Wednesday, December 16, 2015

ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

ನಾರಾಯಣ ಗುರುಗಳು ಜೀವಂತವಾಗಿದ್ದಿದ್ದರೆ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಟ್ರಸ್ಟ್ (ಎಸ್ ಎನ್ ಡಿಪಿ) ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಖಂಡಿತ ಕರೆಯುತ್ತಿರಲಿಲ್ಲ. ಮೋದಿಯವರ ಪರಿವಾರ ಪ್ರತಿನಿಧಿಸುವ ಸಿದ್ಧಾಂತದ ವಿರುದ್ಧವೇ ನಾರಾಯಣ ಗುರುಗಳು ಕೇರಳದಲ್ಲಿ ಚಳುವಳಿಯನ್ನು ಕಟ್ಟಿದವರು. 
‘ನಿಮ್ಮ ದೇವಸ್ಥಾನದೊಳಗೆ ನಮ್ಮನ್ನು ಪ್ರವೇಶಿಸಲು ಬಿಡದಿದ್ದರೆ ನಮ್ಮದೇ ದೇವಸ್ಥಾನ ಕಟ್ಟಿಕೊಳ್ಳುತ್ತೇವೆ, ನಮಗೆ ಪೂಜೆಯ ಹಕ್ಕು ಕೊಡದಿದ್ದರೆ ನಮ್ಮವರನ್ನೇ ಅರ್ಚಕರಾಗಿ ತಯಾರು ಮಾಡುತ್ತೇವೆ’ ಎಂದು ನಾರಾಯಣ ಗುರುಗಳು ಆ ಕಾಲದ ಪುರೋಹಿತಷಾಹಿಗೆ ಸವಾಲು ಹಾಕಿದ್ದರು. ಹೇಳಿದ್ದನ್ನು ಮಾಡಿಯೂತೋರಿಸಿದ್ದರು. 


ನಾರಾಯಣ ಗುರುಗಳ ಈ ಸಿದ್ಧಾಂತವನ್ನು ಮೋದಿ ಪರಿವಾರ ಅಂದು ಕೂಡಾ ಒಪ್ಪಿರಲಿಲ್ಲ, ಇಂದು ಕೂಡಾ ಒಪ್ಪುವುದಿಲ್ಲ. ಹೀಗಿದ್ದಾಗ ಎಸ್ ಎನ್ ಡಿಪಿ ಸಮಾರಂಭದಲ್ಲಿ ಭಾಗವಹಿಸುವ ನೈತಿಕ ಹಕ್ಕು ಮೋದಿಯವರಿಗೆಲ್ಲಿದೆ? ಅವರನ್ನು ಆಹ್ಹಾನಿಸಿ ನಾರಾಯಣ ಗುರುಗಳ ಚಿಂತನೆಗೆ ಅಪಚಾರವೆಸಗುವ ಅಧಿಕಾರ ಈಗಿನ ಎಸ್ ಎನ್ ಡಿಪಿ ನಾಯಕರಿಗೆಲ್ಲಿದೆ?
ನರೇಂದ್ರ ಮೋದಿಯವರು ಭಾರತದ ಚುನಾಯಿತ ಪ್ರಧಾನಿ, ದೇಶದ ಸರ್ವಶಕ್ತ ನಾಯಕ. ಹಿಂದೂಗಳ ಹೃದಯ ಸಾಮ್ರಾಟ, ಅವರ ಭಕ್ತರ ಪಾಲಿಗೆ ಡೆಮಿಗಾಡ್. ಅವರಿಗೆ ಅಸಾಧ್ಯವಾದುದು ಏನೂ ಇಲ್ಲ. ಹೀಗಿದ್ದಾಗ ದೇಶದ ಎಂಡೊಮೆಂಟ್ ದೇವಸ್ಥಾನಗಳಲ್ಲಿಯಾದರೂ ಅರ್ಚಕರನ್ನು ಜಾತಿ ಆಧಾರದಲ್ಲಿ ನೇಮಕ ಮಾಡದೆ ನಾರಾಯಣ ಗುರುಗಳು ಬಯಸಿದಂತೆ ಅರ್ಹತೆ ಆಧಾರದಲ್ಲಿ (ಆಗಮಶಾಸ್ತ್ರ ಪರಿಣತರು) ನೇಮಿಸುವ ಸಣ್ಣ ಕೆಲಸವನ್ನು ಅವರು ಯಾಕೆ ಮಾಡಬಾರದು?
ಅಂತಹದ್ದೊಂದು ಸಣ್ಣ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದರೆ ಕೇರಳದ ಮೊದಲ ಈಳವ ಮುಖ್ಯಮಂತ್ರಿ ಆರ್.ಶಂಕರ್ ಅವರ ಜತೆಯಲ್ಲಿ ಮೋದಿಯವರ ಪ್ರತಿಮೆಯನ್ನೂ ಸ್ಥಾಪಿಸಬಹುದು. ಭಕ್ತರಾದರೂ ತಮ್ಮ ದೇವರಿಗೆ ಬುದ್ದಿ ಹೇಳಿ, ಇಲ್ಲದಿದ್ದರೆ ನಾರಾಯಣ ಗುರುಗಳನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.