Thursday, October 8, 2015

ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ

ಚೇತನಾ ತೀರ್ಥಹಳ್ಳಿ ಅವರ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಅವರು ಅಲ್ಲಲ್ಲಿ ಮತ್ತೆ ಮತ್ತೆ ನನ್ನನ್ನು ಕುಟುಕಿದ್ದಾಗ ನಾನು ಖಾರವಾಗಿ ಪ್ರತಿಕ್ರಿಯಿಸಿದ್ದೆ ಕೂಡಾ. ಇತ್ತೀಚೆಗೆ ನಮ್ಮವರು ನಡೆಸಿದ ಪ್ರತಿಭಟನೆಯಲ್ಲಿ ಅವರ ಮುಖ ಕಾಣಿಸಿಕೊಂಡಾಗ ಅದನ್ನು ಪ್ರಶ್ನಿಸಿದ್ದು ಕೂಡಾ ಹೌದು. ಅದಕ್ಕೆ ಅವರು ದೀರ್ಘವಾದ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ. ಇಷ್ಟು ಮಾತ್ರಕ್ಕೆ ಅವರ ಜತೆಗಿನ ಭಿನ್ನಾಭಿಪ್ರಾಯಗಳೆಲ್ಲವೂ ಕೊನೆಗೊಂಡಿದೆ ಎಂದು ಹೇಳಲಾರೆ.ಆದರೆ ಈ ಹೆಣ್ಣಿನ ಮೇಲೆ ಕೆಲವು ಹುಚ್ಚುನಾಯಿಗಳ ಬುದ್ದಿಯವರು ಅಶ್ಲೀಲ,ಅವಾಚ್ಯ ಶಬ್ದಗಳಿಂದ ನಡೆಸುತ್ತಿರುವ ದಾಳಿಯನ್ನು ನೋಡಿದಾಗ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಮೀರಿ ನನ್ನ ಮನಸ್ಸು ಸಿಟ್ಟಾಗುತ್ತಿದೆ, ಮರುಗುತ್ತಿದೆ. ಇಂತಹದ್ದೊಂದು ಸ್ಪಂದನ ನಮ್ಮಲ್ಲಿ ಹುಟ್ಟಿಕೊಳ್ಳದಿದ್ದರೆ ನಾವು ಮನುಷ್ಯರಾಗುವುದಿಲ್ಲ, ಅವರಂತೆ ಅಮಾನುಷರಾಗುತ್ತೇವೆ.
ತಮ್ಮ ಮಾನ, ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ಚೇತನಾ ತೀರ್ಥಹಳ್ಳಿಯವರು ನಡೆಸುವ ಹೋರಾಟವನ್ನು ನಾವೆಲ್ಲರೂ ಬೆಂಬಲಿಸುವ, ನಾನೂ ಬೆಂಬಲಿಸುತ್ತೇನೆ.
ಇದೇ ವೇಳೆ ನನ್ನ ಸ್ನೇಹಿತರಲ್ಲಿ ಸವಿನಯ ವಿನಂತಿ. ನಾವು ಅವರಾಗುವುದು ಬೇಡ. ಎಲ್ಲವನ್ನು ಪ್ರೇಮಪೂರ್ಣ ಜ್ಞಾನದ ಮೂಲಕವೇ ಗೆದ್ದ ಬುದ್ದ, ವಿರೋಧಿಗಳನ್ನು ತರ್ಕಬದ್ಧ ಪಾಂಡಿತ್ಯದಿಂದ ಗೆದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇದೇ ದಾರಿಯಲ್ಲಿ ನಡೆದು ನಮ್ಮ ಮುನ್ನಡೆಗೆ ದಾರಿ ತೋರಿದ ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ. ನಮ್ಮ ಸಿಟ್ಟನ್ನು ಹೊರಗೆ ಕಾರಿ ಬೆಂಕಿ ಮಾಡುವುದು ಬೇಡ. ಅದನ್ನು ನಮ್ಮೊಳಗೆ ಮಾಗಲು ಬಿಟ್ಟು ನಮ್ಮ ಶಕ್ತಿಯನ್ನಾಗಿ ಮಾಡಿಕೊಳ್ಳುವ, ಬೆಳಕನ್ನಾಗಿ ಮಾಡುವ.

ನಂಬಿ, ಇತಿಹಾಸ ಕೂಡಾ ನಮ್ಮದೇ ಭವಿಷ್ಯ ಕೂಡಾ ನಮ್ಮದೇ. ಈ ವಕ್ರಬುದ್ದಿಗೇಡಿಗಳು, ಸುಳ್ಳುಬೆಲೆಗೇಡಿಗಳೆಲ್ಲ ಇತಿಹಾಸದ ಚಾಪೆಯಡಿ ಸಿಕ್ಕಿ ನಾಶವಾಗುವ ಹುಳುಗಳು ಅಷ್ಟೇ.

No comments:

Post a Comment