Tuesday, December 22, 2015

ಜನನುಡಿಯ ಜಡಿಮಳೆ

ನನ್ನ ಮಗಳು ಸುಮಾರು ಮೂರು ವರ್ಷದವಳಾಗಿದ್ದಾಗ ಒಮ್ಮೆ ತುಂಟಾಟಕ್ಕಾಗಿ ಗದರಿದ್ದೆ. ತಕ್ಷಣ ಅವಳು ‘ಎಲ್ಲರೂ ಮನೆಗೆ ಬಂದು ನಿನ್ನನ್ನು ಸಾರ್, ಸಾರ್ ಎಂದು ಹೇಳುತ್ತಿದ್ದಾರಲ್ಲಾ ಅದಕ್ಕೆ ನಿನಗೆ ಸೊಕ್ಕು’ ಎಂದು ತಿರುಗಿ ನನಗೆ ಗದರಿದ್ದಳು. ಒಂದು ಕ್ಷಣ ಅವಕ್ಕಾಗಿದ್ದೆ. ಈಗಲೂ ಅವಳೇ ನನ್ನ ಗುರು. ನಾನು ಕೊಬ್ಬಿಹೋಗಿದ್ದೇನೆ ಎಂದು ಅನಿಸಿದಾಗಲೆಲ್ಲ ಮಗಳ ಗದರಿಕೆಯನ್ನು ನೆನಪುಮಾಡಿಕೊಂಡು ಇನ್ನಷ್ಟು ವಿನೀತನಾಗಲು ಪ್ರಯತ್ನಿಸುತ್ತೇನೆ.

ಇದನ್ನು ನೆನಪುಮಾಡಿಕೊಳ್ಳಲು ಕಾರಣ ಇದೆ. ಜನನುಡಿಯ ಜಡಿಮಳೆ ಸುರಿದ ನಂತರ ಮರದ ಮೇಲಿಂದ ಸಣ್ಣಗೆ ಮಳೆ ಹನಿಯಲಾರಂಭಿಸಿದೆ. ‘ಏನ್ಸಾರ್ ಅಷ್ಟೊಂದು ಬಿಝಿಯಾಗಿಬಿಟ್ಟಿರಿ? ಎದುರಿಗೆ ಸಿಕ್ಕರೂ ಮಾತನಾಡಿಸಲಿಲ್ಲ? ನಿಮ್ಮ ಜತೆ ಜಗಳ ಮಾಡುವುದಿತ್ತು ಸಾರ್, ಮಾತಿಗೆ ಸಿಗಲಿಲ್ಲ’ ಎಂಬೀತ್ಯಾದಿ ಸಣ್ಣ ದನಿಯ ಆಕ್ಷೇಪಗಳ ಜತೆಯಲ್ಲಿ ‘ ಹಿಂದೆ ಚೆನ್ನಾಗಿದ್ದೀರಿ ಸಾರ್, ವಿಧಾನಸೌಧಕ್ಕೆ ಹೋದ ನಂತರ ನೀವು ಬದಲಾಗಿಬಿಟ್ಟಿದ್ದೀರಿ, ಸ್ವಲ್ಪ ಕೊಬ್ಬು ಬಂದಿದೆ’ ಎಂದು ಕೆಲವರು ಮೆಸೆಜ್ ಬಾಕ್ಸ್ ನಲ್ಲಿ ಚುಚ್ಚಿದ್ದಾರೆ. (ಇದರಲ್ಲಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ದತೆ ನನಗಿದೆ) ಸಮಾನಮನಸ್ಕರಾದ ನಮ್ಮ ಜತೆಯಲ್ಲಿಯೇ ಕಳೆದ ಕೆಲವು ವರ್ಷಗಳಿಂದ ಇರುವ,ನಮ್ಮೆಲ್ಲ ಚಟುವಟಿಕೆಗಳ ಭಾಗವಾಗಿಯೇ ಇರುವ ಮತ್ತು ನಾವೆಲ್ಲರೂ ಪ್ರೀತಿಯಿಂದ ‘ಹೈಕಮಾಂಡ್’ ಎಂದು ಕರೆಯುವ ಕಿರಿಯ ಗೆಳತಿಯೊಬ್ಬರು ನಾನು ಷೇರ್ ಮಾಡಿದ ಗ್ರೂಪ್ ಪೋಟೊದಲ್ಲಿ ತಾನು ಇಲ್ಲದಿರುವುದನ್ನು ಕಂಡು ನೊಂದು ಮೆಸೆಜ್ ಹಾಕಿದ್ದಾರೆ. ( ಮೆಸೆಜ್ ವಿವರ ತುಸು ಕಟುವಾಗಿರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿಲ್ಲ). ಅವರ ಮಾತಿನಲ್ಲಿ ಸ್ನೇಹಿತರೆಲ್ಲ ಅವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆಕ್ಷೇಪ ಇದೆ.
ಈ ವರ್ಷದ ಜನನುಡಿಯಲ್ಲಿ ಭಾಗವಹಿಸಿದ್ದವರಲ್ಲಿ ಯುವಕ-ಯುವತಿಯರ ಸಂಖ್ಯೆಯೇ ದೊಡ್ಡದು. ಅವರೆಲ್ಲರ ಮುಖಪರಿಚಯ ನನಗಿಲ್ಲ, ಕೆಲವರು ಫೇಸ್ ಬುಕ್ ನಲ್ಲಿ ಹೆಸರಿನ ಮೂಲಕ ಪರಿಚಿತರು. ಇದರಿಂದಾಗಿ ಎದುರಿಗೆ ಸಿಕ್ಕಾಗಲು ಗುರುತಿಸಲಾಗದೆ ಮಾತನಾಡಿಸದೆ ಇದ್ದಿರಬಹುದು. ಎಲ್ಲರನ್ನು ಮಾತನಾಡಿಸಿ ಪರಿಚಯಿಸಿಕೊಳ್ಳಬೇಕೆಂಬ ಆಸೆ ನನಗಿತ್ತು, ನನ್ನಂತೆ ಉಳಿದವರಲ್ಲಿಯೂ ಇದ್ದಿರಬಹುದು. ಆದರೆ ಮುನೀರ್,ನವೀನ್, ಅನಂತನಾಯ್ಕ್ ಮೊದಲಾದ ಕಿರಿಯ ಗೆಳೆಯರ ಹೆಗಲಮೇಲಿನ ಭಾರ ಹಂಚಿಕೊಳ್ಳುವ ಉದ್ದೇಶದಿಂದ ಈ ಬಾರಿ ಸಭಾಂಗಣದ ಮುಂಭಾಗದಲ್ಲಿಯೇ ಹೆಚ್ಚು ಕಾಲ ಇದ್ದೆ.
ಊಟದ ಬಿಡುವಿನ ಸಮಯದಲ್ಲಿ ಯಾರೋನಾಲ್ಕೈದು ಗೆಳೆಯರು ಹಿಡಿದು ನಿಲ್ಲಿಸಿ ಪ್ರಶ್ನೆಗಳ ಸುರಿಮಳೆ ಸುರಿಸಿ ಹಿಂಡಿಹಿಪ್ಪೆ ಮಾಡಿಬಿಡುತ್ತಿದ್ದರು. ಆದ್ದರಿಂದ ಪರಿಚಯಿಸಿಕೊಳ್ಳಬೇಕಾದವರನ್ನು ಪರಿಚಯಿಸಿಕೊಳ್ಳಲಾಗಲಿಲ್ಲ ಎಂಬ ನೋವು ನನಗೂ ಇದೆ. ಅದು ಉಳಿದವರಲ್ಲಿಯೂ ಇರಬಹುದು. ಆದರೆ ಇದ್ಯಾವುದೂ ಉದ್ದೇಶಪೂರ್ವಕವಾದುದು ಅಲ್ಲ. ರಾತ್ರಿ ದೇವನೂರ ಜತೆ ಪೋಟೊ ತೆಗೆಸುವಾಗಲೂ ಅಲ್ಲಿದ್ದವರಷ್ಟೇ ಸೇರಿದ್ದರು. ಪೋಟೊದಲ್ಲಿ ಇಲ್ಲದವರು ನಮ್ಮವರಲ್ಲ ಎಂದು ಹೇಳಿ ನಾನು ಯಾವ ನರಕಕ್ಕೆ ಹೋಗಲಿ?
ನನ್ನ ಪ್ರೀತಿಗೆ, ಸ್ನೇಹಕ್ಕೆ ಅರ್ಹರೆನಿಸಿಕೊಂಡವರು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು ನನಗನಿಸಿದರೆ ಅವರ ಕತ್ತುಪಟ್ಟಿಹಿಡಿದು ಯಾಕೋ ಮಾತನಾಡುತ್ತಿಲ್ಲ ಎಂದು ಕೇಳುವ ಸ್ವಭಾವ ನನ್ನದು. ನನ್ನ ಕಿರಿಯ ಗೆಳೆಯ-ಗೆಳತಿಯರು ನನಗೆ ಹಾಗೆಯೇ ಮಾಡಬೇಕೆಂದು ನಾನು ಬಯಸುತ್ತೇನೆ.
ಏನೇ ಇರಲಿ, ಮತ್ತೊಮ್ಮೆ ನನ್ನ ಮಗಳ ಗದರಿಕೆಯನ್ನು ನೆನಪುಮಾಡಿಕೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್.

No comments:

Post a Comment