Sunday, January 3, 2016

ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ

ಬೊಳುವಾರು ಅವರ ಹಳೆಯ ಲೇಖನವೊಂದನ್ನು ಉಲ್ಲೇಖಿಸಿ ನಾನು ಬರೆದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ) ‘ಮೂವತ್ತಾಲ್ಕು ವರ್ಷಗಳಲ್ಲಿ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ..ಬೊಳುವಾರು ಅವರು ಬೆಳೆಯುತ್ತಾ ಹೋಗಿದ್ದಾರೆ.. ಅದನ್ನು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ,ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ, ಬೊಳುವಾರರನ್ನು ಅಂದಿನ ದಿನಗಳಿಗೆ ಕಟ್ಟಿಹಾಕಲು ನೋಡುತ್ತಿದ್ದಾರೆ..... ಎಂದೆಲ್ಲ ಬರೆದಿದ್ದಾರೆ. ಇದನ್ನು ಮೋಹನ ಗೌಡ ಎನ್ನುವವರು ನನ್ನ ವಾಲ್ ಗೆ ಅಂಟಿಸಿದ್ದಾರೆ.
ಅವರ ಬಡಬಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಬೊಳುವಾರು ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಓದಿರಿ:
- ಕಾನೂನು ಶಾಸ್ತ್ರದಲ್ಲಿ ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ, ಆದರೆ ಭಾರತದಲ್ಲಿ ಆಕಸ್ಮಿಕವಾಗಿ ಹುಟ್ಟಿ ಬದುಕನ್ನು ಅನಿವಾರ್ಯವಾಗಿ ಎದುರಿಸಬೇಕಾಗಿರುವ ಪ್ರತಿಯೊಬ್ಬಮುಸ್ಲಿಮನೂ ತನ್ನ ನಿರಪರಾಧಿ ಸಾಬೀತಾಗುವ ತನಕ ಅಪರಾಧಿಯೇ ಆಗಿ ಉಳಿಯಬೇಕಾಗಿದೆ.
- ಮುಸ್ಲಿಮರು ಜನ್ಮತ: ಕ್ರೂರಿಗಳು, ಪ್ರತಿಯೊಂದು ಮನೆಯಲ್ಲೂ ಮಾರಕ ಆಯುಧಗಳಿವೆ, ಪ್ರತಿಯೊಂದು ಮಸೀದಿಯೂ ಶಸ್ತ್ರಾಗಾರ, ಮುಸ್ಲಿಮರೆಲ್ಲ ನಾಲ್ಕು ಮದುವೆಯಾಗಿ ನಲವತ್ತು ಮಕ್ಕಳನ್ನು ಹುಟ್ಟಿಸುತ್ತಾರಾದ್ದರಿಮದ ಅವರ ಜನಸಂಖ್ಯೆ ಅಧಿಕವಾಗುತ್ತದೆ. ಅವರು ಕುಟುಂಬ ಯೋಜನೆಗೆ ತಯಾರಾಗಿಲ್ಲ, ರಾಷ್ಟ್ರೀಯ ಜನಪ್ರವಾಹದೊಂದಿಗೆ ಬೆರೆಯುವುದಿಲ್ಲ. ಅವರು ಪಾಕಿಸ್ತಾನದ ಏಜಂಟರು. ಭಾರತ ಪಾಕಿಸ್ತಾನ ವಿರುದ್ಧ ಹಾಕಿಯಲ್ಲಿ ಸೋತಾಗ ರೇಡಿಯೋಗೆ ಹೂಮಾಲೆ ಹಾಕಿದರು ಇತ್ಯಾದಿ ಪುಟಗಟ್ಟಲೆ ಬರೆಯಬಹುದಾದ ಸಂದಿಗ್ದತೆಯಿಂದ ಭಾರತೀಯ ಮುಸ್ಲಿಮನು ಸಣ್ಣವನಾಗುವುದು ಅನಿವಾರ್ಯವಾಗಿದೆ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕಪಟ್ಟವೇರಿ ದವರೆಲ್ಲ ಮೇಲ್ವರ್ಗದಿಂದ ಬಂದವರು (ಅಂಬೇಡ್ಕರ್,ರಾಮ್ ಮೊದಲಾದವರು ಕೆಲವು ಅಪವಾದಗಳು, ಅಪವಾದಗಳು ವಾದವನ್ನು ಬಲಪಡಿಸುತ್ತದೆ). ಎಲ್ಲ ಕಾಲದಲ್ಲಿ ಮತ್ತು ಎಲ್ಲ ದೇಶಗಳಲ್ಲಿ ನಡೆದುಬಂದ ಸಂಪ್ರದಾಯ ಇದು. ರಾಜರುಗಳನ್ನು ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು ಮತ್ತು ವಿರೋಧಿಸುವವರು ಕೂಡಾ ಮೇಲ್ವರ್ಗದಿಂದಲೇ ಬಂದವರಾಗಿರುತ್ತಾರೆ....ವಿದ್ಯೆ,ಬುದ್ದಿವಂತಿಕೆಗಳನ್ನು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಳ್ಳುವ ಮೇಲ್ವರ್ಗದವರಿಗೆ ಯಾವುದೇ ಕಠಿಣ ಶ್ರಮ ಅಸಾಧ್ಯವಾಗಿರುವುದರಿಂದ ಅವರಿಗೆ ರಾಜಾಶ್ರಯ, ರಾಜನಂಟು, ಬದುಕಿನ ಅನಿವಾರ್ಯತೆಯೂ ಆಗಿರುತ್ತದೆ.
- ಭಾರತಕ್ಕೆ ಬ್ರಿಟಿಷರು ವ್ಯಾಪಾರಕ್ಕಾಗಿ (ಬ್ರಿಟಿಷರು ಭಾರತಕ್ಕೆ ವ್ಯಾಪಾರದ ನಿಮಿತ್ತ ಬಂದವರೆಂದೂ, ಮುಸ್ಲಿಮರು ಆಕ್ರಮಣ ಮಾಡಿದವರೆಂದೂ ಬರೆದಿರುವ ಚರಿತ್ರೆ ಪುಸ್ತಕಗಳನ್ನೇ ನಮ್ಮ ಮಕ್ಕಳು ಓದುತ್ತಿದ್ದಾರೆ) ಬಂದಾಗ ಅವರಿಗೆ ದುಂಬಾಲು ಬಿದ್ದು ಸರಕಾರಿ ಕೆಲಸಗಳನ್ನು ದಕ್ಕಿಸಿಕೊಂಡು ಐ ಎ ಎಸ್ ಆಗಿ ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಬಾರ್ ಅಟ್ ಲಾ ಓದಿಸಿದವರೂ ಭಾರತದೊಳಗೆ ಇಸ್ಲಾಂ ಆಕ್ರಮಣ ಮಾಡಿದಾಗ ಅವರ ಬೆನ್ನುಬಿದ್ದು ಪದವಿಯ ಆಸೆಗಾಗಿ ಮತಾಂತರಗೊಂಡು, ದಿವಾನರುಗಳಾಗಿ, ಜಮೀನ್ದಾರರಾಗಿ ಮೆರೆದವರೂ ಇದೇ ಮೇಲ್ವರ್ಗದ ಮಂದಿಗಳು ಮಾತ್ರ......
- ಭಾರತದ ಮುಸ್ಲಿಮರು ವಿಭಜನೆಯ ಪಿಂಡದ ಹೊರೆಯೊಂದಿಗೆ ಉಳಿಯಬೇಕೆಂದು ಬಯಸುವ ರಾಜಕೀಯ ಹಿಂದೂವಾದಿಗಳು ಚರಿತ್ರೆಯ ಪುಟಗಳನ್ನು ತಮ್ಮ ಕಣ್ಣಿನ ಅಳತೆಯಲ್ಲಿಯೇ ಓದುತ್ತಾ ಭಾಷ್ಯ ಬರೆಯುತ್ತಿದ್ದಾರೆ. ‘ಹಿಂದೂ’ ಎಂಬ ಪದವನ್ನು ಒಂದು ಜಾತಿಯ ಪದವಲ್ಲ, ಒಂದು ಪ್ರಾದೇಶಿಕ ಪದ ಎಂಬೀತ್ಯಾದಿ ಬರೆಯುತ್ತಾ ಎರಡು ಪ್ಯಾರಾ ಬರೆಯುವುದರಲ್ಲಿಯೇ ಗಲಿಬಿಲಿಗೊಂಡು ಗೊಂದಲದಲ್ಲಿಯೇ ಮುಕ್ತಾಯಗೊಳಿಸುತ್ತಾರೆ.
- ‘ನೀನು ಮಸೀದಿಗೆ ಹೋಗುವುದೇ ಇಲ್ವಾ?’ ಎಂಬ ಪ್ರಶ್ನೆಯಲ್ಲಿಯೇ ಖುಷಿಗೊಳ್ಳುವ ಗೆಳೆಯ ಗೋಪಾಲ ಅವನ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಬಹಳ ಜೋಪಾನವಾಗಿ ತಂದುಕೊಡುತ್ತಾನೆ....’ಇಷ್ಟೆಲ್ಲ ಮಾತನಾಡುವ ನೀನು ನಿನ್ನ ತಾಯಿಯ ಹೆಣವನ್ನು ಮಸೀದಿಗೆ ಯಾಕೆ ಕೊಂಡುಹೋಗಿ ದಪನಮಾಡಿದೆ ಎಂದು ನನ್ನೊಡನೆ ಪ್ರಶ್ನಿಸಿದ ಸುರೇಶ ಕಿಣಿಯೊಡನೆ ‘ಮತ್ತೇನುಮಾಡಬೇಕು?’ ಎಂದು ಪ್ರಶ್ನಿಸಿದರೆ ಸ್ಮಶಾನದಲ್ಲಿ ಸುಡಬೇಕಿತ್ತು ಎನ್ನುತ್ತಾನೆ.
- ಮುಸ್ಲಿಮನು ರಾಷ್ಟ್ರೀಯವಾದಿ ಆಗುವುದೆಂದರೆ ‘ಹಿಂದು’ ಆಗುವುದುಮಾತ್ರ . ಇಂತಹ ಸಣ್ಣ ಯೋಚನೆಯ ಹಿಂದೂಗಳದ್ದೇ ದೊಡ್ಡ ಗುಂಪಾಗಿರುವುದರಿಂದಲೇ ದೇಶದ ಮುಸ್ಲಿಮರು ಮತ್ತಷ್ಟು ಜಾತಿಯವಾದಿಯಾಗುತ್ತಾರೆ. ಹತ್ತರಲ್ಲಿ ಹನ್ನೊಂದಾಗದಿದ್ದರೆ, ಎರಡು ಕಡೆಗಳಿಂದಲೂ ಉಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
- ಗಜನಿ ವಿಗ್ರಹಗಳನ್ನು ಒಡೆದದ್ದು ಸೋಮನಾಥನ ಮೇಲಿನ ವೈರದಿಂದಲ್ಲ, ಅದರೊಳಗಿದ್ದ ಮಣಗಟ್ಟಲೆ ಬಂಗಾರವನ್ನು ದೋಚಲಿಕ್ಕಾಗಿ ಹಾಗೂ ಅಂದು ಗಜನಿಯ ಸೈನ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು ಎನ್ನುವುದು ಇತಿಹಾಸದ ನಿಜಸಂಗತಿಗಳು.
- ಇಷ್ಟೆಲ್ಲ ಹೇಳಿದ ಮಹಮದರು ಕೊನೆಗೆ ‘’ ರಾಷ್ಟ್ರೀಯ ಜನಪ್ರವಾಹದಿಂದ ಮುಸ್ಲಿಮರು ಹೊರಗುಳಿಯಬೇಕಾಗಿ ಬಂದಿರುವ ನಮ್ಮ ದೇಶದ ವ್ಯವಸ್ಥೆ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸುವುದಕ್ಕೆ ಅನುಕೂಲವಾಗಬಲ್ಲ ಕೆಲವು ಪ್ರಾಮಾಣಿಕ ನಿಜಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಅಷ್ಟೆ. ಮುಂದಿನ ತಲೆಮಾರು ಕೂಡಾ ನಮ್ಮಂತೆ ಮೋಸ ಹೋಗದಿರಲು ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಬೇಕು’’ ಎಂದು ಲೇಖನವನ್ನು ಕೊನೆಗೊಳಿಸುತ್ತಾರೆ.
ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ. ನೀವಂತೂ ಬದಲಾಗಿದಂತೆ ಕಾಣುವುದಿಲ್ಲ. ಇನ್ನೂ ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಯಾವುದು ಬದಲಾಗಿದೆ?
ಹೌದು, ಆ ಲೇಖನದ ಲೇಖಕರು ಬದಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂಬ ಅನುಮಾನವನ್ನು ಗೆಳೆಯರು ವ್ಯಕ್ತಪಡಿಸುತ್ತಿರುವುದು ನಿಜ. ಅದಕ್ಕಲ್ಲವೇ ಈ ಚರ್ಚೆ ನಡೆಯುತ್ತಿರುವುದು. ಸೂಕ್ಷ್ಮವಾಗಿ ನೋಡಿದರೆ ಅಂತಹದ್ದೊಂದು ಸೂಚನೆ ಆ ಲೇಖನದಲ್ಲಿಯೂ ಕಾಣುತ್ತದೆ.

No comments:

Post a Comment