Sunday, January 31, 2016

ಸಹಬಾಳ್ವೆ ಸಾಗರ

ಮಂಗಳೂರಿನಲ್ಲಿ ನಡೆದ 'ಸಹಬಾಳ್ವೆ ಸಾಗರ' ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಮಾತನಾಡುತ್ತಾ, 'ಕೋಮುವಾದವನ್ನು ಎದುರಿಸಲು ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿದೆ' ಎಂದರು. ಸಮಾರಂಭದ ಕೊನೆಯಲ್ಪಿ ಪ್ರದರ್ಶನಗೊಂಡ ಪ್ರತಿಭಾ ನಿರ್ದೇಶನದ,'ಕೊಂದವರ್ಯಾರು' ನಾಟಕ. ಯೋಗೇಂದ್ರ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರದಂತಿತ್ತು.



Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Tuesday, January 19, 2016

ಹಸಿವು ವೈಯಕ್ತಿಕವಾದುದು, ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು.

ಹಸಿವಿಗಿಂತ ಅವಮಾನದ ನೋವು ಭೀಕರವಾದುದು. ಹಸಿವು-ಅವಮಾನಗಳನ್ನೇ ಉಂಡು ಬೆಳೆದ ಹಿರಿಯ ಜೀವಗಳು ಅವುಗಳನ್ನು ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಇದರಿಂದಾಗಿ ಸುಲಭದಲ್ಲಿ ಜೀವ ಬಿಟ್ಟುಕೊಡುವುದಿಲ್ಲ. ಇಲ್ಲದೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಹೆಣಗಳು ಸಾಲುಸಾಲು ಬೀಳಬೇಕಿತ್ತು, ರೈತರದ್ದಲ್ಲ. ಹುಟ್ಟಿನಿಂದಲೇ ಹಸಿವು ಮತ್ತು ಅವಮಾನವನ್ನು ಸಹಿಸಿಕೊಂಡು ಬಂದ ದಲಿತರು ರೈತರ ಹಾಗೆ ದುರ್ಬಲ ಮನಸ್ಸಿನವರಾಗಿದ್ದಿದ್ದರೆ ನಾವೆಲ್ಲ ನಿತ್ಯ ದಲಿತರ ಆತ್ಮಹತ್ಯೆಯ ಲೆಕ್ಕ ಹಾಕಿಕೊಂಡು ಕೂರಬೇಕಿತ್ತು.
ಹಸಿವು ವೈಯಕ್ತಿಕವಾದುದು, ಅದನ್ನು ಸಹಿಸಿಕೊಳ್ಳಬಹುದು. ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು. ಒಮ್ಮೊಮ್ಮೆ ಮುಖಮುಚ್ಚಿಕೊಳ್ಳಲು ಜಾಗವೇ ಸಿಗುವುದಿಲ್ಲ. ಹೊಸಪೀಳಿಗೆಯ ರೋಹಿತ ವೇಮುಲನಂತಹ ಸೂಕ್ಷ್ಮವಾದ ಹೂಮನಸ್ಸಿನ ಜೀವಗಳು ಬಹುಬೇಗ ಅವಮಾನದಿಂದ ಬಾಡಿಹೋಗುತ್ತವೆ, ಒಮ್ಮೊಮ್ಮೆ ಉದುರಿಹೋಗಿ ನಮ್ಮನ್ನೆಲ್ಲ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ ಅಣಕಿಸುತ್ತಿರುತ್ತವೆ.
ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.

Friday, January 8, 2016

ಪ್ರತಿಕ್ರಿಯಿಸಲು ಮೂರು ಕಾರಣ

ಪ್ರಿಯ ಪ್ರೇಮ ಶೇಖರ್ ಅವರೆ,
ಬೊಳುವಾರು ಅವರ ಹಳೆಯ ಲೇಖನದ ಬಗ್ಗೆ ಪ್ರತಿಕ್ರಿಯಿಸಲು ಎರಡು ದಿನ ತೆಗೆದುಕೊಂಡಿರುವ ನೀವು ಕೊನೆಗೂ ಮೂಲ ಲೇಖನವನ್ನು ಓದದೆ ತಮ್ಮೆಲ್ಲ ಶಬ್ದ ಭಂಡಾರವನ್ನು ನನ್ನ ಹೀಯಾಳಿಕೆ, ತೆಗಳಿಕೆ ಮತ್ತು ಬುದ್ದಿವಾದ ನೀಡಲು ಹಾಗೂ ಪರಿವಾರದ ಹಳೆಯ ಸರಕುಗಳನ್ನು ರಿಸೈಕಲ್ ಮಾಡಲು ಬರಿದುಮಾಡಿದ್ದೀರಿ.ನಿಮ್ಮಲ್ಲಿದ್ದಿರಬಹುದಾದ ಜ್ಞಾನ ಭಂಡಾರವನ್ನು ಬಳಸಿಯೇ ಇಲ್ಲ.
-ಇಷ್ಟು ಹೇಳಿ ಸುಮ್ಮನಾಗಬಹುದಿತ್ತೋ ಏನೋ?
ಆದರೆ ನಿಮ್ಮ ಹಿರಿತನಕ್ಕೆ ಸೂಕ್ತ ಗೌರವ ಕೊಡಬೇಕಾದುದು ನನ್ನ ಧರ್ಮ. ಪ್ರತಿಕ್ರಿಯಿಸಲು ಹೊಸದಾಗಿ ಓದಬೇಕಾದುದು ಏನೂ ಇಲ್ಲ. ಬರೆಯಲು ಸಮಯ ಬೇಕು. ಪುರುಸೊತ್ತು ಮಾಡಿಕೊಂಡು ನಿಮಗೆ ಪ್ರೇಮಪೂರ್ವಕವಾಗಿಯೇ ಉತ್ತರಿಸುತ್ತೇನೆ. ನಮಸ್ಕಾರ
Date: 05-01-2016
---------------------------------------------------------------------------------------------------------------------------------
Date: 07-01-2016
ಪ್ರೀತಿಯ ಪ್ರೇಮಶೇಖರ್, ನಿಮ್ಮ ಸ್ಟೇಟಸ್ ಗೆ ಪ್ರತಿಕ್ರಿಯಿಸಬೇಕೇ ಬೇಡವೇ ಎಂಬ ಬಗ್ಗೆ ನಾನೂ ಗೊಂದಲದಲ್ಲಿದ್ದೆ. ಇದಕ್ಕೆ ಮೂರು ಕಾರಣಗಳು:
1. ನಮ್ಮ ಚರ್ಚೆಗೆ ಕಾರಣವಾಗಿರುವ ಬೊಳುವಾರು ಲೇಖನವನ್ನು ನೀವು ಓದಿಲ್ಲ, ಯಾಕೆಂದರೆ ಅದರ ಪ್ರತಿ ನಿಮ್ಮಲ್ಲಿಲ್ಲ, ನನ್ನನ್ನು ಕೇಳಿದ್ದರೆ ಅದನ್ನು ಕಳಿಸಿಕೊಡುತ್ತಿದ್ದೆ. ಅದನ್ನು ಓದಿ ಅರಗಿಸಿಕೊಂಡು ನೀವೇ ಇತರರಿಗೆ ಬೋದಿಸುತ್ತಿರುವಂತೆ ‘ಅರಿವಿನ ವಿಕಾಸ ಮಾಡಿಕೊಂಡು’ ಸಾವಧಾನವಾಗಿ ಪ್ರತಿಕ್ರಿಯಿಸಬಹುದಿತ್ತು. ಆದರೆ ನಿಮಗೆಷ್ಟು ಅವಸರವಿತ್ತೆಂದರೆ ನಾನು ಅಂಟಿಸಿದ್ದ ಒಂದು ಪುಟದ ಪೋಟೋ ಪ್ರತಿಯ ಅಸ್ಪಷ್ಟ ಸಾಲುಗಳನ್ನು ಓದಿ ನೀವು ವಾಗ್ವಾದದ ಅಂಗಳಕ್ಕೆ ಹಾರಿಬಿಟ್ಟಿದ್ದೀರಿ. ಇದರಿಂದಾಗಿ ಸ್ಪರ್ಧೆ ಯಾವುದೆಂದು ಗೊತ್ತಿಲ್ಲದೆ ಅಖಾಡಕ್ಕೆ ಹಾರಿ ಎಡವಿಬಿಟ್ಟ ಕುಸ್ತಿಪಟುವಿನಂತೆ ನೀವು ಕಾಣುತ್ತಿದ್ದೀರಿ. ಒಂದು ಅವಕಾಶ ಸಿಕ್ಕಿತಲ್ಲಾ, ಏನಾದರೂ ಮಾಡಿ ಈ ನನ್ಮಗನಿಗೆ ಗುದ್ದಿ ಬಿಡಬೇಕು, ಈ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಈತನನ್ನು ವಿನಾಕಾರಣ ದ್ವೇಷಿಸುವ ಪಡ್ಡೆ ಹುಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಕಿಡಿಗೇಡಿತನದ ಆಲೋಚನೆಯೊಂದು ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಕಂಡೆ. ಅದರಲ್ಲಿ ನೀವು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದೀರಿ. ಇಂತಹ ಯಶಸ್ಸು ಇನ್ನಷ್ಟು ನಿಮ್ಮ ಪಾಲಾಗಲಿ. ಯಾವುದನ್ನೂ ಬಚ್ಚಿಟ್ಟುಕೊಳ್ಳದೆ ನಿಮ್ಮನ್ನು ನೀವು ಇಷ್ಟುಚೆನ್ನಾಗಿ ಪರಿಚಯಿಸಿಕೊಂಡಿರುವಾಗ ನಾನೇನು ಪ್ರತಿಕ್ರಿಯಿಸಲಿ?
2. ಬೊಳುವಾರು ಬರೆದಿರುವುದು ಇಸ್ಲಾಂ ಹೇಗೆ ಪ್ರಪಂಚದಾದ್ಯಂತ ಪಸರಿಸಿತು ಎಂಬ ವಿಷಯದ ಮೇಲಿನ ಸಂಶೋಧನಾತ್ಮಕ ಪ್ರಬಂದ ಅಲ್ಲ. ‘ ಮುಸ್ಲಿಮನೆಂಬ ಪೂರ್ವಗ್ರಹದ ಕನ್ನಡಕವನ್ನು ಕಿತ್ತುಹಾಕಿ ಇತರರಂತೆ ನನ್ನನ್ನೂ ನಿಮ್ಮವನಂತೆ ಕಾಣಿರಿ’ ಎಂದು ಬೇಡಿಕೊಳ್ಳುತ್ತಿರುವ ಸಾಮಾನ್ಯ ‘ಮಹಮ್ಮದ’ ನ ಮನಸ್ಸಿನ ತಳಮಳ ಅದು. “ ....ಸೋಮನಾಥ ದೇವಾಲಯವನ್ನು ಆರ್ಥಿಕ ದಾಹದಿಂದ ಸೂರೆಗೈದ ಘಜನಿ ಮಹಮ್ಮದನನ್ನು ಮೂರ್ತಿ ಭಂಜಕನೆಂದು, ಹಿಂದೂ ಧರ್ಮದ ವಿರೋಧಿಯೆಂದು ವೈಭವೀಕರಿಸುತ್ತಾ, ಘಜನಿ ಎನ್ನುವುದು ಮರವೋ, ಕುದುರೆಯೋ ಎಂದು ಗೊತ್ತಿರದ ಬಡ ಬೀಡಿಕಾರ್ಮಿಕನ ಮಗ ‘ಮಹಮ್ಮದ’ ನನ್ನು ಕೂಡಾ ತೋಳಕುರಿಮರಿ ನೀರು ನ್ಯಾಯದಲ್ಲಿ ಇಂದಿನ ಮುಂದಿನ ಎಲ್ಲ ತಲೆಮಾರುಗಳನ್ನು ಮೋಸ ಗೊಳಿಸುತ್ತಿದ್ದಾರೆ...’’ ಎನ್ನುವ ಸಾಲುಗಳೇ ‘ಮುಸ್ಲಿಮನಾಗಿರುವುದೆಂದರೆ’ ಲೇಖನ ಎತ್ತಿದ್ದ ಮೂಲ ಪ್ರಶ್ನೆ. ಇದಕ್ಕೆ ನೀವು ಉತ್ತರಿಸಿಲ್ಲ.
ನೀವೇ ಬರೆದಂತೆ ಇಸ್ಲಾಂ ಕತ್ತಿ ಹಿಡಿದುಕೊಂಡೇ ಧರ್ಮ ಪ್ರಸಾರ ಮಾಡಿತೆಂದು ಒಪ್ಪಿಕೊಳ್ಳುವ. ನೀವು ಏನು ಮಾಡಬೇಕೆಂದಿದ್ದೀರಿ? ನಿಮಗೆ ಪರಿಚಯವೇ ಇಲ್ಲದ ‘ಮಹಮ್ಮದ’ ನನ್ನು ಬಿಟ್ಟುಬಿಡಿ, ನಿಮ್ಮ ಗೆಳೆಯರಾದ ಬೊಳುವಾರು ಇಲ್ಲವೇ ಜೆ ಎನ್ ಯು ನಲ್ಲಿ ನಿಮ್ಮ ರೂಮ್ ಮೇಟ್ ಆಗಿದ್ದ ಮುಜಫರ್ ಅಸ್ಸಾದಿ ಅವರ ತಲೆ ಕಡಿಯುತ್ತೀರಾ? ಇಂತಹ ಮನಸ್ಥಿಯವರ ಜತೆ ಏನು ಚರ್ಚೆ ಮಾಡಲಿ?
3. ಇಸ್ಲಾಂ ಧರ್ಮದ ಪ್ರಸಾರದ ಬಗ್ಗೆ ನೀವು ಹೇಳಿರುವುದರಲ್ಲಿ ಸಾಸಿವೆಯಷ್ಟಾದರೂ ಹೊಸತಿದೆಯೇ? ಹತ್ತು ಕಡಿಮೆ ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರು ಇದನ್ನೇ ಹೇಳುತ್ತಾ ಬಂದಿದ್ದಾರೆ. ಅದಕ್ಕಿಂತ ಮೊದಲು ಅದನ್ನು ಹಿಂದೂ ಮಹಸಭಾದ ನಾಯಕರು ಹೇಳಿದ್ದರು. ಅವರು ಹೇಳದಿರುವ ಒಂದು ಸಾಲು ನಿಮ್ಮ ಬರಹದಲ್ಲಿ ಎಲ್ಲಿದೆ ಎಂದು ತಿಳಿಸಿ? ಹೊಸ ಅರಿವಿನ ಬೆಳಕು ತಪ್ಪಿಯೂ ಒಳಸೂಸಬಾರದೆಂಬ ಹಟದಿಂದ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಹಳೆಯ ಕಂತೆ ಪುರಾಣಗಳನ್ನು ಉರುಹಾಕಿಕೊಂಡು ಕೂತಿರುವವರ ಜತೆ ಚರ್ಚೆ ನಡೆಸಿ ಯಾರಿಗಾದರೂ ಏನು ಲಾಭ?
ಈ ಮೂರು ಕಾರಣಗಳಿಗಾಗಿ ಪ್ರತಿಕ್ರಿಯಿಸುವುದೇ ಬೇಡ ಎಂದಾಗಿತ್ತು. ಆದರೆ ನಮ್ಮ ಯುವಸಮುದಾಯದ ಬಹುದೊಡ್ಡ ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಅವರಲ್ಲಿ ಹೆಚ್ಚಿನವರು ಕುರುಡು ಭಕ್ತರು. ಸೂತ್ರಧಾರಿಗಳು ಹೇಳಿದಂತೆ ಕುಣಿಯುತ್ತಿರುವ ಪಾತ್ರಧಾರಿಗಳು. ಅವರೆಲ್ಲ ಮೆಳ್ಳೆಗಣ್ಣಿನ ಇತಿಹಾಸಕಾರರು ಹೇಳಿರುವುದೇ ನಿಜ ಎಂದು ತಿಳಿದು ಅದನ್ನೇ ಉರುಹೊಡೆದು ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಕಂಡಕಂಡವರ ಮೇಲೆ ಎರಗುವವರು. ಕನಿಷ್ಠ ಅಂತಹವರಲ್ಲಿ ಕೆಲವರದ್ದಾದರೂ ಅರಿವಿನ ವಿಕಾಸವಾಗಲಿ ಎನ್ನುವುದಕ್ಕಾಗಿಯಾದರೂ ಪ್ರತಿಕ್ರಿಯಿಸಬೇಕೆಂದು ಅನಿಸಿತು. ನನ್ನ ಪ್ರತಿಕ್ರಿಯೆಗಾಗಿ ನಿಮ್ಮ ಚಡಪಡಿಕೆ ಕೂಡಾ ನನ್ನ ನಿರ್ಧಾರದ ಬದಲಾವಣೆಗೆ ಕಾರಣ.
ನೇರವಾಗಿ ವಿಷಯಕ್ಕೆ ಬರೋಣ ಅಂತಿದ್ದೆ. ಆದರೆ ನಿಮ್ಮ ಉತ್ತರದಲ್ಲಿದ್ದ ಪೀಠಿಕೆಯನ್ನು ನಿರ್ಲಕ್ಷಿಸಿದ್ದರೆ ನಿಮ್ಮ ಹಿರಿತನವನ್ನು ಅಗೌರವಿಸಿದಂತಾಗುತ್ತದೆ ಎಂದು ಮೊದಲು ಅದಕ್ಕೆ ಪ್ರತಿಕ್ರಿಯಿಸುವೆ. ನಿಜ ಹೇಳಬೇಕೆಂದರೆ ‘ ನಿಮ್ಮ ಓದು ಸೀಮಿತ ‘ ಎಂಬ ನನ್ನ ಬಗೆಗಿನ ನಿಮ್ಮ ತೀರ್ಪು ಓದಿದಾಗ ಹೆಚ್ಚೇನೂ ಓದದ ನನ್ನಜ್ಜನ ನೆನಪಾಯಿತು. ಆತ ಮಾತುಮಾತಿಗೆ ‘’ನಿನಗೇನೋ ಗೊತ್ತೋ? ನಾನು...’’ ಎಂದೇ ಮಾತು ಪ್ರಾರಂಭಿಸುತ್ತಿದ್ದದ್ದು. ಈ ಹಿರೀಕ ಏನೋ ನನಗೆ ಗೊತ್ತಿಲ್ಲದ್ದನ್ನು ಹೇಳುತ್ತಾನೆ ಎಂದು ಬೊಗಸೆಯೊಡ್ಡಿ ನಿಂತರೆ ಅದು ಖಾಲಿ ಖಾಲಿ. 50-60 ವರ್ಷಗಳಿಂದ ಹೇಳುತ್ತಾ ಬಂದುದನ್ನೇ ಅವನು ರಿಸೈಕಲ್ ಮಾಡುತ್ತಿದ್ದ.
ನಿಜ ಹೇಳಬೇಕೆಂದರೆ ನೀವು ಅಂಕಣಕಾರ ಪ್ರೇಮಶೇಖರ ಎಂದು ನನಗೆ ಗೊತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುವವರಿಗೆ ನಾವೆಲ್ಲ ಸೆಲೆಬ್ರೆಟಿಗಳು, ಹೆಸರು ಕೇಳಿದ ಕ್ಷಣ ಜನ ಗುರುತಿಸುತ್ತಾರೆ ಎಂಬ ಭ್ರಮೆ ಇರುತ್ತದೆ. ವಾಸ್ತವದಲ್ಲಿ ಹಾಗಿರುವುದಿಲ್ಲ ಎನ್ನುವುದನ್ನು ಸುಮಾರು ಮೂರು ದಶಕಗಳ ವೃತ್ತಿ ಅನುಭವದಿಂದ ಹೇಳುತ್ತಿದ್ದೇನೆ. ಜನರಿಗೆ ನಮ್ಮಂತಹವರನ್ನು ನೆನಪಲ್ಲಿಟ್ಟುಕೊಳ್ಳಲು ಪುರುಸೊತ್ತಿರುವುದಿಲ್ಲ. ಪಾಪ ಅವರಿಗೆ ತಲೆಕೆಡಿಸಿಕೊಳ್ಳಲು ಅವರದ್ದೇ ಸುಖ-ದು:ಖಗಳಿರುತ್ತವೆ. ನನ್ನ ಹೆಸರಿನ ಮಟ್ಟು ತೆಗೆದು ಗೂಗಲ್ ಗೆ ಹಾಕಿದರೆ ಅದೇ ಹೆಸರಿನ ನೂರು ಹೆಸರು ಬರುತ್ತದೆ. ನಿಮ್ಮದು ಅದೇ ರೀತಿಯ ಸಾಮಾನ್ಯ ಹೆಸರು.
ನಿಮ್ಮ ಪ್ರತಿಕ್ರಿಯೆಯನ್ನು ನಾನು ಓದಿದ್ದು ನಿಮ್ಮ ಸ್ಟೇಟಸ್ ನಲ್ಲಿಯಲ್ಲ. ಯಾರೋ ಮೋಹನಗೌಡ ಎಂಬವರೊಬ್ಬರು ಅದನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಅಂಟಿಸಿಕೊಂಡಿದ್ದರು. ಕೊನೆಯಲ್ಲಿ ಪ್ರೇಮಶೇಖರ ಎಂದಿತ್ತು. ನನಗೆ ನೀವು ಬರೆದ ವಿಷಯವಷ್ಟೇ ಪ್ರಮುಖವಾಗಿದ್ದ ಕಾರಣ ನಿಮ್ಮ ಹೆಸರಿನ ಸಂಶೋಧನೆಗೆ ಹೋಗಲಿಲ್ಲ, ಬೇಸರವಾಗಿದ್ದರೆ ಕ್ಷಮಿಸಿ. ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು, ಹೆಸರು, ಅದಕ್ಕಿರುವ ಬಾಲ-ಬಿರುದಾವಳಿಗಳ ಮೂಲಕ ಅಲ್ಲ. ಕೆಲವರು ಇರುವುದು ಒಂದು ರೀತಿ, ಬರೆಯುವುದೇ ಇನ್ನೊಂದು ರೀತಿ. ನೀವು ಅವರ ಸಾಲಿಗೆ ಸೇರಿದವರಲ್ಲ ಎಂದು ನಾನು ನಂಬಿದ್ದೇನೆ.
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ನಿಮ್ಮ ಅಪೇಕ್ಷೆಯಂತೆ ನೀವು ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ನನಗೆ ತಿಳಿದುಬಂದುದ್ದೆಲ್ಲವನ್ನೂ ಹೇಳಿ ನಿಮ್ಮ ಮನಸ್ಸಿಗೆ ನೋಯಿಸುವುದು ನನಗೆ ಇಷ್ಟ ಇಲ್ಲ. ನನ್ನ ಗೆಳೆಯರಾದ ಮುಜಫರ್ ಅಸ್ಸಾದಿ, ಅಶೋಕ ಶೆಟ್ಟರ್ , ಡೆಕ್ಕನ್ ಹೆರಾಲ್ಡ್ ನ ಕೆ.ಸುಬ್ರಹ್ಮಣ್ಯ ಮೊದಲಾದವರೆಲ್ಲರೂ ನಿಮಗೂ ಗೆಳೆಯರು ಎಂಬುದನ್ನು ತಿಳಿದುಕೊಂಡೆ. ಅವರೆಲ್ಲರ ಜತೆ ನಾನು ನಿಮ್ಮ ಬಗ್ಗೆ ಚರ್ಚಿಸಲು ಹೋಗಲಿಲ್ಲ. ಆದರೆ ಪಾಂಡಿಚೇರಿಯಲ್ಲಿ ನಿಮ್ಮ ಶಿಷ್ಯನಾಗಿದ್ದೆ ಎಂದು ಹೇಳಿಕೊಂಡವನೊಬ್ಬ ಫೇಸ್ ಬುಕ್ ನಲ್ಲಿ ಮೆಜೆಜ್ ಕಳಿಸಿದ್ದ. ಅವನು ವ್ಯಕ್ತಪಡಿಸಿರುವ ನೋವು, ಆಕ್ರೋಶ ಗುರುವೆನಿಸಿಕೊಂಡ ಯಾರಿಗೂ ಶೋಭೆ ತರುವಂತಹದ್ದಲ್ಲ. ಆ ಮೇಲೆ ನಿಮ್ಮ ಬರವಣಿಗೆಗಳನ್ನೂ ಒಂದಷ್ಟು ತಿರುವಿಹಾಕಿದೆ. ಗೌರಿ ಎನ್ನುವ ಒಬ್ಬ ಹೆಣ್ಣುಮಗಳನ್ನು ‘ಗೋರಿ’ ಎಂದು ಗೇಲಿಮಾಡುವ ವಿಕೃತಿ ಬಗ್ಗೆ ಏನು ಹೇಳಲಿ?
ನಿಮ್ಮ ಇನ್ನೊಂದು ಪ್ರಶ್ನೆ/ಸಲಹೆಗೆ ಕೂಡಾ ಉತ್ತರಿಸಬೇಕಾಗಿದೆ. ಇದನ್ನು ಬಹಳಷ್ಟು ಖಾಂಜಿಪೀಂಜಿಗಳು ಆಗಾಗ ಕೇಳುತ್ತಿರುತ್ತಾರೆ.. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಮಾಧ್ಯಮ ಸಲಹೆಗಾರರು ದನದ ಮಾಂಸ ತಿನ್ನುತ್ತಾರೆ ಎಂದು ಶಾಸಕ ಸಿ.ಟಿ.ರವಿ ವಿಧಾನಸಭೆಯಲ್ಲಿಯೇ ಹೇಳಿದ್ದರು. ಅವರೇನೋ ಆಗಾಗ ಇಂತಹ ಜೋಕ್ ಮಾಡುತ್ತಿರುತ್ತಾರೆ. ತಿಳಿದವರಾದ ನೀವು ಹೇಳಿ, ಸರ್ಕಾರದ ಸಂಬಳ ಪಡೆಯುತ್ತಿರುವವರು ಬಾಯಿಮುಚ್ಚಿಕೊಂಡಿರಬೇಕು, ದನದ ಮಾಂಸ ತಿನ್ನುವುದಿರಲಿ, ಅದರ ಬಗ್ಗೆ ಮಾತನಾಡಬಾರದು ಎಂದು ಸಂವಿಧಾನದ ಯಾವ ಪರಿಚ್ಛೇದ ಇಲ್ಲವೇ ಅಪರಾಧ ದಂಡ ಸಂಹಿತೆಯ ಯಾವ ಸೆಕ್ಷನ್ ಹೇಳಿದೆ? ಇದನ್ನು ನೀವು ತಿಳಿಸಿದರೆ ನಾನು ಸ್ವಯೀಚ್ಚೆಯಿಂದ ಗಲ್ಲುಗಂಬಕ್ಕೇರುತ್ತೇನೆ.
ನಮ್ಮ ಸಚಿವರು ಕೂಡಾ ಜನತೆಯ ತೆರಿಗೆಯ ಹಣದಿಂದ ಸಂಬಳ-ಸೌಲಭ್ಯ ಪಡೆದುಕೊಳ್ಳುವವರು. ನಿಮ್ಮ ಲಾಜಿಕ್ ಪ್ರಕಾರ ಅವರು ಕೂಡಾ ಒಂದು ಪಕ್ಷದ ವಿರುದ್ದ ಇಲ್ಲ ಪರ ಮಾತನಾಡಬಾರದೇ? ಹಿಂದಿನ ಸರ್ಕಾರ ನೇಮಿಸಿದ್ದ ಸೆನೆಟ್, ಅಕಾಡೆಮಿಕ್ ಕೌನ್ಸಿಲರ್ ಸದಸ್ಯರಾಗಿದ್ದವರು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಮುಜುಗರ ಇಲ್ಲದ ಅಧಿಕಾರ ಅನುಭವಿಸುತ್ತಾ ಯಾವ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೋ ಅದೇ ಸರ್ಕಾರವನ್ನು ಸಾರ್ವಜನಿಕವಾಗಿ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರಲ್ಲಾ ಅದು ಯಾವ ನೈತಿಕತೆಯ ಸಂಹಿತೆಯಲ್ಲಿ ಬರುತ್ತೆ? ಧಾರ್ಮಿಕ ಸಾಮರಸ್ಯವನ್ನು ಕೆಡಿಸುವುದೇ ತಮ್ಮ ಉದ್ಯೋಗ ಮಾಡಿಕೊಂಡಿರುವ ಕೇಸರಿ ಪಡೆಯ ನಾಯಕರ ಅಕ್ಕಪಕ್ಕದಲ್ಲಿ ಪೋಲಿಸ್ ಇಲಾಖೆ ನೀಡಿರುವ ಅಂಗರಕ್ಷಕರಿದ್ದಾರಲ್ಲಾ ಅವರಿಗೆ ಯಾರ ತೆರಿಗೆ ಹಣದಿಂದ ಸಂಬಳ ಕೊಡುತ್ತಿರುವುದು ಸ್ವಾಮಿ? ಫೇಸ್ ಬುಕ್ ನಲ್ಲಿ ಕೆಲವು ಪಡ್ಡೆ ಹುಡುಗರು ಟಿಆರ್ ಪಿಗಾಗಿ ಏನೇನೋ ಮಕ್ಕಳ ಕತೆ ಬರೆಯುತ್ತಿರುತ್ತಾರೆ ಅದನ್ನು ನಿಮ್ಮಂತಹವರು ಗಂಭೀರವಾಗಿ ತೆಗೆದುಕೊಳ್ಳುವುದೇ?
ಈಗ ನಿಮ್ಮ ಪ್ರತಿಕ್ರಿಯೆಯ ಕೇಂದ್ರಕ್ಕೆ ಬರುತ್ತೇನೆ. ಅರೆ, ಆಗಲೇ 800 ಶಬ್ದಗಳಾಗಿವೆ. ಒಂದೇ ಗುಟುಕಿಗೆ ಓದಿ ಅರಗಿಸಿಕೊಳ್ಳುವುದು ನಿಮಗೂ ಕಷ್ಟ. ಮುಂದಿನದ್ದನ್ನು ಎರಡನೆ ಕಂತಿನಲ್ಲಿ ಬರೆಯುತ್ತೇನೆ. (ಸದ್ಯ ಮುಖ್ಯಮಂತ್ರಿಗಳ ‘ತಲೆಕೆಡಿಸುವ’ ಸಲಹೆಗಳನ್ನು ತುರ್ತಾಗಿ ನೀಡಬೇಕಾಗಿದೆ) ಸದ್ಯಕ್ಕೆ ಇದನ್ನು ಓದಿರಿ. ನೀವು ಮುಂಬೈನಲ್ಲಿದ್ದೀರಿ ಎಂದು ನಿಮ್ಮ ಗೆಳೆಯ ಅಶೋಕ್ ಶೆಟ್ಟರ್ ಬರೆದಿರುವುದನ್ನು ಓದಿದೆ.. ನಾನು ಅಲ್ಲಿಯೇ ಹುಟ್ಟಿದವನು. ನನಗೆ ಅಲ್ಲಿ ಒಂದಿಷ್ಟು ಗೆಳೆಯರಿದ್ದಾರೆ. ಸಹಾಯ ಬೇಕಿದ್ದರೆ ತಿಳಿಸಿ. ವೈಯಕ್ತಿಕ ಸ್ನೇಹ ಬೇರೆ, ಸೈದ್ಧಾಂತಿಕ ಜಗಳ ಬೇರೆ. ಸದ್ಯದಲ್ಲಿಯೇ ನಿಮ್ಮ ಓದಿಗಾಗಿ ನನ್ನ ಪ್ರತಿಕ್ರಿಯೆಯ ಎರಡನೆ ಕಂತು ನಿಮ್ಮನ್ನು ತಲುಪಲಿದೆ. ನಮಸ್ಕಾರ.

Sunday, January 3, 2016

ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ

ಬೊಳುವಾರು ಅವರ ಹಳೆಯ ಲೇಖನವೊಂದನ್ನು ಉಲ್ಲೇಖಿಸಿ ನಾನು ಬರೆದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ) ‘ಮೂವತ್ತಾಲ್ಕು ವರ್ಷಗಳಲ್ಲಿ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ..ಬೊಳುವಾರು ಅವರು ಬೆಳೆಯುತ್ತಾ ಹೋಗಿದ್ದಾರೆ.. ಅದನ್ನು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ,ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ, ಬೊಳುವಾರರನ್ನು ಅಂದಿನ ದಿನಗಳಿಗೆ ಕಟ್ಟಿಹಾಕಲು ನೋಡುತ್ತಿದ್ದಾರೆ..... ಎಂದೆಲ್ಲ ಬರೆದಿದ್ದಾರೆ. ಇದನ್ನು ಮೋಹನ ಗೌಡ ಎನ್ನುವವರು ನನ್ನ ವಾಲ್ ಗೆ ಅಂಟಿಸಿದ್ದಾರೆ.
ಅವರ ಬಡಬಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಬೊಳುವಾರು ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಓದಿರಿ:
- ಕಾನೂನು ಶಾಸ್ತ್ರದಲ್ಲಿ ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ, ಆದರೆ ಭಾರತದಲ್ಲಿ ಆಕಸ್ಮಿಕವಾಗಿ ಹುಟ್ಟಿ ಬದುಕನ್ನು ಅನಿವಾರ್ಯವಾಗಿ ಎದುರಿಸಬೇಕಾಗಿರುವ ಪ್ರತಿಯೊಬ್ಬಮುಸ್ಲಿಮನೂ ತನ್ನ ನಿರಪರಾಧಿ ಸಾಬೀತಾಗುವ ತನಕ ಅಪರಾಧಿಯೇ ಆಗಿ ಉಳಿಯಬೇಕಾಗಿದೆ.
- ಮುಸ್ಲಿಮರು ಜನ್ಮತ: ಕ್ರೂರಿಗಳು, ಪ್ರತಿಯೊಂದು ಮನೆಯಲ್ಲೂ ಮಾರಕ ಆಯುಧಗಳಿವೆ, ಪ್ರತಿಯೊಂದು ಮಸೀದಿಯೂ ಶಸ್ತ್ರಾಗಾರ, ಮುಸ್ಲಿಮರೆಲ್ಲ ನಾಲ್ಕು ಮದುವೆಯಾಗಿ ನಲವತ್ತು ಮಕ್ಕಳನ್ನು ಹುಟ್ಟಿಸುತ್ತಾರಾದ್ದರಿಮದ ಅವರ ಜನಸಂಖ್ಯೆ ಅಧಿಕವಾಗುತ್ತದೆ. ಅವರು ಕುಟುಂಬ ಯೋಜನೆಗೆ ತಯಾರಾಗಿಲ್ಲ, ರಾಷ್ಟ್ರೀಯ ಜನಪ್ರವಾಹದೊಂದಿಗೆ ಬೆರೆಯುವುದಿಲ್ಲ. ಅವರು ಪಾಕಿಸ್ತಾನದ ಏಜಂಟರು. ಭಾರತ ಪಾಕಿಸ್ತಾನ ವಿರುದ್ಧ ಹಾಕಿಯಲ್ಲಿ ಸೋತಾಗ ರೇಡಿಯೋಗೆ ಹೂಮಾಲೆ ಹಾಕಿದರು ಇತ್ಯಾದಿ ಪುಟಗಟ್ಟಲೆ ಬರೆಯಬಹುದಾದ ಸಂದಿಗ್ದತೆಯಿಂದ ಭಾರತೀಯ ಮುಸ್ಲಿಮನು ಸಣ್ಣವನಾಗುವುದು ಅನಿವಾರ್ಯವಾಗಿದೆ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕಪಟ್ಟವೇರಿ ದವರೆಲ್ಲ ಮೇಲ್ವರ್ಗದಿಂದ ಬಂದವರು (ಅಂಬೇಡ್ಕರ್,ರಾಮ್ ಮೊದಲಾದವರು ಕೆಲವು ಅಪವಾದಗಳು, ಅಪವಾದಗಳು ವಾದವನ್ನು ಬಲಪಡಿಸುತ್ತದೆ). ಎಲ್ಲ ಕಾಲದಲ್ಲಿ ಮತ್ತು ಎಲ್ಲ ದೇಶಗಳಲ್ಲಿ ನಡೆದುಬಂದ ಸಂಪ್ರದಾಯ ಇದು. ರಾಜರುಗಳನ್ನು ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು ಮತ್ತು ವಿರೋಧಿಸುವವರು ಕೂಡಾ ಮೇಲ್ವರ್ಗದಿಂದಲೇ ಬಂದವರಾಗಿರುತ್ತಾರೆ....ವಿದ್ಯೆ,ಬುದ್ದಿವಂತಿಕೆಗಳನ್ನು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಳ್ಳುವ ಮೇಲ್ವರ್ಗದವರಿಗೆ ಯಾವುದೇ ಕಠಿಣ ಶ್ರಮ ಅಸಾಧ್ಯವಾಗಿರುವುದರಿಂದ ಅವರಿಗೆ ರಾಜಾಶ್ರಯ, ರಾಜನಂಟು, ಬದುಕಿನ ಅನಿವಾರ್ಯತೆಯೂ ಆಗಿರುತ್ತದೆ.
- ಭಾರತಕ್ಕೆ ಬ್ರಿಟಿಷರು ವ್ಯಾಪಾರಕ್ಕಾಗಿ (ಬ್ರಿಟಿಷರು ಭಾರತಕ್ಕೆ ವ್ಯಾಪಾರದ ನಿಮಿತ್ತ ಬಂದವರೆಂದೂ, ಮುಸ್ಲಿಮರು ಆಕ್ರಮಣ ಮಾಡಿದವರೆಂದೂ ಬರೆದಿರುವ ಚರಿತ್ರೆ ಪುಸ್ತಕಗಳನ್ನೇ ನಮ್ಮ ಮಕ್ಕಳು ಓದುತ್ತಿದ್ದಾರೆ) ಬಂದಾಗ ಅವರಿಗೆ ದುಂಬಾಲು ಬಿದ್ದು ಸರಕಾರಿ ಕೆಲಸಗಳನ್ನು ದಕ್ಕಿಸಿಕೊಂಡು ಐ ಎ ಎಸ್ ಆಗಿ ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಬಾರ್ ಅಟ್ ಲಾ ಓದಿಸಿದವರೂ ಭಾರತದೊಳಗೆ ಇಸ್ಲಾಂ ಆಕ್ರಮಣ ಮಾಡಿದಾಗ ಅವರ ಬೆನ್ನುಬಿದ್ದು ಪದವಿಯ ಆಸೆಗಾಗಿ ಮತಾಂತರಗೊಂಡು, ದಿವಾನರುಗಳಾಗಿ, ಜಮೀನ್ದಾರರಾಗಿ ಮೆರೆದವರೂ ಇದೇ ಮೇಲ್ವರ್ಗದ ಮಂದಿಗಳು ಮಾತ್ರ......
- ಭಾರತದ ಮುಸ್ಲಿಮರು ವಿಭಜನೆಯ ಪಿಂಡದ ಹೊರೆಯೊಂದಿಗೆ ಉಳಿಯಬೇಕೆಂದು ಬಯಸುವ ರಾಜಕೀಯ ಹಿಂದೂವಾದಿಗಳು ಚರಿತ್ರೆಯ ಪುಟಗಳನ್ನು ತಮ್ಮ ಕಣ್ಣಿನ ಅಳತೆಯಲ್ಲಿಯೇ ಓದುತ್ತಾ ಭಾಷ್ಯ ಬರೆಯುತ್ತಿದ್ದಾರೆ. ‘ಹಿಂದೂ’ ಎಂಬ ಪದವನ್ನು ಒಂದು ಜಾತಿಯ ಪದವಲ್ಲ, ಒಂದು ಪ್ರಾದೇಶಿಕ ಪದ ಎಂಬೀತ್ಯಾದಿ ಬರೆಯುತ್ತಾ ಎರಡು ಪ್ಯಾರಾ ಬರೆಯುವುದರಲ್ಲಿಯೇ ಗಲಿಬಿಲಿಗೊಂಡು ಗೊಂದಲದಲ್ಲಿಯೇ ಮುಕ್ತಾಯಗೊಳಿಸುತ್ತಾರೆ.
- ‘ನೀನು ಮಸೀದಿಗೆ ಹೋಗುವುದೇ ಇಲ್ವಾ?’ ಎಂಬ ಪ್ರಶ್ನೆಯಲ್ಲಿಯೇ ಖುಷಿಗೊಳ್ಳುವ ಗೆಳೆಯ ಗೋಪಾಲ ಅವನ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಬಹಳ ಜೋಪಾನವಾಗಿ ತಂದುಕೊಡುತ್ತಾನೆ....’ಇಷ್ಟೆಲ್ಲ ಮಾತನಾಡುವ ನೀನು ನಿನ್ನ ತಾಯಿಯ ಹೆಣವನ್ನು ಮಸೀದಿಗೆ ಯಾಕೆ ಕೊಂಡುಹೋಗಿ ದಪನಮಾಡಿದೆ ಎಂದು ನನ್ನೊಡನೆ ಪ್ರಶ್ನಿಸಿದ ಸುರೇಶ ಕಿಣಿಯೊಡನೆ ‘ಮತ್ತೇನುಮಾಡಬೇಕು?’ ಎಂದು ಪ್ರಶ್ನಿಸಿದರೆ ಸ್ಮಶಾನದಲ್ಲಿ ಸುಡಬೇಕಿತ್ತು ಎನ್ನುತ್ತಾನೆ.
- ಮುಸ್ಲಿಮನು ರಾಷ್ಟ್ರೀಯವಾದಿ ಆಗುವುದೆಂದರೆ ‘ಹಿಂದು’ ಆಗುವುದುಮಾತ್ರ . ಇಂತಹ ಸಣ್ಣ ಯೋಚನೆಯ ಹಿಂದೂಗಳದ್ದೇ ದೊಡ್ಡ ಗುಂಪಾಗಿರುವುದರಿಂದಲೇ ದೇಶದ ಮುಸ್ಲಿಮರು ಮತ್ತಷ್ಟು ಜಾತಿಯವಾದಿಯಾಗುತ್ತಾರೆ. ಹತ್ತರಲ್ಲಿ ಹನ್ನೊಂದಾಗದಿದ್ದರೆ, ಎರಡು ಕಡೆಗಳಿಂದಲೂ ಉಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
- ಗಜನಿ ವಿಗ್ರಹಗಳನ್ನು ಒಡೆದದ್ದು ಸೋಮನಾಥನ ಮೇಲಿನ ವೈರದಿಂದಲ್ಲ, ಅದರೊಳಗಿದ್ದ ಮಣಗಟ್ಟಲೆ ಬಂಗಾರವನ್ನು ದೋಚಲಿಕ್ಕಾಗಿ ಹಾಗೂ ಅಂದು ಗಜನಿಯ ಸೈನ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು ಎನ್ನುವುದು ಇತಿಹಾಸದ ನಿಜಸಂಗತಿಗಳು.
- ಇಷ್ಟೆಲ್ಲ ಹೇಳಿದ ಮಹಮದರು ಕೊನೆಗೆ ‘’ ರಾಷ್ಟ್ರೀಯ ಜನಪ್ರವಾಹದಿಂದ ಮುಸ್ಲಿಮರು ಹೊರಗುಳಿಯಬೇಕಾಗಿ ಬಂದಿರುವ ನಮ್ಮ ದೇಶದ ವ್ಯವಸ್ಥೆ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸುವುದಕ್ಕೆ ಅನುಕೂಲವಾಗಬಲ್ಲ ಕೆಲವು ಪ್ರಾಮಾಣಿಕ ನಿಜಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಅಷ್ಟೆ. ಮುಂದಿನ ತಲೆಮಾರು ಕೂಡಾ ನಮ್ಮಂತೆ ಮೋಸ ಹೋಗದಿರಲು ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಬೇಕು’’ ಎಂದು ಲೇಖನವನ್ನು ಕೊನೆಗೊಳಿಸುತ್ತಾರೆ.
ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ. ನೀವಂತೂ ಬದಲಾಗಿದಂತೆ ಕಾಣುವುದಿಲ್ಲ. ಇನ್ನೂ ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಯಾವುದು ಬದಲಾಗಿದೆ?
ಹೌದು, ಆ ಲೇಖನದ ಲೇಖಕರು ಬದಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂಬ ಅನುಮಾನವನ್ನು ಗೆಳೆಯರು ವ್ಯಕ್ತಪಡಿಸುತ್ತಿರುವುದು ನಿಜ. ಅದಕ್ಕಲ್ಲವೇ ಈ ಚರ್ಚೆ ನಡೆಯುತ್ತಿರುವುದು. ಸೂಕ್ಷ್ಮವಾಗಿ ನೋಡಿದರೆ ಅಂತಹದ್ದೊಂದು ಸೂಚನೆ ಆ ಲೇಖನದಲ್ಲಿಯೂ ಕಾಣುತ್ತದೆ.

Saturday, January 2, 2016

34 ವರ್ಷಗಳ ಹಿಂದಿನ ಒಂದು ಬರಹ

ಪ್ರಿಯ ಬೊಳುವಾರ್,
ಹೊಸ ವರ್ಷ ಚಂದದ ಹೊಸ ಮನಸ್ಸುಗಳನ್ನು ತರಲಿ ಎಂದು ಹಾರೈಸಿದಕ್ಕೆ ಥ್ಯಾಂಕ್ಸ್. ಆದರೆ ಇಂತಹ ಒಳ್ಳೆಯ ಮನಸ್ಸು-ಬುದ್ದಿ ಮೂರು ದಶಕಗಳ ಹಿಂದೆ ನಿಮ್ಮಿಂದಲೇ ನನಗೆ ಪ್ರಾಪ್ತಿಯಾಗಿದ್ದು ಎನ್ನುವುದು ನಿಮಗೂ ತಿಳಿದಿಲ್ಲ. 1981ರ ಆಗಸ್ಟ್ 23ರ ಸುಧಾ ವಾರಪತ್ರಿಕೆಯಲ್ಲಿ ‘ಮಹಮದ’ ಎಂಬ ಹೆಸರಲ್ಲಿ ‘ಮುಸ್ಲಿಮನಾಗಿರುವುದೆಂದರೆ...’ ಎಂಬ ಲೇಖನ ಪ್ರಕಟವಾಗಿತ್ತು. (ಅದು ಪ್ರಕಟವಾಗಿದ್ದು ನೀವು ಅಂದುಕೊಂಡಂತೆ 42 ವರ್ಷಗಳ ಹಿಂದೆ ಅಲ್ಲ 34 ವರ್ಷಗಳ ಹಿಂದೆ)



ಆ ಲೇಖನವನ್ನು ಆ ಕಾಲದಲ್ಲಿ ನಾನು ಓದದೆ ಹೋಗಿದ್ದರೆ ಕರಾವಳಿಯ ಈಗಿನ ವಕ್ರಬುದ್ದಿಯ ಸಂತಾನದ ವಿದ್ಯಾರ್ಥಿಗಳ ಶಾಲೆಯಲ್ಲಿ ನಾನು ಮುಖ್ಯೋಪಾಧ್ಯಾಯನಾಗಿರುತ್ತಿದ್ದೆ. (ಪುಂಡರ ಗುರು ಎನ್ನಿ). ನನಗೆ ಆಗ 22ರ ಹರಯ. ಆಗಲೇ ಹೆಜಮಾಡಿಯ ಭಟ್ರು ಒಬ್ಬರು ಮುಂಜಾನೆಯ ಆರ್ ಎಸ್ ಎಸ್ ಬೈಠಕ್ ಗೆ ಬರಲು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಇನ್ನೂ ಗಾಂಧಿ,ಅಂಬೇಡ್ಕರ್, ಲೋಹಿಯಾ ಅವರನ್ನು ಗಂಭೀರವಾಗಿ ಓದಿರಲಿಲ್ಲ, ದಾರಿ ತಪ್ಪುತ್ತಿದ್ದೆನೋ ಏನೋ? ಅಂತಹ ಸಮಯದಲ್ಲಿ ನನ್ನ ಕಣ್ಣು ತೆರೆಸಿದ ಲೇಖನ ನಿಮ್ಮದು. ಮುಸ್ಲಿಮ್ ಸಮುದಾಯವನ್ನು ಧರ್ಮದ ಪೂರ್ವಗ್ರಹ ಬಿಟ್ಟು ಅರ್ಥಮಾಡಿಕೊಳ್ಳಲು ನೆರವಾದ ಲೇಖನ ಅದು.
ಅದರ ನಂತರದ ನನ್ನ ಬರವಣಿಗೆ-ಭಾಷಣಗಳಲ್ಲಿ ಆ ಲೇಖನದ ಅಂಶಗಳು ಅನೇಕಬಾರಿ ಬಂದುಹೋಗಿವೆ. ಇದರಿಂದಾಗಿಯೇ ನಾನು ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಒಂದೆ ಅಲ್ಲ ಎಂದು ಹೇಳಿ ನಿಮ್ಮ ಸ್ನೇಹಿತರಿಂದ ಅಂಡೆಪಿರ್ಕಿ ಎಂದು ಅನಿಸಿಕೊಂಡದ್ದು. ಆ ಲೇಖನ ಅಷ್ಟೊಂದು ನನ್ನನ್ನು ತಟ್ಟದೆ ಹೋಗಿದ್ದರೆ ಇಲ್ಲಿಂದ ದಿಲ್ಲಿ ವರೆಗೆ ಊರೂರು ಸುತ್ತಿದರೂ ಆ ಲೇಖನದ ಮಾಸಿದ ಪ್ರತಿಯನ್ನು 34 ವರ್ಷ ನಾನ್ಯಾಕೆ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದೆ ಸಾರ್ ?
ಆದರೆ ಆ ಲೇಖನದ ಲೇಖಕ ನೀವಿರಬಹುದೆಂಬ ಅನುಮಾನ ಇದ್ದಿದ್ದರೂ, ಅದು ಖಾತರಿಯಾಗಿದ್ದು ಆ ಮೇಲೆ ಯಾವುದೋ ಒಂದು ದಿನ ನೀವಾಗಿ ತಿಳಿಸಿದಾಗ. ಆ ಲೇಖನ ಬರೆದಿದ್ದ ದಿನಗಳಲ್ಲಿ ನೀವು ಕರಾವಳಿಯ ಬಂಡುಕೋರ ಮುಸ್ಲಿಮ್ ಲೇಖಕ. ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿಗಳನ್ನು ಎದುರುಹಾಕಿಕೊಂಡ ನೀವು ಕೊನೆಗೆ ಒಂದಷ್ಟು ದಿನ ಜೈಲು ಕೂಡಾ ಸೇರಬೇಕಾಯಿತು. ನಿಮ್ಮ ಕುಟುಂಬದವರು ಎದುರಿಸಿದ ಕಷ್ಟಗಳೂ ನನಗೆ ಗೊತ್ತು. ಅವೆಲ್ಲ ನಡೆದು ಕೆಲವು ವರ್ಷಗಳ ನಂತರ ನೀವು ಇದ್ದಕ್ಕಿದ್ದ ಹಾಗೆ ಸಾರ್ವಜನಿಕ ಬದುಕಿನಿಂದ ಮರೆಯಾಗಿಬಿಟ್ಟಿರಿ.
ಈ ರೀತಿ ತೆರೆಮರೆಗೆ ಸರಿದ ನಿಮ್ಮ ಮತ್ತು ಇತರ ಗೆಳೆಯರ ಬಗ್ಗೆ ಆಗಾಗ ಚರ್ಚೆ-ಸಂವಾದಗಳಲ್ಲಿ ಪ್ರಸ್ತಾಪವಾಗುತ್ತದೆ. ಅಂತಹ ಸಂದರ್ಭದಲ್ಲೆಲ್ಲ ನಾನು ನಿಮ್ಮ ಪರವಾಗಿ ವಕಾಲತು ಮಾಡುತ್ತಾ ಬಂದವನು. “ ಸಮಾಜ ಸುಧಾರಣೆಯ ಕೆಲಸ ರಿಲೇ ಓಟ ಇದ್ದ ಹಾಗೆ. ಬೊಳುವಾರು ಮತ್ತು ಗೆಳೆಯರು ಅವರಿಂದಾದಷ್ಟು ದೂರ ಓಡಿದ್ದಾರೆ. ಈಗ ನಿವೃತ್ತಿಯಾಗಿದ್ದಾರೆ. ರಿಲೇ ಓಟದ ಬೇಟನ್ ಅನ್ನು ಈಗ ಹೊಸತಲೆಮಾರಿನವರು ಕೈಗೆ ತೆಗೆದುಕೊಂಡು ಓಡಬೇಕು” ಎಂದು ನಾನು ಹೇಳುತ್ತಿರುತ್ತೇನೆ. ಮುಸ್ಲಿಮ್ ಧರ್ಮದಲ್ಲಿದ್ದ ಪ್ರಗತಿಪರ ಲೇಖಕ-ಲೇಖಕಿಯರು ಬಾಬರಿ ಮಸೀದಿ ಧ್ವಂಸದ ನಂತರ ಯಾಕೆ ಅನಿವಾರ್ಯವಾಗಿ ಮೌನವಾಗಬೇಕಾಯಿತು ಎನ್ನುವುದನ್ನು ಕೂಡಾ ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ಈಗಲೂ ಈ ಅಭಿಪ್ರಾಯಕ್ಕೆ ನಾನು ಬದ್ದ.
ಆದರೆ ಮಾತನಾಡಬೇಕಾಗಿದ್ದ ಕಾಲದಲ್ಲಿ ವಿರಾಗಿಯಂತೆ ಮೌನವಾಗಿದ್ದ ನೀವು ಈಗ ಮನುಷ್ಯ ಕುಲದ ಶತ್ರುಗಳ ಪರವಾಗಿ ಮಾತನಾಡಲು ಹೋರಾಟಗಾರರಂತೆ ತೋಳೇರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ನಿಮಗೆ ಯಾರನ್ನಾದರೂ ಸುಧಾರಣೆಮಾಡಬೇಕೆಂಬ ಪ್ರಾಮಾಣಿಕವಾದ ಇಚ್ಚೆ ಇದ್ದರೆ ಸೌಹಾರ್ದ ಬದುಕಿನ ಕನಸು ಕಟ್ಟಿಕೊಂಡ 22ರ ಹರಯದ ರಾಮ-ರಹೀಮರು ನಿಮ್ಮ ಸುತ್ತವೇ ಇದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿ. ಅವರಿಗೆ 32 ವರ್ಷದ ಹಿಂದಿನ ಬೊಳುವಾರು ಬೇಕಾಗಿದೆ. 

ಇದರಿಂದೆಲ್ಲ ಏನು ಉಪಯೋಗ ಎಂದು ಕೇಳುತ್ತೀರಾ? ನನ್ನನ್ನೊಮ್ಮೆ ನೋಡಿ. ನಿಮ್ಮ ಒಂದು ಲೇಖನದಿಂದ ಬದಲಾದವನು ನಾನು. ನಮ್ಮವರೆಂದು ಅನಿಸಿಕೊಳ್ಳಲು ನಿಮ್ಮ ಮನಸ್ಸು ಒಪ್ಪದೆ ಇದ್ದರೆ ನಿಮ್ಮ ಪಾಡಿಗೆ ನೀವು ವಿಶ್ರಾಂತ ಜೀವನ ಕಳೆಯುತ್ತಾ ಆರಾಮವಾಗಿರಿ. ನಮ್ಮ ಮನದೊಳಗಿನ ನಿಮ್ಮ ಹಳೆಯ ಬಿಂಬವಾದರೂ ಸುರಕ್ಷಿತವಾಗಿರುತ್ತದೆ. ಆದರೆ,ದಯವಿಟ್ಟು ನಮ್ಮೆದೆಗೆ ಗುರಿ ಇಟ್ಟಿರುವ ಬೇಟೆಗಾರರ ಬತ್ತಳಿಕೆಯ ಬಾಣವಾಗಬೇಡಿ,
ದ್ವೇಷಿಸಬೇಕಾದುದನ್ನು ದ್ವೇಷಿಸಬೇಕಾದಷ್ಟು ದ್ವೇಷಿಸದೆ ಇದ್ದರೆ, ಪ್ರೀತಿಸಬೇಕಾದುದನ್ನು ಪ್ರೀತಿಸಬೇಕಾದಷ್ಟು ಪ್ರೀತಿಸಲಾಗುವುದಿಲ್ಲ ಎಂದು ತಿಳಿದುಕೊಂಡವನು ನಾನು. ಕೋಮುವಾದಿಗಳನ್ನು ದ್ವೇಷಿಸದೆ ಇದ್ದರೆ ಜಾತ್ಯತೀತರನ್ನು ಪ್ರೀತಿಸುವುದು ಹೇಗೆ ಬೊಳುವಾರ್? ಓದು,ವಯಸ್ಸು,ಅನುಭವ ಎಲ್ಲದರಲ್ಲಿಯೂ ನಿಮ್ಮಿಂದ ಚಿಕ್ಕವನಾದ ನಾನು ತಿಳಿದುಕೊಂಡಿರುವುದು ತಪ್ಪಿರಲೂಬಹುದು. ತಪ್ಪೆನಿಸಿದರೆ ಹೊಟ್ಟೆಗೆ ಹಾಕಿಕೊಳ್ಳಿ, ಸರಿಯೆನಿಸಿದರೆ ತಲೆಗೆ ಹಾಕಿಕೊಳ್ಳಿ,

Friday, January 1, 2016

ಸ್ಪೂರ್ತಿಯಾಗುವ ಈ ಇಬ್ಬರು ಹೋರಾಟಗಾರರು

ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.
‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.

ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. "ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.
ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.
ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.

ಹೊಸ ವರ್ಷದ ಶುಭಾಶಯಗಳು

ಸಜ್ಜನರ ದನಿ ಮೊಳಗಲಿ...
ದುರ್ಜನರ ಸದ್ದಡಗಲಿ...
ಹೊಸ ವರ್ಷದ ಶುಭಾಶಯಗಳು..

Wednesday, December 30, 2015

'ನಾನವನಲ್ಲ, ನಾನವನಲ್ಲ'

'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್ನನ್ನು ದಾರಿಹೋಕನೊಬ್ಬ ಕೇಳಿದನಂತೆ:
'ಮತ್ತೆ ನೀನು ಯಾರು?
ನಾನು 'ರೋತಾ'
'ರೋತಾ'?

'ಹೌದು, ಹಿ..ಹಿ... ಎನ್ನುವುದನ್ನೇ ಇತ್ತೀಚೆಗೆ ಮರೆತುಬಿಟ್ಟಿದ್ದೇನೆ'' ಎಂದನಂತೆ ಪಡ್ಡೆಹುಡುಗ.

Sunday, December 27, 2015

ಸಾಮಾಜಿಕ ಜಾಲತಾಣ ಮತ್ತು `ಭಕ್ತ'ರು

ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಾಲಗಂಗಾಧರ್ ಕೃಪಾಪೋಷಿತ ಸಿಎಸ್ಎಲ್ ಸಿ ಮುಚ್ಚಲಾಯಿತು, ಕಾಮಿ ಸ್ವಾಮಿಯೊಬ್ಬನಿಂದ ಪೀಡಿತರಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ಕೊಟ್ಟರು, ಮೂಢನಂಬಿಕೆ ನಿಷೇಧ ಕಾಯಿದೆಗೆ ಒತ್ತಾಯಿಸಿ ಜಾಥಾ ನಡೆಯಿತು, ಡಾ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಿತು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಾಸು ಮಾಡಿದರು ಮತ್ತು ಸಹಮನಸ್ಕರು ಅವರನ್ನು ಬೆಂಬಲಿಸಿ ಸಭೆ ನಡೆಸಿದರು, ಟೌನ್ ಹಾಲ್ ಮುಂದೆ ಯಾರೋ ಬೀಫ್ ತಿಂದರು, ಮುಖ್ಯಮಂತ್ರಿಗಳು ‘ನಾನು ಬೀಪ್ ತಿಂದರೆ ಕೇಳಲು ನೀವು ಯಾರು’ ಎಂದು ಪ್ರಶ್ನಿಸಿದರು, ಮಂಗಳೂರಿನಲ್ಲಿ ಸಮಾನಮನಸ್ಕ ಯುವಕ-ಯುವತಿಯರು ಕೂಡಿ ಜನನುಡಿ ನಡೆಸಿದರು. ಮಂಗಳೂರಿನ ಹೋರಾಟಗಾರ್ತಿ ವಿದ್ಯಾ ದಿನಕರ್ ‘ದಿಲ್ ವಾಲೆ’ ಚಿತ್ರಪ್ರದರ್ಶನವನ್ನು
ಬಲತ್ಕಾರವಾಗಿ ತಡೆಹಿಡಿದಿದ್ದನ್ನು ವಿರೋಧಿಸಿ ಪೊಲೀಸರಿಗೆ ದೂರು ಕೊಟ್ಟರು, ಇದೇಕಾರಣಕ್ಕೆ ಅವರ ಮೇಲೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮಾತುಗಳ ಮೂಲಕ ವಾಗ್ದಾಳಿ ನಡೆದಾಗ ವಿದ್ಯಾ ಇನ್ನೊಂದು ದೂರು ಕೊಟ್ಟರು, ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಪ್ರಚಾರ ನಡೆಯಿತು. ಇವೆಲ್ಲದರ ಹಿಂದೆ ಇರುವ ವ್ಯಕ್ತಿ ಯಾರು ಗೊತ್ತೇ? ಅದೇ ಕಾಣೆ ಮೀನು ತಿನ್ನುವ ನಾನು. ಸಾಕ್ಷಿ ಬೇಕಿದ್ದರೆ ಫೇಸ್ ಬುಕ್ ನಲ್ಲಿ ಈ ‘ಭಕ್ತ’ ರ ಸ್ಟೇಟಸ್ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವ ‘ಹುಚ್ಚ ವೆಂಕಟ್’ ಗಳ ಪ್ರತಿಕ್ರಿಯೆ ನೋಡಿ.
ಮೇಲೆ ಉಲ್ಲೇಖಿಸಿರುವ ಎಲ್ಲ ಘಟನೆಗಳನ್ನು ಹೃತ್ಪೂರ್ವಕವಾಗಿ ನಾನು ಬೆಂಬಲಿಸುತ್ತೇನೆ, ಇವುಗಳ ಸೂತ್ರಧಾರ ನಾನೇ ಆಗಿದ್ದರೆ ನನ್ನ ಜನ್ಮ ಪಾವನವಾಗುತ್ತಿತ್ತು. ಸುಮ್ಮನೆ ಬಾಯಿಮುಚ್ಚಿಕೊಂಡು ಈ ಎಲ್ಲ ಸಾಧನೆಗಳ ಗರಿಯನ್ನು ನಾನೇ ಯಾಕೆ ಮುಡಿದುಕೊಳ್ಳಬಾರದು ಎಂದು ಕೂಡಾ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಒಳಗಿಂದ ಪ್ರಶ್ನಿಸುತ್ತಿರುವ ಆತ್ಮಸಾಕ್ಷಿಗೆ ಸತ್ಯ ಹೇಳಬೇಕಲ್ಲಾ?
ಸಿಎಸ್ ಎಲ್ ಸಿ ಮುಚ್ಚಲು ದೊಡ್ಡ ಹೋರಾಟವೇ ನಡೆದಿದೆ, ಹಲವಾರು ಹಿರಿಯರು, ಯುವಕರು ಇದಕ್ಕಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ, ನಾನಾ ಬಗೆಯ ಕಿರುಕುಳಗಳನ್ನು ಎದುರಿಸಿದ್ದಾರೆ. ಕೊನೆಗೂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಟೌನ್ ಹಾಲ್ ಮುಂದಿನ ಪ್ರತಿಭಟನೆಗಳಿರಲಿ, ಮಂಗಳೂರಿನಲ್ಲಿ ನಡೆದ ಜನನುಡಿಯಿರಲಿ ಇಲ್ಲವೇ ಇನ್ಯಾವುದೋ ಹೋರಾಟ ಇರಲಿ ಇದರ ಹಿಂದೆ ಕೂಡಾ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕೆಂಬ ಬದ್ದತೆಯ ಜತೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ-ನೆರವಾಗಬೇಕೆಂಬ ಕಾಳಜಿಯ ನೂರಾರು ಯುವಕ-ಯುವತಿಯರ ಶ್ರಮವಿದೆ. ಮುನೀರ್,ಅನಂತನಾಯಕ್, ನವೀನ್, ಭಾಸ್ಕರಪ್ರಸಾದ್, ದಿನೇಶ್ ಕುಮಾರ್, ದಯಾನಂದ್, ಹರ್ಷ, ಶ್ರೀಧರ್ ಪ್ರಭು, ಶ್ರೀನಿವಾಸ್,ಪ್ರಭಾ, ಅಕ್ಷತಾ, ಸುಭಾಷ್, ಕಿರಣ್ , ಚೇತನಾ, ಬಸವರಾಜ್, ಇರ್ಷಾದ್, ಪ್ರಶಾಂತ್, ಲಿಂಗರಾಜು, ಮೊದಲಾದವರು ಬದುಕಿನಲ್ಲಿ ಅನ್ಯಾಯ-ಅಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳದೆ ಇದೇಕಾರಣಕ್ಕೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡವರನ್ನು ಎದುರುಹಾಕಿಕೊಂಡವರು. ನವೀನ್ ಹೇಳಿರುವ ಹಾಗೆ ಎಸ್ ಇ ಝಡ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ವಿದ್ಯಾ ದಿನಕರ್ ಇಲ್ಲದೆ ಇದ್ದರೆ ಮಂಗಳೂರು ಭೋಪಾಲ್ ಆಗುತ್ತಿತ್ತು. ಮುನೀರ್ ಗೆ ಇರುವ ಪ್ರಾಣಬೆದರಿಕೆ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ.
ಈ ಯುವ ಹೋರಾಟಗಾರರ ಮುಂದೆ ನಾನು ಏನೂ ಅಲ್ಲ. ನಾನಿದ್ದರೂ, ಇಲ್ಲದೆ ಇದ್ದಿದ್ದರೂ ಇವರ ಹೋರಾಟ ಈಗಿನಂತೆಯೇ ಮುಂದುವರಿಯುತ್ತಿತ್ತು. ನನ್ನ ಬಲ-ಬೆಂಬಲದ ಅಗತ್ಯ ಇವರಿಗಿಲ್ಲ. ಈ ಯುವಕ-ಯುವತಿಯರು ನಡೆಸುವ ಹಲವಾರು ಸಾಹಸಗಳ ಬಗ್ಗೆ ನನಗೆ ಗೊತ್ತೇ ಇರುವುದಿಲ್ಲ. ಈ ನನ್ನ ಮಾತುಗಳು ಪಲಾಯನವಾದವೆಂದು ತಿಳಿದುಕೊಳ್ಳಬಾರದೆಂಬ ಕಾರಣಕ್ಕಾಗಿ ಮಾತ್ರ ಈ ಕೊನೆ ಮಾತು: ಈ ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ಅವರ ಮೇಲೆ ಭರವಸೆಯೂ ಇದೆ. ಕಷ್ಟದ ಸಮಯದಲ್ಲಿ ಇವರ ಹಿಂದೆ ಅಲ್ಲ, ಮುಂದೆ ಇರುತ್ತೇನೆ. ಇದಕ್ಕಾಗಿ ಯಾವ ಬೆಲೆ ತೆರಲೂ ಕೂಡಾ ಸಿದ್ದನಿದ್ದೇನೆ. ಬದುಕಿನಲ್ಲಿ ಕಳೆದುಕೊಳ್ಳಲು ಹೆದರುವಷ್ಟು ಯಾವುದೂ ದೊಡ್ಡದಿರುವುದಿಲ್ಲ.

Friday, December 25, 2015

ವಿದ್ಯಾ ದಿನಕರ್ ಮತ್ತು ಒಂದಷ್ಟು ಧರ್ಮಾಂಧ ಯುವಕರು

ವಿದ್ಯಾ ದಿನಕರ್ ಅವರನ್ನು ಒಂದಷ್ಟು ಧರ್ಮಾಂಧ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಂಡಾಗ ತಪ್ಪು ನಮ್ಮದ್ದಲ್ಲದಿದ್ದರೂ ಗಂಡೆಂದು ಹೇಳಿಕೊಳ್ಳಲು, ಪರಿಚಯವಿರುವ ಹೆಣ್ಣು ಮಕ್ಕಳ ಎದುರು ಕೂಡಾ ತಲೆಎತ್ತಲು ನಮಗೆ ಮುಜುಗರವಾಗುತ್ತಿರುವುದು ನಿಜ. ಆದರೆ ಇಂದು ಮಂಗಳೂರಿನಲ್ಲಿ ವಿದ್ಯಾ ದಿನಕರ್ ಅವರ ಮನೆಯಲ್ಲಿ ಇಬ್ಬರು ಗಂಡಸರನ್ನು ಭೇಟಿಯಾದ ನಂತರ ಗಂಡಾಗಿ ಹುಟ್ಟಿರುವ ಬಗ್ಗೆ ಹೆಮ್ಮೆ ಅನಿಸಿತು. ನಿಜಹೇಳಬೇಕೆಂದರೆ ವಿದ್ಯಾ ಅವರ ನಿಜವಾದ ಶಕ್ತಿಯೇ ಈ ಇಬ್ಬರು ಗಂಡಸರು. ಈ ಇಬ್ಬರಲ್ಲಿ ಒಬ್ಬರು ೮೪ ವರ್ಷದ ತಂದೆ,ಇನ್ನೊಬ್ಬರು ಹೆಂಡತಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವ ಗಂಡ ನಟೇಶ್. ಮಗಳು ರೈಲಿನಲ್ಲಿ ಬಂದಿಳಿದಾಗ ಈ ಇಳಿವಯಸ್ಸಿನಲ್ಲಿಯೂ ತಾನೇ ಡ್ರೈವ್ ಮಾಡಿಕೊಂಡು ಬಂದು ಮನೆಗೆ ಕರೆದೊಯ್ಯುತ್ತಾರೆ ಈ ತಂದೆ.
ಅಷ್ಟೊಂದು ಪ್ರೀತಿ ವಿದ್ಯಾಳ ಮೇಲೆ.ಈ ತಂದೆಗೆ ಇನ್ನೂ ಮಗಳ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅವಹೇಳನಕಾರಿಯಾದ ದಾಳಿ ಬಗ್ಗೆ ತಿಳಿದಿಲ್ಲ. ತಿಳಿದಿದ್ದರೆ ಆ ವಯಸ್ಸಾದ ತಂದೆತಾಯಿ ಎಷ್ಟು ನೊಂದುಕೊಳ್ಳುತ್ತಿದ್ದರೇನೋ? ನಟೇಶ್ ಗೆ ಎಲ್ಲವೂ ಗೊತ್ತು. ವಿದ್ಯಾರಿಗೆ ಪ್ರಾಣ ಬೆದರಿಕೆ ಇದೇ ಮೊದಲ ಸಲವೇನಲ್ಲ.ಸಾಮಾನ್ಯ ಗಂಡಾಗಿದ್ದರೆ ಊರಿನ ಉಸಾಬರಿ ಯಾಕೆ ಎಂದು ಹೆಂಡತಿಗೆ ಗದರಿಸುತ್ತಿದ್ದರೇನೋ. ಆದರೆ ನಟೇಶ್ ವಿದ್ಯಾ ಅವರ ಹೆಜ್ಜೆ ಜತೆ ಹೆಜ್ಜೆ ಹಾಕಿ ಜತೆಯಲ್ಲಿ ನಿಂತಿದ್ದಾರೆ. ಈ ಕುಟುಂಬವನ್ನು ನೋಡಿದಾಗ ಎಲ್ಲ ಹೆಣ್ಣುಮಕ್ಕಳಿಗೆ ಇಂತಹ ತಂದೆ ಮತ್ತು ಗಂಡ ಸಿಕ್ಕಿಬಿಟ್ಟರೆ ನಮ್ಮಲ್ಲಿ ಎಷ್ಟು ಮಂದಿ ವಿದ್ಯಾ ದಿನಕರ್ ಗಳು ಹುಟ್ಟಿಕೊಳ್ಳುತ್ತಿದ್ದರೇನೋ ಎಂದು ಅನಿಸಿದ್ದು ನಿಜ. ಕೆಟ್ಟ ಗಂಡಸರಿಗೆ ಶಾಪಹಾಕುವ ಜತೆಯಲ್ಲಿ ಗಂಡುಜಾತಿ ಹೆಮ್ಮೆ ಪಡುವ ಈ ಇಬ್ಬರು ಗಂಡಸರಿಗೆ ನಿಮ್ಮದೊಂದು ಶುಭಹಾರೈಕೆ ಇರಲಿ.

Tuesday, December 22, 2015

ಜನನುಡಿಯ ಜಡಿಮಳೆ

ನನ್ನ ಮಗಳು ಸುಮಾರು ಮೂರು ವರ್ಷದವಳಾಗಿದ್ದಾಗ ಒಮ್ಮೆ ತುಂಟಾಟಕ್ಕಾಗಿ ಗದರಿದ್ದೆ. ತಕ್ಷಣ ಅವಳು ‘ಎಲ್ಲರೂ ಮನೆಗೆ ಬಂದು ನಿನ್ನನ್ನು ಸಾರ್, ಸಾರ್ ಎಂದು ಹೇಳುತ್ತಿದ್ದಾರಲ್ಲಾ ಅದಕ್ಕೆ ನಿನಗೆ ಸೊಕ್ಕು’ ಎಂದು ತಿರುಗಿ ನನಗೆ ಗದರಿದ್ದಳು. ಒಂದು ಕ್ಷಣ ಅವಕ್ಕಾಗಿದ್ದೆ. ಈಗಲೂ ಅವಳೇ ನನ್ನ ಗುರು. ನಾನು ಕೊಬ್ಬಿಹೋಗಿದ್ದೇನೆ ಎಂದು ಅನಿಸಿದಾಗಲೆಲ್ಲ ಮಗಳ ಗದರಿಕೆಯನ್ನು ನೆನಪುಮಾಡಿಕೊಂಡು ಇನ್ನಷ್ಟು ವಿನೀತನಾಗಲು ಪ್ರಯತ್ನಿಸುತ್ತೇನೆ.

ಇದನ್ನು ನೆನಪುಮಾಡಿಕೊಳ್ಳಲು ಕಾರಣ ಇದೆ. ಜನನುಡಿಯ ಜಡಿಮಳೆ ಸುರಿದ ನಂತರ ಮರದ ಮೇಲಿಂದ ಸಣ್ಣಗೆ ಮಳೆ ಹನಿಯಲಾರಂಭಿಸಿದೆ. ‘ಏನ್ಸಾರ್ ಅಷ್ಟೊಂದು ಬಿಝಿಯಾಗಿಬಿಟ್ಟಿರಿ? ಎದುರಿಗೆ ಸಿಕ್ಕರೂ ಮಾತನಾಡಿಸಲಿಲ್ಲ? ನಿಮ್ಮ ಜತೆ ಜಗಳ ಮಾಡುವುದಿತ್ತು ಸಾರ್, ಮಾತಿಗೆ ಸಿಗಲಿಲ್ಲ’ ಎಂಬೀತ್ಯಾದಿ ಸಣ್ಣ ದನಿಯ ಆಕ್ಷೇಪಗಳ ಜತೆಯಲ್ಲಿ ‘ ಹಿಂದೆ ಚೆನ್ನಾಗಿದ್ದೀರಿ ಸಾರ್, ವಿಧಾನಸೌಧಕ್ಕೆ ಹೋದ ನಂತರ ನೀವು ಬದಲಾಗಿಬಿಟ್ಟಿದ್ದೀರಿ, ಸ್ವಲ್ಪ ಕೊಬ್ಬು ಬಂದಿದೆ’ ಎಂದು ಕೆಲವರು ಮೆಸೆಜ್ ಬಾಕ್ಸ್ ನಲ್ಲಿ ಚುಚ್ಚಿದ್ದಾರೆ. (ಇದರಲ್ಲಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ದತೆ ನನಗಿದೆ) ಸಮಾನಮನಸ್ಕರಾದ ನಮ್ಮ ಜತೆಯಲ್ಲಿಯೇ ಕಳೆದ ಕೆಲವು ವರ್ಷಗಳಿಂದ ಇರುವ,ನಮ್ಮೆಲ್ಲ ಚಟುವಟಿಕೆಗಳ ಭಾಗವಾಗಿಯೇ ಇರುವ ಮತ್ತು ನಾವೆಲ್ಲರೂ ಪ್ರೀತಿಯಿಂದ ‘ಹೈಕಮಾಂಡ್’ ಎಂದು ಕರೆಯುವ ಕಿರಿಯ ಗೆಳತಿಯೊಬ್ಬರು ನಾನು ಷೇರ್ ಮಾಡಿದ ಗ್ರೂಪ್ ಪೋಟೊದಲ್ಲಿ ತಾನು ಇಲ್ಲದಿರುವುದನ್ನು ಕಂಡು ನೊಂದು ಮೆಸೆಜ್ ಹಾಕಿದ್ದಾರೆ. ( ಮೆಸೆಜ್ ವಿವರ ತುಸು ಕಟುವಾಗಿರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿಲ್ಲ). ಅವರ ಮಾತಿನಲ್ಲಿ ಸ್ನೇಹಿತರೆಲ್ಲ ಅವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆಕ್ಷೇಪ ಇದೆ.
ಈ ವರ್ಷದ ಜನನುಡಿಯಲ್ಲಿ ಭಾಗವಹಿಸಿದ್ದವರಲ್ಲಿ ಯುವಕ-ಯುವತಿಯರ ಸಂಖ್ಯೆಯೇ ದೊಡ್ಡದು. ಅವರೆಲ್ಲರ ಮುಖಪರಿಚಯ ನನಗಿಲ್ಲ, ಕೆಲವರು ಫೇಸ್ ಬುಕ್ ನಲ್ಲಿ ಹೆಸರಿನ ಮೂಲಕ ಪರಿಚಿತರು. ಇದರಿಂದಾಗಿ ಎದುರಿಗೆ ಸಿಕ್ಕಾಗಲು ಗುರುತಿಸಲಾಗದೆ ಮಾತನಾಡಿಸದೆ ಇದ್ದಿರಬಹುದು. ಎಲ್ಲರನ್ನು ಮಾತನಾಡಿಸಿ ಪರಿಚಯಿಸಿಕೊಳ್ಳಬೇಕೆಂಬ ಆಸೆ ನನಗಿತ್ತು, ನನ್ನಂತೆ ಉಳಿದವರಲ್ಲಿಯೂ ಇದ್ದಿರಬಹುದು. ಆದರೆ ಮುನೀರ್,ನವೀನ್, ಅನಂತನಾಯ್ಕ್ ಮೊದಲಾದ ಕಿರಿಯ ಗೆಳೆಯರ ಹೆಗಲಮೇಲಿನ ಭಾರ ಹಂಚಿಕೊಳ್ಳುವ ಉದ್ದೇಶದಿಂದ ಈ ಬಾರಿ ಸಭಾಂಗಣದ ಮುಂಭಾಗದಲ್ಲಿಯೇ ಹೆಚ್ಚು ಕಾಲ ಇದ್ದೆ.
ಊಟದ ಬಿಡುವಿನ ಸಮಯದಲ್ಲಿ ಯಾರೋನಾಲ್ಕೈದು ಗೆಳೆಯರು ಹಿಡಿದು ನಿಲ್ಲಿಸಿ ಪ್ರಶ್ನೆಗಳ ಸುರಿಮಳೆ ಸುರಿಸಿ ಹಿಂಡಿಹಿಪ್ಪೆ ಮಾಡಿಬಿಡುತ್ತಿದ್ದರು. ಆದ್ದರಿಂದ ಪರಿಚಯಿಸಿಕೊಳ್ಳಬೇಕಾದವರನ್ನು ಪರಿಚಯಿಸಿಕೊಳ್ಳಲಾಗಲಿಲ್ಲ ಎಂಬ ನೋವು ನನಗೂ ಇದೆ. ಅದು ಉಳಿದವರಲ್ಲಿಯೂ ಇರಬಹುದು. ಆದರೆ ಇದ್ಯಾವುದೂ ಉದ್ದೇಶಪೂರ್ವಕವಾದುದು ಅಲ್ಲ. ರಾತ್ರಿ ದೇವನೂರ ಜತೆ ಪೋಟೊ ತೆಗೆಸುವಾಗಲೂ ಅಲ್ಲಿದ್ದವರಷ್ಟೇ ಸೇರಿದ್ದರು. ಪೋಟೊದಲ್ಲಿ ಇಲ್ಲದವರು ನಮ್ಮವರಲ್ಲ ಎಂದು ಹೇಳಿ ನಾನು ಯಾವ ನರಕಕ್ಕೆ ಹೋಗಲಿ?
ನನ್ನ ಪ್ರೀತಿಗೆ, ಸ್ನೇಹಕ್ಕೆ ಅರ್ಹರೆನಿಸಿಕೊಂಡವರು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು ನನಗನಿಸಿದರೆ ಅವರ ಕತ್ತುಪಟ್ಟಿಹಿಡಿದು ಯಾಕೋ ಮಾತನಾಡುತ್ತಿಲ್ಲ ಎಂದು ಕೇಳುವ ಸ್ವಭಾವ ನನ್ನದು. ನನ್ನ ಕಿರಿಯ ಗೆಳೆಯ-ಗೆಳತಿಯರು ನನಗೆ ಹಾಗೆಯೇ ಮಾಡಬೇಕೆಂದು ನಾನು ಬಯಸುತ್ತೇನೆ.
ಏನೇ ಇರಲಿ, ಮತ್ತೊಮ್ಮೆ ನನ್ನ ಮಗಳ ಗದರಿಕೆಯನ್ನು ನೆನಪುಮಾಡಿಕೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್.

Dinesh Amin Mattu: Jananudi 2015 @ Mangalore

Wednesday, December 16, 2015

ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

ನಾರಾಯಣ ಗುರುಗಳು ಜೀವಂತವಾಗಿದ್ದಿದ್ದರೆ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಟ್ರಸ್ಟ್ (ಎಸ್ ಎನ್ ಡಿಪಿ) ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಖಂಡಿತ ಕರೆಯುತ್ತಿರಲಿಲ್ಲ. ಮೋದಿಯವರ ಪರಿವಾರ ಪ್ರತಿನಿಧಿಸುವ ಸಿದ್ಧಾಂತದ ವಿರುದ್ಧವೇ ನಾರಾಯಣ ಗುರುಗಳು ಕೇರಳದಲ್ಲಿ ಚಳುವಳಿಯನ್ನು ಕಟ್ಟಿದವರು. 
‘ನಿಮ್ಮ ದೇವಸ್ಥಾನದೊಳಗೆ ನಮ್ಮನ್ನು ಪ್ರವೇಶಿಸಲು ಬಿಡದಿದ್ದರೆ ನಮ್ಮದೇ ದೇವಸ್ಥಾನ ಕಟ್ಟಿಕೊಳ್ಳುತ್ತೇವೆ, ನಮಗೆ ಪೂಜೆಯ ಹಕ್ಕು ಕೊಡದಿದ್ದರೆ ನಮ್ಮವರನ್ನೇ ಅರ್ಚಕರಾಗಿ ತಯಾರು ಮಾಡುತ್ತೇವೆ’ ಎಂದು ನಾರಾಯಣ ಗುರುಗಳು ಆ ಕಾಲದ ಪುರೋಹಿತಷಾಹಿಗೆ ಸವಾಲು ಹಾಕಿದ್ದರು. ಹೇಳಿದ್ದನ್ನು ಮಾಡಿಯೂತೋರಿಸಿದ್ದರು. 


ನಾರಾಯಣ ಗುರುಗಳ ಈ ಸಿದ್ಧಾಂತವನ್ನು ಮೋದಿ ಪರಿವಾರ ಅಂದು ಕೂಡಾ ಒಪ್ಪಿರಲಿಲ್ಲ, ಇಂದು ಕೂಡಾ ಒಪ್ಪುವುದಿಲ್ಲ. ಹೀಗಿದ್ದಾಗ ಎಸ್ ಎನ್ ಡಿಪಿ ಸಮಾರಂಭದಲ್ಲಿ ಭಾಗವಹಿಸುವ ನೈತಿಕ ಹಕ್ಕು ಮೋದಿಯವರಿಗೆಲ್ಲಿದೆ? ಅವರನ್ನು ಆಹ್ಹಾನಿಸಿ ನಾರಾಯಣ ಗುರುಗಳ ಚಿಂತನೆಗೆ ಅಪಚಾರವೆಸಗುವ ಅಧಿಕಾರ ಈಗಿನ ಎಸ್ ಎನ್ ಡಿಪಿ ನಾಯಕರಿಗೆಲ್ಲಿದೆ?
ನರೇಂದ್ರ ಮೋದಿಯವರು ಭಾರತದ ಚುನಾಯಿತ ಪ್ರಧಾನಿ, ದೇಶದ ಸರ್ವಶಕ್ತ ನಾಯಕ. ಹಿಂದೂಗಳ ಹೃದಯ ಸಾಮ್ರಾಟ, ಅವರ ಭಕ್ತರ ಪಾಲಿಗೆ ಡೆಮಿಗಾಡ್. ಅವರಿಗೆ ಅಸಾಧ್ಯವಾದುದು ಏನೂ ಇಲ್ಲ. ಹೀಗಿದ್ದಾಗ ದೇಶದ ಎಂಡೊಮೆಂಟ್ ದೇವಸ್ಥಾನಗಳಲ್ಲಿಯಾದರೂ ಅರ್ಚಕರನ್ನು ಜಾತಿ ಆಧಾರದಲ್ಲಿ ನೇಮಕ ಮಾಡದೆ ನಾರಾಯಣ ಗುರುಗಳು ಬಯಸಿದಂತೆ ಅರ್ಹತೆ ಆಧಾರದಲ್ಲಿ (ಆಗಮಶಾಸ್ತ್ರ ಪರಿಣತರು) ನೇಮಿಸುವ ಸಣ್ಣ ಕೆಲಸವನ್ನು ಅವರು ಯಾಕೆ ಮಾಡಬಾರದು?
ಅಂತಹದ್ದೊಂದು ಸಣ್ಣ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದರೆ ಕೇರಳದ ಮೊದಲ ಈಳವ ಮುಖ್ಯಮಂತ್ರಿ ಆರ್.ಶಂಕರ್ ಅವರ ಜತೆಯಲ್ಲಿ ಮೋದಿಯವರ ಪ್ರತಿಮೆಯನ್ನೂ ಸ್ಥಾಪಿಸಬಹುದು. ಭಕ್ತರಾದರೂ ತಮ್ಮ ದೇವರಿಗೆ ಬುದ್ದಿ ಹೇಳಿ, ಇಲ್ಲದಿದ್ದರೆ ನಾರಾಯಣ ಗುರುಗಳನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.