Sunday, March 3, 2013

ಪ್ರಜಾಪ್ರಭುತ್ವವನ್ನು ಬಾಧಿಸುತ್ತಿರುವ ಪಕ್ಷಾಂತರದ ರೋಗ

ಪಕ್ಷಾಂತರಿಗಳಿಗೆ ಜನರೇ ಬುದ್ದಿ ಕಲಿಸುತ್ತಾರೆ ಎಂದು ಹೇಳುತ್ತಿರುವ ಕಡು ಆಶಾವಾದಿಗಳು ಈಗಲೂ ನಮ್ಮಲ್ಲಿದ್ದಾರೆ. ಸಂವಿಧಾನದ ಕಾರ್ಯನಿರ್ವಹಣೆಯ ಪುನರ್‌ಪರಿಶೀಲನಾ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರೂ ಇದೇ ರೀತಿಯ ವಿಶ್ವಾಸ ಹೊಂದಿದ್ದವರು.
ಈ ಕಾರಣದಿಂದಲೇ ಅವರು `ಯಾವುದೇ ಜನಪ್ರತಿನಿಧಿ ವೈಯಕ್ತಿಕವಾಗಿ ಇಲ್ಲವೇ ಗುಂಪಾಗಿ, ಪಕ್ಷದಿಂದ ಇಲ್ಲವೆ ಮೈತ್ರಿಕೂಟದಿಂದ ಪಕ್ಷಾಂತರ ಹೊಂದಿದರೆ ಅಂತಹವರು ಜನಪ್ರತಿನಿಧಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕು, ಪಕ್ಷ ವಿಭಜನೆಗೆ ಕೂಡಾ ಅವಕಾಶ ನೀಡಬಾರದು' ಎಂದು ಶಿಫಾರಸು ಮಾಡಿದ್ದರು.
ಈಗಿನ ಪಕ್ಷಾಂತರ ನಿಷೇಧ ಕಾಯ್ದೆಗೆ ಈ ಶಿಫಾರಸಿನ ಆಧಾರದಲ್ಲಿ  ತಿದ್ದುಪಡಿ ಮಾಡಿದರೆ ಪಕ್ಷಾಂತರ ಪಿಡುಗನ್ನು ನಿಯಂತ್ರಿಸಬಹುದೇನೋ ಎಂಬ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿಯೇ ಕರ್ನಾಟಕದಲ್ಲಿ `ಆಪರೇಷನ್ ಕಮಲ' ನಡೆದು ಅಂತಹ ತಿದ್ದುಪಡಿ ಕೂಡಾ ವ್ಯರ್ಥ ಪ್ರಯತ್ನ ಎಂಬ ಸಂದೇಶ ನೀಡಿದೆ.
ಕರ್ನಾಟಕದಲ್ಲಿ ಪಕ್ಷಾಂತರ ಮಾಡಿದವರು ತಮ್ಮ ಸ್ಥಾನಕ್ಕೆರಾಜೀನಾಮೆ ನೀಡಿ ಹಿಂದಿನ ಕ್ಷೇತ್ರದಿಂದಲೇ ಮರುಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ಸಂವಿಧಾನಕ್ಕೆ ಸವಾಲು ಹಾಕಿದ್ದರು.
ಪಕ್ಷಾಂತರ ಎಂಬ ರೋಗ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ಬಗೆಯಲ್ಲಿ ದುರ್ಬಲಗೊಳಿಸಿ ನಗೆಪಾಟಲಿಗೀಡುಮಾಡಲಿದೆ ಎಂದು ಬಹುಶಃ ಸಂವಿಧಾನತಜ್ಞರು ಕೂಡಾ ನಿರೀಕ್ಷಿಸಿರಲಿಲ್ಲ. ಈ ಪಿಡುಗನ್ನು ನಿಯಂತ್ರಿಸುವ ಮೊದಲ ಪ್ರಯತ್ನ ನಡೆದದ್ದು 1968ರಲ್ಲಿ.
ಕಾಂಗ್ರೆಸ್ ಸದಸ್ಯ ಪಿ.ಎ.ವೆಂಕಟಸುಬ್ಬಯ್ಯ ಈ ಉದ್ದೇಶದ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಅದರ ಪರಿಣಾಮವಾಗಿ ನೇಮಕಗೊಂಡದ್ದು ವೈ.ಬಿ.ಚವ್ಹಾಣ್ ನೇತೃತ್ವದ ಸಮಿತಿ. ಅದು ನೀಡಿದ ವರದಿ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
1978ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಂಡಿಸಬಯಸಿದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡು ವಿರೋಧಿಸಿದ್ದವು. ಕೊನೆಗೆ ಮೊರಾರ್ಜಿ ದೇಸಾಯಿ ಸರ್ಕಾರ ಪಕ್ಷಾಂತರಕ್ಕೆ ಬಲಿಯಾಗಿದ್ದು ಇತಿಹಾಸ.
ಕೊನೆಗೂ ಇದರಲ್ಲಿ ಯಶಸ್ಸು ಕಂಡದ್ದು ರಾಜೀವ್‌ಗಾಂಧಿಯವರು. 1985ರಲ್ಲಿ ಪ್ರಧಾನಿ ರಾಜೀವ್‌ಗಾಂಧಿ ಪಕ್ಷಾಂತರವನ್ನು ನಿಷೇಧಿಸಲು ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಹತ್ತನೆ ಶೆಡ್ಯೂಲ್‌ನಲ್ಲಿ ಸೇರಿಸಲು ಹೊರಟಾಗ  ಅದನ್ನು ಹಿರಿಯ ಸಮಾಜವಾದಿ ಮಧು ಲಿಮಯೆ ಮತ್ತು ಸಂವಿಧಾನ ತಜ್ಞ ನಾನಿ ಪಾಲ್ಖಿವಾಲ ಬಲವಾಗಿ ವಿರೋಧಿಸಿದ್ದರು.
`ತಮ್ಮ ನಂಬಿಕೆಗೆ ಅನುಗುಣವಾಗಿ ಮತಚಲಾಯಿಸಲು ಸದಸ್ಯರಿಗೆ ಅವಕಾಶ ನಿರಾಕರಿಸಿದರೆ ಅವರನ್ನು ಆಯ್ಕೆ ಮಾಡಿದ ಮತದಾರರ ತೀರ್ಪನ್ನು ಪ್ರಶ್ನಿಸಿದಂತಾಗುತ್ತದೆ. ಸೈದ್ಧಾಂತಿಕ ನೆಲೆಯ ಪಕ್ಷ ವಿಭಜನೆಗೆ ಅವಕಾಶ ನೀಡಬೇಕು, ಇಲ್ಲವಾದರೆ ಪಕ್ಷದಲ್ಲಿ ಕೆಲವು ನಾಯಕರ ಒಡೆತನಕ್ಕೆ ಉಳಿದವರು ಬಯಲಾಗುತ್ತದೆ' ಎಂದು ಸಂಸತ್‌ನಲ್ಲಿ  ಅವರಿಬ್ಬರು ವಾದಿಸಿದ್ದರು.
ಪಕ್ಷಾಂತರ ನಿಷೇಧ ಎನ್ನುವುದು ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವವನ್ನು ಮಾತ್ರವಲ್ಲ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ ಎಂದು ಆ ಮಹಾನುಭಾವರು ನಂಬಿದ್ದರು. ಈ ಕಾರಣಕ್ಕಾಗಿಯೇ ರಾಜೀವ್‌ಗಾಂಧಿಯವರು ಮೂಲಮಸೂದೆಯಲ್ಲಿ ಬದಲಾವಣೆ ಮಾಡಿ ಮೂರನೆ ಒಂದರಷ್ಟು ಸದಸ್ಯರ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ರಾಜೀವ್‌ಗಾಂಧಿ ಜಾರಿಗೆ ತಂದ ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಚುನಾಯಿತ ಸದಸ್ಯ ಸ್ವಇಚ್ಛೆಯಿಂದ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷ ಹೊರಡಿಸಿದ ವಿಪ್ ಉಲ್ಲಂಘಿಸಿ ಮತ ಚಲಾಯಿಸಿದರೆ ಇಲ್ಲವೆ ಪೂರ್ವಾನುಮತಿ ಪಡೆಯದೆ ಗೈರುಹಾಜರಾದರೆ ಅನರ್ಹರಾಗುತ್ತಾರೆ. ಆದರೆ ಒಂದು ಪಕ್ಷದ ಒಟ್ಟು ಸದಸ್ಯ ಬಲದ ಮೂರನೆ ಒಂದರಷ್ಟು ಸದಸ್ಯರು `ಪಕ್ಷಾಂತರ'ಗೊಂಡರೆ ಅದು `ವಿಲೀನ' ಆಗುತ್ತಿತ್ತು.
ಅಂತಹ ಪಕ್ಷಾಂತರಿಗಳನ್ನು ಅನರ್ಹಗೊಳಿಸುವಂತಿರಲಿಲ್ಲ. ಈ ಕಾರಣಕ್ಕಾಗಿಯೇ ಚುನಾವಣಾ ಸುಧಾರಣೆಯ ದಿನೇಶ್ ಗೋಸ್ವಾಮಿ ಸಮಿತಿ, ಕಾನೂನು ಆಯೋಗ ಮತ್ತು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ 52ನೇ ತಿದ್ದುಪಡಿಯನ್ನು ವಿರೋಧಿಸಿದ್ದವು.
`ವೈಯಕ್ತಿಕ ಪಕ್ಷಾಂತರಕ್ಕೆ ಕಡಿವಾಣ ಹಾಕಿ ಸಾಮೂಹಿಕ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಿದೆ' ಎನ್ನುವುದು ಈ ಕಾಯ್ದೆಯ ವಿರುದ್ಧದ ಮುಖ್ಯ ಆರೋಪವಾಗಿತ್ತು. 2003ರಲ್ಲಿ ಎನ್‌ಡಿಎ ಸರ್ಕಾರ ಸಂವಿಧಾನಕ್ಕೆ 91ನೇ ತಿದ್ದುಪಡಿ ಮಾಡುವ ಮೂಲಕ ಈ ಅಡ್ಡದಾರಿಯನ್ನು ಮುಚ್ಚುವ ಪ್ರಯತ್ನ ಮಾಡಿತು.
`ವಿಲೀನ'ಗೊಳ್ಳಬೇಕಾದರೆ ಮೂರನೆ ಒಂದರಷ್ಟಲ್ಲ, ಮೂರನೆ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿರಬೇಕು ಎಂದು ಈ ತಿದ್ದುಪಡಿ ಹೇಳಿದೆ. ಇದಾದ ನಂತರವೂ ಪಕ್ಷಾಂತರದ ರೋಗ ನಿಂತಿಲ್ಲ.
ಪಕ್ಷಾಂತರ ನಿಷೇಧ ಕಾಯ್ದೆಯ ಜಾರಿಯಲ್ಲಿ ಅತ್ಯಂತ ದುರ್ಬಲ ಕೊಂಡಿ ಸಭಾಧ್ಯಕ್ಷರದ್ದು. ಕಾಯ್ದೆ ಜಾರಿಗೆ ಬಂದ ನಂತರದ ಅವಧಿಯಲ್ಲಿ ನಡೆದ ಪಕ್ಷಾಂತರ ವಿವಾದಗಳನ್ನೆಲ್ಲ ನೋಡಿದರೆ ಅವುಗಳಲ್ಲಿ ಹೆಚ್ಚಿನ ಪ್ರಕರಣಗಳ ಕೇಂದ್ರ ಸ್ಥಾನದಲ್ಲಿ ಕಾಣುತ್ತಿರುವುದು ಸಭಾಧ್ಯಕ್ಷರು ಮತ್ತು ರಾಜ್ಯಪಾಲರು.
ಕರ್ನಾಟಕವೂ ಸೇರಿದಂತೆ ಮೇಘಾಲಯ,ಮಿಜೋರಾಂ,ನಾಗಲ್ಯಾಂಡ್,ಗೋವಾ, ತಮಿಳುನಾಡು, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿನ ಪಕ್ಷಾಂತರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಮೂಲಕಾಯ್ದೆಯಲ್ಲಿ ಸಭಾಧ್ಯಕ್ಷರಿಗೆ ಪರಮಾಧಿಕಾರ ಇತ್ತು.
ಅವರು ಕೈಗೊಂಡ ನಿರ್ಧಾರವನ್ನು ನ್ಯಾಯಾಲಯ ಕೂಡಾ ಪ್ರಶ್ನಿಸುವಂತಿರಲಿಲ್ಲ. ಆದರೆ `ಸಭಾಧ್ಯಕ್ಷರ ತೀರ್ಮಾನ ನ್ಯಾಯಾಂಗದ ಪರಿಶೀಲನೆಗೆ ಒಳಪಡುತ್ತದೆ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಸಭಾಧ್ಯಕ್ಷರ ನಿರಂಕುಶ ಅಧಿಕಾರಕ್ಕೆ ಕಡಿವಾಣ ಬಿದ್ದರೂ ಅವರು ಅಡ್ಡಮಾರ್ಗ ಹಿಡಿಯುವುದನ್ನು ತಪ್ಪಿಸಲು ಆಗಿಲ್ಲ.
ಸಭಾಧ್ಯಕ್ಷರು ಮೂಲತಃ ರಾಜಕಾರಣಿಗಳೇ ಆಗಿರುವುದರಿಂದ ಅವರ ನಿರ್ಧಾರಗಳಲ್ಲಿ ರಾಜಕೀಯ ಒಲವು ನಿಲುವುಗಳ ಪ್ರಭಾವ ಸಹಜ. ಸಾಮಾನ್ಯವಾಗಿ ಆಡಳಿತ ಪಕ್ಷದ ಶಾಸಕರೇ ಸಭಾಧ್ಯಕ್ಷರಾಗಿ ಆಯ್ಕೆಯಾಗುವ ಕಾರಣ ಅವರು ತನ್ನ ಪಕ್ಷದ ಹಿತವನ್ನು ಮೀರಿ ಪಕ್ಷಾತೀತವಾಗಿ ನಡೆದುಕೊಳ್ಳುವಷ್ಟು ನ್ಯಾಯನಿಷ್ಠುರರಾಗಿರುವುದು ಸಾಧ್ಯವೂ ಇಲ್ಲವೇನೋ? ಸಭಾಧ್ಯಕ್ಷರ ಹುದ್ದೆಯ ದುರುಪಯೋಗಕ್ಕೆ ಇದಕ್ಕೆ 1993 ಮತ್ತು 1994ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಎರಡು ತೀರ್ಪುಗಳಿಗೆ ಕಾರಣವಾದ ಗೋವಾ ರಾಜ್ಯದ ಪಕ್ಷಾಂತರ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇರೆ ಇರಲಾರದು.
ಆ ಪ್ರಕರಣದಲ್ಲಿ ಸಭಾಧ್ಯಕ್ಷರೇ ಪಕ್ಷಾಂತರಿಗಳ ಜತೆ ಸೇರಿ ಮುಖ್ಯಮಂತ್ರಿಗಳಾಗಿಬಿಟ್ಟಿದ್ದರು. ಎಷ್ಟೊ ಸಂದರ್ಭಗಳಲ್ಲಿ ಸಭಾಧ್ಯಕ್ಷರಿಗೆ ಮುಖ್ಯವಾಗಿ ವಿಧಾನಸಭಾಧ್ಯಕ್ಷರಿಗೆ ಪಕ್ಷಾಂತರ ನಿಷೇಧದಂತಹ ಕಾನೂನಿಗೆ ಸಂಬಂಧಿಸಿದ ಸಂಕೀರ್ಣ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅರ್ಹತೆ ಮತ್ತು ತರಬೇತಿ ಇರದೆ ಇರುವುದು ಕೂಡಾ ತಪ್ಪು ನಿರ್ಧಾರಕ್ಕೆ ಕಾರಣವಾಗಿದೆ.
ಈ ಕಾರಣಗಳಿಗಾಗಿಯೇ ಪಕ್ಷಾಂತರ ಮಾಡಿದ ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡದೆ ಅದನ್ನು ಚುನಾವಣಾ ಆಯೋಗಕ್ಕೆ ಬಿಡಬೇಕು ಎಂದು ರಾಷ್ಟ್ರೀಯ ಸಂವಿಧಾನ ಕಾರ್ಯನಿರ್ವಹಣಾ ಪುನರ್‌ಪರಿಶೀಲನಾ ಆಯೋಗ ಶಿಫಾರಸು ಮಾಡಿತ್ತು.
ಪಕ್ಷಾಂತರ ವಿವಾದವನ್ನು ಕೇಂದ್ರಮಟ್ಟದಲ್ಲಿ ರಾಷ್ಟ್ರಪತಿಗಳಿಗೆ ಮತ್ತು ರಾಜ್ಯಮಟ್ಟದಲ್ಲಿ ರಾಜ್ಯಪಾಲರ ವಿವೇಚನೆಗೆ ನೀಡಬೇಕೆಂಬ ಅಭಿಪ್ರಾಯ ಕೂಡಾ ಇದೆ. ಆದರೆ ಈ ಎರಡು ಸಾಂವಿಧಾನಿಕ ಹುದ್ದೆಗಳು ಕೂಡಾ ಆಡಳಿತ ಪಕ್ಷದ ರಬ್ಬರ್‌ಸ್ಟಾಂಪ್‌ಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪ ಇರುವ ಕಾರಣ ಈ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ಸಿಕ್ಕಿಲ್ಲ.
ಇದ್ಯಾವುದೂ ಬೇಡ ಎಂದಾದರೆ ಪಕ್ಷಾಂತರ ವಿವಾದ ಇತ್ಯರ್ಥಕ್ಕೆ ಕೇಂದ್ರದಲ್ಲಿ ಸುಪ್ರೀಂಕೋರ್ಟ್ ಮತ್ತು ರಾಜ್ಯಗಳಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನೊಳಗೊಂಡ ಸ್ವತಂತ್ರ ಸಮಿತಿಯನ್ನು ರಚಿಸಬೇಕೆಂಬ ಸಲಹೆ ಕೂಡಾ ಇದೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಾಗ ಎನ್‌ಡಿಎ ಸರ್ಕಾರ ಇವುಗಳಲ್ಲಿ ಯಾವ ಶಿಫಾರಸು,ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಪಕ್ಷ ವಿರೋಧಿ ಚಟುವಟಿಕೆಯ ವ್ಯಾಖ್ಯಾನ, ಪಕ್ಷಾಂತರ ನಿಷೇಧ ಕಾಯ್ದೆಯ ಇನ್ನೊಂದು ಮುಖ್ಯ ದೋಷ. ಈಗಿನ ಕಾಯ್ದೆಯ ಪ್ರಕಾರ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ ನಡೆಸಿದ ನಂತರವಷ್ಟೇ  ಕ್ರಮ ಕೈಗೊಳ್ಳಲು ಅವಕಾಶ ಇರುವುದು. ವಿಪ್ ಉಲ್ಲಂಘನೆಗಾಗಿ ಪಕ್ಷಾಂತರಿ ಸದಸ್ಯರ ಸದಸ್ಯತ್ವ ರದ್ದಾದರೂ ಅವರು ಚಲಾಯಿಸಿದ ಮತಗಳು ಕ್ರಮಬದ್ಧವಾಗಿರುತ್ತದೆ.
ಆ ಮತಗಳಿಂದಲೇ ಒಂದು ಸರ್ಕಾರ ಉಳಿಯಬಹುದು ಇಲ್ಲವೆ ಪತನಗೊಳ್ಳಬಹುದು. ಇದರಿಂದ ಪಕ್ಷಾಂತರಿ ತನ್ನ ಉದ್ದೇಶದಲ್ಲಿ ಯಶಸ್ಸು ಕಂಡಂತಾಗುತ್ತದೆ.
ಇದಲ್ಲದೆ ತಮ್ಮ ಪಕ್ಷದ ನೀತಿಯನ್ನು ವಿರೋಧಿಸುವುದು, ತಮ್ಮ ಪಕ್ಷದ ನಾಯಕರನ್ನು ಟೀಕಿಸುವುದು ಮತ್ತು ವಿರೋಧಪಕ್ಷಗಳ ನಾಯಕರ ಜತೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದು ಪಕ್ಷ ವಿರೋಧಿ ಚಟುವಟಿಕೆ ಎಂಬುದು ನಿಜವಾದರೂ ಕಾನೂನಿನ ಪ್ರಕಾರ ಪಕ್ಷಾಂತರ ಅಲ್ಲ.
ಈ ರಕ್ಷಣೆಯನ್ನು ಬಳಸಿಕೊಂಡೇ ಬಿಜೆಪಿ ಬಂಡುಕೋರರು  ತಮ್ಮ ಸ್ಥಾನ ಉಳಿಸಿಕೊಂಡದ್ದಲ್ಲವೇ?ಪಕ್ಷಾಂತರದ ಪಿಡುಗನ್ನು ನಿಯಂತ್ರಿಸಲು ಕೇವಲ ಪಕ್ಷಾಂತರ ನಿಷೇಧ ಕಾಯ್ದೆಯೊಂದರಿಂದಲೇ ಸಾಧ್ಯವಾಗಲಾರದೆಂಬುದು ಇತ್ತೀಚಿನ ಹಲವಾರು ಪ್ರಕರಣಗಳಿಂದ ಸಾಬೀತಾಗಿದೆ.
ಅಭ್ಯರ್ಥಿಗಳ ಆಯ್ಕೆ ಮಟ್ಟದಲ್ಲಿಯೇ ಜರಡಿ ಹಿಡಿದು ಕಳಂಕಿತರನ್ನು ನಿವಾರಿಸಿಕೊಳ್ಳದಿದ್ದರೆ ಈ ಪಿಡುಗಿನ ನಿವಾರಣೆ ಅಸಾಧ್ಯ. ಇದಕ್ಕಾಗಿ ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಪ್ರಯತ್ನ ಮಾಡಿದಾಗಲೆಲ್ಲ ಪಕ್ಷಭೇದ ಇಲ್ಲದೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಾ ಬಂದಿದ್ದಾರೆ.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ತಾವು ಹೊಂದಿರುವ ಆಸ್ತಿ, ಅಪರಾಧದ ಹಿನ್ನೆಲೆ, ಬಾಕಿ ಇರಿಸಿಕೊಂಡಿರುವ ತೆರಿಗೆ ಮತ್ತು ಸಾಲ ಹಾಗೂ ಶೈಕ್ಷಣಿಕ ಅರ್ಹತೆಗಳನ್ನು ಕಡ್ಡಾಯವಾಗಿ ಪ್ರಮಾಣಪತ್ರಗಳ ಮೂಲಕ ಸಲ್ಲಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಬರದಂತೆ ತಡೆಯಲು ಆಗಿನ ಎನ್‌ಡಿಎ ಸರ್ಕಾರ ಏನೆಲ್ಲ ಸರ್ಕಸ್ ನಡೆಸಿದೆ ಎನ್ನುವುದನ್ನು ದೇಶದ ಜನತೆ ಗಮನಿಸಿದೆ. ಕೊನೆಗೂ ಛಲಬಿಡದ ಸುಪ್ರೀಂಕೋರ್ಟ್‌ನ ಪ್ರಯತ್ನದಿಂದಾಗಿಯೇ ಅದು ಜಾರಿಗೆ ಬಂದಿದ್ದು.
ಪಕ್ಷಾಂತರಿಗಳ ಜಾತಕವನ್ನು ಪರಿಶೀಲಿಸಿದರೆ ಇವರಲ್ಲಿ ಹೆಚ್ಚಿನವರು ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆ ಹೊಂದಿದವರು ಮತ್ತು ಜನಪೀಡಕರು ಆಗಿರುವುದು ಕಂಡುಬರುತ್ತದೆ. ಇಂತಹವರು ಚುನಾವಣಾ ಕಣಕ್ಕೆ ಇಳಿಯಲು ಸಾಧ್ಯವಾಗದಂತೆ ಮೂಲದಲ್ಲಿಯೇ ತಡೆಯಲು ಸಾಧ್ಯವಾದರೆ ಮಾತ್ರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅದರ ಮೂಲ ಆಶಯಕ್ಕೆ ಭಂಗ ಉಂಟಾಗದಂತೆ ಉಳಿಸಿಕೊಂಡು ಹೋಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಸುಧಾರಣೆಗಳ ಪ್ರಸ್ತಾವ ಸಲ್ಲಿಸಿರುವುದು.
ಐದುವರ್ಷಗಳಿಗಿಂತ ಹೆಚ್ಚು ಅವಧಿಯ ಜೈಲು ವಾಸದ ಶಿಕ್ಷೆಗೆ ಅರ್ಹವಾದ ಅಪರಾಧಗಳ ಆರೋಪ ಹೊತ್ತವರನ್ನು ಚುನಾವಣೆಯಲ್ಲಿ ಸ್ಪರ್ಧೆಗೆ ಅನರ್ಹರೆಂದು ಘೋಷಿಸಬೇಕು, ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳಿಗೆ ವಿಧಿಸಲಾಗುತ್ತಿರುವ ಆರು ತಿಂಗಳ ಶಿಕ್ಷೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು.
ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು, ತಟಸ್ಥ ಇಲ್ಲವೆ ನೆಗೆಟಿವ್ ಮತದಾನಕ್ಕೆ ಅವಕಾಶ ನೀಡಬೇಕು, ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಲು ರಾಷ್ಟ್ರಪತಿ ಇಲ್ಲವೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಅಧಿಕಾರವನ್ನು ಚುನಾವಣಾ  ಆಯೋಗಕ್ಕೆನೀಡಬೇಕು ..ಇತ್ಯಾದಿ ಪ್ರಸ್ತಾವಗಳು ಕಳೆದ ಹತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿವೆ.
ಆದರೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಮತ್ತು ತಿದ್ದುಪಡಿಯ ಮೂಲಕ ಅದನ್ನು ಇನ್ನಷ್ಟು ಬಲಗೊಳಿಸಿದ  ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಎರಡು ರಾಷ್ಟ್ರೀಯ ಪಕ್ಷಗಳೇ ನಿರ್ಲಜ್ಚತೆಯಿಂದ ಪಕ್ಷಾಂತರವನ್ನು ಪ್ರೋತ್ಸಾಹಿಸುತ್ತಿರುವಾಗ ಚುನಾವಣಾ ಆಯೋಗದ ಪ್ರಸ್ತಾವಗಳನ್ನು ಜಾರಿಗೆ ತರುವವರು ಯಾರು?

No comments:

Post a Comment