Thursday, July 16, 2015

ಅಭಿವೃದ್ದಿಯಲ್ಲಿನ ತಾರತಮ್ಯಕ್ಕೆ ಸಂಬಂಧಿಸಿದ ಕೆಲವು ಮುಖ್ಯ ವಿಷಯಗಳು

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಬುಧವಾರ ಉತ್ತರಿಸಿದ ಮುಖ್ಯಮಂತ್ರಿಗಳು ಅಭಿವೃದ್ದಿಯಲ್ಲಿನ ತಾರತಮ್ಯಕ್ಕೆ ಸಂಬಂಧಿಸಿದ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದರು. ನಾನು ಓದಿದಂತೆ ಇದು ಇಂದಿನ ಯಾವ ಪತ್ರಿಕೆಗಳಲ್ಲಿಯೂ ಪ್ರಕಟವಾಗಿಲ್ಲ. (ಸುದ್ದಿ ಪ್ರಕಟಣೆ-ಪ್ರಸಾರದಲ್ಲಿ ಮಾಧ್ಯಮಗಳಿಗಿರುವ ಇತಿಮಿತಿಗಳ ಅರಿವು ನನಗಿರುವುದರಿಂದ ಇದು ಉದ್ದೇಶಪೂರ್ವಕ ಎಂದು ನಾನು ಹೇಳಲಾರೆ.) ಮುಖ್ಯಮಂತ್ರಿಗಳ ಮಾತಿನ ಕೆಲವು ತುಣುಕುಗಳು ಇಲ್ಲಿದೆ:
“.. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಲ್ಲದ ಮನಸ್ಸಿನಿಂದ ಅದನ್ನು ಒಪ್ಪಿಕೊಂಡಿದ್ದರು. ಸ್ವಾತಂತ್ರ್ಯಕ್ಕಿಂತಲೂ ಸಮಾನತೆ ಮುಖ್ಯ ಎನ್ನುವುದು ಅವರು ಖಚಿತ ನಿಲುವಾಗಿತ್ತು. ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಸ್ವಾತಂತ್ರ್ಯ ಎನ್ನುವುದು ಶೋಷಕರ ಕೈಯಲ್ಲಿನ ಅಸ್ತ್ರವಾಗಬಹುದು ಎನ್ನುವ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅಭಿಪ್ರಾಯದ ಹಿನ್ನೆಲೆಯಲ್ಲಿಯೇ ನಾವು ಅಭಿವೃದ್ಧಿಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಸಮಾನತೆ ಇಲ್ಲದ ಸಮಾಜದಲ್ಲಿ ಅಭಿವೃದ್ಧಿ ಎನ್ನುವುದು ಕೆಲವರ ಅಭಿವೃದ್ಧಿಯಾಗುವುದೇ ಹೊರತು ಎಲ್ಲರ ಅಭಿವೃದ್ದಿಯಾಗುವುದಿಲ್ಲ. ಈ ಕಾರಣಕ್ಕಾಗಿಯೇ ಸಮಾನತೆ ಮತ್ತು ಅಭಿವೃದ್ಧಿ ಜತೆಜತೆಯಲ್ಲಿಯೇ ನಡೆಯಬೇಕಾಗುತ್ತದೆ...”“....ಉತ್ತರ ಕರ್ನಾಟಕ ಮತ್ತು ಬೆಂಗಳೂರು ಜಿಲ್ಲೆಯನ್ನು ಹೊರತುಪಡಿಸಿದ ದಕ್ಷಿಣ ಕರ್ನಾಟಕಕ್ಕೆ ಸರ್ಕಾರ ನೀಡಿರುವ ಅನುದಾನದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಆದರೆಸರ್ಕಾರ ನೀಡಿರುವ ಅನುದಾನಕ್ಕೆ ಅನುಗುಣವಾದ ಅಭಿವೃದ್ಧಿಯ ಪರಿಶೀಲನೆ ಮಾಡಿದರೆ ದಕ್ಷಿಣದಲ್ಲಿ ಹೆಚ್ಚು ಅಭಿವೃದ್ದಿಯಾಗಿದೆ, ಉತ್ತರಕರ್ನಾಟಕದಲ್ಲಿ ಅನುದಾನದ ಪ್ರಮಾಣಕ್ಕನುಗುಣವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೇನು ಕಾರಣ ಎಂಬುದನ್ನು ನಾವೆಲ್ಲರೂ ಪಕ್ಷಭೇದ ಮರೆತು ಕೂಡಿ ಚರ್ಚಿಸಿ ತಿಳಿದುಕೊಳ್ಳಬೇಕು. ಈ ಲೋಪವನ್ನು ಸರಿಪಡಿಸಿಕೊಳ್ಳದಿದ್ದರೆ ಹಿಂದುಳಿಯುವಿಕೆಯ ವಿರುದ್ಧದ ನಮ್ಮ ಹೋರಾಟ ಯಶಸ್ಸು ಕಾಣಲು ಸಾಧ್ಯವಿಲ್ಲ....”
“...ಇತಿಹಾಸವನ್ನು ಅವಲೋಕಿಸಿದರೆ ಸಮಾನತೆಯ ಬುನಾದಿಯಲ್ಲಿ ಸಮಾಜವನ್ನು ಕಟ್ಟುವ ಪ್ರಯತ್ನಕ್ಕೆ ಉತ್ತರ ಕರ್ನಾಟಕದಲ್ಲಿನ ಊಳಿಗಮಾನ್ಯ ವ್ಯವಸ್ಥೆ ತಡೆಯೊಡ್ಡುತ್ತಾ ಬಂದುದನ್ನು ಕಾಣಬಹುದು. ರಾಜ್ಯದ ದಕ್ಷಿಣದ ಭಾಗಗಳಂತೆ ಉತ್ತರ ಕರ್ನಾಟಕದಲ್ಲಿ ಭೂ ಸುಧಾರಣೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಕೂಡಾ ವಾಸ್ತವ. ಈ ಕಾರಣದಿಂದಾಗಿಯೇ ಇಲ್ಲಿ ವರ್ಗಗಳ ನಡುವಿನ ಬಿರುಕು ಹೆಚ್ಚಿದೆ. ಈ ಅಂತರವನ್ನು ಅಳಿಸಿಹಾಕಬೇಕಾದರೆ ನಮ್ಮ ಅಭಿವೃದ್ಧಿಯ ಕಣ್ಣುಗಳಿಗೆ ಸಮಾನತೆಯ ದೃಷ್ಟಿ ಇರಬೇಕಾಗುತ್ತದೆ...”

Sunday, July 12, 2015

ಶಾಹು ಮಹಾರಾಜನ ಸನ್ನಿಧಿಯಲ್ಲಿ....

ಬುದ್ಧನ ನಂತರ, ಸಾರ್ವಜನಿಕ ಸ್ಥಳದಲ್ಲಿ ಕೂತು ಅಸ್ಪೃಶ್ಯರ ಕೈತುತ್ತು ಉಂಡ ಭಾರತದ ಏಕೈಕ ಹಿಂದೂ ರಾಜ ಶಾಹು ಛತ್ರಪತಿ ಮಹಾರಾಜ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಾರಂಭಿಸಿದ ಮೊದಲ ಪತ್ರಿಕೆ ‘ಮೂಕನಾಯಕ’ ಪ್ರಕಟಣೆಗೆ ಮತ್ತು ಅವರು ಹಣದ ಕೊರತೆಯಿಂದಾಗಿ ಇಂಗ್ಲಂಡ್ ನಲ್ಲಿ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಿದವರು ಶಾಹು ಮಹಾರಾಜ. ಜ್ಯೋತಿಬಾ ಪುಲೆ ಅವರ ಸತ್ಯಶೋಧಕ ಮಂಡಳಿಯ ಚಳುವಳಿಯನ್ನು ಬೆಂಬಲಿಸಿದ ಮತ್ತು ‘ಕೇಸರಿ’ ಬಾಲಗಂಗಾಧರ ತಿಲಕರನ್ನೂ ಸೇರಿಸಿಕೊಂಡು ಪುರೋಹಿತಷಾಹಿ ವಿರುದ್ಧ ಸಮರವನ್ನೇ ಸಾರಿದವರು ಈ ಶಾಹು ಮಹಾರಾಜ. ಛತ್ರಪತಿ ಶಿವಾಜಿಯ ಸಂತತಿಗೆ ಸೇರಿದ ಇವರು ರಾಜ್ಯಭಾರ ಮಾಡಿದ ಕೊಲ್ಹಾಪುರದ ಅರಮನೆಗೆ ಇತ್ತೀಚೆಗೆ ಗೆಳೆಯರ ಜತೆ ಭೇಟಿ ನೀಡಿದಾಗ ಇತಿಹಾಸದ ಪುಟಗಳೆಲ್ಲ ಕಣ್ಣೆದುರು ಪಟಪಟನೆ ಹಾದುಹೋಯಿತು.

. “ ಅಂಬೇಡ್ಕರ್ ರೂಪದಲ್ಲಿ ವಿಮೋಚನಕಾರ ನಿಮ್ಮ ಮುಂದೆ ಬಂದಿದ್ದಾನೆ. ನಿಮ್ಮ ಬಂಧನದ ಸರಪಳಿಗಳನ್ನು ಈತ ಕಿತ್ತುಹಾಕಲಿದ್ದಾನೆ. ಇಷ್ಟು ಮಾತ್ರವಲ್ಲ ಈತ ಮುಂದೊಂದು ದಿನ ಅಖಿಲ ಭಾರತ ಮಟ್ಟದ ಖ್ಯಾತಿ ಮತ್ತು ಪ್ರಭಾವವನ್ನು ಗಳಿಸಲಿರುವ ನಾಯಕನಾಗಲಿದ್ದಾನೆ ಎಂದು ನನ್ನ ಅಂತರಾತ್ಮ ಪಿಸುಗುಟ್ಟುತ್ತಿದೆ..’ಎಂದು 1920ರಲ್ಲಿ ಮಾಗಾಂವ್ ನಲ್ಲಿ ನಡೆದ ಅಸ್ಪೃಶ್ಯರ ಸಮಾವೇಶದಲ್ಲಿ ಶಾಹುಮಹಾರಾಜರು ಭವಿಷ್ಯ ನುಡಿದಿದ್ದರು. ವಿಷಾದದ ಸಂಗತಿಯೆಂದರೆ ಅತ್ಯಂತ ಕೆಟ್ಟನಿರ್ವಹಣೆಗೆ ಒಳಪಟ್ಟು ಪಾಳುಬಿದ್ದಂತಿರುವ ಅರಮನೆಯೊಳಗಿನ ವಸ್ತುಸಂಗ್ರಹಾಲಯದಲ್ಲಿ ಶಾಹು ಮಹಾರಾಜ ಮತ್ತು ಅಂಬೇಡ್ಕರ್ ನಡುವಿನ ಬಾಂಧವ್ಯವನ್ನು ನೆನಪು ಮಾಡಿಕೊಡುವ ಯಾವ ಕುರುಹುಗಳೂ ಕಣ್ಣಿಗೆ ಬೀಳಲಿಲ್ಲ