Tuesday, September 29, 2015

ಕವಿತೆಗೆ ಕೆಟ್ಟಕಾಲ

ಗೊತ್ತು, ಖುಷಿಯಾದ ಮನುಷ್ಯನನ್ನು
ಎಲ್ಲ ಇಷ್ಟಪಡುತ್ತಾರೆ; ಅವನ ಮಾತಿನ ಧ್ವನಿಯೇ ಸುಖಕರ
ಅವನ ಮುಖ ಕೂಡ ಬಲು ಚಂದ
ಅಂಗಳದಲ್ಲಿ ಒಣಗುತ್ತ ಇರುವ ಮರ
ವಿಕಾರಗೊಂಡದ್ದಕ್ಕೆ ಕಾರಣ
ನೀರು ಸಾಲದೆ ಒಣಗಿದ ಬಿರುಕು ನೆಲ,
ಆದರೆ ದಾರಿಹೋಕರು ಮರವನ್ನು ಮಾತ್ರ ಕಂಡು ಗೊಣಗುತ್ತಾರೆ
ಇದು ಸಹಜವೇ
ಸುಂದರವಾದ ದೋಣಿಗಳಾಗಲಿ

ಗಾಳಿಗುಬ್ಬಿದ ಹಾಯಿಗಳಾಗಲೀ
ನನಗೆ ಕಾಣಲ್ಲ
ಕಾಣೋದು ಮೀನುಗಾರರ ಛಿದ್ರಗೊಂಡ ಬಲೆಗಳು
ನಡುಪ್ರಾಯದಲ್ಲೇ ಬಾಗಿದ ಬೆನ್ನಿನ ಹಳ್ಳಿಯ ಹೆಂಗಸನ್ನು
ಮಾತ್ರ ಯಾಕೆ ನಾನು ಕಾಣುತ್ತೇನೆ?
ತುಂಬಿದೆದೆಯ ಹುಡುಗಿಯರೂ ಇದಾರೆ
ನನ್ನ ಪದ್ಯದಲ್ಲಿ ಹಿತಕರವಾದ ಪ್ರಾಸ ಮೂಡಿಬಂದರೆ
ಅಶ್ಲೀಲವೆಂದು ನನಗೆ ಯಾಕೆ ಮುಜುಗರವಾಗುತ್ತೆ?
ಸೇಬಿನ ಮರದ ಹೂಗಳನ್ನು ಕಂಡು ಪುಳಕಿತನಾಗುತ್ತೇನೆ;
ಕೆಡವಿ ಕಟ್ಟಬೇಕಾದ ಶಿಥಿಲಗೊಂಡ ಹಳೆಮನೆಗಳಿಗೆ
ಹೊಸಬಣ್ಣ ಹಚ್ಚಿ ಮರುಳುಗೊಳಿಸುವ ದುರುಳನ
ಭಾಷಣ ಕೇಳಿ ದಿಗಿಲು ಬೀಳುತ್ತೇನೆ
ಆದರೆ ಎರಡನೆಯ ಸಂಗತಿ ಮಾತ್ರ ನನ್ನನ್ನು
ಬರೆಯುವ ಮೇಜಿಗೆ ತರುತ್ತೆ
_ ಇದು ಬರ್ಟೋಲ್ಟ್ ಬ್ರೆಕ್ಟ್ ನ ಕವನ. ಇದನ್ನು ಅನುವಾದಿಸಿದವರು ಮತ್ತೆಮತ್ತೆ ನೆನೆಪಾಗುವ ಯು.ಆರ್.ಅನಂತಮೂರ್ತಿ. ಮೊದಲ ಮಹಾಯುದ್ಧದ ನಂತರ ದರಿದ್ರಗೊಂಡ ಜರ್ಮನಿಯನ್ನು ‘ಅಭಿವೃದ್ಧಿ’ ಪಥದಲ್ಲಿ ತರುವವನೆಂಬ ಭ್ರಮೆಯನ್ನು ಹಿಟ್ಲರ್ ಹುಟ್ಟಿಸಿದ್ದ ಕಾಲದಲ್ಲಿ ಬ್ರೆಕ್ಟ್ ಈ ಕವನ ಬರೆದಿದ್ದ. ಹೀಗೆಂದು ಯುಆರ್ಎ ಅಡಿಟಿಪ್ಪಣಿಯಲ್ಲಿ ಬರೆದಿದ್ದಾರೆ.
ಕಳೆದ ಕೆಲವು ದಿನಗಳ ಪತ್ರಿಕೆಗಳ ಮುಖಪುಟ ಸುದ್ದಿಗಳು, ಬಿತ್ತರವಾಗುತ್ತಿರುವ ಟಿವಿ ಸುದ್ದಿ ಮತ್ತು ಡಿಬೇಟ್ ಗಳು, ಸೋಷಿಯಲ್ ಮೀಡಿಯಾದಲ್ಲಿ ಗೋಳಿಡುತ್ತಾ ನಮ್ಮ ನಮ್ಮೊಳಗೆ ಜಗಳ ತಂದುಹಾಕಿ ಮಜಾ ನೋಡುತ್ತಿರುವ ಕೂಗುಮಾರಿಗಳು..... ಇವೆಲ್ಲವನ್ನು ನೋಡಿ ಅನುಭವಿಸಿ ಸಂಕಟಪಡುತ್ತಿದ್ದಾಗ ಎಂದೋ ಓದಿದ ಬ್ರೆಕ್ಟ್ ನ ಕವಿತೆಯ ಕನ್ನಡಾನುವಾದದ ಸಾಲುಗಳು ನೆನಪಾಯಿತು. ಪುಸ್ತಕ ಹುಡುಕಿ ದೂಳು ಜಾಡಿಸಿ ಕೈಯಲ್ಲಿ ಹಿಡಿದು ಓದಿದಾಗ ಮನಸ್ಸು ನಿರಾಳವಾಯಿತು. ಅಬ್ದುಲ್ ರಷೀದ್ ಪೋಸ್ಟ್ ಗೆ ಅವಸರದಲ್ಲಿ ಲೈಕ್ ಬಟನ್ ಒತ್ತಿ, ಕೊನೆಗೆ ಅದನ್ನು ಸಮರ್ಥಿಸಿಕೊಳ್ಳಲಾಗದೆ ಅರ್ಧಗಂಟೆ ನನ್ನ ಜತೆ ತಾರಾಮಾರಿ ಜಗಳವಾಡಿದ ಅರ್ಹನಿಷಿಯ ಅಕ್ಷತಾ ಪ್ರಕಟಿಸಿರುವ ಕವನ ಸಂಕಲನ ಇದು. ಏರುದನಿಯಲ್ಲಿ ಜಗಳವಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ಅವರೂ ಇದನ್ನೊಮ್ಮೆ ಓದಲಿ ಎಂದು ವಿನಂತಿಸುತ್ತೇನೆ.
ನೀವೂ ಓದಿ. ಓದಿದ ಮೇಲೆ ಯಾರೋ ಎಲ್ಲ, ಏನೋ ಎಲ್ಲ ನೆನಪಾದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಅದು ಬ್ರೆಕ್ಟ್ ನ ಕವಿತೆಯ ಶಕ್ತಿ.

No comments:

Post a Comment