Sunday, July 31, 2016

ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್.

(ಬೆಂಗಳೂರಿನಲ್ಲಿ ಎಸ್‍.ಸಿ.-ಎಸ್.ಟಿ. ಸಂಪಾದಕರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿನ ಭಾಷಣದ ಬರಹ ರೂಪ)
-ಎನ್. ರವಿಕುಮಾರ್. ಶಿವಮೊಗ್ಗ
ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ ಜೊತೆ ಅವರೊಬ್ಬ ಪತ್ರಕರ್ತರೂ ಆಗಿದ್ದರು ಎಂಬುದನ್ನು ನಾವು ಮರೆತಿದ್ದೇವೆ. ೧೯೨೦ ರಲ್ಲಿ ಮೂಕ ನಾಯಕ ಪತ್ರಿಕೆಯನ್ನು ಅವರು ಪ್ರಾರಂಭ ಮಾಡುತ್ತಾರೆ. ಅದರ ಎಡಿಟೋರಿಯಲ್ ಗಳ ಒಂದು ಪುಸ್ತಕ ಬಂದಿದೆ. ಅದನ್ನು ನಾನೇ ಧಾರವಾಡದಲ್ಲಿ ಬಿಡುಗಡೆ ಮಾಡಿದ್ದೆ. ಗಣೇಶ ಕದಂ ಅವರು ಈ ಪುಸ್ತಕವನ್ನು ಇಂಗ್ಲೀಷ್‍ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಕನಾಯಕ ಪತ್ರಿಕೆಯ ಎಡಿಟೋರಿಯಲ್ ನ ಘೋಷವಾಕ್ಯ ಹೀಗಿದೆ:  “ ಹೀಗೇಕೆ ನಾನು ಸಂಕೋಚ ಪಡಬೇಕು. ಯಾವುದೇ ಹಿಂಜರಿಕೆಯಿಲ್ಲದೆ ನಾನು ಮಾತನಾಡುವೆ. ಮೂಕರ ನೋವುಗಳನ್ನು ಯಾರೂ ಅರಿಯರು, ಮಾತನಾಡಲು ಸಂಕೋಚ ಪಟ್ಟುಕೊಂಡರೆ ಏಳಿಗೆ ಸಾಧ್ಯವಿಲ್ಲ”. ೧೮೭೩ ರಲ್ಲಿ ಜ್ಯೋತಿ ಬಾಪುಲೆ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪನೆ ಮಾಡುತ್ತಾರೆ . ಅದರ ನಂತರ ೧೮೭೭ ರಲ್ಲಿ ಅವರು ’ದೀನಬಂಧು’ ಪತ್ರಿಕೆ ಯನ್ನು ಪ್ರಾರಂಭ ಮಾಡುತ್ತಾರೆ. ದಲಿತ ಪತ್ರಿಕೋದ್ಯಮದ ಇತಿಹಾಸ ಅಲ್ಲಿಂದ ಇದು ಪ್ರಾರಂಭವಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನೆನೆಪಿಸಿಕೊಳ್ಳುತ್ತೇನೆ. ಅದರ ನಂತರ ಶಿವರಾಂ ಜನಾಬ್ ಕಾಂಬ್ಳೆ ’ಸೋಮವಂಶಕ್ಷತ್ರೀಯ’ ಪತ್ರಿಕೆಯನ್ನು ಪ್ರಾರಂಭ ಮಾಡ್ತಾರೆ.
            ೧೯೧೬ ಕೊಲಂಬಿಯಾ ವಿಶ್ವವಿದ್ಯಾನಿಲಯ, ಲಂಡನ್ ಸ್ಕೂಲ್ ಆಫ್ ಏಕಾನಮಿಕ್ಸ್ನಲ್ಲಿ ವ್ಯಾಸಂಗ ಮುಗಿಸಿ ಅಂಬೇಡ್ಕರ್ ಅವರು ವಾಪಾಸ್ ಬಂದ ಮೇಲೆ ’ಮೂಕನಾಯಕ’ ಪತ್ರಿಕೆ ಪ್ರಾರಂಭ ಮಾಡುತ್ತಾರೆ. ದಲಿತರ ಬೆಳವಣಿಗೆಯ ಪ್ರಕ್ರಿಯೆಗೆ ಅನುಗುಣವಾಗಿ ಅಂಬೇಡ್ಕರ್ ಪ್ರಾರಂಭಿಸಿದ ಪತ್ರಿಕೆಗಳ ಹೆಸರಿವೆ.. ಮೊದಲನೇಯದು ಮೂಕನಾಯಕ, ಎರಡನೇಯದು ಬಹಿಷ್ಕೃತ ಭಾರತ ಮೂರನೇಯದು ಪ್ರಬುಧ್ಧ ಭಾರತ. ಅಂಬೇಡ್ಕರ್ ಅವರು ಒಬ್ಬ ಪತ್ರಕರ್ತರಾಗಿ ಸಾವಿರಾರು ಪುಟಗಳನ್ನು ಬರೆದಿದ್ದಾರೆ. ಬಹುಶಃ ಮಹಾತ್ಮ ಗಾಂಧಿಗೆ ಅವರೊಬ್ಬ ಒಳ್ಳೆಯ ಕಾಂಪಿಟೀಟರ್ . ಮಹಾತ್ಮ ಗಾಂಧೀಜಿ ಕೂಡ ಒಬ್ಬ ಪತ್ರಕರ್ತರಾಗಿದ್ದರು. ಅವರ ಹರಿಜನ ಪತ್ರಿಕೆ , ಯಂಗ್ ಇಂಡಿಯಾ ಪತ್ರಿಕಾಗಳನ್ನು ಸಂಪಾದಿಸುತ್ತಿದ್ದುದು ನಿಮಗೆ ಗೊತ್ತಿದೆ. ಆದರೆ ಹರಿಜನ ಪತ್ರಿಕೆ ಮತ್ತು ಯಂಗ್ ಇಂಡಿಯಾ ಪತ್ರಿಕೆ ಬಗ್ಗೆ  ನಡೆದಷ್ಟು ಚರ್ಚೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಾರಂಭ ಮಾಡಿದ ಪತ್ರಿಕೆಗಳ ಬಗ್ಗೆ ಆಗುತ್ತಿಲ್ಲ. ನನಗೆ ತಿಳಿದ ಮಟ್ಟಿಗೆ ’ಮೂಕನಾಯಕ’ದ ಬಹಳಷ್ಟು ಎಡಿಟೋರಿಯಲ್ ಗಳು ಸಂಕಲನ ರೂಪದಲ್ಲಿ ಹಿಂದಿ-ಮರಾಠಿ ಭಾಷೆಗಳಲ್ಲಿ ಬಂದಿದೆ. ಆದರೆ ಕನ್ನಡಕ್ಕೆ ಹೆಚ್ಚು ಬಂದಿಲ್ಲ. ಇದೀಗ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್ ಅವರ ೨೫ ಸಂಪುಟಗಳಲ್ಲೂ ಈ ಪತ್ರಿಕೆಗಳ ಉಲ್ಲೇಖ ನನಗೆ  ಕಾಣಲಿಲ್ಲ. ಮೂಕ ನಾಯಕದಲ್ಲಿನ ಸಂಪಾದಕೀಯಗಳನ್ನು ಓದುತ್ತಾ ಹೋದರೆ ಆ ಕಾಲದ ರಾಜಕೀಯ, ಸಾಮಾಜಿಕ ಇತಿಹಾಸದ ದರ್ಶನ ಕೂಡ ನಮಗೆ ಆಗುತ್ತದೆ.
          ೧೯೧೬ ರಲ್ಲಿ ಅವರು ಅಂಬೇಡ್ಕರ್ ಅವರು ಕೊಲಂಬಿಯ ವಿಶ್ವವಿದ್ಯಾನಿಲಯದಿಮದ ವ್ಯಾಸಾಂಗ ಮುಗಿಸಿದಾಗ ಅವರಿಗೆ ಒಂದು ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಆಗ ಆ ವಿದ್ಯಾರ್ಥಿಗಳು ಅಂಬೇಡ್ಕರ್ ಅವರಿಗೆ ಹೇಳ್ತಾರೆ. ’ನೀನು ಅಮೆರಿಕಾದ ಕಪ್ಪುಜನರ ಮುಕ್ತಿಗಾಗಿ ಶ್ರಮಿಸಿದ BOOKER t Washington’ ಆಗಬೇಕು ಎಂದು ಆಗ ಸಹಪಾಠಿಗಳು ಹೇಳಿದ್ದರಂತೆ. ಬಹುಶಃ ಅಂಬೇಡ್ಕರ್ ಅವರ ಮನಸ್ಸಿನಲ್ಲಿ ಇದೇ ಇತ್ತೇನೋ.....ಗೊತ್ತಿಲ್ಲ, ಪತ್ರಿಕೆ ಸಾಮಾಜಿಕ ಪರಿವರ್ತನೆಯ ಒಂದು ಸಾಧನ ಎಂಬುದನ್ನು ಅವರು ಅದಾಗಲೆ ತಿಳಿದುಕೊಂಡಿದ್ದರು. ಅದಕ್ಕಾಗಿ ಯೇ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಷ್ಟೊಂದು ಮಹತ್ವಕೊಟ್ಟರು ಎಂದು ನನಗನಿಸುತ್ತಿದೆ.
ಪ್ರಜಾವಾಣಿ ದಲಿತ ಸಂಚಿಕೆಯೊಂದನ್ನು ತಂದಾಗ ರಾಜ್ಯದಲ್ಲಿಯೇ ಏಕೆ ದೇಶದಲ್ಲಿಯೇ ಸಂಚಲನ ಆಗಿತ್ತು. ಆ ಕೆಲಸದಲ್ಲಿ ಪಾಲ್ಗೊಂಡ ನನಗೆ ಹೆಮ್ಮೆ ಇದೆ. ಆ ಪ್ರಯತ್ನಕ್ಕೆ ಪ್ರೇರಣೆಯಾದ ಕಾರಣ ಕುತೂಹಲಕಾರಿಯಾಗಿದೆ. 2000ನೇ ವರ್ಷದಲ್ಲಿ ರಾಬಿನ್ ಜಾಫ್ರಿ ಎಂಬ ಪತ್ರಕರ್ತ ಭಾರತದ ಮಾಧ್ಯಮ ಕ್ರಾಂತಿ ಎಂಬ ಪುಸ್ತಕ ಬರೆದು ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಪ್ರಾತಿನಿಧ್ಯ ನಗಣ್ಯವೆನಿಸುವಷ್ಟು ಕಡಿಮೆ ಎಂದು ಎಚ್ಚರಿಸಿದ್ದರು. ಅದಕ್ಕಿಂತ ಮೊದಲು ಅಂದರೆ 1996ರಲ್ಲಿಯೇ  ವಾಷಿಂಗ್ ಟನ್ ಪೋಸ್ಟ್ ನ ಭಾರತೀಯ ವರದಿಗಾರ ಕೆನ್ನೆತ್ ಜೆ.ಕೂಪರ್ ಭಾರತೀಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದ್ದ. ದೆಹಲಿಯಲ್ಲಿ ರಾಬಿನ್ ಜಾಪ್ರಿಯವರ ಭಾಷಣವನ್ನು ಕೇಳಿದ ಪ್ರಜಾವಾಣಿ ಸಂಪಾದಕರು ದಲಿತರೇ ಒಂದು ದಿನದ ಮಟ್ಟಿಗೆ ಸಂಪಾದಕರಾಗಿ ದಲಿತ ಸಂಚಿಕೆಯನ್ನು ರೂಪಿಸುವ ಯೋಜನೆ ಹಾಕಿದ್ದರು.
ರಾಬಿನ್ ಜಾಫ್ರಿ , ಕೆನ್ನೆತ್ ಕೂಪರ ಮೊದಲಾದವರ ಕಾಲದಲ್ಲಿಯೇ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಭಾರತದ ಪ್ರಮುಖ ಪತ್ರಿಕೆಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಸಂಪಾದಕರಾಗಲಿ ನೀತಿ-ನಿರ್ಧಾರ ಗಳನ್ನು ಕೈಗೊಳ್ಳುವಂತಹ ಸ್ಥಾನಗಳಲ್ಲಿ ಕೂತವರಲ್ಲಿ ಯಾರೂ ದಲಿತರಿಲ್ಲ ಎನ್ನುವುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗುತ್ತದೆ. ಮಾಧ್ಯಮಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ಕೊಡಬೇಕು ಎಂದಾಗ “ ಓ... ದಲಿತರಿಗೆ ಪತ್ರಿಕೋದ್ಯಮದಲ್ಲಿ ಕೂಡಾ ಮೀಸಲಾತಿ ಬೇಕಾ ಎಂದು ನನ್ನನ್ನು ಬಹಳ ಮಂದಿ ಕೇಳಿದವರಿದ್ದಾರೆ. ಆದರೆ ಒಂದು ಆತ್ಮಾವಲೋಕನ ನಡೆಯಬೇಕಲ್ಲ. ರಾಬಿನ್ ಜಾಫ್ರಿ, ಕೆನ್ನೆತ್ ಕೂಪರ್ ಮೊದಲಾದ ಪತ್ರಕರ್ತ ಒಂದು ಆತ್ಮಾವಲೋಕನವನ್ನು ನಡೆಸುತ್ತಾರೆ. ಇವತ್ತು ಕರ್ನಾಕಟದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ಮಾಧ್ಯಮ ಯಾವ ರೀತಿಯಲ್ಲಿ ವರ್ತಿಸುತ್ತಿದೆಯೋ, ಅದೇ ರೀತಿಯ ವರ್ತನೆಗಳನ್ನು ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಬಗ್ಗೆ ಮಾಧ್ಯಮ ವ್ಯಕ್ತಪಡಿಸುತ್ತಿತ್ತು.
            ಈಗಲೂ ಕನ್ನಡ ಮಾಧ್ಯಮಗಳಲ್ಲಿ ದಲಿತರಿಗೆ ಅಗತ್ಯಪ್ರಮಾಣದಷ್ಟು ಪ್ರಾತಿನಿಧ್ಯ ಇಲ್ಲ. ನಮ್ಮಲ್ಲಿರೋ ಹಿರಿಯ ಪತ್ರಕರ್ತರೆಂದರೆ ಇಬ್ಬರು. ಒಬ್ಬರು ಶಿವಾಜಿಗಣೇಶನ್, ಇನ್ನೊಬ್ಬರು ಡಿ.ಉಮಾಪತಿ. ಶಿವಾಜಿ ಗಣೇಶನ್ ಅವರು ಸಹಾಯಕ ಸಂಪಾದಕರಾಗಿ ನಿವೃತ್ತಿಯಾಗಿದ್ದಾರೆ. ಇನ್ನೂ ಉಪಮಾಪತಿ ಅವರು ಸಂಪಾದಕರಾಗಬೇಕೆಂಬುದು ನಮ್ಮೆಲ್ಲರ ಆಶಯ. ಆಗ್ತಾರೋ ಇಲ್ಲವೆ ಇಲ್ಲವೋ ಗೊತ್ತಿಲ್ಲ. ಯಾಕೆ ಆಗುತ್ತಿಲ್ಲ? ನೀವು ಇವತ್ತಿನ ೧೦೦ ಪ್ರಾಮಿನೆಂಟ್ ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಿರುತ್ತಾರೆ. ನೂರು ಕನ್ನಡದ ಪ್ರಮುಖ  ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಾಗಿರುತ್ತಾರೆ.ಆದರೆ ನೀವು ನೂರು ಪ್ರಾಮಿನೆಂಟ್ ಪತ್ರಕರ್ತರನ್ನು ಪಟ್ಟಿ ಮಾಡಿದರೆ ಅದರಲ್ಲಿ ಒಂದು ಕೈಯಿಂದ ಎಣಿಸುವಷ್ಟು ಪತ್ರಕರ್ತರು ಇರುವುದಿಲ್ಲ ಏಕೆ? ಪತ್ರಕರ್ತರಿಗೆ ಮುಖ್ಯವಾಗಿ ಬೇಕಾಗಿರುವುದು ಬರವಣಿಗೆಯ ಕಲೆ. ಅದೇನು ರಾಕೆಟ್ ಸೈನ್ಸ್ ಅಲ್ಲ. ಹಾಗಾದರೆ ಯಾಕೆ ದಲಿತರಿಲ್ಲ? ಇವತ್ತು  ದಲಿತ ಪತ್ರಕರ್ತರು ಸಣ್ಣ ಪತ್ರಿಕೆಗಳಲ್ಲಿ ಸೇರಿಕೊಂಡಿದ್ದಾರೆ. ನಮ್ಮ ರವಿಕುಮಾರ್ (ಎನ್. ರವಿಕುಮಾರ್ ಸಂಪಾದಕರು ’ಶಿವಮೊಗ್ಗ ಟೆಲೆಕ್ಸ್’ಕನ್ನಡ ದಿನಪತ್ರಿಕೆ) ಅಂತಹವರು ಯಾವುದೇ ಮುಖ್ಯವಾಹಿನಿಯ ಪತ್ರಿಕೆಯಲ್ಲಿ ಕೆಲಸ ಮಾಡುವ ಅರ್ಹತೆ ಉಳ್ಳವರು. ನನಗೆ ಸ್ನೇಹಿತರು ಅವರು ನನಗೆ ಗೊತ್ತು ಅವರ ಮಾತು, ಬರವಣಿಗೆ ನೋಡಿದ್ದೇನೆ. ಆದರೆ ಮುಖ್ಯವಾಹಿನಿ ಪತ್ರಿಕೆಗೆ ಬರಲು ಅವರಿಗೆ ಆಗುತ್ತಿಲ್ಲ. ನನಗೆ ಇಂತಹ ಐವತ್ತು ಮಂದಿ ದಲಿತ ಪತ್ರಕರ್ತರುಗಳು ಗೊತ್ತಿದ್ದಾರೆ. ಆದರೆ ಅವರು ಮುಖ್ಯವಾಹಿನಿ ಪತ್ರಿಕೆಗಳಿಗೆ ಬರಲು ಆಗುತ್ತಿಲ್ಲ ಯಾಕೇ?
ನೀವು ’ಯಾಕೆ?’ ಅನ್ನೋದನ್ನು ತಿಳಿದುಕೊಳ್ಳಬೇಕಾದರೆ ೧೯೭೦ ರ ದಶಕದಲ್ಲಿ ಅಮೇರಿಕಾದ ಪರಿಸ್ಥಿತಿಯನ್ನು ನೋಡಬೇಕು. ೧೯೭೮ರಲ್ಲಿ  ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಅಮೆರಿಕಾದಲ್ಲಿ ಮಾಧ್ಯಮದಲ್ಲಿರುವ ಕಪ್ಪು ಜನಾಂಗದ ಪ್ರಾತಿನಿಧ್ಯದ ಬಗ್ಗೆ ಸಮೀಕ್ಷೆ ನಡೆಸಿತ್ತು. ಆ ದೇಶದ ಜನಸಂಖ್ಯೆಯಲ್ಲಿ ಶೇಕಡಾ 36ರಷ್ಟು ಕಪ್ಪು ಜನಾಂಗದವರಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇಕಡಾ ನಾಲ್ಕು ಆಗಿತ್ತು. ಯಾಕೆ ಹೀಗಾಗಿದೆ ಎಂದು ಅವಲೋಕನ ಮಾಡಿ ಅವರು ಸುಮ್ಮನೆ ಇರೋದಿಲ್ಲ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸುತ್ತಾರೆ. 2000ದ ಹೊತ್ತಿಗೆ ಮಾಧ್ಯಮದಲ್ಲಿ ಕಪ್ಪುಜನಾಂಗದ ಪ್ರಾತಿನಿಧ್ಯ ಕನಿಷ್ಟ ಶೇಕಡಾ 20 ಆಗಬೇಕೆಂದು ಅವರು ನಿರ್ಧರಿಸುತ್ತಾರೆ. ಇದಕ್ಕಾಗಿ ಕಪ್ಪುಜನಾಂಗದ ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಕಚೇರಿಗಳಲ್ಲಿ ತರಬೇತಿ ಶಿಬಿರ, ತಾರತಮ್ಯ ನೀತಿ ನಿವಾರಣೆಗೆ ಕ್ರಮ,ವಿಶೇಷ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತವೆ
೨೦೧೦ಕ್ಕೆ ಮತ್ತೆ ಅವರು ಸರ್ವೆ ಮಾಡುವಾಗ ಕರಿಯರಿಗೆ ಶೇ.೧೪ ಪ್ರಾತಿನಿಧ್ಯ ಇರುತ್ತದೆ. ಈಗ ಅವರು ೨೦೨೦ಕ್ಕೆ ಟಾರ್ಗೇಟ್ ಹಾಕಿಕೊಂಡಿದ್ದಾರೆ. ಇದು ಭಾರತದ ಪತ್ರಿಕೋದ್ಯಮದಲ್ಲಿ ದಲಿತರ ಪಾಲ್ಗೊಳ್ಳುವಿಕೆಗೆನೆರವಾಗುವಂತಹ ಒಳ್ಳೆಯ ಮಾಡೆಲ್ ಎಂದು ಅನಿಸುತ್ತದೆ. ಈ ಉದ್ದೇಶದಿಂದಲೇ ಭಾರತದ ಯಾವ ಯಾವ ಪತ್ರಿಕೆಗಳಲ್ಲಿ ದಲಿತರ ಪ್ರಾತಿನಿಧ್ಯ ಎಷ್ಟೆಷ್ಟು ಪ್ರಮಾಣದಲ್ಲಿದೆ ಎಂದು ಸರ್ವೇ ನಡೆಯಬೇಕಾಗಿದೆ. ಕರ್ನಾಟಕದಲ್ಲೂ ಇಂತಹ ಸರ್ವೇ ನಡೆಯಬೇಕು.  ಮಾಧ್ಯಮಗಳಲ್ಲಿ (ಎಲೆಕ್ಟ್ರಾನಿಕ್, ಮುದ್ರಣ ಮತ್ತು ರೇಡಿಯೋ ಸೇರಿ) ಯಾವ ಸ್ಥಾನಗಳಲ್ಲಿ ದಲಿತರಿದ್ದಾರೆ ಮತ್ತು ಇಲ್ಲದಿದ್ದರೆ ಯಾಕೆ ಇಲ್ಲ.? ಅದಕ್ಕೆ ಪರಿಹಾರವೇನು? ಅನ್ನೋದರ ಬಗ್ಗೆ ಈ ಸಮೀಕ್ಷೆ  ನಡಯಬೇಕು.
          ದಲಿತರಿಗೊಂದು  ಉದ್ಯೋಗ ಕೊಡಬೇಕೆಂದು ಪ್ರಾತಿನಿಧ್ಯ ಕೇಳುತ್ತಿಲ್ಲ. ಇದು ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ದಲಿತರಿಗೆ ಪತ್ರಿಕೆಯಲ್ಲಿ ಪ್ರಾತಿನಿಧ್ಯ ಕೊಟ್ಟಕೂಡಲೆ ದಲಿತರಿಗೊಂದಿಷ್ಟು ಉದ್ಯೋಗ ಸಿಗುತ್ತೇ ಅಂತಲ್ಲ. ನನ್ನ ಉದ್ದೇಶ ಅದಲ್ಲ, ಒಂದು ಪತ್ರಿಕೆ ಪರಿಪೂರ್ಣ ಅನಿಸಬೇಕಾದರೆ ಎಲ್ಲಾ ಸಮುದಾಯದ ಅನುಭವ ಲೋಕಗಳು ಅದರಲ್ಲಿ ವ್ಯಕ್ತವಾಗಬೇಕು. ಇಲ್ಲದಿದ್ದರೆ ಅದು ಪರಿಪೂರ್ಣ ಮಾಧ್ಯಮ ವಾಗಲಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಎಲ್ಲಾ ಅನುಭವ ಲೋಕಗಳು ಬರಬೇಕಾದರೆ ಆ ಅನುಭವ ಲೋಕಗಳಿರುವ ವಿಭಿನ್ನ ಸಮುದಾಯದ ಪ್ರಾತಿನಿಧ್ಯ ಮಾಧ್ಯಮ ಲೋಕದಲ್ಲಿರಬೇಕು. ಇಲ್ಲದಿದ್ದರೆ ಅದು ಅರ್ಥವಾಗುವುದಿಲ್ಲ.
ಈ ದೇಶದಲ್ಲಿ ೧೬ ನಿಮಿಷಗಳಿಗೊಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಪ್ರತಿದಿನ ನಾಲ್ವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತೆ, ಪ್ರತಿವಾರ ೧೬ ದಲಿತರ ಕಗ್ಗೊಲೆ ನಡೆಯುತ್ತಿದೆ. ನ್ಯಾನಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳನ್ನು ನೋಡಿದ್ರೆ ಗೊತ್ತಾಗುತ್ತದೆ. ಆದರೆ ನಿರ್ಭಯ ಅತ್ಯಾಚಾರ ದೇಶಾದ್ಯಂತ ಆದಾಗ ಅದೇ ವರ್ಷ ೧೨೭೦ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ದೇಶದಲ್ಲಿ ಅದು ಸುದ್ದಿಯಾಗಿತ್ತಾ? ನಿರ್ಭಯ ಅತ್ಯಾಚಾರ ನಡೆದ ಒಂದು ವಾರದಲ್ಲೆ ಹರಿಯಾಣದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಅದು ಎಲ್ಲಿ ವರದಿಯಾಯಿತು? ಇಷ್ಟೊಂದು ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆದಾಗ ಅದು ಏಕೆ ವರದಿಯಾಗಲಿಲ್ಲ? ಈ ಕಾರಣಕ್ಕಾಗಿಯೇ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದವರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು. ಏಕೆಂದರೆ ಅವರಿಗೊಂದು ಅನುಭವ ಲೋಕವಿದೆ. ಉದಾಹರಣೆಗೆ : ಕಂಬಾಲಪಲ್ಲಿ ಯಂತಹ ಘಟನೆ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಸುದ್ದಿ ಅಷ್ಟೇ. ಅವನು ಅಲ್ಲಿ ಹೋಗಿ ಘಟನೆಯನ್ನು ವೈಭವೀಕರಿಸುತ್ತಾನೆ. ರಕ್ತದೋಕುಳಿ ಹರಿದಿತ್ತು, ರುಂಡ, ಮುಂಡಗಳು ಉರುಳಾಡಿದ್ದವು, ಕಣ್ಣೀರ ಧಾರೆ ಹರಿದಿತ್ತು ಎಂದೆಲ್ಲ ಅಲ್ಲಿಗೆ ಹೋಗಿ ವರದಿ ಮಾಡಿರುತ್ತಾನೆ.
ಆದರೆ, ಒಬ್ಬ ದಲಿತ ವರದಿ ಮಾಡಲು ಹೋದರೆ ಅಂತಹದ್ದೊಂದು ಘಟನೆಗೆ ಕಾರಣ ಏನು ಎನ್ನುವುದನ್ನು ವಿವರಿಸುತ್ತಾ ಹೋಗುತ್ತಾನೆ. ಕಂಬಾಲಪಲ್ಲಿ ಎಂಬುದು ರಾತ್ರಿ ಹಗಲಾಗುವುದರೊಳಗೆ ನಡೆದ ಘಟನೆಯಲ್ಲ, ಅದಕ್ಕೊಂದು ಇತಿಹಾಸವಿದೆ, ಆ ಇತಿಹಾಸದ ಕಾರಣಕ್ಕಾಗಿಯೇ ಕಂಬಾಲಪಲ್ಲಿ  ನಡೆದಿದೆ.. ಈ ದೇಶದಲ್ಲಿ ಇಂತಹ ದೌರ್ಜನ್ಯಗಳಿಗೆ ಒಂದು ಇತಿಹಾಸವಿದೆ. ಒಂದು ಕೋಮುಗಲಭೆಯನ್ನು ಒಬ್ಬ ಮುಸ್ಲೀಂ ಪತ್ರಕರ್ತ ವರದಿ ಮಾಡುವಾಗಲೂ ಈ ವ್ಯತ್ಯಾಸವನ್ನು ಕಾಣಬಹುದು. ಇಂತಹ ಘಟನೆಗಳನ್ನು ವೈಭವಿಕರೀಸದೆ, ರೋಚಕತೆಯ ನ್ನು ತುಂಬದೆ ತನ್ನ ಅನುಭವದೊಂದಿಗೆ ವರದಿಮಾಡುತ್ತಾನೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ’ಮೂಕನಾಯಕ’ ಪತ್ರಿಕೆಯನ್ನು ಯಾಕೆ ಮಾಡಬೇಕಾಯಿತೆಂದರೆ ಆ ಕಾಲದಲ್ಲಿ ಬೇರೆ ಪತ್ರಿಕೆಗಳಲ್ಲಿ ದಲಿತರ ಧ್ವನಿ ಅವರಿಗೆ ಕಾಣಲಿಲ್ಲ. ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದಾಗ  ಮೊದಲ ಬಾರಿಗೆ ಅದಕ್ಕೆ ರೆಬೆಲ್ ಆಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದವರು ಅಂಬೇಡ್ಕರ್. ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಬರಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದವರು ಅವರು. ಆಗ ನಾವು ಯಾರೂ ಕಿವಿಗೊಡಲಿಲ್ಲ. ಅದರ ಪರಿಣಾಮ ನಾವು ಈಗ ಅನುಭವಿಸುತ್ತಿದ್ದೇವೆ. ರಾಜಕೀಯ ಸ್ವಾತಂತ್ರ್ಯ ಎಂಬುದು ಈಗ Farce (ಪ್ರಹಸನ) ಆಗಿಬಿಟ್ಟಿದೆ. ಇವತ್ತು ಏಕೆಂದರೆ ಆರ್ಥಿಕ ಸ್ವಾತಂತ್ರ್ಯವಿಲ್ಲದೆ, ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯದ ಗತಿ ಏನಾಗಬಹುದು ಎಂಬುದನ್ನು ಆ ಕಾಲದಲ್ಲೆ ಅಂಬೇಡ್ಕರ್ ಅವರು ಒಬ್ಬ ದೊಡ್ಡ ದಾರ್ಶನಿಕನಂತೆ ಹೇಳಿದ್ದರು. ಆ ದನಿ ಆಗ ಯಾರಿಗೂ ಕೇಳಲಿಲ್ಲ. ’ಒಂದು ಮತ ಕ್ಕೆ ಒಂದು ಮೌಲ್ಯ’ ಅಂತ ಹೇಳಿದ್ದು ಆಗ ಯಾರಿಗೂ ಅರ್ಥ ಆಗಲಿಲ್ಲ ಇವತ್ತು ಗೊತ್ತಾಗುತ್ತಿದೆ. ಅದಾನಿ, ಅಂಬಾನಿ ಮತಕ್ಕೂ, ಬಡಬೋರೆಗೌಡನ ಒಂದು ಮತ್ತಕ್ಕೂ ನೀವು ಹೋಲಿಕೆ ಮಾಡಲಿಕ್ಕೆ ಸಾಧ್ಯವಿಲ್ಲ. ಇವತ್ತು ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಾರ್ಪೋರೇಟ್ ಪತ್ರಿಕೋದ್ಯಮ ಪ್ರವೇಶವಾಗಿದೆ. ಈ ದೇಶದಲ್ಲಿ ೮೨ ಸಾವಿರ ಪತ್ರಿಕೆಗಳಿವೆ, ಸುಮಾರು ೧೨೦ ಸುದ್ದಿ ಟಿ.ವಿ ಚಾನಲ್‌ಗಳಿವೆ. ೧೨೦೦ ರೇಡಿಯೋಗಳಿವೆ. ಇಷ್ಟು ದೊಡ್ಡ ಮಾಧ್ಯಮ ಸಮೂಹದ ಮಾಲೀಕತ್ವ ಕೇವಲ ನೂರು ಮಂದಿ ಕೈಯಲ್ಲಿದೆ.
          ಇವತ್ತಿನ ಮಾಧ್ಯಮ ಕ್ಷೇತ್ರಕ್ಕೆ , ಪತ್ರಿಕೆಗಳಿಗೆ , ಚಾನಲ್‌ಗಳಿಗೆ ಓದುಗರು ಬೇಕಾಗಿಲ್ಲ. ಅವರಿಗೆ Potential buyers ಗಳು ಬೇಕಾಗಿದ್ದಾರೆ. ಅವರ ಪತ್ರಿಕೆಗಳಲ್ಲಿ, ಚಾನಲ್ ಗಳಲ್ಲಿ ಜಾಹೀರಾತು ಏನು ಬರುತ್ತೇ .ಟಿವಿ, ಫ್ರೀಡ್ಜ್ , ಬಟ್ಟೆ ಮತ್ತೊಂದು... ಅವುಗಳನ್ನು ಕೊಳ್ಳಲಿಕ್ಕೆ ಸಾಮರ್ಥ್ಯವಿರುವ ಓದುಗರು ಬೇಕಾಗಿದ್ದಾರೆ. ಅದರ ಅರ್ಥ ಅವರ Potential buyers ಹುಡುಕಾಟದಲ್ಲಿ ಇದ್ದಾರೆ ವಿನಃ, ಒಬ್ಬ ಸಾಮಾನ್ಯ ಓದುಗನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಇವತ್ತು ಜಾಹೀರಾತು ಇಲ್ಲದೆ ಪತ್ರಿಕೆಗಳನ್ನು, ಚಾನಲ್ ಗಳನ್ನು ನಡಸಲಿಕ್ಕೆ ಸಾಧ್ಯವಿಲ್ಲ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಬಹಳ ನೇರ ನುಡಿಯ ಮಾರ್ಕೇಂಡೇಯ ಕಾಟ್ಜು ಅವರು ಒಂದು ಮಾತನ್ನು ಹೇಳಿದ್ದರು. ಐಶ್ವರ್ಯ ರೈಗೆ ಮದುವೆ ಆದರೆ , ಗಂಡನ ಜೊತೆ ಜಗಳ ಆದ್ರೆ, ಅತ್ತೆ ಮನೆಯನ್ನು ಬಿಟ್ಟು ಬಂದ್ರೆ, ಅದು ಮೊದಲ ಪುಟದ ದೊಡ್ಡ ಸುದ್ದಿಯಾಗುತ್ತೆ. ನಿಮ್ಮ ಚಾನಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತೆ. ಆದರೆ ಯಾವುದೋ ತಾಯಿಯ ಬಡ ಮಗು ಅಪೌಷ್ಠಿಕತೆ ಯಿಂದ ಸತ್ತರೆ u will just bury that news inside the page ಯಾಕ ಹೀಗೆ ಅಂತ ಅವರು ಕೇಳಿದ್ರು .
ಏಕೆಂದರೆ ಅವರು ಪತ್ರಕರ್ತರಲ್ಲ, ಜಡ್ಜ್. ಅವರಿಗೆ ತೀರ್ಪು ಕೊಟ್ಟು ಗೊತ್ತಷ್ಟೇ, ಆದರೆ ನಾನೊಬ್ಬ ಪತ್ರಕರ್ತ. ನನಗೆ ಕಾರಣ ಗೊತ್ತಿದೆ. ಐಶ್ವರ್ಯ ರೈ ಅತ್ತದ್ದು, ನಕ್ಕಿದ್ದು,ಜಗಳ ಮಾಡಿದ್ದು ಎಲ್ಲಾ ವರದಿಯಾದರೆ ಐಶ್ವರ್ಯ ರೈ 25-30 ಪ್ರೊಡೆಕ್ಟ್ ಗಳಿಗೆ ಮಾಡೆಲ್ -ಬ್ರಾಂಡ್ ಅಂಬಾಸಿಡರ್. ಅದೇ ರೀತಿ ಸಚಿನ್ ತೆಂಡೋಲ್ಕರ್ , ವಿರಾಟ್ ಕೋಹ್ಲಿ, ಧೋನಿ ಅವರೆಲ್ಲಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತನೇ ಇರಬೇಕು. ಅವರು ಕಾಣಿಸಿಕೊಂಡರೆ ಅವರು ಮಾಡೆಲ್ ಆಗಿರೋ ವಸ್ತುಗಳು ಓದುಗನ ನೆನಪಿಗೆ ಬರುತ್ತವೆ. ಇದು ’ಟ್ರಿಕ್. ಒಂದು ಬಡ ತಾಯಿಯ ಮಗು ಅಪೌಷ್ಠಿಕತೆಯಿಂದ ಸತ್ತದ್ದನ್ನು ಮೊದಲ ಪುಟದಲ್ಲಿ ಪ್ರಕಟಿಸಿದರೆ ಜನ ಏನಂದು ಕೊಳ್ಳುತ್ತಾರೆ, ಬೆಳಗ್ಗೇನೆ ಇದನ್ನು ಓದಬೇಕಾ? ಅಂತ ಕೇಳ್ತಾರೆ. ಅಷ್ಟೊಂದು ನಮ್ಮ ಮನಸ್ಸು ಅಮಾನವೀಯವಾಗಿದೆ. ಇದು ವಾಸ್ತವ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಪತ್ರಿಕೆಗಳ ಮಾಲೀಕರನ್ನು ದೂರುವುದಿಲ್ಲ. ಪತ್ರಿಕೆಗಳ ಮಾಲೀಕರು ತಮಗೆ ಗೊತ್ತಿಲ್ಲದ ಹಾಗೇಯೇ ಈ ಟ್ರ್ಯಾಪ್ ನಲ್ಲಿ ಬಿದ್ದು ಬಿಟ್ಟಿದ್ದಾರೆ.
          ಇವತ್ತಿನ ಮಾಧ್ಯಮಗಳ ಬಿಜೆನೆಸ್ ಮಾಡೆಲ್‌ನಲ್ಲಿಯೇ ತಪ್ಪಿದೆ. ನೀವು ೧೦೦ ಕೋಟಿ ರೂ ಇನ್‌ವೆಸ್ಟ್ ಮಾಡಿ ಜಾಹೀರಾತು ಇಲ್ಲದೆ ಪತ್ರಿಕೆ-ಚಾನೆಲ್ ಗಳನ್ನು ನಡೆಸಲಿಕ್ಕೆ ಆಗುವುದಿಲ್ಲ. ಈ ರೀತಿ ಜಾಹಿರಾತಿನ ಮೇಲೆ ಅವಲಂಬಿಸುವಂತಹ ಪರಿಸ್ಥಿತಿಯಲ್ಲಿ ನೀವು ಜನಪರವಾಗಿ ಬರೆಯಲು ಹೇಗೆ ಸಾಧ್ಯ? ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ ಪರಧ್ವನಿ ಎತ್ತಲಿಕ್ಕೆ ಹೇಗೆ ಸಾಧ್ಯ? ಇದಕ್ಕೆ ಪರಿಹಾರ ಏನಂತ ಗೊತ್ತಿಲ್ಲ,  ರಿಲಯನ್ಸ್ ನ ಅನಿಲ್ ಅಂಬಾನಿ ಗ್ರೂಪ್ ೫ ರಿಂದ ೧೦ ಸಾವಿರ ಕೋಟಿ ಯನ್ನು ಚಾನಲ್ ಗಳಿಗೆ ಪಂಪ್ ಮಾಡಿದೆ. ಇವತ್ತು ಈ ಟಿವಿ, ಸಿಎನ್‌ಎನ್ ಐಬಿಎನ್ ಸೇರಿದಂತೆ 50ಕ್ಕೂ ಮಿಕ್ಕಿ ಚಾನಲ್ಗ ಳು, ಬೇರೆಬೇರೆ ಪಬ್ಲಕೇಷನ್ ಗಳನ್ನುಅವರು ಖರೀದಿಸಿದ್ದಾರೆ., ಬಿರ್ಲಾ ಗ್ರೂಪ್ ಇಡೀ ಇಂಡಿಯಾ ಟುಡೇಯನ್ನು ವಶಕ್ಕೆ ತೆಗೆದುಕೊಂಡಿದೆ. ಎನ್.ಡಿ.ಟಿವಿಯಲ್ಲಿ ಗ್ರೀನ್ ಟೆಕ್ ಎಂಬ ಸಂಸ್ಥೆ ಬಂಡವಾಳ ಹೂಡಿದೆ, ಇವತ್ತು ಮಾಧ್ಯಮಗಳ ಕಂಪೆನಿಯ ಬೋರ್ಡ್ನಲ್ಲಿ  ಕಾಪೋರೇಟ್ ಕುಳಗಳು ಸ್ಥಾನ ಪಡೆದಿದ್ದಾರೆ. ಇವತ್ತು ಎಲ್ಲಾ ದೊಡ್ಡ ಪತ್ರಿಕೆಗಳಲ್ಲೂ ಇದೇ ಆಗಿದೆ. ಇತ್ತೀಚೆಗೆ ಹಿಂದೂ ಪತ್ರಿಕೆಯಲ್ಲೂ ಆಗಿದೆ. ಪ್ರಜಾವಾಣಿ ಬಹಳ ಹಿಂದೆ ಕುಲದೀಪ್ ನಯ್ಯರ್ ಅವರನ್ನು ಬೋರ್ಡ್ ಡೈರಕ್ಟರ್‌ನ್ನಾಗಿ ಮಾಡಿತ್ತು. ಆದರೆ ಇದೆಲ್ಲಾ ಎಷ್ಟು ಬೇಗ ಚೇಂಜ್ ಆಗ್ತಾ ಇದೆ.
ಇವತ್ತು ಯಾವ ಮಟ್ಟಿಗೆ ವಾಣಿಜ್ಯಿಕರಣ ಆಗಿದೆ ಎಂದರೆ ಒಂದು ಪತ್ರಿಕೆ ಜಾಹೀರಾತಿಗೆ ದುಡ್ಡು ಪಡೆಯದೆ ಅದರ ಬದಲಾಗಿ ಆ ಕಂಪನಿಯ ಷೇರು ಪಡೆದು ಅದನ್ನು ಪ್ರಮೋಟ್ ಮಾಡಿ ಅದರ ಬೆಲೆಯನ್ನು ದುಪ್ಪಟ್ಟು ಮಾಡಿ ಲಾಭ ಪಡೆಯುತ್ತಿದೆ. ಈ ಕ್ರಾಸ್ ಓನರ್ ಶಿಫ್ ಬಗ್ಗೆ ಚರ್ಚೆ ನಡೆಯುತ್ತಿದೆ. ಬೇರೆಬೇರೆ ಉದ್ಯಮಗಳ ಮಾಲೀಕರು ಮಾಧ್ಯಮ ಕ್ಷೇತ್ರದಲ್ಲಿರಬಾರದು. ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಬೇರೆ ಉದ್ಯಮಗಳಲ್ಲಿ ತೊಡಗಿರಬಾರದು ಎಂಬಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಟ್ರಾಯ್ ಧೀರ್ಘವಾದ ವರದಿಯನ್ನು ಕೊಟ್ಟಿದೆ. ಅದು ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿದೆ. ಭಾರತದಂತಹ ಸಮಾಜದಲ್ಲಿ ಬಹತ್ವ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ಪತ್ರಿಕೋದ್ಯಮವನ್ನು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡಬಾರದು. ಹಾಗೆ ನೋಡಿದರೆ ಮಾಧ್ಯಮದ ಮೂಲ ಆಶಯ ಏನಿದೆ ಅದಕ್ಕೆ ಭಂಗ ಉಂಟಾಗುತ್ತದೆ ಎಂದು ಟ್ರಾಯ್ ಹೇಳಿದೆ.
ಆದರೆ, ಇವತ್ತು ಪರಿಸ್ಥಿತಿ ಹಾಗಿಲ್ಲ. ಕಾರ್ಪೋರೇಟ್ ಕಂಪೆನಿಗಳ ಪ್ರವೇಶ ಆಗಿಬಿಟ್ಟಿದೆ. ವೃತ್ತಿ ಉದ್ಯಮವಾಗಿ ಹೋಗಿರುವುದರಿಂದ ಅದರ ಎಲ್ಲಾ ಘೋರ ರೂಪಗಳು ನಮಗೆ ಕಾಣ ಸಿಗುತ್ತಿವೆ. ಮಾಧ್ಯಮದ ಮಾಲೀಕರು ಎಂತಹ ಟ್ರ್ಯಾಪ್‌ನಲ್ಲಿ ಬಿದ್ದಿದ್ದಾರೆ ಎಂದರೆ ಪ್ರಜ್ಞಾ ಪೂರ್ವಕವಾಗಿ ನಾನು ಜನಪರವಾಗಿ ಇರುತ್ತೇನೆ ಎಂದು ನಿರ್ಧಾರ ಮಾಡಿದರೂ ಕೂಡ ಅವರು ಹಾಗೆ ಇರಲು ಆಗುತ್ತಿಲ್ಲ.
ಇವತ್ತು ಒಬ್ಬ ೨೫-೩೦ ಕೋಟಿ ರೂಪಾಯಿ ಬಂಡವಾಳ ಹೂಡಿ ಬಹಳ ಆದರ್ಶ ಇಟ್ಟುಕೊಂಡು ಚಾನಲ್ ಪ್ರಾರಂಭ ಮಾಡುತ್ತಾನೆ. ಆದರೆ ಒಂದೆರಡು ತಿಂಗಳಲ್ಲಿ ಆಗುವ ನಷ್ಟವನ್ನು ತುಂಬಿಸಿಕೊಳ್ಳಲು ಜ್ಯೋತಿಷಿಗಳನ್ನು ತಂದು ಕೂರಿಸುತ್ತಾನೆ. ಇದು ಇವತ್ತಿನ ಪರಿಸ್ಥಿತಿ. ಕಡಿಮೆ ಬಂಡವಾಳದ ಮಾಧ್ಯಮಗಳು ಇದಕ್ಕೆ ಪರಿಹಾರವಾಗಬಲ್ಲದು. ಇವತ್ತು ಬಹಳ ಮಂಡಿ ಲಂಕೇಶರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಇವತ್ತು ಇದ್ದಿದ್ದರೆ ನನ್ನ ಪ್ರಕಾರ ಅಷ್ಟೊಂದು ಪ್ರಸಾರ ಸಂಖ್ಯೆ ಇರುವ ಪತ್ರಿಕೆಯನ್ನು ನಡೆಸಲಿಕ್ಕೆ ಆಗುತ್ತಿರಲಿಲ್ಲ. ಆಗ ಲಂಕೇಶ್ ಪತ್ರಿಕೆಗೆ ೧ ರೂ. ಇರುವಾಗ ಪ್ರಜಾವಾಣಿಗೆ ೧.೫೦ ರೂ ಇತ್ತು.
ಆದರೆ, ಈಗ ಲಂಕೇಶ್‌ಪತ್ರಿಕೆಗೆ ೧೫ ರೂ.ಗಳಿದ್ದರೆ ಪ್ರಜಾವಾಣಿಗೆ ೪.೫೦ ರೂಪಾಯಿ ಇದೆ. ಗೌರಿ ಲಂಕೇಶ್ ಅವರು ಪತ್ರಿಕೆ ಹೊರತಾಗಿಯೂ ಇತರೆ ಪಬ್ಲಿಕೇಶನ್‌ಗಳಿಂದ ನಷ್ಟವನ್ನು ತೂಗಿಸಿಕೊಳ್ಳುತ್ತಿದ್ದಾರೆ, ಗೌರಿಯವರ ಲಂಕೇಶ್ ಪತ್ರಿಕೆ ಇವತ್ತಿಗೂ ನಷ್ಟದಲ್ಲಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸುವುದು ಸಾಧ್ಯವೇ ಇಲ್ಲ. ಇದು ಎಲ್ಲಾ ಸಣ್ಣ ಪತ್ರಿಕೆಗಳ ಗೋಳು. ಈ ದೇಶದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಮಾರಾಟದರ ಇರುವ ವಸ್ತು ಎಂದರೆ ಅದು ’ಪತ್ರಿಕೆ’ ಇದರ ನಷ್ಟವನ್ನು ಜಾಹೀರಾತಿನಿಂದಲೆ ತುಂಬಿಸಿಕೊಳ್ಳಬೇಕಾಗಿದೆ. ಹೀಗಿರುವಾಗ ಜಾಹೀರಾತುದಾರನಿಗೆ ನಿಷ್ಠರಾಗಿರಬೇಕೋ? ದಲಿತರ ಪರ ಇರಬೇಕೋ?
ನಾನು ಇದನ್ನು ಹೇಳಲಿಕ್ಕೆ ಇನ್ನೂ ಹೆಚ್ಚು ಅನುಭವವಿದೆ. ರಘುರಾಂ ಶೆಟ್ಟಿಯವರು ಆ ಕಾಲದಲ್ಲೆ ಇದನ್ನು ಅಲೋಚನೆ ಮಾಡಿ ಇದನ್ನ ಬದಲಾವಣೆ ಮಾಡಬೇಕೆಂದು ’ಮುಂಗಾರು’ ಪತ್ರಿಕೆ ಮಾಡಿದರು. ’ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗಿಯುವ.....’ ಎಂದು ಘೋಷಣೆಯೊಂದಿಗೆ ಬೀದಿಯಲ್ಲಿ ಹೋದೆವು. ಆ ಕಾಲದಲ್ಲಿ ಬಹಳ ಉದಾತ್ತವಾದ ಉದ್ದೇಶದಿಂದ ಪ್ರಾಂಭವಾಯಿತು. ಆಮೇಲೆ ಏನಾಯಿತು.? ಒಂದೆರಡು ತಿಂಗಳಲ್ಲಿ ಸರ್ಕ್ಯೂಲೇಶನ್ ಕೆಳಗಿಳಿಯಿತು. ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯಲಿಕ್ಕೆ ಆಗಲಿಲ್ಲ. ಅದು ಕನ್ನಡದ ಮೊದಲ ಪಬ್ಲಿಕ್ ಲಿಮಿಟೆಡ್ ಕಂಪನಿ. ಓದುಗರೇ ಷೇರುದಾರರು ಎಂಬ ಕಲ್ಪನೆಯೊಂದಿಗೆ ಪ್ರಾರಂಭವಾದದ್ದು, ಅದು ಯಶಸ್ಸು ಕಂಡಿದ್ದರೆ ಬಹುಶಃ ಇವತ್ತು ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಪ್ರಯೋಗ ಶಾಲೆಯಾಗುತ್ತಿರಲಿಲ್ಲ. ಮುಂಗಾರನ್ನು ಉಳಿಸಿಕೊಳ್ಳಲು ಆಗಲಿಲ್ಲ.
          ಇಂತಹ ಒಂದು ಪತ್ರಿಕೆಯನ್ನು ಮಾಡಲು ಸಾಧ್ಯವಿಲ್ಲ ಎಂದೇನಲ್ಲ, ಆದರೆ ಅವತ್ತು ಮುಂಗಾರು ಮಾಡಿದ ಕಾಲ ಇಂದಿಲ್ಲ. ಇವತ್ತು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಲ್ಲೂ ದುಡ್ಡಿದ್ದವರು ಒಂದಿಷ್ಟು ಜನ ಇದ್ದಾರೆ. ಇವತ್ತು ಸೋಷಿಯಲ್ ಕ್ಯಾಪಿಟಲ್ ಎಂಬುದನ್ನು ಸೋಷಿಯಲಿಜಿಸ್ಟ್ ಗಳು ಮಾತನಾಡುತ್ತಾರೆ. ಇದು ಸಾಧ್ಯವಾಗಬೇಕು. ಕೆ.ಎನ್ ಗುರುಸ್ವಾಮಿ ಅವರು ಅಬಕಾರಿ ಕಂಟ್ರ್ಯಾಕ್ಟರ್. ಅವರ ಅದೇ ಉದ್ಯಮದಲ್ಲಿ ಮುಂದುವರೆದಿದ್ದರೆ ಬಹಳಷ್ಟು ದುಡ್ಡು ಮಾಡುತ್ತಿದ್ದರು. ಆ ಕಾಲದಲ್ಲಿ ಶೂದ್ರರಿಗೆ ಪತ್ರಿಕೆ ಇರಲಿಲ್ಲ. ಆಗ ಒಂದು ಪತ್ರಿಕೆ ಮಾಡಿದರು (ಪ್ರಜಾವಾಣಿ) ೧೦ ವರ್ಷ ಪತ್ರಿಕೆ ನಷ್ಟದಲ್ಲಿ ನಡೆಯಿತು. ಇವತ್ತು ದುಡ್ಡಿದ್ದವರು ಇಲ್ಲವೇನಿಂದಿಲ್ಲ. ೧೦೦ಕೋಟಿ ರೂಗಳಿಂದ ೫೦೦ ಕೋಟಿ ಇರುವವರು, ಒಂದು ಸಾವಿರ ಎಕರೆ ಭೂಮಿ ಇಟ್ಟುಕೊಂಡಿರುವ ಕುಳಗಳು ಅಹಿಂದ ವರ್ಗಗಳಲ್ಲಿಯೇ ಇದ್ದಾರೆ. ಯಾರಾದರೂ ಮಾಧ್ಯಮದಲ್ಲಿ  ಬಂಡವಾಳ ಹೂಡಲು ತಯಾರಿದ್ದಾರಾ? ಅವರೂ ಮಾಡಿದ್ರೂ ಮುಖ್ಯಸ್ಥರಾಗಿ ಅಹಿಂದ ವರ್ಗದವರಲ್ಲದವರನ್ನು ಕೂರಿಸಿ ದೂರ ಇರುತ್ತಾರೆ. ಕೇಳಿದರೆ, ಅವರೆ ಬೇಕಪ್ಪ ನಡೆಸಲಿಕ್ಕೆ ಅಂತಾರೆ.
ಇವತ್ತು ಅನ್ನ ಭಾಗ್ಯ, ಕ್ಷೀರ ಭಾಗ್ಯ ದಂತಹ ಜನಪರ ಕಾರ್ಯಕ್ರಮಗಳಿಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವುದು ಏಕೆ ಅನ್ನೋದನ್ನು ಯೋಚಿಸಬೇಕು. ಯಾರ್ಯಾರು ಈ ವರ್ಗಗಳ ಪರ ಮಾತನಾಡಿದ್ದಾರೋ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ. ಅದು ದೇವರಾಜ ಅರಸು ಅವರ ವಿರುದ್ದವೂ ನಡೆದಿತ್ತು. ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಜಾರಿಗೆ ತಂದ ತಕ್ಷಣ ಅವರು ಮಾಧ್ಯಮದ ಪಾಲಿಕೆ ಶತ್ರುಗಳಾಗಿಬಿಟ್ಟರು. ವಿ.ಪಿ ಸಿಂಗ್ ಅಹಿಂದ ವರ್ಗದವರಲ್ಲ, ಅವರೊಬ್ಬ ರಾಜ. ಅಹಿಂದ ವರ್ಗದ ಪರ ಮಾತನಾಡಲು ಆ ವರ್ಗದವೇ ಆಗಬೇಕಿಲ್ಲ. ಆ ವರ್ಗದ ಪರ ಮಾತನಾಡಿದರೆ ಸಾಕು, ಅವರ ಧ್ವನಿ ಅಡಗಿಸುವ ಕೆಲಸ ಪ್ರಾರಂಭವಾಗಿಬಿಡುತ್ತದೆ. ಬಾಬು ಜನಗಜೀವನ ರಾಂ ಅವರನ್ನು ನೆನಪಿಸಿಕೊಳ್ಳುವವರಿಲ್ಲ ಇವತ್ತು. ಹಸಿರು ಕ್ರಾಂತಿಯ ಹರಿಕಾರ. ಭಾರತ-ಪಾಕ್ ನ ಮೊದಲ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿದ್ದವರು. ಅವರನ್ನು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿ ದಲಿತರ ಮಾಲೀಕತ್ವದ ಪತ್ರಿಕೆಗಳು ಚಾನಲ್ ಗಳು ಬರಬೇಕು ನಿಜ, ಆದರೆ ಮಾಲೀಕರಾಗಲು ದುಡ್ಡು ಬೇಕು. ಇವತ್ತು ಸಣ್ಣ ಪತ್ರಿಕೆಗಳು, ಮಾಸಿಕಗಳು ಅಲ್ಲಲ್ಲಿ ಇವೆ ದುಡ್ಡಿದ್ದವರು ಬಂದರೆ ಅಂಬೇಡ್ಕರ್ ಅವರ ಆಶಯದಂತೆ ಒಂದು ಮುಖ್ಯವಾಹಿನಿಯ ಪತ್ರಿಕೆ ಬರಬಹುದು.
ಅಮೇರಿಕಾದಲ್ಲಿ ’ಏಬೋನಿ’, ’ಚಿಕಾಗೋ ಡಿಫೆಂಡರ್’ ನಂತಹ ಕರಿಯರೆ ನಡೆಸುವ ಪತ್ರಿಕೆಗಳಿವೆ ಅಲ್ಲಿಯ ಕರಿಯರಿಗೂ ಭಾರತದ ದಲಿತರಿಗೂ ಇರುವ ವ್ಯತ್ಯಾಸವೇನೆಂದರೆ ಅಲ್ಲಿ ಒಳಪಂಗಡಗಳಿಲ್ಲ. ಭಾಷೆ ಒಂದೇ ಆಗಿದೆ. ಆ ದೇಶದಲ್ಲಿದ್ದಂತೆ ಇಲ್ಲಿಯೂ ದಲಿತರು ಅಭಿವೃದ್ಧಿ ಹೊಂದಿದ್ದಾರೆ. ಅವರಿಗೂ ಕೊಳ್ಳುವ ಸಾಮರ್ಥ್ಯ ಬಂದಿದೆ. ಇವತ್ತು ಕನ್ಸ್ಯೂಮರ್ ಗೂಡ್ಸ್‌ಗಳನ್ನು ಪರ್ಚೆಸ್ ಮಾಡುವಂತಹ ಸಾಮರ್ಥ್ಯ ಈ ಸಮುದಾಯದಲ್ಲಿ ಸ್ಪಲ್ಪ ಬಂದಿದೆ. ಟೂಥ್ ಪೇಸ್ಟ್‌ನ್ನು ದಲಿತರೂ ಬಳಸುತ್ತಿದ್ದಾರೆ. ನಾಳೆ ದಲಿತರು ಪತ್ರಿಕೆ ಮಾಡಿದರೆ ಟೂಥ್ ಪೇಸ್ಟ್ ಮಾರುವವರು ಅದಕ್ಕೆ ಜಾಹೀರಾತು ಕೊಡಲೇ ಬೇಕು.

            ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗದಂತೆ ತಡೆಯಲಿಕ್ಕಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು.ಈ ದೇಶದ ಖಾಸಗಿ ಕ್ಷೇತ್ರದಲ್ಲಿ ಉದ್ಯಮಗಳನ್ನು ಬೆಳಸಲಿಕ್ಕೆ ಸರ್ಕಾರಗಳು ಹಲವಾರು ರೀತಿಯ ನೆರವುಗಳನ್ನು ಕೊಡುತ್ತಿದೆ. ನ್ಯಾನೋ ಫ್ಯಾಕ್ಟರಿಗಾಗಿ ಗುಜರಾತ್ ನಲ್ಲಿ ಶೇ.೦.೧ ಬಡ್ಡಿದರದಲ್ಲಿ ಸಾಲ ಕೊಟ್ಟಿದೆ. ಪಂಜಾಬ್‌ನಲ್ಲಿ ಬಿರ್ಲಾ ರಿಫೈನರಿ ಪ್ರಾರಂಭಿಸಲು ಲಕ್ಷ್ಮಿ ಮಿಟ್ಟಲ್ ಗೆ ಅಲ್ಲಿನ ಸರ್ಕಾರ ೧೨೫೦ಕೋಟಿ ರೂಗಳನ್ನು  ಶೇಕಡಾ 0.1 ಬಡ್ಡಿ ದರದಲ್ಲಿ ಸಾಲ ನೀಡಿದೆ. ಇಂತಹ ದೊಡ್ಡ ಪಟ್ಟಿಯೇ ಇದೆ. ಪಿ.ಸಾಯಿನಾಥ್ ಅವರ ನ್ನು ಕೇಳಿದ್ರೆ  ಇನ್ನೂ ದೊಡ್ಡಪಟ್ಟಿಯನ್ನೆ ಕೊಡುತ್ತಾರೆ. ಇಡೀ ರೈತರಿಗೆ ಕೊಡುವ ೨ವರೆ ಲಕ್ಷ ಕೋ.ರೂ ಸಬ್ಸಿಡಿ ಏನಿದೆ ಅದನ್ನೆ ದೊಡ್ಡದು ತಿಳಿದುಕೊಂಡಿದ್ದೇವೆ. ಆದರೆ ಕಾರ್ಪೋರೇಟ್ ಸೆಕ್ಟರ್ ಗೆ ಸರ್ಕಾರ೩೬ಲಕ್ಷ ಕೋಟಿ ರೂಗಳ ತೆರಿಗೆ ವಿನಾಯಿತಿ ನೀಡಿದೆ.ರಿಲಯನ್ಸನ ವಾರ್ಷಿಕ ವರಮಾನ ೨ವರೆ ಲಕ್ಷ ಕೋ.ರೂ. ನಮ್ಮ ಕರ್ನಾಟಕದ ಬಜೆಟ್ ೧ಲಕ್ಷ ೨೦ಸಾವಿರ ಕೊಟಿ ರೂಪಾಯಿ.  ವಿಜಯ ಮಲ್ಯ ಏನು ಮಾಡಿದಾನೆ ಅಂತ ಗೊತ್ತಿದೆ. ಅವನಿಗೆ ಸಾಲ ಕೊಟ್ಟ ಬ್ಯಾಂಕಿನಿಂದ ೫-೧೦ ಸಾವಿರ ರೂ.ಸಾಲ ಮಾಡಿದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾವಿರಾರು ಕೋ.ರೂ ಮುಳುಗಿಸಿದ ಮಲ್ಯ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ. ಇದು ಇಂಡಿಯಾದ ಪರಿಸ್ಥಿತಿ.
            ಆದ್ದರಿಂದ ಮಾಧ್ಯಮ ಈ ಸಮಾಜಕ್ಕೆ ಬೇಕು ಎನ್ನುವುದಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಜವಾಗಿ ಅರ್ಥದಲ್ಲಿ ಉಳಿಸಿಕೊಳ್ಳಬೇಕಾದರೆ ಮಾರ್ಧಯಮದಲ್ಲಿ ಎಲ್ಲಾ ಸಮುದಾಯಗಳ ಅನುಭವ ಲೋಕಗಳು ಬರಬೇಕಾದರೆ ಈ ಪತ್ರಿಕೋದ್ಯಮ ಮಾಡುವವರಿಗೂ ಕೂಡ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಸಾಲ ಕೊಡಬೇಕು. ಸಬ್ಸಿಡಿ ಯಾಕೆ ಕೊಡಬಾರದು? ಅದನ್ನು ಎಲ್ಲಾ ಉದ್ಯಮಗಳ ಮಟ್ಟಿಗೆ ತಂದು ನಿಲ್ಲಿಸಿದರೆ ಸ್ಪರ್ಧೆ ಮಾಡಲು ಆಗುವುದಿಲ್ಲ. ನ್ಯಾನೋ ಕಾರಿನ ಫ್ಯಾಕ್ಟರಿಗೆ ಶೇ.೦.೧ ರ ಬಡ್ಡಿದರದಲ್ಲಿ ಸಾಲ ಕೊಡುವುದಾದರೆ ಒಂದು ಪತ್ರಿಕೆ ಮಾಡಲು ಯಾಕೆ ಕೊಡಬಾರದು ಎಂಬುದು ನನ್ನ ಪ್ರಶ್ನೆ.
             ಉದ್ಯಮಿಗಳು ನೇರವಾಗಿ ಮಾಧ್ಯಮ ಕ್ಷೇತ್ರಕ್ಕೆ ಬಂದು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿ. ನ್ಯೊಮ್ ಚಾಮಸ್ಕೀ ಅವರು ’ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್’ ಅಂತ ಹೇಳ್ತಾರೆ. ಸಮ್ಮತಿಗಳನ್ನು ಉತ್ಪಾದಿಸುವಂತಹುದು. ಇವತ್ತು ಚಾನಲ್‌ಗಳಲ್ಲಿ ಪತ್ರಿಕೆಗಳಲ್ಲಿ ಶೇ.೯೮ರಷ್ಟು ಜನತೆ  ಸರ್ಕಾರದ ವಿರುದ್ದವಾಗಿವೆ. ಶೇ ೨ ರಷ್ಟು ಪರವಾಗಿದೆ ಎಂದು ಬಿತ್ತರಿಸಲಾಗುತ್ತಿದೆ.. ಇದು ನಿಜನಾ? ಇಂತಹ ’ಸಮ್ಮತಿ ಉತ್ಪಾದನೆ’ಇಂಡಿಯಾದಲ್ಲಿ ಆಗಬಾರದು ಎಂದಾದರೆ ಪತ್ರಿಕೆಗಳನ್ನು ಪ್ರಾರಂಭ ಮಾಡುವವರಿಗೆ ಸರ್ಕಾರ ನೆರವಿಗೆ ಬರಬೇಕು. ದಲಿತ ಉದ್ಯಮಿ ಸಂಘಟನೆಗಳು ಈ ಬಗ್ಗೆ ಯೋಚನೆ ಮಾಡಬೇಕು.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ ನೇ ಜನ್ಮ ದಿನಾಚರಣೆಯ ಸಮಯದಲ್ಲಿ ಇಂತಹದ್ದೊಂದು ಚಿಂತನೆ ನಡೆಯಲಿ.. ಸಾಧ್ಯವಾದರೆ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ಎಲ್ಲಾ ಪತ್ರಿಕೆಗಳ ಎಡಿಟೋರಿಯಲ್ ಗಳನ್ನು ಕನ್ನಡಕ್ಕೆ ತರುವ ಕೆಲಸ ಆಗಲಿ. ಸರ್ಕಾರ  ಇದನ್ನು ಮಾಡಿದರೆ ಸಂತೋಷದ ವಿಷಯ.
-ದಿನೇಶ್ ಅಮಿನ್ ಮಟ್ಟು

No comments:

Post a Comment