Showing posts with label ಪತ್ರಕರ್ತ. Show all posts
Showing posts with label ಪತ್ರಕರ್ತ. Show all posts

Thursday, July 21, 2016

‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ದ ಆರೋಪ

ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಫೇಸ್ ಬುಕ್ ನಲ್ಲಿ ಒಂದಷ್ಟು ಕಿಡಿಗೇಡಿಗಳು ಮಹಿಳೆಯೊಬ್ಬರ ಮೇಲೆ ಮಾನಹಾನಿಕರವಾದ ಕಮೆಂಟ್ ಮಾಡಿದಾಗ ನಾನೇ ಮುಂದೆ ನಿಂತು ಪೊಲೀಸರಿಗೆ ದೂರು ಕೊಡಿಸಿದ್ದೆ. ಅದರ ನಂತರ ನನ್ನ ಮತ್ತು ರಾಜ್ಯದ ಮುಖ್ಯಮಂತ್ರಿಗಳ ವಿರುದ್ದವೂ ಇದೇ ರೀತಿ ಅಶ್ಲೀಲ ಭಾಷೆ ಬಳಸಿ ನಿಂದಿಸಿದಾಗ ನಾನೇ ಪೊಲೀಸರಿಗೆ ದೂರು ನೀಡಿದ್ದೆ. ಈ ಎರಡೂ ಸಂದರ್ಭಗಳಲ್ಲಿ ನನ್ನ ವಿರುದ್ಧ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ದ ಆರೋಪ ಹೊರಿಸಲಾಯಿತು. ಪ್ರಧಾನಮಂತ್ರಿಯವರಾದ ಸಾಕ್ಷಾತ್ ನರೇಂದ್ರಮೋದಿಯವರೇ ಇಂತಹ ದೂರುಗಳನ್ನು ನೀಡಿದ್ದನ್ನು ಆಗ ಪ್ರಕರಣಗಳನ್ನು ಉಲ್ಲೇಖಿಸಿ ನಾನು ಬರೆದಿದ್ದೆ. ಅದರ ನಂತರ ಸಂಸದ ಪ್ರತಾಪ ಸಿಂಹ ಮಂಗಳೂರಿನ ಪತ್ರಕರ್ತರೊಬ್ಬರಿಗೆ ಧಮ್ಕಿ ಹಾಕಿದ್ದು ಮತ್ತು ದಾವಣಗೆರೆಯ ಸಾಮಾಜಿಕ ಕಾರ್ಯಕರ್ತನಿಗೂ ಬೆದರಿಸಿದ್ದು ವರದಿಯಾಗಿತ್ತು. ಇದ್ಯಾವುದೂ ನನ್ನ ವಿರುದ್ಧ ಆರೋಪ ಮಾಡಿರುವವರಿಗೆ ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಆಗಲೇ ಇಲ್ಲ.
ಈಗ ಕಾಶ್ಮೀರದ ಸ್ಥಿತಿ ನೋಡಿ. ಅಲ್ಲಿ ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾದ ದಮನಕ್ಕೆ ಸರ್ಕಾರ ಟೊಂಕಕಟ್ಟಿ ನಿಂತಿದೆ. ಮೊಬೈಲ್ ಇಂಟರ್ ನೆಟ್ ಮತ್ತು ಬ್ರಾಂಡ್ ಬ್ಯಾಂಡ್ ಸರ್ವೀಸನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲಿನ ಪತ್ರಿಕಾ ಕಚೇರಿಗಳು ಮತ್ತು ಮುದ್ರಣಾಲಯಗಳ ಮೇಲೆ ಪೊಲೀಸರುದಾಳಿ ನಡೆಸುತ್ತಿದ್ದಾರೆ. ಪತ್ರಿಕೆಗಳನ್ನು ಮುಟ್ಟುಗೋಲು ಹಾಕಲಾಗುತ್ತಿದೆ. ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ಅವರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಪತ್ರಕರ್ತರ ಓಡಾಟಕ್ಕೆ ಪರವಾನಿಗೆ ಪತ್ರವನ್ನು ನಿರಾಕರಿಸಲಾಗುತ್ತಿದೆ. ಪತ್ರಕರ್ತರನ್ನೆಲ್ಲ ಸಾರಸಗಟಾಗಿ ''ದೇಶದ್ರೋಹಿ' ಗಳ ಗುಂಪಿಗೆ ಸೇರಿಸಲಾಗಿದೆ.
1977ರ ತುರ್ತುಪರಿಸ್ಥಿತಿಗಿಂತ ಭೀಕರವಾದ ಪರಿಸ್ಥಿತಿಯನ್ನು ಅಲ್ಲಿನ ಮಾಧ್ಯಮ ಕ್ಷೇತ್ರ ಎದುರಿಸುತ್ತಿದೆ. ಇದು ‘ಸಂದೇಶವನ್ನು ನಿರ್ಲಕ್ಷಿಸಿ ಸಂದೇಶವಾಹಕನ ಹತ್ಯೆ ಮಾಡುವ ಕ್ರಮ’. ರಾಜ್ಯ ಸರ್ಕಾರ ಮಾತ್ರ ಏಕಪಕ್ಷೀಯವಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಸಾಧ್ಯ ಇಲ್ಲ. ಇದರಲ್ಲಿ ನರೇಂದ್ರಮೋದಿ ಸರ್ಕಾರದ ಪಾತ್ರವೂ ಇದೆ. ಅಲ್ಲಿರುವುದು ಬಿಜೆಪಿ –ಪಿಡಿಪಿ ಮೈತ್ರಿಕೂಟ ಸರ್ಕಾರವಾಗಿರುವ ಕಾರಣ ಈ ಮಾಧ್ಯಮ ದಮನ ನೀತಿಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಜನಪ್ರಿಯ ನಾಯಕ. ಅವರ ಸಂವಹನವೇನಿದ್ದರೂ ಅದರ ಮೂಲಕವೇ. ಆದರೆ ಅವರು ಕಾಶ್ಮೀರದಲ್ಲಿ ನಡೆಸುತ್ತಿರುವುದೇನು?
ಕಳೆದ ಕೆಲವು ವಾರಗಳಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಹಳಷ್ಟು ಆಧಾರವಿಲ್ಲದ ವರದಿಗಳು ಪ್ರಸಾರ-ಪ್ರಕಟಾ ಆಗಿವೆ. ಇದನ್ನು ಗಮನಿಸಿದ ಹಲವು ಮಂದಿ ‘ನೀವು ಕೂಡಾ ಕಾಶ್ಮೀರದ ಮಾಧ್ಯಮ ನೀತಿ’ ಅನುಸರಿಸಬೇಕು’ ಎಂದು ಪುಕ್ಕಟೆ ಸಲಹೆ ನೀಡಿದ್ದುಂಟು. ಆದರೆ ಯಾವುದಾದರೂ ಪತ್ರಿಕೆ ಇಲ್ಲವೆ ಚಾನೆಲ್ ನ ಸಂಪಾದಕರಿಗೆ ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಇಲ್ಲವೆ ಸರ್ಕಾರದ ಯಾವುದೇ ಅಧಿಕಾರಿಯಾಗಲಿ ಪೋನ್ ಮಾಡಿ ಯಾಕೆ ಇಂತಹ ವರದಿ ಪ್ರಕಟ-ಪ್ರಸಾರವಾಗುತ್ತಿವೆ ಎಂದು ಕೇಳಿಲ್ಲ. ಒಂದಲ್ಲ ಹಲವುಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಇರುವ ತಮ್ಮ ಬದ್ದತೆಯನ್ನು ಸಾರಿದ್ದಾರೆ. ನೀವ್ಯಾಕೆ ಅಲ್ಲಿದ್ದೀರಿ ಎಂದು ಆಗಾಗ ನನ್ನನ್ನು ಕೆಲವು ಸ್ನೇಹಿತರು ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿಯವರ ಈ ಬದ್ದತೆ ಉತ್ತರವೂ ಹೌದು.
ಡೆಕ್ಕನ್ ಹೆರಾಲ್ಟ್ ಪತ್ರಿಕೆ ಇದಕ್ಕೆ ಸಂಬಂಧಿಸಿದ ಒಂದು ವಿಚಾರಪ್ರಚೋದಕ ಸಂಪಾದಕೀಯವನ್ನು ಇಂದು ಬರೆದಿದೆ:
Media gag in Valley, back to Emergency
July 21, 2016, DHNS
Kashmir Valley has been pushed into an information black hole in a most anti-democratic and unwise exercise of arbitrary powers by the government. The state government took drastic action in the last few days to gag all media – conventional, non-conventional and social – to cut off the Valley from the world and from itself and to prevent it from being presented to the outside world. It could not have taken the action without the concurrence of the Central government. It is a virtual throwback to the Emergency days whose horrors were thought to have been buried decades ago. The comprehensive ban on news and blocking of information channels in Kashmir was the worst assault on the citizens’ basic right to know and freedom of expression since those shameful days. These rights are the same for Kashmir as for the rest of India, and the attack on them should be condemned and opposed by everyone. What is at stake in Kashmir is and will be at stake elsewhere.
The methods of enforcement of the gag orders were reminders of the actions of the worst authoritarian regimes. Mobile internet and broadband services had already been disconnected. The police raided newspaper offices and printing presses, seized newspapers and printing material and detained staff after days of resorting to methods like blocking news, denying curfew passes, physically threatening journalists and otherwise obstructing collection and dissemination of news. The government now does not take responsibility for its actions and has denied there was any gagging. But a minister had clearly fo-und fault with “certain projections” of newspapers. Kashmir is witnessing a high tide of public anger, defiance and protests after a militant was killed by the security forces some days ago. The government is responsible for mismanaging and aggravating the situation. It cannot obliterate the message and shoot the messenger for its own failure.
When legitimate channels of news are blocked, wrong news and rumours spread, causing more damage, further aggravating the situation. Authoritarian governments do not learn this simple truth. Free media provides the best insurance against untruth and wrong propaganda, and no government wins a propaganda war after gagging the media. The government only loses its credibility, violates its obligations to the people and its commitment to uphold the Constitution when it curbs freedom of expression. The world’s largest democracy cannot deny the most basic of freedoms to its people, and continue to claim to be democratic. Even its claims in Kashmir will be questioned if it denies such rights to the people. The government must apologise for the grievous mistake it made and ensure that it will not be repeated.

Saturday, July 2, 2016

ಮುಂಗಾರು ಪತ್ರಿಕೆ: `ಓದುಗರೊಂದಿಗೆ ಸಂಪಾದಕ'

ಮುಂಗಾರು ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ರಘುರಾಮ ಶೆಟ್ಟಿಯವರು ನಡೆಸಿದ್ದ ಹಲವಾರು ಪ್ರಯೋಗಗಳಲ್ಲಿ ಅವರು ಆಗಾಗ ಬರೆಯುತ್ತಿದ್ದ ‘ಓದುಗರೊಂದಿಗೆ ಸಂಪಾದಕ’ ಎನ್ನುವ ಅವರ ಅಂಕಣವೂ ಒಂದು. ಓದುಗರಿಂದ ಬಂದ ಪತ್ರಗಳನ್ನು ಓದಿ ಅವುಗಳಲ್ಲಿನ ಸಾಮಾನ್ಯ ದೂರುಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು. ತನ್ನ ಮತ್ತು ಓದುಗನ ನಡುವಿನ ಸಂವಹಣದ ಸೇತುವೆಯನ್ನು ಗಟ್ಟಿಗೊಳಿಸುತ್ತಾ ಹೋಗುವವನೇ ನಿಜವಾದ ಪತ್ರಕರ್ತ ಎನ್ನುವುದನ್ನು ನಾನು ಕಲಿತದ್ದೇ ಈ ಪ್ರಯೋಗದಿಂದ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ಬಗ್ಗೆ ಕೆಲವು ಕೋಮುವಾದಿಗಳು ವಿವಾದವನ್ನು ಸೃಷ್ಟಿಸಿದಾಗ ನನ್ನ ಆಶಯವನ್ನು ಓದುಗರಿಗೆ ಇನ್ನಷ್ಟು ಸ್ಪಷ್ಟಗೊಳಿಸಲು ಮತ್ತೊಂದು ಲೇಖನಬರೆದಿದ್ದೆ. ಅಲ್ಲಿಯೂ ಈ ಮಾತನ್ನು ಪ್ರಸ್ತಾಪಿಸಿದ್ದೆ. (ಆ ಎರಡನೇ ಲೇಖನವನ್ನು ‘ ಕ್ಷಮೆಯಾಚನೆ’ ಎಂದು ಈಗ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಲಜ್ಜೆ ಇಲ್ಲದೆ ಸಮರ್ಥಿಸುತ್ತಾ ತಿರುಗುತ್ತಿರುವ ಚಕ್ರವರ್ತಿ ಸೂಲಿಬೆಲೆ ಎನ್ನುವ ಸುಳ್ಳುಕೋರ ಹೇಳಿಕೊಂಡು ಅಡ್ಡಾಡುತ್ತಿದ್ದಾನೆ)
ಬಾಬರಿ ಮಸೀದಿ ಧ್ವಂಸದ ನಂತರ ದಕ್ಷಿಣ ಕನ್ನಡ ಕೋಮುವಾದದ ಪ್ರಯೋಗಶಾಲೆಯಾಗಿ ಬದಲಾಗಿರುವುದು ಎಂದು ಬಹಳಷ್ಟು ಮಂದಿ ತಿಳಿದುಕೊಂಡಿದ್ದಾರೆ. ಆದರೆ 1985ರಲ್ಲಿಯೇ ಇದು ಶುರುವಾಗಿತ್ತು. ಸಾರಾ ಅಬೂಬಕರ್ ಮತ್ತು ಪೋಲಂಕಿ ರಾಮಮೂರ್ತಿಯವರ ಮೇಲೆ ಸಾರ್ವಜನಿಕವಾಗಿಯೇ ದಾಳಿ ನಡೆದದ್ದು ಆ ಕಾಲದಲ್ಲಿ.ಅವೆ ತಮಗೊಪ್ಪದ ವಿಚಾರಗಳನ್ನು ಬರೆಯುವವರ ಮೇಲೆ ಶಾಬ್ದಿಕ ಅತ್ಯಾಚಾರ ನಡೆಸುತ್ತಿದ್ದ ಭಕ್ತರು ಆಗಲೇ ಹುಟ್ಟಿಕೊಂಡಿದ್ದರು. ವಡ್ಡರ್ಸೆಯವರು ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದರು. ಇವೆಲ್ಲವೂ ಈ ಹಳೆಯ ಅಂಕಣ ಓದಿದರೆ ನಿಮಗೆ ಅರ್ಥವಾಗುತ್ತದೆ.
ಕೆಲವು ವರ್ಷಗಳ ನಂತರ ಮಹಾತ್ಮಗಾಂಧೀಜಿ ಬರೆದಿರುವ ‘ಹಿಂದ್ ಸ್ವರಾಜ್ಯ’ ಪುಸ್ತಕ ಓದಿದಾಗ ನನಗೆ ಮತ್ತೆ “ಓದುಗರೊಂದಿಗೆ ಸಂಪಾದಕ’ ಅಂಕಣ ನೆನೆಪಾಗಿತ್ತು. ಇಂತಹದ್ದೊಂದು ಅಂಕಣವನ್ನು ಬರೆಯುವಂತೆ ಪ್ರಜಾವಾಣಿ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರಿಗೂ ಹೇಳಿದ್ದೆ. ಅವರು ಆಗ “ಓದುಗ ಸಂಪಾದಕ’ ನನ್ನು ನೇಮಿಸುವ ಬಗ್ಗೆ (ದಿ.ಹಿಂದೂ ಪತ್ರಿಕೆಯಲ್ಲಿದ್ದ ಹಾಗೆ) ಒಲವು ತೋರಿದ್ದರು. ನನ್ನ ಆಸೆ ಕೈಗೂಡಲಿಲ್ಲ, ಅವರ ಆಸೆಯಾದರೂ ಈಡೇರಲಿ.
ಇದನ್ನೆಲ್ಲ ಬರೆಯುತ್ತಿದ್ದ ಹಾಗೆ ನಾನು ಪತ್ರಕರ್ತರನ್ನು ಉದ್ದೇಶಿಸಿ ಮಾಡಿದ ನೂರಾರು ಭಾಷಣಗಳ ಟಿಪ್ಪಣಿಗಳು ನೆನೆಪಾಗುತ್ತಿವೆ. ಅವೆಲ್ಲವನ್ನು ಪ್ರಶ್ನೋತ್ತರ ರೂಪದಲ್ಲಿ ‘ಓದುಗರೊಂದಿಗೆ ಸಂಪಾದಕ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕವನ್ನು ಪ್ರಕಟಿಸಬಾರದೇಕೆ ಎಂದು ಯೋಚಿಸುತ್ತಿದ್ದೇನೆ. ಹಾಗೆಂದಾಗ ನನ್ನ ಓದುವ ಕೋಣೆಯಲ್ಲಿ ಪ್ರಕಟಣೆಯ ಭಾಗ್ಯ ಕಾಣದೆ ರಾಶಿಬಿದ್ದಿರುವ ಸಾವಿರದಷ್ಟಿರುವ ಅಂಕಣಗಳು, ಲೇಖನಗಳು ಅಣಕಿಸುತ್ತಿವೆ. ಪ್ರಕಾಶಕರು ಕಾಡುತ್ತಿದ್ದಾರೆ, ನನಗ್ಯಾಕೋ ಮನಸ್ಸಾಗುತ್ತಿಲ್ಲ.
ಅವೆಲ್ಲ ಇರಲಿ ಮೊದಲು ಕೆಳಗಿರುವ ವಡ್ಡರ್ಸೆಯವರ ಅಂಕಣ ಓದಿ.
------------------------------------------------------------------------------

ನಿಮ್ಮೂರಿನವನಾದುದು ನನ್ನಪರಾಧವಾಗಬಾರದಲ್ಲ?
1956ರ ಮೇ ತಿಂಗಳ ಅದೊಂದು ಸುದಿನ; ಅಂದು ಜೋಗಜಲಪಾತದ ಮಹಾತ್ಮಾ ಗಾಂಧಿ ಜಲ ವಿದ್ಯುದಾಗರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಬಾರಿಗೆ ಜಲವಿದ್ಯುತ್ ಪೂರೈಕೆಯ ಸಡಗರದ ಸಮಾರಂಭವೊಂದರ ಏರ್ಪಾಡಾಗಿತ್ತು. ಅಂದಿನ ಮೈಸೂರು ಸಂಸ್ಥಾನದ ಕೊಡುಗೆಯಾದ ಜಲವಿದ್ಯುತ್ತನ್ನು, ಉದ್ಯಮಶೀಲರೆನ್ನಿಸಿಕೊಂಡ ದಕ್ಷಿಣ ಕನ್ನಡದ ಜನತೆಗೆ ವಿಧಿವತ್ತವಾಗಿ ಒಪ್ಪಿಸಲು ಅಲ್ಲಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಬಂದಿದ್ದರು.
ಕುಲಶೇಖರದಲ್ಲಿ ನಿರ್ಮಿತವಾಗಿದ್ದ ವಿದ್ಯುತ್ ವಿತರಣೆ ಜಾಲದಲ್ಲಿ ಗುಂಡಿಯೊತ್ತಿದ. ಕನ್ನಡಕ್ಕೆ ಜೋಗದ ಜಲವಿದ್ಯುತ್ ಹರಿಯಗೊಟ್ಟ ಕೆಂಗಲ್ ಹನುಮಂತಯ್ಯ ಒಂದು ಮಾರ್ಮಿಕವಾದ ಮಾತನಾಡಿದ್ದರು. “ನಿಮ್ಮ ಕೃತು ಶಕ್ತಿಗೆ ಚಾಲನೆ ಕೊಡಬಲ್ಲ ವಿದ್ಯುಚ್ಛಕ್ತಿಯನ್ನು ನಾವು ಕೊಟ್ಟಿದ್ದೇವೆ. ಇನ್ನು ಮೇಲೆ ನಿಮ್ಮ ಬುದ್ಧಿಶಕ್ತಿ. ಘಟ್ಟದ ಮೆಟ್ಟಲನ್ನೇರಿ ಬಯಲು ಸೀಮೆಗೆ ಹರಿದು ಅಲ್ಲಿನ ಜನರ ಬದುಕಿಗೆ ಹೊಸ ಚೇತನ ಕೊಡಬೇಕು” ಎಂಬ ಆಶಯವನ್ನವರು ಮುಂದಿಟ್ಟಿದ್ದರು.
ಆಗ ತಾನೇ ಪತ್ರಿಕಾ ವೃತ್ತಿಗೆ ಸೇರಿದ ನಾನು, “ನವಭಾರತ” ಪತ್ರಿಕೆಗೆ ವರದಿ ಮಾಡಲು ಅಂದಿನ ಸಮಾರಂಭಕ್ಕೆ ಹೋಗಿದ್ದೆ. ಹನುಮಂತಯ್ಯನವರ ಅರ್ಥವತ್ತಾದ ಮಾತನ್ನು ಹೇಳಿ ನನ್ನ ಮೈ ನವಿರೆದ್ದಿತು. ರಾಜಕಾರಣಿಯೊಬ್ಬರಿಂದ ಸುಂದರ ಶೈಲಿಯ ಕನ್ನಡ ಭಾಷಣ ನಾನು ಕೇಳಿದ್ದು ಅದೇ ಮೊದಲು. ಅದಕ್ಕಿಂತ ಮಿಗಿಲಾಗಿ, ಕೆಂಗಲ್ ಅವರು ತಮ್ಮ ಭಾಷಣದಲ್ಲಿ ದಕ್ಷಿಣ ಕನ್ನಡದ ಉದ್ಯಮ ಶೀಲ, ವಿಚಾರವಂತ ಹಾಗೂ ಬುದ್ಧಿವಂತ ಜನ ಸಮೂಹದ ಒಂದು ಆಕರ್ಷಕ ವಾಕ್ಚಿತ್ರ ಬಿಡಿಸಿದ್ದರು. ಇನ್ನು ಕೆಲವೇ ತಿಂಗಳಲ್ಲಿ (1951 ನವೆಂಬರ್ 1) ವಿಸ್ತ್ರತ ಕನ್ನಡ ನಾಡಿಗೆ ಸೇರಲಿರುವ ದಕ್ಷಿಣ ಕನ್ನಡಿಗರ ಬುದ್ಧಿಬಲಕ್ಕೆ ಸಿಗಲಿರುವ ವಿಶಾಲ ಭೂಮಿಕೆಯ ಚಿತ್ರವನ್ನೂ ಕೆಂಗಲ್ ಬಿಡಿಸಿದ್ದರು.
ಮೇಲಂತಸ್ತಿನ ಜಿಲ್ಲೆ
ಅಂದಿನವರೆಗೆ ದೂರದ ಮದ್ರಾಸು ಪ್ರಾಂತ್ಯದ ಒಂದು ಬಿಡಿ ಭಾಗವಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲಂತಸ್ತಿನಲ್ಲೇ ಇತ್ತು. ಕನ್ನಡ ನಾಡಿಗೆ ಸೇರಿದ ಮೇಲೆ ಈ ಜಿಲ್ಲೆಯ ಮುನ್ನಡೆಗೆ ಹೊಸ ಆಯಾಮ ಬರುವುದೆಂಬುದು ಆಗ ಎಲ್ಲರ ನಿರೀಕ್ಷೆಯಾಗಿತ್ತು.
ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನಡೆಯ ದಾಪುಗಾಲು ಹಾಕುತ್ತಿರುವ ದಕ್ಷಿಣ ಕನ್ನಡ ಜಿಲ್ಲೆ ಕನ್ನಡನಾಡಿನ ಅಭಿಮಾನದ ಕಳಶವಾಗುವುದೆಂಬ ನಿರೀಕ್ಷೆಯಲ್ಲಿ ಎದೆಯುಬ್ಬಿದವರಲ್ಲಿ ನಾನೂ ಒಬ್ಬ. ಯಾಕೆಂದರೆ ನಾಡಿನ ಇತರ ಜಿಲ್ಲೆಗಳ ಜನ ಮೆಚ್ಚುವ ಎಲ್ಲ ಗುಣಗಳೂ ನಮ್ಮಲ್ಲಿದ್ದುವು. ಆಡಳಿತದಲ್ಲಿ ಲಂಚಗುಳಿತನವೆಂಬುದು ಕಿಂಚಿತ್ತೂ ಇಲ್ಲಿರಲಿಲ್ಲ. ಸಾರ್ವಜನಿಕ ಮುಖಂಡರು ಇಲ್ಲಿ ಸ್ವಚ್ಚತೆಗೆ ಹೆಸರಾಗಿದ್ದರು. ವಿದ್ಯಾರ್ಥಿ ಸಮೂಹ ಪ್ರತಿಭೆಯ ಆಗರವಾಗಿತ್ತು. ಆದರ್ಶ ಅಧ್ಯಾಪಕರ ದೊಡ್ಡ ಪಟ್ಟಿಯೇ ಇಲ್ಲಿತ್ತು. ವಿದ್ಯಾವಂತ ಯುವಕರು ಪುಸ್ತಕ ಪ್ರಿಯರಾಗಿದ್ದರು. ವಿಚಾರವಂತಿಕೆ ಬೆಳೆಸಿಕೊಂಡಿದ್ದರು. ಚಿತ್ರ ಮಂದಿರಗಳ ಮುಂದೆ ಕ್ಯೂ ನಿಲ್ಲುವುದು ಆಪಮಾನಕಾರಿಯೆಂದು ಆಗಿನ ಯುವಕರು ತಿಳಿದಿದ್ದರು. ಕನ್ನಡ ನಾಡಿನ ಇತರ ಯಾವ ಭಾಗದಲ್ಲೂ ಇಲ್ಲದಷ್ಟು ತೀವ್ರವಾದ ಕಾರ್ಮಿಕ ಚಳುವಳಿ ಇಲ್ಲಿ ಬೇರುಬಿಟ್ಟಿತ್ತು. ಇಲ್ಲಿನ ರಾಜಕೀಯದಲ್ಲಿ ಸಮಾಜವಾದಿಗಳು ಸಕ್ರಿಯರಾಗಿದ್ದರು. ಮದ್ಯಪಾನ ಮಹಾಪರಾಧವೆಂಬ ಭಾವನೆ ಈ ಜಿಲ್ಲೆಯಲ್ಲಿ ವ್ಯಾಪಕವಾಗಿತ್ತು. ಮೋಸ ವಂಚನೆ ಮಾಡಿ ಅಥವಾ ಇನ್ನಿತರ ವಾಮಾಚಾರಗಳಿಂದ ಹಣಗಳಿಸುವವರು ಸಾರ್ವಜನಿಕರ ತಿರಸ್ಕಾರಕ್ಕೆ ಈಡಾಗುತ್ತಿದ್ದರು.
ಮೌಲ್ಯದ ನೆಲೆ ಇತ್ತು
ಇಂತ ಮೌಲ್ಯಗಳ ನೆಲೆಯಲ್ಲಿ ನಿಂತು ಮುನ್ನಡೆಯುತ್ತಿದ್ದ ಜಿಲ್ಲೆಗೆ ಸೇರಿದವನು ನಾನೆಂಬ ಹೆಮ್ಮೆ ನನಗಾಗ ಇತ್ತು. ಪತ್ರಿಕಾ ವೃತ್ತಿ ಅವಲಂಬನೆಯಲ್ಲಿ ನಾನು 1957ರಲ್ಲಿ ಬೆಂಗಳೂರಿಗೆ ಹೋದಾಗ ಅಲ್ಲಿನ ಪತ್ರಕರ್ತರ ಮುಂದೆ ನಮ್ಮ ಜಿಲ್ಲೆಯ ರಾಜಕೀಯ ಮಹತ್ವ ಮತ್ತು ಅದರ ಗುಣ ವೈಶಿಷ್ಟ್ಯಗಳ ಬಗ್ಗೆ ಉದ್ದುದ್ದ ವ್ಯಾಖ್ಯಾನ ಮಾಡುತ್ತಿದ್ದೆ. ಮೊದ-ಮೊದಲು ಬೆಂಗಳೂರಿನ ಪತ್ರಕರ್ತರಿಗೆ ಇದನ್ನು ಅಲ್ಲಗಳೆಯಲಾಗುತ್ತಿರಲಿಲ್ಲ. ಆದರೆ ಕ್ರಮೇಣ ವಿಧಾನಸಭೆಯಲ್ಲಿ ಈ ಜಿಲ್ಲೆಯ ಪ್ರತಿನಿಧಿಗಳಲ್ಲಿ ಬಹುಮಂದಿ ತೊದಲಲು ಆರಂಭಿಸಿದರು. ಸಂಸದೀಯ ಪಟ್ಟುತ್ವದ ಲೋಪ ಜಿಲ್ಲೆಯ ಬಹುಮಂದಿ ಶಾಸಕರಲ್ಲಿ ಎದ್ದು ಕಂಡಿತು. ದಿವಂಗತರಾದ ಎ.ಬಿ.ಶೆಟ್ಟಿ ಮತ್ತು ಬಿ.ವೈಕುಂಠ ಬಾಳಿಗರನ್ನು ಬಿಟ್ಟರೆ ಈ ಜಿಲ್ಲೆಯ ಬೇರೆ ಯಾರೂ ಬೆಂಗಳೂರಿನ ಪತ್ರಕರ್ತರ ಮೇಲೆ ತಮ್ಮ ಬುದ್ಧಿಬಲದ ಮುದ್ರೆಯೊತ್ತಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ ವಿಧಾನ ಮಂಡಲದಲ್ಲಿ ಜಿಲ್ಲೆಯ ಪ್ರತಿನಿಧಿಗಳ ತೊದಲು ನುಡಿಗಳು ಹೆಚ್ಚಾದಾಗ ಬೆಂಗಳೂರಿನ ನನ್ನ ಪತ್ರಕರ್ತ ಗೆಳೆಯರು “ನಿನ್ನ ಜಿಲ್ಲೆಯ ಜನ ಏನು ಬುದ್ಧಿವಂತರಯ್ಯಾ !” ಅಂತ ಗೇಲಿ ಮಾಡುತ್ತಿದ್ದರು.
ರಾಜಕೀಯ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳ ಗುಣಮಟ್ಟ ಕಳಪೆಯಾದಾಗ ಈ ಪ್ರದೇಶದ ರಾಜಕೀಯ ಮಹತ್ವ ಕುಂದುತ್ತದೆ. ಹೀಗೆ ರಾಜಕೀಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅವನತಿ ನಿಧಾನವಾಗಿ ಆಗುತ್ತಲೇ ಬಂದಿದೆ. ಯಾಕೆ ಹೀಗಾಗುತ್ತಿದೆ? ವಿಚಾರವಂತರು ಮತ್ತು ಸುಜ್ಞಾನಿಗಳನ್ನು ರಾಜಕೀಯದಲ್ಲಿ ಬೆಳೆಸುವ ಪ್ರಜ್ಞೆ ಈ ಜಿಲ್ಲೆಯಲ್ಲಿ ಯಾಕ್ಕಿಲ್ಲವಾಯಿತು? ಎಂಬ ಪ್ರಶ್ನೆಗಳು ಆಗಾಗ ನನ್ನನ್ನು ಕಾಡಿಸುತ್ತಿದ್ದವು. ಇದಕ್ಕೆ ಉತ್ತರ ಹುಡುಕುವುದು ನನ್ನ ಕೈಲಾಗದ ಕೆಲಸವಾಗಿತ್ತು. ಎಳೆಯನಾಗಿದ್ದಾಗ ಗೊತ್ತು-ಗುರಿ ಇಲ್ಲದೆ ಬದುಕಿನ ಅಂದಗೆಡಿಸಿಕೊಂಡ ನನಗೆ, ಬೆಂಗಳೂರಿನಲ್ಲಿ ಪತ್ರಿಕಾ ವೃತ್ತಿಯಲ್ಲಿ ನೆಲೆಯೂರಿ ಬೆಳೆಯ ಬೇಕಾದ ದೊಡ್ಡ ಹೊಣೆ ಇತ್ತು.
ಹೀಗೆ ಬೆಂಗಳೂರಿನಲ್ಲಿ ಪತ್ರಕರ್ತನಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ಒಂದು ಹಂತದಲ್ಲಿ, ಸ್ವತಂತ್ರ ಬದುಕಿನ ಬಯಕೆ ಮೂಡಿತು. ಇಪ್ಪತ್ತನಾಲ್ಕು ವರ್ಷಗಳ ಕಾಲ ನಾನು ದುಡಿದು ಬೆಳೆದ ಡೆಕನ್ ಹೆರಾಲ್ಡ್- ಪ್ರಜಾವಾಣಿ ಸಂಸ್ಥೆಗೆ ರಾಜೀನಾಮೆ ಕೊಟ್ಟು 1983ರ ಸೆಪ್ಟಂಬರ್ನಲ್ಲಿ ಮುಂಗಾರು ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಹೊಸ ಸಂಸ್ಥೆಯ ದಿನ ಪತ್ರಿಕೆಯನ್ನು ನನ್ನ ಜಿಲ್ಲೆಯ ಕೇಂದ್ರವಾದ ಮಂಗಳೂರಿನಿಂದಲೇ ಆರಂಭಿಸಬೇಕೆಂದು ತೀರ್ಮಾನಿಸಿದೆ. ನಾನು ಈ ಜಿಲ್ಲೆಯವನಾದರೂ ಪತ್ರಕರ್ತನಾಗಿ ನಾನು ಈ ಹೆಚ್ಚು ಪರಿಚಿತನಾಗಿರುವುದು ನಾಡಿನ ಬಯಲು ಸೀಮೆಯಲ್ಲಿ. ನನ್ನ ಓದುಗ ಬಳಗವಿರುವುದೂ ಅಲ್ಲಿಯೇ ಹೆಚ್ಚು. ಇದೆಲ್ಲ ನನಗೆಗೊತ್ತಿತ್ತು. ಆದರೂ ಮಾನವ ಚೈತನ್ಯದ ಮಹಾ ಸಾಗರದಂತಿರುವ ಈ ಕಡಲ ತೀರದ ಜಿಲ್ಲೆಯಲ್ಲಿ ಚಿಂತನೆಯ ಮಳೆ ಸುರಿಸಿ ಜನ ಶಕ್ತಿಯ ಬೆಳೆ ತೆಗೆಯಬೇಕೆಂದು ನನ್ನ ಕಲ್ಪನೆಯಾಗಿತ್ತು. ಅದಕ್ಕೆ ಹದವಾದ ಮನೋಭೂಮಿಕೆ ಮೂವತ್ತು ವರ್ಷಗಳ ಹಿಂದೆ ಇಲ್ಲಿತ್ತು.
ವಾಣಿಜ್ಯಮಯ
ಅದೆಲ್ಲಾ ಈಗ ಕಳೆದು ಹೋದ ಮಾತು. ನಿನ್ನ ಜಿಲ್ಲೆಯ ಜೀವನ ಈಗ ವಾಣಿಜ್ಯ ಮಯವಾಗಿದೆ ಎಂದು ನನಗೆ ಮೊದಲು ಹೇಳಿದವರು, ಇಲ್ಲಿನ ರೋಶನಿ ನಿಲಯದಲ್ಲಿ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾಗಿರುವ ಡಾ|| ಜಿ.ಆರ್. ಕೃಷ್ಣ . ಇವರು ಆಂಧ್ರ ಪ್ರದೇಶದವರು. ಪ್ರಸಿದ್ಧ ರಾಜಕಾರಣಿ ಪ್ರೊ|| ಎಸ್.ಜಿ ರಂಗ ಅವರ ಸೋದರ ಸಂಬಂಧಿ. ಸಮಾಜ ಶಾಸ್ತ್ರವನ್ನ ಆಳವಾಗಿ ಅಭ್ಯಾಸ ಮಾಡಿದ ಕೆಲವೇ ಜನರಲ್ಲಿ ಇವರೊಬ್ಬರು. ತಮ್ಮ ಪಾಂಡಿತ್ಯಕ್ಕೆ ವಿಶ್ವಮನ್ನಣೆ ಪಡೆದವರು.
1984ರ ಜನವರಿಯ ಅದೊಂದು ದಿನ ನಾನವರನ್ನು ಸಂಧಿಸಿ ನನ್ನ ಮುಂಗಾರು ಯೋಜನೆಯ ಕುರಿತು ಮಾತನಾಡಿದೆ. ಕಳೆದ ಹದಿನೈರು ವರ್ಷಗಳಿಂದ ಮಂಗಳೂರಿನಲ್ಲೇ ಡಾ|| ಜಿ.ಆರ್. ಕೃಷ್ಣ, ಈ ಜಿಲ್ಲೆಯ ಜನರನ್ನು ಮತ್ತು ಅದರ ಬದುಕುನ್ನು ಇಂದು ಅವರಿಸಿರುವ ವಾಣಿಜ್ಯ ಮೌಲ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವಂತೆ ಕಂಡಿತು. ಮಂಗಳೂರಿನಿಂದ ಮುಂಗಾರು ಹೊರಡಿಸಬೇಕೆಂಬ ನನ್ನಾಸೆಗೆ ಅವರು ತಣ್ಣೀರೆರಚಲಿಲ್ಲ. ಆದರೆ ವಾಣಿಜ್ಯ ದೃಷ್ಟಿಯೊಂದೇ ಇಲ್ಲಿ ಯಶಸ್ವಿಯಾದೀತು ಎಂಬ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನ ಇಂದು ಪೂರ್ಣವಾಗಿ ವಾಣಿಜ್ಯಮಯವಾಗಿದೆ. ಈ ದೇಶದಲ್ಲಿಂದು ಮಹಾಪೀಡೆ ಎನ್ನಿಸಿಕೊಂಡಿರುವ ವಿದ್ಯೆಯ ವ್ಯಾಪಾರ ಆರಂಭವಾದುದು ಇಲ್ಲಿಯೇ. ರಾಜಕೀಯಕ್ಕೂ ವಾಣಿಜ್ಯ ಗಣನೆ ಬಂದಿದೆ. ಗಂಡು ಹೆಣ್ಣಿನ ಮಾನವೀಯ ಸಂಬಂಧವೂ ಕೂಡಾ ಇಲ್ಲಿ ವಾಣಿಜ್ಯ ವಸ್ತುವಾಗಿದೆ. ಜಿಲ್ಲೆಯ ಪ್ರೌಢ ಕಲೆಯಾದ ಯಕ್ಷಗಾನವೂ ವ್ಯಾಪಾರದ ಡೇರೆಯಲ್ಲಿ ಸಿಕ್ಕಿ ನಶಿಸುತ್ತಿದೆ. ಆದ್ದರಿಂದ ನೀವು ಹೊರಡಿಸುವ ಪತ್ರಿಕೆ ಈ ವ್ಯಾಪಾರಿ ಸೂತ್ರಕ್ಕೆ ಸಲ್ಲುವಂತಿರಬೇಕು, ಎಂದು ನನಗವರು ಹೇಳಿದ್ದರು.
ವಾಣಿಜ್ಯಮಯವಾಗಿರುವ ಜಿಲ್ಲೆಯ ಜನ ಜೀವನಕ್ಕೆ ಅವರು ಹಲವು ನಿದರ್ಶನಗಳನ್ನಿತ್ತರು. ಅವರ ಅಭಿಪ್ರಾಯದಲ್ಲಿ, ಈ ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಚಳವಳಿಯ ನೆಲೆ ತಪ್ಪಿದ್ದುದಕ್ಕೂ ಇದೇ ಕಾರಣ. ಇಲ್ಲಿನ ಸಭೆ ಸಮಾರಂಭಗಳು ಅಥವಾ ಶಾಲಾ ವಾರ್ಷಿಕೋತ್ಸಗಳಿಗೆ ಹಣವಂತರು ಅಥವಾ ಬ್ಯಾಂಕ್ ಅಧಿಕಾರಿಗಳನ್ನೇ ಮುಖ್ಯ ಅತಿಥಿಗಳಾಗಿ ಕರೆಯುವುದೇ ಈಗೊಂದು ಫ್ಯಾಷನ್ ಆಗಿರುವುದುನ್ನು ಪ್ರಸ್ತಾಪಿಸಿದರು. ಬುದ್ಧಿಗೆ ಇಲ್ಲೀಗ ಬೆಲೆ ಇಲ್ಲದಾಗುತ್ತಿದೆಯೆಂದರು.
ಡಾ. ಕೃಷ್ಣ ಒಬ್ಬ ಸಮಾಜ ವಿಜ್ಞಾನಿ ಅವರ ಮಾತಿಗೆ ಬಹಳ ತೂಕವಿದೆ. ಅದನ್ನು ಕಿವಿಗೊಟ್ಟು ಕೇಳುವವರಿಲ್ಲವೆಂದು ಅವರು ಕೊರಗಿದವರು. ನಿಮ್ಮ ಜಿಲ್ಲೆಯ ಜನ ಬುದ್ಧಿ ಬಲದ ನೆಲೆ ಇಲ್ಲದೆ ಕಟ್ಟುತ್ತಿರುವ ಭೌತಿಕ ಸೌಧ, ಪರಿವರ್ತನೆಯ ಬಿರುಗಾಳಿಯಲ್ಲೊಂದು ದಿನ ಬಿದ್ದು ಹೋಗಲಿದೆ ಎಂದು ಎಚ್ಚರಿಸಿದರು.
ಅನಂತರ ನಾನು ಮತ್ತು ಅವರು ಆಗಾಗ ಸೇರಿ ಪ್ರಚಲಿತ ಸಮಾಜ ಮತ್ತು ಅದರಲ್ಲಿ ಪತ್ರಿಕೆಗಳ ಪಾತ್ರ ಎನ್ನುವ ಕುರಿತು. ಚರ್ಚಿಸಿದ್ದೆವು. ಪರಿವರ್ತನಾ ಶೀಲವಾದ ಭಾರತೀಯ ಸಮಾಜದಲ್ಲಿ ಪತ್ರಿಕೆ ಒಂದು ಸಾಧನ. ಅದು ಒಂದು ತತ್ವಕ್ಕೆ ಬದ್ಧವಾಗಿರಬೇಕು. ಈ ತತ್ವ ಪ್ರತಿಪಾದನೆ ಕೆಲವರಿಗೆ ಮೆಚ್ಚಿಕೆ ಆಗಬಹುದು. ಅನೇಕರು ಇದರಿಂದ ರೊಚ್ಚಿಗೇಳಬಹುದು ಇಂತಹ ವಿಭಿನ್ನ ಪ್ರತಿಕ್ರಿಯೆಗಳಿಂದಲೂ ಪತ್ರಿಕೆ ತನ್ನ ಉದ್ದೇಶ ಸಾಧನೆ ಮಾಡಿದೆಯೆಂದು ತಿಳಿಯಬೇಕಾಗುತ್ತದೆ. ಇದರಿಂದ ಜನಸಮೂಹದಲ್ಲಿ ವಿಚಾರವಂತಿಕೆಯನ್ನು ಬೆಳೆಸಿದಂತಾಗುತ್ತದೆ. ಎಲ್ಲರಿಗೂ ಸಲ್ಲು-ಉಪಚಾರದ-ಆತ್ಮವಂಚನೆ ವಾಣಿಜ್ಯ ವಸ್ತುವಾಗಿ ಪತ್ರಿಕಾ ವೃತ್ತಿ ಉಳಿಯಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬಂದೆವು.
ಅನೇಕರು ರೊಚ್ಚು
ನಮ್ಮ ಕಲ್ಪನೆಯ “ಮುಂಗಾರು” ಆರಂಭವಾಗಿ ಈಗ ಆರು ತಿಂಗಳು ಕಳೆಯಿತು. ನಾವು ಮೊದಲ ಕಲ್ಪಿಸಿದ ರೀತಿಯಲ್ಲೇ ನಮ್ಮ ವೃತ್ತಿ ನೀತಿಯನ್ನು ಉಳಿಸಿಕೊಂಡು ಬಂದಿದ್ದೇವೆ. ನಮ್ಮ ನೀತಿಯನ್ನು ಕೆಲವರು ಮೆಚ್ಚಿದ್ದರೆ, ಅನೇಕರು ರೊಚ್ಚಿ ಗೆದ್ದಿದ್ದಾರೆ. ಇಲ್ಲಿಯೂ ಕೂಡಾ ಒಂದು ಸ್ವಾರಸ್ಯದ ಸಂಗತಿಯೆಂದರೆ-ನಮ್ಮ ನೀತಿಯನ್ನು ಹೆಚ್ಚಾಗಿ ಮೆಚ್ಚಿರುವವರು ಕೊಡಗು, ಹಾಸನ, ಚಿಕ್ಕಮಂಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನತೆ. ಓದುಗರ ಸಂಖ್ಯೆಯಲ್ಲಿ ಈ ಜಿಲ್ಲೆಗಳದು ಅರ್ಧಪಾಲು; ಉಳಿದರ್ಧ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆಗಳಲ್ಲಿಯೂ ನಮ್ಮ ನಿಲುವನ್ನು ಒಪ್ಪದವರಿದ್ದಾರೆ. ಇದನ್ನು ನಾವು ನಿರೀಕ್ಷಿಸಿಯೂ ಇದ್ದೇವೆ. ನಮ್ಮ ನೀತಿಯನ್ನು ಒಪ್ಪದಿರುವ ಅನೇಕ ಓದುಗರು ನಮ್ಮನ್ನು ಗೌರವದಿಂದ ಕಂಡಿದ್ದಾರೆ.
ಆದರೆ ನನ್ನ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿರುವ ಒಂದು ಅಂಶ ಕಲ್ಯಾಣಪುರ ಹೊಳೆಯಿಂದಾಚೆಗಿನಕೆಲವರು ಓದುಗರು ನನ್ನ ಮೇಲೆ ವೈಯಕ್ತಿಕವಾಗಿ ಸುರಿದ ಬೈಗುಳದ ಮೆಳೆ. ಹೀಗೆ ನನ್ನನ್ನು ಹೀನಾಯವಾಗಿ ನಿಂದಿಸಿ ಪತ್ರ ಬರೆದವರು ಒಂದೇ ವರ್ಗಕ್ಕೆ ಸೇರಿದವರೆಂಬುದೂ ಗಮನಾರ್ಹ.
ಪ್ರಶ್ನಾವಳಿ
ಹೆಸರು ಹಾಕದೆ ವಿಳಾಸ ಕೊಡದೆ ಹೀಗೆ ಬೈದಿರುವವರಿಗೆ ವೈಯಕ್ತಿಕವಾಗಿ ಉತ್ತರ ಕೊಡುವುದು ಸಾಧ್ಯವಿಲ್ಲದ ಮಾತು. ಇದರ ಮೇಲಿಗೆ, ನಾವು ಇತ್ತೀಚಿಗೆ ಓದುಗರ ಅಭಿಪ್ರಾಯ ಸಂಗ್ರಹಕ್ಕೆ ಒಂದು ಪ್ರಶ್ನಾವಳಿಯನ್ನು ಕಳಿಸಿದ್ದೇವೆ. ಅದರಲ್ಲಿಯೂ ಕೂಡ ನಮ್ಮ ನಿಲುವನ್ನು ಉಗ್ರವಾಗಿ ಖಂಡಿಸಿದವರಲ್ಲಿ ಕಲ್ಯಾಣಪುರ ಹೊಳೆಯಿಂದಾಚೆಗಿನವರೇ ಹೆಚ್ಚು.
ಪ್ರಶ್ನಾವಳಿಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನೂ ಗೌರವದಿಂದ ಕಾಣಬೇಕೆಂಬುದು ನನ್ನಿಚ್ಛೆ. ಇದರಲ್ಲಿ ಹೆಚ್ಚಿನವರು “ ಮುಂಗಾರು” ಕಾಂಗೈ ಮುಖವಾಣಿ ಎಂದು ಟೀಕಿಸಿದ್ದಾರೆ. ಬಂಗಾರಪ್ಪನ ಪ್ರಚಾರದ ಪತ್ರಿಕೆಯೆಂದು ಖಂಡಿಸಿದ್ದಾರೆ ಮಾನ್ಯ ಓದುಗರ ಈ ಆಪಾದನೆಗಳಿಗೆ ವಿವರಣೆ ಕೊಡಬೇಕಾದ ನೈತಿಕ ಹೊಣೆ ನನ್ನ ಮೇಲಿದೆ. ನಾನು ಮುಂಗಾರು ಪತ್ರಿಕೆಯ ಸಂಸ್ಥಾಪಕ ನಾಗಿರಬಹುದು. ಸಂಪಾದಕನೂ ಆಗಿದ್ದೇನೆ. ಅಂದ ಮಾತ್ರಕ್ಕೆ ಅದು ನನ್ನ ಸ್ವಂತ ಸೊತ್ತಾಗುವುದಿಲ್ಲ. ಇದು ಓದುಗರ ಪತ್ರಿಕೆ. ಓದುಗರನೊಡನೆ ಮನಬಿಚ್ಚಿ ಮಾತನಾಡ ಬೇಕಾದುದು ನನ್ನ ಕರ್ತವ್ಯ. ತತ್ವಕ್ಕೆ ಬದ್ದನಾದ ಒಬ್ಬ ಪತ್ರಕರ್ತನಾಗಿ ಯಾವುದೇ ಮುಚ್ಚು ಮರೆಯಿಲ್ಲದೆ ಈ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಪ್ರತಿಯೊಂದು ಟೀಕೆಗೂ ಬಿಡಿ ಬಿಡಿಯಾಗಿ ಉತ್ತರ ಕೊಡಬೇಕೆಂದು ನನ್ನಾಸೆ.
(‘ಮುಂಗಾರು’ ಕಾಂಗೈ ಪಕ್ಷದ ಮುಖವಾಣಿಯೇ? ಎಂಬ ಪ್ರಶ್ನೆಗೆ ಮಂಗಳವಾರದ ಸಂಚಿಕೆಯಲ್ಲಿ ಉತ್ತರಿಸುತ್ತೇನೆ.- ಸಂ)
**********

Monday, November 19, 2012

ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ? Nov 19 2012


ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.
ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.
ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.
ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.
ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ~ ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್~ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..~ ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.
ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು~ ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ~ನ ಸಂಪಾದಕರು ವಿವರಣೆ ಕೊಡಬೇಕಾಯಿತು.
ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.
ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.
`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ~ ಎಂದು ಬಡಬಡಿಸುತ್ತಿದ್ದ~ ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.
ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್~ ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.
ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?~ ಎನ್ನುವುದು ಮೊದಲ ಪ್ರಶ್ನೆ. 
ಮಂಗಳೂರಿನ `ಸ್ಟೇಹೋಂ~ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.
ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ~ ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.
ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು~ ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.
ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ~ ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ~ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.
ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?~ ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.
ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ~ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ~ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ~ ಎಂದು ಪೊಲೀಸರು ಹೇಳುತ್ತಿದ್ದಾರೆ. 
ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ~ ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.
`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?~ ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್~ ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.
ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್~ ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.
 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್~ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.
ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....~ ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ. 
 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.
ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

Monday, July 16, 2012

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ July 02, 2012

ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾರ್ಥಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.  

ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ. 

ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ `ನೀವೇನು ಸಾಚಾನಾ?` ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು. 

ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು `ಕಪ್ಪುಕುರಿ`ಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ `ಕಪ್ಪುಕುರಿ`ಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?

ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ `ಸಮೂಹ`ವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.

ಮುಖ್ಯವಾಗಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.

ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ` ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
 
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಿಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.

ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
 
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಋಣಭಾರದಲ್ಲಿರುವಂತೆ ಮಾಡಿದೆ.
 
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.

 ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ,ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ. 

ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕರ್ನಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. 

ಪತ್ರಿಕಾಮಂಡಳಿಯ ಏರ್‌ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ `ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ` ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
 
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
 
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್‌ಗಳು ವರದಿ ಮಾಡಲು ಸಾಧ್ಯವಾಗಬಹುದು.

ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. 

ಶಿಕ್ಷಣ, ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್‌ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು. 

ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿರ್ಧಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ `ಆಪರೇಷನ್ ಕಮಲ`ದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
 
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ. 

ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಿಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
 
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಿಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು. 

25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್‌ನಲ್ಲಿಯೇ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
 
ಕ್ಯಾಂಟೀನ್‌ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಿರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.  

ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸರ್ಕಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ. 

ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಿಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀರ್ಮಾನಕ್ಕೆ ಬರಲು ಆತನಿಗೆ ಸಾಧ್ಯವಾಗಬೇಕು.

ಕೊನೆಯದಾಗಿ ಪತ್ರಕರ್ತ ಬೆನ್ನಿಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್‌ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ. 

ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಿರ್ಧಾರವಾಗುವುದು. ಆಧುನಿಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ. 

ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀರ್ಮಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ. 

ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ. 

ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
 
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾರ್ಮಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು. 

ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.