ್ಯ ಎಂಬ ಸತ್ಯವನ್ನು ಚೆನ್ನಾಗಿಯೇ ಬಲ್ಲ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಡೆಬಿಡದೆ ಆ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ವಚನಭಂಗದಿಂದಾಗಿ ಹಿಡಿದ ಗ್ರಹಣದಿಂದ ಜೆಡಿ (ಎಸ್) ಇನ್ನೂ ಸಂಪೂರ್ಣವಾಗಿ ಬಿಡುಗಡೆ ಪಡೆದ ಹಾಗಿಲ್ಲ.
ಕೇವಲ 28 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾದ 2008ರ ವಿಧಾನಸಭಾ ಚುನಾವಣೆಯನ್ನು ಒಂದು ದುಃಸ್ವಪ್ನದಂತೆ ಮರೆತುಬಿಟ್ಟು 58 ಸ್ಥಾನಗಳ ಗೆಲುವಿಗೆ ಕಾರಣವಾದ 2004ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಬಹುದೆಂಬ ಕನಸನ್ನು ಜೆಡಿ (ಎಸ್) ಕಾಣುತ್ತಿದೆ.  2004ರ ಚುನಾವಣೆಯಲ್ಲಿ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಸೂಚನೆಯನ್ನು ಜೆಡಿ(ಎಸ್) ನೀಡಿದ್ದು ನಿಜ. ಆ ಚುನಾವಣೆಯಲ್ಲಿ ಜೆಡಿ(ಎಸ್) ಪಕ್ಷದಿಂದ ಆರಿಸಿ ಬಂದಿರುವ 58 ಶಾಸಕರಲ್ಲಿ 20ಕ್ಕೂ ಹೆಚ್ಚು ಶಾಸಕರು ಉತ್ತರ ಕರ್ನಾಟಕಕ್ಕೆ ಸೇರಿರುವ  ಬೀದರ್, ಗುಲ್ಬರ್ಗ,ರಾಯಚೂರು,ಕೊಪ್ಪಳ,ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸೇರಿದವರು.
ಗೆಲುವಿನ ಚೈತ್ರಯಾತ್ರೆ ಮುಂದುವರಿಯುವ ಎಲ್ಲ ಸಾಧ್ಯತೆಗಳಿದ್ದವು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿ ರಾಜ್ಯದಲ್ಲಿ ಅವರ ಪರವಾದ ಸದ್ಭಾವನೆಯ ಅಲೆಯನ್ನು ಎಬ್ಬಿಸಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್.ಡಿ.ದೇವೇಗೌಡರು ಗಳಿಸಲಾಗದ ಜನಪ್ರಿಯತೆಯನ್ನು ಕುಮಾರಸ್ವಾಮಿ ಅವರು  ಅಧಿಕಾರದ ಕಿರು ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪಡೆದುಕೊಂಡಿದ್ದರು. ಆದರೆ, ವಚನಭಂಗದ ಬಿರುಗಾಳಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಜನಪ್ರಿಯತೆಯ ಜತೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಕೂಡಾ ಜೆಡಿ (ಎಸ್) ಕಳೆದುಕೊಳ್ಳಬೇಕಾಯಿತು.
2008ರ ಚುನಾವಣೆಯಲ್ಲಿ ಆಯ್ಕೆಯಾದ 28 ಶಾಸಕರಲ್ಲಿ 18 ಶಾಸಕರು ಹಳೆಮೈಸೂರು ಭಾಗಕ್ಕೆ ಸೇರಿರುವ ಹಾಸನ, ಮಂಡ್ಯ,ತುಮಕೂರು, ರಾಮನಗರ,ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೇರಿದವರೆಂಬುದು ಗಮನಾರ್ಹ. ಈಗ ಮತ್ತೆ ಜೆಡಿ (ಎಸ್)ಗೆ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷ ವರ್ಚಸ್ಸು ತಂದುಕೊಡುವ ಪ್ರಯತ್ನ ನಡೆದಿದೆಯಾದರೂ ಅವಕಾಶಗಳು ಕ್ಷೆಣವಾಗಿವೆ.
ಉತ್ತರ ಕರ್ನಾಟಕದ ಒಂದಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಪಕ್ಷದಲ್ಲಿಯೇ ಉಳಿದುಕೊಂಡವರು ವೈಯಕ್ತಿಕವಾದ ಆಡಳಿತವಿರೋಧಿ ಅಲೆ ಎದುರಿಸುತ್ತಿದ್ದಾರೆ. ಜೆಡಿ(ಎಸ್) ಶಾಸಕರಾಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಅರಬಾವಿ ಕ್ಷೇತ್ರಗಳ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ದೇವದುರ್ಗ ಕ್ಷೇತ್ರದ ಶಿವನಗೌಡ ನಾಯಕ ಮೊದಲಾದವರು ಈಗ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿ (ಎಸ್) ಹಿನ್ನಡೆಗೆ ಇನ್ನೊಂದು ಪ್ರಮುಖ ಕಾರಣ, ಕರ್ನಾಟಕ ಜನತಾ ಪಕ್ಷ (ಕೆಜೆಪಿ). ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ವಿರೋಧಿಸುವವರು ಇಲ್ಲವೆ ಆ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಇರುವವರಿಗೆ ಹಿಂದಿನ ಚುನಾವಣೆಗಳಲ್ಲಿ ಇದ್ದ ಆಯ್ಕೆ ಜೆಡಿ (ಎಸ್) ಮಾತ್ರ. ಈ ಬಾರಿ ಆ ಸ್ಥಾನವನ್ನು ಕೆಜೆಪಿ ಆಕ್ರಮಿಸಿಕೊಂಡಿದೆ.
ಉದಾಹರಣೆಗೆ 2004ರ ಚುನಾವಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ವೈಜನಾಥ ಪಾಟೀಲ್, ಬಿ.ಆರ್.ಪಾಟೀಲ್ ಮತ್ತು ಎಂ.ವೈ.ಪಾಟೀಲ್ ಈ ಬಾರಿ ಕೆಜೆಪಿ ಅಭ್ಯರ್ಥಿಗಳು. ರಾಯಚೂರು ಜಿಲ್ಲೆಯ ಲಿಂಗಸಗೂರು, ರಾಯಚೂರು, ಸಿಂಧನೂರು ಮತ್ತು ಮಾನ್ವಿ, ಬೀದರ್‌ನ ಬಸವಕಲ್ಯಾಣ, ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ಮತ್ತು ಅಳಂದ, ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರಗಳನ್ನು ಹೊರತುಪಡಿಸಿ ಹೈದರಾಬಾದ್ ಕರ್ನಾಟಕದ ಬೇರೆ ಕ್ಷೇತ್ರಗಳಲ್ಲಿ ಜೆಡಿ (ಎಸ್) ವಿರೋಧಿ ಅಭ್ಯರ್ಥಿಗಳಿಗೆ ಪೈಪೋಟಿ ಕೊಡುವ ಸ್ಥಿತಿಯಲ್ಲಿ ಇಲ್ಲ.
ಇದರಿಂದಾಗಿ ಜೆಡಿ (ಎಸ್) ತನ್ನ ಸಂಖ್ಯಾವೃದ್ಧಿಗಾಗಿ ಹಳೆಮೈಸೂರು ಭಾಗವನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಈ ಭಾಗದಲ್ಲಿ ಜೆಡಿ (ಎಸ್)ನ ಸಾಂಪ್ರದಾಯಿಕ ನೆಲೆಗಳಿರುವ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿಯೇ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಸನದ ಮೂವರು ನಿಷ್ಠಾವಂತರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ ಮತ್ತು ಜವರೇಗೌಡ ಪಕ್ಷ ತ್ಯಜಿಸಿದ್ದಾರೆ.
ಅವರಲ್ಲೊಬ್ಬರನ್ನು ಬಿಟ್ಟು ಉಳಿದಿಬ್ಬರು ಕ್ರಮವಾಗಿ ಕಾಂಗ್ರೆಸ್ ಮತ್ತು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರು ಪಕ್ಷದ ವಿರುದ್ಧ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೆಲೆ ಪಡೆದುಕೊಳ್ಳುತ್ತಿರುವ ಕೆಜೆಪಿ,  ಕಾಂಗ್ರೆಸ್ ವಿರೋಧಿ ಮತಬುಟ್ಟಿಗೆ  ಕೈಹಾಕಲಿದೆ. ಇದರಿಂದಾಗಿ ತುರುವೆಕೆರೆ ಮತ್ತು ಗುಬ್ಬಿಯ ಹಾಲಿ ಶಾಸಕರು ಕೆಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಮಧುಗಿರಿ ಕ್ಷೇತ್ರದ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಪಲಾಯನ ಮಾಡಿರುವುದರಿಂದ ಆ ಕ್ಷೇತ್ರಕ್ಕೆ ಸ್ವಯಂನಿವೃತ್ತಿ ಪಡೆದಿರುವ ಅಧಿಕಾರಿ ವಿ.ವೀರಭದ್ರಯ್ಯ ಅವರನ್ನು ತರಾತುರಿಯಲ್ಲಿ ಕರೆತಂದು ಜೆಡಿ (ಎಸ್) ಕಣಕ್ಕಿಳಿಸಿದೆ.
ಕಳೆದೆರಡು ಚುನಾವಣೆಗಳಲ್ಲಿ ಅಲ್ಪಮತಗಳಿಂದ ಸೋತಿರುವ ಜಿಲ್ಲೆಯ ಜನಪ್ರಿಯ ನಾಯಕ ಕೆ.ಎನ್.ರಾಜಣ್ಣ ಈ ಕ್ಷೇತ್ರದಲ್ಲಿ ಜೆಡಿ (ಎಸ್)ಗೆ ನಿರಾಶೆ ಉಂಟುಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೊರಟಗೆರೆಯಲ್ಲಿ ಈಕ್ಷಣದ ವರೆಗೆ ಜೆಡಿ (ಎಸ್) ಅಭ್ಯರ್ಥಿ ಗೆಲ್ಲುವ ಅವಕಾಶ ಹೆಚ್ಚಿದ್ದರೂ ಕೊನೆಕ್ಷಣದ ಬೆಳವಣಿಗೆಗಳು ಫಲಿತಾಂಶವನ್ನು ಬದಲಿಸಿಬಿಡಬಹುದು.
`ಉತ್ತರ'ದ ಕಡೆ ಚಾಚಿರುವ ಕೈಗಳಿಗೆ ಬಯಸಿದ್ದು ಸಿಗದೆ ಹೋಗುವ ಸಾಧ್ಯತೆಗಳಿರುವ ಈಗಿನ ಪರಿಸ್ಥಿತಿಯಲ್ಲಿ ಕೈಯಲ್ಲಿದ್ದುದನ್ನಾದರೂ ಉಳಿಸಿಕೊಳ್ಳುವ ಸವಾಲು ಜೆಡಿ (ಎಸ್) ಮುಂದಿದೆ.
ಇಷ್ಟು ಮಾತ್ರವಲ್ಲ, ವಯಸ್ಸಿನ ಭಾರದಿಂದ ಕುಗ್ಗಿಹೋಗಿರುವ ಎಚ್.ಡಿ.ದೇವೇಗೌಡರು ಮುಂದಿನ ಚುನಾವಣೆಗಳಲ್ಲಿ ಈಗಿನಷ್ಟು ಸಕ್ರಿಯವಾದ ಪಾತ್ರವನ್ನು ವಹಿಸಲು ಸಾಧ್ಯವಾಗದೆ ಹೋಗಬಹುದು. ಅವರ ಅನುಭವ ಮತ್ತು ಜನಪ್ರಿಯತೆಯ ಗರಿಷ್ಠ ಬಳಕೆ ಈ ಚುನಾವಣೆಯಲ್ಲಿ ಮಾತ್ರ ಸಾಧ್ಯ. ರಾಜ್ಯದಲ್ಲಿ ಜೆಡಿ (ಎಸ್) ಪಕ್ಷವನ್ನು ತೃತೀಯರಂಗವಾಗಿ ಕಟ್ಟಿ ಅಧಿಕಾರಕ್ಕೆ ತರಬೇಕೆಂಬ ಕನಸು ಕಂಡ ದೇವೇಗೌಡರು ತಮ್ಮ ಮಕ್ಕಳ ಮೂಲಕವಾದರೂ ಅದು ನನಸಾದೀತೆಂಬ ನಿರೀಕ್ಷೆ ಇಟ್ಟುಕೊಂಡವರು. ಈ ಕಾರಣಗಳಿಂದಾಗಿ ಜೆಡಿ (ಎಸ್) ಪಾಲಿಗೆ ಈಗಿನ ಚುನಾವಣೆ ಅತ್ಯಂತ ನಿರ್ಣಾಯಕ.

Thursday, May 2, 2013

ಬದಲಾವಣೆ ನಿರೀಕ್ಷೆಯಲ್ಲಿ ತುಯ್ದಾಡುತ್ತಿರುವ ಬಳ್ಳಾರಿ

ಬಳ್ಳಾರಿ: `ನಳದಲ್ಲಿ ದಿನಾ ಉಪ್ಪು ನೀರು ಬಿಡ್ತಾರೆ, ಮೂರು ದಿವ್ಸಕ್ಕೊಮ್ಮೆ ಒಂದು ತಾಸು ಸಿಹಿನೀರು. ಸವುಳು ನೀರು ಕುಡಿದು ಮಕ್ಕಳ ಕೈಕಾಲೆಲ್ಲ ಸೊಟ್ಟಗಾಗಿವೆ' ಎಂದು ಗೋಳಾಡಿದರು ಮೋಕಾ ಗ್ರಾಮದ ಜಲಜಮ್ಮ. `ಎಂಟನೆ ತರಗತಿ ವರೆಗೆ ಮಾತ್ರ ಇಲ್ಲಿ ಸಾಲಿ ಇದೆ, ಮುಂದೆ ಕಲಿಯುವವರು ಬಳ್ಳಾರಿಗೆ (23 ಕಿ.ಮೀ. ದೂ
ರ) ಹೋಗ್ಬೇಕು, ಮಕ್ಕಳು ನಡೆದುನಡೆದು ಸವೆದುಹೋಗ್ಯಾವೆ' ಎಂದು ದುಃಖಿಸಿದರು ಕಾರೇಕಲ್ ಗ್ರಾಮದ ಈರಮ್ಮ.
`ಮೂರು ವರ್ಷಗಳಿಂದ ಮಳೆ ಇಲ್ಲ, ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಐದು ಸಾವಿರ ರೂಪಾಯಿ ಪರಿಹಾರ ಕೊಡ್ತೇವೆ ಎಂದು ಹೇಳಿ ಹೋದರು, ಕೈಗೆ ಬಂದದ್ದು 500 ರೂಪಾಯಿ' ಎಂದು ದೂರಿದರು ೀಳ್ಳಗುರ್ಕಿಯ ರೈತ ಶಂಕ್ರಪ್ಪ. `ಊರಲ್ಲೊಂದು ಸರ್ಕಾರಿ ದವಾಖಾನೆ ಇದೆ, ಅಲ್ಲಿ ಡಾಕ್ಟರ್ ಇಲ್ಲ, ಯಾರು ಹೋಗಿ ಕೇಳಿದರೂ ಅಲ್ಲಿರುವ ನರ್ಸಮ್ಮ ಔಷಧಿ ಇಲ್ಲ ಎಂದು ರಾಗ ತೆಗೆಯುತ್ತಾಳೆ' ಎಂದು ಸಿಟ್ಟುಮಾಡಿಕೊಂಡರು ವೀರಾಪುರದ ಸಮಾಜ ಸೇವಕ ಹೊನ್ನೂರಪ್ಪ...
ಈ ಗ್ರಾಮಗಳ ಜನರ ಕರುಣಾಜನಕ ಬದುಕಿನ ಕತೆಯನ್ನು ಹೀಗೆ ಹೇಳುತ್ತಲೇ ಹೋಗಬಹುದು. ಇವರೆಲ್ಲ ಆಂಧ್ರಪ್ರದೇಶದ ಗಡಿಯಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ, ವೀರಾಪುರ, ಕಾರೇಕಲ್, ಮೋಕಾ ಗ್ರಾಮಗಳಿಗೆ ಸೇರಿದವರು. ಈ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಶ್ರಿರಾಮುಲು.
ಈ ಗ್ರಾಮಗಳಿಗೆ ಹೋಗುವ ದಾರಿಯಲ್ಲಿಯೇ ಸಿಗುವ ಜೋಳದರಾಶಿಯಲ್ಲಿ ಅರಮನೆಯಂತೆ ಕಟ್ಟಿದ ರಾಮುಲು ಅವರ ಕುಟುಂಬದ ಮೂಲ ಮನೆ ಇದೆ. `ನಮ್ಮೂರಿಗೆ ಯಜಮಾನರೇ ಇಲ್ಲದಂಗ್ ಆಗಿದೆ' ಎಂದಷ್ಟೇ ಹೇಳಿ ತನ್ನ ಹೆಸರನ್ನೂ ತಿಳಿಸದೆ ಆ ಮನೆ ಕಡೆ ಬೆರಳು ಮಾಡಿ ಹೊರಟೇ ಹೋದ ಬಸ್ಸಿಗೆ ಕಾಯುತ್ತಾ ನಿಂತಿದ್ದ ರಾಜವೀರಪ್ಪ.
`ನೀವು ಹೋಗಿದ್ದು ನಾಲ್ಕೈದು ಹಳ್ಳಿಗಳು ಮಾತ್ರ ಸಾರ್, ಇಡೀ ಬಳ್ಳಾರಿ ಜಿಲ್ಲೆ ಹೀಗೆಯೇ ಇದೆ' ಎಂದರು ನನ್ನ ಪ್ರವಾಸದ ಅನುಭವವನ್ನು ಕೇಳಿದ ಬಳ್ಳಾರಿಯ ಪತ್ರಕರ್ತ ಮಿತ್ರರು.
ಹೀಗಿದ್ದರೂ ಶ್ರಿರಾಮುಲು ಈ ಬಾರಿಯೂ ಗೆದ್ದುಬಿಟ್ಟರೆ ನನಗಂತೂ ಆಶ್ಚರ್ಯವಾಗಲಾರದು. ಇದಕ್ಕೆ ಕಾರಣ ತಮ್ಮ ಕಷ್ಟ-ಕಾರ್ಪಣ್ಯಗಳನ್ನೆಲ್ಲ ನೋವಿನಿಂದ ತೋಡಿಕೊಂಡ ಜನರ ಇನ್ನೊಂದು ಮುಖದ ದರ್ಶನ. `ಜೆಡಿಎಸ್' ಎಂದು ಸ್ನೇಹಿತರಿಂದಲೇ ಆರೋಪಕ್ಕೊಳಗಾದ ಚೇಳ್ಳಗುರ್ಕಿಯ ಶಂಕ್ರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಜಲಜಮ್ಮ, ಈರಮ್ಮ, ಹೊನ್ನೂರಪ್ಪ ಮತ್ತಿತರರು ಶ್ರಿರಾಮುಲು ವಿರುದ್ಧ ಚಕಾರ ಎತ್ತಲಿಲ್ಲ.
`ರಾಮುಲು ಒಳ್ಳೆ ಮನುಷ್ಯ, ಸುತ್ತ ಇರೋ ಜನ ಸರಿ ಇಲ್ಲ', `ಆಯಪ್ಪ ಏನ್ ಮಾಡ್ಲಿಕಾಗ್‌ತ್ತೆ, ಇಡೀ ರಾಜ್ಯ ಸುತ್ತಬೇಕು', `ನಮ್ ಹಣೇಲಿ ಇದೇ ರೀತಿ ಬರೆದುಬಿಟ್ಟಿರುವಾಗ ಬೇರೆಯವರನ್ನು ದೂರಿ ಏನ್ ಲಾಭ?' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವರೆಲ್ಲ ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಸಮರ್ಥಿಸತೊಡಗಿದ್ದರು. ಊರಿನ ಸಮಸ್ಯೆಗಳನ್ನು ಭೂತಾಕಾರವಾಗಿ ಬಣ್ಣಿಸಿದ ಚೇಳ್ಳಗುರ್ಕಿಯ ಹಿರಿಯರೊಬ್ಬರು ಕೊನೆಗೆ ಶ್ರೀರಾಮುಲು ಅವರನ್ನು ಹೊಗಳತೊಡಗಿದಾಗ ಪಕ್ಕದಲ್ಲಿದ್ದ ಹಿರಿಯನೊಬ್ಬ ಬಳಿಬಂದು ಪಿಸುದನಿಯಲ್ಲಿ `ಅವನ ಜಾತಿ ಕೇಳಿಬಿಡಿ ಸತ್ಯ ಗೊತ್ತಾಗುತ್ತದೆ' ಎಂದ. ನಾನು ಕೇಳಲಿಲ್ಲ ಸತ್ಯ ಗೊತ್ತಾಗಿತ್ತು.
ಅಂದಾಜು ಎರಡರಿಂದ ನಾಲ್ಕು ಸಾವಿರದವರೆಗೆ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಬಹುಸಂಖ್ಯೆಯಲ್ಲಿರುವವರು ಶ್ರೀರಾಮುಲು ಅವರು ಸೇರಿರುವ ನಾಯಕ ಜಾತಿಯವರು. ಈ ಮುಗ್ಧ ಜನರ ದೂರು, ದುಮ್ಮಾನಗಳೆಲ್ಲ ಮತಯಂತ್ರದ ಬಟನ್ ಒತ್ತುವ ಗಳಿಗೆಯಲ್ಲಿ ಉಕ್ಕಿಬರುವ ಜಾತಿ ಪ್ರೀತಿ ಎದುರು ಕರಗಿಹೋಗುತ್ತದೆ. ಇದು ಶ್ರಿರಾಮುಲು ಅವರಿಗೆ ಮಾತ್ರವಲ್ಲ, ಕೇವಲ ಜಾತಿ ಮತ್ತು ದುಡ್ಡನ್ನಷ್ಟೇ ಬಳಸಿಕೊಂಡು ರಾಜಕೀಯ ಮಾಡುವ ಎಲ್ಲರಿಗೂ ಗೊತ್ತಿರುವ ಸತ್ಯ.
ಜಾತಿ ಆಗಲೇ ಶ್ರಿರಾಮುಲು ಅವರನ್ನು ಅರ್ಧ ಗೆಲ್ಲಿಸಿದೆ, ಇನ್ನರ್ಧ ಗೆಲುವು ಸಂಪಾದನೆಗಾಗಿ ಅವರು `ಕೊಡುಗೈ ದಾನಿ'ಗಳಾಗಬೇಕು. ಮೋಕಾದಲ್ಲಿ ನಮ್ಮ ಕಾರು ಕಂಡು ಆಸೆಯಿಂದ ಓಡಿಬಂದ ಮಧ್ಯವಯಸ್ಕರ ಗುಂಪೊಂದು ವಿಷಯ ತಿಳಿದು `ಹಿಂದೆಲ್ಲ ಇಷ್ಟೊತ್ತಿಗೆ ಒಂದು ರೌಂಡು ಮುಗಿದುಹೋಗುತ್ತಿತ್ತು, ಈ ಬಾರಿ ಬಹಳ ಸ್ಟ್ರಿಕ್ಟ್ ಅಂತೆ ಏನೂ ಬಂದಿಲ್ಲ' ಎಂದು ನಿರಾಶೆ ವ್ಯಕ್ತಪಡಿಸಿದರು. `ಲೀಡರ್‌ಗಳ ಕೈಗೆ ಕೊಟ್ಟು ಹೋಗಿದ್ದಾರಂತೆ, ನಮ್ಮ ಕೈಗೆ ಬಂದಿಲ್ಲ' ಎಂದರು ಇನ್ನೊಬ್ಬ ವ್ಯಕ್ತಿ ದೂರು ಹೇಳುವ ದನಿಯಲ್ಲಿ..
`ಹಿಂದಿನ ಚುನಾವಣೆಯ ಕಾಲದಷ್ಟು ದುಡ್ಡು ಈಗ ಹರಿದಾಡುತ್ತಿಲ್ಲ' ಎನ್ನುವ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿದೆ. ಜನಾರ್ದನ ರೆಡ್ಡಿಯವರ ಅಣ್ಣ ಸೋಮಶೇಖರ ರೆಡ್ಡಿ ಚುನಾವಣೆಯಿಂದ ಹಿಂದೆ ಸರಿದದ್ದು, ಮತ್ತೊಬ್ಬ ಅಣ್ಣ ಕರುಣಾಕರ ರೆಡ್ಡಿ ಬಿಜೆಪಿಯಲ್ಲಿಯೇ ಉಳಿದದ್ದು,  ಶ್ರಿರಾಮುಲು ಅವರ ಬಂಟ ನಾಗೇಂದ್ರ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು... ಈ ಬೆಳವಣಿಗೆಗಳೆಲ್ಲ ಬಳ್ಳಾರಿ ಜನರನ್ನು ಗೊಂದಲಕ್ಕೆ ತಳ್ಳಿದೆ. `ರೆಡ್ಡಿ ಕುಟುಂಬ ಮತ್ತು ಶ್ರಿರಾಮುಲು ಸಂಬಂಧ ಕೆಟ್ಟುಹೋಗಿದೆ, ಅದಕ್ಕೆ ದುಡ್ಡಿಲ್ಲ' ಎನ್ನುವವರು ಇದ್ದಹಾಗೆಯೇ `ಇವೆಲ್ಲ ಅವರೇ ಕೂಡಿ ಮಾಡುತ್ತಿರುವ ನಾಟಕ' ಎನ್ನುವವರೂ ಇದ್ದಾರೆ.
`ಈ 10-12 ವರ್ಷಗಳಲ್ಲಿ ನಮ್ಮ ಜನರ ಆತ್ಮಸಾಕ್ಷಿಯೇ ಸತ್ತುಹೋಗಿದೆ' ಎಂದು ಸಿಟ್ಟಿನಿಂದಲೇ ಹೇಳಿದರು ಲೋಹಿಯಾ ಪ್ರಕಾಶನದ  ಚೆನ್ನಬಸವಣ್ಣ ಬಳ್ಳಾರಿಯ ಕತೆಯನ್ನು ಬಣ್ಣಿಸುತ್ತಾ.  ಹೆಚ್ಚುಕಡಿಮೆ ದಶಕದ ಅವಧಿಯಲ್ಲಿ ಕಣ್ಣೆದುರೇ ಬದಲಾಗಿ ಹೋದ ಬಳ್ಳಾರಿಯ ಮುಖಗಳನ್ನು ಸಮೀಪದಿಂದ ನೋಡಿ ಸಂಕಟಪಡುತ್ತಿರುವವರು ಅವರು.
`ಕಕ್ಕ, ಮಾಮಾ, ಅಣ್ಣಾ ಈ ರೀತಿ ಸಂಬಂಧ ಹಚ್ಚಿ ಮಾತನಾಡಿಯೇ ನಮಗೆ ಅಭ್ಯಾಸ. ಹಿಂದೆಯೂ ಇಲ್ಲಿಯೂ ಒಂದಷ್ಟು ಗೂಂಡಾಗಿರಿ, ದರ್ಪ ದೌರ್ಜನ್ಯಗಳಿದ್ದವು. ಆದರೆ ಸಾಮಾನ್ಯ ಜನರು ಅವರ ಪಾಡಿಗೆ ಬದುಕಲು ತೊಂದರೆ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಿ ಹೋಯಿತು. ಗಣಿಲೂಟಿಕೋರರು ನಡೆಸಿದ ಅಟ್ಟಹಾಸದಿಂದ ನಲುಗಿಹೋಗಿರುವ ನಮ್ಮ ಬಳ್ಳಾರಿ ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು' ಎಂದು ನಿಟ್ಟುಸಿರುಬಿಟ್ಟರು ಚೆನ್ನಬಸವಣ್ಣ.
`ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಬದಿಯಲ್ಲಿ ಮುತ್ತುರತ್ನ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು...' ಎಂಬ ಕತೆಯನ್ನು ಕೇಳುತ್ತಾ ಬೆಳೆದವರು ಬಳ್ಳಾರಿಯ ಜನ. ಇದ್ದಕ್ಕಿದ್ದ ಹಾಗೆ ಅವರು ಗತವೈಭವವನ್ನೇ ಹೋಲುವ ಘಟನಾವಳಿಗಳಿಗೆ ಮೂಕ ಸಾಕ್ಷಿಯಾಗುವಂತಾಯಿತು. `ರೆಡ್ಡಿಗಳು ಬೆಳಿಗ್ಗೆ ತಿಂಡಿತಿನ್ನಲು ಬೆಂಗಳೂರಿಗೆ, ಮಧ್ಯಾಹ್ನ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರಂತೆ', `ರೆಡ್ಡಿಗಳು ಚಿನ್ನದ ಕುರ್ಚಿಯಲ್ಲಿ ಕೂರ‌್ತಾರಂತೆ, ಚಿನ್ನದ ಚಮಚದಲ್ಲಿ ಊಟ ಮಾಡ್ತಾರಂತೆ' ಎಂಬಿತ್ಯಾದಿ ಸುದ್ದಿಗಳು ಬಳ್ಳಾರಿಯ ಗಾಳಿಯಲ್ಲಿ ನಿತ್ಯ ಹಾರಾಡುತ್ತಿದ್ದುದನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಮೆರೆದಾಡಿದ, ಇಡೀ ಸರ್ಕಾರ ತಮ್ಮ ಅಂಗೈಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ರೆಡ್ಡಿಸೋದರರು ಕನಿಷ್ಠ ಬಳ್ಳಾರಿ ನಗರದ ಸುಧಾರಣೆಯನ್ನಾದರೂ ಮಾಡಬಹುದಿತ್ತು. ಒಂದೆರಡು ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಬಳ್ಳಾರಿ ನಗರ ದೊಡ್ಡ ಕೊಳೆಗೇರಿಯಂತಿದೆ. ಗುಂಡಿಬಿದ್ದ ರಸ್ತೆಗಳು, ಕಿತ್ತುಹೋಗಿರುವ ಕಾಲ್ದಾರಿಗಳು, ಅನಿಯಂತ್ರಿತವಾಗಿ ನಡೆಯುತ್ತಿರುವ ಒತ್ತುವರಿಗಳು, ಕೈಕೊಡುತ್ತಲೇ ಇರುವ ವಿದ್ಯುತ್, ಮರೀಚಿಕೆಯಂತೆ ಕಾಡುತ್ತಿರುವ ಕುಡಿಯುವ ನೀರು- ಒಂದು ನಗರಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ್ಯಾವುದೂ ಈ ನಗರದಲ್ಲಿ ಇಲ್ಲ.
`ಯಾಕೆ ಇಲ್ಲ ಎಂದರೆ ಬೇಕು ಎಂದು ಕೇಳುವವರೇ ಇಲ್ಲ ಸಾರ್ ಇಲ್ಲಿ. ಎಲ್ಲವನ್ನೂ ಸಹಿಸಿಕೊಂಡು ಇವೆಲ್ಲ ಸಾಮಾನ್ಯ ಎಂಬಂತೆ ಜನ ಬದುಕುತ್ತಿದ್ದಾರೆ. ಬೇರೆ ನಗರಗಳನ್ನು ನೋಡಿ ಬಂದ ನಮಗೆ ಇವೆಲ್ಲ ನೋಡಿ ಅಸಹ್ಯ ಅನಿಸುತ್ತಿದೆ' ಎಂದ ನಿವೃತ್ತ ಎಂಜಿನಿಯರ್ ಶಿವರಾಮಯ್ಯನವರ ಮಾತಿನಲ್ಲಿ ಅಸಹಾಯಕತೆ ಇತ್ತು.
`ಜನರಲ್ಲಿ ದುಡ್ಡಿನ ಲೋಭವನ್ನು ಹುಟ್ಟಿಸಿದ್ದು ಬಿಟ್ಟರೆ ಅವರೇನೂ ಮಾಡಲಿಲ್ಲ, ಕೆಟ್ಟುಹೋದವರಲ್ಲಿ ಹೆಚ್ಚಿನವರು ಯುವಕರು. ಒಂದು ತಲೆಮಾರು ಹಾಳಾಗಿ ಹೋಯಿತು' ಎಂದರು ವೀರಾಪುರದಲ್ಲಿರುವ ತಮ್ಮ ಮನೆಗೆ ಬಳ್ಳಾರಿಯಿಂದ ಬಂದಿದ್ದ ವಕೀಲ ಜಯರಾಮಯ್ಯ. `ಬದಲಾವಣೆ ಎಂದರೆ ಏನು?' ಒಬ್ಬ ಗಣಿಧಣಿಯನ್ನು ಸೋಲಿಸಿ ಇನ್ನೊಬ್ಬನನ್ನು ಆರಿಸುವುದೇ? ಸುಮ್ಮನೆ ರೆಡ್ಡಿ ಸೋದರರನ್ನು ದೂರಿ ಏನು ಪ್ರಯೋಜನ ಸಾರ್. ಈ ಕಾಂಗ್ರೆಸ್ ಪಕ್ಷದವರೇ ಗಣಿಲೂಟಿಯ ಮೂಲಪುರುಷರು. ಅವರು ಹೋಗಿ ಇವರು ಬರಬಹುದು. ಬಳ್ಳಾರಿಗೆ ಗಣಿಲೂಟಿಕೋರರಿಂದ ಮುಕ್ತಿ ಇಲ್ಲ' ಎಂದು ಸಣ್ಣಭಾಷಣವನ್ನೇ ಮಾಡಿಬಿಟ್ಟ ತನ್ನನ್ನು ವಿದ್ಯಾರ್ಥಿ ಮುಖಂಡ ಎಂದು ಪರಿಚಯಿಸಿಕೊಂಡ ಚೇತನ್.
`ಅಷ್ಟೊಂದು ನಿರಾಶರಾಗಬೇಕಾದ ಅಗತ್ಯವೂ ಇಲ್ಲ. ಅತಿರೇಕದ ಎರಡು ತುದಿಗಳನ್ನು ನಾವು ನೋಡಿ ಆಗಿದೆ. ದುಡ್ಡಿನ ಬಲದಿಂದ ನಿರ್ಲಜ್ಜರೀತಿಯಲ್ಲಿ ಮೆರೆದವರನ್ನೂ ನೋಡಿದ್ದೇವೆ. ಆ ರೀತಿ ಮೆರೆದವರು ಜೈಲು ಕಂಬಿ ಎಣಿಸುತ್ತಿರುವುದನ್ನೂ ನೋಡಿದ್ದೇವೆ. ಈ ಬೆಳವಣಿಗೆಗಳನ್ನು ಬಳ್ಳಾರಿಯ ಜನ ಹೇಗೆ ಸ್ವೀಕರಿಸಿದ್ದಾರೆ? ಅವರು ಕಲಿತ ಪಾಠವೇನು? ಇದು ಈ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಹೇಳಿದ ಚೆನ್ನಬಸವಣ್ಣ ಅವರ ಮಾತಿನಲ್ಲಿ ಬಳ್ಳಾರಿಯ ಜನರ ಬಗ್ಗೆ ಭರವಸೆ ಇತ್ತು.

Wednesday, May 1, 2013

ಕುಸಿದು ಬೀಳುತ್ತಿರುವ ಮುಂಬೈ ಕರ್ನಾಟಕದ ಬಿಜೆಪಿ ಕೋಟೆ

ಬಳ್ಳಾರಿ:  ಮುಂಬೈ ಕರ್ನಾಟಕ ಮತ್ತು ಬಳ್ಳಾರಿ, 2008ರ ವಿಧಾನಸಭಾ ಚುನಾವಣೆಯ `ಆಟ ಬದಲಿಸಿದ' ಪ್ರದೇಶ. ಕಾಂಗ್ರೆಸ್ ದೂಳಿಪಟವಾಗಿದ್ದು ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸಂಖ್ಯಾಬಲವನ್ನು ತಂದುಕೊಟ್ಟ ಪ್ರದೇಶ ಇದು. ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಈ ಪ್ರದೇಶಕ್ಕೆ ಬಳ್ಳಾರಿಯನ್ನೂ ಸೇರಿಸಿದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 59 ಆಗುತ್ತದೆ.
ಇದರಲ್ಲಿ 44 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ ಕಾಂಗ್ರೆಸ್ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಹದಿಮೂರು ಮಾತ್ರ. ಜೆಡಿ(ಎಸ್) ಪಕ್ಷದಿಂದ ಗೆದ್ದಿದ್ದ ಇಬ್ಬರು ಶಾಸಕರು ಕೂಡಾ ನಂತರ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈ ಭಾಗದಲ್ಲಿ ಕಾಂಗ್ರೆಸ್‌ನ ಮಾನ ಉಳಿಸಿದ್ದು, ಏಳು ಶಾಸಕರನ್ನು ನೀಡಿದ ಬೆಳಗಾವಿ ಜಿಲ್ಲೆ ಮಾತ್ರ. ಈ ಬಾರಿ ವಿಧಾನಸಭಾ ಚುನಾವಣೆಯ `ಆಟ ಬದಲಿಸಲಿರುವ' ಪ್ರದೇಶ ಕೂಡಾ ಇದೇ ಎನ್ನುವುದರಲ್ಲಿ ಅನುಮಾನ ಇಲ್ಲ.
ರಾಜ್ಯದ ಕರಾವಳಿ ಇಲ್ಲವೆ ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಂತೆ ಮುಂಬೈಕರ್ನಾಟಕ ಬಿಜೆಪಿಯ ಸಾಂಪ್ರದಾಯಿಕ ನೆಲೆ ಅಲ್ಲ. ಹೀಗಿದ್ದರೂ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಚೈತ್ರಯಾತ್ರೆಗೆ ಮುಖ್ಯವಾಗಿ ಕಾರಣಗಳು ಮೂರು. ಮೊದಲನೆಯದಾಗಿ ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ಇರುವ ಕಾಂಗ್ರೆಸ್ ವಿರೋಧಿ ಮತಗಳು, ಎರಡನೆಯದಾಗಿ ವಚನಭಂಗದಿಂದಾಗಿ ಸಾಮೂಹಿಕವಾಗಿ ಸಿಡಿದೆದ್ದ ಲಿಂಗಾಯತ ಸಮುದಾಯ, ಮೂರನೆಯದಾಗಿ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಮತ್ತು ಶ್ರಿರಾಮುಲು ಅವರಿಗೆ ವ್ಯಕ್ತವಾದ ಜಾತಿ ಮತದಾರರ ಬೆಂಬಲ.
ಪ್ರಾರಂಭದಲ್ಲಿ ಎಸ್.ನಿಜಲಿಂಗಪ್ಪ ಅವರ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಈ ಭಾಗದ ಲಿಂಗಾಯತರು ನಿಧಾನವಾಗಿ ಜನತಾ ಪರಿವಾರದ ಭಾಗವಾಗಿ ಹೋಗಿದ್ದರು. ಎಂಬತ್ತರ ದಶಕದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಜನತಾ ಪರಿವಾರದಲ್ಲಿ ಎಸ್.ಆರ್.ಬೊಮ್ಮಾಯಿ ಅವರಂತಹ ಹಿರಿಯರ ಜತೆ ಧಾರವಾಡ ಜಿಲ್ಲೆಯ ಚಂದ್ರಕಾಂತ ಬೆಲ್ಲದ, ಬಿ.ಆರ್.ಯಾವಗಲ್, ಬಿ.ಜಿ.ಬಣಕಾರ್, ಬಿ.ಎಚ್.ಬನ್ನಿಕೋಡ್, ಪಿ.ಸಿ.ಸಿದ್ದನಗೌಡರ್, ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆಯ ಶಿವಾನಂದ ಕೌಜಲಗಿ, ಉಮೇಶ್ ಕತ್ತಿ, ಎ.ಬಿ.ಪಾಟೀಲ್, ಡಿ.ಬಿ.ಇನಾಂದಾರ್, ಲೀಲಾದೇವಿ ಪ್ರಸಾದ್. ಬಿಜಾಪುರ ಜಿಲ್ಲೆಯ ರಮೇಶ್ ಜಿಗಜಿಣಗಿ, ಗೋವಿಂದಪ್ಪ ಕಾರಜೋಳ, ಎಚ್.ವೈ.ಮೇಟಿ, ಜಗಜೀವನರಾವ್ ದೇಶಮುಖ್ ಮೊದಲಾದ ನಾಯಕರಿದ್ದರು.
ಇವರಲ್ಲಿ ಬಹಳಷ್ಟು ಮಂದಿ ಶಾಸಕರಾಗಿ ಚುನಾಯಿತರಾಗಿ ನಂತರ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಜನತಾ ಪರಿವಾರ ಅಳಿಯುತ್ತಾ ಬಂದಂತೆ ಆ ಜಾಗವನ್ನು ಆಕ್ರಮಿಸಿಕೊಂಡದ್ದು ಬಿಜೆಪಿ. ನಿಧಾನವಾಗಿ ಮುಂಬೈ ಕರ್ನಾಟಕ ಭಾಗದ ಕಾಂಗ್ರೆಸ್ ವಿರೋಧಿ ಮತಗಳನ್ನು ನುಂಗುತ್ತಾ ಬಿಜೆಪಿ ಬೆಳೆಯುತ್ತಾ ಹೋಗಿದ್ದು ಈಗ ಇತಿಹಾಸ. ಅದರ ಅತ್ಯುನ್ನತ ಸ್ಥಿತಿಯನ್ನು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.
ಇಡೀ ಕರ್ನಾಟಕದಲ್ಲಿ ಲಿಂಗಾಯತ ಬಾಹುಳ್ಯ ಇರುವ ಪ್ರದೇಶ ಮುಂಬೈ ಕರ್ನಾಟಕ. ಲಿಂಗಾಯತರ ಜನಸಂಖ್ಯೆ ರಾಜ್ಯದಲ್ಲಿ ಶೇಕಡಾ ಹದಿನೇಳರಷ್ಟಿದ್ದರೂ ಮುಂಬೈ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಇದು 20ರಿಂದ 30ರಷ್ಟಿದೆ. ಇದರಿಂದಾಗಿಯೇ ಇಲ್ಲಿನ ಹೆಚ್ಚಿನ ಕ್ಷೇತ್ರಗಳ ಮೇಲೆ ಅಪ್ಪಳಿಸಿದ ವಚನಭಂಗದ ವಿರೋಧಿ ಅಲೆಯ ಮೇಲೇರಿ ಬಿಜೆಪಿ ಅಭ್ಯರ್ಥಿಗಳು ಸುಲಭದಲ್ಲಿ ಗೆಲುವಿನ ದಡ ಸೇರಿದ್ದರು. ರಾಜ್ಯದಾದ್ಯಂತ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಹರಿದಾಡಿದರೂ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದಲ್ಲಿ ಹಣದ ಹೊಳೆ  ದಡಮೀರಿ ಹರಿದಿತ್ತು.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶ್ರಿರಾಮುಲು ಅವರು ಸಂಘಟಿಸಿದ್ದ ಜಾತಿಮೂಲದ ಬೆಂಬಲ ಕೂಡಾ ಇಲ್ಲಿ ಬಿಜೆಪಿ ಗೆಲುವಿಗೆ  ನೆರವಾಯಿತು.  ಇದರಿಂದಾಗಿಯೇ ಬಳ್ಳಾರಿಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಬಿಜೆಪಿ ಗೆದ್ದಿತ್ತು. ಆ ಎಂಟರಲ್ಲಿ ಐವರು ಶಾಸಕರು ರಾಮುಲು ಜಾತಿಯಾದ ನಾಯಕ ಸಮಾಜದವರು ಎಂಬುದು ಗಮನಾರ್ಹ. ಇದರ ಜತೆಯಲ್ಲಿ ಗದಗ ಕ್ಷೇತ್ರದ ಉಸ್ತುವಾರಿ ಸಚಿವರಾಗಿದ್ದ ಶ್ರಿರಾಮುಲು ಆ ಜಿಲ್ಲೆಯ ಎಲ್ಲ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಬಿಟ್ಟಿದ್ದರು.
ಬಿಜೆಪಿಗೆ ನಿರಾಯಾಸವಾಗಿ ಗೆಲುವು ತಂದುಕೊಟ್ಟ ಮುಂಬೈ ಕರ್ನಾಟಕ ಮತ್ತು ಬಳ್ಳಾರಿಯ ಈಗಿನ ಚಿತ್ರ ಬದಲಾಗಿರುವುದು ಮಾತ್ರವಲ್ಲ ಹೆಚ್ಚುಕಡಿಮೆ ತಲೆಕೆಳಗಾಗಿ ಬಿಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ಮಾರಣಾಂತಿಕ ಹೊಡೆತ ನೀಡಲಿರುವುದು ಈ ಪ್ರದೇಶ ಎನ್ನುವುದರಲ್ಲಿ ಅನುಮಾನ ಬೇಡ. ಏಳು ಜಿಲ್ಲೆಗಳಲ್ಲಿದ್ದ 46 ಬಿಜೆಪಿ ಶಾಸಕರ ಪೈಕಿ ಹಾವೇರಿಯಿಂದ ನಾಲ್ಕು (ಸಿ.ಎಂ.ಉದಾಸಿ, ನೆಹರೂ ಓಲೇಕಾರ್,ಜಿ.ಶಿವಣ್ಣ ಮತ್ತು ಸುರೇಶ್‌ಗೌಡ) ಮತ್ತು ಬಿಜಾಪುರ ಹಾಗೂ ಧಾರವಾಡದಿಂದ ತಲಾ ಒಬ್ಬ ಶಾಸಕರು ( ವಿಠ್ಠಲ ಕಟಕದೊಂಡ ಮತ್ತು ಚಿಕ್ಕನಗೌಡರ್)  ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಸೇರಿದ್ದಾರೆ. ಇವರಲ್ಲಿ ಸುರೇಶ್‌ಗೌಡ ಪಾಟೀಲ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.  ಬಿಜೆಪಿ ಶಾಸಕರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಕೆಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕರ ಸಂಖ್ಯೆ ಕಡಿಮೆ ಎಂದು ಅನಿಸಿದರೂ ಪರಿಣಾಮ ಅಷ್ಟಕ್ಕೆ ಸೀಮಿತವಾಗಿರಲಾರದು.
ಬಿಜೆಪಿಯ ಕುಸಿತವನ್ನು ತಡೆದು ನಿಲ್ಲಿಸುವಂತಹ ಬಲಿಷ್ಠ ನಾಯಕರು ಇಲ್ಲದಿರುವುದು ಕೂಡಾ ಆ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೂ ಮುಂಬೈ ಇಲ್ಲವೆ ಹೈದರಾಬಾದ್ ಕರ್ನಾಟಕದ ಲಿಂಗಾಯತರು ಅವರನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ.
ಇನ್ನೊಂದೆಡೆ ಕೆಜೆಪಿಯ ದಾಳಿಯನ್ನು ಬಿಜೆಪಿಯಲ್ಲಿ ಅಳಿದುಳಿದ ಜನತಾ ಪರಿವಾರದ ನಾಯಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಮೊದಲಾದವರು ಎದುರಿಸುವ ಪ್ರಯತ್ನ ಮಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ಅವರ ಪ್ರಭಾವ ಸ್ವಂತ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾ ಬಂದ ಲಿಂಗಾಯತರ ಜತೆ, ಬಿಜೆಪಿಯಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ವಿರೋಧಿಸುತ್ತಿದ್ದ ಲಿಂಗಾಯತರು ಕೂಡಾ ಈ ಬಾರಿ ಕೆಜೆಪಿ ಬೆಂಬಲಿಸುತ್ತಿರುವುದನ್ನು ಕಾಣಬಹುದು. ಇವರಲ್ಲಿ ಬಹಳಷ್ಟು ಲಿಂಗಾಯತ ಬುದ್ದಿಜೀವಿಗಳೆನ್ನುವುದು ಆಶ್ಚರ್ಯಕರವಾದರೂ ನಿಜ.
ಬಿ.ಎಸ್.ಯಡಿಯೂರಪ್ಪನವರ ವಿರುದ್ಧದ  ಮುಖ್ಯ ಆರೋಪವಾದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ  ಮುಖ್ಯವಿಷಯವಾಗಿ ಚರ್ಚೆಗೊಳಗಾಗದೆ ಇರುವುದು ಅವರನ್ನು ಬೆಂಬಲಿಸುತ್ತಿರುವವರ ಮುಜುಗರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.
ಆದರೆ ಹೈದರಾಬಾದ್ ಕರ್ನಾಟಕದಂತೆ ಇಲ್ಲಿಯೂ ಕೂಡಾ ಕೆಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಸ್ಥಾನಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಕಡಿಮೆ.  ಬಿ.ಎಸ್.ಯಡಿಯೂರಪ್ಪನವರು ಸ್ವಂತ ಪಕ್ಷ ಕಟ್ಟಿದಾಗ ಆಧಾರಸ್ತಂಭಗಳಾಗುತ್ತಾರೆಂದು ನಿರೀಕ್ಷಿಸಿದ್ದ ಸಂಪನ್ಮೂಲಭರಿತ ನಾಯಕರೆಲ್ಲರೂ ಜತೆಯಲ್ಲಿ ಉಳಿದುಕೊಂಡಿದ್ದರೆ ಆಟ ಬದಲಾಗುತ್ತಿತ್ತು.
ಕೊನೆಗಳಿಗೆಯ ವರೆಗೆ ಜತೆಯಲ್ಲಿದ್ದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿಯವರು ಕೈಕೊಟ್ಟದ್ದು ಕೆಜೆಪಿಗೆ ದೊಡ್ಡ ಹೊಡೆತ. ಇದರಿಂದಾಗಿ ಕೆಜೆಪಿಯ  ಬಲ ಬಿಜೆಪಿಯನ್ನು ಸೋಲಿಸಲು ವ್ಯಯವಾಗಬಹುದೇ ಹೊರತು ಹೆಚ್ಚಿನ ಸಂಖ್ಯೆಯ ಶಾಸಕರನ್ನು ವಿಧಾನಸಭೆಗೆ ಕಳುಹಿಸಲು  ನೆರವಾಗಲಾರದು. ಇಲ್ಲಿಯೂ ಇಬ್ಬರ ನಡುವಿನ ಜಗಳದ    ಆದಾಯ ತಮಗೆ ಆಗಬಹುದೆಂಬ ನಿರೀಕ್ಷೆಯಲ್ಲಿದೆ ಕಾಂಗ್ರೆಸ್. ಇದರಿಂದಾಗಿ ಕಳೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಸಂಖ್ಯೆ ಅದಲುಬದಲಾದರೂ ಆಶ್ಚರ್ಯ ಪಡಬೇಕಾಗಿಲ್ಲ.

Tuesday, April 30, 2013

`ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ'

ಗುಲ್ಬರ್ಗ: `ನಮ್ಮಿಂದಾಗಿಯೇ ಬಿಜೆಪಿ 35 ಸೀಟುಗಳನ್ನು ಕಳೆದುಕೊಳ್ಳಲಿದೆ, ಉಳಿದ ಕಡೆ ಅದು ಸೋಲುವುದು ಇದ್ದೇ ಇದೆ. ಕಾಂಗ್ರೆಸ್ 75 ದಾಟುವುದಿಲ್ಲ, ಜೆಡಿಎಸ್ 25 ತಲುಪಿ
ದರೆ ಹೆಚ್ಚು. ಉಳಿದಂತೆ ನಮ್ಮ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ' ಎಂದು ಹೇಳುತ್ತಲೇ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಯಲ್ಲಿದ್ದ ಚೀಟಿಯನ್ನು ಅಂಗಿಯ ಕಿಸೆಗೆ ತುರುಕಿಸಿದರು. ಪ್ರಕಟಿಸಬಾರದೆಂಬ ಷರತ್ತಿನಲ್ಲಿ ನೋಡಲು ಕೊಟ್ಟ ಆ ಚೀಟಿಯಲ್ಲಿ ಕೆಜೆಪಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದು ಅವರು ಬಲವಾಗಿ ನಂಬಿರುವ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರುಗಳಿದ್ದವು.
`ಫಲಿತಾಂಶ ಪ್ರಕಟವಾಗುವ ದಿನ ನಾನು ಹೇಳಿದ ಸತ್ಯ ನಿಮಗೆ ಗೊತ್ತಾಗುತ್ತದೆ. ಆಗ ನಿಮ್ಮ ಮತ್ತು ನನ್ನ ಪಟ್ಟಿ ತಾಳೆ ನೋಡುವಾ' ಎಂದು ಸವಾಲೆಸೆದ ಅವರ ಮುಖದಲ್ಲಿ ಎಂದಿನ ಆತ್ಮವಿಶ್ವಾಸ ಇತ್ತು.
ಗುಲ್ಬರ್ಗ ನಗರದಲ್ಲಿ ರಾತ್ರಿ ಚುನಾವಣಾ ಪ್ರಚಾರ ನಡೆಸಿ ತಡರಾತ್ರಿ ಹೊಟೇಲ್‌ನಲ್ಲಿ ಬಂದು ಉಳಿದುಕೊಂಡಿದ್ದ ಯಡಿಯೂರಪ್ಪ ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಎದ್ದು ಹೆಲಿಕಾಪ್ಟರ್ ಹತ್ತಲು ರೆಡಿಯಾಗಿ ಕೂತಿದ್ದರು. ಈ ಅವಸರದಲ್ಲಿಯೇ ಬಿಡುವು ಮಾಡಿಕೊಂಡು `ಪ್ರಜಾವಾಣಿ' ಜತೆ ಮಾತನಾಡಿದರು.
 ಪ್ರ: ನೀವು ಹೇಳಿದ ಲೆಕ್ಕವನ್ನು ನಂಬಿದರೆ ನಿಮ್ಮ ಪಕ್ಷ ಸ್ವಂತಬಲದಿಂದ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರ ಜತೆ ಸೇರಿಕೊಳ್ಳುತ್ತೀರಿ? ಬಿಜೆಪಿ? ಕಾಂಗ್ರೆಸ್? ಜೆಡಿಎಸ್?
ಬಿಜೆಪಿ ಜತೆ ಹೋಗುವ ಪ್ರಶ್ನೆಯೇ ಇಲ್ಲ. ಆ ಪಕ್ಷದ ನಾಯಕರು ನಮ್ಮ ಮತದಾರರನ್ನು ಹಾದಿ ತಪ್ಪಿಸಲು ಈ ರೀತಿಯ ವದಂತಿಗಳನ್ನು ಹರಡು ತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರೇ ಮೊನ್ನೆ ಈ ರೀತಿ ಹೇಳಿದ್ದರು. ಆ ಪಕ್ಷದಲ್ಲಿ ಒಂದಷ್ಟು ನನ್ನ ಹಿತೈಷಿಗಳಿರು ವುದು ನಿಜ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಾನು ವಾರ ರಾಜ್ಯದಲ್ಲಿ ಮಾಡಿದ್ದ ಪ್ರಚಾರ ಭಾಷಣ ದಲ್ಲಿ ಕೂಡಾ ನನ್ನ ಹೆಸರನ್ನೆತ್ತಿ ಟೀಕಿಸಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬಿಜೆಪಿಯ ಕೆಲವು ನಾಯಕರು ನನ್ನನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಪರ್ಕಿಸುತ್ತಿರುವುದು ನಿಜ. ಆದರೆ ಬಿಜೆಪಿ ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಇನ್ನು ವಿಶ್ವಾಸದ್ರೋಹ ಮಾಡಿದ ಜೆಡಿಎಸ್ ಜತೆ ಈ ಜನ್ಮದಲ್ಲಿ ಸೇರುವುದಿಲ್ಲ. ಅನುಭವದಿಂದ ಅಷ್ಟು ಪಾಠವನ್ನು ಕಲಿಯದಿದ್ದರೆ ಹೇಗೆ?
ಪ್ರ: ಕಾಂಗ್ರೆಸ್?
ಈ ಚುನಾವಣೆ ನಡೆಯುತ್ತಿರುವುದೇ ನಮ್ಮ ಪಕ್ಷ ಮತ್ತು ಕಾಂಗ್ರೆಸ್ ನಡುವೆ. ಹೊಂದಾಣಿಕೆ ಮಾಡಿಕೊಳ್ಳುವುದು ಎಲ್ಲಿ ಬಂತು? ಆದರೆ ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ. ನನ್ನ ಮೇಲಿನ ಆರೋಪಗಳು ಬಿಜೆಪಿಯ ಕೆಲವು ನಾಯಕರು ಸೇರಿ ನನ್ನ ವಿರುದ್ಧ ಹೂಡಿದ್ದ ಸಂಚು ಎಂದು ನಿಧಾನವಾಗಿ ಅವರಿಗೆ ಅರ್ಥವಾಗುತ್ತಿದೆ. ನನ್ನನ್ನು ಎದುರುಹಾಕಿಕೊಂಡರೆ ರಾಜ್ಯದ ಒಂದು ದೊಡ್ಡ ಸಮುದಾಯದ ಅಸಮಾಧಾನಕ್ಕೆ ಈಡಾಗಬಹುದೆಂಬ ಭೀತಿಯೂ ಅವರಲ್ಲಿದೆ. ಇದಕ್ಕಾಗಿಯೇ ಅವರು ನನ್ನ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.
ಪ್ರ: ಇಷ್ಟೊಂದು ಆತ್ಮವಿಶ್ವಾಸದಿಂದ ಗೆಲ್ಲುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೇಳುತ್ತಿದ್ದೀರಿ, ಇದಕ್ಕೆ ಆಧಾರ ಏನು?
ಜನರ ಮೇಲಿನ ನಂಬಿಕೆಯೇ ಆಧಾರ. ನಾನು ಮಾಡಿದ ಕೆಲಸಗಳೆಲ್ಲ ಜನರಿಗೆ ಗೊತ್ತು, ತಪ್ಪು-ಒಪ್ಪುಗಳ ಹಿಂದಿನ ಸತ್ಯ ಏನು ಎನ್ನುವುದನ್ನೂ ನಿಧಾನವಾಗಿ ಅವರು ತಿಳಿದುಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಇರುವ ಬೆಂಬಲವನ್ನು ನೀವೇ ಕಣ್ಣಾರೆ ನೋಡಿದ್ದೀರಿ. ಇದೇ ರೀತಿ ಮುಂಬೈ ಕರ್ನಾಟಕದಲ್ಲಿಯೂ ಇದೆ. ಹಳೆಮೈಸೂರಿನಲ್ಲಿ ಜೆಡಿಎಸ್‌ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲಿದ್ದೇವೆ.
ಪ್ರ: ನಿಮ್ಮ ಶಕ್ತಿ ಎಂದು ಹೇಳಿಕೊಳ್ಳುತ್ತಿರುವ ನಿಮ್ಮ ನಂಬಿಕೆಯೇ ನಿಮ್ಮ ದೌರ್ಬಲ್ಯ ಎಂದು ಈಗಲೂ ಅನಿಸುವುದಿಲ್ಲವೇ? ಸ್ವಂತ ಪಕ್ಷ ರಚಿಸಿದಾಗ ನಿಮ್ಮನ್ನು ಬೆಂಬಲಿಸಬಹುದೆಂದು ನೀವು ನಂಬಿದವರಲ್ಲಿ ಹೆಚ್ಚಿನವರು ಯಾರೂ ನಿಮ್ಮ ಜತೆಯಲ್ಲಿಲ್ಲ. ಇದು ನಿಮ್ಮ ನಂಬಿಕೆಯ ದೋಷ ಅಲ್ಲವೇ?
ಕೆಲವು ನಾಯಕರು ನಾನಿಟ್ಟ ನಂಬಿಕೆಗೆ ದ್ರೋಹ ಬಗೆದದ್ದು ನಿಜ, ಆದರೆ  ಜನ ಹಾಗೆ ಮಾಡಲಾರರು.
ಪ್ರ: ಯಾವ ರೀತಿಯ ದ್ರೋಹ?
ಅವರ ಹೆಸರು ಹೇಳಲು ನನಗಿಷ್ಟ ಇಲ್ಲ, ಅದು ನಿಮಗೂ ಗೊತ್ತಿದೆ. ನನ್ನ ಜತೆಯಲ್ಲಿಯೇ ಇದ್ದವರಂತೆ ನಟಿಸುತ್ತಿದ್ದ ಅವರು ಬಿಜೆಪಿಯಲ್ಲಿದ್ದ ನನ್ನ ವಿರೋಧಿಗಳ ಜತೆ ಷಾಮೀಲಾಗಿದ್ದರು ಎನ್ನುವುದು ನನಗೆ ತಿಳಿಯಲೇ ಇಲ್ಲ. ಅವರೆಲ್ಲ ಕೊನೆ ಗಳಿಗೆಯಲ್ಲಿ ತೀರ್ಮಾನ ಕೈಗೊಂಡು ಬಿಜೆಪಿಯಲ್ಲಿಯೇ ಉಳಿದವರಲ್ಲ. ಈ ಸಂಚನ್ನು ಸಾಕಷ್ಟು ಪೂರ್ವದಲ್ಲಿಯೇ ಪರಸ್ಪರ ಕೂಡಿ ಮಾಡಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವುದನ್ನು ವಿಳಂಬ ಮಾಡಿಸಿದ್ದು ಕೂಡಾ ಇದೇ ಸಂಚಿನ ಭಾಗ. ಇದೆಲ್ಲ ನನಗೆ ಗೊತ್ತಾಗಲಿಲ್ಲ. ಅವರಿಗಿರುವ ವಕ್ರಬುದ್ಧಿ ನನಗಿಲ್ಲ, ನನ್ನದೇನಿದ್ದರೂ ನೇರಾನೇರ ರಾಜಕೀಯ.
ಪ್ರ: ಯಾವಾಗ ಪಕ್ಷ ಬಿಡುವ ಯೋಜನೆ ಇತ್ತು ನಿಮಗೆ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣವೇ ಆ ಪಕ್ಷ ಬಿಟ್ಟು ಹೊರಗೆ ಬರಬೇಕಾಗಿತ್ತು. ಆಗ ಹೊಸ ಪಕ್ಷ ಕಟ್ಟಲು ಸಮಯ ಸಿಗುತ್ತಿತ್ತು. ಆ ರೀತಿ ಮಾಡಿದರೆ ನಾನು ಬಲಿಷ್ಠನಾಗುತ್ತೇನೆ ಎಂದು ತಿಳಿದ ಬಿಜೆಪಿ ನಾಯಕರು ನಾನು ನಂಬಿದವರನ್ನೇ ಜತೆಯಲ್ಲಿಟ್ಟುಕೊಂಡು ಹಾದಿ ತಪ್ಪಿಸಿದರು. ದೆಹಲಿಯ ನಾಯಕರು ಸಂಧಾನ ನಡೆಸಿದರು, ಮುಂಬೈಯಲ್ಲಿ ನಡೆದ ಪಕ್ಷದ ಅಧಿವೇಶನಕ್ಕೆ ಕರೆಸಿಕೊಂಡರು. ಇವೆಲ್ಲವೂ ನಾನು ಹೊರಗೆ ಹೋಗುವುದನ್ನು ವಿಳಂಬ ಮಾಡಲು ಬಿಜೆಪಿ ಮಾಡಿದ ಸಂಚು ಎಂದು ನನಗೆ ತಿಳಿಯಲಿಲ್ಲ. ಆಗ ನನ್ನ ಜತೆಯಲ್ಲಿದ್ದವರಿಗೆ ಇದು ಗೊತ್ತಿದ್ದರೂ ಅದನ್ನು ನನಗೆ ತಿಳಿಸಲಿಲ್ಲ. ಅವರನ್ನು ನಂಬಿ ಮೋಸಹೋದೆ. ಅವರಿಗೆ ಒಳ್ಳೆಯದಾಗಲಿ.
ಪ್ರ: ನೀವು  ಅಧಿಕಾರದಲ್ಲಿದ್ದಾಗ ವೀರಶೈವ ಮಠಗಳಿಗೆ ಧಾರಾಳವಾಗಿ ದುಡ್ಡು ಕೊಟ್ಟವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಎದುರಾದಾಗ ಕೆಲವು ಸ್ವಾಮಿಗಳು ಬೀದಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದ್ದರು. ಅವರಲ್ಲಿ ಯಾರೊಬ್ಬರೂ ಈಗ ನಿಮ್ಮನ್ನು ಬಹಿರಂಗವಾಗಿ ಬೆಂಬಲಿಸುತ್ತಿಲ್ಲವಲ್ಲಾ? ಅಲ್ಲಿಯೂ ನೀವಿಟ್ಟ ನಂಬಿಕೆ ಹುಸಿಯಾಗಿ ಹೋಯಿತೇ?
ಬಹಿರಂಗವಾಗಿ ಹೇಳಿಕೆ ನೀಡದಿದ್ದ ಮಾತ್ರಕ್ಕೆ ಅವರು ನನ್ನನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಲಾಗದು. ಕೆಲವು ಸ್ವಾಮೀಜಿಗಳ ಬಂಟರು ಬದಲಾಗಿರಬಹುದು ಅಷ್ಟೆ. ಸ್ವಾಮೀಜಿಗಳು ಮತ್ತು ಅವರ ಅನುಯಾಯಿಗಳು ನಮ್ಮ ಪಕ್ಷದ ಪರವಾಗಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ.
ಪ್ರ: ಈ ಚುನಾವಣೆಯ ನಂತರ ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?
ಅಂತಿಮವಾಗಿ ನಾವು ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಜತೆ ಸೇರಿಕೊಳ್ಳುವವರು. ಈ ಬಗ್ಗೆ ಕೆಲವು ಪಕ್ಷಗಳ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅದರ ವಿವರವನ್ನು ಈಗ ಬಹಿರಂಗಪಡಿಸುವುದು ಸರಿಯಾಗುವುದಿಲ್ಲ. ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗಿ ಅವರ ಜತೆ ಮಾತುಕತೆ ನಡೆಸುತ್ತೇನೆ. ನಮ್ಮದು ಒಂದು ಚುನಾವಣೆಯ ಪಕ್ಷ ಅಲ್ಲ, ಇದು ಯಡಿಯೂರಪ್ಪನಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಪಕ್ಷ ಅಲ್ಲ. ಅದೊಂದು ನೆಪ ಅಷ್ಟೆ. ರಾಜ್ಯಕ್ಕೆ ಆಗಿರುವ ಮತ್ತು ಆಗಲಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

Monday, April 29, 2013

ಹೈದರಾಬಾದ್ ಕರ್ನಾಟಕದ ಬಾಗಿಲು ಬಡಿಯುತ್ತಿರುವ ಕೆಜೆಪಿ

ಗುಲ್ಬರ್ಗ:   ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಲಿಂಗಾಯತರು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಮೂಲಕ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ? ರಾಜಕೀಯವಾಗಿ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬ ಈ ಭಾಗದ ಲಿಂಗಾಯತ ಸಮುದಾಯದಲ್ಲಿರುವ ಅತೃಪ್ತಿಯನ್ನು ಬಳಸಿಕೊಂಡು ಕೆಜೆಪಿ ಇಲ್ಲಿ ಕಾಲೂರುವ ಸನ್ನಾಹದಲ್ಲಿ ತೊಡಗಿದೆಯೇ? ಇಲ್ಲಿನ ಚುನಾವಣಾ ರಾಜಕೀಯದ ವಿದ್ಯಮಾನಗಳ ಒಳಗೊಂದು ನೋಟ ಹರಿಸಿದರೆ ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಈ ಭಾಗದ ಹಿರಿಯ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ನಂತರ ತಮ್ಮನ್ನು ಪ್ರತಿನಿಧಿಸಬಲ್ಲ ಸಮರ್ಥ ನಾಯಕರು ಹುಟ್ಟಿಬರಲಿಲ್ಲ ಎಂಬ ಕೊರಗು ಇಲ್ಲಿನ ಲಿಂಗಾಯತ ಸಮುದಾಯದಲ್ಲಿ ಬಹಳ ಕಾಲದಿಂದಲೂ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಎಂಬ ಅವಳಿ ನಾಯಕರು ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಲಿಂಗಾಯತೇತರ ಸಮುದಾಯದ ಬೆಂಬಲದೊಂದಿಗೆ ಪ್ರಭಾವಶಾಲಿ ಕಾಂಗ್ರೆಸ್ ನಾಯಕರಾಗಿ ಬೆಳೆಯುತ್ತಾ ಹೋದಂತೆ ಲಿಂಗಾಯತರು ಸಹಜವಾಗಿಯೇ ಪಕ್ಕಕ್ಕೆ ಸರಿದು ನಿಲ್ಲಬೇಕಾಯಿತು.
ನಾಯಕತ್ವದ ಈ ನಿರ್ವಾತವನ್ನು ಬಳಸಿಕೊಳ್ಳಲು ರಾಮಕೃಷ್ಣ ಹೆಗಡೆಯವರು ಹೊರಟಾಗ ಲಿಂಗಾಯತರು ಹೆಚ್ಚುಕಡಿಮೆ ಅವರ ನಾಯಕತ್ವವನ್ನು ಒಪ್ಪಿಕೊಂಡೇ ಬಿಟ್ಟಿದ್ದರು. ಅದರ ನಂತರ ಕಾಣಿಸಿಕೊಂಡವರು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ. ಇವರನ್ನು ಈ ಭಾಗದ ಲಿಂಗಾಯತರು ಬೆಂಬಲಿಸಿರುವುದಕ್ಕೆ 2008ರ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿ. ಆಶ್ಚರ್ಯದ ಸಂಗತಿಯೆಂದರೆ ಆ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಅಭ್ಯರ್ಥಿಗಳ ಜಾತಿಯನ್ನು ನೋಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಏಕೈಕ ಗುರಿಯಿಂದ ಲಿಂಗಾಯತೇತರ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಕಂಡುಬರುತ್ತದೆ.
ಕಳೆದ ಚುನಾವಣೆಯಲ್ಲಿ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ನಲ್ವತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹತ್ತೊಂಬತ್ತನ್ನು ಗೆದ್ದಿದ್ದರೂ, ಇವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಐದು ಶಾಸಕರು ಮಾತ್ರ. ಉಳಿದವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗೆ ಸೇರಿದವರು. ಕಾಂಗ್ರೆಸ್ ಪಕ್ಷ ಈ ಭಾಗದ 15 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದರೂ ಅವರಲ್ಲಿನ ಲಿಂಗಾಯತ ಶಾಸಕರ ಸಂಖ್ಯೆ ಬಿಜೆಪಿಗಿಂತ ಎರಡು ಹೆಚ್ಚು. ಲಿಂಗಾಯತೇತರ ಅಭ್ಯರ್ಥಿಗಳಿದ್ದ ಕ್ಷೇತ್ರಗಳಲ್ಲಿಯೂ ಲಿಂಗಾಯತರು ಬಿಜೆಪಿಗೆ ಮತದಾನ ಮಾಡಿರುವುದು ಇದರಿಂದ ಸ್ಪಷ್ಟ.
ಜನಪ್ರಿಯ ಜಾತಿ ನಾಯಕರಲ್ಲಿ ಕಾಣಬಹುದಾದ (ಉದಾಹರಣೆಗೆ ಮಾಯಾವತಿ) ಮತವರ್ಗಾವಣೆಯ ಸಾಮರ್ಥ್ಯವನ್ನು ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪ್ರದರ್ಶಿಸಿದ್ದಾರೆ. ಆದರೆ ಕೇವಲ ಈ ಶಕ್ತಿಯ ಬಲದಿಂದ ಕೆಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗ ಅವರ ವೈಯಕ್ತಿಕ ಜನಪ್ರಿಯತೆ (ಮುಖ್ಯವಾಗಿ ಜಾತಿ) ಮತ್ತು ಪಕ್ಷದ ಮೂಲಕ ಹರಿದು ಬಂದ ಬೆಂಬಲ ಒಟ್ಟಾಗಿ ಅಭ್ಯರ್ಥಿಗಳನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತ್ತು. ಆದರೆ ಈ ಬಾರಿ ಕೇವಲ ತನ್ನ ಜನಪ್ರಿಯತೆಯ ಬಲದಿಂದಲೇ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತರಬೇಕಾಗಿದೆ. ಹಿಂದಿನ ಚುನಾವಣೆಯ ಕಾಲದಲ್ಲಿದ್ದ ಮತವರ್ಗಾವಣೆಯ ಸಾಮರ್ಥ್ಯ ಈಗಲೂ ಯಡಿಯೂರಪ್ಪನವರಲ್ಲಿ ಉಳಿದಿದೆಯೇ?
ಆರೋಪಗಳ ಕಳಂಕದ ಹೊರತಾಗಿಯೂ ಹೈದರಾಬಾದ್ ಕರ್ನಾಟಕದ ಬಹುಸಂಖ್ಯಾತ ಲಿಂಗಾಯತರಲ್ಲಿ ಯಡಿಯೂರಪ್ಪನವರ ಬಗ್ಗೆ ಪ್ರೀತಿಯೋ, ಅನುಕಂಪವೋ ಇರುವುದು ಸ್ಪಷ್ಟ. ಆದರೆ ಈ ಮೃದು ಭಾವನೆ ಅವರ ಮತಾಧಿಕಾರವನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆಯೇ ಎಂಬುದನ್ನು ಕಾದು ನೋಡಬೇಕು. ಈ ಭಾಗದಲ್ಲಿ ಸಮಗ್ರ ಲಿಂಗಾಯತ ಜಾತಿಯನ್ನು ಪ್ರತಿನಿಧಿಸಬಲ್ಲ ಸಾಮರ್ಥ್ಯದ ನಾಯಕರು ಇಲ್ಲದಿರುವುದು ಕೂಡಾ ಯಡಿಯೂರಪ್ಪನವರ ಬಗೆಗಿನ ಅಭಿಮಾನಕ್ಕೆ ಕಾರಣ ಇರಬಹುದು.
ಗುಲ್ಬರ್ಗ ಜಿಲ್ಲೆಯಲ್ಲಿ ವೀರೇಂದ್ರ ಪಾಟೀಲರ ನಂತರ ಕಾಣಿಸಿಕೊಂಡವರು ಜನತಾ ಪರಿವಾರಕ್ಕೆ ಸೇರಿರುವ ವೈಜನಾಥ ಪಾಟೀಲ, ಎಸ್.ಕೆ.ಕಾಂತಾ, ಬಿ.ಆರ್.ಪಾಟೀಲ ಮೊದಲಾದ ನಾಯಕರು. ಇವರಲ್ಲಿ ಯಾರೂ ಲಿಂಗಾಯತ ನಾಯಕರಾಗಿ ತಮ್ಮನ್ನು ಬಿಂಬಿಸಿಕೊಂಡವರಲ್ಲ. ಗುಲ್ಬರ್ಗ ಜಿಲ್ಲೆಯ ಸೇಡಂ ಶಾಸಕ ಡಾ.ಶರಣಪ್ರಕಾಶ ಪಾಟೀಲ ಇಲ್ಲವೆ ಯಾದಗಿರಿ ಶಾಸಕ ಡಾ.ಮಾಲಕರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷ ತಮ್ಮಲ್ಲಿರುವ ಲಿಂಗಾಯತ ನಾಯಕರೆಂದು ಬಿಂಬಿಸುತ್ತಿದ್ದರೂ ಅವರ ಪ್ರಭಾವಲಯ ಸೀಮಿತವಾದುದು.
ಇದೇ ರೀತಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಭೀಮಣ್ಣ ಖಂಡ್ರೆ ವೀರಶೈವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಸಮುದಾಯದ ಮೇಲೆ ನಿಯಂತ್ರಣ ಹೊಂದಿದವರಲ್ಲ, ಅವರ ಶ್ರಮವೆಲ್ಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಗ ಈಶ್ವರ ಖಂಡ್ರೆಯವರನ್ನು ಗೆಲ್ಲಿಸುವುದಕ್ಕಷ್ಟೇ ವ್ಯಯವಾಗುತ್ತಿದೆ. ಅದೇ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಹಲವು ಪಕ್ಷಗಳನ್ನು ಸುತ್ತಿ ಈಗ ಕೆಜೆಪಿ ಸೇರಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸವರಾಜ ಪಾಟೀಲ ಅನ್ವರಿ ಈಗ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಂಡಿಲ್ಲ. ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಬಸವರಾಜ ರಾಯರೆಡ್ಡಿ ಮತ್ತು ಅಮರೇಗೌಡ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ತಮ್ಮ ಕ್ಷೇತ್ರಗಳ ವ್ಯಾಪ್ತಿಯನ್ನು ಮೀರಿ ಲಿಂಗಾಯತ ಮತದಾರರ ಮೇಲೆ ಹಿಡಿತ ಹೊಂದಿದವರಲ್ಲ.
ಏಳರಲ್ಲಿ ಐದು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ಕಡಿಮೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಬೋಸರಾಜು ಮತ್ತು ಹಂಪನಗೌಡ ಬಾದರ್ಲಿ ಅವರೇ ಅಲ್ಲಿನ ನಾಯಕರು. ಬಳ್ಳಾರಿ ಜಿಲ್ಲೆಯಲ್ಲಿದ್ದ ಒಬ್ಬ ಲಿಂಗಾಯತ ನಾಯಕರಾದ ಅಲ್ಲಂ ವೀರಭದ್ರಪ್ಪನವರು ಊರು ಬಿಟ್ಟು ಬೆಂಗಳೂರು ಸೇರಿಬಿಟ್ಟಿದ್ದಾರೆ.
ಹೈದರಾಬಾದ್ ಕರ್ನಾಟಕದ ಲಿಂಗಾಯತರಲ್ಲಿರುವ ನಾಯಕತ್ವದ ಕೊರತೆ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಅನುಕೂಲತೆ. ಇದನ್ನು ಅರ್ಥಮಾಡಿಕೊಂಡಿರುವ ಅವರು ಅಳಿದುಳಿದ ಲಿಂಗಾಯತ ನಾಯಕರನ್ನು  ತಮ್ಮ ಜತೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿದ್ದಾರೆ. ಇದನ್ನು ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲ್ಬರ್ಗ ಜಿಲ್ಲೆಯಲ್ಲಿ ಕಾಣಬಹುದು. ನಂಜುಂಡಪ್ಪ ವರದಿಯ ಅನುಷ್ಠಾನದಿಂದ ಹಿಡಿದು ಸಂವಿಧಾನದ 371ನೇ ಕಲಂ ತಿದ್ದುಪಡಿಯವರೆಗಿನ ಹೈದರಾಬಾದ್ ಕರ್ನಾಟಕದ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದ ವೈಜನಾಥ ಪಾಟೀಲ, ಕಾರ್ಮಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಸ್.ಕೆ.ಕಾಂತಾ, ಜನತಾ ಪರಿವಾರದಿಂದ ಬಂದ ಸಮಾಜವಾದಿ ಹಿನ್ನೆಲೆಯ ಬಿ.ಆರ್.ಪಾಟೀಲ ಮತ್ತು ಇನ್ನೊಬ್ಬ ಹಿರಿಯ ನಾಯಕ ಎಂ.ವೈ. ಪಾಟೀಲ ಈಗ ಗುಲ್ಬರ್ಗ ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳು. ಅದೇ ರೀತಿ ಕೊಪ್ಪಳ ಜಿಲ್ಲೆಯ ಬಸವರಾಜ ಅನ್ವರಿ, ಬೀದರ್ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಕೂಡಾ ಕೆಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಮಗೆ ಇರುವ ಪ್ರಭಾವ ಸೀಮಿತವಾಗಿದ್ದರೂ ಇದು ಯಡಿಯೂರಪ್ಪನವರ ಜನಪ್ರಿಯತೆಯ ಜತೆ ಸೇರಿಕೊಂಡಾಗ ಗೆಲುವಿನ ಹಾದಿ ಹತ್ತಿರವಾಗಬಹುದು ಎಂಬ ನಿರೀಕ್ಷೆ ಕೆಜೆಪಿ ಅಭ್ಯರ್ಥಿಗಳಲ್ಲಿದೆ. ಕೆಜೆಪಿಯ ಜನಪ್ರಿಯತೆ ಅದಕ್ಕೆ ಸ್ಥಾನಗಳನ್ನು ಗೆದ್ದುಕೊಡುವಷ್ಟು ಅಗಾಧವಾಗಿದೆಯೇ? ಇಲ್ಲವೆ ಬೇರೆ ಪಕ್ಷಗಳ ಮತಗಳನ್ನು ತಿಂದುಹಾಕುವುದಕ್ಕಷ್ಟೇ ಸೀಮಿತವಾಗಲಿದೆಯೇ ಎನ್ನುವುದು ಚುನಾವಣಾ ಕಣದಲ್ಲಿರುವ ಕುತೂಹಲ. ಕೆಜೆಪಿ ಬರಿ ಬಿಜೆಪಿಗೆ ಮಾತ್ರವಲ್ಲ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದರೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಜೆಪಿಯಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು. ತಮ್ಮ ಅಭ್ಯರ್ಥಿಗಳು ಗೆಲ್ಲಲಾಗದ ಕಡೆಗಳಲ್ಲಿ ಕೊನೆ ಗಳಿಗೆಯಲ್ಲಿ ಕೆಜೆಪಿ ತನ್ನ ಬೆಂಬಲಿಗರಿಗೆ ಕಾಂಗ್ರೆಸ್ ಪರ ಮತಹಾಕಲು ಸೂಚನೆಯನ್ನು ನೀಡಬಹುದೆಂಬ ನಿರೀಕ್ಷೆಯೂ ಕೆಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿದೆ.
ಬಹಿರಂಗವಾಗಿ ಚರ್ಚೆಯಾಗುತ್ತಿರುವಂತೆ ಬಿಜೆಪಿಯನ್ನು ಸೋಲಿಸುವುದೇ ಕೆಜೆಪಿಯ ಮೊದಲ ಉದ್ದೇಶವಾಗಿದ್ದರೆ ಈ ಪ್ರಯತ್ನದಲ್ಲಿ ಅದು ಈಗಾಗಲೇ ಯಶಸ್ಸು ಕಂಡಿದೆ ಎಂದು ಹೇಳಬಹುದು. ಹೈದರಾಬಾದ್ ಕರ್ನಾಟಕದಲ್ಲಿ ಕಳೆದ ಬಾರಿ ಗೆದ್ದಿರುವ 19 ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಖಂಡಿತ ಅಸಾಧ್ಯ. ಈ ಸಂಖ್ಯೆ ಅರ್ಧಕ್ಕಿಂತಲೂ ಕೆಳಗಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಕೆಜೆಪಿ, ಹೈದರಾಬಾದ್ ಕರ್ನಾಟಕದ ಮನೆಬಾಗಿಲು ಬಡಿಯುತ್ತಿರುವುದು ನಿಜ, ಆದರೆ ಬಾಗಿಲು ತೆರೆಯುವ ಬಗ್ಗೆ ಮನೆ ಯಜಮಾನನ ನಿರ್ಧಾರ ಏನೆಂದು ತಿಳಿದುಕೊಳ್ಳಲು ಕಾಯಬೇಕು.

Sunday, April 28, 2013

`ವಿಕಾಸ ಪುರುಷ'ನ ಹೊಸ ಪಾತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರ

ಗುಲ್ಬರ್ಗ:  `ನಮ್ಮ ಸಾಧನೆಯನ್ನು ಅರ್ಧ ಆಕಾಶದಲ್ಲಿ, ಇನ್ನರ್ಧ ಭೂಮಿಯಲ್ಲಿ ತೋರಿಸುತ್ತೇನೆ' ಎಂದಿದ್ದರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಹತ್ತುವಾಗ. ಬೀದರ್ ಲೋಕಸಭಾ ಸದಸ್ಯ ಎನ್.ಧರ್ಮಸಿಂಗ್ ಅವರೂ ಜತೆಯಲ್ಲಿದ್ದರು.
ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರ ವರೆಗೆ ಎಡೆಬಿಡದೆ ಐದು ಸ್ಥಳಗಳಲ್ಲಿ ಪ್ರಚಾರ ಭಾಷಣ ಮಾಡಿದ ಇಬ್ಬರೂ ನಾಯಕರು ದಣಿವಿಲ್ಲದಂತೆ ಮಾತನಾಡಿದ್ದು ಹೈದರಾಬಾದ್ ಕರ್ನಾಟಕದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ. ಸಭೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬಂದು ಕೂತಾಗಲೂ ಅದೇ ಚರ್ಚೆ ಮುಂದುವರಿಯುತ್ತಿತ್ತು. `ಐದು ವರ್ಷಗಳಲ್ಲಿ ಖರ್ಗೆ ಮತ್ತು ಧರ್ಮಸಿಂಗ್ ಈ ಪ್ರದೇಶಕ್ಕೆ ಏನು ಮಾಡಿದ್ದಾರೆ?' ಎಂಬ ವಿರೋಧಪಕ್ಷಗಳ ಚುಚ್ಚು ಪ್ರಶ್ನೆ ಇಬ್ಬರನ್ನೂ ಘಾಸಿಗೊಳಿಸಿದಂತಿತ್ತು.
ಆಡಳಿತಾರೂಢ ಪಕ್ಷದ ದುರಾಡಳಿತವನ್ನೇ ಚುನಾವಣಾ ಕಾಲದಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳುವುದು ಸಹಜ. ಹೈದರಾಬಾದ್ ಕರ್ನಾಟಕದಲ್ಲಿ ಚುನಾವಣಾ ಆಟದ ಈ ನಿಯಮ ಬದಲಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ  ಕಾಂಗ್ರೆಸ್‌ನ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಾಧನೆಗಳನ್ನು ಮುಂದಿಟ್ಟು ಮತಕೇಳುತ್ತಿದ್ದಾರೆ.`ದಲಿತ ನಾಯಕ', `ಉತ್ತರ ಕರ್ನಾಟಕದ ನಾಯಕ' ಎಂಬೀತ್ಯಾದಿ ವಿಶೇಷಣಗಳಿಂದ ಕಳಚಿಕೊಂಡು `ವಿಕಾಸ ಪುರುಷ'ನಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಖರ್ಗೆ ತೊಡಗಿದ್ದಾರೆ.
`ಲೋಕಸಭೆಗೆ ನನ್ನನ್ನು ಆರಿಸಿ ಕಳುಹಿಸಿದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದಾಗಿ ರಾಹುಲ್‌ಗಾಂಧಿ ಭರವಸೆ ನೀಡಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಮಾಡಿರುವ ಕೆಲಸಕ್ಕಾಗಿ ಕೂಲಿ ಕೊಡಿ' ಎಂದು ಖರ್ಗೆ ಅವರು ಮತಯಾಚಿಸುತ್ತಿದ್ದಾರೆ. ಅಲ್ಲಿಗೆ ನಿಲ್ಲಿಸದೆ, ನಾಲ್ಕು ವರ್ಷಗಳ ಅವಧಿಯಲ್ಲಿ  ಗುಲ್ಬರ್ಗ  ಜಿಲ್ಲೆಯಲ್ಲಿ ತಾವು ಮಾಡಿದ ಸಾಧನೆಗಳನ್ನು ಪಟ್ಟಿಮಾಡಿ ಹೇಳುತ್ತಿದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರು ಇಲ್ಲಿ ಬಂದು ಕಣ್ಣುಬಿಟ್ಟುನೋಡಲಿ, ಅಂದಾಜು ರೂ.1,500 ಕೋಟಿ  ವೆಚ್ಚದಲ್ಲಿ ಇಎಸ್‌ಐ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ, ಡೆಂಟಲ್,ನರ್ಸಿಂಗ್ ಕಾಲೇಜುಗಳು, ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಗುಲ್ಬರ್ಗಗಳಲ್ಲಿ ಕೌಶಲ ಸುಧಾರಣಾ ಕೇಂದ್ರ, ಟೆಕ್ಸ್‌ಟೈಲ್ ಪಾರ್ಕ್, ಕೃಷಿ ಸಂಶೋಧನಾ ಕೇಂದ್ರ, ನವೋದಯ ಶಾಲೆ...ಇನ್ನೇನಾಗಬೇಕು? ಗುಲ್ಬರ್ಗ, ರಾಯಚೂರು,ಯಾದಗಿರಿ,ಬಳ್ಳಾರಿ ಮತ್ತು ಅನಂತಪುರ ಮೂಲಕ ಬೆಂಗಳೂರಿಗೆ ಹೋಗುವ ಸುಮಾರು 300 ಕಿ.ಮೀ.ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇವೆಲ್ಲವೂ ನಾಲ್ಕು ವರ್ಷಗಳಲ್ಲಿ ಆಗಿರುವಂತಹ ಕೆಲಸಗಳು, ಹಿಂದಿನದ್ದೆಲ್ಲವನ್ನು ಇದರಲ್ಲಿ ಸೇರಿಸಿಲ್ಲ. ನನ್ನನ್ನು ಸತತವಾಗಿ ಏಳು ಬಾರಿ ಆಯ್ಕೆಮಾಡಿದ ಗುರುಮಿಠ್ಕಲ್ ಕ್ಷೇತ್ರಕ್ಕೆ ಹೋಗಿ ನೋಡಿದರೆ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇನೆಂದು ಗೊತ್ತಾಗುತ್ತದೆ.  ಕಾಮಾಲೆ ಕಣ್ಣಿಗೆ ಇದೆಲ್ಲ ಕಾಣಿಸುವುದಿಲ್ಲ' ಎಂದ ಖರ್ಗೆಯವರಿಗೆ ಭಾಷಣ ಮುಗಿಸಿದ ಮೇಲೆಯೂ ವಿರೋಧಪಕ್ಷಗಳ ನಾಯಕರ ಪ್ರಶ್ನೆಗಳಿಂದ ಹುಟ್ಟಿಕೊಂಡಿರುವ ಸಿಟ್ಟು ಇಳಿದಿರಲಿಲ್ಲ.
ಪಕ್ಷದ ಶಿಸ್ತಿನ ಶಿಪಾಯಿ: ಅವರ ಮಾತುಗಳನ್ನು ಅರ್ಧಕ್ಕೆ ತಡೆದು `ವಿರೋಧಪಕ್ಷಗಳನ್ನು ಯಾಕೆ ದೂರುತ್ತೀರಿ, ಬೆಂಗಳೂರಿನಲ್ಲಿರುವ ನಿಮ್ಮ ಪಕ್ಷದ ನಾಯಕರಲ್ಲಿ ಎಷ್ಟು ಮಂದಿ ಈ ಬಗ್ಗೆ ಮಾತನಾಡಿದ್ದಾರೆ?' ಎಂದು ಪ್ರಶ್ನಿಸಿದೆ. ಅಲ್ಲಿಯವರೆಗೆ ಆಕ್ರಮಣಕಾರಿ ರಾಜಕೀಯ ನಾಯಕರಂತೆ ಮಾತನಾಡುತ್ತಿದ್ದ ಖರ್ಗೆಯವರು ತಕ್ಷಣ `ಪಕ್ಷದ ಶಿಸ್ತಿನ ಸಿಪಾಯಿ'ಯಾಗಿ ಮೌನವಾಗಿಬಿಟ್ಟರು.
ಆಡಳಿತ ಮತ್ತು ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರೆ ಪಕ್ಷಾತೀತವಾಗಿ ರಾಜ್ಯದ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಆದರೆ ಅದನ್ನು ಅವರು ಹೇಳಿಕೊಂಡದ್ದು ಕಡಿಮೆ.
`ಸಾಮಾನ್ಯವಾಗಿ ರಾಜಕಾರಣಿಗಳಲ್ಲಿ ಕಂಡುಬರುವ ಮಹತ್ವಾಕಾಂಕ್ಷೆ ಇಲ್ಲದಿರುವುದು ಮತ್ತು ಪಕ್ಷದ ಮೇಲಿನ ಅತಿನಿಷ್ಠೆ ಖರ್ಗೆ ಅವರ ದೌರ್ಬಲ್ಯಗಳು' ಎನ್ನುತ್ತಾರೆ ಅವರ ಬೆಂಬಲಿಗರು. ಇತ್ತೀಚೆಗೆ ಖರ್ಗೆ ಅವರನ್ನು ರಾಜಕೀಯ ಮಹತ್ವಾಕಾಂಕ್ಷೆಗಿಂತಲೂ ಹೆಚ್ಚಾಗಿ ಅಭಿವೃದ್ಧಿ ಕೆಲಸಗಳ ಹುಚ್ಚು ಆವರಿಸಿಕೊಂಡಂತಿದೆ.
ತಮ್ಮ ನಲ್ವತ್ತು ವರ್ಷಗಳ ರಾಜಕೀಯದಲ್ಲಿ ಮಾಡಲು ಸಾಧ್ಯವಾಗದೆ ಇರುವುದನ್ನೆಲ್ಲ ಆದಷ್ಟು ಬೇಗ ಮಾಡಿ ಮುಗಿಸುವ ಅವಸರದಲ್ಲಿದ್ದ ಹಾಗೆ ಕಾಣುತ್ತಿದ್ದಾರೆ. ರಾಜಕೀಯ ವಿಷಯದ ಮೂಲಕ ಅವರೊಡನೆ ಮಾತು ಪ್ರಾರಂಭಿಸಿದರೂ ಅದು ಬಹಳ ಬೇಗ ಅಭಿವೃದ್ಧಿ ಕಾರ್ಯಕ್ರಮಗಳ ಚರ್ಚೆಯ ತಿರುವು ಪಡೆಯುತ್ತಿತ್ತು.
ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲಿಯೇ `ಇಲ್ಲಿ ಕೆಳಗೆ ನೋಡಿ' ಎಂದರು ಇಬ್ಬರೂ ನಾಯಕರು ಏಕಕಾಲಕ್ಕೆ. ಅಲ್ಲಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ್‌ಗಳಿಂದಾಗಿ ಭೀಮಾ ನದಿಯಲ್ಲಿ ನೀರು ನಿಂತಿರುವುದು ಮತ್ತು ನದಿದಂಡೆಯಲ್ಲಿ ಹಸಿರು ನಳನಳಿಸುತ್ತಿರುವುದು ಎತ್ತರದಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು.
ಭೀಮಾ, ಕಾಗಿನಾ, ಅಮರ್ಜಾ ನದಿದಂಡೆಗಳ ಮೇಲಿನ ಅಫ್ಜಲ್‌ಪುರ, ಜೇವರ್ಗಿ, ಶಹಬಾದ್, ಚಿಂಚೋಳಿ, ಮಾಗಾಂವ್‌ಗಳಲ್ಲಿಯೇ ಚುನಾವಣಾ ಪ್ರಚಾರದ ಸಭೆಗಳಿದ್ದ ಕಾರಣ ಹೆಲಿಕಾಪ್ಟರ್ ಈ ನದಿದಂಡೆಗಳ ಮೇಲಿನಿಂದಲೇ ಹಾರುತ್ತಿತ್ತು. ನದಿಗಳಲ್ಲಿ ನೀರು ಮತ್ತು ಹಸಿರು ನೋಡಿದಾಕ್ಷಣ ಇಬ್ಬರೂ ನಾಯಕರು `ಕೆಳಗೆ ನೋಡಿ' ಎಂದು ಹೇಳುತ್ತಲೇ ಇದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಇದು ಯಾವುದು ಕಾಣುತ್ತಿಲ್ಲವೇ? ಈ ನದಿಗಳಿಗೆ ಸುಮಾರು 20-25 ಬ್ಯಾರೇಜ್ ನಿರ್ಮಿಸಲಾಗಿದೆ. ಇವುಗಳಿಗೆ ಕೇಂದ್ರ ಸರ್ಕಾರದ `ತ್ವರಿತ ನೀರಾವರಿ ಯೋಜನೆ'ಯಿಂದಲೇ ಹೆಚ್ಚಿನ ದುಡ್ಡು ಬಂದಿರುವುದು, ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆಯಂತೆ? ಪ್ರಶ್ನಿಸಿದರು ಧರ್ಮಸಿಂಗ್. `ನಮ್ಮ ಸಾಧನೆಯನ್ನು ಆಕಾಶದಲ್ಲಿ ತೋರಿಸುತ್ತೇನೆ' ಎಂದು ಹೇಳಿದ್ದೇ ಇದಕ್ಕಾಗಿ ಎಂದು ದನಿಗೂಡಿಸಿದರು ಖರ್ಗೆ.
ಹೆಲಿಕಾಪ್ಟರ್‌ನ ಮೊದಲ ನಿಲುಗಡೆಯಾಗಿ ಅಫ್ಜಲ್‌ಪುರದಲ್ಲಿ ಇಳಿದಾಗ ಎದುರಾದ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಭೀಮಾ ನದಿ ದಂಡೆಯ ಬ್ಯಾರೇಜ್‌ಗಳ ವಿಷಯ ಬಿಟ್ಟು ಬೇರೇನೂ ಮಾತನಾಡಲಿಲ್ಲ.  `ಸೊನ್ನ, ಗಾಣಗಾಪುರ, ಗತ್ತರಗಿಗಳಲ್ಲಿ ನಿರ್ಮಾಣಗೊಂಡ ಬ್ಯಾರೇಜ್‌ಗಳಿಂದಾಗಿ ಸುಮಾರು 90ಗ್ರಾಮಗಳ ಜಮೀನಿಗೆ ನೀರು ಬಂದಿದೆ' ಎಂದು ಅವರು ಖರ್ಗೆ ಮತ್ತು ಧರ್ಮಸಿಂಗ್ ಅವರ ಮಾತುಗಳನ್ನು ದೃಡೀಕರಿಸಿದರು.
ಪ್ರಚಾರ ಸಭೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ಜನ ಜೈಕಾರ ಹಾಕತೊಡಗಿದ್ದರು. ಅವರು ಪ್ರತಿಬಾರಿ ಮುನ್ನೂರ ಎಪ್ಪತ್ತೊಂದು' ಹೇಳಿದಾಗಲೂ ಜನ ಹರ್ಷೋದ್ಗಾರ ಮಾಡುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಇತರರು ಖರ್ಗೆ ಹೆಸರು ಹೇಳುತ್ತಿದ್ದಾಗಲೂ ಜನ ಜೈಕಾರ ಹಾಕುತ್ತಿದ್ದರು. ಇದರಿಂದ ಸ್ಪೂರ್ತಿ ಪಡೆದಂತೆ ಖರ್ಗೆ ಎಲ್ಲ ಕಡೆಗಳಲ್ಲಿ ಸಂವಿಧಾನದ 371ನೆ ಕಲಮಿಗೆ ಮಾಡಿದ ತಿದ್ದುಪಡಿಯ ವಿಷಯವನ್ನೇ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ಮಾತನಾಡಿದರು.
`ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿದವರು ಬಿಜೆಪಿ ನಾಯಕರು. ಇದನ್ನು ಮಾಡಿದರೆ ದೇಶ `ತುಕುಡಿ ತುಕುಡಿ' ಆಗುತ್ತದೆ ಎಂದು ಆಗಿನ ಕೇಂದ್ರ ಗೃಹಸಚಿವ ಎಲ್.ಕೆ.ಅಡ್ವಾಣಿ ಹೇಳಿದ್ದರು. ವಿಶೇಷ ಸ್ಥಾನಮಾನ ಪಡೆದ ತೆಲಂಗಾಣ, ವಿದರ್ಭ, ಸೌರಾಷ್ಟ್ರ, ನಾಗಲ್ಯಾಂಡ್‌ಗಳು `ತುಕುಡಿ' ಆಗಿದೆಯೇ? ಎಂದು ಅವರು ಜನರನ್ನು ಪ್ರಶ್ನಿಸುತ್ತಿದ್ದರು.
`ಬಹಳ ಶ್ರಮಪಟ್ಟು ಎಲ್ಲರನ್ನು ಒಪ್ಪಿಸಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ತಿದ್ದುಪಡಿ ಮಾಡಿದ್ದೇವೆ. ಇದು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಓಟು ಹಾಕಿ' ಎಂದು ಜನತೆಯ ಭಾವನೆಗಳನ್ನು ಮೀಟುವ ಕೆಲಸವನ್ನೂ ಅವರು ಮಾಡುತ್ತಿದ್ದರು.
ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಸೇರಿದ್ದ ಕಾರ್ಯಕರ್ತರು ಮತ್ತು ಬೆಂಬಲಿಗರೇ ಸೇರುವುದರಿಂದ ಪ್ರತಿಕ್ರಿಯೆ ನಿರೀಕ್ಷಿತ ಎಂದಿಟ್ಟುಕೊಂಡರೂ `ಅಭಿವೃದ್ಧಿಯ ಮಂತ್ರ'ಕ್ಕೆ ಜನ ತಲೆದೂಗುತ್ತಿರುವುದು ಹೊಸ ಬೆಳವಣಿಗೆ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳನ್ನು ಮೀರಿದ ಈ ರೀತಿಯ ಅಭಿವೃದ್ಧಿ ಕೇಂದ್ರಿತ ಚುನಾವಣಾ ಪ್ರಚಾರ ಈ ಕಾಲದ ಅಗತ್ಯ ಕೂಡಾ ಹೌದು.
ಮಾಗಾಂವ್‌ನಲ್ಲಿ ರಾತ್ರಿ ಹತ್ತುಗಂಟೆಗೆ ಪ್ರಚಾರ ಮುಗಿಸಿ ಗುಲ್ಬರ್ಗಕ್ಕೆ ಹಿಂದಿರುಗುತ್ತಿದ್ದಾಗ ಖರ್ಗೆ ಅವರು `ನಾವೇನು ಮಾಡಿದ್ದೇವೆ ಎನ್ನುವುದನ್ನು ಭೂಮಿಯ ಮೇಲೆಯೂ ನೋಡಿದರಲ್ಲಾ?' ಎಂದು ಕೇಳಿದರು. ಚಿಂಚೋಳಿ ಮೀಸಲು ಕ್ಷೇತ್ರದ ಕಾಳಗಿಗೆ ಹೋದ ನಂತರ ಹೆಲಿಕಾಪ್ಟರ್ ವಾಪಸು ಕಳಿಸಿದ್ದ ಕಾರಣ ರಸ್ತೆಯಿಂದಲೇ ಮಾಗಾಂವ್‌ಗೆ ಬಂದ ಖರ್ಗೆ ದಿನದ ಕೊನೆಯ ಪ್ರಚಾರ ಭಾಷಣ ಮುಗಿಸಿದ್ದರು.
`ಈ ವಯಸ್ಸಿನಲ್ಲಿ ಸತತ ಹನ್ನೆರಡು ಗಂಟೆ ಸುತ್ತಾಟ, ಪ್ರಚಾರ ಎಲ್ಲ ಸುಸ್ತು ಅನಿಸುವುದಿಲ್ಲವೇ? ಎಂದು ಖರ್ಗೆಯವರನ್ನು ಸುಮ್ಮನೆ ಕೆಣಕಿದೆ. `ನನಗೆ ವಯಸ್ಸಾಗಿದೆ ಎಂದು ನಿಮಗೆ ಅನಿಸುತ್ತಾ? ಎಂದು ಅವರು ಮರುಪ್ರಶ್ನಿಸಿದರು. `ಈ ಪ್ರಶ್ನೆಯನ್ನು ನೀವು ಕೇಳಬೇಕಾಗಿರುವುದು ನಿಮ್ಮ ಪಕ್ಷದ ಉಪಾಧ್ಯಕ್ಷರಾದ ರಾಹುಲ್‌ಗಾಂಧಿ ಅವರನ್ನು' ಎಂದೆ ತಮಾಷೆಯಾಗಿ.