Thursday, March 3, 2016

ಲೈಪು ಅಂದರೆ ಹೀಗೆಯೇ.... ಮತ್ತು ಹೀಗೆಯೇ ಇರಬೇಕು.

ಎಷ್ಟೋ ಸಂದರ್ಭಗಳಲ್ಲಿ ಅರ್ಥವಿಲ್ಲದ ಮೌನ ದುಮ್ಮಾನಕ್ಕೆ ಕಾರಣವಾಗಿ ಮನಸ್ಸು ಭಾರವಾಗುವುದುಂಟು. ಈ ವಾರದ ಅಗ್ನಿ ವಾರಪತ್ರಿಕೆಯನ್ನು ಓದಿದಾಗ ಮನಸ್ಸಿನ ಭಾರವನ್ನು ಇಳಿಸಬೇಕೆನಿಸಿತು.
ಲೇಖಕ ಮತ್ತು ಪತ್ರಕರ್ತ ಅಗ್ನಿ ಶ್ರೀಧರ್ ಅವರ ಅನುಭವ, ಓದಿನ ವಿಸ್ತಾರ, ಒಳನೋಟಗಳ ಜತೆಗೆ ಸಮಾನತೆ ಮತ್ತು ಜಾತ್ಯತೀತ ನಿಲುವಿನ ಬಗೆಗಿನ ನಿಷ್ಠುರವಾದ ಅವರ ಬದ್ದತೆ ಬಗ್ಗೆ ನನಗೆ ವಿಶೇಷವಾದ ಅಭಿಮಾನ. ಅಗ್ನಿ ಪತ್ರಿಕೆಯ ಸಂಪಾದಕರಾದ ಇಂದೂಧರ್ ಹೊನ್ನಾಪುರ ಅವರೂ ಅಷ್ಟೇ ಆಪ್ತರು ನನಗೆ. ಮುಂಗಾರು ಪತ್ರಿಕೆಗೆ ನಾನು ಸೇರಿದಾಗ ಇಂದೂಧರ ಹೊನ್ನಾಪುರ ಅವರು ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ನಮ್ಮನ್ನು ಬೆಳೆಸಿದವರು.

ಕೆಲವು ವಾರಗಳ ಹಿಂದೆ ಲೇಖನವೊಂದರ ಸಂಬಂಧ ಹುಟ್ಟಿದ ಭಿನ್ನಾಭಿಪ್ರಾಯದಿಂದ ನಾನು ಮತ್ತು ಈ ಹಿರಿಯರಿಬ್ಬರು ಮನಸ್ಸು ಕಹಿಮಾಡಿಕೊಳ್ಲಬೇಕಾಯಿತು. ಭಾವುಕನಾಗಿ ಪ್ರತಿಕ್ರಿಯಿಸಿದೆ ಎಂದು ನನಗೂ ಆ ಮೇಲೆ ಅನಿಸಿತ್ತು. ಅವರಿಗೂ ಅನಿಸಿರಲೂಬಹುದು. ಮನಸ್ಸುಗಳೇನು ಮುರಿದು ಹೋಗಿರಲಿಲ್ಲ, ಅಲ್ಲಿಯೇ ಮುದುಡಿಕೊಂಡಿತ್ತು. ಇದರಿಂದ ನಮಗಿಂತಲೂ ಹೆಚ್ಚು ನೊಂದುಕೊಂಡವರು ನಮ್ಮ ಹಿರಿಯ-ಕಿರಿಯ ಸ್ನೇಹಿತರು.
ಕೆಲವು ವಾರಗಳ ಹಿಂದೆ ಯಥಾ ಪ್ರಕಾರ ಸಂಘ ಪರಿವಾರ ನನ್ನ ಮೇಲೆ ಮುಗಿಬಿದ್ದಾಗಲೂ ಅಗ್ನಿ ನನಗೆ ಬೆಂಬಲ ಸೂಚಿಸಿ ವೈಯಕ್ತಿಕ ಸಂಬಂಧವನ್ನು ಮೀರಿದ್ದು ಪತ್ರಿಕಾಧರ್ಮ ಎನ್ನುವುದನ್ನು ಹೇಳಿತ್ತು. ಈ ಬಾರಿ ಇಂದೂಧರ ಅವರು ಸಂಪಾದಕೀಯದಲ್ಲಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಚೇತನಾ ತೀರ್ಥಹಳ್ಳಿ ಮತ್ತು ನನ್ನೊಂದಿಗೆ ಅಗ್ನಿ ಬಳಗ ಇದೆ ಎಂದು ಬರೆದಿದ್ದಾರೆ.
ಇದನ್ನು ಓದಿದ ನಂತರ ನಾಲ್ಕು ಸಾಲು ಬರೆದು ಮನಸ್ಸನ್ನು ಹಗುರಮಾಡಿಕೊಳ್ಳಬೇಕೆನಿಸಿತು. ವಿರೋಧಿಗಳು ಬೆನ್ನತ್ತಿರುವ ಈ ಕಾಲದಲ್ಲಿ ಜಗಳಕ್ಕೆಲ್ಲಿದೆ ಪುರುಸೊತ್ತು? ಇದು ಸಮಾನ ಮನಸ್ಕರೆಲ್ಲ ಪರಸ್ಪರ ಪ್ರೀತಿಸುವ, ಅರ್ಥಮಾಡಿಕೊಳ್ಳುವ ಹೊತ್ತು.
ಜಗಳವೇ ಇಲ್ಲದ ಸ್ನೇಹ ಬಹಳ ಕೃತಕವಾದುದು, ಆದರೆ ಜಗಳವಾಡುವಾಗಲೂ ಒಳಗೆ ಸ್ನೇಹದ ಒರತೆ ಜಿನುಗುತ್ತಿರುವುದು ಪರಸ್ಪರರ ಗಮನಕ್ಕೆ ಬರಬೇಕು. ಅಂತಹ ಸ್ನೇಹ ಯಾರು ಹುಳಿ ಹಿಂಡಿದರೂ ಗಟ್ಟಿಯಾಗಿ ಉಳಿಯುತ್ತದೆ. ಥ್ಯಾಂಕ್ಯೂ ಶ್ರೀಧರ್ ಮತ್ತು ಇಂದೂಧರ್. ನಮ್ಮ ಜಗಳದ ನಡುವೆ ಸಿಕ್ಕಿಹಾಕಿಕೊಂಡಿದ್ದ ಗೆಳೆಯ ಮಂಜುನಾಥ ಅದ್ದೆಯವರೂ ಈಗ ನಿರಾಳ.

No comments:

Post a Comment