Showing posts with label RSS. Show all posts
Showing posts with label RSS. Show all posts

Sunday, September 24, 2017

ಮಂಗಳೂರು: ಗೌರಿ ಲಂಕೇಶ್‍ಗೆ ಬಿದ್ದ ಗುಂಡು ನನಗೂ ಬೀಳಬಹುದು: ಅಮೀನ್ ಮಟ್ಟು



ಮಂಗಳೂರಿನಲ್ಲಿ ನಾನು ಇಂದು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವ್ಯಾಖ್ಯಾನಗಳು ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗುತ್ತಿವೆ.
ಆ ಭಾಷಣದ ಬಹುಚರ್ಚಿತ ಭಾಗದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ, ಕೇಳಿ. 'ಮಟ್ಟುವನ್ನು ಮಟ್ಟ ಹಾಕಿ' ಎನ್ನುವ ಕೂಗು ಕೇಳಿಬಂದದ್ದು ಇದೇ ಮೊದಲೇನಲ್ಲ. ಸಂಸದ ಪ್ರಹ್ಲಾದ ಜೋಷಿ ಸೇರಿದಂತೆ ಸಂಘ ಪರಿವಾರದ ಹಲವಾರು ನಾಯಕರು ನೀಡಿದ್ದ ಇಂತಹ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. (ಗೂಗ್ಲ್ ಸರ್ಚ್ ಮಾಡಿದರೆ ಸಿಗುತ್ತೆ)
'ಗುಂಡು ನನಗೂ ಬೀಳಬಹುದು' ಎಂಬ ಹೇಳಿಕೆ ಈಗಿನ ಕೆಟ್ಟ ಕಾಲವನ್ನು ವಿವರಿಸುತ್ತಾ ಹೇಳಿದ್ದು. ನಾನು ಸಭೆಯಲ್ಲಿದ್ದವರನ್ನು ಉದ್ದೇಶಿಸಿ ಹೇಳಿದ್ದು 'ಗುಂಡು ನನಗೂ ಬೀಳಬಹುದು ನಿಮಗೂ ಬೀಳಬಹುದು' ಎಂದು. (ವಿಡಿಯೋ ನೋಡಿ)
ಇನ್ನು ಇಂಟಲಿಜೆನ್ಸ್ ವಿಚಾರ. ನಾನೆಲ್ಲಿಯೂ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಎಂದು ಹೇಳಿಲ್ಲ. ಸಂಘ ಪರಿವಾರದೊಳಗೆ ನನ್ನಂತಹವರಿಗೆ ಹಿತೈಷಿಗಳು ಇದ್ದೇ ಇರುತ್ತಾರೆ.
ಅಂತಹವರು ಇಂತಹ ಬಹಳಷ್ಟು ಸಂಗತಿಗಳನ್ನು ಆಗಾಗ ನನ್ನ ಗಮನಕ್ಕೆ ತರುತ್ತಿರುತ್ತಾರೆ. ಇದು ನನ್ನಂತಹವರು ಇಟ್ಟುಕೊಂಡಿರುವ ಇಂಟಲಿಜೆನ್ಸ್. ಕಾರ್ಕಳದ ಆರ್ ಎಸ್ ಎಸ್ ಸಭೆಯ ಬಗ್ಗೆ ಹೇಳಿದ್ದು ಕೂಡಾ ಇದೇ ಇಂಟಲಿಜೆನ್ಸ್. ( ಇದೇ ರೀತಿ ನಮ್ಮ ನಡುವೆ ನಡೆಯುತ್ತಿರುವುದನ್ನು ಅಲ್ಲಿ ಹೋಗಿ ಹೇಳುವವರೂ ಇದ್ದಾರೆ)
ಮಟ್ಟಹಾಕುವುದೆಂದರೆ ಗುಂಡು ಹಾರಿಸುವುದೆಂದಲ್ಲ, ಸುಳ್ಳು ಸುದ್ದಿಗಳನ್ನು ಬಿತ್ತಿ ಚಾರಿತ್ರ್ಯಹನನ, ಮಾನಸಿಕ ಕಿರುಕುಳ, ಅಪಪ್ರಚಾರ ಮೊದಲಾದವುಗಳ ಮೂಲಕ ನೈತಿಕಸ್ತೈರ್ಯ ಕುಸಿಯುವಂತೆ ಮಾಡುವುದು ಕೂಡಾ ಅವರ ಪ್ರಕಾರ ಮಟ್ಟ ಹಾಕುವ ಕ್ರಮ. ಇದನ್ನು ಕೂಡಾ ನನ್ನ ಹಿತೈಷಿಗಳಾದ ಆರ್ ಎಸ್ ಎಸ್ ಗೆಳೆಯರೊಬ್ಬರು ಹೇಳಿದ್ದು.
ಪ್ರಾಣ ಬೆದರಿಕೆಗಳೇನು ಹೊಸತೇನಲ್ಲ. ಫೇಸ್ ಬುಕ್ ನ ನನ್ನ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ಸಾಕು. ಸ್ವಾಮಿ ವಿವೇಕಾನಂದರ ಬಗ್ಗೆ ಹಿಂದೆ ನನ್ನ ಅಂಕಣದಲ್ಲಿ ಬರೆದಿದ್ದಾಗ ಅದನ್ನು ಅನಗತ್ಯವಾಗಿ ವಿವಾದವನ್ನಾಗಿಸಿದ 'ಸುಳ್ಳು ಬೆಲೆ' ಯೊಬ್ಬ ತನ್ನ ಕಿಡಿಗೇಡಿ ಗೆಳೆಯರ ಜತೆ ಕಳುಹಿಸಿದ್ದ 'count your days' ಸಂದೇಶಗಳ ದಾಖಲೆ ಈಗಲೂ ನನ್ನಲ್ಲಿವೆ.

Friday, August 19, 2016

ಪ್ರಿಯ ಜನಾರ್ದನ ಪೂಜಾರಿಯವರೇ,

ಪ್ರಿಯ ಜನಾರ್ದನ ಪೂಜಾರಿಯವರೇ,
ಇಪ್ಪತ್ತೈದು ವರ್ಷಗಳ ಹಿಂದೆ ನಿಮಗೊಂದು ಪತ್ರ ಬರೆದಿರುವುದು ನಿಮಗೆ ನೆನಪಿದೆಯೋ ಗೊತ್ತಿಲ್ಲ. ನೆನಪಿಲ್ಲದಿದ್ದರೆ ಅದರ ಪ್ರತಿಯನ್ನು ಕಳುಹಿಸಿಕೊಡುತ್ತೇನೆ. ಅದು ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದಲ್ಲಿ ನೀವು ತೊಡಗಿಕೊಂಡಿದ್ದ ಕಾಲ. ಜೀರ್ಣೋದ್ದಾರ ಮಾಡಿದ ದೇವಸ್ಥಾನವನ್ನು ಉದ್ಘಾಟಿಸಲು ಶೃಂಗೇರಿ ಮಠದ ಸ್ವಾಮಿಗಳನ್ನು ಆಹ್ಹಾನಿಸಿರುವುದನ್ನು ನಾನು ವಿರೋಧಿಸಿದ್ದೆ. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಈಗಲೂ ಪಾಲಿಸುತ್ತಿರುವ ಸ್ವಾಮೀಜಿಗಳಿಂದ ಹೇಗೆ ಉದ್ಘಾಟನೆಮಾಡಿಸುತ್ತೀರಿ ಎನ್ನುವುದು ನನ್ನ ಸರಳ ಪ್ರಶ್ನೆಯಾಗಿತ್ತು.ನನ್ನ ಯೋಚನೆಯೇ ಬೇರೆಯಾಗಿತ್ತು. ಕುದ್ರೋಳಿ ದೇವಸ್ಥಾನವನ್ನು ನಾರಾಯಣಗುರುಗಳು ಯಾವ ಉದ್ದೇಶದಿಂದ ಸ್ಥಾಪಿಸಿದ್ದರೋ ಆ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆಂಬುದು ನನ್ನ ಕಿರಿತಲೆಯ ಉದ್ದೇಶವಾಗಿತ್ತು.. ಕುದ್ರೋಳಿ ದೇವಸ್ಥಾನವನ್ನು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಘಟನೆಯ ಕೇಂದ್ರವನ್ನಾಗಿ ಬೆಳೆಸಬೇಕೆಂದು ನಾನು ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ಹೇಳಿದ್ದೆ. ಯಾಕೆಂದರೆ ಆಗಲೇ ಕರಾವಳಿಯಲ್ಲಿ ಕೋಮುವಾದದ ವಿಷಸರ್ಪ ಹೆಡೆಬಿಚ್ಚತೊಡಗಿತ್ತು. ಮಂದಿರ-ಮಸೀದಿ-ಚರ್ಚುಗಳನ್ನು ಕಟ್ಟುವ ಮೂಲಕ ಇದನ್ನು ಎದುರಿಸಲು ಆಗುವುದಿಲ್ಲ. ಈ ಸಮುದಾಯಗಳು ಧರ್ಮದ ನಶೆಯೇರಿಸಿಕೊಂಡು ದಾರಿ ತಪ್ಪುವ ಮೊದಲೇ ಅವರಲ್ಲಿ ನಾರಾಯಣ ಗುರುಗಳ ಚಿಂತನೆಯ ಮೂಲಕ ಜಾಗೃತಿ ಹುಟ್ಟಿಸಿ ಸಾಮಾಜಿಕವಾಗಿ ಸಂಘಟಿಸಬೇಕೆಂಬುದು ನನ್ನ ಆಶಯವಾಗಿತ್ತು. ಇದು ನಿಮ್ಮ ರಾಜಕೀಯಕ್ಕೂ ಸಹಾಯವಾಗುತ್ತದೆ ಎಂದು ನಾನು ನಿಮಗೆ ಹೇಳಿದ್ದೆ. ಯಥಾಪ್ರಕಾರ ಹಿತ್ತಾಳೆ ಕಿವಿಯವರೆಂಬ ಆರೋಪ ಹೊತ್ತಿರುವ ನೀವು ಇಂತಹ ಒಳ್ಳೆಯ ಸಲಹೆಗಳಿಗೆ ಕಿವಿಕೊಡಲಿಲ್ಲ. ಇದರ ಪರಿಣಾಮ ನಿಮ್ಮ ಕಣ್ಣಮುಂದಿದೆ.
ಕೋಮುವಾದದ ಹೆಸರಲ್ಲಿ ಕರಾವಳಿಯಲ್ಲಿ ನಿತ್ಯ ರಕ್ತದೋಕುಳಿ ನಡೆಯುತ್ತಿದೆ. ಸಾಯುತ್ತಿರುವವರೆಲ್ಲರೂ ನಿಮ್ಮನ್ನೇ ನಾಯಕರೆಂದು ಹೇಳಿಕೊಳ್ಳುತ್ತಿರುವ ಬಡಬಿಲ್ಲವ ತಂದೆ-ತಾಯಿಗಳ ಮಕ್ಕಳು. ನೀವು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ. ನೀವು ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರು ಕೂಡಾ ಹೌದು. (ಪ್ರಶ್ನಾತೀತರು ಯಾಕೆಂದರೆ ವಯಸ್ಸು ಎಂಬತ್ತಾಗುತ್ತಿದ್ದರೂ ಮತ್ತೊಬ್ಬ ನಾಯಕನನ್ನು ಬಿಲ್ಲವ ಸಮುದಾಯದಲ್ಲಿ ಬೆಳೆಯಲು ನೀವು ಬಿಟ್ಟಿಲ್ಲ)
ಯಾವುದೇ ಸಮಾಜದ ನಾಯಕನೆಂದು ಕರೆಸಿಕೊಂಡ ಮೇಲೆ ಆ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಕೂಡಾ ಹೊರಬೇಕಾಗುತ್ತದೆ. ಚುನಾವಣೆಯ ಕಾಲದಲ್ಲಿ ಜಾತಿಯ ಹೆಸರು ಹೇಳಿ ಕಣ್ಣೀರುಹಾಕಿ ಓಟು ಕೇಳುವವನಷ್ಟೇ ನಾಯಕನಲ್ಲ. ಜವಾಬ್ದಾರಿಯ ನಿರ್ವಹಣೆಯಲ್ಲಿ ನೀವು ಸಂಪೂರ್ಣವಾಗಿ ಸೋತಿರುವುದು ಮಾತ್ರವಲ್ಲ ನೀವು ದಾರಿತಪ್ಪಿ, ಸಮಾಜವನ್ನೂ ದಾರಿ ತಪ್ಪಿಸುತ್ತಿದ್ದೀರಿ.
ಉಡುಪಿಯ ಕೆಂಜೂರಿನಲ್ಲಿ ನಡೆದ ಪ್ರವೀಣ್ ಪೂಜಾರಿ ಎಂಬ ಅಮಾಯಕ ಯುವಕನೊಬ್ಬನ ಹತ್ಯೆಯ ಹಿನ್ನೆಲೆಯಲ್ಲಿ ಇದನ್ನೆಲ್ಲ ಹೇಳುತ್ತಿದ್ದೇನೆ., ಕೊಲೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಹತ್ಯೆಯಾದವರು ಮತ್ತು ಹತ್ಯೆಮಾಡಿದವರ್ಯಾರೆಂದು ಜಗಜ್ಜಾಹೀರಾಗಿದೆ. ಈಗಾಗಲೇ ಸಂಘ ಪರಿವಾರದ ವಿರುದ್ಧ ರಾಜ್ಯದ ಜನತೆಯ ಆಕ್ರೋಶ ಮುಗಿಲುಮುಟ್ಟಿದೆ. ಹೀಗಿದ್ದರೂ ರಾಜ್ಯಸರ್ಕಾರ ನೀಡುವ ಅಕ್ಕಿಯಲ್ಲಿ ಒಂದು ಕಲ್ಲು ಕಂಡರೂ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರ್ಭಟಿಸುವ ನೀವು ಕೊಲೆ ನಡೆದು 48 ಗಂಟೆಗಳಾದರೂ ಬಾಯಿ ಬಿಡದಿರುವುದು ಅಚ್ಚರಿ ಉಂಟುಮಾಡಿದೆ..
ಪ್ರವೀಣ್ ಪೂಜಾರಿ ಸಾವಿಗೆ ಸಂಘ ಪರಿವಾರದ ದುರುಳರು ಮಾತ್ರವಲ್ಲ ಸಜ್ಜನ, ಪ್ರಾಮಾಣಿಕ ಇತ್ಯಾದಿ ಬಿರುದಾಂಕಿತ, ಬಿಲ್ಲವ ಸಮಾಜದ ಏಕಮೇವಾದ್ವೀತಿಯ ನಾಯಕರಾದ ನೀವೂ ಕಾರಣ ಎಂದು ವಿಷಾದದಿಂದ ಹೇಳಬೇಕಾಗುತ್ತದೆ.
ಇಂದು ಕರಾವಳಿಯ ಎರಡುಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದರೆ ಇದಕ್ಕೆ ಸಂಘ ಪರಿವಾರದ ನಾಯಕರುಮಾತ್ರವಲ್ಲ ನೀವೂ ಕಾರಣ.

ಈ ಜಿಲ್ಲೆಗಳಲ್ಲಿ ಕೋಮುವಾದದ ವಿಷಕಾಲ ಪ್ರಾರಂಭವಾಗಿದ್ದು ಎಂಬತ್ತರ ದಶಕದ ಅಂತ್ಯ ಮತ್ತು ತೊಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ. ಆ ದಿನಗಳಿಂದಲೂ ದಕ್ಷಿಣ ಕನ್ನಡದ ಮಟ್ಟಿಗೆ ನೀವೇ ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮುದಾಯದ ನಾಯಕರಾಗಿದ್ದವರು. 1977ರಿಂದ 1989ರ ವರೆಗಿನ ನಾಲ್ಕು ಲೋಕಸಭಾ ಚುನಾವಣೆಗಳನ್ನು ಸತತವಾಗಿ ಗೆದ್ದು ಬೀಗುತ್ತಿದ್ದವರು. ಆದರೆ ಬದಲಾಗುತ್ತಿರುವ ರಾಜಕೀಯವನ್ನು ಗ್ರಹಿಸಲು ನಿಮಗೆ ಸಾಧ್ಯವಾಗಲಿಲ್ಲ. ನಾರಾಯಣ ಗುರುಗಳ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ಕೂಡಾ ನಿಮಗೆ ಸಾಧ್ಯವಾಗಲಿಲ್ಲ.
ಚುನಾವಣಾ ಕಾಲದಲ್ಲಿ ಮಸೀದಿಗೆ ಹೋಗಿ ಕೈಮುಗಿಯುವುದು, ಎಲ್ಲ ಹಿಂದೂ ದೇವತೆಗಳ ಮೂರ್ತಿ ಸ್ಥಾಪಿಸುವುದು, ಸಂಘ ಪರಿವಾರವನ್ನು ಮೀರಿಸಿದಂತೆ ದಸರಾ ಜಾತ್ರೆ ನಡೆಸುವುದು, ಕಲ್ಲಡ್ಕ ಪ್ರಭಾಕರ ಭಟ್ಟರನ್ನು, ವೀರೇಂದ್ರ ಹೆಗಡೆ ಅವರನ್ನು ಕರೆಸಿ ಶಹಬ್ಬಾಸ್ ಗಿರಿ ಪಡೆಯುವುದು ಈ ಮೂಲಕ ಸಂಘ ಪರಿವಾರವನ್ನು ಎದುರಿಸಿ ಚುನಾವಣೆಯನ್ನು ಗೆಲ್ಲಬಹುದು ಎಂಬುದು ನಿಮ್ಮ ಲೆಕ್ಕಾಚಾರವಾಗಿತ್ತು.
ಇಂತಹ ಮೂರ್ಖತನದ ಮೂಲಕ ನೀವು ಬೆಳೆಸಿದ್ದು ಜಾತ್ಯತೀತತೆಯನ್ನಲ್ಲ, ಕೋಮುವಾದವನ್ನು, ನೆರವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ, ಬಿಜೆಪಿಗೆ. ನೆನೆಪಿಡಿ, 1991ರಲ್ಲಿ ಕುದ್ರೋಳಿಯ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿದ ದಿನದಿಂದ ಇಲ್ಲಿಯ ವರೆಗೆ ಒಂದೇ ಒಂದು ಚುನಾವಣೆಯನ್ನು ನೀವು ಗೆಲ್ಲಲಿಲ್ಲ, ಐದು ಚುನಾವಣೆಗಳಲ್ಲಿ ಸೋತುಹೋದಿರಿ. (ವರ-ಶಾಪಗಳಲ್ಲಿ ನನಗೆ ನಂಬಿಕೆ ಇಲ್ಲ. ನಂಬುತ್ತಿದ್ದರೆ ನಿಮ್ಮ ರಾಜಕೀಯ ಅವನತಿಗೆ ನಾರಾಯಣ ಗುರುಗಳ ಚಿಂತನೆಗೆ ನೀವು ಮಾಡಿದ ಅಪಚಾರದ ಶಾಪವೂ ಕಾರಣವೆಂದು ಹೇಳುತ್ತಿದ್ದೆ.) .
ಆದರೆ ಯಾಕೆ ಸೋತುಹೋದೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲ. ನೀವು ದೇವಸ್ಥಾನ ಕಟ್ಟಿ, ಅಲ್ಲಿ ಮೂಲೆಮೂಲೆಗೂ ದೇವರ ಪ್ರತಿಮೆಗಳನ್ನು ಸ್ಥಾಪಿಸಿ, ಇಡೀ ಮಂಗಳೂರು ನಡುಗಿಹೋಗುವಂತೆ ದಸರಾ ಜಾತ್ರೆ ನಡೆಸಿ ನಿಮ್ಮದೇ ಸಮುದಾಯದ ಯುವಕರಲ್ಲಿ ಧಾರ್ಮಿಕ ಉನ್ಮಾದವನ್ನು ಸೃಷ್ಟಿಮಾಡಿಬಿಟ್ಟಿರಿ. ಆದರೆ ಆ ಧಾರ್ಮಿಕ ಉನ್ಮಾದದ ಅಭಿವ್ಯಕ್ತಿಗೆ ನೀವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇಲ್ಲ. ಅದು ಜಾತ್ಯತೀತತೆಯನ್ನು ಸಾರುವ ಪಕ್ಷ. ಮತ್ತೆ ಅವರೆಲ್ಲಿಗೆ ಹೋಗಬೇಕು? ಎಲ್ಲಿಗೆ ಹೋಗಬೇಕೋ ಅವರಲ್ಲಿಯೇ ಹೋಗಿದ್ದಾರೆ. ಹಣೆಗೆ ಕುಂಕುಮ ಬಳಿದುಕೊಂಡು ಕೇಸರಿ ಪಟ್ಟಿ ಬಿಗಿದುಕೊಂಡು ಬೀದಿಗಳಲ್ಲಿ ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ. ಅವರ ಕೈಗೆ ಧರ್ಮದ ಕತ್ತಿ ಕೊಟ್ಟು ಹೊಡೆದಾಡುವಂತೆ ಮಾಡಿದವರು ತಮ್ಮ ಮಕ್ಕಳನ್ನು ಡಾಕ್ಟರ್ ಎಂಜನಿಯರ್ ಮಾಡಿ ರಾಜಕೀಯದ ಅಧಿಕಾರದ ನೆರಳಲ್ಲಿ ತಮ್ಮ ವ್ಯಾಪಾರಿ ಸಾಮ್ರಾಜ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಆರಾಮವಾಗಿದ್ದಾರೆ.ಅವರಿಗೆ ಬುದ್ದಿ ಹೇಳಬೇಕಾದ ನೀವು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಾ ಕೂತಿದ್ದೀರಿ.
ಜನಾರ್ಧನ ಪೂಜಾರಿಯವರೇ, ಈಗ ಹೇಳಿ ಮೊನ್ನೆ ಕೆಂಜೂರಿನಲ್ಲಿ ನಡೆದ ಪ್ರವೀಣ ಪೂಜಾರಿಯ ಹತ್ಯೆಗೆ, ಅದಕ್ಕಿಂತ ಮೊದಲು ಮೂಡಬಿದರೆ ಮತ್ತು ಬಂಟ್ವಾಳದಲ್ಲಿ ನಡೆದ ಹತ್ಯೆಗೆ ಯಾರು ಕಾರಣ ? ಹೌದು, ಕೊಲೆಗೈದವರು ಜೈಲಲ್ಲಿದ್ದಾರೆ. ಆದರೆ ಅಂತಹ ಪರಿಸ್ಥಿತಿಗೆ ಅಮಾಯಕ ಯುವಕರು ಬಲಿಯಾಗುವಂತೆ ಮಾಡಿದವರು ಯಾರು? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆ ಎಂದಾದರೆ ಅದು ನಿಮ್ಮನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬಹುದು. ಈ ಆರೋಪದಿಂದ ನೀವು ಮುಕ್ತಿ ಬಯಸುವುದೇ ಆಗಿದ್ದರೆ ದಯವಿಟ್ಟು ನಾರಾಯಣ ಗುರುಗಳ ಚಿಂತನೆಯನ್ನು ಓದಿ ಅದನ್ನು ಕಾರ್ಯಗತಗೊಳಿಸಲು ನಿಮ್ಮ ನಿವೃತ್ತ ಜೀವನವನ್ನು ಬಳಸಿಕೊಳ್ಳಿ. ಅದುನಿಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

Wednesday, March 2, 2016

ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು..

ಕಳೆದ ಶನಿವಾರ ಉಡುಪಿಯಲ್ಲಿ ಕೆಮ್ಮಲಜೆ ಜಾನಪದ ಪ್ರಕಾಶನ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಿದ ನನ್ನ ಮಾತುಗಳ ಆಯ್ದ ಭಾಗಗಳ ಪ್ರಕಟಿತ ವರದಿಯನ್ನು ಆಧರಿಸಿ ತಥಾಕಥಿತ ‘ದೇಶಪ್ರೇಮಿ’ಗಳು ನನ್ನನ್ನು ದೇಶದ್ರೋಹದ ಆರೋಪದಲ್ಲಿ ಗಲ್ಲಿಗೇರಿಸಲು ಹೊರಟಿದ್ದಾರೆ. ಇತ್ತೀಚೆಗೆ ಇಂತಹ ಕೀಟಳೆಗಳು ಸಾಮಾನ್ಯವಾಗತೊಡಗಿರುವ ಕಾರಣ ಪ್ರತಿಕ್ರಿಯಿಸಬಾರದೆಂದು ಸುಮ್ಮನಿದ್ದೆ. ಆದರೆ ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು ಅಲ್ಲಿ ಮಾತನಾಡಿದ್ದನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದ್ದೇನೆ:
1. “ ...ನಾವೆಲ್ಲ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇವೆ. ಆದರೆ ಅದನ್ನು ಉಳಿಸುವವರು ಯಾರು? ಜಾನಪದ ಸಂಸ್ಕೃತಿಯ ಸಂಶೋಧಕರೇ? ಇಲ್ಲವೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಕಲಾವಿದರೇ? ಜಾನಪದ ಸಂಶೋಧಕರಿಗೆ ಸರ್ಕಾರವೇ ಸುಭದ್ರವಾದ ಉದ್ಯೋಗ ನೀಡಿ ಸಂಶೋದನೆಗೆ ಅನುವು ಮಾಡಿಕೊಡುತ್ತದೆ. ಆದರೆ ಜಾನಪದ ಕಲಾವಿದರ ಸ್ಥಿತಿ ಏನು? ಭೂತಾರಾಧನೆಯೂ ಜಾನಪದ ಸಂಸ್ಕೃತಿಯ ಭಾಗ. ಈ ಭೂತ ಕಟ್ಟುವವರು ದಲಿತ ಸಮುದಾಯಕ್ಕೆ ಸೇರಿದವರು. ಭೂತಾರಾಧನೆಯ ಸಂಸ್ಕೃತಿಯನ್ನು ಉಳಿಸಬೇಕೆಂದು ಈ ದಲಿತ ಕಲಾವಿದರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ, ಉದ್ಯೋಗಕ್ಕೆ ಸೇರಿಸದೆ ಭೂತ ಕಟ್ಟುವ ಕಲಾವಿದರನ್ನಾಗಿಯೇ ಉಳಿಸಬೇಕೆಂಬುದು ತೀರಾ ಅಮಾನವೀಯವಾದುದು. ದಲಿತ ತಂದೆ-ತಾಯಿ ಕೂಡಾ ತಮ್ಮ ಮಕ್ಕಳು ಡಾಕ್ಟರ್,ಎಂಜನಿಯರ್ ಆಗಬೇಕೆಂದು ಬಯಸಿದರೆ ತಪ್ಪೇ?
2. ಇದೇ ರೀತಿ ಇತ್ತೀಚೆಗೆ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ಧಾರ್ಮಿಕ ನಾಯಕರು ಕರೆಕೊಡುತ್ತಾ ಇದ್ದಾರೆ. ಆದರೆ ಈ ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಪೊಲೀಸ್ ಕೇಸ್ ಹಾಕಿಸಿಕೊಂಡು ಜೈಲು ಸೇರುತ್ತಿರುವವರು ಶೂದ್ರರು ಮತ್ತು ಬಡವರು. ಧರ್ಮ ರಕ್ಷಣೆಗಾಗಿ ಕರೆನೀಡುತ್ತಿರುವ ನಾಯಕರ ಮಕ್ಕಳು ಡಾಕ್ಟರ್, ಎಂಜನಿಯರ್ ಗಳಾಗುತ್ತಾ ದೇಶ-ವಿದೇಶದಲ್ಲಿ ಆರಾಮವಾಗಿದ್ದಾರೆ. ಇದು ಯಾವ ಧರ್ಮ ರಕ್ಷಣೆ?
3. ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಕೂಡಾ ಇದ್ದಕ್ಕಿದ್ದ ಹಾಗೆ ಎಲ್ಲರಲ್ಲಿಯೂ ಉಕ್ಕಿ ಹರಿಯತೊಡಗಿದೆ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದೇಶಪ್ರೇಮದ ಬಗ್ಗೆ ಭಯಂಕರ ಭಾಷಣ ಮಾಡುತ್ತಿರುವವರ ಕುಟುಂಬದಲ್ಲಿ ಯಾರೂ ಸೇನೆ ಸೇರುವುದಿಲ್ಲ, ವೈದ್ಯಕೀಯ, ಎಂಜನಿಯರಿಂಗ್ ಕಾಲೇಜುಗಳನ್ನು ಸೇರುತ್ತಾರೆ. ಕೊನೆಗೂ ಸೇನೆ ಸೇರಿ ಪ್ರಾಣ ಕಳೆದುಕೊಳ್ಳುವವರು ಬಡವರ ಮಕ್ಕಳೇ ಆಗಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಗೌರವ ಸೂಚಿಸುತ್ತಲೇ ಒಂದು ಮಾತು ಹೇಳುವುದಾದರೆ ಈ ರೀತಿ ಹುತಾತ್ಮರಾದವರು ಸೇನೆ ಸೇರಲು ಬಡತನವೂ ಕಾರಣ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
4. ಜಾನಪದ ಸಂಸ್ಕೃತಿಯನ್ನು ಉಳಿಸಲು, ಧರ್ಮವನ್ನು ರಕ್ಷಿಸಲು ಮತ್ತು ದೇಶವನ್ನು ರಕ್ಷಿಸಲು ಬಡವರೇ ಯಾಕೆ ಬೇಕು?
- ಇದು ನಾನು ಅಲ್ಲಿ ಎತ್ತಿದ ಮುಖ್ಯ ಪ್ರಶ್ನೆ .ಈ ಮಾತನ್ನು ಇದೇ ಮೊದಲ ಬಾರಿ ನಾನು ಹೇಳುತ್ತಿಲ್ಲ. ಕಾರ್ಗಿಲ್ ಯುದ್ದದ ಸಮಯದಲ್ಲಿ ಹುತಾತ್ಮ ಯೋಧರ ಶವದ ಪೆಟ್ಟಿಗೆಗಳು ರಾಜ್ಯದ ಬಡವರ ಮನೆಗೆ ಹೋದಾಗಲೂ ಬರೆದಿದ್ದೆ. ಸಂಸತ್ ಮೇಲೆ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಹುತಾತ್ಮರಾದ ಭದ್ರತಾ ಪಡೆಗಳ ಕುಟುಂಬ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾಗಲೂ ಬರೆದಿದ್ದೆ. ಮುಂಬೈನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಪ್ರಾಣಕಳೆದುಕೊಂಡಾಗಲೂ ಬರೆದಿದ್ದೆ. ಇವೆಲ್ಲವೂ ಹುತಾತ್ಮರಾದವರಿಗೆ ನಾನು ಸಲ್ಲಿಸುವ ಗೌರವ ಎಂದೇ ನಾನು ತಿಳಿದುಕೊಂಡಿದ್ದೇನೆ. ಇದನ್ನೇ ದೇಶದ್ರೋಹ ಎನ್ನುವುದಾದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ.

Wednesday, February 24, 2016

‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....

ದೇಶದ ಗಡಿ ಕಾಯುತ್ತಿರುವ ಯೋಧರು ವೀರ ಮರಣವನ್ನಪ್ಪಿದಾಗ ಉಕ್ಕಿ ಹರಿಯುವ ದೇಶಪ್ರೇಮದ ಪ್ರವಾಹವನ್ನು ಕಂಡಾಗಲೆಲ್ಲ ನಾನೇ ಹಿಂದೆ ‘ಪ್ರಜಾವಾಣಿ’ ಯಲ್ಲಿ ಬರೆದಿದ್ದ ಅಂಕಣವೊಂದು ನನ್ನನ್ನು ಕಾಡತೊಡಗುತ್ತದೆ.ಇದು ಮುಂಬೈನ ತಾಜ್ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆದಿದ್ದ ಸಂದರ್ಭದಲ್ಲಿ ಬರೆದದ್ದು.
ಹನುಮಂತ ಕೊಪ್ಪದ ಮತ್ತು ಆತನ ಜತೆಯಲ್ಲಿಯೇ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ವೀರ ಮರಣವನ್ನಪ್ಪಿರುವ ಯೋಧರಿಗಾಗಿ ನಾವೆಲ್ಲ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಕೂಡಾ ಹುತಾತ್ಮ ಯೋದರು ಮತ್ತು ಅವರ ಕುಟುಂಬದ ಬಗ್ಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ .
-------- --------------- --------------------- --------------------------------------------------------------
‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....
ಭಾರತದಲ್ಲಿ ದೇಶಭಕ್ತಿಯಷ್ಟು ಸುಲಭದಲ್ಲಿ ಬೇರೇನನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲವೇನೋ? ಇದಕ್ಕಾಗಿ ಎಷ್ಟೊಂದು ಮಾರ್ಗಗಳು? ಎಸ್‌ಎಂಎಸ್ ಕಳುಹಿಸಬಹುದು, ಟೀಶರ್ಟ್ ಮೇಲೆ ದೇಶಭಕ್ತಿಯ ಘೋಷಣೆಗಳನ್ನು ಪ್ರಿಂಟ್ ಹಾಕಿಸಿಕೊಳ್ಳಬಹುದು,ಕೈಕೈ ಹಿಡಿದು ಮಾನವಸರಪಳಿ ಕಟ್ಟಿಕೊಳ್ಳಬಹುದು, ಭಾರತದ ಭೂಪಟಕ್ಕೆ ದೇವತೆಯ ಚಿತ್ರಅಂಟಿಸಿ ಹೂಮಾಲೆ ಹಾಕಿ ಮೆರವಣಿಗೆ ಮಾಡಬಹುದು,ಗೋಡೆ ಬರಹಗಳನ್ನುಬರೆಯಬಹುದು, ಪತ್ರಿಕೆಗಳವಾಚಕರ ವಾಣಿ ವಿಭಾಗಕ್ಕೆ ಬೆಂಕಿಕಾರುವ ಪತ್ರಬರೆಯಬಹುದು, ಟಿವಿಚಾನೆಲ್‌ಗಳ ಮೈಕ್ ಮುಂದೆ ನಿಂತು ರಾಜಕಾರಣಿಗಳಿಗೆ, ಪಾಕಿಸ್ತಾನಕ್ಕೆ,ಸಾಧ್ಯವಾದರೆ ಮುಸ್ಲಿಮರಿಗೆ ಮನಸಾರೆ ಬೈದುಬಿಡಬಹುದು, ಜತೆಗೆ, ಈಎಲ್ಲಾ ‘ದೇಶಭಕ್ತಿ’ಯ ಕೆಲಸಮಾಡದವರು ದೇಶದ್ರೋಹಿಗಳೆಂದು ಹೀಯಾಳಿಸಬಹುದು, ಇವೆಲ್ಲಕ್ಕಿಂತ ಸುಲಭದ ಮಾರ್ಗವೆಂದರೆ ಕತ್ತಲಾಗುತ್ತ್ತಿದ್ದಂತೆಯೇ ನಾಲ್ಕುಬೀದಿ ಸೇರುವಸ್ಥಳದಲ್ಲಿಗೆಳೆಯ-ಗೆಳತಿಯರೊಂದಿಗೆಕೂಡಿ ರೂಪಾಯಿಗೆ ನಾಲ್ಕು ಸಿಗುವಒಂದಷ್ಟು ಕ್ಯಾಂಡಲ್‌ಗಳನ್ನು ಹೊತ್ತಿಸಬಹುದು (ವಿ.ಸೂ.:ದಯವಿಟ್ಟುಟಿವಿ ಚಾನೆಲ್‌ಗಳಿಗೆ ಮೊದಲೇ ಕಾರ್ಯಕ್ರಮದ ಬಗ್ಗೆ ತಿಳಿಸಿ,ಡ್ರೆಸ್-ಮೇಕಪ್ ಕ್ಯಾಮೆರಾ ಕಣ್ಣಿಗೆ ಒಪ್ಪುವಂತಿರಲಿ).ಅಲ್ಲಿಗೆ ದೇಶಭಕ್ತರೆಂದು ಸಾಬೀತಾಗಿ ಹೋಯಿತು, ಮನೆಗೆಹೋಗಿ ಹೊಟ್ಟೆತುಂಬಾ ಊಟ ಮಾಡಿ ಸೊಂಪಾಗಿ ನಿದ್ದೆ ಮಾಡಬಹುದು.
ಕಳೆದ ಹದಿನೆಂಟುದಿನಗಳಲ್ಲಿ ದೇಶದ ಬಹುತೇಕ ‘ಜಾಗೃತನಾಗರಿಕರು’ ಮಾಡಿದ್ದು ಇದನ್ನೇಅಲ್ಲವೇ? ಮೊನ್ನೆಸಂಸತ್ ಭವನದ ಪಕ್ಕದ ವಿಜಯ ಚೌಕ್ ನಲ್ಲಿ ಒಬ್ಬ ಯುವಕ ‘ಮೇರಾಏಕ್ ಬೈಟ್ ಲೇ ಲೋ’ ಎಂದು ಟಿವಿಚಾನೆಲ್‌ಗಳ ವರದಿಗಾರರರನ್ನು ಗೋಗರೆಯುತ್ತ್ತಿದ್ದ. ‘ಯಾಕಯ್ಯಾ’ಎಂದು ಕೇಳಿದರೆ ಎದುರಿಗಿದ್ದ ಸಂಸತ್ ಭವನದ ಕಡೆ ತೋರಿಸಿ ‘ಮುಜೇ ನೇತಾಲೋಗೊಂಕೋ ಗಾಲಿ ದೇನಾ ಹೈ’ಎಂದು ಕಿರುಚಾಡತೊಡಗಿದ. ‘ಅವರೇನುಮಾಡಿದ್ದಾರೆ?’ ಎಂದು ಪ್ರಶ್ನಿಸಿದರೆ ಹಿಂದಿ ಶಬ್ದಕೋಶದಲ್ಲಿರುವ ಎಲ್ಲ ಬೈಗುಳಗಳನ್ನು ಕಾರಿದ.‘ನೀನೇನು ಮಾಡಿದೆ’ ಎಂದು ಕೆಣಕಿದರೆ ‘ಉನ್ಹೇ ಗಾಲಿ ದೇನೇಕೆ ಲಿಯೇ ಮುಂಬೈ ಸೇ ಆಯಾ ಹ್ಹೂಂ,ಯೆ ಕಮ್ ಹೈ ಕ್ಯಾ?’ಎಂದು ಮರುಪ್ರಶ್ನಿಸಿದ. ಅವನನ್ನು ಪಕ್ಕಕ್ಕೆ ಕರೆದು ‘ನೋಡು, ಮುಂಬೈದಾಳಿಯಲ್ಲಿ ಹದಿನಾಲ್ಕು ಪೊಲೀಸರುಸತ್ತಿದ್ದಾರಲ್ಲಾ, ಅವರಹೆಸರು ಹೇಳು’ ಎಂದರೆ ಮೊದಲ ಬಾರಿ ಆತ ದೆಹಲಿ ಚಳಿಯಲ್ಲಿಯೂ ಬೆವರತೊಡಗಿದ,ತಡವರಿಸತೊಡಗಿದ.‘..ಕರಕರೆಸಾಬ್,ಕಾಮ್ಟೆಸಾಬ್, ಸಾಲಸ್ಕರ್ಸಾ ಬ್......ಒಂಬ್ಲೆ....’ಅದರ ನಂತರ ಒಂದು ಹೆಸರೂ ಅವನ ಬಾಯಿಯಿಂದ ಹೊರಡಲಿಲ್ಲ.
ಎಂತಹ ಮೂರ್ಖ ಯುವಕ ಅಂತೀರಾ? ಹಾಗಿದ್ದರೆ ಹುತಾತ್ಮರಾದ ಉಳಿದ ಹತ್ತು ಪೊಲೀಸರ ಹೆಸರು ನೆನಪಿಗೆ ಬರುತ್ತಾ ನೋಡಿ. ಬಹುಶಃ ಹುತಾತ್ಮ ಪೊಲೀಸರಕುಟುಂಬವರ್ಗ, ಸಹದ್ಯೋಗಿಗಳು ಮತ್ತು ಸ್ನೇಹಿತರನ್ನು ಹೊರತುಪಡಿಸಿ ಉಳಿದವರಲ್ಲಿ ಯಾರಿಗೂ ಅವರ ಹೆಸರುನೆನಪಲ್ಲಿ ಉಳಿದಿಲ್ಲ. ಮರಾಠಿಪತ್ರಿಕೆಗಳನ್ನು ಹೊರತುಪಡಿಸಿ ಬೇರೆ ಪತ್ರಿಕೆಗಳು ಕೂಡಾ ಅವರ ಫೋಟೋಗಳನ್ನು ಸರಿಯಾಗಿ ಪ್ರಕಟಿಸಲಿಲ್ಲ, ಅವರ ಸಾವಿನಿಂದಾಗಿ ಅವರ ಕುಟುಂಬಕ್ಕಾದ ಕಷ್ಟ-ನಷ್ಟದಚಿತ್ರವನ್ನು ನೀಡಿಲ್ಲ. ಟಿವಿಕ್ಯಾಮೆರಾಗಳ ಮುಂದೆ ಪೊಲೀಸರ ತ್ಯಾಗವನ್ನು ಕೊಂಡಾಡಿದವರು,ಕಣ್ಣೀರು ಸುರಿಸಿ ಮೇಕಪ್ ಸರಿಪಡಿಸಿಕೊಂಡವರು ಯಾರೂ ಈ ‘ಅನಾಮಿಕ ಹುತಾತ್ಮರು’ ಯಾರು? ಅವರೆಲ್ಲಿದ್ದಾರೆ? ಮನೆ ಯಜಮಾನನ ಸಾವಿನ ನಂತರ ಅವರ ಮನೆ ಸ್ಥಿತಿ ಏನಾಗಿದೆ?ಎಂದು ತಿಳಿದುಕೊಳ್ಳುವಪ್ರಯತ್ನ ಮಾಡಿಲ್ಲ.
೨೬/೧೧ ಘಟನೆಯ ಮರುಗಳಿಗೆಯಲ್ಲಿಯೇ ರಾಜ್ ಠಾಕ್ರೆಯನ್ನು ಗೇಲಿ ಮಾಡಿ’ಮುಂಬೈಯನ್ನು ರಕ್ಷಿಸಿದವರು ಉತ್ತರ, ದಕ್ಷಿಣದರಾಜ್ಯಗಳ ಯೋಧರು, ಮರಾಠಿಗಳಲ್ಲ’ಎನ್ನುವ ಅರ್ಥದ ಎಸ್‌ಎಂಎಸ್‌ಗಳು ಹರಿದಾಡತೊಡಗಿದವು. ಸತ್ಯಸಂಗತಿ ಏನೆಂದರೆ ಹುತಾತ್ಮ ಪೊಲೀಸರಾದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಜಯವಂತ್ ಪಾಟೀಲ್,ಮುಖೇಶ್ ಯಾಧವ್, ಪ್ರಕಾಶ್ ಮೋರೆ, ಆರ್.ಎಸ್.ಶಿಂಧೆ,ಶಶಾಂಕ್ ಶಿಂಧೆ, ವಿಜಯ್ ಖಾಂಡೇಕರ್, ಎ.ಆರ್.ಚಿಂತೇ, ಅಂಬಾದಾಸ್ ಪವಾರ್, ಬಿ.ಸಿ.ಬೋಂಸ್ಲೆ ಮೊದಲಾದವರೆಲ್ಲರೂ ಮರಾಠಿಗರು.ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವ ಪ್ರಮುಖ ಸಾಕ್ಷಿಯಾಗಿರುವ ಭಯೋತ್ಪಾದಕ ಅಜ್ಮಲ್ ಕಸಬ್ ಬಂಧನಕ್ಕೆ ಕಾರಣರಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ತುಕರಾಮ್ ಒಂಬ್ಲೆ ಕೂಡಾ ಮರಾಠಿಗ. ತನ್ನ ಗುಂಡಿಗೆಗೆ ಕಸಬ್ ಗುಂಡು ಹೊಡೆಯುತ್ತಿದ್ದರೂ ಲೆಕ್ಕಿಸದೆ ಆತನನ್ನು ಹಿಡಿದಕೈಯ್ಯನ್ನು ಸಡಿಲಿಸದೆ ಪ್ರಾಣಬಿಟ್ಟವರು ಒಂಬ್ಲೆ.
ಪ್ರಾಣ ಕಳೆದುಕೊಂಡರೇನಾಯಿತು,ಸರ್ಕಾರ ಪರಿಹಾರನೀಡುವುದಿಲ್ಲವೇ? ಎಂದುಕೇಳಬಹುದು. ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ ಕಳೆದ ಶನಿವಾರಕ್ಕೆ ಏಳುವರ್ಷಗಳಾಯಿತು. ಆ ಘಟನೆಯಲ್ಲಿ ಗುಂಡಿಗೆ ಎದೆಕೊಟ್ಟು ನಮ್ಮ ಜನಪ್ರತಿನಿಧಿಗಳನ್ನು ಉಳಿಸಿದವರು ಭದ್ರತಾಪಡೆಯ ಏಳು ಅಧಿಕಾರಿಗಳು. ಅವರಲ್ಲೊಬ್ಬರು ಎಎಸ್‌ಐ ನಾನಕ್ ಚಂದ್. ಹುತಾತ್ಮರಾದವರೆಲ್ಲರಿಗೂ ಪರಿಹಾರದ ಜತೆ ಪೆಟ್ರೋಲ್ ಪಂಪ್ ಲೈಸೆನ್ಸ್ ನೀಡುವುದಾಗಿ ಆಗಿನ ಕೇಂದ್ರ ಸರ್ಕಾರ ಘೋಷಿಸಿತ್ತು.
ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿ,ಸಾಲಮಾಡಿ ದುಡ್ಡು ತಂದು ಲಂಚಕೊಟ್ಟ ನಂತರ (ಪತ್ರಿಕೆಗಳಿಗೆನಿನ್ನೆ ಆ ಕುಟುಂಬವೇ ಹೇಳಿಕೊಂಡಿದೆ) ಕಳೆದ ವರ್ಷ ಸೋನೆಪತ್‌ನಲ್ಲಿರುವ ಕುಟುಂಬಕ್ಕೆ ದೂರದ ಗುಡ್‌ಗಾಂವ್‌ನ ಎಲ್ಲೋ ಮೂಲೆಯಲ್ಲಿ ಪೆಟ್ರೋಲ್ ಪಂಪ್ ಮಂಜೂರು ಮಾಡಲಾಗಿದೆ. ಆ ನಿವೇಶನದಲ್ಲಿ ನೀರು-ಚರಂಡಿವ್ಯವಸ್ಥೆ ಯಾವುದೂ ಸರಿ ಇಲ್ಲ. ಮತ್ತೊಬ್ಬ ಭದ್ರತಾ ಸಹಾಯಕ ಮಾಥುರ್‌ ಸಿಂಗ್ ಕುಟುಂಬಕ್ಕೆಕೇಂದ್ರ ಸರ್ಕಾರ ಹತ್ತು ಲಕ್ಷರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡುಬಿಟ್ಟಿದೆ.ದೆಹಲಿಯಲ್ಲಿಯೇ ಈ ಗತಿಯಾದರೆ ಉಳಿದ ಕಡೆ ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾದ ಪೊಲೀಸರ ಗತಿ ಏನಾಗಿರಬಹುದು?
ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ ನಂತರ ಇದ್ದಕ್ಕಿದ್ದಂತೆ ಎಲ್ಲರೂ ಪೊಲೀಸರು ಮತ್ತು ಸೇನೆಯನ್ನು ಕೊಂಡಾಡತೊಡಗಿದ್ದಾರೆ.ಭಯೋತ್ಪಾದಕರನ್ನು ಹೊಡೆದುರುಳಿಸಿದ ಎನ್‌ಎಸ್‌ಜಿ ಕಮಾಂಡೋಗಳ ಬಗ್ಗೆ ಪ್ರೀತಿ-ಅಭಿಮಾನಉಕ್ಕಿ ಹರಿಯತೊಡಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಆರನೇ ವೇತನ ಆಯೋಗದ ವರದಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಈ ಎರಡೂ ವರ್ಗಗಳು ಗೋಳಾಡುತ್ತಿದ್ದಾಗ ಇದೇ ಜನತೆಯಿಂದ ಕನಿಷ್ಠ ಅನುಕಂಪವ್ಯಕ್ತವಾಗಿಲ್ಲ. ಆಗ ಎಸ್‌ಎಂಎಸ್, ಮಾನವಸರಪಳಿ,ಕ್ಯಾಂಡಲ್‌ಲೈಟ್....ಎಲ್ಲಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗಲಿಲ್ಲ. ಯಾರೋ ಪೊಲೀಸ್ ಅಧಿಕಾರಿಯೊಬ್ಬ ಕಾನ್‌ಸ್ಟೇಬಲ್‌ಗಳಿಗೆ ವೇತನಆಯೋಗದಿಂದ ಎಷ್ಟ್ಲೆಲಾ ಅನ್ಯಾಯವಾಗಿದೆಎಂದು ಪತ್ರಿಕೆಗೆ ಲೇಖನ ಬರೆದರೆ ಮೇಲಾಧಿಕಾರಿಗಳು ಆತನಿಂದ ವಿವರಣೆಬಯಸಿ ನೋಟೀಸ್ ನೀಡಿರದ್ದರು.
ಭಾರತದ ಎನ್‌ಎಸ್‌ಜಿ ಮತ್ತು ಈ ಪಡೆಗೆ ಸ್ಫೂರ್ತಿಯಾಗಿರುವ ಬ್ರಿಟನ್‌ನ ‘ಸ್ಪೆಷಲ್ ಏರ್ ರ್ಸ್ಕಾಡ್ರನ್’ (ಎಸ್‌ಎಎಸ್)ನತರಬೇತಿ ಮತ್ತು ಸಂಬಳ-ಸವಲತ್ತುಗಳನ್ನು ಹೋಲಿಸಿ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಅದರ ಪ್ರಕಾರ ಎನ್‌ಎಸ್‌ಜಿ ಕಮಾಂಡೋದಲ್ಲಿನ ಯೋಧನಿಗೆ ಮಾಸಿಕ ಹದಿನೈದು ಸಾವಿರಮತ್ತು ಅಧಿಕಾರಿಗೆ ೪೫,೦೦೦ರೂಪಾಯಿ ಸಂಬಳ ನೀಡಲಾಗುತ್ತಿದೆ.
ಆದರೆ ಬ್ರಿಟನ್‌ನ ಎಸ್‌ಎಎಸ್ ಯೋಧ ಮಾಸಿಕ ೩೨ ಲಕ್ಷರೂಪಾಯಿ ಮತ್ತು ಮೇಜರ್ ೫೧ ಲಕ್ಷರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂದರೆ ಹುತಾತ್ಮರಾದ ಎನ್‌ಎಸ್‌ಜಿ ಹವಲ್ದಾರ್ ಗಜೇಂದ್ರಸಿಂಗ್‌ಗೆ ಸಿಗುತ್ತ್ತಿದ್ದ ತಿಂಗಳ ಸಂಬಳ ಕೇವಲ ಹದಿನೈದು ಸಾವಿರರೂಪಾಯಿ. ದೇಶದಿಂದ ದೇಶಕ್ಕೆ ಜೀವದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸ? ಪ್ರಾಣದಹಂಗಿಲ್ಲದ ಶಸ್ತ್ರಧಾರಿ ಭಯೋತ್ಪಾದಕನ ಎದುರು ಯೋಧನೊಬ್ಬ ನಿಂತಿದ್ದಾನೆ ಎಂದಿಟ್ಟುಕೊದುಳ್ಳಿ. ಅದು ಇಬ್ಬರಲ್ಲಿ ಒಬ್ಬನ ಸಾವು ನಿರ್ಧಾರವಾಗುವ ಕ್ಷಣಗಳು. ಆಗ ಬಂದೂಕು ಹಿಡಿದ ಯೋಧನ ಮನಸ್ಸುಒಂದು ಕ್ಷಣ ತಾನಿಲ್ಲದ ತನ್ನಕುಟುಂಬದ ಸ್ಥಿತಿಯನ್ನು ನೆನೆಸಿಕೊಂಡರೆ,ಅನಾಥರಾಗಲಿರುವ ತಾಯಿ-ಹೆಂಡತಿ-ಮಕ್ಕಳಚಿತ್ರ ಕಣ್ಣಮುಂದೆ ಸುಳಿದರೆ ಆತನ ಕೈಗಳು ಕಂಪಿಸಲಿಕ್ಕಿಲ್ಲವೇ ? ಮನಸ್ಸು ತೊಯ್ದಾಡದೇ?
ಮುಂಬೈ ಮೇಲೆ ಭಯೋತ್ಪಾದಕರುದಾಳಿ ನಡೆಸಿದ ನಂತರದ ದಿನಗಳಲ್ಲಿ ಭಾರತ ಸರ್ಕಾರ ಏನು ಮಾಡಬೇಕೆಂಬಬಗ್ಗೆ ಪುಂಖಾನುಪುಂಖ ಸಲಹೆಗಳುಕೇಳಿಬರುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ. ಆದರೆ ಅಂತಹ ಯುದ್ಧದಲ್ಲಿ ಪ್ರಾಣಕಳೆದುಕೊಳ್ಳುವವರು ಯಾರು? ಸೇನೆ ಸೇರುವಾಗಲೇ ಸಾವುಕಾದಿದೆ ಎಂದು ಸೈನಿಕರಿಗೆ ಗೊತ್ತಿರುತ್ತದೆ ಎಂದು ಹೇಳಬಹುದು,ವೈರಿ ಗುಂಡಿಗೆ ಬಲಿಯಾದರೆ ದೇಶಕ್ಕೆ ಮಾಡಿದ ಬಲಿದಾನ ಎಂದು ಅವರ ದೇಶಪ್ರೇಮವನ್ನು ವೈಭವೀಕರಿಸಲೂಬಹುದು. ಹುತಾತ್ಮ ಯೋಧರೆಲ್ಲರ ಬಲಿದಾನವನ್ನು ಗೌರವಿಸುತ್ತಲೇ ಹೇಳಬಹುದಾದರೆ ಬಹುತೇಕ ಯುವಕರುಸೇನೆ ಸೇರುವುದಕ್ಕೆ ಕಾರಣ ನಿರುದ್ಯೋಗವೇ ಹೊರತು ದೇಶಪ್ರೇಮವಲ್ಲ. ಈಗಲೂಸೇನೆ ಭರ್ತಿಗೆ ಸಂದರ್ಶನ ನಡೆದಾಗಲೆಲ್ಲಾನೂಕುನುಗ್ಗಲಿನಿಂದ ಸಾವಿಗೀಡಾಗುವ ಘಟನೆಗಳು ನಡೆಯುತ್ತಿರುವುದು ಇದೇ ಕಾರಣಕ್ಕೆ.
ಟಿವಿ ಸ್ಟುಡಿಯೋದಲ್ಲಿ ಕೂತು ಯುದ್ಧ ಘೋಷಿಸುವ ಸಿನಿಮಾ ತಾರೆಯರು,ಉದ್ಯಮಿಗಳು, ಬುದ್ಧಿಜೀವಿಗಳು, ಯುದ್ಧ ತಜ್ಞರು ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ರಣರಂಗದಿಂದ ರವಾನೆಯಾದ ಹುತಾತ್ಮ ಯೋಧರ ಶವಪೆಟ್ಟಿಗೆಗಳು ‘ಕ್ಯಾಂಡಲ್‌ವಾಲಾ’ಗಳ ಮನೆಗಾಗಲಿ, ನಸುಕಿನಲ್ಲಿಯೇ ಹುಡುಗರನ್ನು ಎಬ್ಬಿಸಿ ಲಾಠಿ ತಿರುಗಿಸಲು ಹೇಳಿಕೊಡುವ ಮೂಲಕ ಹಿಂದೂಗಳ ರಕ್ಷಣೆಗೆ ಯುವಕರನ್ನು ಅಣಿಗೊಳಿಸುವ ‘ದೇಶಪ್ರೇಮಿ’ಗಳ ಮನೆಗಳಿಗಾಗಲಿ ಹೋಗಿರಲಿಲ್ಲ. ಅವೆಲ್ಲವೂ ಹೋಗಿರುವುದು ಯಾವುದೋ ಹಳ್ಳಿಯ ಬಡ ರೈತ-ಕೂಲಿಕಾರ್ಮಿಕರಮನೆಗಳಿಗೆ. ಕಾರ್ಗಿಲ್ ಯುದ್ಧದಲ್ಲಿ ಮಡಿದವರಲ್ಲಿ ಕರ್ನಾಟಕದ ಯೋಧರೂ ಇದ್ದರು. ಶವಪೆಟ್ಟಿಗೆಗಳನ್ನು ಅವರ ಮನೆಗೆ ತಲುಪಿಸಿದ ನಂತರ ತಿರುಗಿ ಆ ಮನೆ ಕಡೆ ಯಾರಾದರೂ ನೋಡಿದ್ದಾರಾ?

Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Tuesday, January 19, 2016

ಹಸಿವು ವೈಯಕ್ತಿಕವಾದುದು, ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು.

ಹಸಿವಿಗಿಂತ ಅವಮಾನದ ನೋವು ಭೀಕರವಾದುದು. ಹಸಿವು-ಅವಮಾನಗಳನ್ನೇ ಉಂಡು ಬೆಳೆದ ಹಿರಿಯ ಜೀವಗಳು ಅವುಗಳನ್ನು ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಇದರಿಂದಾಗಿ ಸುಲಭದಲ್ಲಿ ಜೀವ ಬಿಟ್ಟುಕೊಡುವುದಿಲ್ಲ. ಇಲ್ಲದೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಹೆಣಗಳು ಸಾಲುಸಾಲು ಬೀಳಬೇಕಿತ್ತು, ರೈತರದ್ದಲ್ಲ. ಹುಟ್ಟಿನಿಂದಲೇ ಹಸಿವು ಮತ್ತು ಅವಮಾನವನ್ನು ಸಹಿಸಿಕೊಂಡು ಬಂದ ದಲಿತರು ರೈತರ ಹಾಗೆ ದುರ್ಬಲ ಮನಸ್ಸಿನವರಾಗಿದ್ದಿದ್ದರೆ ನಾವೆಲ್ಲ ನಿತ್ಯ ದಲಿತರ ಆತ್ಮಹತ್ಯೆಯ ಲೆಕ್ಕ ಹಾಕಿಕೊಂಡು ಕೂರಬೇಕಿತ್ತು.
ಹಸಿವು ವೈಯಕ್ತಿಕವಾದುದು, ಅದನ್ನು ಸಹಿಸಿಕೊಳ್ಳಬಹುದು. ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು. ಒಮ್ಮೊಮ್ಮೆ ಮುಖಮುಚ್ಚಿಕೊಳ್ಳಲು ಜಾಗವೇ ಸಿಗುವುದಿಲ್ಲ. ಹೊಸಪೀಳಿಗೆಯ ರೋಹಿತ ವೇಮುಲನಂತಹ ಸೂಕ್ಷ್ಮವಾದ ಹೂಮನಸ್ಸಿನ ಜೀವಗಳು ಬಹುಬೇಗ ಅವಮಾನದಿಂದ ಬಾಡಿಹೋಗುತ್ತವೆ, ಒಮ್ಮೊಮ್ಮೆ ಉದುರಿಹೋಗಿ ನಮ್ಮನ್ನೆಲ್ಲ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ ಅಣಕಿಸುತ್ತಿರುತ್ತವೆ.
ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.

Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

Monday, October 26, 2015

ದಿನೇಶ್ ಅಮಿನ್ ಮಟ್ಟು ಸರ್ ಹೇಳಿದ್ದನ್ನು ಗ್ರಹಿಸುತ್ತಾ.....

ಹೊನ್ನಾವರ: ಆರ್‌‌‌ಎಸ್ಎಸ್‌, ನಾರಾಯಣ ಗುರು ಹಾಗೂ ವಿವೇಕಾನಂದರು ಹೇಳಿದ ಧರ್ಮ ಅನುಸರಿಸಿದರೆ ತಾವು ಆರ್‌‌ಎಸ್ಎಸ್ ಸೇರಲು ಸಿದ್ಧ. ಒಂದು ವೇಳೆ ನನ್ನ ಷರತ್ತನ್ನು ಕಲ್ಲಡ್ಕ ಪ್ರಭಾಕರ್ ಭಟ್‌ ಒಪ್ಪಿದರೆ, ಪೇಜಾವರ ಮಠಕ್ಕೆ ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌‌‌ಮಟ್ಟು ಹೇಳಿದರು.

ನಗರದಲ್ಲಿ ಮಂಥನ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ 'ಕಲಬುರ್ಗಿ ವಿಚಾರ ಮಾರ್ಗ ಮುಂದೇನು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಕೃಷ್ಣರನ್ನು ಟೀಕಿಸುವ ಬದಲು, ರಾಮಮನೋಹರ ಲೋಹಿಯಾ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ ವಿಚಾರ ಹರಡುವ ಮೂಲಕ ವಿಚಾರವಾದ ಬೆಳೆಸಬೇಕಿದೆ. ಕುವೆಂಪು, ಕನಕದಾಸರ, ಬಸವಣ್ಣರನ್ನು ಓದಿಕೊಂಡವರು ಕೋಮುವಾದಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಐಕಾನ್‌‌‌ಗಳನ್ನು ಮುಂದಿಟ್ಟುಕೊಂಡು ಕೋಮುವಾದ ಎದುರಿಸಬೇಕು ಎಂದರು.
1991ರಲ್ಲಿ ಹೊಸ ಆರ್ಥಿಕ ನೀತಿ ಮತ್ತು ಬಾಬರಿ ಮಸೀದಿ ಬೀಳಿಸುವ ಮೂಲಕ ಕೋಮುವಾದವು ದೇಶವನ್ನು ಪ್ರವೇಶಿಸಿದವು. ಈ ಎರಡರ ಅಪಾಯವನ್ನು ಈಗ ಎದುರಿಸಬೇಕಿದೆ. ಅಚ್ಚೇ ದಿನದ ಪರಿಣಾಮ ವಿಚಾರವಾದಿಗಳ ಕೊಲೆಗಳು ಪತ್ರಿಕೆಗಳ ಮುಖಪುಟ ಆವರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
***
* ಒಂದು ಅಡಿ ಟಿಪ್ಪಣಿ:
ಬಹಳಷ್ಟು ಗೆಳೆಯರು ಅಮ್ಮೀನ್ ಮಟ್ಟು ಸರ್ ಏನು ಹೇಳಿದ್ರು ಅಂತ ಓದಿದಂತಿಲ್ಲ. ಅವರ ಮಾತಿನ ವ್ಯಂಗ್ಯಾರ್ಥವನ್ನು ಗ್ರಹಿಸಿಲ್ಲ. ಻ಅವರ ಮಾತಿನ ಹಿಂದೆ ಇರುವ ಕೋಪವನ್ನು ಸಹ ಅರ್ಥಮಾಡಿಕೊಂಡಂತಿಲ್ಲ. ಪೆರಿಯಾರ, ಬಸವಣ್ಣ, ನಾರಾಯಣ ಗುರು ಅವರು ಹೇಳಿದ್ದನ್ನು ಆರ್.ಎಸ್.ಎಸ್. ಒಪ್ಪಿ ಅನುಸರಿಸಿದರೆ....ಆರ್.ಎಸ್.ಎಸ್. ಸೇರಬಹುದು. ಪೇಜಾವರ ಮಠಕ್ಕೆ ಉತ್ತರಾಧಿಕಾರಿ ಆಗುವುದು ಎಂದರೆ ಸನ್ಯಾಸಿಯಾಗಿ ಪೇಜಾವರರ ಈಗಿನ ತಾರತಮ್ಯ ನೀತಿ ಅನುಸರಿಸುವುದಲ್ಲ. ಸಮಾನತೆ ಮತ್ತು ಮನುಷ್ಯ ಪ್ರೀತಿಯನ್ನು ಅವರು ಒಪ್ಪಿ ಅನುಸರಿಸಿದರೆ ಎಂಬ ಶರತ್ತನ್ನು ಬಲಪಂಥೀಯರು ಹೆಚ್ಚು ಒತ್ತು ಕೊಟ್ಟು ಒಧಿ ಕೊಂಡಿಲ್ಲ. ಅಷ್ಟೆ. ``ಅದಕ್ಕೇ ಬರೀ ಓದು ಸಾಲದು. ವಿವೇಕ ಮುಖ್ಯ ಅಂಥ ''
ಮಾತಿನ ಒಳ ಅರ್ಥ , ಧ್ವನಿ ಗ್ರಹಿಕೆ ಸರಿಯಿದ್ದರೆ ಡಾ.ಕಲಬುರ್ಗಿ ಅವರ ಹತ್ಯೆ ನಡೆಯುತ್ತಿರಲಿಲ್ಲ. ಮಟ್ಟು ಸರ್ ಮಾತಿನ ಅರ್ಥ ...`` ಬಲಪಂಥೀಯರು ಬಡತನ, ಜಾತಿ ವ್ಯವಸ್ಥೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕುರಿತು ಮಾತನಾಡುತ್ತಿಲ್ಲ''.`` ಧರ್ಮ ರಕ್ಷಣೆಯ ಭ್ರಮೆ ಮತ್ತು ಮುಖವಾಡದಲ್ಲಿ ಬದುಕುತ್ತಿದ್ದಾರೆ'' ಎಂದು. ಅಮ್ಮೀನ್ ಮಟ್ಟು ಸರ್ ಹೇಳಿದಂತೆ ಅವರ ಹೇಳಿಕೆಗೆ ಈಗಾಗಲೇ ಬಲಪಂಥೀಯರು ಫೇಸ್ ಬುಕ್ ನಲ್ಲಿ ವ್ಯಂಗ್ಯ ಆರಂಭಿಸಿದ್ದಾರೆ. ಅವರನ್ನು , ಅವರ ಹೇಳಿಕೆಗಳನ್ನು ಎಫ್ ಬಿ ಮೂಲಕ ಹಿಂಬಾಲಿಸುತ್ತಿದ್ದಾರೆ ಎಂಬುದು ನಿಜವಾಗಿದೆ. ಅವರು ನಿನ್ನೆ ಹೊನ್ನಾರವರದಲ್ಲಿ ಮಾತನಾಡಿದ ಮಾತುಗಳು ಅಪಾರ್ಥೀಕರಣ ಬಲಪಂಥೀಯರಿಂದ ಜೋರಾಗಿ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅದನ್ನು ವಿರೂಪಗೊಳಿಸುವ ಕಾರ್ಯ ಜೋರಾಗಿ ಸಾಗಿದೆ...
- ನಾಗರಾಜ ಹರಪನಹಳ್ಳಿ

Thursday, June 18, 2015

ಸಾಂಸ್ಕೃತಿಕ ರಾಜಕಾರಣ

ಪ್ರಜೆಗಳ ಆರೋಗ್ಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ನಾಡಿನ ಪ್ರಭುಗಳು ಯೋಗ ದಿನ ಆಚರಿಸಲು ಹೊರಟರೆ ಅದಕ್ಕೆ ಧರ್ಮ, ಪಕ್ಷಗಳನ್ನು ತಳಕುಹಾಕಿ ಯಾಕೆ ರಾಡಿ ಮಾಡ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೇಲ್ನೋಟಕ್ಕೆ ಈ ಪ್ರಶ್ನೆ ಸದಾಶಯವನ್ನೊಳಗೊಂಡಂತೆ ಕಂಡರೂ, ಹೀಗೆ ಪ್ರಶ್ನಿಸುವವರೆಲ್ಲರೂ ಈ ಸದಾಶಯವನ್ನು ಮಾತ್ರ ಹೊಂದಿದ್ದಾರೆಂದು ಅನಿಸದಿರುವ ಕಾರಣದಿಂದಾಗಿಯೇ ವಿವಾದ ಹುಟ್ಟಿಕೊಂಡಿದೆ. ಕತ್ತಿ ಅದರಷ್ಟಕ್ಕೆ ಅಪಾಯಕಾರಿಯಾದುದಲ್ಲ, ಅದರ ಒಳಿತು-ಕೆಡುಕುಗಳು ಕತ್ತಿ ಕೈಗೆತ್ತಿಕೊಂಡವನ ಉದ್ದೇಶ-ದುರುದ್ದೇಶಗಳನ್ನು ಅವಲಂಬಿಸಿರುತ್ತದೆ. ಕತ್ತಿಯಿಂದ ಪೈರನ್ನಾದರೂ ಕೊಯ್ಯಬಹುದು, ಮನುಷ್ಯನ ಕತ್ತನ್ನಾದರೂ ಕೊಯ್ಯಬಹುದು.
ಯೋಗವು ವೈದ್ಯಕೀಯ ವಿಜ್ಞಾನದ ಭಾಗ ಎನ್ನುವುದರ ಬಗ್ಗೆ ಯಾರ ತಕರಾರೂ ಇಲ್ಲ. ಎಲ್ಲ ಧರ್ಮ, ಪಂಥ, ವರ್ಗದವರೂ ಯೋಗಾಭ್ಯಾಸ ಮಾಡುತ್ತಾರೆ. ಇದು ಹಲವು ರೋಗಗಳಿಗೆ ಯಶಸ್ವಿ ಚಿಕಿತ್ಸೆ ಎನಿಸಿಕೊಂಡಿರುವುದೂ  ಸಾಬೀತಾಗಿದೆ. ಆದರೆ ಯೋಗಾಭ್ಯಾಸದ ಪ್ರಚಾರಕ್ಕೆ ಹೊರಟವರು ಜನತೆಯ ಆರೋಗ್ಯ ಸುಧಾರಣೆ ದೃಷ್ಟಿಯನ್ನು ಮಾತ್ರ ಹೊಂದಿದ್ದಾರೆಯೇ ಎನ್ನುವುದಷ್ಟೇ ಈಗಿನ ಪ್ರಶ್ನೆ. ಘರ್ ವಾಪಸಿ, ಲವ್ ಜಿಹಾದ್, ನೈತಿಕ ಪೊಲೀಸ್‌ಗಿರಿ, ಜ್ಯೋತಿಷ, ವಾಸ್ತು ಬಗ್ಗೆ ಬೊಬ್ಬಿಡುವವರು ಯೋಗದ ಬಗ್ಗೆ ಮಾತನಾಡುವುದನ್ನು ಕಂಡಾಗ ಸಹಜವಾಗಿಯೇ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಈ ಅನುಮಾನ ನಿರಾಧಾರವಾದುದು ಕೂಡಾ ಅಲ್ಲ.
ಬಹಿರಂಗವಾಗಿ ಪಕ್ಷ ರಾಜಕಾರಣವನ್ನು, ಗುಪ್ತವಾಗಿ ಸಾಂಸ್ಕೃತಿಕ ರಾಜಕಾರಣವನ್ನು ನಡೆಸುತ್ತಿರುವ ಬಿಜೆಪಿಗೆ ಎರಡು ಬಗೆಯ ಅಜೆಂಡಾಗಳಿವೆ. ಈ ಪಕ್ಷದ ಬಹಿರಂಗ ಅಜೆಂಡಾ ಲೋಕಸಭಾ ಚುನಾವಣೆಗೆ ಮುನ್ನ  ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಅಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ನವದೆಹಲಿಯಲ್ಲಿರುವ ‘ಏಮ್ಸ್’ ಮಾದರಿಯ ಆಸ್ಪತ್ರೆಗಳಿಂದ ಹಿಡಿದು ಸೊಳ್ಳೆ ನಿಯಂತ್ರಣ ಮಿಷನ್ ಸ್ಥಾಪನೆವರೆಗೆ ಹಲವಾರು ಆಶ್ವಾಸನೆಗಳಿವೆ. ಎಲ್ಲಿಯೂ ಯೋಗ ದಿನಾಚರಣೆ ಇಲ್ಲವೆ ಯೋಗ ಪ್ರಚಾರದ ಉಲ್ಲೇಖ ಇಲ್ಲ. ಅದು ಇರುವುದು ಬಿಜೆಪಿಯ ಗುಪ್ತ ಅಜೆಂಡಾದ ಬುಟ್ಟಿಯಲ್ಲಿ.
ಬಿಜೆಪಿಯ  ಗುಪ್ತ ಸಾಂಸ್ಕೃತಿಕ ರಾಜಕಾರಣಕ್ಕೆ ಅದು ತನ್ನದೆಂದು ಹೇಳಿಕೊಳ್ಳುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಪ್ರೇರಣೆ. ಈ ಸಾಂಸ್ಕೃತಿಕ ರಾಷ್ಟ್ರೀಯತೆ ಬಹುಸಂಸ್ಕೃತಿಯನ್ನು ಒಪ್ಪುವುದಿಲ್ಲ.  ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸಾವರ್ಕರ್ ಪ್ರತಿಪಾದಿಸಿದ್ದ ಹಿಂದುತ್ವವೇ ಸ್ಫೂರ್ತಿ. ‘ಮುಸ್ಲಿಮ್ ಇಲ್ಲವೆ ಕ್ರೈಸ್ತರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೇ ಪ್ಯಾಲೆಸ್ಟೀನ್‌ನಲ್ಲಿದೆ. ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಸಾವರ್ಕರ್ ತಮ್ಮ ‘ಹಿಂದುತ್ವ’ ಪುಸ್ತಕದಲ್ಲಿ ಬರೆದಿದ್ದಾರೆ.
ಈ ವ್ಯಾಖ್ಯಾನವನ್ನು ಒಪ್ಪುವ ಪಕ್ಷ ಮತ್ತು ಸಂಘಟನೆ ಯೋಗಾಭ್ಯಾಸದ ಬಗ್ಗೆ ಪ್ರಚಾರದಲ್ಲಿ ತೊಡಗಿದಾಗ ಬೇರೆ ಧರ್ಮೀಯರಲ್ಲಿ ಆತಂಕ ಸಹಜ. ಸಾವರ್ಕರ್ ಅವರ ಹಿಂದುತ್ವದ ವ್ಯಾಖ್ಯಾನವನ್ನು ಒಪ್ಪುವುದಿಲ್ಲ ಎಂದಾದರೆ  ಮತ್ತು ‘ಭಾರತದ ನೆಲದಲ್ಲಿ ಹುಟ್ಟಿದವರೆಲ್ಲರೂ ಭಾರತೀಯರು’ ಎನ್ನುವ ಮಹಾತ್ಮ ಗಾಂಧೀಜಿ ವ್ಯಾಖ್ಯಾನವನ್ನು ಒಪ್ಪುವುದಾದರೆ, ಬೇರೆ ಧರ್ಮಗಳಲ್ಲಿಲ್ಲದ ಯೋಗವನ್ನು ಭಾರತೀಯ ಸಂಸ್ಕೃತಿ ಎಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ?  ಯೋಗಾಭ್ಯಾಸ ಮಾತ್ರವಲ್ಲ, ಆಯುರ್ವೇದ, ಶಾಸ್ತ್ರೀಯ ಸಂಗೀತ ಎಲ್ಲವೂ ಧರ್ಮಾತೀತವಾದವು. ಆದರೆ ಇವುಗಳನ್ನು ರಾಜಕೀಯ ಉದ್ದೇಶಕ್ಕಾಗಿ ಸಾಂಸ್ಕೃತಿಕ ರಾಜಕಾರಣದ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಹೊರಟಾಗಲೇ ವಿವಾದಗಳು ಹುಟ್ಟಿಕೊಳ್ಳುವುದು.
ಯೋಗವನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗವಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಹಿಂದೂ ಧರ್ಮದೊಳಗೂ ಭಿನ್ನಾಭಿಪ್ರಾಯಗಳಿವೆ. ಬೇರೆ ಧರ್ಮಗಳನ್ನು ಬಿಟ್ಟುಬಿಡಿ ದೇಶದ ಜನಸಂಖ್ಯೆಯಲ್ಲಿ ಶೇಕಡ 80ರಷ್ಟಿರುವ ಹಿಂದೂಗಳಲ್ಲಿ ಎಷ್ಟು ಮಂದಿ ಯೋಗವನ್ನು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ತಿಳಿದುಕೊಂಡಿದ್ದಾರೆ. ತಾತ-ಮುತ್ತಾತರನ್ನು ಬಿಟ್ಟುಬಿಡಿ, ನನ್ನ ತಂದೆ-ತಾಯಿ ಕೂಡಾ ಯೋಗದ ಬಗ್ಗೆ ಮನೆಯಲ್ಲಿ ಮಾತನಾಡಿದ್ದನ್ನು ನಾನು ಕೇಳಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಮತ್ತು ಟಿ.ವಿ. ಚಾನೆಲ್‌ಗಳ ಮೂಲಕ ಯೋಗ ಜನಪ್ರಿಯವಾಗಿರುವುದು ನಿಜ.
ಇದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದು ಕೂಡಾ ಈ ಜನಪ್ರಿಯತೆಗೆ ಕಾರಣ ಇರಬಹುದು. ಇಷ್ಟು ಮಾತ್ರಕ್ಕೆ ಯೋಗವನ್ನು ನಮ್ಮ ಸಂಸ್ಕೃತಿ-ಪರಂಪರೆ ಭಾಗ ಎನ್ನಲಾದೀತೇ? ಅವೈದಿಕ ಪರಂಪರೆಯಲ್ಲಿ ಮೈಮುರಿದು, ಬೆವರು ಸುರಿಸಿ ದುಡಿಯುವ ಶ್ರಮ ಸಂಸ್ಕೃತಿ ಇದೆಯೇ ಹೊರತು ಏಕಾಂತದಲ್ಲಿ ಕೂತು ಕಣ್ಣುಮುಚ್ಚಿ, ಕಾಲುಮಡಚಿ ನಡೆಸುವ ಯಾವ ಕಸರತ್ತುಗಳೂ ಇಲ್ಲ  ಎನ್ನುವುದೂ ಸತ್ಯ. ಶ್ರಮಜೀವಿಯಾದ ರೈತ-ಕಾರ್ಮಿಕರಿಗೆ ಈಗಲೂ ಯೋಗದ ಅಗತ್ಯ ಇಲ್ಲ. ಯೋಗ ಜನಪ್ರಿಯವಾಗಿರುವುದು ಶ್ರಮ ಸಂಸ್ಕೃತಿಯಿಂದ ದೂರವಾಗುತ್ತಿರುವ ನಗರಗಳಲ್ಲಿ.
ಕೇಂದ್ರ ಸರ್ಕಾರದ ಯೋಗ ದಿನಾಚರಣೆ ಗುರಿ ನಮ್ಮ ಶಾಲೆಗಳು. ಮಕ್ಕಳ ಆರೋಗ್ಯಕ್ಕೆ ಯೋಗ ನೆರವಾಗುತ್ತದೆ ಎಂದು ತಥಾಕಥಿತ ಆರೋಗ್ಯ ತಜ್ಞರು ಹೇಳುತ್ತಿರುವಾಗ ಆ ಮಕ್ಕಳು ಹಿರಿಯರ ಅಜ್ಞಾನಕ್ಕೆ ಮುಸಿಮುಸಿ ನಗುತ್ತಿವೆ. ಯಾವ ಮಕ್ಕಳೂ ಕಣ್ಣುಮುಚ್ಚಿ, ಕಾಲುಮಡಚಿ, ಬಾಯಿಮುಚ್ಚಿ ಬಹಳ ಹೊತ್ತು ಕೂರುವುದನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗೇ ಮಕ್ಕಳಿಗೆ ಅತಿ ಶಿಸ್ತಿನ ತರಗತಿಗಳು ಜೈಲುಗಳೆಂದು ಅನಿಸುವುದು. ಮಕ್ಕಳಿಗೆ ಕುಣಿಯುತ್ತಾ, ಕುಪ್ಪಳಿಸುತ್ತಾ, ಓಡುತ್ತಾ, ಆಡುತ್ತಾ ಇರುವುದೇ ಖುಷಿ.
ಇದರಿಂದಲೇ ಅವುಗಳಿಗೆ ಆರೋಗ್ಯ. ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಯಾವುದೇ ಸರ್ಕಾರ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಮೊದಲು ಎಲ್ಲ ಶಾಲೆಗಳಿಗೆ ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಬೇಕು, ಆಸಕ್ತಿ ಇರುವ ದೈಹಿಕ ಶಿಕ್ಷಣಾಧಿಕಾರಿಗಳನ್ನು ನೇಮಿಸಬೇಕು, ಕ್ರೀಡಾ ಸಲಕರಣೆ ಒದಗಿಸಬೇಕು. ಹೆಚ್ಚು ದೈಹಿಕ ಕಸರತ್ತಿನ ಅಗತ್ಯ ಇಲ್ಲದ, ಜೂಜು-ಮೋಜುಗಳಿಂದ ಮಕ್ಕಳ ಮನಸ್ಸು ಕೆಡಿಸುವ ಕ್ರಿಕೆಟ್ ಆಟದ ಎದುರು ಕಬಡ್ಡಿ, ಹಾಕಿ  ಸೇರಿದಂತೆ  ಭಾರತೀಯ ಕ್ರೀಡೆಗಳೆಲ್ಲ ಮೂಲೆಗುಂಪಾಗಿವೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದಲೇ ಯೋಗಾಭ್ಯಾಸ ಅಗತ್ಯ ಎನ್ನುವ ಬಿಜೆಪಿ ಸರ್ಕಾರದ ಸಮರ್ಥನೆ ಆತ್ಮವಂಚನೆಯಿಂದ ಕೂಡಿದೆ ಎನ್ನುವುದಕ್ಕೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಪೌಷ್ಟಿಕಾಂಶದ ಕೊರತೆಯಿಂದ ನಿಮಿಷಕ್ಕೊಂದು ಮಗು ಸಾಯುತ್ತಿರುವ ಭಾರತದಲ್ಲಿ ಸರ್ಕಾರದ ಆದ್ಯತೆ ಏನಿರಬೇಕು? ಯೋಗಾಭ್ಯಾಸವೇ? ಪೌಷ್ಟಿಕಾಂಶ ಆಹಾರವೇ? ಅನ್ನಭಾಗ್ಯ, ಕ್ಷೀರಭಾಗ್ಯವನ್ನು ಗೇಲಿ ಮಾಡುವ, ಬಹುಸಂಖ್ಯಾತ ಮಕ್ಕಳು ಬಯಸುವ ಪೋಷಕಾಂಶ ಭರಿತ ಮೊಟ್ಟೆಯನ್ನು ಶಾಲೆಗಳಲ್ಲಿ ನೀಡುವುದನ್ನು ಧಾರ್ಮಿಕ ಕಾರಣಕ್ಕಾಗಿ ವಿರೋಧಿಸುವವರು, ಮಕ್ಕಳ ಆರೋಗ್ಯಕ್ಕಾಗಿ ಯೋಗ ಎಂದು ಪ್ರತಿಪಾದಿಸುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿಲ್ಲವೇ?