Thursday, January 19, 2012

ಪಶ್ಚಿಮ ಬಂಗಾಳದ ಜನತೆಯ ಕಷ್ಟಕ್ಕೆ ಅಂತ್ಯವೇ ಇಲ್ಲ January 09, 2012

ಪಶ್ಚಿಮ ಬಂಗಾಳದಲ್ಲಿ ಯಾರೂ ಊಹಿಸದಂತಹ ರಾಜಕೀಯ ಬೆಳವಣಿಗೆಗಳೇನೂ ನಡೆದಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸ್ವಭಾವ ಮತ್ತು ಮಿತ್ರಪಕ್ಷಗಳ ಜತೆಗಿನ ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು ಗಮನಿಸುತ್ತಾ ಬಂದ ಯಾರಲ್ಲಿಯೂ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಶಾಶ್ವತವಾದುದು ಎಂಬ ನಿರೀಕ್ಷೆ ಇರಲು ಸಾಧ್ಯವೂ ಇಲ್ಲ. ಆದರೆ ಈಗಿನ ಬೆಳವಣಿಗೆ ನಿರೀಕ್ಷೆಗಿಂತ ಸ್ವಲ್ಪ ಮೊದಲೇ ನಡೆದಿದೆ.

ಎರಡು ಪಕ್ಷಗಳ ನಡುವಿನ ಮೈತ್ರಿಕೂಟದ ಸರ್ಕಾರ 232 ದಿನಗಳನ್ನಷ್ಟೇ ಪೂರ್ಣಗೊಳಿಸಿದೆ. ಆಗಲೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷಕ್ಕೆ ಹೊರಗೆ ಹೋಗುವ ಬಾಗಿಲು ತೋರಿಸಿದ್ದಾರೆ. ಬಹಳಷ್ಟು ಸಂದರ್ಭಗಳಲ್ಲಿ ರಾಜಕೀಯ ಮೈತ್ರಿಗಳು ಉಳಿದುಕೊಂಡು ಹೋಗುವುದು ಸಮಾನ ಚಿಂತನೆ, ಪರಸ್ಪರ ಗೌರವ ಇಲ್ಲವೇ ತಿಳಿವಳಿಕೆಯಿಂದ ಅಲ್ಲ, ರಾಜಕೀಯ ಅನಿವಾರ‌್ಯತೆ ಎಂಬ ಅಂಟಿನಿಂದ.

ಈ ಕಾರಣದಿಂದಾಗಿಯೇ ಈ ಎರಡು ಪಕ್ಷಗಳ ಮೈತ್ರಿ ಇನ್ನಷ್ಟು ದಿನ ಮುಂದುವರಿದುಕೊಂಡು ಹೋಗಲೂಬಹುದು. ಆದರೆ ಮನಸ್ಸು ಒಡೆದು ಹೋದ ಮೇಲೆ ಮೈತ್ರಿ ಒಡೆಯಲು ಬಹಳ ದಿನ ಬೇಕಾಗಲಾರದು.

ಮನುಷ್ಯರಿರಲಿ, ರಾಜಕೀಯ ಪಕ್ಷಗಳೇ ಇರಲಿ, ಮೈತ್ರಿಯ ಎಳೆ ಸೂಕ್ಷ್ಮವಾದುದು, ಅದನ್ನು ಅತಿಯಾಗಿ ಎಳೆದಾಡಿದರೆ ಕಡಿದು ಹೋಗುತ್ತದೆ.  ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗಿನ ಮಮತಾ ಬ್ಯಾನರ್ಜಿ ಅವರ ರಾಜಕೀಯ ನಿರ್ಧಾರಗಳನ್ನು ನೋಡಿದರೆ ಅವರು ಈ ಸೂಕ್ಷ್ಮವನ್ನು ಅರ್ಥಮಾಡಿಕೊಂಡಂತೆ ಕಾಣುವುದಿಲ್ಲ. ಹೊಂದಾಣಿಕೆ ಅವರ ಸ್ವಭಾವವೇ ಅಲ್ಲ. ಅವರು ಎರಡು ಬಾರಿ ಕಾಂಗ್ರೆಸ್ ತೊರೆದು ಎನ್‌ಡಿಎ ಮತ್ತು ಎರಡು ಬಾರಿ ಎನ್‌ಡಿಎ ತೊರೆದು ಕಾಂಗ್ರೆಸ್ ಜತೆ ಸೇರಿಕೊಂಡವರು. ಎನ್‌ಡಿಎದಲ್ಲಿದ್ದಾಗಲೂ ಅವರೊಬ್ಬ ಶಾಶ್ವತ ಭಿನ್ನಮತೀಯರಾಗಿದ್ದರು.
ರಾಜ್ಯದ ಯಾವುದೋ ಒಂದು ಕಾಲೇಜಿನ ಪ್ರಾಚಾರ್ಯರ ಮೇಲೆ ತೃಣಮೂಲ ಕಾಂಗ್ರೆಸ್ ಯುವ ಘಟಕದ ಸದಸ್ಯರು ನಡೆಸಿದ ಹಲ್ಲೆ ಮತ್ತು ಅದರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗಳದ್ದು ಸಣ್ಣ ಘಟನೆ. ಸಂಬಂಧಗಳು ಸೌಹಾರ್ದಯುತವಾಗಿದ್ದ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರು  ಕೇಳಿ ಮರೆತು ಬಿಡುವಂತಹದ್ದು. ಎರಡು ಪಕ್ಷಗಳ ನಡುವಿನ ಸಂಘರ್ಷಕ್ಕೆ ಈ ಘಟನೆಯೇ ಕಾರಣ ಅಲ್ಲ, ನಿಜವಾದ ಕಾರಣಗಳು ಬೇರೆಲ್ಲೋ ಇವೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ಹೆಚ್ಚಳ, ಬಾಂಗ್ಲಾದೇಶದ ಜತೆಗೆ ತೀಸ್ತಾ ನದಿ ನೀರು ಹಂಚಿಕೆಯ ಒಪ್ಪಂದ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಲೋಕಪಾಲ ಮತ್ತು ಲೋಕಾಯುಕ್ತರ ನೇಮಕದ ಮಸೂದೆ, ಪಿಂಚಣಿ ಮಸೂದೆ.. ಹೀಗೆ ಯುಪಿಎ ಸರ್ಕಾರದ ಹಲವು ಪ್ರಮುಖ ನಿರ್ಧಾರಗಳನ್ನು ಕಳೆದ ಎಂಟು ತಿಂಗಳ ಕಿರು ಅವಧಿಯಲ್ಲಿ ಮಮತಾ ಬ್ಯಾನರ್ಜಿ ವಿರೋಧಿಸುತ್ತಾ ಬಂದಿದ್ದಾರೆ. ಆ ನಿರ್ಧಾರಗಳನ್ನು ಸರ್ಕಾರ ವಾಪಸು ಪಡೆಯುವ ಹಾಗೆಯೂ ಮಾಡಿದ್ದಾರೆ.

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಎಫ್‌ಡಿಐಗೆ ಅವಕಾಶ ನೀಡದಿರುವ ಯುಪಿಎ ನಿರ್ಧಾರವನ್ನು ಪ್ರಕಟಿಸಿದ್ದು ಕೇಂದ್ರ ಸಚಿವರಲ್ಲ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ. ತೀಸ್ತಾ ನದಿ ನೀರು ಹಂಚಿಕೆ ವಿವಾದವನ್ನು ಹೊರತುಪಡಿಸಿ ಉಳಿದ ಯಾವ ಸಂಗತಿಗಳೂ ಪಶ್ಚಿಮ ಬಂಗಾಳಕ್ಕೆ ನೇರವಾಗಿ ಸಂಬಂಧಿಸಿದ ವಿಷಯಗಳೂ ಅಲ್ಲ.

ಲೋಕಪಾಲ ನೇಮಕದ ಮಸೂದೆಯನ್ನು ಲೋಕಸಭೆಯಲ್ಲಿ ಬೆಂಬಲಿಸಿ, ಒಕ್ಕೂಟ ವ್ಯವಸ್ಥೆಯನ್ನು ಭಂಗಗೊಳಿಸುವ ಪ್ರಯತ್ನ ಎಂಬ ಕಾರಣವೊಡ್ಡಿ ರಾಜ್ಯಸಭೆಯಲ್ಲಿ ವಿರೋಧಿಸಿದ್ದು ಕಾಲುಕೆರೆದು ಜಗಳಕ್ಕೆ ಇಳಿಯುವಂತಹ ನಡವಳಿಕೆ. ಇದು ಸಾಲದೆಂಬಂತೆ ಕೋಲ್ಕತ್ತದ ಪ್ರತಿಷ್ಠಿತ ಸಾಲ್ಟ್‌ಲೇಕ್‌ನಲ್ಲಿರುವ ಸರ್ಕಾರಿ ಬಂಗಲೆಗೆ ಈಗ ಇರುವ ಇಂದಿರಾಗಾಂಧಿ ಹೆಸರನ್ನು ಕಿತ್ತುಹಾಕಿ ಹೊಸ ನಾಮಕರಣ ಮಾಡಲು ಹೊರಟಿದ್ದಾರೆ.  ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಯನ್ನು ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಎದುರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಮಮತಾ ಬ್ಯಾನರ್ಜಿ ಅವರ ಈ ವಿರೋಧಗಳಲ್ಲಿ ಯಾವುದನ್ನೂ ಜನವಿರೋಧಿ ಎಂದು ಹೇಳುವ ಹಾಗಿಲ್ಲ. ಆದರೆ ಅವರಿಗಿರುವ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಅವರ ಆದ್ಯತೆಗಳೇನಾಗಬೇಕಿತ್ತು ಎನ್ನುವುದಷ್ಟೇ ಈಗಿನ ಪ್ರಶ್ನೆ.

ಕಾಂಗ್ರೆಸ್ ಎಷ್ಟೇ ಹಾರಾಡಿದರೂ ಪಶ್ಚಿಮ ಬಂಗಾಳದ ಮಟ್ಟಿಗೆ ಈಗ ಇರುವ ಮೂರನೇ ಸ್ಥಾನದಿಂದ ಮೇಲೆ ಬರಲು ಅದಕ್ಕೆ ಸಾಧ್ಯವಾಗಲಾರದು. ಮಮತಾ ಬ್ಯಾನರ್ಜಿ ಇಷ್ಟು ತಿಳಿದುಕೊಂಡಿದ್ದರೆ ಈಗಿನ ಬಿಕ್ಕಟ್ಟು ಸೃಷ್ಟಿಯಾಗುತ್ತಿರಲಿಲ್ಲ. ಮೈಮೇಲೇರಿ ಹೋಗಿ ಜಗಳ ಮಾಡಿದ ನಂತರ ಕೇಂದ್ರದಲ್ಲಿ ಅಧಿಕಾರವನ್ನು ಹೊಂದಿರುವ ರಾಷ್ಟ್ರೀಯ ಪಕ್ಷ ಕೈಕಟ್ಟಿ ಕೂರಬೇಕೆಂದು ಯಾರೂ ಹೇಳಲಾರರು.

`ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ತೃಣಮೂಲ ಕಾಂಗ್ರೆಸ್ ಪ್ರಶ್ನಿಸಬಹುದಾದರೆ ನಾವು ಒಪ್ಪದ ರಾಜ್ಯ ಸರ್ಕಾರದ ನಿರ್ಧಾರಗಳನ್ನು ನಾವು ಯಾಕೆ ವಿರೋಧಿಸಬಾರದು?` ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಪ್ರಶ್ನೆ ತಪ್ಪೆಂದು ಮಮತಾ ಬ್ಯಾನರ್ಜಿ ಹೇಳಲು ಸಾಧ್ಯ ಇಲ್ಲ.

ಕಾಂಗ್ರೆಸ್ ಪಕ್ಷವನ್ನು ಅತ್ತಿತ್ತ ಮಿಸುಕಾಡದಂತೆ ಕಟ್ಟಿಹಾಕಿದ್ದ ಮಮತಾ ಬ್ಯಾನರ್ಜಿ ಕೋಲ್ಕೊತ್ತಾದಲ್ಲಿಯೇ ಕೂತು ಕೇಂದ್ರ ಸರ್ಕಾರವನ್ನೂ ನಿಯಂತ್ರಿಸಲು ಹೊರಟಿರುವುದನ್ನು ಕಂಡ ನಂತರವೇ ಕಾಂಗ್ರೆಸ್ ಪಕ್ಷ ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ತೊಡಗಿರುವುದು. ಆಗ ಅವರಿಗೆ ಎದುರಾದವರು ಮುಲಾಯಂ ಸಿಂಗ್ ಯಾದವ್. ತಮ್ಮ `ಆಜನ್ಮ ಶತ್ರು` ಮಾಯಾವತಿ ಅವರನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವೇ ಇಲ್ಲ ಎಂದು ಮನವರಿಕೆಯಾದ ನಂತರ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವು ತೋರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವೂ ಅಷ್ಟೇ ಅಸಹಾಯಕ ಸ್ಥಿತಿಯಲ್ಲಿದೆ. ಎರಡು ಪಕ್ಷಗಳ ಯುವ ಉತ್ತರಾಧಿಕಾರಿಗಳಾದ ರಾಹುಲ್‌ಗಾಂಧಿ ಮತ್ತು ಅಖಿಲೇಶ್‌ಸಿಂಗ್ ನಡುವಿನ ಸೌಹಾರ್ದಯುತ ಸಂಬಂಧವೂ ಮೈತ್ರಿಯ ಸಾಧ್ಯತೆಯನ್ನು ಹೆಚ್ಚಿಸಿವೆ.

ಲೋಕಸಭೆಯಲ್ಲಿ 23 ಸಮಾಜವಾದಿ ಪಕ್ಷದ ಸದಸ್ಯರಿರುವುದರಿಂದ 19 ಲೋಕಸಭಾ ಸದಸ್ಯರನ್ನಷ್ಟೇ ಹೊಂದಿರುವ ಮಮತಾ ಬ್ಯಾನರ್ಜಿ ಮೈತ್ರಿಯನ್ನು ಕಡಿದುಕೊಂಡರೂ ಯುಪಿಎ ಸರ್ಕಾರಕ್ಕೇನೂ ಹಾನಿಯಾಗಲಾರದು. ಆದರೆ ಈ ಮೈತ್ರಿಯನ್ನು ಈಗಾಗಲೇ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ  ಮಾಡಿಕೊಳ್ಳುವ ಸ್ಥಿತಿಯಲ್ಲಿ ಎರಡೂ ಪಕ್ಷಗಳೂ ಇಲ್ಲ. ಇವೆಲ್ಲವೂ ಉತ್ತರಪ್ರದೇಶದ ಚುನಾವಣೋತ್ತರ ಕಾಲದ ಲೆಕ್ಕಾಚಾರ.

ಮೈತ್ರಿಯನ್ನು ಕಡಿದುಕೊಂಡರೆ ಮಮತಾ ಬ್ಯಾನರ್ಜಿ ಅವರ ಸರ್ಕಾರದ ಸುಭದ್ರತೆಗೂ ಧಕ್ಕೆ ಉಂಟಾಗಲಾರದು. 294 ಸದಸ್ಯ ಬಲದ ವಿಧಾನಸಭೆಯಲ್ಲಿ 186 ಸ್ಥಾನಗಳನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್‌ನ ಸರ್ಕಾರವನ್ನು 42 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷ ಎಡಪಕ್ಷಗಳ ಜತೆ ಕೂಡಿಕೊಂಡರೂ ಉರುಳಿಸಲು ಸಾಧ್ಯ ಇಲ್ಲ.

ಮಮತಾ ಬ್ಯಾನರ್ಜಿ ಅವರಿಗೆ ಈ ಗಣಿತ ಗೊತ್ತಿರುವ ಕಾರಣದಿಂದಾಗಿಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ದಾಳಿ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ತಮ್ಮನ್ನು ಮೈತ್ರಿಕೂಟದಿಂದ ಕೈಬಿಡುವ ಮೊದಲೇ ತಾನೇ ಆ ಪಕ್ಷದಿಂದ ದೂರ ಹೋಗುವ ಉದ್ದೇಶವೂ ಅವರಿಗೆ ಇದ್ದಿರಬಹುದು.

ಆದರೆ ಈ ಎರಡು ಪಕ್ಷಗಳ ನಡುವಿನ ಸ್ವಹಿತಾಸಕ್ತಿ ಪ್ರೇರಿತ ಸಂಘರ್ಷದಿಂದ ನಿಜಕ್ಕೂ ಕಷ್ಟ-ನಷ್ಟ ಅನುಭವಿಸಲಿರುವವರು ಪಶ್ಚಿಮಬಂಗಾಳದ ಜನತೆ. `ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾದ` ಸ್ಥಿತಿ ಅವರದ್ದು.

34 ವರ್ಷಗಳ ಎಡಪಕ್ಷಗಳ ಆಡಳಿತದಿಂದ ಬೇಸತ್ತ ಆ ರಾಜ್ಯದ ಜನತೆ ಅನಿವಾರ್ಯವೆಂಬಂತೆ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅಧಿಕಾರಕ್ಕೆ ತಂದರು. ಅಲ್ಲಿನ ಹಿರಿ ಕಿರಿಯರೆಲ್ಲರೂ `ದೀದಿ` ಎಂದೇ ಪ್ರೀತಿಯಿಂದ ಕರೆಯುವ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅವರಿಗೆ ತಿಳಿಯದ ಸಂಗತಿಗಳ್ಯಾವುದೂ ಇಲ್ಲ.

ಈ `ದೀದಿ`ಯ ಸರಳತೆ, ಪ್ರಾಮಾಣಿಕತೆ, ಬಡಜನರ ಬಗ್ಗೆ ಇರುವ ಕಾಳಜಿ ಎಲ್ಲವೂ ಅವರಿಗೆ ತಿಳಿದಿದೆ. ಇದರ ಜತೆಗೆ ಸಿಟ್ಟಿನ ಕೈಗೆ ಬುದ್ಧಿ ಕೊಡುವ `ದೀದಿ`ಯ ದೌರ್ಬಲ್ಯ ಮತ್ತು ಆಡಳಿತದ ಅನುಭವದ ಕೊರತೆಯೂ ಅವರಿಗೆ ಗೊತ್ತಿದೆ. ಬಯಸಿದ್ದು ಸಿಕ್ಕಿದ ನಂತರವಾದರೂ ಮಮತಾ ಬ್ಯಾನರ್ಜಿ ಅವರ ತಮ್ಮ ದೌರ್ಬಲ್ಯಗಳನ್ನು ಮೀರುವ ಪ್ರಯತ್ನ ಮಾಡಬಹುದೆಂಬ ನಿರೀಕ್ಷೆ ಅವರಲ್ಲಿತ್ತೋ ಏನೋ? ಅದಕ್ಕಾಗಿ ಭಾರಿ ಬಹುಮತದಿಂದ ಅವರ ಪಕ್ಷವನ್ನು ಗೆಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ `ದೀದಿ` ಮಾಡುತ್ತಿರುವುದೇನು?

 ಕೈಗಾರಿಕಾ ಹಿನ್ನಡೆ, ಮೂಲ ಸೌಕರ್ಯಗಳ ಕೊರತೆ, ಹೆಚ್ಚುತ್ತಿರುವ ನಿರುದ್ಯೋಗ, ಇಳಿಯುತ್ತಿರುವ ಕೃಷಿ ಆದಾಯ ಮೊದಲಾದ ಅನೇಕ ಮೂಲಭೂತ ಸಮಸ್ಯೆಗಳನ್ನು ಮಮತಾ ಬ್ಯಾನರ್ಜಿ ಎಡಪಕ್ಷಗಳಿಂದ ಬಳುವಳಿಯಾಗಿ ಪಡೆದಿದ್ದಾರೆ.

ಇವುಗಳನ್ನೆಲ್ಲ ಎದುರಿಸಿ ಪರಿಹರಿಸಲು ಆಡಳಿತದ ಅನುಭವ, ಅಭಿವೃದ್ಧಿಯ ಮುನ್ನೋಟ, ಹೊಂದಾಣಿಕೆಯ ಮನೋಭಾವ, ತಂತ್ರಗಾರಿಕೆ ಎಲ್ಲವೂ ಬೇಕಾಗುತ್ತದೆ. ಆದರೆ ಇವುಗಳ್ಯಾವುದೂ ಮಮತಾ ಬ್ಯಾನರ್ಜಿ ಅವರಲ್ಲಿ ಇಲ್ಲ.  ಆಡಳಿತದ ಕೌಶಲಕ್ಕೆ ಮಮತಾ ಬ್ಯಾನರ್ಜಿ ಹೆಸರಾದವರಲ್ಲ. ಕೇಂದ್ರದಲ್ಲಿ ಮೂರು ಬಾರಿ ರೈಲ್ವೆ, ಒಂದು ಬಾರಿ ಮಾನವ ಸಂಪನ್ಮೂಲ ಅಭಿವೃದ್ಧಿ, ಇನ್ನೊಂದು ಬಾರಿ ಕಲ್ಲಿದ್ದಲು ಮತ್ತು ಗಣಿ ಖಾತೆಗಳಿಗೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ದೇಶದ ಜನತೆ ನೆನಪಲ್ಲಿಟ್ಟುಕೊಳ್ಳುವಂತಹ ಯಾವ ಕೆಲಸವನ್ನೂ ಮಾಡಿಲ್ಲ. ಕಳೆದ ಏಳೆಂಟು ತಿಂಗಳ ಅವರ ಆಡಳಿತವನ್ನು ನೋಡಿದರೂ ಅಂತಹ ಯಾವ ನಿರೀಕ್ಷೆಯನ್ನು ಅವರು ಹುಟ್ಟುಹಾಕಿಲ್ಲ.

ಶನಿವಾರ ಅವರೇ ಮಾಧ್ಯಮದ ಎದುರು ಆಡಿದ ಮಾತುಗಳು ಅವರ ಅಸಹಾಯಕತೆ ಮತ್ತು ಹತಾಶೆಯನ್ನು  ತೋರಿಸುತ್ತದೆ. `ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿರುವ ಪೊಲೀಸ್ ಇಲಾಖೆಯನ್ನು ಕಟ್ಟಿಕೊಂಡು ಏನು ಆಡಳಿತ ನಡೆಸಲಿ?` ಎಂದು ಅವರು ಕೇಳಿದ್ದಾರೆ.

ಎಡಪಕ್ಷಗಳ `ಅತಿಕ್ರಮಣ` ಕೇವಲ ಪೊಲೀಸ್ ಇಲಾಖೆಯೊಂದಕ್ಕೆ ಸೀಮಿತವಾಗಿಲ್ಲ. ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಮೇಲಿನಿಂದ ಕೆಳಗಿನವರೆಗೆ ಎಡಪಕ್ಷಗಳಿಗೆ ನಿಷ್ಠರಾದವರೇ ತುಂಬಿಕೊಂಡಿದ್ದಾರೆ.

ಚುನಾವಣೆ ಮೂಲಕ ರಾಜಕೀಯ ಬದಲಾವಣೆಯನ್ನು ಮಾಡಿದಷ್ಟು ಸುಲಭದಲ್ಲಿ ಬ್ಯುರೋಕ್ರಸಿಯನ್ನು ಒಂದೇ ಏಟಿಗೆ ಬದಲಾಯಿಸುವುದು ಸಾಧ್ಯ ಇಲ್ಲ. ಅಲ್ಲಿ ಇರುವವರು ಮಮತಾ ಬ್ಯಾನರ್ಜಿ ಅವರನ್ನು ಅಷ್ಟೊಂದು ಸುಲಭದಲ್ಲಿ ಒಪ್ಪಿಕೊಳ್ಳುವವರೂ ಅಲ್ಲ.

ಅವರನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಮಮತಾ ಅವರಲ್ಲಿಯೂ ಇಲ್ಲ.
ಅವರದ್ದು ಮುಟ್ಟಿದರೆ ಸಿಡಿಯುವಂತಹ ಸ್ವಭಾವ. ಮಮತಾ ಬ್ಯಾನರ್ಜಿ ಅವರ ಈ ದೌರ್ಬಲ್ಯವನ್ನೇ ಉಪಯೋಗಿಸಿಕೊಂಡು ಕಾಂಗ್ರೆಸ್ ಮತ್ತು ಎಡಪಕ್ಷಗಳು ಅವರನ್ನು ಕೆಡವಿಹಾಕಲು ಬೋನು ಇಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಸುಲಭದಲ್ಲಿ ಅದಕ್ಕೆ ಬೀಳುತ್ತಿದ್ದಾರೆ.

ಕೇಂದ್ರ ಸರ್ಕಾರದ ಸಹಕಾರ ಇಲ್ಲದೆ ಪಶ್ಚಿಮ ಬಂಗಾಳವನ್ನು ಈಗಿನ ದುಃಸ್ಥಿತಿಯಿಂದ ಪಾರು ಮಾಡುವುದು ಸಾಧ್ಯವೇ ಇಲ್ಲ. ಮಮತಾ ಬ್ಯಾನರ್ಜಿ ನಿಜಕ್ಕೂ ಜಾಣೆಯಾಗಿದ್ದರೆ ಕೆಲವು ವರ್ಷಗಳ ಕಾಲವಾದರೂ ಕಾಂಗ್ರೆಸ್ ಪಕ್ಷದ ಜತೆ ಹೊಂದಿಕೊಂಡು ಹೋಗುವ ಔದಾರ್ಯವನ್ನು ತೋರಬೇಕಿತ್ತು. ಆ ಮೂಲಕ ಕೇಂದ್ರದ ನೆರವನ್ನು ಪಡೆದು ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಪ್ರಯತ್ನ ಮಾಡಬಹುದಿತ್ತು.

ಕನಿಷ್ಠ ತನ್ನ ನೆರೆಯ ರಾಜ್ಯವಾದ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯವನ್ನು ನೋಡಿಯಾದರೂ ಕಲಿಯಬಹುದಿತ್ತು. ಕೇಂದ್ರದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಅದರ ಜತೆ ಎಲ್ಲಿಯೂ ಸಂಘರ್ಷಕ್ಕಿಳಿಯದೆ ಅಗತ್ಯ ಇರುವಲ್ಲಿ ಸಹಕಾರ ಪಡೆಯುತ್ತಾ ಪಶ್ಚಿಮಬಂಗಾಳಕ್ಕಿಂತಲೂ ದುಃಸ್ಥಿತಿಯಲ್ಲಿದ್ದ ಬಿಹಾರವನ್ನು ಸರಿ ದಾರಿಗೆ ತರಲು ನಿತೀಶ್ ಪ್ರಯತ್ನಿಸುತ್ತಿದ್ದಾರೆ. ಸ್ವಂತ ಅನುಭವದಿಂದಲೇ ಕಲಿಯದವರು ಬೇರೆಯವರ ಅನುಭವದಿಂದ ಏನು ಕಲಿಯುತ್ತಾರೆ

No comments:

Post a Comment