Showing posts with label ಮಾಧ್ಯಮ. Show all posts
Showing posts with label ಮಾಧ್ಯಮ. Show all posts

Sunday, February 26, 2017

ಇದ್ಯಾವ ಮಾಧ್ಯಮ ಧರ್ಮ

ನಾನು ಫೇಸ್ ಬುಕ್ ನಲ್ಲಿ ಬರೆದುದನ್ನು ಹೇಗೆ ತಿರುಚಲಾಗುತ್ತಿದೆ ಎನ್ನುವುದಕ್ಕೆ 'ವಿಶ್ವವಾಣಿ' ಯ ಈ ವರದಿ ಸಾಕ್ಷಿ. ನರೇಂದ್ರ ಮೋದಿ ರಾಜೀನಾಮೆ ಕೊಡಬೇಕೆಂದು ಹೇಳಿದ್ದನ್ನು ಎಡಿಟ್ ಮಾಡಲಾಗಿದೆ.('ವಿವಾದಾತ್ಮಕ ಸ್ಟೇಟಸ್ 'ಬಾಕ್ಸ್ ಮತ್ತು ನನ್ನ FB ಸ್ಟೇಟಸ್ ನೋಡಿ)
ಇದು ಯಾವ ಮಾಧ್ಯಮಧರ್ಮ ವಿಶ್ವೇಶ್ವರ ಭಟ್ರೆ?


Sunday, July 31, 2016

ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್.

(ಬೆಂಗಳೂರಿನಲ್ಲಿ ಎಸ್‍.ಸಿ.-ಎಸ್.ಟಿ. ಸಂಪಾದಕರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿನ ಭಾಷಣದ ಬರಹ ರೂಪ)
-ಎನ್. ರವಿಕುಮಾರ್. ಶಿವಮೊಗ್ಗ
ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ ಜೊತೆ ಅವರೊಬ್ಬ ಪತ್ರಕರ್ತರೂ ಆಗಿದ್ದರು ಎಂಬುದನ್ನು ನಾವು ಮರೆತಿದ್ದೇವೆ. ೧೯೨೦ ರಲ್ಲಿ ಮೂಕ ನಾಯಕ ಪತ್ರಿಕೆಯನ್ನು ಅವರು ಪ್ರಾರಂಭ ಮಾಡುತ್ತಾರೆ. ಅದರ ಎಡಿಟೋರಿಯಲ್ ಗಳ ಒಂದು ಪುಸ್ತಕ ಬಂದಿದೆ. ಅದನ್ನು ನಾನೇ ಧಾರವಾಡದಲ್ಲಿ ಬಿಡುಗಡೆ ಮಾಡಿದ್ದೆ. ಗಣೇಶ ಕದಂ ಅವರು ಈ ಪುಸ್ತಕವನ್ನು ಇಂಗ್ಲೀಷ್‍ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಕನಾಯಕ ಪತ್ರಿಕೆಯ ಎಡಿಟೋರಿಯಲ್ ನ ಘೋಷವಾಕ್ಯ ಹೀಗಿದೆ:  “ ಹೀಗೇಕೆ ನಾನು ಸಂಕೋಚ ಪಡಬೇಕು. ಯಾವುದೇ ಹಿಂಜರಿಕೆಯಿಲ್ಲದೆ ನಾನು ಮಾತನಾಡುವೆ. ಮೂಕರ ನೋವುಗಳನ್ನು ಯಾರೂ ಅರಿಯರು, ಮಾತನಾಡಲು ಸಂಕೋಚ ಪಟ್ಟುಕೊಂಡರೆ ಏಳಿಗೆ ಸಾಧ್ಯವಿಲ್ಲ”. ೧೮೭೩ ರಲ್ಲಿ ಜ್ಯೋತಿ ಬಾಪುಲೆ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪನೆ ಮಾಡುತ್ತಾರೆ . ಅದರ ನಂತರ ೧೮೭೭ ರಲ್ಲಿ ಅವರು ’ದೀನಬಂಧು’ ಪತ್ರಿಕೆ ಯನ್ನು ಪ್ರಾರಂಭ ಮಾಡುತ್ತಾರೆ. ದಲಿತ ಪತ್ರಿಕೋದ್ಯಮದ ಇತಿಹಾಸ ಅಲ್ಲಿಂದ ಇದು ಪ್ರಾರಂಭವಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನೆನೆಪಿಸಿಕೊಳ್ಳುತ್ತೇನೆ. ಅದರ ನಂತರ ಶಿವರಾಂ ಜನಾಬ್ ಕಾಂಬ್ಳೆ ’ಸೋಮವಂಶಕ್ಷತ್ರೀಯ’ ಪತ್ರಿಕೆಯನ್ನು ಪ್ರಾರಂಭ ಮಾಡ್ತಾರೆ.
            ೧೯೧೬ ಕೊಲಂಬಿಯಾ ವಿಶ್ವವಿದ್ಯಾನಿಲಯ, ಲಂಡನ್ ಸ್ಕೂಲ್ ಆಫ್ ಏಕಾನಮಿಕ್ಸ್ನಲ್ಲಿ ವ್ಯಾಸಂಗ ಮುಗಿಸಿ ಅಂಬೇಡ್ಕರ್ ಅವರು ವಾಪಾಸ್ ಬಂದ ಮೇಲೆ ’ಮೂಕನಾಯಕ’ ಪತ್ರಿಕೆ ಪ್ರಾರಂಭ ಮಾಡುತ್ತಾರೆ. ದಲಿತರ ಬೆಳವಣಿಗೆಯ ಪ್ರಕ್ರಿಯೆಗೆ ಅನುಗುಣವಾಗಿ ಅಂಬೇಡ್ಕರ್ ಪ್ರಾರಂಭಿಸಿದ ಪತ್ರಿಕೆಗಳ ಹೆಸರಿವೆ.. ಮೊದಲನೇಯದು ಮೂಕನಾಯಕ, ಎರಡನೇಯದು ಬಹಿಷ್ಕೃತ ಭಾರತ ಮೂರನೇಯದು ಪ್ರಬುಧ್ಧ ಭಾರತ. ಅಂಬೇಡ್ಕರ್ ಅವರು ಒಬ್ಬ ಪತ್ರಕರ್ತರಾಗಿ ಸಾವಿರಾರು ಪುಟಗಳನ್ನು ಬರೆದಿದ್ದಾರೆ. ಬಹುಶಃ ಮಹಾತ್ಮ ಗಾಂಧಿಗೆ ಅವರೊಬ್ಬ ಒಳ್ಳೆಯ ಕಾಂಪಿಟೀಟರ್ . ಮಹಾತ್ಮ ಗಾಂಧೀಜಿ ಕೂಡ ಒಬ್ಬ ಪತ್ರಕರ್ತರಾಗಿದ್ದರು. ಅವರ ಹರಿಜನ ಪತ್ರಿಕೆ , ಯಂಗ್ ಇಂಡಿಯಾ ಪತ್ರಿಕಾಗಳನ್ನು ಸಂಪಾದಿಸುತ್ತಿದ್ದುದು ನಿಮಗೆ ಗೊತ್ತಿದೆ. ಆದರೆ ಹರಿಜನ ಪತ್ರಿಕೆ ಮತ್ತು ಯಂಗ್ ಇಂಡಿಯಾ ಪತ್ರಿಕೆ ಬಗ್ಗೆ  ನಡೆದಷ್ಟು ಚರ್ಚೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಾರಂಭ ಮಾಡಿದ ಪತ್ರಿಕೆಗಳ ಬಗ್ಗೆ ಆಗುತ್ತಿಲ್ಲ. ನನಗೆ ತಿಳಿದ ಮಟ್ಟಿಗೆ ’ಮೂಕನಾಯಕ’ದ ಬಹಳಷ್ಟು ಎಡಿಟೋರಿಯಲ್ ಗಳು ಸಂಕಲನ ರೂಪದಲ್ಲಿ ಹಿಂದಿ-ಮರಾಠಿ ಭಾಷೆಗಳಲ್ಲಿ ಬಂದಿದೆ. ಆದರೆ ಕನ್ನಡಕ್ಕೆ ಹೆಚ್ಚು ಬಂದಿಲ್ಲ. ಇದೀಗ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್ ಅವರ ೨೫ ಸಂಪುಟಗಳಲ್ಲೂ ಈ ಪತ್ರಿಕೆಗಳ ಉಲ್ಲೇಖ ನನಗೆ  ಕಾಣಲಿಲ್ಲ. ಮೂಕ ನಾಯಕದಲ್ಲಿನ ಸಂಪಾದಕೀಯಗಳನ್ನು ಓದುತ್ತಾ ಹೋದರೆ ಆ ಕಾಲದ ರಾಜಕೀಯ, ಸಾಮಾಜಿಕ ಇತಿಹಾಸದ ದರ್ಶನ ಕೂಡ ನಮಗೆ ಆಗುತ್ತದೆ.
          ೧೯೧೬ ರಲ್ಲಿ ಅವರು ಅಂಬೇಡ್ಕರ್ ಅವರು ಕೊಲಂಬಿಯ ವಿಶ್ವವಿದ್ಯಾನಿಲಯದಿಮದ ವ್ಯಾಸಾಂಗ ಮುಗಿಸಿದಾಗ ಅವರಿಗೆ ಒಂದು ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಆಗ ಆ ವಿದ್ಯಾರ್ಥಿಗಳು ಅಂಬೇಡ್ಕರ್ ಅವರಿಗೆ ಹೇಳ್ತಾರೆ. ’ನೀನು ಅಮೆರಿಕಾದ ಕಪ್ಪುಜನರ ಮುಕ್ತಿಗಾಗಿ ಶ್ರಮಿಸಿದ BOOKER t Washington’ ಆಗಬೇಕು ಎಂದು ಆಗ ಸಹಪಾಠಿಗಳು ಹೇಳಿದ್ದರಂತೆ. ಬಹುಶಃ ಅಂಬೇಡ್ಕರ್ ಅವರ ಮನಸ್ಸಿನಲ್ಲಿ ಇದೇ ಇತ್ತೇನೋ.....ಗೊತ್ತಿಲ್ಲ, ಪತ್ರಿಕೆ ಸಾಮಾಜಿಕ ಪರಿವರ್ತನೆಯ ಒಂದು ಸಾಧನ ಎಂಬುದನ್ನು ಅವರು ಅದಾಗಲೆ ತಿಳಿದುಕೊಂಡಿದ್ದರು. ಅದಕ್ಕಾಗಿ ಯೇ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಷ್ಟೊಂದು ಮಹತ್ವಕೊಟ್ಟರು ಎಂದು ನನಗನಿಸುತ್ತಿದೆ.
ಪ್ರಜಾವಾಣಿ ದಲಿತ ಸಂಚಿಕೆಯೊಂದನ್ನು ತಂದಾಗ ರಾಜ್ಯದಲ್ಲಿಯೇ ಏಕೆ ದೇಶದಲ್ಲಿಯೇ ಸಂಚಲನ ಆಗಿತ್ತು. ಆ ಕೆಲಸದಲ್ಲಿ ಪಾಲ್ಗೊಂಡ ನನಗೆ ಹೆಮ್ಮೆ ಇದೆ. ಆ ಪ್ರಯತ್ನಕ್ಕೆ ಪ್ರೇರಣೆಯಾದ ಕಾರಣ ಕುತೂಹಲಕಾರಿಯಾಗಿದೆ. 2000ನೇ ವರ್ಷದಲ್ಲಿ ರಾಬಿನ್ ಜಾಫ್ರಿ ಎಂಬ ಪತ್ರಕರ್ತ ಭಾರತದ ಮಾಧ್ಯಮ ಕ್ರಾಂತಿ ಎಂಬ ಪುಸ್ತಕ ಬರೆದು ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಪ್ರಾತಿನಿಧ್ಯ ನಗಣ್ಯವೆನಿಸುವಷ್ಟು ಕಡಿಮೆ ಎಂದು ಎಚ್ಚರಿಸಿದ್ದರು. ಅದಕ್ಕಿಂತ ಮೊದಲು ಅಂದರೆ 1996ರಲ್ಲಿಯೇ  ವಾಷಿಂಗ್ ಟನ್ ಪೋಸ್ಟ್ ನ ಭಾರತೀಯ ವರದಿಗಾರ ಕೆನ್ನೆತ್ ಜೆ.ಕೂಪರ್ ಭಾರತೀಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದ್ದ. ದೆಹಲಿಯಲ್ಲಿ ರಾಬಿನ್ ಜಾಪ್ರಿಯವರ ಭಾಷಣವನ್ನು ಕೇಳಿದ ಪ್ರಜಾವಾಣಿ ಸಂಪಾದಕರು ದಲಿತರೇ ಒಂದು ದಿನದ ಮಟ್ಟಿಗೆ ಸಂಪಾದಕರಾಗಿ ದಲಿತ ಸಂಚಿಕೆಯನ್ನು ರೂಪಿಸುವ ಯೋಜನೆ ಹಾಕಿದ್ದರು.
ರಾಬಿನ್ ಜಾಫ್ರಿ , ಕೆನ್ನೆತ್ ಕೂಪರ ಮೊದಲಾದವರ ಕಾಲದಲ್ಲಿಯೇ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಭಾರತದ ಪ್ರಮುಖ ಪತ್ರಿಕೆಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಸಂಪಾದಕರಾಗಲಿ ನೀತಿ-ನಿರ್ಧಾರ ಗಳನ್ನು ಕೈಗೊಳ್ಳುವಂತಹ ಸ್ಥಾನಗಳಲ್ಲಿ ಕೂತವರಲ್ಲಿ ಯಾರೂ ದಲಿತರಿಲ್ಲ ಎನ್ನುವುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗುತ್ತದೆ. ಮಾಧ್ಯಮಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ಕೊಡಬೇಕು ಎಂದಾಗ “ ಓ... ದಲಿತರಿಗೆ ಪತ್ರಿಕೋದ್ಯಮದಲ್ಲಿ ಕೂಡಾ ಮೀಸಲಾತಿ ಬೇಕಾ ಎಂದು ನನ್ನನ್ನು ಬಹಳ ಮಂದಿ ಕೇಳಿದವರಿದ್ದಾರೆ. ಆದರೆ ಒಂದು ಆತ್ಮಾವಲೋಕನ ನಡೆಯಬೇಕಲ್ಲ. ರಾಬಿನ್ ಜಾಫ್ರಿ, ಕೆನ್ನೆತ್ ಕೂಪರ್ ಮೊದಲಾದ ಪತ್ರಕರ್ತ ಒಂದು ಆತ್ಮಾವಲೋಕನವನ್ನು ನಡೆಸುತ್ತಾರೆ. ಇವತ್ತು ಕರ್ನಾಕಟದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ಮಾಧ್ಯಮ ಯಾವ ರೀತಿಯಲ್ಲಿ ವರ್ತಿಸುತ್ತಿದೆಯೋ, ಅದೇ ರೀತಿಯ ವರ್ತನೆಗಳನ್ನು ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಬಗ್ಗೆ ಮಾಧ್ಯಮ ವ್ಯಕ್ತಪಡಿಸುತ್ತಿತ್ತು.
            ಈಗಲೂ ಕನ್ನಡ ಮಾಧ್ಯಮಗಳಲ್ಲಿ ದಲಿತರಿಗೆ ಅಗತ್ಯಪ್ರಮಾಣದಷ್ಟು ಪ್ರಾತಿನಿಧ್ಯ ಇಲ್ಲ. ನಮ್ಮಲ್ಲಿರೋ ಹಿರಿಯ ಪತ್ರಕರ್ತರೆಂದರೆ ಇಬ್ಬರು. ಒಬ್ಬರು ಶಿವಾಜಿಗಣೇಶನ್, ಇನ್ನೊಬ್ಬರು ಡಿ.ಉಮಾಪತಿ. ಶಿವಾಜಿ ಗಣೇಶನ್ ಅವರು ಸಹಾಯಕ ಸಂಪಾದಕರಾಗಿ ನಿವೃತ್ತಿಯಾಗಿದ್ದಾರೆ. ಇನ್ನೂ ಉಪಮಾಪತಿ ಅವರು ಸಂಪಾದಕರಾಗಬೇಕೆಂಬುದು ನಮ್ಮೆಲ್ಲರ ಆಶಯ. ಆಗ್ತಾರೋ ಇಲ್ಲವೆ ಇಲ್ಲವೋ ಗೊತ್ತಿಲ್ಲ. ಯಾಕೆ ಆಗುತ್ತಿಲ್ಲ? ನೀವು ಇವತ್ತಿನ ೧೦೦ ಪ್ರಾಮಿನೆಂಟ್ ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಿರುತ್ತಾರೆ. ನೂರು ಕನ್ನಡದ ಪ್ರಮುಖ  ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಾಗಿರುತ್ತಾರೆ.ಆದರೆ ನೀವು ನೂರು ಪ್ರಾಮಿನೆಂಟ್ ಪತ್ರಕರ್ತರನ್ನು ಪಟ್ಟಿ ಮಾಡಿದರೆ ಅದರಲ್ಲಿ ಒಂದು ಕೈಯಿಂದ ಎಣಿಸುವಷ್ಟು ಪತ್ರಕರ್ತರು ಇರುವುದಿಲ್ಲ ಏಕೆ? ಪತ್ರಕರ್ತರಿಗೆ ಮುಖ್ಯವಾಗಿ ಬೇಕಾಗಿರುವುದು ಬರವಣಿಗೆಯ ಕಲೆ. ಅದೇನು ರಾಕೆಟ್ ಸೈನ್ಸ್ ಅಲ್ಲ. ಹಾಗಾದರೆ ಯಾಕೆ ದಲಿತರಿಲ್ಲ? ಇವತ್ತು  ದಲಿತ ಪತ್ರಕರ್ತರು ಸಣ್ಣ ಪತ್ರಿಕೆಗಳಲ್ಲಿ ಸೇರಿಕೊಂಡಿದ್ದಾರೆ. ನಮ್ಮ ರವಿಕುಮಾರ್ (ಎನ್. ರವಿಕುಮಾರ್ ಸಂಪಾದಕರು ’ಶಿವಮೊಗ್ಗ ಟೆಲೆಕ್ಸ್’ಕನ್ನಡ ದಿನಪತ್ರಿಕೆ) ಅಂತಹವರು ಯಾವುದೇ ಮುಖ್ಯವಾಹಿನಿಯ ಪತ್ರಿಕೆಯಲ್ಲಿ ಕೆಲಸ ಮಾಡುವ ಅರ್ಹತೆ ಉಳ್ಳವರು. ನನಗೆ ಸ್ನೇಹಿತರು ಅವರು ನನಗೆ ಗೊತ್ತು ಅವರ ಮಾತು, ಬರವಣಿಗೆ ನೋಡಿದ್ದೇನೆ. ಆದರೆ ಮುಖ್ಯವಾಹಿನಿ ಪತ್ರಿಕೆಗೆ ಬರಲು ಅವರಿಗೆ ಆಗುತ್ತಿಲ್ಲ. ನನಗೆ ಇಂತಹ ಐವತ್ತು ಮಂದಿ ದಲಿತ ಪತ್ರಕರ್ತರುಗಳು ಗೊತ್ತಿದ್ದಾರೆ. ಆದರೆ ಅವರು ಮುಖ್ಯವಾಹಿನಿ ಪತ್ರಿಕೆಗಳಿಗೆ ಬರಲು ಆಗುತ್ತಿಲ್ಲ ಯಾಕೇ?
ನೀವು ’ಯಾಕೆ?’ ಅನ್ನೋದನ್ನು ತಿಳಿದುಕೊಳ್ಳಬೇಕಾದರೆ ೧೯೭೦ ರ ದಶಕದಲ್ಲಿ ಅಮೇರಿಕಾದ ಪರಿಸ್ಥಿತಿಯನ್ನು ನೋಡಬೇಕು. ೧೯೭೮ರಲ್ಲಿ  ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಅಮೆರಿಕಾದಲ್ಲಿ ಮಾಧ್ಯಮದಲ್ಲಿರುವ ಕಪ್ಪು ಜನಾಂಗದ ಪ್ರಾತಿನಿಧ್ಯದ ಬಗ್ಗೆ ಸಮೀಕ್ಷೆ ನಡೆಸಿತ್ತು. ಆ ದೇಶದ ಜನಸಂಖ್ಯೆಯಲ್ಲಿ ಶೇಕಡಾ 36ರಷ್ಟು ಕಪ್ಪು ಜನಾಂಗದವರಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇಕಡಾ ನಾಲ್ಕು ಆಗಿತ್ತು. ಯಾಕೆ ಹೀಗಾಗಿದೆ ಎಂದು ಅವಲೋಕನ ಮಾಡಿ ಅವರು ಸುಮ್ಮನೆ ಇರೋದಿಲ್ಲ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸುತ್ತಾರೆ. 2000ದ ಹೊತ್ತಿಗೆ ಮಾಧ್ಯಮದಲ್ಲಿ ಕಪ್ಪುಜನಾಂಗದ ಪ್ರಾತಿನಿಧ್ಯ ಕನಿಷ್ಟ ಶೇಕಡಾ 20 ಆಗಬೇಕೆಂದು ಅವರು ನಿರ್ಧರಿಸುತ್ತಾರೆ. ಇದಕ್ಕಾಗಿ ಕಪ್ಪುಜನಾಂಗದ ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಕಚೇರಿಗಳಲ್ಲಿ ತರಬೇತಿ ಶಿಬಿರ, ತಾರತಮ್ಯ ನೀತಿ ನಿವಾರಣೆಗೆ ಕ್ರಮ,ವಿಶೇಷ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತವೆ
೨೦೧೦ಕ್ಕೆ ಮತ್ತೆ ಅವರು ಸರ್ವೆ ಮಾಡುವಾಗ ಕರಿಯರಿಗೆ ಶೇ.೧೪ ಪ್ರಾತಿನಿಧ್ಯ ಇರುತ್ತದೆ. ಈಗ ಅವರು ೨೦೨೦ಕ್ಕೆ ಟಾರ್ಗೇಟ್ ಹಾಕಿಕೊಂಡಿದ್ದಾರೆ. ಇದು ಭಾರತದ ಪತ್ರಿಕೋದ್ಯಮದಲ್ಲಿ ದಲಿತರ ಪಾಲ್ಗೊಳ್ಳುವಿಕೆಗೆನೆರವಾಗುವಂತಹ ಒಳ್ಳೆಯ ಮಾಡೆಲ್ ಎಂದು ಅನಿಸುತ್ತದೆ. ಈ ಉದ್ದೇಶದಿಂದಲೇ ಭಾರತದ ಯಾವ ಯಾವ ಪತ್ರಿಕೆಗಳಲ್ಲಿ ದಲಿತರ ಪ್ರಾತಿನಿಧ್ಯ ಎಷ್ಟೆಷ್ಟು ಪ್ರಮಾಣದಲ್ಲಿದೆ ಎಂದು ಸರ್ವೇ ನಡೆಯಬೇಕಾಗಿದೆ. ಕರ್ನಾಟಕದಲ್ಲೂ ಇಂತಹ ಸರ್ವೇ ನಡೆಯಬೇಕು.  ಮಾಧ್ಯಮಗಳಲ್ಲಿ (ಎಲೆಕ್ಟ್ರಾನಿಕ್, ಮುದ್ರಣ ಮತ್ತು ರೇಡಿಯೋ ಸೇರಿ) ಯಾವ ಸ್ಥಾನಗಳಲ್ಲಿ ದಲಿತರಿದ್ದಾರೆ ಮತ್ತು ಇಲ್ಲದಿದ್ದರೆ ಯಾಕೆ ಇಲ್ಲ.? ಅದಕ್ಕೆ ಪರಿಹಾರವೇನು? ಅನ್ನೋದರ ಬಗ್ಗೆ ಈ ಸಮೀಕ್ಷೆ  ನಡಯಬೇಕು.
          ದಲಿತರಿಗೊಂದು  ಉದ್ಯೋಗ ಕೊಡಬೇಕೆಂದು ಪ್ರಾತಿನಿಧ್ಯ ಕೇಳುತ್ತಿಲ್ಲ. ಇದು ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ದಲಿತರಿಗೆ ಪತ್ರಿಕೆಯಲ್ಲಿ ಪ್ರಾತಿನಿಧ್ಯ ಕೊಟ್ಟಕೂಡಲೆ ದಲಿತರಿಗೊಂದಿಷ್ಟು ಉದ್ಯೋಗ ಸಿಗುತ್ತೇ ಅಂತಲ್ಲ. ನನ್ನ ಉದ್ದೇಶ ಅದಲ್ಲ, ಒಂದು ಪತ್ರಿಕೆ ಪರಿಪೂರ್ಣ ಅನಿಸಬೇಕಾದರೆ ಎಲ್ಲಾ ಸಮುದಾಯದ ಅನುಭವ ಲೋಕಗಳು ಅದರಲ್ಲಿ ವ್ಯಕ್ತವಾಗಬೇಕು. ಇಲ್ಲದಿದ್ದರೆ ಅದು ಪರಿಪೂರ್ಣ ಮಾಧ್ಯಮ ವಾಗಲಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಎಲ್ಲಾ ಅನುಭವ ಲೋಕಗಳು ಬರಬೇಕಾದರೆ ಆ ಅನುಭವ ಲೋಕಗಳಿರುವ ವಿಭಿನ್ನ ಸಮುದಾಯದ ಪ್ರಾತಿನಿಧ್ಯ ಮಾಧ್ಯಮ ಲೋಕದಲ್ಲಿರಬೇಕು. ಇಲ್ಲದಿದ್ದರೆ ಅದು ಅರ್ಥವಾಗುವುದಿಲ್ಲ.
ಈ ದೇಶದಲ್ಲಿ ೧೬ ನಿಮಿಷಗಳಿಗೊಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಪ್ರತಿದಿನ ನಾಲ್ವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತೆ, ಪ್ರತಿವಾರ ೧೬ ದಲಿತರ ಕಗ್ಗೊಲೆ ನಡೆಯುತ್ತಿದೆ. ನ್ಯಾನಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳನ್ನು ನೋಡಿದ್ರೆ ಗೊತ್ತಾಗುತ್ತದೆ. ಆದರೆ ನಿರ್ಭಯ ಅತ್ಯಾಚಾರ ದೇಶಾದ್ಯಂತ ಆದಾಗ ಅದೇ ವರ್ಷ ೧೨೭೦ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ದೇಶದಲ್ಲಿ ಅದು ಸುದ್ದಿಯಾಗಿತ್ತಾ? ನಿರ್ಭಯ ಅತ್ಯಾಚಾರ ನಡೆದ ಒಂದು ವಾರದಲ್ಲೆ ಹರಿಯಾಣದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಅದು ಎಲ್ಲಿ ವರದಿಯಾಯಿತು? ಇಷ್ಟೊಂದು ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆದಾಗ ಅದು ಏಕೆ ವರದಿಯಾಗಲಿಲ್ಲ? ಈ ಕಾರಣಕ್ಕಾಗಿಯೇ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದವರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು. ಏಕೆಂದರೆ ಅವರಿಗೊಂದು ಅನುಭವ ಲೋಕವಿದೆ. ಉದಾಹರಣೆಗೆ : ಕಂಬಾಲಪಲ್ಲಿ ಯಂತಹ ಘಟನೆ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಸುದ್ದಿ ಅಷ್ಟೇ. ಅವನು ಅಲ್ಲಿ ಹೋಗಿ ಘಟನೆಯನ್ನು ವೈಭವೀಕರಿಸುತ್ತಾನೆ. ರಕ್ತದೋಕುಳಿ ಹರಿದಿತ್ತು, ರುಂಡ, ಮುಂಡಗಳು ಉರುಳಾಡಿದ್ದವು, ಕಣ್ಣೀರ ಧಾರೆ ಹರಿದಿತ್ತು ಎಂದೆಲ್ಲ ಅಲ್ಲಿಗೆ ಹೋಗಿ ವರದಿ ಮಾಡಿರುತ್ತಾನೆ.
ಆದರೆ, ಒಬ್ಬ ದಲಿತ ವರದಿ ಮಾಡಲು ಹೋದರೆ ಅಂತಹದ್ದೊಂದು ಘಟನೆಗೆ ಕಾರಣ ಏನು ಎನ್ನುವುದನ್ನು ವಿವರಿಸುತ್ತಾ ಹೋಗುತ್ತಾನೆ. ಕಂಬಾಲಪಲ್ಲಿ ಎಂಬುದು ರಾತ್ರಿ ಹಗಲಾಗುವುದರೊಳಗೆ ನಡೆದ ಘಟನೆಯಲ್ಲ, ಅದಕ್ಕೊಂದು ಇತಿಹಾಸವಿದೆ, ಆ ಇತಿಹಾಸದ ಕಾರಣಕ್ಕಾಗಿಯೇ ಕಂಬಾಲಪಲ್ಲಿ  ನಡೆದಿದೆ.. ಈ ದೇಶದಲ್ಲಿ ಇಂತಹ ದೌರ್ಜನ್ಯಗಳಿಗೆ ಒಂದು ಇತಿಹಾಸವಿದೆ. ಒಂದು ಕೋಮುಗಲಭೆಯನ್ನು ಒಬ್ಬ ಮುಸ್ಲೀಂ ಪತ್ರಕರ್ತ ವರದಿ ಮಾಡುವಾಗಲೂ ಈ ವ್ಯತ್ಯಾಸವನ್ನು ಕಾಣಬಹುದು. ಇಂತಹ ಘಟನೆಗಳನ್ನು ವೈಭವಿಕರೀಸದೆ, ರೋಚಕತೆಯ ನ್ನು ತುಂಬದೆ ತನ್ನ ಅನುಭವದೊಂದಿಗೆ ವರದಿಮಾಡುತ್ತಾನೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ’ಮೂಕನಾಯಕ’ ಪತ್ರಿಕೆಯನ್ನು ಯಾಕೆ ಮಾಡಬೇಕಾಯಿತೆಂದರೆ ಆ ಕಾಲದಲ್ಲಿ ಬೇರೆ ಪತ್ರಿಕೆಗಳಲ್ಲಿ ದಲಿತರ ಧ್ವನಿ ಅವರಿಗೆ ಕಾಣಲಿಲ್ಲ. ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದಾಗ  ಮೊದಲ ಬಾರಿಗೆ ಅದಕ್ಕೆ ರೆಬೆಲ್ ಆಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದವರು ಅಂಬೇಡ್ಕರ್. ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಬರಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದವರು ಅವರು. ಆಗ ನಾವು ಯಾರೂ ಕಿವಿಗೊಡಲಿಲ್ಲ. ಅದರ ಪರಿಣಾಮ ನಾವು ಈಗ ಅನುಭವಿಸುತ್ತಿದ್ದೇವೆ. ರಾಜಕೀಯ ಸ್ವಾತಂತ್ರ್ಯ ಎಂಬುದು ಈಗ Farce (ಪ್ರಹಸನ) ಆಗಿಬಿಟ್ಟಿದೆ. ಇವತ್ತು ಏಕೆಂದರೆ ಆರ್ಥಿಕ ಸ್ವಾತಂತ್ರ್ಯವಿಲ್ಲದೆ, ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯದ ಗತಿ ಏನಾಗಬಹುದು ಎಂಬುದನ್ನು ಆ ಕಾಲದಲ್ಲೆ ಅಂಬೇಡ್ಕರ್ ಅವರು ಒಬ್ಬ ದೊಡ್ಡ ದಾರ್ಶನಿಕನಂತೆ ಹೇಳಿದ್ದರು. ಆ ದನಿ ಆಗ ಯಾರಿಗೂ ಕೇಳಲಿಲ್ಲ. ’ಒಂದು ಮತ ಕ್ಕೆ ಒಂದು ಮೌಲ್ಯ’ ಅಂತ ಹೇಳಿದ್ದು ಆಗ ಯಾರಿಗೂ ಅರ್ಥ ಆಗಲಿಲ್ಲ ಇವತ್ತು ಗೊತ್ತಾಗುತ್ತಿದೆ. ಅದಾನಿ, ಅಂಬಾನಿ ಮತಕ್ಕೂ, ಬಡಬೋರೆಗೌಡನ ಒಂದು ಮತ್ತಕ್ಕೂ ನೀವು ಹೋಲಿಕೆ ಮಾಡಲಿಕ್ಕೆ ಸಾಧ್ಯವಿಲ್ಲ. ಇವತ್ತು ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಾರ್ಪೋರೇಟ್ ಪತ್ರಿಕೋದ್ಯಮ ಪ್ರವೇಶವಾಗಿದೆ. ಈ ದೇಶದಲ್ಲಿ ೮೨ ಸಾವಿರ ಪತ್ರಿಕೆಗಳಿವೆ, ಸುಮಾರು ೧೨೦ ಸುದ್ದಿ ಟಿ.ವಿ ಚಾನಲ್‌ಗಳಿವೆ. ೧೨೦೦ ರೇಡಿಯೋಗಳಿವೆ. ಇಷ್ಟು ದೊಡ್ಡ ಮಾಧ್ಯಮ ಸಮೂಹದ ಮಾಲೀಕತ್ವ ಕೇವಲ ನೂರು ಮಂದಿ ಕೈಯಲ್ಲಿದೆ.
          ಇವತ್ತಿನ ಮಾಧ್ಯಮ ಕ್ಷೇತ್ರಕ್ಕೆ , ಪತ್ರಿಕೆಗಳಿಗೆ , ಚಾನಲ್‌ಗಳಿಗೆ ಓದುಗರು ಬೇಕಾಗಿಲ್ಲ. ಅವರಿಗೆ Potential buyers ಗಳು ಬೇಕಾಗಿದ್ದಾರೆ. ಅವರ ಪತ್ರಿಕೆಗಳಲ್ಲಿ, ಚಾನಲ್ ಗಳಲ್ಲಿ ಜಾಹೀರಾತು ಏನು ಬರುತ್ತೇ .ಟಿವಿ, ಫ್ರೀಡ್ಜ್ , ಬಟ್ಟೆ ಮತ್ತೊಂದು... ಅವುಗಳನ್ನು ಕೊಳ್ಳಲಿಕ್ಕೆ ಸಾಮರ್ಥ್ಯವಿರುವ ಓದುಗರು ಬೇಕಾಗಿದ್ದಾರೆ. ಅದರ ಅರ್ಥ ಅವರ Potential buyers ಹುಡುಕಾಟದಲ್ಲಿ ಇದ್ದಾರೆ ವಿನಃ, ಒಬ್ಬ ಸಾಮಾನ್ಯ ಓದುಗನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಇವತ್ತು ಜಾಹೀರಾತು ಇಲ್ಲದೆ ಪತ್ರಿಕೆಗಳನ್ನು, ಚಾನಲ್ ಗಳನ್ನು ನಡಸಲಿಕ್ಕೆ ಸಾಧ್ಯವಿಲ್ಲ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಬಹಳ ನೇರ ನುಡಿಯ ಮಾರ್ಕೇಂಡೇಯ ಕಾಟ್ಜು ಅವರು ಒಂದು ಮಾತನ್ನು ಹೇಳಿದ್ದರು. ಐಶ್ವರ್ಯ ರೈಗೆ ಮದುವೆ ಆದರೆ , ಗಂಡನ ಜೊತೆ ಜಗಳ ಆದ್ರೆ, ಅತ್ತೆ ಮನೆಯನ್ನು ಬಿಟ್ಟು ಬಂದ್ರೆ, ಅದು ಮೊದಲ ಪುಟದ ದೊಡ್ಡ ಸುದ್ದಿಯಾಗುತ್ತೆ. ನಿಮ್ಮ ಚಾನಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತೆ. ಆದರೆ ಯಾವುದೋ ತಾಯಿಯ ಬಡ ಮಗು ಅಪೌಷ್ಠಿಕತೆ ಯಿಂದ ಸತ್ತರೆ u will just bury that news inside the page ಯಾಕ ಹೀಗೆ ಅಂತ ಅವರು ಕೇಳಿದ್ರು .
ಏಕೆಂದರೆ ಅವರು ಪತ್ರಕರ್ತರಲ್ಲ, ಜಡ್ಜ್. ಅವರಿಗೆ ತೀರ್ಪು ಕೊಟ್ಟು ಗೊತ್ತಷ್ಟೇ, ಆದರೆ ನಾನೊಬ್ಬ ಪತ್ರಕರ್ತ. ನನಗೆ ಕಾರಣ ಗೊತ್ತಿದೆ. ಐಶ್ವರ್ಯ ರೈ ಅತ್ತದ್ದು, ನಕ್ಕಿದ್ದು,ಜಗಳ ಮಾಡಿದ್ದು ಎಲ್ಲಾ ವರದಿಯಾದರೆ ಐಶ್ವರ್ಯ ರೈ 25-30 ಪ್ರೊಡೆಕ್ಟ್ ಗಳಿಗೆ ಮಾಡೆಲ್ -ಬ್ರಾಂಡ್ ಅಂಬಾಸಿಡರ್. ಅದೇ ರೀತಿ ಸಚಿನ್ ತೆಂಡೋಲ್ಕರ್ , ವಿರಾಟ್ ಕೋಹ್ಲಿ, ಧೋನಿ ಅವರೆಲ್ಲಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತನೇ ಇರಬೇಕು. ಅವರು ಕಾಣಿಸಿಕೊಂಡರೆ ಅವರು ಮಾಡೆಲ್ ಆಗಿರೋ ವಸ್ತುಗಳು ಓದುಗನ ನೆನಪಿಗೆ ಬರುತ್ತವೆ. ಇದು ’ಟ್ರಿಕ್. ಒಂದು ಬಡ ತಾಯಿಯ ಮಗು ಅಪೌಷ್ಠಿಕತೆಯಿಂದ ಸತ್ತದ್ದನ್ನು ಮೊದಲ ಪುಟದಲ್ಲಿ ಪ್ರಕಟಿಸಿದರೆ ಜನ ಏನಂದು ಕೊಳ್ಳುತ್ತಾರೆ, ಬೆಳಗ್ಗೇನೆ ಇದನ್ನು ಓದಬೇಕಾ? ಅಂತ ಕೇಳ್ತಾರೆ. ಅಷ್ಟೊಂದು ನಮ್ಮ ಮನಸ್ಸು ಅಮಾನವೀಯವಾಗಿದೆ. ಇದು ವಾಸ್ತವ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಪತ್ರಿಕೆಗಳ ಮಾಲೀಕರನ್ನು ದೂರುವುದಿಲ್ಲ. ಪತ್ರಿಕೆಗಳ ಮಾಲೀಕರು ತಮಗೆ ಗೊತ್ತಿಲ್ಲದ ಹಾಗೇಯೇ ಈ ಟ್ರ್ಯಾಪ್ ನಲ್ಲಿ ಬಿದ್ದು ಬಿಟ್ಟಿದ್ದಾರೆ.
          ಇವತ್ತಿನ ಮಾಧ್ಯಮಗಳ ಬಿಜೆನೆಸ್ ಮಾಡೆಲ್‌ನಲ್ಲಿಯೇ ತಪ್ಪಿದೆ. ನೀವು ೧೦೦ ಕೋಟಿ ರೂ ಇನ್‌ವೆಸ್ಟ್ ಮಾಡಿ ಜಾಹೀರಾತು ಇಲ್ಲದೆ ಪತ್ರಿಕೆ-ಚಾನೆಲ್ ಗಳನ್ನು ನಡೆಸಲಿಕ್ಕೆ ಆಗುವುದಿಲ್ಲ. ಈ ರೀತಿ ಜಾಹಿರಾತಿನ ಮೇಲೆ ಅವಲಂಬಿಸುವಂತಹ ಪರಿಸ್ಥಿತಿಯಲ್ಲಿ ನೀವು ಜನಪರವಾಗಿ ಬರೆಯಲು ಹೇಗೆ ಸಾಧ್ಯ? ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ ಪರಧ್ವನಿ ಎತ್ತಲಿಕ್ಕೆ ಹೇಗೆ ಸಾಧ್ಯ? ಇದಕ್ಕೆ ಪರಿಹಾರ ಏನಂತ ಗೊತ್ತಿಲ್ಲ,  ರಿಲಯನ್ಸ್ ನ ಅನಿಲ್ ಅಂಬಾನಿ ಗ್ರೂಪ್ ೫ ರಿಂದ ೧೦ ಸಾವಿರ ಕೋಟಿ ಯನ್ನು ಚಾನಲ್ ಗಳಿಗೆ ಪಂಪ್ ಮಾಡಿದೆ. ಇವತ್ತು ಈ ಟಿವಿ, ಸಿಎನ್‌ಎನ್ ಐಬಿಎನ್ ಸೇರಿದಂತೆ 50ಕ್ಕೂ ಮಿಕ್ಕಿ ಚಾನಲ್ಗ ಳು, ಬೇರೆಬೇರೆ ಪಬ್ಲಕೇಷನ್ ಗಳನ್ನುಅವರು ಖರೀದಿಸಿದ್ದಾರೆ., ಬಿರ್ಲಾ ಗ್ರೂಪ್ ಇಡೀ ಇಂಡಿಯಾ ಟುಡೇಯನ್ನು ವಶಕ್ಕೆ ತೆಗೆದುಕೊಂಡಿದೆ. ಎನ್.ಡಿ.ಟಿವಿಯಲ್ಲಿ ಗ್ರೀನ್ ಟೆಕ್ ಎಂಬ ಸಂಸ್ಥೆ ಬಂಡವಾಳ ಹೂಡಿದೆ, ಇವತ್ತು ಮಾಧ್ಯಮಗಳ ಕಂಪೆನಿಯ ಬೋರ್ಡ್ನಲ್ಲಿ  ಕಾಪೋರೇಟ್ ಕುಳಗಳು ಸ್ಥಾನ ಪಡೆದಿದ್ದಾರೆ. ಇವತ್ತು ಎಲ್ಲಾ ದೊಡ್ಡ ಪತ್ರಿಕೆಗಳಲ್ಲೂ ಇದೇ ಆಗಿದೆ. ಇತ್ತೀಚೆಗೆ ಹಿಂದೂ ಪತ್ರಿಕೆಯಲ್ಲೂ ಆಗಿದೆ. ಪ್ರಜಾವಾಣಿ ಬಹಳ ಹಿಂದೆ ಕುಲದೀಪ್ ನಯ್ಯರ್ ಅವರನ್ನು ಬೋರ್ಡ್ ಡೈರಕ್ಟರ್‌ನ್ನಾಗಿ ಮಾಡಿತ್ತು. ಆದರೆ ಇದೆಲ್ಲಾ ಎಷ್ಟು ಬೇಗ ಚೇಂಜ್ ಆಗ್ತಾ ಇದೆ.
ಇವತ್ತು ಯಾವ ಮಟ್ಟಿಗೆ ವಾಣಿಜ್ಯಿಕರಣ ಆಗಿದೆ ಎಂದರೆ ಒಂದು ಪತ್ರಿಕೆ ಜಾಹೀರಾತಿಗೆ ದುಡ್ಡು ಪಡೆಯದೆ ಅದರ ಬದಲಾಗಿ ಆ ಕಂಪನಿಯ ಷೇರು ಪಡೆದು ಅದನ್ನು ಪ್ರಮೋಟ್ ಮಾಡಿ ಅದರ ಬೆಲೆಯನ್ನು ದುಪ್ಪಟ್ಟು ಮಾಡಿ ಲಾಭ ಪಡೆಯುತ್ತಿದೆ. ಈ ಕ್ರಾಸ್ ಓನರ್ ಶಿಫ್ ಬಗ್ಗೆ ಚರ್ಚೆ ನಡೆಯುತ್ತಿದೆ. ಬೇರೆಬೇರೆ ಉದ್ಯಮಗಳ ಮಾಲೀಕರು ಮಾಧ್ಯಮ ಕ್ಷೇತ್ರದಲ್ಲಿರಬಾರದು. ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಬೇರೆ ಉದ್ಯಮಗಳಲ್ಲಿ ತೊಡಗಿರಬಾರದು ಎಂಬಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಟ್ರಾಯ್ ಧೀರ್ಘವಾದ ವರದಿಯನ್ನು ಕೊಟ್ಟಿದೆ. ಅದು ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿದೆ. ಭಾರತದಂತಹ ಸಮಾಜದಲ್ಲಿ ಬಹತ್ವ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ಪತ್ರಿಕೋದ್ಯಮವನ್ನು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡಬಾರದು. ಹಾಗೆ ನೋಡಿದರೆ ಮಾಧ್ಯಮದ ಮೂಲ ಆಶಯ ಏನಿದೆ ಅದಕ್ಕೆ ಭಂಗ ಉಂಟಾಗುತ್ತದೆ ಎಂದು ಟ್ರಾಯ್ ಹೇಳಿದೆ.
ಆದರೆ, ಇವತ್ತು ಪರಿಸ್ಥಿತಿ ಹಾಗಿಲ್ಲ. ಕಾರ್ಪೋರೇಟ್ ಕಂಪೆನಿಗಳ ಪ್ರವೇಶ ಆಗಿಬಿಟ್ಟಿದೆ. ವೃತ್ತಿ ಉದ್ಯಮವಾಗಿ ಹೋಗಿರುವುದರಿಂದ ಅದರ ಎಲ್ಲಾ ಘೋರ ರೂಪಗಳು ನಮಗೆ ಕಾಣ ಸಿಗುತ್ತಿವೆ. ಮಾಧ್ಯಮದ ಮಾಲೀಕರು ಎಂತಹ ಟ್ರ್ಯಾಪ್‌ನಲ್ಲಿ ಬಿದ್ದಿದ್ದಾರೆ ಎಂದರೆ ಪ್ರಜ್ಞಾ ಪೂರ್ವಕವಾಗಿ ನಾನು ಜನಪರವಾಗಿ ಇರುತ್ತೇನೆ ಎಂದು ನಿರ್ಧಾರ ಮಾಡಿದರೂ ಕೂಡ ಅವರು ಹಾಗೆ ಇರಲು ಆಗುತ್ತಿಲ್ಲ.
ಇವತ್ತು ಒಬ್ಬ ೨೫-೩೦ ಕೋಟಿ ರೂಪಾಯಿ ಬಂಡವಾಳ ಹೂಡಿ ಬಹಳ ಆದರ್ಶ ಇಟ್ಟುಕೊಂಡು ಚಾನಲ್ ಪ್ರಾರಂಭ ಮಾಡುತ್ತಾನೆ. ಆದರೆ ಒಂದೆರಡು ತಿಂಗಳಲ್ಲಿ ಆಗುವ ನಷ್ಟವನ್ನು ತುಂಬಿಸಿಕೊಳ್ಳಲು ಜ್ಯೋತಿಷಿಗಳನ್ನು ತಂದು ಕೂರಿಸುತ್ತಾನೆ. ಇದು ಇವತ್ತಿನ ಪರಿಸ್ಥಿತಿ. ಕಡಿಮೆ ಬಂಡವಾಳದ ಮಾಧ್ಯಮಗಳು ಇದಕ್ಕೆ ಪರಿಹಾರವಾಗಬಲ್ಲದು. ಇವತ್ತು ಬಹಳ ಮಂಡಿ ಲಂಕೇಶರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಇವತ್ತು ಇದ್ದಿದ್ದರೆ ನನ್ನ ಪ್ರಕಾರ ಅಷ್ಟೊಂದು ಪ್ರಸಾರ ಸಂಖ್ಯೆ ಇರುವ ಪತ್ರಿಕೆಯನ್ನು ನಡೆಸಲಿಕ್ಕೆ ಆಗುತ್ತಿರಲಿಲ್ಲ. ಆಗ ಲಂಕೇಶ್ ಪತ್ರಿಕೆಗೆ ೧ ರೂ. ಇರುವಾಗ ಪ್ರಜಾವಾಣಿಗೆ ೧.೫೦ ರೂ ಇತ್ತು.
ಆದರೆ, ಈಗ ಲಂಕೇಶ್‌ಪತ್ರಿಕೆಗೆ ೧೫ ರೂ.ಗಳಿದ್ದರೆ ಪ್ರಜಾವಾಣಿಗೆ ೪.೫೦ ರೂಪಾಯಿ ಇದೆ. ಗೌರಿ ಲಂಕೇಶ್ ಅವರು ಪತ್ರಿಕೆ ಹೊರತಾಗಿಯೂ ಇತರೆ ಪಬ್ಲಿಕೇಶನ್‌ಗಳಿಂದ ನಷ್ಟವನ್ನು ತೂಗಿಸಿಕೊಳ್ಳುತ್ತಿದ್ದಾರೆ, ಗೌರಿಯವರ ಲಂಕೇಶ್ ಪತ್ರಿಕೆ ಇವತ್ತಿಗೂ ನಷ್ಟದಲ್ಲಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸುವುದು ಸಾಧ್ಯವೇ ಇಲ್ಲ. ಇದು ಎಲ್ಲಾ ಸಣ್ಣ ಪತ್ರಿಕೆಗಳ ಗೋಳು. ಈ ದೇಶದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಮಾರಾಟದರ ಇರುವ ವಸ್ತು ಎಂದರೆ ಅದು ’ಪತ್ರಿಕೆ’ ಇದರ ನಷ್ಟವನ್ನು ಜಾಹೀರಾತಿನಿಂದಲೆ ತುಂಬಿಸಿಕೊಳ್ಳಬೇಕಾಗಿದೆ. ಹೀಗಿರುವಾಗ ಜಾಹೀರಾತುದಾರನಿಗೆ ನಿಷ್ಠರಾಗಿರಬೇಕೋ? ದಲಿತರ ಪರ ಇರಬೇಕೋ?
ನಾನು ಇದನ್ನು ಹೇಳಲಿಕ್ಕೆ ಇನ್ನೂ ಹೆಚ್ಚು ಅನುಭವವಿದೆ. ರಘುರಾಂ ಶೆಟ್ಟಿಯವರು ಆ ಕಾಲದಲ್ಲೆ ಇದನ್ನು ಅಲೋಚನೆ ಮಾಡಿ ಇದನ್ನ ಬದಲಾವಣೆ ಮಾಡಬೇಕೆಂದು ’ಮುಂಗಾರು’ ಪತ್ರಿಕೆ ಮಾಡಿದರು. ’ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗಿಯುವ.....’ ಎಂದು ಘೋಷಣೆಯೊಂದಿಗೆ ಬೀದಿಯಲ್ಲಿ ಹೋದೆವು. ಆ ಕಾಲದಲ್ಲಿ ಬಹಳ ಉದಾತ್ತವಾದ ಉದ್ದೇಶದಿಂದ ಪ್ರಾಂಭವಾಯಿತು. ಆಮೇಲೆ ಏನಾಯಿತು.? ಒಂದೆರಡು ತಿಂಗಳಲ್ಲಿ ಸರ್ಕ್ಯೂಲೇಶನ್ ಕೆಳಗಿಳಿಯಿತು. ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯಲಿಕ್ಕೆ ಆಗಲಿಲ್ಲ. ಅದು ಕನ್ನಡದ ಮೊದಲ ಪಬ್ಲಿಕ್ ಲಿಮಿಟೆಡ್ ಕಂಪನಿ. ಓದುಗರೇ ಷೇರುದಾರರು ಎಂಬ ಕಲ್ಪನೆಯೊಂದಿಗೆ ಪ್ರಾರಂಭವಾದದ್ದು, ಅದು ಯಶಸ್ಸು ಕಂಡಿದ್ದರೆ ಬಹುಶಃ ಇವತ್ತು ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಪ್ರಯೋಗ ಶಾಲೆಯಾಗುತ್ತಿರಲಿಲ್ಲ. ಮುಂಗಾರನ್ನು ಉಳಿಸಿಕೊಳ್ಳಲು ಆಗಲಿಲ್ಲ.
          ಇಂತಹ ಒಂದು ಪತ್ರಿಕೆಯನ್ನು ಮಾಡಲು ಸಾಧ್ಯವಿಲ್ಲ ಎಂದೇನಲ್ಲ, ಆದರೆ ಅವತ್ತು ಮುಂಗಾರು ಮಾಡಿದ ಕಾಲ ಇಂದಿಲ್ಲ. ಇವತ್ತು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಲ್ಲೂ ದುಡ್ಡಿದ್ದವರು ಒಂದಿಷ್ಟು ಜನ ಇದ್ದಾರೆ. ಇವತ್ತು ಸೋಷಿಯಲ್ ಕ್ಯಾಪಿಟಲ್ ಎಂಬುದನ್ನು ಸೋಷಿಯಲಿಜಿಸ್ಟ್ ಗಳು ಮಾತನಾಡುತ್ತಾರೆ. ಇದು ಸಾಧ್ಯವಾಗಬೇಕು. ಕೆ.ಎನ್ ಗುರುಸ್ವಾಮಿ ಅವರು ಅಬಕಾರಿ ಕಂಟ್ರ್ಯಾಕ್ಟರ್. ಅವರ ಅದೇ ಉದ್ಯಮದಲ್ಲಿ ಮುಂದುವರೆದಿದ್ದರೆ ಬಹಳಷ್ಟು ದುಡ್ಡು ಮಾಡುತ್ತಿದ್ದರು. ಆ ಕಾಲದಲ್ಲಿ ಶೂದ್ರರಿಗೆ ಪತ್ರಿಕೆ ಇರಲಿಲ್ಲ. ಆಗ ಒಂದು ಪತ್ರಿಕೆ ಮಾಡಿದರು (ಪ್ರಜಾವಾಣಿ) ೧೦ ವರ್ಷ ಪತ್ರಿಕೆ ನಷ್ಟದಲ್ಲಿ ನಡೆಯಿತು. ಇವತ್ತು ದುಡ್ಡಿದ್ದವರು ಇಲ್ಲವೇನಿಂದಿಲ್ಲ. ೧೦೦ಕೋಟಿ ರೂಗಳಿಂದ ೫೦೦ ಕೋಟಿ ಇರುವವರು, ಒಂದು ಸಾವಿರ ಎಕರೆ ಭೂಮಿ ಇಟ್ಟುಕೊಂಡಿರುವ ಕುಳಗಳು ಅಹಿಂದ ವರ್ಗಗಳಲ್ಲಿಯೇ ಇದ್ದಾರೆ. ಯಾರಾದರೂ ಮಾಧ್ಯಮದಲ್ಲಿ  ಬಂಡವಾಳ ಹೂಡಲು ತಯಾರಿದ್ದಾರಾ? ಅವರೂ ಮಾಡಿದ್ರೂ ಮುಖ್ಯಸ್ಥರಾಗಿ ಅಹಿಂದ ವರ್ಗದವರಲ್ಲದವರನ್ನು ಕೂರಿಸಿ ದೂರ ಇರುತ್ತಾರೆ. ಕೇಳಿದರೆ, ಅವರೆ ಬೇಕಪ್ಪ ನಡೆಸಲಿಕ್ಕೆ ಅಂತಾರೆ.
ಇವತ್ತು ಅನ್ನ ಭಾಗ್ಯ, ಕ್ಷೀರ ಭಾಗ್ಯ ದಂತಹ ಜನಪರ ಕಾರ್ಯಕ್ರಮಗಳಿಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವುದು ಏಕೆ ಅನ್ನೋದನ್ನು ಯೋಚಿಸಬೇಕು. ಯಾರ್ಯಾರು ಈ ವರ್ಗಗಳ ಪರ ಮಾತನಾಡಿದ್ದಾರೋ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ. ಅದು ದೇವರಾಜ ಅರಸು ಅವರ ವಿರುದ್ದವೂ ನಡೆದಿತ್ತು. ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಜಾರಿಗೆ ತಂದ ತಕ್ಷಣ ಅವರು ಮಾಧ್ಯಮದ ಪಾಲಿಕೆ ಶತ್ರುಗಳಾಗಿಬಿಟ್ಟರು. ವಿ.ಪಿ ಸಿಂಗ್ ಅಹಿಂದ ವರ್ಗದವರಲ್ಲ, ಅವರೊಬ್ಬ ರಾಜ. ಅಹಿಂದ ವರ್ಗದ ಪರ ಮಾತನಾಡಲು ಆ ವರ್ಗದವೇ ಆಗಬೇಕಿಲ್ಲ. ಆ ವರ್ಗದ ಪರ ಮಾತನಾಡಿದರೆ ಸಾಕು, ಅವರ ಧ್ವನಿ ಅಡಗಿಸುವ ಕೆಲಸ ಪ್ರಾರಂಭವಾಗಿಬಿಡುತ್ತದೆ. ಬಾಬು ಜನಗಜೀವನ ರಾಂ ಅವರನ್ನು ನೆನಪಿಸಿಕೊಳ್ಳುವವರಿಲ್ಲ ಇವತ್ತು. ಹಸಿರು ಕ್ರಾಂತಿಯ ಹರಿಕಾರ. ಭಾರತ-ಪಾಕ್ ನ ಮೊದಲ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿದ್ದವರು. ಅವರನ್ನು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿ ದಲಿತರ ಮಾಲೀಕತ್ವದ ಪತ್ರಿಕೆಗಳು ಚಾನಲ್ ಗಳು ಬರಬೇಕು ನಿಜ, ಆದರೆ ಮಾಲೀಕರಾಗಲು ದುಡ್ಡು ಬೇಕು. ಇವತ್ತು ಸಣ್ಣ ಪತ್ರಿಕೆಗಳು, ಮಾಸಿಕಗಳು ಅಲ್ಲಲ್ಲಿ ಇವೆ ದುಡ್ಡಿದ್ದವರು ಬಂದರೆ ಅಂಬೇಡ್ಕರ್ ಅವರ ಆಶಯದಂತೆ ಒಂದು ಮುಖ್ಯವಾಹಿನಿಯ ಪತ್ರಿಕೆ ಬರಬಹುದು.
ಅಮೇರಿಕಾದಲ್ಲಿ ’ಏಬೋನಿ’, ’ಚಿಕಾಗೋ ಡಿಫೆಂಡರ್’ ನಂತಹ ಕರಿಯರೆ ನಡೆಸುವ ಪತ್ರಿಕೆಗಳಿವೆ ಅಲ್ಲಿಯ ಕರಿಯರಿಗೂ ಭಾರತದ ದಲಿತರಿಗೂ ಇರುವ ವ್ಯತ್ಯಾಸವೇನೆಂದರೆ ಅಲ್ಲಿ ಒಳಪಂಗಡಗಳಿಲ್ಲ. ಭಾಷೆ ಒಂದೇ ಆಗಿದೆ. ಆ ದೇಶದಲ್ಲಿದ್ದಂತೆ ಇಲ್ಲಿಯೂ ದಲಿತರು ಅಭಿವೃದ್ಧಿ ಹೊಂದಿದ್ದಾರೆ. ಅವರಿಗೂ ಕೊಳ್ಳುವ ಸಾಮರ್ಥ್ಯ ಬಂದಿದೆ. ಇವತ್ತು ಕನ್ಸ್ಯೂಮರ್ ಗೂಡ್ಸ್‌ಗಳನ್ನು ಪರ್ಚೆಸ್ ಮಾಡುವಂತಹ ಸಾಮರ್ಥ್ಯ ಈ ಸಮುದಾಯದಲ್ಲಿ ಸ್ಪಲ್ಪ ಬಂದಿದೆ. ಟೂಥ್ ಪೇಸ್ಟ್‌ನ್ನು ದಲಿತರೂ ಬಳಸುತ್ತಿದ್ದಾರೆ. ನಾಳೆ ದಲಿತರು ಪತ್ರಿಕೆ ಮಾಡಿದರೆ ಟೂಥ್ ಪೇಸ್ಟ್ ಮಾರುವವರು ಅದಕ್ಕೆ ಜಾಹೀರಾತು ಕೊಡಲೇ ಬೇಕು.

            ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗದಂತೆ ತಡೆಯಲಿಕ್ಕಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು.ಈ ದೇಶದ ಖಾಸಗಿ ಕ್ಷೇತ್ರದಲ್ಲಿ ಉದ್ಯಮಗಳನ್ನು ಬೆಳಸಲಿಕ್ಕೆ ಸರ್ಕಾರಗಳು ಹಲವಾರು ರೀತಿಯ ನೆರವುಗಳನ್ನು ಕೊಡುತ್ತಿದೆ. ನ್ಯಾನೋ ಫ್ಯಾಕ್ಟರಿಗಾಗಿ ಗುಜರಾತ್ ನಲ್ಲಿ ಶೇ.೦.೧ ಬಡ್ಡಿದರದಲ್ಲಿ ಸಾಲ ಕೊಟ್ಟಿದೆ. ಪಂಜಾಬ್‌ನಲ್ಲಿ ಬಿರ್ಲಾ ರಿಫೈನರಿ ಪ್ರಾರಂಭಿಸಲು ಲಕ್ಷ್ಮಿ ಮಿಟ್ಟಲ್ ಗೆ ಅಲ್ಲಿನ ಸರ್ಕಾರ ೧೨೫೦ಕೋಟಿ ರೂಗಳನ್ನು  ಶೇಕಡಾ 0.1 ಬಡ್ಡಿ ದರದಲ್ಲಿ ಸಾಲ ನೀಡಿದೆ. ಇಂತಹ ದೊಡ್ಡ ಪಟ್ಟಿಯೇ ಇದೆ. ಪಿ.ಸಾಯಿನಾಥ್ ಅವರ ನ್ನು ಕೇಳಿದ್ರೆ  ಇನ್ನೂ ದೊಡ್ಡಪಟ್ಟಿಯನ್ನೆ ಕೊಡುತ್ತಾರೆ. ಇಡೀ ರೈತರಿಗೆ ಕೊಡುವ ೨ವರೆ ಲಕ್ಷ ಕೋ.ರೂ ಸಬ್ಸಿಡಿ ಏನಿದೆ ಅದನ್ನೆ ದೊಡ್ಡದು ತಿಳಿದುಕೊಂಡಿದ್ದೇವೆ. ಆದರೆ ಕಾರ್ಪೋರೇಟ್ ಸೆಕ್ಟರ್ ಗೆ ಸರ್ಕಾರ೩೬ಲಕ್ಷ ಕೋಟಿ ರೂಗಳ ತೆರಿಗೆ ವಿನಾಯಿತಿ ನೀಡಿದೆ.ರಿಲಯನ್ಸನ ವಾರ್ಷಿಕ ವರಮಾನ ೨ವರೆ ಲಕ್ಷ ಕೋ.ರೂ. ನಮ್ಮ ಕರ್ನಾಟಕದ ಬಜೆಟ್ ೧ಲಕ್ಷ ೨೦ಸಾವಿರ ಕೊಟಿ ರೂಪಾಯಿ.  ವಿಜಯ ಮಲ್ಯ ಏನು ಮಾಡಿದಾನೆ ಅಂತ ಗೊತ್ತಿದೆ. ಅವನಿಗೆ ಸಾಲ ಕೊಟ್ಟ ಬ್ಯಾಂಕಿನಿಂದ ೫-೧೦ ಸಾವಿರ ರೂ.ಸಾಲ ಮಾಡಿದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾವಿರಾರು ಕೋ.ರೂ ಮುಳುಗಿಸಿದ ಮಲ್ಯ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ. ಇದು ಇಂಡಿಯಾದ ಪರಿಸ್ಥಿತಿ.
            ಆದ್ದರಿಂದ ಮಾಧ್ಯಮ ಈ ಸಮಾಜಕ್ಕೆ ಬೇಕು ಎನ್ನುವುದಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಜವಾಗಿ ಅರ್ಥದಲ್ಲಿ ಉಳಿಸಿಕೊಳ್ಳಬೇಕಾದರೆ ಮಾರ್ಧಯಮದಲ್ಲಿ ಎಲ್ಲಾ ಸಮುದಾಯಗಳ ಅನುಭವ ಲೋಕಗಳು ಬರಬೇಕಾದರೆ ಈ ಪತ್ರಿಕೋದ್ಯಮ ಮಾಡುವವರಿಗೂ ಕೂಡ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಸಾಲ ಕೊಡಬೇಕು. ಸಬ್ಸಿಡಿ ಯಾಕೆ ಕೊಡಬಾರದು? ಅದನ್ನು ಎಲ್ಲಾ ಉದ್ಯಮಗಳ ಮಟ್ಟಿಗೆ ತಂದು ನಿಲ್ಲಿಸಿದರೆ ಸ್ಪರ್ಧೆ ಮಾಡಲು ಆಗುವುದಿಲ್ಲ. ನ್ಯಾನೋ ಕಾರಿನ ಫ್ಯಾಕ್ಟರಿಗೆ ಶೇ.೦.೧ ರ ಬಡ್ಡಿದರದಲ್ಲಿ ಸಾಲ ಕೊಡುವುದಾದರೆ ಒಂದು ಪತ್ರಿಕೆ ಮಾಡಲು ಯಾಕೆ ಕೊಡಬಾರದು ಎಂಬುದು ನನ್ನ ಪ್ರಶ್ನೆ.
             ಉದ್ಯಮಿಗಳು ನೇರವಾಗಿ ಮಾಧ್ಯಮ ಕ್ಷೇತ್ರಕ್ಕೆ ಬಂದು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿ. ನ್ಯೊಮ್ ಚಾಮಸ್ಕೀ ಅವರು ’ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್’ ಅಂತ ಹೇಳ್ತಾರೆ. ಸಮ್ಮತಿಗಳನ್ನು ಉತ್ಪಾದಿಸುವಂತಹುದು. ಇವತ್ತು ಚಾನಲ್‌ಗಳಲ್ಲಿ ಪತ್ರಿಕೆಗಳಲ್ಲಿ ಶೇ.೯೮ರಷ್ಟು ಜನತೆ  ಸರ್ಕಾರದ ವಿರುದ್ದವಾಗಿವೆ. ಶೇ ೨ ರಷ್ಟು ಪರವಾಗಿದೆ ಎಂದು ಬಿತ್ತರಿಸಲಾಗುತ್ತಿದೆ.. ಇದು ನಿಜನಾ? ಇಂತಹ ’ಸಮ್ಮತಿ ಉತ್ಪಾದನೆ’ಇಂಡಿಯಾದಲ್ಲಿ ಆಗಬಾರದು ಎಂದಾದರೆ ಪತ್ರಿಕೆಗಳನ್ನು ಪ್ರಾರಂಭ ಮಾಡುವವರಿಗೆ ಸರ್ಕಾರ ನೆರವಿಗೆ ಬರಬೇಕು. ದಲಿತ ಉದ್ಯಮಿ ಸಂಘಟನೆಗಳು ಈ ಬಗ್ಗೆ ಯೋಚನೆ ಮಾಡಬೇಕು.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ ನೇ ಜನ್ಮ ದಿನಾಚರಣೆಯ ಸಮಯದಲ್ಲಿ ಇಂತಹದ್ದೊಂದು ಚಿಂತನೆ ನಡೆಯಲಿ.. ಸಾಧ್ಯವಾದರೆ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ಎಲ್ಲಾ ಪತ್ರಿಕೆಗಳ ಎಡಿಟೋರಿಯಲ್ ಗಳನ್ನು ಕನ್ನಡಕ್ಕೆ ತರುವ ಕೆಲಸ ಆಗಲಿ. ಸರ್ಕಾರ  ಇದನ್ನು ಮಾಡಿದರೆ ಸಂತೋಷದ ವಿಷಯ.
-ದಿನೇಶ್ ಅಮಿನ್ ಮಟ್ಟು

Thursday, July 21, 2016

‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ದ ಆರೋಪ

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಫೇಸ್ ಬುಕ್ ನಲ್ಲಿ ಒಂದಷ್ಟು ಕಿಡಿಗೇಡಿಗಳು ಮಹಿಳೆಯೊಬ್ಬರ ಮೇಲೆ ಮಾನಹಾನಿಕರವಾದ ಕಮೆಂಟ್ ಮಾಡಿದಾಗ ನಾನೇ ಮುಂದೆ ನಿಂತು ಪೊಲೀಸರಿಗೆ ದೂರು ಕೊಡಿಸಿದ್ದೆ. ಅದರ ನಂತರ ನನ್ನ ಮತ್ತು ರಾಜ್ಯದ ಮುಖ್ಯಮಂತ್ರಿಗಳ ವಿರುದ್ದವೂ ಇದೇ ರೀತಿ ಅಶ್ಲೀಲ ಭಾಷೆ ಬಳಸಿ ನಿಂದಿಸಿದಾಗ ನಾನೇ ಪೊಲೀಸರಿಗೆ ದೂರು ನೀಡಿದ್ದೆ. ಈ ಎರಡೂ ಸಂದರ್ಭಗಳಲ್ಲಿ ನನ್ನ ವಿರುದ್ಧ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ದ ಆರೋಪ ಹೊರಿಸಲಾಯಿತು. ಪ್ರಧಾನಮಂತ್ರಿಯವರಾದ ಸಾಕ್ಷಾತ್ ನರೇಂದ್ರಮೋದಿಯವರೇ ಇಂತಹ ದೂರುಗಳನ್ನು ನೀಡಿದ್ದನ್ನು ಆಗ ಪ್ರಕರಣಗಳನ್ನು ಉಲ್ಲೇಖಿಸಿ ನಾನು ಬರೆದಿದ್ದೆ. ಅದರ ನಂತರ ಸಂಸದ ಪ್ರತಾಪ ಸಿಂಹ ಮಂಗಳೂರಿನ ಪತ್ರಕರ್ತರೊಬ್ಬರಿಗೆ ಧಮ್ಕಿ ಹಾಕಿದ್ದು ಮತ್ತು ದಾವಣಗೆರೆಯ ಸಾಮಾಜಿಕ ಕಾರ್ಯಕರ್ತನಿಗೂ ಬೆದರಿಸಿದ್ದು ವರದಿಯಾಗಿತ್ತು. ಇದ್ಯಾವುದೂ ನನ್ನ ವಿರುದ್ಧ ಆರೋಪ ಮಾಡಿರುವವರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಆಗಲೇ ಇಲ್ಲ.
ಈಗ ಕಾಶ್ಮೀರದ ಸ್ಥಿತಿ ನೋಡಿ. ಅಲ್ಲಿ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾದ ದಮನಕ್ಕೆ ಸರ್ಕಾರ ಟೊಂಕಕಟ್ಟಿ ನಿಂತಿದೆ. ಮೊಬೈಲ್ ಇಂಟರ್ ನೆಟ್ ಮತ್ತು ಬ್ರಾಂಡ್ ಬ್ಯಾಂಡ್ ಸರ್ವೀಸನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲಿನ ಪತ್ರಿಕಾ ಕಚೇರಿಗಳು ಮತ್ತು ಮುದ್ರಣಾಲಯಗಳ ಮೇಲೆ ಪೊಲೀಸರುದಾಳಿ ನಡೆಸುತ್ತಿದ್ದಾರೆ. ಪತ್ರಿಕೆಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ. ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ಅವರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಪತ್ರಕರ್ತರ ಓಡಾಟಕ್ಕೆ ಪರವಾನಿಗೆ ಪತ್ರವನ್ನು ನಿರಾಕರಿಸಲಾಗುತ್ತಿದೆ. ಪತ್ರಕರ್ತರನ್ನೆಲ್ಲ ಸಾರಸಗಟಾಗಿ ''ದೇಶದ್ರೋಹಿ' ಗಳ ಗುಂಪಿಗೆ ಸೇರಿಸಲಾಗಿದೆ.
1977ರ ತುರ್ತುಪರಿಸ್ಥಿತಿಗಿಂತ ಭೀಕರವಾದ ಪರಿಸ್ಥಿತಿಯನ್ನು ಅಲ್ಲಿನ ಮಾಧ್ಯಮ ಕ್ಷೇತ್ರ ಎದುರಿಸುತ್ತಿದೆ. ಇದು ‘ಸಂದೇಶವನ್ನು ನಿರ್ಲಕ್ಷಿಸಿ ಸಂದೇಶವಾಹಕನ ಹತ್ಯೆ ಮಾಡುವ ಕ್ರಮ’. ರಾಜ್ಯ ಸರ್ಕಾರ ಮಾತ್ರ ಏಕಪಕ್ಷೀಯವಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಸಾಧ್ಯ ಇಲ್ಲ. ಇದರಲ್ಲಿ ನರೇಂದ್ರಮೋದಿ ಸರ್ಕಾರದ ಪಾತ್ರವೂ ಇದೆ. ಅಲ್ಲಿರುವುದು ಬಿಜೆಪಿ –ಪಿಡಿಪಿ ಮೈತ್ರಿಕೂಟ ಸರ್ಕಾರವಾಗಿರುವ ಕಾರಣ ಈ ಮಾಧ್ಯಮ ದಮನ ನೀತಿಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಜನಪ್ರಿಯ ನಾಯಕ. ಅವರ ಸಂವಹನವೇನಿದ್ದರೂ ಅದರ ಮೂಲಕವೇ. ಆದರೆ ಅವರು ಕಾಶ್ಮೀರದಲ್ಲಿ ನಡೆಸುತ್ತಿರುವುದೇನು?
ಕಳೆದ ಕೆಲವು ವಾರಗಳಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಹಳಷ್ಟು ಆಧಾರವಿಲ್ಲದ ವರದಿಗಳು ಪ್ರಸಾರ-ಪ್ರಕಟಾ ಆಗಿವೆ. ಇದನ್ನು ಗಮನಿಸಿದ ಹಲವು ಮಂದಿ ‘ನೀವು ಕೂಡಾ ಕಾಶ್ಮೀರದ ಮಾಧ್ಯಮ ನೀತಿ’ ಅನುಸರಿಸಬೇಕು’ ಎಂದು ಪುಕ್ಕಟೆ ಸಲಹೆ ನೀಡಿದ್ದುಂಟು. ಆದರೆ ಯಾವುದಾದರೂ ಪತ್ರಿಕೆ ಇಲ್ಲವೆ ಚಾನೆಲ್ ನ ಸಂಪಾದಕರಿಗೆ ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಇಲ್ಲವೆ ಸರ್ಕಾರದ ಯಾವುದೇ ಅಧಿಕಾರಿಯಾಗಲಿ ಪೋನ್ ಮಾಡಿ ಯಾಕೆ ಇಂತಹ ವರದಿ ಪ್ರಕಟ-ಪ್ರಸಾರವಾಗುತ್ತಿವೆ ಎಂದು ಕೇಳಿಲ್ಲ. ಒಂದಲ್ಲ ಹಲವುಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇರುವ ತಮ್ಮ ಬದ್ದತೆಯನ್ನು ಸಾರಿದ್ದಾರೆ. ನೀವ್ಯಾಕೆ ಅಲ್ಲಿದ್ದೀರಿ ಎಂದು ಆಗಾಗ ನನ್ನನ್ನು ಕೆಲವು ಸ್ನೇಹಿತರು ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿಯವರ ಈ ಬದ್ದತೆ ಉತ್ತರವೂ ಹೌದು.
ಡೆಕ್ಕನ್ ಹೆರಾಲ್ಟ್ ಪತ್ರಿಕೆ ಇದಕ್ಕೆ ಸಂಬಂಧಿಸಿದ ಒಂದು ವಿಚಾರಪ್ರಚೋದಕ ಸಂಪಾದಕೀಯವನ್ನು ಇಂದು ಬರೆದಿದೆ:
Media gag in Valley, back to Emergency
July 21, 2016, DHNS
Kashmir Valley has been pushed into an information black hole in a most anti-democratic and unwise exercise of arbitrary powers by the government. The state government took drastic action in the last few days to gag all media – conventional, non-conventional and social – to cut off the Valley from the world and from itself and to prevent it from being presented to the outside world. It could not have taken the action without the concurrence of the Central government. It is a virtual throwback to the Emergency days whose horrors were thought to have been buried decades ago. The comprehensive ban on news and blocking of information channels in Kashmir was the worst assault on the citizens’ basic right to know and freedom of expression since those shameful days. These rights are the same for Kashmir as for the rest of India, and the attack on them should be condemned and opposed by everyone. What is at stake in Kashmir is and will be at stake elsewhere.
The methods of enforcement of the gag orders were reminders of the actions of the worst authoritarian regimes. Mobile internet and broadband services had already been disconnected. The police raided newspaper offices and printing presses, seized newspapers and printing material and detained staff after days of resorting to methods like blocking news, denying curfew passes, physically threatening journalists and otherwise obstructing collection and dissemination of news. The government now does not take responsibility for its actions and has denied there was any gagging. But a minister had clearly fo-und fault with “certain projections” of newspapers. Kashmir is witnessing a high tide of public anger, defiance and protests after a militant was killed by the security forces some days ago. The government is responsible for mismanaging and aggravating the situation. It cannot obliterate the message and shoot the messenger for its own failure.
When legitimate channels of news are blocked, wrong news and rumours spread, causing more damage, further aggravating the situation. Authoritarian governments do not learn this simple truth. Free media provides the best insurance against untruth and wrong propaganda, and no government wins a propaganda war after gagging the media. The government only loses its credibility, violates its obligations to the people and its commitment to uphold the Constitution when it curbs freedom of expression. The world’s largest democracy cannot deny the most basic of freedoms to its people, and continue to claim to be democratic. Even its claims in Kashmir will be questioned if it denies such rights to the people. The government must apologise for the grievous mistake it made and ensure that it will not be repeated.

Saturday, July 2, 2016

ಮುಂಗಾರು ಪತ್ರಿಕೆ: `ಓದುಗರೊಂದಿಗೆ ಸಂಪಾದಕ'

ಮುಂಗಾರು ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ರಘುರಾಮ ಶೆಟ್ಟಿಯವರು ನಡೆಸಿದ್ದ ಹಲವಾರು ಪ್ರಯೋಗಗಳಲ್ಲಿ ಅವರು ಆಗಾಗ ಬರೆಯುತ್ತಿದ್ದ ‘ಓದುಗರೊಂದಿಗೆ ಸಂಪಾದಕ’ ಎನ್ನುವ ಅವರ ಅಂಕಣವೂ ಒಂದು. ಓದುಗರಿಂದ ಬಂದ ಪತ್ರಗಳನ್ನು ಓದಿ ಅವುಗಳಲ್ಲಿನ ಸಾಮಾನ್ಯ ದೂರುಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ತನ್ನ ಮತ್ತು ಓದುಗನ ನಡುವಿನ ಸಂವಹಣದ ಸೇತುವೆಯನ್ನು ಗಟ್ಟಿಗೊಳಿಸುತ್ತಾ ಹೋಗುವವನೇ ನಿಜವಾದ ಪತ್ರಕರ್ತ ಎನ್ನುವುದನ್ನು ನಾನು ಕಲಿತದ್ದೇ ಈ ಪ್ರಯೋಗದಿಂದ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ಬಗ್ಗೆ ಕೆಲವು ಕೋಮುವಾದಿಗಳು ವಿವಾದವನ್ನು ಸೃಷ್ಟಿಸಿದಾಗ ನನ್ನ ಆಶಯವನ್ನು ಓದುಗರಿಗೆ ಇನ್ನಷ್ಟು ಸ್ಪಷ್ಟಗೊಳಿಸಲು ಮತ್ತೊಂದು ಲೇಖನಬರೆದಿದ್ದೆ. ಅಲ್ಲಿಯೂ ಈ ಮಾತನ್ನು ಪ್ರಸ್ತಾಪಿಸಿದ್ದೆ. (ಆ ಎರಡನೇ ಲೇಖನವನ್ನು ‘ ಕ್ಷಮೆಯಾಚನೆ’ ಎಂದು ಈಗ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಲಜ್ಜೆ ಇಲ್ಲದೆ ಸಮರ್ಥಿಸುತ್ತಾ ತಿರುಗುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಸುಳ್ಳುಕೋರ ಹೇಳಿಕೊಂಡು ಅಡ್ಡಾಡುತ್ತಿದ್ದಾನೆ)
ಬಾಬರಿ ಮಸೀದಿ ಧ್ವಂಸದ ನಂತರ ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಶಾಲೆಯಾಗಿ ಬದಲಾಗಿರುವುದು ಎಂದು ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ 1985ರಲ್ಲಿಯೇ ಇದು ಶುರುವಾಗಿತ್ತು. ಸಾರಾ ಅಬೂಬಕರ್ ಮತ್ತು ಪೋಲಂಕಿ ರಾಮಮೂರ್ತಿಯವರ ಮೇಲೆ ಸಾರ್ವಜನಿಕವಾಗಿಯೇ ದಾಳಿ ನಡೆದದ್ದು ಆ ಕಾಲದಲ್ಲಿ.ಅವೆ ತಮಗೊಪ್ಪದ ವಿಚಾರಗಳನ್ನು ಬರೆಯುವವರ ಮೇಲೆ ಶಾಬ್ದಿಕ ಅತ್ಯಾಚಾರ ನಡೆಸುತ್ತಿದ್ದ ಭಕ್ತರು ಆಗಲೇ ಹುಟ್ಟಿಕೊಂಡಿದ್ದರು. ವಡ್ಡರ್ಸೆಯವರು ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದರು. ಇವೆಲ್ಲವೂ ಈ ಹಳೆಯ ಅಂಕಣ ಓದಿದರೆ ನಿಮಗೆ ಅರ್ಥವಾಗುತ್ತದೆ.
ಕೆಲವು ವರ್ಷಗಳ ನಂತರ ಮಹಾತ್ಮಗಾಂಧೀಜಿ ಬರೆದಿರುವ ‘ಹಿಂದ್ ಸ್ವರಾಜ್ಯ’ ಪುಸ್ತಕ ಓದಿದಾಗ ನನಗೆ ಮತ್ತೆ “ಓದುಗರೊಂದಿಗೆ ಸಂಪಾದಕ’ ಅಂಕಣ ನೆನೆಪಾಗಿತ್ತು. ಇಂತಹದ್ದೊಂದು ಅಂಕಣವನ್ನು ಬರೆಯುವಂತೆ ಪ್ರಜಾವಾಣಿ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರಿಗೂ ಹೇಳಿದ್ದೆ. ಅವರು ಆಗ “ಓದುಗ ಸಂಪಾದಕ’ ನನ್ನು ನೇಮಿಸುವ ಬಗ್ಗೆ (ದಿ.ಹಿಂದೂ ಪತ್ರಿಕೆಯಲ್ಲಿದ್ದ ಹಾಗೆ) ಒಲವು ತೋರಿದ್ದರು. ನನ್ನ ಆಸೆ ಕೈಗೂಡಲಿಲ್ಲ, ಅವರ ಆಸೆಯಾದರೂ ಈಡೇರಲಿ.
ಇದನ್ನೆಲ್ಲ ಬರೆಯುತ್ತಿದ್ದ ಹಾಗೆ ನಾನು ಪತ್ರಕರ್ತರನ್ನು ಉದ್ದೇಶಿಸಿ ಮಾಡಿದ ನೂರಾರು ಭಾಷಣಗಳ ಟಿಪ್ಪಣಿಗಳು ನೆನೆಪಾಗುತ್ತಿವೆ. ಅವೆಲ್ಲವನ್ನು ಪ್ರಶ್ನೋತ್ತರ ರೂಪದಲ್ಲಿ ‘ಓದುಗರೊಂದಿಗೆ ಸಂಪಾದಕ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕವನ್ನು ಪ್ರಕಟಿಸಬಾರದೇಕೆ ಎಂದು ಯೋಚಿಸುತ್ತಿದ್ದೇನೆ. ಹಾಗೆಂದಾಗ ನನ್ನ ಓದುವ ಕೋಣೆಯಲ್ಲಿ ಪ್ರಕಟಣೆಯ ಭಾಗ್ಯ ಕಾಣದೆ ರಾಶಿಬಿದ್ದಿರುವ ಸಾವಿರದಷ್ಟಿರುವ ಅಂಕಣಗಳು, ಲೇಖನಗಳು ಅಣಕಿಸುತ್ತಿವೆ. ಪ್ರಕಾಶಕರು ಕಾಡುತ್ತಿದ್ದಾರೆ, ನನಗ್ಯಾಕೋ ಮನಸ್ಸಾಗುತ್ತಿಲ್ಲ.
ಅವೆಲ್ಲ ಇರಲಿ ಮೊದಲು ಕೆಳಗಿರುವ ವಡ್ಡರ್ಸೆಯವರ ಅಂಕಣ ಓದಿ.
------------------------------------------------------------------------------

ನಿಮ್ಮೂರಿನವನಾದುದು ನನ್ನಪರಾಧವಾಗಬಾರದಲ್ಲ?
1956ರ ಮೇ ತಿಂಗಳ ಅದೊಂದು ಸುದಿನ; ಅಂದು ಜೋಗಜಲಪಾತದ ಮಹಾತ್ಮಾ ಗಾಂಧಿ ಜಲ ವಿದ್ಯುದಾಗರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಜಲವಿದ್ಯುತ್ ಪೂರೈಕೆಯ ಸಡಗರದ ಸಮಾರಂಭವೊಂದರ ಏರ್ಪಾಡಾಗಿತ್ತು. ಅಂದಿನ ಮೈಸೂರು ಸಂಸ್ಥಾನದ ಕೊಡುಗೆಯಾದ ಜಲವಿದ್ಯುತ್ತನ್ನು, ಉದ್ಯಮಶೀಲರೆನ್ನಿಸಿಕೊಂಡ ದಕ್ಷಿಣ ಕನ್ನಡದ ಜನತೆಗೆ ವಿಧಿವತ್ತವಾಗಿ ಒಪ್ಪಿಸಲು ಅಲ್ಲಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಬಂದಿದ್ದರು.
ಕುಲಶೇಖರದಲ್ಲಿ ನಿರ್ಮಿತವಾಗಿದ್ದ ವಿದ್ಯುತ್ ವಿತರಣೆ ಜಾಲದಲ್ಲಿ ಗುಂಡಿಯೊತ್ತಿದ. ಕನ್ನಡಕ್ಕೆ ಜೋಗದ ಜಲವಿದ್ಯುತ್ ಹರಿಯಗೊಟ್ಟ ಕೆಂಗಲ್ ಹನುಮಂತಯ್ಯ ಒಂದು ಮಾರ್ಮಿಕವಾದ ಮಾತನಾಡಿದ್ದರು. “ನಿಮ್ಮ ಕೃತು ಶಕ್ತಿಗೆ ಚಾಲನೆ ಕೊಡಬಲ್ಲ ವಿದ್ಯುಚ್ಛಕ್ತಿಯನ್ನು ನಾವು ಕೊಟ್ಟಿದ್ದೇವೆ. ಇನ್ನು ಮೇಲೆ ನಿಮ್ಮ ಬುದ್ಧಿಶಕ್ತಿ. ಘಟ್ಟದ ಮೆಟ್ಟಲನ್ನೇರಿ ಬಯಲು ಸೀಮೆಗೆ ಹರಿದು ಅಲ್ಲಿನ ಜನರ ಬದುಕಿಗೆ ಹೊಸ ಚೇತನ ಕೊಡಬೇಕು” ಎಂಬ ಆಶಯವನ್ನವರು ಮುಂದಿಟ್ಟಿದ್ದರು.
ಆಗ ತಾನೇ ಪತ್ರಿಕಾ ವೃತ್ತಿಗೆ ಸೇರಿದ ನಾನು, “ನವಭಾರತ” ಪತ್ರಿಕೆಗೆ ವರದಿ ಮಾಡಲು ಅಂದಿನ ಸಮಾರಂಭಕ್ಕೆ ಹೋಗಿದ್ದೆ. ಹನುಮಂತಯ್ಯನವರ ಅರ್ಥವತ್ತಾದ ಮಾತನ್ನು ಹೇಳಿ ನನ್ನ ಮೈ ನವಿರೆದ್ದಿತು. ರಾಜಕಾರಣಿಯೊಬ್ಬರಿಂದ ಸುಂದರ ಶೈಲಿಯ ಕನ್ನಡ ಭಾಷಣ ನಾನು ಕೇಳಿದ್ದು ಅದೇ ಮೊದಲು. ಅದಕ್ಕಿಂತ ಮಿಗಿಲಾಗಿ, ಕೆಂಗಲ್ ಅವರು ತಮ್ಮ ಭಾಷಣದಲ್ಲಿ ದಕ್ಷಿಣ ಕನ್ನಡದ ಉದ್ಯಮ ಶೀಲ, ವಿಚಾರವಂತ ಹಾಗೂ ಬುದ್ಧಿವಂತ ಜನ ಸಮೂಹದ ಒಂದು ಆಕರ್ಷಕ ವಾಕ್ಚಿತ್ರ ಬಿಡಿಸಿದ್ದರು. ಇನ್ನು ಕೆಲವೇ ತಿಂಗಳಲ್ಲಿ (1951 ನವೆಂಬರ್ 1) ವಿಸ್ತ್ರತ ಕನ್ನಡ ನಾಡಿಗೆ ಸೇರಲಿರುವ ದಕ್ಷಿಣ ಕನ್ನಡಿಗರ ಬುದ್ಧಿಬಲಕ್ಕೆ ಸಿಗಲಿರುವ ವಿಶಾಲ ಭೂಮಿಕೆಯ ಚಿತ್ರವನ್ನೂ ಕೆಂಗಲ್ ಬಿಡಿಸಿದ್ದರು.
ಮೇಲಂತಸ್ತಿನ ಜಿಲ್ಲೆ
ಅಂದಿನವರೆಗೆ ದೂರದ ಮದ್ರಾಸು ಪ್ರಾಂತ್ಯದ ಒಂದು ಬಿಡಿ ಭಾಗವಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲಂತಸ್ತಿನಲ್ಲೇ ಇತ್ತು. ಕನ್ನಡ ನಾಡಿಗೆ ಸೇರಿದ ಮೇಲೆ ಈ ಜಿಲ್ಲೆಯ ಮುನ್ನಡೆಗೆ ಹೊಸ ಆಯಾಮ ಬರುವುದೆಂಬುದು ಆಗ ಎಲ್ಲರ ನಿರೀಕ್ಷೆಯಾಗಿತ್ತು.
ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಯ ದಾಪುಗಾಲು ಹಾಕುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಕನ್ನಡನಾಡಿನ ಅಭಿಮಾನದ ಕಳಶವಾಗುವುದೆಂಬ ನಿರೀಕ್ಷೆಯಲ್ಲಿ ಎದೆಯುಬ್ಬಿದವರಲ್ಲಿ ನಾನೂ ಒಬ್ಬ. ಯಾಕೆಂದರೆ ನಾಡಿನ ಇತರ ಜಿಲ್ಲೆಗಳ ಜನ ಮೆಚ್ಚುವ ಎಲ್ಲ ಗುಣಗಳೂ ನಮ್ಮಲ್ಲಿದ್ದುವು. ಆಡಳಿತದಲ್ಲಿ ಲಂಚಗುಳಿತನವೆಂಬುದು ಕಿಂಚಿತ್ತೂ ಇಲ್ಲಿರಲಿಲ್ಲ. ಸಾರ್ವಜನಿಕ ಮುಖಂಡರು ಇಲ್ಲಿ ಸ್ವಚ್ಚತೆಗೆ ಹೆಸರಾಗಿದ್ದರು. ವಿದ್ಯಾರ್ಥಿ ಸಮೂಹ ಪ್ರತಿಭೆಯ ಆಗರವಾಗಿತ್ತು. ಆದರ್ಶ ಅಧ್ಯಾಪಕರ ದೊಡ್ಡ ಪಟ್ಟಿಯೇ ಇಲ್ಲಿತ್ತು. ವಿದ್ಯಾವಂತ ಯುವಕರು ಪುಸ್ತಕ ಪ್ರಿಯರಾಗಿದ್ದರು. ವಿಚಾರವಂತಿಕೆ ಬೆಳೆಸಿಕೊಂಡಿದ್ದರು. ಚಿತ್ರ ಮಂದಿರಗಳ ಮುಂದೆ ಕ್ಯೂ ನಿಲ್ಲುವುದು ಆಪಮಾನಕಾರಿಯೆಂದು ಆಗಿನ ಯುವಕರು ತಿಳಿದಿದ್ದರು. ಕನ್ನಡ ನಾಡಿನ ಇತರ ಯಾವ ಭಾಗದಲ್ಲೂ ಇಲ್ಲದಷ್ಟು ತೀವ್ರವಾದ ಕಾರ್ಮಿಕ ಚಳುವಳಿ ಇಲ್ಲಿ ಬೇರುಬಿಟ್ಟಿತ್ತು. ಇಲ್ಲಿನ ರಾಜಕೀಯದಲ್ಲಿ ಸಮಾಜವಾದಿಗಳು ಸಕ್ರಿಯರಾಗಿದ್ದರು. ಮದ್ಯಪಾನ ಮಹಾಪರಾಧವೆಂಬ ಭಾವನೆ ಈ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಮೋಸ ವಂಚನೆ ಮಾಡಿ ಅಥವಾ ಇನ್ನಿತರ ವಾಮಾಚಾರಗಳಿಂದ ಹಣಗಳಿಸುವವರು ಸಾರ್ವಜನಿಕರ ತಿರಸ್ಕಾರಕ್ಕೆ ಈಡಾಗುತ್ತಿದ್ದರು.
ಮೌಲ್ಯದ ನೆಲೆ ಇತ್ತು
ಇಂತ ಮೌಲ್ಯಗಳ ನೆಲೆಯಲ್ಲಿ ನಿಂತು ಮುನ್ನಡೆಯುತ್ತಿದ್ದ ಜಿಲ್ಲೆಗೆ ಸೇರಿದವನು ನಾನೆಂಬ ಹೆಮ್ಮೆ ನನಗಾಗ ಇತ್ತು. ಪತ್ರಿಕಾ ವೃತ್ತಿ ಅವಲಂಬನೆಯಲ್ಲಿ ನಾನು 1957ರಲ್ಲಿ ಬೆಂಗಳೂರಿಗೆ ಹೋದಾಗ ಅಲ್ಲಿನ ಪತ್ರಕರ್ತರ ಮುಂದೆ ನಮ್ಮ ಜಿಲ್ಲೆಯ ರಾಜಕೀಯ ಮಹತ್ವ ಮತ್ತು ಅದರ ಗುಣ ವೈಶಿಷ್ಟ್ಯಗಳ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುತ್ತಿದ್ದೆ. ಮೊದ-ಮೊದಲು ಬೆಂಗಳೂರಿನ ಪತ್ರಕರ್ತರಿಗೆ ಇದನ್ನು ಅಲ್ಲಗಳೆಯಲಾಗುತ್ತಿರಲಿಲ್ಲ. ಆದರೆ ಕ್ರಮೇಣ ವಿಧಾನಸಭೆಯಲ್ಲಿ ಈ ಜಿಲ್ಲೆಯ ಪ್ರತಿನಿಧಿಗಳಲ್ಲಿ ಬಹುಮಂದಿ ತೊದಲಲು ಆರಂಭಿಸಿದರು. ಸಂಸದೀಯ ಪಟ್ಟುತ್ವದ ಲೋಪ ಜಿಲ್ಲೆಯ ಬಹುಮಂದಿ ಶಾಸಕರಲ್ಲಿ ಎದ್ದು ಕಂಡಿತು. ದಿವಂಗತರಾದ ಎ.ಬಿ.ಶೆಟ್ಟಿ ಮತ್ತು ಬಿ.ವೈಕುಂಠ ಬಾಳಿಗರನ್ನು ಬಿಟ್ಟರೆ ಈ ಜಿಲ್ಲೆಯ ಬೇರೆ ಯಾರೂ ಬೆಂಗಳೂರಿನ ಪತ್ರಕರ್ತರ ಮೇಲೆ ತಮ್ಮ ಬುದ್ಧಿಬಲದ ಮುದ್ರೆಯೊತ್ತಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ವಿಧಾನ ಮಂಡಲದಲ್ಲಿ ಜಿಲ್ಲೆಯ ಪ್ರತಿನಿಧಿಗಳ ತೊದಲು ನುಡಿಗಳು ಹೆಚ್ಚಾದಾಗ ಬೆಂಗಳೂರಿನ ನನ್ನ ಪತ್ರಕರ್ತ ಗೆಳೆಯರು “ನಿನ್ನ ಜಿಲ್ಲೆಯ ಜನ ಏನು ಬುದ್ಧಿವಂತರಯ್ಯಾ !” ಅಂತ ಗೇಲಿ ಮಾಡುತ್ತಿದ್ದರು.
ರಾಜಕೀಯ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳ ಗುಣಮಟ್ಟ ಕಳಪೆಯಾದಾಗ ಈ ಪ್ರದೇಶದ ರಾಜಕೀಯ ಮಹತ್ವ ಕುಂದುತ್ತದೆ. ಹೀಗೆ ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅವನತಿ ನಿಧಾನವಾಗಿ ಆಗುತ್ತಲೇ ಬಂದಿದೆ. ಯಾಕೆ ಹೀಗಾಗುತ್ತಿದೆ? ವಿಚಾರವಂತರು ಮತ್ತು ಸುಜ್ಞಾನಿಗಳನ್ನು ರಾಜಕೀಯದಲ್ಲಿ ಬೆಳೆಸುವ ಪ್ರಜ್ಞೆ ಈ ಜಿಲ್ಲೆಯಲ್ಲಿ ಯಾಕ್ಕಿಲ್ಲವಾಯಿತು? ಎಂಬ ಪ್ರಶ್ನೆಗಳು ಆಗಾಗ ನನ್ನನ್ನು ಕಾಡಿಸುತ್ತಿದ್ದವು. ಇದಕ್ಕೆ ಉತ್ತರ ಹುಡುಕುವುದು ನನ್ನ ಕೈಲಾಗದ ಕೆಲಸವಾಗಿತ್ತು. ಎಳೆಯನಾಗಿದ್ದಾಗ ಗೊತ್ತು-ಗುರಿ ಇಲ್ಲದೆ ಬದುಕಿನ ಅಂದಗೆಡಿಸಿಕೊಂಡ ನನಗೆ, ಬೆಂಗಳೂರಿನಲ್ಲಿ ಪತ್ರಿಕಾ ವೃತ್ತಿಯಲ್ಲಿ ನೆಲೆಯೂರಿ ಬೆಳೆಯ ಬೇಕಾದ ದೊಡ್ಡ ಹೊಣೆ ಇತ್ತು.
ಹೀಗೆ ಬೆಂಗಳೂರಿನಲ್ಲಿ ಪತ್ರಕರ್ತನಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ಒಂದು ಹಂತದಲ್ಲಿ, ಸ್ವತಂತ್ರ ಬದುಕಿನ ಬಯಕೆ ಮೂಡಿತು. ಇಪ್ಪತ್ತನಾಲ್ಕು ವರ್ಷಗಳ ಕಾಲ ನಾನು ದುಡಿದು ಬೆಳೆದ ಡೆಕನ್ ಹೆರಾಲ್ಡ್- ಪ್ರಜಾವಾಣಿ ಸಂಸ್ಥೆಗೆ ರಾಜೀನಾಮೆ ಕೊಟ್ಟು 1983ರ ಸೆಪ್ಟಂಬರ್ನಲ್ಲಿ ಮುಂಗಾರು ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಹೊಸ ಸಂಸ್ಥೆಯ ದಿನ ಪತ್ರಿಕೆಯನ್ನು ನನ್ನ ಜಿಲ್ಲೆಯ ಕೇಂದ್ರವಾದ ಮಂಗಳೂರಿನಿಂದಲೇ ಆರಂಭಿಸಬೇಕೆಂದು ತೀರ್ಮಾನಿಸಿದೆ. ನಾನು ಈ ಜಿಲ್ಲೆಯವನಾದರೂ ಪತ್ರಕರ್ತನಾಗಿ ನಾನು ಈ ಹೆಚ್ಚು ಪರಿಚಿತನಾಗಿರುವುದು ನಾಡಿನ ಬಯಲು ಸೀಮೆಯಲ್ಲಿ. ನನ್ನ ಓದುಗ ಬಳಗವಿರುವುದೂ ಅಲ್ಲಿಯೇ ಹೆಚ್ಚು. ಇದೆಲ್ಲ ನನಗೆಗೊತ್ತಿತ್ತು. ಆದರೂ ಮಾನವ ಚೈತನ್ಯದ ಮಹಾ ಸಾಗರದಂತಿರುವ ಈ ಕಡಲ ತೀರದ ಜಿಲ್ಲೆಯಲ್ಲಿ ಚಿಂತನೆಯ ಮಳೆ ಸುರಿಸಿ ಜನ ಶಕ್ತಿಯ ಬೆಳೆ ತೆಗೆಯಬೇಕೆಂದು ನನ್ನ ಕಲ್ಪನೆಯಾಗಿತ್ತು. ಅದಕ್ಕೆ ಹದವಾದ ಮನೋಭೂಮಿಕೆ ಮೂವತ್ತು ವರ್ಷಗಳ ಹಿಂದೆ ಇಲ್ಲಿತ್ತು.
ವಾಣಿಜ್ಯಮಯ
ಅದೆಲ್ಲಾ ಈಗ ಕಳೆದು ಹೋದ ಮಾತು. ನಿನ್ನ ಜಿಲ್ಲೆಯ ಜೀವನ ಈಗ ವಾಣಿಜ್ಯ ಮಯವಾಗಿದೆ ಎಂದು ನನಗೆ ಮೊದಲು ಹೇಳಿದವರು, ಇಲ್ಲಿನ ರೋಶನಿ ನಿಲಯದಲ್ಲಿ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾಗಿರುವ ಡಾ|| ಜಿ.ಆರ್. ಕೃಷ್ಣ . ಇವರು ಆಂಧ್ರ ಪ್ರದೇಶದವರು. ಪ್ರಸಿದ್ಧ ರಾಜಕಾರಣಿ ಪ್ರೊ|| ಎಸ್.ಜಿ ರಂಗ ಅವರ ಸೋದರ ಸಂಬಂಧಿ. ಸಮಾಜ ಶಾಸ್ತ್ರವನ್ನ ಆಳವಾಗಿ ಅಭ್ಯಾಸ ಮಾಡಿದ ಕೆಲವೇ ಜನರಲ್ಲಿ ಇವರೊಬ್ಬರು. ತಮ್ಮ ಪಾಂಡಿತ್ಯಕ್ಕೆ ವಿಶ್ವಮನ್ನಣೆ ಪಡೆದವರು.
1984ರ ಜನವರಿಯ ಅದೊಂದು ದಿನ ನಾನವರನ್ನು ಸಂಧಿಸಿ ನನ್ನ ಮುಂಗಾರು ಯೋಜನೆಯ ಕುರಿತು ಮಾತನಾಡಿದೆ. ಕಳೆದ ಹದಿನೈರು ವರ್ಷಗಳಿಂದ ಮಂಗಳೂರಿನಲ್ಲೇ ಡಾ|| ಜಿ.ಆರ್. ಕೃಷ್ಣ, ಈ ಜಿಲ್ಲೆಯ ಜನರನ್ನು ಮತ್ತು ಅದರ ಬದುಕುನ್ನು ಇಂದು ಅವರಿಸಿರುವ ವಾಣಿಜ್ಯ ಮೌಲ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವಂತೆ ಕಂಡಿತು. ಮಂಗಳೂರಿನಿಂದ ಮುಂಗಾರು ಹೊರಡಿಸಬೇಕೆಂಬ ನನ್ನಾಸೆಗೆ ಅವರು ತಣ್ಣೀರೆರಚಲಿಲ್ಲ. ಆದರೆ ವಾಣಿಜ್ಯ ದೃಷ್ಟಿಯೊಂದೇ ಇಲ್ಲಿ ಯಶಸ್ವಿಯಾದೀತು ಎಂಬ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಇಂದು ಪೂರ್ಣವಾಗಿ ವಾಣಿಜ್ಯಮಯವಾಗಿದೆ. ಈ ದೇಶದಲ್ಲಿಂದು ಮಹಾಪೀಡೆ ಎನ್ನಿಸಿಕೊಂಡಿರುವ ವಿದ್ಯೆಯ ವ್ಯಾಪಾರ ಆರಂಭವಾದುದು ಇಲ್ಲಿಯೇ. ರಾಜಕೀಯಕ್ಕೂ ವಾಣಿಜ್ಯ ಗಣನೆ ಬಂದಿದೆ. ಗಂಡು ಹೆಣ್ಣಿನ ಮಾನವೀಯ ಸಂಬಂಧವೂ ಕೂಡಾ ಇಲ್ಲಿ ವಾಣಿಜ್ಯ ವಸ್ತುವಾಗಿದೆ. ಜಿಲ್ಲೆಯ ಪ್ರೌಢ ಕಲೆಯಾದ ಯಕ್ಷಗಾನವೂ ವ್ಯಾಪಾರದ ಡೇರೆಯಲ್ಲಿ ಸಿಕ್ಕಿ ನಶಿಸುತ್ತಿದೆ. ಆದ್ದರಿಂದ ನೀವು ಹೊರಡಿಸುವ ಪತ್ರಿಕೆ ಈ ವ್ಯಾಪಾರಿ ಸೂತ್ರಕ್ಕೆ ಸಲ್ಲುವಂತಿರಬೇಕು, ಎಂದು ನನಗವರು ಹೇಳಿದ್ದರು.
ವಾಣಿಜ್ಯಮಯವಾಗಿರುವ ಜಿಲ್ಲೆಯ ಜನ ಜೀವನಕ್ಕೆ ಅವರು ಹಲವು ನಿದರ್ಶನಗಳನ್ನಿತ್ತರು. ಅವರ ಅಭಿಪ್ರಾಯದಲ್ಲಿ, ಈ ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಚಳವಳಿಯ ನೆಲೆ ತಪ್ಪಿದ್ದುದಕ್ಕೂ ಇದೇ ಕಾರಣ. ಇಲ್ಲಿನ ಸಭೆ ಸಮಾರಂಭಗಳು ಅಥವಾ ಶಾಲಾ ವಾರ್ಷಿಕೋತ್ಸಗಳಿಗೆ ಹಣವಂತರು ಅಥವಾ ಬ್ಯಾಂಕ್ ಅಧಿಕಾರಿಗಳನ್ನೇ ಮುಖ್ಯ ಅತಿಥಿಗಳಾಗಿ ಕರೆಯುವುದೇ ಈಗೊಂದು ಫ್ಯಾಷನ್ ಆಗಿರುವುದುನ್ನು ಪ್ರಸ್ತಾಪಿಸಿದರು. ಬುದ್ಧಿಗೆ ಇಲ್ಲೀಗ ಬೆಲೆ ಇಲ್ಲದಾಗುತ್ತಿದೆಯೆಂದರು.
ಡಾ. ಕೃಷ್ಣ ಒಬ್ಬ ಸಮಾಜ ವಿಜ್ಞಾನಿ ಅವರ ಮಾತಿಗೆ ಬಹಳ ತೂಕವಿದೆ. ಅದನ್ನು ಕಿವಿಗೊಟ್ಟು ಕೇಳುವವರಿಲ್ಲವೆಂದು ಅವರು ಕೊರಗಿದವರು. ನಿಮ್ಮ ಜಿಲ್ಲೆಯ ಜನ ಬುದ್ಧಿ ಬಲದ ನೆಲೆ ಇಲ್ಲದೆ ಕಟ್ಟುತ್ತಿರುವ ಭೌತಿಕ ಸೌಧ, ಪರಿವರ್ತನೆಯ ಬಿರುಗಾಳಿಯಲ್ಲೊಂದು ದಿನ ಬಿದ್ದು ಹೋಗಲಿದೆ ಎಂದು ಎಚ್ಚರಿಸಿದರು.
ಅನಂತರ ನಾನು ಮತ್ತು ಅವರು ಆಗಾಗ ಸೇರಿ ಪ್ರಚಲಿತ ಸಮಾಜ ಮತ್ತು ಅದರಲ್ಲಿ ಪತ್ರಿಕೆಗಳ ಪಾತ್ರ ಎನ್ನುವ ಕುರಿತು. ಚರ್ಚಿಸಿದ್ದೆವು. ಪರಿವರ್ತನಾ ಶೀಲವಾದ ಭಾರತೀಯ ಸಮಾಜದಲ್ಲಿ ಪತ್ರಿಕೆ ಒಂದು ಸಾಧನ. ಅದು ಒಂದು ತತ್ವಕ್ಕೆ ಬದ್ಧವಾಗಿರಬೇಕು. ಈ ತತ್ವ ಪ್ರತಿಪಾದನೆ ಕೆಲವರಿಗೆ ಮೆಚ್ಚಿಕೆ ಆಗಬಹುದು. ಅನೇಕರು ಇದರಿಂದ ರೊಚ್ಚಿಗೇಳಬಹುದು ಇಂತಹ ವಿಭಿನ್ನ ಪ್ರತಿಕ್ರಿಯೆಗಳಿಂದಲೂ ಪತ್ರಿಕೆ ತನ್ನ ಉದ್ದೇಶ ಸಾಧನೆ ಮಾಡಿದೆಯೆಂದು ತಿಳಿಯಬೇಕಾಗುತ್ತದೆ. ಇದರಿಂದ ಜನಸಮೂಹದಲ್ಲಿ ವಿಚಾರವಂತಿಕೆಯನ್ನು ಬೆಳೆಸಿದಂತಾಗುತ್ತದೆ. ಎಲ್ಲರಿಗೂ ಸಲ್ಲು-ಉಪಚಾರದ-ಆತ್ಮವಂಚನೆ ವಾಣಿಜ್ಯ ವಸ್ತುವಾಗಿ ಪತ್ರಿಕಾ ವೃತ್ತಿ ಉಳಿಯಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂದೆವು.
ಅನೇಕರು ರೊಚ್ಚು
ನಮ್ಮ ಕಲ್ಪನೆಯ “ಮುಂಗಾರು” ಆರಂಭವಾಗಿ ಈಗ ಆರು ತಿಂಗಳು ಕಳೆಯಿತು. ನಾವು ಮೊದಲ ಕಲ್ಪಿಸಿದ ರೀತಿಯಲ್ಲೇ ನಮ್ಮ ವೃತ್ತಿ ನೀತಿಯನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ನೀತಿಯನ್ನು ಕೆಲವರು ಮೆಚ್ಚಿದ್ದರೆ, ಅನೇಕರು ರೊಚ್ಚಿ ಗೆದ್ದಿದ್ದಾರೆ. ಇಲ್ಲಿಯೂ ಕೂಡಾ ಒಂದು ಸ್ವಾರಸ್ಯದ ಸಂಗತಿಯೆಂದರೆ-ನಮ್ಮ ನೀತಿಯನ್ನು ಹೆಚ್ಚಾಗಿ ಮೆಚ್ಚಿರುವವರು ಕೊಡಗು, ಹಾಸನ, ಚಿಕ್ಕಮಂಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನತೆ. ಓದುಗರ ಸಂಖ್ಯೆಯಲ್ಲಿ ಈ ಜಿಲ್ಲೆಗಳದು ಅರ್ಧಪಾಲು; ಉಳಿದರ್ಧ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆಗಳಲ್ಲಿಯೂ ನಮ್ಮ ನಿಲುವನ್ನು ಒಪ್ಪದವರಿದ್ದಾರೆ. ಇದನ್ನು ನಾವು ನಿರೀಕ್ಷಿಸಿಯೂ ಇದ್ದೇವೆ. ನಮ್ಮ ನೀತಿಯನ್ನು ಒಪ್ಪದಿರುವ ಅನೇಕ ಓದುಗರು ನಮ್ಮನ್ನು ಗೌರವದಿಂದ ಕಂಡಿದ್ದಾರೆ.
ಆದರೆ ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿರುವ ಒಂದು ಅಂಶ ಕಲ್ಯಾಣಪುರ ಹೊಳೆಯಿಂದಾಚೆಗಿನಕೆಲವರು ಓದುಗರು ನನ್ನ ಮೇಲೆ ವೈಯಕ್ತಿಕವಾಗಿ ಸುರಿದ ಬೈಗುಳದ ಮೆಳೆ. ಹೀಗೆ ನನ್ನನ್ನು ಹೀನಾಯವಾಗಿ ನಿಂದಿಸಿ ಪತ್ರ ಬರೆದವರು ಒಂದೇ ವರ್ಗಕ್ಕೆ ಸೇರಿದವರೆಂಬುದೂ ಗಮನಾರ್ಹ.
ಪ್ರಶ್ನಾವಳಿ
ಹೆಸರು ಹಾಕದೆ ವಿಳಾಸ ಕೊಡದೆ ಹೀಗೆ ಬೈದಿರುವವರಿಗೆ ವೈಯಕ್ತಿಕವಾಗಿ ಉತ್ತರ ಕೊಡುವುದು ಸಾಧ್ಯವಿಲ್ಲದ ಮಾತು. ಇದರ ಮೇಲಿಗೆ, ನಾವು ಇತ್ತೀಚಿಗೆ ಓದುಗರ ಅಭಿಪ್ರಾಯ ಸಂಗ್ರಹಕ್ಕೆ ಒಂದು ಪ್ರಶ್ನಾವಳಿಯನ್ನು ಕಳಿಸಿದ್ದೇವೆ. ಅದರಲ್ಲಿಯೂ ಕೂಡ ನಮ್ಮ ನಿಲುವನ್ನು ಉಗ್ರವಾಗಿ ಖಂಡಿಸಿದವರಲ್ಲಿ ಕಲ್ಯಾಣಪುರ ಹೊಳೆಯಿಂದಾಚೆಗಿನವರೇ ಹೆಚ್ಚು.
ಪ್ರಶ್ನಾವಳಿಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನೂ ಗೌರವದಿಂದ ಕಾಣಬೇಕೆಂಬುದು ನನ್ನಿಚ್ಛೆ. ಇದರಲ್ಲಿ ಹೆಚ್ಚಿನವರು “ ಮುಂಗಾರು” ಕಾಂಗೈ ಮುಖವಾಣಿ ಎಂದು ಟೀಕಿಸಿದ್ದಾರೆ. ಬಂಗಾರಪ್ಪನ ಪ್ರಚಾರದ ಪತ್ರಿಕೆಯೆಂದು ಖಂಡಿಸಿದ್ದಾರೆ ಮಾನ್ಯ ಓದುಗರ ಈ ಆಪಾದನೆಗಳಿಗೆ ವಿವರಣೆ ಕೊಡಬೇಕಾದ ನೈತಿಕ ಹೊಣೆ ನನ್ನ ಮೇಲಿದೆ. ನಾನು ಮುಂಗಾರು ಪತ್ರಿಕೆಯ ಸಂಸ್ಥಾಪಕ ನಾಗಿರಬಹುದು. ಸಂಪಾದಕನೂ ಆಗಿದ್ದೇನೆ. ಅಂದ ಮಾತ್ರಕ್ಕೆ ಅದು ನನ್ನ ಸ್ವಂತ ಸೊತ್ತಾಗುವುದಿಲ್ಲ. ಇದು ಓದುಗರ ಪತ್ರಿಕೆ. ಓದುಗರನೊಡನೆ ಮನಬಿಚ್ಚಿ ಮಾತನಾಡ ಬೇಕಾದುದು ನನ್ನ ಕರ್ತವ್ಯ. ತತ್ವಕ್ಕೆ ಬದ್ದನಾದ ಒಬ್ಬ ಪತ್ರಕರ್ತನಾಗಿ ಯಾವುದೇ ಮುಚ್ಚು ಮರೆಯಿಲ್ಲದೆ ಈ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಪ್ರತಿಯೊಂದು ಟೀಕೆಗೂ ಬಿಡಿ ಬಿಡಿಯಾಗಿ ಉತ್ತರ ಕೊಡಬೇಕೆಂದು ನನ್ನಾಸೆ.
(‘ಮುಂಗಾರು’ ಕಾಂಗೈ ಪಕ್ಷದ ಮುಖವಾಣಿಯೇ? ಎಂಬ ಪ್ರಶ್ನೆಗೆ ಮಂಗಳವಾರದ ಸಂಚಿಕೆಯಲ್ಲಿ ಉತ್ತರಿಸುತ್ತೇನೆ.- ಸಂ)
**********

Thursday, June 30, 2016

ಪತ್ರಕರ್ತರೆಲ್ಲ ಓದಲೇ ಬೇಕಾದ ಲೇಖನ

ಪತ್ರಕರ್ತರೆಲ್ಲ ಓದಲೇ ಬೇಕಾದ ಲೇಖನ. ಭಾರತದ ಪ್ರಧಾನ ಮಂತ್ರಿಯವರನ್ನು ಸಂದರ್ಶನ ಮಾಡುವುದು ಎಷ್ಟು ಕಷ್ಟ ಗೊತ್ತಾ? ಸಿಕ್ಕಸಿಕ್ಕಲ್ಲಿ ಮೈಕ್ ಮುಂದಿಟ್ಟರೆ ಮಾತನಾಡಲು ಅವರೇನು ಕರ್ನಾಟಕದ ಮುಖ್ಯಮಂತ್ರಿಗಳೇ? ಅರ್ಥ ಮಾಡಿಕೊಳ್ಬೇಕಪ್ಪಾ!
ಇದನ್ನು ಮುಖ್ಯವಾಗಿ ನನ್ನ ಸ್ನೇಹಿತರಾದ ಶಾಸಕ ಸುರೇಶ್ ಕುಮಾರ್ ಅವರು ಓದಬೇಕು. ಇಂದಿರಾಗಾಂಧಿಯವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಎಚ್.ವೈ.ಶಾರದಾ ಪ್ರಸಾದ್ ಅವರ ಮೇಲ್ಪಂಕ್ತಿಯನ್ನು ನಾನು ಅನುಸರಿಸಬೇಕು ಎಂದು ಅವರು ಸಲಹೆ ನೀಡುತ್ತಲೇ ಇದ್ದಾರೆ. ಈಗ ಹೇಳಿ ಸ್ವಾಮಿ, ಕಾಂಗ್ರೆಸ್ ಪ್ರಧಾನಿ ಇಂದಿರಾಗಾಂಧಿಯವರ ಪತ್ರಿಕಾ ಕಾರ್ಯದರ್ಶಿಯವರನ್ನು ಅನುಸರಿಸಲೋ ಇಲ್ಲ ನಿಮ್ಮ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರ ಮಾಧ್ಯಮ ನಿರ್ವಹಣಾ ಅಧಿಕಾರಿಗಳ ಮೇಲ್ಪಂಕ್ತಿಯನ್ನೋ?
.ಕಳೆದ ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅರಬ್ ರಾಷ್ಟ್ರಗಳಿಗೆ ಭೇಟಿ ನೀಡುವ ಮೊದಲು ಅಲ್ಲಿನ ಪತ್ರಕರ್ತ ಬಾಬಿ ನಕ್ವಿ ಮೋದಿಯವರನ್ನು ಸಂದರ್ಶಿಸಿದ್ದರು. ಆ ಸಂದರ್ಶನದ ಹಿಂದಿನ ‘ಸತ್ಯ’ಗಳನ್ನು ಅರ್ನಬ್ ಗೋಸ್ವಾಮಿ ಸಂದರ್ಶನದ ಹಿನ್ನೆಲೆಯಲ್ಲಿ ಬಾಬಿ ಹಂಚಿಕೊಂಡಿದ್ದಾರೆ. ಆ ಲೇಖನದ ಒಂದು ತುಣುಕು ಹೀಗಿದೆ:
"...'ಪೋಟೊ ತೆಗೆದು, ಕೈಕುಲುಕಿದ ನಂತರ ಪ್ರಧಾನ ಮಂತ್ರಿಯವರು ನಿನ್ನ ಕಡೆ ನೋಡುತ್ತಾರೆ, ಆಗ ನೀನು ಮಾತನಾಡಲು ಪ್ರಾರಂಭಿಸಬೇಕು’ ಎಂದು ಒಬ್ಬ ಅಧಿಕಾರಿ ವಿನಯದಿಂದ ಅಷ್ಟೇ ಗಟ್ಟಿ ದನಿಯಲ್ಲಿ ಹೇಳಿದ. ಅಷ್ಟರಲ್ಲಿ ನನಗೆ ಇನ್ನೊಂದು ಆಘಾತ ಕಾದಿತ್ತು. ‘ನೀನು ಕೇವಲ ಒಂದು ಪ್ರಶ್ನೆ ಮಾತ್ರ ಕೇಳಬಹುದು, ಉಳಿದ ಪ್ರಶ್ನೆಗಳಿಗೆ ಉತ್ತರವನ್ನು ಲಿಖಿತ ರೂಪದಲ್ಲಿ ಸಂದರ್ಶನದ ನಂತರ ನೀಡಲಾಗುವುದು’ ಎಂದು ಅಧಿಕಾರಿ ಮಾತು ಮುಗಿಸಿದ.
ಸ್ಕ್ರಿಪ್ಟ್ ಪ್ರಕಾರವೇ ಸಂದರ್ಶನ ನಡೆಯಿತು. ಅದರ ನಂತರ ಪಿಎಂ ತಂಡದ ಸದಸ್ಯರ ಜತೆ ಮಾತುಕತೆ ನಡೆಯಿತು. ಅಷ್ಟರಲ್ಲಿ ನಾನು ಪ್ರಧಾನಿಯವರನ್ನು ಕೇಳಿರದ ಪ್ರಶ್ನೆಗಳಿಗೆ ಸಿದ್ದಪಡಿಸಿದ ಉತ್ತರವನ್ನು ಕೈಗೆ ಕೊಟ್ಟರು.
.....ಅಂದರೆ ಉಳಿದ ಪ್ರಶ್ನೆಗಳಿಗೆ ಪ್ರಧಾನಿಯವರು ಒಬ್ಬರೇಕೂತು ಗೋಡೆ ನೋಡಿ ಉತ್ತರಿಸಿದರೇ? Full confusion!
------------------------------------------------------------------------------------------------------
MEETING THE PM

Arranging an interview with the Prime Minister can be a long drawn and cumbersome process. I had the opportunity to experience it first hand last August. 
Ahead of his visit to the UAE, I requested an interview on bilateral relations between the two countries and India's role in the Arab world. After exchanging several emails with bureaucrats for several days, I received a call from a very senior official saying: "Bobby, I have good news and bad news. Which one you want to hear first?"
I didn't know what to say. Before I could speak, he said that the "PM has agreed." Then he mentioned two other publications would also be present. I was hugely disappointed as it was no longer an exclusive interview. I had no option but to grudgingly accept it with some protest.
Then I was told to send my questions for prior approval. And then followed several requests for security clearance: name of my driver, car registration number, photographer's details and a list of his equipment etc.
Till the last moment I had no clue about the venue and time of the meeting. All I was told was that it could be anytime after his Red Fort speech on the Independence Day. After frantic calls on August 14, I was given the phone number of my point of contact in Delhi. This person, a young officer, asked me to be in the capital before noon and said the exact time and venue would be provided later.
Just before I boarded the flight on August 14, I got a strange phone call. It was from a prominent Muslim personality who is considered close to the PM. "Kar Lijiye PM Sahab Ka Interview, Bade, Bade log line Mein Bhaithen Hain Unse Milne Ke Liye."
I was shocked and couldn't figure out how he found out about my meeting as this person is not part of the government.
Next morning in Delhi, another shock awaited me. My liaison officer informed that my photographer would not be allowed and that pictures would be taken by the PM's official photographer. I decided to put my foot down and told him I can't do that. Tense conversations followed back and forth and a few hours later the photographer was allowed on one condition - that he will spend only five minutes inside.
The three of us -- my driver, my brother Saify and photographer Pankaj drove to India's most famous address. It was raining cats and dogs that day. At the first checkpoint at 7 RCR we faced another trouble. A huge flashlight almost blinded us when a heavily armed man in a raincoat approached the car. The sound of heavy downpour made it impossible to hear him. All he could understand was that we are "from Dubai", words he repeated several times to make sure he heard them right. He then went back to the security office. After a few minutes he returned and told us to move the car away from the barrier and signaled me to follow him. An officer again took our details and radioed them to his superiors inside the office-residence complex. After several minutes, he said the photographer had no security clearance. I then contacted my liaison officer again and explained the problem. Several anxious moments later, we were allowed inside and directed to the visitor parking, a few meters away from the reception hall.
After intense security checks inside, we were told to wait in another room where a sniffer dog was brought in. Soon after, we were transferred to the main building in a shuttle car driven by a SPG man.
Inside, we were taken to a room overlooking a lush green lawn where I was briefed on the "order of the interview".
"After photos and handshakes, the prime minister will look at you, and then you start your conversation," an official told me in a tone that was polite but firm. Another shocker -- that I can ask only one question and answers to my remaining questions would be provided in writing after the meeting.
After the briefing, we were introduced to the PM's team members, including a Muslim officer from Bihar ( This officer, I was told, wrote the PM's famous Silicon Valley speech).
The meeting went as per the script. After a warm handshake, we spoke in Hindi about my late night flight and his Red Fort speech earlier that day. Another journalist who was scheduled to speak next (he came from US and picked up a gift for the PM from duty free) spoke in English via a translator, a senior woman official from publicity division. An hour or so after the meeting was over, I was given printed transcripts of the conversation and answers to my questions that I couldn't ask.
Today, I wasn't surprised when I read that questions for Times Now interview were sought in advance. I am not sure if this is a standard procedure for all PMs or unique to this govt.

Sunday, March 17, 2013

ನ್ಯಾಯಮೂರ್ತಿ ಕಟ್ಜು ಅವರ ತಪ್ಪು ರೋಗನಿದಾನ

ಪತ್ರಕರ್ತರ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಗೆ ಸಂಬಂಧಿಸಿದ ಹಳೆಯ ವಿವಾದದ ಜೇನುಗೂಡಿಗೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು ಕೈಹಾಕಿದ್ದಾರೆ.
`ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಕಾನೂನುಬದ್ಧವಾಗಿ ನಿಗದಿಪಡಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿರುವ ನ್ಯಾ.ಕಟ್ಜು ಮಾಧ್ಯಮ ರಂಗ ಪ್ರವೇಶಿಸಲು ಅಗತ್ಯವಾದ ಅರ್ಹತೆಯೇನಿರಬೇಕೆಂದು ಸೂಚಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
`ತರಬೇತಿ ಇಲ್ಲದವರ ಪ್ರವೇಶ ಮಾಧ್ಯಮರಂಗದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ರೀತಿ ಬಂದವರು ಮಾಧ್ಯಮರಂಗದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡುತ್ತಿಲ್ಲ' ಎಂದು ಯಥಾಪ್ರಕಾರ ತನ್ನದೇ `ತೀರ್ಪು' ಕೂಡಾ ಅವರು ನೀಡಿದ್ದಾರೆ. `....ಬೇರೆ ಯಾವುದೋ ವಿಷಯದ ಮೇಲೆ ಪಿಎಚ್‌ಡಿಯನ್ನೇ ಪಡೆದುಕೊಂಡಿದ್ದರೂ ಪತ್ರಕರ್ತರಾಗಲು ಬಯಸುವವರು ಕಡ್ಡಾಯವಾಗಿ ಪತ್ರಿಕೋದ್ಯಮದ ಶಿಕ್ಷಣವನ್ನು ಪಡೆದಿರಬೇಕು. ಇದಾದ ನಂತರ ವಕೀಲರಿಗೆ ಬಾರ್ ಕೌನ್ಸಿಲ್ ನೀಡುವಂತೆ ಪತ್ರಕರ್ತರಿಗೂ ಪರವಾನಗಿ ಪತ್ರ ನೀಡಬೇಕು. ಪತ್ರಕರ್ತರು ತಪ್ಪುಮಾಡಿದರೆ ಅವರಿಗೆ ನೀಡಲಾಗಿರುವ ಪರವಾನಗಿಯನ್ನು ವಾಪಸು ಪಡೆಯಬೇಕು....' ಎಂದು ನ್ಯಾ.ಕಟ್ಜು ಮೊದಲ ಪತ್ರಿಕಾ ಹೇಳಿಕೆಯ ನಂತರ ನೀಡಿದ ಸ್ಪಷ್ಟೀಕರಣದಲ್ಲಿ ವಿವರಿಸಿದ್ದಾರೆ.
ಪಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ನ್ಯಾ.ಕಟ್ಜು ಚರ್ಚೆಗೆ ಒಡ್ಡಿರುವ ಹಲವು ವಿಷಯಗಳಲ್ಲಿ ಪತ್ರಕರ್ತರ ಅರ್ಹತೆ ಕೂಡಾ ಒಂದು. ವಕೀಲರು, ವೈದ್ಯರು, ಶಿಕ್ಷಕರಿಗೆಲ್ಲ ನಿರ್ದಿಷ್ಟ ವಿದ್ಯಾರ್ಹತೆ ಮತ್ತು ತರಬೇತಿ ಕಡ್ಡಾಯವಾಗಿರುವಾಗ ಪತ್ರಕರ್ತರಿಗೆ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನು ನ್ಯಾ.ಕಟ್ಜು ಮಾತ್ರ ಅಲ್ಲ, ಸಾಮಾನ್ಯ ಜನರೂ ಕೇಳುತ್ತಿದ್ದಾರೆ. `
ಪತ್ರಕರ್ತರೆಂದರೆ ರಾಜಕಾರಣಿಗಳು ಇದ್ದ ಹಾಗೆ, ಯಾವುದೇ ಅರ್ಹತೆ ಬೇಡ, ಟಿವಿ ಚಾನೆಲ್‌ಗಳ ಪ್ರವೇಶದ ನಂತರ ಪತ್ರಕರ್ತರಾಗುವುದು ಇನ್ನೂ ಸುಲಭವಾಗಿದೆ. ಓದು-ಬರಹ ಕೂಡಾ ಬೇಡ, ಬಾಯ್ತುಂಬಾ ಮಾತನಾಡಲು ಬಂದರೆ ಸಾಕು ಪತ್ರಕರ್ತರಾಗಬಹುದು' ಎಂಬ ಸಾಮಾನ್ಯ ಜನರ ವ್ಯಂಗ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಹ ಸ್ಥಿತಿಯಲ್ಲಿಯೂ ಯಾರೂ ಇಲ್ಲ.
ಆದರೆ ದೇಶದ ಮಾಧ್ಯಮರಂಗಕ್ಕೆ ಹತ್ತಿರುವ ರೋಗಕ್ಕೆ ಪತ್ರಕರ್ತರ  ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಯ ಕೊರತೆ ಕಾರಣ ಎಂಬ ಸುಲಭ ತೀರ್ಮಾನಕ್ಕೆ ಬರಬಹುದೇ? ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸುವುದರಿಂದ ರೋಗಗ್ರಸ್ತ ಮಾಧ್ಯಮರಂಗ ಕಳೆದುಕೊಂಡಿರುವ ಆರೋಗ್ಯವನ್ನು ಮರಳಿ ಪಡೆಯಬಹುದೇ?
ಸ್ಥಳೀಯವಾದ ಸಣ್ಣಪುಟ್ಟ ಹಗರಣಗಳನ್ನು ಪಕ್ಕಕ್ಕೆ ಇಟ್ಟುಬಿಡುವ, ದೇಶದ ಮಾಧ್ಯಮರಂಗದ ನೈತಿಕ ಬುನಾದಿಯನ್ನೇ ಅಲುಗಾಡಿಸಿದ `ಕಾಸಿಗಾಗಿ ಸುದ್ದಿ' ಮತ್ತು `ರಾಡಿಯಾ ಟೇಪ್'ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಖ್ಯಾತ ಪತ್ರಕರ್ತರು, ಉದ್ಯಮಿಯೊಬ್ಬರಿಂದ ಹಣಸುಲಿಗೆ ಮಾಡಲು ಹೊರಟಿದ್ದರೆಂಬ ಆರೋಪಕ್ಕೊಳಗಾಗಿರುವ ಟಿವಿಚಾನೆಲ್‌ನ ಹಿರಿಯ ಪತ್ರಕರ್ತರು, 2ಜಿ ಹಗರಣದಿಂದ ಹಿಡಿದು ಅಕ್ರಮ ಗಣಿಗಾರಿಕೆ ವರೆಗಿನ ಹಲವಾರು ಹಗರಣಗಳಲ್ಲಿ ಫಲಾನುಭವಿಗಳೆಂಬ ಆರೋಪ ಹೊತ್ತಿರುವ ಪತ್ರಕರ್ತರಲ್ಲಿ ಯಾರು ಅನಕ್ಷರಸ್ಥರು? ಯಾರು ಪತ್ರಿಕೋದ್ಯಮದ ಬಗ್ಗೆ ತರಬೇತಿ ಪಡೆಯದವರು ? ವಿಚಿತ್ರವೆಂದರೆ ಪತ್ರಕರ್ತರಿಗೆ ಅರ್ಹತೆಯನ್ನು ನಿಗದಿಪಡಿಸಲು ಹೊರಟಿರುವ ನ್ಯಾ.ಕಟ್ಜು ಅವರು ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ಏನು ಅರ್ಹತೆ ಇರಬೇಕೆಂದು ಈ ವರೆಗೆ ಹೇಳಿಲ್ಲ.
`ಕಾಸಿಗಾಗಿ ಸುದ್ದಿ' ಹಗರಣದಲ್ಲಿ ಭಾಗಿಯಾದವರು ಪತ್ರಕರ್ತರಲ್ಲ, ಕೆಲವು ದೊಡ್ಡ ಮಾಧ್ಯಮಸಂಸ್ಥೆಗಳ ಮಾಲೀಕರು. ಪಿಸಿಐ ಕಪಾಟಿನಲ್ಲಿ ದೂಳು ತಿನ್ನುತ್ತಿರುವ ಅವರದ್ದೇ ಸಂಸ್ಥೆಯ ತನಿಖಾ ವರದಿಯನ್ನು ತಿರುವುಹಾಕಿದರೆ ನ್ಯಾ.ಕಟ್ಜು ಅವರಿಗೆ ಸತ್ಯ ಗೊತ್ತಾದೀತು. ಎರಡನೆಯದಾಗಿ `ರಾಡಿಯಾ ಟೇಪ್' ಹಗರಣದಲ್ಲಿ ಆರೋಪ ಕೇಳಿಬಂದ ಪ್ರಖ್ಯಾತ ಪತ್ರಕರ್ತರಾದ ವೀರ್ ಸಾಂಘ್ವಿ, ಬರ್ಖಾದತ್ ಮೊದಲಾದವರಲ್ಲಿ ಯಾವ ಶೈಕ್ಷಣಿಕ ಅರ್ಹತೆ, ತರಬೇತಿಯ ಕಮ್ಮಿ ಇತ್ತು?
ಹುಟ್ಟಿನಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯದಂತೆ ಶಿಕ್ಷಣ ಮತ್ತು ತರಬೇತಿಯಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಬಾಲಿಶತನದ್ದು. ಕನಿಷ್ಠ ಪದವಿಯನ್ನೂ ಪಡೆಯಲಾಗದ ವಿನೋದ್ ಮೆಹ್ತಾ, ಪತ್ರಿಕೋದ್ಯಮವನ್ನೇ ಓದದೆ ಇರುವ ಅರುಣ್‌ಶೌರಿ ಮೊದಲಾದವರು ಯಶಸ್ವಿ ಸಂಪಾದಕರಾಗಿರುವ ಉದಾಹರಣೆಗಳು ಕಣ್ಣಮುಂದಿವೆ.
ಈಗಿನ ಜನಾಂಗ ಗೌರವದಿಂದ ನೆನಪು ಮಾಡಿಕೊಳ್ಳುವ ಹಳೆಯ ಪೀಳಿಗೆಯ ಬಹುತೇಕ ಹಿರಿಯ ಪತ್ರಕರ್ತರು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರಲ್ಲ. ಅವಸರದ ಸೃಷ್ಟಿ ಎಂದೇ ವ್ಯಾಖ್ಯಾನಿಸಲಾಗುವ ಪತ್ರಿಕಾ ಬರವಣಿಗೆಗಳು ಸೃಜನಶೀಲವಾದುದಲ್ಲ ಎನ್ನುವವರಿದ್ದಾರೆ. ಪತ್ರಿಕೋದ್ಯಮವನ್ನು ಪ್ರವೇಶಿಸಿರುವ ತಂತ್ರಜ್ಞಾನ ಇಂತಹ ಟೀಕೆ-ಟಿಪ್ಪಣಿಗಳಿಗೆ ಇನ್ನಷ್ಟು ಅವಕಾಶ ನೀಡಿದೆ. ಭಾಷಾಂತರದ ಸಾಫ್ಟ್‌ವೇರ್ ಕೂಡಾ ಲಭ್ಯ ಇರುವುದರಿಂದ ಕಂಪ್ಯೂಟರ್ ಜ್ಞಾನದ ಬಲದಿಂದಲೇ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಹೊಸಪೀಳಿಗೆಯ ಪತ್ರಕರ್ತರಲ್ಲಿದೆ. ಪತ್ರಕರ್ತನ ವೃತ್ತಿಯಲ್ಲಿ ಬರವಣಿಗೆಯ ಕಲೆಯಷ್ಟೇ ತಂತ್ರಜ್ಞಾನ ಕೂಡಾ ಮುಖ್ಯವಾಗುತ್ತಿದೆ.
ಎಲ್ಲರೂ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಯಶಸ್ಸು ಕಂಡ ಅರ್ನೆಸ್ಟ್ ಹೆಮ್ಮಿಂಗ್ವೆಯಂತಹ ಪತ್ರಕರ್ತರಾಗಲು ಸಾಧ್ಯ ಇಲ್ಲ ಎನ್ನುವುದು ನಿಜವಾದರೂ ಬರವಣಿಗೆಯ ಶಕ್ತಿ ಇಲ್ಲದವರು  ಯಶಸ್ವಿ ಪತ್ರಕರ್ತರಾಗಿ ಬೆಳೆಯುವುದು ಕಷ್ಟ, ಅವರು ಹೆಚ್ಚೆಂದರೆ ಕಾರಕೂನ ಪತ್ರಕರ್ತರಾಗಬಹುದು ಅಷ್ಟೇ. ಬರವಣಿಗೆ ಎನ್ನುವುದು ಸ್ವಂತ ಆಸಕ್ತಿಯಿಂದ ಸಿದ್ದಿಸಿಕೊಳ್ಳಬೇಕಾದ ಕಲೆ, ಅದನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ಒಲಿಸಿಕೊಳ್ಳಲಾಗದು ಎನ್ನುವುದನ್ನು ನ್ಯಾ.ಕಟ್ಜು ಅವರಿಗೆ ತಿಳಿಸಿ ಹೇಳುವವರು ಯಾರು?
ಸಮಕಾಲೀನ ವಿದ್ಯಮಾನಗಳಿಗೆ ಆಗಾಗ ಪ್ರತಿಕ್ರಿಯಿಸುವ ಮೂಲಕ ಪುರೋಗಾಮಿ ಚಿಂತಕನೆಂಬಂತೆ ಬಿಂಬಿಸಿಕೊಳ್ಳುತ್ತಿರುವ ನ್ಯಾ.ಕಟ್ಜು ಅವರು ಸಾಂಪ್ರದಾಯಿಕವಾದ ಶಿಕ್ಷಣದ ಬಗ್ಗೆ ಇಷ್ಟೊಂದು ಭರವಸೆಯನ್ನು ಇಟ್ಟುಕೊಂಡಿರುವುದೇ ಅಚ್ಚರಿ ಹುಟ್ಟಿಸುತ್ತದೆ. ಶಿಕ್ಷಿತರು, ಬುದ್ದಿವಂತರು ಮಾಡಿದಷ್ಟು ಅನ್ಯಾಯ, ಅಕ್ರಮಗಳನ್ನು ಅನಕ್ಷರಸ್ಥರು ಮತ್ತು ದಡ್ಡರು ಮಾಡಿಲ್ಲ ಎನ್ನುವುದು ತೀರಾ ಸರಳೀಕೃತ ಹೇಳಿಕೆ ಎಂದು ಅನಿಸಿದರೂ ಸಾಬೀತುಪಡಿಸಲು ಹೊರಟರೆ ಪುರಾವೆಗಳು ಊರೆಲ್ಲ ಸಿಗುತ್ತವೆ. ವ್ಯತ್ಯಾಸವೆಂದರೆ ಅನಕ್ಷರಸ್ಥರು, ದಡ್ಡರು ತಮಗೆ ತಾವೇ ಅನ್ಯಾಯ ಮಾಡಿಕೊಂಡು ಕಷ್ಟಕಾರ್ಪಣ್ಯಗಳಲ್ಲಿ ನರಳಾಡಿದರೆ, ಶಿಕ್ಷಿತರು, ಬುದ್ದಿವಂತರು ಊರಿಗೆಲ್ಲ ಅನ್ಯಾಯ ಮಾಡಿ ತಾವು ಸುಖವಾಗಿರಲು ನೋಡುತ್ತಾರೆ.
ಸ್ವಾತಂತ್ರ್ಯ ಪಡೆದ ಪ್ರಾರಂಭದ ದಿನಗಳಲ್ಲಿ ಮಾತ್ರವಲ್ಲ ಈಗಲೂ ಶಿಕ್ಷಣವೇ `ಸರ್ವರೋಗಕ್ಕೆ ರಾಮಬಾಣ' ಎಂಬ ಅಭಿಪ್ರಾಯ ಇದೆ. ಬಡತನ, ಅನಾರೋಗ್ಯ, ಮೂಢನಂಬಿಕೆ, ಜಾತೀಯತೆ, ಕೋಮುವಾದ, ಅಪರಾಧ ಹೀಗೆ ಎಲ್ಲ ಬಗೆಯ ಸಾಮಾಜಿಕ ಅನಿಷ್ಟಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ರಾಜಕೀಯ ನಾಯಕರು ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕಾಗಿ ಹಂಬಲಿಸುವ ಪ್ರಜ್ಞಾವಂತ ಹಿರಿಯರು ಕೂಡಾ ಹೇಳುತ್ತಲೇ ಬಂದಿದ್ದಾರೆ. ಆದರೆ ದೇಶ ದಾಟಿ ಬಂದ 65 ವರ್ಷಗಳ ಹಾದಿಗೆ ಕಣ್ಣಾಡಿಸಿದರೆ ಕಾಣುವ ಚಿತ್ರವೇ ಬೇರೆ.
ಬಡತನದ ಪ್ರಮಾಣ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿರಬಹುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿರಲೂ ಬಹುದು. ಆದರೆ ಉಳಿದ ಅನಿಷ್ಠಗಳು  ಉಲ್ಭಣಗೊಳ್ಳುತ್ತಿರುವುದು  ಮಾತ್ರವಲ್ಲ ಹಳೆಯದರ ಜತೆಗೆ ಹೊಸ ಪಿಡುಗುಗಳು ಹುಟ್ಟಿಕೊಂಡಿವೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಉರುಳಾಡುತ್ತಿರುವವರು, ಟಿವಿಚಾನೆಲ್‌ಗಳಲ್ಲಿ  ಜ್ಯೋತಿಷಿ ಒದರುತ್ತಿರುವ ಸುಳ್ಳು ಭವಿಷ್ಯಗಳನ್ನು ಕೇಳಲು ಮತ್ತು ಅದರಂತೆ ನಡೆದುಕೊಳ್ಳಲು ಮೈಯೆಲ್ಲ ಕಣ್ಣು-ಕಿವಿಯಾಗಿ ಟಿವಿ ಮುಂದೆ ಕೂತಿರುವವರಲ್ಲಿ ಹೆಚ್ಚಿನವರು ಶಿಕ್ಷಿತರು. ಇವರಲ್ಲಿ ವೈದ್ಯರು, ಶಿಕ್ಷಕರು,ವಿಜ್ಞಾನಿಗಳು ಎಲ್ಲರೂ ಸೇರಿದ್ದಾರೆ.
ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾದವರ ಶೈಕ್ಷಣಿಕ ಅರ್ಹತೆಯನ್ನು ಯಾರಾದರೂ ಹುಡುಕಿ ತೆಗೆದು ಪಟ್ಟಿಮಾಡಿದರೆ ಅಪರಾಧ ನಡೆಸಲು ಬೇಕಾಗಿರುವ ಒಂದು ಅರ್ಹತೆ ಶಿಕ್ಷಣ ಇರಬಹುದೇ ಎಂಬ ಅನುಮಾನ ಹುಟ್ಟಲು ಸಾಧ್ಯ. ಪತ್ರಕರ್ತರನ್ನು ಈ ಎಲ್ಲ ಬೆಳವಣಿಗೆಗಳಿಂದ ದೂರ ಇಟ್ಟು ನೋಡಲಾಗುವುದಿಲ್ಲ.
ನ್ಯಾ.ಕಟ್ಜು ಅವರು ನಂಬಿರುವಂತೆ ಇಂದಿನ ಮಾಧ್ಯಮರಂಗವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆ ಕೇವಲ ಪತ್ರಕರ್ತರ ಅರ್ಹತೆ ಇಲ್ಲವೇ ತರಬೇತಿಯ ಕೊರತೆ ಖಂಡಿತ ಅಲ್ಲ. ರಾಷ್ಟ್ರಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇಂದಿನ ಬಹುಪಾಲು ಪತ್ರಿಕೆಗಳು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿಯೇ ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ. ವಶೀಲಿ ಮಾಡಿ ಸೇರಿಕೊಳ್ಳುವವರಿಗೂ ಕನಿಷ್ಠ ವಿದ್ಯಾರ್ಹತೆ ಇರಲೇ ಬೇಕಾಗುತ್ತದೆ.
ತೀರಾ ಸ್ಥಳೀಯವಾದ ಪತ್ರಿಕೆ-ಚಾನೆಲ್‌ಗಳನ್ನು ಹೊರತುಪಡಿಸಿ ಮಾಧ್ಯಮರಂಗಕ್ಕೆ ಪ್ರವೇಶಿಸುವವರೆಲ್ಲರ  ಕೈಯಲ್ಲಿ ಪದವಿ ಇಲ್ಲವೆ ಸ್ನಾತಕೋತ್ತರ ಪದವಿ ಇರುತ್ತದೆ. ಸೇರ್ಪಡೆಯಾದ ನಂತರ ತರಬೇತಿಯನ್ನು ಪಡೆಯುತ್ತಾರೆ, ಇಂದಿನ ಅಗತ್ಯವಾದ ಕಂಪ್ಯೂಟರ್ ಜ್ಞಾನವೂ ಅವರಲ್ಲಿರುತ್ತದೆ. ಕಾಗುಣಿತ ತಪ್ಪಿಲ್ಲದೆ ಬರೆಯುವುದನ್ನೂ ಕಲಿತಿರುತ್ತಾರೆ. ನ್ಯಾ.ಕಟ್ಜು ಅವರು ನಿರೀಕ್ಷಿಸುತ್ತಿರುವ ಪತ್ರಿಕೋದ್ಯಮದ ಗುಣಮಟ್ಟವನ್ನು ಎತ್ತಿಹಿಡಿಯುವ ಪತ್ರಕರ್ತನಾಗಲು ಇಷ್ಟು ಅರ್ಹತೆ ಮತ್ತು ತರಬೇತಿ ಸಾಕೆ? ಒಬ್ಬ ಒಳ್ಳೆಯ ಪತ್ರಕರ್ತನನ್ನು ರೂಪಿಸುವುದು ಕೇವಲ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಅಲ್ಲ. ಇದರ ಜತೆಗೆ ಎಲ್ಲ ಕ್ಷೇತ್ರಗಳ ವೃತ್ತಿಪರರಂತೆ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ. ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕಾದ ಈ ಗುಣಗಳನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ನೆಟ್ಟು ಬೆಳೆಸಲು ಸಾಧ್ಯವೇ?.
ನ್ಯಾ.ಕಟ್ಜು ಪತ್ರಕರ್ತರು ಹೊಂದಿರಬೇಕಾದ ಅರ್ಹತೆ ಬಗ್ಗೆ ಪ್ರತಿಪಾದನೆ ಮಾಡುವಾಗಲೂ ತಪ್ಪು ಪ್ರಶ್ನೆಯನ್ನು ಎತ್ತಿಕೊಂಡಿದ್ದಾರೆ. ಇದು ಅರ್ಥವಾಗಬೇಕಾದರೆ ಇಂದಿನ ವಿಶ್ವವಿದ್ಯಾಲಯಗಳಿಂದ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಂದವರನ್ನು ಕರೆದು ಅವರು ಮಾತನಾಡಿಸಬೇಕು. ಈ ಬಡಪಾಯಿ ವಿದ್ಯಾರ್ಥಿಗಳನ್ನು ದೂರಿಯೂ ಏನೂ ಪ್ರಯೋಜನ ಇಲ್ಲ. ಯಾವುದೋ ಓಬಿರಾಯನ ಕಾಲದ ಪಠ್ಯಕ್ರಮವನ್ನು ಓದಿ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಅದೇ ಹಳೆಯ ಪಠ್ಯವನ್ನು ಹಿಡಿದುಕೊಂಡು ಮಾಡುವ ಪಾಠವನ್ನು ಕೇಳುವ ವಿದ್ಯಾರ್ಥಿಗಳಿಂದ ವೃತ್ತಿಗೆ ಅವಶ್ಯಕವಾದ ಯಾವ ಅರ್ಹತೆಯನ್ನು ನಿರೀಕ್ಷಿಸಲು ಸಾಧ್ಯ?
  ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಲ್ಲಿ ಎಷ್ಟು ಮಂದಿಗೆ ಮಾಧ್ಯಮರಂಗದ ಪ್ರತ್ಯಕ್ಷ ಅನುಭವ ಇದೆ? ಅವರಲ್ಲಿ ಎಷ್ಟು ಮಂದಿ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ? ಪ್ರಾಯೋಗಿಕವಾದ ಅನುಭವವೇ ಇಲ್ಲದ ಇವರು ಎಂತಹ ವೃತ್ತಿಪರ ಪತ್ರಕರ್ತರನ್ನು ಸೃಷ್ಟಿಮಾಡಬಲ್ಲರು?
ಇಂದು ಬಹಳಷ್ಟು ವಿದ್ಯಾರ್ಥಿಗಳು ಪತ್ರಕರ್ತರಾಗಬಯಸುತ್ತಿರುವುದು ಆಯ್ಕೆಯಿಂದಲ್ಲ. ಬೇರೆ ಯಾವ ವಿಷಯದಲ್ಲಿಯೂ ಸೀಟು ಸಿಗಲಿಲ್ಲವೆನ್ನುವ ಕಾರಣಕ್ಕೆ ಪತ್ರಿಕೋದ್ಯಮವನ್ನು ಆರಿಸಿಕೊಂಡವರೇ ಹೆಚ್ಚು. ಪತ್ರಿಕೋದ್ಯಮ ಶಿಕ್ಷಣ ಅವರಲ್ಲಿ ವೃತ್ತಿ ಬಗ್ಗೆ ಆಸಕ್ತಿಯನ್ನು ಹುಟ್ಟಿಸದೆ ಇರುವುದರಿಂದ ಅವರ ಪಾಲಿಗೆ ಪತ್ರಕರ್ತನ ವೃತ್ತಿ ಎಂದರೆ ಅದು ಹೊಟ್ಟೆಪಾಡಿಗಾಗಿ ಇರುವ ನೂರೆಂಟು ವೃತ್ತಿಗಳಲ್ಲೊಂದು ಅಷ್ಟೆ. ಇದರಿಂದಾಗಿ ಆ ವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ಪಿಡುಗುಗಳೆಲ್ಲ ಮಾಧ್ಯಮರಂಗಕ್ಕೂ ತಗಲಿವೆ.
ಪತ್ರಕರ್ತರಾಗಲು ಕಲಿತ ಶಿಕ್ಷಣ ನೆರವಾಗಿದೆಯೇ ಎಂಬ ಪ್ರಶ್ನೆಯನ್ನು ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಉತ್ಪನ್ನಗಳಾದ ಪತ್ರಕರ್ತರನ್ನು ಕೇಳಿದರೆ ಬಹುಪಾಲು ಮಂದಿ ಉತ್ತರಿಸದೆ ತಲೆತಗ್ಗಿಸುತ್ತಾರೆ. ಶಿಕ್ಷಣವನ್ನು ಪತ್ರಕರ್ತರ ಅರ್ಹತೆಯ ಮಾನದಂಡವನ್ನಾಗಿ ಮಾಡಲು ಹೊರಟವರು ಮೊದಲು ಪತ್ರಿಕೋದ್ಯಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸಬೇಕಾಗುತ್ತದೆ. ನ್ಯಾಯಮೂರ್ತಿ ಕಟ್ಜು ಅವರು ಮಾಧ್ಯಮರಂಗಕ್ಕೆ ತಗಲಿರುವ ರೋಗದ ಕಾರಣವನ್ನೇ ಹುಡುಕಲು ವಿಫಲರಾಗಿದ್ದಾರೆ. ರೋಗನಿದಾನವೇ ತಪ್ಪಾಗಿಬಿಟ್ಟರೆ ಯಾವ ಔಷಧಿಯಿಂದಲೂ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ ಇಲ್ಲ.