Monday, August 31, 2015

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ..

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ಎನ್ನುವ ಬಗ್ಗೆ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿದೆ. ನಮ್ಮ ಸ್ನೇಹಿತರೇ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.ಬಲಿಪಶುಗಳ ಸಾಲಿನಲ್ಲಿ ನಾನು ಹಿಂದೆ ಇದ್ದೇನೆ ನನಗಿಂತ ಮುಂದೆ ಹಲವರಿದ್ದಾರೆ, ನನ್ನ ನಂಬರ್ ಶೀಘ್ರದಲ್ಲಿ ಬರಲಾರದೆಂದು ಇಲ್ಲಿಯ ವರೆಗೆ ನಿಶ್ಚಿಂತೆಯಾಗಿದ್ದೆ.

ಯಾಕೆಂದರೆ ಇತ್ತೀಚಿನ ಸಂಘಿಗಳ ಜತೆಗಿನ ವಾದ-ವಿವಾದ, ಹಲ್ಲೆ ಪ್ರಯತ್ನ, ಬೆದರಿಕೆ, ಸೋಷಿಯಲ್ ಮೀಡಿಯಾದಲ್ಲಿನ ಹೇಟ್ ಕ್ಯಾಂಪೇನ್ ಇವುಗಳೆಲ್ಲದರ ಆಧಾರದಲ್ಲಿ ಸಂಭವನೀಯ ಬಲಿಪಶುಗಳ ಪಟ್ಟಿ ಮಾಡುವುದಾದರೆ ಕ್ರಮವಾಗಿ ಭಗವಾನ್, ಬಂಜಗೆರೆ, ಯೋಗೇಶ್ ಮಾಸ್ತರ್, ಗೌರಿ ಲಂಕೇಶ್, ವಿಮಲಾ, ಮುನೀರ್ ಮೊದಲಾದವರಿದ್ದಾರೆ. ನನ್ನದ್ದೇನಿದ್ದರೂ ನಂತರದ ಸ್ಥಾನ ಎಂದು ನಾನು ನಂಬಿದ್ದೆ. ಇತ್ತೀಚೆಗೆ ಕಲ್ಬುರ್ಗಿಯವರೂ ಕೋಮುವಾದಿಗಳನ್ನು ಕೆರಳಿಸುವಂತಹದ್ದೇನನ್ನೂ ಮಾಡದೆ ಇರುವುದರಿಂದ ಅವರು ಬಲಿಪಶುಗಳ ಸಾಲಿನಲ್ಲಿ ಇನ್ನೂ ಹಿಂದೆ ಇದ್ದಾರೆ ಎಂದು ತಿಳಿದುಕೊಂಡಿದ್ದೆ.
ಆದರೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯದಂತೆ ಕಲ್ಬುರ್ಗಿಯವರನ್ನು ಕೋಮುವಾದಿ ಹಂತಕರೇ ಹತ್ಯೆ ಮಾಡಿದ್ದರೆ ಅವರು ಸರತಿಯ ಸಾಲನ್ನು ಮುರಿದು ಮಾಡಿದ್ದಾರೆ ಎಂದಾಗುತ್ತದೆ. ಆದ್ದರಿಂದ ಗುಂಡು ಯಾರ ತಲೆಗೂ ಬೀಳಬಹುದು. ನನ್ನ ತಲೆಗೆ ಗುಂಡು ಬಿದ್ದರೆ ರಕ್ಷಣೆಗೆ ಕೂದಲೂ ಇಲ್ಲದಿರುವುದು ನನ್ನನ್ನು ಇನ್ನೂ Vulnerable ಮಾಡಿದೆ. ಭಯದಿಂದ ಗಡಗಡಗಡ ನಡುಗುತ್ತಿದ್ದೇನೆ

No comments:

Post a Comment