Thursday, October 18, 2012

ಮನಸ್ಸಿದ್ದರೆ ವಿವಾದ ಇತ್ಯರ್ಥಕ್ಕೆ ಮಾರ್ಗವೂ ಇದೆ October 15, 2012

ಕಾವೇರಿ ನೀರು ಹಂಚಿಕೆಯ ವಿಷಯ ರಾಷ್ಟ್ರದ ಗಮನ ಸೆಳೆಯುವುದು ವಿವಾದ ಉಲ್ಬಣಗೊಂಡಾಗ ಮಾತ್ರ. ಈ ಸಂದರ್ಭದಲ್ಲಿ  ದಿಢೀರ್ `ಕಾವೇರಿ ತಜ್ಞ`ರಾಗಿಬಿಡುವ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಚಲನಚಿತ್ರ ನಟ-ನಟಿಯರ ಅರೆಬೆಂದ ತಿಳಿವಳಿಕೆ ಮಾತುಗಳ ಮೂಲಕವೇ ಈ ವಿವಾದವನ್ನು ಇತರರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 

`ಪ್ರಾಣ ಕೊಡುವ` `ರಕ್ತ ಹರಿಸುವ`... ಇವರ ವೀರಾವೇಶದ ಮಾತುಗಳ ಅಬ್ಬರದ ನಡುವೆ ಸಮಚಿತ್ತದ ಮತ್ತು ಪ್ರಜ್ಞಾವಂತಿಕೆಯ ಮಾತುಗಳು ನಮ್ಮವರಿಗೂ ರುಚಿಸುವುದಿಲ್ಲ. ಬೆಂಕಿ ಕಾರುವ ಮಾತುಗಳನ್ನೆಲ್ಲ ಕೇಳುವಾಗ ಸಂಘರ್ಷದ ಹಾದಿಯಲ್ಲದೆ ವಿವಾದ ಇತ್ಯರ್ಥಕ್ಕೆ ಬೇರೆ ದಾರಿಯೇ ಇಲ್ಲವೇನೋ ಎಂದು ಅನಿಸುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಪ್ರಮುಖ ಅಭಿವ್ಯಕ್ತಿಯಾದ ಬಂದ್, ಧರಣಿ, ಮುಷ್ಕರ-  ಒಂದು ಹಂತದವರೆಗೆ ಅವಶ್ಯಕವಾದರೂ ಅದರಿಂದಲೇ ವಿವಾದ ಇತ್ಯರ್ಥ ಸಾಧ್ಯ ಇಲ್ಲ.  ಬೇರೆ ಮಾರ್ಗಗಳೂ ಇವೆ, ಮನಸ್ಸು ಮಾಡಬೇಕು ಅಷ್ಟೆ. ಅಂತಹ  ಏಳು ಮಾರ್ಗಗಳು ಇಲ್ಲಿವೆ:

1. ನೀರನ್ನು ಮಂತ್ರದ ಮೂಲಕ ಸೃಷ್ಟಿಸಲಾಗುವುದಿಲ್ಲ, ಯಂತ್ರದ ಮೂಲಕ ಉತ್ಪಾದಿಸಲೂ ಆಗುವುದಿಲ್ಲ. ನೀರಿಗೆ ಇರುವ ಏಕೈಕ ಮೂಲ ಮಳೆ ಮಾತ್ರ. ಇದರಿಂದಾಗಿ ನಮ್ಮ ಬಳಕೆಗೆ ಅಗತ್ಯ ಇರುವಷ್ಟು ನೀರನ್ನು ಪಡೆಯಲು ಇರುವುದು ಎರಡೇ ಮಾರ್ಗ - ಒಂದು ಮಳೆ, ಇನ್ನೊಂದು ಮಳೆಯಿಂದ ಪಡೆದ ನೀರಿನ ವೈಜ್ಞಾನಿಕ ಬಳಕೆ. ಕಾವೇರಿ ಉಳಿದ ನದಿಗಳಂತಲ್ಲ, ಇದರಲ್ಲಿ ಲಭ್ಯ ಇರುವ ನೀರು ಕೇವಲ 740 ಟಿಎಂಸಿ. ಎಷ್ಟೇ ಮಳೆ ಬಂದರೂ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳು ಕೇಳುತ್ತಿರುವ ಸುಮಾರು 1200 ಟಿಎಂಸಿಗಳಷ್ಟು ನೀರನ್ನು ಒದಗಿಸುವುದು ಸಾಧ್ಯವೇ ಇಲ್ಲ. 

ಈ ಹಿನ್ನೆಲೆಯಲ್ಲಿ ನೀರಿನ ವೈಜ್ಞಾನಿಕ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಇದಕ್ಕೆ ಇರುವ ಒಂದು ದಾರಿ ಬೆಳೆ ಪರಿವರ್ತನೆ. ಕಾವೇರಿ ಕಣಿವೆಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಹುಪಾಲು ರೈತರು ಬೆಳೆಯುತ್ತಿರುವುದು ಹೆಚ್ಚು ನೀರಿನ ಅಗತ್ಯ ಇರುವ ಭತ್ತ ಮತ್ತು ಕಬ್ಬು. ಒಂದು ಅಂದಾಜಿನ ಪ್ರಕಾರ ಎರಡೂ ರಾಜ್ಯಗಳ ಕನಿಷ್ಠ ಶೇಕಡಾ 30ರಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯ ಬದಲಿಗೆ ಕಡಿಮೆ ನೀರನ್ನು ಬಳಸಿ ಹತ್ತಿ, ಸೂರ್ಯಕಾಂತಿ ಮತ್ತು ನೆಲಗಡಲೆ ಬೆಳೆಸಲು ಸಾಧ್ಯ.

2. ಬೆಳೆ ಪರಿವರ್ತನೆ ಸಾಧ್ಯವೇ ಇಲ್ಲದ ಕಾವೇರಿ ಕೊಳ್ಳದ ಶೇಕಡಾ 70ರಷ್ಟು ಪ್ರದೇಶದಲ್ಲಿ ನೀರು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಕೃಷಿನೀರು ಬಳಕೆಯ ಬಗ್ಗೆ `ಸಾಮಾಜಿಕ ಲೆಕ್ಕಪರಿಶೋಧನೆ` (ಸೋಷಿಯಲ್ ಅಡಿಟ್) ನಡೆದೇ ಇಲ್ಲ.

 ಹೆಚ್ಚಿನ ನೀರಾವರಿ ಯೋಜನೆಗಳಲ್ಲಿ ರೈತರ ಗದ್ದೆಗಳಿಗೆ ಹರಿಯುವುದಕ್ಕಿಂತ ಹೆಚ್ಚು ನೀರು ಕಾಲುವೆಗಳಲ್ಲಿ ಪೋಲಾಗುತ್ತದೆ. ಶೇಕಡಾ 40ರಷ್ಟು ನೀರು ಇಂಗಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಬೇಕಾಬಿಟ್ಟಿ ಕೆರೆಗಳಿಗೆ ಹರಿಸುವ ಬದಲಿಗೆ ಗದ್ದೆಕಾಲುವೆಗಳ (ಫೀಲ್ಡ್ ಚಾನೆಲ್) ನಿರ್ಮಾಣ ಇತ್ಯಾದಿ ಕ್ರಮಗಳ ಮೂಲಕ ನೀರು ಉಳಿಸಲು ಸಾಧ್ಯ. ಸಹಜವಾಗಿಯೇ ಇದಕ್ಕೆ ಹಣ ಎಲ್ಲಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೂ ದಾರಿಗಳಿವೆ. ಅಂತಹದ್ದೊಂದು ದಾರಿ ಅಂದಾಜು 5,100 ಕೋಟಿ ರೂಪಾಯಿ ವೆಚ್ಚದ ವಿಶ್ವಸಂಸ್ಥೆ ನೆರವಿನ `ಕಾವೇರಿ ಆಧುನೀಕರಣ ಯೋಜನೆ`. ಇದು ಮೂರು ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿದೆ. ನ್ಯಾಯಮಂಡಳಿ ಮತ್ತು ನ್ಯಾಯಾಲಯದಲ್ಲಿ ಕಾವೇರಿ ವಿವಾದ ಇರುವವರೆಗೆ ಈ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯ ಇಲ್ಲ. 

3. ಕಾವೇರಿ ನ್ಯಾಯಮಂಡಳಿಯಿಂದ ರಾಜ್ಯದ ಕುಡಿಯುವ ನೀರಿನ ಪಾಲಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್‌ಗೆ ಮೊರೆಹೋಗಲು ಅವಕಾಶ ಇದೆ. ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ನ್ಯಾಯಮಂಡಳಿ ಇದಕ್ಕೆ ಕೊನೆಯ ಆದ್ಯತೆ ನೀಡಿರುವುದು ಮಾತ್ರವಲ್ಲ ನೀರಿನ ಲೆಕ್ಕಾಚಾರದಲ್ಲಿಯೂ ಎಡವಿದೆ.  ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿಗಾಗಿ ಕರ್ನಾಟಕ ಕೇಳಿದ್ದು 50 ಟಿಎಂಸಿ. ನ್ಯಾಯಮಂಡಳಿ ಗುರುತಿಸಿರುವುದು 17.22 ಟಿಎಂಸಿ. 

ಇದರಲ್ಲಿ ಬೆಂಗಳೂರಿಗೆ 8.70 ಮತ್ತು ಇತರ ಪ್ರದೇಶಕ್ಕೆ 8.52 ಟಿಎಂಸಿ. ಈ 17.22 ಟಿಎಂಸಿಯಲ್ಲಿ ಅರ್ಧದಷ್ಟು ನೀರು ಅಂತರ್ಜಲದಿಂದ ಲಭ್ಯ ಎಂದು ನ್ಯಾಯಮಂಡಳಿ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದೆ ನೀರು ಬಳಕೆಯಾದ ನಂತರ ಶೇಕಡಾ 80 ಭಾಗ ಭೂಮಿ ಸೇರಿ ಅಂತರ್ಜಲವಾಗುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಕುಡಿಯುವ ನೀರಿನ ಅವಶ್ಯಕತೆ  1.75 ಟಿಎಂಸಿ ಮಾತ್ರ ಎಂದು ಹೇಳಿ ಗಾಯದ ಮೇಲೆ ಬರೆ ಹಾಕಿದೆ. ಈ ಅನ್ಯಾಯಕ್ಕೆ ಅವೈಜ್ಞಾನಿಕವಾದ ಲೆಕ್ಕಾಚಾರ ಮಾತ್ರ ಕಾರಣ ಅಲ್ಲ, ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಯಲ್ಲಿದೆ ಎಂಬ ಅಭಿಪ್ರಾಯವೂ ಕಾರಣ. 

ಇಷ್ಟು ಮಾತ್ರವಲ್ಲ ಕುಡಿಯುವ ನೀರನ್ನು ಲೆಕ್ಕಹಾಕುವಾಗ ಬೆಂಗಳೂರು ಮಹಾನಗರದ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವ ಕೋನದಿಂದ ಈ ನೀರು ವಿತರಣೆಯ ಕ್ರಮವನ್ನು ನೋಡಿದರೂ ಇದರಿಂದ ಅನ್ಯಾಯವಾಗಿರುವುದು ಸ್ಪಷ್ಟ. 

ಕುಡಿಯುವ ನೀರಿನ ವಿಚಾರದಲ್ಲಿ ನದಿ ಕಣಿವೆಯ ಗಡಿಗಳನ್ನು ಎಂದೋ ಉಲ್ಲಂಘಿಸಿಯಾಗಿದೆ. ಕಾವೇರಿ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಮಹಾನಗರ ಯಮುನಾ ನದಿ ಕಣಿವೆಗೆ ಸೇರಿದ್ದು, ಅಲ್ಲಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ರಾವಿ-ಬಿಯಾಸ್‌ನಿಂದ ಎಂಬುದನ್ನು ನ್ಯಾಯಮೂರ್ತಿಗಳು ಹೇಗೆ ಮರೆತರೋ ಗೊತ್ತಿಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕ ತಮ್ಮ ಪಾಲನ್ನೂ ಮದ್ರಾಸ್ ನಗರದ ಕುಡಿಯುವ ನೀರಿಗಾಗಿ ನೀಡಿಲ್ಲವೇ? ಕಾವೇರಿ ಕಣಿವೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಕಣಿವೆಯ ಗಡಿ ಅಡ್ಡಿ ಆಗಲೇ ಬಾರದು.ಇದರ ಜತೆಗೆ ನ್ಯಾಯಮಂಡಳಿಯೇ ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಗೆ ಸೇರಿದೆ ಎಂದು ಹೇಳಿರುವ ಕಾರಣ ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ಯೋಜನೆಗೆ ಚಾಲನೆ ನೀಡಬಹುದು.

4. ಈಗಿನ ವ್ಯವಸ್ಥೆಯಲ್ಲಿ ಕೃಷ್ಣರಾಜ ಸಾಗರದಿಂದ ಬಿಟ್ಟನೀರು ಬಿಳಿಗುಂಡ್ಲು ಮೂಲಕ ನೇರವಾಗಿ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ, ಅಲ್ಲಿಂದ ಸಮುದ್ರಕ್ಕೆ. ಕೆ.ಆರ್.ಸಾಗರದಿಂದ ಬಿಳಿಗುಂಡ್ಲು ವರೆಗಿನ ನಡುಹಾದಿಯಲ್ಲಿ ಯಾವ ಬ್ಯಾರೇಜ್ ಇಲ್ಲವೆ ಆಣೆಕಟ್ಟು ಇಲ್ಲ. ಈ ನಡುಮಾರ್ಗದಲ್ಲಿ ಬರುವ ಮೇಕೆದಾಟು, ಶಿವನಸಮುದ್ರ, ಹೊಗೆನಕಲ್ ಮತ್ತು ರಾಸಿಮಲೆಯಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ತಯಾರಿಸಿತ್ತು. ಮೇಕೆದಾಟು ಮತ್ತು ಶಿವನಸಮುದ್ರ ಕರ್ನಾಟಕದ ಗಡಿಯೊಳಗೆ ಬರುವುದರಿಂದ ಇವುಗಳನ್ನು ನಾವೇ ಅನುಷ್ಠಾನಗೊಳಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಹೇಳಿತ್ತು. 

ಆದರೆ ಈ ಯೋಜನೆಗಳಿಗೆ ನಮ್ಮಿಂದ ಅನುಮತಿ ಪಡೆಯಬೇಕೆಂದು ತಮಿಳುನಾಡು ಹಟ ಹಿಡಿದು ಕೂತಿದೆ. ಮೇಕೆದಾಟುವಿನಲ್ಲಿ 60ರಿಂದ 80 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿದರೆ ಅವಶ್ಯಕತೆ ಇದ್ದಾಗ ಮೆಟ್ಟೂರಿಗೆ ಅಲ್ಲಿಂದ ನೀರು ಹರಿಸಬಹುದು ಇಲ್ಲದಿದ್ದರೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಯೋಜನೆಗಳಿಗೆ ತಮಿಳುನಾಡು ರಾಜ್ಯದ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕರ್ನಾಟಕ ಸರ್ಕಾರ ಕೋರಬಹುದು.

5. ಮೆಟ್ಟೂರು ಆಣೆಕಟ್ಟು ಮತ್ತು ಅದರ ಮೂಲಕ ನಿರ್ಮಿಸಲಾಗಿರುವ ಸ್ಟಾನ್ಲಿ ಜಲಾಶಯ ಸುಮಾರು 78 ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಜಲಾಶಯದ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು ದುರಸ್ತಿ ಮಾಡುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ತನ್ನ ಮೂಲ ಸಾಮರ್ಥ್ಯದಷ್ಟನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಲಾಶಯದಿಂದ ಬಿಟ್ಟ ನೀರು ಸಮುದ್ರದ ಪಾಲಾಗುತ್ತಿದೆ. ಜಲಾಶಯದ ಹೂಳು ತೆಗೆದು ದುರಸ್ತಿ ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು.

6. `ಕಾವೇರಿ ಕುಟುಂಬ`ವನ್ನು ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ರೈತರ ಮುಖಂಡರನ್ನೊಳಗೊಂಡ ಈ ಸಂಘಟನೆಯನ್ನು ಹುಟ್ಟುಹಾಕಿದ್ದು `ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆ`. 2003-04ರಲ್ಲಿ ಎರಡೂ ರಾಜ್ಯಗಳ ನಡುವಿನ ನೀರಿನ ವ್ಯಾಜ್ಯ ತಾರಕಕ್ಕೇರಿದಾಗ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಸಂಘಟನೆ ಶ್ರಮಿಸಿತ್ತು. 

ತಮಿಳುನಾಡಿನ ರೈತ ನಾಯಕ ರಂಗನಾಥನ್ ನೇತೃತ್ವದ ತಂಡ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಬೋರಯ್ಯ ಮತ್ತಿತರನ್ನೊಳಗೊಂಡ ತಂಡ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ರೈತನಾಯಕರು ಸೇರಿ ಈಗಾಗಲೇ ಹದಿನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ನಿಗದಿಗೊಳಿಸಲಾಗಿದ್ದ ಸಭೆ ನಡೆದಿದ್ದರೆ ಈಗಿನ ಸಂಘರ್ಷದ ಕಾವು ಕಡಿಮೆಯಾಗುತ್ತಿತ್ತೋ ಏನೋ?

7. ಕಾವೇರಿ ನದಿ ನೀರಿನ ವಿವಾದವೂ ಸೇರಿದಂತೆ ರಾಜ್ಯದ ನೆಲ-ಜಲ-ಭಾಷೆಗಳ ರಕ್ಷಣೆಯ ಜವಾಬ್ದಾರಿ ಆಯಾ ಕ್ಷೇತ್ರಗಳ ಹೋರಾಟಗಾರರಿಗೆ ಒಪ್ಪಿಸಿಬಿಟ್ಟು ಉಳಿದವರು ಆರಾಮವಾಗಿ ಇದ್ದು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಕೆಟ್ಟುಹೋಗಿದೆ, ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಎಂಟು ವರ್ಷಗಳ ಹಿಂದೆ ಭೂಮಿ-ಆಕಾಶ ಒಂದು ಮಾಡಿಬಿಟ್ಟಿದ್ದರು.
 
ದೆಹಲಿಯ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಎದ್ದೆನೋ, ಬಿದ್ದೆನೋ ಎಂದು ದೆಹಲಿಗೆ ಓಡಿಹೋಗಿ ಪ್ರಧಾನಿಯಿಂದ ಹಿಡಿದು ಅವರ ಪಕ್ಷದ ನಾಯಕ-ನಾಯಕಿಯರವರೆಗೆ ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟಿದ್ದರು. ಪತ್ರಿಕಾ ಸಂಪಾದಕರನ್ನು ಭೇಟಿ ಮಾಡಿ ಕೈಜೋಡಿಸಿ ಬೇಡಿಕೊಂಡಿದ್ದರು. ರಸ್ತೆಗಳು ಇಂದಿಗೂ ಹಾಗೆಯೇ ಇವೆ ಎನ್ನುವುದು ಬೇರೆ ಮಾತು. ನಾರಾಯಣ ಮೂರ್ತಿಗಳು ಮಾತ್ರ ನಂತರ ಯಾಕೋ ಮೌನವಾಗಿಬಿಟ್ಟರು. 

ಈ ರೀತಿಯ ಪ್ರಭಾವಶಾಲಿ ಗಣ್ಯರ ದೊಡ್ಡ ದಂಡು ನಮ್ಮಲ್ಲಿದೆ. (ತಮಿಳುನಾಡಿನಲ್ಲಿ ಇಲ್ಲ). ರಾಜಕಾರಣಿಗಳ ವಿಶ್ವಾಸಾರ್ಹತೆ ಪಾತಾಳ ತಲುಪಿರುವುದರಿಂದ ಅವರನ್ನು ನೆಚ್ಚಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜಿ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡಾ.ದೇವಿಪ್ರಸಾದ್ ಶೆಟ್ಟಿ ಮೊದಲಾದವರು ನಿಯೋಗ ಹೋಗಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬಾರದೇಕೆ? ಕಾವೇರಿ ಕಣಿವೆಯ ಕುಡಿಯುವ ನೀರಿಗೆ 1.75 ಟಿಎಂಸಿ, ಕೈಗಾರಿಕಾ ಬಳಕೆಗಾಗಿ 0.10 ಟಿಎಂಸಿ ನೀಡಿರುವುದು ನ್ಯಾಯವೇ ಎಂದಾದರೂ ಕೇಳಬಹುದಲ್ಲವೇ?

ಬೇಕಾಗಿರುವುದು ಸುಡುವ ಬೆಂಕಿ ಅಲ್ಲ; ಅರಿವಿನ ಬೆಳಕು - ದಿನೇಶ್ ಅಮೀನ್ ಮಟ್ಟು October 08, 2012


ಗೋಡೆಯವರೆಗೆ ತಳ್ಳಿಸಿಕೊಂಡ ಮನುಷ್ಯನಿಗೆ ತಿರುಗಿ ಬೀಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರುವುದಿಲ್ಲ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರದ್ದು ಈಗ ಇದೇ ಸ್ಥಿತಿ. ಅಸಹಾಯಕತೆಯಿಂದಾಗಿ ಹತಾಶರಾಗಿರುವ ಅವರು ಎಲ್ಲರ ಮೇಲೆ ಎರಗಿ ಬೀಳುತ್ತಿದ್ದಾರೆ.
ಅನ್ಯಾಯದ ಪರಂಪರೆಗೆ ಸಿಕ್ಕಿ ಸೋತುಹೋದವರಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಅಲ್ಲಿ ವಾದ ಮಂಡಿಸುವ ನಮ್ಮ ವಕೀಲರು, ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿಗಳು, ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಕೊನೆಗೆ ಬೀದಿಯಲ್ಲಿ ತಮ್ಮ ಪಾಡಿಗೆ ಹೋಗುತ್ತಿರುವ ಅಮಾಯಕ ಜನ.. ಎಲ್ಲರೂ ತಮ್ಮ ಶತ್ರುಗಳಂತೆಯೇ ಕಾಣಿಸುವುದು ಸಹಜ.
(ಇವರಲ್ಲಿ ಕೆಲವರು ಶತ್ರುಗಳೆನ್ನುವುದೂ ನಿಜ). ಈ ರೀತಿಯ ಭಾವಾವೇಶದ ಉಗ್ರ ಅಭಿವ್ಯಕ್ತಿ ವೈಯಕ್ತಿಕವಾದ ಹತಾಶೆಯನ್ನು ಕಡಿಮೆ ಮಾಡಿ  ಒಂದಷ್ಟು ಸಮಾಧಾನವನ್ನು ತಂದುಕೊಡಬಹುದು, ಆದರೆ ನ್ಯಾಯವನ್ನು ಪಡೆಯಲು ಸಾಧ್ಯವಾಗಬಹುದೇ?
ಈ ರೋಷ-ದ್ವೇಷಗಳ  ಪ್ರದರ್ಶನ ಹೆಚ್ಚೆಂದರೆ ಈ ತಿಂಗಳ ಅಂತ್ಯದವರೆಗೆ ಇರಬಹುದು.
ತಮಿಳುನಾಡಿನಲ್ಲಿ ಈಶಾನ್ಯ ಮಾರುತ ಸುರಿಯಲಾರಂಭಿಸುತ್ತಿದ್ದಂತೆ ಆ ಕಡೆಯ ಒತ್ತಡ ಕಡಿಮೆಯಾಗುತ್ತದೆ. ಅಷ್ಟರಲ್ಲಿ ದೇವೇಗೌಡರ ಕಣ್ಣೀರು ಆರಿಹೋಗುತ್ತದೆ, ನಟ ಅಂಬರೀಷ್ ಅವರ ಅಭಿನಯವೂ ಮುಗಿದಿರುತ್ತದೆ, ಮಾದೇಗೌಡರ ಸಿಟ್ಟು ತಣ್ಣಗಾಗುತ್ತದೆ, ಕನ್ನಡ ಹೋರಾಟಗಾರರು ಹಳೆಯ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಹೊಸ ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸಲು ಗೋಡೆಗಳನ್ನು ಹುಡುಕುತ್ತಿರುತ್ತಾರೆ.

ಮಾಧ್ಯಮಗಳು ಮತ್ತೊಂದು ರೋಚಕ ಸುದ್ದಿಯ ಬೆನ್ನು ಹತ್ತಿರುತ್ತವೆ. ಕಾವೇರಿ ಕಣಿವೆಯ ರೈತರು ರಾಗಿಮುದ್ದೆ ತಿಂದು ಕಂಬಳಿ ಹೊದ್ದುಕೊಂಡು ಮಲಗಿಬಿಡುತ್ತಾರೆ.
ಮುಂದಿನವರ್ಷದ ಜುಲೈ ತಿಂಗಳ ಹೊತ್ತಿಗೆ ಜಯಲಲಿತಾ ಇಲ್ಲವೇ ಕರುಣಾನಿಧಿ  `ಕರ್ನಾಟಕ ನೀರು ಬಿಡುತ್ತಿಲ್ಲ` ಎಂದು ಪ್ರಧಾನಮಂತ್ರಿಗೆ ಪತ್ರ ಬರೆದಾಗ  ನಿದ್ದೆ ಹೋದ ರೈತರಾದಿಯಾಗಿ ವಿರಮಿಸುತ್ತಿದ್ದ ಪ್ರತಿಭಟನೆಯ ಹಳೆಯ ಪಾತ್ರಧಾರಿಗಳೆಲ್ಲ  ಮೈಮುರಿದು ಕೊಡವಿಕೊಂಡು ಎದ್ದು ನಿಲ್ಲುತ್ತಾರೆ.
ನೆಲ-ಜಲದ ಪ್ರೇಮ ಭೋರ್ಗರೆದು ಹರಿಯುತ್ತದೆ. ಮತ್ತೆ ಪ್ರತಿಭಟನೆ, ಬಂದ್, ಒಂದಷ್ಟು ಆರೋಪ ನಂತರ ಎಲ್ಲವೂ ಯಥಾಸ್ಥಿತಿ. ಇಪ್ಪತ್ತೊಂದು ವರ್ಷಗಳ ಹಿಂದೆ ಕಾವೇರಿ ನ್ಯಾಯಮಂಡಳಿ ಮಧ್ಯಂತರ ಐತೀರ್ಪು ನೀಡಿದ ದಿನದಿಂದ ಇಲ್ಲಿಯ ವರೆಗೆ ನಡೆಯುತ್ತಾ ಬಂದದ್ದು ಇದೇ  ನಾಟಕ.
(ಪುರಾವೆಗಳು ಬೇಕು ಎನ್ನುವವರು ಈ 21 ವರ್ಷಗಳ ಪತ್ರಿಕೆಗಳನ್ನು ಹುಡುಕಿ ಜುಲೈ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣುಹಾಯಿಸಬಹುದು.)

ಪ್ರತಿಬಾರಿ ತಮಿಳುನಾಡು ಕರ್ನಾಟಕವನ್ನು ಈ ರೀತಿಯ `ಖೆಡ್ಡಾ`ಕ್ಕೆ ಬೀಳಿಸಿ ಚಂದ ನೋಡುತ್ತಾ ತಣ್ಣಗೆ ಕೂತಿರುತ್ತದೆ. ಗುಂಡಿಗೆ ಬಿದ್ದವರು ಸಹಜವಾಗಿಯೇ ಲಬೋಲಬೋ ಎಂದು ಎದೆಬಡಿದುಕೊಳ್ಳುತ್ತಾರೆ.
ತಮಿಳುನಾಡಿನ ರಾಜಕಾರಣಿಗಳು ಈ ರೀತಿ ಕೂಗಾಡುತ್ತಿರುವ ಕನ್ನಡಿಗರನ್ನು ತೋರಿಸಿ `ಕನ್ನಡಿಗರಿಗೆ ನ್ಯಾಯಾಲಯ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಹೀಗೆ ಯಾವುದರ ಮೇಲೆಯೂ ನಂಬಿಕೆ ಇಲ್ಲ. ಇವರು ಜಗಳಗಂಟರು, ಭಾಷಾಂಧರು....` ಎಂಬ ಆರೋಪಗಳನ್ನು ಮಾಡುತ್ತಾರೆ.
ಈ ಆರೋಪವನ್ನು ಸಾಬೀತುಪಡಿಸುವಂತೆ ಕನ್ನಡಿಗರು ಇನ್ನಷ್ಟು ಉಗ್ರರೀತಿಯಲ್ಲಿ ಭಾಷಣ ಮಾಡುತ್ತಾರೆ, ಘೋಷಣೆ ಕೂಗುತ್ತಾರೆ. ರಕ್ತ ಹರಿಸುವ, ನೀರಿಗೆ ಧುಮುಕುವ ವೀರಾವೇಶದ ಮಾತುಗಳನ್ನಾಡುತ್ತಾರೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ತಿಳಿದುಕೊಳ್ಳಲು ತನಿಖಾ ಸಮಿತಿ ನೇಮಿಸಬೇಕಾಗಿಲ್ಲ.
ಕಾವೇರಿ ನದಿಯ ಇತಿಹಾಸವನ್ನು ತೆಗೆದುನೋಡಿದರೆ ಸಾಕು, ಆಗಿರುವ ಅನ್ಯಾಯಕ್ಕೆ ಪುಟಪುಟಗಳಲ್ಲಿ ಸಾಕ್ಷಿ ಸಿಗುತ್ತದೆ. ಆದರೆ ಕರ್ನಾಟಕದಿಂದ ಹೊರಗೆ ಮುಖ್ಯವಾಗಿ ರಾಜಧಾನಿ ದೆಹಲಿಯಲ್ಲಿ ಜನಾಭಿಪ್ರಾಯ ಅನ್ಯಾಯಕ್ಕೊಳಗಾದ ಕರ್ನಾಟಕದ ಪರವಾಗಿ ಇಲ್ಲ, ಕರ್ನಾಟಕದ ಪ್ರಾಂತೀಯ ಧೋರಣೆಗೆ ಬಲಿಯಾಗುತ್ತಿದ್ದೇವೆ ಎಂದು ಸುಳ್ಳುಸುಳ್ಳೇ ರೋದಿಸುತ್ತಿರುವ ತಮಿಳುನಾಡು ಪರವಾಗಿ ಇದೆ.
ಹೀಗೆಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. (ದೆಹಲಿಯಲ್ಲಿದ್ದಷ್ಟು ಕಾಲ ಅಲ್ಲಿನ ಪತ್ರಕರ್ತರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆಗಿನ ಒಡನಾಟದ ಆಧಾರದಲ್ಲಿ, ಜವಾಬ್ದಾರಿಯಿಂದಲೇ ಇದನ್ನು ಹೇಳುತ್ತಿದ್ದೇನೆ.)

ಯಾಕೆ ಹೀಗಾಗುತ್ತಿದೆ ?ಕಾವೇರಿ ನ್ಯಾಯಮಂಡಳಿ ಸ್ಥಾಪನೆಯ ಹಿಂದಿನ ಇತಿಹಾಸವನ್ನು ಕೆದಕುವುದು ಬೇಡ, ಅದರ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೂ ಕರ್ನಾಟಕ ಮತ್ತೆಮತ್ತೆ ಎಡವಿ ಬಿದ್ದ ಹೆಗ್ಗುರುತುಗಳು ಕಾಣಸಿಗುತ್ತವೆ.
ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಯಾವಾಗಲೂ ನಮಗೆ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವಂತಹ ತೀರ್ಪುಗಳನ್ನೇ ಯಾಕೆ ನೀಡುತ್ತಿದೆ ಎಂಬ ಪ್ರಶ್ನೆಗೂ ಹೆಜ್ಜೆ ತಪ್ಪಿದ ಕರ್ನಾಟಕದ ನಡವಳಿಕೆಯಲ್ಲಿ ಉತ್ತರ ಇದೆ. 

ಕರ್ನಾಟಕದ ಆಯ್ಕೆ ನ್ಯಾಯಮಂಡಳಿ ಖಂಡಿತ ಆಗಿರಲಿಲ್ಲ, ಮಾತುಕತೆಯ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬುದು ರಾಜ್ಯದ ಬಯಕೆಯಾಗಿತ್ತು. ಇದರ ಹೊರತಾಗಿಯೂ ಸುಪ್ರೀಂಕೋರ್ಟ್ 1990ರಲ್ಲಿ ಕಾವೇರಿ ನ್ಯಾಯಮಂಡಳಿ ಸ್ಥಾಪನೆಗೆ ಆದೇಶ ನೀಡಿದ್ದರಿಂದ ಸಹಜವಾಗಿಯೇ ಕರ್ನಾಟಕಕ್ಕೆ ಅಸಮಾಧಾನವಾಗಿತ್ತು.
ಮರುವರ್ಷವೇ ನ್ಯಾಯಮಂಡಳಿ ನೀಡಿದ ಮಧ್ಯಂತರ ಐತೀರ್ಪು ಈ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು.  ಸರ್ಕಾರ ಬದಲಾದರೂ, ಆಡಳಿತ ಪಕ್ಷಗಳು ಬದಲಾದರೂ ನ್ಯಾಯಮಂಡಳಿಯ ಬಗೆಗಿನ ಕರ್ನಾಟಕದ ಅಸಹನೆ ಕಡಿಮೆಯಾಗಲೇ ಇಲ್ಲ.
1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯ ನ್ಯಾಯಮೂರ್ತಿಗಳನ್ನು ರಾಜ್ಯದ ಜನತೆ ಸ್ವಾಗತಿಸಿದ್ದು ಕಪ್ಪುಬಾವುಟ ಮತ್ತು `ಗೊ ಬ್ಯಾಕ್` ಎಂಬ ಘೋಷಣೆಗಳ ಮೂಲಕ. ಇಷ್ಟು ಮಾತ್ರವಲ್ಲ, ನ್ಯಾಯಮಂಡಳಿ ಕಾವೇರಿ ಕಣಿವೆಯ ರಾಜ್ಯಗಳಿಗೆ ಭೇಟಿ ನೀಡಿದಾಗ ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳ ಪತ್ನಿಯರಿಗೆ ಸೀರೆ-ಬಳೆ ಕೊಟ್ಟರು ಎಂದು ಗುಲ್ಲೆಬ್ಬಿಸಿ ಕೊನೆಗೆ ಸುಪ್ರೀಂಕೋರ್ಟ್‌ವರೆಗೆ ದೂರು ಕೊಂಡೊಯ್ದದದ್ದು ಕೂಡಾ ಕರ್ನಾಟಕ.
ರಾಜ್ಯಕ್ಕೆ ನ್ಯಾಯಮಂಡಳಿ ಭೇಟಿ ನೀಡಿದ್ದಾಗ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಔತಣಕೂಟಕ್ಕೆ  ನ್ಯಾಯಮೂರ್ತಿಗಳೊಬ್ಬರು ನಗರದಲ್ಲಿರುವ ತಮ್ಮ ಸಂಬಂಧಿಕರನ್ನು ಆಹ್ಹಾನಿಸಲು ಬಯಸಿದಾಗ ಕೆಲವು ಅಧಿಕಾರಿಗಳು ನಿರಾಕರಿಸಿ ಮುಜುಗರಕ್ಕೆ ಈಡು ಮಾಡಿದ್ದರು.
ಆಗ ಇದ್ದ ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರು ಅಂತಿಮ ಐತೀರ್ಪು ನೀಡಿದ ನ್ಯಾಯಮಂಡಳಿಯಲ್ಲಿಯೂ ಇದ್ದರು. ಈ ರೀತಿ ನ್ಯಾಯಮೂರ್ತಿಗಳನ್ನು ಕೆಣಕಿದ ಹಲವಾರು ಉದಾಹರಣೆಗಳಿವೆ. ತಮಿಳುನಾಡಿನ ನಡವಳಿಕೆ ಇದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು.
ನ್ಯಾಯಮಂಡಳಿಯ ಸದಸ್ಯರು ಸಾಗುವ ಹಾದಿಯಲ್ಲೆಲ್ಲ ಅವರನ್ನು ಸ್ವಾಗತಿಸುವ ಬ್ಯಾನರ್‌ಗಳು, ಕಮಾನುಗಳನ್ನು ಹಾಕಲಾಗಿತ್ತು. ತಂಜಾವೂರಿನ ಜಿಲ್ಲಾಧಿಕಾರಿಗಳು ನ್ಯಾಯಮೂರ್ತಿಗಳ ಕಾಲಿಗೆ ಬಿದ್ದುಬಿಟ್ಟಿದ್ದರು. ಜಯಲಲಿತಾ ಆಗ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಂದು ನ್ಯಾಯಮೂರ್ತಿಗಳನ್ನು ಎದುರುಗೊಂಡಿದ್ದರು. ಇದು ತಮಿಳುನಾಡು ಶೈಲಿ.ಅದೆಂದೂ ನ್ಯಾಯಮಂಡಳಿಯನ್ನು ಕೆಣಕಲು ಹೋಗಿಲ್ಲ.

ಇನ್ನೇನು ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡುವ ಕೆಲವೇ ತಿಂಗಳುಗಳ ಮೊದಲು ಇಬ್ಬರು ಸದಸ್ಯ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಪ್ರವಾಸ ಹೋಗಲು ಇಚ್ಚಿಸಿದಾಗಲೂ ವಿರೋಧಿಸಿದ್ದು ಕರ್ನಾಟಕ.
ಈ ಪ್ರವಾಸಕ್ಕೆ ನ್ಯಾಯಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್.ಪಿ.ಸಿಂಗ್ ವ್ಯಕ್ತಪಡಿಸಿದ್ದ ವಿರೋಧವನ್ನೇ ಪ್ರಸ್ತಾಪಿಸಿ `ಅಧ್ಯಕ್ಷರು ಮತ್ತು ಸದಸ್ಯರ ನಡುವಿನ ಜಗಳದಿಂದ ನ್ಯಾಯಮಂಡಳಿ ಮುರಿದುಬಿದ್ದಿದೆ.
ಈ ಪರಿಸ್ಥಿತಿಯಲ್ಲಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು` ಎಂದು ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಸುಪ್ರೀಂಕೋರ್ಟಿಗೆ ಮೊರೆ ಹೋಗಿತ್ತು. ಅದರ ಹಿಂದೆ ರಾಜ್ಯದ ಪ್ರಭಾವಶಾಲಿ ನಾಯಕರೊಬ್ಬರಿದ್ದರು ಎನ್ನುವುದು  ಗುಟ್ಟಿನ ಸಂಗತಿಯಾಗಿರಲಿಲ್ಲ.

ಅಂತಿಮವಾಗಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು ಎಂದು ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ಮಾತ್ರವಲ್ಲ ಕರ್ನಾಟಕಕ್ಕೆ ಮಾತಿನ ಚಾಟಿಯಿಂದ ಬಾರಿಸಿತ್ತು.

ಈ ರೀತಿಯ `ಅಧಿಕ ಪ್ರಸಂಗತನ`ದ ನಡವಳಿಕೆಯನ್ನು ಅತೀ ಎಚ್ಚರಿಕೆಯ ಸ್ವಭಾವದ ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗಲೂ ಮುಂದುವರಿಸಿದರು. 1.25 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಮತ್ತು 0.8 ಟಿಎಂಸಿ ನೀರು ಹರಿಸಬೇಕೆಂದು ಕಾವೇರಿ ನದಿಪ್ರಾಧಿಕಾರ ನೀಡಿದ್ದ ಆದೇಶಗಳೆರಡನ್ನೂ ಧಿಕ್ಕರಿಸಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾವೇರಿ ಕಣಿವೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನಪ್ರಿಯ ರಾಜಕೀಯದ ದೌರ್ಬಲ್ಯಕ್ಕೆ ಬಿದ್ದು ಬಿಟ್ಟರು.
ಇದರಿಂದ ಕೆರಳಿದ ಸುಪ್ರೀಂಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನೂ ದಾಖಲಿಸಿತ್ತು. ಆ ಕಾಲದಲ್ಲಿ ಸುಪ್ರೀಂಕೋರ್ಟ್‌ನ ಸಂದರ್ಶಕರ ಬಾಕ್ಸ್‌ನಲ್ಲಿ ಖಾದಿ ಬಟ್ಟೆಧರಿಸಿದ್ದ ರಾಜಕಾರಣಿಗಳನ್ನು ನೋಡಿದ ಕೂಡಲೇ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗುತ್ತಿದ್ದರು.
ಇದರಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೇ ಆಗಿನ ಆಡಳಿತ ಪಕ್ಷದ ಹಲವು ನಾಯಕರು ಕಪ್ಪುಕೋಟ್ ಧರಿಸಿ ನ್ಯಾಯಾಲಯಕ್ಕೆಬರುತ್ತಿದ್ದರು. ಸುಪ್ರೀಂಕೋರ್ಟ್‌ಗೆ  ಕರ್ನಾಟಕದ ಬಗ್ಗೆ ಅಷ್ಟೊಂದು ಸಿಟ್ಟಿತ್ತು.  ಈ ರೀತಿ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳನ್ನು ಎದುರುಹಾಕಿಕೊಳ್ಳುವ ಯಾವ ಅವಕಾಶವನ್ನು ರಾಜ್ಯದ ರಾಜಕಾರಣಿಗಳು ಬಿಟ್ಟುಕೊಟ್ಟಿಲ್ಲ.
ತಮಿಳುನಾಡು ಎಂದೂ ಈ ರೀತಿ ವರ್ತಿಸದೆ ಉಪಾಯದಿಂದ ಎಲ್ಲರನ್ನೂ ಒಲಿಸಿಕೊಂಡು ಕೆಲಸ ಸಾಧಿಸಿಕೊಳ್ಳುತ್ತಾ ಬಂದಿದೆ. ರಾಜ್ಯವನ್ನು ಆಳಿದ ರಾಜಕೀಯ ಪಕ್ಷಗಳೆಲ್ಲವೂ ಕಾವೇರಿ ವಿವಾದದ ಬಗೆಗಿನ ತೀರ್ಮಾನಗಳನ್ನು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದ ಆಧಾರದಲ್ಲಿಯೇ ಕೈಗೊಳ್ಳುತ್ತಾ ಬಂದಿವೆಯೇ ಹೊರತು ಕಾನೂನು ಮತ್ತು ನೀರಾವರಿ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಈಗಿನ ವಿವಾದವನ್ನೇ ನೋಡುವುದಾದರೆ, `ಸದ್ಭಾವನೆಯ ಸಂಕೇತವಾಗಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಯುವ ವರೆಗೆ ಹತ್ತುಸಾವಿರ ಕ್ಯೂಸೆಕ್ ನೀರು ಬಿಡಲು ತಯಾರು` ಎಂದು ಹೇಳಿ ತನ್ನ ಕೊರಳನ್ನು ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಯಾರು? 

ಇಷ್ಟೊಂದು ನೀರು ಬಿಟ್ಟುಬಿಟ್ಟರೆ ಕರ್ನಾಟಕದ ರೈತರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಿಗಾಗಲಿ, ಮುಖ್ಯಮಂತ್ರಿಗಳಿಗಾಗಲಿ ಗೊತ್ತಾಗಲಿಲ್ಲವೇ? ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಜಲಸಂಪನ್ಮೂಲ ಸಚಿವರು ಹೀಗೆ ಮಾಡಿದರೇ?

ಕರ್ನಾಟಕದಲ್ಲಿ ಈಗಲೂ ಕಾವೇರಿ ವಿವಾದದ ಮಾಹಿತಿಯನ್ನು ಬೆರಳತುದಿಯಲ್ಲಿ ಇಟ್ಟುಕೊಂಡವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಈಗಲೂ ದೆಹಲಿಯಲ್ಲಿ ಅವರ ಮಾತಿಗೆ ತೂಕ ಇದೆ.
ಇಂತಹವರು ಎಲ್ಲ ಮುಗಿದ ಮೇಲೆ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿ ಮುತ್ಸದ್ಧಿತನ ಮೆರೆಯುವ ಬದಲಿಗೆ ಮೊದಲೇ ಹೋಗಿ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬಹುದಿತ್ತಲ್ಲವೇ?
ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಅನಂತಕುಮಾರ್ ಅವರನ್ನು ಕಟ್ಟಿಕೊಂಡು ಹೋಗಿ ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಮನವೊಲಿಸಲು ಪ್ರಯತ್ನಿಸಿರಲಿಲ್ಲವೇ? ಈ ಬಾರಿ ಯಾಕೆ ಸುಮ್ಮನಿದ್ದರು?  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಾವೇರಿ ಜನ ತಿರುಗಿಬಿದ್ದರೆ ತಮ್ಮ ಪಕ್ಷಕ್ಕೆ ಲಾಭ ಎಂಬ ರಾಜಕೀಯ ಲೆಕ್ಕಚಾರವೇನಾದರೂ ಅವರಲ್ಲಿತ್ತೇ?

ರೆಬೆಲ್‌ಸ್ಟಾರ್ ಖ್ಯಾತಿಯ ಅಂಬರೀಷ್ ಅವರು ಈಗ ಕಾವೇರಿ ಚಳವಳಿಯ ನಾಯಕರು. ಮಂಡ್ಯದ ಮತದಾರರು ಪ್ರೀತಿಯಿಂದ ಅವರನ್ನು ಆರಿಸಿ ಲೋಕಸಭೆಗೆ ಕಳುಹಿಸಿದ್ದರು. ಹತ್ತು ವರ್ಷ ಲೋಕಸಭೆಯಲ್ಲಿದ್ದ ಅವರು ರಾಜ್ಯಕ್ಕೆ ಸಂಬಂಧಿಸಿದ ಉಳಿದ ವಿಷಯ ಬಿಡಿ,ಕನಿಷ್ಠ ಕಾವೇರಿ ಬಗ್ಗೆಯಾದರೂ ಒಂದು ದಿನ ಮಾತನಾಡಿದ್ದರೇ? 
ಯುಪಿಎ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಿದರೆ ಪ್ರಮಾಣವಚನ ಸ್ವೀಕರಿಸಿ ಬೆಂಗಳೂರಿಗೆ ಬಂದವರು ತಿರುಗಿ ಹೋಗಲಿಲ್ಲ.  ಕೇಂದ್ರ ಸಚಿವ ಮಂಡಳಿಯಲ್ಲಿ ರಾಜ್ಯಕ್ಕೆ ಸೇರಿರುವ ನಾಲ್ಕು ಮಂದಿ ಸಚಿವರಿದ್ದಾರೆ.  ಅವರಲ್ಲೊಬ್ಬರು ಮಂಡ್ಯದ ಮಣ್ಣಿನ ಮಗ.
ಉಳಿದವರು ಬಿಡಿ ಕನಿಷ್ಠ ಮಂಡ್ಯದ ಮಣ್ಣಿನ ಮಗನಾಗಿರುವ ಎಸ್.ಎಂ.ಕೃಷ್ಣ ಅವರಿಗೂ ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಅನಿಸಲಿಲ್ಲವೇ? ನಮ್ಮ ರೈತರು ಎಷ್ಟೊಂದು ವಿಶಾಲಹೃದಯಿಗಳೆಂದರೆ ತಮ್ಮ ಕೈಬಿಟ್ಟವರನ್ನೇ ತಲೆಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ.
ಇನ್ನೊಂದೆಡೆ ಅನಗತ್ಯವಾಗಿ ನ್ಯಾಯಾಲಯ, ನ್ಯಾಯಮಂಡಳಿ ವಿರುದ್ಧ ಕೂಗಾಡಿ ದ್ವೇಷ ಕಟ್ಟಿಕೊಳ್ಳುತ್ತಾರೆ. ಕನ್ನಡಿಗರ ರೋಷವೇ ಹೀಗೆ, ಅದರಲ್ಲಿ ಎಲ್ಲವನ್ನೂ ಸುಟ್ಟುಹಾಕುವ ಬೆಂಕಿ ಸ್ವಲ್ಪ ಹೆಚ್ಚು, ಕತ್ತಲಲ್ಲಿಯೂ ದಾರಿ ತೋರುವ ಬೆಳಕು ಕಡಿಮೆ.  ಈ ವರ್ಷದ ಸಮಸ್ಯೆಯೇನೋ ಇನ್ನು ಕೆಲವುದಿನಗಳಲ್ಲಿ ಮುಗಿದುಹೋಗುತ್ತದೆ.

ಮುಂದಿನ ದಿನಗಳು ಇನ್ನಷ್ಟು ಗಂಡಾಂತರಕಾರಿಯಾಗಲಿವೆ. ಮುಂದೇನು? ಅರಿವಿನ ಬೆಳಕಲ್ಲಿ ನೋಡಿದರೆ ದಾರಿಗಳು ಹಲವು ಇವೆ. ಇದು ಕೇವಲ ಮೈಸೂರು-ಮಂಡ್ಯದ ರೈತರ ಸಮಸ್ಯೆ ಅಲ್ಲ. ಇದನ್ನು ತಿಳಿದುಕೊಳ್ಳಬೇಕಾದರೆ ಯಾರಾದರೂ ತೆಪ್ಪಗೆ ಕೂತು ಐದು ಸಂಪುಟಗಳಲ್ಲಿರುವ ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಓದಬೇಕು. ಆಗಲಾದರೂ ಬುದ್ದಿ ಬರಬಹುದೇನೋ?
ರಾಜ್ಯದ ಪುನರ್‌ಪರಿಶೀಲನಾ ಅರ್ಜಿಯನ್ನೇನಾದರೂ ಸುಪ್ರೀಂಕೋರ್ಟ್ ತಿರಸ್ಕರಿಸಿ ಐತೀರ್ಪನ್ನು ಅಂತಿಮ ಎಂದು ಸಾರಿದರೆ ಮೊದಲು ನೀರಿಲ್ಲದೆ ಸಾಯುವವರು ಬೆಂಗಳೂರು ಜನ. ಈ ಮಹಾನಗರಕ್ಕಾಗಿ ನಾವು ಕೇಳಿರುವುದು 30 ಟಿಎಂಸಿಅಡಿ ಕಾವೇರಿ ನೀರು, ನ್ಯಾಯಮಂಡಳಿ ನಿಗದಿಪಡಿಸಿರುವುದು 1.75 ಟಿಎಂಸಿಅಡಿ.

ಕಷ್ಟ ಹಂಚಿಕೊಳ್ಳುವುದು ಸುಖ ಹಂಚಿಕೊಳ್ಳುವಷ್ಟು ಸುಲಭ ಅಲ್ಲ September 17, 2012

ಕಾವೇರಿ ನದಿನೀರು ಹಂಚಿಕೆಯ ವಿವಾದವನ್ನು ಕೊರಳಿಗೆ ಸುತ್ತಿಕೊಂಡು ಎರಡು ಶತಕಗಳಿಗಿಂತಲೂ ಹೆಚ್ಚು ಕಾಲ ಸುಸ್ತಾಗುವಷ್ಟು ಜಗಳವಾಡಿ, ಹಳ್ಳಿಯಿಂದ ದಿಲ್ಲಿ ವರೆಗೆ ಸುತ್ತಾಡಿ, ಇಷ್ಟ ಬಂದಷ್ಟು ಖರ್ಚು ಮಾಡಿದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡಿಗೆ ಸಾಧ್ಯವಾಗಿಲ್ಲ. 

ಈಗ ಎರಡೂ ರಾಜ್ಯಗಳು ಹೊರಟ ಜಾಗದಲ್ಲಿಯೇ ಮತ್ತೆ ಬಂದು ನಿಂತಿವೆ. 1799ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಕೆರೆಗಳ ದುರಸ್ತಿಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯ ರೈತರು ಮೊದಲ ಬಾರಿ ನಡೆಸಿದ ಪ್ರತಿಭಟನೆಯ ದಿನದಿಂದ ಪ್ರಾರಂಭವಾಗಿರುವ ನೀರಿನ ಜಗಳ ಇನ್ನೂ ನಿಂತಿಲ್ಲ. 

ಇದೇ ಸೆಪ್ಟೆಂಬರ್ 19ರಂದು ನಡೆಯಲಿರುವ ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಮತ್ತೊಂದು ಸುತ್ತಿನ ಕಾದಾಟಕ್ಕೆ ಎರಡೂ ರಾಜ್ಯಗಳು ತಾಲೀಮು ನಡೆಸತೊಡಗಿವೆ.

ಸುಪ್ರೀಂಕೋರ್ಟ್ ಆದೇಶದಂತೆಯೇ ರಚನೆಯಾದ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದ ನಂತರವೂ ಮೂಲವಿವಾದ ಬಗೆಹರಿದಿಲ್ಲ ಎನ್ನುವುದಕ್ಕೆ ಈಗಿನ ಜಗಳವೇ ಸಾಕ್ಷಿ. `ಮಳೆಗಾಲದಲ್ಲಿ ನೂರಾರು ನೆಂಟರು, ಬರಗಾಲ ಅನಾಥ` ಎಂಬಂತಾಗಿದೆ ಕಾವೇರಿ ಕಣಿವೆಯ ರೈತರ ಸ್ಥಿತಿ. ಹದಿನಾರು ವರ್ಷಗಳಷ್ಟು ದೀರ್ಘಕಾಲ ಅಳೆದು, ತೂಗಿ, ಸೋಸಿ ನೀಡಿದ ಅಂತಿಮ ಐತೀರ್ಪು ಕೊನೆಗೂ ಮಳೆಬಂದ ದಿನಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನಷ್ಟೇ ಹೇಳಿದ್ದು. 

ಇದಕ್ಕಿಂತಲೂ ಮುಖ್ಯವಾಗಿ ಮಳೆ ಇಲ್ಲದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನು ನ್ಯಾಯಮಂಡಳಿ ಹೇಳಬೇಕಾಗಿತ್ತು. ಆದರೆ `ಮಳೆ ಕೊರತೆಯ ವರ್ಷದಲ್ಲಿ ಕಡಿಮೆಯಾಗುವ ನೀರಿನ ಉತ್ಪನ್ನದ ಅನುಪಾತಕ್ಕೆ ಅನುಗುಣವಾಗಿ ಬಿಡಬೇಕಾಗಿರುವ ನೀರಿನ ಪಾಲು ಕಡಿಮೆಯಾಗಲಿದೆ` ಎಂದಷ್ಟೇ ಹೇಳಿರುವ ನ್ಯಾಯಮಂಡಳಿ ಇದಕ್ಕೊಂದು ಸ್ಪಷ್ಟವಾದ ಸೂತ್ರ ಇಲ್ಲವೇ ಮಾರ್ಗಸೂಚಿಯನ್ನು ನೀಡದೆ ಜಾರಿಕೊಂಡಿದೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರಿನ ಜಗಳವನ್ನು ಇನ್ನಷ್ಟು ಸರಳವಾಗಿ ವ್ಯಾಖ್ಯಾನಿಸುವುದಾದರೆ ಇದು ಮುಖ್ಯವಾಗಿ `ಮಳೆ ಇಲ್ಲದ ಕಷ್ಟದ ದಿನಗಳಲ್ಲಿನ ನೀರು ಹಂಚಿಕೆಯ ಸಮಸ್ಯೆ`. ಸಮೃದ್ಧವಾಗಿ ಮಳೆ ಬಿದ್ದಾಗ ನೀರು ಹರಿಸಲು ಕರ್ನಾಟಕ ತಕರಾರು ಮಾಡುವುದಿಲ್ಲ, ನೀರು ಬಿಡಲೇಬೇಕೆಂದು ತಮಿಳುನಾಡು ಕೂಡಾ ಹಟ ಹಿಡಿಯುವುದಿಲ್ಲ. 

1991ರಲ್ಲಿ ಮಧ್ಯಂತರ ಐತೀರ್ಪು ನೀಡಿದ ನಂತರದ ಇಪ್ಪತ್ತೊಂದು ವರ್ಷಗಳಲ್ಲಿ ನಾಲ್ಕು ವರ್ಷಗಳನ್ನು ( 2001-02: 189 ಟಿಎಂಸಿ, 2002-03: 109.45 ಟಿಎಂಸಿ, 2003-04: 75.87 ಟಿಎಂಸಿ ಮತ್ತು 2004-05: 185.55 ಟಿಎಂಸಿ) ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಹರಿಸಬೇಕಾಗಿರುವ 192 ಟಿಎಂಸಿಗಿಂತಲೂ ಹೆಚ್ಚು ನೀರು ಕರ್ನಾಟಕದಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದುಹೋಗಿದೆ. 

ವಿವಾದ ಒಟ್ಟು ನೀರಿನ ಪಾಲಿಗೆ ಸಂಬಂಧಿಸಿದ್ದಲ್ಲ, ಅದು ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಹರಿಸಬೇಕಾಗಿರುವ ನೀರಿನ ಪಾಲಿನದ್ದು. ಇದರಿಂದಾಗಿಯೇ ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಸಂಘರ್ಷದ ಕಿಡಿಹಾರುತ್ತಿರುವುದು.

ಇದು ಗೊತ್ತಿದ್ದರೂ ಇದಕ್ಕೊಂದು ಸರ್ವಸಮ್ಮತ ಪರಿಹಾರವನ್ನು ಸೂಚಿಲು ಸಾಧ್ಯವಾಗದೆ ಇರುವುದು ಕಾವೇರಿ ನ್ಯಾಯಮಂಡಳಿಯ ದೊಡ್ಡ ವೈಫಲ್ಯ. `ಮಳೆ ಕೊರತೆಯ ದಿನಗಳಲ್ಲಿ ಬಳಸಲು ಸಾಧ್ಯವಾಗುವಂತೆ ಉತ್ತಮ ಮಳೆಯ ಸಾಮಾನ್ಯ ಜಲವರ್ಷದ ಕೊನೆಯಲ್ಲಿ ಜಲಾಶಯಗಳಲ್ಲಿ ಸಾಧ್ಯ ಇದ್ದಷ್ಟು ನೀರಿನ ಸಂಗ್ರಹ ಇಟ್ಟುಕೊಳ್ಳಬೇಕು. 

ಸತತ ಎರಡು ವರ್ಷ ಮಳೆ ಕೊರತೆ ಕಾಣಿಸಿಕೊಂಡಲ್ಲಿ ಕಾವೇರಿ ಜಲನಿರ್ವಹಣಾ ಮಂಡಳಿ ಇಲ್ಲ ಕಾವೇರಿ ನದಿ ಪ್ರಾಧಿಕಾರ ನೀರು ಬಿಡುಗಡೆಯ ಮಾಸಿಕ ಕಂತುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು` ಎಂದಷ್ಟೇ ಅಂತಿಮ ಐತೀರ್ಪು ಹೇಳಿದೆ ( ಐದನೆ ಸಂಪುಟ, ಪುಟ 213). ಸ್ಪಷ್ಟ ಪರಿಹಾರದ ಮಾರ್ಗವನ್ನು ಅದು ತೋರಿಸಿಲ್ಲ.

ಜೂನ್-ಸೆಪ್ಟೆಂಬರ್ ವರೆಗಿನ ವಿವಾದಾತ್ಮಕ ನಾಲ್ಕು ತಿಂಗಳ ಅವಧಿಯಲ್ಲಿ ಕರ್ನಾಟಕ 137 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಮಧ್ಯಂತರ ಐತೀರ್ಪು ಹೇಳಿತ್ತು. ಅದರಲ್ಲಿ ಮೂರು ಟಿಎಂಸಿಯನ್ನಷ್ಟೇ ಕಡಿಮೆ ಮಾಡಿರುವ ಅಂತಿಮ ಐತೀರ್ಪು ವಿವಾದದ ಮೂಲಕಾರಣವನ್ನು ಜೀವಂತವಾಗಿ ಇಟ್ಟಿದೆ. 

ಜೂನ್‌ನಿಂದ ಸೆಪ್ಟೆಂಬರ್ ವರೆಗೆ 100 ಟಿಎಂಸಿ ಅದರ ನಂತರ 92 ಟಿಎಂಸಿ ನೀರು ಹರಿಸಿ ಎಂದು ನ್ಯಾಯಮಂಡಳಿ ಹೇಳಿದ್ದರೂ ವಿವಾದದ ಇತ್ಯರ್ಥಕ್ಕೆ ನೆರವಾಗುತ್ತಿತ್ತೊ ಏನೋ? ತಮಿಳುನಾಡು ಖುದ್ದಾಗಿ ಒಪ್ಪಿಕೊಂಡ 20 ಟಿಎಂಸಿ ಅಂತರ್ಜಲದ ಬಳಕೆಯನ್ನು ಗಣನೆಗೆ ತೆಗೆದುಕೊಂಡಿದ್ದರೂ ಕರ್ನಾಟಕದ ಮೇಲಿನ ಅಷ್ಟು ಭಾರ ಕಡಿಮೆಯಾಗಲು ಸಾಧ್ಯ ಇತ್ತು.

ನ್ಯಾಯಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಕಾರಣದಿಂದಾಗಿ ಮಧ್ಯಂತರ ಐತೀರ್ಪಿನಲ್ಲಿ ಹೇಳಿರುವಂತೆ ಮಳೆ ಇಲ್ಲದ ಕಾಲದಲ್ಲಿ ಸಂಕಷ್ಟ ಹಂಚಿಕೆ ಸೂತ್ರವನ್ನು ರೂಪಿಸುವ ಜವಾಬ್ದಾರಿ 1998ರಲ್ಲಿ ರಚನೆಗೊಂಡ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ್ದಾಗಿದೆ. ನ್ಯಾಯಮಂಡಳಿ ತನಗೊಪ್ಪಿಸಿರುವ ಜವಾಬ್ದಾರಿಯ ನಿರ್ವಹಣೆಗಾಗಿ ಕಾವೇರಿ ಉಸ್ತುವಾರಿ ಸಮಿತಿಯನ್ನು ಪ್ರಾಧಿಕಾರ ರಚಿಸಿದೆ. 

ಉಸ್ತುವಾರಿ ಸಮಿತಿ ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಮೂಲಕ ಕಾವೇರಿ ನದಿ ನೀರು ಹಂಚಿಕೆಯ ವಿವಾದವನ್ನು ಇತ್ಯರ್ಥಗೊಳಿಸಬೇಕಾಗಿರುವ ಸುಪ್ರೀಂಕೋರ್ಟ್‌ನ ಆದೇಶದ ಮೂಲಕ ರಚನೆಗೊಂಡ ನ್ಯಾಯಮಂಡಳಿಯ ಹೊಣೆ ಅಂತಿಮವಾಗಿ ಒಂದಷ್ಟು ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ಹೆಗಲ ಮೇಲೆ ಬಂದು ಕೂತಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ತಾಂತ್ರಿಕ ಸಮಿತಿ `ಸಂಕಷ್ಟ ಹಂಚಿಕೆಯ ಸೂತ್ರ`ಗಳನ್ನು ಹೆಣೆಯುತ್ತಲೇ ಇದ್ದರೂ ಅದಕ್ಕೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳನ್ನು ಒಪ್ಪಿಸಲು ಸಾಧ್ಯವಾಗಿಲ್ಲ. 

ಈ ಬಾರಿ ಕೂಡಾ ಕರ್ನಾಟಕದಲ್ಲಿ ನಡೆದ ಸರ್ವಪಕ್ಷಗಳ ಸಭೆ `ಸಂಕಷ್ಟ ಹಂಚಿಕೆ ಸೂತ್ರ`ವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯದೊಂದಿಗೆ ಬರ್ಖಾಸ್ತುಗೊಂಡಿದೆ. ಇದರಿಂದಾಗಿ ವಿವಾದ ಪ್ರಾಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ.
ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಈಡಾಗುತ್ತ ಬಂದಿರುವ ಕಾವೇರಿ ನದಿ ಪ್ರಾಧಿಕಾರ ಇಲ್ಲಿಯ ವರೆಗೆ ರಚಿಸಿದ ಸಂಕಷ್ಟ ಹಂಚಿಕೆಯ ಕರಡು ಸೂತ್ರಗಳೆಲ್ಲವೂ ತಮಿಳುನಾಡಿನ ರೈತರ ಹಿತವನ್ನಷ್ಟೇ ಕಾಯಲು ರೂಪುಗೊಂಡಿರುವಂತಹದ್ದು ಎಂದು ಹೇಳಲು ಆಧಾರಗಳಿವೆ. 

ಕರ್ನಾಟಕ ನೀಡಿರುವ ಸಲಹೆಗಳನ್ನು ಪ್ರಾಧಿಕಾರದಿಂದ ನೇಮಕಗೊಂಡ ತಾಂತ್ರಿಕ ಸಮಿತಿ ಪರಿಗಣಿಸಿಯೇ ಇಲ್ಲ. ಅವುಗಳು ಹೀಗಿವೆ:

-ಕರ್ನಾಟಕದಲ್ಲಿ ಬಹುಪಾಲು ಮಳೆಯನ್ನು ತಂದುಕೊಡುವ ನೈರುತ್ಯ ಮಾರುತದ ಮಳೆಯನ್ನಷ್ಟೇ ಪರಿಗಣಿಸದೆ ತಮಿಳುನಾಡಿನಲ್ಲಿ ಅಕ್ಟೋಬರ್ ಮಧ್ಯಭಾಗದಿಂದ ಜನವರಿ ವರೆಗೆ ಸುರಿಯವ ಈಶಾನ್ಯ ಮಾರುತವನ್ನೂ ಪರಿಗಣಿಸಬೇಕು. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಕುರುವೈ ಬೆಳೆಗೆ ನೈರುತ್ಯ ಮಾರುತವನ್ನು ಅವಲಂಬಿಸಿದ್ದರೆ ನಂತರ ಬೆಳೆಯುವ ಸಾಂಬಾ ಬೆಳೆಗೆ ಬೇಕಾಗಿರುವ ಮಳೆಯ ಮೂರನೆ ಎರಡರಷ್ಟರನ್ನು ಈಶಾನ್ಯ ಮಾರುತದಿಂದ ಪಡೆಯುತ್ತಾರೆ. 

ಇಲ್ಲಿಯ ವರೆಗಿನ ಸಂಕಷ್ಟ ಹಂಚಿಕೆ ಸೂತ್ರಗಳು ಈಶಾನ್ಯ ಮಾರುತವನ್ನು ಪರಿಗಣಿಸಿಲ್ಲ. ( ಪ್ರತಿವರ್ಷ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ನೀರು ಸಂಗ್ರಹ ಮತ್ತು ಜೂನ್ ಒಂದರಿಂದ ಅಕ್ಟೋಬರ್ 15ರ ವರೆಗಿನ ನೈರುತ್ಯ ಮಾರುತ ಮತ್ತು ಅಕ್ಟೋಬರ್ 16ರಿಂದ ಜನವರಿ 31ರ ವರೆಗಿನ ಈಶಾನ್ಯ ಮಾರುತದ ಮಳೆಯನ್ನು ದಾಖಲಿಸುವ ಹೊಣೆಯನ್ನು ನ್ಯಾಯಮಂಡಳಿ ಅಂತಿಮ ಐತೀರ್ಪಿನಲ್ಲಿ ಕಾವೇರಿ ನಿಯಂತ್ರಣಾ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿಗೆ ಒಪ್ಪಿಸಿರುವುದು ಕರ್ನಾಟಕದ ಈ ಸಲಹೆಗೆ ಬಲ ತಂದುಕೊಟ್ಟಿದೆ.)

-ನೈರುತ್ಯ ಮಾರುತ ಕೊನೆಗೊಳ್ಳುವ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗಿನ ನೀರಿನ ಕೊರತೆಯನ್ನಷ್ಟೇ ಲೆಕ್ಕ ಹಾಕಿ ಅಲ್ಲಿಂದ ನಂತರದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳಬೇಕೆಂಬ ಸೂತ್ರ ಸರಿ ಅಲ್ಲ. ನ್ಯಾಯಮಂಡಳಿ ಐತೀರ್ಪು ನೀಡುವಾಗ ಜೂನ್‌ನಿಂದ ಡಿಸೆಂಬರ್ ವರೆಗೆ ಬಿಟ್ಟ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದ್ದು ಸಂಕಷ್ಟ ಸ್ಥಿತಿಯ ಅಂದಾಜಿಗೆ ನೀರಿನ ಕೊರತೆಯನ್ನು ಲೆಕ್ಕ ಹಾಕುವಾಗಲೂ ಆ ಅವಧಿಯನ್ನೇ (ಜೂನ್-ಡಿಸೆಂಬರ್) ಪರಿಗಣಿಸಬೇಕು.

-ಸಂಕಷ್ಟ ಹಂಚಿಕೆ ಸೂತ್ರ ರಚಿಸುವಾಗ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶವನ್ನಷ್ಟೇ ಪರಿಗಣಿಸದೆ ತಮಿಳುನಾಡಿನ ಜಲಾಶಯಗಳ ನೀರು ಸಂಗ್ರಹವನ್ನೂ ಪರಿಗಣಿಸಬೇಕು. ನೀರಾವರಿ ವರ್ಷದ ಪ್ರಾರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು. 

ನರ್ಮದಾ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಮಂಡಳಿ `..ನಿರ್ದಿಷ್ಠ ನೀರಾವರಿ ವರ್ಷದಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಹಿಂದಿನ ವರ್ಷದ ಮಿಗತೆ ನೀರಿನ ಪ್ರಮಾಣ ಕೂಡಾ ಸೇರಿದೆ..` ಎಂದು ತನ್ನ ಐತೀರ್ಪಿನಲ್ಲಿ ಹೇಳಿದೆ.

- ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರ ಮತ್ತು ಮೆಟ್ಟೂರು ಜಲಾಶಯದ ನಡುವೆ 5535 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶ ಇದೆ. ಸಂಕಷ್ಟದ ಸ್ಥಿತಿಯನ್ನು ಲೆಕ್ಕಹಾಕುವಾಗ ಈ ಜಲಾನಯನ ಪ್ರದೇಶದಲ್ಲಿ ಪ್ರತಿ ಜಲವರ್ಷ ಉತ್ಪತ್ತಿಯಾಗುವ ಸುಮಾರು 25 ಟಿಎಂಸಿ ನೀರನ್ನು ಗಣನೆಗೆ ತೆಗೆದುಕೊಳ್ಳಬೇಕು.

-ತಮಿಳುನಾಡಿಗೆ ಬಿಟ್ಟ ನೀರಿನ ಲೆಕ್ಕವನ್ನು ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಆಯೋಗದ ಜಲಮಾಪನ ಕೇಂದ್ರದ ಆಧಾರದಲ್ಲಿಯೇ ನಡೆಸಬೇಕು. ಮೆಟ್ಟೂರಿನಲ್ಲಿ ಅಧಿಕೃತ ಜಲಮಾಪನ ವ್ಯವಸ್ಥೆಯೇ ಇಲ್ಲದೆ ಇರುವುದರಿಂದ ಅಲ್ಲಿನ ನೀರಿನ ದಾಖಲೆಯನ್ನು ಪರಿಗಣಿಸುವುದು ಸರಿ ಅಲ್ಲ. (ಬಿಳಿಗುಂಡ್ಲು ಜಲಮಾಪನದ ನೀರಿನ ಲೆಕ್ಕವೇ ಅಧಿಕೃತ ಎಂದು ನ್ಯಾಯಮಂಡಳಿಯ ಅಂತಿಮ ಐತೀರ್ಪಿನಲ್ಲಿ ಹೇಳಿರುವುದು ಈ ಸಲಹೆಗೆ ಪೂರಕವಾಗಿದೆ.)

-ಎರಡು ಗರಿಷ್ಠ ಮತ್ತು ಎರಡು ಕನಿಷ್ಠ ಮಳೆಯ ವರ್ಷಗಳ ಸರಾಸರಿಯನ್ನು ಪರಿಗಣಿಸದೆ, 1974ರಿಂದ ಈ ವರೆಗಿನ ಮಳೆ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಕಾವೇರಿ ನದಿ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಕಳೆದ ಹನ್ನೆರಡು ವರ್ಷಗಳಿಂದ ಗಮನಿಸುತ್ತಾ ಬಂದ ಯಾರು ಕೂಡಾ ಕರ್ನಾಟಕದ ಈ ಸಲಹೆಗಳಿಗೆ ಮಾನ್ಯತೆ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ ಇಲ್ಲ. 

ಸೂತ್ರ ರಚನೆ ತಾಂತ್ರಿಕ ಸ್ವರೂಪದ್ದಾಗಿದ್ದರೂ ಅಂತಿಮವಾಗಿ ಅದೊಂದು ರಾಜಕೀಯ ತೀರ್ಮಾನವಾಗಿರುವುದು ಪರಿಹಾರ ಕಗ್ಗಂಟಾಗಲು ಕಾರಣ. ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹ ಮತ್ತು ರೈತರ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸೂತ್ರ ರಚನೆಯಾಗಬೇಕಾಗಿದ್ದರೂ ಅಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ರಾಜಕೀಯ ಲೆಕ್ಕಾಚಾರ.

ಕೇಂದ್ರ ಸರ್ಕಾರವನ್ನು ಸದಾ ತನ್ನ ಋಣದ ಉರುಳಲ್ಲಿ ಇಟ್ಟುಕೊಂಡಿರುವ ತಮಿಳುನಾಡು, ರಾಜಕೀಯ ಬಲಾಬಲದ ಪರೀಕ್ಷೆ ಎದುರಾದಾಗೆಲ್ಲ ಸುಲಭದಲ್ಲಿ ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಾ ಬಂದಿದೆ. ಈ ಬಾರಿಯೂ ಹಾಗಾಗುವುದಿಲ್ಲ ಎನ್ನುವುದಕ್ಕೆ ಪ್ರಬಲವಾದ ಯಾವ ಕಾರಣಗಳೂ ಹೊಳೆಯುತ್ತಿಲ್ಲ. ರಾಜಕೀಯವಾಗಿ ಕರ್ನಾಟಕ ಇಂದಿನಷ್ಟು ದುರ್ಬಲ ಹಿಂದೆಂದೂ ಆಗಿರಲಿಲ್ಲ.

ಸಕೀನಾಬಾಯಿ ನಂಬಿಕೆ ಉಳಿಸಿದ ಶಿವ September 10, 2012

ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದನ್ನು ಕೇಳಿದಾಗ ನನಗೆ ನೆನಪಾದವರು ಸಕೀನಾ ಬಾಯಿ. ಐದು ವರ್ಷಗಳ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋದವನಿಗೆ ನರೋಡಾ ಪಾಟಿಯಾದಲ್ಲಿ ಭೇಟಿಯಾಗಿದ್ದ ಸಕೀನಾಬಾಯಿ ಹಳೆಯ ದಿನಗಳನ್ನು ಮೆಲುಕುಹಾಕುತ್ತಾ `ನಾವೆಲ್ಲ ಒಂದು ಕುಟುಂಬದ ರೀತಿ ಇದ್ದವರು, ಆ ಕಾಲ ಹೊರಟೋಯ್ತು, ಈಗ ಎಲ್ಲೋ ಗಲಭೆ ನಡೆದ ಗಾಳಿಸುದ್ದಿ ಬಂದರೂ ಎದೆ ನಡ್‌ಗತೈತಿ. ಯಾರ ಮೇಲೂ ನಂಬಿಕೆ ಬರೋಲ್ಲ, ಆ ಶಿವನೇ ಕಾಯಬೇಕು` ಎಂದಿದ್ದರು ಅಚ್ಚ ಕನ್ನಡದಲ್ಲಿ. (ಪ್ರಜಾವಾಣಿ ವರದಿ: 15.12.2007). ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕಾಗಿ `ಹಿಂದೂ ಶಿವ`ಯಾದಗೀರ್ ತಾಲ್ಲೂಕಿನ ಅತ್ತಿಗುಣಿಯ ಸಕೀನಾಬಾಯಿಯ ಕೈಬಿಡಲಿಲ್ಲ. ಅವರು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಮಾಡದೆ `ನ್ಯಾಯದೇವತೆಯ ಕಣ್ಣು ತೆರೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ.`

ಆದರೆ ನ್ಯಾಯಕ್ಕೆ ಸಿಕ್ಕಿದ ಈ ಜಯಕ್ಕಾಗಿ ಉಳಿದೆಲ್ಲರಿಗಿಂತ ಹೆಚ್ಚು ಸಂತಸ ಪಡಬೇಕಾದವರು ತಾವು ಎಂದು ಕರ್ನಾಟಕದ ಬಹಳಷ್ಟು ಜನರಿಗೆ ತಿಳಿದಿಲ್ಲ. 35 ಮಕ್ಕಳು, 32 ಮಹಿಳೆಯರು ಮತ್ತು 30 ಗಂಡಸರು ಸೇರಿದಂತೆ ನರೋಡಾ ಪಾಟಿಯಾದಲ್ಲಿ ಹತ್ಯೆಗೀಡಾದವರ ಅಧಿಕೃತ ಸಂಖ್ಯೆ 97. ಇವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದವರು. ಹುಬ್ಬಳ್ಳಿ, ಧಾರವಾಡ, ಹಾನಗಲ್, ಸುರಪುರ, ಶಹಪುರ, ಜೇವರ್ಗಿ, ಯಾದಗೀರ್ ಕಡೆಗಳಿಂದ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರಿದ್ದಾರೆ. ಸಕೀನಾಬಾಯಿಯಂತೆ ಅಚ್ಚಕನ್ನಡ ಮಾತನಾಡುವವರು ಈಗಲೂ ಅಲ್ಲಿದ್ದಾರೆ. ಇದಕ್ಕಾಗಿಯೇ ಸ್ಥಳೀಯರು ನರೋಡಾ ಪಾಟಿಯಾಕ್ಕೆ `ಛೋಟಾ ಕರ್ನಾಟಕ್` ಎನ್ನುತ್ತಾರೆ.  ಊರಲ್ಲಿ ನೇಕಾರಿಕೆ ಮಾಡುತ್ತಿದ್ದ ಇವರು  ಕೈಮಗ್ಗ ನಿಂತುಹೋದ ಮೇಲೆ ಅಹಮದಾಬಾದ್‌ಗೆ ಹೋಗಿ ಬಟ್ಟೆಗಿರಣಿಗಳಲ್ಲಿ ಸೇರಿಕೊಂಡಿದ್ದರು. ಗಿರಣಿಗಳು ಯಾಂತ್ರಿಕೃತಗೊಳ್ಳುತ್ತಿದ್ದಂತೆಯೇ ಅದಕ್ಕೆ ಬೇಕಾದ ಕೌಶಲ ಇಲ್ಲದೆ ನಿರುದ್ಯೋಗಿಗಳಾಗಿ ಅನಿವಾರ್ಯವಾಗಿ ಟೈಲರಿಂಗ್, ಲಾರಿ-ಅಟೋರಿಕ್ಷಾ ಓಡಿಸುವುದು, ಮಾಂಸ ಮಾರಾಟ, ಎಲೆಕ್ಟ್ರಿಕಲ್ ರಿಪೇರಿ ಮೊದಲಾದ ಸಣ್ಣಪುಟ್ಟ ವೃತ್ತಿಯಲ್ಲಿ ತೊಡಗಿಸಿಕೊಂಡು ಬಡತನದ ನಡುವೆಯೂ ತಮ್ಮ ಪಾಡಿಗೆ ತಾವಿದ್ದರು. ಹತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರ ಬದುಕಿಗೆ ಬೆಂಕಿ ಬಿತ್ತು. ಕೋಮುಗಲಭೆಯ ನಂತರ ಶಹಾ ಅಲಂ ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾಗಿದ್ದ ಸುರಪುರ ತಾಲ್ಲೂಕಿನ ಜೈನುಲ್ಲಾ ನನ್ನ ಕೈಹಿಡಿದು  `ಸಾಯಲಿಕ್ಕೆ ಇಲ್ಲಿಗೆ ಬರಬೇಕಿತ್ತಾ?` ಎಂದು ಕೇಳಿದ್ದು (ಪ್ರಜಾವಾಣಿ ವರದಿ, ಮಾರ್ಚ್ 8, 2002)  ಕಿವಿಯಲ್ಲಿ ಈಗಲೂ ಗುಂಯ್‌ಗುಡುತ್ತಿದೆ.

ಅಹಮದಾಬಾದ್ ನಗರದಿಂದ ಸುಮಾರು 15 ಕಿ.ಮೀ.ದೂರದ ಹೊರವಲಯದಲ್ಲಿರುವ ನರೋಡಾ ಪಾಟಿಯಾಕ್ಕೂ ಗೋಧ್ರಾಹತ್ಯಾಕಾಂಡಕ್ಕೂ ಸಂಬಂಧವೇ ಇಲ್ಲ. ಇದು ಆ ಪ್ರಕರಣದ ವಿಚಾರಣೆಯಲ್ಲಿಯೂ ಸಾಬೀತಾಗಿದೆ. `ಪ್ರತೀಕಾರ`ಕ್ಕಾಗಿ ನರೋಡಾಪಾಟಿಯಾವನ್ನೇ ಆರಿಸಿಕೊಳ್ಳಲು ಮುಖ್ಯವಾಗಿ ಎರಡು ಕಾರಣ. ಮೊದಲನೆಯದು ಒಂದೇ ಕಡೆ ಸುಲಭದಲ್ಲಿ ನೂರಾರು  ಮುಸ್ಲಿಂ ತಲೆಗಳು ಸಿಗುತ್ತವೆ ಎಂಬ ದುಷ್ಟ ಮನಸ್ಸಿನ ಯೋಚನೆ. ಸುಮಾರು 15 ಸಾವಿರ ಜನಸಂಖ್ಯೆಯ ನರೋಡಾಪಾಟಿಯಾ ಬಡಾವಣೆಗೆ ಸೇರಿರುವ ಹುಸೇನ್‌ನಗರ, ಜವಾಹರ ನಗರ, ಪಂಡಿತ್ ಕೀ ಚಾಳ್, ಮಸ್ಜೀದ್‌ಗಲ್ಲಿಗಳಲ್ಲಿ ಸುಮಾರು 250-300  ಮುಸ್ಲಿಂ ಕುಟುಂಬಗಳಿವೆ. ಅಲ್ಲಿರುವ ಹಿಂದೂ ಕುಟುಂಬಗಳ ಸಂಖ್ಯೆ 25 ಕೂಡಾ ದಾಟಲಾರದು. ನರೋಡಾ ಪಾಟಿಯಾದ ಈ ಚಾಳ್‌ಗಳನ್ನು ಗಂಗೋತ್ರಿ ಸೊಸೈಟಿ ಮತ್ತು ಗೋಪಿನಾಥ್ ಸೊಸೈಟಿ ಎಂಬ ಎರಡು ವಸತಿಸಂಕೀರ್ಣಗಳು ಸುತ್ತುವರಿದಿವೆ. 

`ರಕ್ಷಣೆ ಕೋರಿ ಓಡಿ ಬಂದ ನಮ್ಮನ್ನು ಪೊಲೀಸರು ಕತ್ತಲಾದ ಮೇಲೆ ಬೇರೆ ಕಡೆ ಸಾಗಿಸುತ್ತೇವೆ ಎಂದು ಹೇಳಿ ಒಂದು ಕಡೆ ಸೇರಿಸಿಬಿಟ್ಟಿದ್ದರು. ಎರಡು ವಸತಿಸಂಕೀರ್ಣಗಳ ನಡುವಿನ ಓಣಿಯಲ್ಲಿ ಸೇರಿದ್ದ ನಮ್ಮ ಮೇಲೆ ಕಟ್ಟಡಗಳ ಮೇಲಿನಿಂದ ಪೆಟ್ರೋಲ್-ಸೀಮೆ ಎಣ್ಣೆ ಸುರಿಯತೊಡಗಿದ್ದರು. ಆಗ ಪ್ರತ್ಯಕ್ಷವಾದ ಬೆಂಕಿ ಕೊಳ್ಳಿ ಹಿಡಿದುಕೊಂಡ ಗುಂಪು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನೆಲ್ಲ ಬೆಂಕಿಗೆ ದೂಡಿತ್ತು. ಅವರೆಲ್ಲ ಮೊದಲೇ ಪ್ಲಾನ್ ಮಾಡಿದ್ದರು ಸಾಬ್...` ಎಂದು ಕುರೇಷಿಲಾಲ್ ಆ ಕರಾಳ ದಿನದ ಘಟನಾವಳಿಗಳನ್ನು ಗಲಭೆಯ ನಂತರ ವಿವರಿಸಿದ್ದರು.

ಎರಡನೆ ಕಾರಣ ಈಗ ಜೈಲು ಸೇರಿರುವ ಮಾಯಾಬೆನ್ ಕೊಡ್ನಾನಿಯ ಬೆಂಬಲ. ಸ್ಥಳೀಯ ಶಾಸಕರ ನಿಯಂತ್ರಣದಲ್ಲಿ ಪೊಲೀಸರು ಇರುವುದರಿಂದ ಅಪರಾಧಿಗಳಿಗೆ ರಕ್ಷಣೆ ನೀಡುವುದು ಮತ್ತು ಜನಬಲ-ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭ. ಈ ಲೆಕ್ಕಾಚಾರ ಕೂಡಾ ಹುಸಿಯಾಗಲಿಲ್ಲ. ನರೋಡಾ ಪಾಟಿಯಾದ ಎದುರಿನ ರಸ್ತೆಯಲ್ಲಿಯೇ ರಾಜ್ಯ ಮೀಸಲು ಪಡೆಯ ಕೇಂದ್ರ ಕಚೇರಿ ಇದ್ದರೂ ಯಾವ ಪೊಲೀಸರೂ 2002ರ ಫೆಬ್ರವರಿ 28ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರಕ್ಷಣೆಗೆ ಬಂದಿರಲಿಲ್ಲ. ರಕ್ಷಣೆ ಕೋರಿ ಓಡಿಬಂದ ಮಹಿಳೆಯರು ಮತ್ತು ಮಕ್ಕಳ ಮೇಲೆಯೇ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಖಾಕಿಧಾರಿ ಖಳನಾಯಕರಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಎಂ.ಕೆ.ಮೈಸೂರ್‌ವಾಲಾ ಒಬ್ಬರು. ಇಷ್ಟೆ ಅಲ್ಲ, ನರೋಡಾಪಾಟಿಯಾದ ಅಗ್ನಿಕಾಂಡಕ್ಕೆ ಬಳಸಿದ್ದು ಎದುರಿನ ರಸ್ತೆಯಲ್ಲಿರುವ ರಾಜ್ಯ ರಸ್ತೆಸಾರಿಗೆಯ ದಾಸ್ತಾನು ಮಳಿಗೆಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್.

ಅಲ್ಲಿ ಬದುಕುಳಿದವರ ಬಾಯಿಯಿಂದಲೇ ಕೇಳದೆ ಇದ್ದರೆ ಎಲ್ಲರಂತೆ ತಾಯಿಯ ಹೊಟ್ಟೆಯಿಂದ ಬಂದ ಮನುಷ್ಯರು ಈ ರೀತಿ ವರ್ತಿಸಲು ಸಾಧ್ಯ ಎನ್ನುವುದನ್ನು ನಂಬುವುದು ಕಷ್ಟ. ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ಅಲ್ಲಿನ ನಿರಾಶ್ರಿತರು ಹೇಳಿದ್ದ ಕತೆಗಳನ್ನು ನಾನು ಕೂಡಾ ಆಗ ಸಂಪೂರ್ಣವಾಗಿ ನಂಬಿರಲಿಲ್ಲ. ಇಂತಹ ಘಟನೆಗಳು ನಡೆದಿದ್ದರೂ ಅದು ಕೋಮುದ್ವೇಷದಿಂದ ಕುರುಡರಾಗಿರುವ ಹುಚ್ಚರು ಮತ್ತು ಒಂದಷ್ಟು ಪುಂಡರು ಇದನ್ನು ನಡೆಸಿರಬಹುದೆಂದು ಬಹಳ ಮಂದಿಯಂತೆ ನಾನು ತಿಳಿದಿದ್ದೆ. ಆದರೆ ನಂತರದ ದಿನಗಳಲ್ಲಿ ಹೊರಬರತೊಡಗಿದ  ಸತ್ಯಸಂಗತಿಗಳು  ಬೆಚ್ಚಿಬೀಳಿಸುವಂತಹದ್ದು. 

28 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಮಾಯಾ ಕೊಡ್ನಾನಿ ಮಹಿಳೆ ಮತ್ತು ಸ್ಥಳೀಯ ಶಾಸಕಿ ಮಾತ್ರವಲ್ಲ, ಸ್ತ್ರೀರೋಗ ತಜ್ಞೆ ಕೂಡಾ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಸಮುದಾಯಕ್ಕೆ  ಸೇರಿರುವ ಮಾಯಾ ಕೊಡ್ನಾನಿ ವಿದ್ಯಾರ್ಥಿದೆಸೆಯಿಂದಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡವರು ಮತ್ತು ನರೇಂದ್ರ ಮೋದಿಯವರ ಜತೆಗಿದ್ದವರು.  ಈ ಪ್ರಕರಣದ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಮಾಯಾ ಕೊಡ್ನಾನಿ ಹೆಸರು ಹೆಚ್ಚು ಕೇಳಿಬಂದಿರಲಿಲ್ಲ. ಆದರೆ ಈಕೆಯ ಬೆನ್ನುಹತ್ತಿದ ರಾಹುಲ್ ಶರ್ಮಾ ಎಂಬ ದಿಟ್ಟ ಪೊಲೀಸ್ ಅಧಿಕಾರಿ 2002ರ ಫೆಬ್ರವರಿ 28ರಂದು ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ನರೋಡಾಪಾಟಿಯಾದ ಆಸುಪಾಸಿನಲ್ಲಿಯೇ ಇದ್ದರೆನ್ನುವ ಮಾಹಿತಿಯನ್ನು ಮೊಬೈಲ್ ಸಿಗ್ನಲ್‌ಗಳ ದಾಖಲೆಗಳಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಮಾಹಿತಿಯನ್ನು ರಾಜ್ಯಸರ್ಕಾರಕ್ಕೆ ನೀಡದೆ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೆಂಬ ಕಾರಣಕ್ಕೆ ನರೇಂದ್ರಮೋದಿ ಸರ್ಕಾರ ಶರ್ಮಾ ಅವರನ್ನು ದುರ್ವರ್ತನೆಯ ಆರೋಪದಡಿ ಶಿಕ್ಷಿಸಲು ಪ್ರಯತ್ನಿಸಿತ್ತು. ಶರ್ಮಾ ಅವರ ಪ್ರಯತ್ನ ವಿಫಲವಾಗಲಿಲ್ಲ.

`ಗುಜರಾತ್ ಕೋಮುಗಲಭೆ ಗೋಧ್ರಾ ಹತ್ಯಾಕಾಂಡಕ್ಕೆ ಸಹಜವಾಗಿ ವ್ಯಕ್ತವಾದ ಪ್ರತಿಕ್ರಿಯೆ, ಇದರಲ್ಲಿ ಸರ್ಕಾರ ಇಲ್ಲವೇ ಪಕ್ಷದ ಪಾತ್ರ ಇಲ್ಲ` ಎಂದು ಕಳೆದ ಹತ್ತುವರ್ಷಗಳಲ್ಲಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಸಮರ್ಥನೆಯನ್ನು ಕೂಡಾ ವಿಶೇಷ ನ್ಯಾಯಾಲಯ ಸುಳ್ಳೆಂದು ಸಾಬೀತುಮಾಡಿದೆ. 

ಗೋಧ್ರಾ ಹತ್ಯಾಕಾಂಡ ನಂತರ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ನಡೆದ ಕೊಲೆ,ಸುಲಿಗೆ, ಅತ್ಯಾಚಾರಗಳೆಲ್ಲವೂ ಪೂರ್ವಯೋಜಿತ ಮತ್ತು ಅದರಲ್ಲಿ ತೊಡಗಿದ್ದ ಅಪರಾಧಿಗಳಿಗೆಲ್ಲ ಸರ್ಕಾರ ರಕ್ಷಣೆ ನೀಡುತ್ತ ಬಂದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ನರೇಂದ್ರಮೋದಿ ನಿರಾಕರಿಸುವ ಸ್ಥಿತಿಯಲ್ಲಿ ಈಗ ಇಲ್ಲ. ಗಲಭೆಯ ಸಂದರ್ಭದಲ್ಲಿ ಕೇವಲ ಶಾಸಕಿಯಾಗಿದ್ದ ಮಾಯಾ ಕೊಡ್ನಾನಿಯನ್ನು  2007ರಲ್ಲಿ ಸಚಿವರನ್ನಾಗಿ ನೇಮಿಸಿದ್ದಾಗ ಗಲಭೆಯಲ್ಲಿ ಆಕೆಯ ಪಾತ್ರದ ಬಗ್ಗೆ ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರೂ ಯಾರೂ ನಂಬಲಾರರು.

ನರೋಡಾ ಪಾಟಿಯಾ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ಒಂದು ಕಾರಣಕ್ಕಾಗಿ ಮಹತ್ವಪೂರ್ಣವಾದುದು. ಸಾಮಾನ್ಯವಾಗಿ ಕೋಮುಗಲಭೆಗಳ ಪ್ರಕರಣದಲ್ಲಿ ಗೂಂಡಾಗಳು, ನಿರುದ್ಯೋಗಿಗಳು, ಬಡವರು, ನಿರ್ಗತಿಕರು, ಹಿಂದುಳಿದವರು, ದಲಿತರೇ ಅಪರಾಧಿಗಳೆನಿಸಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ನಡೆದ ಉತ್ತರಪ್ರದೇಶದ ಬಾಬ್ರಿಮಸೀದಿ ಧ್ವಂಸದ ಕಾರ್ಯಾಚರಣೆಯಿಂದ ಹಿಡಿದು ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿವರೆಗಿನ ಎಲ್ಲ ಪ್ರಕರಣಗಳಲ್ಲಿಯೂ ಇದು ಸತ್ಯ. ಇದನ್ನು ಯಾರಿಗಾದರೂ ಪರಾಮರ್ಶಿಸಿಕೊಳ್ಳಬೇಕೆಂದು ಅನಿಸಿದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ  ಪ್ರಥಮ ಮಾಹಿತಿ ವರದಿ ಮತ್ತು ಆರೋಪಪಟ್ಟಿಗಳಲ್ಲಿ ಇರುವ ಹೆಸರುಗಳನ್ನು ಪರಿಶೀಲಿಸಬಹುದು. 

ಆರೋಪಿಗಳಾದವರಲ್ಲಿ ಶೇಕಡಾ 99ರಷ್ಟು ಮಂದಿ ಬರೀ `ಪಾತ್ರಧಾರಿಗಳು`. `ಸೂತ್ರಧಾರಿಗಳು` ತಮ್ಮ ಸುತ್ತ  ಭದ್ರತೆಗಾಗಿ ಪೊಲೀಸರನ್ನು ಇಟ್ಟುಕೊಂಡು ಸುರಕ್ಷಿತವಾಗಿರುತ್ತಾರೆ. `ಪಾತ್ರಧಾರಿಗಳು` ಜೈಲು ಸೇರುತ್ತಾರೆ, ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿರುವ ಸತ್ಯ.ಆದರೆ ಇದೇ ಮೊದಲ ಬಾರಿಗೆ `ಸೂತ್ರದಾರರು` ಕೂಡಾ ಶಿಕ್ಷೆಗೊಳಗಾಗಿದ್ದಾರೆ. ಹಾಲಿ ಶಾಸಕಿ ಮಾಯಾ ಕೊಡ್ನಾನಿಗೆ ನ್ಯಾಯಾಲಯ ವಿಧಿಸಿರುವ  28 ವರ್ಷಗಳ ಸೆರೆವಾಸದ ಶಿಕ್ಷೆ `ಕಂಡವರ ಮಕ್ಕಳನ್ನು ಬಾಯಿಗೆ ತಳ್ಳುವ` ದುಷ್ಟ ಮನಸ್ಸುಗಳಿಗೆಲ್ಲ ಎಚ್ಚರಿಕೆಯ ಗಂಟೆಯಂತಿದೆ.

ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋಮುದ್ವೇಷದ ಜ್ವಾಲೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಸಣ್ಣ ಆಸೆಯ ಬೆಳಕು ಕೂಡಾ ಗುಜರಾತ್‌ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದೆ. ಹಿಂದೂ ಕೋಮುವಾದಕ್ಕೆ ವಿರುದ್ಧವಾಗಿ ಅಷ್ಟೇ ಅಪಾಯಕಾರಿಯಾಗಿ ಮುಸ್ಲಿಂ ಕೋಮುವಾದ ಇತ್ತೀಚೆಗೆ ಬೆಳೆಯುತ್ತಿದೆ. ಮುಸ್ಲಿಂ ಕೋಮುವಾದವನ್ನು ಬೆಳೆಸುವವರು ಕೂಡಾ ಇಲ್ಲಿಯ ವರೆಗೆ ಬಳಸುತ್ತಾ ಬಂದಿರುವುದು ಗುಜರಾತ್ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳ ಅತಿರಂಜಿತ ವರದಿಗಳನ್ನು. ಇವರು ಮುಸ್ಲಿಂ ಯುವಕರ ತಲೆಕೆಡಿಸುವುದೇ `ಗುಜರಾತ್‌ನಲ್ಲಿ ಸರ್ಕಾರವೇ ಮುಂದೆ ನಿಂತು ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದರೂ ನೊಂದವರಿಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯಗಳಿಂದಲೂ ರಕ್ಷಣೆ ಸಿಗದೆ ಇದ್ದರೆ ಈ ದೇಶದ ಮೇಲೆ ಹೇಗೆ ಭರವಸೆ ಇಟ್ಟುಕೊಳ್ಳಲು ಸಾಧ್ಯ?` ಎನ್ನುವ ಪ್ರಶ್ನೆಯೊಂದಿಗೆ. ಇಂತಹದ್ದೇ ಪ್ರಶ್ನೆಯನ್ನು ನರೋಡಾ ಪಾಟಿಯಾದ ಇಸ್ಲಾಮಿಕ್ ಪರಿಹಾರ ಸಮಿತಿಯ ಕಾರ್ಯದರ್ಶಿ ನಜೀರ್‌ಖಾನ್ ಪಠಾಣ್ ಐದು ವರ್ಷಗಳ ಹಿಂದೆ ನನಗೂ ಕೇಳಿದ್ದರು. ಆಗ ನನ್ನಲ್ಲಿಯೂ ಉತ್ತರ ಇರಲಿಲ್ಲ, ಈಗ  ಕೈಯಲ್ಲಿರುವ ಗುಜರಾತ್ ವಿಶೇಷ ನ್ಯಾಯಾಲಯದ ತೀರ್ಪನ್ನು ತೋರಿಸಿ ಉತ್ತರಿಸ ಬಲ್ಲೆ.

 `ಇತ್ತೀಚೆಗೆ ಮದರಸಾಕ್ಕೆ ಬರುತ್ತಿರುವ ಹುಡುಗರೆಲ್ಲ ಮಾತೆತ್ತಿದರೆ ಸದ್ದಾಂಹುಸೇನ್, ಒಸಾಮ ಬಿನ್ ಲಾಡೆನ್ ಎನ್ನುತ್ತಿದ್ದಾರೆ..` ಎಂದು ವಿಷಾದದಿಂದ ಅದೇ ಪಠಾಣ್ ಹೇಳಿದ್ದರು. ಆ ಹುಡುಗರೆಲ್ಲ ಮಾತನಾಡಿಕೊಳ್ಳಲು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೊತ್ನಾ ಯಾಗ್ನಿಕ್‌ನಿಂದ ಹಿಡಿದು ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಅರಿಜಿತ್ ಪಸಾಯತ್ ಮತ್ತು ಹೊಸಬೆಟ್ಟು ಸುರೇಶ್, ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್, ವಕೀಲರಾದ ಮುಕುಲ್ ಸಿನ್ಹಾ ಮತ್ತು ಗೋವಿಂದ್ ಪರಮಾರ್, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್‌ವಾದ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಇಳಿವಯಸ್ಸಿನಲ್ಲಿಯೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ  ಪ್ರೊ.ಬಂದೂಕ್‌ವಾಲಾ ಸೇರಿದಂತೆ ಎಷ್ಟೊಂದು ಹೆಸರುಗಳಿವೆಯಲ್ಲಾ ಎಂದು ಅವರಿಗೆ ಹೇಳಬೇಕೆಂದಿದ್ದೇನೆ.

ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ... September 03, 2012


ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಹನ್ನೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದ ನಂತರದ `ಸುದ್ದಿ ಸ್ಫೋಟ`ವನ್ನು ನಂಬಿದ ಯಾರಲ್ಲಿಯೂ ಹೊರಗೆ ಹೊರಟ ಮೇಲೆ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬ ವಿಶ್ವಾಸ ಹುಟ್ಟಲಾರದು.

`...ರಾಜ್ಯದ ಮೆಟ್ರೊ ರೈಲ್ವೆ ನಿಲ್ದಾಣದಿಂದ ಹಿಡಿದು ಕೈಗಾ ಅಣುಸ್ಥಾವರದವರೆಗೆ, ಗಣೇಶೋತ್ಸವದಿಂದ ಹಿಡಿದು ಮೈಸೂರು ದಸರಾದ ವರೆಗೆ ಹಲವಾರು ಕಡೆ ಬಾಂಬು ಸ್ಫೋಟ ನಡೆಸುವ ಉದ್ದೇಶವನ್ನು ಈ ಶಂಕಿತ ಉಗ್ರರು ಹೊಂದಿದ್ದರು. ಎಲ್‌ಇಟಿ, ಹುಜಿ ಸೇರಿದಂತೆ ಹಲವು ಪ್ರಮುಖ ಉಗ್ರಗಾಮಿ ಸಂಘಟನೆಗಳ ಜತೆ ಇವರು ಸಂಪರ್ಕ ಹೊಂದಿದ್ದರು. ಉತ್ತರಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿಯೂ ಇವರ ಜಾಲ ಹರಡಿದೆ, ಪಾಕಿಸ್ತಾನ ಮಾತ್ರವಲ್ಲ ಆಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ದೇಶಗಳಿಗೂ ಇವರು ಭೇಟಿ ನೀಡಿದ್ದರು......` ಇತ್ಯಾದಿ ಊಹಾಪೋಹ ಆಧರಿತ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ.

 ಇವುಗಳಲ್ಲಿ ಯಾವುದೂ ಪೊಲೀಸರ ಅಧಿಕೃತ ಹೇಳಿಕೆಗಳಲ್ಲ, ಸಾರ್ವಜನಿಕ ದಾಖಲೆಯಾಗಿರುವ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ಹೊರಗೆ ಬಿಟ್ಟುಕೊಡುತ್ತಿಲ್ಲ.

ಹೀಗೆ ಹೇಳಿದ ಮಾತ್ರಕ್ಕೆ ಅವರು ಕಟ್ಟುನಿಟ್ಟಾಗಿ ತನಿಖೆಯ ರಹಸ್ಯಪಾಲನೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ, ಪರಿಚಿತ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ಮುಕ್ತವಾಗಿ `ತನಿಖೆಯ ವಿವರ`ಗಳನ್ನು ಸೋರಿಬಿಡುತ್ತಿದ್ದಾರೆ. ಒಬ್ಬರು ಹೇಳಿರುವುದನ್ನು ಇನ್ನೊಬ್ಬರು ನಿರಾಕರಿಸುತ್ತಿದ್ದಾರೆ. ಕೈಗಾ ಅಣುಸ್ಥಾವರ ಶಂಕಿತ ಉಗ್ರರ ಗುರಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಮಾಡಿರುವ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ನಿರಾಕರಿಸುತ್ತಿದ್ದಾರೆ.

ಮೆಟ್ರೊ ನಿಲ್ದಾಣ ಸ್ಫೋಟ ಪ್ರಯತ್ನದ ಸುದ್ದಿಯನ್ನು ಕೂಡಾ ನಿರಾಕರಿಸಲಾಗಿದೆ. ಹಳೆಯ ಸುದ್ದಿಗಳನ್ನು ನಿರಾಕರಿಸಲಾಗುತ್ತಿದ್ದಂತೆಯೇ ಹೊಸ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪೈಪೋಟಿಯ ಯುಗದಲ್ಲಿ ಸಿಕ್ಕ ಸುದ್ದಿಯನ್ನು ದೃಢೀಕರಿಸಲು ಬೇಕಾದ ಸಮಯಾವಕಾಶ ಪತ್ರಕರ್ತರಿಗೂ ಇಲ್ಲ. ಮಾಧ್ಯಮರಂಗದ ಈ ದೌರ್ಬಲ್ಯವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ಅನುಮಾನ ಪಡುವ ರೀತಿಯಲ್ಲಿ `ಸುದ್ದಿಸ್ಫೋಟ` ನಡೆಯುತ್ತಿದೆ.

ಇವೆಲ್ಲವನ್ನೂ ನೋಡುತ್ತಿದ್ದಾಗ `ಕಾಶ್ಮೆರ್ ಟೈಮ್ಸ` ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥರಾದ ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತ ನೆನಪಾಗುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಪತ್ರಿಕೆಯ ಕಚೇರಿ ಇರುವ ಐಎನ್‌ಎಸ್ ಕಟ್ಟಡದಲ್ಲಿಯೇ ಗಿಲಾನಿ ಅವರ ಪತ್ರಿಕೆಯ ಕಚೇರಿಯೂ ಇದೆ. ಸ್ವಲ್ಪ ಕುಳ್ಳಗಿನ, ಸೌಮ್ಯ ಸ್ವಭಾವದ ಸುಮಾರು 35ರ ಆಜುಬಾಜಿನ ಈ ಗಿಲಾನಿ `ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ`ನೆಂದು ಒಂದು ದಿನ ಇದ್ದಕ್ಕಿದ್ದಂತೆ ಟಿವಿಚಾನೆಲ್‌ಗಳು ಕಿರಿಚಾಡುತ್ತಿರುವಾಗ ಅವರನ್ನು ಮೂರು ವರ್ಷಗಳಿಂದ ಆಗಾಗ ನೋಡುತ್ತಿದ್ದ ನನಗೆ ಆಘಾತವಾಗಿತ್ತು.

ಇಫ್ತಿಕರ್ ಗಿಲಾನಿ ಅವರು ಕಾಶ್ಮೆರದ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಹಾ ಗಿಲಾನಿ ಅಳಿಯನೆಂದು ಹೆಚ್ಚಿನವರಿಗೆ ಗೊತ್ತಾಗಿದ್ದು ಕೂಡಾ ಅವರ ಬಂಧನದ ನಂತರ. 2002ರ ಜುಲೈ ಒಂಬತ್ತರಂದು ದೆಹಲಿಯ ಮಾಳವೀಯ ನಗರದ ಅವರ ಮನೆ ಮೇಲೆ ದಾಳಿ ನಡೆಸಿದ ವರಮಾನ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಬಂದ ಐಬಿ ಅಧಿಕಾರಿಗಳು ಗಿಲಾನಿ ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಕರೆದೊಯ್ದಿದ್ದರು.

`ಅಧಿಕೃತ ರಹಸ್ಯ ಕಾಯಿದೆ`ಯಡಿ ಬಂಧಿಸಲಾದ ಅವರ ಮೇಲೆ ಬೇಹುಗಾರಿಕೆ, ರಾಜದ್ರೋಹದ ಆರೋಪಗಳನ್ನು ಮಾತ್ರವಲ್ಲ ಅಬ್ದುಲ್ ಗನಿ ಲೋನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಅವರನ್ನು ಬಂಧಿಸಿದ ಎರಡು ತಿಂಗಳ ನಂತರ `ಅಶ್ಲೀಲ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದರು` ಎಂಬ ಹೊಸ ಆರೋಪ ಮಾಡಲಾಗಿತ್ತು.

 ಈ ಎಲ್ಲ ಆರೋಪಗಳಿಗೆ ಗುಪ್ತಚರ ಇಲಾಖೆ ಆಧಾರವಾಗಿ ಬಳಸಿದ್ದು ಅವರ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ `ಫ್ಯಾಕ್ಟ್‌ಶೀಟ್ ಆನ್ ಇಂಡಿಯನ್ ಫೋರ್ಸಸ್ ಇನ್ ಇಂಡಿಯಾ ಹೆಲ್ಡ್ ಕಾಶ್ಮೆರ್` ಎಂಬ ಹೆಸರಿನ ಫೈಲ್‌ನಲ್ಲಿದ್ದ ಐದು ಪುಟಗಳ ದಾಖಲೆ. ಕಾಶ್ಮೆರದ ಉತ್ತರ ಕಮಾಂಡ್‌ನ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆ ಮತ್ತು ಅರೆಸೇನಾಪಡೆಯ ಸಾಮರ್ಥ್ಯದ ಬಗ್ಗೆ ಅದರಲ್ಲಿ ವಿವರಗಳಿದ್ದವು.

ಈ ಬಗ್ಗೆ ಸೇನಾ ಗುಪ್ತಚರ ಮಹಾನಿರ್ದೇಶಕರ (ಡಿಜಿಎಂಐ) ಅಭಿಪ್ರಾಯ ಪಡೆಯಲಾಗಿತ್ತು. ` ..ಈ ಮಾಹಿತಿ ದೇಶದ ಭದ್ರತೆಗೆ ಅಪಾಯಕಾರಿ ಹಾಗೂ ಜಮ್ಮು ಮತ್ತು ಕಾಶ್ಮೆರದಲ್ಲಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ..`ಎಂದು ಡಿಜಿಎಂಐ ಹೇಳಿತ್ತು. ಇಂಟಲಿಜೆನ್ಸ್ ಬ್ಯೂರೋ (ಐಬಿ) ಆಗಲೇ ಗಿಲಾನಿ ಅಪರಾಧಿ ಎಂದು ತೀರ್ಮಾನಿಸಿಯಾಗಿತ್ತು.

ಏಳು ತಿಂಗಳ ನಂತರ ಆರೋಪಮುಕ್ತರಾಗಿ ಹೊರಬಂದ ಗಿಲಾನಿ ತಿಹಾರ್ ಜೈಲಿನೊಳಗೆ ಪ್ರವೇಶಿಸಿದ ಮೊದಲ ದಿನದ ಅನುಭವವನ್ನು  `ಮೈ ಡೇಸ್ ಇನ್ ಪ್ರಿಸನ್` ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ:

`.....ತಿಹಾರ್ ಜೈಲು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ಅಧಿಕಾರಿ ತನ್ನನ್ನು ಹಿಂಬಾಲಿಸುವಂತೆ ನನಗೆ ಸೂಚನೆ ನೀಡಿದರು. ಅಲ್ಲಿರುವ ಮೇಜಿನ ಹಿಂದೆ ಕಿಶನ್ ಎನ್ನುವ ಅಧಿಕಾರಿ ಕೂತಿದ್ದರು,ಅವರ ಸುತ್ತ 10-12 ಮಂದಿ ನೆರೆದಿದ್ದರು. ಅವರಲ್ಲಿ ಕೆಲವರು ಜೈಲು ಸಿಬ್ಬಂದಿ, ಉಳಿದವರು ಕೈದಿಗಳು.

ನನ್ನ ಹೆಸರೇನೆಂದು ಕಿಶನ್ ಕೇಳಿದರು. ನಾನು ಉತ್ತರಿಸುವಷ್ಟರಲ್ಲಿ ಅಲ್ಲಿದ್ದ ಜೈಲು ಸಿಬ್ಬಂದಿಯೊಬ್ಬ ನನ್ನ ಕೆನ್ನೆಗೆ ಬೀಸಿ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲರೂ ನನ್ನ ಮೇಲೆ ಎರಗಿದರು, ಹೊಟ್ಟೆ,ಬೆನ್ನು, ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹೊಡೆದದ್ದು ಮಾತ್ರವಲ್ಲ ನನ್ನ ಕೂದಲನ್ನು ಹಿಡಿದು ಜಗ್ಗಿ ತಲೆಯನ್ನು ಮೇಜಿಗೆ ಅಪ್ಪಳಿಸಿದರು. ನನ್ನ ಬಾಯಿ,ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಿತ್ತು.

`ಸಾಲಾ, ಗದ್ದಾರ್, ಪಾಕಿಸ್ತಾನಿ ಏಜಂಟ್, ನಿನ್ನಂತಹವರು ಬದುಕಬಾರದು, ನೇರವಾಗಿ ಗಲ್ಲಿಗೇರಿಸಬೇಕು..` ಎಂದು ಬೈಯ್ಯುತ್ತಿರುವುದು ಪ್ರಜ್ಞೆ ತಪ್ಪುವವರೆಗೆ ಕೇಳುತ್ತಲೇ ಇತ್ತು. ಪ್ರಜ್ಞೆ ಬಂದ ಮೇಲೆ ನನ್ನ ಅಂಗಿಯಿಂದ ಟಾಯ್ಲೆಟ್ ಶುಚಿ ಮಾಡುವಂತೆ ತಿಳಿಸಿ ಮೂರು ದಿನಗಳ ಕಾಲ ಅದೇ ಅಂಗಿಯನ್ನು ತೊಡುವಂತೆ ಮಾಡಿದರು......`

ಯಾವ ಉದ್ದೇಶದಿಂದ ಗಿಲಾನಿ ಅವರನ್ನು ಬಂಧಿಸಿದ್ದರೆಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಬಂಧಿಸಿದ ಮರುಕ್ಷಣವೇ ಐಬಿ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿರಬಹುದು.

ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯಾಧಾರಗಳು ಅವರಲ್ಲಿ ಇರಲಿಲ್ಲ. ಆಗ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹದಿನೇಳು ಬಾರಿ ಗಿಲಾನಿ ಸಂಬಂಧಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಪ್ರತಿಬಾರಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳಿದ್ದರು. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಐಬಿ ಅಧಿಕಾರಿಗಳು ಒಂದಷ್ಟು ಸುಳ್ಳುಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ತೇಲಿ ಬಿಡತೊಡಗಿದ್ದರು.

ಮಾಧ್ಯಮಗಳು ಕೂಡಾ `ನಂಬಲರ್ಹ ಮೂಲಗಳು` ಕೊಟ್ಟ ಮಾಹಿತಿಯನ್ನು ಪರಾಮರ್ಶಿಸಲು ಹೋಗದೆ ಪ್ರಕಟಣೆ-ಪ್ರಸಾರ ನಡೆಸಿದವು. `ಹಿಂದಿ ಟಿವಿ ಚಾನೆಲ್‌ನ ಒಬ್ಬ ವರದಿಗಾರ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಹೆಸರಿದ್ದ ಅಂಚೆಪೆಟ್ಟಿಗೆಯ ಮುಂದೆ ನಿಂತು `ಗಿಲಾನಿ ಪರಾರಿಯಾಗಿದ್ದಾರೆ` ಎಂದು ಹೇಳುತ್ತಿರುವಾಗ ಮನೆಯೊಳಗೆ ಐಬಿ ಅಧಿಕಾರಿಗಳು ತಮ್ಮನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದುದನ್ನು ಗಿಲಾನಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತೆಯೊಬ್ಬರು `ನಾನು ಐಎಸ್‌ಐ ಏಜಂಟ್ ಎಂದು ಗಿಲಾನಿ ತಪ್ಪೊಪ್ಪಿಕೊಂಡಿದ್ದಾರೆ` ಎಂದು ಐಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದರು. ಇದರಿಂದ ನೊಂದ ಗಿಲಾನಿ ಪತ್ನಿ ಅನಿಸಾ ಅವರು ಆ ಪತ್ರಿಕೆಯ ಮಾಲೀಕರನ್ನು ಸಂಪರ್ಕಿಸಿ ಆಗಿರುವ ಅನಾಹುತವನ್ನು ತಿಳಿಸಿದ್ದರು. ಮರುದಿನ ಪತ್ರಿಕೆ ಕ್ಷಮಾಪಣೆ ಕೇಳಿತ್ತು.

ನಿಜಾಂಶ ಏನೆಂದರೆ ಗಿಲಾನಿ ಅವರ ಮೇಲೆ `ಅಧಿಕೃತ ರಹಸ್ಯ ಕಾಯ್ದೆ`ಯ ಉಲ್ಲಂಘನೆಯ ಆರೋಪಕ್ಕೆ ಕಾರಣವಾದ ಅವರದ್ದೇ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ ದಾಖಲೆ ಭಾರತ ಸರ್ಕಾರದ್ದಾಗಿರದೆ, ಪಾಕಿಸ್ತಾನದ್ದಾಗಿತ್ತು. ಡಾ.ನಾಸಿರ್ ಕಮಾಲ್ ಎಂಬ ಪಾಕಿಸ್ತಾನಿ ರಕ್ಷಣಾ ತಜ್ಞರು ಬರೆದ ಈ ಲೇಖನವನ್ನು ಇಸ್ಲಾಮಾಬಾದ್‌ನ ರಕ್ಷಣಾ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಅದನ್ನು ಗಿಲಾನಿ ತಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದರು.

ಇದು ಆಗಲೇ ರಕ್ಷಣಾ ಖಾತೆಯ ಗ್ರಂಥಾಲಯಗಳಲ್ಲಿ ಲಭ್ಯ ಇತ್ತು. ಪಾಕಿಸ್ತಾನಿಗಳು ಜಮ್ಮು ಮತ್ತು ಕಾಶ್ಮೆರವನ್ನು ಹಾಗೆಂದು ಕರೆಯದೆ `ಇಂಡಿಯನ್ ಹೆಲ್ಡ್ ಕಾಶ್ಮೆರ್` ಎಂದೇ ಈಗಲೂ ಕರೆಯುವುದು. (ಅವರು `ಆಜಾದಿ ಕಾಶ್ಮೆರ` ಎಂದು ಹೇಳುತ್ತಿರುವ ಪ್ರದೇಶವನ್ನು ನಾವು `ಪಾಕಿಸ್ತಾನ ಆಕ್ರಮಿತ ಕಾಶ್ಮೆರ` ಎಂದು ಕರೆಯುತ್ತೇವೆಯಲ್ಲ ಹಾಗೆ). ಇದರ ಅರಿವಿದ್ದ ಐಬಿ ತಾನು ವಶಪಡಿಸಿಕೊಂಡ ದಾಖಲೆಯಲ್ಲಿ `ಇಂಡಿಯನ್‌ಹೆಲ್ಡ್ ಕಾಶ್ಮೆರ` ಎಂದು ಇದ್ದ ಕಡೆಗಳೆಲ್ಲ `ಜಮ್ಮು ಮತ್ತು ಕಾಶ್ಮೆರ` ಎಂದು ತಿದ್ದಿತ್ತು.

ಆಗಲೇ ಡಿಜಿಎಂಐಗೆ ತಪ್ಪಿನ ಅರಿವಾಗಿ ತಾನು ಮೊದಲು ನೀಡಿದ್ದ ಅಭಿಪ್ರಾಯವನ್ನು ವಾಪಸು ಪಡೆದು `ಪ್ರಾರಂಭದಲ್ಲಿ ನಾವು ನೀಡಿದ್ದ ಅಭಿಪ್ರಾಯ ಅತಿರಂಜಿತವಾಗಿತ್ತು. ಈ ದಾಖಲೆ ಎಲ್ಲ ಕಡೆ ಸುಲಭದಲ್ಲಿ ಲಭ್ಯ ಇರುವುದರಿಂದ ಅದಕ್ಕೆ ಭದ್ರತಾ ಮೌಲ್ಯ ಇಲ್ಲ` ಎಂಬ ಪರಿಷ್ಕೃತ ಅಭಿಪ್ರಾಯ ನೀಡಿತ್ತು.

ಅಷ್ಟು ಹೊತ್ತಿಗೆ ಪ್ರಾರಂಭದಿಂದಲೂ ಈ ಪ್ರಕರಣದಲ್ಲಿ ಗಿಲಾನಿ ಬಗ್ಗೆ ಅನುಕಂಪ ಹೊಂದಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರಿಗೆ ಕೂಡಾ ಐಬಿ ಎಡವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕೊನೆಗೆ ಏಳು ತಿಂಗಳ ನಂತರ ಇಫ್ತಿಕರ್ ಗಿಲಾನಿ ಅವರನ್ನು 2003 ಜೂನ್ 13ರಂದು ಬಿಡುಗಡೆ ಮಾಡಲಾಯಿತು. ಆದರೆ ಯಾರದೋ ಒತ್ತಡಕ್ಕೆ ಸಿಕ್ಕಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದ ಅಧಿಕಾರಿಗಳ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ.

ಭಯೋತ್ಪಾದಕರು ಮತ್ತು ನಕ್ಸಲೀಯರ ಜತೆ ಸಂಪರ್ಕ ಕಲ್ಪಿಸಿ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕಾರ್ಯ ದೇಶದಾದ್ಯಂತ ಈಗಲೂ ಮುಂದುವರಿದಿದೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ವಾರ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಾಜ್ಮಿ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ತಿಂಗಳುಗಳಾದರೂ ಅವರು ಬಿಡುಗಡೆಯಾಗಿಲ್ಲ. ಬೆಂಗಳೂರು ಬಾಂಬು ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳ ಜತೆ ಮಾತನಾಡಿದ್ದರು ಎನ್ನುವ ಕಾರಣಕ್ಕೆ ದೆಹಲಿಯ ವಾರಪತ್ರಿಕೆಯ ಕೇರಳ ವರದಿಗಾರರಾಗಿದ್ದ ಶಾಹಿನಾ ಎಂಬುವವರ ಮೇಲೆ ಕರ್ನಾಟಕ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇಫ್ತಿಕರ್ ಗಿಲಾನಿ ಅವರು ನಿರಪರಾಧಿಯಾಗಿ ಹೊರಬಂದ ಮಾತ್ರಕ್ಕೆ ಭಯೋತ್ಪಾದನೆ ಸಂಬಂಧಿ ಆರೋಪಿಗಳೆಲ್ಲರೂ ನಿರಪರಾಧಿಗಳಿರಲಾರರು. ಆದರೆ ಮಾಡಿದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗದ ನಮ್ಮ ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ನಿರಪರಾಧಿಗಳು ಅಪರಾಧಿಯಾಗುತ್ತಿರುವುದು ಮಾತ್ರವಲ್ಲ, ಅಪರಾಧಿ ನಿರಪರಾಧಿ ಎಂದು ಅನಿಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳೂ ಇವೆ.

ಮೊದಲನೆಯದರಷ್ಟೇ ಎರಡನೆಯದೂ ಅಪಾಯಕಾರಿ. ಆರೋಪಗಳನ್ನು ಹೊರಿಸಲು ಒಂದೆರಡು ನಾಲಿಗೆ, ಒಂದಷ್ಟು ಕಿವಿಗಳಷ್ಟೇ ಸಾಕು. ಆದರೆ ಅದನ್ನು ಸಾಬೀತುಪಡಿಸಲು ಅಷ್ಟೇ ಸಾಲದು, ಸತ್ಯದ ನೆರವು ಕೂಡಾ ಬೇಕಾಗುತ್ತದೆ.