Wednesday, February 4, 2015

ವಸು ಮಳಲಿ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ..

ವಸು ಮಳಲಿಯವರ ಪಾರ್ಥಿವ ಶರೀರ ಬೆಂಕಿಯಲ್ಲಿ ಲೀನವಾಗುತ್ತಿರುವುದನ್ನು ನೋಡಿ ಬಂದೆ, ಮನಸ್ಸೆಲ್ಲಾ ಬೂದಿ. ಚರಿತ್ರೆ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದಿಂದ ದಕ್ಕಿಸಿಕೊಂಡ ಒಳನೋಟಗಳ ಜತೆಗೆ ರಾಜಿಯಿಲ್ಲದ ಬದ್ದತೆಯಿಂದಾಗಿ ವಸು ನಮ್ಮಂತಹವರಿಗೆಲ್ಲ ಬಹಳ ಇಷ್ಟವಾಗುತ್ತಿದ್ದರು. . ಈ ನೆನಪುಗಳೇ ಈಗ ನಮ್ಮನ್ನು ವೇದನೆಯಾಗಿ ಸುಡುತ್ತಿದೆ.
ಶ್ರವಣಬೆಳಗೊಳದ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಸ್ಪೋಟಿಸಿದ ನಮ್ಮ ಸ್ವಾಭಿಮಾನಿ ಲೇಖಕಿಯರು ಮತ್ತು ಮಹಿಳಾ ಹೋರಾಟಗಾರರ ದಿಟ್ಟ ದನಿಗಳನ್ನು ಇಂದು ಪತ್ರಿಕೆಗಳಲ್ಲಿ ಓದಿ ಹೆಮ್ಮೆಯೆನಿಸಿತ್ತು. ಭವಿಷ್ಯದ ಬಗ್ಗೆ ಭರವಸೆ ಕೂಡಾ ಮೂಡಿತ್ತು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಇನ್ನಷ್ಟು ಕಾಲ ನಮ್ಮ ಜತೆ ಇರಬೇಕಾಗಿದ್ದ ಇದೇ ಸಾಲಿನ ಮಹಿಳಾ ದನಿಯೊಂದು ಶಾಶ್ವತವಾಗಿ ಮೌನವಾಗಿದ್ದನ್ನು ಕೇಳಿ ವಿಷಾದವಾಯಿತು.
ಅವರ ಅನಾರೋಗ್ಯದ ಬಗ್ಗೆ ಮಾತನಾಡಿಸಬೇಕೆಂದು ಬಹಳ ಸಲ ಯೋಚಿಸಿದ್ದೆ. ಕ್ಯಾನ್ಸರ್ ಎನ್ನುವ ರೋಗವನ್ನು ತುಸು ಹತ್ತಿರದಿಂದ ಕಂಡಿರುವ ನನಗೆ ಅವರೊಡನೆ ಮಾತನಾಡುವುದು ಬಹಳಷ್ಟಿತ್ತು. ಆದರೆ ಎದುರಿಗೆ ಸಿಕ್ಕಾಗ ಅನಾರೋಗ್ಯವನ್ನು ಪ್ರಸ್ತಾಪಿಸಿ ಅವರ ಮನಸ್ಸನ್ನೇಕೆ ಕಲಕಲಿ ಎಂದು ಸುಮ್ಮನಾಗುತ್ತಿದ್ದೆ. ಇಂದು ಸ್ನೇಹಿತರ ಮಾತುಗಳನ್ನು ಕೇಳಿದಾಗ ಚಿಕಿತ್ಸೆಯಲ್ಲಿ ಅವರು ಸ್ವಲ್ಪ ಎಡವಿದ್ದಂತೆ ಕಾಣುತ್ತಿತ್ತು. ಇದು ಅವರ ಅಗಲಿಕೆಯ ನೋವಿನ ಜತೆ ಸಣ್ಣ ವಿಷಾದದ ಎಳೆ ಕೂಡಾ ಮನಸ್ಸನ್ನು ಕುಟುಕುವಂತೆ ಮಾಡಿದೆ.
ಇನ್ನು ಬಹಳ ಕಾಲ ಇಂದಿನ ತಲೆಮಾರನ್ನು ವೈಚಾರಿಕವಾಗಿ ಮುನ್ನಡೆಸುವ ಬೌದ್ದಿಕ ಶಕ್ತಿ ವಸು ಅವರಲ್ಲಿತ್ತು. ಚರಿತ್ರೆಯನ್ನು ತಿರುಚಿ ಹಾದಿ ತಪ್ಪಿಸುತ್ತಿರುವವರ ದುಷ್ಟಸಂತಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ವಸು ಅವರ ಅಗತ್ಯ ಬಹಳ ಇತ್ತು. ಇದರಿಂದಾಗಿಯೇ ಅವರ ಅಕಾಲಿಕ ಸಾವು ನಮ್ಮಲ್ಲಿ ಅನಾಥಭಾವ ಮೂಡಿಸಿದೆ. 

ತಿಂಗಳುಗಳ ಹಿಂದೆ ನೀಲಾ ಅವರ ಪುಸ್ತಕದ ಬಿಡುಗಡೆಗೆಂದು ನಾವಿಬ್ಬರೂ ಜತೆಯಲ್ಲಿಯೇ ರೈಲಿನಲ್ಲಿ ಕಲಬುರಗಿಗೆ ಹೋಗಿದ್ದೆವು. ಆಗ ಅವರು ತಲೆಯಲ್ಲಿ ತುಂಬಿಕೊಂಡಿದ್ದ ಭವಿಷ್ಯದ ಯೋಜನೆಗಳನ್ನೆಲ್ಲ ನಡುರಾತ್ರಿ ವರೆಗೆ ಬಿಡಿಸಿ ಬಿಡಿಸಿ ಹೇಳಿದ್ದರು. ಆ ಯೋಜನೆಗಳನ್ನೆಲ್ಲ ಸಾಕಾರಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಿಂತ ಒಳ್ಳೆಯ ಶ್ರದ್ದಾಂಜಲಿಯನ್ನು ವಸು ಕೂಡಾ ನಿರೀಕ್ಷಿಸಿರಲಾರರು.
ಇವೆಲ್ಲದರ ಮೂಲಕ ನಮ್ಮನ್ನಗಲಿದ ವಸು ಅವರ ಆತ್ಮವನ್ನು ಸಂತೈಸಬಹುದೇನೋ, ಆದರೆ ಅಮ್ಮನನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಿದ್ದ ಅವರ ಮಗಳನ್ನು ಸಂತೈಸುವವರು ಯಾರು? ಕಣ್ಣೀರಾಗಿ ಹೋಗಿದ್ದ ಆ ಬಾಲೆಯನ್ನು ನೋಡಿದಾಗ, ಎಳೆಯ ಮಕ್ಕಳಿರುವವರು ಸಾಯಬಾರದು ಇಲ್ಲವೆ ಸಾಯುವವರಿಗೆ ಎಳೆಯ ಮಕ್ಕಳಿರಬಾರದು ಎಂದು ಅನಿಸಿದ್ದು ನಿಜ.

1 comment:

  1. ಇನ್ನಲಿಲ್ಲಾಹಿ ವಇನ್ನ ಇಲೈಹಿ ರಾಜಿಊನ್
    (ನಿಶ್ಚಯವಾಗಿ ನಾವು ಅವನಿಗಾಗಿ ಇರೋದು, ಮತ್ತು ಅವನಲ್ಲಿಗೇ ವಾಪಸ್ಸು ಹೋಗೋದು)

    ReplyDelete