Monday, December 29, 2014

ಕಾಣೆ ಮೀನಿನ ಕತೆ

ಈ ನಗುಸ್ಪೋಟಕ್ಕೆ ಕಾರಣವಾದ ಕಾಣೆ ಮೀನಿನ ಕತೆ ಹೀಗಿದೆ:
ಅಂಬೇಡ್ಕರ್ ಹುಟ್ಟುಹಬ್ಬದಂದು ದಿನದ ಪತ್ರಿಕೆಯನ್ನು ದಲಿತ ಸಂಚಿಕೆಯನ್ನಾಗಿ ಮಾಡಬೇಕೆಂದು ಪ್ರಜಾವಾಣಿಯ ಸಂಪಾದಕರಾದ ಶಾಂತಕುಮಾರ್ ನಿರ್ಧರಿಸಿದಾಗ ದಿನದ ಸಂಪಾದಕ ಸ್ಥಾನಕ್ಕೆ ಹೊಳೆದ ಮೊದಲ ಹೆಸರು ಸಾಹಿತಿ ದೇವನೂರು ಮಹಾದೇವ ಅವರದ್ದು. ಅವರನ್ನು ಕೊನೆಗೂ ಒತ್ತಾಯದಿಂದ ಒಪ್ಪಿಸಿ ಬೆಂಗಳೂರಿಗೆ ಕರೆದುತರಲಾಯಿತು. ಕಾಡಿಬೇಡಿ ಒಪ್ಪಿಸಲಿಕ್ಕಾಗಿ ನೀಡಿದ್ದ ಕಷ್ಟದಿಂದ ನೊಂದಿರಬಹುದಾದ ಅವರನ್ನು ಖುಷಿಪಡಿಸಲು ಎಂ.ಜಿ.ರಸ್ತೆಯಲ್ಲಿರುವ ‘’ಕೋಸ್ಟ್ ಟು ಕೋಸ್ಟ್’’ ಹೊಟೇಲ್ ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದೆ.ಅವರು ಇಷ್ಟಪಟ್ಟು ಕಾಣೆ ಮೀನು ಮಸಾಲ ತರಿಸಿಕೊಂಡಿದ್ದರು.
ಊಟ ಮುಗಿದ ಮೇಲೆ ಅವರಿಗೆ ನನಗೆ ಗೊತ್ತಿರುವ ಕಾಣೆ ಮೀನಿನ ಕತೆ ಹೇಳಿದೆ. ನನ್ನೂರು ಮಟ್ಟು, ನದಿ ದಂಡೆಯಲ್ಲಿರುವ ಸಣ್ಣ ಹಳ್ಳಿ. ಮಳೆಗಾಲದಲ್ಲಿ ನೆರೆಬಂದಾಗ ನದಿ ಉಕ್ಕಿ ನಮ್ಮ ತೋಟವನ್ನು ದಾಟಿ ಮನೆ ಅಂಗಳಕ್ಕೆ ದಾಳಿ ನೀಡುವುದುಂಟು. ನೆರೆಬಂದಾಗ ಅದರ ಜತೆ ಉಳಿದೆಲ್ಲವುಗಳ ಜತೆ ಸತ್ತ ಪ್ರಾಣಿಗಳ ಕಳೇಬರಗಳೂ ತೇಲಿ ಬರುತ್ತವೆ. ನೆರೆ ಇಳಿದಾಗ ಅದು ಹೊತ್ತು ತಂದುದೆಲ್ಲವೂ ನೀರಿನ ಜತೆ ಇಳಿದುಹೋಗದೆ ತೋಟದ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಉಳಿದು ಬಿಡುತ್ತವೆ. ಈ ರೀತಿ ಉಳಿದುಕೊಂಡ ದನ, ನಾಯಿಗಳ ಕಳೇಬರಗಳನ್ನು ನಾವು ಹೂಳಬೇಕಾಗುತ್ತಿತ್ತು.
ಈ ಹೂಳುವ ಕೆಲಸವನ್ನು ಹಿರಿಯರು ಹುಡುಗರಾದ ನಮಗೆ ಒಪ್ಪಿಸುತ್ತಿದ್ದರು. ನಾನೊಮ್ಮೆ ಒಂದು ನಾಯಿಯ ಕಳೇಬರವನ್ನು ಗುಂಡಿಗೆ ಹಾಕಲು ಎಳೆದು ತರುತ್ತಿದ್ದಾಗ ಅದರೊಳಗಿಂದ ಒಂದಷ್ಟು ಮೀನುಗಳು ಹೊರಗೆ ಜಿಗಿಯಲು ಪ್ರಾರಂಭಿಸಿತು. ಸಮೀಪ ಹೋಗಿ ನೋಡಿದರೆ ಎಲ್ಲ ಕಾಣೆ ಮೀನುಗಳು. ನೆರೆನೀರಿನಲ್ಲಿ ತೇಲುತ್ತಿದ್ದ ಕಳೆಬರವನ್ನು ತಿನ್ನಲು ತೂತು ಕೊರೆಯುತ್ತಾ ಒಳಹೋಗುವ ಮೀನುಗಳು ಒಮ್ಮೊಮ್ಮೆ ನೆರೆ ಇಳಿದ ಮೇಲೂ ಮೈಮರೆತು ಕಳೇಬರದೊಳಗೆ ಉಳಿದು ಬಿಡುತ್ತವೆ. ಈ ರೀತಿ ಸತ್ತಪ್ರಾಣಿಗಳನ್ನು ಎಲ್ಲ ಮೀನುಗಳು ತಿನ್ನುವುದಿದ್ದರೂ ಕಾಣೆ ಮೀನಿಗೆ ಬೇರೆ ಯಾವುದು ಸಾಟಿಯಲ್ಲ ಎಂದು ನಮ್ಮ ಊರಿನ ಹಿರಿಯರು ಹೇಳುತ್ತಿದ್ದರು. ಈ ಕಾರಣಕ್ಕಾಗಿ ನದಿ ದಂಡೆಯಲ್ಲಿ ವಾಸವಾಗಿರುವವರು ಸಾಮಾನ್ಯವಾಗಿ ನದಿಮೀನುಗಳನ್ನು ತಿನ್ನುವುದಿಲ್ಲ.
ಈ ಕತೆಯನ್ನು ಆಸಕ್ತಿಯಿಂದ ಕೇಳಿದ ದೇವನೂರು ಅವರ ಮುಖದಲ್ಲಿ ಕಾಣೆಮೀನು ತಿಂದ ಖುಷಿ ಮಾಯವಾಗಿತ್ತು. ಅದರ ನಂತರ ಅವರು ಕಾಣೆ ಮೀನನ್ನು ಜೀವಮಾನದಲ್ಲಿ ಎಂದೆಂದೂ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರಂತೆ. ನಾನೀಗ ಕಾಣೆ ಮೀನು ತಿನ್ನುವಾಗಲೆಲ್ಲ ದೇವನೂರು ಅವರ ಪ್ರತಿಜ್ಞೆ ನೆನಪಾಗಿ ಅಪರಾಧಿ ಪ್ರಜ್ಞೆಯಿಂದ ನರಳುತ್ತಾ, ಅವರ ಪಾಲಿನದ್ದೂ ನಾನೇ ತಿಂದು ನನ್ನನ್ನು ಸಮಾಧಾನ ಮಾಡಿಕೊಳ್ಳುತ್ತೇನೆ.
ಕೊನೆ ತುಂಡು: ಕಾಣೆ ಮೀನು ಸಪೂರ ದೇಹದ, ಬಿಳಿ ಮೈಬಣ್ಣದ ಸುಂದರ ಮೀನು. ಅದರ ಹೊರ ಪಕ್ಕೆಗಳಲ್ಲಿರುವ ಬೆಳ್ಳಿರೇಖೆಗಳು ಅದರ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ. ಇದಕ್ಕಾಗಿ ನಮ್ಮ ಹುಡುಗರು ಇದು ‘’ಬ್ರಾಹ್ಮಣಮೀನು’’ ಅನ್ನುತ್ತಿದ್ದರು. ಈ ‘’ಸೌಂದರ್ಯ’’ದ ಕಾರಣಕ್ಕಾಗಿಯೇ ಮಾರ್ಕೆಟ್ ನಲ್ಲಿ ಇದಕ್ಕೆ ಸಿಕ್ಕಾಪಟ್ಟೆ ರೇಟು.
ನನ್ನ ಇಷ್ಟದ ಮೀನು ಕಾಣೆ ಮೀನಲ್ಲ, ಬೂತಾಯಿ. ಆರೋಗ್ಯದೃಷ್ಟಿಯಿಂದಲೂ ಉಳಿದೆಲ್ಲ ಮೀನುಗಳಿಗಿಂತ ಇದೇ ಉತ್ತಮ. ಆದರೆ ವಿಪರೀತ ವಾಸನೆಯ ಕಪ್ಪು ಮೈಬಣ್ಣದ ಬೂತಾಯಿ ಮೀನುಗಳಲ್ಲಿಯೇ ಅತೀ ಅಗ್ಗದ ಮೀನು. ಇದನ್ನು ನಮ್ಮ ಹುಡುಗರು ‘’ಶೂದ್ರ ಮೀನು’’ ಎನ್ನುತ್ತಿದ್ದರು. ಇದನ್ನೆಲ್ಲ ಗಮನಿಸಿದಾಗ ಮೀನುಗಳಲ್ಲಿಯೂ ವರ್ಣಾಶ್ರಮ ವ್ಯವಸ್ಥೆ ಇದೆಯೇನೋ ಎಂಬ ಅನುಮಾನ ನನ್ನನ್ನು ಕಾಡುತ್ತದೆ.