Monday, April 4, 2011

ಇಂದಿರಾಗಾಂಧಿ, ವಾಜಪೇಯಿ ಅವರಿಂದ ಕಲಿಯಿರಿ

ಇಷ್ಟೊಂದು ದೇಶಪ್ರೇಮ ಇವರಲ್ಲೆಲ್ಲ ಎಲ್ಲಿ ಅಡಗಿ ಕೂತಿರುತ್ತೋ ಗೊತ್ತಿಲ್ಲ.  ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ತಂಡಗಳು ಮುಖಾಮುಖಿಯಾದ ಕೂಡಲೇ ಇವರೊಳಗಿನ ದೇಶಪ್ರೇಮ ಜ್ವಾಲಾಮುಖಿಯಂತೆ ಸಿಡಿದು ಬೀದಿಬೀದಿಗಳಲ್ಲಿ ಹರಿಯತೊಡಗುತ್ತದೆ.  ಕ್ರಿಕೆಟ್ ಎನ್ನುವುದು ಭಾರತದ ಹೆಮ್ಮೆ ಹೇಗೋ ಹಾಗೆ ದೌರ್ಬಲ್ಯ ಕೂಡಾ.
ಜನತೆಯ ದೌರ್ಬಲ್ಯದ ಹುಡುಕಾಟದಲ್ಲಿರುವ ರಾಜಕಾರಣಿಗಳು ಕ್ರಿಕೆಟ್ ಕಾಲ ಪ್ರಾರಂಭವಾಯಿತೆಂದರೆ ಒಮ್ಮಿಂದೊಮ್ಮೆಲೇ ಕ್ರಿಕೆಟ್ ಪ್ರೇಮಿಗಳಾಗುವುದು ಇದೇ ಕಾರಣಕ್ಕಾಗಿ. ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದರೆ ಸಾಕ್ಷಾತ್ ಪ್ರಧಾನಮಂತ್ರಿಗಳೇ ಸ್ಟೇಡಿಯಂಗೆ ಬಂದಿಳಿಯುತ್ತಾರೆ.

ಮನಮೋಹನ್‌ಸಿಂಗ್ ಅವರು ತಾನು ಹೋಗಿದ್ದು ಮಾತ್ರವಲ್ಲ ಪಾಕಿಸ್ತಾನದ ಪ್ರಧಾನಿಯನ್ನೂ ಕರೆಸಿ ಪಕ್ಕದಲ್ಲಿ ಕೂರಿಸಿಕೊಂಡಿದ್ದರು. ಅಲ್ಲಿ ಭಾರತದ ಗೆಲುವಿಗೆ ಚಪ್ಪಾಳೆತಟ್ಟಿ ‘ದೇಶಪ್ರೇಮ’ ಮೆರೆದಿದ್ದಾರೆ. ಇದು ಕೇವಲ ಕ್ರಿಕೆಟ್ ಮೇಲಿನ ಪ್ರೀತಿ ಖಂಡಿತ ಅಲ್ಲ. ಅಂತಹ ಪ್ರೀತಿ ಹೊಂದಿದ್ದರೆ ವಿಶ್ವಕಪ್‌ನ ಸೆಮಿಫೈನಲ್‌ಗೆ ಯಾಕೆ ಹೋಗಬೇಕಿತ್ತು, ಫೈನಲ್ ನೋಡಲು ಹೋಗಬಹುದಿತ್ತಲ್ಲ?
ಕ್ರಿಕೆಟ್ ಎನ್ನುವ ಆಟ ಇಂದು ಭಾರತ ಮತ್ತು ಪಾಕಿಸ್ತಾನದ ಮನಸ್ಸುಗಳನ್ನು ಬೆಸೆಯುವ ಸಾಮರ್ಥ್ಯವನ್ನು ಉಳಿಸಿಕೊಂಡಿಲ್ಲ, ಯಾಕೆಂದರೆ ಇಂದಿನ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಒಂದೆಡೆ ಉದ್ಯಮ, ರಾಜಕೀಯ ಮತ್ತು ಅಪರಾಧ ಜಗತ್ತುಗಳ ನೆರಳು ಅದರ ಮೇಲೆ ಚಾಚಿದ್ದರೆ ಇನ್ನೊಂದೆಡೆ ಅದು ಮನಸ್ಸುಗಳನ್ನು ಒಡೆಯುವ ಅಸ್ತ್ರವಾಗಿ ಹೋಗಿದೆ.

ಇದಕ್ಕೆ ಎರಡೂ ದೇಶಗಳ ರಾಜಕಾರಣಿಗಳು ಮತ್ತು ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳು ಕಾರಣ. ಕ್ರಿಕೆಟ್‌ನ ಸೋಲು-ಗೆಲುವುಗಳು ದೇಶದ ಸೋಲು-ಗೆಲುವು ಎಂದು ತಿಳಿದುಕೊಳ್ಳುವಂತಹ ಸಮೂಹಸನ್ನಿ ಹರಡಿರುವಾಗ ಯಾವ ಬಗೆಯ ಸೌಹಾರ್ದತೆಯ ಸ್ಥಾಪನೆ ಸಾಧ್ಯ? ಇಂತಹ ಪರಿಸ್ಥಿತಿಯಲ್ಲಿ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿದ್ದ ದೇಶದ ಕ್ರಿಕೆಟ್ ಅಭಿಮಾನಿಗಳ ಜೈಕಾರ, ಚೀತ್ಕಾರಗಳು ಮಾತ್ರವಲ್ಲ ಗೆದ್ದ ಭಾರತವನ್ನು ಅಭಿನಂದಿಸಲು ಪ್ರಧಾನಿ ಹೊಡೆದ ಚಪ್ಪಾಳೆ ಕೂಡಾ ತನಗೆ ಮಾಡುತ್ತಿರುವ ಅವಮಾನ ಎಂದು ಪಕ್ಕದಲ್ಲಿ ಕೂತ ಪಾಕಿಸ್ತಾನದ ಪ್ರಧಾನಿ ತಿಳಿದುಕೊಂಡರೆ ಆಶ್ಚರ್ಯವೇನಿದೆ? ಇದರಿಂದ ಏನನ್ನು ಸಾಧಿಸಿದಂತಾಯಿತು?ಅದೂ ಪಾಕಿಸ್ತಾನದ ರಾಜಕೀಯ ವ್ಯವಸ್ಥೆಯಲ್ಲಿ ದುರ್ಬಲ ಸ್ಥಾನಮಾನ ಹೊಂದಿರುವ ಪ್ರಧಾನಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು. ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದು ತರುವ ಸಾಮರ್ಥ್ಯವಾದರೂ ಗಿಲಾನಿ ಅವರಿಗೆಲ್ಲಿದೆ?
ಕೇವಲ ಅಗ್ಗದ ಜನಪ್ರಿಯತೆ ಗಳಿಸುವ ಉದ್ದೇಶದ ಇಂತಹ ರಾಜತಾಂತ್ರಿಕ ಕಸರತ್ತುಗಳಿಂದ ಎರಡು ದೇಶಗಳ ಸಂಬಂಧ ಸುಧಾರಣೆಯಾಗಲಾರದು. ಇದಕ್ಕಾಗಿ ಎರಡೂ ದೇಶಗಳ ನಾಯಕರು ಸವೆದ ದಾರಿಯನ್ನೇ ಮತ್ತೆ ತುಳಿಯದೆ ಹೊಸದಾರಿ ಕಂಡುಕೊಳ್ಳುವ ದಿಟ್ಟತನ ಮತ್ತು ಅಪ್ರಿಯ ನಿರ್ಧಾರ ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿ ತೋರಬೇಕು. ಹಿಂದಿನ ಇಬ್ಬರು ಪ್ರಧಾನಿಗಳು ಈ ಕೆಲಸ ಮಾಡಿದ್ದಾರೆ.
ಅವರಲ್ಲೊಬ್ಬರು ಇಂದಿರಾಗಾಂಧಿ, ಇನ್ನೊಬ್ಬರು ಅಟಲಬಿಹಾರಿ ವಾಜಪೇಯಿ. ಇವರಿಬ್ಬರ ಕಾಲದಲ್ಲಿಯೇ ಕ್ರಮವಾಗಿ ಶಿಮ್ಲಾ ಮತ್ತು ಆಗ್ರಾ ಶೃಂಗಸಭೆಗಳು ನಡೆದದ್ದು. ಆ ನಾಯಕರ ಅದೃಷ್ಟವೇನೆಂದರೆ ಅವರ ಕಾಲದಲ್ಲಿ ಪಾಕಿಸ್ತಾನದಲ್ಲಿ ಕ್ರಮವಾಗಿ ಜುಲ್ಫೆಕರ್ ಅಲಿ ಭುಟ್ಟೋ ಮತ್ತು ಪರ್ವೇಜ್ ಮುಷರಫ್ ಎಂಬ ಇಬ್ಬರು ಬಲಿಷ್ಠ ನಾಯಕರಿದ್ದರು. ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನವನ್ನು ಹಣಿದುಹಾಕಿ ಆರೇ ತಿಂಗಳ ಅವಧಿಯಲ್ಲಿ ಮತ್ತೆ ಆ ದೇಶವನ್ನು ಮಾತುಕತೆಯ ಮೇಜಿಗೆ ಎಳೆದುತಂದ ಕೀರ್ತಿ ಇಂದಿರಾಗಾಂಧಿಯವರದ್ದು. ಸೋಲಿನಿಂದ ಅವಮಾನಕ್ಕೀಡಾಗಿದ್ದರೂ ವ್ಯತಿರಿಕ್ತವಾದ ಜನಾಭಿಪ್ರಾಯಕ್ಕೆ ಅಂಜದೆ ಮಾತುಕತೆಗೆ ಬಂದದ್ದು ಭುಟ್ಟೋ ಅವರ ವ್ಯಕ್ತಿತ್ವದ ಶಕ್ತಿ.
 ಇಬ್ಬರೂ ಪ್ರಧಾನಿಗಳಿಗೆ ತಮ್ಮ ದೇಶಗಳಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಡಬಲ್ಲ ಯಾವ ಅಂಶಗಳೂ ಶಿಮ್ಲಾ ಒಪ್ಪಂದದಲ್ಲಿ ಇರಲಿಲ್ಲ ಎನ್ನುವುದು ಗಮನಿಸುವಂತಹದ್ದು. ಆದರೆ ಇಬ್ಬರೂ ಕೂಡಾ ಯಾವುದೇ ಒಪ್ಪಂದದ ಮೂಲಸೂತ್ರವಾದ ‘ಕೊಟ್ಟು ತೆಗೆದುಕೊಳ್ಳುವ’ ಔದಾರ್ಯ ತೋರಿದ್ದರು. ಸೋತ ದೇಶದ ನಾಯಕನಿಗೆ ಮುಜುಗರವಾಗದಂತೆ, ಆತ ತನ್ನ ದೇಶಕ್ಕೆ ಹಿಂದಿರುಗಿದಾಗ ಜನರ ವಿರೋಧಕ್ಕೆ ಬಲಿಯಾಗದಂತೆ ಇಂದಿರಾಗಾಂಧಿ ಎಚ್ಚರಿಕೆಯಿಂದ ಭುಟ್ಟೋ ಅವರನ್ನು ನಡೆಸಿಕೊಂಡಿದ್ದರು.
‘1971ರ ಡಿಸೆಂಬರ್ 17ರಂದು ನಡೆದ ಕದನವಿರಾಮದ ನಂತರ ಗುರುತುಮಾಡಲಾಗಿದ್ದ ಗಡಿರೇಖೆಯನ್ನು ನಿಯಂತ್ರಣ ರೇಖೆಯನ್ನಾಗಿ ಎರಡೂ ದೇಶಗಳು ಯಾವುದೇ ಪೂರ್ವಗ್ರಹ ಇಲ್ಲದೆ ಒಪ್ಪಿಕೊಳ್ಳಬೇಕು...’ ಎನ್ನುವುದು ಶಿಮ್ಲಾ ಒಪ್ಪಂದದ ಮಹತ್ವದ ಅಂಶ. ಈ ನಿಯಂತ್ರಣ ರೇಖೆಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೆರ ಮತ್ತು ಭಾರತದ ನಿಯಂತ್ರಣದಲ್ಲಿರುವ ಕಾಶ್ಮೆರವನ್ನು ಪ್ರತ್ಯೇಕಗೊಳಿಸಿರುವುದು.

ಕಾಶ್ಮೀರದ ಮೇಲೆ ಸತತವಾಗಿ ಹಕ್ಕುಸ್ಥಾಪನೆ ಮಾಡುತ್ತಾ ಬಂದ ಮತ್ತು ಈ ವಿವಾದವನ್ನು ವಿಶ್ವಸಂಸ್ಥೆಯ ವರೆಗೆ ಎಳೆದುಕೊಂಡು ಹೋಗಿದ್ದ ಪಾಕಿಸ್ತಾನ ಮೊದಲ ಬಾರಿ ಅದನ್ನು ಬಿಟ್ಟುಕೊಟ್ಟದ್ದು ಶಿಮ್ಲಾ ಒಪ್ಪಂದದ ಮೂಲಕವೇ. ಅಷ್ಟು ಮಾತ್ರವಲ್ಲ ಇಬ್ಬರು ನಾಯಕರ ನಡುವೆ ಮೌಖಿಕವಾದ ಒಪ್ಪಂದವೊಂದು ಕೂಡಾ ಆ ಸಮಯದಲ್ಲಿ ನಡೆದಿತ್ತು.
ಆದರೆ ಅದು ನಡೆದಿದ್ದು ಮಾತುಕತೆ ನಡೆಯುತ್ತಿದ್ದ ಅಧಿಕೃತ ಬಂಗಲೆಯಲ್ಲಿ ಅಲ್ಲ, ಯಾಕೆಂದರೆ ಅಲ್ಲಿ ಆಗಲೇ ಪಾಕಿಸ್ತಾನದ ಗೂಢಚರ್ಯೆ ಸಂಸ್ಥೆಯಾದ ಐಎಸ್‌ಐ ಮಾತು ಕದ್ದಾಲಿಕೆಯ ಉಪಕರಣಗಳನ್ನು ಜೋಡಿಸಿಟ್ಟಿತ್ತಂತೆ. ಇದಕ್ಕಾಗಿ ಭುಟ್ಟೋ ಇಂದಿರಾಗಾಂಧಿಯವರನ್ನು ವಾಯುವಿಹಾರಕ್ಕೆ ಕರೆದೊಯ್ದು ‘ನಿಯಂತ್ರಣ ರೇಖೆಯನ್ನು  ಕ್ರಮೇಣ ‘ಅಂತರರಾಷ್ಟ್ರೀಯ ಗಡಿರೇಖೆ’ಯನ್ನಾಗಿ ಒಪ್ಪಿಕೊಳ್ಳುವ ಭರವಸೆ ನೀಡಿದ್ದು ಈಗ ರಹಸ್ಯವಾಗಿ ಉಳಿದಿಲ್ಲ.

ಆ ವಾಗ್ದಾನವನ್ನು ಲಿಖಿತ ರೂಪದಲ್ಲಿ ನೀಡಲು ಸಾಧ್ಯವಾಗದ ಭುಟ್ಟೋ ಅವರ ಅಸಹಾಯಕತೆಯನ್ನು ಇಂದಿರಾಗಾಂಧಿ ಅರ್ಥಮಾಡಿಕೊಂಡಿದ್ದರು. ಜುಲ್ಫಿಕರ್ ಅಲಿ ಭುಟ್ಟೋ ಅವರ ಪಾಲಿಗೆ ಶಿಮ್ಲಾ ಒಪ್ಪಂದದ ಲಿಖಿತ ಅಂಶಗಳು ಕೂಡಾ ತನ್ನ ದೇಶದಲ್ಲಿ ಜನಪ್ರಿಯತೆಯನ್ನು ತಂದುಕೊಡುವಂತಹದ್ದಾಗಿರಲಿಲ್ಲ ಎನ್ನುವುದಕ್ಕೆ ಅವರ ಬದುಕಿನ ಅಂತ್ಯವೇ ಸಾಕ್ಷಿ. ಅಂತಿಮವಾಗಿ ಭುಟ್ಟೋ ದೇಶದ್ರೋಹಿ ಎಂಬ ಆರೋಪ ಹೊತ್ತು ಗಲ್ಲಿಗೇರಬೇಕಾಯಿತು.
ಇಂದಿರಾಗಾಂಧಿಯವರು ಕೂಡಾ ಒಂದು ಸಣ್ಣ ರಾಜಿ ಮಾಡಿಕೊಂಡಿದ್ದರು. ಆದರೆ ಅದು ಭಾರತದಲ್ಲಿ ದೊಡ್ಡ ಸುದ್ದಿಯಾಗಲೇ ಇಲ್ಲ. ಬಾಂಗ್ಲಾ ಯುದ್ಧದ ವೇಳೆ ಭಾರತದ ಸೇನೆ ಆಕ್ರಮಿಸಿಕೊಂಡಿದ್ದ ಈಗಿನ ಪಾಕ್ ಆಕ್ರಮಿತ ಕಾಶ್ಮೆರದಲ್ಲಿದ್ದ (ಪಿಒಕೆ) ಸೇನೆಯನ್ನು ಹಿಂದೆಗೆದುಕೊಳ್ಳಲು ಇಂದಿರಾಗಾಂಧಿ ಒಪ್ಪಿಕೊಂಡಿದ್ದರು. ಅದರಿಂದಾಗಿಯೇ ಭಾರತ ತನ್ನ ‘ಬಲಜುಟ್ಟು’ ಕಳೆದುಕೊಂಡಿದ್ದು. ಭಾರತದ ಅಧಿಕೃತ ಭೂಪಟದಲ್ಲಿ ಕಾಣುವ ದೇಶದ ತಲೆಯ ಎಡ-ಬಲಗಳ ಎರಡು ಜುಟ್ಟುಗಳ ಮೇಲೆ ಭಾರತಕ್ಕೆ ಈಗ ಯಾವ ನಿಯಂತ್ರಣವೂ ಇಲ್ಲ.

ಅವೆರಡೂ ಪಾಕಿಸ್ತಾನ ಮತ್ತು ಚೀನಾದ ವಶದಲ್ಲಿವೆ. ಬಲಭಾಗದ ಜುಟ್ಟು ಇರುವ ಪ್ರದೇಶವೇ ಸುಮಾರು 78,000 ಚದರ ಕಿ.ಮೀ.ವಿಸ್ತೀರ್ಣದ ಪಿಒಕೆ. ಪಾಕಿಸ್ತಾನದ ಪ್ರಕಾರ ಅದು ಆಜಾದ್ ಕಾಶ್ಮೆರ. ಆ ಕಾಲದಲ್ಲಿ ಇಂದಿರಾಗಾಂಧಿಯವರ ‘ಉಡುಗೊರೆ’ಯ ಪರಿಣಾಮವನ್ನು ಯಾರೂ ಊಹಿಸಲು ಹೋಗಿರಲಿಲ್ಲ, ಈಗಷ್ಟೇ ಅರಿವಿಗೆ ಬರುತ್ತಿದೆ.
ಈಗ ಭಾರತದೊಳಗೆ ನುಸುಳಿಕೊಂಡು ಬರುವ ಭಯೋತ್ಪಾದಕರಿಗೆ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ತರಬೇತಿ ನೀಡುತ್ತಿರುವ ಶಿಬಿರಗಳು ಇರುವುದು ದುದನಿಯಾಲ್‌ನಿಂದ ಬಿಂಬರ್ ವರೆಗಿನ ನಿಯಂತ್ರಣ ರೇಖೆಗೆ ಒತ್ತಿಕೊಂಡಿರುವ ಪಿಒಕೆ ಪ್ರದೇಶದಲ್ಲಿ. ಭುಟ್ಟೋ ಅನಧಿಕೃತವಾಗಿ ಕಾಶ್ಮೀರವನ್ನು ಮತ್ತು ಇಂದಿರಾಗಾಂಧಿಯವರು ಅಧಿಕೃತವಾಗಿ ಪಿಒಕೆಯನ್ನು ಬಿಟ್ಟುಕೊಟ್ಟಿದ್ದರು. ಶಿಮ್ಲಾ ಒಪ್ಪಂದವನ್ನು ಬಿಟ್ಟು ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಈಗಲೂ ಬೇರೆ ದಾರಿಯಾವುದಾದರೂ ಇದೆಯೇ?
ಇಂದಿರಾಗಾಂಧಿಯವರ ನಂತರ ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಪ್ರಾಮಾಣಿಕವಾದ ಪ್ರಯತ್ನ ಮಾಡಿದವರು ಅಟಲಬಿಹಾರಿ ವಾಜಪೇಯಿ. ‘ಮನೆಯೊಳಗಿನ ಶತ್ರು’ಗಳ ಕಾಟದ ನಡುವೆಯೂ ಅವರು ಮಾಡಿದ ಸಾಧನೆ ನೆನಪಿಸಿಕೊಳ್ಳುವಂತಹದ್ದು. ಒಮ್ಮೊಮ್ಮೆ ತನ್ನ ಸರ್ಕಾರದೊಳಗೆ ಏನು ನಡೆಯುತ್ತಿದೆ ಎನ್ನುವುದೂ ಗೊತ್ತಿರದಿದ್ದ ವಾಜಪೇಯಿ ಅವರಿಗೆ ವಿದೇಶಾಂಗ ವ್ಯವಹಾರದ ಬಗ್ಗೆ ಮಾತ್ರ ಉಳಿದವರನ್ನು ಚಕಿತಗೊಳಿಸಬಲ್ಲಂತಹ ಒಳನೋಟ ಇತ್ತು. ಕಾಶ್ಮೀರ ಸಮಸ್ಯೆಯ ಇತ್ಯರ್ಥಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಿದ್ದ ಅವರು ಉದ್ದೇಶಪೂರ್ವಕವಾಗಿ ‘ಸವೆದ ಹಾದಿ ತುಳಿಯದೆ’ ಹೊಸಹಾದಿಯಲ್ಲಿಯೇ ಹೆಜ್ಜೆಹಾಕಿದ್ದರು.

ಲಾಹೋರ್ ಬಸ್ ಯಾತ್ರೆಯ ಶಾಂತಿ ಪ್ರಯತ್ನಕ್ಕೆ ಪಾಕಿಸ್ತಾನ ಕಾರ್ಗಿಲ್ ಯುದ್ದದ ಉಡುಗೊರೆ ನೀಡಿದರೂ ಅವರು ಶಾಂತಿಸ್ಥಾಪನೆಯ ಪ್ರಯತ್ನ ನಿಲ್ಲಿಸಿರಲಿಲ್ಲ. 2000ನೇ ವರ್ಷದಲ್ಲಿ ರಮ್ಜಾನ್ ತಿಂಗಳ ಕದನವಿರಾಮ ಘೋಷಿಸಿದ ನಂತರ ಜಮ್ಮು ಮತ್ತು ಕಾಶ್ಮೆರದಲ್ಲಿ ಮಾತ್ರವಲ್ಲ  ಕೆಂಪುಕೋಟೆ, ಅಕ್ಷರಧಾಮಗಳ ಮೇಲೂ ಉಗ್ರರ ದಾಳಿ ನಡೆಯಿತು. ಅಂತಿಮವಾಗಿ ಸಂಸತ್‌ಭವನದ ಮೇಲೆಯೇ ಭಯೋತ್ಪಾದಕರು ಎರಗಿಬಿದ್ದರು. ಹೀಗಿದ್ದರೂ ವಾಜಪೇಯಿ ಸಂಬಂಧ ಸುಧಾರಣೆಯ ಪ್ರಯತ್ನವನ್ನು ನಿಲ್ಲಿಸಿರಲಿಲ್ಲ.
ಪ್ರಧಾನಿ ಮನಮೋಹನ್‌ಸಿಂಗ್ ಅವರ ಕ್ರಿಕೆಟ್ ಡಿಪ್ಲೊಮೆಸಿಯಲ್ಲಿ ಹೊಸದೇನಿಲ್ಲ. ಇದು  ವಾಜಪೇಯಿ ಅವರು ಮಾಡಿಬಿಟ್ಟದ್ದು. ‘ದೇಶದ ಮನಸ್ಸುಗಳು ಒಂದಾಗಬೇಕಾದರೆ ಮೊದಲು ಜನರ ಮನಸ್ಸುಗಳು ಒಂದಾಗಬೇಕು. ಇದು ಕೇವಲ ರಾಜತಾಂತ್ರಿಕ ಮಟ್ಟದಲ್ಲಿ ನಡೆಯುವ ಮಾತುಕತೆಗಳಿಂದ ಸಾಧ್ಯ ಇಲ್ಲ. ದೇಶ-ಭಾಷೆಗಳ ಗಡಿಯನ್ನು ಮೀರಿದ ಕ್ರೀಡೆ, ಸಂಗೀತ, ಕಲೆ, ನಾಟಕ, ಚಲನಚಿತ್ರಗಳ ಮೂಲಕ ಮನಸ್ಸು ಒಂದಾಗಲು ಸಾಧ್ಯ’ ಎಂದು ಅವರು ಹೇಳುತ್ತಿದ್ದರು.
ಈ ಹಿನ್ನೆಲೆಯಲ್ಲಿಯೇ ಎರಡು ದೇಶಗಳ ಮನಸ್ಸನ್ನು ಬೆಸೆಯುವ ‘ಜನಸಂಪರ್ಕ ಮತ್ತು ವಿಶ್ವಾಸನಿರ್ಮಾಣ’ದ ಡಿಪ್ಲೊಮೆಸಿಯ ಹಾದಿ ತೆರೆದುಕೊಂಡದ್ದು. ಸ್ಥಗಿತಗೊಂಡಿದ್ದ ವಿಮಾನ-ರೈಲು-ಹಡಗು ಸಂಚಾರ, ಶ್ರಿನಗರ-ಮುಜಾಫರ್‌ನಗರ ನಡುವೆ ಬಸ್‌ಸಂಚಾರ, ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ, ವೀಸಾ ಕ್ಯಾಂಪ್ ಸ್ಥಾಪನೆಯ ಜತೆ ನಿಂತುಹೋಗಿದ್ದ ಉಭಯ ದೇಶಗಳ ನಡುವಿನ ಕ್ರಿಕೆಟ್ ಆಟಕ್ಕೆ ಚಾಲನೆ ನೀಡಿದ್ದು ಕೂಡಾ ವಾಜಪೇಯಿ.
 ಆ ಕಾಲದಲ್ಲಿ ಇವು ಯಾವುದೂ ಜನಪ್ರಿಯ ಕಾರ್ಯಕ್ರಮಗಳಾಗಿರಲಿಲ್ಲ. ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಆ ದೇಶವನ್ನು ಮುಗಿಸಿಬಿಡಬೇಕೆಂದು ಗರ್ಜಿಸುತ್ತಿರುವವರು ವಾಜಪೇಯಿ ಪರಿವಾರದಲ್ಲಿ ಮಾತ್ರವಲ್ಲ, ಹೊರಗೆಯೂ ಇದ್ದರು. ಪರ್ವೇಜ್ ಮುಷರಫ್ ಅವರ ಮೇಲೆಯೂ ಇದೇ ರೀತಿಯ ಒತ್ತಡಗಳಿದ್ದವು. ಒಂದೆಡೆ ಉಗ್ರಗಾಮಿ ಸಂಘಟನೆಗಳು ಇನ್ನೊಂದೆಡೆ ಧಾರ್ಮಿಕ ನಾಯಕರು ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದವು.

ಆದರೆ ಶಾಂತಿ ಸ್ಥಾಪನೆಗೆ ಮುಷರಫ್ ಅವರ ಗುಪ್ತ ಸಹಕಾರ ಇದ್ದ ಕಾರಣದಿಂದಾಗಿಯೇ ಇಬ್ಬರ ಪ್ರಯತ್ನಗಳು ಸ್ವಲ್ಪ ಮಟ್ಟಿಗಾದರೂ ಯಶಸ್ಸು ಕಾಣಲು ಸಾಧ್ಯವಾಗಿದ್ದು. ಆದರೆ ಈ ಇಬ್ಬರು ನಾಯಕರು ಭುಟ್ಟೋ ಮತ್ತು ಇಂದಿರಾಗಾಂಧಿಯವರಷ್ಟು ಅದೃಷ್ಟಶಾಲಿಗಳಾಗಿರಲಿಲ್ಲ. ಈ ಕಾರಣದಿಂದಾಗಿಯೇ ಆಗ್ರಾ ಶೃಂಗಸಭೆ ಭಂಗಗೊಂಡದ್ದು.
ಭಾರತದ ಕಡೆಯಿಂದ ಆಗ್ರಾ ಶೃಂಗಸಭೆಯನ್ನು ವಿಫಲಗೊಳಿಸಿದ ‘ಖಳನಾಯಕಿ’ ಈಗ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ. ಮಾತುಕತೆಯಲ್ಲಿ ಕಾಶ್ಮೀರವೇ ಮುಖ್ಯ ವಿಷಯ ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು, ಭಯೋತ್ಪಾದನೆಯ ಬಗ್ಗೆ ಮೊದಲು ತೀರ್ಮಾನಿಸುವ ಎನ್ನುತ್ತಿತ್ತು ಭಾರತ. ಒಂದು ಹಂತದಲ್ಲಿ ಕಾಶ್ಮೀರ ವಿಷಯವನ್ನು ಕೈಬಿಡುವ ಇಂಗಿತವನ್ನು ಪರ್ವೇಜ್ ಮುಷರಫ್ ನೀಡಿದ್ದರಂತೆ.ಇದನ್ನು ಹೇಗೋ ತಿಳಿದ ಸಚಿವೆ ಸುಷ್ಮಾಸ್ವರಾಜ್ ಇದನ್ನು ಭಾರತದ ಗೆಲುವು ಎಂಬಂತೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು. ತಕ್ಷಣ ಐಎಸ್‌ಐ ಮತ್ತು ಜೆಹಾದಿಗಳ ಕಡೆಯಿಂದ ವಿರೋಧ ಬರಲಾರಂಭಿಸಿತು.

ಈ ಸಂದೇಶವನ್ನು ಐಎಎಸ್ ಜತೆ ಸಂಪರ್ಕ ಹೊಂದಿದ್ದ ವಿದೇಶಾಂಗ ವ್ಯವಹಾರ ಸಚಿವ ಅಬ್ದುಲ್ ಸತ್ತಾರ್ ಅವರು ಮುಷರಫ್ ಅವರಿಗೆ ತಲುಪಿಸಿದ ನಂತರವೇ ಮುಷರಫ್ ಮುಷ್ಠಿ ಬಿಗಿಗೊಳಿಸಿದ್ದು. ಇನ್ನೇನು ಘೋಷಣೆ ಹೊರಬೀಳಲಿದೆ ಎಂದು ಆಗ್ರಾದ ಮೊಗಲ್ ಶೆರಟನ್ ಮಾಧ್ಯಮಕೇಂದ್ರದಲ್ಲಿ ಶೃಂಗಸಭೆಯ ವರದಿಗಾಗಿ ಹೋಗಿದ್ದ ನಾವೆಲ್ಲ ಕಾಯುತ್ತಿದ್ದರೆ ಪಕ್ಕದ ಜೇಪಿ ಪ್ಯಾಲೇಸ್‌ನಲ್ಲಿ ತಂಗಿದ್ದ ಪರ್ವೇಜ್‌ಮುಷರಫ್ ಪಾಕಿಸ್ತಾನದ ವಿಮಾನ ಹತ್ತಿದ್ದರು.

ಆಗ್ರಾ ಶೃಂಗಸಭೆಯ ವೈಫಲ್ಯದ ಹೊರತಾಗಿಯೂ ಉಭಯದೇಶಗಳ ಸಂಬಂಧ ಸುಧಾರಣೆಯಲ್ಲಿ ವಾಜಪೇಯಿ ವಹಿಸಿದ್ದ ಪಾತ್ರದಿಂದ ಕಲಿಯುವುದಿದೆ. ಇದಕ್ಕಾಗಿ ಮನಮೋಹನ್‌ಸಿಂಗ್ ಇತಿಹಾಸದ ಪುಟಗಳನ್ನು ತಿರುವಿಹಾಕಬೇಕು, ಪಾಕ್ ಪ್ರಧಾನಿ ಜತೆ ಕೂತು ಕ್ರಿಕೆಟ್ ನೋಡಿದರಷ್ಟೇ ಸಾಲದು