Showing posts with label Mangalore. Show all posts
Showing posts with label Mangalore. Show all posts

Saturday, September 23, 2017

ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ

ನಾನು ಪಾಲ್ಗೊಳ್ಳುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಾಮಾನ್ಯವಾಗಿ ಇಲ್ಲಿ ಶೇರ್ ಮಾಡುವುದಿಲ್ಲ. ಆದರೆ ಇದೊಂದು ವಿಶೇಷ ಕಾರ್ಯಕ್ರಮ.
ಮಂಗಳೂರಿನ ಜಾಗೃತ ಬಿಲ್ಲವ ಯುವಕರ ತಂಡ ಸಮಾನ ಚಿಂತಕರೆಲ್ಲರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಇದನ್ನು ನಡೆಸುತ್ತಿರುವ ಸಂಸ್ಥೆ ಹೊಸದಾಗಿ ಸ್ಥಾಪನೆಯಾಗಿರುವ 'ನಾರಾಯಣಗುರು ವಿಚಾರ ಕಮ್ಮಟ (ನಾವಿಕ). ಇಂತಹದ್ದೊಂದು ಹೆಸರಿನ ಸಂಸ್ಥೆಯೊಂದನ್ನು ಹುಟ್ಟುಹಾಕಬೇಕೆಂದು ಸುಮಾರು ೩೦ ವರ್ಷಗಳ ಹಿಂದೆ ಯೋಚಿಸಿದ್ದೆ. ನಮ್ಮ ಯುವಮಿತ್ರರು ಇದನ್ನು ಸಾಕಾರಗೊಳಿಸಿದ್ದಾರೆ.
"ತರ್ಕ ನಡೆಸಲು ಅಲ್ಲ, ಗೆಲ್ಲುವುದಕ್ಕೂ ಅಲ್ಲ. ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು"- ನಾರಾಯಣ ಗುರುಗಳು ೧೯೨೪ರಲ್ಲಿ ತಾವೇ ಆಲ್ವಾಯಿಯಲ್ಲಿ ಆಯೋಜಿಸಿದ್ದ ಸರ್ವಧರ್ಮಗಳ ಸಮ್ಮೇಳನದ ಉದ್ದೇಶದ ಬಗ್ಗೆ ಹೇಳಿದ್ದು.
ಆಯೋಜಕರ ಉದ್ದೇಶವೂ ಇದೇ ಆಗಿದೆ ಎಂಬ ನಂಬಿಕೆ ನನಗಿದೆ.
ಪುರುಸೊತ್ತುಮಾಡಿಕೊಂಡು ಬನ್ನಿ, ಮಾತನಾಡೋಣ.

"ಮನುಷ್ಯನ ಧರ್ಮ, ಆಚಾರ,ಭಾಷೆ ಯಾವುದೇ ಇರಲಿ ಮನುಷ್ಯ ಸಂತತಿ ಒಂದೇ ಆಗಿರುವ ಕಾರಣ ಅಂತರ್ಜಾತಿ ಮದುವೆ ಮತ್ತು ಸಹಭೋಜನ ತಪ್ಪಲ್ಲ"
-ನಾರಾಯಣಗುರುಗಳು ೧೯೨೧ರಲ್ಲಿ ನಡೆದಿದ್ದ 'ಅಖಿಲ ಕೇರಳ ಸಹೋದರ ಸಂಗಮ' ಸಮ್ಮೇಳನದಲ್ಲಿ ಹೇಳಿದ್ದು.

'ಈಳವ ಎನ್ನುವ ಹೆಸರು ಒಂದು ಜಾತಿಯಾಗಿಯೋ, ಮತವಾಗಿಯೋ ಸೂಚಿಸಲ್ಪಟ್ಟಿಲ್ಲ. ಆದ್ದರಿಂದ ನಾರಾಯಣಗುರು ಧರ್ಮ ಪರಿಪಾಲನಾ ಯೋಗ' (ಎಸ್ ಎನ್ ಡಿಪಿ) ದಲ್ಲಿ ಜಾತಿಮತಭೇದ ಮಾಡದೆ ಸದಸ್ಯರನ್ನು ಸೇರಿಸಿಕೊಳ್ಳ ಬೇಕೆಂದು ನಾನು ಅಪೇಕ್ಷಿಸುತ್ತೇನೆ.'
-ಸಾವಿನ ಎರಡು ವರ್ಷ ಮೊದಲು ನಾರಾಯಣ ಗುರುಗಳು ಎಸ್ ಎನ್ ಡಿ ಪಿ ಗೆ ಬರೆದಿದ್ದ ಪತ್ರದ ಸಾಲುಗಳು.

Friday, August 19, 2016

ಪ್ರಿಯ ಜನಾರ್ದನ ಪೂಜಾರಿಯವರೇ,

ಪ್ರಿಯ ಜನಾರ್ದನ ಪೂಜಾರಿಯವರೇ,
ಇಪ್ಪತ್ತೈದು ವರ್ಷಗಳ ಹಿಂದೆ ನಿಮಗೊಂದು ಪತ್ರ ಬರೆದಿರುವುದು ನಿಮಗೆ ನೆನಪಿದೆಯೋ ಗೊತ್ತಿಲ್ಲ. ನೆನಪಿಲ್ಲದಿದ್ದರೆ ಅದರ ಪ್ರತಿಯನ್ನು ಕಳುಹಿಸಿಕೊಡುತ್ತೇನೆ. ಅದು ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದಲ್ಲಿ ನೀವು ತೊಡಗಿಕೊಂಡಿದ್ದ ಕಾಲ. ಜೀರ್ಣೋದ್ದಾರ ಮಾಡಿದ ದೇವಸ್ಥಾನವನ್ನು ಉದ್ಘಾಟಿಸಲು ಶೃಂಗೇರಿ ಮಠದ ಸ್ವಾಮಿಗಳನ್ನು ಆಹ್ಹಾನಿಸಿರುವುದನ್ನು ನಾನು ವಿರೋಧಿಸಿದ್ದೆ. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಈಗಲೂ ಪಾಲಿಸುತ್ತಿರುವ ಸ್ವಾಮೀಜಿಗಳಿಂದ ಹೇಗೆ ಉದ್ಘಾಟನೆಮಾಡಿಸುತ್ತೀರಿ ಎನ್ನುವುದು ನನ್ನ ಸರಳ ಪ್ರಶ್ನೆಯಾಗಿತ್ತು.ನನ್ನ ಯೋಚನೆಯೇ ಬೇರೆಯಾಗಿತ್ತು. ಕುದ್ರೋಳಿ ದೇವಸ್ಥಾನವನ್ನು ನಾರಾಯಣಗುರುಗಳು ಯಾವ ಉದ್ದೇಶದಿಂದ ಸ್ಥಾಪಿಸಿದ್ದರೋ ಆ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆಂಬುದು ನನ್ನ ಕಿರಿತಲೆಯ ಉದ್ದೇಶವಾಗಿತ್ತು.. ಕುದ್ರೋಳಿ ದೇವಸ್ಥಾನವನ್ನು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಘಟನೆಯ ಕೇಂದ್ರವನ್ನಾಗಿ ಬೆಳೆಸಬೇಕೆಂದು ನಾನು ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ಹೇಳಿದ್ದೆ. ಯಾಕೆಂದರೆ ಆಗಲೇ ಕರಾವಳಿಯಲ್ಲಿ ಕೋಮುವಾದದ ವಿಷಸರ್ಪ ಹೆಡೆಬಿಚ್ಚತೊಡಗಿತ್ತು. ಮಂದಿರ-ಮಸೀದಿ-ಚರ್ಚುಗಳನ್ನು ಕಟ್ಟುವ ಮೂಲಕ ಇದನ್ನು ಎದುರಿಸಲು ಆಗುವುದಿಲ್ಲ. ಈ ಸಮುದಾಯಗಳು ಧರ್ಮದ ನಶೆಯೇರಿಸಿಕೊಂಡು ದಾರಿ ತಪ್ಪುವ ಮೊದಲೇ ಅವರಲ್ಲಿ ನಾರಾಯಣ ಗುರುಗಳ ಚಿಂತನೆಯ ಮೂಲಕ ಜಾಗೃತಿ ಹುಟ್ಟಿಸಿ ಸಾಮಾಜಿಕವಾಗಿ ಸಂಘಟಿಸಬೇಕೆಂಬುದು ನನ್ನ ಆಶಯವಾಗಿತ್ತು. ಇದು ನಿಮ್ಮ ರಾಜಕೀಯಕ್ಕೂ ಸಹಾಯವಾಗುತ್ತದೆ ಎಂದು ನಾನು ನಿಮಗೆ ಹೇಳಿದ್ದೆ. ಯಥಾಪ್ರಕಾರ ಹಿತ್ತಾಳೆ ಕಿವಿಯವರೆಂಬ ಆರೋಪ ಹೊತ್ತಿರುವ ನೀವು ಇಂತಹ ಒಳ್ಳೆಯ ಸಲಹೆಗಳಿಗೆ ಕಿವಿಕೊಡಲಿಲ್ಲ. ಇದರ ಪರಿಣಾಮ ನಿಮ್ಮ ಕಣ್ಣಮುಂದಿದೆ.
ಕೋಮುವಾದದ ಹೆಸರಲ್ಲಿ ಕರಾವಳಿಯಲ್ಲಿ ನಿತ್ಯ ರಕ್ತದೋಕುಳಿ ನಡೆಯುತ್ತಿದೆ. ಸಾಯುತ್ತಿರುವವರೆಲ್ಲರೂ ನಿಮ್ಮನ್ನೇ ನಾಯಕರೆಂದು ಹೇಳಿಕೊಳ್ಳುತ್ತಿರುವ ಬಡಬಿಲ್ಲವ ತಂದೆ-ತಾಯಿಗಳ ಮಕ್ಕಳು. ನೀವು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ. ನೀವು ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರು ಕೂಡಾ ಹೌದು. (ಪ್ರಶ್ನಾತೀತರು ಯಾಕೆಂದರೆ ವಯಸ್ಸು ಎಂಬತ್ತಾಗುತ್ತಿದ್ದರೂ ಮತ್ತೊಬ್ಬ ನಾಯಕನನ್ನು ಬಿಲ್ಲವ ಸಮುದಾಯದಲ್ಲಿ ಬೆಳೆಯಲು ನೀವು ಬಿಟ್ಟಿಲ್ಲ)
ಯಾವುದೇ ಸಮಾಜದ ನಾಯಕನೆಂದು ಕರೆಸಿಕೊಂಡ ಮೇಲೆ ಆ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಕೂಡಾ ಹೊರಬೇಕಾಗುತ್ತದೆ. ಚುನಾವಣೆಯ ಕಾಲದಲ್ಲಿ ಜಾತಿಯ ಹೆಸರು ಹೇಳಿ ಕಣ್ಣೀರುಹಾಕಿ ಓಟು ಕೇಳುವವನಷ್ಟೇ ನಾಯಕನಲ್ಲ. ಜವಾಬ್ದಾರಿಯ ನಿರ್ವಹಣೆಯಲ್ಲಿ ನೀವು ಸಂಪೂರ್ಣವಾಗಿ ಸೋತಿರುವುದು ಮಾತ್ರವಲ್ಲ ನೀವು ದಾರಿತಪ್ಪಿ, ಸಮಾಜವನ್ನೂ ದಾರಿ ತಪ್ಪಿಸುತ್ತಿದ್ದೀರಿ.
ಉಡುಪಿಯ ಕೆಂಜೂರಿನಲ್ಲಿ ನಡೆದ ಪ್ರವೀಣ್ ಪೂಜಾರಿ ಎಂಬ ಅಮಾಯಕ ಯುವಕನೊಬ್ಬನ ಹತ್ಯೆಯ ಹಿನ್ನೆಲೆಯಲ್ಲಿ ಇದನ್ನೆಲ್ಲ ಹೇಳುತ್ತಿದ್ದೇನೆ., ಕೊಲೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಹತ್ಯೆಯಾದವರು ಮತ್ತು ಹತ್ಯೆಮಾಡಿದವರ್ಯಾರೆಂದು ಜಗಜ್ಜಾಹೀರಾಗಿದೆ. ಈಗಾಗಲೇ ಸಂಘ ಪರಿವಾರದ ವಿರುದ್ಧ ರಾಜ್ಯದ ಜನತೆಯ ಆಕ್ರೋಶ ಮುಗಿಲುಮುಟ್ಟಿದೆ. ಹೀಗಿದ್ದರೂ ರಾಜ್ಯಸರ್ಕಾರ ನೀಡುವ ಅಕ್ಕಿಯಲ್ಲಿ ಒಂದು ಕಲ್ಲು ಕಂಡರೂ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರ್ಭಟಿಸುವ ನೀವು ಕೊಲೆ ನಡೆದು 48 ಗಂಟೆಗಳಾದರೂ ಬಾಯಿ ಬಿಡದಿರುವುದು ಅಚ್ಚರಿ ಉಂಟುಮಾಡಿದೆ..
ಪ್ರವೀಣ್ ಪೂಜಾರಿ ಸಾವಿಗೆ ಸಂಘ ಪರಿವಾರದ ದುರುಳರು ಮಾತ್ರವಲ್ಲ ಸಜ್ಜನ, ಪ್ರಾಮಾಣಿಕ ಇತ್ಯಾದಿ ಬಿರುದಾಂಕಿತ, ಬಿಲ್ಲವ ಸಮಾಜದ ಏಕಮೇವಾದ್ವೀತಿಯ ನಾಯಕರಾದ ನೀವೂ ಕಾರಣ ಎಂದು ವಿಷಾದದಿಂದ ಹೇಳಬೇಕಾಗುತ್ತದೆ.
ಇಂದು ಕರಾವಳಿಯ ಎರಡುಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದರೆ ಇದಕ್ಕೆ ಸಂಘ ಪರಿವಾರದ ನಾಯಕರುಮಾತ್ರವಲ್ಲ ನೀವೂ ಕಾರಣ.

ಈ ಜಿಲ್ಲೆಗಳಲ್ಲಿ ಕೋಮುವಾದದ ವಿಷಕಾಲ ಪ್ರಾರಂಭವಾಗಿದ್ದು ಎಂಬತ್ತರ ದಶಕದ ಅಂತ್ಯ ಮತ್ತು ತೊಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ. ಆ ದಿನಗಳಿಂದಲೂ ದಕ್ಷಿಣ ಕನ್ನಡದ ಮಟ್ಟಿಗೆ ನೀವೇ ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮುದಾಯದ ನಾಯಕರಾಗಿದ್ದವರು. 1977ರಿಂದ 1989ರ ವರೆಗಿನ ನಾಲ್ಕು ಲೋಕಸಭಾ ಚುನಾವಣೆಗಳನ್ನು ಸತತವಾಗಿ ಗೆದ್ದು ಬೀಗುತ್ತಿದ್ದವರು. ಆದರೆ ಬದಲಾಗುತ್ತಿರುವ ರಾಜಕೀಯವನ್ನು ಗ್ರಹಿಸಲು ನಿಮಗೆ ಸಾಧ್ಯವಾಗಲಿಲ್ಲ. ನಾರಾಯಣ ಗುರುಗಳ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ಕೂಡಾ ನಿಮಗೆ ಸಾಧ್ಯವಾಗಲಿಲ್ಲ.
ಚುನಾವಣಾ ಕಾಲದಲ್ಲಿ ಮಸೀದಿಗೆ ಹೋಗಿ ಕೈಮುಗಿಯುವುದು, ಎಲ್ಲ ಹಿಂದೂ ದೇವತೆಗಳ ಮೂರ್ತಿ ಸ್ಥಾಪಿಸುವುದು, ಸಂಘ ಪರಿವಾರವನ್ನು ಮೀರಿಸಿದಂತೆ ದಸರಾ ಜಾತ್ರೆ ನಡೆಸುವುದು, ಕಲ್ಲಡ್ಕ ಪ್ರಭಾಕರ ಭಟ್ಟರನ್ನು, ವೀರೇಂದ್ರ ಹೆಗಡೆ ಅವರನ್ನು ಕರೆಸಿ ಶಹಬ್ಬಾಸ್ ಗಿರಿ ಪಡೆಯುವುದು ಈ ಮೂಲಕ ಸಂಘ ಪರಿವಾರವನ್ನು ಎದುರಿಸಿ ಚುನಾವಣೆಯನ್ನು ಗೆಲ್ಲಬಹುದು ಎಂಬುದು ನಿಮ್ಮ ಲೆಕ್ಕಾಚಾರವಾಗಿತ್ತು.
ಇಂತಹ ಮೂರ್ಖತನದ ಮೂಲಕ ನೀವು ಬೆಳೆಸಿದ್ದು ಜಾತ್ಯತೀತತೆಯನ್ನಲ್ಲ, ಕೋಮುವಾದವನ್ನು, ನೆರವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ, ಬಿಜೆಪಿಗೆ. ನೆನೆಪಿಡಿ, 1991ರಲ್ಲಿ ಕುದ್ರೋಳಿಯ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿದ ದಿನದಿಂದ ಇಲ್ಲಿಯ ವರೆಗೆ ಒಂದೇ ಒಂದು ಚುನಾವಣೆಯನ್ನು ನೀವು ಗೆಲ್ಲಲಿಲ್ಲ, ಐದು ಚುನಾವಣೆಗಳಲ್ಲಿ ಸೋತುಹೋದಿರಿ. (ವರ-ಶಾಪಗಳಲ್ಲಿ ನನಗೆ ನಂಬಿಕೆ ಇಲ್ಲ. ನಂಬುತ್ತಿದ್ದರೆ ನಿಮ್ಮ ರಾಜಕೀಯ ಅವನತಿಗೆ ನಾರಾಯಣ ಗುರುಗಳ ಚಿಂತನೆಗೆ ನೀವು ಮಾಡಿದ ಅಪಚಾರದ ಶಾಪವೂ ಕಾರಣವೆಂದು ಹೇಳುತ್ತಿದ್ದೆ.) .
ಆದರೆ ಯಾಕೆ ಸೋತುಹೋದೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲ. ನೀವು ದೇವಸ್ಥಾನ ಕಟ್ಟಿ, ಅಲ್ಲಿ ಮೂಲೆಮೂಲೆಗೂ ದೇವರ ಪ್ರತಿಮೆಗಳನ್ನು ಸ್ಥಾಪಿಸಿ, ಇಡೀ ಮಂಗಳೂರು ನಡುಗಿಹೋಗುವಂತೆ ದಸರಾ ಜಾತ್ರೆ ನಡೆಸಿ ನಿಮ್ಮದೇ ಸಮುದಾಯದ ಯುವಕರಲ್ಲಿ ಧಾರ್ಮಿಕ ಉನ್ಮಾದವನ್ನು ಸೃಷ್ಟಿಮಾಡಿಬಿಟ್ಟಿರಿ. ಆದರೆ ಆ ಧಾರ್ಮಿಕ ಉನ್ಮಾದದ ಅಭಿವ್ಯಕ್ತಿಗೆ ನೀವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇಲ್ಲ. ಅದು ಜಾತ್ಯತೀತತೆಯನ್ನು ಸಾರುವ ಪಕ್ಷ. ಮತ್ತೆ ಅವರೆಲ್ಲಿಗೆ ಹೋಗಬೇಕು? ಎಲ್ಲಿಗೆ ಹೋಗಬೇಕೋ ಅವರಲ್ಲಿಯೇ ಹೋಗಿದ್ದಾರೆ. ಹಣೆಗೆ ಕುಂಕುಮ ಬಳಿದುಕೊಂಡು ಕೇಸರಿ ಪಟ್ಟಿ ಬಿಗಿದುಕೊಂಡು ಬೀದಿಗಳಲ್ಲಿ ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ. ಅವರ ಕೈಗೆ ಧರ್ಮದ ಕತ್ತಿ ಕೊಟ್ಟು ಹೊಡೆದಾಡುವಂತೆ ಮಾಡಿದವರು ತಮ್ಮ ಮಕ್ಕಳನ್ನು ಡಾಕ್ಟರ್ ಎಂಜನಿಯರ್ ಮಾಡಿ ರಾಜಕೀಯದ ಅಧಿಕಾರದ ನೆರಳಲ್ಲಿ ತಮ್ಮ ವ್ಯಾಪಾರಿ ಸಾಮ್ರಾಜ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಆರಾಮವಾಗಿದ್ದಾರೆ.ಅವರಿಗೆ ಬುದ್ದಿ ಹೇಳಬೇಕಾದ ನೀವು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಾ ಕೂತಿದ್ದೀರಿ.
ಜನಾರ್ಧನ ಪೂಜಾರಿಯವರೇ, ಈಗ ಹೇಳಿ ಮೊನ್ನೆ ಕೆಂಜೂರಿನಲ್ಲಿ ನಡೆದ ಪ್ರವೀಣ ಪೂಜಾರಿಯ ಹತ್ಯೆಗೆ, ಅದಕ್ಕಿಂತ ಮೊದಲು ಮೂಡಬಿದರೆ ಮತ್ತು ಬಂಟ್ವಾಳದಲ್ಲಿ ನಡೆದ ಹತ್ಯೆಗೆ ಯಾರು ಕಾರಣ ? ಹೌದು, ಕೊಲೆಗೈದವರು ಜೈಲಲ್ಲಿದ್ದಾರೆ. ಆದರೆ ಅಂತಹ ಪರಿಸ್ಥಿತಿಗೆ ಅಮಾಯಕ ಯುವಕರು ಬಲಿಯಾಗುವಂತೆ ಮಾಡಿದವರು ಯಾರು? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆ ಎಂದಾದರೆ ಅದು ನಿಮ್ಮನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬಹುದು. ಈ ಆರೋಪದಿಂದ ನೀವು ಮುಕ್ತಿ ಬಯಸುವುದೇ ಆಗಿದ್ದರೆ ದಯವಿಟ್ಟು ನಾರಾಯಣ ಗುರುಗಳ ಚಿಂತನೆಯನ್ನು ಓದಿ ಅದನ್ನು ಕಾರ್ಯಗತಗೊಳಿಸಲು ನಿಮ್ಮ ನಿವೃತ್ತ ಜೀವನವನ್ನು ಬಳಸಿಕೊಳ್ಳಿ. ಅದುನಿಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

Sunday, January 31, 2016

ಸಹಬಾಳ್ವೆ ಸಾಗರ

ಮಂಗಳೂರಿನಲ್ಲಿ ನಡೆದ 'ಸಹಬಾಳ್ವೆ ಸಾಗರ' ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಮಾತನಾಡುತ್ತಾ, 'ಕೋಮುವಾದವನ್ನು ಎದುರಿಸಲು ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿದೆ' ಎಂದರು. ಸಮಾರಂಭದ ಕೊನೆಯಲ್ಪಿ ಪ್ರದರ್ಶನಗೊಂಡ ಪ್ರತಿಭಾ ನಿರ್ದೇಶನದ,'ಕೊಂದವರ್ಯಾರು' ನಾಟಕ. ಯೋಗೇಂದ್ರ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರದಂತಿತ್ತು.



Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

Sunday, July 26, 2015

ಹರೇಕಳ ಹಾಜಬ್ಬ

ಗಳಿಕೆಯ ಎಷ್ಟು ಪಾಲನ್ನು ದಾನ ನೀಡುತ್ತೀರಿ ಎನ್ನುವುದರ ಮೇಲೆ ತ್ಯಾಗದ ಪ್ರಮಾಣ ನಿರ್ಧಾರವಾಗುತ್ತದೆ. ಮುಖೇಶ್ ಅಂಬಾನಿಯಂತೆ ದಿನಕ್ಕೆ ೧೧,೦೦೦ ಕೋಟಿ ರೂಪಾಯಿ ಗಳಿಸಿ ಹತ್ತಾರು ಕೋಟಿ ದಾನಮಾಡಿದರೇನು ಬಂತು, ನಿಜವಾದ ದಾನದ ಧರ್ಮ ಹರೇಕಳ ಹಾಜಬ್ಬ ಅವರದ್ದು. ಹಣ್ಣು ಮಾರುತ್ತಿರುವ ಅವರ ದಿನದ ಆಧಾಯ ೧೦೦ರಿಂದ ೧೨೦ ರೂಪಾಯಿ. ಅದರಲ್ಲಯೇ ಒಂದಷ್ಟು ದುಡ್ಡನ್ನೂ ಉಳಿಸಿ ಹಾಜಬ್ಬ ತನ್ನೂರಿನಲ್ಲಿ ಶಾಲೆ ತೆರೆದಿದ್ದಾರೆ. ಹಾಜಪ್ಪ ಅವರಿಗೆ ಸಮನಾದ ದಾನಿ ಎಂದು ಮುಖೇಶ್ ಅಂಬಾನಿ ಅನಿಸಿಕೊಳ್ಳಬೇಕಾದರೆ ಅವರು ಪ್ರತಿದಿನ ಹೆಚ್ಚುಕಡಿಮೆ ೧೧೦೦೦ ಕೋಟಿ ರೂಪಾಯಿ ದಾನ ನೀಡಬೇಕಾಗುತ್ತದೆ.
ಇಂತಹ ಹಾಜಪ್ಪ ಅವರ ಸಾಧನೆಯ ಗಾಥೆಯನ್ನೊಳಗೊಂಡ ಪುಸ್ತಕವನ್ನು ಇಸ್ಮತ್ ಪಜೀರ್ ಬರೆದಿದ್ದಾರೆ. ಇದರ ಇಂಗ್ಲೀಷ್ ಅನುವಾದವನ್ನು ನಿನ್ನೆ ಮಂಗಳೂರಿನಲ್ಲಿ ನಾನು ಬಿಡುಗಡೆ ಮಾಡಿದೆ. ಹಾಜಪ್ಪ ಅವರನ್ನು ಕಂಡು ಧನ್ಯನಾದೆ.