Thursday, March 7, 2013

ಸುಭದ್ರ ಸರ್ಕಾರಕ್ಕೆ ಪ್ರಬುದ್ಧ ಆಶೀರ್ವಾದ

ಬೆಂಗಳೂರು: ಉತ್ತರಪ್ರದೇಶದಲ್ಲಿ ಬೀಸಿರುವ ಬದಲಾವಣೆಯ ಬಿರುಗಾಳಿ ಬಹುಜನ ಸಮಾಜ ಪಕ್ಷವನ್ನು ಕೆಡವಿಹಾಕಿದೆ, ಭಾರತೀಯ ಜನತಾ ಪಕ್ಷ ತಲೆ ಎತ್ತದಂತೆ ಮಾಡಿದೆ, ಕಾಂಗ್ರೆಸ್ ಪಕ್ಷವನ್ನು ಒಂದಿಷ್ಟು ಮುಂದಕ್ಕೆ ತಳ್ಳಿ ಕೈಬಿಟ್ಟಿದೆ ಮತ್ತು ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರನ್ನೆತ್ತಿ ಮುಖ್ಯಮಂತ್ರಿ ಸಿಂಹಾಸನದ ಮೇಲೆ ಕೊಂಡೊಯ್ದು ಕೂರಿಸಿದೆ.
ಉತ್ತರಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ನಿರೀಕ್ಷೆಯಂತೆಯೇ ಬಂದಿದ್ದರೂ `ತ್ರಿಶಂಕು ವಿಧಾನಸಭೆ~ ನಿರ್ಮಾಣವಾಗಬಹುದೆಂಬ ಭವಿಷ್ಯವನ್ನು ಮಾತ್ರ ಆ ರಾಜ್ಯದ ಮತದಾರರು ಸುಳ್ಳಾಗಿಸಿದ್ದಾರೆ. ಯಾರ ಹಂಗಿಗೂ ಬೀಳದೆ ಸ್ವಂತಬಲದಿಂದ ಸರ್ಕಾರ ರಚಿಸುವಷ್ಟು ಬಹುಮತವನ್ನು ಸಮಾಜವಾದಿ ಪಕ್ಷಕ್ಕೆ ನೀಡಿದ್ದಾರೆ. ಈ ಮೂಲಕ ಸುಭದ್ರ ಸರ್ಕಾರ ಬೇಕೆಂಬ ಆಶಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿ ಪ್ರಬುದ್ಧತೆಯನ್ನು ಮೆರೆದಿದ್ದಾರೆ. ಸಮಾಜವಾದಿ ಪಕ್ಷವನ್ನು `ರಿಮೋಟ್ ಕಂಟ್ರೋಲ್~ ಮೂಲಕ ನಿಯಂತ್ರಿಸಬಹುದೆಂಬ ಕಾಂಗ್ರೆಸ್ ಪಕ್ಷದ ದೂರದ ಆಲೋಚನೆಯನ್ನು ವಿಫಲಗೊಳಿಸಿದ್ದಾರೆ.
ಈ ಚುನಾವಣಾ ಫಲಿತಾಂಶ ತಕ್ಷಣದಲ್ಲಿ ರಾಷ್ಟ್ರರಾಜಕಾರಣದ ಮೇಲೆ ಪ್ರಭಾವ ಬೀರದೆ ಇದ್ದರೂ ನಿಧಾನವಾಗಿ ಮತ್ತೊಂದು ಸುತ್ತಿನ ಧ್ರುವೀಕರಣಕ್ಕೆ ಚಾಲನೆ ನೀಡಲೂಬಹುದು.ಮಹತ್ವಾಕಾಂಕ್ಷಿ ಮುಲಾಯಂಸಿಂಗ್ ಯಾದವ್ ರಾಜ್ಯರಾಜಕಾರಣಕ್ಕಷ್ಟೇ ತಮ್ಮನ್ನು ಕಟ್ಟಿಹಾಕಿಕೊಳ್ಳದೆ ಮತ್ತೆ ತೃತೀಯರಂಗವನ್ನು ಕಟ್ಟುವ ಮತ್ತು ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತುದಿಗಾಲಲ್ಲಿ ನಿಲ್ಲಿಸುವ ಪ್ರಯತ್ನ ಮಾಡಬಹುದು. ಜುಲೈ ತಿಂಗಳಿನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆ ಹಾಗೂ ಮುಂದಿನ ವರ್ಷ ಕೆಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳನ್ನು ತೃತೀಯರಂಗದ ಶಕ್ತಿಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಬಹುದು.
ಸಮಾಜವಾದಿ ಪಕ್ಷಕ್ಕೆ ಗೆಲುವು ನಿರೀಕ್ಷಿತವಾದರೂ ಅದರ ಪ್ರಮಾಣ ಅದನ್ನು ಅಚ್ಚರಿಗೀಡುಮಾಡಿರಲೂ ಬಹುದು. ಕಳೆದ ಹತ್ತುವರ್ಷಗಳಲ್ಲಿ ಸಮಾಜವಾದಿ ಪಕ್ಷ ಸೋತರೂ-ಗೆದ್ದರೂ ಮತಪ್ರಮಾಣ ಮಾತ್ರ ಶೇಕಡಾ 25ರಿಂದ ಕೆಳಗಿಳಿದಿರಲಿಲ್ಲ. ಅಪ್ಪ ಗಟ್ಟಿಗೊಳಿಸಿದ್ದ ಹಳೆಬೇರಿಗೆ ಹೊಸ ಚಿಗುರಿನ ರೂಪದಲ್ಲಿ ಜತೆಯಾದ ಮಗ ಅಖಿಲೇಶ್ ಯಾದವ್ ಪಕ್ಷ ಹಿಂದೆಂದೂ ಕಾಣದಂತಹ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿದ್ದಾರೆ.
ಇದಕ್ಕೆ ಕಾರಣಗಳು ಹಲವಾರು. ಹಾದಿ ತಪ್ಪಿಹೋಗಿದ್ದ ಮುಲಾಯಂಸಿಂಗ್ ತನ್ನನ್ನು ತಿದ್ದಿಕೊಂಡು ಮತ್ತೆ ಹಳೆಯ `ನೇತಾಜಿ~ ಆಗಿಬಿಟ್ಟರು. ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಅವರನ್ನು ಜತೆಯಲ್ಲಿ ಸೇರಿಸಿಕೊಂಡ ಕಾರಣಕ್ಕೆ ದೂರ ಹೋಗಿದ್ದ ಮುಸ್ಲಿಮರನ್ನು ಒಲಿಸಿಕೊಂಡು ಅವರು ಮರಳಿ ಕರೆತಂದರು. ಮಾಯಾವತಿ ಅವರಿಂದ ಅವಗಣನೆಗೊಳಗಾಗಿರುವ ರೈತಸಮುದಾಯದ ನಿಜವಾದ ಹಿತರಕ್ಷಕ ಎಂದು ಬಿಂಬಿಸುವ ಮೂಲಕ ಅವರೂ ತಮ್ಮನ್ನು ಹಿಂಬಾಲಿಸುವಂತೆ ಮಾಡಿದರು.
ಅಪ್ಪನ ಪ್ರಯತ್ನಕ್ಕೆ ಜತೆ ನೀಡಿದ ಮಗ ಅಖಿಲೇಶ್ ಕುಖ್ಯಾತ ಕ್ರಿಮಿನಲ್‌ಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ತಮ್ಮ ಪಕ್ಷಕ್ಕಂಟಿದ್ದ `ಗೂಂಡಾಗಿರಿ~ಯ ಕಳಂಕವನ್ನು ತೊಡೆದುಹಾಕಿದರು.ಇಂಗ್ಲೀಷ್ ಶಿಕ್ಷಣ ಮತ್ತು ಕಂಪ್ಯೂಟರ್ ಬಗ್ಗೆ ಪಕ್ಷದ ಪುರಾತನ ಆಲೋಚನೆಯನ್ನು ಬದಲಾಯಿಸಿ ಪಕ್ಷಕ್ಕೆ ಆಧುನಿಕ ಕಾಲಕ್ಕೆ ಹೊಂದುವ ಚಹರೆ ನೀಡಿದರು. ಅಭಿವೃದ್ಧಿಯ ಅಜೆಂಡಾವನ್ನು ಚರ್ಚೆಗೊಡ್ಡುವ ಜತೆಯಲ್ಲಿ ಜಾತಿಯನ್ನು ಮೀರಿ ರಾಜಕೀಯ ಮಾಡುವ ಸಂದೇಶ ನೀಡಿ ಯುವ ಮತದಾರರನ್ನು ಆಕರ್ಷಿಸಿದರು. ಹೊಸಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸುವಂತೆ ನೋಡಿಕೊಂಡರು.
 ಮಾಯಾವತಿ ಸೋಲು ಅವರಿಗೆ ಅನಿರೀಕ್ಷಿತವಾದರೂ ಅವರ ರಾಜಕೀಯ ಮತ್ತು ಆಡಳಿತವನ್ನು ಗಮನಿಸುತ್ತಾ ಬಂದವರಿಗೆ ನಿರೀಕ್ಷಿತವಾಗಿತ್ತು. ಆದರೆ ಉತ್ತರಪ್ರದೇಶದ ಮತದಾರರು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ತಮ್ಮನ್ನು ಸೋಲಿಸುತ್ತಾರೆ ಎಂದು ಆಕೆ ನಿರೀಕ್ಷಿಸಿರಲಿಕ್ಕಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಹುಜನಸಮಾಜ ಪಕ್ಷ ಮೇಲ್ಜಾತಿ ವಿರುದ್ಧದ ತನ್ನ ನಿಲುವನ್ನು ಕೈಬಿಟ್ಟು ನಡೆಸಿದ ಬ್ರಾಹ್ಮಣಜೋಡೊ ಕಾರ್ಯಕ್ರಮದ ರಾಜಕೀಯ ಲಾಭ ಆ ಪಕ್ಷಕ್ಕೆ ಆಗಿತ್ತು. ಆದರೆ ಈ `ಅವಸರದ ಕ್ರಾಂತಿ~ 5 ವರ್ಷಗಳ ಅವಧಿಯಲ್ಲಿಯೇ ವಿಫಲಗೊಂಡಿದೆ. ದಲಿತರು ಮತ್ತು ಬ್ರಾಹ್ಮಣರ ನಡುವೆ ಘರ್ಷಣೆಗಳು ಪ್ರಾರಂಭವಾಗಿದ್ದವು.
ಇದರಿಂದಾಗಿ, ಬಿಎಸ್‌ಪಿ ತೆಕ್ಕೆಗೆ ಬಂದಿದ್ದ `ಅತಿಥಿ~ಗಳು ಹೊರಟು ಹೋದಂತಿದೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಪಕ್ಷವನ್ನು ಶುಚಿಗೊಳಿಸಲು ಹೊರಟ ಮಾಯಾವತಿ ಅವರು 23 ಸಚಿವರನ್ನು ವಜಾಮಾಡಿದ್ದು ಮತ್ತು ಸುಮಾರು 100 ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದು ದೊಡ್ಡ ಮಟ್ಟದಲ್ಲಿ ರಾಜಕೀಯ ಹಾನಿ ಮಾಡಿದೆ. ಇದರಿಂದಾಗಿ ಭುಗಿಲೆದ್ದ ಭಿನ್ನಮತವನ್ನು ಎದುರಿಸುವ ಸಿದ್ಧತೆಯಾಗಲಿ, ಅದಕ್ಕೆ ಬೇಕಾದಷ್ಟು ಸಮಯವಾಗಲಿ ಅವರಲ್ಲಿ ಇರಲಿಲ್ಲ. 
ದಮನಕ್ಕೊಳಗಾದ ದಲಿತರಿಗೆ ರಕ್ಷಣೆ ಮತ್ತು ಆತ್ಮಗೌರವವನ್ನೇನೋ ಮಾಯಾವತಿ ತಂದುಕೊಟ್ಟರು. ಆದರೆ ಅದರ ನಂತರ ಏನು ಎಂಬ ಪ್ರಶ್ನೆಗೆ ಅವರಲ್ಲಿಯೂ ಉತ್ತರ ಇರಲಿಲ್ಲ. ಹದಿನಾರು ವರ್ಷಗಳ ಕಾಲ ಬಿಹಾರದಲ್ಲಿ ಲಾಲುಪ್ರಸಾದ್ ಅವರನ್ನು ಬೆಂಬಲಿಸಿದ ಅಲ್ಲಿನ ಮತದಾರರು ಕೊನೆಗೆ ಕೈಬಿಟ್ಟದ್ದು ಇದೇ ಕಾರಣಕ್ಕಾಗಿ. ಸಾಮಾಜಿಕ ಭದ್ರತೆ ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ದಲಿತರಿಗೆ ನೀಡಿದ ಮಾಯಾವತಿ  ದಲಿತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಪ್ರಯತ್ನ ಮಾಡಲೇ ಇಲ್ಲ. ಇದರ ಬದಲಿಗೆ ಅಂಬೇಡ್ಕರ್ ಉದ್ಯಾನ ಮತ್ತು ಪ್ರತಿಮೆಗಳ ಸ್ಥಾಪನೆಗಾಗಿ ಖರ್ಚುಮಾಡಿದ ಸಾವಿರಾರು ಕೋಟಿ ರೂಪಾಯಿ ದಲಿತೇತರರಲ್ಲಿ ಮಾತ್ರವಲ್ಲ ದಲಿತರಲ್ಲಿಯೂ ಅಸಮಾಧಾನ ಮೂಡಿಸಿರಬಹುದು.
ಭಾರತೀಯ ಜನತಾ ಪಕ್ಷ ಫಲಿತಾಂಶದ ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಿರುವ ಸ್ಥಿತಿಯಲ್ಲಿತ್ತು. ಕಳೆದೆರಡು ದಶಕಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಕೋಮುವಾದದ ಬಣ್ಣ ಬಳಿಯಲು ಹೋಗದೆ ಸಂಯಮ ತೋರಿ ಬಿಜೆಪಿಯನ್ನು ಬಲ್ಲವರೆಲ್ಲರನ್ನೂ ಅಚ್ಚರಿಗೀಡುಮಾಡಿತ್ತು. ಇದರಿಂದಾಗಿ ಸಾಮಾನ್ಯವಾಗಿ ಬಿಜೆಪಿ ಪ್ರಚಾರಕ್ಕೆ ಹಿಮ್ಮೇಳದಂತೆ ಜತೆ ನೀಡುತ್ತಾ ಬಂದಿದ್ದ ಸಾಧು-ಸಂತರೂ ದೂರ ಉಳಿದು ಬಿಟ್ಟರು. ಗೆಲ್ಲುವ ಯಾವ ಕಾರ್ಯತಂತ್ರವೂ ಆ ಪಕ್ಷದಲ್ಲಿರಲಿಲ್ಲ.
ಉತ್ತರಪ್ರದೇಶದ ತನ್ನ ಎರಡನೆ ಹುಟ್ಟೂರು ಎಂದೇ ಹೇಳುತ್ತಿದ್ದ ಅಟಲ ಬಿಹಾರಿ ವಾಜಪೇಯಿ ಹಾಸಿಗೆಯಿಂದ ಎದ್ದು ಬರುವ ಸ್ಥಿತಿಯಲ್ಲಿರಲಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬರುವುದು ಅವರ ಪಕ್ಷದ ಕೆಲವರಿಗೆ ಬೇಕಿರಲಿಲ್ಲ. ಲಾಲ್‌ಕೃಷ್ಣ ಅಡ್ವಾಣಿ ಎಲ್ಲರ ನಾಯಕರಾಗಿ ಉಳಿದಿಲ್ಲ. ನಾಯಕಿಯಾಗಿ ಪ್ರಚಾರದಲ್ಲಿ ತೊಡಗಿದರೂ ಉಮಾ ಭಾರತಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಔದಾರ್ಯವನ್ನು ಪಕ್ಷದ ನಾಯಕರು ತೋರಲಿಲ್ಲ. ಮಧ್ಯಪ್ರದೇಶವನ್ನು ಬಿಟ್ಟು ಬರುವ ಮನಸ್ಸು ಅವರಿಗೂ ಇರಲಿಲ್ಲ. ಆದುದರಿಂದ ಗಂಭೀರ ರಾಜಕಾರಣದಲ್ಲಿ ತೊಡಗಿರುವ ಪಕ್ಷ ತಮ್ಮದು ಎಂಬ ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಿಜೆಪಿಯ ಸದಸ್ಯ ಬಲ ಮತ್ತು ಮತಪ್ರಮಾಣ ಕಡಿಮೆಯಾಗಿದೆ.
ರಾಹುಲ್‌ಗಾಂಧಿಯವರ ಆಕ್ರಮಣಕಾರಿ ಪ್ರಚಾರದ ಮೂಲಕ ಬೆಂಬಲಿಗರ ನಿರೀಕ್ಷೆ ಗಗನಕ್ಕೇರುವಂತೆ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದಕ್ಕೆ ತಕ್ಕ ಸಾಧನೆಯನ್ನು ಮಾಡಿ ತೋರಿಸಲಾಗಲಿಲ್ಲ. ತನ್ನ ಸದಸ್ಯಬಲವನ್ನು ದುಪ್ಪಟ್ಟು ಮಾಡಿಕೊಳ್ಳುವ ಜತೆಯಲ್ಲಿ ಮತಪ್ರಮಾಣವನ್ನು ಹೆಚ್ಚಿಸಿಕೊಂಡರೂ ಉತ್ತರಪ್ರದೇಶದ ರಾಜಕೀಯವನ್ನು ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ನಿಯಂತ್ರಿಸುವಷ್ಟು ಶಕ್ತಿಯನ್ನು ಗಳಿಸಿಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ. ಆದರೆ ಕಳೆದ ಲೋಕಸಭಾ ಚುನಾವಣೆಯಿಂದ ಪ್ರಾರಂಭವಾದ ಪಕ್ಷದ ಬಲವರ್ಧನೆಯ ಪ್ರಕ್ರಿಯೆ ಈ ಚುನಾವಣೆಯಲ್ಲಿಯೂ ಮುಂದುವರಿದಿದೆ. ಇದು ಮತಪ್ರಮಾಣದಲ್ಲಿನ ಹೆಚ್ಚಳದಲ್ಲಿ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 320 ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ದೊಡ್ಡಪ್ರಮಾಣದ ಮತಗಳು ಬೇಕಿತ್ತು. ಆ ಪ್ರಮಾಣದಲ್ಲಿ ಮತ ಬಂದಿಲ್ಲ.
ಕಾಂಗ್ರೆಸ್ ಹಿನ್ನಡೆಗೆ 22 ವರ್ಷಗಳ ರಾಜಕೀಯ ವನವಾಸದಿಂದಾಗಿ ದುರ್ಬಲಗೊಂಡಿರುವ ಪಕ್ಷದ ಸಂಘಟನೆಯೂ ಕಾರಣ.  ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿ ಅವರಿಗೆ ಎದುರಾಗಿ ಬಲಿಷ್ಠವಾದ ಸ್ಥಳೀಯ ನಾಯಕತ್ವವನ್ನು ಬಿಂಬಿಸಲು ಸಾಧ್ಯವಾಗದೆ ಇರುವುದು ಕೂಡಾ ಕಾಂಗ್ರೆಸ್ ಪಕ್ಷದ ದೌರ್ಬಲ್ಯ.
ಮುಸ್ಲಿಮರನ್ನು ಓಲೈಸುವ ಉದ್ದೇಶದಿಂದ ಚುನಾವಣಾ ಪೂರ್ವದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದಾಗಿ ಮಾಡಿದ ಘೋಷಣೆ ಮತ್ತು ಪ್ರಚಾರ ಕಾಲದಲ್ಲಿ ಅದನ್ನು ಬಳಸಿಕೊಂಡ ರೀತಿ ಕೂಡಾ ಆ ಪಕ್ಷಕ್ಕೆ ತಿರುಗುಬಾಣವಾಗಿ ಹೋಯಿತು. ಪ್ರಿಯಾಂಕಾಗಾಂಧಿ ಪ್ರಚಾರ ಮಾಧ್ಯಮದ ಗಮನ ಸೆಳೆದರೂ ಅಮೇಠಿ ಮತ್ತು ರಾಯಬರೇಲಿ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಗೆಲುವು ತಂದುಕೊಡಲಾಗಲಿಲ್ಲ.  2014ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡ ರಾಹುಲ್ ಗಾಂಧಿಯವರಿಗೆ ಫಲಿತಾಂಶ ಉತ್ತೇಜನ ನೀಡುವಂತಹದ್ದಲ್ಲ.
ಚುನಾವಣಾ ಫಲಿತಾಂಶದಲ್ಲಿಯೇ ರಾಜಕಾರಣದ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಮುಲಾಯಂಸಿಂಗ್  ನಿಜಕ್ಕೂ ಬದಲಾಗಿದ್ದಾರೆಯೇ? ಚುನಾವಣೆಯಲ್ಲಿನ ಸೋಲು ಮಾಯಾವತಿಯವರಲ್ಲಿ ಆತ್ಮಾವಲೋಕನಕ್ಕೆ ಪ್ರೇರಣೆ ನೀಡಲಿದೆಯೇ? ಕೋಮುವಾದಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಈಗಿನ ನಿರ್ಧಾರಕ್ಕೆ ಬಿಜೆಪಿ ಬದ್ಧವಾಗಿ ಉಳಿಯಲಿದೆಯೇ? ಆಕ್ರಮಣಕಾರಿ ರಾಜಕೀಯವನ್ನು ಪ್ರಾರಂಭಿಸಿರುವ ಕಾಂಗ್ರೆಸ್ ಪಕ್ಷ ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಲಿದೆಯೇ?- ಇವೆಲ್ಲವೂ ಮುಂದಿನ ದಿನಗಳಲ್ಲಿ ಕೇಳಿಬರಲಿರುವ ಹೊಸ ಪ್ರಶ್ನೆಗಳು.

Sunday, March 3, 2013

ಪ್ರಜಾಪ್ರಭುತ್ವವನ್ನು ಬಾಧಿಸುತ್ತಿರುವ ಪಕ್ಷಾಂತರದ ರೋಗ

ಪಕ್ಷಾಂತರಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದು ಹೇಳುತ್ತಿರುವ ಕಡು ಆಶಾವಾದಿಗಳು ಈಗಲೂ ನಮ್ಮಲ್ಲಿದ್ದಾರೆ. ಸಂವಿಧಾನದ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರೂ ಇದೇ ರೀತಿಯ ವಿಶ್ವಾಸ ಹೊಂದಿದ್ದವರು.
ಈ ಕಾರಣದಿಂದಲೇ ಅವರು `ಯಾವುದೇ ಜನಪ್ರತಿನಿಧಿ ವೈಯಕ್ತಿಕವಾಗಿ ಇಲ್ಲವೇ ಗುಂಪಾಗಿ, ಪಕ್ಷದಿಂದ ಇಲ್ಲವೆ ಮೈತ್ರಿಕೂಟದಿಂದ ಪಕ್ಷಾಂತರ ಹೊಂದಿದರೆ ಅಂತಹವರು ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು, ಪಕ್ಷ ವಿಭಜನೆಗೆ ಕೂಡಾ ಅವಕಾಶ ನೀಡಬಾರದು' ಎಂದು ಶಿಫಾರಸು ಮಾಡಿದ್ದರು.
ಈಗಿನ ಪಕ್ಷಾಂತರ ನಿಷೇಧ ಕಾಯ್ದೆಗೆ ಈ ಶಿಫಾರಸಿನ ಆಧಾರದಲ್ಲಿ  ತಿದ್ದುಪಡಿ ಮಾಡಿದರೆ ಪಕ್ಷಾಂತರ ಪಿಡುಗನ್ನು ನಿಯಂತ್ರಿಸಬಹುದೇನೋ ಎಂಬ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿಯೇ ಕರ್ನಾಟಕದಲ್ಲಿ `ಆಪರೇಷನ್ ಕಮಲ' ನಡೆದು ಅಂತಹ ತಿದ್ದುಪಡಿ ಕೂಡಾ ವ್ಯರ್ಥ ಪ್ರಯತ್ನ ಎಂಬ ಸಂದೇಶ ನೀಡಿದೆ.
ಕರ್ನಾಟಕದಲ್ಲಿ ಪಕ್ಷಾಂತರ ಮಾಡಿದವರು ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿ ಹಿಂದಿನ ಕ್ಷೇತ್ರದಿಂದಲೇ ಮರುಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಸಂವಿಧಾನಕ್ಕೆ ಸವಾಲು ಹಾಕಿದ್ದರು.
ಪಕ್ಷಾಂತರ ಎಂಬ ರೋಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ಬಗೆಯಲ್ಲಿ ದುರ್ಬಲಗೊಳಿಸಿ ನಗೆಪಾಟಲಿಗೀಡುಮಾಡಲಿದೆ ಎಂದು ಬಹುಶಃ ಸಂವಿಧಾನತಜ್ಞರು ಕೂಡಾ ನಿರೀಕ್ಷಿಸಿರಲಿಲ್ಲ. ಈ ಪಿಡುಗನ್ನು ನಿಯಂತ್ರಿಸುವ ಮೊದಲ ಪ್ರಯತ್ನ ನಡೆದದ್ದು 1968ರಲ್ಲಿ.
ಕಾಂಗ್ರೆಸ್ ಸದಸ್ಯ ಪಿ.ಎ.ವೆಂಕಟಸುಬ್ಬಯ್ಯ ಈ ಉದ್ದೇಶದ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಪರಿಣಾಮವಾಗಿ ನೇಮಕಗೊಂಡದ್ದು ವೈ.ಬಿ.ಚವ್ಹಾಣ್ ನೇತೃತ್ವದ ಸಮಿತಿ. ಅದು ನೀಡಿದ ವರದಿ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
1978ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಂಡಿಸಬಯಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡು ವಿರೋಧಿಸಿದ್ದವು. ಕೊನೆಗೆ ಮೊರಾರ್ಜಿ ದೇಸಾಯಿ ಸರ್ಕಾರ ಪಕ್ಷಾಂತರಕ್ಕೆ ಬಲಿಯಾಗಿದ್ದು ಇತಿಹಾಸ.
ಕೊನೆಗೂ ಇದರಲ್ಲಿ ಯಶಸ್ಸು ಕಂಡದ್ದು ರಾಜೀವ್‌ಗಾಂಧಿಯವರು. 1985ರಲ್ಲಿ ಪ್ರಧಾನಿ ರಾಜೀವ್‌ಗಾಂಧಿ ಪಕ್ಷಾಂತರವನ್ನು ನಿಷೇಧಿಸಲು ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಹತ್ತನೆ ಶೆಡ್ಯೂಲ್‌ನಲ್ಲಿ ಸೇರಿಸಲು ಹೊರಟಾಗ  ಅದನ್ನು ಹಿರಿಯ ಸಮಾಜವಾದಿ ಮಧು ಲಿಮಯೆ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಖಿವಾಲ ಬಲವಾಗಿ ವಿರೋಧಿಸಿದ್ದರು.
`ತಮ್ಮ ನಂಬಿಕೆಗೆ ಅನುಗುಣವಾಗಿ ಮತಚಲಾಯಿಸಲು ಸದಸ್ಯರಿಗೆ ಅವಕಾಶ ನಿರಾಕರಿಸಿದರೆ ಅವರನ್ನು ಆಯ್ಕೆ ಮಾಡಿದ ಮತದಾರರ ತೀರ್ಪನ್ನು ಪ್ರಶ್ನಿಸಿದಂತಾಗುತ್ತದೆ. ಸೈದ್ಧಾಂತಿಕ ನೆಲೆಯ ಪಕ್ಷ ವಿಭಜನೆಗೆ ಅವಕಾಶ ನೀಡಬೇಕು, ಇಲ್ಲವಾದರೆ ಪಕ್ಷದಲ್ಲಿ ಕೆಲವು ನಾಯಕರ ಒಡೆತನಕ್ಕೆ ಉಳಿದವರು ಬಯಲಾಗುತ್ತದೆ' ಎಂದು ಸಂಸತ್‌ನಲ್ಲಿ  ಅವರಿಬ್ಬರು ವಾದಿಸಿದ್ದರು.
ಪಕ್ಷಾಂತರ ನಿಷೇಧ ಎನ್ನುವುದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ ಎಂದು ಆ ಮಹಾನುಭಾವರು ನಂಬಿದ್ದರು. ಈ ಕಾರಣಕ್ಕಾಗಿಯೇ ರಾಜೀವ್‌ಗಾಂಧಿಯವರು ಮೂಲಮಸೂದೆಯಲ್ಲಿ ಬದಲಾವಣೆ ಮಾಡಿ ಮೂರನೆ ಒಂದರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ರಾಜೀವ್‌ಗಾಂಧಿ ಜಾರಿಗೆ ತಂದ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಚುನಾಯಿತ ಸದಸ್ಯ ಸ್ವಇಚ್ಛೆಯಿಂದ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷ ಹೊರಡಿಸಿದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದರೆ ಇಲ್ಲವೆ ಪೂರ್ವಾನುಮತಿ ಪಡೆಯದೆ ಗೈರುಹಾಜರಾದರೆ ಅನರ್ಹರಾಗುತ್ತಾರೆ. ಆದರೆ ಒಂದು ಪಕ್ಷದ ಒಟ್ಟು ಸದಸ್ಯ ಬಲದ ಮೂರನೆ ಒಂದರಷ್ಟು ಸದಸ್ಯರು `ಪಕ್ಷಾಂತರ'ಗೊಂಡರೆ ಅದು `ವಿಲೀನ' ಆಗುತ್ತಿತ್ತು.
ಅಂತಹ ಪಕ್ಷಾಂತರಿಗಳನ್ನು ಅನರ್ಹಗೊಳಿಸುವಂತಿರಲಿಲ್ಲ. ಈ ಕಾರಣಕ್ಕಾಗಿಯೇ ಚುನಾವಣಾ ಸುಧಾರಣೆಯ ದಿನೇಶ್ ಗೋಸ್ವಾಮಿ ಸಮಿತಿ, ಕಾನೂನು ಆಯೋಗ ಮತ್ತು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ 52ನೇ ತಿದ್ದುಪಡಿಯನ್ನು ವಿರೋಧಿಸಿದ್ದವು.
`ವೈಯಕ್ತಿಕ ಪಕ್ಷಾಂತರಕ್ಕೆ ಕಡಿವಾಣ ಹಾಕಿ ಸಾಮೂಹಿಕ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದೆ' ಎನ್ನುವುದು ಈ ಕಾಯ್ದೆಯ ವಿರುದ್ಧದ ಮುಖ್ಯ ಆರೋಪವಾಗಿತ್ತು. 2003ರಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ 91ನೇ ತಿದ್ದುಪಡಿ ಮಾಡುವ ಮೂಲಕ ಈ ಅಡ್ಡದಾರಿಯನ್ನು ಮುಚ್ಚುವ ಪ್ರಯತ್ನ ಮಾಡಿತು.
`ವಿಲೀನ'ಗೊಳ್ಳಬೇಕಾದರೆ ಮೂರನೆ ಒಂದರಷ್ಟಲ್ಲ, ಮೂರನೆ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿರಬೇಕು ಎಂದು ಈ ತಿದ್ದುಪಡಿ ಹೇಳಿದೆ. ಇದಾದ ನಂತರವೂ ಪಕ್ಷಾಂತರದ ರೋಗ ನಿಂತಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆಯ ಜಾರಿಯಲ್ಲಿ ಅತ್ಯಂತ ದುರ್ಬಲ ಕೊಂಡಿ ಸಭಾಧ್ಯಕ್ಷರದ್ದು. ಕಾಯ್ದೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ನಡೆದ ಪಕ್ಷಾಂತರ ವಿವಾದಗಳನ್ನೆಲ್ಲ ನೋಡಿದರೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳ ಕೇಂದ್ರ ಸ್ಥಾನದಲ್ಲಿ ಕಾಣುತ್ತಿರುವುದು ಸಭಾಧ್ಯಕ್ಷರು ಮತ್ತು ರಾಜ್ಯಪಾಲರು.
ಕರ್ನಾಟಕವೂ ಸೇರಿದಂತೆ ಮೇಘಾಲಯ,ಮಿಜೋರಾಂ,ನಾಗಲ್ಯಾಂಡ್,ಗೋವಾ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿನ ಪಕ್ಷಾಂತರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಮೂಲಕಾಯ್ದೆಯಲ್ಲಿ ಸಭಾಧ್ಯಕ್ಷರಿಗೆ ಪರಮಾಧಿಕಾರ ಇತ್ತು.
ಅವರು ಕೈಗೊಂಡ ನಿರ್ಧಾರವನ್ನು ನ್ಯಾಯಾಲಯ ಕೂಡಾ ಪ್ರಶ್ನಿಸುವಂತಿರಲಿಲ್ಲ. ಆದರೆ `ಸಭಾಧ್ಯಕ್ಷರ ತೀರ್ಮಾನ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸಭಾಧ್ಯಕ್ಷರ ನಿರಂಕುಶ ಅಧಿಕಾರಕ್ಕೆ ಕಡಿವಾಣ ಬಿದ್ದರೂ ಅವರು ಅಡ್ಡಮಾರ್ಗ ಹಿಡಿಯುವುದನ್ನು ತಪ್ಪಿಸಲು ಆಗಿಲ್ಲ.
ಸಭಾಧ್ಯಕ್ಷರು ಮೂಲತಃ ರಾಜಕಾರಣಿಗಳೇ ಆಗಿರುವುದರಿಂದ ಅವರ ನಿರ್ಧಾರಗಳಲ್ಲಿ ರಾಜಕೀಯ ಒಲವು ನಿಲುವುಗಳ ಪ್ರಭಾವ ಸಹಜ. ಸಾಮಾನ್ಯವಾಗಿ ಆಡಳಿತ ಪಕ್ಷದ ಶಾಸಕರೇ ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಕಾರಣ ಅವರು ತನ್ನ ಪಕ್ಷದ ಹಿತವನ್ನು ಮೀರಿ ಪಕ್ಷಾತೀತವಾಗಿ ನಡೆದುಕೊಳ್ಳುವಷ್ಟು ನ್ಯಾಯನಿಷ್ಠುರರಾಗಿರುವುದು ಸಾಧ್ಯವೂ ಇಲ್ಲವೇನೋ? ಸಭಾಧ್ಯಕ್ಷರ ಹುದ್ದೆಯ ದುರುಪಯೋಗಕ್ಕೆ ಇದಕ್ಕೆ 1993 ಮತ್ತು 1994ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಎರಡು ತೀರ್ಪುಗಳಿಗೆ ಕಾರಣವಾದ ಗೋವಾ ರಾಜ್ಯದ ಪಕ್ಷಾಂತರ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಇರಲಾರದು.
ಆ ಪ್ರಕರಣದಲ್ಲಿ ಸಭಾಧ್ಯಕ್ಷರೇ ಪಕ್ಷಾಂತರಿಗಳ ಜತೆ ಸೇರಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಎಷ್ಟೊ ಸಂದರ್ಭಗಳಲ್ಲಿ ಸಭಾಧ್ಯಕ್ಷರಿಗೆ ಮುಖ್ಯವಾಗಿ ವಿಧಾನಸಭಾಧ್ಯಕ್ಷರಿಗೆ ಪಕ್ಷಾಂತರ ನಿಷೇಧದಂತಹ ಕಾನೂನಿಗೆ ಸಂಬಂಧಿಸಿದ ಸಂಕೀರ್ಣ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅರ್ಹತೆ ಮತ್ತು ತರಬೇತಿ ಇರದೆ ಇರುವುದು ಕೂಡಾ ತಪ್ಪು ನಿರ್ಧಾರಕ್ಕೆ ಕಾರಣವಾಗಿದೆ.
ಈ ಕಾರಣಗಳಿಗಾಗಿಯೇ ಪಕ್ಷಾಂತರ ಮಾಡಿದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡದೆ ಅದನ್ನು ಚುನಾವಣಾ ಆಯೋಗಕ್ಕೆ ಬಿಡಬೇಕು ಎಂದು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ ಶಿಫಾರಸು ಮಾಡಿತ್ತು.
ಪಕ್ಷಾಂತರ ವಿವಾದವನ್ನು ಕೇಂದ್ರಮಟ್ಟದಲ್ಲಿ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯಪಾಲರ ವಿವೇಚನೆಗೆ ನೀಡಬೇಕೆಂಬ ಅಭಿಪ್ರಾಯ ಕೂಡಾ ಇದೆ. ಆದರೆ ಈ ಎರಡು ಸಾಂವಿಧಾನಿಕ ಹುದ್ದೆಗಳು ಕೂಡಾ ಆಡಳಿತ ಪಕ್ಷದ ರಬ್ಬರ್‌ಸ್ಟಾಂಪ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಇರುವ ಕಾರಣ ಈ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ.
ಇದ್ಯಾವುದೂ ಬೇಡ ಎಂದಾದರೆ ಪಕ್ಷಾಂತರ ವಿವಾದ ಇತ್ಯರ್ಥಕ್ಕೆ ಕೇಂದ್ರದಲ್ಲಿ ಸುಪ್ರೀಂಕೋರ್ಟ್ ಮತ್ತು ರಾಜ್ಯಗಳಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಬೇಕೆಂಬ ಸಲಹೆ ಕೂಡಾ ಇದೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಾಗ ಎನ್‌ಡಿಎ ಸರ್ಕಾರ ಇವುಗಳಲ್ಲಿ ಯಾವ ಶಿಫಾರಸು,ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಪಕ್ಷ ವಿರೋಧಿ ಚಟುವಟಿಕೆಯ ವ್ಯಾಖ್ಯಾನ, ಪಕ್ಷಾಂತರ ನಿಷೇಧ ಕಾಯ್ದೆಯ ಇನ್ನೊಂದು ಮುಖ್ಯ ದೋಷ. ಈಗಿನ ಕಾಯ್ದೆಯ ಪ್ರಕಾರ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ನಡೆಸಿದ ನಂತರವಷ್ಟೇ  ಕ್ರಮ ಕೈಗೊಳ್ಳಲು ಅವಕಾಶ ಇರುವುದು. ವಿಪ್ ಉಲ್ಲಂಘನೆಗಾಗಿ ಪಕ್ಷಾಂತರಿ ಸದಸ್ಯರ ಸದಸ್ಯತ್ವ ರದ್ದಾದರೂ ಅವರು ಚಲಾಯಿಸಿದ ಮತಗಳು ಕ್ರಮಬದ್ಧವಾಗಿರುತ್ತದೆ.
ಆ ಮತಗಳಿಂದಲೇ ಒಂದು ಸರ್ಕಾರ ಉಳಿಯಬಹುದು ಇಲ್ಲವೆ ಪತನಗೊಳ್ಳಬಹುದು. ಇದರಿಂದ ಪಕ್ಷಾಂತರಿ ತನ್ನ ಉದ್ದೇಶದಲ್ಲಿ ಯಶಸ್ಸು ಕಂಡಂತಾಗುತ್ತದೆ.
ಇದಲ್ಲದೆ ತಮ್ಮ ಪಕ್ಷದ ನೀತಿಯನ್ನು ವಿರೋಧಿಸುವುದು, ತಮ್ಮ ಪಕ್ಷದ ನಾಯಕರನ್ನು ಟೀಕಿಸುವುದು ಮತ್ತು ವಿರೋಧಪಕ್ಷಗಳ ನಾಯಕರ ಜತೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದು ಪಕ್ಷ ವಿರೋಧಿ ಚಟುವಟಿಕೆ ಎಂಬುದು ನಿಜವಾದರೂ ಕಾನೂನಿನ ಪ್ರಕಾರ ಪಕ್ಷಾಂತರ ಅಲ್ಲ.
ಈ ರಕ್ಷಣೆಯನ್ನು ಬಳಸಿಕೊಂಡೇ ಬಿಜೆಪಿ ಬಂಡುಕೋರರು  ತಮ್ಮ ಸ್ಥಾನ ಉಳಿಸಿಕೊಂಡದ್ದಲ್ಲವೇ?ಪಕ್ಷಾಂತರದ ಪಿಡುಗನ್ನು ನಿಯಂತ್ರಿಸಲು ಕೇವಲ ಪಕ್ಷಾಂತರ ನಿಷೇಧ ಕಾಯ್ದೆಯೊಂದರಿಂದಲೇ ಸಾಧ್ಯವಾಗಲಾರದೆಂಬುದು ಇತ್ತೀಚಿನ ಹಲವಾರು ಪ್ರಕರಣಗಳಿಂದ ಸಾಬೀತಾಗಿದೆ.
ಅಭ್ಯರ್ಥಿಗಳ ಆಯ್ಕೆ ಮಟ್ಟದಲ್ಲಿಯೇ ಜರಡಿ ಹಿಡಿದು ಕಳಂಕಿತರನ್ನು ನಿವಾರಿಸಿಕೊಳ್ಳದಿದ್ದರೆ ಈ ಪಿಡುಗಿನ ನಿವಾರಣೆ ಅಸಾಧ್ಯ. ಇದಕ್ಕಾಗಿ ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಪ್ರಯತ್ನ ಮಾಡಿದಾಗಲೆಲ್ಲ ಪಕ್ಷಭೇದ ಇಲ್ಲದೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ತಾವು ಹೊಂದಿರುವ ಆಸ್ತಿ, ಅಪರಾಧದ ಹಿನ್ನೆಲೆ, ಬಾಕಿ ಇರಿಸಿಕೊಂಡಿರುವ ತೆರಿಗೆ ಮತ್ತು ಸಾಲ ಹಾಗೂ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯವಾಗಿ ಪ್ರಮಾಣಪತ್ರಗಳ ಮೂಲಕ ಸಲ್ಲಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಬರದಂತೆ ತಡೆಯಲು ಆಗಿನ ಎನ್‌ಡಿಎ ಸರ್ಕಾರ ಏನೆಲ್ಲ ಸರ್ಕಸ್ ನಡೆಸಿದೆ ಎನ್ನುವುದನ್ನು ದೇಶದ ಜನತೆ ಗಮನಿಸಿದೆ. ಕೊನೆಗೂ ಛಲಬಿಡದ ಸುಪ್ರೀಂಕೋರ್ಟ್‌ನ ಪ್ರಯತ್ನದಿಂದಾಗಿಯೇ ಅದು ಜಾರಿಗೆ ಬಂದಿದ್ದು.
ಪಕ್ಷಾಂತರಿಗಳ ಜಾತಕವನ್ನು ಪರಿಶೀಲಿಸಿದರೆ ಇವರಲ್ಲಿ ಹೆಚ್ಚಿನವರು ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಮತ್ತು ಜನಪೀಡಕರು ಆಗಿರುವುದು ಕಂಡುಬರುತ್ತದೆ. ಇಂತಹವರು ಚುನಾವಣಾ ಕಣಕ್ಕೆ ಇಳಿಯಲು ಸಾಧ್ಯವಾಗದಂತೆ ಮೂಲದಲ್ಲಿಯೇ ತಡೆಯಲು ಸಾಧ್ಯವಾದರೆ ಮಾತ್ರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದರ ಮೂಲ ಆಶಯಕ್ಕೆ ಭಂಗ ಉಂಟಾಗದಂತೆ ಉಳಿಸಿಕೊಂಡು ಹೋಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸುಧಾರಣೆಗಳ ಪ್ರಸ್ತಾವ ಸಲ್ಲಿಸಿರುವುದು.
ಐದುವರ್ಷಗಳಿಗಿಂತ ಹೆಚ್ಚು ಅವಧಿಯ ಜೈಲು ವಾಸದ ಶಿಕ್ಷೆಗೆ ಅರ್ಹವಾದ ಅಪರಾಧಗಳ ಆರೋಪ ಹೊತ್ತವರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ಅನರ್ಹರೆಂದು ಘೋಷಿಸಬೇಕು, ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳಿಗೆ ವಿಧಿಸಲಾಗುತ್ತಿರುವ ಆರು ತಿಂಗಳ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು, ತಟಸ್ಥ ಇಲ್ಲವೆ ನೆಗೆಟಿವ್ ಮತದಾನಕ್ಕೆ ಅವಕಾಶ ನೀಡಬೇಕು, ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಇಲ್ಲವೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಅಧಿಕಾರವನ್ನು ಚುನಾವಣಾ  ಆಯೋಗಕ್ಕೆನೀಡಬೇಕು ..ಇತ್ಯಾದಿ ಪ್ರಸ್ತಾವಗಳು ಕಳೆದ ಹತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಮತ್ತು ತಿದ್ದುಪಡಿಯ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸಿದ  ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳೇ ನಿರ್ಲಜ್ಚತೆಯಿಂದ ಪಕ್ಷಾಂತರವನ್ನು ಪ್ರೋತ್ಸಾಹಿಸುತ್ತಿರುವಾಗ ಚುನಾವಣಾ ಆಯೋಗದ ಪ್ರಸ್ತಾವಗಳನ್ನು ಜಾರಿಗೆ ತರುವವರು ಯಾರು?