Tuesday, December 16, 2014

ಮರೆತು ಹೋದದ್ದು....

ಮರೆತು ಹೋದದ್ದು....
‘ ನಿಮ್ಮ ಭಾಷಣದ 50 ನಿಮಿಷದ ರೆಕಾರ್ಡಿಂಗ್ ನನ್ನಲ್ಲಿದೆ’ ಎಂದು ಸ್ನೇಹಿತರಾದ ಐವನ್ ಡಿಸಿಲ್ವ ಅವರು ಹೇಳಿದಾಗಲೇ ಮಂಗಳೂರಿನಲ್ಲಿ ನಡೆದ ಜನನುಡಿಯ ಗೋಷ್ಠಿಯಲ್ಲಿ ನಾನು ಜಾಸ್ತಿ ಮಾತನಾಡಿದ್ದೇನೆ ಎಂದು ಗೊತ್ತಾಗಿದ್ದು. ನೀಲಾ ಅವರ ಪ್ರಾಸ್ತವಿಕ ಭಾಷಣ ಮತ್ತು ಕವಿಗೋಷ್ಠಿಯೊಂದನ್ನು ಹೊರತುಪಡಿ ಎರಡು ದಿನಗಳಲ್ಲಿ ಬಹುತೇಕ ಎಲ್ಲರ ಭಾಷಣಗಳನ್ನು ಕೇಳಿದ್ದ ನಾನು, ಸೇಡು ತೀರಿಸಿಕೊಳ್ಳಲು ನನಗರಿವಿಲ್ಲದಂತೆ ಇಷ್ಟೊಂದು ದೀರ್ಘವಾಗಿ ಮಾತನಾಡಿರಬಹುದು. ಕ್ಷಮೆ ಇರಲಿ.
ಇಷ್ಟುದ್ದ ಮಾತನಾಡಿದರೂ ಹೇಳಬೇಕಾದ ಕೆಲವು ಮುಖ್ಯ ವಿಚಾರಗಳನ್ನು ಹೇಳಿಲ್ಲ ಮತ್ತು ಹೇಳಿದ ವಿಚಾರಗಳನ್ನು ಕೂಡಾ ಸ್ಪಷ್ಟಪಡಿಸಿಲ್ಲ ಎಂದು ನನಗನಿಸಿದೆ. ಆ ಬಗ್ಗೆ ಮುಂದೆ ಚರ್ಚಿಸುವ. ಆದರೆ ಮುಖ್ಯವಾಗಿ ಜನನುಡಿಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದ ಮುನೀರ್ ಮತ್ತು ಅವರ ಸಂಗಾತಿಗಳನ್ನು ನಾನು ನೆನೆಸಿಕೊಳ್ಳಬೇಕಿತ್ತು. ಆ ಲೋಪ ನನ್ನಿಂದಾಗಿದೆ. ಕೊರತೆಗಳ ಪಟ್ಟಿಯನ್ನು ಸಲೀಸಾಗಿ ಮಾಡಿಬಿಡಬಹುದು, ಸಂಘಟನೆಯ ಕಷ್ಟವನ್ನು ಅನುಭವಿಸಿದವರೇ ಬಲ್ಲರು. ಅದೂ ಮಂಗಳೂರಿನಲ್ಲಿ ಇಂತಹದ್ದೊಂದು ಕಾರ್ಯಕ್ರಮವೊಂದನ್ನು ಆಯೋಜಿಸುವುದೆಂದರೆ ಅಪ್ಪಳಿಸಿ ಬರುವ ಕಡಲಿನ ತೆರೆಗಳ ಎದುರು ಈಜುವುದೆಂದೇ ಅರ್ಥ.
ಇಷ್ಟೊಂದು ದಿನಗಳ ದಣಿವರಿಯದ ಕೆಲಸದ ನಂತರವೂ ಮುನೀರ್ ಮತ್ತು ಗೆಳೆಯರ ಮುಖಗಳಲ್ಲಿ ನನಗೆ ಸುಸ್ತು ಕಾಣಿಸಲಿಲ್ಲ. ಭಾನುವಾರ ರಾತ್ರಿ ಎಲ್ಲ ಮುಗಿದು ಊಟಕ್ಕೆ ಹೊರಟಾಗಲೂ ಕಿರಿಯರಾದ ಜೀವನ್ ಕುಮಾರ್ ಕುತ್ಯಾಡಿ ಮತ್ತು ಈರ್ಷಾದ್ ನಾನು ಆಡಿದ ಮಾತುಗಳ ಬಗ್ಗೆ ಸ್ಪಷ್ಟೀಕರಣ ಕೇಳಿ ನನ್ನನ್ನು ಹಿಡಿದು ನಿಲ್ಲಿಸಿದ್ದರು. ನಗು, ತಮಾಷೆ, ತುಂಟಾಟ ಎಲ್ಲವೂ ಮುಂದುವರಿದಿತ್ತು. ಮುನೀರ್ ಸೇರಿದಂತೆ ಎಲ್ಲರೂ ಕನಿಷ್ಠ 3-4 ಕಿಲೋ ತೂಕ ಕಳೆದುಕೊಂಡಿರಬೇಕು. ಆದರೆ ಅವರ ಉತ್ಸಾಹ ಕುಂದಿರಲಿಲ್ಲ. ನಾನಂತೂ ಇವರೆಲ್ಲರ ಜತೆ ಸೇರಿ ಹತ್ತು ವರ್ಷ ಕಿರಿಯವನಾಗಿಬಿಟ್ಟೆ, ಬದುಕಿನ ದಾರಿಯಲ್ಲಿ ಭರವಸೆಯ ಬೆಳಕನ್ನು ಕಂಡೆ. ವೃತ್ತಿ, ವೈಯಕ್ತಿಕ ಬದುಕು ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದಷ್ಟೇ ಈ ಕಿರಿಯ ಗೆಳೆಯರಿಗೆ ಹೇಳಬಲ್ಲೆ. ಕಷ್ಟವನ್ನು ಹಂಚಿಕೊಳ್ಳಲು ನಿಮ್ಮ ಜತೆಯಲ್ಲಿ ಇರುತ್ತೇನೆ.

ಈ ಗೆಳೆಯನದ್ದು ಖಂಡಿತ ಸಾಯುವ ವಯಸ್ಸಲ್ಲ...

ಈ ಗೆಳೆಯನದ್ದು ಖಂಡಿತ ಸಾಯುವ ವಯಸ್ಸಲ್ಲ...
ಸಾವಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ನಿಜವಾದರೂ ಉಜ್ವಲ ಭವಿಷ್ಯದ
ಟೈಮ್ಸ್ ಆಫ್ ಇಂಡಿಯಾಕ್ಕೆ ಸೇರಿದಂದಿನಿಂದ ಶಿವಕುಮಾರ್ ಅವರ ವರದಿಗಳನ್ನು ಗಮನಿಸುತ್ತಿದ್ದೆ. ಕನ್ನಡದ ಸೆನ್ಸಿಬಿಲಿಟಿಯನ್ನಿಟ್ಟುಕೊಂಡು ಬರೆಯಬಲ್ಲ ಕೆಲವೇ ಕೆಲವು ಇಂಗ್ಲೀಷ್ ಪತ್ರಕರ್ತರಲ್ಲಿ ಶಿವಕುಮಾರ್ ಒಬ್ಬರು. ಆಗೊಮ್ಮೆ ಈಗೊಮ್ಮೆ ಈ ಯುವಪತ್ರಕರ್ತನ ಜತೆ ಮಾತನಾಡಿದ್ದರೂ ದೀರ್ಘವಾಗಿ ಮಾತನಾಡಲಿಕ್ಕಾಗಿರಲಿಲ್ಲ. ಶಿವಕುಮಾರ್ ಅವರ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಕನ್ನಡ ಪ್ರೇಮದ ಬಗ್ಗೆ ನನ್ನ ಅನೇಕ ಪತ್ರಕರ್ತ ಮಿತ್ರರ ಬಾಯಿಯಿಂದ ಕೇಳಿದ್ದೆ, ಸೂಕ್ಷ್ಮವಾಗಿ ನಾನೂ ಗಮನಿಸಿದ್ದೆ.
ಶಿವಕುಮಾರ್ ಎಷ್ಟೊಂದು ವೃತ್ತಿನಿಷ್ಠ ಪತ್ರಕರ್ತನೆಂದರೆ ಕಳೆದ ಭಾನುವಾರದ ರಜಾದಿನ ಬಹುಪಾಲು ಪತ್ರಕರ್ತರು ಗೋವಾ ಪ್ರವಾಸಕ್ಕೆ ಹೋಗಿದ್ದಾಗ, ಇವರು ಮಾತ್ರ ಗೆಳೆಯ ನಿರಂಜನ್ ಜತೆ ಕತ್ತಿ ಅವರ ಹತ್ತಿ ಗಿರಣಿ ನೋಡಲು ಹೋಗಿದ್ದರು. ಅಸ್ವಸ್ಥರಾಗಿದ್ದರೂ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಉಳಿಯದೆ ಇರಲು ಕೂಡಾ ರಾತ್ರಿ ಏನನ್ನೋ ಬರೆದು ಮುಗಿಸುವ ಉದ್ದೇಶ ಅವರಿಗಿದ್ದಿರಬಹುದು.
ನಿರೀಕ್ಷೆ ಹುಟ್ಟಿಸಿದ್ದ ಎಳೆಯ ಜೀವವೊಂದು ನಡುಹಾದಿಯಲ್ಲಿಯೇ ಪಯಣ ಮುಗಿಸಿದಾಗ ಮನಸ್ಸು ತಳಮಳಕ್ಕೀಡಾಗುತ್ತದೆ. 39ರ ಹರಯದ ಪತ್ರಕರ್ತ ಗೆಳೆಯ ಎನ್.ಡಿ.ಶಿವಕುಮಾರ್ ಅವರದ್ದು ಖಂಡಿತ ಸಾಯುವ ವಯಸ್ಸು ಅಲ್ಲ.
ಬೆಳಗಾವಿ ವಿಧಾನಮಂಡಲದ ಅಧಿವೇಶನಕ್ಕೆಂದು ಬಂದ ಪತ್ರಕರ್ತರಿಗಾಗಿ ಸಚಿವ ಶಿವರಾಜ್ ತಂಗಡಗಿ ಅವರು ಕಳೆದ ಗುರುವಾರ ರಾತ್ರಿ ನೀಡಿದ್ದ ಔತಣಕೂಟದಲ್ಲಿ ಕೊನೆಯ ಬಾರಿ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ಎಲ್ಲ ಪತ್ರಕರ್ತರನ್ನು ಭೇಟಿಮಾಡಲೆಂದು ಹೋಗಿದ್ದ ನಾನು ಶಿವಕುಮಾರ್ ಜತೆ ಮಾತನಾಡುತ್ತಾ ಅಲ್ಲಿಯೇ ಸುಮಾರು ಎರಡು ಗಂಟೆ ಕಾಲ ಕೂತು ಬಿಟ್ಟಿದ್ದೆ. ವಿಜಯಕರ್ನಾಟಕ ಪತ್ರಿಕೆಯ ಸುಭಾಷ್ ಹೂಗಾರ್,ಬೆಂಗಳೂರು ಮಿರರ್ ನ ನಿರಂಜನ್ ಮತ್ತಿತರ ಗೆಳೆಯರು ಜತೆಗಿದ್ದರು.
ಇತ್ತೀಚೆಗೆ ಶಿವಕುಮಾರ್ ಆಮ್ ಆದ್ಮಿ ಪಕ್ಷದ ಯೋಗೇಂದ್ರ ಯಾದವ್ ಅವರದ್ದೊಂದು ದೀರ್ಘವಾದ ಸಂದರ್ಶನ ಮಾಡಿದ್ದರು. ನಾನು ಅದರ ಬಗ್ಗೆ ಮೆಚ್ಚುಗೆ ಸೂಚಿಸಿದ ಕೂಡಲೇ ಅವರು ದೆಹಲಿ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆಗಿಳಿದರು. ಅಲ್ಲಿಂದ ಅದು ಕಾಂಗ್ರೆಸ್, ಬಿಜೆಪಿ, ಮೋದಿ, ಸಿದ್ದರಾಮಯ್ಯನವರ ಸರ್ಕಾರ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ... ಹೀಗೆ ಎಲ್ಲೆಲ್ಲೋ ಹರಿದಾಡಿತು. ಅವರಲ್ಲಿ ಕೇಳುವ ಉತ್ಸಾಹ ಕಂಡು ನಾನೇ ಹೆಚ್ಚು ಮಾತನಾಡಿದ್ದೆ. ಈ ವಯಸ್ಸಿನ ಪತ್ರಕರ್ತರು ನನ್ನನ್ನು ಈ ರೀತಿ ಪ್ರೊವೊಕ್ ಮಾಡಿದ್ದು ಇತ್ತೀಚೆಗೆ ಕಡಿಮೆ.
ಅಲ್ಲಿಂದ ಮಾತು ಪತ್ರಕರ್ತರ ಕುಟುಂಬದ ಕಡೆ ತಿರುಗಿತು. ‘ಒಬ್ಬ ನಿಜವಾದ ಕಾರ್ಯನಿರತ ಪತ್ರಕರ್ತ ಮೊದಲು ಕಳೆದುಕೊಳ್ಳುವುದು ಸುಂದರ ಸಂಜೆಗಳನ್ನು. ಇದು ಹೆಚ್ಚು ಅನುಭವಕ್ಕೆ ಬರುವುದು ಮದುವೆಯಾದ ಮೇಲೆ. ಸಾಮಾನ್ಯವಾಗಿ ಹೆಂಡತಿಯರು ಏನನ್ನೂ ಬಯಸದೆ ಇದ್ದರೂ ಆಗಾಗ ಸಂಜೆಹೊತ್ತು ಗಂಡನ ಜತೆ ಹೊರಗೆ ಸುತ್ತಾಡಿ ಕಾಲಕಳೆಯುವ ಸಣ್ಣ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಒಬ್ಬ ಪತ್ರಕರ್ತನಿಗೆ ಈ ಸಣ್ಣ ಬೇಡಿಕೆಯನ್ನೂ ಈಡೇರಿಸಲಾಗದೆ ಜೀವಮಾನವಿಡೀ ಒದ್ದಾಡುತ್ತಾ ಇರಬೇಕಾಗುತ್ತದೆ. ವಾರದ ರಜೆಯ ದಿನವೂ ಸುಮ್ಮನೆ ಮಲಗಿಕೊಂಡು ಬಿಡುವ ಎಂದಾಗುತ್ತದೆ....’’ ಎಂದೆಲ್ಲ ನನ್ನ ಅನುಭವವನ್ನು ಹೇಳುತ್ತಾ ಹೋದೆ.
ಅದನ್ನು ಕೇಳುತ್ತಿದ್ದ ಶಿವಕುಮಾರ್ ಭಾವುಕರಾಗಿಬಿಟ್ಟಿದ್ದರು. ‘ನನ್ನ ಮನೆಯಲ್ಲಿಯೂ ಇದೇ ದೂರು ಸಾರ್. ಸಂಜೆ ಐದರಿಂದ ಒಂಭತ್ತು ಗಂಟೆ ವರೆಗೆ ನಮಗೆ ಕೆಲಸದ ಒತ್ತಡ ಹೆಚ್ಚು. ಮನೆಗೆ ಹೋಗಲು ಸಾಧ್ಯವೇ ಇಲ್ಲ. ನನ್ನ ಮಗಳಿಗೂ ಟೈಮ್ ಕೊಡಲಿಕ್ಕಾಗುವುದಿಲ್ಲ...’ ಎಂದು ಹೇಳಿ ತಮ್ಮ ಕುಟುಂಬದ ಬಗ್ಗೆ ಮಾತನಾಡತೊಡಗಿದ್ದರು.
ಹೆಂಡತಿ ಮತ್ತು ಮಗಳು ಇಬ್ಬರನ್ನೂ ಮೆಚ್ಚಿಸಲು ಅವರು ಕಂಡುಕೊಂಡ ಉಪಾಯವೊಂದನ್ನು ನಮ್ಮಲ್ಲಿ ಹಂಚಿಕೊಂಡಿದ್ದರು. “ ಅಪರೂಪಕ್ಕೆ ಎಲ್ಲಿಯಾದರೂ ಮಾಲ್ ಗೆ ಹೋದರೆ ಹೆಂಡತಿಯನ್ನು ಖರೀದಿಗೆ ಮುಕ್ತವಾಗಿ ಬಿಟ್ಟುಬಿಟ್ಟು ನಾನು ಹೊರಗೆ ಮಗಳ ಜತೆ ಆಟವಾಡುತ್ತಾ ಇರುತ್ತಿದ್ದೆ. ಹೆಂಗಸರಿಗೆ ಬೇಕಾದುದನ್ನು ಖರೀದಿಸಲು ಬಿಟ್ಟುಬಿಟ್ಟರೆ ಅವರು ಖುಷಿ, ಮಕ್ಕಳಿಗೆ ಆಟವಾಡಲು ಅಪರೂಪವಾಗಿ ಅಪ್ಪ ಸಿಕ್ಕಬಿಟ್ಟರೆ ಅವರೂ ಖುಷಿ. ಇದೊಂದು ಒಳ್ಳೆಯ ಉಪಾಯ ಸಾರ್’’ ಎಂದು ಕೈಯಲ್ಲಿದ್ದ ಬೀರ್ ಗ್ಲಾಸಿನಿಂದ ಒಂದು ಸಿಪ್ ಚಪ್ಪರಿಸಿ ತುಂಟತನದಿಂದ ನಕ್ಕಿದ್ದರು. ಅವರ ಮಾತಿನುದ್ದಕ್ಕೂ ಜಿನುಗುತ್ತಿದ್ದುದು ಹೆಂಡತಿ ಮತ್ತು ಮಗಳ ಮೇಲಿನ ಪ್ರೀತಿ ಮಾತ್ರ.
ಶಿವಕುಮಾರ್ ಸಾವಿನ ಸುದ್ದಿಯನ್ನು ಸಹೋದ್ಯೋಗಿ ಮುರಳೀಧರ್ ಹೇಳಿದಾಗ ನಾನು ಮಂಗಳೂರಿನಿಂದ ಬೆಳಗಾವಿಗೆ ಬರುವ ನಡುಹಾದಿಯಲ್ಲಿದ್ದೆ. ಆಗ ತಕ್ಷಣ ನನಗೆ ನೆನಪಿಗೆ ಬಂದದ್ದು ಮೂರು ದಿನಗಳ ಹಿಂದೆಯಷ್ಟೇ ಶಿವಕುಮಾರ್ ಜತೆ ಕಳೆದ ಕ್ಷಣಗಳು. ಅವರು ಖಾಲಿ ಮಾಡಿದ ಸ್ಥಾನವನ್ನು ಪತ್ರಿಕೋದ್ಯಮದಲ್ಲಿ ಇನ್ನೊಬ್ಬ ಪ್ರತಿಭಾವಂತ ಪತ್ರಕರ್ತ ತುಂಬಲೂ ಬಹುದು. ಆದರೆ ಅವರ ಮಗಳ ಪುಟ್ಟ ಹೃದಯದಲ್ಲಿ ಖಾಲಿಯಾಗಿರುವ ಪಪ್ಪನ ಸ್ಥಾನವನ್ನು ಯಾರಿಂದ ತುಂಬಲು ಸಾಧ್ಯ? ನಾಳೆ ಆ ಪುಟ್ಟ ಮಗು ಪಪ್ಪ ಬೇಕೆಂದಾಗ ಸಂಗಾತಿಯನ್ನು ಕಳೆದುಕೊಂಡ ನೋವನ್ನು ನುಂಗಿಕೊಂಡು ಮಗಳನ್ನು ಸಂತೈಸಬೇಕಾದ ಶಿವಕುಮಾರ್ ಪತ್ನಿಯನ್ನು ನೆನೆದಾಗ ಕರುಳು ಚುರುಕೆನ್ನುತ್ತದೆ. ಸಾವು ಕ್ರೂರ ಎನಿಸುವುದು ಸತ್ತವರಿಗಿಂತಲೂ ಹೆಚ್ಚಾಗಿ ಅವರನ್ನು ನಂಬಿದವರ ಬದುಕಿನ ದು:ಖವನ್ನು ಕಂಡಾಗ.
ಕೊನೆಗೂ ಶಿವಕುಮಾರ್ ಬಗ್ಗೆ ನನ್ನದೊಂದು ಸಣ್ಣ ದೂರಿದೆ. ಅವರ ಸಾವಿನ ನಂತರ ಗೆಳೆಯರಿಂದ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಒಂದಷ್ಟು ವಿವರ ತಿಳಿದುಕೊಂಡೆ. ಇಷ್ಟೆಲ್ಲ ಬುದ್ದಿವಂತರಾದ ಶಿವಕುಮಾರ್ ತನ್ನ ವೃತ್ತಿಯ ಜತೆಯಲ್ಲಿ ಆರೋಗ್ಯದ ಕಡೆಗೂ ಒಂದಿಷ್ಟು ಗಮನಕೊಟ್ಟಿದ್ದರೆ ಅವರ ಜತೆ ಇನ್ನು ಹಲವು ಪಾರ್ಟಿ ಮಾಡಬಹುದಿತ್ತು. ಗುರುವಾರ ರಾತ್ರಿ ಬೆಳಗಾವಿಯ ಸಂಕಮ್ ಹೊಟೇಲ್ ನ ಲಾನ್ ನಲ್ಲಿ ಅವರಿಗೆ ಗುಡ್ ನೈಟ್ ಹೇಳಿ ಹೊರಟಾಗ ‘ಮತ್ತೆ ಸಿಗುವ ಸಾರ್ ‘ ಎಂದಿದ್ದರು. ಈ ಯುವ ಪತ್ರಕರ್ತನ ಜತೆ ಮಾತನಾಡಬೇಕೆಂಬ ಆಸೆಯೂ ನನಗಿತ್ತು.

Monday, December 15, 2014

ಜನನುಡಿ 2014 ಮಂಗಳೂರು








'ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ' ವಿಷಯ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು. ವಿಜಯ ಕರ್ನಾಟಕ ಪತ್ರಿಕೆ ಅಂಕಣಕಾರರಾದ ಡಿ.ಉಮಾಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್.ಹನುಮಂತಯ್ಯ ಹಾಗೂ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುವುದು.