Saturday, March 14, 2015

ಜಾತಿ ಒಳಗೆ ಇಣುಕಿ

(ಪ್ರಜಾವಾಣಿಯಲ್ಲಿ ನಡೆಯುತ್ತಿರುವ 'ಜಾತಿವಾರು ಜನಗಣತಿ ಸುತ್ತ'.. ಚರ್ಚೆಗೆ ಪ್ರತಿಕ್ರಿಯೆ)ಎಸ್.ಎಂ.ಜಾಮದಾರ ಅವರ  ‘ಜಾತಿವಾರು ಜನಗಣತಿ ಸುತ್ತ...’ ಎಂಬ ಲೇಖನ (ಪ್ರ.ವಾ., ಫೆ. 19) ತಪ್ಪುದಾರಿಗೆಳೆಯುವಂತಿದೆ. ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧಾರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿ ಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಶಾಸಕಾಂಗ, ನ್ಯಾಯಾಂಗ ಹಾಗೂ  ಸಂವಿಧಾನ.  ಜಾಮದಾರರು ಇದನ್ನು ಗುರುತಿಸಲು ವಿಫಲರಾಗಿರುವುದು ಆಶ್ಚರ್ಯ.ಜಾತಿ,  ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ಕೆಲವು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ವರ್ಗಗಳು ಯಾವುವು? ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದಕ್ಕೆ  ಸಂವಿಧಾನದ 15 (3), 15 (4), 16 (4) ಮತ್ತು 46ನೇ ಪರಿಚ್ಛೇದಗಳಲ್ಲಿ ಉಲ್ಲೇಖವಿದೆ. ಜಾಮದಾರರು ಆರೋಪಿಸುವಂತೆ ಈ ಜಾತಿ ಗಣತಿ ಹಿಂದೆ ಕುತಂತ್ರ ಇರುವುದು ನಿಜವೆಂದಾದರೆ ಅವರು ಈ ಆರೋಪವನ್ನು ಸಂವಿಧಾನದ ವಿರುದ್ಧ ಮಾಡಬೇಕಾಗುತ್ತದೆ.‘ಹಿಂದಿನ ಮೂರು ಜನಗಣತಿಗಳು ಎಲ್ಲಿ ಹೋದವು? ಎರಡು ದಶಕಗಳಲ್ಲಿ ರಾಜ್ಯದ ಸಾಮಾಜಿಕ ರಚನೆಯಲ್ಲಿ ಗುರುತಿಸಲಾರದಷ್ಟು ಪರಿವರ್ತನೆಯಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.  ಹಿಂದಿನ ಜಾತಿಗಣತಿ ಮತ್ತು ಈಗ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಗಳ ನಡುವಿನ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರುವುದು ಆಶ್ಚರ್ಯಕರ. ಹಿಂದಿನ ಆಯೋಗಗಳೆಲ್ಲವೂ  ಆಧರಿಸಿದ್ದು 1931ರ ಜನಗಣತಿಯ ಜಾತಿ ಪ್ರಮಾಣವನ್ನು ಜನಸಂಖ್ಯೆಯ ಹೆಚ್ಚಳದ ಪ್ರಮಾಣಕ್ಕೆ ಹಿಗ್ಗಿಸಿ ಮಾಡಿದ ಲೆಕ್ಕವನ್ನು. ಇಂತಹ ಸಮೀಕ್ಷೆಗಳಿಗೆ ಮಿತಿಗಳಿರುವುದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ.ಜಾತಿಗಳನ್ನು ಜೀವಂತವಾಗಿಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈಗಿನ ಮೀಸಲಾತಿಗೆ ಆಧಾರವಾಗಿರುವ ಜಾತಿ ಸಂಖ್ಯೆಗಳ ವೈಜ್ಞಾನಿಕತೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ, ನಮ್ಮಲ್ಲಿ ಜಾತಿ ನಿರ್ದಿಷ್ಟವಾದ ಯೋಜನೆಗಳಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿ ಇಲ್ಲದೆ ಈ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಈಗಿನ ಜನಗಣತಿಯಲ್ಲಿ ಈ ಮಾಹಿತಿ ಎಲ್ಲಿ ಲಭ್ಯ ಇದೆ?‘ಭಾರತದಲ್ಲಿ ಜಾತಿ ಎನ್ನುವುದು ಸಾಮಾಜಿಕ ವರ್ಗ. ಸಾಮಾಜಿಕ ಹಿಂದುಳಿಯುವಿಕೆಯನ್ನು ಗುರುತಿಸಲು ಜಾತಿ ಪ್ರಮುಖ ಮಾನದಂಡ. ಇದಕ್ಕಾಗಿ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು. ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು  ಕೇಂದ್ರ, ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು 23 ವರ್ಷಗಳ ಹಿಂದೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.‘ನೇರ ಮೀಸಲಾತಿಗೆ ಅವಕಾಶವಿಲ್ಲದಾಗ ಉಪಜಾತಿಗಳಿಗೆ ಒಳ ಮೀಸಲಾತಿಯ ಅಸ್ತ್ರವನ್ನು ಬಳಸಿ ಮುಖ್ಯ ಜಾತಿಗಳಿಂದ ಉಪಜಾತಿಗಳನ್ನು ಬೇರ್ಪಡಿಸಿ ನಿಯಂತ್ರಿಸುವ ಹುನ್ನಾರಗಳು ನಮ್ಮ ಮುಂದಿವೆ’ ಎಂದು ಜಾಮದಾರ ಹೇಳಿದ್ದಾರೆ. ನಮ್ಮಲ್ಲಿ ಯಾವ ಜಾತಿಯೂ ಏಕಶಿಲಾ ರೂಪದ್ದಲ್ಲ, ಅದರೊಳಗೆ ನೂರಾರು ಉಪಜಾತಿಗಳಿವೆ. ಮೀಸಲಾತಿಯ ಲಾಭವನ್ನು ನಿರ್ದಿಷ್ಟ ಜಾತಿಯೊಳಗಿನ ಬಲಾಢ್ಯ ಗುಂಪುಗಳಷ್ಟೇ ಕೈವಶ ಮಾಡಿಕೊಳ್ಳುವುದರಿಂದ ಅದೇ ಜಾತಿಯೊಳಗಿನ ದುರ್ಬಲರ ಗುಂಪಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಇದೆ. ಹಾಗಿದ್ದರೆ ಸತ್ಯಾಂಶವನ್ನು ತಿಳಿದುಕೊಳ್ಳುವುದು ಬೇಡವೇ? ಸಂಖ್ಯಾ ಬಲಕ್ಕಾಗಿ ಎಲ್ಲರೂ ಬೇಕು, ಸೌಲಭ್ಯಗಳ ಪ್ರಶ್ನೆ ಎದುರಾದಾಗ ‘ಅವರಿಗೆ ಬೇಡ, ನಮಗಷ್ಟೇ ಸಾಕು’ ಎಂದು ಹೇಳುವುದು ಆಷಾಢಭೂತಿತನ.ಜಾತಿಗಣತಿ ಎನ್ನುವುದು ಆರ್ಎಸ್ಎಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಅವರು ಕಳವಳಪಟ್ಟಿದ್ದಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ,  ಕಂದಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು, ಪಡೆದುಕೊಂಡವರು ಯಾರು ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?ಬಲಿಷ್ಠ ಜಾತಿಗಳ ನಾಯಕರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ  ಎಂಬ ಆಧಾರರಹಿತ ರಾಜಕೀಯ ವಿಶ್ಲೇಷಣೆಯನ್ನು ಜಾಮದಾರ ಮುಂದಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮೊದಲ ಬಾರಿಗೆ ಜಾತಿ ಬಲ ಇಲ್ಲದ ದೇವರಾಜ ಅರಸು ಅಧಿಕಾರಕ್ಕೆ ಬಂದಿರುವುದನ್ನು ಅವರು ಮುಚ್ಚಿಡುತ್ತಾರೆ, ಅರಸು ಅಧಿಕಾರ ಕಳೆದುಕೊಂಡದ್ದನ್ನು ಮಾತ್ರ ಪ್ರಸ್ತಾಪಿಸುತ್ತಾರೆ. 1983ರಲ್ಲಿ ಕಾಂಗ್ರೆಸ್  ಪಕ್ಷವನ್ನು ಸೋಲಿಸಿದ್ದು ಎಸ್.ಬಂಗಾರಪ್ಪ ಮತ್ತು ಅಬ್ದುಲ್ ನಜೀರ್ ಸಾಬ್ ನೇತೃತ್ವದ ಜನತಾ ರಂಗ. 1994ರಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದು ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಮೋಸ ದಿಂದ ಎಂದು ಹೇಳುವವರು ಆ ಚುನಾವಣೆಯಲ್ಲಿ ಬಂಗಾರಪ್ಪ ಅವರು ವಹಿಸಿದ್ದ ಬಂಡುಕೋರನ ಪಾತ್ರ ವನ್ನು ಮರೆಯುತ್ತಾರೆ.ಜಾಮದಾರರು 1999ರ ಚುನಾವಣೆಯಲ್ಲಿ ಎಸ್. ಎಂ.ಕೃಷ್ಣ  ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಕಾಂಗ್ರೆಸ್ 2004ರಲ್ಲಿ ಕೃಷ್ಣ ನೇತೃತ್ವದಲ್ಲಿ ಸೋತಿರುವುದನ್ನು ಮರೆಯುತ್ತಾರೆ. ಆಶ್ಚರ್ಯ­ವೆಂದರೆ, ಅವರ ಚುನಾವಣಾ ವಿಶ್ಲೇಷಣೆ 2004ಕ್ಕೆ ನಿಂತು ಬಿಟ್ಟಿರುವುದು. ಅವರು 2013ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ್ದರೆ ಅವರ ಚುನಾವಣಾ ವಿಶ್ಲೇಷಣೆ ತಾರ್ಕಿಕ  ಅಂತ್ಯ ಕಾಣುತ್ತಿತ್ತು.  2013ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದವರು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ. ಸೋತುಹೋದ ಅವರ ಎದುರಾಳಿ ಪಕ್ಷಗಳಾದ ಜೆಡಿಎಸ್, ಕೆಜೆಪಿ ಮತ್ತು ಬಿಜೆಪಿಯ  ನಾಯಕತ್ವ ಯಾರ ಕೈಯಲ್ಲಿತ್ತು? ಯಾವುದೇ ಚುನಾವಣೆಯಲ್ಲಿ ನಿರ್ದಿಷ್ಟ ಜಾತಿ ಜನ ನೂರಕ್ಕೆ ನೂರರಷ್ಟು ಒಂದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಹಾಗೆಂದು ತಿಳಿದುಕೊಳ್ಳುವುದು ಮತದಾರರಿಗೆ ಮಾಡುವ ಅವಮಾನ ಅಷ್ಟೆ.

No comments:

Post a Comment