Thursday, January 19, 2012

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.... January 16, 2012


ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.

ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.

ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.

ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್‌ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.

ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.

ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.

ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.

`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.
ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು. 
`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.
ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.
`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.

ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.

ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
 ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.
ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.

 ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ  ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).
ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು  ತೆರೆದಿಡುತ್ತದೆ.
 
ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್‌ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56.  ಬಿಎ ಪರೀಕ್ಷೆಯ  ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).
ತಂದೆಯ ಸಾವಿನ ನಂತರ ಅನಿವಾರ‌್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.

ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.
ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.

ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.

ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.
ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.
ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ  ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.

`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.
ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.
ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್‌ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್‌ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..
 
ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ  ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.
ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.

ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.
ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.
ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು

19/01/2011

`ವಿವೇಕಾನಂದರ ಬಗ್ಗೆ...' ಗ್ರಹಿಕೆಗೆ ಪೂರಕವಾಗಿ...




ಕಳೆದ ಸೋಮವಾರದ (ಜ.16) ಸ್ವಾಮಿ ವಿವೇಕಾನಂದರ ಕುರಿತ ನನ್ನ ಅಂಕಣಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳ ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ವಿರೋಧಿಸುವವರು ಅಂಕಣದಲ್ಲಿ ವ್ಯಕ್ತಪಡಿಸಿದ ವಿಚಾರಗಳನ್ನು ಮತ್ತು ಅದರ ಒಟ್ಟು ಆಶಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ನನಗೆ.

ಸಂವಹನ ಸಾಮರ್ಥ್ಯ ಒಬ್ಬ ಪತ್ರಕರ್ತನ ದೊಡ್ಡ ಶಕ್ತಿ. ಇದರ ಮೂಲಕವೇ ಆತ ಓದುಗನ ಜತೆ ಸಂಬಂಧ ಸ್ಥಾಪನೆಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಂವಹನದ ಸೇತುವೆ ಮುರಿದುಬಿದ್ದರೆ ಪತ್ರಕರ್ತ ಮತ್ತು ಓದುಗರಿಬ್ಬರೂ ಪರಸ್ಪರ ಸಂಧಿಸಲಾಗದೆ ಇದ್ದಲ್ಲಿಯೇ ಉಳಿದುಬಿಡುತ್ತಾರೆ.

ಪೂರ್ವಗ್ರಹ ಇಲ್ಲದ ಮುಕ್ತ ಮನಸ್ಸಿನ ಮೂಲಕ ಮಾತ್ರ ಸಂವಹನದ ಸೇತುವೆಯನ್ನು ಗಟ್ಟಿಗೊಳಿಸಲು ಸಾಧ್ಯ. ಈ ಉದ್ದೇಶದಿಂದ ಕೆಲವು ವಿವರಣೆಗಳನ್ನು ನೀಡಬಯಸುತ್ತೇನೆ. ಇದು ನನ್ನ ಬರವಣಿಗೆಯನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನೆರವಾಗಬಹುದೆಂಬ ಆಶಯ ನನ್ನದು.

ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶ ಇರಬೇಕಾದರೆ ಕನಿಷ್ಠ ಭಿನ್ನಾಭಿಪ್ರಾಯಗಳಾದರೂ ಇರಬೇಕು.ನನ್ನ ಓದಿನ ಮಿತಿಯಲ್ಲಿಯೂ ನನಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ವಿವೇಕಾನಂದರು ಹೇಳಿರುವ ಯಾವ ವಿಚಾರದ ಬಗ್ಗೆಯೂ ಲವಲೇಶದಷ್ಟೂ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬಯಸುತ್ತೇನೆ.

ಆದರೆ ವಿವೇಕಾನಂದರನ್ನು ಸರಿಯಾಗಿ ಓದಿದ ಯಾರಿಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಹೇಳಿರುವ ವಿಚಾರಗಳು ಅವರ ಸಾವಿನ 110 ವರ್ಷಗಳ ನಂತರವೂ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಕಾಡದೆ ಇರದು.

ಬಹುಶಃ ಅವರು ಬಯಸಿದ ರೀತಿಯಲ್ಲಿ ಸುಧಾರಣೆಯಾಗಿದ್ದರೆ ಹಿಂದೂ ಧರ್ಮ ಭಾರತ-ನೇಪಾಳಕ್ಕಷ್ಟೇ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಹರಡುತ್ತಿತ್ತು. ಆ ಪ್ರಯತ್ನವನ್ನೇ ಅವರು ಮಾಡಿದ್ದಲ್ಲವೇ?

 ಇದರಲ್ಲಿ ಮುಖ್ಯವಾಗಿ ನಾನು ಬಳಸಿದ ಕೆಲವು ಶಬ್ದಗಳ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಉದಾಹರಣೆಗೆ ಅವರನ್ನು `ದಡ್ಡ ವಿದ್ಯಾರ್ಥಿ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. `ದಡ್ಡ` ಎನ್ನುವ ಶಬ್ದ ಮಾನಹಾನಿಕರ ಅಲ್ಲವೇ ಅಲ್ಲ.

ಆದರೆ ವಿವೇಕಾನಂದರನ್ನು ಆ ಅರ್ಥದಲ್ಲಿಯೂ ದಡ್ಡ ಎಂದು ಹೇಳಿದುದಲ್ಲ. ಅವರಿಗೆ ಕಡಿಮೆ ಅಂಕಗಳು ಬಂದಿರುವುದು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿನ ದೋಷವನ್ನು ತೋರಿಸುತ್ತದೆಯೇ ಹೊರತು ಅವರ ಅಸಾಮರ್ಥ್ಯವನ್ನಲ್ಲ. ನಿಜವಾದ ಬುದ್ಧಿವಂತರನ್ನು ಗುರುತಿಸಲು ಸಾಧ್ಯವಾಗದ ಅಂದಿನ ವ್ಯವಸ್ಥೆ ಇನ್ನೂ ಬದಲಾಗಿಲ್ಲ.

ಈಗಲೂ ಬಾಯಿಪಾಠ ಮಾಡಿಸಿ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ನೆರವಾಗುವ ಮಟ್ಟದಲ್ಲಿ ಅದು ಉಳಿದುಕೊಂಡುಬಿಟ್ಟಿದೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅವರನ್ನು ಶಿಕ್ಷಕ ವೃತ್ತಿಯಿಂದ ವಜಾಗೊಳಿಸಿದ್ದನ್ನು ಹೇಳಿರುವ ಬಗ್ಗೆ ಕೆಲವರ ತಕರಾರುಗಳಿವೆ.

ಆ ಪ್ರಕರಣವನ್ನು ನಾನು ಇನ್ನಷ್ಟು ವಿವರಿಸಬೇಕಾಗಿತ್ತೋ ಏನೋ? ಈಶ್ವರಚಂದ್ರ ವಿದ್ಯಾಸಾಗರ ಅವರು ವಿವೇಕಾನಂದರನ್ನು ಕೆಲಸದಿಂದ ಕಿತ್ತುಹಾಕಲು ಕಾರಣ ಅವರ ಅಳಿಯ. ಆತ ಶಿಕ್ಷಣ ವ್ಯವಸ್ಥೆಯ ಆಡಳಿತ ಸೂತ್ರ ಕೈಗೆತ್ತಿಕೊಂಡ ನಂತರ ವಿವೇಕಾನಂದರ ಪ್ರತಿಭೆಯ ಬಗ್ಗೆ ಅಸೂಯೆಪಟ್ಟು ಚಾಡಿ ಹೇಳಿ ಮಾವನ ತಲೆ ಕೆಡಿಸುತ್ತಾನೆ.

ಈಶ್ವರಚಂದ್ರ ವಿದ್ಯಾಸಾಗರರಂತಹ ವ್ಯಕ್ತಿ ಕೂಡಾ ದೂರನ್ನು ಪರಾಮರ್ಶಿಸಲು ಹೋಗುವುದಿಲ್ಲ. ನಮ್ಮ ಈಗಿನ ಶಿಕ್ಷಣ ಸಂಸ್ಥೆಗಳು ಇದಕ್ಕಿಂತ ಏನಾದರೂ ಭಿನ್ನವಾಗಿವೆಯೇ? ಪ್ರತಿಭಾವಂತ ಶಿಕ್ಷಕನಿಗೆ ಮಾನ್ಯತೆ ಸಿಗುತ್ತಿದೆಯೇ? ಒಂದು ಸಣ್ಣಶಾಲೆಯಲ್ಲಿ ಪಾಠ ಹೇಳಲು `ಅಸಮರ್ಥ`ನಾದ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತಿಗೆ ಪಾಠಹೇಳುತ್ತಾರೆ. 

ನರೇಂದ್ರನಾಥರೇನೋ ಕೀಳರಿಮೆಯಿಂದ ಬಳಲದೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಆದರೆ ಇದೇ ವ್ಯವಸ್ಥೆಯೊಳಗೆ ಸಿಕ್ಕಿ ಎಷ್ಟೋ ಪ್ರತಿಭೆಗಳು ಕಮರಿಹೋಗಿವೆಯೋ ಏನೋ? ಅಂತಹವರಿಗೆ ವಿವೇಕಾನಂದರ ಸಾಧನೆ ಸ್ಫೂರ್ತಿಯಾಗಬೇಕು.

ಅವರನ್ನು `ತಿಂಡಿಪೋತ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. ನನಗೆ ಅನೇಕ ಬಂಗಾಳಿ ಮಿತ್ರರಿದ್ದಾರೆ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಬಂಗಾಳಿಗಳು ನಿಜಕ್ಕೂ ತಿಂಡಿಪೋತರು. ಹಾಗೆಂದು ಕರೆದರೆ ಅವರು ಹೆಮ್ಮೆಪಡುತ್ತಾರೆ. ಸ್ವತಃ ರಾಮಕೃಷ್ಣ ಪರಮಹಂಸರು ತಿಂಡಿಯನ್ನು ಬಹಳ ಇಷ್ಟಪಡುತ್ತಿದ್ದರು.

ಬಂಗಾಳಿ ಭಕ್ತರು ಬರಿಗೈಯಲ್ಲಿ ಬಂದರೆ `ಬಂಗಾಳಿಯಾಗಿ ನೀನು ಸಿಹಿತಿಂಡಿ ಇಲ್ಲದೆ ಬಂದಿದ್ದಿಯಲ್ಲಾ` ಎಂದು ಹುಸಿಮುನಿಸು ತೋರಿದ್ದುಂಟು. ನಮ್ಮ ಯುವಕರು ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳುತ್ತಿದ್ದರು.

ಅವರನ್ನು `ರೋಗಿ` ಎಂದು ಕರೆದದ್ದು ಸರಿಯೇ ಎಂದು ಕೆಲವರು ದುಃಖದಿಂದ ಪ್ರಶ್ನಿಸಿದ್ದಾರೆ. ರೋಗ ಎನ್ನುವುದು ಅಪರಾಧ ಇಲ್ಲವೇ ಪಾಪ ಅಲ್ಲ. ವಿವೇಕಾನಂದರು ರೋಗಿಯಾಗಿದ್ದು ದುರ್ವ್ಯಸನಗಳಿಂದಲ್ಲ. ಅದು ಸ್ವಲ್ಪಮಟ್ಟಿಗೆ ವಂಶವಾಹಿಯಾಗಿ ಬಂದದ್ದು, ಅವರ ತಂದೆ ಕೂಡಾ 52ನೇ ವಯಸ್ಸಿಗೆ ನಿಧನರಾಗಿದ್ದರು.

ಜತೆಗೆ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು ಮೊದಲಾದ ಕಷ್ಟಗಳು ಅವರ ದೈಹಿಕ ಆರೋಗ್ಯವನ್ನು ಕೆಡಿಸಿತ್ತು. ಒಂದು ಸಣ್ಣ ತಲೆನೋವು ಬಂದರೆ ಒದ್ದಾಡುವ, ವೈಫಲ್ಯಗಳಿಗೆ ಅನಾರೋಗ್ಯದ ಸಬೂಬು ನೀಡಿ ತಪ್ಪಿಸಿಕೊಳ್ಳುವ ನಮ್ಮಂತಹವರಿಗೆ ವಿವೇಕಾನಂದರು ತಮ್ಮ ಅನಾರೋಗ್ಯವನ್ನು ಮೀರಿ ಮಾಡಿದ ಸಾಧನೆ ಸ್ಫೂರ್ತಿಯಲ್ಲವೇ? ಅವರು ವಿಶ್ವದ ಆಧ್ಯಾತ್ಮಿಕ ಕ್ಷೇತ್ರವನ್ನು ಗೆದ್ದದ್ದು ದೈಹಿಕ ಬಲದಿಂದ ಅಲ್ಲ, ಆತ್ಮಬಲದಿಂದ. ಇದು ವಿವೇಕಾನಂದರ ಜೀವನದಿಂದ ಕಲಿಯಬೇಕಾದ ಪಾಠ.

ಹೌದು, ಕೆಲವು ಶಬ್ದಗಳನ್ನು ಇನ್ನಷ್ಟು ಮೆದುಗೊಳಿಸಬಹುದಿತ್ತು.. ದಡ್ಡ ಎನ್ನುವ ಬದಲು `ಬುದ್ಧಿವಂತನಲ್ಲದ` `ಹೆಚ್ಚು ಅಂಕ ಗಳಿಸಲಾಗದ` ಎಂದು, `ತಿಂಡಿಪೋತ` ಎನ್ನುವ ಬದಲಿಗೆ `ತಿಂಡಿಯನ್ನು ಇಷ್ಟಪಡುವ` ಎಂದು ಹೇಳಬಹುದಿತ್ತೋ ಏನೋ? ಇಂಗ್ಲಿಷಿನ `ಚೆಯಿನ್ ಸ್ಮೋಕರ್` ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳುವುದೆಂದು ಗೊತ್ತಾಗದೆ `ವ್ಯಸನಿ` ಎಂದು ಬರೆದೆ.

ಅದನ್ನು ತಪ್ಪಿಸಬಹುದಿತ್ತು. ಕೆಲವು ವಿಷಯಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಉದಾಹರಣೆಗೆ ಅಮೆರಿಕದಲ್ಲಿ ರಾತ್ರಿ ಔತಣಕೂಟಕ್ಕೆ ಹೋಗಿದ್ದರೂ ಅವರು ಅಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೋಜು ಮಾಡಿಲ್ಲ. ಆ ಔತಣಗಳ ಕರೆಗಳಿಂದ ತಪ್ಪಿಸಲಿಕ್ಕಾಗಿ ಅವರು ವಿದೇಶಕ್ಕೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಸಸ್ಯಾಹಾರಿಯಾಗಿ ಬಿಡುತ್ತಿದ್ದರು. 

ಈ ಬರವಣಿಗೆಗೆ ಆಧಾರವಾಗಿ ಸಿಕ್ಕಿದ್ದು ಮುಖ್ಯವಾಗಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಪುಸ್ತಕ. ನನ್ನ ಬಂಗಾಳಿ ಮಿತ್ರರು ಕೆಲವು ವರ್ಷಗಳ ಹಿಂದೆಯೇ ಈ ಪುಸ್ತಕದ ಬಗ್ಗೆ ನನಗೆ ಹೇಳಿದ್ದರೂ ಭಾಷಾ ಸಮಸ್ಯೆಯಿಂದಾಗಿ ಓದಲಾಗಿರಲಿಲ್ಲ. ಕಳೆದ ವರ್ಷ ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದನ್ನು ಕೇಳಿ ತಂದು ಓದಿದೆ. 

ವಿವೇಕಾನಂದರ `ಸಮಗ್ರ ಕೃತಿ ಸಂಗ್ರಹ`, ಮೇರಿ ಲೂಯಿಸ್ ಬರ್ಕ್ ಅವರ `ವಿವೇಕಾನಂದ ಇನ್ ದಿ ವೆಸ್ಟ್: ನ್ಯೂ ಡಿಸ್ಕವರಿ`,  ಸ್ವಾಮಿ ವಿವೇಕಾನಂದ ಅವರ ಸೋದರ ಮಹೇಂದ್ರನಾಥ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು, ಇನ್ನೊಬ್ಬ ಸೋದರ ಡಾ. ಭೂಪೇಂದ್ರನಾಥ ದತ್ತಾ ಬರೆದಿರುವ ಪುಸ್ತಕ, ಸೋದರಿ ನಿವೇದಿತಾ ಅವರ ಲೇಖನಗಳು-ಹೀಗೆ ನೂರಾರು ಪುಸ್ತಕಗಳನ್ನು ಓದಿ ಬರೆದ ಪುಸ್ತಕ ಅದು. ಅದನ್ನು ಆಧರಿಸಿಯೇ ಬರೆದೆ.

ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಅಧ್ಯಾತ್ಮ ಚೇತನ. ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯ ಇಲ್ಲ. ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು.

No comments:

Post a Comment