Thursday, May 2, 2013

ಬದಲಾವಣೆ ನಿರೀಕ್ಷೆಯಲ್ಲಿ ತುಯ್ದಾಡುತ್ತಿರುವ ಬಳ್ಳಾರಿ

ಬಳ್ಳಾರಿ: `ನಳದಲ್ಲಿ ದಿನಾ ಉಪ್ಪು ನೀರು ಬಿಡ್ತಾರೆ, ಮೂರು ದಿವ್ಸಕ್ಕೊಮ್ಮೆ ಒಂದು ತಾಸು ಸಿಹಿನೀರು. ಸವುಳು ನೀರು ಕುಡಿದು ಮಕ್ಕಳ ಕೈಕಾಲೆಲ್ಲ ಸೊಟ್ಟಗಾಗಿವೆ' ಎಂದು ಗೋಳಾಡಿದರು ಮೋಕಾ ಗ್ರಾಮದ ಜಲಜಮ್ಮ. `ಎಂಟನೆ ತರಗತಿ ವರೆಗೆ ಮಾತ್ರ ಇಲ್ಲಿ ಸಾಲಿ ಇದೆ, ಮುಂದೆ ಕಲಿಯುವವರು ಬಳ್ಳಾರಿಗೆ (23 ಕಿ.ಮೀ. ದೂ
ರ) ಹೋಗ್ಬೇಕು, ಮಕ್ಕಳು ನಡೆದುನಡೆದು ಸವೆದುಹೋಗ್ಯಾವೆ' ಎಂದು ದುಃಖಿಸಿದರು ಕಾರೇಕಲ್ ಗ್ರಾಮದ ಈರಮ್ಮ.
`ಮೂರು ವರ್ಷಗಳಿಂದ ಮಳೆ ಇಲ್ಲ, ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಐದು ಸಾವಿರ ರೂಪಾಯಿ ಪರಿಹಾರ ಕೊಡ್ತೇವೆ ಎಂದು ಹೇಳಿ ಹೋದರು, ಕೈಗೆ ಬಂದದ್ದು 500 ರೂಪಾಯಿ' ಎಂದು ದೂರಿದರು ೀಳ್ಳಗುರ್ಕಿಯ ರೈತ ಶಂಕ್ರಪ್ಪ. `ಊರಲ್ಲೊಂದು ಸರ್ಕಾರಿ ದವಾಖಾನೆ ಇದೆ, ಅಲ್ಲಿ ಡಾಕ್ಟರ್ ಇಲ್ಲ, ಯಾರು ಹೋಗಿ ಕೇಳಿದರೂ ಅಲ್ಲಿರುವ ನರ್ಸಮ್ಮ ಔಷಧಿ ಇಲ್ಲ ಎಂದು ರಾಗ ತೆಗೆಯುತ್ತಾಳೆ' ಎಂದು ಸಿಟ್ಟುಮಾಡಿಕೊಂಡರು ವೀರಾಪುರದ ಸಮಾಜ ಸೇವಕ ಹೊನ್ನೂರಪ್ಪ...
ಈ ಗ್ರಾಮಗಳ ಜನರ ಕರುಣಾಜನಕ ಬದುಕಿನ ಕತೆಯನ್ನು ಹೀಗೆ ಹೇಳುತ್ತಲೇ ಹೋಗಬಹುದು. ಇವರೆಲ್ಲ ಆಂಧ್ರಪ್ರದೇಶದ ಗಡಿಯಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ, ವೀರಾಪುರ, ಕಾರೇಕಲ್, ಮೋಕಾ ಗ್ರಾಮಗಳಿಗೆ ಸೇರಿದವರು. ಈ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಶ್ರಿರಾಮುಲು.
ಈ ಗ್ರಾಮಗಳಿಗೆ ಹೋಗುವ ದಾರಿಯಲ್ಲಿಯೇ ಸಿಗುವ ಜೋಳದರಾಶಿಯಲ್ಲಿ ಅರಮನೆಯಂತೆ ಕಟ್ಟಿದ ರಾಮುಲು ಅವರ ಕುಟುಂಬದ ಮೂಲ ಮನೆ ಇದೆ. `ನಮ್ಮೂರಿಗೆ ಯಜಮಾನರೇ ಇಲ್ಲದಂಗ್ ಆಗಿದೆ' ಎಂದಷ್ಟೇ ಹೇಳಿ ತನ್ನ ಹೆಸರನ್ನೂ ತಿಳಿಸದೆ ಆ ಮನೆ ಕಡೆ ಬೆರಳು ಮಾಡಿ ಹೊರಟೇ ಹೋದ ಬಸ್ಸಿಗೆ ಕಾಯುತ್ತಾ ನಿಂತಿದ್ದ ರಾಜವೀರಪ್ಪ.
`ನೀವು ಹೋಗಿದ್ದು ನಾಲ್ಕೈದು ಹಳ್ಳಿಗಳು ಮಾತ್ರ ಸಾರ್, ಇಡೀ ಬಳ್ಳಾರಿ ಜಿಲ್ಲೆ ಹೀಗೆಯೇ ಇದೆ' ಎಂದರು ನನ್ನ ಪ್ರವಾಸದ ಅನುಭವವನ್ನು ಕೇಳಿದ ಬಳ್ಳಾರಿಯ ಪತ್ರಕರ್ತ ಮಿತ್ರರು.
ಹೀಗಿದ್ದರೂ ಶ್ರಿರಾಮುಲು ಈ ಬಾರಿಯೂ ಗೆದ್ದುಬಿಟ್ಟರೆ ನನಗಂತೂ ಆಶ್ಚರ್ಯವಾಗಲಾರದು. ಇದಕ್ಕೆ ಕಾರಣ ತಮ್ಮ ಕಷ್ಟ-ಕಾರ್ಪಣ್ಯಗಳನ್ನೆಲ್ಲ ನೋವಿನಿಂದ ತೋಡಿಕೊಂಡ ಜನರ ಇನ್ನೊಂದು ಮುಖದ ದರ್ಶನ. `ಜೆಡಿಎಸ್' ಎಂದು ಸ್ನೇಹಿತರಿಂದಲೇ ಆರೋಪಕ್ಕೊಳಗಾದ ಚೇಳ್ಳಗುರ್ಕಿಯ ಶಂಕ್ರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಜಲಜಮ್ಮ, ಈರಮ್ಮ, ಹೊನ್ನೂರಪ್ಪ ಮತ್ತಿತರರು ಶ್ರಿರಾಮುಲು ವಿರುದ್ಧ ಚಕಾರ ಎತ್ತಲಿಲ್ಲ.
`ರಾಮುಲು ಒಳ್ಳೆ ಮನುಷ್ಯ, ಸುತ್ತ ಇರೋ ಜನ ಸರಿ ಇಲ್ಲ', `ಆಯಪ್ಪ ಏನ್ ಮಾಡ್ಲಿಕಾಗ್‌ತ್ತೆ, ಇಡೀ ರಾಜ್ಯ ಸುತ್ತಬೇಕು', `ನಮ್ ಹಣೇಲಿ ಇದೇ ರೀತಿ ಬರೆದುಬಿಟ್ಟಿರುವಾಗ ಬೇರೆಯವರನ್ನು ದೂರಿ ಏನ್ ಲಾಭ?' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವರೆಲ್ಲ ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಸಮರ್ಥಿಸತೊಡಗಿದ್ದರು. ಊರಿನ ಸಮಸ್ಯೆಗಳನ್ನು ಭೂತಾಕಾರವಾಗಿ ಬಣ್ಣಿಸಿದ ಚೇಳ್ಳಗುರ್ಕಿಯ ಹಿರಿಯರೊಬ್ಬರು ಕೊನೆಗೆ ಶ್ರೀರಾಮುಲು ಅವರನ್ನು ಹೊಗಳತೊಡಗಿದಾಗ ಪಕ್ಕದಲ್ಲಿದ್ದ ಹಿರಿಯನೊಬ್ಬ ಬಳಿಬಂದು ಪಿಸುದನಿಯಲ್ಲಿ `ಅವನ ಜಾತಿ ಕೇಳಿಬಿಡಿ ಸತ್ಯ ಗೊತ್ತಾಗುತ್ತದೆ' ಎಂದ. ನಾನು ಕೇಳಲಿಲ್ಲ ಸತ್ಯ ಗೊತ್ತಾಗಿತ್ತು.
ಅಂದಾಜು ಎರಡರಿಂದ ನಾಲ್ಕು ಸಾವಿರದವರೆಗೆ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಬಹುಸಂಖ್ಯೆಯಲ್ಲಿರುವವರು ಶ್ರೀರಾಮುಲು ಅವರು ಸೇರಿರುವ ನಾಯಕ ಜಾತಿಯವರು. ಈ ಮುಗ್ಧ ಜನರ ದೂರು, ದುಮ್ಮಾನಗಳೆಲ್ಲ ಮತಯಂತ್ರದ ಬಟನ್ ಒತ್ತುವ ಗಳಿಗೆಯಲ್ಲಿ ಉಕ್ಕಿಬರುವ ಜಾತಿ ಪ್ರೀತಿ ಎದುರು ಕರಗಿಹೋಗುತ್ತದೆ. ಇದು ಶ್ರಿರಾಮುಲು ಅವರಿಗೆ ಮಾತ್ರವಲ್ಲ, ಕೇವಲ ಜಾತಿ ಮತ್ತು ದುಡ್ಡನ್ನಷ್ಟೇ ಬಳಸಿಕೊಂಡು ರಾಜಕೀಯ ಮಾಡುವ ಎಲ್ಲರಿಗೂ ಗೊತ್ತಿರುವ ಸತ್ಯ.
ಜಾತಿ ಆಗಲೇ ಶ್ರಿರಾಮುಲು ಅವರನ್ನು ಅರ್ಧ ಗೆಲ್ಲಿಸಿದೆ, ಇನ್ನರ್ಧ ಗೆಲುವು ಸಂಪಾದನೆಗಾಗಿ ಅವರು `ಕೊಡುಗೈ ದಾನಿ'ಗಳಾಗಬೇಕು. ಮೋಕಾದಲ್ಲಿ ನಮ್ಮ ಕಾರು ಕಂಡು ಆಸೆಯಿಂದ ಓಡಿಬಂದ ಮಧ್ಯವಯಸ್ಕರ ಗುಂಪೊಂದು ವಿಷಯ ತಿಳಿದು `ಹಿಂದೆಲ್ಲ ಇಷ್ಟೊತ್ತಿಗೆ ಒಂದು ರೌಂಡು ಮುಗಿದುಹೋಗುತ್ತಿತ್ತು, ಈ ಬಾರಿ ಬಹಳ ಸ್ಟ್ರಿಕ್ಟ್ ಅಂತೆ ಏನೂ ಬಂದಿಲ್ಲ' ಎಂದು ನಿರಾಶೆ ವ್ಯಕ್ತಪಡಿಸಿದರು. `ಲೀಡರ್‌ಗಳ ಕೈಗೆ ಕೊಟ್ಟು ಹೋಗಿದ್ದಾರಂತೆ, ನಮ್ಮ ಕೈಗೆ ಬಂದಿಲ್ಲ' ಎಂದರು ಇನ್ನೊಬ್ಬ ವ್ಯಕ್ತಿ ದೂರು ಹೇಳುವ ದನಿಯಲ್ಲಿ..
`ಹಿಂದಿನ ಚುನಾವಣೆಯ ಕಾಲದಷ್ಟು ದುಡ್ಡು ಈಗ ಹರಿದಾಡುತ್ತಿಲ್ಲ' ಎನ್ನುವ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿದೆ. ಜನಾರ್ದನ ರೆಡ್ಡಿಯವರ ಅಣ್ಣ ಸೋಮಶೇಖರ ರೆಡ್ಡಿ ಚುನಾವಣೆಯಿಂದ ಹಿಂದೆ ಸರಿದದ್ದು, ಮತ್ತೊಬ್ಬ ಅಣ್ಣ ಕರುಣಾಕರ ರೆಡ್ಡಿ ಬಿಜೆಪಿಯಲ್ಲಿಯೇ ಉಳಿದದ್ದು,  ಶ್ರಿರಾಮುಲು ಅವರ ಬಂಟ ನಾಗೇಂದ್ರ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು... ಈ ಬೆಳವಣಿಗೆಗಳೆಲ್ಲ ಬಳ್ಳಾರಿ ಜನರನ್ನು ಗೊಂದಲಕ್ಕೆ ತಳ್ಳಿದೆ. `ರೆಡ್ಡಿ ಕುಟುಂಬ ಮತ್ತು ಶ್ರಿರಾಮುಲು ಸಂಬಂಧ ಕೆಟ್ಟುಹೋಗಿದೆ, ಅದಕ್ಕೆ ದುಡ್ಡಿಲ್ಲ' ಎನ್ನುವವರು ಇದ್ದಹಾಗೆಯೇ `ಇವೆಲ್ಲ ಅವರೇ ಕೂಡಿ ಮಾಡುತ್ತಿರುವ ನಾಟಕ' ಎನ್ನುವವರೂ ಇದ್ದಾರೆ.
`ಈ 10-12 ವರ್ಷಗಳಲ್ಲಿ ನಮ್ಮ ಜನರ ಆತ್ಮಸಾಕ್ಷಿಯೇ ಸತ್ತುಹೋಗಿದೆ' ಎಂದು ಸಿಟ್ಟಿನಿಂದಲೇ ಹೇಳಿದರು ಲೋಹಿಯಾ ಪ್ರಕಾಶನದ  ಚೆನ್ನಬಸವಣ್ಣ ಬಳ್ಳಾರಿಯ ಕತೆಯನ್ನು ಬಣ್ಣಿಸುತ್ತಾ.  ಹೆಚ್ಚುಕಡಿಮೆ ದಶಕದ ಅವಧಿಯಲ್ಲಿ ಕಣ್ಣೆದುರೇ ಬದಲಾಗಿ ಹೋದ ಬಳ್ಳಾರಿಯ ಮುಖಗಳನ್ನು ಸಮೀಪದಿಂದ ನೋಡಿ ಸಂಕಟಪಡುತ್ತಿರುವವರು ಅವರು.
`ಕಕ್ಕ, ಮಾಮಾ, ಅಣ್ಣಾ ಈ ರೀತಿ ಸಂಬಂಧ ಹಚ್ಚಿ ಮಾತನಾಡಿಯೇ ನಮಗೆ ಅಭ್ಯಾಸ. ಹಿಂದೆಯೂ ಇಲ್ಲಿಯೂ ಒಂದಷ್ಟು ಗೂಂಡಾಗಿರಿ, ದರ್ಪ ದೌರ್ಜನ್ಯಗಳಿದ್ದವು. ಆದರೆ ಸಾಮಾನ್ಯ ಜನರು ಅವರ ಪಾಡಿಗೆ ಬದುಕಲು ತೊಂದರೆ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಿ ಹೋಯಿತು. ಗಣಿಲೂಟಿಕೋರರು ನಡೆಸಿದ ಅಟ್ಟಹಾಸದಿಂದ ನಲುಗಿಹೋಗಿರುವ ನಮ್ಮ ಬಳ್ಳಾರಿ ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು' ಎಂದು ನಿಟ್ಟುಸಿರುಬಿಟ್ಟರು ಚೆನ್ನಬಸವಣ್ಣ.
`ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಬದಿಯಲ್ಲಿ ಮುತ್ತುರತ್ನ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು...' ಎಂಬ ಕತೆಯನ್ನು ಕೇಳುತ್ತಾ ಬೆಳೆದವರು ಬಳ್ಳಾರಿಯ ಜನ. ಇದ್ದಕ್ಕಿದ್ದ ಹಾಗೆ ಅವರು ಗತವೈಭವವನ್ನೇ ಹೋಲುವ ಘಟನಾವಳಿಗಳಿಗೆ ಮೂಕ ಸಾಕ್ಷಿಯಾಗುವಂತಾಯಿತು. `ರೆಡ್ಡಿಗಳು ಬೆಳಿಗ್ಗೆ ತಿಂಡಿತಿನ್ನಲು ಬೆಂಗಳೂರಿಗೆ, ಮಧ್ಯಾಹ್ನ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರಂತೆ', `ರೆಡ್ಡಿಗಳು ಚಿನ್ನದ ಕುರ್ಚಿಯಲ್ಲಿ ಕೂರ‌್ತಾರಂತೆ, ಚಿನ್ನದ ಚಮಚದಲ್ಲಿ ಊಟ ಮಾಡ್ತಾರಂತೆ' ಎಂಬಿತ್ಯಾದಿ ಸುದ್ದಿಗಳು ಬಳ್ಳಾರಿಯ ಗಾಳಿಯಲ್ಲಿ ನಿತ್ಯ ಹಾರಾಡುತ್ತಿದ್ದುದನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಮೆರೆದಾಡಿದ, ಇಡೀ ಸರ್ಕಾರ ತಮ್ಮ ಅಂಗೈಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ರೆಡ್ಡಿಸೋದರರು ಕನಿಷ್ಠ ಬಳ್ಳಾರಿ ನಗರದ ಸುಧಾರಣೆಯನ್ನಾದರೂ ಮಾಡಬಹುದಿತ್ತು. ಒಂದೆರಡು ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಬಳ್ಳಾರಿ ನಗರ ದೊಡ್ಡ ಕೊಳೆಗೇರಿಯಂತಿದೆ. ಗುಂಡಿಬಿದ್ದ ರಸ್ತೆಗಳು, ಕಿತ್ತುಹೋಗಿರುವ ಕಾಲ್ದಾರಿಗಳು, ಅನಿಯಂತ್ರಿತವಾಗಿ ನಡೆಯುತ್ತಿರುವ ಒತ್ತುವರಿಗಳು, ಕೈಕೊಡುತ್ತಲೇ ಇರುವ ವಿದ್ಯುತ್, ಮರೀಚಿಕೆಯಂತೆ ಕಾಡುತ್ತಿರುವ ಕುಡಿಯುವ ನೀರು- ಒಂದು ನಗರಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ್ಯಾವುದೂ ಈ ನಗರದಲ್ಲಿ ಇಲ್ಲ.
`ಯಾಕೆ ಇಲ್ಲ ಎಂದರೆ ಬೇಕು ಎಂದು ಕೇಳುವವರೇ ಇಲ್ಲ ಸಾರ್ ಇಲ್ಲಿ. ಎಲ್ಲವನ್ನೂ ಸಹಿಸಿಕೊಂಡು ಇವೆಲ್ಲ ಸಾಮಾನ್ಯ ಎಂಬಂತೆ ಜನ ಬದುಕುತ್ತಿದ್ದಾರೆ. ಬೇರೆ ನಗರಗಳನ್ನು ನೋಡಿ ಬಂದ ನಮಗೆ ಇವೆಲ್ಲ ನೋಡಿ ಅಸಹ್ಯ ಅನಿಸುತ್ತಿದೆ' ಎಂದ ನಿವೃತ್ತ ಎಂಜಿನಿಯರ್ ಶಿವರಾಮಯ್ಯನವರ ಮಾತಿನಲ್ಲಿ ಅಸಹಾಯಕತೆ ಇತ್ತು.
`ಜನರಲ್ಲಿ ದುಡ್ಡಿನ ಲೋಭವನ್ನು ಹುಟ್ಟಿಸಿದ್ದು ಬಿಟ್ಟರೆ ಅವರೇನೂ ಮಾಡಲಿಲ್ಲ, ಕೆಟ್ಟುಹೋದವರಲ್ಲಿ ಹೆಚ್ಚಿನವರು ಯುವಕರು. ಒಂದು ತಲೆಮಾರು ಹಾಳಾಗಿ ಹೋಯಿತು' ಎಂದರು ವೀರಾಪುರದಲ್ಲಿರುವ ತಮ್ಮ ಮನೆಗೆ ಬಳ್ಳಾರಿಯಿಂದ ಬಂದಿದ್ದ ವಕೀಲ ಜಯರಾಮಯ್ಯ. `ಬದಲಾವಣೆ ಎಂದರೆ ಏನು?' ಒಬ್ಬ ಗಣಿಧಣಿಯನ್ನು ಸೋಲಿಸಿ ಇನ್ನೊಬ್ಬನನ್ನು ಆರಿಸುವುದೇ? ಸುಮ್ಮನೆ ರೆಡ್ಡಿ ಸೋದರರನ್ನು ದೂರಿ ಏನು ಪ್ರಯೋಜನ ಸಾರ್. ಈ ಕಾಂಗ್ರೆಸ್ ಪಕ್ಷದವರೇ ಗಣಿಲೂಟಿಯ ಮೂಲಪುರುಷರು. ಅವರು ಹೋಗಿ ಇವರು ಬರಬಹುದು. ಬಳ್ಳಾರಿಗೆ ಗಣಿಲೂಟಿಕೋರರಿಂದ ಮುಕ್ತಿ ಇಲ್ಲ' ಎಂದು ಸಣ್ಣಭಾಷಣವನ್ನೇ ಮಾಡಿಬಿಟ್ಟ ತನ್ನನ್ನು ವಿದ್ಯಾರ್ಥಿ ಮುಖಂಡ ಎಂದು ಪರಿಚಯಿಸಿಕೊಂಡ ಚೇತನ್.
`ಅಷ್ಟೊಂದು ನಿರಾಶರಾಗಬೇಕಾದ ಅಗತ್ಯವೂ ಇಲ್ಲ. ಅತಿರೇಕದ ಎರಡು ತುದಿಗಳನ್ನು ನಾವು ನೋಡಿ ಆಗಿದೆ. ದುಡ್ಡಿನ ಬಲದಿಂದ ನಿರ್ಲಜ್ಜರೀತಿಯಲ್ಲಿ ಮೆರೆದವರನ್ನೂ ನೋಡಿದ್ದೇವೆ. ಆ ರೀತಿ ಮೆರೆದವರು ಜೈಲು ಕಂಬಿ ಎಣಿಸುತ್ತಿರುವುದನ್ನೂ ನೋಡಿದ್ದೇವೆ. ಈ ಬೆಳವಣಿಗೆಗಳನ್ನು ಬಳ್ಳಾರಿಯ ಜನ ಹೇಗೆ ಸ್ವೀಕರಿಸಿದ್ದಾರೆ? ಅವರು ಕಲಿತ ಪಾಠವೇನು? ಇದು ಈ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಹೇಳಿದ ಚೆನ್ನಬಸವಣ್ಣ ಅವರ ಮಾತಿನಲ್ಲಿ ಬಳ್ಳಾರಿಯ ಜನರ ಬಗ್ಗೆ ಭರವಸೆ ಇತ್ತು.

No comments:

Post a Comment