Saturday, October 3, 2015

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ
ಭಾಷಣ: ದಿನೇಶ್ ಅಮೀನ್ ಮಟ್ಟು,                                                      ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ
(ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಉರ್ದು ರಿಪೋಟರ್ಸ್ ಫೋರಂನ ಸಹಯೋಗದಲ್ಲಿ ರಾಯಚೂರಿನಲ್ಲಿ ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಮಾಧ್ಯಮ ಕಾರ್ಯಾಗಾರ’ ವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಹಿರಿಯ ಪತ್ರಕರ್ತರು, ಚಿಂತಕರಾದ ಶ್ರೀಯುತ ದಿನೇಶ್ಅಮೀನ್ ಮಟ್ಟು ಅವರು ಆಶಯ ಮಾತುಗಳನ್ನಾಡಿದ್ದರು. ಅವರ ಈ ಅರ್ಥಪೂರ್ಣ ಮಾತುಗಳನ್ನು ಇಲ್ಲಿ ದಾಖಲಿಸಲಾಗಿದೆ.)
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಮ್ಮ ಪೊನ್ನಪ್ಪ ಅವರು ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅಕಾಡೆಮಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಒಂದು ರೀತಿಯಲ್ಲಿ ಅಕಾಡೆಮಿ ಪಾಲಿಗೆ ನಾನೂ ಕೂಡಾ ಅಸ್ಪೃಶ್ಯನಾಗಿದ್ದೆ. ಈ ಕಾರ್ಯಾಗಾರದ ವಿಷಯ ಕೂಡಾ ಅದೇ ಆಗಿದೆ. ಅದೇನೇ ಇರಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊನ್ನಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.
ಕೆಲವುವರ್ಷಗಳ ಹಿಂದೆ ದೆಹಲಿಯಲ್ಲಿದ್ದಾಗ ಕರ್ನಾಟಕದ ಪರಿಚಿತ ಬುದ್ದಿಜೀವಿರಾಜಕಾರಣಿಯೊಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ ಮಾಧ್ಯಮದಲ್ಲಿ ಜಾತೀಯತೆ ಜಾಸ್ತಿಯಾಗಿದೆ ಎಂದು ಅವರು ಬಹಳ ವಿಷಾದದಿಂದ ಹೇಳುತ್ತಿದ್ದರು. “ನನಗೆ ಅರ್ಥ ಆಗಲಿಲ್ಲ” ಎಂದೆ. ಅವರು “ಇಲ್ಲ ಈಗೆಲ್ಲಾ ಮಾಧ್ಯಮಗಳಲ್ಲಿ ಜಾತಿಗೊಂದು ಗುಂಪು ಹುಟ್ಟಿಕೊಂಡಿದೆ” ಅಂದರು. ನಾನು ಅವರ ಮುಖವನ್ನು ನೋಡುತ್ತಿದ್ದೆ, ಅವರು ಯಾವುದೋ ದುರುದ್ದೇಶದಿಂದ ಹೇಳುತ್ತಿದ್ದಾರೆಂದು ನನಗನಿಸಲಿಲ್ಲ. ಅವರು ಬಹಳ ಸಹಜವಾಗಿ ಹೇಳಿದ್ದರು. “ಹಿಂದೆ ಮಾಧ್ಯಮದಲ್ಲಿ ಜಾತಿ ಇರಲಿಲ್ಲವಾ?” ಎಂದು ನಾನು ಅವರನ್ನು ಕೇಳಿದೆ.
ಬಹಳಷ್ಟುಮಂದಿಗೆ ಇತ್ತೀಚೆಗೆ ಹೀಗೆ ಅನಿಸಲಿಕ್ಕತ್ತಿದೆ. ಎಲ್ಲದರಲ್ಲಿಯೂ ಜಾತಿ ಬಂದಿದೆ, ಮಾಧ್ಯಮದಲ್ಲಿ ಜಾತಿ ಬಂದಿದೆ. ರಾಜಕೀಯದಲ್ಲಿ ಜಾತಿಬಂದಿದೆ. ಎಲ್ಲಾ ಕಡೆ ಜಾತಿ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಜಾತಿ ಇರಲಿಲ್ಲವೇ? ಅದು ಬಹಳ ಮುಖ್ಯವಾದ ಪ್ರಶ್ನೆ. ನಾನು ಆ ರಾಜಕಾರಣಿಯನ್ನು ಮತ್ತೆ ಕೇಳಿದೆ, “ಸುಮ್ಮನೆ ಕಣ್ಮುಚ್ಚಿಕೊಂಡು ನಿಮಗೆ ಪರಿಚಯವಿರುವ ಎಲ್ಲಾ ಪತ್ರಕರ್ತರನ್ನು ನೆನೆಪಿಸಿಕೊಳ್ಳಿ. ಅದರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂಬುದು ಗೊತ್ತಾಗುತ್ತದೆ” ಅಂದೆ. ಆಗ ಅವರಿಗೆ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.
ಈ ದೇಶದ ಪತ್ರಿಕೆಗಳ ಸಂಪಾದಕರ ಜಾತಿಯಾವುದೆಂದು ಲೆಕ್ಕಹಾಕಿ, ಈ ಪತ್ರಿಕೆಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪತ್ರಕರ್ತರು ಯಾರು? ಅವರು ಯಾವ ಯಾವ ಜಾತಿಯವರು ಎಂದು ನೋಡುತ್ತಾ ಹೋದರೆ ಈ ದೇಶದ ಮಾಧ್ಯಮದಲ್ಲಿಯೂ ಎಷ್ಟೋ ವರ್ಷಗಳಿಂದ ಜಾತಿಯತೆ ಇತ್ತು ಎಂಬ ವಾಸ್ತವ ಅರ್ಥವಾಗುತ್ತದೆ. ಬಹಳಷ್ಟು ಮಂದಿ ತೀರಾ ಸಹಜವಾಗಿ ಈ ರಾಜ್ಯದಲ್ಲಿ ದೇವರಾಜಅರಸು ಅವರಿಂದ ಜಾತೀಯತೆ ಬಂತು ಎಂದು ಹೇಳ್ತಾರೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಯಾವಾಗ ಹಾವನೂರು ಆಯೋಗದ ವರದಿ ಅನುಷ್ಠಾನಕ್ಕೆ ಬಂತೋ, ಯಾವಾಗ ಅವಕಾಶ ವಂಚಿತರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಕ್ಕಿತೊ, ರಾಷ್ಟ್ರ ಮಟ್ಟದಲ್ಲಿ ಮಂಡಲ್ ಆಯೋಗದ ವರದಿ ಯಾವಾಗ ಜಾರಿಗೆ ಬಂತೋ, ಆಗ ಅವಕಾಶ ವಂಚಿತರಿಗೂ ಅವಕಾಶಗಳು ಕೆಲವು ಕ್ಷೇತ್ರಗಳಲ್ಲಿ ಸಿಗುವಂತಾಯಿತು. ಅದರ ನಂತರ ರಾಜಕೀಯವಾಗಿ ಕೂಡಾ ಈ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಯಿತು. ಆಗ ಇದ್ದಕ್ಕಿಂತ ಹಾಗೆ ರಾಜಕೀಯದಲ್ಲಿ, ಮಾಧ್ಯಮದಲ್ಲಿ ಎಲ್ಲಾ ಕಡೆ ಜಾತಿ ಬಂದಿದೆ ಎಂಬ ಅಭಿಪ್ರಾಯ ತೇಲಿಬರಲಾರಂಭಿಸಿತು.
1996ರಲ್ಲಿ ದೆಹಲಿಯಲ್ಲಿ ವಾಷಿಂಗ್ಟನ್ ಪೋಷ್ಟ್ ನ ಬ್ಯೂರೋ ಚೀಫ್ ಆಗಿದ್ದ ಆಫ್ರಿಕನ್ ಮೂಲಕ ಅಮೆರಿಕನ್ ಕೆನ್ನತ್ ಕೂಪರ್ ಅವರು ಮೊದಲ ಬಾರಿಗೆ ಭಾರತದ ಮಾಧ್ಯಮ ಲೋಕದಲ್ಲಿರುವ ಜಾತಿಯತೆ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಅವರು ಹುಡುಕುತ್ತಾ ಹೋಗುತ್ತಾರೆ. ಕಣ್ಣಿಗೆ ಬಹಳ ಮಂದಿ ಕಾಣೋದೆ ಇಲ್ಲ! ಉನ್ನತ ಹುದ್ದೆಗಳಲ್ಲಿ ಅವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾಕೆ ಹೀಗೆ ಎಂದು ಅವರು ಲೇಖನ ಬರೆಯುತ್ತಾರೆ. ‘ ಭಾರತದ ಮಾಧ್ಯಮಗಳಲ್ಲಿ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಕೆಳಜಾತಿಗಳ ಪ್ರಾತಿನಿಧ್ಯವೇ ಇಲ್ಲ’ ಎಂದು ಅವರು ಬರೆದಿದ್ದರು.
ಅದರ ನಂತರ ಬಿ.ಎನ್ ಉನಿಯಾಲ್ ಎಂಬ ಪಯೋನಿಯರ್ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಈ ಬಗ್ಗೆ ಲೇಖನದ ಮೂಲಕ ಗಮನಸೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ಪಿ ಮತ್ತು ಪತ್ರಕರ್ತರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎನ್ನುವುದನ್ನು ವರದಿ ಮಾಡಲು ಮಾಹಿತಿ ಸಂಗ್ರಹಕ್ಕಾಗಿ ದಲಿತ ಪತ್ರಕರ್ತರನ್ನು ಹುಡುಕಲು ಹೊರಡುತ್ತಾರೆ. ಅವರಿಗೆ ಯಾವ ದಲಿತ ಪತ್ರಕರ್ತರು ಸಿಗುವುದಿಲ್ಲ. ಇದರಿಂದ ಕಳವಳಗೊಂಡು 30 ವರ್ಷಗಳನ್ನು ಪತ್ರಿಕಾ ವೃತ್ತಿಯಲ್ಲಿ ಕಳೆದಿದ್ದ ಅವರು ಈ ಅವಧಿಯಲ್ಲಿ ತಾನು ಭೇಟಿ ಮಾಡಿದ ದಲಿತ ಪತ್ರಕರ್ತರು ಯಾರಿದ್ದಾರೆ ಎಂದು ನೆನಪುಮಾಡಿಕೊಳ್ಳಲು ಪ್ರಯತ್ತಿಸುತ್ತಾರೆ. ಅವರಿಗೆ ಒಂದೇ ಒಂದು ಹೆಸರು ನೆನಪಿಗೆ ಬರುವುದಿಲ್ಲ. ಇದನ್ನು ಅವರು ಮೊದಲ ಬಾರಿಗೆ ಪಯೋನಿಯರ್ ಪತ್ರಿಕೆಯಲ್ಲಿ ದಾಖಲಿಸುತ್ತಾರೆ.
ಇದರ ನಂತರ ರಾಬಿನ್ ಜೆಫ್ರಿಎಂಬ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಪ್ರಾಧ್ಯಾಪಕ ಇದರ ಬಗ್ಗೆ ಅಧ್ಯಯನ ಮಾಡಿ ಲೇಖನ ಬರೆದಿದ್ದಾರೆ. ‘ಹೆಚ್ಚು ಕಡಿಮೆ ಭಾರತದ ಮಾಧ್ಯಮದಲ್ಲಿ ದಲಿತ ವರದಿಗಾರರು ಮತ್ತು ಉಪ ಸಂಪಾಕದರು ಇಲ್ಲವೇ ಇಲ್ಲ. ದಲಿತರ ಮಾಲಿಕತ್ವದ ಪತ್ರಿಕೆಯಾಗಲಿ, ದಲಿತ ಸಂಪಾದಕರಾಗಲಿ ಇಲ್ಲವೇ ಇಲ್ಲ’ ಎಂದು ರಾಬಿನ್ ಜೆಫ್ರಿ ಬರೆದಿದ್ದರು. ‘ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್ ಗಳು ಏಕಪಕ್ಷೀಯವಾಗಿ ವರದಿ ಮಾಡಲು ಪತ್ರಿಕಾ ಕಚೇರಿಯಲ್ಲಿರುವ ಜಾತೀಯತೆ ಕಾರಣ’ ಎಂದು ಸಿದ್ದಾರ್ಥ ವರದರಾಜನ್ ‘ದಿ ಹಿಂದೂ’ ವಿನಲ್ಲಿ ಬರೆದಿದ್ದರು. ಇದರ ನಂತರ 2006ರಲ್ಲಿ ಸಿಎಸ್ ಡಿಎಸ್ ದೆಹಲಿಯಲ್ಲಿ ಮಾಡಿದ ಸಮೀಕ್ಷೆ ಇನ್ನಷ್ಟು ಕಳವಳಕಾರಿ ಅಂಶಗಳನ್ನು ಬಯಲು ಮಾಡಿತ್ತು. ಸಂಸ್ಥೆ ಸಮೀಕ್ಷೆ ನಡೆಸಿದ ದೆಹಲಿಯ 32 ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳ 315 ನೀತಿ ನಿರ್ಧಾರಕ ಹುದ್ದೆಗಳಲ್ಲಿ, ಹೆಚ್ಚುಕಡಿಮೆ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಶೇಕಡಾ 90 ಮತ್ತು ಟಿವಿ ಚಾನೆಲ್ ಗಳಲ್ಲಿ ಶೇಕಡಾ 79ರಷ್ಟು ಮೇಲ್ಜಾತಿ ಪತ್ರಕರ್ತರೇ ತುಂಬಿದ್ದರು’ ಎಂದು ಆ ಸಮೀಕ್ಷೆ ತಿಳಿಸಿತ್ತು. ಇದು ಇಂದಿನ ಭಾರತದ ಮಾಧ್ಯಮದ ಸ್ಥಿತಿ.
ಮಾಧ್ಯಮಗಳು ಹೀಗೆ ಯಾಕೆ ವರ್ತಿಸುತ್ತಿವೆ ಎಂಬ ಬಗ್ಗೆ ಮಾತನಾಡುವ ಮೊದಲು ದಿನಪತ್ರಿಕಗೆಳ, ಟಿ.ವಿ ಚಾನಲ್ ಗಳ ಮಾಲೀಕರು, ಮುಖ್ಯಸ್ಥರು ಯಾರು, ಅಲ್ಲಿನ ಟಾಪ್ 10 ಹುದ್ದೆಗಳಲ್ಲಿ ಯಾರಿದ್ದಾರೆ ಎಂದು ತಿಳಿದು ಕೊಂಡರೆ ಸಾಕು. ಆಗ ಯಾವ ಸರ್ಕಾರದ ಬಗ್ಗೆ, ಯಾವ ರಾಜಕಾರಣಿ ಬಗ್ಗೆ, ಯಾವ ಅಧಿಕಾರಿ ಬಗ್ಗೆ ಮಾಧ್ಯಮಗಳು ಯಾಕೆ ಹೀಗೆ ವರ್ತಿಸುತ್ತಿವೆ ಎನ್ನುವುದು ಗೊತ್ತಾಗಬಹುದು. ಇದು ಅಪ್ರಿಯವಾದ ಸತ್ಯ.
ಇದಕ್ಕೆಬಹಳಷ್ಟುಕಾರಣಗಳಿವೆ, ಅಧ್ಯಯನಗಳು ಕೂಡಾ ನಡೆದಿವೆ. ಇಂತಹ ಅಧ್ಯಯನ ಕನ್ನಡ ಮಾಧ್ಯಮ ರಂಗದ ಬಗ್ಗೆಯೂ ನಡೆಯಬೇಕಾಗಿದೆ. ದೆಹಲಿಯ ಏಜಾಜ್ ಆಶ್ರಫ್ ಎಂಬ ಪತ್ರಕರ್ತರೊಬ್ಬರು ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದರು. ದೆಹಲಿಯಲ್ಲಿ 1965ರಲ್ಲಿಯೇ ಸ್ಥಾಪನೆಗೊಂಡ ಸರ್ಕಾರಿ ಸ್ವಾಮ್ಯದ ಐಐಎಂಸಿ ಎಂಬ ಪತ್ರಿಕೋದ್ಯಮ ಪಾಠ ಮಾಡುವ ಸಂಸ್ಥೆ ಇದೆ. ಅಲ್ಲಿ ಮೀಸಲಾತಿಯೂ ಇರುವುದರಿಂದ ಒಂದಷ್ಟು ದಲಿತರು ಖಂಡಿತ ಅಲ್ಲಿ ಶಿಕ್ಷಣ ಪಡೆದಿರುತ್ತಾರೆ. ಹೀಗಿದ್ದರೂ ಅವರ್ಯಾರೂ ಪತ್ರಿಕಾ ಕಚೇರಿಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಏಜಾಜ್ ಆಶ್ರಫ್ ಅವರನ್ನು ಕಾಡುತ್ತದೆ. ಸರ್ಕಾರಿ ಕಾಲೇಜುಗಳು ಮತ್ತು ಯೂನಿರ್ವಸಿಟಿಗಳಲ್ಲಿ ಮೀಸಲಾತಿ ಸೌಲಭ್ಯದ ಮೂಲಕ ದಲಿತರು, ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರು ಅಡ್ಮೀಷನ್ ಪಡೆಯುತ್ತಾರೆ. ಆ ನಂತರ ಅವರಲ್ಲಿ ಎಷ್ಟು ಮಂದಿ ಈ ಮಾಧ್ಯಮ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ? ಅವರಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಏಜಾಜ್ ಆಶ್ರಫ್ ದಿ.ಹೂಟ್ (thehoot.org) ಎಂಬ ವೆಬ್ ಸೈಟ್ ನಲ್ಲಿ ಬಹಳ ದೀರ್ಘವಾದ ಲೇಖನ ಬರೆದಿದ್ದಾರೆ.
ಅದರಲ್ಲಿ ಸಂತೋಷ್ ವಾಲ್ಮೀಕಿ ಎಂಬ ದಲಿತ ಪತ್ರಕರ್ತನ ವ್ಯಥೆಯ ಕತೆ ಇದೆ. ಇವರು ಹಿಂದೂಸ್ಥಾನ ಟೈಮ್ಸ್ ನ ಲಕ್ನೋ ಬ್ಯೂರೋ ಚೀಫ್ ಆಗಿದ್ದಾರೆ. ಅವರೊಬ್ಬ ಕುಡುಕ ಚಾಲಕನ ಮಗ, ದೆಹಲಿಯ ಬೀದಿಗಳಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು . ಬಹಳ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾರೆ. ಆಮೇಲೆ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದಾಗ ಇಂಟರ್ ವ್ಯೂನಲ್ಲಿ . ‘ನೀನು ಪ್ರತಿದಿನ ಎಷ್ಟು ಪೇಪರ್ ಗಳನ್ನು ಓದುತ್ತಿ?’ ಎಂದು ಕೇಳಿದ್ದರಂತೆ. ‘ನಾನು ಪ್ರತಿದಿನ ಒಂಭತ್ತು ಪೇಪರ್ ಓದುತ್ತೇನೆ’ ಎಂದು ಅವರು ಉತ್ತರಿಸಿದ್ದರಂತೆ. ಸಂದರ್ಶಕರಿಗೆ ಆಶ್ಚರ್ಯ ಆಗುತ್ತದೆ. ಪತ್ರಿಕೆ ಮಾರುತ್ತಿದ್ದ ನಾನು ಆಸಕ್ತಿಯಿಂದ ಓದುವ ಹವ್ಯಾಸ ಬೆಳೆಸಿಕೊಂಡ ಕಾರಣದಿಂದಾಗಿ ಪತ್ರಕರ್ತನಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.. ಅದರ ನಂತರ ತಾನು ಹೇಗೆ ತಾನು ಪತ್ರಕರ್ತ ಆದೆ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವತ್ತು ಇಲ್ಲಿ ಸೇರಿರುವ ನೀವು ಇದನ್ನು ತಿಳಿದುಕೊಳ್ಳಬೇಕು.
ದೆಹಲಿಯ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ದಲಿತ ಪತ್ರಕರ್ತನನ್ನು ಏಜಾಜ್ ಆಶ್ರಫ್ ಭೇಟಿ ಮಾಡುತ್ತಾರೆ. ಜಾತಿಯಲ್ಲಿ ಕುರುಬನಾಗಿರುವ ಈ ಪತ್ರಕರ್ತ ತಾನು ಹೇಗೆ ಇಂಗ್ಲೀಷ್ ಕಲಿತೆ ಎನ್ನುವುದನ್ನು ಹೇಳುತ್ತಾನೆ. ಈತ ಇಂಗ್ಲೀಷ್ ಪತ್ರಿಕೆಗಳನ್ನು ಓದಿ ಅದರಲ್ಲಿ ತನಗೆ ಅರ್ಥವಾಗದ ಪದಗಳನ್ನು ನೋಟ್ ಮಾಡಿಕೊಂಡು ಅವಗಳಿಗೆ ಶಬ್ದಕೋಶ ನೋಡಿ ಅರ್ಥ ಬರೆದುಕೊಳ್ಳುತ್ತಿದ್ದನಂತೆ. ಇಂಗ್ಲೀಷ್ ವಾಕ್ಯಗಳನ್ನು ಏಕಾಂತದಲ್ಲಿ ಕೂತು ಜೋರಾಗಿ ಉಚ್ಚರಿಸಿ ಓದುತ್ತಿದ್ದನಂತೆ.ಕೊನೆಗೆ ಬಿಪಿಓ ಸೇರಿಕೊಂಡು ಅಲ್ಲಿ ವಾಯ್ಸ್ ಟ್ರೇನಿಂಗ್ ಪ್ರೋಗ್ರಾಮ್ ಮೂಲಕ ಇಂಗ್ಲೀಷ್ ಉಚ್ಚಾರ ಕಲಿತಿದ್ದನಂತೆ.
ಅಂದರೆ ಈ ಭಾರತದ ವ್ಯವಸ್ಥೆ ಹೇಗಿದೆಯೆಂದರೆ ಕೆಲವರು ಲಿಫ್ಟ್ನಲ್ಲಿ ಸರ್ರನೆ ಮೇಲೇರಿ ಹೋಗಿಬಿಡುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗುತ್ತದೆ. ನೀವೆಲ್ಲಾ ಏನಿಲ್ಲಿ ಸೇರಿದ್ದೀರಿ, ನೀವು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಲಿಫ್ಟ್ ಸಿಗೋದಿಲ್ಲ. ಇದು ಭಾರತದ ಇವತ್ತಿನ ಮಾಧ್ಯಮದ ಪರಿಸ್ಥಿತಿ.
ಮಾಧ್ಯಮದಲ್ಲಿಯಾಕೆ ಎಲ್ಲ ಜಾತಿ-ಧರ್ಮಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಯಾರಾದರೂ ಕೇಳಬಹುದು. ನೋಡಿ, ಇತ್ತೀಚೆಗೆ ಮೀಸಲಾತಿಯಾಕೆ ಬೇಕು ಎಂಬ ಬಗ್ಗೆ ದೊಡ್ಡದಾಗಿ ಡಿಬೇಟ್ ನಡೆಯುತ್ತಿದೆ. ಈ ಪ್ರಶ್ನೆಗೆ ಮಾಧ್ಯಮ ರಂಗದಲ್ಲಿ ಉತ್ತರ ಇದೆ. ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಇದೆ. ರಾಜಕೀಯದಲ್ಲಿ ದಲಿತರ ಪ್ರಾತಿನಿಧ್ಯ ಇರುವುದಕ್ಕೆ ಮೀಸಲಾತಿ ಕಾರಣ. ಆದರೆ ಮೀಸಲಾತಿ ಇಲ್ಲದ ಮಾಧ್ಯಮದಲ್ಲಿ, ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ ಇಲ್ಲ. ಅಂದರೆ ಮೀಸಲಾತಿ ಕಾನೂನಿನ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ಸಿಕ್ಕಿದೆ ವಿನಃ ಅದು ಅವರ ಅರ್ಹತೆಯನ್ನು ಗುರುತಿಸಿ ಕೊಟ್ಟದ್ದಲ್ಲ.
ಮನುಷ್ಯ ಪರಿಸರದ ಕೂಸು. ದಲಿತರು, ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಾಡಿನಿಂದ, ಬಡಕುಟುಂಬಗಳಿಂದ ಮತ್ತು ರೈತ ಸಮುದಾಯದಿಮದ ಬಂದವರು. ಅವರಿಗೆ ಹೊರಜಗತ್ತಿನ exposure ಬಹಳ ಕಡಿಮೆ. ನನ್ನ ಮಗಳಿಗೆ ಸಿಕ್ಕ exposure ನನಗೆ ಸಿಕ್ಕಿರಲಿಲ್ಲ. ನಾನು ಕುಗ್ರಾಮದಿಂದ ಬಂದವನು. ದೋಣಿಯಲ್ಲಿ ಹೋಗಿ ಕಾಲೇಜು ಶಿಕ್ಷಣ ಮುಗಿಸಿದವನು. ಮುಂಗಾರು ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದಾಗಲೂ ನಿತ್ಯ ದೋಣಿ ದಾಟಿಕೊಂಡೇ ಮಂಗಳೂರು ಹೋಗುತ್ತಿದ್ದವನು. ನನಗೆ ಲಿಫ್ಟ್ ಸಿಕ್ಕಿರಲಿಲ್ಲ, ಮೆಟ್ಟಿಲು ಹತ್ತಿಕೊಂಡೇ ಬಂದವನು. ನಾನು ಆಗಲೆ ಹೇಳಿದ ಹಾಗೆ ನಾವೆಲ್ಲ ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗಿದೆ. ಪ್ರತಿಭೆ ಹುಟ್ಟಿನಿಂದಲೇ ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಅದು ಅರಳುತ್ತದೆ ಅಷ್ಟೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿಯೂ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಗದೆ ಅವರಲ್ಲಿ ಎಷ್ಟೊ ಪ್ರತಿಭೆಗಳು ಮುದುಡಿಹೋಗುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನನ್ನು ಸುಲಭದಲ್ಲಿ ನಾಶಮಾಡಬಹುದು. ಅದು ಬಹಳ ಸುಲಭ, ಏಕೆಂದರೆ ಅವನಿಗೆ ನೀವು ಹೊಡೆಯಬೇಕಾಗಿಲ್ಲ. ಬಡಿಯಬೇಕಾಗಿಲ್ಲ, ದೈಹಿಕವಾಗಿ ಹಲ್ಲೆ ನಡೆಸಬೇಕಾಗಿಲ್ಲ. ಅವನಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವು ಕೆಲಸ ಬಿಟ್ಟು ಓಡಿ ಹೋಗುತ್ತಾನೆ. ದೆಹಲಿಯಲ್ಲಿ ಸರ್ವೆ ನಡೆದಾಗ ಬಹಳಷ್ಟು ಮಂದಿ ಪತ್ರಿಕೋದ್ಯಮದ ವ್ಯಾಸಂಗ ಪಡೆದು ವೃತ್ತಿಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ಇದೇ ಉತ್ತರ ಕೊಟ್ಟಿದ್ದಾರೆ.
ತಮಿಳುನಾಡಿನ ಒಂದಷ್ಟು ದಲಿತ ಪತ್ರಕರ್ತರು ಕೂಡಾ ಇಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಅವನ್ನು ಓದಿದರೆ ನಿಮಗೆ ಅರ್ಥವಾಗುತ್ತದೆ. ಪತ್ರಿಕಾ ಕಚೇರಿಗಳಲ್ಲಿ ಒಬ್ಬ ದಲಿತನನ್ನು, ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅದರ ವಿವರಗಳಿಗೆ ಹೋಗುವುದಿಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ. ಮಾನಸಿವಾಗಿ ಕಿರುಕುಳ ಕೊಟ್ಟಾಗ ಅವನ ತಲೆ ಓಡುವುದಿಲ್ಲ. ಅವನಿಂದ ತಪ್ಪುಗಳಾಗುತ್ತವೆ. ಹಳ್ಳಿಗಾಡಿನ ಜನ, ದಲಿತರು, ಹಿಂದುಳಿದವರ್ಗಗಳ ಜನ ಮಾತನಾಡುವ ಭಾಷೆ ಒರಟಾಗಿರುತ್ತದೆ. ಇವತ್ತು ಟಿ.ವಿ ಚಾನಲ್ ಗಳಲ್ಲಿ ಗ್ರಾಂಥಿಕವಾದ ಮಂಗಳೂರು ಕನ್ನಡ ಮಾತನಾಡುವವರಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತಿದೆ. ಈ ಕಾರಣದಿಂದಾಗಿಯೇ  ಹೆಚ್ಚಿನ ಆ್ಯಂಕರ್ ಗಳು ಮಂಗಳೂರಿನಿಂದ ಬಂದವರಾಗಿದ್ದಾರೆ. ರಾಯಚೂರು, ಗುಲ್ಬರ್ಗಾ, ಧಾರವಾಡ ಕಡೆಯ ಭಾಷೆ ಅಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಸಿನಿಮಾ, ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತ. ಭಾಷೆಗೂ ಐಡೆಂಟಿಟಿ ಇದೆ ಎನ್ನುವುದನ್ನು ತಿಳಿದುಕೊಂಡು ಅವರ ಅನುಭವಕ್ಕೂ ಒಂದು ಬೆಲೆ ಇದೆ ಎಂದು ಗುರುತಿಸಿ ಅವಕಾಶ ನೀಡುವ ಮಾಧ್ಯಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
 ನಾನು ಕೆಲಸ ಮಾಡಿದ ಪ್ರHari Kumarಜಾವಾಣಿಯಲ್ಲಿ ನೀವು ಇಲ್ಲಿ ಸೇರಿರುವ ವರ್ಗದಿಂದ ಬಂದವರು ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಪೊನ್ನಪ್ಪ, ಬಿ.ಕೆ ರವಿ ಎಲ್ಲ ಪ್ರಜಾವಾಣಿ ಯಿಂದ ಬಂದವರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಕೂಡಾ ಬಹಳ ಪ್ರಜ್ಞಾ ಪೂರ್ವಕವಾಗಿ ಮಾಡಿದ ಬದಲಾವಣೆ. ಕೆ.ಎನ್.ಹರಿಕುಮಾರ್ ಅವರು ತಮ್ಮ ಅಜ್ಜನಿಂದ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡ ನಂತರ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸೇರಿಸಿಕೊಳ್ಳಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಹಳಷ್ಟು ಜನ ಈ ವರ್ಗಕ್ಕೆ ಸೇರಿದವರಿಗೆ ಅವಕಾಶ ಸಿಗುವಂತಾಯಿತು. ಅವರೆಲ್ಲರೂ ಪ್ರತಿಭಾವಂತ ಪತ್ರಕರ್ತರು. ರಂಜಾನ್ ದರ್ಗಾ ರಿಂದ ಹಿಡಿದು ಇಂದೂಧರ್ ಹೊನ್ನಾಪುರ, ಶಿವಾಜಿ ಗಣೇಶನ್, ಡಿ.ವಿ ರಾಜಶೇಖರ್ ಮೊದಲಾದವರು ಪತ್ರಕರ್ತರಾಗಿದ್ದು ಹೀಗೆ. ಒಬ್ಬ ಸಂಪಾದಕ ಪ್ರಜ್ಞಾ ಪೂರ್ವಕವಾಗಿ ಆ ನಿರ್ಧಾರ ಮಾಡಿದ ಕಾರಣಕ್ಕಾಗಿ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಅವರು ಬೆಳೆಯಲು ಸಾಧ್ಯವಾಯಿತು.
ಇದು ನಮ್ಮ ಇವತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿಲ್ಲ.
ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪ್ರಚಾರ ಸಿಗ್ತಾ ಇಲ್ಲ ಎಂದು ಕೆಲವರು ಬಂದು ನನ್ನ ಹತ್ತಿರ ದು:ಖ ತೋಡಿಕೊಳ್ತಾರೆ. ಪ್ರಚಾರ ಅಂದ್ರೆ ಏನು? ಎಂದು ನನಗೂ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ನೀವು ಮೀಡಿಯಾವನ್ನು ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೊಡುತ್ತಾರೆ. ಇದನ್ನು ನಮ್ಮ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ನನಗೂ ಅದರಲ್ಲಿ ನಂಬಿಕೆ ಇಲ್ಲ.
ಮಾಧ್ಯಮಕ್ಕೊಂದು ಧರ್ಮವಿದೆ. ಆ ಪತ್ರಿಕಾ ಧರ್ಮವನ್ನು ಸಂಪಾದಕ, ಪತ್ರಕರ್ತ ಪಾಲಿಸಿದರೆ ಯಾವುದೇ ಮ್ಯಾನೇಜ್ ಮೆಂಟ್ ಬೇಕಿಲ್ಲ. ಯಾವ ಒತ್ತಡವೂ ಬೇಕಿಲ್ಲ. ಯಾವ ಆಮಿಷಗಳು ಬೇಕಿಲ್ಲ. ಪತ್ರಿಕೆಗಳು, ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಕು. ನಮ್ಮ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ಅವರ ವಿರುದ್ದ ಯಾವುದೇ ವರದಿ ಬಂದರೂ ಇಲ್ಲಿಯವರೆಗೂ ಅವರು ಯಾವ ಮಾಧ್ಯಮ ಪ್ರತಿನಿಧಿಗೂ ಪೋನ್ ಮಾಡಿ ಯಾಕೆ ಇದನ್ನು ಬರೆದಿದ್ದೀಯಾ ಅಂತ ಕೇಳಿಲ್ಲ. ನನ್ನ ಹತ್ತಿರವೂ ‘ನೀನು ಇದನ್ನು ಕೇಳಬೇಕು’ ಎಂದು ಹೇಳಿಲ್ಲ.
ಸರ್ಕಾರದ ಪರವಾಗಿ ಇಲ್ಲಿ ಪ್ರಚಾರಕ್ಕೆ ನಾನು ಬಂದಿಲ್ಲ. ಉದಾಹರಣೆಗಾಗಿ ಹೇಳುತ್ತಿದ್ದೇನೆ. ಅನ್ನಭಾಗ್ಯ ಎಂಬ ಯೋಜನೆಯಿಂದ ರಾಜ್ಯದ ಸುಮಾರು 1 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಅಂತ ತಿಳಿದುಕೊಂಡರೂ 4 ಕೋಟಿ ಜನರಿಗೆ ಇದರ ಪ್ರಯೋಜನ ತಲುಪುತ್ತಿದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಇದರ ಫಲಾನುಭವಿಗಳು. ಇದನ್ನು ಈಗ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಕೂಡ ಮಾಧ್ಯಮ ದಲ್ಲಿ ಅನ್ನ ಭಾಗ್ಯ ದಲ್ಲಿ ಕಲ್ಲು ಹುಡುಕಾಟದ ಪ್ರವೃತ್ತಿ ಇವತ್ತಿಗೂ ನಿಂತಿಲ್ಲ. ಯೋಜನೆಯ ಅನುಷ್ಟಾನದಲ್ಲಿ ಒಂದಷ್ಟು ಲೋಪ-ದೋಷಗಳು ಖಂಡಿತ ಇರಬಹುದು. ಕಳ್ಳ ಸಂತೆ, ದುರುಪಯೋಗ ಇತ್ಯಾದಿ ಆಗುತ್ತಿರಬಹುದು. ಲಾಭದ ಲೆಕ್ಕ ಹಾಕಿದರೆ ದೋಷಗಳು ನಗಣ್ಯವಾದುದು. ಹೀಗಿದ್ದರೂ ಯಾಕೆ ನೆಗೆಟಿವ್ ಪ್ರಚಾರ? ರಾಜ್ಯದ ಜನಸಂಖ್ಯೆಯಲ್ಲಿ ಶೇ. 80 ರಷ್ಟು ಜನ ದಲಿತರು, ಹಿಂದುಳಿದವರ್ಗಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತರು. ಅವರೆಲ್ಲರೂ ಅನ್ನಭಾಗ್ಯದ ಫಲಾನುಭವಿಗಳು. ಈ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಭಾವನೆಗಳನ್ನು ರಿಪ್ಲೆಕ್ಟ್ ಮಾಡುತ್ತಿದೆಯೇ?. ಏಕೆಂದರೆ ಈ ಫಲಾನುಭವಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದಿಲ್ಲ. ಅನ್ನ ಭಾಗ್ಯದಿಂದ ನಮಗೆ ಲಾಭವಾಗಿದೆ ಎಂದು ಬೀದಿಗೆ ಬಂದು ಕೂಗಿ ಹೇಳುವುದಿಲ್ಲ. ಟಿ.ವಿ ಚಾನಲ್ ಗಳ ಸ್ಟುಡಿಯೋಗಳಲ್ಲಿ ಬಂದು ಚರ್ಚೆಯಲ್ಲಿ ಕೂರುವುದಿಲ್ಲ. ಅವರಿಗೆ ಧ್ವನಿ ಇಲ್ಲ. ದನಿ ಇಲ್ಲದವರಿಗೆ ಮಾಧ್ಯಮ ದನಿ ಅಗಬೇಕಲ್ಲವೇ?.
ಶಾದಿ ಭಾಗ್ಯಬಗ್ಗೆ ದೊಡ್ಡ ವಿವಾದ ಆಯ್ತು. ಯಾಕೆ ಆಗಬೇಕು? ಯಾರು ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಒಂದಿಷ್ಟು ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡಿನಿಂದ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವರು ಏನಾದ್ರೂ ಮಾಡ್ಲಿ, ಶಾದಿ ಭಾಗ್ಯನಾದ್ರೂ ಮಾಡ್ಲಿ, ಇನ್ನೂಂದು ಮಾಡ್ಲಿ, ಅದು ಅವರ ಬಜೆಟ್. 1000 ಕೋಟಿ ರೂಪಾಯಿ ಏನು ಕೊಟ್ಟಿದೆ ಅದು ಅವರ ದುಡ್ಡು. ಆದರೆ ಬರೀ ಮುಸ್ಲಿಮರಿಗೆ ಯಾಕೆ ಕೊಟ್ಟಿದ್ದೀರಿ? ಉಳಿದವರಿಗೆ ಯಾಕೆ ಕೊಟ್ಟಿಲ್ಲ ಅಂದ್ರೆ, ಉಳಿದವರಿಗೆ ಬೇರೆ ಸೌಲಭ್ಯಗಳಿವೆ ಅದನ್ನು ಅವರು ತಗೋಳ್ತಾರೆ. ಈ ರೀತಿ ಹೇಳುವಂತಹ ಸಮಚಿತ್ತದ ಬರವಣಿಗೆ ನಮಗೆ ಕಾಣುತ್ತಿಲ್ಲ.
ಇನ್ನು ಮೂಢನಂಬಿಕೆ ನಿಷೇಧ ಮಸೂದೆ. ಇಲ್ಲಿ ಸೇರಿರುವ ನಮಗೆಲ್ಲರಿಗೂ ಸಂಭಂಧಿಸಿದ್ದು ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬಂತಲ್ಲಾ, ಆ ರೀತಿ ವರದಿ ಮಾಡಿದವರಲ್ಲಿ ಕೆಲವರನ್ನು ಮಸೂದೆ ಪೂರ್ಣವಾಗಿ ಓದಿದ್ದೀರಾ ಎಂದು ಕೇಳೀದ್ದೇನೆ. ಬಹಳ ಮಂದಿ ಧೈರ್ಯದಿಂದ ಓದಿದ್ದೇನೆ ಎಂದು ಉತ್ತರಿಸಿಲ್ಲ. ಹೆಚ್ಚಿನವರು ಮಸೂದೆಯಲ್ಲಿನ ಪ್ರಿಯಾಂಬಲ್ ಓದಿ ಭಾವುಕರಾಗಿ ಅತಿರೇಕದ ವರದಿಗಳನ್ನು ಮಾಡಿದ್ದರು. ಮೂಲ ಮಸೂದೆಯಲ್ಲಿ ಅಂತಹ ಯಾವುದೇ ವಿಷಯಗಳಿರಲಿಲ್ಲ. ಆದರೆ ಆ ರೀತಿಯ ಪ್ರಚಾರ, ಒತ್ತಡಗಳಿಂದ ಸರ್ಕಾರವೇ ಹಿಂದೆ ಸರಿಯಬೇಕಾಯಿತು. ಇಂದು ಮೂಢನಂಬಿಕೆ ಕಾಯ್ದೆ ಯಾರಿಗೆ ಬೇಕಾಗಿದೆಯೆಂದರೆ ಅಶಿಕ್ಷಿತರಿಗೆ, ಬಡವರಿಗೆ ಬೇಕು. ದಲಿತ, ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ ಬೇಕು. ಏಕೆಂದರೆ ಶೋಷಣೆಗೀಡಾಗುತ್ತಿರುವವರು ಇದೇ ಸಮುದಾಯದವರು. ಇದೇ ಸಮುದಾಯದ ದನಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದರೆ ಇವತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರುತ್ತಿತ್ತು. ಬಹುಶಃ ಎಂ.ಎಂ ಕಲಬುರ್ಗಿ ಅವರ ಹತ್ಯೆಯೂ ಆಗುತ್ತಿರಲಿಲ್ಲ.
ನಮ್ಮ ಮಾಧ್ಯಮಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಮಾತನಾಡುವಾಗ ಈ ಮಾಧ್ಯಮಗಳಲ್ಲಿರುವ ತಾರತಮ್ಯ, ಪೂರ್ವಗ್ರಹಗಳನ್ನು ಮರೆತು ಮಾತನಾಡುವಂತಿಲ್ಲ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ ಭಾಷಾ ಪತ್ರಿಕೋದ್ಯಮದಲ್ಲಿ, ಕನ್ನಡ ,ಹಿಂದಿ ಗುಜರಾತಿ ಮೊದಲಾದ ಭಾಷೆಗಳ ಪತ್ರಿಕೆಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲಿ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದರೆ ತಾವು ಅನುಭವಿಸುತ್ತಿರುವ ಅವಮಾನ, ಕಿರುಕುಳಗಳ ಕತೆ ಹೇಳಬಹುದು. ಪ್ರತಿಭೆ ಒಂದಿದ್ದರೆ ಸಾಲದು, ವೃತ್ತಿಯಲ್ಲಿ ಎದುರಾಗುವ ಅನ್ಯಾಯ, ಅವಮಾನ, ಪ್ರತಿಕೂಲಗಳನ್ನು ಎದುರಿಸಲೂ ಅವನು ರೆಡಿಯಾಗಬೇಕು. ಮತ್ತೆ ಮತ್ತೆ ನಾನು ಹೇಳುತ್ತೇನೆ ಪ್ರಜಾವಾಣಿಯಲ್ಲಿ ನಾನುprajavani ವಿವೇಕಾನಂದ ಅವರ ಬಗ್ಗೆ ಅಂಕಣ ಬರೆದೆ. ನಾನು ಸುಳ್ಳು ಬರೆದಿಲ್ಲ, ಅವರಿಗೆ ಅವಮಾನ ಮಾಡಿಲ್ಲ, ವಿವೇಕಾನಂದರು ಮಾಂಸ ತಿನ್ನುತಿದ್ದರು ಎನ್ನುವುದನ್ನು ನಾನು ಈಗಲೂ ಹೇಳುತ್ತೇನೆ, ಅದನ್ನು ವಿರೋಧಿಸುವವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಕರೆದರೆ ನಾನು ಸಿದ್ದ. ವಿವೇಕಾನಂದರು ಮಾಂಸಹಾರಿಗಳಲ್ಲ ಎಂದು ಅವರು ಸಾಬೀತು ಮಾಡಿದರೆ ನಾನು ಬರೆಯುವ ಹವ್ಯಾಸದಿಂದಲೇ ನಿವೃತ್ತಿ ಆಗುತ್ತೇನೆ. ಸತ್ಯವನ್ನೇ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.ನಮ್ಮ ಪತ್ರಿಕೆಗೆ,ನನಗೆ ಬೆದರಿಕೆ ಎದುರಾಯಿತು. ನಾನು ಇದರ ಬಗ್ಗ ಉಲ್ಲೇಖ ಮಾಡಲು ಕಾರಣ ಇದೆ. ಅಂತಹದ್ದೊಂದು ಅಂಕಣ ಬರೆದು ನಾನು ಪಾರಾಗಲೂ ಕಾರಣ ಆಗ ನನ್ನ ಸಂಪಾದಕರಾಗಿದ್ದ ಕೆ.ಎನ್ ಶಾಂತಕುಮಾರ್. ಅವರು ನನ್ನ ಪರವಾಗಿ ಕಲ್ಲು ಬಂಡೆಯಂತೆ ನಿಂತಿದ್ದರು. ಆತ ತಪ್ಪು ಬರೆದಿಲ್ಲ, ಅದಕ್ಕಾಗಿ ಅವನಾಗಲಿ, ನಾನಾಗಲಿ ಕ್ಷಮೆ ಕೇಳೋದಿಲ್ಲ ಎಂದು ಅವರು ಗಟ್ಟಿಯಾಗಿ ನಿಂತುಬಿಟ್ಟರು.ಈ ರೀತಿಯ ಸಂಪಾದಕರಿದ್ದರೆ ಮಾತ್ರ ಸಾಮಾಜಿಕ ಕಳಕಳಿಯ ಪತ್ರಿಕೋದ್ಯಮ ನಡೆಸಿಕೊಂಡು ಹೋಗಲು ಸಾಧ್ಯ.
ಮಾಧ್ಯಮ ರಂಗದಲ್ಲಿರುವ ಪೂರ್ವಗ್ರಹಕ್ಕೆ ಇತ್ತೀಚಿನ ಇಬ್ಬರು ಸ್ವಾಮಿಗಳ ಉದಾಹರಣೆ ಸಾಕು. ರಾಘವೇಶ್ವರ ಸಾಮೀಜಿಯ ಪ್ರಕರಣವನ್ನು ಬಹಳಷ್ಟು ಮಂದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿ ಒಬ್ಬ ಹಿಂದುಳಿದ ಜಾತಿಯವ, ರಾಘವೇಶ್ವರ ಸ್ವಾಮೀಜಿ ಬ್ರಾಹ್ಮಣ. ಈ ಹೋಲಿಕೆ ತಪ್ಪು ಅಂತ ನನಗೆ ಅನಿಸುವುದಿಲ್ಲ. ನಿತ್ಯಾನಂದ ಸ್ವಾಮಿಗೆ ಮಾಧ್ಯಮದಲ್ಲಿ ಸಿಕ್ಕ ಟ್ರೀಟ್ ಮೆಂಟ್ ರಾಘವೇಶ್ವರ ಸ್ವಾಮೀಜಿಗೆ ಸಿಗಲಿಲ್ಲ. ನನಗೆ ಒಬ್ಬ ಪತ್ರಕರ್ತ ಹೇಳುತ್ತಿದ್ದ ನಿತ್ಯಾನಂದನ ಆಶ್ರಮದ ಕಾಂಪೌಂಡ್ ಹೊರಗಡೆ ಕಾಂಡೂಮ್ ಗಳನ್ನು ಹಾಕಿ ಅವರೇ ಅದನ್ನು ಶೂಟ್ ಮಾಡಿ ನೋಡಿ ನಿತ್ಯಾನಂದಸ್ವಾಮೀಜಿ ಕಾಂಪೌಂಡ್ ಹೊರಗಡೆ ಕಾಂಡೊಂಮ್ ಸಿಕ್ಕಿದೆ ಅವರು ವ್ಯಭಿಚಾರಿ ಎಂದು ತೋರಿಸಿದ್ದರಂತೆ.
ನೀವು ಖೈರ್ಲಾಂಜಿ ಬಗ್ಗೆ ಕೇಳಿದ್ದೀರಿ. ದಲಿತರ ಇಡೀ ಕುಟುಂಬವನ್ನೆ ಹತ್ಯೆ ಮಾಡಲಾಯಿತು. ಮೊದಲು ಅಲ್ಲಿಯ ಎಲ್ಲಾ ಪತ್ರಿಕೆಗಳು ಇದೊಂದು ಅನೈತಿಕ ಸಂಬಂಧ ಎನ್ನುವ ರೀತಿ ವರದಿ ಮಾಡಿವೆ. ನಂತರ ಬೇರೆ ಕಡೆಗಳಿಂದ ಹೋದ ಪತ್ರಿಕಾ ವರದಿಗಾರರು, ಕೆಲವು ದಲಿತ್ ಆಕ್ಟಿವಿಟಿಸ್ ಗಳು, ಅದರಲ್ಲೂ ಇಂಗ್ಲೀಷ್ ಪತ್ರಿಕೆಗಳು ಗಮನ ಸೆಳೆದಾಗ ನಿಜಸಂಗತಿ ಬಯಲಿಗೆ ಬಂತು. ನೀವು ಕಂಬಾಲಪಲ್ಲಿ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳನ್ನು ನೋಡಿ, ಕೋಮುಗಲಭೆಗಳನ್ನು ನೋಡಿ ನಮಗೆ ಮಾಧ್ಯಮಗಳಲ್ಲಿರುವ ಜಾತಿ ಪೂರ್ವಗ್ರಹ ಗೊತ್ತಾಗುತ್ತದೆ.
ನನಗೆ ವಿಶ್ವದ ಬಹುದೊಡ್ಡ ಬುದ್ದಿಜೀವಿ ನೋಮ್ ಚಾಮ್ ಸ್ಕಿ ಹೇಳಿರುವ ‘ಸಮ್ಮತಿಯ ಉತ್ಪಾದನೆ’ (Manufacturing conseChomskynt) ನೆನಪಾಗುತ್ತದೆ. ಅಂದರೆ ಅಭಿಪ್ರಾಯಗಳನ್ನು ಉತ್ಪಾದನೆ ಮಾಡೋದು. ಉದಾಹರಣೆಗೆ ದಲಿತರ ಮೇಲೆ ಮೇಲ್ಜಾತಿಯ ಜನ ಹಲ್ಲೆ ನಡೆಸಿದಾಗ ನೀವು ಅದನ್ನು ದಲಿತರ ಮೇಲಿನ ಹಲ್ಲೆ ಅಂತಲೂ ರಿಪೋರ್ಟ್ ಮಾಡಬಹುದು, ಇಲ್ಲವೆ ಎರಡು ಗುಂಪುಗಳ ನಡುವಿನ ಘರ್ಷಣೆ ಅಂತಲೂ ರಿಪೋರ್ಟ್ ಮಾಡಬಹುದು. ಆದರೆ ಬಹಳ ಸಾರಿ ವೈಯುಕ್ತಿಕ ಕಾರಣಕ್ಕಾಗಿ ಹಲ್ಲೆ ಯಾಗಿದೆ, ಅನೈತಿಕ ಸಂಬಂಧದ ಕಾರಣಕ್ಕಾಗಿ ಹೆಣ್ಣುಮಗಳನ್ನು ಸಾಯಿಸಿದ್ದಾರೆ ಎಂದೆಲ್ಲ ವರದಿಯಾಗುತ್ತದೆ. ರೈತರ ಪ್ರತಿಭಟನೆ, ಸತ್ಯಾಗ್ರಹಗಳನ್ನು ದೊಂಬಿ ಎಂದು ಬರೆಯುವುದೂ ಉಂಟು.
 ಕೋಮುಗಲಭೆಗಳ ವರದಿಗಳಲ್ಲಿಯೂ ಇಂತಹ ಲೋಪಗಳನ್ನು ಕಾಣಬಹುದು. ಕೋಮುಗಲಭೆಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರನ್ನು ವಿಲನ್ ಗಳನ್ನಾಗಿ ಮಾಡಲಾಗುತ್ತದೆ. ಮುಸ್ಲಿಮರು ಪ್ರಚೋದಿಸಿದರು, ಅದಕ್ಕಾಗಿ ಹಿಂದೂಗಳು ಸೇಡು ತೀರಿಸಿಕೊಂಡರು ಎನ್ನುವ ವರದಿಗಳು ಸಾಮಾನ್ಯ. ದೆಹಲಿಯ ಪಕ್ಕದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಭೀಫ್ ಇದೆ ಎಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಕೊಂದುಬಿಟ್ಟರು. ಅಲ್ಲಿ ಬೀಫ್ ಇರಲಿಲ್ಲ ಎಂದು ತನಿಖೆ ಹೇಳುತ್ತಿದೆ. ಅರ್ನಾಬ್ ಗೋಸ್ವಾಮಿ ಇದರ ಬಗ್ಗೆ ಎಷ್ಟು ಷೋ ಮಾಡಿದರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಂಬಳಿ ತಗೋಂಡ್ರು, ಚಾಪೆ ತಗೋಂಡ್ರು ಅಂತ 1 ಗಂಟೆ ಬೇಕಾದರೆ ಅವರು ಚರ್ಚೆ ಮಾಡ್ತಾರೆ. ಇಂತಹ ಉದಾಹರಣೆಗಳನ್ನು ಬಹಳಷ್ಟು ಕೊಡುತ್ತಾ ಹೋಗಬಹುದು. ಆದರೆ ಇದಕ್ಕೆ ಪರಿಹಾರವೇನು? ಸುಲಭದ ಪರಿಹಾರ ನೀವೆಲ್ಲರೂ ಲಿಫ್ಟ್ ಗಾಗಿ ಕಾಯದೆ ಮೆಟ್ಟಿಲು ಹತ್ತಿಕೊಂಡು ಹೋಗಲಿಕ್ಕೆ ರೆಡಿಯಾಗಬೇಕು.
ನನ್ನ ತಾಯಿ ಅನಕ್ಷರಸ್ಥೆ, ನನ್ನ ತಂದೆ ಬ್ಯಾಂಕ್ ಜವಾನರಾಗಿದ್ದರು. ಬಿ.ಕಾಂ ಓದಿದ್ದೇ ನಾನು ಬ್ಯಾಂಕ್ ಗೆ ಸೇರಲಿಕ್ಕೆ. ಆದರೆ ಬ್ಯಾಂಕ್ ಸೇರಬೇಕೆಂದು ಅನಿಸಲಿಲ್ಲ. ಪತ್ರಿಕೋದ್ಯಮದ ಹಾದಿ ಸುಗಮವಾಗಿ ಇರಲಿಲ್ಲ. ಮುಂಗಾರು ಪತ್ರಿಕೆ ಯಲ್ಲಿ ತಿಂಗಳ ಸಂಬಳವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಬಹಳ ಕಷ್ಟ ಪಟ್ಟು ಇಲ್ಲಿಯ ವರೆಗೆ ಬಂದಿದ್ದೇನೆ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಬೇಕು ಎಂಬ ಛಲ ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆ. ಪತ್ರಕರ್ತರು ಟ್ರಾನ್ಸ್ ಫರ್ ಎಂದರೆ ಕಂಗಾಲಾಗಿ ಬಿಡುತ್ತಾರೆ. ಎಲ್ಲರಿಗೂ ಬೆಂಗಳೂರು ಬೇಕು, ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಬೇಡ. ಬೆಂಗಳೂರಿನಲ್ಲಿದ್ದ ನನ್ನನ್ನು ಟ್ರಾನ್ಸ್ ಫರ್ ಮಾಡುತ್ತೇನೆ ಎಂದು ಹೇಳಿದಾಗ ‘ಎಲ್ಲಾದ್ರೂ ಮಾಡಿ, ಮರುಭೂಮಿಗಾದ್ರೂ ಮಾಡಿ ಹೋಗ್ತೀನಿ’ ಎಂದು ಹೇಳಿದ್ದೆ. ಮರುಭೂಮಿಯಲ್ಲಿ ಒಳ್ಳೆಯ ವರದಿಗಳನ್ನು ಮಾಡಲು ಅವಕಾಶಗಳಿರುತ್ತವೆ. ಇದರಿಂದಾಗಿಯೇ ನನಗೆ ದೆಹಲಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮಾನಸಿಕವಾಗಿ ಇಂತಹದ್ದೊಂದು ಸಿದ್ಧತೆ ಮಾಡಿಕೊಳ್ಳದಿದ್ದರೆ, ಅಧ್ಯಯನ ಮಾಡದಿದ್ದರೆ, ಸಮಾಜವನ್ನು ಎದುರಿಸುವುದನ್ನು ಕಲಿಯದಿದ್ದರೆ ಪತ್ರಕರ್ತರಾಗಲು ಕಷ್ಟವಾಗಬಹುದು. ನಿಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು, ಜತೆಗೆ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನೂ ಮಾಡಬೇಕು.
ಈ ನಿಟ್ಟಿನಲ್ಲಿ ಸರ್ಕಾರಮತ್ತುವೃತ್ತಿಸಂಬಂಧಿಸಂಸ್ಥೆಗಳುಕೂಡಾ ಒಂದಿಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಒಂದು ಉದಾಹರಣೆ ಕೊ746px-ChicagoDefender.svgಟ್ಟು ಮಾತು ಮುಗಿಸುತ್ತೇನೆ. 1978 ರಲ್ಲಿ ಅಮೆರಿಕನ್ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ (ASNE) ಅಲ್ಲಿನ ಮಾಧ್ಯಮಗಳಲ್ಲಿ ಕಪ್ಪು ಜನಾಂಗದವರ ಪ್ರಾತಿನಿಧ್ಯ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅಲ್ಲಿನ ಜನಸಂಖ್ಯೆಯಲ್ಲಿ ಕರಿಯರು ಶೇ.36 ರಷ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಅವರು ಪ್ರಾತಿನಿಧ್ಯ ಕೇವಲ ಶೇ 4 ರಷ್ಟು ಮಾತ್ರ ಎಂದು ಸಮೀಕ್ಷೆಯಿಂದ ತಿಳಿದುಬಂದಿತ್ತು. 2000 ನೇ ವರ್ಷದಲ್ಲಿ ಅಮೆರಿಕದ ಮಾಧ್ಯಮ ಕ್ಷೇತ್ರದಲ್ಲಿ ಕರಿಯರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇರುವಂತೆ ಮಾಡಬೇಕೆಂದು ASNE ನಿರ್ಧಾರಕ್ಕೆ ಬರುತ್ತದೆ. ಅಲ್ಲಿರುವ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕ್ಯೂಲೇಶನ್ ಇರುವ 1446 ಪತ್ರಿಕೆಗಳಲ್ಲಿ 950 ಪತ್ರಿಕೆಗಳು ಅಸೋಸಿಯೇಷನ್ನಿನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತವೆ. ಅವರೇನೂ ಮೀಸಲಾತಿ ಕೊಡುವುದಿಲ್ಲ. ಅವರಿಗಾಗಿ ಉದ್ಯೋಗ ಮೇಳ ನಡೆಸುತ್ತಾರೆ, ತರಬೇತಿಕೊಡುತ್ತಾರೆ, ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸುತ್ತಾರೆ.ಇದನ್ನು ಮಾಡ್ತಾ, ಮಾಡ್ತಾ 2000 ಇಸವಿಗೆ ಅಲ್ಲಿಯ ಕರಿಯರ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚದೆ ಇದ್ದರೂ ಅದು ಶೇ.13ಕ್ಕೆ ತಲುಪಿತ್ತು. ಇವತ್ತು ಅಮೇರಿಕಾದಲ್ಲಿ ದಲಿತರದ್ದೇ ಆದ ‘ಎಬೋನಿ’ ‘ಚಿಕಾಗೋ ಡಿಫೆಂಡರ್’ ಮೊದಲಾದ ಪತ್ರಿಕೆಗಳಿವೆ.
ಚೆನ್ನೈ ನಲ್ಲಿರುವ ‘ಏಷ್ಯನ್ಸ್ಕೂಲ್ಆಫ್ಜರ್ನಲಿಸಂ’ ದಲಿತರಿಗೆ ಸ್ಕಾಲರ್ಶಿಪ್ ಕೊಡ್ತಾರೆ. ಅದಕ್ಕೆ ಬೇಕಾದ ಅಭ್ಯರ್ಥಿಗಳೇ ಸಿಕ್ತಾ ಇಲ್ಲವಂತೆ. ನಮ್ಮಲ್ಲೂ ಕೂಡ ಕೊರತೆಗಳಿವೆ. ಆ ಮಟ್ಟದ ಎಂಟ್ರೆನ್ಸ್ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿಗಳು ಬೇಕಾಗುತ್ತವೆ. ದಲಿತ ಅಭ್ಯರ್ಥಿಗಳು ಸಿಗದೆ ಇದ್ದಾಗ ಆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇತ್ತೀಚೆಗೆ ಆ ಸಂಸ್ಥೆಯ ಸ್ಕಾಲರ್ ಶಿಫ್ ಪಡೆದು ಹಲವಾರು ದಲಿತರು ಜರ್ನಲಿಸ್ಟ್ ಗಳಾಗಿದ್ದಾರೆ. ಇಂತಹ ಪ್ರಯತ್ನ ಎಲ್ಲಾ ಕಡೆಗಳಿಂದಲೂ ನಡೆಯಬೇಕು. ಇದಕ್ಕೆ ಅಮೇರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಮಾಡಿದ ಕೆಲಸವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಡಬೇಕು, ಪತ್ರಕರ್ತರ ಸಂಘಗಳು ಮಾಡ ಬೇಕು, ಪತ್ರಿಕೆಗಳೂ ಮಾಡಬೇಕು.
ನಮ್ಮ ಪತ್ರಕರ್ತರ ಸಂಘಟನೆಗಳುಲಕ್ಷಾಂತರ ರೂಪಾಯಿಕಲೆಕ್ಟ್ಮಾಡಿ, ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಒಳ್ಳೆಯ ಊಟ ಹಾಕುವುದರಿಂದ ಒಳ್ಳೆಯ ಪತ್ರಕರ್ತರನ್ನು ರೂಪಿಸಲು ಸಾಧ್ಯವಿಲ್ಲ. ನೀವು ಬಸ್ ಪಾಸ್ ತೆಗೊಳ್ಳಿ, ಸೈಟ್ ತಗೊಳ್ಳಿ, ಪರವಾಗಿಲ್ಲ, ಒಬ್ಬರಿಗೆ ಒಂದು ಸೈಟ್ ಇರಬೇಕು. ನಾನು ಅದರ ಪರವಾಗಿ ಇದೀನಿ, ಆದರೆ ಕಸುಬುಗಾರಿಕೆಯನ್ನು ಪ್ರೋಫೆಷನಲಿಸಂ ಬೆಳೆಸಲು ಏನು ಮಾಡಿದಿರಿ ಎಂಬುದನ್ನು ಸರ್ಕಾರದ ನೆರವಿನಿಂದಲೇ ನಡೆ07-asiancollegeofjournalismಯುತ್ತಿರುವ ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಅಮೇರಿಕಾದ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ಡಿ ಮಾಡಿದ ಸಮೀಕ್ಷೆಯನ್ನು ನಾವೇಕೆ ಮಾಡಲಾಗುತ್ತಿಲ್ಲ. ಕನ್ನಡದ ಮಾಧ್ಯಮಗಳಲ್ಲಿ ಅಹಿಂದ ವರ್ಗಕ್ಕೆ ಸೇರಿದವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಸರ್ವೇ ಮಾಡಬಹುದು. ವಿರೋಧ ಎದುರಾಗಬಹುದು. ಇದೊಂದು ಅಹಿಂದ ಸರಕಾರ ಅದಕ್ಕೆ ಈ ಸರ್ವೆ ಎಂಬ ಟೀಕೆಗಳು ಬರಬಹುದು. ನಾನು ನನ್ನ ಬ್ರೀಫ್ ಮೀರಿ ಮಾತನಾಡುತ್ತಿದ್ದೇನೆ.. ಎಂದು ನನಗೂ ಅನ್ನಿಸುತ್ತಿದೆ…ನಿಮಗೂ ಅನ್ನಿಸಬಹುದು. ಆದರೆ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಲಿಕ್ಕೆ ಮಾತನಾಡುತ್ತಿದ್ದೇನೆ.
 ಕೇವಲ ರಾಜಕೀಯದಲ್ಲಿ ಅಹಿಂದ ಬಂದರೆ ಅದು ಯಶಸ್ವಿಯಾಗುವುದಿಲ್ಲ. ಅದು ಮಾಧ್ಯಮ, ಉದ್ಯಮ,ಶಿಕ್ಷಣ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಬರಬೇಕು. ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದಲ್ಲ. ಎಲ್ಲರಿಗೂ ನ್ಯಾಯವನ್ನು ಕೊಡುವಂತಹುದು. ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಧೀರ್ಘವಾದ ಪರಂಪರೆ ಇದೆ. ಸಾಮಾಜಿಕ ನ್ಯಾಯದ ಮೊದಲ ಚಳುವಳಿಕಾರ ಬಸವಣ್ಣ. ಬಸವಣ್ಣನಿಂದ ಪ್ರಾರಂಭವಾದರೂ ಅದರ ನಂತರ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಆದರೆ ಕೇವಲ ರಾಜಕೀಯದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಅಂತ ನೀವು ತೀರ್ಮಾನಿಸಿಬಿಟ್ಟರೆ, ಸಾಮಾಜಿಕ ನ್ಯಾಯವನ್ನು ಅಲ್ಲಿಯೂ ಅನುಷ್ಠಾನಕ್ಕೆ ಬರಲಿಕ್ಕೆ ಈ ವ್ಯವಸ್ಥೆ ಬಿಡುವುದಿಲ್ಲ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಅಂತ ಹೇಳದೆ ಇದ್ದಿದ್ದರೆ ಇವತ್ತು ಕನ್ನಡ ಸಾಹಿತ್ಯ ಈ ಪ್ರಮಾಣದಲ್ಲಿ, ಆಳ-ಅಗಲಕ್ಕೆ ಬೇರು-ಬಿಳಲು ಬಿಟ್ಟು ಬೆಳೆಯುತ್ತಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಅವರು ಆ ರೀತಿ ಹೇಳಿದಾಗ ಇಡೀ ಕನ್ನಡ ಸಾಹಿತ್ಯಲೋಕದ ಬರಹಗಾರರು ಮತ್ತು ಓದುಗರು ಬೆಚ್ಚಿಬಿದ್ದಿದ್ದರು. ಅಂತಹದ್ದೊಂದು ಶಾಕ್ ‍ಟ್ರೀಟ್ ಮೆಂಟ್ ಮಾಧ್ಯಮ ಕ್ಷೇತ್ರಕ್ಕೂ ಅಗತ್ಯ ಇದೆ. ಮಾಧ್ಯಮದಲ್ಲಿ ಸಮಾಜದ ಪ್ರತಿಬಿಂಬ ಕಾಣಬೇಕು. ಅದರಲ್ಲಿ ಒಡಕಲು ಬಿಂಬ ಕಾಣಬಾರದು. ಪರಿಪೂರ್ಣ ಚಿತ್ರ ಕಾಣಬೇಕು. ಅದು ನಮಗೆ ಕಾಣ್ತಾ ಇದೆಯಾ? ಎಂಬುದು ಇವತ್ತಿನ ಪ್ರಶ್ನೆ. ಏಕೆಂದರೆ ಮಾಧ್ಯಮವಾಗಲಿ, ಸಾಹಿತ್ಯವಾಗಲಿ, ರಾಜಕೀಯವಾಗಲಿ ಅಲ್ಲಿ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಭಾಗವಹಿಸದೇ ಇದ್ದರೆ, ಅದರಲ್ಲಿ ಎಲ್ಲಾ ಲೋಕದ ಅನುಭವಗಳು ಅಭಿವ್ಯಕ್ತಿಗೊಳ್ಳದೆ ಇದ್ದರೆ, ಅದು ಅಪೂರ್ಣವಾಗುತ್ತದೆ. ಅದು ಪಾರ್ಶಿಯಲ್ ಆಗಿರುತ್ತದೆ. ಬಯಾಸ್ಡ್ ಅಗಿರುತ್ತದೆ.
 ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು. ಅದು ಅಸ್ತವ್ಯಸ್ತವಾದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಮಾಧ್ಯಮ ಕೂಡಾ . ನಮ್ಮ ರಾಜಕೀಯ ಧುರೀಣರು ಪ್ರಜ್ಞಾವಂತರಿದ್ದಾರೆ ಅವರು ಸಾಮಾಜಿಕ ನ್ಯಾಯವನ್ನು ವಿರೋಧಿಸಲಾರರು. ಏಕೆಂದರೆ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಆಶಯ. ನೀವು ಆ ನ್ಯಾಯವನ್ನು ಕೊಡದೆ ಇದ್ದರೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೀರಿ ಎಂದೇ ಅರ್ಥ. ಬಹಳ ಕಷ್ಟ ಇದೆ. ನನ್ನ ಕಿರಿಯ ದಲಿತ ಸ್ನೇಹಿತ ಲಿಂಗರಾಜ್ ಅಂತ ಇಲ್ಲಿದ್ದಾರೆ. ಈತ ಹಟ್ಟಿ ಗೋಲ್ಡ್ ಮೈನ್ ನ ಕಾರ್ಮಿಕರ ಮಗ. ನಾಲ್ಕು ವರ್ಷದ ಹಿಂದೆ ನನ್ನ ಆಫೀಸ್ ಗೆ ಬಂದಿದ್ದ. ಅವನು ಡಿಗ್ರಿ ಮಾಡಿದ್ದ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದ. ಅವನು ಪಿ.ಹೆಚ್.ಡಿ ಮಾಡಲಿಕ್ಕೆ ರಿಜಿಸ್ಟರ್ ಮಾಡಿದ್ರೆ ಅವನಿಗೆ ಗೈಡ್ ಮಾಡಲಿಕ್ಕೆ ಯಾರೂ ಒಪ್ತಾ ಇಲ್ಲ. ಇದು ಅವನೊಬ್ಬನ ಕಥೆಯಲ್ಲ. ಈ ಸಮುದಾಯದ ಅನೇಕ ವಿದ್ಯಾರ್ಥಿಗಳು, ಹುಡುಗರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಹ ಸಂಘಟನೆಗಳ ಬೆಂಬಲ ಅವರಿಗೆ ಬೇಕಾಗಿದೆ.
 ಸರ್ಕಾರವೇ ಮುಂದೆ ನಿಂತು ಎಲ್ಲವನ್ನೂ ಮಾಡಲಾಗುವುದಿಲ್ಲ. ಇಲ್ಲಿರುವ ಹಿರಿಯರು, ಸಮುದಾಯದಲ್ಲಿರುವ ಪ್ರಜ್ಞಾವಂತರು ಎಲ್ಲಾ ಜಾತಿ, ವರ್ಗದ ಜನ ಇಂತಹವರ ಬೆಂಬಲಕ್ಕೆ ನಿಂತು ಬೆಳೆಸಬೇಕಾಗಿದೆ. ಆ ಕೆಲಸವನ್ನು ಮಾಧ್ಯಮ ಅಕಾಡೆಮಿ ಮತ್ತು ಪತ್ರಕರ್ತರ ಸಂಘಟನೆಗಳು ಮಾಡುತ್ತದೆ. ರಾಜಕೀಯ ಧುರೀಣರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸುತ್ತೇನೆ.

Friday, October 2, 2015

'ನಾವೆಲ್ಲರೂ ವಿಷವನ್ನು ಇಡೀ ದೇಹದಲ್ಲಿ ಪಡೆದಿರುವ ಸರ್ಪಗಳು, ಗೋಡ್ಸೆ ಅದರ ಹಲ್ಲು ಮಾತ್ರ'-
ಹೀಗೆಂದು ಗಾಂಧೀಜಿ ಹತ್ಯೆಯಾದ ದಿನ ದು:ಖಿಸಿದವರು ನಿನ್ನೆಯಷ್ಟೇ 117ನೇ ಜನ್ಮ ದಿನವನ್ನು ನಾವು ಆಚರಿಸಿದ ಸಾಹಿತಿ ವಿ.ಸೀತರಾಮಯ್ಯ.
ಅಂದ ಹಾಗೆ ಈ ಮಾತುಗಳನ್ನು ಯು.ಆರ್.ಅನಂತಮೂರ್ತಿ ಅವರು 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂದು ಗಾಂಧೀಜಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಓದಬೇಕೆನ್ನುವವರು ಅನಂತಮೂರ್ತಿಯವರು ಬರೆದಿರುವ ಈ ಕೊನೆಯ ಪುಸ್ತಕ ಓದಬಹುದು. ನಾನು ಮತ್ತೊಮ್ಮೆ ಓದಿದೆ

Tuesday, September 29, 2015

ಕವಿತೆಗೆ ಕೆಟ್ಟಕಾಲ

ಗೊತ್ತು, ಖುಷಿಯಾದ ಮನುಷ್ಯನನ್ನು
ಎಲ್ಲ ಇಷ್ಟಪಡುತ್ತಾರೆ; ಅವನ ಮಾತಿನ ಧ್ವನಿಯೇ ಸುಖಕರ
ಅವನ ಮುಖ ಕೂಡ ಬಲು ಚಂದ
ಅಂಗಳದಲ್ಲಿ ಒಣಗುತ್ತ ಇರುವ ಮರ
ವಿಕಾರಗೊಂಡದ್ದಕ್ಕೆ ಕಾರಣ
ನೀರು ಸಾಲದೆ ಒಣಗಿದ ಬಿರುಕು ನೆಲ,
ಆದರೆ ದಾರಿಹೋಕರು ಮರವನ್ನು ಮಾತ್ರ ಕಂಡು ಗೊಣಗುತ್ತಾರೆ
ಇದು ಸಹಜವೇ
ಸುಂದರವಾದ ದೋಣಿಗಳಾಗಲಿ

ಗಾಳಿಗುಬ್ಬಿದ ಹಾಯಿಗಳಾಗಲೀ
ನನಗೆ ಕಾಣಲ್ಲ
ಕಾಣೋದು ಮೀನುಗಾರರ ಛಿದ್ರಗೊಂಡ ಬಲೆಗಳು
ನಡುಪ್ರಾಯದಲ್ಲೇ ಬಾಗಿದ ಬೆನ್ನಿನ ಹಳ್ಳಿಯ ಹೆಂಗಸನ್ನು
ಮಾತ್ರ ಯಾಕೆ ನಾನು ಕಾಣುತ್ತೇನೆ?
ತುಂಬಿದೆದೆಯ ಹುಡುಗಿಯರೂ ಇದಾರೆ
ನನ್ನ ಪದ್ಯದಲ್ಲಿ ಹಿತಕರವಾದ ಪ್ರಾಸ ಮೂಡಿಬಂದರೆ
ಅಶ್ಲೀಲವೆಂದು ನನಗೆ ಯಾಕೆ ಮುಜುಗರವಾಗುತ್ತೆ?
ಸೇಬಿನ ಮರದ ಹೂಗಳನ್ನು ಕಂಡು ಪುಳಕಿತನಾಗುತ್ತೇನೆ;
ಕೆಡವಿ ಕಟ್ಟಬೇಕಾದ ಶಿಥಿಲಗೊಂಡ ಹಳೆಮನೆಗಳಿಗೆ
ಹೊಸಬಣ್ಣ ಹಚ್ಚಿ ಮರುಳುಗೊಳಿಸುವ ದುರುಳನ
ಭಾಷಣ ಕೇಳಿ ದಿಗಿಲು ಬೀಳುತ್ತೇನೆ
ಆದರೆ ಎರಡನೆಯ ಸಂಗತಿ ಮಾತ್ರ ನನ್ನನ್ನು
ಬರೆಯುವ ಮೇಜಿಗೆ ತರುತ್ತೆ
_ ಇದು ಬರ್ಟೋಲ್ಟ್ ಬ್ರೆಕ್ಟ್ ನ ಕವನ. ಇದನ್ನು ಅನುವಾದಿಸಿದವರು ಮತ್ತೆಮತ್ತೆ ನೆನೆಪಾಗುವ ಯು.ಆರ್.ಅನಂತಮೂರ್ತಿ. ಮೊದಲ ಮಹಾಯುದ್ಧದ ನಂತರ ದರಿದ್ರಗೊಂಡ ಜರ್ಮನಿಯನ್ನು ‘ಅಭಿವೃದ್ಧಿ’ ಪಥದಲ್ಲಿ ತರುವವನೆಂಬ ಭ್ರಮೆಯನ್ನು ಹಿಟ್ಲರ್ ಹುಟ್ಟಿಸಿದ್ದ ಕಾಲದಲ್ಲಿ ಬ್ರೆಕ್ಟ್ ಈ ಕವನ ಬರೆದಿದ್ದ. ಹೀಗೆಂದು ಯುಆರ್ಎ ಅಡಿಟಿಪ್ಪಣಿಯಲ್ಲಿ ಬರೆದಿದ್ದಾರೆ.
ಕಳೆದ ಕೆಲವು ದಿನಗಳ ಪತ್ರಿಕೆಗಳ ಮುಖಪುಟ ಸುದ್ದಿಗಳು, ಬಿತ್ತರವಾಗುತ್ತಿರುವ ಟಿವಿ ಸುದ್ದಿ ಮತ್ತು ಡಿಬೇಟ್ ಗಳು, ಸೋಷಿಯಲ್ ಮೀಡಿಯಾದಲ್ಲಿ ಗೋಳಿಡುತ್ತಾ ನಮ್ಮ ನಮ್ಮೊಳಗೆ ಜಗಳ ತಂದುಹಾಕಿ ಮಜಾ ನೋಡುತ್ತಿರುವ ಕೂಗುಮಾರಿಗಳು..... ಇವೆಲ್ಲವನ್ನು ನೋಡಿ ಅನುಭವಿಸಿ ಸಂಕಟಪಡುತ್ತಿದ್ದಾಗ ಎಂದೋ ಓದಿದ ಬ್ರೆಕ್ಟ್ ನ ಕವಿತೆಯ ಕನ್ನಡಾನುವಾದದ ಸಾಲುಗಳು ನೆನಪಾಯಿತು. ಪುಸ್ತಕ ಹುಡುಕಿ ದೂಳು ಜಾಡಿಸಿ ಕೈಯಲ್ಲಿ ಹಿಡಿದು ಓದಿದಾಗ ಮನಸ್ಸು ನಿರಾಳವಾಯಿತು. ಅಬ್ದುಲ್ ರಷೀದ್ ಪೋಸ್ಟ್ ಗೆ ಅವಸರದಲ್ಲಿ ಲೈಕ್ ಬಟನ್ ಒತ್ತಿ, ಕೊನೆಗೆ ಅದನ್ನು ಸಮರ್ಥಿಸಿಕೊಳ್ಳಲಾಗದೆ ಅರ್ಧಗಂಟೆ ನನ್ನ ಜತೆ ತಾರಾಮಾರಿ ಜಗಳವಾಡಿದ ಅರ್ಹನಿಷಿಯ ಅಕ್ಷತಾ ಪ್ರಕಟಿಸಿರುವ ಕವನ ಸಂಕಲನ ಇದು. ಏರುದನಿಯಲ್ಲಿ ಜಗಳವಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ಅವರೂ ಇದನ್ನೊಮ್ಮೆ ಓದಲಿ ಎಂದು ವಿನಂತಿಸುತ್ತೇನೆ.
ನೀವೂ ಓದಿ. ಓದಿದ ಮೇಲೆ ಯಾರೋ ಎಲ್ಲ, ಏನೋ ಎಲ್ಲ ನೆನಪಾದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಅದು ಬ್ರೆಕ್ಟ್ ನ ಕವಿತೆಯ ಶಕ್ತಿ.

Monday, September 28, 2015

ಭಗವಾನ್ ಅವರನ್ನು ಗಲ್ಲಿಗೇರಿಸೋಣವೇ?

ಚಿಂತಕ ಭಗವಾನ್ ಅವರು ರಾಮನ ಬಗ್ಗೆ ಆಡಿದ ಮಾತಿನಲ್ಲಿಯಾಗಲಿ, ‘ಭಗವಾನ್ ಅವರೊಬ್ಬ ಕೆಟ್ಟ ಬರಹಗಾರ’ ಎಂದು ಕವಿ ಅಬ್ದುಲ್ ರಷೀದ್ ಅವರು ವಿಚಾರಣೆ ನಡೆಸದೆ ನೀಡಿರುವ ಏಕಮುಖ ತೀರ್ಪಿನಲ್ಲಾಗಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಭಗವಾನ್ ಹೇಳಿರುವುದು ತಪ್ಪೆಂದು ಹೇಳುವುದಾದರೆ ರಷೀದ್ ಹೇಳಿದ್ದು ಸರಿ ಎಂದು ಹೇಗೆ ಹೇಳಲು ಸಾಧ್ಯ? ಎರಡೂ ವಿವಾದ ಹುಟ್ಟಿಸುವ ಉದ್ದೇಶದ ಬೀಸು ಹೇಳಿಕೆಗಳು.
ಭಗವಾನ್ ಅವರ ಬಗ್ಗೆ ನನ್ನಂತಹವರಿಗೂ ಇರುವ ಆಕ್ಷೇಪ ಅವರ ಮಾತುಗಳ ಬಗ್ಗೆಯೇ ಹೊರತು ಅವರ ಬರವಣಿಗೆಗಳ ಬಗ್ಗೆ ಅಲ್ಲ. ಸದ್ಯ ವಿವಾದಕ್ಕೀಡಾಗಿರುವುದು ಕೂಡಾ ಅವರ ಮಾತುಗಳೇ ಹೊರತು ಬರವಣಿಗೆಯಲ್ಲ. ಯಾಕೆಂದರೆ ಬರವಣಿಗೆ ಅದರಷ್ಟಕ್ಕೆ ಒಂದು ದಾಖಲೆ, ಅದನ್ನು ಮತ್ತೊಬ್ಬರು ತಿರುಚಲು ತಿದ್ದಲು ಆಗುವುದಿಲ್ಲ. ಆದರೆ ಮಾತುಗಳು ಹಾಗಲ್ಲ. ಮಾತಿನಲ್ಲಿ ಮೌನಕ್ಕೂ ಅರ್ಥವಿರುತ್ತದೆ. ಅದನ್ನು ಸಮಯ-ಸಂದರ್ಭ, ಧ್ವನಿಯ ಏರಿಳಿತಗಳನ್ನು ಮರೆತು ಬರೆದಾಗ ಆಭಾಸವಾಗುತ್ತದೆ. ಆದಿ-ಅಂತ್ಯಗಳನ್ನು ಕತ್ತರಿಸಿದರೆ ಅಪಾರ್ಥವಾಗುತ್ತದೆ. ಮಂಡಿಸುವ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುವ ಸಮಯವಾಕಾಶ ಮಾತಿನಲ್ಲಿ ಇರುವುದಿಲ್ಲ. ಆಕಾಶವಾಣಿಯಲ್ಲಿ ಕೆಲಸಮಾಡುತ್ತಿರುವ ರಷೀದ್ ಅವರಿಗೆ ಇದು ನನಗಿಂತಲೂ ಚೆನ್ನಾಗಿ ಗೊತ್ತಿದೆ. ಅವರ ಯಾವ ಮಾತುಗಳು ಮಾಧ್ಯಮಗಳಲ್ಲಿ ಯಾಕೆ ಹೈಲೈಟ್ ಆಗುತ್ತಿವೆ ಎಂದು ತಮ್ಮ ಅಂಕಣವನ್ನು ಪತ್ರಿಕೆಯೊಂದು ತಿರಸ್ಕರಿಸಿದ ಬಗ್ಗೆ ನೋವುಂಡ ರಷೀದ್ ಅವರಿಗೆ ವಿವರಿಸಿ ಹೇಳುವ ಅಗತ್ಯವಿದೆಯೇ?
ರಷೀದ್ ಅವರು ಭಗವಾನ್ ಅವರನ್ನು ಕೆಟ್ಟಬರಹಗಾರರೆಂದು ತೀರ್ಮಾನಿಸಲು ಆಯ್ಕೆಮಾಡಿಕೊಂಡ ಸಮಯ-ಸಂದರ್ಭ ನನ್ನಲ್ಲಿ ಅಚ್ಚರಿಮೂಡಿಸಿದೆ. ಭಗವಾನ್ ರಷೀದ್ ಅವರಿಗೆ ಕೆಟ್ಟ ಬರಹಗಾರರಾಗಿ ಕಾಣಿಸಿಕೊಂಡದ್ದು ಯಾವ ದಿನದಿಂದ? ರಷೀದ್ ಅವರೇ ಹೇಳಿಕೊಂಡಂತೆ ಅವರು ಭಗವಾನ್ ಬರೆದುದನ್ನು ಸಾಕಷ್ಟು ಓದಿಕೊಂಡಿದ್ದಾರೆ. ಮೈಸೂರಿನಲ್ಲಿಯೇ ಇರುವ ರಷೀದ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅವರ ಹೇಳಿಕೆಗಳನ್ನು ಕೂಡಾ ಓದಿರಬಹುದು. ಆಗೆಲ್ಲ ಮೌನವಾಗಿದ್ದ ರಷೀದ್ ಇದ್ದಕ್ಕಿದ್ದ ಹಾಗೆ ಭಗವಾನ್ ಅವರಿಗೆ ಜೀವಮಾನದ ಸಾಧನೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದಾಗ, ಅದೂ ಒಂದಷ್ಟು ಕೂಗುಮಾರಿಗಳು ಅದರ ವಿರುದ್ದ ಬೊಬ್ಬಿಡುತ್ತಿದ್ದಾಗ ಮತ್ತು ಕೆಲವು ದುರುಳರು ಅವರಿಗೆ ಪ್ರಾಣಬೆದರಿಕೆ ಒಡ್ಡುತ್ತಿರುವಾಗ ಥಟ್ಟನೆ ಪ್ರತಿಕ್ರಿಯಿಸಿ ಭಗವಾನ್ ಒಬ್ಬ ಕೆಟ್ಟ ಬರಹಗಾರನೆಂದು ತೀರ್ಪು ನೀಡಿರುವ ಉದ್ದೇಶ ಕೇವಲ ಅವರ ಬರವಣಿಗೆಯ ವಿಮರ್ಶೆ ಮಾತ್ರವೇ? ಇದರಿಂದ ಯಾರ ದನಿಯನ್ನು ಬಲಪಡಿಸಬಹುದು, ಯಾರಿಗೆ ಖುಷಿಯಾಗಬಹುದು ಎಂದು ರಷೀದ್ ಅವರಂತಹ ಸೂಕ್ಷ್ಮ ಮನಸ್ಸಿನ ಕವಿಗೆ ಗೊತ್ತಾಗಲಿಲ್ಲವೇ? ಇಲ್ಲ ನಮ್ಮ ಕೆಲವು ಸ್ನೇಹಿತರು ಗುಟ್ಟಾಗಿ ಗೊಣಗಾಡುತ್ತಿರುವಂತೆ ಯಾರನ್ನೋ ಖುಷಿಪಡಿಸುವ ಉದ್ದೇಶ ರಷೀದ್ ಅವರಿಗಿತ್ತೇ? ರಷೀದ್ ಅವರನ್ನು ಬಲ್ಲ ನಾನು ಈ ಸ್ನೇಹಿತರ ಮಾತನ್ನು ಒಪ್ಪುವುದಿಲ್ಲವಾದರೂ ಅಂತಹದ್ದೊಂದು ಅನುಮಾನ ಮೂಡುವುದು ಸಹಜವಲ್ಲವೇ?
ರಷೀದ್ ಅವರು ಪ್ರತಿಕ್ರಿಯಿಸುತ್ತಾ ಭಗವಾನ್ ಅವರ ಬರಹಗಳು ನನಗೆ ಅರ್ಥವಾಗಿಲ್ಲ ಎಂದು ಒಂದೆಡೆ ಹೇಳಿದ್ದಾರೆ. ನಮಗೆ ಅರ್ಥವಾಗದಿರುವುದನ್ನೆಲ್ಲ ಗುಡಿಸಿ ಕಸದ ಬುಟ್ಟಿಗೆ ಹಾಕಬಹುದೇ? ಸಾಹಿತ್ಯವನ್ನು ರಷೀದ್ ಅವರಷ್ಟು ಓದಿಕೊಳ್ಳದ ನನಗೆ ಅವರು ಬರೆದ ಕವನಗಳು ಅರ್ಥವಾಗುವುದಿಲ್ಲ. ನಾನೇನು ಮಾಡಲಿ? ನನಗಂತೂ ಭಗವಾನ್ ಅವರು ಬರೆದುದು ಅರ್ಥವಾಗಿದೆ. ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿದ ಚಿಂತಕರಲ್ಲಿ ಭಗವಾನ್ ಕೂಡಾ ಒಬ್ಬರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ.
ನಮ್ಮ ಸಾಹಿತಿಗಳ ಬಗ್ಗೆ ಇರುವ ಸಾಮಾನ್ಯ ಆರೋಪ ಅವರ ಆತ್ಮವಂಚಕ ನಡವಳಿಕೆ. ಬಹಿರಂಗವಾಗಿ ‘ಚಡ್ಡಿಗಳು’ ಎಂದು ಹೀಯಾಳಿಸುತ್ತಾ ಅಂತರಂಗದಲ್ಲಿ ಅಂತಹ ‘ಚಡ್ಡಿ’ಗಳ ಒಡನಾಟದಲ್ಲಿರುವ ಸಾಹಿತಿಗಳನ್ನು ನಾನು ಕಂಡಿದ್ದೇನೆ. ಇದನ್ನೆಲ್ಲ ನೋಡುವಾಗ ನಮಗೆ ಗೊತ್ತಿರುವ ಶತ್ರುಗಳಾದ ಚಡ್ಡಿಗಳೇ ವಾಸಿ ಎಂದು ನನಗೂ ಒಮ್ಮೊಮ್ಮೆ ಅನಿಸಿದೆ. ಧೀರೋದ್ದಾತ ಹೇಳಿಕೆ ನೀಡಿ ಅಪಾಯ ಎದುರಾದಾಗ ಜಾರಿಕೊಳ್ಳುವ ಸಾಹಿತಿಗಳು, ಹೋರಾಟಗಾರರನ್ನೂ ನಾವು ನೋಡಿದ್ದೇವೆ. ಭಗವಾನ್ ಕನಿಷ್ಠ ಇಂತಹ ಆತ್ಮವಂಚಕ ಮತ್ತು ಪುಕ್ಕಲು ಬರಹಗಾರರ ಗುಂಪಿಗೆ ಸೇರಿದವರಲ್ಲ ಎನ್ನುವ ಕಾರಣಕ್ಕಾಗಿಯಾದರೂ ಅವರನ್ನು ಗೌರವಿಸಬೇಕಲ್ಲವೇ?
‘ಭಗವಾನ್ ಅವರು ಸಾಯ್ಲಿ ಬಿಡಿ’ ಎಂದು ನಾವೆಲ್ಲ ಅಂದುಕೊಳ್ಳುವಷ್ಟು ಮಹಾ ಅಪರಾಧವನ್ನು ಅವರು ಮಾಡಿದ್ದಾರೆಯೇ ಎನ್ನುವುದಷ್ಟೇ ಈಗ ನಾವೆಲ್ಲ ನಮ್ಮ ಅಂತರಾತ್ಮವನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ. ಅವರ ಜತೆಗಿನ ಭಿನ್ನಾಭಿಪ್ರಾಯಗಳನ್ನೆಲ್ಲ ಪಕ್ಕಕ್ಕಿಟ್ಟು ಸದ್ಯಕ್ಕೆ ಪ್ರಾಣ ಭಯದಲ್ಲಿರುವ ಅವರ ಪಕ್ಕದಲ್ಲಿ ನಿಂತು ನೈತಿಕವಾಗಿ ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ನಮಗನಿಸದಿದ್ದರೆ ನಮ್ಮನ್ನು ನಾವು ಕ್ಷಮಿಸುವುದು ಹೇಗೆ ಹೇಳಿ ರಷೀದ್? ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ನಾನು ಸಾಹಿತ್ಯವನ್ನು ಓದುತ್ತೇನೆ. ಓದುಗನಾಗಿ ನಾನು ಅಂದುಕೊಂಡಿರುವುದು ಸುಳ್ಳೆಂದು ಈಗಲೂ ನನಗನಿಸುವುದಿಲ್ಲ. ಆದರೆ ಸಾಹಿತಿಯಾಗಿ ಸುತ್ತಲಿನ ಜಗತ್ತನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡುವ ನೀವು ಹೇಗೆ ಈ ರೀತಿ ಅಮಾನವೀಯವಾಗಲು ಸಾಧ್ಯ ರಷೀದ್?
ಕೊನೆಯದಾಗಿ, ರಷೀದ್ ಪೋಸ್ಟ್ ಲೈಕ್ ಮಾಡಿದವರು, ಬೆಂಬಲಿಸಿ ಪ್ರತಿಕ್ರಿಯಿಸಿದವರಲ್ಲಿ ನಾನು ಬಲ್ಲ,ನಾವೆಲ್ಲ ಒಂದೇ ರೀತಿ ಯೋಚನೆ ಮಾಡುವವರು ಎಂದು ತಿಳಿದುಕೊಂಡ ಕೆಲವು ಸ್ನೇಹಿತರ ಹೆಸರು ನೋಡಿ ಆಶ್ಚರ್ಯವಾಯಿತು. ಅವರೂ ಇಂತಹ ಸಂದರ್ಭಗಳಲ್ಲಿ ಲೈಕ್ ಬಟನ್ ಮೇಲೆ ಬೆರಳೊತ್ತುವ ಮೊದಲು ಯೋಚನೆ ಮಾಡಲಿ ಎಂದು ವಿನಂತಿಸುತ್ತೇನೆ. ಅದೇ ರೀತಿ ಪೋಸ್ಟ್ ಗೆ ಲೈಕ್ ಒತ್ತಿದವರು,ಪ್ರತಿಕ್ರಿಯಿಸಿದವರೆಲ್ಲರೂ ತನ್ನ ಅಭಿಪ್ರಾಯದ ಹಿಂದಿನ ಉದ್ದೇಶವನ್ನು ಒಪ್ಪಿಕೊಂಡವರು ಎಂದು ರಷೀದ್ ತಪ್ಪು ತಿಳಿದುಕೊಳ್ಳಬಾರದೆಂದು ಕೋರುತ್ತೇನೆ. ರಷೀದ್ ನಿಮ್ಮ ಬಗ್ಗೆ ಖಂಡಿತ ನನ್ನ ಅಭಿಪ್ರಾಯ ಬದಲಾಗಿಲ್ಲ, ಆದರೆ ಬೇಸರವಾಗಿದೆ.
(ಬಹುಷ: ಈ ಪ್ರತಿಕ್ರಿಯೆಯನ್ನು ನಾನು ಬರೆಯುತ್ತಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ರಷೀದ್ ಪೋಸ್ಟ್ ಓದುತ್ತಿದ್ದಾಗ ಅಕಸ್ಮಾತ್ ಕೈಗೆ ತಗಲಿ xn ಎಂಬ ಶಬ್ದ ಅಚ್ಚಾಗಿ ಪ್ರತಿಕ್ರಿಯೆ ರೂಪದಲ್ಲಿ ರವಾನೆಯಾಗಿದ್ದು ನಿನ್ನೆ ಮಧ್ಯರಾತ್ರಿಯಷ್ಟೇ ನನಗೆ ಗೊತ್ತಾಯಿತು. ಅದನ್ನು ಕೆಲವರು excellent ಎಂದು ತಪ್ಪಾಗಿ ಅರ್ಥಮಾಡಿಕೊಂಡಿರುವುದರಿಂದ ಇದನ್ನು ಬರೆಯಬೇಕಾಯಿತು)