Monday, December 26, 2011

ಈ ಮೀಸಲಾತಿಯಿಂದ ಮುಸ್ಲಿಮರಿಗೂ ಲಾಭ ಇಲ್ಲ

ವಿವಾದದ ದೂಳು ಎದ್ದಾಗ ಕಣ್ಣು ಕುರುಡಾಗುತ್ತದೆ. ಮೀಸಲಾತಿಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಏಳುವ ವಿವಾದದ ದೂಳು ಜನತೆಯ ಕಣ್ಣು ಕುರುಡು ಮಾಡುತ್ತಾ ಬಂದಿದೆ. ಈ ದೂಳು ಎಬ್ಬಿಸುವವರ ಉದ್ದೇಶವೂ ಇದೇ ಆಗಿರುತ್ತದೆ. ಆಳುವವರ ಉದ್ದೇಶ ಪ್ರಾಮಾಣಿಕವಾಗಿದ್ದಾಗ ಮೀಸಲಾತಿ ಅನುಷ್ಠಾನ ಸಮಸ್ಯೆಯಾಗಿಯೇ ಇಲ್ಲ.
ಅಪ್ರಾಮಾಣಿಕತೆಯಿಂದ ಕೂಡಿದ್ದ ನಿರ್ಧಾರ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ಯುಪಿಎ ಸರ್ಕಾರ ಘೋಷಿಸಿರುವ ಅಲ್ಪಸಂಖ್ಯಾತರ ಒಳಮೀಸಲಾತಿಯ ಹಿಂದೆ ಇಂತಹದ್ದೇ ಅಪ್ರಾಮಾಣಿಕತೆ ಇದೆ. ಕೇಂದ್ರ ಸಂಪುಟ ಒಪ್ಪಿಕೊಂಡು ಗೆಜೆಟ್ ಅಧಿಸೂಚನೆ ಹೊರಡಿಸಿದ ಮಾತ್ರಕ್ಕೆ ಈ ಮೀಸಲಾತಿ ಜಾರಿಗೆ ಬಂದೇ ಬಿಟ್ಟಿತು ಎಂದು ಈಗಲೂ ಹೇಳುವ ಹಾಗಿಲ್ಲ. ಸುಪ್ರೀಂಕೋರ್ಟ್‌ನ ಪರಾಮರ್ಶೆಯಲ್ಲಿ ಇದು ಪಾರಾಗಿ ಬರಬೇಕಾಗಿದೆ.
ಇವೆಲ್ಲವೂ ಗೊತ್ತಿದ್ದೂ ಇಷ್ಟೊಂದು ಅವಸರದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಘೋಷಿಸಲು ಮುಖ್ಯ ಕಾರಣ ಅಲ್ಪಸಂಖ್ಯಾತರ ಮೇಲಿನ ಯುಪಿಎ ಸರ್ಕಾರದ ಕಳಕಳಿ ಖಂಡಿತ ಅಲ್ಲ, ಅದು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ.
ಭಾವಿ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ರಾಹುಲ್ ಗಾಂಧಿಯವರ ಪ್ರತಿಷ್ಠೆಯನ್ನು ಉತ್ತರಪ್ರದೇಶದಲ್ಲಿ ಉಳಿಸಲು ಕಾಂಗ್ರೆಸ್ ನಡೆಸುತ್ತಿರುವ ಹತಾಶೆಯ ಪ್ರಯತ್ನಗಳಲ್ಲಿ ಇದೂ ಒಂದು.

ಈ ಮೀಸಲಾತಿ ಹೆಸರಿಗೆ ಮುಸ್ಲಿಮ್, ಕ್ರಿಶ್ಚಿಯನ್, ಸಿಖ್, ಜೈನ್ ಧರ್ಮಗಳನ್ನೊಳಗೊಂಡ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ್ದರೂ ಇದರ ಲಾಭ ದೊಡ್ಡ ಪ್ರಮಾಣದಲ್ಲಿ ದಕ್ಕಲಿರುವುದು ದೇಶದ ಜನಸಂಖ್ಯೆಯಲ್ಲಿ ಶೇಕಡಾ 12.2ರಷ್ಟಿರುವ ಮುಸ್ಲಿಮರಿಗೆ.
ಕಾಂಗ್ರೆಸ್‌ನ ಆಸಕ್ತಿ ಇರುವುದು ಈ ಮುಸ್ಲಿಮರ ಮೇಲೆ. ಉತ್ತರಪ್ರದೇಶದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರು ಕನಿಷ್ಠ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲರು. ಬಾಬರಿ ಮಸೀದಿ ಧ್ವಂಸದ ನಂತರ ಅವರು ಬಹುಸಂಖ್ಯೆಯಲ್ಲಿ ಕಾಂಗ್ರೆಸ್ ಬಿಟ್ಟು ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಕಡೆ ಹೊರಟು ಹೋಗಿದ್ದಾರೆ.
ಅವರನ್ನು ಮರಳಿ ಸೆಳೆಯಲು ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. ಮೀಸಲಾತಿ ಘೋಷಣೆಯಿಂದಾದರೂ ಅವರನ್ನು ಒಲಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿಂದಲೇ ಚುನಾವಣೆ ಘೋಷಣೆಯ ಎರಡು ದಿನ ಮೊದಲು ಸಚಿವ ಸಂಪುಟ ಅಲ್ಪಸಂಖ್ಯಾತರ ಮೀಸಲಾತಿಗೆ ಅನುಮೋದನೆ ನೀಡಿದೆ.
ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರು ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಧ್ಯಯನ ನಡೆಸಿ ವರದಿ ನೀಡದೆ ಇದ್ದಿದ್ದರೆ ಮುಸ್ಲಿಮರು ಕುರುಡಾಗಿ ಕಾಂಗ್ರೆಸ್ ಹೇಳಿದ್ದನ್ನೆಲ್ಲ ನಂಬಿ ಬಿಡುತ್ತಿದ್ದರೇನೋ? ಆದರೆ ನ್ಯಾ.ಸಾಚಾರ್ ನೀಡಿದ್ದ ವರದಿ ಕಾಂಗ್ರೆಸ್ ಪಕ್ಷ ಮಾಡಿದ ಮುಸ್ಲಿಮರ ಕಲ್ಯಾಣದ ಅಸಲಿ ರೂಪವನ್ನು ಐದು ವರ್ಷಗಳ ಹಿಂದೆಯೇ ಬಯಲುಗೊಳಿಸಿತ್ತು.
ನ್ಯಾ.ಸಾಚಾರ್ ವರದಿ ಪ್ರಕಾರ ಶೇಕಡಾ 94.9ರಷ್ಟು ಮುಸ್ಲಿಮರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಶೇಕಡಾ 60.2ರಷ್ಟು ಮುಸ್ಲಿಮರು ಭೂ ರಹಿತರು, ಶೇಕಡಾ 54.6ರಷ್ಟು ನಗರದ ಮತ್ತು ಶೇಕಡಾ 60ರಷ್ಟು ಗ್ರಾಮೀಣ ಪ್ರದೇಶದ ಮುಸ್ಲಿಮರು ಶಾಲೆಯ ಮುಖ ನೋಡಿಲ್ಲ. ಶೇಕಡಾ 90ರಷ್ಟು ಮುಸ್ಲಿಮರು ಹತ್ತನೆ ತರಗತಿ ಮೆಟ್ಟಿಲು ಹತ್ತಿಲ್ಲ. ಶೇಕಡಾ 15.4ರಷ್ಟು ಜನಸಂಖ್ಯೆ ಇರುವ ಹದಿನೈದು ರಾಜ್ಯಗಳ ಸರ್ಕಾರಿ ಇಲಾಖೆಗಳಲ್ಲಿ ಮುಸ್ಲಿಮ್ ಉದ್ಯೋಗಿಗಳ ಪ್ರಮಾಣ ಶೇಕಡಾ 5.7 ಮಾತ್ರ. ಶೇಕಡಾ 12.2ರಷ್ಟು ಮುಸ್ಲಿಮರು ಇರುವ ಕರ್ನಾಟಕದ ಸರ್ಕಾರಿ ಇಲಾಖೆಗಳಲ್ಲಿ ಅವರ ಪ್ರಾತಿನಿಧ್ಯ ಶೇಕಡಾ 8.5 ಮಾತ್ರ.
ಮುಸ್ಲಿಮ್ ಪ್ರಾತಿನಿಧ್ಯ ಅವರ ಜನಸಂಖ್ಯೆಗಿಂತಲೂ ಅಧಿಕ ಇರುವ ಏಕೈಕ ಸ್ಥಳ ಎಂದರೆ ಜೈಲುಗಳು. ಮಹಾರಾಷ್ಟ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 10.6ರಷ್ಟಿದ್ದರೂ ಅಲ್ಲಿನ ಜೈಲುಗಳಲ್ಲಿ ಶೇಕಡಾ 40ರಷ್ಟು ಮುಸ್ಲಿಮರಿದ್ದಾರೆ. ಗುಜರಾತ್ ಜೈಲುಗಳಲ್ಲಿ ಮುಸ್ಲಿಮ್ ಕೈದಿಗಳ ಪ್ರಮಾಣ ಶೇಕಡಾ 25.
ಇಂತಹ ದುಃಸ್ಥಿತಿಯಲ್ಲಿರುವ ಮುಸ್ಲಿಮರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ನ್ಯಾಯ ದೊರಕಿಸಿಕೊಡಬೇಕಾದರೆ ಮೀಸಲಾತಿಗಿಂತ ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ ಎನ್ನುವುದು ನಿರ್ವಿವಾದ. ಆದರೆ ಯಾವ ಆಧಾರದಲ್ಲಿ ಮೀಸಲಾತಿ ನೀಡಬೇಕೆನ್ನುವುದು ಈಗಿನ ಸಮಸ್ಯೆ.
ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ನೀಡುವಂತಿಲ್ಲ. ಮುಸ್ಲಿಮರ ಮೀಸಲಾತಿಗೆ ಸಂಬಂಧಿಸಿದಂತೆ ವಿವಾದ ಹೊಸ ಸಂಗತಿಯೇನಲ್ಲ. ಬ್ರಿಟಿಷರು ಹಲವಾರು ಶಾಸಕಾಂಗ ಸಮಿತಿಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಿದ್ದರು.
ಸಂವಿಧಾನ ರಚನಾ ಸಭೆಯಲ್ಲಿನ ಅಲ್ಪಸಂಖ್ಯಾತ ಮತ್ತು ಮೂಲಭೂತ ಹಕ್ಕುಗಳ ಸಲಹಾ ಸಮಿತಿ ಕೂಡಾ ಮುಸ್ಲಿಮರ ಮೀಸಲಾತಿಗೆ ಶಿಫಾರಸು ಮಾಡಿತ್ತು. ಆ ಕಾಲದಲ್ಲಿ ಮುಸ್ಲಿಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಒಂದೇ ಗುಂಪಿನಲ್ಲಿದ್ದರು. ಆದರೆ ಮೀಸಲಾತಿಗೆ ಜಾತಿ ಆಧಾರಿತ ತಾರತಮ್ಯವೇ ಆಧಾರ ಎನ್ನುವುದನ್ನು ಪರಿಗಣಿಸಿದ ಕಾರಣ ಆ ಗುಂಪಿನಲ್ಲಿದ್ದ ಅಲ್ಪಸಂಖ್ಯಾತರು ಹೊರಬರಬೇಕಾಯಿತು.

ಮುಸ್ಲಿಮರು ಮತ್ತು ಕ್ರಿಶ್ಚಿಯನರು ಪ್ರತ್ಯೇಕ ಧರ್ಮಗಳಿಗೆ ಸೇರಿದವರಾದ ಕಾರಣ ಅವರು ಮೀಸಲಾತಿ ಕಕ್ಷೆಯಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿಯೇ ಇಸ್ಲಾಂ ಮತ್ತು ಕ್ರೈಸ್ತಧರ್ಮದ ಮೂಲ ಅನುಯಾಯಿಗಳು ಮಾತ್ರವಲ್ಲ, ಆ ಧರ್ಮಗಳಿಗೆ ಮತಾಂತರಗೊಂಡವರು ಕೂಡಾ ಪರಿಶಿಷ್ಟ ಜಾತಿಗೆ ಸಿಗುವ ಮೀಸಲಾತಿಯಿಂದ ವಂಚಿತರಾಗಬೇಕಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅಧ್ಯಕ್ಷತೆಯ `ರಾಷ್ಟ್ರೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಆಯೋಗ~ 2007ರಲ್ಲಿ ನೀಡಿದ್ದ ವರದಿಯಲ್ಲಿ ಮುಸ್ಲಿಮರಿಗೆ ಶೇಕಡಾ ಹತ್ತರ ಪ್ರತ್ಯೇಕ ಮೀಸಲಾತಿಯನ್ನು ಶಿಫಾರಸು ಮಾಡಿತ್ತು.
ಈ ಸೂತ್ರಕ್ಕೆ ಪರ್ಯಾಯವಾಗಿ ಹಿಂದುಳಿದ ಜಾತಿಗಳಿಗಾಗಿ ಇರುವ ಶೇಕಡಾ 27ರ ಮೀಸಲಾತಿಯ ಒಳಗಡೆಯೇ ಅಲ್ಪಸಂಖ್ಯಾತರಿಗೆ ಶೇಕಡಾ 8.4ರ ಮೀಸಲಾತಿ ನೀಡಬೇಕು, ಇದರಲ್ಲಿ ಶೇಕಡಾ ಆರರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಬೇಕು ಎನ್ನುವ ಇನ್ನೊಂದು ಪ್ರಸ್ತಾಪವನ್ನು ನ್ಯಾ.ಮಿಶ್ರಾ ವರದಿಯಲ್ಲಿ ಮಾಡಿದ್ದರು.
 ಆದರೆ, `ಧರ್ಮಾಧಾರಿತ ಮೀಸಲಾತಿ ಸಂವಿಧಾನ ವಿರೋಧಿಯಾದುದು~ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಈ ಮೀಸಲಾತಿಯನ್ನು ಒಪ್ಪುವುದು ಕಷ್ಟ. ನ್ಯಾ.ಮಿಶ್ರಾ ಆಯೋಗದ ವರದಿಯನ್ನು ಆಧರಿಸಿ ಆಂಧ್ರಪ್ರದೇಶ ಸರ್ಕಾರ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿ ನೀಡಿರುವುದನ್ನು ಹೈಕೋರ್ಟ್ ರದ್ದು ಮಾಡಿತ್ತು. ಅದರ ನಂತರ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ 15 ಮುಸ್ಲಿಮ್ ಜಾತಿಗಳಿಗೆ ಮೀಸಲಾತಿಯನ್ನು ಮಿತಿಗೊಳಿಸಿದ ನಂತರವಷ್ಟೇ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ್ದು.
ಮಂಡಲ್ ಆಯೋಗ ಬಹಳ ಹಿಂದೆಯೇ ಮುಸ್ಲಿಮ್ ಮೀಸಲಾತಿ ಬಗ್ಗೆ ಮಧ್ಯದ ದಾರಿಯೊಂದನ್ನು ತೋರಿಸಿತ್ತು. ಅದು ಮುಸ್ಲಿಮರಲ್ಲಿ ಹಿಂದುಳಿದಿರುವ 400 ಜಾತಿಗಳನ್ನು ಗುರುತಿಸಿ ಅವರಿಗೆ ಹಿಂದುಳಿದ ಜಾತಿಗಳಿಗೆ ನೀಡಲಾಗಿರುವ ಶೇಕಡಾ 27ರ ಮೀಸಲಾತಿಯೊಳಗೆ ಶೇಕಡಾ ಮೂರರಷ್ಟು ಮೀಸಲಾತಿಯನ್ನು ನೀಡಿತ್ತು.
ಈ ಜಾತಿಗಳಲ್ಲಿ ನೇಕಾರರು, ಗಾಣಿಗರು, ಬಡಗಿಗಳು, ಚಮ್ಮಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ  ಮುಸ್ಲಿಮರ ಈ ಮೀಸಲಾತಿಗೆ ಧರ್ಮ ಆಧಾರವಾಗಿರದೆ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಯುವಿಕೆ ಆಧಾರವಾಗಿರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದನ್ನು ಒಪ್ಪಿಕೊಂಡಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳು ಮುಸ್ಲಿಮರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿವೆ.
ಇಂದು ಉತ್ತರ ಭಾರತದ ಮುಸ್ಲಿಮರಿಗೆ ಹೋಲಿಸಿದರೆ ದಕ್ಷಿಣ ಭಾರತದ ಮುಸ್ಲಿಮರು ಉತ್ತಮ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಆ ರಾಜ್ಯಗಳ ಸಾಮಾಜಿಕ ವಾತಾವರಣ ಕೂಡಾ ಕಾರಣವಾಗಿರಬಹುದು. ಇದರ ಜತೆಗೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಸ್ಲಿಮರಿಗೆ ಇರುವ ಮೀಸಲಾತಿಯೂ ಅವರ ಏಳಿಗೆಗೆ ನೆರವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳಿಗಾಗಿ ಇರುವ ಶೇಕಡಾ 30ರಷ್ಟು ಮೀಸಲಾತಿಯ ವ್ಯಾಪ್ತಿಯಲ್ಲಿ ಮುಸ್ಲಿಮರನ್ನು ಸೇರಿಸಲಾಗಿದೆ.

ಕೇರಳದಲ್ಲಿ ವಾರ್ಷಿಕ ಎರಡುವರೆ ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ಹನ್ನೆರಡರಷ್ಟು, ಮತ್ತು ಕರ್ನಾಟಕದಲ್ಲಿ ವಾರ್ಷಿಕ ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಮುಸ್ಲಿಮರಿಗೆ ಶೇಕಡಾ ನಾಲ್ಕರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಲ್ಪಿಸಲಾಗಿದೆ.
ಎಂ.ವೀರಪ್ಪ ಮೊಯಿಲಿ ಅವರು ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ ಸೂತ್ರವನ್ನು ರೂಪಿಸಿದ್ದರೂ ಅಧಿಕಾರ ಕಳೆದುಕೊಂಡ ಕಾರಣ ಅದನ್ನು ಅನುಷ್ಠಾನಕ್ಕೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲ. ಅವರ ನಂತರ ಮುಖ್ಯಮಂತ್ರಿಯಾದ ಎಚ್.ಡಿ.ದೇವೇಗೌಡರು 1994ರಲ್ಲಿ ಅದನ್ನು ಜಾರಿಗೆ ತಂದರು.

ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಾ ಬಂದ ಬಿಜೆಪಿ ಕೂಡಾ ಕರ್ನಾಟಕದಲ್ಲಿ ಇಲ್ಲಿಯವರೆಗೆ ಇದರ ವಿರುದ್ಧ ದನಿ ಎತ್ತಿಲ್ಲ. ಮಂಡಲ್ ವರದಿಗೆ ಸಂಬಂಧಿಸಿದಂತೆ `ಕೆನೆಪದರ~ದ ಬಗ್ಗೆ ತಾನು ನೀಡಿರುವ ಆದೇಶಕ್ಕನುಗುಣವಾಗಿಯೇ ಕೇರಳ ಮತ್ತು ಕರ್ನಾಟಕದ ಮುಸ್ಲಿಮ್ ಮೀಸಲಾತಿ ಇರುವುದರಿಂದ ಸುಪ್ರೀಂ ಕೋರ್ಟ್ ಕೂಡಾ ಇದಕ್ಕೆ ಅನುಮೋದನೆ ನೀಡಿದೆ.
ಆದರೆ, ಈಗ ಯುಪಿಎ ಸರ್ಕಾರ ಅತ್ಯವಸರದಿಂದ ಅಲ್ಪಸಂಖ್ಯಾತರಿಗಾಗಿ ಘೋಷಿಸಿರುವ ಮೀಸಲಾತಿ, ಮಂಡಲ್ ವರದಿ ಇಲ್ಲವೇ ಇತರ ನಾಲ್ಕು ರಾಜ್ಯಗಳಲ್ಲಿರುವ ಮುಸ್ಲಿಮ್ ಮೀಸಲಾತಿಯನ್ನು ಆಧಾರವಾಗಿಟ್ಟುಕೊಂಡು ರೂಪಿಸಿರುವಂತೆ ಕಾಣುತ್ತಿಲ್ಲ.
ಇದು ಮೀಸಲಾತಿಗೆ ಅರ್ಹವಾಗಿರುವ ಅಲ್ಪಸಂಖ್ಯಾತರನ್ನು ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳಿಂದ ಗುರುತಿಸಲು ಹೋಗದೆ ಸಾರಾಸಗಟಾಗಿ ಎಲ್ಲರನ್ನೂ ಒಂದೇ ಗುಂಪಿನಲ್ಲಿ ಸೇರಿಸಿದ ಹಾಗಿದೆ. ಈ ರೀತಿ ಇಡೀ ಧರ್ಮವನ್ನೇ ಹಿಂದುಳಿದಿದೆ ಎಂದು ಘೋಷಿಸಿ ಮೀಸಲಾತಿ ನೀಡುವುದು `ಧರ್ಮಾಧರಿತ ಮೀಸಲಾತಿ ಸಲ್ಲದು~ ಎನ್ನುವ ಸಂವಿಧಾನದ ಆಶಯ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿದೆ.
ಆದ್ದರಿಂದ ಒಂದೇ ಏಟಿಗೆ  ಸುಪ್ರೀಂ ಕೋರ್ಟ್ ಇದನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಇದಕ್ಕಿಂತಲೂ ಮುಖ್ಯವಾಗಿ ಈ ಮೀಸಲಾತಿಯಿಂದಾಗಿ ಮುಸ್ಲಿಮರಲ್ಲಿ ನಿಜಕ್ಕೂ ಹಿಂದುಳಿದಿರುವ, ಬಡವರಾಗಿರುವ ಮುಸ್ಲಿಮರಿಗೆ ಅನ್ಯಾಯವಾಗಲಿದೆ. ಮಂಡಲ್ ಆಯೋಗದ ವರದಿಯನ್ನು ಆಧರಿಸಿದ ಈಗಿನ ಮೀಸಲಾತಿ ನೀತಿ ಪ್ರಕಾರ ಮುಸ್ಲಿಮರಲ್ಲಿರುವ 400 ಜಾತಿಗಳು ಶೇಕಡಾ ಮೂರರಷ್ಟು ಮೀಸಲಾತಿ ಪಡೆಯುತ್ತಿದ್ದವು.
ಯುಪಿಎ ಸರ್ಕಾರದ ಹೊಸ ಸೂತ್ರ ಮೀಸಲಾತಿಯ ಪ್ರಮಾಣವನ್ನು ಶೇಕಡಾ ನಾಲ್ಕೂವರೆಗೆ ಹೆಚ್ಚಿಸಿ ಅದರ ವ್ಯಾಪ್ತಿಯೊಳಗೆ ಎಲ್ಲ ಮುಸ್ಲಿಮರನ್ನು (ಶೇಕಡಾ 12.2) ಮಾತ್ರವಲ್ಲ, ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್(ಶೇಕಡಾ 2.3), ಸಿಖ್(ಶೇಕಡಾ 1.9), ಬೌದ್ಧ (ಶೇಕಡಾ 0.8) ಮತ್ತು ಜೈನರನ್ನೂ (ಶೇಕಡಾ 0.4) ಸೇರಿಸಿದೆ.

ಇವರೆಲ್ಲರ ಜತೆ ಮುಸ್ಲಿಮರಲ್ಲಿರುವ ಹಿಂದುಳಿದ ಜಾತಿಗಳು ಪೈಪೋಟಿ ನಡೆಸಿ ಮೀಸಲಾತಿಯ ಲಾಭವನ್ನು ಪಡೆಯುವುದಾದರೂ ಸಾಧ್ಯವೇ?

No comments:

Post a Comment