Monday, May 16, 2011

ಪ್ರಾದೇಶಿಕ ಪಕ್ಷಗಳ ಬಗ್ಗೆ ಹೆಚ್ಚುತ್ತಿರುವ ಒಲವು

‘ಪ್ರಾದೇಶಿಕ ಪಕ್ಷಗಳೆಂಬ ಶಾಪದಿಂದಾಗಿಯೇ ಸರ್ಕಾರಗಳು ಪೂರ್ಣಾವಧಿ ಬಾಳದೆ ಅನಿಶ್ಚಿತ ರಾಜಕೀಯದ ಕೆಟ್ಟಕಾಲ ಪ್ರಾರಂಭವಾಗಿರುವುದು. ಇವುಗಳಿಗೆ ಅಂಟಿಕೊಂಡಿರುವ ಪಕ್ಷಾಂತರದ ಪಿಡುಗಿನಿಂದಾಗಿಯೇ ರಾಜಕೀಯ ವ್ಯವಸ್ಥೆ ಭ್ರಷ್ಟಗೊಂಡಿರುವುದು..’ ಎಂದೆಲ್ಲಾ ಆರೋಪಿಸುವವರಿದ್ದಾರೆ.
 ಆದರೆ ಇತ್ತೀಚೆಗೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿದಂತೆ ಇತ್ತೀಚಿನ ಬಹುತೇಕ  ಚುನಾವಣೆಗಳಲ್ಲಿ  ಭಾರತೀಯ ಮತದಾರರು ಮೇಲಿನ ಆರೋಪಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸುತ್ತಿರುವಂತೆ ಕಾಣುತ್ತಿಲ್ಲವೇ? ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಒಲವು ತೋರಿಸುತ್ತಿದ್ದಾರೆಂದು ಅನಿಸುವುದಿಲ್ಲವೇ?
ಪಶ್ಚಿಮಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಎಡಿಎಂಕೆಗಳೇ ಗೆಲುವಿನ ಮುಂಚೂಣಿಯಲ್ಲಿರುವುದು.ಅಸ್ಸಾಂನಲ್ಲಿ ತರುಣ್ ಗೋಗೋಯ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಪ್ರಾದೇಶಿಕ ಪಕ್ಷದ ನಾಯಕನ ಶೈಲಿಯಲ್ಲಿಯೇ ರಾಜ್ಯಭಾರ ಮಾಡಿಕೊಂಡು ಬಂದಿರುವುದು.

ಸಿಪಿಎಂನ ದೆಹಲಿ ನಾಯಕರಿಂದ ನಿರಂತರವಾಗಿ ಅವಮಾನಕ್ಕೆಡಾಗುತ್ತಾ ಬಂದ ವಿ.ಎಸ್ ಅಚ್ಯುತಾನಂದನ್ ಅವರನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಕೇರಳ ಮತದಾರರ ರೋಷದಲ್ಲಿ ‘ಮಲೆಯಾಳಿ ಸ್ವಾಭಿಮಾನ’ದ ಅಭಿವ್ಯಕ್ತಿ ಇರಲಿಲ್ಲವೇ?
ಕಾಂಗ್ರೆಸ್ ವಿರುದ್ಧ ಬಂಡೆದ್ದ ಪುದುಚೇರಿಯ ಸರಳ-ಸಜ್ಜನ ನಾಯಕ ಎನ್.ರಂಗಸ್ವಾಮಿ ಅವರನ್ನು ಗೆಲ್ಲಿಸಿದ್ದು ಆ ಸಣ್ಣ ರಾಜ್ಯದ ಮತದಾರರ ಆತ್ಮಾಭಿಮಾನದ ದೊಡ್ಡ ಶಕ್ತಿಯಲ್ಲವೇ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಹಿನ್ನಡೆಯಾಗಿರುವುದು ಮಾತ್ರವಲ್ಲ, ದೇಶದ ಎರಡನೇ ಅತೀ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಭೌಗೋಳಿಕ ಮಿತಿ ಕೂಡಾ ಬಯಲಾಗಿದೆ.

ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಐವರು ಶಾಸಕರು ಆಯ್ಕೆಯಾಗಿರುವುದನ್ನು ಬಿಟ್ಟರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಕನಿಷ್ಠ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗಿಲ್ಲ.
ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವಾಗ ಬಿಜೆಪಿ ಈ ಐದು ರಾಜ್ಯಗಳಲ್ಲಿರುವ ಒಟ್ಟು 115 ಲೋಕಸಭಾ ಸ್ಥಾನಗಳನ್ನು ಪಕ್ಕಕ್ಕೆ ಇಟ್ಟು ರಾಜಕೀಯ ಬಲದ ಲೆಕ್ಕಾಚಾರ ಮಾಡಬೇಕಾಗುತ್ತದೆ.
2014ರ ಲೋಕಸಭಾ ಚುನಾವಣೆಗಿಂತ ಮೊದಲು ವಿಧಾನಸಭಾ ಚುನಾವಣೆ ನಡೆಯಲಿರುವ 19 ರಾಜ್ಯಗಳ ರಾಜಕೀಯದ ಮೇಲೆ ಕಣ್ಣಾಡಿಸಿದರೂ ರಾಷ್ಟ್ರೀಯ ಪಕ್ಷಗಳ ಬಲ ಕುಂದುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತಿವೆ.

ಈ 19 ರಾಜ್ಯಗಳಲ್ಲಿ ಎಂಟರಲ್ಲಿ (ಆಂಧ್ರಪ್ರದೇಶ, ದೆಹಲಿ, ಗೋವಾ, ಮಣಿಪುರ, ರಾಜಸ್ತಾನ,ಮೇಘಾಲಯ ಮತ್ತು ಮಿಜೋರಾಂ) ಕಾಂಗ್ರೆಸ್ ಅಧಿಕಾರದಲ್ಲಿದೆ. ಇನ್ನೊಂದು ರಾಜ್ಯವಾದ ಜಮ್ಮು ಮತ್ತು ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಜತೆಗಿನ ಮೈತ್ರಿ ಸರ್ಕಾರ ಇದೆ.
ಎರಡು ಅವಧಿಗಳ ಆಡಳಿತ ವಿರೋಧಿ ಅಲೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಚಳುವಳಿ ಮತ್ತು ಜಗನ್‌ಮೋಹನ್ ರೆಡ್ಡಿಯವರ ಬಂಡಾಯದಿಂದಾಗಿ ಆಂಧ್ರಪ್ರದೇಶದ ಕಾಂಗ್ರೆಸ್ ಆಗಲೇ ನಿರ್ಗಮನದ ಹಾದಿಯಲ್ಲಿದೆ. ಮೂರನೇ ಅವಧಿಗೆ ಚುನಾವಣೆ ಎದುರಿಸಲಿರುವ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಮನ್‌ವೆಲ್ತ್ ಗೇಮ್ಸ್ ಹಗರಣದಿಂದಾಗಿ ಮುಖ ಮಸಿಮಾಡಿಕೊಂಡು ಮತದಾರರನ್ನು ಎದುರಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ಕಷ್ಟ. ಈಶಾನ್ಯದ ಮೂರು ಸಣ್ಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್ ಭರವಸೆ ಇಡಬಲ್ಲಂತಹ ಏಕೈಕ ರಾಜ್ಯ ರಾಜಸ್ತಾನ ಮಾತ್ರ. ಅದು ಪಕ್ಷಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರ ವೈಯುಕ್ತಿಕ ವರ್ಚಸ್ಸನ್ನು ಅವಲಂಬಿಸಿದೆ.
ರಾಜಸ್ತಾನ  ಮತ್ತು ದೆಹಲಿ ರಾಜ್ಯಗಳಲ್ಲಿ ತೃತೀಯರಂಗದ ಯಾವ ಪಕ್ಷವೂ ಇಲ್ಲದಿರುವ ಕಾರಣ ಕಾಂಗ್ರೆಸ್‌ನ ನಷ್ಟ  ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಲಾಭವಾಗಬಹುದು.
ಬಿಜೆಪಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ  ಆರು ರಾಜ್ಯಗಳು ( ಗುಜರಾತ್,ಮಧ್ಯಪ್ರದೇಶ, ಕರ್ನಾಟಕ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ) ವಿಧಾನಸಭಾ ಚುನಾವಣೆ ಎದುರಿಸಲಿವೆ. 1995ರಿಂದ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಮುಖ್ಯಮಂತ್ರಿ ನರೇಂದ್ರಮೋದಿ ಮೂರನೇ ಚುನಾವಣೆಯನ್ನು ಎದುರಿಸುವ ತಯಾರಿಯಲ್ಲಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿಯೂ ಬಿಜೆಪಿಯದ್ದು ಈಗ ಎರಡನೇ ಅವಧಿಯ ಸರ್ಕಾರ. ಗುಜರಾತ್‌ನಲ್ಲಿ ಸತತ ಐದು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ರಾಜಕೀಯವಾಗಿ ಮಾತ್ರವಲ್ಲ ನೈತಿಕವಾಗಿಯೂ ಕುಗ್ಗಿಹೋಗಿದೆ. ಆದ್ದರಿಂದ ನರೇಂದ್ರಮೋದಿ ಈಗಲೂ ಸುರಕ್ಷಿತವಾಗಿರುವಂತೆ ಕಾಣುತ್ತಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಭ್ರಷ್ಟಾಚಾರಗಳ ಆರೋಪಗಳು ಎಷ್ಟೇ ಇದ್ದರೂ ಈ ವರೆಗಿನ ಉಪಚುನಾವಣೆಗಳಲ್ಲಿ ಮತದಾರರು ಅವರ ಕೈಬಿಟ್ಟಿಲ್ಲ. ಭ್ರಷ್ಟ್ರರ ಬೆನ್ನಟ್ಟಿ ಮನೆಗೆ ಅಟ್ಟುತ್ತಿರುವ ದೇಶದ ಪ್ರಜ್ಞಾವಂತ ಮತದಾರರಿಗೆ ಸವಾಲು ಹಾಕುವಂತಿದೆ ಕರ್ನಾಟಕದ ಮತದಾರರ ವರ್ತನೆ.

ಇದು ಬಿಜೆಪಿಗೆ ನೆರವಾಗಲೂ ಬಹುದು.ಆದರೆ ಇದೇ ಮಾತನ್ನು ಇನ್ನಿಬ್ಬರು ಮುಖ್ಯಮಂತ್ರಿಗಳಾದ ಶಿವರಾಜ್‌ಸಿಂಗ್ ಚೌಹಾಣ್ ಮತ್ತು ರಮಣ್‌ಸಿಂಗ್ ಅವರ ಬಗ್ಗೆ ಹೇಳುವ ಹಾಗಿಲ್ಲ. ಇಬ್ಬರೂ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಾದೇಶಿಕ ಪಕ್ಷಗಳ ಸತ್ವಪರೀಕ್ಷೆಯ ಫಲಿತಾಂಶ ಮೊದಲು ಗೊತ್ತಾಗಲಿರುವುದು ಮುಂದಿನವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ. ಕಾಂಗ್ರೆಸ್ ಪಾಲಿಗೆ ಸಂಖ್ಯೆ ಮತ್ತು ಪ್ರತಿಷ್ಠೆಗಳೆರಡರ ದೃಷ್ಟಿಯಿಂದಲೂ ಈ ಚುನಾವಣೆ ನಿರ್ಣಾಯಕ. ರಾಹುಲ್‌ಗಾಂಧಿಯ ರಾಜಕೀಯ ಭವಿಷ್ಯ ಕೂಡಾ ಈ ಚುನಾವಣೆಯನ್ನು ಅವಲಂಬಿಸಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಲಿ ಮುಖಭಂಗ ಅನುಭವಿಸಿದರೂ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಮೈಕೊಡವಿ ಎದ್ದುನಿಂತು ಶಕ್ತಿಪ್ರದರ್ಶನ ಮಾಡಿತ್ತು.ವಿಧಾನಸಭಾ ಚುನಾವಣೆಯಲ್ಲಿಯೂ ಈ ಮ್ಯಾಜಿಕ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಾಹುಲ್‌ಗಾಂಧಿ.

ಆದರೆ ಪ್ರಾದೇಶಿಕ ರಾಜಕಾರಣದ ಎಲ್ಲ ವರಸೆಗಳನ್ನು ಬಲ್ಲ ಮಾಯಾವತಿ ಮತ್ತು ಮುಲಾಯಂಸಿಂಗ್ ಅವರಂತಹ ಚಾಣಕ್ಷ ರಾಜಕಾರಣಿಗಳನ್ನು ನಿರ್ಲಕ್ಷಿಸುವುದು ಸಾಧ್ಯ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯ ಜತೆಯಲ್ಲಿಯೇ ವಿಧಾನಸಭಾ ಚುನಾವಣೆ ಎದುರಿಸಲಿರುವ ಒರಿಸ್ಸಾದಲ್ಲಿ ಬಿಜು ಜನತಾದಳಕ್ಕೆ ಸಮರ್ಥ ಎದುರಾಳಿಯೇ ಇಲ್ಲದಿರುವಂತಹ ಸ್ಥಿತಿ ಇದೆ. ಅಲ್ಲಿ ಕಾಂಗ್ರೆಸ್ ಒಂದಷ್ಟು ಸ್ಥಾನಗಳನ್ನು ಗಳಿಸಲೂ ಬಹುದು.

ಆದರೆ ಬಿಜೆಪಿಗೆ ಹೆಚ್ಚಿನ ಲಾಭವಾಗದು. ಭವಿಷ್ಯದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ನವೀನ್ ಪಟ್ನಾಯಕ್  ಹ್ಯಾಟ್ರಿಕ್ ಸಾಧಿಸಿದರೆ ದೆಹಲಿ ಕಡೆ ಹೊರಡುವ ಸಾಧ್ಯತೆ ಇರುವುದರಿಂದ ಆ ರಾಜ್ಯದ ಮತದಾರರು ಆಶೀರ್ವದಿಸಲೂ ಬಹುದು.
ಪಂಜಾಬ್‌ನಲ್ಲಿ ಮಾತ್ರ ಪ್ರಾದೇಶಿಕ ಪಕ್ಷವಾದ ಅಕಾಲಿದಳದ ಅಧಿಕಾರ ಕೊನೆಗೊಂಡು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಿವೆ.
ಈ ರೀತಿ ಮೇಲ್ನೋಟಕ್ಕೆ ಪ್ರಾದೇಶಿಕ ಪಕ್ಷಗಳ ಬಲವರ್ಧನೆಯಾಗುತ್ತಿರುವಂತೆ ಕಾಣುತ್ತಿರುವುದು ನಿಜವಾದರೂ ವಾಸ್ತವ ಹಾಗಿಲ್ಲ. ಇದಕ್ಕೆ ಕಾರಣ ಜನಬೆಂಬಲದ ಕೊರತೆ ಅಲ್ಲ.

ಪ್ರಾದೇಶಿಕ ಪಕ್ಷಗಳ ಮುಖ್ಯ ದೌರ್ಬಲ್ಯವಾದ ‘ದಾಯಾದಿ ಕಲಹ’ ಅವುಗಳನ್ನು ದುರ್ಬಲಗೊಳಿಸುತ್ತಿದೆ. ಈ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುತ್ತಿರುವಂತೆ ಕಂಡರೂ ನಿಜವಾಗಿಯೂ ಇವುಗಳು ಕಾದಾಡುವುದು ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಯಲ್ಲಿಯೇ.

ಹಾಗಿಲ್ಲದೆ ಇದ್ದಿದ್ದರೆ  ಲೋಕಸಭೆಯಲ್ಲಿ 205 ಸದಸ್ಯ ಬಲದ ಕಾಂಗ್ರೆಸ್ ಮತ್ತು 117 ಸದಸ್ಯ ಬಲದ ಬಿಜೆಪಿ ಎರಡೂ ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಒಟ್ಟು 221 ಸದಸ್ಯಬಲದ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿರಬೇಕಿತ್ತು.

ಹಾಗಾಗುವುದೇ ಇಲ್ಲ. ಎಡಪಕ್ಷಗಳನ್ನು ಹೊರತುಪಡಿಸಿ ಲೋಕಸಭೆಯಲ್ಲಿ 33 ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ ಹೊಂದಿವೆ. ಇವುಗಳಲ್ಲಿ ಒಂಭತ್ತು ಯುಪಿಎ ಜತೆಯಲ್ಲಿವೆ, ಆರು ಎನ್‌ಡಿಎ ಜತೆಯಲ್ಲಿವೆ ಮತ್ತು ಹದಿನೆಂಟು ಪಕ್ಷಗಳು ಎರಡೂ ಮೈತ್ರಿಕೂಟದಲ್ಲಿ ಸೇರದೆ ಸ್ವತಂತ್ರವಾಗಿದ್ದುಕೊಂಡು ಆಗಾಗ ಷರತ್ತುಬದ್ದ ಬೆಂಬಲ ನೀಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆ- ಬಿಎಸ್‌ಪಿ ಮತ್ತು ಎಸ್‌ಪಿ ಜತೆಗಿನ ಕಾಂಗ್ರೆಸ್ ಪಕ್ಷದ ಸ್ನೇಹ ಮತ್ತು ದ್ವೇಷದ ಸಂಬಂಧ.
ಈ ಪ್ರಾದೇಶಿಕ ಪಕ್ಷಗಳ ಜಾತಕ ಬಿಡಿಸಿದರೆ ಅವುಗಳಲ್ಲಿ ಹೆಚ್ಚಿನವು ಒಂದರ ಜತೆ ಒಂದು ಹೊಂದುವುದೇ ಇಲ್ಲ. ಕಾಶ್ಮೆರದಲ್ಲಿ ನ್ಯಾಷನಲ್ ಕಾನ್‌ಫರೆನ್ಸ್ ಮತ್ತು ಪಿಡಿಪಿ, ಬಿಹಾರದಲ್ಲಿ ಜೆಡಿ (ಯು) ಮತ್ತು ಆರ್‌ಜೆಡಿ, ಉತ್ತರಪ್ರದೇಶದಲ್ಲಿ ಬಿಎಸ್‌ಪಿ ಮತ್ತು ಎಸ್‌ಪಿ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ, ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ, ಅಸ್ಸಾಂನಲ್ಲಿ ಅಸ್ಸಾಂ ಗಣ  ಪರಿಷತ್ ಮತ್ತು ಎಐಯುಡಿಎಫ್ ಪರಸ್ಪರ ವಿರೋಧಪಕ್ಷಗಳು.

ಇವುಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ಆದರೆ ತನ್ನ ವಿರೋಧಿಯಾದ ಪ್ರಾದೇಶಿಕ ಪಕ್ಷದ ಜತೆ ಕೈಜೋಡಿಸಲಾರದು. ಪ್ರಾದೇಶಿಕ ಪಕ್ಷಗಳ ಈ ದೌರ್ಬಲ್ಯವನ್ನೇ ಬಳಸಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ಕೇಂದ್ರದಲ್ಲಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಅಧಿಕಾರ ಹಂಚಿಕೊಂಡಿರುವುದು. ಪ್ರಾದೇಶಿಕ ಪಕ್ಷಗಳ ನಾಯಕರು ಭ್ರಷ್ಟರು, ಅಧಿಕಾರದಾಹಿಗಳು ಎಂಬ ಪ್ರಚಾರ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ತಮ್ಮ ಕೈಯಲ್ಲಿಯೇ ಇರಿಸಿಕೊಳ್ಳಲು ನೆರವಾಗಿದೆ.
ಪ್ರಾದೇಶಿಕ ಪಕ್ಷಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ವಿರೋಧ-ಅಸಹನೆ ವ್ಯಕ್ತವಾಗಲು ಮುಖ್ಯ ಕಾರಣ- ಪ್ರಾದೇಶಿಕ ಪಕ್ಷಗಳ ಸಾಧನೆಯ ಮೌಲ್ಯಮಾಪನವನ್ನು ದೇಶದ ಉತ್ತರ ಭಾಗದ ರಾಜ್ಯಗಳಿಂದ ಪ್ರಾರಂಭಿಸುವ ತಪ್ಪನ್ನು ಎಲ್ಲರೂ ಮಾಡುತ್ತಿರುವುದು.

ದೇಶದ ಮೊದಲ ಪ್ರಾದೇಶಿಕ ಪಕ್ಷದ ರಚನೆಯಾಗಿದ್ದು ತಮಿಳುನಾಡಿನಲ್ಲಿ. 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದ ಡಿಎಂಕೆಯಿಂದಾಗಿ ದೂಳೀಪಟವಾದ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಕೂಡಾ ಸ್ವಂತಬಲದಿಂದ ಮರಳಿ ಅಧಿಕಾರಕ್ಕೆ ಬರಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಕಳಗಂಗಳೇ ಹಂಚಿಕೊಂಡು ಆ ರಾಜ್ಯವನ್ನು ಆಳಿವೆ.
ಆಂಧ್ರಪ್ರದೇಶದಲ್ಲಿ 1983ರ ನಂತರದ 23 ವರ್ಷಗಲ್ಲಿ ನಡುವಿನ ಏಳುವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿದ್ದದ್ದು ತೆಲುಗುದೇಶಂ ಎಂಬ ಪ್ರಾದೇಶಿಕ ಪಕ್ಷದ ಸರ್ಕಾರ. ಅಭಿವೃದ್ಧಿಯ ಯಾವ ಮಾನದಂಡದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ಇತರ ರಾಜ್ಯಗಳಿಗಿಂತ ಹಿಂದೆ ಉಳಿದಿದೆ?

ಕೇರಳದಲ್ಲಿ ಹೆಚ್ಚುಕಡಿಮೆ ಎಡಪಕ್ಷಗಳು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿಯೇ ಆಡಳಿತ ನಡೆಸುತ್ತಾ ಬಂದಿವೆ. ಬಿಜು ಜನತಾದಳವನ್ನು ಸತತ ಎರಡು ಬಾರಿ ಗೆಲ್ಲಿಸಿದ ಒರಿಸ್ಸಾದ ಮತದಾರರು ಮೂರ್ಖರಿರಲಾರರು.

ಮಹಾರಾಷ್ಟ್ರದಲ್ಲಿಯೂ ಕಳೆದ ಹದಿನೈದು ವರ್ಷಗಳಲ್ಲಿ ಒಂದೋ ಎನ್‌ಸಿಪಿ ಇಲ್ಲವೇ ಶಿವಸೇನೆಯನ್ನು ಕಟ್ಟಿಕೊಂಡ ಮೈತ್ರಿಕೂಟವೇ ಆಡಳಿತ ನಡೆಸಿರುವುದು. ದೇಶದ ವಾಣಿಜ್ಯ ರಾಜಧಾನಿಯನ್ನು ಹೊಂದಿರುವ ಆ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆಯೇ?
ಪ್ರಾದೇಶಿಕ ಪಕ್ಷಗಳೆಂದಾಕ್ಷಣ ಎಲ್ಲರ ಕಣ್ಣು  ಬಿಹಾರ ಮತ್ತು ಉತ್ತರಪ್ರದೇಶಗಳತ್ತ ಹೊರಳುತ್ತಿರುವುದೇ ದೊಡ್ಡ ಸಮಸ್ಯೆ. ಸರ್ಕಾರಗಳ ಸಾಧನೆಯ ಮೌಲ್ಯಮಾಪನವನ್ನು ಉತ್ತರದ ಬದಲಿಗೆ ದಕ್ಷಿಣದಿಂದ ಪ್ರಾರಂಭಿಸಿದರೆ ಪ್ರಾದೇಶಿಕ ಪಕ್ಷಗಳ ಬಗೆಗಿನ ಪೂರ್ವಗ್ರಹ ನಿವಾರಣೆಯಾದೀತೇನೋ?
ಯಾವ ಪ್ರಾದೇಶಿಕ ಪಕ್ಷದ ನಾಯಕನೂ ಅಭಿವೃದ್ಧಿ ಬಗೆಗಿನ ಈಚರ್ಚೆಯನ್ನು ಎತ್ತಿಕೊಳ್ಳುತ್ತಲೇ ಇಲ್ಲ. ಎಲ್ಲರೂ ಮತದಾರರ ಪ್ರಾದೇಶಿಕ ಆಶೋತ್ತರಗಳನ್ನು ಒಳಗೊಂಡಿರುವ ಬೆಂಬಲವನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಸೆಣಸಾಟದಲ್ಲಿದ್ದಾರೆ.
ಮತದಾರರು ರಾಷ್ಟ್ರೀಯ ಪಕ್ಷಗಳಿಂದ ರೋಸಿಹೋಗಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿದರೆ, ‘ಪ್ರಾದೇಶಿಕ ಪಾಳೆಗಾರರು’ ಆ ಬೆಂಬಲವನ್ನು ರಾಷ್ಟ್ರೀಯ ಪಕ್ಷಗಳ ಯಜಮಾನರ ಪಾದಗಳಿಗೆ ಅರ್ಪಿಸಿ ಅಧಿಕಾರದ ಫಲವುಂಡು ಕೃತಾರ್ಥರಾಗುತ್ತಿದ್ದಾರೆ.

No comments:

Post a Comment