Sunday, March 31, 2013

ಮುಲಾಯಂ ಮುಲಾಮಿನಿಂದ ಎದ್ದು ನಿಂತ ಅಡ್ವಾಣಿ

ತೃತೀಯ ರಂಗದ ಗಂಟೆ ಆಗಾಗ ಮೊಳಗಿ ಸುಮ್ಮನಾಗುವುದು ರೂಢಿಯಾಗಿಬಿಟ್ಟಿರುವ ಕಾರಣದಿಂದಾಗಿ
ಯೇ ಇದನ್ನು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಲೇವಡಿ ಮಾಡುತ್ತಿವೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಗ್ಯಾಂಗ್ ತೃತೀಯರಂಗದ ಗಾಳಿಪಟವನ್ನು ಎಷ್ಟು ಎತ್ತರಕ್ಕೆ ಹಾರಿಸಿದರೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಕೆಳಗೆ ಇಳಿದುಬಂದು ನಮ್ಮ ಮನೆಬಾಗಿಲು ಬಡಿಯಲೇಬೇಕು ಎನ್ನುವುದು ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ದೂರದಲ್ಲಿಟ್ಟು ನಿಜವಾದ ತೃತೀಯ ರಂಗ ಅಧಿಕಾರಕ್ಕೆ ಬರುವ ರಾಜಕೀಯ ವಾತಾವರಣ ಸದ್ಯಕ್ಕೆ ದೇಶದಲ್ಲಿ ಇಲ್ಲ. ಅಂದ ಮಾತ್ರಕ್ಕೆ ಪ್ರಾದೇಶಿಕ ರಾಜಕಾರಣದ `ಚಾಣಕ್ಯ' ಮುಲಾಯಂಸಿಂಗ್ ಹಾಗೆ ಸುಮ್ಮನೆ ತೃತೀಯರಂಗದ ಗಂಟೆ ಆಡಿಸುವವರೂ ಅಲ್ಲ. ಯುಪಿಎಗೆ ಪರ್ಯಾಯವಾಗಿ ಎನ್‌ಡಿಎಯನ್ನು ಬಲಪಡಿಸುವ ಉದ್ದೇಶವೇನಾದರೂ ಅವರಲ್ಲಿದೆಯೇ? ಇದನ್ನೇ ಬಳಸಿಕೊಂಡು ಮೋದಿಯವರನ್ನು ಪಕ್ಕಕ್ಕೆ ಸರಿಸಿ ಅಡ್ವಾಣಿ ಅವರನ್ನು ಮೇಲಕ್ಕೆತ್ತುವ ತಂತ್ರವನ್ನು ಮೋದಿ ವಿರೋಧಿ ಬಿಜೆಪಿ ನಾಯಕರು ಹೆಣೆಯುತ್ತಿದ್ದಾರೆಯೇ?
ಇದೇ ಅಂಕಣದಲ್ಲಿ ಹಿಂದೆ ಹಲವಾರು ಬಾರಿ ಚರ್ಚಿಸಿದಂತೆ ತತ್ವಾಧಾರಿತವಾದ ನೈಜ ತೃತೀಯರಂಗ ದೆಹಲಿ ಗದ್ದುಗೆ ಏರಲು ಇನ್ನೂ ರಾಜಕೀಯ ಕಾಲ ಪಕ್ವವಾಗಿಲ್ಲ. ಯಾವುದೇ ಪಕ್ಷ ಇಲ್ಲವೇ ಮೈತ್ರಿಕೂಟ ಕೇಂದ್ರದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆಬರಲು ಕನಿಷ್ಠ 272 ಸದಸ್ಯರ ಬೆಂಬಲ ಬೇಕು.
1952ರಿಂದ 2009ರ ವರೆಗಿನ ಹದಿನೈದು ಲೋಕಸಭಾ ಚುನಾವಣೆಗಳ ಇತಿಹಾಸವನ್ನು ಅವಲೋಕಿಸಿದರೆ 1977ರ ಚುನಾವಣೆಯೊಂದನ್ನು ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ (1980ರ ಮೊದಲು ಜನಸಂಘ)ಯೇತರ ಪಕ್ಷಗಳ  ಒಟ್ಟು ಸಂಖ್ಯಾಬಲ 272ರ ಸಮೀಪಕ್ಕೂ ಬಂದಿಲ್ಲ. (1977ರಲ್ಲಿ ಜನಸಂಘ ಆಗಿನ ಜನತಾಪಕ್ಷದಲ್ಲಿ ವಿಲೀನಗೊಂಡಿತ್ತು ಎನ್ನುವುದನ್ನೂ ಗಮನಿಸಬೇಕಾಗಿದೆ.) ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ ಎಂದೂ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಬಲ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು.
1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನ ಗಳಿಸಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ ಬಿಜೆಪಿ 114= 320), ಅಂದರೆ  ಆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಹೊರತಾಗಿ ಇತರ ಎಲ್ಲ ಪಕ್ಷಗಳು ಗಳಿಸಿದ್ದ ಒಟ್ಟು ಸ್ಥಾನಗಳು 220 ಮಾತ್ರ.
ಇದನ್ನು ನೋಡಿದರೆ ಬಹುಮತಕ್ಕೆ ಬೇಕಾಗುವ ಸಂಖ್ಯೆ ಗಳಿಸುವುದು ತೃತೀಯರಂಗಕ್ಕೆ ಅಸಾಧ್ಯ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ ಎನ್ನುವುದು ನಿಜ. ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನು ಕಷ್ಟವಾಗಲಾರದು ಎಂದು ಯಾರಾದರೂ ಅಂದುಕೊಳ್ಳಬಹುದು. ಆದರೆ ಇದರಲ್ಲೊಂದು ಒಳ ಲೆಕ್ಕಾಚಾರ ಇದೆ.ಒಂದೊಮ್ಮೆ ತೃತೀಯರಂಗದ ಪಕ್ಷಗಳ ಒಟ್ಟು ಸದಸ್ಯಬಲ 272 ತಲುಪಿದರೂ ಆಗಲೂ ಕಷ್ಟಗಳಿವೆ. ಈ ಪ್ರಾದೇಶಿಕ ಪಕ್ಷಗಳಲ್ಲಿನ ಪರಸ್ಪರ ವಿರೋಧ, ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಅವುಗಳ ಒಟ್ಟು ವಿರೋಧಕ್ಕಿಂತಲೂ ತೀವ್ರವಾಗಿದೆ. ಉ
ತ್ತರಪ್ರದೇಶದಲ್ಲಿ ಎಸ್-ಬಿಎಸ್‌ಪಿ, ತಮಿಳುನಾಡಿನಲ್ಲಿ ಡಿಎಂಕೆ-ಎಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ-ತೃಣಮೂಲ ಕಾಂಗ್ರೆಸ್, ಮತ್ತು ಬಿಹಾರದಲ್ಲಿ ಜೆಡಿ(ಯು)-ಆರ್‌ಜೆಡಿ ಪಕ್ಷಗಳು ಎಂದಾದರೂ ಒಂದೇ ಮೈತ್ರಿಕೂಟದಲ್ಲಿ ಸೇರಿಕೊಳ್ಳಲು ಸಾಧ್ಯವೇ?
ರಾಜಕೀಯದ ಈ ಗಣಿತ ಗೊತ್ತಿಲ್ಲದಷ್ಟು ಮುಲಾಯಂಸಿಂಗ್ ದಡ್ಡರಲ್ಲ. ಅವರ ತಲೆಯಲ್ಲಿ ಬೇರೆ ರಾಜಕೀಯ ಲೆಕ್ಕಾಚಾರ ಸುಳಿದಾಡುತ್ತಿರುವ ಹಾಗೆ ಕಾಣುತ್ತಿದೆ. ತೃತೀಯರಂಗದ ಬಗ್ಗೆ ಚರ್ಚೆ ಪ್ರಾರಂಭಿಸಿದ ಬೆನ್ನಲ್ಲೇ ಅವರು ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿರುವುದು ಅವರ ನಡೆ-ನುಡಿಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.ಬಿಜೆಪಿ ಮತ್ತು ಅದರ ಪೂರ್ವಾಶ್ರಮದ ರೂಪವಾದ ಜನಸಂಘ ತನ್ನ ಬಲಪಂಥೀಯ ತತ್ವವನ್ನು ಬಹಿರಂಗವಾಗಿಯೇ ಪ್ರತಿಪಾದಿಸುತ್ತಾ ಬಂದಿದ್ದರೂ ಕಾಂಗ್ರೆಸೇತರ ವಿರೋಧ ಪಕ್ಷಗಳು ಆ ಕಾರಣಕ್ಕಾಗಿಯೇ ಅದನ್ನು ಎಂದೂ ದೂರ ಇಟ್ಟಿರಲಿಲ್ಲ.
1977ರಲ್ಲಿ ಜನಸಂಘ, ಜನತಾಪಕ್ಷದ ಜತೆ ವಿಲೀನಗೊಂಡಿದ್ದರೆ 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗದಲ್ಲಿ ಬಿಜೆಪಿ ಮಾತ್ರವಲ್ಲ ಎಡಪಕ್ಷಗಳು ಕೂಡಾ ಸೇರಿಕೊಂಡಿದ್ದವು.ಆದರೆ ಬಾಬರಿ ಮಸೀದಿಯ ಧ್ವಂಸದ ಘಟನೆ ದೇಶದ ರಾಜಕಾರಣದ ಸಮೀಕರಣವನ್ನೇ ಬದಲಾಯಿಸಿಬಿಟ್ಟಿತು. ಕಾಂಗ್ರೆಸ್ ಮಾತ್ರವಲ್ಲ ಕಾಂಗ್ರೆಸೇತರ ಪಕ್ಷಗಳು ಕೂಡಾ ಬಿಜೆಪಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳದೆ ದೂರ ಇಟ್ಟುಬಿಟ್ಟಿವೆ. ಅದರ ನಂತರದ ದಿನಗಳಲ್ಲಿಯೇ ದೇಶದ ರಾಜಕಾರಣದಲ್ಲಿ `ಕೋಮುವಾದ' ಮತ್ತು `ಜಾತ್ಯತೀತ' ನೆಲೆಯ ಧ್ರುವೀಕರಣ ಪ್ರಾರಂಭವಾಗಿದ್ದು.
ಈ `ರಾಜಕೀಯ ಅಸ್ಪೃಶ್ಯತೆ'ಯಿಂದ ತನ್ನನ್ನು ಮುಕ್ತಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಲೇ ಬಂದಿದೆ. ಇದರ ಫಲಸ್ವರೂಪವೇ  ಎನ್‌ಡಿಎ ರಚನೆ. ಸಮಾಜವಾದಿ ಜಾರ್ಜ್ ಫರ್ನಾಂಡಿಸ್ ಮತ್ತು ನಿತೀಶ್‌ಕುಮಾರ್, ದ್ರಾವಿಡ ಪಕ್ಷಗಳ ಜಯಲಲಿತಾ ಮತ್ತು ಕರುಣಾನಿಧಿಯವರಿಂದ  ದಲಿತ ನಾಯಕ ರಾಮ್‌ವಿಲಾಸ್ ಪಾಸ್ವಾನ್ ವರೆಗೆ ಎಲ್ಲರನ್ನೂ ಜತೆಯಲ್ಲಿ ಸೇರಿಸಿಕೊಂಡಿದ್ದು ಇದೇ ಪ್ರಯತ್ನದ ಭಾಗವಾಗಿತ್ತು.
ಬಹುಜನ ಸಮ್ಮತ ಮುಖ ವಾಜಪೇಯಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸಿದ ಈ ಪ್ರಯತ್ನವನ್ನು ಮತ್ತೆ ಭಂಗಗೊಳಿಸಿದವರು ನರೇಂದ್ರಮೋದಿ. ಬಾಬರಿ ಮಸೀದಿ ಧ್ವಂಸದ ಕಳಂಕ ನಿಧಾನವಾಗಿ ಅಳಿಸಿಹೋಗುತ್ತಿದ್ದಾಗ ಮತ್ತೆ ಬಿಜೆಪಿಯ ಮುಖಕ್ಕೆ ಕೋಮುವಾದದ ಮಸಿ ಬಳಿದವರು ಮೋದಿ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆದ ಕೋಮು ಹಿಂಸಾಚಾರದಿಂದಾಗಿ ಬಿಜೆಪಿ ರಾಜಕೀಯವಾಗಿ ಅಸ್ಪೃಶ್ಯವಾಗಿಯೇ ಉಳಿಯುವಂತಾಯಿತು. ಲೋಕಜನಶಕ್ತಿ ಪಕ್ಷ, ತೆಲುಗುದೇಶಂ, ನ್ಯಾಷನಲ್ ಕಾಂಗ್ರೆಸ್ ಮೊದಲಾದ ಪಕ್ಷಗಳು ಎನ್‌ಡಿಎ ತೊರೆದುಹೋಗಲು ಗುಜರಾತ್ ಗಲಭೆ ಕಾರಣ.
ಹನ್ನೊಂದು ವರ್ಷಗಳಿಂದ ಈ ಕಳಂಕವನ್ನು ತೊಳೆಯಲು ಬಿಜೆಪಿ ಒದ್ದಾಡುತ್ತಿದೆ. `ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದೇಶದಲ್ಲಿಯಾಗಲಿ ಇತರ ರಾಜ್ಯದಲ್ಲಿಯಾಗಲಿ ಕೋಮುಗಲಭೆಗಳು ನಡೆದಿಲ್ಲ' ಎಂದು ಆ ಪಕ್ಷದ ನಾಯಕರು ಸಾರಿ ಸಾರಿ ಹೇಳುತ್ತಿರುವುದು ಮತ್ತು  ನರೇಂದ್ರಮೋದಿ ಅವರು ಕೋಮುವಾದದ ಬಗ್ಗೆ ಉಸಿರೆತ್ತದೆ ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳನ್ನೇ ಪ್ರಸ್ತಾಪಿಸುತ್ತಾ ತಾನೊಬ್ಬ `ವಿಕಾಸ ಪುರುಷ'ನೆಂಬ ರೀತಿಯಲ್ಲಿ ತನ್ನನ್ನು ಬಿಂಬಿಸಿಕೊಳ್ಳುತ್ತಿರುವುದು-ಎಲ್ಲವೂ ಈ `ಆತ್ಮಾವಲೋಕನದ ರಾಜಕಾರಣ'ದ ಚಿತ್ರಕತೆಯ ಭಾಗ.
ಮೋದಿ ಅವರು ತನ್ನಿಂದ ತಪ್ಪಾಗಿದೆ ಎಂದು ತಲೆಕೆಳಗೆ ಕಾಲು ಮೇಲೆ ಮಾಡಿ ದೇಶದ ಜನರ ಕ್ಷಮೆ ಕೇಳಿದರೂ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಮುಸ್ಲಿಮರು ಅವರನ್ನು ಕ್ಷಮಿಸಲಾರರು. ಈ ಕ್ಷಮೆ ಸಿಗದೆ  ಕಾಂಗ್ರೆಸೇತರ ಪಕ್ಷಗಳು ಬಿಜೆಪಿಯ ಜತೆಗೂಡುವುದು ಕಷ್ಟ. ಆದರೆ ಕಳೆದ ಒಂದು ದಶಕದ ಅವಧಿಯಲ್ಲಿ ಕಾಂಗ್ರೆಸೇತರ ರಾಜಕೀಯ ಪಕ್ಷಗಳ ಒಟ್ಟು ಬಿಜೆಪಿ ವಿರೋಧ ಈಗ ಆ ಪಕ್ಷದ ಒಬ್ಬ ನಾಯಕನಾದ ನರೇಂದ್ರಮೋದಿ ಬಗ್ಗೆಯಷ್ಟೇ ಸೀಮಿತವಾಗಿರುವುದು ವಿಶೇಷ.
ಹಾಗಿದ್ದರೆ ನರೇಂದ್ರಮೋದಿ ಅವರನ್ನು ಕೈಬಿಟ್ಟು ಬೇರೆಯಾರನ್ನಾದರೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ ಬಿಜೆಪಿ ಮನೆಯೊಳಗೆ ಜಾತ್ಯತೀತ ಪಕ್ಷಗಳು ಪ್ರವೇಶಿಸಿ ಅಸ್ಪೃಶ್ಯತೆಯನ್ನು ತೊಲಗಿಸಲು ಸಿದ್ಧ ಇವೆಯೇ? `ಹೌದು' ಎಂದು ಮುಲಾಯಂಸಿಂಗ್ ಯಾದವ್ ಬಾಯಿಬಿಟ್ಟು ಹೇಳುವ ಒಂದು ದಿನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಬಿಜೆಪಿಯೊಳಗಿನ ಕೆಲವು ನಾಯಕರು ಇಂತಹ ದಿನಕ್ಕಾಗಿಯೇ ಕಾಯುತ್ತಿರುವಂತಿದೆ. ಮೋದಿ ಅಲ್ಲದೆ ಇದ್ದರೆ ಬೇರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಕಷ್ಟಪಡಬೇಕಾಗಿಲ್ಲ. ಆಗಲೇ ಲಾಲ್‌ಕೃಷ್ಣ ಅಡ್ವಾಣಿಯವರು ಎದ್ದು ನಿಂತಿದ್ದಾರೆ. ತುಸು ಬಾಗಿದಂತಿದ್ದ ಅವರ ಬೆನ್ನು ಮುಲಾಯಂ ಹೊಗಳಿಕೆಯ ಮುಲಾಮು ಹಚ್ಚಿದ ಮೇಲೆ ನೆಟ್ಟಗಾಗಿದೆ, ಅವರನ್ನು ಕಾಡುತ್ತಾ ಬಂದಿರುವ ಪ್ರಧಾನಿ ಪಟ್ಟದ ಹಳೆಯ ಕನಸು ಮತ್ತೆ ಚಿಗುರೊಡೆದಿದೆ.
ಆದರೆ ಮುಲಾಯಂಸಿಂಗ್ ಅವರಿಗೆ ಕಾಂಗ್ರೆಸ್ ಬಗ್ಗೆ ಎಷ್ಟೇ ದ್ವೇಷವಿದ್ದರೂ ಆ ಕಾರಣಕ್ಕಾಗಿ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಪ್ರಧಾನಿ ಮಾಡಲು ಅವರು ಹೊರಡಲಾರರು. ಮೋದಿಯನ್ನು ಕೈಬಿಟ್ಟ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೂ ಪ್ರಧಾನಿ ಪಟ್ಟಕ್ಕೆ ಮುಲಾಯಂಸಿಂಗ್ ಅವರ ಮೊದಲ ಆಯ್ಕೆ ಮುಲಾಯಂಸಿಂಗ್ ಅವರೇ ಎಂಬುದು ಸ್ಪಷ್ಟ.
ಇತ್ತೀಚೆಗೆ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್‌ಕುಮಾರ್ ಅವರನ್ನು ಯಾಕೆ ಬಿಂಬಿಸಬಾರದು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದು ಕೂಡಾ ಮುಲಾಯಂಸಿಂಗ್ ಯಾದವ್   ಇದ್ದಕ್ಕಿದ್ದಂತೆ ಸಕ್ರಿಯವಾಗಲು ಕಾರಣ ಇರಬಹುದು. ಇದರ ಜತೆಗೆ ಯುಪಿಎ ಮೇಲೆ ಒತ್ತಡ ಹೇರಿ ಕಾರ್ಯ ಸಾಧಿಸಿಕೊಳ್ಳುವ ದುರಾಲೋಚನೆಯೂ ಅವರಲ್ಲಿದ್ದಿರಬಹುದು. ನಿಜವಾಗಿಯೂ ಎನ್‌ಡಿಎ ಜತೆ ಸೇರಿಕೊಳ್ಳುವ ಉದ್ದೇಶ ಮುಲಾಯಂ ಮತ್ತಿತರ ತೃತೀಯರಂಗದ ನಾಯಕರು ಹೊಂದಿದ್ದರೆ ಕಾಂಗ್ರೆಸ್ ಪಕ್ಷದ ನಿದ್ದೆ ಹಾಳಾಗಲಿದೆ.
ಈಗಿನ ಸಂಖ್ಯಾಬಲದ ಹಿನ್ನೆಲೆಯಲ್ಲಿ ಹೇಳುವುದಾದರೆ ತೃತೀಯರಂಗದ ನಾಯಕರೆಲ್ಲರೂ ಒಟ್ಟು ಸೇರಿದರೂ ಯುಪಿಎ ಸರ್ಕಾರವನ್ನು ಉರುಳಿಸಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ವಾಸ್ತವ. ಇದು ಸಾಧ್ಯವಾಗಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 150ಕ್ಕಿಂತ ಕೆಳಗಿಳಿಯಬೇಕು,ಬಿಜೆಪಿಯ ಬಲ 150ಕ್ಕಿಂತ ಮೇಲೇರಬೇಕು ಮತ್ತು ತೃತೀಯರಂಗದ ಗಂಟೆ ಆಡಿಸುತ್ತಿರುವ ಎಸ್‌ಪಿ, ಟಿಎಂಸಿ,ಡಿಎಂಕೆ ಇಲ್ಲವೆ ಎಡಿಎಂಕೆ,ಬಿಜೆಡಿ, ತೆಲುಗುದೇಶಂ, ಜೆಡಿ (ಎಸ್) ಮೊದಲಾದ ಪಕ್ಷಗಳು ಕನಿಷ್ಠ ಈಗ ಇರುವ ಸಂಖ್ಯಾಬಲವನ್ನಾದರೂ ಉಳಿಸಿಕೊಳ್ಳಬೇಕು. ಅದು ಸಾಧ್ಯವಾದರೆ ಈಗಿನ ಮಿತ್ರಪಕ್ಷಗಳ ಜತೆ ತೃತೀಯ ರಂಗದ ನಾಯಕರ ಬೆಂಬಲವನ್ನೂ ಬಳಸಿಕೊಂಡು ಉಳಿದ 100-120 ಸ್ಥಾನಗಳನ್ನು ಹೊಂದಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗಲಾರದು. ಅಂತಹ ಸಂದರ್ಭದಲ್ಲಿ ಈಗ ಯುಪಿಎನಲ್ಲಿರುವ ಶರದ್ ಪವಾರ್ ಅವರ ಎನ್‌ಸಿಪಿ, ಅಜಿತ್‌ಸಿಂಗ್ ಅವರ ಆರ್‌ಎಲ್‌ಡಿ  ಕೂಡಾ ಶಿಬಿರ ಬದಲಾಯಿಸಬಹುದು.
ಬದಲಾಗಿರುವಂತೆ ಕಾಣುತ್ತಿರುವ ಮುಲಾಯಂಸಿಂಗ್ ಅವರ ಹೊಗಳಿಕೆಯಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರಿಗೆ `ಸುರಂಗದ ಕೊನೆಯಲ್ಲಿನ ಬೆಳಕು' ಕಂಡಿರಲೂಬಹುದು. ಪ್ರಧಾನಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿರುವ ನರೇಂದ್ರಮೋದಿಯವರನ್ನು ಪಕ್ಕಕ್ಕೆ ತಳ್ಳಿ ತನ್ನ ಬದುಕಿನ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಈ ಅವಕಾಶವನ್ನು ಯಾಕೆ ಬಳಸಿಕೊಳ್ಳಬಾರದು ಎಂಬ ಯೋಚನೆ ಅವರಲ್ಲಿ ಹುಟ್ಟಿರಲೂ ಬಹುದು.
ಮಿತ್ರಪಕ್ಷಗಳಾದ ಜೆಡಿ (ಯು) ಮತ್ತು ಶಿವಸೇನೆ ಮಾತ್ರವಲ್ಲ ಬಿಜೆಪಿಯೊಳಗಿನ ಬಹುತೇಕ ಹಿರಿಯ ನಾಯಕರು ಕೂಡಾ ನರೇಂದ್ರಮೋದಿ ಅವರಿಗೆ ವಿರುದ್ಧವಾಗಿರುವುದರಿಂದ ತೃತೀಯರಂಗದ ನಾಯಕರು ಸ್ನೇಹಹಸ್ತ ಚಾಚಿದರೆ ಮೋದಿ ಅವರನ್ನು ಕೊಡವಿಕೊಳ್ಳುವುದು ಪಕ್ಷಕ್ಕೆ ಕಷ್ಟವಾಗಲಾರದು. ಮುಸ್ಲಿಮರನ್ನು ಓಲೈಸುತ್ತಿದ್ದಾರೆಂದು ಆರೋಪಿಸಿ ಸಮಾಜವಾದಿ ಪಕ್ಷದ ನಾಯಕನನ್ನು `ಮುಲ್ಲಾ ಮುಲಾಯಂ' ಎಂದು ದೂಷಿಸಿದ್ದ ಸಂಘ ಪರಿವಾರದ ನಾಯಕರು ಇಂತಹ `ಅಪವಿತ್ರ ಸಂಬಂಧ'ವನ್ನು ಒಪ್ಪಬಹುದೇ?
ದೇವರ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕಿದ ದ್ರಾವಿಡ ಪಕ್ಷಗಳ ಜತೆಯಲ್ಲಿಯೇ ಸೇರಿಕೊಂಡಾಗ ಆಕ್ಷೇಪ ಎತ್ತದವರು ಇದನ್ನು ಯಾಕೆ ಒಪ್ಪಲಾರರು? ಪಕ್ಷಕ್ಕೆ ಅಧಿಕಾರ ಬಂದರೆ ತಮಗೆ ಬಂದಂತೆ ಎಂದು ಅವರು ಅನುಭವದ ಬಲದಿಂದ ಕಂಡುಕೊಂಡಿಲ್ಲವೇ?  ಅಧಿಕಾರವನ್ನು ಚಪ್ಪರಿಸಿದವರಿಗೆ ಅದರ ಸವಿ ಗೊತ್ತಿಲ್ಲವೇ?

No comments:

Post a Comment