Wednesday, February 24, 2016

‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....

ದೇಶದ ಗಡಿ ಕಾಯುತ್ತಿರುವ ಯೋಧರು ವೀರ ಮರಣವನ್ನಪ್ಪಿದಾಗ ಉಕ್ಕಿ ಹರಿಯುವ ದೇಶಪ್ರೇಮದ ಪ್ರವಾಹವನ್ನು ಕಂಡಾಗಲೆಲ್ಲ ನಾನೇ ಹಿಂದೆ ‘ಪ್ರಜಾವಾಣಿ’ ಯಲ್ಲಿ ಬರೆದಿದ್ದ ಅಂಕಣವೊಂದು ನನ್ನನ್ನು ಕಾಡತೊಡಗುತ್ತದೆ.ಇದು ಮುಂಬೈನ ತಾಜ್ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆದಿದ್ದ ಸಂದರ್ಭದಲ್ಲಿ ಬರೆದದ್ದು.
ಹನುಮಂತ ಕೊಪ್ಪದ ಮತ್ತು ಆತನ ಜತೆಯಲ್ಲಿಯೇ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ವೀರ ಮರಣವನ್ನಪ್ಪಿರುವ ಯೋಧರಿಗಾಗಿ ನಾವೆಲ್ಲ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಕೂಡಾ ಹುತಾತ್ಮ ಯೋದರು ಮತ್ತು ಅವರ ಕುಟುಂಬದ ಬಗ್ಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ .
-------- --------------- --------------------- --------------------------------------------------------------
‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....
ಭಾರತದಲ್ಲಿ ದೇಶಭಕ್ತಿಯಷ್ಟು ಸುಲಭದಲ್ಲಿ ಬೇರೇನನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲವೇನೋ? ಇದಕ್ಕಾಗಿ ಎಷ್ಟೊಂದು ಮಾರ್ಗಗಳು? ಎಸ್‌ಎಂಎಸ್ ಕಳುಹಿಸಬಹುದು, ಟೀಶರ್ಟ್ ಮೇಲೆ ದೇಶಭಕ್ತಿಯ ಘೋಷಣೆಗಳನ್ನು ಪ್ರಿಂಟ್ ಹಾಕಿಸಿಕೊಳ್ಳಬಹುದು,ಕೈಕೈ ಹಿಡಿದು ಮಾನವಸರಪಳಿ ಕಟ್ಟಿಕೊಳ್ಳಬಹುದು, ಭಾರತದ ಭೂಪಟಕ್ಕೆ ದೇವತೆಯ ಚಿತ್ರಅಂಟಿಸಿ ಹೂಮಾಲೆ ಹಾಕಿ ಮೆರವಣಿಗೆ ಮಾಡಬಹುದು,ಗೋಡೆ ಬರಹಗಳನ್ನುಬರೆಯಬಹುದು, ಪತ್ರಿಕೆಗಳವಾಚಕರ ವಾಣಿ ವಿಭಾಗಕ್ಕೆ ಬೆಂಕಿಕಾರುವ ಪತ್ರಬರೆಯಬಹುದು, ಟಿವಿಚಾನೆಲ್‌ಗಳ ಮೈಕ್ ಮುಂದೆ ನಿಂತು ರಾಜಕಾರಣಿಗಳಿಗೆ, ಪಾಕಿಸ್ತಾನಕ್ಕೆ,ಸಾಧ್ಯವಾದರೆ ಮುಸ್ಲಿಮರಿಗೆ ಮನಸಾರೆ ಬೈದುಬಿಡಬಹುದು, ಜತೆಗೆ, ಈಎಲ್ಲಾ ‘ದೇಶಭಕ್ತಿ’ಯ ಕೆಲಸಮಾಡದವರು ದೇಶದ್ರೋಹಿಗಳೆಂದು ಹೀಯಾಳಿಸಬಹುದು, ಇವೆಲ್ಲಕ್ಕಿಂತ ಸುಲಭದ ಮಾರ್ಗವೆಂದರೆ ಕತ್ತಲಾಗುತ್ತ್ತಿದ್ದಂತೆಯೇ ನಾಲ್ಕುಬೀದಿ ಸೇರುವಸ್ಥಳದಲ್ಲಿಗೆಳೆಯ-ಗೆಳತಿಯರೊಂದಿಗೆಕೂಡಿ ರೂಪಾಯಿಗೆ ನಾಲ್ಕು ಸಿಗುವಒಂದಷ್ಟು ಕ್ಯಾಂಡಲ್‌ಗಳನ್ನು ಹೊತ್ತಿಸಬಹುದು (ವಿ.ಸೂ.:ದಯವಿಟ್ಟುಟಿವಿ ಚಾನೆಲ್‌ಗಳಿಗೆ ಮೊದಲೇ ಕಾರ್ಯಕ್ರಮದ ಬಗ್ಗೆ ತಿಳಿಸಿ,ಡ್ರೆಸ್-ಮೇಕಪ್ ಕ್ಯಾಮೆರಾ ಕಣ್ಣಿಗೆ ಒಪ್ಪುವಂತಿರಲಿ).ಅಲ್ಲಿಗೆ ದೇಶಭಕ್ತರೆಂದು ಸಾಬೀತಾಗಿ ಹೋಯಿತು, ಮನೆಗೆಹೋಗಿ ಹೊಟ್ಟೆತುಂಬಾ ಊಟ ಮಾಡಿ ಸೊಂಪಾಗಿ ನಿದ್ದೆ ಮಾಡಬಹುದು.
ಕಳೆದ ಹದಿನೆಂಟುದಿನಗಳಲ್ಲಿ ದೇಶದ ಬಹುತೇಕ ‘ಜಾಗೃತನಾಗರಿಕರು’ ಮಾಡಿದ್ದು ಇದನ್ನೇಅಲ್ಲವೇ? ಮೊನ್ನೆಸಂಸತ್ ಭವನದ ಪಕ್ಕದ ವಿಜಯ ಚೌಕ್ ನಲ್ಲಿ ಒಬ್ಬ ಯುವಕ ‘ಮೇರಾಏಕ್ ಬೈಟ್ ಲೇ ಲೋ’ ಎಂದು ಟಿವಿಚಾನೆಲ್‌ಗಳ ವರದಿಗಾರರರನ್ನು ಗೋಗರೆಯುತ್ತ್ತಿದ್ದ. ‘ಯಾಕಯ್ಯಾ’ಎಂದು ಕೇಳಿದರೆ ಎದುರಿಗಿದ್ದ ಸಂಸತ್ ಭವನದ ಕಡೆ ತೋರಿಸಿ ‘ಮುಜೇ ನೇತಾಲೋಗೊಂಕೋ ಗಾಲಿ ದೇನಾ ಹೈ’ಎಂದು ಕಿರುಚಾಡತೊಡಗಿದ. ‘ಅವರೇನುಮಾಡಿದ್ದಾರೆ?’ ಎಂದು ಪ್ರಶ್ನಿಸಿದರೆ ಹಿಂದಿ ಶಬ್ದಕೋಶದಲ್ಲಿರುವ ಎಲ್ಲ ಬೈಗುಳಗಳನ್ನು ಕಾರಿದ.‘ನೀನೇನು ಮಾಡಿದೆ’ ಎಂದು ಕೆಣಕಿದರೆ ‘ಉನ್ಹೇ ಗಾಲಿ ದೇನೇಕೆ ಲಿಯೇ ಮುಂಬೈ ಸೇ ಆಯಾ ಹ್ಹೂಂ,ಯೆ ಕಮ್ ಹೈ ಕ್ಯಾ?’ಎಂದು ಮರುಪ್ರಶ್ನಿಸಿದ. ಅವನನ್ನು ಪಕ್ಕಕ್ಕೆ ಕರೆದು ‘ನೋಡು, ಮುಂಬೈದಾಳಿಯಲ್ಲಿ ಹದಿನಾಲ್ಕು ಪೊಲೀಸರುಸತ್ತಿದ್ದಾರಲ್ಲಾ, ಅವರಹೆಸರು ಹೇಳು’ ಎಂದರೆ ಮೊದಲ ಬಾರಿ ಆತ ದೆಹಲಿ ಚಳಿಯಲ್ಲಿಯೂ ಬೆವರತೊಡಗಿದ,ತಡವರಿಸತೊಡಗಿದ.‘..ಕರಕರೆಸಾಬ್,ಕಾಮ್ಟೆಸಾಬ್, ಸಾಲಸ್ಕರ್ಸಾ ಬ್......ಒಂಬ್ಲೆ....’ಅದರ ನಂತರ ಒಂದು ಹೆಸರೂ ಅವನ ಬಾಯಿಯಿಂದ ಹೊರಡಲಿಲ್ಲ.
ಎಂತಹ ಮೂರ್ಖ ಯುವಕ ಅಂತೀರಾ? ಹಾಗಿದ್ದರೆ ಹುತಾತ್ಮರಾದ ಉಳಿದ ಹತ್ತು ಪೊಲೀಸರ ಹೆಸರು ನೆನಪಿಗೆ ಬರುತ್ತಾ ನೋಡಿ. ಬಹುಶಃ ಹುತಾತ್ಮ ಪೊಲೀಸರಕುಟುಂಬವರ್ಗ, ಸಹದ್ಯೋಗಿಗಳು ಮತ್ತು ಸ್ನೇಹಿತರನ್ನು ಹೊರತುಪಡಿಸಿ ಉಳಿದವರಲ್ಲಿ ಯಾರಿಗೂ ಅವರ ಹೆಸರುನೆನಪಲ್ಲಿ ಉಳಿದಿಲ್ಲ. ಮರಾಠಿಪತ್ರಿಕೆಗಳನ್ನು ಹೊರತುಪಡಿಸಿ ಬೇರೆ ಪತ್ರಿಕೆಗಳು ಕೂಡಾ ಅವರ ಫೋಟೋಗಳನ್ನು ಸರಿಯಾಗಿ ಪ್ರಕಟಿಸಲಿಲ್ಲ, ಅವರ ಸಾವಿನಿಂದಾಗಿ ಅವರ ಕುಟುಂಬಕ್ಕಾದ ಕಷ್ಟ-ನಷ್ಟದಚಿತ್ರವನ್ನು ನೀಡಿಲ್ಲ. ಟಿವಿಕ್ಯಾಮೆರಾಗಳ ಮುಂದೆ ಪೊಲೀಸರ ತ್ಯಾಗವನ್ನು ಕೊಂಡಾಡಿದವರು,ಕಣ್ಣೀರು ಸುರಿಸಿ ಮೇಕಪ್ ಸರಿಪಡಿಸಿಕೊಂಡವರು ಯಾರೂ ಈ ‘ಅನಾಮಿಕ ಹುತಾತ್ಮರು’ ಯಾರು? ಅವರೆಲ್ಲಿದ್ದಾರೆ? ಮನೆ ಯಜಮಾನನ ಸಾವಿನ ನಂತರ ಅವರ ಮನೆ ಸ್ಥಿತಿ ಏನಾಗಿದೆ?ಎಂದು ತಿಳಿದುಕೊಳ್ಳುವಪ್ರಯತ್ನ ಮಾಡಿಲ್ಲ.
೨೬/೧೧ ಘಟನೆಯ ಮರುಗಳಿಗೆಯಲ್ಲಿಯೇ ರಾಜ್ ಠಾಕ್ರೆಯನ್ನು ಗೇಲಿ ಮಾಡಿ’ಮುಂಬೈಯನ್ನು ರಕ್ಷಿಸಿದವರು ಉತ್ತರ, ದಕ್ಷಿಣದರಾಜ್ಯಗಳ ಯೋಧರು, ಮರಾಠಿಗಳಲ್ಲ’ಎನ್ನುವ ಅರ್ಥದ ಎಸ್‌ಎಂಎಸ್‌ಗಳು ಹರಿದಾಡತೊಡಗಿದವು. ಸತ್ಯಸಂಗತಿ ಏನೆಂದರೆ ಹುತಾತ್ಮ ಪೊಲೀಸರಾದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಜಯವಂತ್ ಪಾಟೀಲ್,ಮುಖೇಶ್ ಯಾಧವ್, ಪ್ರಕಾಶ್ ಮೋರೆ, ಆರ್.ಎಸ್.ಶಿಂಧೆ,ಶಶಾಂಕ್ ಶಿಂಧೆ, ವಿಜಯ್ ಖಾಂಡೇಕರ್, ಎ.ಆರ್.ಚಿಂತೇ, ಅಂಬಾದಾಸ್ ಪವಾರ್, ಬಿ.ಸಿ.ಬೋಂಸ್ಲೆ ಮೊದಲಾದವರೆಲ್ಲರೂ ಮರಾಠಿಗರು.ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವ ಪ್ರಮುಖ ಸಾಕ್ಷಿಯಾಗಿರುವ ಭಯೋತ್ಪಾದಕ ಅಜ್ಮಲ್ ಕಸಬ್ ಬಂಧನಕ್ಕೆ ಕಾರಣರಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ತುಕರಾಮ್ ಒಂಬ್ಲೆ ಕೂಡಾ ಮರಾಠಿಗ. ತನ್ನ ಗುಂಡಿಗೆಗೆ ಕಸಬ್ ಗುಂಡು ಹೊಡೆಯುತ್ತಿದ್ದರೂ ಲೆಕ್ಕಿಸದೆ ಆತನನ್ನು ಹಿಡಿದಕೈಯ್ಯನ್ನು ಸಡಿಲಿಸದೆ ಪ್ರಾಣಬಿಟ್ಟವರು ಒಂಬ್ಲೆ.
ಪ್ರಾಣ ಕಳೆದುಕೊಂಡರೇನಾಯಿತು,ಸರ್ಕಾರ ಪರಿಹಾರನೀಡುವುದಿಲ್ಲವೇ? ಎಂದುಕೇಳಬಹುದು. ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ ಕಳೆದ ಶನಿವಾರಕ್ಕೆ ಏಳುವರ್ಷಗಳಾಯಿತು. ಆ ಘಟನೆಯಲ್ಲಿ ಗುಂಡಿಗೆ ಎದೆಕೊಟ್ಟು ನಮ್ಮ ಜನಪ್ರತಿನಿಧಿಗಳನ್ನು ಉಳಿಸಿದವರು ಭದ್ರತಾಪಡೆಯ ಏಳು ಅಧಿಕಾರಿಗಳು. ಅವರಲ್ಲೊಬ್ಬರು ಎಎಸ್‌ಐ ನಾನಕ್ ಚಂದ್. ಹುತಾತ್ಮರಾದವರೆಲ್ಲರಿಗೂ ಪರಿಹಾರದ ಜತೆ ಪೆಟ್ರೋಲ್ ಪಂಪ್ ಲೈಸೆನ್ಸ್ ನೀಡುವುದಾಗಿ ಆಗಿನ ಕೇಂದ್ರ ಸರ್ಕಾರ ಘೋಷಿಸಿತ್ತು.
ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿ,ಸಾಲಮಾಡಿ ದುಡ್ಡು ತಂದು ಲಂಚಕೊಟ್ಟ ನಂತರ (ಪತ್ರಿಕೆಗಳಿಗೆನಿನ್ನೆ ಆ ಕುಟುಂಬವೇ ಹೇಳಿಕೊಂಡಿದೆ) ಕಳೆದ ವರ್ಷ ಸೋನೆಪತ್‌ನಲ್ಲಿರುವ ಕುಟುಂಬಕ್ಕೆ ದೂರದ ಗುಡ್‌ಗಾಂವ್‌ನ ಎಲ್ಲೋ ಮೂಲೆಯಲ್ಲಿ ಪೆಟ್ರೋಲ್ ಪಂಪ್ ಮಂಜೂರು ಮಾಡಲಾಗಿದೆ. ಆ ನಿವೇಶನದಲ್ಲಿ ನೀರು-ಚರಂಡಿವ್ಯವಸ್ಥೆ ಯಾವುದೂ ಸರಿ ಇಲ್ಲ. ಮತ್ತೊಬ್ಬ ಭದ್ರತಾ ಸಹಾಯಕ ಮಾಥುರ್‌ ಸಿಂಗ್ ಕುಟುಂಬಕ್ಕೆಕೇಂದ್ರ ಸರ್ಕಾರ ಹತ್ತು ಲಕ್ಷರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡುಬಿಟ್ಟಿದೆ.ದೆಹಲಿಯಲ್ಲಿಯೇ ಈ ಗತಿಯಾದರೆ ಉಳಿದ ಕಡೆ ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾದ ಪೊಲೀಸರ ಗತಿ ಏನಾಗಿರಬಹುದು?
ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ ನಂತರ ಇದ್ದಕ್ಕಿದ್ದಂತೆ ಎಲ್ಲರೂ ಪೊಲೀಸರು ಮತ್ತು ಸೇನೆಯನ್ನು ಕೊಂಡಾಡತೊಡಗಿದ್ದಾರೆ.ಭಯೋತ್ಪಾದಕರನ್ನು ಹೊಡೆದುರುಳಿಸಿದ ಎನ್‌ಎಸ್‌ಜಿ ಕಮಾಂಡೋಗಳ ಬಗ್ಗೆ ಪ್ರೀತಿ-ಅಭಿಮಾನಉಕ್ಕಿ ಹರಿಯತೊಡಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಆರನೇ ವೇತನ ಆಯೋಗದ ವರದಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಈ ಎರಡೂ ವರ್ಗಗಳು ಗೋಳಾಡುತ್ತಿದ್ದಾಗ ಇದೇ ಜನತೆಯಿಂದ ಕನಿಷ್ಠ ಅನುಕಂಪವ್ಯಕ್ತವಾಗಿಲ್ಲ. ಆಗ ಎಸ್‌ಎಂಎಸ್, ಮಾನವಸರಪಳಿ,ಕ್ಯಾಂಡಲ್‌ಲೈಟ್....ಎಲ್ಲಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗಲಿಲ್ಲ. ಯಾರೋ ಪೊಲೀಸ್ ಅಧಿಕಾರಿಯೊಬ್ಬ ಕಾನ್‌ಸ್ಟೇಬಲ್‌ಗಳಿಗೆ ವೇತನಆಯೋಗದಿಂದ ಎಷ್ಟ್ಲೆಲಾ ಅನ್ಯಾಯವಾಗಿದೆಎಂದು ಪತ್ರಿಕೆಗೆ ಲೇಖನ ಬರೆದರೆ ಮೇಲಾಧಿಕಾರಿಗಳು ಆತನಿಂದ ವಿವರಣೆಬಯಸಿ ನೋಟೀಸ್ ನೀಡಿರದ್ದರು.
ಭಾರತದ ಎನ್‌ಎಸ್‌ಜಿ ಮತ್ತು ಈ ಪಡೆಗೆ ಸ್ಫೂರ್ತಿಯಾಗಿರುವ ಬ್ರಿಟನ್‌ನ ‘ಸ್ಪೆಷಲ್ ಏರ್ ರ್ಸ್ಕಾಡ್ರನ್’ (ಎಸ್‌ಎಎಸ್)ನತರಬೇತಿ ಮತ್ತು ಸಂಬಳ-ಸವಲತ್ತುಗಳನ್ನು ಹೋಲಿಸಿ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಅದರ ಪ್ರಕಾರ ಎನ್‌ಎಸ್‌ಜಿ ಕಮಾಂಡೋದಲ್ಲಿನ ಯೋಧನಿಗೆ ಮಾಸಿಕ ಹದಿನೈದು ಸಾವಿರಮತ್ತು ಅಧಿಕಾರಿಗೆ ೪೫,೦೦೦ರೂಪಾಯಿ ಸಂಬಳ ನೀಡಲಾಗುತ್ತಿದೆ.
ಆದರೆ ಬ್ರಿಟನ್‌ನ ಎಸ್‌ಎಎಸ್ ಯೋಧ ಮಾಸಿಕ ೩೨ ಲಕ್ಷರೂಪಾಯಿ ಮತ್ತು ಮೇಜರ್ ೫೧ ಲಕ್ಷರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂದರೆ ಹುತಾತ್ಮರಾದ ಎನ್‌ಎಸ್‌ಜಿ ಹವಲ್ದಾರ್ ಗಜೇಂದ್ರಸಿಂಗ್‌ಗೆ ಸಿಗುತ್ತ್ತಿದ್ದ ತಿಂಗಳ ಸಂಬಳ ಕೇವಲ ಹದಿನೈದು ಸಾವಿರರೂಪಾಯಿ. ದೇಶದಿಂದ ದೇಶಕ್ಕೆ ಜೀವದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸ? ಪ್ರಾಣದಹಂಗಿಲ್ಲದ ಶಸ್ತ್ರಧಾರಿ ಭಯೋತ್ಪಾದಕನ ಎದುರು ಯೋಧನೊಬ್ಬ ನಿಂತಿದ್ದಾನೆ ಎಂದಿಟ್ಟುಕೊದುಳ್ಳಿ. ಅದು ಇಬ್ಬರಲ್ಲಿ ಒಬ್ಬನ ಸಾವು ನಿರ್ಧಾರವಾಗುವ ಕ್ಷಣಗಳು. ಆಗ ಬಂದೂಕು ಹಿಡಿದ ಯೋಧನ ಮನಸ್ಸುಒಂದು ಕ್ಷಣ ತಾನಿಲ್ಲದ ತನ್ನಕುಟುಂಬದ ಸ್ಥಿತಿಯನ್ನು ನೆನೆಸಿಕೊಂಡರೆ,ಅನಾಥರಾಗಲಿರುವ ತಾಯಿ-ಹೆಂಡತಿ-ಮಕ್ಕಳಚಿತ್ರ ಕಣ್ಣಮುಂದೆ ಸುಳಿದರೆ ಆತನ ಕೈಗಳು ಕಂಪಿಸಲಿಕ್ಕಿಲ್ಲವೇ ? ಮನಸ್ಸು ತೊಯ್ದಾಡದೇ?
ಮುಂಬೈ ಮೇಲೆ ಭಯೋತ್ಪಾದಕರುದಾಳಿ ನಡೆಸಿದ ನಂತರದ ದಿನಗಳಲ್ಲಿ ಭಾರತ ಸರ್ಕಾರ ಏನು ಮಾಡಬೇಕೆಂಬಬಗ್ಗೆ ಪುಂಖಾನುಪುಂಖ ಸಲಹೆಗಳುಕೇಳಿಬರುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ. ಆದರೆ ಅಂತಹ ಯುದ್ಧದಲ್ಲಿ ಪ್ರಾಣಕಳೆದುಕೊಳ್ಳುವವರು ಯಾರು? ಸೇನೆ ಸೇರುವಾಗಲೇ ಸಾವುಕಾದಿದೆ ಎಂದು ಸೈನಿಕರಿಗೆ ಗೊತ್ತಿರುತ್ತದೆ ಎಂದು ಹೇಳಬಹುದು,ವೈರಿ ಗುಂಡಿಗೆ ಬಲಿಯಾದರೆ ದೇಶಕ್ಕೆ ಮಾಡಿದ ಬಲಿದಾನ ಎಂದು ಅವರ ದೇಶಪ್ರೇಮವನ್ನು ವೈಭವೀಕರಿಸಲೂಬಹುದು. ಹುತಾತ್ಮ ಯೋಧರೆಲ್ಲರ ಬಲಿದಾನವನ್ನು ಗೌರವಿಸುತ್ತಲೇ ಹೇಳಬಹುದಾದರೆ ಬಹುತೇಕ ಯುವಕರುಸೇನೆ ಸೇರುವುದಕ್ಕೆ ಕಾರಣ ನಿರುದ್ಯೋಗವೇ ಹೊರತು ದೇಶಪ್ರೇಮವಲ್ಲ. ಈಗಲೂಸೇನೆ ಭರ್ತಿಗೆ ಸಂದರ್ಶನ ನಡೆದಾಗಲೆಲ್ಲಾನೂಕುನುಗ್ಗಲಿನಿಂದ ಸಾವಿಗೀಡಾಗುವ ಘಟನೆಗಳು ನಡೆಯುತ್ತಿರುವುದು ಇದೇ ಕಾರಣಕ್ಕೆ.
ಟಿವಿ ಸ್ಟುಡಿಯೋದಲ್ಲಿ ಕೂತು ಯುದ್ಧ ಘೋಷಿಸುವ ಸಿನಿಮಾ ತಾರೆಯರು,ಉದ್ಯಮಿಗಳು, ಬುದ್ಧಿಜೀವಿಗಳು, ಯುದ್ಧ ತಜ್ಞರು ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ರಣರಂಗದಿಂದ ರವಾನೆಯಾದ ಹುತಾತ್ಮ ಯೋಧರ ಶವಪೆಟ್ಟಿಗೆಗಳು ‘ಕ್ಯಾಂಡಲ್‌ವಾಲಾ’ಗಳ ಮನೆಗಾಗಲಿ, ನಸುಕಿನಲ್ಲಿಯೇ ಹುಡುಗರನ್ನು ಎಬ್ಬಿಸಿ ಲಾಠಿ ತಿರುಗಿಸಲು ಹೇಳಿಕೊಡುವ ಮೂಲಕ ಹಿಂದೂಗಳ ರಕ್ಷಣೆಗೆ ಯುವಕರನ್ನು ಅಣಿಗೊಳಿಸುವ ‘ದೇಶಪ್ರೇಮಿ’ಗಳ ಮನೆಗಳಿಗಾಗಲಿ ಹೋಗಿರಲಿಲ್ಲ. ಅವೆಲ್ಲವೂ ಹೋಗಿರುವುದು ಯಾವುದೋ ಹಳ್ಳಿಯ ಬಡ ರೈತ-ಕೂಲಿಕಾರ್ಮಿಕರಮನೆಗಳಿಗೆ. ಕಾರ್ಗಿಲ್ ಯುದ್ಧದಲ್ಲಿ ಮಡಿದವರಲ್ಲಿ ಕರ್ನಾಟಕದ ಯೋಧರೂ ಇದ್ದರು. ಶವಪೆಟ್ಟಿಗೆಗಳನ್ನು ಅವರ ಮನೆಗೆ ತಲುಪಿಸಿದ ನಂತರ ತಿರುಗಿ ಆ ಮನೆ ಕಡೆ ಯಾರಾದರೂ ನೋಡಿದ್ದಾರಾ?