Wednesday, April 24, 2013

ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ.

ಮಂಗಳೂರು: `ಹಿಂದೂ ಕೋಮುವಾದದ ಬಗ್ಗೆ ಇಷ್ಟೆಲ್ಲ ಕೂಗಾಡುವ ನಿಮ್ಮ ಕಣ್ಣಿಗೆ ಮುಸ್ಲಿಂ ಕೋಮುವಾದ ಕಾಣುವುದೇ ಇಲ್ವಾ' ಎಂದು ಹಿಂದೂ ಸಂಘಟನೆಯ ನಾಯಕರು ಜಾತ್ಯತೀತರೆಂದು ಹೇಳಿಕೊಳ್ಳುವವರ
ನ್ನು ಆಗಾಗ ಕೆಣಕುವುದುಂಟು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಶ್ನೆ ಉಳಿದೆಲ್ಲ ಕಡೆಗಿಂತಲೂ ಹೆಚ್ಚು ಕೇಳಿಸುತ್ತದೆ. ಇದು ತಳ್ಳಿಹಾಕುವಂತಹ ಪ್ರಶ್ನೆಯೂ ಅಲ್ಲ.
ಹಿಂದೂಗಳಂತೆ ಮುಸ್ಲಿಮರಲ್ಲಿ ಕೋಮುವಾದಿಗಳಿದ್ದರೂ ಇತ್ತೀಚಿನವರೆಗೆ ಅವರಿಗೆ ಸಂಘಟನೆಯ ಬೆಂಬಲ ಇರಲಿಲ್ಲ. ಬದಲಾಗಿರುವ ಪರಿಸ್ಥಿತಿಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ ಆ ಕೊರತೆಯನ್ನು ತುಂಬುವಂತೆ ಬೆಳೆಯುತ್ತಿದೆ. ಸಂಘ ಪರಿವಾರದ ನಾಯಕರು `ಮುಸ್ಲಿಂ ಗುಮ್ಮ'ನನ್ನು ತೋರಿಸಿ ಸಂಘಟನೆಯನ್ನು ಬೆಳೆಸುತ್ತಿದ್ದರೆ, ಪಾಪ್ಯುಲರ್ ಫ್ರಂಟ್ `ಹಿಂದೂ ಗುಮ್ಮ'ನನ್ನು ತಮ್ಮ ಸಂಘಟನೆ ಬಲಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಹಿಂದೂ ಕೋಮುವಾದ ಬೆಳೆಯುತ್ತಾ ಹೋದಂತೆ ಸಮಾನಾಂತರವಾಗಿ ಮುಸ್ಲಿಂ ಕೋಮುವಾದವೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ. ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಮುಸ್ಲಿಂ ವಿರೋಧಿ ಎಂಬ ಆರೋಪಕ್ಕೊಳಗಾಗಿರುವ ಬಿಜೆಪಿ ನಿಶ್ಚಿಂತೆಯಿಂದಿದ್ದರೆ, ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತಳಮಳಕ್ಕೀಡಾಗಿದೆ. ಈ ವಿಲಕ್ಷಣ ವಿದ್ಯಮಾನವೇ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯನ್ನು ಕುತೂಹಲಕಾರಿಯಾಗಿ ಮಾಡಿದೆ.
`ಪಾಪ್ಯುಲರ್ ಫ್ರಂಟ್'ನ ಸಂಘಟನೆಯ ರೂಪ, ಉದ್ದೇಶ ಮತ್ತು ಚಟುವಟಿಕೆಗಳನ್ನು ಗಮನಿಸಿದವರು ಇದು `ಮುಸ್ಲಿಮರ ಆರ್‌ಎಸ್‌ಎಸ್' ಎಂದು ಆರೋಪಿಸುವುದುಂಟು. ಆರ್‌ಎಸ್‌ಎಸ್ ರೀತಿಯಲ್ಲಿಯೇ ಇದಕ್ಕೆ ಹಲವಾರು ಅಂಗ ಸಂಸ್ಥೆಗಳಿವೆ.
ವಿಶ್ವಹಿಂದೂ ಪರಿಷತ್ ಮಾದರಿಯಲ್ಲಿ ಧಾರ್ಮಿಕ ಗುರುಗಳಿಗಾಗಿ `ಆಲ್ ಇಂಡಿಯಾ ಇಮಾಮಿ ಕೌನ್ಸಿಲ್', ಎಬಿವಿಪಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಸ್ಟೂಡೆಂಟ್ ಕ್ಯಾಂಪಸ್ ಫ್ರಂಟ್', ದುರ್ಗಾವಾಹಿನಿಯನ್ನು ಹೋಲುವಂತೆ ಮಹಿಳೆಯರಿಗಾಗಿ `ನ್ಯಾಷನಲ್ ವುಮೆನ್ ಫ್ರಂಟ್' ಮತ್ತು ಬಿಜೆಪಿ ಮಾದರಿಯಲ್ಲಿ ರಾಜಕೀಯ ಮುಖವಾಗಿ `ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ' (ಎಸ್‌ಡಿಪಿಐ) ಇವೆ. ಆರ್‌ಎಸ್‌ಎಸ್ ಖಾಕಿ ಚಡ್ಡಿ ಧರಿಸಿದರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಂಘ ಪರಿವಾರದ ನಾಯಕರಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಈ ಸಂಘಟನೆಯ ನಾಯಕರ ಮಾತು-ಕೃತಿಗಳಲ್ಲಿ ಧಾರ್ಮಿಕ ಮೂಲಭೂತವಾದದ ವಾಸನೆ ಬಡಿಯುತ್ತಿದೆ. ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಕಾಣಿಸಿಕೊಂಡರೆ ಸಂಘ ಪರಿವಾರದ ಸದಸ್ಯರು ದಾಳಿ ಮಾಡಿದರೆ, ಹಿಂದೂ ಹುಡುಗನ ಜತೆ ಮುಸ್ಲಿಂ ಹುಡುಗಿ ಕಾಣಿಸಿಕೊಂಡರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಅದನ್ನೇ ಮಾಡುತ್ತಾರೆ. ಇವರ ದಾಳಿಗಳ ಸಂಖ್ಯೆ ಕಡಿಮೆ ಇರಬಹುದು, ಉದ್ದೇಶದಲ್ಲಿ ವ್ಯತ್ಯಾಸ ಇಲ್ಲ. ಇತ್ತೀಚೆಗೆ ಜಿಲ್ಲೆಯ ಬಜಪೆಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮೂಲಭೂತವಾದಿ ಮುಸ್ಲಿಮರ ಸಂಘಟನೆ ಎಂಬ ಆರೋಪಕ್ಕೊಳಗಾಗಿರುವ `ಪಾಪ್ಯುಲರ್ ಫ್ರಂಟ್' ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ್ದು ಕಡಿಮೆ. `ಪಾಪ್ಯುಲರ್ ಫ್ರಂಟ್' ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿರುವುದೇ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಕಾಲದಲ್ಲಿ ಎನ್ನುವುದು ಗಮನಾರ್ಹ. ಪೊಲೀಸ್ ಇಲಾಖೆಯನ್ನು ಅಂಗೈಯಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ನಾಯಕರು ಪಾಪ್ಯುಲರ್ ಫ್ರಂಟ್‌ನ ಬೆಳವಣಿಗೆಯನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ.
ಸರ್ಕಾರದಿಂದ ಯಾವುದೇ ಬಗೆಯ ಕಿರುಕುಳ ಅನುಭವಿಸಿದ ಬಗ್ಗೆ ಪಾಪ್ಯುಲರ್ ಫ್ರಂಟ್ ನಾಯಕರೂ ದೂರಿಲ್ಲ. ಇವರು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ದಾಳಿಗೆ ಗುರಿ ಮಾಡುತ್ತಿರುವುದು ಕೂಡಾ ನಿಜ. ಇವೆಲ್ಲವನ್ನೂ ನೋಡಿದವರು ಎಲ್ಲೋ ಒಂದು ಕಡೆ ಎರಡೂ ಸಂಘಟನೆಗಳ ನಡುವೆ ಹೊಂದಾಣಿಕೆ ಇದೆಯೇನೋ ಎಂಬ ಸಂಶಯ ವ್ಯಕ್ತ ಪಡಿಸುತ್ತಿರುವುದು ಸಹಜವೇ ಆಗಿದೆ.
ಆರ್‌ಎಸ್‌ಎಸ್ ಮಾಜಿ ನಾಯಕರೊಬ್ಬರ ಜತೆ ಮಾತನಾಡುತ್ತಿದ್ದಾಗ ಅವರೊಂದು ಘಟನೆಯನ್ನು ಹೇಳಿದರು. ನಾಲ್ಕೈದು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ಇಲ್ಲಿನ ನೆಹರೂ ಮೈದಾನದಲ್ಲಿ ಮುಸ್ಲಿಮರ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿತ್ತು. ಇದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಸಂಘ ಪರಿವಾರದ ಪ್ರಮುಖ ನಾಯಕರೊಬ್ಬರ ಬಳಿ ಹೋಗಿ ಮುಸ್ಲಿಮರಿಗಿಂತ ದೊಡ್ಡದಾದ ಹಿಂದೂ ಸಮಾಜೋತ್ಸವ ಮಾಡಬೇಕೆಂದು ಒತ್ತಾಯಿಸಿದರಂತೆ.
ಅವರ ಮಾತು ಕೇಳಿ ನಕ್ಕ ಆ ನಾಯಕರು `ಮೂರ್ಖ ನಿನಗೆ ಬುದ್ಧಿ ಇಲ್ಲ, ನಾವೇನೂ ಮಾಡುವುದು ಬೇಡ, ಅವರಿಗೆ ಇನ್ನಷ್ಟು ಸಮ್ಮೇಳನಗಳನ್ನು ಮಾಡಲು ದುಡ್ಡು ಕೊಟ್ಟು ಬಿಡುವ' ಎಂದರಂತೆ. ಮುಸ್ಲಿಮರು ಬಹಿರಂಗವಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಿದರೆ ಅದರಿಂದ ಅಸುರಕ್ಷತೆಗೀಡಾಗುವ ಹಿಂದೂಗಳು ಇನ್ನಷ್ಟು ಸಂಖ್ಯೆಯಲ್ಲಿ ತಮ್ಮ ಕಡೆ ಬರುತ್ತಾರೆ ಎನ್ನುವುದು ಆ ನಾಯಕರ ತಂತ್ರ. ಪಾಪ್ಯುಲರ್ ಫ್ರಂಟ್‌ನ ನಾಯಕರಲ್ಲಿಯೂ ಈ ಉದ್ದೇಶ ಇದ್ದ ಹಾಗಿದೆ.
ಇದೇ ಪಾಪ್ಯುಲರ್ ಫ್ರಂಟ್‌ನ ರಾಜಕೀಯ ಮುಖ ಎಸ್‌ಡಿಪಿಐ. 2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಿದಾಗ ಬಹಳ ಮಂದಿ ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 206 ಕಡೆ ಸ್ಪರ್ಧಿಸಿ ಹದಿನೇಳು ಸ್ಥಾನಗಳನ್ನು ಗೆದ್ದಿರುವುದು ಮಾತ್ರವಲ್ಲ, ಹದಿನೆಂಟು ಕಡೆ ಎರಡನೆ ಸ್ಥಾನ ಪಡೆದ ನಂತರ ರಾಜಕೀಯ ಪಕ್ಷಗಳು ಜಾಗೃತವಾಗಿವೆ.
ಈಗ ರಾಜ್ಯದ 25 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆಗಿಳಿದಿದ್ದರೂ ಅದು ಗಮನ ಕೇಂದ್ರೀಕರಿಸಿರುವುದು ದಕ್ಷಿಣ ಕನ್ನಡದ ಮೇಲೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ, ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಬಹಿರಂಗವಾಗಿ `ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಸಮಾನ ಶತ್ರುಗಳು' ಎಂದು ಹೇಳುವ ಎಸ್‌ಡಿಪಿಐ ನಾಯಕರು ಖಾಸಗಿಯಾಗಿ `ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ' ಎನ್ನುತ್ತಾರೆ. ಇದು ಎಷ್ಟು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಕಾರ್ಯತಂತ್ರ ಸ್ಪಷ್ಟ. ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳದೆ ಇರುವ ಬಿಜೆಪಿಗೆ ಆ ಮತಗಳು ಬರದೆಹೋದರೂ ನಷ್ಟ ಇಲ್ಲ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಲಾಗದು. ಕೆಲವು ಸಾವಿರದಷ್ಟು ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡರೂ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಬುಡಮೇಲಾಗಬಹುದು.
ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ರಮಾನಾಥ ರೈ ಗೆದ್ದಿರುವುದು ಕೇವಲ 1251 ಮತಗಳಿಂದ. ಈ ಬಾರಿಯೂ ಅಲ್ಲಿ ತುರುಸಿನ ಸ್ಪರ್ಧೆ ಇದೆ. ಈ ಸ್ಥಿತಿಯಲ್ಲಿ ಅಲ್ಲಿ ಕಣದಲ್ಲಿರುವ ಎಸ್‌ಡಿಪಿಐ ಅಭ್ಯರ್ಥಿ ಪಡೆಯುವ ಒಂದೆರಡು ಸಾವಿರ ಮತಗಳು ಕೂಡಾ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಬಹುದು. ಇದೇ ರೀತಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆದ್ದಿರುವುದು 7149 ಮತಗಳಿಂದ. ಅಲ್ಲಿನ ಎಸ್‌ಡಿಪಿಐ ಅಭ್ಯರ್ಥಿ ಏಳೆಂಟು ಸಾವಿರ ಮತಗಳನ್ನು ಪಡೆದರೆ ಕಾಂಗ್ರೆಸ್ ದೋಣಿ ಮುಳುಗಬಹುದು.
`ತಾತ್ವಿಕವಾಗಿ ನೀವೇ ವಿರೋಧಿಸುತ್ತಿರುವ ಬಿಜೆಪಿಯನ್ನು ನಿಮ್ಮ ಸ್ಪರ್ಧೆಯಿಂದಾಗಿ ಗೆಲ್ಲಿಸಿದ ಹಾಗಾಗುವುದಿಲ್ಲವೇ? ಬಿಜೆಪಿ ಜತೆ ಇಂತಹದ್ದೊಂದು ಗುಪ್ತ ಹೊಂದಾಣಿಕೆಯನ್ನೂ ನೀವು ಮಾಡಿಕೊಂಡಿದ್ದೀರಿ ಎಂಬ ಆರೋಪವೂ ಇದೆ ಅಲ್ಲವೇ?' ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರನ್ನು ಕೇಳಿದರೆ `ಅಂತಹ ಆರೋಪಗಳಿಗೆ ಯಾವ ಆಧಾರವೂ ಇಲ್ಲ. ಈ ಚುನಾವಣೆಯಲ್ಲಿ ಹಾಗೆ ಅನಿಸಲೂಬಹುದು. ಆದರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಾವು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.
`ಅವರ ಉದ್ದೇಶ ಸ್ಪಷ್ಟ. ಅದು ಮೂಲಭೂತವಾದಿಗಳ ಜತೆಯಲ್ಲಿ ಕೈಜೋಡಿಸಿ ಜಾತ್ಯತೀತ ಶಕ್ತಿಗಳನ್ನು ಸೋಲಿಸುವುದು. ಇಂತಹ ಕುತಂತ್ರಗಳಿಗೆ ಮುಸ್ಲಿಮರು ಬಲಿಯಾಗಲಾರರು' ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ನಂತರ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಟಿಕೆಟ್ ವಂಚಿತರ ಬಂಡಾಯ ಬೆದರಿಸುತ್ತಿದ್ದರೆ ಇನ್ನೊಂದೆಡೆ ಎಸ್‌ಡಿಪಿಐ ಭೂತ ಕಾಡುತ್ತಿದೆ.

No comments:

Post a Comment