Saturday, January 2, 2016

34 ವರ್ಷಗಳ ಹಿಂದಿನ ಒಂದು ಬರಹ

ಪ್ರಿಯ ಬೊಳುವಾರ್,
ಹೊಸ ವರ್ಷ ಚಂದದ ಹೊಸ ಮನಸ್ಸುಗಳನ್ನು ತರಲಿ ಎಂದು ಹಾರೈಸಿದಕ್ಕೆ ಥ್ಯಾಂಕ್ಸ್. ಆದರೆ ಇಂತಹ ಒಳ್ಳೆಯ ಮನಸ್ಸು-ಬುದ್ದಿ ಮೂರು ದಶಕಗಳ ಹಿಂದೆ ನಿಮ್ಮಿಂದಲೇ ನನಗೆ ಪ್ರಾಪ್ತಿಯಾಗಿದ್ದು ಎನ್ನುವುದು ನಿಮಗೂ ತಿಳಿದಿಲ್ಲ. 1981ರ ಆಗಸ್ಟ್ 23ರ ಸುಧಾ ವಾರಪತ್ರಿಕೆಯಲ್ಲಿ ‘ಮಹಮದ’ ಎಂಬ ಹೆಸರಲ್ಲಿ ‘ಮುಸ್ಲಿಮನಾಗಿರುವುದೆಂದರೆ...’ ಎಂಬ ಲೇಖನ ಪ್ರಕಟವಾಗಿತ್ತು. (ಅದು ಪ್ರಕಟವಾಗಿದ್ದು ನೀವು ಅಂದುಕೊಂಡಂತೆ 42 ವರ್ಷಗಳ ಹಿಂದೆ ಅಲ್ಲ 34 ವರ್ಷಗಳ ಹಿಂದೆ)



ಆ ಲೇಖನವನ್ನು ಆ ಕಾಲದಲ್ಲಿ ನಾನು ಓದದೆ ಹೋಗಿದ್ದರೆ ಕರಾವಳಿಯ ಈಗಿನ ವಕ್ರಬುದ್ದಿಯ ಸಂತಾನದ ವಿದ್ಯಾರ್ಥಿಗಳ ಶಾಲೆಯಲ್ಲಿ ನಾನು ಮುಖ್ಯೋಪಾಧ್ಯಾಯನಾಗಿರುತ್ತಿದ್ದೆ. (ಪುಂಡರ ಗುರು ಎನ್ನಿ). ನನಗೆ ಆಗ 22ರ ಹರಯ. ಆಗಲೇ ಹೆಜಮಾಡಿಯ ಭಟ್ರು ಒಬ್ಬರು ಮುಂಜಾನೆಯ ಆರ್ ಎಸ್ ಎಸ್ ಬೈಠಕ್ ಗೆ ಬರಲು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಇನ್ನೂ ಗಾಂಧಿ,ಅಂಬೇಡ್ಕರ್, ಲೋಹಿಯಾ ಅವರನ್ನು ಗಂಭೀರವಾಗಿ ಓದಿರಲಿಲ್ಲ, ದಾರಿ ತಪ್ಪುತ್ತಿದ್ದೆನೋ ಏನೋ? ಅಂತಹ ಸಮಯದಲ್ಲಿ ನನ್ನ ಕಣ್ಣು ತೆರೆಸಿದ ಲೇಖನ ನಿಮ್ಮದು. ಮುಸ್ಲಿಮ್ ಸಮುದಾಯವನ್ನು ಧರ್ಮದ ಪೂರ್ವಗ್ರಹ ಬಿಟ್ಟು ಅರ್ಥಮಾಡಿಕೊಳ್ಳಲು ನೆರವಾದ ಲೇಖನ ಅದು.
ಅದರ ನಂತರದ ನನ್ನ ಬರವಣಿಗೆ-ಭಾಷಣಗಳಲ್ಲಿ ಆ ಲೇಖನದ ಅಂಶಗಳು ಅನೇಕಬಾರಿ ಬಂದುಹೋಗಿವೆ. ಇದರಿಂದಾಗಿಯೇ ನಾನು ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಒಂದೆ ಅಲ್ಲ ಎಂದು ಹೇಳಿ ನಿಮ್ಮ ಸ್ನೇಹಿತರಿಂದ ಅಂಡೆಪಿರ್ಕಿ ಎಂದು ಅನಿಸಿಕೊಂಡದ್ದು. ಆ ಲೇಖನ ಅಷ್ಟೊಂದು ನನ್ನನ್ನು ತಟ್ಟದೆ ಹೋಗಿದ್ದರೆ ಇಲ್ಲಿಂದ ದಿಲ್ಲಿ ವರೆಗೆ ಊರೂರು ಸುತ್ತಿದರೂ ಆ ಲೇಖನದ ಮಾಸಿದ ಪ್ರತಿಯನ್ನು 34 ವರ್ಷ ನಾನ್ಯಾಕೆ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದೆ ಸಾರ್ ?
ಆದರೆ ಆ ಲೇಖನದ ಲೇಖಕ ನೀವಿರಬಹುದೆಂಬ ಅನುಮಾನ ಇದ್ದಿದ್ದರೂ, ಅದು ಖಾತರಿಯಾಗಿದ್ದು ಆ ಮೇಲೆ ಯಾವುದೋ ಒಂದು ದಿನ ನೀವಾಗಿ ತಿಳಿಸಿದಾಗ. ಆ ಲೇಖನ ಬರೆದಿದ್ದ ದಿನಗಳಲ್ಲಿ ನೀವು ಕರಾವಳಿಯ ಬಂಡುಕೋರ ಮುಸ್ಲಿಮ್ ಲೇಖಕ. ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿಗಳನ್ನು ಎದುರುಹಾಕಿಕೊಂಡ ನೀವು ಕೊನೆಗೆ ಒಂದಷ್ಟು ದಿನ ಜೈಲು ಕೂಡಾ ಸೇರಬೇಕಾಯಿತು. ನಿಮ್ಮ ಕುಟುಂಬದವರು ಎದುರಿಸಿದ ಕಷ್ಟಗಳೂ ನನಗೆ ಗೊತ್ತು. ಅವೆಲ್ಲ ನಡೆದು ಕೆಲವು ವರ್ಷಗಳ ನಂತರ ನೀವು ಇದ್ದಕ್ಕಿದ್ದ ಹಾಗೆ ಸಾರ್ವಜನಿಕ ಬದುಕಿನಿಂದ ಮರೆಯಾಗಿಬಿಟ್ಟಿರಿ.
ಈ ರೀತಿ ತೆರೆಮರೆಗೆ ಸರಿದ ನಿಮ್ಮ ಮತ್ತು ಇತರ ಗೆಳೆಯರ ಬಗ್ಗೆ ಆಗಾಗ ಚರ್ಚೆ-ಸಂವಾದಗಳಲ್ಲಿ ಪ್ರಸ್ತಾಪವಾಗುತ್ತದೆ. ಅಂತಹ ಸಂದರ್ಭದಲ್ಲೆಲ್ಲ ನಾನು ನಿಮ್ಮ ಪರವಾಗಿ ವಕಾಲತು ಮಾಡುತ್ತಾ ಬಂದವನು. “ ಸಮಾಜ ಸುಧಾರಣೆಯ ಕೆಲಸ ರಿಲೇ ಓಟ ಇದ್ದ ಹಾಗೆ. ಬೊಳುವಾರು ಮತ್ತು ಗೆಳೆಯರು ಅವರಿಂದಾದಷ್ಟು ದೂರ ಓಡಿದ್ದಾರೆ. ಈಗ ನಿವೃತ್ತಿಯಾಗಿದ್ದಾರೆ. ರಿಲೇ ಓಟದ ಬೇಟನ್ ಅನ್ನು ಈಗ ಹೊಸತಲೆಮಾರಿನವರು ಕೈಗೆ ತೆಗೆದುಕೊಂಡು ಓಡಬೇಕು” ಎಂದು ನಾನು ಹೇಳುತ್ತಿರುತ್ತೇನೆ. ಮುಸ್ಲಿಮ್ ಧರ್ಮದಲ್ಲಿದ್ದ ಪ್ರಗತಿಪರ ಲೇಖಕ-ಲೇಖಕಿಯರು ಬಾಬರಿ ಮಸೀದಿ ಧ್ವಂಸದ ನಂತರ ಯಾಕೆ ಅನಿವಾರ್ಯವಾಗಿ ಮೌನವಾಗಬೇಕಾಯಿತು ಎನ್ನುವುದನ್ನು ಕೂಡಾ ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ಈಗಲೂ ಈ ಅಭಿಪ್ರಾಯಕ್ಕೆ ನಾನು ಬದ್ದ.
ಆದರೆ ಮಾತನಾಡಬೇಕಾಗಿದ್ದ ಕಾಲದಲ್ಲಿ ವಿರಾಗಿಯಂತೆ ಮೌನವಾಗಿದ್ದ ನೀವು ಈಗ ಮನುಷ್ಯ ಕುಲದ ಶತ್ರುಗಳ ಪರವಾಗಿ ಮಾತನಾಡಲು ಹೋರಾಟಗಾರರಂತೆ ತೋಳೇರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ನಿಮಗೆ ಯಾರನ್ನಾದರೂ ಸುಧಾರಣೆಮಾಡಬೇಕೆಂಬ ಪ್ರಾಮಾಣಿಕವಾದ ಇಚ್ಚೆ ಇದ್ದರೆ ಸೌಹಾರ್ದ ಬದುಕಿನ ಕನಸು ಕಟ್ಟಿಕೊಂಡ 22ರ ಹರಯದ ರಾಮ-ರಹೀಮರು ನಿಮ್ಮ ಸುತ್ತವೇ ಇದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿ. ಅವರಿಗೆ 32 ವರ್ಷದ ಹಿಂದಿನ ಬೊಳುವಾರು ಬೇಕಾಗಿದೆ. 

ಇದರಿಂದೆಲ್ಲ ಏನು ಉಪಯೋಗ ಎಂದು ಕೇಳುತ್ತೀರಾ? ನನ್ನನ್ನೊಮ್ಮೆ ನೋಡಿ. ನಿಮ್ಮ ಒಂದು ಲೇಖನದಿಂದ ಬದಲಾದವನು ನಾನು. ನಮ್ಮವರೆಂದು ಅನಿಸಿಕೊಳ್ಳಲು ನಿಮ್ಮ ಮನಸ್ಸು ಒಪ್ಪದೆ ಇದ್ದರೆ ನಿಮ್ಮ ಪಾಡಿಗೆ ನೀವು ವಿಶ್ರಾಂತ ಜೀವನ ಕಳೆಯುತ್ತಾ ಆರಾಮವಾಗಿರಿ. ನಮ್ಮ ಮನದೊಳಗಿನ ನಿಮ್ಮ ಹಳೆಯ ಬಿಂಬವಾದರೂ ಸುರಕ್ಷಿತವಾಗಿರುತ್ತದೆ. ಆದರೆ,ದಯವಿಟ್ಟು ನಮ್ಮೆದೆಗೆ ಗುರಿ ಇಟ್ಟಿರುವ ಬೇಟೆಗಾರರ ಬತ್ತಳಿಕೆಯ ಬಾಣವಾಗಬೇಡಿ,
ದ್ವೇಷಿಸಬೇಕಾದುದನ್ನು ದ್ವೇಷಿಸಬೇಕಾದಷ್ಟು ದ್ವೇಷಿಸದೆ ಇದ್ದರೆ, ಪ್ರೀತಿಸಬೇಕಾದುದನ್ನು ಪ್ರೀತಿಸಬೇಕಾದಷ್ಟು ಪ್ರೀತಿಸಲಾಗುವುದಿಲ್ಲ ಎಂದು ತಿಳಿದುಕೊಂಡವನು ನಾನು. ಕೋಮುವಾದಿಗಳನ್ನು ದ್ವೇಷಿಸದೆ ಇದ್ದರೆ ಜಾತ್ಯತೀತರನ್ನು ಪ್ರೀತಿಸುವುದು ಹೇಗೆ ಬೊಳುವಾರ್? ಓದು,ವಯಸ್ಸು,ಅನುಭವ ಎಲ್ಲದರಲ್ಲಿಯೂ ನಿಮ್ಮಿಂದ ಚಿಕ್ಕವನಾದ ನಾನು ತಿಳಿದುಕೊಂಡಿರುವುದು ತಪ್ಪಿರಲೂಬಹುದು. ತಪ್ಪೆನಿಸಿದರೆ ಹೊಟ್ಟೆಗೆ ಹಾಕಿಕೊಳ್ಳಿ, ಸರಿಯೆನಿಸಿದರೆ ತಲೆಗೆ ಹಾಕಿಕೊಳ್ಳಿ,

Friday, January 1, 2016

ಸ್ಪೂರ್ತಿಯಾಗುವ ಈ ಇಬ್ಬರು ಹೋರಾಟಗಾರರು

ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.
‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.

ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. "ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.
ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.
ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.

ಹೊಸ ವರ್ಷದ ಶುಭಾಶಯಗಳು

ಸಜ್ಜನರ ದನಿ ಮೊಳಗಲಿ...
ದುರ್ಜನರ ಸದ್ದಡಗಲಿ...
ಹೊಸ ವರ್ಷದ ಶುಭಾಶಯಗಳು..

Wednesday, December 30, 2015

'ನಾನವನಲ್ಲ, ನಾನವನಲ್ಲ'

'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್ನನ್ನು ದಾರಿಹೋಕನೊಬ್ಬ ಕೇಳಿದನಂತೆ:
'ಮತ್ತೆ ನೀನು ಯಾರು?
ನಾನು 'ರೋತಾ'
'ರೋತಾ'?

'ಹೌದು, ಹಿ..ಹಿ... ಎನ್ನುವುದನ್ನೇ ಇತ್ತೀಚೆಗೆ ಮರೆತುಬಿಟ್ಟಿದ್ದೇನೆ'' ಎಂದನಂತೆ ಪಡ್ಡೆಹುಡುಗ.

Sunday, December 27, 2015

ಸಾಮಾಜಿಕ ಜಾಲತಾಣ ಮತ್ತು `ಭಕ್ತ'ರು

ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಾಲಗಂಗಾಧರ್ ಕೃಪಾಪೋಷಿತ ಸಿಎಸ್ಎಲ್ ಸಿ ಮುಚ್ಚಲಾಯಿತು, ಕಾಮಿ ಸ್ವಾಮಿಯೊಬ್ಬನಿಂದ ಪೀಡಿತರಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ಕೊಟ್ಟರು, ಮೂಢನಂಬಿಕೆ ನಿಷೇಧ ಕಾಯಿದೆಗೆ ಒತ್ತಾಯಿಸಿ ಜಾಥಾ ನಡೆಯಿತು, ಡಾ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಿತು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಾಸು ಮಾಡಿದರು ಮತ್ತು ಸಹಮನಸ್ಕರು ಅವರನ್ನು ಬೆಂಬಲಿಸಿ ಸಭೆ ನಡೆಸಿದರು, ಟೌನ್ ಹಾಲ್ ಮುಂದೆ ಯಾರೋ ಬೀಫ್ ತಿಂದರು, ಮುಖ್ಯಮಂತ್ರಿಗಳು ‘ನಾನು ಬೀಪ್ ತಿಂದರೆ ಕೇಳಲು ನೀವು ಯಾರು’ ಎಂದು ಪ್ರಶ್ನಿಸಿದರು, ಮಂಗಳೂರಿನಲ್ಲಿ ಸಮಾನಮನಸ್ಕ ಯುವಕ-ಯುವತಿಯರು ಕೂಡಿ ಜನನುಡಿ ನಡೆಸಿದರು. ಮಂಗಳೂರಿನ ಹೋರಾಟಗಾರ್ತಿ ವಿದ್ಯಾ ದಿನಕರ್ ‘ದಿಲ್ ವಾಲೆ’ ಚಿತ್ರಪ್ರದರ್ಶನವನ್ನು
ಬಲತ್ಕಾರವಾಗಿ ತಡೆಹಿಡಿದಿದ್ದನ್ನು ವಿರೋಧಿಸಿ ಪೊಲೀಸರಿಗೆ ದೂರು ಕೊಟ್ಟರು, ಇದೇಕಾರಣಕ್ಕೆ ಅವರ ಮೇಲೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮಾತುಗಳ ಮೂಲಕ ವಾಗ್ದಾಳಿ ನಡೆದಾಗ ವಿದ್ಯಾ ಇನ್ನೊಂದು ದೂರು ಕೊಟ್ಟರು, ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಪ್ರಚಾರ ನಡೆಯಿತು. ಇವೆಲ್ಲದರ ಹಿಂದೆ ಇರುವ ವ್ಯಕ್ತಿ ಯಾರು ಗೊತ್ತೇ? ಅದೇ ಕಾಣೆ ಮೀನು ತಿನ್ನುವ ನಾನು. ಸಾಕ್ಷಿ ಬೇಕಿದ್ದರೆ ಫೇಸ್ ಬುಕ್ ನಲ್ಲಿ ಈ ‘ಭಕ್ತ’ ರ ಸ್ಟೇಟಸ್ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವ ‘ಹುಚ್ಚ ವೆಂಕಟ್’ ಗಳ ಪ್ರತಿಕ್ರಿಯೆ ನೋಡಿ.
ಮೇಲೆ ಉಲ್ಲೇಖಿಸಿರುವ ಎಲ್ಲ ಘಟನೆಗಳನ್ನು ಹೃತ್ಪೂರ್ವಕವಾಗಿ ನಾನು ಬೆಂಬಲಿಸುತ್ತೇನೆ, ಇವುಗಳ ಸೂತ್ರಧಾರ ನಾನೇ ಆಗಿದ್ದರೆ ನನ್ನ ಜನ್ಮ ಪಾವನವಾಗುತ್ತಿತ್ತು. ಸುಮ್ಮನೆ ಬಾಯಿಮುಚ್ಚಿಕೊಂಡು ಈ ಎಲ್ಲ ಸಾಧನೆಗಳ ಗರಿಯನ್ನು ನಾನೇ ಯಾಕೆ ಮುಡಿದುಕೊಳ್ಳಬಾರದು ಎಂದು ಕೂಡಾ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಒಳಗಿಂದ ಪ್ರಶ್ನಿಸುತ್ತಿರುವ ಆತ್ಮಸಾಕ್ಷಿಗೆ ಸತ್ಯ ಹೇಳಬೇಕಲ್ಲಾ?
ಸಿಎಸ್ ಎಲ್ ಸಿ ಮುಚ್ಚಲು ದೊಡ್ಡ ಹೋರಾಟವೇ ನಡೆದಿದೆ, ಹಲವಾರು ಹಿರಿಯರು, ಯುವಕರು ಇದಕ್ಕಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ, ನಾನಾ ಬಗೆಯ ಕಿರುಕುಳಗಳನ್ನು ಎದುರಿಸಿದ್ದಾರೆ. ಕೊನೆಗೂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಟೌನ್ ಹಾಲ್ ಮುಂದಿನ ಪ್ರತಿಭಟನೆಗಳಿರಲಿ, ಮಂಗಳೂರಿನಲ್ಲಿ ನಡೆದ ಜನನುಡಿಯಿರಲಿ ಇಲ್ಲವೇ ಇನ್ಯಾವುದೋ ಹೋರಾಟ ಇರಲಿ ಇದರ ಹಿಂದೆ ಕೂಡಾ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕೆಂಬ ಬದ್ದತೆಯ ಜತೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ-ನೆರವಾಗಬೇಕೆಂಬ ಕಾಳಜಿಯ ನೂರಾರು ಯುವಕ-ಯುವತಿಯರ ಶ್ರಮವಿದೆ. ಮುನೀರ್,ಅನಂತನಾಯಕ್, ನವೀನ್, ಭಾಸ್ಕರಪ್ರಸಾದ್, ದಿನೇಶ್ ಕುಮಾರ್, ದಯಾನಂದ್, ಹರ್ಷ, ಶ್ರೀಧರ್ ಪ್ರಭು, ಶ್ರೀನಿವಾಸ್,ಪ್ರಭಾ, ಅಕ್ಷತಾ, ಸುಭಾಷ್, ಕಿರಣ್ , ಚೇತನಾ, ಬಸವರಾಜ್, ಇರ್ಷಾದ್, ಪ್ರಶಾಂತ್, ಲಿಂಗರಾಜು, ಮೊದಲಾದವರು ಬದುಕಿನಲ್ಲಿ ಅನ್ಯಾಯ-ಅಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳದೆ ಇದೇಕಾರಣಕ್ಕೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡವರನ್ನು ಎದುರುಹಾಕಿಕೊಂಡವರು. ನವೀನ್ ಹೇಳಿರುವ ಹಾಗೆ ಎಸ್ ಇ ಝಡ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ವಿದ್ಯಾ ದಿನಕರ್ ಇಲ್ಲದೆ ಇದ್ದರೆ ಮಂಗಳೂರು ಭೋಪಾಲ್ ಆಗುತ್ತಿತ್ತು. ಮುನೀರ್ ಗೆ ಇರುವ ಪ್ರಾಣಬೆದರಿಕೆ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ.
ಈ ಯುವ ಹೋರಾಟಗಾರರ ಮುಂದೆ ನಾನು ಏನೂ ಅಲ್ಲ. ನಾನಿದ್ದರೂ, ಇಲ್ಲದೆ ಇದ್ದಿದ್ದರೂ ಇವರ ಹೋರಾಟ ಈಗಿನಂತೆಯೇ ಮುಂದುವರಿಯುತ್ತಿತ್ತು. ನನ್ನ ಬಲ-ಬೆಂಬಲದ ಅಗತ್ಯ ಇವರಿಗಿಲ್ಲ. ಈ ಯುವಕ-ಯುವತಿಯರು ನಡೆಸುವ ಹಲವಾರು ಸಾಹಸಗಳ ಬಗ್ಗೆ ನನಗೆ ಗೊತ್ತೇ ಇರುವುದಿಲ್ಲ. ಈ ನನ್ನ ಮಾತುಗಳು ಪಲಾಯನವಾದವೆಂದು ತಿಳಿದುಕೊಳ್ಳಬಾರದೆಂಬ ಕಾರಣಕ್ಕಾಗಿ ಮಾತ್ರ ಈ ಕೊನೆ ಮಾತು: ಈ ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ಅವರ ಮೇಲೆ ಭರವಸೆಯೂ ಇದೆ. ಕಷ್ಟದ ಸಮಯದಲ್ಲಿ ಇವರ ಹಿಂದೆ ಅಲ್ಲ, ಮುಂದೆ ಇರುತ್ತೇನೆ. ಇದಕ್ಕಾಗಿ ಯಾವ ಬೆಲೆ ತೆರಲೂ ಕೂಡಾ ಸಿದ್ದನಿದ್ದೇನೆ. ಬದುಕಿನಲ್ಲಿ ಕಳೆದುಕೊಳ್ಳಲು ಹೆದರುವಷ್ಟು ಯಾವುದೂ ದೊಡ್ಡದಿರುವುದಿಲ್ಲ.