Friday, April 26, 2013

ರಾಜ್ಯ ನಾಯಕತ್ವ ಕಳೆದುಕೊಳ್ಳಲಿರುವ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ:  ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದ ಶಿವಮೊಗ್ಗ ಜಿಲ್ಲೆ ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ಆ ಸ್ಥಾನವನ್ನು ಕಳೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ನಾಲ್ವರು ಮುಖ್ಯಮಂತ್ರಿಗಳು ಮತ್ತು ಆಡಳಿತಾರೂಢ ಪಕ್ಷಕ್ಕೆ ಸಿಂಹಸ್ವಪ್ನರಾಗಿದ್ದ ಸಮಾಜವಾದಿ ನಾಯಕ ಶಾಂತ
ವೇರಿ ಗೋಪಾಲಗೌಡರನ್ನು ರಾಜ್ಯಕ್ಕೆ ನೀಡಿದ ಶಿವಮೊಗ್ಗ ಜಿಲ್ಲೆಯು ರಾಜಕೀಯ ನಾಯಕತ್ವದ ಓಟದಲ್ಲಿ ಸದಾ ಪೈಪೋಟಿ ಕೊಡುತ್ತ ಬಂದಿದೆ.
ಕಾಗೋಡು ಸತ್ಯಾಗ್ರಹ ಮತ್ತು ರೈತ ಚಳವಳಿಯ ಹಿನ್ನೆಲೆಯಿಂದಾಗಿ ರಾಜಕೀಯವಾಗಿ ಜಾಗೃತವಾಗಿದ್ದ ಜಿಲ್ಲೆಯೂ ಹೌದು. ಈ ವಿಶೇಷಣಗಳನ್ನೆಲ್ಲ ಹೊಂದಿದ್ದ ಜಿಲ್ಲೆಯ ರಾಜಕೀಯ ಭವಿಷ್ಯ ಇದೇ ಮೊದಲ ಬಾರಿ ಮಂಕಾಗಿಹೋಗುವ ಭೀತಿ ಎದುರಿಸುತ್ತಿದೆ.
ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರ ಕೈಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಸಮಾಜವಾದಿ ಚಳವಳಿಯ ಮೂಲಕ ಅವರು ಇಡೀ ರಾಜ್ಯದ ಮನೆಮಾತಾಗಿದ್ದರು. ಅವರ ನಂತರದ ದಿನಗಳಲ್ಲಿ ರಾಜಕೀಯ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಕಾಗೋಡು ತಿಮ್ಮಪ್ಪ ಮೊದಲಾದವರು ಅದೇ ಚಳವಳಿಯ ಉತ್ಪನ್ನಗಳು.
ಕಡಿದಾಳು ಮಂಜಪ್ಪನವರು ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪ್ರಾಮಾಣಿಕ ಜೀವನದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದವರು. ಅದರ ನಂತರ ಪ್ರಾರಂಭವಾಗಿದ್ದು ಸಾರೆಕೊಪ್ಪ ಬಂಗಾರಪ್ಪ ಎಂಬ ಬಿರುಗಾಳಿ ನಾಯಕನ ಶಕೆ. ಅವರ ರಾಜಕೀಯ ಅವಸಾನದೊಂದಿಗೆ ಮೂಡಿ ಬಂದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇವರಿಬ್ಬರ ನಡುವೆ ಕಾಣಿಸಿಕೊಂಡ ಜೆ.ಎಚ್. ಪಟೇಲ್ ಜನತಾ ಪರಿವಾರದ ಪ್ರಮುಖ ನಾಯಕರಾಗಿ ಕೊನೆಗೆ ಮುಖ್ಯಮಂತ್ರಿಯೂ ಆದವರು. ಈಗ ಉಳಿದಿರುವವರು ಬಿ.ಎಸ್. ಯಡಿಯೂರಪ್ಪ ಮಾತ್ರ. ಇವರು `ಮಾಡು ಇಲ್ಲವೆ ಮಡಿ' ಎನ್ನುವಷ್ಟು ನಿರ್ಣಾಯಕವಾದ ಚುನಾವಣಾ ರಣರಂಗದ ಮಧ್ಯದಲ್ಲಿದ್ದಾರೆ.
ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ. ಕಿರುವಯಸ್ಸಿಗೆ ಶಾಸಕರಾಗಿ ನಂತರ ಸಚಿವರೂ ಆಗಿಬಿಟ್ಟ ಬಂಗಾರಪ್ಪ 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಗಳ ಕಣ್ಮಣಿಯಾಗಿದ್ದರು. ಕ್ರಾಂತಿರಂಗದ ನೇತೃತ್ವ ವಹಿಸಿ ರಾಜ್ಯದ ಮೊದಲ ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದರೂ ಪರಿಸ್ಥಿತಿಯ ಪಿತೂರಿಯಿಂದಾಗಿ ಮುಖ್ಯಮಂತ್ರಿಯಾಗಲು ಮಾತ್ರ ಆಗ ಸಾಧ್ಯವಾಗಿರಲಿಲ್ಲ. ಆ ಚುನಾವಣಾ ಕಾಲದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರ ಸೊರಬಕ್ಕೆ ಭೇಟಿ ನೀಡದೆ ಗೆದ್ದವರು.
ತಮ್ಮ ಪ್ರಚಾರದ ಅಂಗವಾಗಿ ಮನೆಮನೆಗೂ ಕಳುಹಿಸಿಕೊಟ್ಟ ಕಪ್ಪುಕನ್ನಡ ಮತ್ತು ಕಪ್ಪು ಅಂಗಿ ಧರಿಸಿದ್ದ ಅವರ ಭಾವಚಿತ್ರ ಸೊರಬದ ಹಲವಾರು ಮನೆಗಳ ದೇವರ ಪೋಟೊಗಳ ಸ್ಟ್ಯಾಂಡ್‌ನಲ್ಲಿ ಈಗಲೂ ಇವೆ. ನಂತರದ ದಿನಗಳಲ್ಲಿ ಭ್ರಷ್ಟಾಚಾರದ ಆರೋಪ, ಬಂಡಾಯ, ಪಕ್ಷಾಂತರಗಳು ಅವರ ರಾಜಕೀಯ ಜೀವನದ ಭಾಗವೇ ಆಗಿಹೋಯಿತು. ಮುಖ್ಯಮಂತ್ರಿಯಾಗಿ, ಸಚಿವರಾಗಿ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ ಅವಧಿಗೆ ಆಗಿದ್ದರೂ ಬಂಗಾರಪ್ಪನವರ ಹೆಸರು ಗೊತ್ತಿಲ್ಲದವರು ರಾಜ್ಯದಲ್ಲಿ ಇರಲಾರರು. ಕೊನೆಯವರೆಗೂ ರಾಜಕೀಯವಾಗಿ ತಮ್ಮನ್ನು ಕಡೆಗಣಿಸಲಾಗದ ರೀತಿಯಲ್ಲಿ ಅವರು ಬದುಕಿದವರು. ಅವರ ರಾಜಕೀಯ ಜೀವನದ ಅಂತ್ಯ ಸೋಲುಗಳಲ್ಲಿ ಕೊನೆಗೊಂಡರೂ ಬದುಕಿದ್ದರೆ ಮತ್ತೆ ಈ ಬಾರಿ ಚುನಾವಣೆಯ ಕಣದಲ್ಲಿರುತ್ತಿದ್ದರೇನೋ?
ಛಲದಂಕಮಲ್ಲ: ಸ್ವಂತ ಊರು ಶಿವಮೊಗ್ಗ ಅಲ್ಲದೆ ಇದ್ದರೂ ಮನೆ ಅಳಿಯನಾಗಿ ಬಂದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿ ರಾಜ್ಯದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದ ಬಿ.ಎಸ್.ಯಡಿಯೂರಪ್ಪ ಅವರು ಬಂಗಾರಪ್ಪನವರ ರೀತಿಯಲ್ಲಿಯೇ ಛಲದಂಕಮಲ್ಲ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ  ಅಧಿಕಾರಕ್ಕೆ ತಂದವರೆಂಬ ಹೆಗ್ಗಳಿಕೆಗೂ ಪಾತ್ರರಾದವರು. ರಾಜಕೀಯ ಹೋರಾಟ, ಗೆಲುವಿನ ಸಾಧನೆ, ಭ್ರಷ್ಟಾಚಾರದ ಆರೋಪ, ಬಂಡಾಯದ ಬೆದರಿಕೆ, ಪಕ್ಷಾಂತರ ಹೀಗೆ ಇವರು ಸದಾ ಸುದ್ದಿಯ ಬೆಳಕಲ್ಲಿದ್ದವರು.
ಯಡಿಯೂರಪ್ಪನವರು ಭವಿಷ್ಯದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಬೇಕಾದರೆ ಶಿವಮೊಗ್ಗ ಜಿಲ್ಲೆಯನ್ನು ಅವರು ಗೆಲ್ಲಬೇಕು. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಶಿಕಾರಿಪುರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಕರ್ನಾಟಕ ಜನತಾ ಪಕ್ಷದ (ಕೆಜೆಪಿ)  ಅಭ್ಯರ್ಥಿಗಳು ಯಾರೂ ಕಾಣುತ್ತಿಲ್ಲ. ಶಿಕಾರಿಪುರದಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಅವರಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ.
ಮೂರು ದಶಕಗಳಲ್ಲಿ ಶಿವಮೊಗ್ಗ ಮೂಲದ ಈ ಇಬ್ಬರು ನಾಯಕರು ರಾಜ್ಯ ರಾಜಕಾರಣವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿಯಂತ್ರಿಸುತ್ತಾ ಬಂದಿದ್ದಾರೆ. ಎಂಬತ್ತರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಂಗಾರಪ್ಪನವರ ಬೆಂಬಲಿಗರು ಆರಿಸಿ ಬರುತ್ತಿದ್ದರೆ, ಎರಡು ಸಾವಿರದ ದಶಕದಲ್ಲಿ ಯಡಿಯೂರಪ್ಪನವರ ಬೆಂಬಲಿಗರು ಜಿಲ್ಲೆಯ ಬಹುತೇಕ ಸ್ಥಾನಗಳನ್ನು ಗೆದ್ದಿದ್ದರು. ಈ ಇಬ್ಬರು ನಾಯಕರಿಗೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯುವಂತಹ ಶಕ್ತಿ ನೀಡಿದ್ದು ತವರು ಜಿಲ್ಲೆಯಲ್ಲಿ ಮಾಡಿದ್ದ ಸಾಧನೆ.
ಇತ್ತೀಚಿನ ಈ ಇಬ್ಬರು ಹಿರಿಯ ನಾಯಕರ  ರೀತಿಯಲ್ಲಿಯೇ ರಾಜ್ಯಕ್ಕೆ ನಾಯಕತ್ವ ನೀಡಬಲ್ಲ ಇನ್ನೊಬ್ಬ ನಾಯಕ ಸದ್ಯ ಜಿಲ್ಲೆಯಲ್ಲಿರುವ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಹಿರಿತಲೆ -ಕಾಗೋಡು ತಿಮ್ಮಪ್ಪ ಮಾತ್ರ. ಗೆಲುವಿನ ಮೂಲಕ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬ ಆಸೆ ಇಟ್ಟುಕೊಂಡಂತಿರುವ ಇವರಲ್ಲಿ ಹೆಚ್ಚಿನ ಮಹತ್ವಾಕಾಂಕ್ಷೆ ಇಲ್ಲ.
82 ವರ್ಷ ವಯಸ್ಸಿನ ಈ ಹಿರಿಯನಲ್ಲಿ ಅಂತಹ ಚೈತನ್ಯವೂ ಉಳಿದ ಹಾಗಿಲ್ಲ. ಸಾಗರದ ಮಾಲ್ವೆ ಎಂಬ ಊರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಗೋಡು ಅಲ್ಲಿ ಸೇರಿದ್ದ ಬೆಂಬಲಿಗರನ್ನು ಎದುರಿಗೆ ಕರೆದು `ಇವರೆಲ್ಲ ಹಳೆಯ ತಲೆಮಾರಿನವರು, ಅದರ ನಂತರದವರು ಇವರು, ಇವರ ನಂತರ ಈ ಮಕ್ಕಳು' ಎಂದು ವರ್ಗವಿಂಗಡಣೆ ಮಾಡಿ ನಮಗೆ ಪರಿಚಯಿಸಿದರು.
ಮೊದಲ ತಲೆಮಾರಿನ ಹಿರಿಯರ ಮಾತು ಮತ್ತು ಬಾಗಿದ ತಲೆಗಳು ಈಗಲೂ ನಾಯಕನ ಬಗ್ಗೆ ಪ್ರೀತಿ-ಗೌರವವನ್ನು ಸೂಚಿಸುವಂತಿತ್ತು. ಹಳೆಯ ನೆನೆಪುಗಳೇ ಇಲ್ಲದ ಯುವಕರಲ್ಲಿ ಒಂದು ಬಗೆಯ ನಿರಾಸಕ್ತಿ, ಉಳಿದಂತೆ ಮಕ್ಕಳು ಸೇರಿರುವುದು ಹಂಚುವ ಚಾಕಲೇಟ್‌ಗಳಿಗಾಗಿ ಮಾತ್ರ.
ಚಳವಳಿ ಪ್ರೇರಿತ ರಾಜಕೀಯದ ಮೂಲಕ ಬಂದ ಕಾಗೋಡು ತಿಮ್ಮಪ್ಪನವರಂತಹವರು  ತಮ್ಮ ಸಂಬಂಧಿ ಬೇಳೂರು ಗೋಪಾಲಕೃಷ್ಣ ಎಂಬ ಗಣಿಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ಅಭ್ಯರ್ಥಿ ಎದುರು ಕಳೆದೆರಡು ಚುನಾವಣೆಗಳನ್ನು ಸೋತಿರುವುದು ಶಿವಮೊಗ್ಗ ಜಿಲ್ಲೆಯ ರಾಜಕೀಯ ಸಾಗುತ್ತಿರುವ ಹಾದಿ  ತೋರಿಸುವಂತಿದೆ. ಇದು ತಿಮ್ಮಪ್ಪನವರು ಪರಿಚಯಿಸಿದ  ಮೂರು ತಲೆಮಾರುಗಳ ಪ್ರತಿಕ್ರಿಯೆಗಳಿಂದಲೂ ಸ್ಪಷ್ಟವಾಗುತ್ತದೆ.
ಬಿಜೆಪಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತನ್ನ ಗೆಲುವಿಗಾಗಿಯೇ ಏದುಸಿರುಬಿಡುತ್ತಿದ್ದಾರೆ. ಇನ್ನು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷದ ನಾಯಕರಾಗುವುದು ಅಷ್ಟರಲ್ಲಿಯೇ ಇದೆ. ಬಂಗಾರಪ್ಪನವರ ಇಬ್ಬರು ಮಕ್ಕಳಾದ ಕುಮಾರ್ ಮತ್ತು ಮಧು ಚುನಾವಣಾ ಕಣದಲ್ಲಿದ್ದರೂ ಮನೆಯೊಳಗಿನ ಜಗಳದಿಂದಾಗಿ ಪರಸ್ಪರ ಕಾದಾಡುತ್ತ ತಮ್ಮ ರಾಜಕೀಯ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಂಗಾರಪ್ಪನವರ ಶಿಷ್ಯರಾಗಿದ್ದ ಎಚ್. ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಗೆದ್ದರೆ ಸಾಕೆನಿಸಿದೆ.
ಇದೇ ರೀತಿ ಯಡಿಯೂರಪ್ಪನವರ ಮಗ ರಾಘವೇಂದ್ರ ರಾಜಕೀಯ ಪ್ರವೇಶದ ಪ್ರಾರಂಭದ ಹಂತದಲ್ಲಿಯೇ ಭ್ರಷ್ಟಾಚಾರ, ಪಕ್ಷಾಂತರದ ಆರೋಪಗಳನ್ನು ಹೊತ್ತುಕೊಂಡಿದ್ದಾರೆ. ಇವರಲ್ಲಿ ಯಾರೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯಬಲ್ಲರೆಂಬ ನಿರೀಕ್ಷೆಯನ್ನು ಹುಟ್ಟಿಸುವುದಿಲ್ಲ. ಅಂತಹ ಮಹತ್ವಾಕಾಂಕ್ಷೆಯೂ ಅವರಲ್ಲಿದ್ದ ಹಾಗೆ ಕಾಣುವುದಿಲ್ಲ.
ರಾಜ್ಯ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಯ ಪತಾಕೆ ಎತ್ತಿಹಿಡಿಯುವ ಸಾಮರ್ಥ್ಯ ಈಗಲೂ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ 1994ರ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಎದುರಿಸಿದ ಬಂಗಾರಪ್ಪನವರು ಅಧಿಕಾರ ಗಳಿಸುವಷ್ಟು ಸ್ಥಾನಗಳನ್ನು ಗಳಿಸದೆ ಇದ್ದರೂ ಕಾಂಗ್ರೆಸ್ ಪಕ್ಷದ ಪರಾಭವಕ್ಕೆ ಕಾರಣವಾಗಿದ್ದರು. ಯಡಿಯೂರಪ್ಪನವರೂ ಅದೇ ಹಾದಿಯಲ್ಲಿದ್ದಾರೆ.
ಬಂಗಾರಪ್ಪನವರಂತೆ ಗೆದ್ದು ಅಧಿಕಾರಕ್ಕೆ ಬರುವಂತಹ ಶಕ್ತಿ ಯಡಿಯೂರಪ್ಪನವರಿಗೂ ಈಗ ಇಲ್ಲದೆ ಇದ್ದರೂ ಬಿಜೆಪಿಯ ಸೋಲಿಗೆ ಕಾರಣವಾಗಬಲ್ಲರು. ಬಿಜೆಪಿ ವಿರುದ್ಧ ದ್ವೇಷ ಸಾಧನೆಗೆ ಒಳಗಿಂದೊಳಗೆ ತಹತಹಿಸುತ್ತಿರುವ ಯಡಿಯೂರಪ್ಪ ಇದಕ್ಕಾಗಿ ಕಾಂಗ್ರೆಸ್ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ಸಿಡಿದುಹೋದ ನಂತರ ಬಂಗಾರಪ್ಪನವರು ಮತ್ತೆ ತಮ್ಮ ರಾಜಕೀಯ ಜೀವನದ ವೈಭವವನ್ನು ಮರಳಿ ಪಡೆಯಲಾಗಿಲ್ಲ. ತಂತಿಮೇಲೆ ನಡೆಯುತ್ತಿರುವ ಯಡಿಯೂರಪ್ಪನವರು ಅದೇ ಅಪಾಯವನ್ನು ಎದುರಿಸುತ್ತಿದ್ದಾರೆ. ಜಾರಿಬಿದ್ದರೆ ಶಿವಮೊಗ್ಗ ಜಿಲ್ಲೆಯನ್ನು ಕಟ್ಟಿಕೊಂಡೇ ಕೆಳಗೆ ಬೀಳಬಹುದು.

Thursday, April 25, 2013

ಗೋಪಾಲಗೌಡರ ಬದುಕೇ ಚುನಾವಣಾ ನೀತಿ ಸಂಹಿತೆ.

ತೀರ್ಥಹಳ್ಳಿ: -ಶಾಂತವೇರಿ ಗೋಪಾಲಗೌಡರು1952ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಖರ್ಚು ಮಾಡಿದ್ದು ಐದು ಸಾವಿರ ರೂಪಾಯಿ. ಇದರಲ್ಲಿ ಎರಡು ಸಾವಿರ ರೂಪಾಯಿ ಸಾಗರದ ಸಹಕಾರಿ ಸೊಸೈಟಿಯಿಂದ ಸಾಲ ಪಡೆದದ್ದು. ಈ ಸಾಲವನ್ನು
ಗೋಪಾಲಗೌಡರು ತೀರಿಸಿದ್ದು ಗೆದ್ದಮೇಲೆ ಶಾಸಕರಾಗಿ ತಮಗೆ ಬರುತ್ತಿದ್ದ ದಿನಭತ್ಯೆ ಮತ್ತು ಕ್ಷೇತ್ರಭತ್ಯೆಯಲ್ಲಿ ಉಳಿತಾಯ ಮಾಡಿದ ಹಣದಿಂದ. ಮರುಚುನಾವಣೆಯಲ್ಲಿ ಗೋಪಾಲಗೌಡರು ಸೋತಾಗ ಅವರು ಯಥಾಪ್ರಕಾರ `ಬರಿಗೈ ಫಕೀರ'. ನಾಲ್ಕುಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಜನರೆ ವೋಟಿನ ಜತೆ ನೋಟು ಕೊಟ್ಟು ಅವರನ್ನು ಗೆಲ್ಲಿಸಿದ್ದರು.
-ಅದೇ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬದರಿನಾರಾಯಣ್ ಅಯ್ಯಂಗಾರ್ ವಿರುದ್ದದ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಗೋಪಾಲಗೌಡರ ಮೇಲೆ ಒತ್ತಡ ಹೇರಲಾಗುತ್ತದೆ. ಅಯ್ಯಂಗಾರ್ ಸ್ನೇಹಿತನೊಬ್ಬ ಬಂದು `ಎಲೆಕ್ಷನ್‌ಗೆ ಏನಿಲ್ಲ ಎಂದರೂ 30 ಖರ್ಚಾಗುತ್ತದೆ. ಅವರು ಗೆದ್ದರೆ ಮಂತ್ರಿಯಾಗುವ ಛಾನ್ಸ್ ಜಾಸ್ತಿ. ನೀವು ದೊಡ್ಡ ಮನಸು ಮಾಡಿ ಉಮೇದುವಾರಿಕೆ ಹಿಂದೆಗೆದುಕೊಂಡರೆ ನಾವು ಬದರಿಯವರ ಬಳಿ ಮಾತನಾಡಿ ಅವರನ್ನು ಕರಾರಿಗೆ ಒಪ್ಪಿಸ್ತೇವೆ..'ಎಂದನಂತೆ.
ಇದನ್ನು ಕೇಳಿದ ಗೌಡರು `ಸ್ವಾಮಿ ನನ್ನ ಬೂಟು ಬಾಗಿಲ ಬಳಿ ಇದೆ, ನಾನು ಎದ್ದು ಕೈಗೆ ತೆಗೆದುಕೊಳ್ಳೊದ್ರೊಳಗೆ ನೀವು ಹೊರಗೆ ಹೋಗೋದು ವಾಸಿ' ಎನ್ನುವಷ್ಟರಲ್ಲಿ ಬಂದವರು ಓಡಿಹೋದರಂತೆ.
- ಗೋಪಾಲಗೌಡರ ಕಷ್ಟಗಳನ್ನು ನೋಡಲಾಗದ ಸ್ನೇಹಿತನೊಬ್ಬ ಆಗಿನ ಕಂದಾಯ ಮಂತ್ರಿ ಕಡಿದಾಳ ಮಂಜಪ್ಪನವರ ಬಳಿ ಹೋಗಿ ಗೌಡರಿಗೆ ಒಂದೈದು ಎಕರೆ ಜಮೀನು ಮಂಜೂರು ಮಾಡುವಂತೆ ಕೇಳಿಕೊಂಡನಂತೆ. ಅರ್ಜಿಹಾಕಲು ಹೇಳು ಎಂದರು ಕಡಿದಾಳ್. ಇದನ್ನು ಕೇಳಿದ ಗೌಡರು ` ನನಗೇಕೆ ಜಮೀನು? ಉಳುವವನೆ ಒಡೆಯನಾಗಬೇಕೆಂಬುದು ನನ್ನ ಹೋರಾಟ. ಹೀಗಿರುವಾಗ ಉಳುಮೆ ಮಾಡದೆ ಭೂಮಿಯ ಒಡೆಯನಾಗುವ ನೈತಿಕ ಹಕ್ಕು ನನಗಿಲ್ಲ' ಎಂದು ನೆರವನ್ನು ತಿರಸ್ಕರಿಸಿದರಂತೆ.
-ಚುನಾವಣಾ ಭಾಷಣಗಳಲ್ಲಿ ಅವರೆಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಇಲ್ಲವೆ ಜಾತಿಗಳನ್ನು ಎತ್ತಿಕಟ್ಟುವ ಮಾತುಗಳನ್ನು ಆಡುತ್ತಿರಲಿಲ್ಲ. ಮೂರು ಚುನಾವಣೆಗಳಲ್ಲಿ ಗೆದ್ದರೂ ಅವರು ಯಾವ ಸನ್ಮಾನ ಸಭೆಗಳಲ್ಲಿ ಭಾಗವಹಿಸಿರಲಿಲ್ಲ. ಅವರ ಸಭೆಗಳೆಂದರೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡುವ ಕಾರ್ಯಕ್ರಮಗಳಾಗಿರುತ್ತಿದ್ದವು.
ಗೋಪಾಲಗೌಡರು ಎದುರಿಸಿದ್ದ ನಾಲ್ಕು ಚುನಾವಣೆಗಳ ಅನುಭವಗಳನ್ನು ಸಂಪೂರ್ಣವಾಗಿ ಪುಸ್ತಕರೂಪದಲ್ಲಿ ದಾಖಲಿಸಿ ಹಂಚಿದರೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮಾತ್ರ ಅಲ್ಲ ರಾಜಕಾರಣಿಯ ನಿತ್ಯ ಜೀವನಕ್ಕೆ ಕೂಡಾ ಮಾದರಿ ನೀತಿ ಸಂಹಿತೆಯಾಗಬಲ್ಲದು. ತೀರ್ಥಹಳ್ಳಿ-ಸಾಗರಗಳಲ್ಲಿರುವ ಹಳೆತಲೆಗಳ ಬಳಿ `ಆ ದಿನಗಳ' ಬಗ್ಗೆ ಇಂತಹ ನೂರಾರು ನೆನಪುಗಳಿವೆ.
ನೋಡನೋಡುತ್ತಿದ್ದಂತೆಯೇ ಬದಲಾವಣೆಗೊಳಗಾಗುತ್ತಾ ಹೋದ ಕಾಲದ ಜತೆ ಹೆಜ್ಜೆ ಹಾಕಲಾಗದೆ ಅವರೆಲ್ಲರೂ ಮನೆ ಸೇರಿಬಿಟ್ಟಿದ್ದಾರೆ. ಗೋಪಾಲಗೌಡರ ನೆನೆಪಿಗೆ ಒಂದು ಸರಿಯಾದ ಸ್ಮಾರಕವನ್ನು ನಿರ್ಮಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಅರಗದಲ್ಲಿ ಅವರು ಹುಟ್ಟಿದ ಮನೆಯ ಕುರುಹು ಕೂಡಾ ಇಲ್ಲ. ಅವರ ನೆನೆಪಿಗಾಗಿ ನಿರ್ಮಾಣ ಮಾಡಲು ಹೊರಟ ಗ್ರಂಥಾಲಯ ಅಪೂರ್ಣ ಸ್ಥಿತಿಯಲ್ಲಿದೆ. ದೇಶಕ್ಕೆ ಮಾದರಿಯಂತಿದ್ದ ಇಲ್ಲಿನ ರಾಜಕೀಯ ಸಂಸ್ಕೃತಿ ಈಗ ಹರಿಯುತ್ತಿರುವ ಹಣದ ಹೊಳೆಯಲ್ಲಿ ಕೊಚ್ಚಿಹೋಗುತ್ತಿದೆ.
ಇದು ರಾತ್ರಿ ಹಗಲಾಗುವುದರೊಳಗೆ ಆಗಿರುವ ಬದಲಾವಣೆಯೂ ಅಲ್ಲ. ಗೋಪಾಲಗೌಡರೇ ಎರಡನೇ ಬಾರಿ ಸ್ಪರ್ಧಿಸಿದಾಗ ಸೋತುಹೋಗಿದ್ದರು. ಇದಕ್ಕೆ ಎದುರಾಳಿ ಅಭ್ಯರ್ಥಿ ಮತದಾರರಿಂದ ಧರ್ಮಸ್ಥಳದ ಆಣೆ ಮಾಡಿಸಿದ್ದು ಮತ್ತು ಬಾಡೂಟ ಹಾಕಿಸಿದ್ದು ಕಾರಣ ಎನ್ನುವುದು ಚರ್ಚೆಗೊಳಗಾಗಿತ್ತು.
ಹೀಗಿದ್ದರೂ ಅದರ ನಂತರದ ಎರಡು ಚುನಾವಣೆಗಳನ್ನು ಗೋಪಾಲಗೌಡರು ಗೆದ್ದುಬಿಟ್ಟಿದ್ದರು. ಮೂರು ಅವಧಿಗೆ ಶಾಸಕರಾಗಿದ್ದ ಗೋಪಾಲಗೌಡರು ಖಾಲಿ ಜೇಬನ್ನಿಟ್ಟುಕೊಂಡೇ ಚುನಾವಣೆಗಳಲ್ಲಿ ಶ್ರಿಮಂತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಜನಬೆಂಬಲದ ಮೂಲಕ ಗೆದ್ದುಬಂದವರು. ಅವರ ಕಾಲದ ಚುನಾವಣೆ, ಅದಕ್ಕೆ ಖರ್ಚಾಗುತ್ತಿದ್ದ ಹಣ, ಭಾಷಣ, ಪ್ರಚಾರ ಶೈಲಿಗಳೆಲ್ಲ  ಮಲೆನಾಡಿನಲ್ಲಿ ದಂತಕತೆಗಳಾಗಿ ಹೋಗಿವೆ. ಮೂರೂ ಚುನಾವಣೆಯ ಕಾಲದಲ್ಲಿ ಅವರ ಬಳಿ ಠೇವಣಿ ಸಲ್ಲಿಸಲು ದುಡ್ಡು ಇರಲಿಲ್ಲ. ಕ್ಷೇತ್ರದ ಜನತೆಯೇ ದೇಣಿಗೆ ಸಂಗ್ರಹಿಸಿ ಚುನಾವಣಾ ವೆಚ್ಚವನ್ನು ಸರಿದೂಗಿಸುತ್ತಿದ್ದರು.
ಬದಲಾಗಿರುವ ಕಾಲದಲ್ಲಿ ರಾಜ್ಯದ ಸಮಾಜವಾದಿ ಚಳುವಳಿಯ ಕರ್ಮಭೂಮಿಯಾಗಿದ್ದ ತೀರ್ಥಹಳ್ಳಿ-ಸಾಗರಗಳಲ್ಲಿಯೂ ಖಂಡಿತ ಸುಧಾರಣೆಗಳಾಗಿವೆ. ಭೂ ಸುಧಾರಣೆ ಜಾರಿಗೆ ಬಂದು ಉಳುವವನೇ ಭೂಮಿಯ ಒಡೆಯನಾಗಿದ್ದಾನೆ. ದೀವ ಒಕ್ಕಲಿನವರು ಈಗ ಕಾಲು ಮುಟ್ಟುವ ಪಂಚೆ ಉಡಬಹುದು, ಧಣಿಗಳೇ ಇಲ್ಲದ ಈಗಿನ ಊರಿನಲ್ಲಿ ಸಾಮಾನ್ಯ ಮನುಷ್ಯ ಚಪ್ಪಲಿಹಾಕಿಕೊಂಡೇ ಅಡ್ಡಾಡಬಹುದು.
ಮೇಲ್ಜಾತಿಯ ಕಿರಿಯರನ್ನು ಏಕವಚನದಿಂದ ಕರೆಯಬಹುದು. ಶೂದ್ರರು ಬ್ರಾಹ್ಮಣ-ಲಿಂಗಾಯತ ಕುಟುಂಬಗಳ ಮನೆಯಲ್ಲಿನ ಚಾವಡಿಗಳ ಎರಡನೆ ಮಜಲು ದಾಟಿಹೋಗಬಹುದು. ಅರ್ವತ್ತು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಊಳಿಗಮಾನ್ಯ ವ್ಯವಸ್ಥೆಯ ವಿಕಾರರೂಪ ಇಲ್ಲಿತ್ತು. ಇದರ ವಿರುದ್ಧವೇ ನಡೆದದ್ದು ಕಾಗೋಡು ಸತ್ಯಾಗ್ರಹ. ಸಮಾಜವಾದಿ ನಾಯಕ ರಾಮಮನೋಹರ ಲೋಹಿಯಾ ಅವರೇ ಬಂದು ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶದ ಗಮನ ಸೆಳೆದಿದ್ದರು. ಈ ಸತ್ಯಾಗ್ರಹದ ಮೂಲಕವೇ ಜಿಲ್ಲೆಯಲ್ಲಿ ಹಲವಾರು ರಾಜಕೀಯ ನಾಯಕರು ಹುಟ್ಟಿಕೊಂಡರು.
ಇವೆಲ್ಲ ಇಂದು ಇತಿಹಾಸದ ಪುಟಗಳ ಓದಿಗಷ್ಟೇ ಸೀಮಿತ. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ಅವರು ಮೊದಲ ಬಾರಿ ರಾಜಕೀಯದ ಹೊಸ ಮಾದರಿಯನ್ನು ಜಿಲ್ಲೆಗೆ ಪರಿಚಯಿಸಿದರು. ಈಗ ಈ ಸೋಂಕು ತೀರ್ಥಹಳ್ಳಿಗೂ ತಗಲಿದೆ.  ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಮಂಜುನಾಥ ಗೌಡ ಮತ್ತು ಜೆಡಿ(ಎಸ್) ಅಭ್ಯರ್ಥಿ ಮದನ್ ಅವರ `ಕೊಡುಗೈ ದಾನ' ಇಲ್ಲಿ ಮನೆಮಾತಾಗಿ ಹೋಗಿದೆ.
 ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮತದಾರರಿಗೆ ಮುಂಗಡವಾಗಿ `ನೆರವು' ತಲುಪಿಸಿದ ಅಭ್ಯರ್ಥಿಗಳು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಚಹರೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ. ಎರಡು ತಿಂಗಳುಗಳ ಹಿಂದೆಯೇ ಇಲ್ಲಿನ ಸ್ವಸಹಾಯ ಮತ್ತು ಸ್ತ್ರೀಶಕ್ತಿ ಗುಂಪುಗಳಿಗೆ ಹಣ ನೀಡಲಾಗಿದೆ. ಸಾಲ ಕೇಳದವರಿಗೂ ಸಹಕಾರ ಸಂಘಗಳಿಂದ ಪುಕ್ಕಟೆ ಎಂಬಂತೆ ಸಾಲ ನೀಡಲಾಗಿದೆ.
 ಮತದಾರರಿಗೆ ಮೊದಲ ಸುತ್ತಿನ ಸೀರೆ, ಬೆಳ್ಳಿಬಟ್ಟಲುಗಳ ವಿತರಣೆ ಮುಗಿದುಹೋಗಿದೆ. ಫಲಾನುಭವಿಗಳಿಂದ ಧರ್ಮಸ್ಥಳದ ಮೇಲೆ ಆಣೆ ಹಾಕಿಸಿ ಮತಹಾಕುವ ಭರವಸೆ ಪಡೆಯಲಾಗುತ್ತಿದೆ. ಇದನ್ನು ಗಮನಿಸಿದ ಡಿ.ವೀರೇಂದ್ರ ಹೆಗ್ಗಡೆಯವರು ಕ್ಷೇತ್ರಕ್ಕೂ ಚುನಾವಣೆಗೂ ಸಂಬಂಧ ಇಲ್ಲ ಎಂದು ಕರಪತ್ರ ಹೊರಡಿಸಿದ್ದಾರೆ.
ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಅವರು ಸಜ್ಜನ, ಪ್ರಾಮಾಣಿಕ ಎಂಬ ಜನಾಭಿಪ್ರಾಯ ಇದೆ, ಒಳ್ಳೆಯ ಸಂಸದೀಯ ಪಟು ಕೂಡಾ. ಬಿಜೆಪಿ ಅಭ್ಯರ್ಥಿ ಅರಗ ಜ್ಞಾನೇಂದ್ರ ಅವರೂ ಸೋತ ನಂತರವೂ ಜನರ ಜತೆ ಒಡನಾಟ ಇಟ್ಟುಕೊಂಡ ನಾಯಕ. ಇಬ್ಬರೂ ಉಳಿದ ಅಭ್ಯರ್ಥಿಗಳ ಹಣದ ಭರಾಟೆ ನೋಡಿ ದಂಗಾಗಿ ಹೋಗಿದ್ದಾರೆ.
ಬೇರೆಲ್ಲ ಕಡೆ ನಡೆಯದಂತಹ ಚುನಾವಣಾ ಅಕ್ರಮಗಳು ತೀರ್ಥಹಳ್ಳಿ, ಸಾಗರ ಕ್ಷೇತ್ರಗಳಲ್ಲಿ ನಡೆಯುತ್ತಿಲ್ಲ. ಶಾಂತವೇರಿ ಗೋಪಾಲಗೌಡರ ರಾಜಕೀಯವನ್ನು ಕಂಡ ಇಲ್ಲಿನ ಮಣ್ಣಿಗೆ ಈಗಿನ ರಾಜಕೀಯ ಸಂಸ್ಕೃತಿ ಹೊಸತು ಅಷ್ಟೆ..ಇದು ಮುಂದುವರಿಯಲಿದೆಯೇ ಇಲ್ಲವೆ ಕೊನೆಗೊಳ್ಳಲಿದೆಯೇ ಎನ್ನುವುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ.

Wednesday, April 24, 2013

ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ.

ಮಂಗಳೂರು: `ಹಿಂದೂ ಕೋಮುವಾದದ ಬಗ್ಗೆ ಇಷ್ಟೆಲ್ಲ ಕೂಗಾಡುವ ನಿಮ್ಮ ಕಣ್ಣಿಗೆ ಮುಸ್ಲಿಂ ಕೋಮುವಾದ ಕಾಣುವುದೇ ಇಲ್ವಾ' ಎಂದು ಹಿಂದೂ ಸಂಘಟನೆಯ ನಾಯಕರು ಜಾತ್ಯತೀತರೆಂದು ಹೇಳಿಕೊಳ್ಳುವವರ
ನ್ನು ಆಗಾಗ ಕೆಣಕುವುದುಂಟು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಶ್ನೆ ಉಳಿದೆಲ್ಲ ಕಡೆಗಿಂತಲೂ ಹೆಚ್ಚು ಕೇಳಿಸುತ್ತದೆ. ಇದು ತಳ್ಳಿಹಾಕುವಂತಹ ಪ್ರಶ್ನೆಯೂ ಅಲ್ಲ.
ಹಿಂದೂಗಳಂತೆ ಮುಸ್ಲಿಮರಲ್ಲಿ ಕೋಮುವಾದಿಗಳಿದ್ದರೂ ಇತ್ತೀಚಿನವರೆಗೆ ಅವರಿಗೆ ಸಂಘಟನೆಯ ಬೆಂಬಲ ಇರಲಿಲ್ಲ. ಬದಲಾಗಿರುವ ಪರಿಸ್ಥಿತಿಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ ಆ ಕೊರತೆಯನ್ನು ತುಂಬುವಂತೆ ಬೆಳೆಯುತ್ತಿದೆ. ಸಂಘ ಪರಿವಾರದ ನಾಯಕರು `ಮುಸ್ಲಿಂ ಗುಮ್ಮ'ನನ್ನು ತೋರಿಸಿ ಸಂಘಟನೆಯನ್ನು ಬೆಳೆಸುತ್ತಿದ್ದರೆ, ಪಾಪ್ಯುಲರ್ ಫ್ರಂಟ್ `ಹಿಂದೂ ಗುಮ್ಮ'ನನ್ನು ತಮ್ಮ ಸಂಘಟನೆ ಬಲಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಹಿಂದೂ ಕೋಮುವಾದ ಬೆಳೆಯುತ್ತಾ ಹೋದಂತೆ ಸಮಾನಾಂತರವಾಗಿ ಮುಸ್ಲಿಂ ಕೋಮುವಾದವೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ. ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಮುಸ್ಲಿಂ ವಿರೋಧಿ ಎಂಬ ಆರೋಪಕ್ಕೊಳಗಾಗಿರುವ ಬಿಜೆಪಿ ನಿಶ್ಚಿಂತೆಯಿಂದಿದ್ದರೆ, ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತಳಮಳಕ್ಕೀಡಾಗಿದೆ. ಈ ವಿಲಕ್ಷಣ ವಿದ್ಯಮಾನವೇ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯನ್ನು ಕುತೂಹಲಕಾರಿಯಾಗಿ ಮಾಡಿದೆ.
`ಪಾಪ್ಯುಲರ್ ಫ್ರಂಟ್'ನ ಸಂಘಟನೆಯ ರೂಪ, ಉದ್ದೇಶ ಮತ್ತು ಚಟುವಟಿಕೆಗಳನ್ನು ಗಮನಿಸಿದವರು ಇದು `ಮುಸ್ಲಿಮರ ಆರ್‌ಎಸ್‌ಎಸ್' ಎಂದು ಆರೋಪಿಸುವುದುಂಟು. ಆರ್‌ಎಸ್‌ಎಸ್ ರೀತಿಯಲ್ಲಿಯೇ ಇದಕ್ಕೆ ಹಲವಾರು ಅಂಗ ಸಂಸ್ಥೆಗಳಿವೆ.
ವಿಶ್ವಹಿಂದೂ ಪರಿಷತ್ ಮಾದರಿಯಲ್ಲಿ ಧಾರ್ಮಿಕ ಗುರುಗಳಿಗಾಗಿ `ಆಲ್ ಇಂಡಿಯಾ ಇಮಾಮಿ ಕೌನ್ಸಿಲ್', ಎಬಿವಿಪಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಸ್ಟೂಡೆಂಟ್ ಕ್ಯಾಂಪಸ್ ಫ್ರಂಟ್', ದುರ್ಗಾವಾಹಿನಿಯನ್ನು ಹೋಲುವಂತೆ ಮಹಿಳೆಯರಿಗಾಗಿ `ನ್ಯಾಷನಲ್ ವುಮೆನ್ ಫ್ರಂಟ್' ಮತ್ತು ಬಿಜೆಪಿ ಮಾದರಿಯಲ್ಲಿ ರಾಜಕೀಯ ಮುಖವಾಗಿ `ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ' (ಎಸ್‌ಡಿಪಿಐ) ಇವೆ. ಆರ್‌ಎಸ್‌ಎಸ್ ಖಾಕಿ ಚಡ್ಡಿ ಧರಿಸಿದರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಂಘ ಪರಿವಾರದ ನಾಯಕರಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಈ ಸಂಘಟನೆಯ ನಾಯಕರ ಮಾತು-ಕೃತಿಗಳಲ್ಲಿ ಧಾರ್ಮಿಕ ಮೂಲಭೂತವಾದದ ವಾಸನೆ ಬಡಿಯುತ್ತಿದೆ. ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಕಾಣಿಸಿಕೊಂಡರೆ ಸಂಘ ಪರಿವಾರದ ಸದಸ್ಯರು ದಾಳಿ ಮಾಡಿದರೆ, ಹಿಂದೂ ಹುಡುಗನ ಜತೆ ಮುಸ್ಲಿಂ ಹುಡುಗಿ ಕಾಣಿಸಿಕೊಂಡರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಅದನ್ನೇ ಮಾಡುತ್ತಾರೆ. ಇವರ ದಾಳಿಗಳ ಸಂಖ್ಯೆ ಕಡಿಮೆ ಇರಬಹುದು, ಉದ್ದೇಶದಲ್ಲಿ ವ್ಯತ್ಯಾಸ ಇಲ್ಲ. ಇತ್ತೀಚೆಗೆ ಜಿಲ್ಲೆಯ ಬಜಪೆಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮೂಲಭೂತವಾದಿ ಮುಸ್ಲಿಮರ ಸಂಘಟನೆ ಎಂಬ ಆರೋಪಕ್ಕೊಳಗಾಗಿರುವ `ಪಾಪ್ಯುಲರ್ ಫ್ರಂಟ್' ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ್ದು ಕಡಿಮೆ. `ಪಾಪ್ಯುಲರ್ ಫ್ರಂಟ್' ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿರುವುದೇ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಕಾಲದಲ್ಲಿ ಎನ್ನುವುದು ಗಮನಾರ್ಹ. ಪೊಲೀಸ್ ಇಲಾಖೆಯನ್ನು ಅಂಗೈಯಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ನಾಯಕರು ಪಾಪ್ಯುಲರ್ ಫ್ರಂಟ್‌ನ ಬೆಳವಣಿಗೆಯನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ.
ಸರ್ಕಾರದಿಂದ ಯಾವುದೇ ಬಗೆಯ ಕಿರುಕುಳ ಅನುಭವಿಸಿದ ಬಗ್ಗೆ ಪಾಪ್ಯುಲರ್ ಫ್ರಂಟ್ ನಾಯಕರೂ ದೂರಿಲ್ಲ. ಇವರು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ದಾಳಿಗೆ ಗುರಿ ಮಾಡುತ್ತಿರುವುದು ಕೂಡಾ ನಿಜ. ಇವೆಲ್ಲವನ್ನೂ ನೋಡಿದವರು ಎಲ್ಲೋ ಒಂದು ಕಡೆ ಎರಡೂ ಸಂಘಟನೆಗಳ ನಡುವೆ ಹೊಂದಾಣಿಕೆ ಇದೆಯೇನೋ ಎಂಬ ಸಂಶಯ ವ್ಯಕ್ತ ಪಡಿಸುತ್ತಿರುವುದು ಸಹಜವೇ ಆಗಿದೆ.
ಆರ್‌ಎಸ್‌ಎಸ್ ಮಾಜಿ ನಾಯಕರೊಬ್ಬರ ಜತೆ ಮಾತನಾಡುತ್ತಿದ್ದಾಗ ಅವರೊಂದು ಘಟನೆಯನ್ನು ಹೇಳಿದರು. ನಾಲ್ಕೈದು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ಇಲ್ಲಿನ ನೆಹರೂ ಮೈದಾನದಲ್ಲಿ ಮುಸ್ಲಿಮರ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿತ್ತು. ಇದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಸಂಘ ಪರಿವಾರದ ಪ್ರಮುಖ ನಾಯಕರೊಬ್ಬರ ಬಳಿ ಹೋಗಿ ಮುಸ್ಲಿಮರಿಗಿಂತ ದೊಡ್ಡದಾದ ಹಿಂದೂ ಸಮಾಜೋತ್ಸವ ಮಾಡಬೇಕೆಂದು ಒತ್ತಾಯಿಸಿದರಂತೆ.
ಅವರ ಮಾತು ಕೇಳಿ ನಕ್ಕ ಆ ನಾಯಕರು `ಮೂರ್ಖ ನಿನಗೆ ಬುದ್ಧಿ ಇಲ್ಲ, ನಾವೇನೂ ಮಾಡುವುದು ಬೇಡ, ಅವರಿಗೆ ಇನ್ನಷ್ಟು ಸಮ್ಮೇಳನಗಳನ್ನು ಮಾಡಲು ದುಡ್ಡು ಕೊಟ್ಟು ಬಿಡುವ' ಎಂದರಂತೆ. ಮುಸ್ಲಿಮರು ಬಹಿರಂಗವಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಿದರೆ ಅದರಿಂದ ಅಸುರಕ್ಷತೆಗೀಡಾಗುವ ಹಿಂದೂಗಳು ಇನ್ನಷ್ಟು ಸಂಖ್ಯೆಯಲ್ಲಿ ತಮ್ಮ ಕಡೆ ಬರುತ್ತಾರೆ ಎನ್ನುವುದು ಆ ನಾಯಕರ ತಂತ್ರ. ಪಾಪ್ಯುಲರ್ ಫ್ರಂಟ್‌ನ ನಾಯಕರಲ್ಲಿಯೂ ಈ ಉದ್ದೇಶ ಇದ್ದ ಹಾಗಿದೆ.
ಇದೇ ಪಾಪ್ಯುಲರ್ ಫ್ರಂಟ್‌ನ ರಾಜಕೀಯ ಮುಖ ಎಸ್‌ಡಿಪಿಐ. 2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಿದಾಗ ಬಹಳ ಮಂದಿ ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 206 ಕಡೆ ಸ್ಪರ್ಧಿಸಿ ಹದಿನೇಳು ಸ್ಥಾನಗಳನ್ನು ಗೆದ್ದಿರುವುದು ಮಾತ್ರವಲ್ಲ, ಹದಿನೆಂಟು ಕಡೆ ಎರಡನೆ ಸ್ಥಾನ ಪಡೆದ ನಂತರ ರಾಜಕೀಯ ಪಕ್ಷಗಳು ಜಾಗೃತವಾಗಿವೆ.
ಈಗ ರಾಜ್ಯದ 25 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆಗಿಳಿದಿದ್ದರೂ ಅದು ಗಮನ ಕೇಂದ್ರೀಕರಿಸಿರುವುದು ದಕ್ಷಿಣ ಕನ್ನಡದ ಮೇಲೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ, ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಬಹಿರಂಗವಾಗಿ `ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಸಮಾನ ಶತ್ರುಗಳು' ಎಂದು ಹೇಳುವ ಎಸ್‌ಡಿಪಿಐ ನಾಯಕರು ಖಾಸಗಿಯಾಗಿ `ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ' ಎನ್ನುತ್ತಾರೆ. ಇದು ಎಷ್ಟು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಕಾರ್ಯತಂತ್ರ ಸ್ಪಷ್ಟ. ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳದೆ ಇರುವ ಬಿಜೆಪಿಗೆ ಆ ಮತಗಳು ಬರದೆಹೋದರೂ ನಷ್ಟ ಇಲ್ಲ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಲಾಗದು. ಕೆಲವು ಸಾವಿರದಷ್ಟು ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡರೂ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಬುಡಮೇಲಾಗಬಹುದು.
ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ರಮಾನಾಥ ರೈ ಗೆದ್ದಿರುವುದು ಕೇವಲ 1251 ಮತಗಳಿಂದ. ಈ ಬಾರಿಯೂ ಅಲ್ಲಿ ತುರುಸಿನ ಸ್ಪರ್ಧೆ ಇದೆ. ಈ ಸ್ಥಿತಿಯಲ್ಲಿ ಅಲ್ಲಿ ಕಣದಲ್ಲಿರುವ ಎಸ್‌ಡಿಪಿಐ ಅಭ್ಯರ್ಥಿ ಪಡೆಯುವ ಒಂದೆರಡು ಸಾವಿರ ಮತಗಳು ಕೂಡಾ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಬಹುದು. ಇದೇ ರೀತಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆದ್ದಿರುವುದು 7149 ಮತಗಳಿಂದ. ಅಲ್ಲಿನ ಎಸ್‌ಡಿಪಿಐ ಅಭ್ಯರ್ಥಿ ಏಳೆಂಟು ಸಾವಿರ ಮತಗಳನ್ನು ಪಡೆದರೆ ಕಾಂಗ್ರೆಸ್ ದೋಣಿ ಮುಳುಗಬಹುದು.
`ತಾತ್ವಿಕವಾಗಿ ನೀವೇ ವಿರೋಧಿಸುತ್ತಿರುವ ಬಿಜೆಪಿಯನ್ನು ನಿಮ್ಮ ಸ್ಪರ್ಧೆಯಿಂದಾಗಿ ಗೆಲ್ಲಿಸಿದ ಹಾಗಾಗುವುದಿಲ್ಲವೇ? ಬಿಜೆಪಿ ಜತೆ ಇಂತಹದ್ದೊಂದು ಗುಪ್ತ ಹೊಂದಾಣಿಕೆಯನ್ನೂ ನೀವು ಮಾಡಿಕೊಂಡಿದ್ದೀರಿ ಎಂಬ ಆರೋಪವೂ ಇದೆ ಅಲ್ಲವೇ?' ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರನ್ನು ಕೇಳಿದರೆ `ಅಂತಹ ಆರೋಪಗಳಿಗೆ ಯಾವ ಆಧಾರವೂ ಇಲ್ಲ. ಈ ಚುನಾವಣೆಯಲ್ಲಿ ಹಾಗೆ ಅನಿಸಲೂಬಹುದು. ಆದರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಾವು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.
`ಅವರ ಉದ್ದೇಶ ಸ್ಪಷ್ಟ. ಅದು ಮೂಲಭೂತವಾದಿಗಳ ಜತೆಯಲ್ಲಿ ಕೈಜೋಡಿಸಿ ಜಾತ್ಯತೀತ ಶಕ್ತಿಗಳನ್ನು ಸೋಲಿಸುವುದು. ಇಂತಹ ಕುತಂತ್ರಗಳಿಗೆ ಮುಸ್ಲಿಮರು ಬಲಿಯಾಗಲಾರರು' ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ನಂತರ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಟಿಕೆಟ್ ವಂಚಿತರ ಬಂಡಾಯ ಬೆದರಿಸುತ್ತಿದ್ದರೆ ಇನ್ನೊಂದೆಡೆ ಎಸ್‌ಡಿಪಿಐ ಭೂತ ಕಾಡುತ್ತಿದೆ.

Tuesday, April 23, 2013

ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕರಾವಳಿ ಮಹಿಳೆಯರು

ಮಂಗಳೂರು: `ಯಾನ್ ಕಾಲೇಜ್‌ಗ್ ಪೋನಗನೆ ಮಿಡಿ-ಮಿನಿ ಪಾಡೊಂದಿತ್ತೆ. ವುಂದು ದಾನೆ ಪೊಸತ್ತಾ ಎಂಕಲೆಗ್? ಇತ್ತೆ ಎನ್ನ ಮಗಲ್ ಆ ಡ್ರೆಸ್ ಪಾಡುನಿ ಬೊಡ್ಚಿಂದ್ ಎಂಚ ಪನ್ಪಿನಿ?' (
ನಾನು ಕಾಲೇಜಿಗೆ ಹೋಗುವಾಗಲೇ ಮಿನಿ-ಮಿಡಿ ಧರಿಸುತ್ತಿದ್ದೆ. ಇದೇನು ನಮಗೆ ಹೊಸದಾ? ಈಗ ನನ್ನ ಮಗಳು ಧರಿಸುವಾಗ ಬೇಡ ಎಂದು ಹೇಗೆ ಹೇಳಲಿ) ಎಂದು ಕೇಳುತ್ತಾರೆ ಸುಮಾರು ಐವತ್ತರ ಆಜುಬಾಜಿನಲ್ಲಿರುವ ಸುರತ್ಕಲ್‌ನ ಶಶಿಕಲಾ ಶೆಟ್ಟಿ.
`ಎಂಕುಲ್‌ದಾನೆ ಹಾಳಾದ್ ಪೋತನಾ, ಗೌರವೊಡು ಸಂಸಾರ ಮಲ್ತೊಂದ್ ಇಜ್ಜನಾ' (ನಾವೇನು ಹಾಳಾಗಿ ಹೋಗಿದ್ದೇವೆಯೇ? ಗೌರವದಿಂದ ಸಂಸಾರ ಮಾಡಿಕೊಂಡು ಇಲ್ಲವೇ?) ಎನ್ನುವ ಇನ್ನೆರಡು ಪ್ರಶ್ನೆಗಳನ್ನೂ ಕೇಳಿ ಯಾರದೋ ಮೇಲಿನ ಸಿಟ್ಟನ್ನು ಅವರು ತೀರಿಸಿಕೊಂಡರು.
ಇದು ಇಲ್ಲಿನ ಒಬ್ಬಿಬ್ಬರು ಹೆಣ್ಣುಮಕ್ಕಳ ವೈಯಕ್ತಿಕ ಅಭಿಪ್ರಾಯ ಅಲ್ಲ, ಅತಿರೇಕಕ್ಕೆ ಹೋಗುತ್ತಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುಸಂಖ್ಯಾತ ಮಹಿಳೆಯರು ರೋಸಿಹೋಗಿದ್ದಾರೆ.
`ವುಂದ್ ಮುಲ್ತ ಕಲ್ಚರ್‌ಗ್ ಇನ್‌ಸಲ್ಟ್‌ಯೇ ಅಣ್ಣಾ' (ಇದು (ನೈತಿಕ ಪೊಲೀಸ್‌ಗಿರಿ) ಇಲ್ಲಿನ ಸಂಸ್ಕೃತಿಗೆ ಅವಮಾನ) ಎಂದವಳು ಮಂಗಳೂರಿನ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಬಂಗೇರ. `ಅಣ್ಣಾ, ಅಕ್ಕಾ ಸಂಬೋಧನೆ, ಇಂಗ್ಲಿಷ್‌ಮಿಶ್ರಿತ ತುಳು' ಕೂಡಾ ಇಲ್ಲಿನ ಸಂಸ್ಕೃತಿಯ ಭಾಗ. ಚುನಾವಣೆಯಲ್ಲಿ ರಾಜಕೀಯವೇ ಚರ್ಚೆಯ ಪ್ರಮುಖ ವಿಷಯವಾದರೂ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಂಸ್ಕೃತಿ ಕೂಡಾ ಚರ್ಚೆಗೊಳಗಾಗುತ್ತಿದೆ.
ಕರಾವಳಿಯ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಇಲ್ಲಿನ ಮೀನುಗಾರ ಮಹಿಳೆಯರು ಊರೂರಿಗೆ ಬುಟ್ಟಿಯಲ್ಲಿ  ಹೊತ್ತುಕೊಂಡು ಹೋಗಿ ಇಲ್ಲವೆ ಸಂತೆಯಲ್ಲಿ ಕೂತು ಮೀನು ಮಾರಿಯೇ ಕುಟುಂಬವನ್ನು ಸಲಹುತ್ತಾ ಬಂದವರು. ಇವರ ಜತೆಗೆ ಬೀಡಿಕಟ್ಟುವ ಮಹಿಳೆಯರು, ತರಕಾರಿ ಬೆಳೆದು ಮಾರುವ ಕ್ರಿಶ್ಚಿಯನ್ ಮಹಿಳೆಯರು...ಹೀಗೆ ಕರಾವಳಿಯ ಉದ್ಯೋಗಸ್ಥ ಮಹಿಳಾವರ್ಗ ವಿಶಾಲವಾದುದು.
ಇವರೆಲ್ಲ ಉದ್ಯೋಗಕ್ಕಾಗಿ ಮನೆಬಿಟ್ಟು ಹೊರಗೆ ಅಡ್ಡಾಡುವವರು. ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅತಿಹೆಚ್ಚಿನ ಸಂಖ್ಯೆಯಲ್ಲಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಂದು ಹೇಳಲು ಸಮೀಕ್ಷೆಯ ಅಗತ್ಯ ಇಲ್ಲ. ಹೊರಜಗತ್ತಿನ ಪರಿಚಯ ಇರುವುದರಿಂದ ಆಧುನಿಕತೆಯ ಗಾಳಿಗೆ ಇವರೆಲ್ಲ ಎಂದೋ ಮೈಯೊಡ್ಡಿಯಾಗಿದೆ.
ಜಗತ್ತಿನ ಯಾವುದೋ ಮೂಲೆಯಲ್ಲಿ ಹೊಸ ಫ್ಯಾಷನ್ ಬಂದರೂ ಅದು ಮುಂಬೈ-ದುಬೈ ಮೂಲಕ ರಾಜ್ಯದಲ್ಲಿ ಮೊದಲು ಬರುತ್ತಿದ್ದದ್ದು ಮಂಗಳೂರಿಗೆ. ಬಾರ್ ಎಂಡ್ ರೆಸ್ಟೋರೆಂಟ್‌ಗಳಲ್ಲಿ ಗಂಡ ಬಿಯರ್ ಕುಡಿಯುತ್ತಿರುವಾಗ ಎದುರಿಗೆ ಹೆಂಡತಿ ಕೂತು ಊಟ ಮಾಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಂಗಳೂರಿನ ಹೆಣ್ಣುಮಕ್ಕಳು ಸ್ಪಲ್ಪ `ಫಾಸ್ಟ್' ಎನ್ನುವ ಅಭಿಪ್ರಾಯ ಹಿಂದಿನಿಂದಲೂ ಇದೆ. ಆದರೆ ತಮ್ಮ ಭವಿಷ್ಯದ ವಿಷಯದಲ್ಲಿ ತೀರಾ ಲೆಕ್ಕಾಚಾರದ ಈ ಹೆಣ್ಣುಮಕ್ಕಳು ಅತಿರೇಕಕ್ಕೆ ಹೋಗಿ ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಂಡದ್ದು ಕಡಿಮೆ.
ಇಂತಹ ನಾಡಿನಲ್ಲಿ  ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ನಡೆಸಲಾಗುತ್ತಿರುವ ನೈತಿಕ ಪೊಲೀಸ್‌ಗಿರಿ  ಪ್ರಜ್ಞಾವಂತ ಸಮುದಾಯವನ್ನು ಕೆರಳಿಸಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಪರಸ್ಪರ ಮಾತನಾಡುತ್ತಿರುವ ಇಲ್ಲವೆ ಜತೆಯಲ್ಲಿ ಹೋಗುವ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ಮೇಲೆ ಹಲ್ಲೆ ನಡೆಯುತ್ತಿರುತ್ತದೆ. ಕಾನೂನು ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲು ಅಸಾಧ್ಯವಾಗಿರುವ ಕಾರಣ ಅಧಿಕೃತವಾಗಿ ದೂರು ದಾಖಲಾಗುವುದು ಕಡಿಮೆ.
ದೈಹಿಕವಾಗಿ ಹಲ್ಲೆ ನಡೆಸುವ ಮತ್ತು ಪೊಲೀಸರ ಮೂಲಕ ಹೆದರಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗ ಕುಟುಂಬಗಳ ಮಹಿಳೆಯರೇ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ.
ಸಂಘ ಪರಿವಾರದ ಚುನಾವಣಾ ಕಾರ್ಯತಂತ್ರದ ದೋಣಿ ಪ್ರತಿಕೂಲ ಗಾಳಿಗೆ ಸಿಕ್ಕಿ ಅಡಿಮೇಲಾಗುತ್ತಿರುವುದು ಈ ಬೆಳವಣಿಗೆಗಳಿಂದಾಗಿ. ಕಾಂಗ್ರೆಸ್ ಪಕ್ಷದ ನಾಯಕರು ಗೆದ್ದೇಬಿಟ್ಟೆವು ಎಂದು ಮೈಮರೆಯಲು ಕೂಡಾ ಇದು ಕಾರಣ. ಇದಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಸಿದ ವಿಧವೆಯರಿಗೆ ಮಂಗಳದ್ರವ್ಯ ನೀಡುವ ಮತ್ತು ದಲಿತ ಮಹಿಳೆಯರ ಪಾದತೊಳೆದ ಕೆಲಸಗಳು ಸಂಘ ಪರಿವಾರ ಮಹಿಳೆಯರ ಮೇಲೆ ನಡೆಸುತ್ತಿರುವ `ಸಾಂಸ್ಕೃತಿಕ ದಾಳಿ'ಗೆ ಪ್ರತಿದಾಳಿ ಎಂಬಂತೆ ಜನಪ್ರಿಯವಾಗಿವೆ.
ಪೂಜಾರಿಯವರೂ ಕಡು ಜಾತ್ಯತೀತರೇನಲ್ಲ, ಮಂಗಳೂರಿನಲ್ಲಿ ಬಿಜೆಪಿಯನ್ನು `ಮೆದು ಹಿಂದುತ್ವ'ದ ಮೂಲಕವೇ ಎದುರಿಸಲು ಹೊರಟವರು ಅವರು. ಸಂಘ ಪರಿವಾರವನ್ನು ಮೀರಿಸುವಂತೆ ಪ್ರತಿವರ್ಷ ದಸರಾ ಉತ್ಸವ ಆಚರಿಸುವ ಮೂಲಕ ಮನೆಯಲ್ಲಿದ್ದ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಕೂಡಾ ಅವರ ಮೇಲಿದೆ. ಧಾರ್ಮಿಕವಾಗಿ ಪುರುಷರಿಗೆ ಸಮನಾದ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಿ ಗೌರವಿಸುವುದನ್ನು ಒಂದು ಸೈದ್ಧಾಂತಿಕ ವಿರೋಧದ ಕಾರ್ಯಕ್ರಮ ಎಂದು ಅವರು ರೂಪಿಸದೆ ಇದ್ದರೂ ವರ್ತಮಾನದ ಪರಿಸ್ಥಿತಿಯಿಂದಾಗಿ ಅದು ಆ ರೂಪ ಪಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಖ್ಯೆ ಮತ್ತು ಸಂಪನ್ಮೂಲಗಳೆರಡರ ದೃಷ್ಟಿಯಿಂದಲೂ ಬಿಜೆಪಿಗೆ ಪ್ರಮುಖ ಆಧಾರಸ್ತಂಭವಾಗಿದ್ದ ಬಂಟ ಸಮಾಜದ ಮಹಿಳೆಯರೇ, ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡ ನಡೆದಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ಹೆಚ್ಚು ಅಸಮಾಧಾನಕ್ಕೀಡಾಗಿರುವುದು ಗಮನಾರ್ಹ. ಭೂಸುಧಾರಣೆ ಜಾರಿಗೆ ಬರುವ ಮೊದಲು ಭೂಮಾಲೀಕರಾಗಿದ್ದ ಬಂಟರು ಹಿಂದೂ ಸಮುದಾಯದಲ್ಲಿ ಉಳಿದವರಿಗಿಂತ ಮೊದಲು ಆಧುನಿಕತೆಗೆ ತೆರೆದುಕೊಂಡವರು.
ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮೊದಲಾದ ಚಿತ್ರತಾರೆಯರೆಲ್ಲ `ಬೋಲ್ಡ್ ಎಂಡ್ ಬ್ಯೂಟಿಫುಲ್' ಎಂದೇ ಕರೆಯಲಾಗುವ ಬಂಟ ಮಹಿಳಾ ಸಮುದಾಯಕ್ಕೆ ಸೇರಿದವರು. ಉದ್ಯಮಶೀಲತೆಯ ಗುಣವನ್ನು ಹುಟ್ಟಿನಿಂದಲೇ ಪಡೆದಿರುವ ಈ ಸಮುದಾಯ ಹೋಟೆಲ್, ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯಿಂದಾಗಿ ಸಹಜವಾಗಿ ಶ್ರಿಮಂತಿಕೆಯ ಜೀವನಶೈಲಿಗೆ ಒಗ್ಗಿಹೋಗಿರುವವರು. ಇವರ ಮೇಲೆ ಬಲವಂತದಿಂದ ಹೇರಲಾಗುತ್ತಿರುವ ನಿರ್ಬಂಧಿತ ಸಾಮಾಜಿಕ ಜೀವನ ಸಹಜವಾಗಿಯೇ ಕಿರಿಕಿರಿ ಉಂಟುಮಾಡುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿ ಕೂಡಾ ಇಲ್ಲಿಗೆ ಇತ್ತೀಚಿನ ಆಮದು ಅಲ್ಲ. ಇಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತ ಸಮುದಾಯದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮೊದಲಿನಿಂದಲೂ ಇದೆ. 60 ವರ್ಷದ ಮಹಿಳೆ ಕೂಡಾ ಸ್ಕರ್ಟ್ ಧರಿಸುವುದು, ಮನೆಯಲ್ಲಿ ಕುಟುಂಬದ ಜತೆ ಮಹಿಳೆಯರೂ ಮದ್ಯ ಸೇವಿಸುವುದು ಇಲ್ಲಿನ ಕ್ರಿಶ್ಚಿಯನ್ ಸಮಾಜದಲ್ಲಿ ಸಾಮಾನ್ಯ ನಡವಳಿಕೆ.
ಇದರ ಪ್ರಭಾವ ಇತರ ಸಮುದಾಯದ ಮೇಲೆ ಕೂಡಾ ಆಗಿದೆ. `ಈ ರೀತಿಯ ನಡವಳಿಕೆಗಳಲ್ಲಿ ಸರಿ-ತಪ್ಪುಗಳ ಮಧ್ಯೆ ಸೂಕ್ಷ್ಮ ಗೆರೆ ಇರುತ್ತದೆ. ಮನೆಯ ಮಕ್ಕಳು ಎಚ್ಚರತಪ್ಪಿ ತಪ್ಪಿನ ಕಡೆ ಸರಿದಾಗ ಬುದ್ಧಿಹೇಳುವ, ಶಿಕ್ಷಿಸುವ ಕೆಲಸವನ್ನು ಲೋಕದ ಎಲ್ಲ ಪಾಲಕರಂತೆ ಇಲ್ಲಿನ ತಂದೆತಾಯಿಗಳು ಮಾಡುತ್ತಾ ಬಂದಿದ್ದಾರೆ. ಆದರೆ ನಮ್ಮ ಮನೆಮಕ್ಕಳ ಮೇಲೆ ಯಾರೋ ಅಪರಿಚಿತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ದಾಳಿ ನಡೆಸುವುದನ್ನು ಸಹಿಸಲಿಕ್ಕಾಗದು' ಎನ್ನುತ್ತಾರೆ ಮಂಗಳೂರಿನ ಶಿಕ್ಷಕ ರಮಾನಂದ.
ಈ ರೀತಿ ದಂಡಪ್ರಯೋಗದ ಮೂಲಕ `ಬುದ್ಧಿಕಲಿಸಲು' ಹೊರಟವರಲ್ಲಿ ಯಾರೂ ಕಾವಿತೊಟ್ಟ ವಿರಾಗಿಗಳಿಲ್ಲ, ಇವರಲ್ಲಿ ಹೆಚ್ಚಿನವರು ಪೊಲೀಸ್ ದಾಖಲೆಯಲ್ಲಿರುವ ಪುಂಡು ಪೋಕರಿಗಳು ಮತ್ತು ಸಂಘ ಪರಿವಾರದ ಸದಸ್ಯರು ಎನ್ನುವುದು ಇವರನ್ನು ಇನ್ನಷ್ಟು ಕೆರಳಿಸಿದೆ.
ಶೂದ್ರ ಸಂಸ್ಕೃತಿಯ ತುಳುನಾಡಿನಲ್ಲಿ  ವೈದಿಕ ಸಂಸ್ಕೃತಿಯ ವಿರುದ್ಧದ ಪ್ರತಿಭಟನೆ ನಿರಂತರವಾಗಿ ನಡೆಯುತ್ತಾ ಬಂದಿರುವುದನ್ನು ತುಳುನಾಡಿನ ಇತಿಹಾಸದಲ್ಲಿ ಕಾಣಬಹುದು. ಒಂದು ಕಾಲದಲ್ಲಿ `ಸೋಷಿಯಲ್ ಆ್ಯಕ್ಟಿವಿಸ್ಟ್'ಗಳಾಗಿದ್ದ ಭೂತ-ದೈವಗಳ ಕತೆಯೇ ಇದಕ್ಕೆ ಸಾಕ್ಷಿ. ಇಲ್ಲಿನ ಬಹುಸಂಖ್ಯಾತ ಹಿಂದೂ ಸಮುದಾಯ ಆರಾಧಿಸುತ್ತಾ ಬಂದಿರುವ ಈ ಭೂತ-ದೈವಗಳೆಲ್ಲ ತಮ್ಮ ಭಕ್ತರಂತೆಯೇ ಮಾಂಸ-ಮೀನು ತಿನ್ನುವ, ಶೇಂದಿ-ಮದ್ಯ (ಇತ್ತೀಚೆಗೆ ಬೀರು-ವಿಸ್ಕಿ) ಕುಡಿಯುವ ವರ್ಗಕ್ಕೆ ಸೇರಿರುವುದರಿಂದ ಅವುಗಳ ಆರಾಧನೆಯ ಸಮಯದಲ್ಲಿ ಅದನ್ನೇ ಹರಕೆ ಮೂಲಕ ಅರ್ಪಿಸಲಾಗುತ್ತದೆ.
ಈ ಎರಡು ಜಿಲ್ಲೆಗಳಲ್ಲಿ ರಾಮ, ಕೃಷ್ಣ, ಶಿವನಿಗಿಂತ ಜುಮಾದಿ, ಕೋರ‌್ದಬ್ಬು-ತನ್ನಿಮಾನಿಗಾ, ಪಂಜುರ್ಲಿಗಳೇ ಹೆಚ್ಚು ಜನಪ್ರಿಯ. ಪುರುಷಪ್ರಧಾನ ಸಮಾಜದಲ್ಲಿನ ಲಿಂಗ ಅಸಮಾನತೆ ಬಗ್ಗೆ ಸಿಡಿದೆದ್ದ ಸಿರಿ, ತನ್ನಿಮಾನಿಗಾ ಮೊದಲಾದ ವೀರಮಹಿಳೆಯರ ಕತೆಗಳು ಇಲ್ಲಿನ ಜಾನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಸಿಗುತ್ತವೆ. ಇವರನ್ನು `ಶುದ್ಧ ಹಿಂದೂ'ಗಳಾಗಿ ಮತಾಂತರ ಮಾಡುವ ಪ್ರಯತ್ನದ ಅಂಗವಾಗಿಯೇ ಇಲ್ಲಿನ ಭೂತಕೋಲ, ನಾಗಮಂಡಲ ನಡೆಯುವ ಸ್ಥಳದಲ್ಲಿ ಭಗವಾಧ್ವಜಗಳು ಹಾರಾಡುತ್ತಿರುತ್ತವೆ. `ಮುಸ್ಲಿಂ ಭೂತ'ವನ್ನು ತೋರಿಸಿ ಅವರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ  ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದ ಇಲ್ಲಿನ ಶೂದ್ರ ಸಮುದಾಯ ಕರಾವಳಿಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಳ್ಳುತ್ತಿರುವಂತೆ ಕಾಣುತ್ತಿದೆ. ಪರಾಕಾಷ್ಠೆ ತಲುಪಿರುವ `ನೈತಿಕ ಪೊಲೀಸ್‌ಗಿರಿ'ಯ ಜತೆಯಲ್ಲಿಯೇ ಬಿಜೆಪಿ ಶಾಸಕರೊಬ್ಬರ ಮೇಲೆ ಬ್ಲೂಫಿಲ್ಮ್ ವೀಕ್ಷಣೆಯ ಆರೋಪ, ಇನ್ನೊಬ್ಬ ಶಾಸಕರ ಪತ್ನಿಯ ನಿಗೂಢ ಸಾವು ಮತ್ತು ಬೇರೆ ಹೆಣ್ಣಿನ ಜತೆಗಿದ್ದ ವಿಡಿಯೊ, ರೇವ್‌ಪಾರ್ಟಿಯ ಕಿರಿಕಿರಿ ಮೊದಲಾದ ಘಟನೆಗಳಿಂದಾಗಿ ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನೆ ಮುಖ್ಯವಾಗಿ ಕರಾವಳಿಯ ಮಹಿಳೆಯರಲ್ಲಿ ಮೂಡಲು ಕಾರಣವಾಗಿದೆ. ಈ ಅಸಮಾಧಾನ ರಾಜಕೀಯ ನಿರ್ಧಾರವಾಗಿ ಪರಿವರ್ತನೆಗೊಂಡರೆ ಕರಾವಳಿಯ `ಹಿಂದುತ್ವದ ಪ್ರಯೋಗ ಶಾಲೆ'ಯನ್ನು ಮುಚ್ಚಬೇಕಾಗಬಹುದು.

Monday, April 22, 2013

ರೇವಣ್ಣರನ್ನು ಕಾಡುತ್ತಿರುವ ಪುಟ್ಟಸ್ವಾಮಿಗೌಡ `ಭೂತ'

ಹೊಳೆನರಸಿಪುರ (ಹಾಸನ ಜಿಲ್ಲೆ): ಸ್ಥಳೀಯ ಶಾಸಕರು ಯಾರೆಂದು ಗೊತ್ತಿಲ್ಲದೆ ಹೊಳೆನರ
ಸಿಪುರ ಕ್ಷೇತ್ರದ ಉದ್ದಗಲಕ್ಕೆ ಅಡ್ಡಾಡಿದ ಅಪರಿಚಿತರು ಅಲ್ಲಿನ ಶಾಸಕರನ್ನು ಮರು ಆಯ್ಕೆ ಮಾಡುವಂತೆ ಮತದಾರರಿಗೆ ಶಿಫಾರಸು ಮಾಡಲೂ ಬಹುದು. ಪಟ್ಟಣದಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಕಾಂಕ್ರೀಟು ರಸ್ತೆಗಳು, ವಿದ್ಯುತ್ ಸಬ್‌ಸ್ಟೇಷನ್‌ಗಳು, ಸುಸಜ್ಜಿತ ಆಸ್ಪತ್ರೆ, ನರ್ಸಿಂಗ್‌ನಿಂದ ಪಾಲಿಟೆಕ್ನಿಕ್ ವರೆಗೆ,ಕಾನೂನಿನಿಂದ ಗೃಹವಿಜ್ಞಾನದ ವರೆಗೆ ಶಿಕ್ಷಣ ಸಂಸ್ಥೆಗಳು, ಕ್ಷೇತ್ರದ ಬಹಳಷ್ಟು ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗ... ಇನ್ನೇನು ಬೇಕು?
ಒಂದು ವಿಧಾನಸಭಾ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದೆಂಬುದಕ್ಕೆ ಹೊಳೆನರಸಿಪುರ ಮಾದರಿಯಂತಿದೆ. ಇಷ್ಟೆಲ್ಲ ಅಭಿವೃದ್ಧಿಯ ಚಿತ್ರವನ್ನು ನೋಡಿ ಸಂಭ್ರಮ ಪಟ್ಟವರ ಅಭಿಪ್ರಾಯ ಇಲ್ಲಿನ ಶಾಸಕರ ಹೆಸರು ಹರದನಹಳ್ಳಿ ದೇವೇಗೌಡ ರೇವಣ್ಣ ಎಂದು ಗೊತ್ತಾದ ಕೂಡಲೇ ಬದಲಾಗಲೂಬಹುದು.
ತಪ್ಪು ರೇವಣ್ಣ ಅವರದ್ದಲ್ಲ, ದೊಡ್ಡ ರಾಜಕೀಯ ಕುಟುಂಬದಿಂದ ಬಂದ ವ್ಯಕ್ತಿಯ ಹೆಗಲಮೇಲೆ ಆ ಪರಂಪರೆಯ ಹೊರೆ ಇದ್ದೇ ಇರುತ್ತದೆ. ರೇವಣ್ಣ  ಅವರು ಹೊಳೆನರಸಿಪುರದ ಶಾಸಕ ಎನ್ನುವುದಕ್ಕಿಂತಲೂ ಮುಖ್ಯವಾಗಿರುವುದು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಮ್ಮ ಎನ್ನುವುದು.
ಆದುದರಿಂದ ಎಲ್ಲರೂ ಅದೇ ವಂಶಪರಂಪರೆಯ ಕನ್ನಡಕದಲ್ಲಿಯೇ ಅವರನ್ನು ನೋಡುತ್ತಾರೆ. ಮತಹಾಕುವವರ ತಲೆಯಲ್ಲಿ ರೇವಣ್ಣ ಮಾತ್ರ ಇಲ್ಲ ಇಡೀ ದೇವೇಗೌಡರ ಕುಟುಂಬ ಇರುತ್ತದೆ. ಹೊಳೆನರಸಿಪುರ ಎಂಬ ವಿಧಾನಸಭಾ ಕ್ಷೇತ್ರ ಎನ್ನುವುದು ಒಂದು ರೀತಿ ಇಂದಿರಾಗಾಂಧಿ ಕುಟುಂಬಕ್ಕೆ ರಾಯಬರೇಲಿ ಎಂಬ ಲೋಕಸಭಾ ಕ್ಷೇತ್ರ ಇದ್ದ ಹಾಗೆ.
ಸ್ವಾತಂತ್ರ್ಯಾನಂತರ ಈ ಕ್ಷೇತ್ರದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಟ್ಟರೆ ಉಳಿದೆಲ್ಲ ಸಲ ಗೆದ್ದದ್ದು ದೇವೇಗೌಡರ ಕುಟುಂಬ. ದೇವೇಗೌಡರು ಆರುಬಾರಿ ಮತ್ತು ರೇವಣ್ಣ ಮೂರು ಬಾರಿ ಗೆದ್ದಿದ್ದಾರೆ. ರಾಜಕೀಯ ಪ್ರವೇಶದ ಪ್ರಾರಂಭದಲ್ಲಿ ದೇವೇಗೌಡರು ಪಕ್ಷೇತರರಾಗಿ ಇಲ್ಲಿ ಎರಡು ಬಾರಿ ಗೆದ್ದಿದ್ದರು.
ಇಷ್ಟು ಸುರಕ್ಷಿತವಾಗಿದ್ದ ಕ್ಷೇತ್ರವನ್ನು ರೇವಣ್ಣ ಅವರು ಬೆಂಗಳೂರಿನಲ್ಲಿಯೇ ಕೂತು ಗೆಲ್ಲಬೇಕಾಗಿತ್ತು. ಆದರೆ ಅವರು ಪತ್ನಿ ಮತ್ತು ಮಗನ ಜತೆ ಬಂದು ಇಲ್ಲಿ ರಾತ್ರಿಹಗಲು ಬೆವರು ಸುರಿಸುತ್ತಿದ್ದಾರೆ. `ಚುನಾವಣೆಯ ಕಾಲದಲ್ಲಿ ಮಾತ್ರವಲ್ಲ ಬಾಕಿ ದಿನಗಳಲ್ಲಿಯೂ ವಾರಕ್ಕೆರಡು ದಿನ ತಪ್ಪದೆ ಇಲ್ಲಿಗೆ ಬರುತ್ತೇನೆ' ಎಂದರು ಹೊಳೆನರಸಿಪುರದ ತಮ್ಮ ಮನೆಯಲ್ಲಿ ಕೂತಿದ್ದ ರೇವಣ್ಣ. ಪತ್ನಿ ಭವಾನಿ ಪಕ್ಷದ ಕಾರ್ಯಕರ್ತರನ್ನು ಉಪಚರಿಸುತ್ತಾ ಮನೆ ತುಂಬಾ ಓಡಾಡುತ್ತಿದ್ದರು.
ಇವರನ್ನು ಕಾಡುತ್ತಿರುವ ಅಸುರಕ್ಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅಭಿವೃದ್ಧಿಯ ವಿಷಯ ಈಗಲೂ ಇಲ್ಲಿ ಚುನಾವಣಾ ಚರ್ಚಾ ವಸ್ತು ಅಲ್ಲ.  ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಅಭ್ಯರ್ಥಿಗಳಾಗಿರುವ ರೇವಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಜಿ. ಅನುಪಮ ಕೂಡಾ ಪ್ರಧಾನ ಪಾತ್ರಧಾರಿಗಳಲ್ಲ. ಇವರಿಬ್ಬರ ಹಿನ್ನೆಲೆಯಲ್ಲಿ ಕ್ರಮವಾಗಿ ಅವರಿಬ್ಬರ ಅಪ್ಪ ಮತ್ತು ಮಾವನ ರಾಜಕೀಯದ ನೆರಳಿದೆ.
ಪುಟ್ಟಸ್ವಾಮಿಗೌಡರು ಜೀವಂತ ಇರುವ ವರೆಗೆ ಹೊಳೆನರಸಿಪುರ ಕ್ಷೇತ್ರದಲ್ಲಿ ದೇವೇಗೌಡರ ಏಕಚಕ್ರಾಧಿಪತ್ಯಕ್ಕೆ ಸವಾಲೊಡ್ಡುತ್ತಲೇ ಇದ್ದವರು. ಪ್ರಾರಂಭದ ದಿನದ ಸ್ನೇಹವನ್ನು ಕಡಿದುಕೊಂಡು ದೇವೇಗೌಡರಿಂದ ಅವರು ದೂರವಾದ ನಂತರ ಈ ಕ್ಷೇತ್ರದ ಚುನಾವಣೆ ಎಂದರೆ  ಇಬ್ಬರು ಗೌಡರ ನಡುವಿನ ಕಾಳಗ ಎಂದೇ ಪರಿಗಣಿಸಲಾಗುತ್ತಿತ್ತು. ಈಗ ಅಪ್ಪನ ಪರವಾಗಿ ಮಗ, ಮಾವನ ಪರವಾಗಿ ಸೊಸೆ ಕದನ ಕಣದಲ್ಲಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡುವವರು ಅನುಪಮಾ ಅವರಿಗಿಂತ ಹೆಚ್ಚಾಗಿ ಪುಟ್ಟಸ್ವಾಮಿಗೌಡರ ಹೆಸರು ಕೂಗಿ ಜೈಕಾರ ಹಾಕುತ್ತಿರುವುದು ಮತ್ತು ರೇವಣ್ಣ ಮಾತೆತ್ತಿದರೆ `ದೊಡ್ಡಗೌಡರ' ನಾಮಸ್ಮರಣೆ ಮಾಡುವುದು ಇದೇ ಕಾರಣಕ್ಕಾಗಿ.
ಪುಟ್ಟಸ್ವಾಮಿಗೌಡರ ಸಾವಿನ ನಂತರ ಗೌಡರ ಕಾಳಗದಲ್ಲಿ ದೇವೇಗೌಡ ಕುಟುಂಬ ಕೈ ಮೇಲಾಗಿರುವುದು ಸ್ಪಷ್ಟ. ಮಾವನನ್ನು ಮಾತ್ರವಲ್ಲ ಗಂಡನನ್ನೂ ಕಳೆದುಕೊಂಡ ಅನುಪಮಾ ಅವರ ಪರವಾಗಿ ಅನುಕಂಪದ ಅಲೆಯ ಜತೆಗೆ ಪುಟ್ಟಸ್ವಾಮಿಗೌಡರ ಕಟ್ಟಾ ಬೆಂಬಲಿಗರ ಪಡೆ ಇರುವುದು ನಿಜ. ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕಾಣಿಸುತ್ತಿಲ್ಲ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಂಡಸಿ ಶಿವರಾಂ ಅವರು ಅನುಪಮಾ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದವರಲ್ಲ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಆಗಿರುವ ನಿರಾಶೆ ಅವರ ಗೈರುಹಾಜರಿಯಲ್ಲಿ ಕಾಣುತ್ತಿದೆ. ಇಷ್ಟೆಲ್ಲ ಪ್ರತಿಕೂಲ ಅಂಶಗಳ ನಡುವೆಯೂ ಅನುಪಮಾ ಮಾವನ ಸಾವಿನ ನಂತರದ ದಿನಗಳಲ್ಲಿ ಗೌಡರ ಕುಟುಂಬದ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ.
`ರೇವಣ್ಣ ಬೆಂಬಲಿಗರು ಕಟ್ಟಾ ನಿಷ್ಠಾವಂತರು ಎನ್ನುವ ಹಾಗಿಲ್ಲ, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರೇವಣ್ಣ ಅವರ ಮಾತು ಸರ್ಕಾರದಲ್ಲಿ ಬೆಲೆ ಇರುವುದು ಗೊತ್ತಾಗಿರುವ ಕಾರಣಕ್ಕೆ ಈ ಬೆಂಬಲಿಗರು ಸುತ್ತುವರಿದಿರಬಹುದು. ಆದರೆ ಅನುಪಮಾ ಬೆಂಬಲಿಗರು ರೇವಣ್ಣ ಒಡ್ಡುತ್ತಲೇ ಇರುವ ಎಲ್ಲ ಬಗೆಯ ಆಸೆ-ಆಮಿಷಗಳನ್ನು ಮೆಟ್ಟಿನಿಂತು ಜತೆಯಲ್ಲಿರುವವರು' ಎಂದು ಹೇಳುತ್ತಾರೆ ತನ್ನನ್ನು ಪಕ್ಷಾತೀತ ಎಂದು ಹೇಳಿಕೊಂಡ ಅಗ್ರಹಾರ-ಚೋಳೇನಹಳ್ಳಿಯ ಶಿವರಾಮೇಗೌಡರು.
ರೇವಣ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಇರುವ ಯಾವ ಚಿಂತೆಯೂ ಇಲ್ಲ. `ತಂದೆ-ಮಕ್ಕಳ ಪಕ್ಷ' ಎಂದೇ ವಿರೋಧಿಗಳು ಗೇಲಿ ಮಾಡುವ ಜೆಡಿ (ಎಸ್)ನಲ್ಲಿ ಕನಿಷ್ಠ ಕ್ಷೇತ್ರದ ಮಟ್ಟಿಗೆ ಅವರದ್ದೇ ಕೊನೆಮಾತು.
ದೇವೇಗೌಡರು ಹಾಸನ ಲೋಕಸಭಾ ಸದಸ್ಯರೂ ಆಗಿರುವುದರಿಂದ ಅವರ ಪರವಾಗಿರುವ ಮತಗಳೂ ಕೂಡಾ ರೇವಣ್ಣ ಬುಟ್ಟಿಗೆ ಬಂದು ಬೀಳಬಹುದು. ಆದರೆ ಅಣ್ಣ ಕುಮಾರಸ್ವಾಮಿ ಅವರಂತೆ ರೇವಣ್ಣ ಅವರದ್ದು ಜನಪ್ರಿಯ ರಾಜಕಾರಣದ ಕಾರ್ಯಶೈಲಿ ಅಲ್ಲ. ಪಕ್ಷದ ಕಾರ್ಯಕರ್ತರು, ನಾಯಕರು ಯಾರೇ ಇರಲಿ ಯಾರೂ ರೇವಣ್ಣ ಮುಂದೆ ಕೂರುವ ಹಾಗಿಲ್ಲ, ಕೈಕಟ್ಟಿಕೊಂಡು ನಿಲ್ಲಲೇ ಬೇಕು. ಇದು ಕುಮಾರಸ್ವಾಮಿಯವ `ಬ್ರದರ್' ರಾಜಕೀಯದಿಂದ ಭಿನ್ನ.
ಮುಖಚಹರೆ, ದೇಹದ ಅಂಗಾಂಗಗಳ ಮೇಲೆ ಕೈಬೆರಳುಗಳ ಚಲನೆ, ಧ್ವನಿಯ ಏರಿಳಿತದಲ್ಲಿ ಮಾತ್ರವಲ್ಲ ಕಾರ್ಯಶೈಲಿಯಲ್ಲಿಯೂ ರೇವಣ್ಣ ಅವರಿಗೆ ಅಪ್ಪನ ಹೋಲಿಕೆ ಇದೆ. ಸರ್ಕಾರಿ ಕಡತಗಳನ್ನು ಓದಿ ಗ್ರಹಿಸುವ ದೇವೇಗೌಡರ ಸೂಕ್ಷ್ಮಬುದ್ದಿ ಓದಿದ್ದು ಕಡಿಮೆಯಾದರೂ ರೇವಣ್ಣ ಅವರಲ್ಲಿಯೂ ಇದೆ. ಇದರಿಂದಾಗಿಯೇ ಸಚಿವರಾಗಿದ್ದಾಗಲೂ ಅಧಿಕಾರಿಗಳ ಮೇಲೆ ಅವರಿಗೆ ನಿಯಂತ್ರಣ ಇತ್ತು. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದದ ಆರೋಪಗಳ ಅನೇಕ ಕಡತಗಳು ಪ್ರಧಾನ ವಿರೋಧಪಕ್ಷದ ನಾಯಕರಿಗೆ ಸಿಗದೆ ರೇವಣ್ಣ ಕೈಸೇರುತ್ತಿದ್ದದ್ದಕ್ಕೆ ಕೂಡಾ ಇದು ಕಾರಣ. ಇದನ್ನೇ ಕೈಯಲ್ಲಿಟ್ಟುಕೊಂಡು ರೇವಣ್ಣ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಇದೆ.
`ಅಜೀರ್ಣವಾಗುವಷ್ಟು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಕ್ಷೇತ್ರದ ಮತದಾರರ ಹಿತದೃಷ್ಟಿಗಿಂತಲೂ ಹೆಚ್ಚಾಗಿ ಬೆಂಬಲಿಗ ಗುತ್ತಿಗೆದಾರರಿಗೆ ನೆರವಾಗಲು ಮಾಡಿದ್ದಾರೆ' ಎನ್ನುವುದೇ ರೇವಣ್ಣ ಅವರ ಮೇಲಿನ ಪ್ರಮುಖ ಆರೋಪ.  ಸರಿಯಾಗಿರುವ ರಸ್ತೆಗಳೂ ದುರಸ್ತಿಯಾಗುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಬೀಳುತ್ತದೆ.
`ಅಭಿವೃದ್ಧಿಯ ಅಜೀರ್ಣತೆ' ಬಗ್ಗೆ ಆರೋಪಿಸುವವರು ಪಟ್ಟಣದ ಮಧ್ಯ ಹಾದುಹೋಗುವ ಹೇಮಾವತಿ ನದಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿರುವುದನ್ನು ತೋರಿಸುತ್ತಾರೆ. `ಕಳೆದ 2-3 ದಶಕಗಳಲ್ಲಿ ಹೇಮಾವತಿ ನದಿಯಲ್ಲಿ ನೆರೆ ಬಂದಿಲ್ಲ. ಹೀಗಿದ್ದಾಗ ತಡೆಗೋಡೆ ಯಾಕೆ? ಆ ದುಡ್ಡನ್ನು ಹಳ್ಳಿಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸುತ್ತಾರೆ ರೇವಣ್ಣ ಅವರ ಪ್ರತಿಸ್ಪರ್ಧಿ ಎಸ್.ಜಿ. ಅನುಪಮಾ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಡಾ ಪಕ್ಷ ರಾಜಕೀಯ ನಡೆದಿದೆ ಎಂದು ಅವರು ಆರೋಪಿಸುತ್ತಾರೆ. ವಿಚಿತ್ರವೆಂದರೆ ಅಭಿವೃದ್ಧಿ ಇಲ್ಲಿನ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವುದು ಅಭಿವೃದ್ಧಿ ಆಗಿಲ್ಲ ಎಂದಲ್ಲ, ಅಜೀರ್ಣವಾಗುವಷ್ಟು ಆಗಿದೆ ಎಂದು.
`ಸೋಲು-ಗೆಲುವಿನ ಬಗ್ಗೆ ಅಣ್ಣಾವ್ರ ತಲೆಕೆಡಿಸಿಕೊಂಡಿಲ್ಲ, `ಹೂ ಬಿದ್ದಾಗಿದೆ' ಅವರೇ ಗೆಲ್ಲುತ್ತಾರೆ' ಎನ್ನುತ್ತಾರೆ ಹೆಸರು ಬರೆಯಬೇಡಿ ಎಂದು ಕೇಳಿಕೊಂಡ ರೇವಣ್ಣ ಬೆಂಬಲಿಗರೊಬ್ಬರು. ದೇವೇಗೌಡರಂತೆ ರೇವಣ್ಣ ಅವರಿಗೂ ದೇವರು, ಜ್ಯೋಷಿಗಳ ಮೇಲೆ ಅಪಾರ ನಂಬಿಕೆ. ಗಳಿಗೆ-ಮುಹೂರ್ತ ನೋಡದೆ ಮನೆಯಿಂದ ಹೊರಗೆ ಕಾಲಿಡುವವರಲ್ಲ. ಅವರ ಎಲ್ಲ ಲೆಕ್ಕಾಚಾರಗಳೂ ಜ್ಯೋತಿಷಿಗಳ ಸಲಹೆ ಮೇಲೆ ನಡೆಯುವುದು. ರೇವಣ್ಣನವರು ಬೆವರು ಸುರಿಸುತ್ತಿರುವುದು ಜ್ಯೋತಿಷಿ ನುಡಿದಿರುವ ಭವಿಷ್ಯ ನಿಜಮಾಡುವುದಕ್ಕೋ, ಸುಳ್ಳುಮಾಡುವುದಕ್ಕೋ ಎಂಬುದನ್ನು ಅವರೇ ಹೇಳಬೇಕು, ಹೇಳುವುದಿಲ್ಲ.