Monday, December 24, 2012

ಮೋದಿ ಪಾಲಿಗೆ ದೆಹಲಿ ಸಮೀಪ, ಅಷ್ಟೇ ದೂರ Dec 24 2012


ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿ, ಮೂರು ಚುನಾವಣೆಗಳನ್ನು ಗೆದ್ದು, ದೇಶದಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಸಂಚಲನವನ್ನು ಉಂಟು ಮಾಡಿರುವ ನರೇಂದ್ರಮೋದಿ, ಗುಜರಾತ್‌ನಲ್ಲಿಯೇ ಉಳಿದು ಮುಂದೊಂದು ದಿನ ಅಲ್ಲಿಂದಲೇ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂದು ತಿಳಿದುಕೊಂಡವರು ಮೂರ್ಖರು. ನರೇಂದ್ರಮೋದಿ ಮೂರ್ಖರಲ್ಲ, ಅವರೊಬ್ಬ ಮಹತ್ವಾಕಾಂಕ್ಷಿ ಅಷ್ಟೇ ಜಾಣ ರಾಜಕಾರಣಿ. ರಾಷ್ಟ್ರರಾಜಕಾರಣದ ಕಡೆಗೆ ಅವರು ಹೊರಟಿರುವ ದಾರಿಯಲ್ಲಿ ಹಲವಾರು ಅಡ್ಡಿಆತಂಕಗಳಿವೆ ನಿಜ, ಆದರೆ ಇವು ಯಾವುದೂ ಮುಂದಿನ ದಿನಗಳ ಅವರ ದೆಹಲಿ ಪ್ರಯಾಣದ ಸಂಕಲ್ಪವನ್ನು ಬದಲಾಯಿಸದು. ಈ `ರಸ್ತೆತಡೆ'ಗಳನ್ನೆಲ್ಲ ಎದುರಿಸಿ ಅವರು ದೆಹಲಿ ತಲುಪಿದರೂ ಮುಂದೊಂದು ದಿನ ಪ್ರಧಾನಿಯಾಗಿಯೇ ಬಿಡುತ್ತಾರೆ ಎನ್ನುವುದಕ್ಕೂ ಖಾತರಿ ಇಲ್ಲ.  ಆದರೆ ಮನೆಬಾಗಿಲಿಗೆ ಬಂದಿರುವ ಈ ಅವಕಾಶವನ್ನು ಸುಲಭದಲ್ಲಿ ಬಿಟ್ಟುಕೊಡುವಷ್ಟು ಉದಾರಿ ನರೇಂದ್ರಮೋದಿ ಅಲ್ಲ. 
  ಮೋದಿ ಇಂತಹದ್ದೊಂದು ಮಹತ್ವಾಕಾಂಕ್ಷೆ ಇಟ್ಟುಕೊಳ್ಳಲು ಅವರದ್ದೇ ಆಗಿರುವ ಕಾರಣಗಳಿವೆ. ಗುಜರಾತ್ ಮುಖ್ಯಮಂತ್ರಿಯಾಗಲು ಹನ್ನೊಂದು ವರ್ಷಗಳ ಹಿಂದೆ ದೆಹಲಿಯಿಂದ ನರೇಂದ್ರಮೋದಿ ಅವರನ್ನು ಕಳುಹಿಸಿದಾಗ ಆ ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಏನಿತ್ತೋ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಈಗಿನ ಸ್ಥಿತಿ ಹೆಚ್ಚುಕಡಿಮೆ ಹಾಗೆಯೇ ಇದೆ. 1998ರ ಲೋಕಸಭಾ ಚುನಾವಣೆಯ ನಂತರದ ದಿನಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಎದುರಿಸಿದ್ದು ನಿರಂತರ ಸೋಲಿನ ಸರಮಾಲೆಯನ್ನು. ಸಾಬರಮತಿ ವಿಧಾನಸಭಾ ಕ್ಷೇತ್ರ ಮತ್ತು ಸಬರ್‌ಕಾಂಟಾ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ, ಅನಂತರ ನಡೆದ ಪಂಚಾಯತ್ ಚುನಾವಣೆ ಹಾಗೂ ಅಹ್ಮದಾಬಾದ್ ಮತ್ತು ರಾಜಕೋಟ್ ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಪರಾಭವಗೊಂಡಿತ್ತು. ಆ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶಂಕರ್‌ಸಿಂಗ್ ವಘೇಲಾ. ಮುಖ್ಯಮಂತ್ರಿಯಾಗಿದ್ದ ಕೇಶುಭಾಯಿ ಪಟೇಲ್ ಅವರು ಪಕ್ಷದ ಹಿನ್ನಡೆಯನ್ನು ತಡೆಯಲಿಕ್ಕಾಗದೆ ಕೈಚೆಲ್ಲಿ ಕೂತಿದ್ದರು. ಆ ಕಾಲದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರಮೋದಿ ಅವರನ್ನು ಗುಜರಾತ್‌ಗೆ ಕಳುಹಿಸಿಕೊಡಲಾಯಿತು. ಅದರ ನಂತರ ಮೋದಿ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ. ಪ್ರಧಾನಮಂತ್ರಿ ಅಭ್ಯರ್ಥಿಯಾಗಲು ಅರ್ಜಿಯನ್ನೇನಾದರೂ ಬರೆದುಕೊಡಬೇಕಾದ ಪರಿಸ್ಥಿತಿ ಬಂದರೆ ಮೋದಿ ಖಂಡಿತ ಈ ಸಾಧನೆಯನ್ನು ಅದರಲ್ಲಿ ಉಲ್ಲೇಖಿಸಬಹುದು. 

ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಸೋಲು, ಸಾಲುಸಾಲು ವಿಧಾನಸಭಾ ಚುನಾವಣೆಗಳಲ್ಲಿ ಪರಾಭವ, ಪಕ್ಷದ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪ, ದೆಹಲಿ ನಾಯಕರ ನಡುವಿನ ಬಿಕ್ಕಟ್ಟು, ದುರ್ಬಲವಾಗಿ ಹೋಗಿರುವ ಹೈಕಮಾಂಡ್, ಕರ್ನಾಟಕದಲ್ಲಿ ಹೋಳಾಗಿರುವ ಪಕ್ಷ, ರಾಜಸ್ತಾನದಲ್ಲಿ ತಣ್ಣಗಾಗದ ಬಂಡಾಯದ ಉರಿ...-ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸ್ಥಿತಿ ಚಿಂತಾಜನಕವಾಗಿದೆ. ಪಕ್ಷವನ್ನು ಈಗಿನ ಸ್ಥಿತಿಯಿಂದ ಮೇಲೆತ್ತಲು ಸಾಧ್ಯ ಇರುವ ಏಕೈಕ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ವಯಸ್ಸಾಗಿದೆ, ಜತೆಗೆ ಸಂಘ ಪರಿವಾರ ಅವರ ನಿವೃತ್ತಿಯನ್ನು ಬಯಸುತ್ತಿದೆ. ಹಾಗೆಂದ ಮಾತ್ರಕ್ಕೆ ನರೇಂದ್ರಮೋದಿ  ಪ್ರಧಾನಿ ಸ್ಥಾನಕ್ಕೆ ಪಕ್ಷದ ಒಮ್ಮತದ ಅಭ್ಯರ್ಥಿ ಅಲ್ಲ. ಅವರು ದೆಹಲಿಗೆ ಜಿಗಿಯಲು ನಿರ್ಧರಿಸಿದರೆ ಅಲ್ಲಿರುವ ನಾಯಕರು ಆರತಿಬೆಳಗಿ ಸ್ವಾಗತಿಸಲಿದ್ದಾರೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಮೋದಿಯವರು ಒಂದಲ್ಲ ಕನಿಷ್ಠ ಮೂರು ದಿಕ್ಕುಗಳಿಂದ ವಿರೋಧವನ್ನು ಎದುರಿಸಬೇಕಾಗುತ್ತದೆ.
 ವಿರೋಧಿಸುವ ಮೊದಲನೆಯ ಗುಂಪು-  ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ರಾಜನಾಥ್ ಸಿಂಗ್  ಎಂಬ `ಡೆಲ್ಲಿ-4' ಗ್ಯಾಂಗ್.  ಇವರಲ್ಲಿ ಜೇಟ್ಲಿ ಮತ್ತು ಸುಷ್ಮಾ ಖಂಡಿತ  ಪ್ರಧಾನಿ ಅಭ್ಯರ್ಥಿಯಾಗುವ ಅರ್ಹತೆ ಉಳ್ಳವರು, ಆ ಮಹತ್ವಾಕಾಂಕ್ಷೆ ಕೂಡಾ ಅವರಲ್ಲಿದೆ. ಆದರೆ ಒಂದು ರಾಷ್ಟ್ರೀಯ ಪಕ್ಷದ ನಾಯಕ ಇಲ್ಲವೆ ನಾಯಕಿಗೆ ಇರಬೇಕಾದ ರಾಷ್ಟ್ರಮಟ್ಟದ ಪ್ರಭಾವ ಇಬ್ಬರಲ್ಲಿಯೂ ಇಲ್ಲ. ಸುಷ್ಮಾಸ್ವರಾಜ್ ಮಧ್ಯಪ್ರದೇಶದ ಸುರಕ್ಷಿತ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಗೆದ್ದು ಬಂದವರು. ಜೇಟ್ಲಿಗೆ ರಾಜ್ಯಸಭೆಯನ್ನು ಪ್ರವೇಶಿಸಲು ಕೂಡಾ ನರೇಂದ್ರಮೋದಿ ನೆರವು ಬೇಕು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜನಾಥ್‌ಸಿಂಗ್‌ಗೆ ತನ್ನ ಜನಪ್ರಿಯತೆಯನ್ನು ಅವರ ರಾಜ್ಯದಲ್ಲಿಯೇ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ವೆಂಕಯ್ಯನಾಯ್ಡು ಅವರನ್ನು ಪಕ್ಷದಲ್ಲಿಯೇ ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ. 
 ಇಂತಹ `ಮನಮೋಹನ್‌ಸಿಂಗ್'ಗಳು ಪ್ರಧಾನಿಯಾಗಬೇಕಾದರೆ ಒಬ್ಬ `ಸೋನಿಯಾಗಾಂಧಿ' ಬೇಕಾಗುತ್ತದೆ. ಸದ್ಯದ  ಬಿಜೆಪಿಯಲ್ಲಿ ಅಂತಹ ಯಾವ `ಸೋನಿಯಾಗಾಂಧಿ'ಯೂ ಕಾಣುತ್ತಿಲ್ಲ. ಈ `ಡೆಲ್ಲಿ-4' ತಮ್ಮವರಲ್ಲಿ ಒಬ್ಬರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಒಪ್ಪಿಕೊಂಡರೆ ಮೋದಿ ಅವರನ್ನು ತಡೆಯುವ ಒಂದು ಸಣ್ಣ ಅವಕಾಶ ಇದೆ. ಅಂತಹ ವಿಶಾಲ ಮನಸ್ಸು ಈ ಗ್ಯಾಂಗ್‌ನಲ್ಲಿ ಕಾಣುತ್ತಿಲ್ಲ. ಈ ಬಿಕ್ಕಟ್ಟು ನರೇಂದ್ರ ಮೋದಿಯವರಿಗೆ ನೆರವಾಗಬಹುದಾದ ಅನುಕೂಲತೆ. ಆದರೆ ಪರಸ್ಪರ ಸಹಮತ ಇಲ್ಲದೆ ಇದ್ದರೂ ಹೊರಗಿನವರ ಪ್ರವೇಶವನ್ನು ಸಹಿಸಲಾರದು ಈ `ಡೆಲ್ಲಿ-4'ಗ್ಯಾಂಗ್. ನಿತಿನ್ ಗಡ್ಕರಿ ಅವರನ್ನು ಆರ್‌ಎಸ್‌ಎಸ್ ನಾಗಪುರದಿಂದ ದೆಹಲಿಗೆ `ರಫ್ತು' ಮಾಡಿದಾಗ ಇವರೇ ಒಟ್ಟಾಗಿ ವಿರೋಧಿಸಿದವರು. ಸರ್ವಾಧಿಕಾರಿಯಂತಿರುವ ಮೋದಿ ತಮ್ಮನ್ನು ಮೂಲೆಗುಂಪು ಮಾಡಬಹುದೆಂಬ ಭೀತಿಯಿಂದ ನರಳುತ್ತಿರುವ ಈ ನಾಯಕರು ಅವರನ್ನು ಸ್ವಾಗತಿಸಲು ಹೇಗೆ ಸಾಧ್ಯ?
 ಎರಡನೆಯ ಗುಂಪು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರದ್ದು. ಅಟಲಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಅಡ್ವಾಣಿ ನಂತರ ಆರ್‌ಎಸ್‌ಎಸ್ ಪ್ರಯಾಸಪಟ್ಟು ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.  ಆಕ್ರಮಣಕಾರಿ ಮತ್ತು ಸ್ವತಂತ್ರ ವ್ಯಕ್ತಿತ್ವದ ಮೋದಿ ಅವರನ್ನು ತಮ್ಮ ಹಿಡಿತದಲ್ಲಿಡುವುದು ಕಷ್ಟ ಎಂದು ಈ ಹಿರಿತಲೆಗಳಿಗೆ ಗೊತ್ತಿದೆ. (ಬಿ.ಎಸ್.ಯಡಿಯೂರಪ್ಪನವರು ಕಲಿಸಿದ ಪಾಠದ ನಂತರ ಆರ್‌ಎಸ್‌ಎಸ್‌ನ ಈ ಅಭಿಪ್ರಾಯ ಇನ್ನಷ್ಟು ಬಲವಾಗಿರಬಹುದು). ಇದಕ್ಕಾಗಿಯೇ ಅಲ್ಲವೆ ಅವರು  ಭ್ರಷ್ಟಾಚಾರದ ಆರೋಪಗಳ ಬಗ್ಗೆ ತಿಳಿದಿದ್ದರೂ ಮತ್ತು ನರೇಂದ್ರಮೋದಿಯವರೇ ವಿರೋಧಿಸಿದ್ದರೂ ನಿತಿನ್ ಗಡ್ಕರಿ ಎಂಬ ಬೇರುಗಳಿಲ್ಲದ ದುರ್ಬಲ ನಾಯಕನನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದ್ದು ಮತ್ತು ಇನ್ನೊಂದು ಅವಧಿಗೂ ಅವರನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿರುವುದು.
  ಮೋದಿ ಬಗ್ಗೆ ಸಂಘ ಪರಿವಾರದ ಆತಂಕಗಳಿಗೆ ಕಾರಣಗಳಿವೆ. ಕಳೆದ ಹತ್ತುವರ್ಷಗಳ ತನ್ನ ಆಳ್ವಿಕೆ ಕಾಲದಲ್ಲಿ ಮೋದಿ ಅವರು ಗುಜರಾತ್‌ನಲ್ಲಿ ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿ ಕೂರಿಸಿದ್ದಾರೆ. ದೇಶದಾದ್ಯಂತ ಸುತ್ತಾಡಿ ಬೆಂಕಿ ಉಗುಳುವ ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಗುಜರಾತ್‌ನವರೇ ಆಗಿದ್ದರೂ ಮೋದಿ ಆಳ್ವಿಕೆ ಕಾಲದಲ್ಲಿ ಅವರು ಅಲ್ಲಿ ಮಾತನಾಡಿದ್ದನ್ನು ಯಾರಾದರೂ ಕೇಳಿದ್ದಾರೆಯೇ?
ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಬೊಬ್ಬಿರಿದು ಅಬ್ಬರಿಸುವ ಹಿಂದೂ ಜಾಗರಣ ವೇದಿಕೆ, ಬಜರಂಗದಳ, ಹಿಂದೂ ಸೇನೆ ಇತ್ಯಾದಿ ಕೇಸರಿ ಪಡೆಗಳನ್ನು ಬಿಟ್ಟುಬಿಡಿ, ವಿಶ್ವಹಿಂದು ಪರಿಷತ್‌ನ ಹೆಸರನ್ನೂ ಅಲ್ಲಿ ಕೇಳುವವರಿಲ್ಲ. ಮೋದಿ ಈ ಸಂಘಟನೆಗಳ ಜತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದೇ ಕಡಿಮೆ. ಕಳೆದೆರಡೂ ಚುನಾವಣೆಗಳಲ್ಲಿ ಪರಿವಾರದ ಹೆಚ್ಚಿನ ನಾಯಕರು ಮೋದಿ ವಿರುದ್ಧವೇ ಕೆಲಸಮಾಡಿದ್ದಾರೆ. ಇವರಲ್ಲಿ ಯಾರಿಗೂ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಬೇಡ.
 ಮೂರನೆಯ ಗುಂಪು ಎನ್‌ಡಿಎ ಮಿತ್ರಪಕ್ಷಗಳದ್ದು. ಈ ವಿರೋಧಕ್ಕೆ ಬಹಳ ಬಲವಾದ ತಾತ್ವಿಕ ಕಾರಣ ಇದೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಈಗ ಮೋದಿ ವಿರುದ್ದ ನಿಂತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ 2001ರಲ್ಲಿ ಗುಜರಾತ್ ಕೋಮುಗಲಭೆ ನಡೆದಾಗ ಎನ್‌ಡಿಎ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದರು. ಅವರೇನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ.
ಮನಸ್ಸು ಮಾಡಿದ್ದರೆ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ತಗಲಿದ್ದು ಹೇಗೆ ಎಂಬುದನ್ನು ಪತ್ತೆಹಚ್ಚಿ ಸತ್ಯವನ್ನು ಬಹಿರಂಗಪಡಿಸಲು ಅವರಿಗೆ ಸಾಧ್ಯವಾಗಿತ್ತು. ಆಗ್ ಜಾರ್ಜ್ ಫರ್ನಾಂಡಿಸ್ ಜತೆಯಲ್ಲಿ ಮೋದಿ ರಕ್ಷಣೆಗೆ ನಿಂತವರಲ್ಲಿ ನಿತೀಶ್ ಕುಮಾರ್ ಕೂಡಾ ಒಬ್ಬರು. ಎನ್‌ಡಿಎ ಬಿಟ್ಟುಹೋದವರು ರಾಮ್‌ವಿಲಾಸ್ ಪಾಸ್ವಾನ್ ಮಾತ್ರ. ವೈಯಕ್ತಿಕವಾಗಿ ನರೇಂದ್ರಮೋದಿ ಬಗ್ಗೆ ವಿರೋಧ ಇಲ್ಲದವರು ಕೂಡಾ ಬಹಿರಂಗವಾಗಿ ಅವರ ಜತೆ ಗುರುತಿಸಿಕೊಳ್ಳಲು ಇಷ್ಟಪಡದೆ ಇರುವುದಕ್ಕೆ ಮುಖ್ಯ ಕಾರಣ ಅವರ ಮುಖಕ್ಕೆ ಅಂಟಿಕೊಂಡಿರುವ 2002ರ ಕೋಮು ಗಲಭೆಯ ಕಳಂಕ. ಮೋದಿ ಜತೆ ಕೈಜೋಡಿಸಿದರೆ ಮುಸ್ಲಿಮ್ ಮತಗಳನ್ನು ಕಳೆದುಕೊಳ್ಳಬಹುದೆಂಬ ಭೀತಿ ಎನ್‌ಡಿಎ ಮಿತ್ರಪಕ್ಷಗಳನ್ನು ಕಾಡುತ್ತಿದೆಯೇ ಹೊರತು ಈ ವಿರೋಧಕ್ಕೆ ಜಾತ್ಯತೀತತೆ ಬಗೆಗಿನ ಅಖಂಡ ಬದ್ಧತೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಕಾರಣಗಳೇನೇ ಇರಬಹುದು ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಎನ್‌ಡಿಎ ಮಿತ್ರಪಕ್ಷಗಳು ಸುಲಭದಲ್ಲಿ ಒಪ್ಪಿಕೊಳ್ಳಲಾರವು.
 ಮಿತ್ರಪಕ್ಷಗಳ ಬೆಂಬಲ ಬೇಡವೇ ಬೇಡ ಎಂದಾದರೆ ನರೇಂದ್ರಮೋದಿ ಪ್ರಧಾನಿಯಾಗಲು ಬಹುಮತಕ್ಕೆ ಅಗತ್ಯ ಇರುವ 272 ಸ್ಥಾನಗಳನ್ನು ಬಿಜೆಪಿ ಸ್ವಂತಬಲದಿಂದ  ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಮಿತ್ರಪಕ್ಷಗಳ ಮುಲಾಜಿಲ್ಲದೆ ಅವರು ಪ್ರಧಾನಿಯಾಗಲು ಸಾಧ್ಯ. ಮೈತ್ರಿ ಅನಿವಾರ್ಯ ಎಂದಾದರೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನದಿಂದ ದೂರ ಇಡಬೇಕಾಗಬಹುದು. ಈಗಿನ ರಾಜಕೀಯ ಸ್ಥಿತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ನಂತರ ಯಾವುದೇ ಒಂದು ಪಕ್ಷ, ಸರ್ಕಾರ ರಚನೆಗೆ ಅಗತ್ಯ ಇರುವಷ್ಟು ಸ್ಪಷ್ಟ ಬಹುಮತ ಪಡೆಯುವುದು ಕಷ್ಟ. ಯುಪಿಎ, ಎನ್‌ಡಿಎ ಇಲ್ಲವೆ ತೃತೀಯರಂಗ-ಇವುಗಳಲ್ಲಿ ಯಾವುದಾದರೂ ಒಂದು ಮೈತ್ರಿಕೂಟವಷ್ಟೇ ಅಧಿಕಾರಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು. ಈ ಪರಿಸ್ಥಿತಿಯಲ್ಲಿ ಬಹುಮತಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಮಿತ್ರಪಕ್ಷಗಳ ಮೂಲಕ ಯಾರು ಗಳಿಸಿಕೊಳ್ಳಬಲ್ಲರೋ ಅವರೇ 2014ರ ಲೋಕಸಭಾ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವವರು. ಅಧಿಕಾರದ ಈ ಓಟದಲ್ಲಿ ಮೋದಿ ಅವರನ್ನು ಬೆನ್ನಿಗೆ ಕಟ್ಟಿಕೊಂಡು ಎನ್‌ಡಿಎ ಹೊರಟರೆ ಮುಗ್ಗರಿಸಿ ಬೀಳುವ ಅಪಾಯ ಇದೆ.
ಸದ್ಯ ಜತೆಯಲ್ಲಿರುವ ಮಿತ್ರಪಕ್ಷಗಳನ್ನಷ್ಟೇ ನಂಬಿಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನೂ ಕಾಣಲು ಬಿಜೆಪಿಗೆ ಸಾಧ್ಯ ಇಲ್ಲ. ಇದಕ್ಕಾಗಿ ಈಗಿನ ಮಿತ್ರಪಕ್ಷಗಳನ್ನು ಉಳಿಸಿಕೊಳ್ಳುವ ಜತೆಯಲ್ಲಿ ಬಿಟ್ಟುಹೋಗಿರುವ ಹಳೆಯ ಮಿತ್ರರನ್ನು ಒಲಿಸಿಕೊಳ್ಳಬೇಕಾಗುತ್ತದೆ. ಬಿಜು ಜನತಾದಳ, ತೆಲುಗುದೇಶಂ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಕಾನಫರೆನ್ಸ್ ಮೊದಲಾದ ಪಕ್ಷಗಳು ವಾಜಪೇಯಿ ಕಾಲದಲ್ಲಿ ಎನ್‌ಡಿಎ ಜತೆ ಗುರುತಿಸಿಕೊಂಡಿದ್ದವು. ಇವುಗಳು ಸುಲಭದಲ್ಲಿ ಗೋಡೆಹಾರಿ ಬಂದುಬಿಡಬಹುದು.
ಅಧಿಕಾರದ ತಕ್ಕಡಿ ಎನ್‌ಡಿಎ ಕಡೆ ವಾಲುವುದು ಖಾತರಿಯಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಎನ್‌ಸಿಪಿ ನಾಯಕ ಶರದ್‌ಪವಾರ್ ಕೂಡಾ ಬೆಂಬಲಕ್ಕೆ ನಿಂತರೆ ಅಚ್ಚರಿಯೇನಿಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಬಿಡಿ, ಪ್ರಧಾನಿ ಅಭ್ಯರ್ಥಿಯಾಗುವುದನ್ನೂ ಕೂಡಾ ಈ ಪಕ್ಷಗಳು ಒಪ್ಪಲಾರವು. ಇವೆಲ್ಲವೂ ಗೊತ್ತಿರುವುದಕ್ಕಾಗಿಯೇ ಈ `ರಸ್ತೆತಡೆ'ಗಳನ್ನು ದಾಟಿಬರುವ ಪ್ರಯತ್ನವನ್ನು ಮೋದಿ ಪ್ರಾರಂಭಿಸಿರುವುದು. ಕಳೆದ ಹತ್ತುವರ್ಷಗಳಲ್ಲಿ ಎಷ್ಟೇ ಒತ್ತಡ ಬಂದರೂ `ತಪ್ಪಾಗಿದ್ದರೆ ಕ್ಷಮಿಸಿ' ಎಂಬ ಎರಡು ಶಬ್ದಗಳನ್ನು ಉಚ್ಚರಿಸಲು ಒಪ್ಪದ ನರೇಂದ್ರಮೋದಿ ಚುನಾವಣಾ ಫಲಿತಾಂಶ ಹೊರಬಿದ್ದ ಮರುಗಳಿಗೆಯಲ್ಲಿ ಅದನ್ನು ಹೇಳಿದ್ದಾರೆ. ಈಗಲೂ `ಗುಜರಾತ್ ಗಲಭೆಗಾಗಿ ಕ್ಷಮಿಸಿ' ಎಂದು ಹೇಳದೆ ತಪ್ಪಿಸಿಕೊಂಡಿದ್ದರೂ, ಮುಂದೊಂದು ದಿನ ಅದನ್ನೂ ಹೇಳಿಬಿಡಬಹುದು. ಆದರೆ ಅಷ್ಟಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಮೋದಿ ಅವರನ್ನು ಒಪ್ಪಿಕೊಳ್ಳಬಹುದೇ?
ಬಹುಶಃ ಈ ಕಾರಣಗಳಿಂದಾಗಿಯೇ ವರ್ಷ 86 ದಾಟಿದರೂ ಲಾಲ್‌ಕೃಷ್ಣ ಅಡ್ವಾಣಿಯವರು ಪ್ರಧಾನಿಯಾಗುವ ಕನಸಿನ ಚುಂಗು ಹಿಡಿದು ಕೂತಿದ್ದಾರೆ. ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದರೂ ಆಗಬಹುದು, ಎನ್‌ಡಿಎ ಅಭ್ಯರ್ಥಿ ಆಗಲಾರರು ಎಂಬ ಸತ್ಯ ಅವರಿಗೆ ಗೊತ್ತಿದೆ. ಅನಿವಾರ್ಯವಾದರೆ ಎನ್‌ಡಿಎ ಅಭ್ಯರ್ಥಿ ತಾನೇ ಎನ್ನುವುದೂ ಅವರಿಗೆ ತಿಳಿದಿದೆ. ಅಡ್ವಾಣಿಯವರನ್ನು ಆರ್‌ಎಸ್‌ಎಸ್ ವಿರೋಧಿಸಿದರೂ ಮೋದಿಯವರನ್ನು ತಡೆಯಲಿಕ್ಕಾಗಿ ಒಪ್ಪಿಕೊಳ್ಳಲೂ ಬಹುದು. ಉಳಿದಂತೆ `ಡೆಲ್ಲಿ-4' ಗ್ಯಾಂಗ್ ಮತ್ತು ಎನ್‌ಡಿಎ ಮಿತ್ರಪಕ್ಷಗಳಿಗೆ ಅಡ್ವಾಣಿ ಬಗ್ಗೆ ತಕರಾರಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಎದುರು ನರೇಂದ್ರಮೋದಿ ಅವರನ್ನು ತಂದು ನಿಲ್ಲಿಸುವ ಅವಸರದಲ್ಲಿದ್ದಾರೆ ಮೋದಿ ಅಭಿಮಾನಿಗಳು. ಆದರೆ ಅದಕ್ಕಿಂತ ಮೊದಲು ಮೋದಿ ಮನೆಯೊಳಗಿನ ವಿರೋಧದ `ರಸ್ತೆತಡೆ'ಗಳನ್ನು ದಾಟಿ ಬರಬೇಕಾಗುತ್ತದೆ. ಬರಬಹುದೇ?

Monday, December 17, 2012

ಗುಜರಾತ್ ಜಾತಿ ಸೂತ್ರ ಬದಲಾಯಿಸಿದ ಮೋದಿ Dec 17 2012


`ಗುಜರಾತ್ ರಾಜ್ಯವನ್ನು ನರೇಂದ್ರಮೋದಿ ತನ್ನ ಮಾಯಾಜಾಲದಲ್ಲಿ ಕೆಡವಿಹಾಕಿದಂತೆ ಕಾಣುತ್ತಿದೆ. ಯಾವ ಚುನಾವಣಾ ಸಮೀಕ್ಷೆಯ ಸೂತ್ರಗಳಿಗೂ ನಿಲುಕದ ಮೋದಿ ಯಶಸ್ಸಿನ ಒಗಟನ್ನು ಒಡೆಯುವುದು ಕಷ್ಟ. ಅವರ ಜನಪ್ರಿಯತೆ ನೂರಕ್ಕೆ ನೂರರಷ್ಟು ಮತಗಳಾಗಿ ಪರಿವರ್ತನೆ ಹೊಂದಿದರೆ ಬಿಜೆಪಿ ಈ ರಾಜ್ಯದಲ್ಲಿ `ಹ್ಯಾಟ್ರಿಕ್' ಜಯ ಗಳಿಸಬಹುದು..' ಎಂದು ಹತ್ತುವರ್ಷಗಳ ಹಿಂದೆ ( ಪ್ರಜಾವಾಣಿ ವರದಿ:11,ಡಿಸೆಂಬರ್ 2002) ಆ ರಾಜ್ಯಕ್ಕೆ ವಿಧಾನಸಭಾ ಚುನಾವಣಾ ಸಮೀಕ್ಷೆಗೆಂದು ಹೋದವನು `ಮೋದಿ ಮೋಡಿ'ಗೆ ಬೆರಗಾಗಿ ಬರೆದಿದ್ದೆ. 

2002ರ ಕೋಮುದಂಗೆಯ ಹಸಿಹಸಿ ನೆನಪಿನ ಜತೆಯಲ್ಲಿಯೇ ನಡೆದ ಚುನಾವಣೆ ಅದು. `ನೀವು ನನಗೆ ಮತನೀಡಬೇಕೆಂದು ಹೇಳುವುದಿಲ್ಲ, ಆದರೆ ಗೋಧ್ರಾ ಹತ್ಯಾಕಾಂಡವನ್ನು ಮಾತ್ರ ಮರೆತುಬಿಡಿ ಎಂದು ಹೇಳಬೇಡಿ.  ಅದನ್ನು ನಾನು ಹೇಗೆ ಮರೆಯಲಿ? ಬೆಂಕಿ ಹತ್ತಿಕೊಂಡ ರೈಲ್ವೆಬೋಗಿಯೊಳಗಿನ ದೈವಭಕ್ತರ ಆರ್ತನಾದ ನನ್ನ ಕಿವಿಗಳಲ್ಲಿ ಈಗಲೂ ಗುಂಯ್‌ಗುಡುತ್ತಿದೆ....' -ಮೋದಿಯವರ ಕಣ್ಣೀರು `ನರ್ಮದಾ ನದಿ'ಯಾಗಿ ಹರಿಯುತ್ತಿದ್ದರೆ, ಅವರ ಗುಜರಾತಿ ಭಾಷೆಯ ಭಾಷಣ ಕೇಳಿದವರು ನಿಂತಲ್ಲೇ ಕಣ್ಣೀರಾಗಿ ಬಿಡುತ್ತಿದ್ದರು. ಇದು ಮೋದಿ ಮೋಡಿ.
 
ಈ ಮೋಡಿಯೇ ನರೇಂದ್ರಮೋದಿ ಅವರನ್ನು ಸತತ ಎರಡು ಬಾರಿ ಗೆಲ್ಲಿಸಿದ್ದೇ? ಹಾಗೆಂದು 2002ರ ಚುನಾವಣೆಯ ಕಾಲದಲ್ಲಿ ಮೂರ್ಖನಂತೆ ನಾನೂ ತಿಳಿದುಕೊಂಡಿದ್ದೆ, ಆದರೆ 2007ರ ವಿಧಾನಸಭಾ ಚುನಾವಣೆಯನ್ನು ತುಸು ಆಳಕ್ಕೆ ಇಳಿದು ನೋಡಿದಾಗ ಮೋದಿಯವರ ಇನ್ನೊಂದು ಮುಖ ಅನಾವರಣಗೊಳ್ಳಹತ್ತಿತ್ತು. ಹೊರನೋಟಕ್ಕೆ  ಕಟ್ಟಾ ಕೋಮುವಾದಿಯಂತೆ ಕಾಣುವ ನರೇಂದ್ರ ಮೋದಿ ಅವರೊಳಗೊಬ್ಬ ಚಾಣಾಕ್ಷ ರಾಜಕಾರಣಿ ಇದ್ದಾನೆ. ಸಂಖ್ಯೆಯ ಆಟವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯೆಯಲ್ಲಿ ಜಾತಿಜನರನ್ನು ಹೊಂದಿರುವ ರಾಜಕೀಯ ನಾಯಕರಲ್ಲಿ ಸಹಜವಾಗಿಯೇ ಹುಟ್ಟಿಕೊಳ್ಳುವ ಅಸುರಕ್ಷತೆ ಅವರನ್ನು ಹೆಚ್ಚು ಜಾಗೃತರು ಮತ್ತು ಚಾಣಾಕ್ಷರನ್ನಾಗಿ ಮಾಡುತ್ತದೆ. ಮೋದಿ  ಇದಕ್ಕೆ ಹೊರತಲ್ಲ. ಈ ಚಾಣಾಕ್ಷತನದ ಬಲದಿಂದಲೇ ಅವರು ಜನಸಂಖ್ಯೆಯಲ್ಲಿ ಶೇಕಡಾ ಹದಿನಾರರಷ್ಟಿರುವ ಮತ್ತು ಆರ್ಥಿಕವಾಗಿ ಬಲಿಷ್ಠರಾಗಿರುವ ಪಟೇಲರನ್ನು ಎದುರಿಸಿ ಹಿಂದಿನ ಎರಡು ಚುನಾವಣೆಗಳನ್ನು ಗ್ದ್ದೆದದ್ದು.
 
ಕಳೆದ ಹತ್ತುವರ್ಷಗಳಲ್ಲಿ ಗುಜರಾತ್ ರಾಜಕೀಯ ಬದಲಾಗಿದೆ ಎಂದು ಅನಿಸುವುದಿಲ್ಲ. ಕೇಶುಭಾಯಿಪಟೇಲ್ ಬಂಡೆದ್ದು ರಚಿಸಿರುವ ಹೊಸ ಪಕ್ಷದ ಪರಿಣಾಮದಿಂದಾಗಿ ಮೋದಿಗೆ ಹಿನ್ನಡೆ ಆಗಬಹುದು ಎಂದು ಹಲವಾರು ರಾಜಕೀಯ ಪಂಡಿತರು ಭವಿಷ್ಯ ನುಡಿಯುತ್ತಿದ್ದಾರೆ.
ಆದರೆ ಕೇಶುಭಾಯಿ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದು ಹೊಸದಾಗಿದ್ದರೂ ಅವರ ಬಂಡಾಯ ಹೊಸದಲ್ಲ, ಹತ್ತುವರ್ಷಗಳ ಹಿಂದೆ ನರೇಂದ್ರ ಮೋದಿ ತನ್ನಿಂದ ಮುಖ್ಯಮಂತ್ರಿ ಪಟ್ಟ ಕಸಿದುಕೊಂಡ ದಿನದಿಂದಲೂ ಕೇಶುಭಾಯಿ ಬಂಡುಕೋರರು. ನರೇಂದ್ರ ಮೋದಿ ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿದವರು. ಪಟೇಲರು ಎಣ್ಣೆಗಿರಣಿ ಮಾಲೀಕರು. ಕೆಳಜಾತಿಯ ಒಬ್ಬ ವ್ಯಕ್ತಿ ಪಟೇಲರ ನಾಯಕನನ್ನು ಕೆಳಗಿಳಿಸಿ ಮುಖ್ಯಮಂತ್ರಿಯಾಗಿದ್ದನ್ನು ಕೇಶುಭಾಯಿ ಪಟೇಲ್ ಮತ್ತು ಬೆಂಬಲಿಗರು ಇನ್ನೂ ಮರೆತಿಲ್ಲ. ಕಳೆದೆರಡೂ ಚುನಾವಣೆಗಳಲ್ಲಿ ಕೇಶುಭಾಯಿ ಬೆಂಬಲಿಗರು ಕಾಂಗ್ರೆಸ್ ಜತೆ ಗುಪ್ತಹೊಂದಾಣಿಕೆಯೂ ಸೇರಿದಂತೆ ಮೋದಿಯವರನ್ನು ಸೋಲಿಸುವ ಯಾವ ಅವಕಾಶವನ್ನೂ ಬಿಟ್ಟಿಲ್ಲ.  ಸಾಮಾನ್ಯವಾಗಿ ಆಡಳಿತ ಪಕ್ಷದ ಆಂತರಿಕ ಬಂಡಾಯ ವಿರೋಧಪಕ್ಷಗಳಿಗೆ ನೆರವಾಗುತ್ತದೆ. ಒಳಗಿನ ಬಂಡುಕೋರರು ಪ್ರತ್ಯೇಕ ಪಕ್ಷ ಕಟ್ಟಿ ಚುನಾವಣೆ ಎದುರಿಸಿದಾಗ ಅವರ ಪಾಲಿನ ಮತಗಳು ಅವರ ಪಕ್ಷಕ್ಕೆ ಹೋಗುವುದರಿಂದ ವಿರೋಧಪಕ್ಷಗಳಿಗೆ ಹೆಚ್ಚು ಲಾಭವಾಗುವುದಿಲ್ಲ. ಹೌದು, ಈ ಬಾರಿ ಬಿಜೆಪಿ ಶಾಸಕರ ಸಂಖ್ಯೆ ಕುಸಿಯಲೂಬಹುದು, ಆದರೆ ಕೇಶುಭಾಯಿ ಬಂಡಾಯ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾರದು.
 
 ರಾಜಕೋಟ್, ಅಮ್ರೇಲಿ, ಪೋರಬಂದರ್, ಜುನಾಗಡ್,ಸುರೇಂದ್ರನಗರ ಮತ್ತು ಭಾವನಗರ ಜಿಲ್ಲೆಗಳನ್ನೊಳಗೊಂಡ ಸೌರಾಷ್ಟ್ರ ಎನ್ನುವುದು `ಪಟೇಲರ ಕೋಟೆ'. ರಾಜ್ಯದ 182 ಕ್ಷೇತ್ರಗಳ ಪೈಕಿ 60ರಲ್ಲಿ ಪಟೇಲರು ನಿರ್ಣಾಯಕರಾಗುವಷ್ಟು ಸಂಖ್ಯೆಯಲ್ಲಿದ್ದಾರೆ. ಇವರು ಮೂಲತ: ಕೃಷಿಕರಾದರೂ ಈಗ  ಉದ್ಯಮ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಸೌರಾಷ್ಟ್ರದಲ್ಲಿನ ಎಣ್ಣೆ ಗಿರಣಿಗಳು ಮತ್ತು ಸೂರತ್‌ನಲ್ಲಿನ ವಜ್ರದ ವ್ಯಾಪಾರದಲ್ಲಿ ಅವರದ್ದೇ ಪ್ರಾಬಲ್ಯ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರಗಳಿಗೂ ಅವರು ಕೈಚಾಚಿದ್ದಾರೆ.
ಅನಿವಾಸಿ ಗುಜರಾತಿಗಳಲ್ಲಿ ಪಟೇಲರದ್ದೇ ಮೇಲುಗೈ. ರಾಜ್ಯದ ನೌಕರಶಾಹಿಯಲ್ಲಿಯೂ ಅವರು ಆಯಕಟ್ಟಿನ ಸ್ಥಾನದಲ್ಲಿದ್ದಾರೆ. 
ಇಂತಹ ಪಟೇಲರನ್ನು ಮೋದಿ  ಎದುರಿಸಿದ್ದು ಹೇಗೆ? ಇದಕ್ಕೆ ಕಾರಣ- `ಗುಜರಾತ್‌ನಲ್ಲಿ ಈಗ ಇರುವುದು ದೇಶದಾದ್ಯಂತ ಕಾಣುತ್ತಿರುವ ಬಿಜೆಪಿ ಅಲ್ಲ, ಮೋದಿ ನೇತೃತ್ವದ ಪಕ್ಷದೊಳಗಿರುವುದು 20 ವರ್ಷಗಳ ಹಿಂದಿನ ಕಾಂಗ್ರೆಸ್'. ಈ ಒಳನೋಟವನ್ನು ನನಗೆ ನೀಡಿದ್ದವರು `ಗುಜರಾತ್‌ನ ದೇವರಾಜ ಅರಸು' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಮಾಧವಸಿನ್ಹ ಸೋಳಂಕಿ. 2007ರ ಚುನಾವಣಾ ಸಮೀಕ್ಷೆಗೆಂದು ಹೋದವ ಗಾಂಧಿನಗರದ ಹಳೆಯ ಬಂಗಲೆಯಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದ ಸೋಳಂಕಿ ಅವರನ್ನು ಭೇಟಿಮಾಡಿದ್ದೆ.
ಗುಜರಾತ್ ರಾಜಕೀಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ `ಪಟೇಲ್‌ಗಿರಿ'ಯನ್ನು `ಕ್ಷತ್ರಿಯ-ಹರಿಜನ- ಆದಿವಾಸಿ-ಮುಸ್ಲಿಮ್'   ಸಮುದಾಯಗಳನ್ನೊಳಗೊಂಡ `ಖಾಮ್' ಕೂಟಕಟ್ಟಿ  ಮೊದಲ ಬಾರಿ ಮುರಿದವರು  ಸೋಳಂಕಿ. ಈ ಜಾತಿ ಸಮೀಕರಣದ ರಾಜಕೀಯ ಲಾಭವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟವರು ಹಿಂದುಳಿದ ಜಾತಿಗಳ ಹಿರಿಯ ನಾಯಕ ಜೀನಾಭಾಯಿ ದರ್ಜಿ. ಈ ಬಲದಿಂದ ಕಾಂಗ್ರೆಸ್‌ಪಕ್ಷಕ್ಕೆ ಸೇರಿರುವ ಕ್ಷತ್ರಿಯ ಸೋಳಂಕಿ ಮಾತ್ರವಲ್ಲ ಆದಿವಾಸಿ ಸಮುದಾಯಕ್ಕೆ ಸೇರಿರುವ ಅಮರ್‌ಸಿಂಗ್ ಚೌದರಿ ಕೂಡಾ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದ್ದು.
 
ಆದರೆ ಬದಲಾದ ರಾಜಕೀಯದ ಆಟ ಬಹಳ ದಿನ ನಡೆಯಲಿಲ್ಲ. ಜನಸಂಖ್ಯೆ ಮತ್ತು ಸಂಪನ್ಮೂಲದ ಬಲದಿಂದಾಗಿ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದ ಪಟೇಲರು ಬಹಳ ಬೇಗ ತಿರುಗೇಟು ನೀಡಿದ್ದರು. 1990ರ ವಿಧಾನಸಭಾ ಚುನಾವಣೆಯಲ್ಲಿ ಚಿಮಣ್‌ಭಾಯ್ ಪಟೇಲ್ ನಾಯಕತ್ವದಲ್ಲಿ ಪಟೇಲರು ಜನತಾದಳದ ಗಾಡಿ ಹತ್ತಿದರು. ಅದರ ಫಲವಾಗಿಯೇ 1990ರಲ್ಲಿ ಬಿಜೆಪಿ-ಜನತಾ ಮೈತ್ರಿಕೂಟ ಅಧಿಕಾರಕ್ಕೆ ಬಂದದ್ದು. ಆ ಸರ್ಕಾರದಲ್ಲಿ ಚಿಮಣ್‌ಭಾಯ್ ಮುಖ್ಯಮಂತ್ರಿಯಾಗಿದ್ದರೆ, ಕೇಶುಭಾಯಿ ಉಪಮುಖ್ಯಮಂತ್ರಿಯಾಗಿದ್ದರು. ಇಂತಹ ಜನತಾದಳವನ್ನು ಬಿಜೆಪಿಯೇ ಒಡೆದುಹಾಕಿತು. ಕಾಂಗ್ರೆಸ್ ಪಕ್ಷದ ಯಶಸ್ವಿ `ಖಾಮ್' ಸೂತ್ರವನ್ನು ಮುರಿಯುವ ಜತೆಯಲ್ಲಿ ಜನತಾದಳದಲ್ಲಿದ್ದ ಪಟೇಲರನ್ನು ಪಕ್ಷಕ್ಕೆ ಕರೆತರುವ `ಮಹಾ ಜಾತಿ ಧ್ರುವೀಕರಣ'ದ ಯೋಜನೆಯನ್ನು ರೂಪಿಸಿದ್ದ ಬಿಜೆಪಿ, ಅದಕ್ಕಾಗಿ ಕಣಕ್ಕಿಳಿಸಿದ್ದು ಕೇಶುಭಾಯಿ, ನರೇಂದ್ರಮೋದಿ ಮತ್ತು ಶಂಕರ್‌ಸಿಂಗ್ ವಘೇಲಾ ಎಂಬ ತ್ರಿಮೂರ್ತಿಗಳನ್ನು.
 
 ನರೇಂದ್ರಮೋದಿ ಅವರು `ಮುಸ್ಲಿಮ್' ಭೂತವನ್ನು ಬಳಸಿಕೊಂಡು ಆದಿವಾಸಿಗಳನ್ನು `ಹಿಂದೂ'ಗಳಾಗಿ ಪರಿವರ್ತಿಸುವ ಕೆಲಸವನ್ನು ಮಾಡಿದರೆ, ಕ್ಷತ್ರಿಯರಾದ ವಘೇಲಾ `ಖಾಮ್' ಸೂತ್ರದ ಪ್ರಮುಖ ಕೊಂಡಿಯಾಗಿದ್ದ ಕ್ಷತ್ರಿಯರನ್ನು ಕರೆತಂದರು. ಮಾಧವಸಿನ್ಹಾ ಸೋಳಂಕಿಯವರ `ಖಾಮ್' ರಾಜಕೀಯದಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ನೆಲೆ ಕಳೆದುಕೊಂಡು ಜನತಾ ಮತ್ತು ಬಿಜೆಪಿಯಲ್ಲಿ ಸೇರಿಕೊಂಡಿದ್ದ ಪಟೇಲರನ್ನು ಬಿಜೆಪಿ ಕಡೆ ಎಳೆದು ತರುವ ಕೆಲಸವನ್ನು ಕೇಶುಭಾಯಿ ಮಾಡಿದರು. ಈ ಜಾತಿ ಮರುಧ್ರುವೀಕರಣದಿಂದಾಗಿ ಬಹುಸಂಖ್ಯೆಯಲ್ಲಿ `ಹಿಂದೂ' ಮತದಾರರು  ಬಿಜೆಪಿ ಕಡೆ ವಲಸೆ ಹೋಗುವಂತಾಯಿತು. ಕಾಂಗ್ರೆಸ್ ಪಕ್ಷದ `ಖಾಮ್'ಕೂಟಕ್ಕೆ ನಿಷ್ಠರಾಗಿ ಉಳಿದವರು ಮುಸ್ಲಿಮರು ಮಾತ್ರ, ಅದು ಅವರಿಗೆ ಅನಿವಾರ್ಯವೂ ಆಗಿತ್ತು. ಇದರಿಂದಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ್ದ ಗೆಲುವೇ ಕೊನೆಯದ್ದು, ಅದರ ನಂತರದ ಐದು ಚುನಾವಣೆಗಳಲ್ಲಿಯೂ ಅದು ಸೋತಿದೆ.
 
2002ರಲ್ಲಿ ನರೇಂದ್ರಮೋದಿ  ಮುಖ್ಯಮಂತ್ರಿಯಾಗಿ ರಾಜಕೀಯ ಪ್ರವೇಶಿಸಿದ ನಂತರ ಈ ಜಾತಿ ಸಮೀಕರಣ ಮತ್ತೆ ಬದಲಾಗಿಹೋಯಿತು. ಕೇಶುಭಾಯಿ ಪದಚ್ಯುತಿಯಿಂದಾಗಿ ಅತೃಪ್ತರಾಗಿರುವ ಪಟೇಲರನ್ನು ನಂಬಿಕೊಂಡು ಅಧಿಕಾರದಲ್ಲಿ ಉಳಿಯುವುದು ಸಾಧ್ಯವಾಗಲಾರದು ಎಂಬ ವಾಸ್ತವ ಬಹಳ ಬೇಗ ಮೋದಿಯವರಿಗೆ ಅರಿವಾಗಿತ್ತು. ಆಗಲೇ ಅವರು `ಉಗ್ರ ಹಿಂದುತ್ವ'ದ ಪ್ರತಿಪಾದನೆಯ ಮೂಲಕ ಮುಸ್ಲಿಮೇತರರ ಸಮುದಾಯವನ್ನು ಒಗ್ಗೂಡಿಸುವ ಜತೆಗೆ ಪಟೇಲ್ ಸಮುದಾಯವನ್ನು  ಒಡೆಯುವ ಪ್ರಯತ್ನಕ್ಕೆ ಚಾಲನೆ ನೀಡಿದ್ದು. ಲೇವಾ ಮತ್ತು ಕಡುವಾ ಎಂಬ ಪಟೇಲರೊಳಗಿನ ಎರಡು ಪ್ರಮುಖ ಒಳಪಂಗಡಗಳ ರಾಜಕೀಯವನ್ನು ಮೋದಿ ಕಳೆದ ಒಂದು ದಶಕದಲ್ಲಿ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೇಶುಭಾಯಿ ಪ್ರತಿನಿಧಿಸುವ ಲೇವಾ ಪಟೇಲರು ರಾಜಕೋಟ್ ಮತ್ತು ಅಮ್ರೇಲಿಗಳಲ್ಲಿ ಬಹುಸಂಖ್ಯೆಯಲ್ಲಿದ್ದರೆ ಸೂರತ್ ಮತ್ತು ಉತ್ತರ ಗುಜರಾತ್‌ಗಳಲ್ಲಿ ಕಡುವಾ ಪಟೇಲರಿದ್ದಾರೆ. ಮೋದಿ ಬಲಗೈಯಂತಿರುವ ವಜುಭಾಯಿವಾಲಾ ಕಡುವಾ ಪಟೇಲ್. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೆಚ್ಚು ಟಿಕೆಟ್ ಪಡೆದದ್ದೇ ಕಡುವಾ ಪಟೇಲರು.
 
ಮೋದಿಯವರ ಇನ್ನೊಂದು ಶಕ್ತಿ ಕೇಂದ್ರ ಆದಿವಾಸಿ ಬಾಹುಳ್ಯದ ಪಂಚಮಹಲ್, ದಾಹೋದ್, ವಡೋದರ ಜಿಲ್ಲೆಗಳನ್ನೊಳಗೊಂಡ ಕೇಂದ್ರ ಗುಜರಾತ್. ಅಲ್ಲಿ ಒಟ್ಟು 48 ವಿಧಾನಸಭಾ ಕ್ಷೇತ್ರಗಳಿವೆ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. 2007ರ ಚುನಾವಣೆಯ ಕಾಲದಲ್ಲಿ ಕಲೋಲ್ ಕಡೆ ಹೊರಟಿದ್ದ ನಾನು ಹೆದ್ದಾರಿ ಪಕ್ಕದ ಚಹದಂಗಡಿಯಲ್ಲಿ ಕೂತಿದ್ದೆ. ನಮ್ಮ ವಾಹನ ನೋಡಿ ಪತ್ರಕರ್ತನಿರಬಹುದೆಂಬ ಸುಳಿವು ಸಿಕ್ಕ ಹಣೆಗೆ ಕೇಸರಿಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ `ಜೈ ಶ್ರಿರಾಮ್' ಎಂದು ಎದೆಯುಬ್ಬಿಸಿ ಕೂಗಿದ್ದ. ಅಲ್ಲಿಯೇ ಮೂಲೆಯೊಂದರಲ್ಲಿ ಕೂತಿದ್ದ ಅರೆಬೆತ್ತಲೆ ವೃದ್ಧರೊಬ್ಬರು  ಎತ್ತಲೋ ನೋಡುತ್ತಾ ` ಹಮ್ಹಾರಾ ಬಾಬೋ ಪಿತೋರೋ ಚೆ' ಎಂದು ಸಣ್ಣಗೆ ಕೆಮ್ಮುವಂತೆ ಗೊಣಗಿದ. ಜಗಳದ ಕಿಡಿ ಹಾರಿಯೇ ಬಿಟ್ಟಿತ್ತು.
ಅಷ್ಟರಲ್ಲಿ ವೃದ್ಧ ವ್ಯಕ್ತಿ ಅಲ್ಲಿಂದ ಸದ್ದಿಲ್ಲದೆ ಕಣ್ಮರೆಯಾಗಿದ್ದ. ಆ ನಂತರ ತಿಳಿದುಬಂದಂತೆ ಇಬ್ಬರೂ ಆದಿವಾಸಿ ಸಮುದಾಯದವರು. ಇದು ಕೇವಲ ಬೀದಿ ಜಗಳ ಅಲ್ಲ, ಗುಜರಾತ್‌ನ ಜನಸಂಖ್ಯೆಯಲ್ಲಿ ಶೇಕಡಾ ಹದಿನೇಳರಷ್ಟಿರುವ ಆದಿವಾಸಿಗಳ `ಮನೆ' ಜಗಳ ಕೂಡಾ ಹೌದು.
 
ಆದಿವಾಸಿಗಳು ಪಾರಂಪರಿಕವಾಗಿ ಧಾರ್ಮಿಕ ವ್ಯಕ್ತಿಗಳು. ಆದರೆ ಅವರು ಪೂಜಿಸುವುದು ಅವರದ್ದೇ ದೇವತೆಗಳನ್ನು. ಗುಜರಾತ್‌ನ ಆದಿವಾಸಿಗಳು ಬಾಬೋ ಪಿತೋರೇ, ಇತೆರಾನ್, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾ ಬಂದವರು. ಹಳೆಯ ತಲೆಮಾರಿನ ಆದಿವಾಸಿಗಳು ಈ ದೇವತೆಗಳಿಗೆ ನಿಷ್ಠರಾಗಿಯೇ ಉಳಿದಿದ್ದಾರೆ. ಆದರೆ ತಲೆಗೆ ಕೇಸರಿಪಟ್ಟಿ ಕಟ್ಟಿಕೊಂಡ ಹೊಸತಲೆಮಾರಿನ ಕುಟುಂಬಗಳ ಮನೆಯಲ್ಲಿ ಆಗಲೇ ರಾಮ,ಕೃಷ್ಣ, ಲಕ್ಷ್ಮಿ, ಸರಸ್ವತಿಗಳ ಪ್ರವೇಶವಾಗಿದೆ. ಆಸಾರಾಮ್ ಬಾಪೂ, ಜಯಶ್ರಿ ತಲವಾಲ್ಕರ್, ದಾದಾ ಭಗವಾನ್ ಪ್ರವಚನಗಳಿಗೆ ಪಂಚಮಹಲ್, ದಾಹೋದ್ ಜಿಲ್ಲೆಗಳಲ್ಲಿ ಸಾವಿರಾರು ಆದಿವಾಸಿಗಳು ಸೇರುತ್ತಾರೆ. ಒಂದು ಕಾಲದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಗುತ್ತಿಗೆಯಾಗಿ ಹೋಗಿದ್ದ ಆದಿವಾಸಿ ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿರುವ `ವನವಾಸಿ ಕಲ್ಯಾಣ ಪರಿಷತ್'ಗಳ ಶಾಖೆಗಳು ಕಳೆದ 15-20 ವರ್ಷಗಳಲ್ಲಿ ವ್ಯಾಪಕವಾಗಿ ಹರಡಿವೆ. ಅನಿವಾಸಿ ಗುಜರಾತಿಗಳ ದೇಣಿಗೆಯಿಂದಾಗಿ ಈ ಹಿಂದೂ ಎನ್‌ಜಿಒಗಳು ಸಂಪನ್ಮೂಲದ ವಿಷಯದಲ್ಲಿಯೂ ಕ್ರಿಶ್ಚಿಯನ್ ಮಿಷನರಿಗಳನ್ನು ಮೀರಿಸುವಂತಿವೆ. ಚಹದಂಗಡಿಯಲ್ಲಿ ನನ್ನೆದುರಿಗೆ ಬಂದು `ಜೈ ಶ್ರಿರಾಮ್'ಎಂದು ಕೂಗಿದ್ದ ಯುವಕನ ಹೆಸರು ಭಾನು ರಾತ್ವಾ. ಆತ ಒಂದಷ್ಟು ದಿನ ಕ್ರಿಶ್ಚಿಯನ್ ಮಿಷನರಿ ಜತೆ ಇದ್ದವನಂತೆ.
ಆದರೆ ಅಲ್ಲಿ ಆದಿವಾಸಿ ದೇವತೆಗಳ ಹಾಡು ಹಾಡಬಾರದು, ಅವರ ಚಿತ್ರ ಬಿಡಿಸಬಾರದು ಎಂದೆಲ್ಲ ಪ್ರತಿಬಂಧನೆಗಳು ಹೆಚ್ಚತೊಡಗಿದಾಗ ಪ್ರತಿಭಟಿಸಿ ಹೊರಬಂದವ. ಅಲ್ಲಿಂದ ಆತ ಪಾವಗಡದ ವನವಾಸಿ ಕಲ್ಯಾಣ ಪರಿಷತ್ ಸೇರಿಕೊಂಡು ಮೋದಿ ಪ್ರಚಾರಕನಾಗಿದ್ದಾನೆ. 2002ರ ಕೋಮುಗಲಭೆಯಲ್ಲಿ ಅಹಮದಾಬಾದ್ ನಗರವನ್ನು ಹೊರತುಪಡಿಸಿದರೆ ಅತಿಹೆಚ್ಚು ಸಾವು-ನೋವು ಸಂಭವಿಸಿದ್ದು ಪಂಚಮಹಲ್ ಮತ್ತು ದಾಹೋದ್ ಜಿಲ್ಲೆಗಳಲ್ಲಿ.
 
 `ಕೋಮು ಗಲಭೆಗಳಲ್ಲಿ ಸಂಘಪರಿವಾರದ ಕಾಲಾಳುಗಳಾಗಿ ಕೆಲಸ ಮಾಡಿದ್ದವರು ನಿರುದ್ಯೋಗಿ ಆದಿವಾಸಿ ಯುವಕರು. ಅವರಲ್ಲಿ ಈಗಲೂ ಬಹಳಷ್ಟು ಮಂದಿ ಜೈಲಲ್ಲಿದ್ದಾರೆ. ತಮ್ಮ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರಿಗೆ ಅರಿವಾಗಿದೆ' ಎಂದು ಕಳೆದ ಚುನಾವಣೆಯ ಕಾಲದಲ್ಲಿ ವಡೋಧರಾದ ಸಮಾಜವಿಜ್ಞಾನ ಸಂಶೋಧಕ ಗಣೇಶ್ ದೇವಿ ನನಗೆ ಹೇಳಿದ್ದರು. ಆದರೆ `ಪಟೇಲರ ಬಂಡಾಯ, ಸಂಘಪರಿವಾರದ ಅಸಮಾಧಾನ, ಆದಿವಾಸಿ ಯುವಕರ ಜ್ಞಾನೋದಯ'ಗಳ ಹೊರತಾಗಿಯೂ 2007ರ ಚುನಾವಣೆಯಲ್ಲಿ ನರೇಂದ್ರಮೋದಿ ಗೆದ್ದಿದ್ದರು. ಈ ಬಾರಿಯೂ ಗೆಲ್ಲದಿರಲು ಕಾರಣಗಳು ಬಹಳ ಇಲ್ಲ.

Monday, December 10, 2012

ಸುಭದ್ರ ಸರ್ಕಾರ ಎಂಬ ಮಾಯಾಮೃಗದ ಬೆನ್ನಟ್ಟಿ... Dec 10 2012


`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಬಹಿರಂಗ ಘೋಷಣೆಗಳೇನೇ ಇರಲಿ, ಬೇರೆ ಯಾವ ಪಕ್ಷವೂ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಅಂತರಂಗದಲ್ಲಿ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ಯಾವ ಚುನಾವಣೆಯಲ್ಲಿಯೂ ಈ ಪರಿಸ್ಥಿತಿಯನ್ನು ನಾನು ಕಂಡಿರಲಿಲ್ಲ, ಕನಿಷ್ಠ ಎರಡು ಪಕ್ಷಗಳ ನಡುವೆ ಬಹುಮತಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತಿತ್ತು, ಫಲಿತಾಂಶವನ್ನು ಊಹಿಸುವುದು ಕಷ್ಟವಾಗುತ್ತಿತ್ತು..' ಎಂದು ಹೇಳಿದವರು ಲಂಡನ್‌ನ ಕಾಮನ್‌ವೆಲ್ತ್ ಅಧ್ಯಯನ ಸಂಸ್ಥೆಯ ಪ್ರೊ.ಜೇಮ್ಸ ಮೇನರ್.
ಇತ್ತೀಚೆಗೆ `ಪ್ರಜಾವಾಣಿ' ಕಚೇರಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಜೇಮ್ಸ ತನ್ನ ಇತ್ತೀಚಿನ ಸುತ್ತಾಟದಲ್ಲಿ ಕಂಡುಕೊಂಡ ಈ ರಾಜಕೀಯ ಒಳನೋಟವನ್ನು ನೀಡಿದರು. 1972ರಿಂದ ರಾಜ್ಯದಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಸಮೀಪದಿಂದ ಕಂಡಿರುವ, ಅದರ ವಿಶ್ಲೇಷಣೆಗಳನ್ನು ನಿಖರವಾಗಿ ಮಾಡಿರುವ ಮತ್ತು ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿ ಹೆಚ್ಚು ಕಡಿಮೆ ಕನ್ನಡಿಗರೇ ಆಗಿರುವ ಜೇಮ್ಸ, ಕರ್ನಾಟಕದ ರಾಜಕೀಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ರಾಜಕೀಯ ಪಂಡಿತ. ಅವರು ಹೇಳಿದ್ದನ್ನು ನಂಬಲೇ ಬೇಕು ಆದರೆ..?
ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅಧಿಕಾರದ ಕಡೆಗೆ ಕಾಂಗ್ರೆಸ್ ಹಾದಿ ಸುಲಭದ್ದೆಂದು  ಅನಿಸಿಬಿಡುವುದು ಸಹಜ. ಎಚ್.ಡಿ.ಕುಮಾರಸ್ವಾಮಿಯವರ ವಚನಭಂಗದಿಂದಾಗಿ ಯಡಿಯೂರಪ್ಪನವರ ಪರ ಎದ್ದಿದ್ದ ಅನುಕುಂಪದ ಅಲೆ, ಬಳ್ಳಾರಿಯ ರೆಡ್ಡಿ ಸೋದರರ ದುಡ್ಡಿನ ಬಲ, ತಳಮಟ್ಟದಲ್ಲಿನ ಸಂಘ ಪರಿವಾರದ ಬದ್ದ ಕಾರ್ಯಕರ್ತರ ಜಾಲ ಹಾಗೂ ಪರಿಶಿಷ್ಟ ಜಾತಿಯ ಗುಂಪನ್ನು ಒಡೆದು ಮಾದಿಗರು, ಲಂಬಾಣಿ ಮತ್ತು ಬೋವಿ ಸಮುದಾಯಗಳನ್ನು ಸೆಳೆದುಕೊಂಡ `ಸೋಷಿಯಲ್ ಎಂಜಿನಿಯರಿಂಗ್'- 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈಗ ಬಿಜೆಪಿ ನಾಯಕರು ಚೀರಿಚೀರಿ ಹೇಳಿದರೂ ಅಂದಿನ ಪರಿಸ್ಥಿತಿ ಈಗ ಇಲ್ಲವೆನ್ನುವುದು ಅವರ ಅಂತರಂಗಕ್ಕೂ ಗೊತ್ತು.
ಯಡಿಯೂರಪ್ಪನವರ ನಿರ್ಗಮನ ಮತ್ತು ರೆಡ್ಡಿ ಸೋದರರ ಜೈಲು ವಾಸದಿಂದಾಗಿ ಈ ಎರಡು ಮೂಲಗಳ ಬಲವನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಸೋಲು ನಿಶ್ಚಿತ ಎಂಬುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಆದರೆ ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬಹುದೇ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 1.2ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದರೂ ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿಗಿಂತ 30 ಸ್ಥಾನಗಳನ್ನು ಕಡಿಮೆ ಪಡೆದಿತ್ತು.
ಚುನಾವಣಾ ಫಲಿತಾಂಶದ ಈ ಗಣಿತ ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. ಮತಪ್ರಮಾಣಕ್ಕೆ ಅನುಗುಣವಾಗಿ ಸ್ಥಾನಗಳ ಲೆಕ್ಕ ಹಾಕಲಾಗುವುದಿಲ್ಲ. ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಕೇವಲ ಮತಗಳಲ್ಲ, ಅದು ಮತಸಾಂದ್ರತೆ. ಈ ಕಾರಣದಿಂದಾಗಿಯೇ ಹಳೆಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಜೆಡಿ(ಎಸ್) ಶೇಕಡಾ 19.44ರಷ್ಟು ಮತಗಳಿಸಿದರೂ 28  ಸ್ಥಾನಗಳನ್ನು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಜೆಪಿ 33.93ರಷ್ಟು ಮತಗಳ ಆಧಾರದಲ್ಲಿ  110 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರುವುದು.
ಕಾಂಗ್ರೆಸ್ ಪಕ್ಷ ಶೇಕಡಾ 35.13ರಷ್ಟು ಮತಗಳನ್ನು ಪಡೆದರೂ 80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿರುವುದಕ್ಕೂ ಇದೇ ಕಾರಣ. ಕಾಂಗ್ರೆಸ್ ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾದ ಜನ ಬೆಂಬಲ ಹೊಂದಿದ್ದರೆ, ಬಿಜೆಪಿ ಮತ್ತು ಜೆಡಿ (ಎಸ್) ನಿರ್ದಿಷ್ಟ ಪ್ರದೇಶಗಳಲ್ಲಿ ಕಾಂಗ್ರೆಸ್‌ಪಕ್ಷದ ಸರಾಸರಿ ಜನಬೆಂಬಲಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿವೆ.
ಯಡಿಯೂರಪ್ಪನವರ ನಿರ್ಗಮನದಿಂದ ಬಿಜೆಪಿ ಶಕ್ತಿ ಕುಂದಲಿರುವುದು ಖಾತರಿ. ಆದರೆ ಬಿಜೆಪಿ ಬುಟ್ಟಿಯಿಂದ ಜಿಗಿದ ಮತಗಳು ನೇರವಾಗಿ ಕಾಂಗ್ರೆಸ್ ಮಡಿಲಿಗೆ ಬೀಳುವುದೇ ಇಲ್ಲವೆ ಅದು ಯಡಿಯೂರಪ್ಪನವರ ಕಡೆಗೆ ಹೋಗಲಿದೆಯೇ ಎನ್ನುವುದು ಪ್ರಶ್ನೆ. ಬಹುಶಃ ಈ ಪ್ರಶ್ನೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.
ಬಿಜೆಪಿಯಿಂದ ಸಿಡಿದುಹೋಗಲಿರುವುದು ಬಹುತೇಕ ಲಿಂಗಾಯತ ಮತಗಳು. ಅವುಗಳು ಯಡಿಯೂರಪ್ಪನವರ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು. ಈ `ಮತಾಂತರ'ದಿಂದ ಯಾರಿಗೆ ಎಷ್ಟು ಲಾಭ? ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಬಹುದೇ? ಯಡಿಯೂರಪ್ಪನವರ ಪಕ್ಷವನ್ನು ನಿರ್ಣಾಯಕ ಸ್ಥಾನದಲ್ಲಿ ಕೊಂಡೊಯ್ದು ನಿಲ್ಲಿಸಬಹುದೇ?
ಯಡಿಯೂರಪ್ಪನವರೇ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಲಾರದು. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿಯಿಂದ ಹೊರಹೋಗುವ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುವಂತೆ ಕಾಂಗ್ರೆಸ್ ಪಕ್ಷ ಮಾಡಬೇಕಾಗುತ್ತದೆ. ಅದೇ ರೀತಿ ಬಿಜೆಪಿಯಿಂದ ಕಿತ್ತುಕೊಂಡ ಮತಗಳಿಂದಲೇ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಡಿಯೂರಪ್ಪನವರಿಗೂ ಸಾಧ್ಯವಾಗಲಾರದು.
ಲಿಂಗಾಯತರೆಲ್ಲರೂ ಮತಹಾಕಿದರೂ ಅದು ಶೇಕಡಾ ಹದಿನೈದರ ಪ್ರಮಾಣವನ್ನು ದಾಟುವುದಿಲ್ಲ, ಉತ್ತರ ಕರ್ನಾಟಕದ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡಾ 20-25ರಷ್ಟಿದೆ ಎಂದಿಟ್ಟುಕೊಂಡರೂ ಅವರೆಲ್ಲರೂ ಕಣ್ಣುಮುಚ್ಚಿ ಯಡಿಯೂರಪ್ಪನವರ ಪಕ್ಷಕ್ಕೆ ಮತಹಾಕಲಿದ್ದಾರೆ ಎಂಬ ಖಾತರಿ ಇಲ್ಲ. ಕನಿಷ್ಠ ಶೇಕಡಾ 25ರಿಂದ 30ರಷ್ಟು ಮತಗಳನ್ನು ಪಡೆಯದೆ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇದಕ್ಕಾಗಿ ಎಲ್ಲ ಜಾತಿ-ಧರ್ಮಗಳ ಮತದಾರರ ಬೆಂಬಲ ಅಗತ್ಯ.
ಯಡಿಯೂರಪ್ಪನವರು ಅದೇ ಪ್ರಯತ್ನದಲ್ಲಿದ್ದಾರೆ.  ಯಡಿಯೂರಪ್ಪನವರ ಬಂಡಾಯ ಬಿಜೆಪಿ ಸೋಲಿನಲ್ಲಿ ಕೊನೆಗೊಳ್ಳಬಹುದು, ಆದರೆ ಕೆಜೆಪಿ ಇಲ್ಲವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ ಇಲ್ಲ.ಹೀಗಾದರೆ ಸುಭದ್ರ ಸರ್ಕಾರ ಸಾಧ್ಯವೇ? ಯಾವುದಾದರೂ ಒಂದು ಪಕ್ಷ 113 ಸ್ಥಾನಗಳನ್ನು ಗಳಿಸಿದರೆ ಇದು ಸಾಧ್ಯವಾಗಬಹುದು.
ಜೇಮ್ಸ ಮೇನರ್ ಪ್ರಕಾರ  ಸದ್ಯಕ್ಕೆ ಅಂತಹ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ಆದರೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯಾವ ಪಕ್ಷವೂ ನೂರರ ಗಡಿಯನ್ನು ದಾಟದೆ ಹೋದರೆ? ಉದಾಹರಣೆಗೆ ಕಾಂಗ್ರೆಸ್ ಪಕ್ಷ 90-95, ಬಿಜೆಪಿ 60-65, ಬಿ.ಎಸ್.ಯಡಿಯೂರಪ್ಪ 30-35, ಜೆಡಿ (ಎಸ್) 30-35 ಮತ್ತು ಬಿಎಸ್‌ಆರ್ ಪಕ್ಷ ಹಾಗೂ ಪಕ್ಷೇತರರು 10-15 ಸ್ಥಾನಗಳನ್ನು ಗಳಿಸಿದರೆ ಸುಲಭದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾದೀತೇ? ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುವುದು ರೂಢಿಯಾಗಿರುವ ಕಾರಣ ಮತ್ತು ರಾಜಭವನದಲ್ಲಿ ಅನುಕೂಲಕರ ರಾಜ್ಯಪಾಲರೇ ಕೂತಿರುವುದರಿಂದ  ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಅಲ್ಲ.
ಯಾರಿಗೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಇಂತಹ ಸಂದರ್ಭದಲ್ಲಿ ಬಗೆಬಗೆಯ ಆಪರೇಷನ್‌ಗಳು ನಡೆಯಲಿರುವುದು ಖಂಡಿತ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಮತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಕಾರಣಗಳಿಂದಾಗಿ ಕಾಂಗ್ರೆಸ್ ನಡೆಸುವ `ಆಪರೇಷನ್'ಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದ್ದರೂ ಉಳಿದ ಪಕ್ಷಗಳೂ ಕೈಕಟ್ಟಿ ಕೂರಲಾರವು.
ಯಡಿಯೂರಪ್ಪನವರು ಬಿಜೆಪಿಯನ್ನು ತೊರೆದು ಬಂದಿರಬಹುದು, ಬಿಜೆಪಿ ನಾಯಕರನ್ನು ಮನಸಾರೆ ನಿಂದಿಸಿರಬಹುದು, ಅಷ್ಟೇ ಕೆಟ್ಟದಾಗಿ ಯಡಿಯೂರಪ್ಪ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡಿರಬಹುದು. ಆದರೆ ಮುಂದಿನ ಚುನಾವಣೆಯ ಫಲಿತಾಂಶದ ನಂತರ ಪರಸ್ಪರ ಒಟ್ಟಾಗುವುದರಿಂದ ಅಧಿಕಾರ ಹಿಡಿಯುವುದು ಸಾಧ್ಯ ಎಂದು ಗೊತ್ತಾದ ಮರುಕ್ಷಣವೇ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ `ನೀವೇ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಹೇಳಿ ಕೆಜೆಪಿಯನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸಲೂ ಮನವೊಲಿಸಬಹುದು.
ಯಡಿಯೂರಪ್ಪನವರು ಒಪ್ಪದೆ ಇದ್ದರೆ (ಅಂತಹ ಆಹ್ವಾನವನ್ನು ಯಡಿಯೂರಪ್ಪ ಖಂಡಿತ ತಿರಸ್ಕರಿಸಲಾರರು) ಕೆಜೆಪಿಯನ್ನೇ ಒಡೆದು ಹಾಕಲು ಬಿಜೆಪಿ ಮುಂದಾಗಬಹುದು. ಯಡಿಯೂರಪ್ಪನವರೂ ಸುಮ್ಮನಿರಲಾರರು, ಬಿಜೆಪಿಯನ್ನು ಒಡೆದು ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಪ್ರಯತ್ನ ಪಡಬಹುದು.
ಇಷ್ಟೇ ಅಲ್ಲ, ಒಂದೊಮ್ಮೆ ಕೆಜೆಪಿ 45-50, ಜೆಡಿ (ಎಸ್) 45-50  ಮತ್ತು ಬಿಎಸ್‌ಆರ್ ಪಕ್ಷ 10-15 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗದ ಪ್ರಯೋಗ ನಡೆಸಲೂ ಅವಕಾಶ ಇದೆ. ಈ ಮೂರು ಪಕ್ಷಗಳ ನಾಯಕರ ಇಲ್ಲಿಯ ವರೆಗಿನ ನಡವಳಿಕೆಗಳನ್ನು ಗಮನಿಸುತ್ತಾ ಬಂದರೆ  ಯಾವುದೇ ನಿರ್ದಿಷ್ಠ ರಾಜಕೀಯ ಸಿದ್ಧಾಂತ ಇಲ್ಲವೇ ಮೌಲ್ಯಗಳ ಬಗ್ಗೆ ಅವರಿಗೆ ಬದ್ಧತೆ ಕಂಡುಬರುವುದಿಲ್ಲ.
ಪರಸ್ಪರ ಎಷ್ಟೇ ಕೆಸರೆರಚಾಡಿಕೊಂಡರೂ ಅಧಿಕಾರ ಹಿಡಿಯಲು ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ ಆಶ್ಚರ್ಯವೇನಿಲ್ಲ. ಈ ಇಬ್ಬರಿಗೂ ಶ್ರಿರಾಮುಲು ಆತ್ಮೀಯರಾಗಿರುವ ಕಾರಣ ಅವರು ಹೊಂದಿಕೊಳ್ಳುವುದು ಕಷ್ಟ ಅಲ್ಲ. ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಣುತ್ತಿರುವುದರಿಂದ ದೇವೇಗೌಡರು ಕೂಡಾ ಈ ಪ್ರಯೋಗವನ್ನು ಬೆಂಬಲಿಸಬಹುದು.
ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಖಚಿತವಾಗಿ ನಂಬಿರುವ ಕಾಂಗ್ರೆಸ್ ನಾಯಕರು ಮನೆಹೊಸಿಲಿಗೆ ಬಂದಿರುವ ಅಧಿಕಾರವನ್ನು ಅಷ್ಟು ಸುಲಭದಲ್ಲಿ ಉಳಿದವರು ಅಪಹರಿಸಿಕೊಂಡು ಹೋಗಲು ಬಿಡಲಾರದು. ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಾಕ್ಷಣ  ಕೆಜೆಪಿ ಇಲ್ಲವೇ ಜೆಡಿ (ಎಸ್) ಜತೆ ಅದು ವ್ಯವಹಾರಕ್ಕೆ ಇಳಿಯಬಹುದು.
ಜೆಡಿ (ಎಸ್)ಗಿಂತಲೂ ಕೆಜೆಪಿಯನ್ನು ಒಲಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭ. ಬಿಜೆಪಿ ತೊರೆದ ನಂತರ ಅವರು `ಸೆಕ್ಯುಲರ್' ಆಗಿರುವುದರಿಂದ ಕೋಮುವಾದಿಗಳ ಜತೆ ಕೈಜೋಡಿಸಿದ ಅಪವಾದವನ್ನು ಕೂಡಾ ಎದುರಿಸಬೇಕಾಗಿಲ್ಲ. ತಲೆಮೇಲೆ ಸಿಬಿಐ ತೂಗುಕತ್ತಿಯನ್ನು ಇಟ್ಟುಕೊಂಡೇ ತಿರುಗಾಡುತ್ತಿರುವ ಯಡಿಯೂರಪ್ಪ ಬಹಳ ಬೇಗ ಕಾಂಗ್ರೆಸ್ ಹಾಕುವ ಗಾಳವನ್ನು ನುಂಗಿಬಿಡಲೂಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಬಹುಕಾಲದಿಂದ ಮರೀಚಿಕೆಯಾಗಿದ್ದ ಸುಭದ್ರ ಸರ್ಕಾರವೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಬಹಳ ಕಾರಣಗಳು ಸಿಗುತ್ತಿಲ್ಲ.
ಜೇಮ್ಸ ಮೇನರ್ ಅವರು ರಾಜ್ಯದ ಚುನಾವಣಾ ಇತಿಹಾಸವನ್ನು ಮೆಲುಕುಹಾಕುತ್ತಾ ಕೊನೆಯಲ್ಲಿ ಕರ್ನಾಟಕದ ಜಾಗೃತ ಮತದಾರರನ್ನು ಬಾಯ್ತುಂಬಾ ಹೊಗಳಿದರು. ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಉಲ್ಲೇಖಿಸಿದ್ದು 1984ರ ಲೋಕಸಭಾ ಚುನಾವಣೆ ಮತ್ತು 1985ರ ಮಧ್ಯಂತರ ವಿಧಾನಸಭಾ ಚುನಾವಣೆಯನ್ನು.
1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ನಾಲ್ಕು ಸ್ಥಾನಗಳನ್ನಷ್ಟೇ ನೀಡಿ ರಾಜ್ಯದ ಆಡಳಿತಾರೂಢ ಜನತಾ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮತದಾರರು, ಎರಡು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. `ಭಾರತ ಮಾತ್ರವಲ್ಲ ಬೇರೆ ಯಾವ ದೇಶದಲ್ಲಿಯೂ ಇಂತಹ ನಿದರ್ಶನ ಅಪರೂಪ' ಎಂದು ಅವರು ಬಣ್ಣಿಸಿದರು.
ಕರ್ನಾಟಕದ ಮತದಾರರು ರಾಜ್ಯಕ್ಕೊಂದು ಸುಭದ್ರ ಸರ್ಕಾರ ನೀಡುತ್ತಾರೆ ಎಂಬ ಭರವಸೆ ಅವರ ಮಾತಿನಲ್ಲಿತ್ತು.  ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳಲ್ಲಿ ಬರುವುದಾಗಿ ಜೇಮ್ಸ ಮೇನರ್ ಹೇಳಿ ಹೋಗಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಕರ್ನಾಟಕದ ಜಾಗೃತ ಮತದಾರರು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಐದು ತಿಂಗಳು ಕಾಯಬೇಕು.

ಸುಭದ್ರ ಸರ್ಕಾರ ಎಂಬ ಮಾಯಾಮೃಗದ ಬೆನ್ನಟ್ಟಿ... Dec 10 2012


`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಬಹಿರಂಗ ಘೋಷಣೆಗಳೇನೇ ಇರಲಿ, ಬೇರೆ ಯಾವ ಪಕ್ಷವೂ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಅಂತರಂಗದಲ್ಲಿ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ಯಾವ ಚುನಾವಣೆಯಲ್ಲಿಯೂ ಈ ಪರಿಸ್ಥಿತಿಯನ್ನು ನಾನು ಕಂಡಿರಲಿಲ್ಲ, ಕನಿಷ್ಠ ಎರಡು ಪಕ್ಷಗಳ ನಡುವೆ ಬಹುಮತಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತಿತ್ತು, ಫಲಿತಾಂಶವನ್ನು ಊಹಿಸುವುದು ಕಷ್ಟವಾಗುತ್ತಿತ್ತು..' ಎಂದು ಹೇಳಿದವರು ಲಂಡನ್‌ನ ಕಾಮನ್‌ವೆಲ್ತ್ ಅಧ್ಯಯನ ಸಂಸ್ಥೆಯ ಪ್ರೊ.ಜೇಮ್ಸ ಮೇನರ್.
ಇತ್ತೀಚೆಗೆ `ಪ್ರಜಾವಾಣಿ' ಕಚೇರಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಜೇಮ್ಸ ತನ್ನ ಇತ್ತೀಚಿನ ಸುತ್ತಾಟದಲ್ಲಿ ಕಂಡುಕೊಂಡ ಈ ರಾಜಕೀಯ ಒಳನೋಟವನ್ನು ನೀಡಿದರು. 1972ರಿಂದ ರಾಜ್ಯದಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಸಮೀಪದಿಂದ ಕಂಡಿರುವ, ಅದರ ವಿಶ್ಲೇಷಣೆಗಳನ್ನು ನಿಖರವಾಗಿ ಮಾಡಿರುವ ಮತ್ತು ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿ ಹೆಚ್ಚು ಕಡಿಮೆ ಕನ್ನಡಿಗರೇ ಆಗಿರುವ ಜೇಮ್ಸ, ಕರ್ನಾಟಕದ ರಾಜಕೀಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ರಾಜಕೀಯ ಪಂಡಿತ. ಅವರು ಹೇಳಿದ್ದನ್ನು ನಂಬಲೇ ಬೇಕು ಆದರೆ..?
ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅಧಿಕಾರದ ಕಡೆಗೆ ಕಾಂಗ್ರೆಸ್ ಹಾದಿ ಸುಲಭದ್ದೆಂದು  ಅನಿಸಿಬಿಡುವುದು ಸಹಜ. ಎಚ್.ಡಿ.ಕುಮಾರಸ್ವಾಮಿಯವರ ವಚನಭಂಗದಿಂದಾಗಿ ಯಡಿಯೂರಪ್ಪನವರ ಪರ ಎದ್ದಿದ್ದ ಅನುಕುಂಪದ ಅಲೆ, ಬಳ್ಳಾರಿಯ ರೆಡ್ಡಿ ಸೋದರರ ದುಡ್ಡಿನ ಬಲ, ತಳಮಟ್ಟದಲ್ಲಿನ ಸಂಘ ಪರಿವಾರದ ಬದ್ದ ಕಾರ್ಯಕರ್ತರ ಜಾಲ ಹಾಗೂ ಪರಿಶಿಷ್ಟ ಜಾತಿಯ ಗುಂಪನ್ನು ಒಡೆದು ಮಾದಿಗರು, ಲಂಬಾಣಿ ಮತ್ತು ಬೋವಿ ಸಮುದಾಯಗಳನ್ನು ಸೆಳೆದುಕೊಂಡ `ಸೋಷಿಯಲ್ ಎಂಜಿನಿಯರಿಂಗ್'- 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈಗ ಬಿಜೆಪಿ ನಾಯಕರು ಚೀರಿಚೀರಿ ಹೇಳಿದರೂ ಅಂದಿನ ಪರಿಸ್ಥಿತಿ ಈಗ ಇಲ್ಲವೆನ್ನುವುದು ಅವರ ಅಂತರಂಗಕ್ಕೂ ಗೊತ್ತು.
ಯಡಿಯೂರಪ್ಪನವರ ನಿರ್ಗಮನ ಮತ್ತು ರೆಡ್ಡಿ ಸೋದರರ ಜೈಲು ವಾಸದಿಂದಾಗಿ ಈ ಎರಡು ಮೂಲಗಳ ಬಲವನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಸೋಲು ನಿಶ್ಚಿತ ಎಂಬುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಆದರೆ ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬಹುದೇ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 1.2ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದರೂ ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿಗಿಂತ 30 ಸ್ಥಾನಗಳನ್ನು ಕಡಿಮೆ ಪಡೆದಿತ್ತು.
ಚುನಾವಣಾ ಫಲಿತಾಂಶದ ಈ ಗಣಿತ ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. ಮತಪ್ರಮಾಣಕ್ಕೆ ಅನುಗುಣವಾಗಿ ಸ್ಥಾನಗಳ ಲೆಕ್ಕ ಹಾಕಲಾಗುವುದಿಲ್ಲ. ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಕೇವಲ ಮತಗಳಲ್ಲ, ಅದು ಮತಸಾಂದ್ರತೆ. ಈ ಕಾರಣದಿಂದಾಗಿಯೇ ಹಳೆಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಜೆಡಿ(ಎಸ್) ಶೇಕಡಾ 19.44ರಷ್ಟು ಮತಗಳಿಸಿದರೂ 28  ಸ್ಥಾನಗಳನ್ನು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಜೆಪಿ 33.93ರಷ್ಟು ಮತಗಳ ಆಧಾರದಲ್ಲಿ  110 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರುವುದು.
ಕಾಂಗ್ರೆಸ್ ಪಕ್ಷ ಶೇಕಡಾ 35.13ರಷ್ಟು ಮತಗಳನ್ನು ಪಡೆದರೂ 80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿರುವುದಕ್ಕೂ ಇದೇ ಕಾರಣ. ಕಾಂಗ್ರೆಸ್ ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾದ ಜನ ಬೆಂಬಲ ಹೊಂದಿದ್ದರೆ, ಬಿಜೆಪಿ ಮತ್ತು ಜೆಡಿ (ಎಸ್) ನಿರ್ದಿಷ್ಟ ಪ್ರದೇಶಗಳಲ್ಲಿ ಕಾಂಗ್ರೆಸ್‌ಪಕ್ಷದ ಸರಾಸರಿ ಜನಬೆಂಬಲಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿವೆ.
ಯಡಿಯೂರಪ್ಪನವರ ನಿರ್ಗಮನದಿಂದ ಬಿಜೆಪಿ ಶಕ್ತಿ ಕುಂದಲಿರುವುದು ಖಾತರಿ. ಆದರೆ ಬಿಜೆಪಿ ಬುಟ್ಟಿಯಿಂದ ಜಿಗಿದ ಮತಗಳು ನೇರವಾಗಿ ಕಾಂಗ್ರೆಸ್ ಮಡಿಲಿಗೆ ಬೀಳುವುದೇ ಇಲ್ಲವೆ ಅದು ಯಡಿಯೂರಪ್ಪನವರ ಕಡೆಗೆ ಹೋಗಲಿದೆಯೇ ಎನ್ನುವುದು ಪ್ರಶ್ನೆ. ಬಹುಶಃ ಈ ಪ್ರಶ್ನೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.
ಬಿಜೆಪಿಯಿಂದ ಸಿಡಿದುಹೋಗಲಿರುವುದು ಬಹುತೇಕ ಲಿಂಗಾಯತ ಮತಗಳು. ಅವುಗಳು ಯಡಿಯೂರಪ್ಪನವರ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು. ಈ `ಮತಾಂತರ'ದಿಂದ ಯಾರಿಗೆ ಎಷ್ಟು ಲಾಭ? ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಬಹುದೇ? ಯಡಿಯೂರಪ್ಪನವರ ಪಕ್ಷವನ್ನು ನಿರ್ಣಾಯಕ ಸ್ಥಾನದಲ್ಲಿ ಕೊಂಡೊಯ್ದು ನಿಲ್ಲಿಸಬಹುದೇ?
ಯಡಿಯೂರಪ್ಪನವರೇ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಲಾರದು. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿಯಿಂದ ಹೊರಹೋಗುವ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುವಂತೆ ಕಾಂಗ್ರೆಸ್ ಪಕ್ಷ ಮಾಡಬೇಕಾಗುತ್ತದೆ. ಅದೇ ರೀತಿ ಬಿಜೆಪಿಯಿಂದ ಕಿತ್ತುಕೊಂಡ ಮತಗಳಿಂದಲೇ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಡಿಯೂರಪ್ಪನವರಿಗೂ ಸಾಧ್ಯವಾಗಲಾರದು.
ಲಿಂಗಾಯತರೆಲ್ಲರೂ ಮತಹಾಕಿದರೂ ಅದು ಶೇಕಡಾ ಹದಿನೈದರ ಪ್ರಮಾಣವನ್ನು ದಾಟುವುದಿಲ್ಲ, ಉತ್ತರ ಕರ್ನಾಟಕದ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡಾ 20-25ರಷ್ಟಿದೆ ಎಂದಿಟ್ಟುಕೊಂಡರೂ ಅವರೆಲ್ಲರೂ ಕಣ್ಣುಮುಚ್ಚಿ ಯಡಿಯೂರಪ್ಪನವರ ಪಕ್ಷಕ್ಕೆ ಮತಹಾಕಲಿದ್ದಾರೆ ಎಂಬ ಖಾತರಿ ಇಲ್ಲ. ಕನಿಷ್ಠ ಶೇಕಡಾ 25ರಿಂದ 30ರಷ್ಟು ಮತಗಳನ್ನು ಪಡೆಯದೆ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇದಕ್ಕಾಗಿ ಎಲ್ಲ ಜಾತಿ-ಧರ್ಮಗಳ ಮತದಾರರ ಬೆಂಬಲ ಅಗತ್ಯ.
ಯಡಿಯೂರಪ್ಪನವರು ಅದೇ ಪ್ರಯತ್ನದಲ್ಲಿದ್ದಾರೆ.  ಯಡಿಯೂರಪ್ಪನವರ ಬಂಡಾಯ ಬಿಜೆಪಿ ಸೋಲಿನಲ್ಲಿ ಕೊನೆಗೊಳ್ಳಬಹುದು, ಆದರೆ ಕೆಜೆಪಿ ಇಲ್ಲವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ ಇಲ್ಲ.ಹೀಗಾದರೆ ಸುಭದ್ರ ಸರ್ಕಾರ ಸಾಧ್ಯವೇ? ಯಾವುದಾದರೂ ಒಂದು ಪಕ್ಷ 113 ಸ್ಥಾನಗಳನ್ನು ಗಳಿಸಿದರೆ ಇದು ಸಾಧ್ಯವಾಗಬಹುದು.
ಜೇಮ್ಸ ಮೇನರ್ ಪ್ರಕಾರ  ಸದ್ಯಕ್ಕೆ ಅಂತಹ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ಆದರೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯಾವ ಪಕ್ಷವೂ ನೂರರ ಗಡಿಯನ್ನು ದಾಟದೆ ಹೋದರೆ? ಉದಾಹರಣೆಗೆ ಕಾಂಗ್ರೆಸ್ ಪಕ್ಷ 90-95, ಬಿಜೆಪಿ 60-65, ಬಿ.ಎಸ್.ಯಡಿಯೂರಪ್ಪ 30-35, ಜೆಡಿ (ಎಸ್) 30-35 ಮತ್ತು ಬಿಎಸ್‌ಆರ್ ಪಕ್ಷ ಹಾಗೂ ಪಕ್ಷೇತರರು 10-15 ಸ್ಥಾನಗಳನ್ನು ಗಳಿಸಿದರೆ ಸುಲಭದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾದೀತೇ? ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುವುದು ರೂಢಿಯಾಗಿರುವ ಕಾರಣ ಮತ್ತು ರಾಜಭವನದಲ್ಲಿ ಅನುಕೂಲಕರ ರಾಜ್ಯಪಾಲರೇ ಕೂತಿರುವುದರಿಂದ  ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಅಲ್ಲ.
ಯಾರಿಗೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಇಂತಹ ಸಂದರ್ಭದಲ್ಲಿ ಬಗೆಬಗೆಯ ಆಪರೇಷನ್‌ಗಳು ನಡೆಯಲಿರುವುದು ಖಂಡಿತ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಮತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಕಾರಣಗಳಿಂದಾಗಿ ಕಾಂಗ್ರೆಸ್ ನಡೆಸುವ `ಆಪರೇಷನ್'ಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದ್ದರೂ ಉಳಿದ ಪಕ್ಷಗಳೂ ಕೈಕಟ್ಟಿ ಕೂರಲಾರವು.
ಯಡಿಯೂರಪ್ಪನವರು ಬಿಜೆಪಿಯನ್ನು ತೊರೆದು ಬಂದಿರಬಹುದು, ಬಿಜೆಪಿ ನಾಯಕರನ್ನು ಮನಸಾರೆ ನಿಂದಿಸಿರಬಹುದು, ಅಷ್ಟೇ ಕೆಟ್ಟದಾಗಿ ಯಡಿಯೂರಪ್ಪ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡಿರಬಹುದು. ಆದರೆ ಮುಂದಿನ ಚುನಾವಣೆಯ ಫಲಿತಾಂಶದ ನಂತರ ಪರಸ್ಪರ ಒಟ್ಟಾಗುವುದರಿಂದ ಅಧಿಕಾರ ಹಿಡಿಯುವುದು ಸಾಧ್ಯ ಎಂದು ಗೊತ್ತಾದ ಮರುಕ್ಷಣವೇ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ `ನೀವೇ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಹೇಳಿ ಕೆಜೆಪಿಯನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸಲೂ ಮನವೊಲಿಸಬಹುದು.
ಯಡಿಯೂರಪ್ಪನವರು ಒಪ್ಪದೆ ಇದ್ದರೆ (ಅಂತಹ ಆಹ್ವಾನವನ್ನು ಯಡಿಯೂರಪ್ಪ ಖಂಡಿತ ತಿರಸ್ಕರಿಸಲಾರರು) ಕೆಜೆಪಿಯನ್ನೇ ಒಡೆದು ಹಾಕಲು ಬಿಜೆಪಿ ಮುಂದಾಗಬಹುದು. ಯಡಿಯೂರಪ್ಪನವರೂ ಸುಮ್ಮನಿರಲಾರರು, ಬಿಜೆಪಿಯನ್ನು ಒಡೆದು ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಪ್ರಯತ್ನ ಪಡಬಹುದು.
ಇಷ್ಟೇ ಅಲ್ಲ, ಒಂದೊಮ್ಮೆ ಕೆಜೆಪಿ 45-50, ಜೆಡಿ (ಎಸ್) 45-50  ಮತ್ತು ಬಿಎಸ್‌ಆರ್ ಪಕ್ಷ 10-15 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗದ ಪ್ರಯೋಗ ನಡೆಸಲೂ ಅವಕಾಶ ಇದೆ. ಈ ಮೂರು ಪಕ್ಷಗಳ ನಾಯಕರ ಇಲ್ಲಿಯ ವರೆಗಿನ ನಡವಳಿಕೆಗಳನ್ನು ಗಮನಿಸುತ್ತಾ ಬಂದರೆ  ಯಾವುದೇ ನಿರ್ದಿಷ್ಠ ರಾಜಕೀಯ ಸಿದ್ಧಾಂತ ಇಲ್ಲವೇ ಮೌಲ್ಯಗಳ ಬಗ್ಗೆ ಅವರಿಗೆ ಬದ್ಧತೆ ಕಂಡುಬರುವುದಿಲ್ಲ.
ಪರಸ್ಪರ ಎಷ್ಟೇ ಕೆಸರೆರಚಾಡಿಕೊಂಡರೂ ಅಧಿಕಾರ ಹಿಡಿಯಲು ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ ಆಶ್ಚರ್ಯವೇನಿಲ್ಲ. ಈ ಇಬ್ಬರಿಗೂ ಶ್ರಿರಾಮುಲು ಆತ್ಮೀಯರಾಗಿರುವ ಕಾರಣ ಅವರು ಹೊಂದಿಕೊಳ್ಳುವುದು ಕಷ್ಟ ಅಲ್ಲ. ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಣುತ್ತಿರುವುದರಿಂದ ದೇವೇಗೌಡರು ಕೂಡಾ ಈ ಪ್ರಯೋಗವನ್ನು ಬೆಂಬಲಿಸಬಹುದು.
ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಖಚಿತವಾಗಿ ನಂಬಿರುವ ಕಾಂಗ್ರೆಸ್ ನಾಯಕರು ಮನೆಹೊಸಿಲಿಗೆ ಬಂದಿರುವ ಅಧಿಕಾರವನ್ನು ಅಷ್ಟು ಸುಲಭದಲ್ಲಿ ಉಳಿದವರು ಅಪಹರಿಸಿಕೊಂಡು ಹೋಗಲು ಬಿಡಲಾರದು. ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಾಕ್ಷಣ  ಕೆಜೆಪಿ ಇಲ್ಲವೇ ಜೆಡಿ (ಎಸ್) ಜತೆ ಅದು ವ್ಯವಹಾರಕ್ಕೆ ಇಳಿಯಬಹುದು.
ಜೆಡಿ (ಎಸ್)ಗಿಂತಲೂ ಕೆಜೆಪಿಯನ್ನು ಒಲಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭ. ಬಿಜೆಪಿ ತೊರೆದ ನಂತರ ಅವರು `ಸೆಕ್ಯುಲರ್' ಆಗಿರುವುದರಿಂದ ಕೋಮುವಾದಿಗಳ ಜತೆ ಕೈಜೋಡಿಸಿದ ಅಪವಾದವನ್ನು ಕೂಡಾ ಎದುರಿಸಬೇಕಾಗಿಲ್ಲ. ತಲೆಮೇಲೆ ಸಿಬಿಐ ತೂಗುಕತ್ತಿಯನ್ನು ಇಟ್ಟುಕೊಂಡೇ ತಿರುಗಾಡುತ್ತಿರುವ ಯಡಿಯೂರಪ್ಪ ಬಹಳ ಬೇಗ ಕಾಂಗ್ರೆಸ್ ಹಾಕುವ ಗಾಳವನ್ನು ನುಂಗಿಬಿಡಲೂಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಬಹುಕಾಲದಿಂದ ಮರೀಚಿಕೆಯಾಗಿದ್ದ ಸುಭದ್ರ ಸರ್ಕಾರವೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಬಹಳ ಕಾರಣಗಳು ಸಿಗುತ್ತಿಲ್ಲ.
ಜೇಮ್ಸ ಮೇನರ್ ಅವರು ರಾಜ್ಯದ ಚುನಾವಣಾ ಇತಿಹಾಸವನ್ನು ಮೆಲುಕುಹಾಕುತ್ತಾ ಕೊನೆಯಲ್ಲಿ ಕರ್ನಾಟಕದ ಜಾಗೃತ ಮತದಾರರನ್ನು ಬಾಯ್ತುಂಬಾ ಹೊಗಳಿದರು. ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಉಲ್ಲೇಖಿಸಿದ್ದು 1984ರ ಲೋಕಸಭಾ ಚುನಾವಣೆ ಮತ್ತು 1985ರ ಮಧ್ಯಂತರ ವಿಧಾನಸಭಾ ಚುನಾವಣೆಯನ್ನು.
1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ನಾಲ್ಕು ಸ್ಥಾನಗಳನ್ನಷ್ಟೇ ನೀಡಿ ರಾಜ್ಯದ ಆಡಳಿತಾರೂಢ ಜನತಾ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮತದಾರರು, ಎರಡು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. `ಭಾರತ ಮಾತ್ರವಲ್ಲ ಬೇರೆ ಯಾವ ದೇಶದಲ್ಲಿಯೂ ಇಂತಹ ನಿದರ್ಶನ ಅಪರೂಪ' ಎಂದು ಅವರು ಬಣ್ಣಿಸಿದರು.
ಕರ್ನಾಟಕದ ಮತದಾರರು ರಾಜ್ಯಕ್ಕೊಂದು ಸುಭದ್ರ ಸರ್ಕಾರ ನೀಡುತ್ತಾರೆ ಎಂಬ ಭರವಸೆ ಅವರ ಮಾತಿನಲ್ಲಿತ್ತು.  ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳಲ್ಲಿ ಬರುವುದಾಗಿ ಜೇಮ್ಸ ಮೇನರ್ ಹೇಳಿ ಹೋಗಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಕರ್ನಾಟಕದ ಜಾಗೃತ ಮತದಾರರು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಐದು ತಿಂಗಳು ಕಾಯಬೇಕು.

Monday, December 3, 2012

ಕೇಜ್ರಿವಾಲ್ ಗೆಲ್ಲಬೇಕು ನಿಜ, ಗೆಲ್ಲಿಸುವವರು ಯಾರು? Dec 02 2012


`ರಾಜಕಾರಣಿಗಳ ವಿರುದ್ಧ ಆರೋಪ ಮಾಡುವುದು ಸುಲಭ, ತಾಕತ್ತಿದ್ದರೆ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ನೋಡಿ. ಆ ಶಕ್ತಿ ನಿಮಗಿದೆಯೇ?' ಎಂದು ನಮ್ಮ ವೃತ್ತಿಪರ ರಾಜಕಾರಣಿಗಳು, ಅವರ ವಿರುದ್ಧ ಬರೆಯುವ ಪತ್ರಕರ್ತರು ಮತ್ತು ಹೋರಾಟ ನಡೆಸುವ ಸಾಮಾಜಿಕ ಕಾರ್ಯಕರ್ತರನ್ನು ಆಗಾಗ ಕಿಚಾಯಿಸುವುದುಂಟು.
ಕಳೆದೆರಡು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರೀಯ ಸಮರವನ್ನು ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಮತ್ತು ಸಂಗಾತಿಗಳ `ಎದೆ ಮೇಲೆ ಬಂದೂಕು ಇಟ್ಟು' ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳು ಕೇಳಿದ್ದು ಇದೇ ಪ್ರಶ್ನೆಯನ್ನು. ಕೇಜ್ರಿವಾಲ್ ತಂಡ ಹಿಂದೆ ಸರಿಯಲಿಲ್ಲ, `ಬಂದೂಕಿನೊಳಗಿನ ಗುಂಡನ್ನು ನುಂಗಿಬಿಟ್ಟಿದೆ'. ತಲೆಗೆ ಗಾಂಧಿ ಟೋಪಿಯೇರಿಸಿ `ಆಮ್ ಆದ್ಮಿ ಪಾರ್ಟಿ' ಎಂಬ ಹೊಸ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ.
ಚುನಾವಣಾ ಆಯೋಗದಲ್ಲಿ ನೋಂದಣಿಗೊಂಡ ಸುಮಾರು ಮುನ್ನೂರು ಪಕ್ಷಗಳಿವೆ. ರಾಷ್ಟ್ರೀಯ, ಪ್ರಾದೇಶಿಕ, ಜಾತೀಯ.. ಹೀಗೆ ತರಹೇವಾರಿ ರಾಜಕೀಯ ಪಕ್ಷಗಳಿವೆ. ವೃತ್ತಿಪರ ರಾಜಕಾರಣಿಗಳನ್ನು ದೂರ ಇಟ್ಟು ದಲಿತರು, ರೈತರು, ಕಾರ್ಮಿಕರು ಪ್ರತ್ಯೇಕ ಪಕ್ಷಗಳನ್ನು ಕಟ್ಟುವ ಪ್ರಯತ್ನ ಕೂಡಾ ನಡೆಸಿದ್ದುಂಟು.
ಇವುಗಳಲ್ಲಿ ಎರಡಂಕಿಯಷ್ಟು ಶೇಕಡಾವಾರು ಮತಗಳಿಸಿರುವ ರಾಜಕೀಯ ಪಕ್ಷಗಳು ಮಾತ್ರ ಬೆರಳೆಣಿಕೆಯಷ್ಟು. `ನಿನ್ನೆಯ ಮಳೆಗೆ ಹುಟ್ಟಿ ಇವತ್ತಿನ ಬಿಸಿಲಿಗೆ ಸತ್ತುಹೋದ' ಪಕ್ಷಗಳೇ ಹೆಚ್ಚು. ಭಾರತದ ನೆಲದಲ್ಲಿ `ಆಮ್ ಆದ್ಮಿ ಪಾರ್ಟಿ' ಹಲವು ಕಾರಣಗಳಿಗಾಗಿ ಒಂದು ಹೊಸ ಪ್ರಯೋಗ. ಇತಿಹಾಸದ ಪುಟಗಳಲ್ಲಿ ಇಂತಹದ್ದೊಂದು ಪ್ರಯತ್ನ ಕಂಡುಬರುವುದು ಎಪ್ಪತ್ತರ ದಶಕದ ಕೊನೆಭಾಗದಲ್ಲಿ ಜಯಪ್ರಕಾಶ್ ನಾರಾಯಣ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಪರ್ಯಾಯ ರಾಜಕೀಯ ಶಕ್ತಿಯಲ್ಲಿ ಮಾತ್ರ.
ಆಗ ಅಸ್ತಿತ್ವಕ್ಕೆ ಬಂದಿದ್ದ ಜನತಾ ಪಕ್ಷ ಎನ್ನುವುದು ಜೇಪಿ ನೇತೃತ್ವದ `ಸಂಪೂರ್ಣ ಕ್ರಾಂತಿ' ಎಂಬ ಚಳವಳಿಯ ಉತ್ಪನ್ನ. ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿ ಅಲ್ಲಲ್ಲಿ ಜೇಪಿ ಚಳವಳಿಯನ್ನು ನೆನೆಪಿಸಿದರೂ ಜಯಪ್ರಕಾಶ್ ನಾರಾಯಣ್ ಅವರಿಗಿದ್ದ ಸೈದ್ಧಾಂತಿಕ ತಿಳಿವಳಿಕೆ,ಹೋರಾಟದ ಹಾದಿ ಬಗೆಗಿನ ಸ್ಪಷ್ಟತೆ ಮತ್ತು ವರ್ಚಸ್ಸಿನ ನಾಯಕತ್ವ ಹಜಾರೆ ಅವರಿಗೆ ಇಲ್ಲ.
ಇವೆಲ್ಲಕ್ಕಿಂತಲೂ ಮುಖ್ಯವಾಗಿ ಅದು ಸಂಪೂರ್ಣವಾಗಿ ರಾಜಕೀಯ ಚಳವಳಿಯಾಗಿತ್ತು. ಅದಕ್ಕಿದ್ದ ರಾಜಕೀಯ ಮುಖವನ್ನು ಯಾರೂ ಮುಚ್ಚಿಟ್ಟಿರಲಿಲ್ಲ. ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳೆಲ್ಲವೂ ಬಹಿರಂಗವಾಗಿ ಅದರಲ್ಲಿ ಪಾಲ್ಗೊಂಡಿದ್ದವು. ಆದುದರಿಂದ ಚಳವಳಿ ರಾಜಕೀಯ ಪಕ್ಷದ ರೂಪ ಪಡೆದಾಗ ಸಂಘಟನೆಯ ಸಮಸ್ಯೆ ಅದನ್ನು ಕಾಡಿರಲಿಲ್ಲ.
ಅರವಿಂದ್ ಕೇಜ್ರಿವಾಲ್ ನೇತೃತ್ವದ `ಆಮ್ ಆದ್ಮಿ ಪಾರ್ಟಿ' ಎನ್ನುವುದು `ರಾಜಕೀಯ ವಿರೋಧಿ ರಾಜಕೀಯ ಪಕ್ಷ'. ಶಾಂತಿಭೂಷಣ್ ಅವರನ್ನೊಬ್ಬರನ್ನು ಹೊರತುಪಡಿಸಿದರೆ ಈ ಪಕ್ಷದ ನಾಯಕರಲ್ಲಿ ಯಾರೂ ರಾಜಕೀಯ ಪಕ್ಷಗಳಿಂದ ಬಂದವರಲ್ಲ. ಈ ರೀತಿಯ `ರಾಜಕೀಯ ವಿರೋಧಿ ಚಹರೆ'ಯಿಂದ ಲಾಭ ಮತ್ತು ನಷ್ಟ ಎರಡೂ ಇವೆ. ಈಗಿನ ರಾಜಕೀಯ ವ್ಯವಸ್ಥೆಯನ್ನು ದ್ವೇಷಿಸುವ ದೊಡ್ಡ ಜನಸಮುದಾಯ ದೇಶದಲ್ಲಿದೆ.
ಅವರ ಬೆಂಬಲದ ಲಾಭವನ್ನು ಪಕ್ಷ ಪಡೆಯಬಹುದು. ನಷ್ಟವೂ ಇದೆ. ರಾಜಕೀಯ ಪಕ್ಷ ಎನ್ನುವುದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಅದೊಂದು ಸಾಮೂಹಿಕ ಪ್ರಯತ್ನ. ಇದಕ್ಕಾಗಿ ನಿಷ್ಠಾವಂತ ಕಾರ್ಯಕರ್ತರನ್ನೊಳಗೊಂಡ ಸಂಘಟನೆಯ ಬಲ ಬೇಕಾಗುತ್ತದೆ. ಕೇಜ್ರಿವಾಲ್ ಪಕ್ಷ ವೃತ್ತಿಪರ ರಾಜಕಾರಣಿಗಳನ್ನು ಅಸ್ಪೃಶ್ಯರಂತೆಯೇ ಕಾಣುತ್ತಾ ಬಂದಿರುವುದರಿಂದ ಅನಿವಾರ್ಯವಾಗಿ ಹೊಸ ಮುಖಗಳನ್ನೇ ಹುಡುಕಾಡಬೇಕಾಗಿದೆ.
ರಾಜಕೀಯ ಪಕ್ಷವೊಂದು ಯಶಸ್ಸನ್ನು ಕಾಣಬೇಕಾದರೆ ಅದರ ಖಾತೆಯಲ್ಲಿ ಬೆಂಬಲದ ಖಾತರಿ ಉಳ್ಳ ಒಂದು ಮತವರ್ಗ ಇರಬೇಕಾಗುತ್ತದೆ. ಈ ಜನಬೆಂಬಲದ `ಠೇವಣಿ'ಯನ್ನು ಇಟ್ಟುಕೊಂಡು ಅದು ಹೊಸ ಬೆಂಬಲಿಗರನ್ನು ಸೇರ್ಪಡೆಗೊಳಿಸುತ್ತಾ ಬೆಳೆಯಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಪ್ರಾರಂಭದಿಂದಲೂ `ಬಡವರು' ಎಂಬ ಸಾಮಾನ್ಯ ಮತಕ್ಷೇತ್ರವನ್ನು ಪೋಷಿಸುತ್ತಾ ಬಂದಿದೆ.
ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಭಾರತೀಯ ಜನತಾ ಪಕ್ಷ `ಹಿಂದೂ' ಮತಕ್ಷೇತ್ರವನ್ನು ಆರಿಸಿಕೊಂಡಿದೆ. ಈ ರೀತಿ `ಆಮ್ ಆದ್ಮಿ ಪಾರ್ಟಿ'ಯ ಮೂಲ ಮತಬ್ಯಾಂಕ್ ಯಾವುದು? ಪಕ್ಷದ ಹೆಸರನ್ನು ನೋಡಿದರೆ ಅದು `ಸಾಮಾನ್ಯಜನತೆ'ಯನ್ನು ಗುರಿಯಾಗಿಟ್ಟುಕೊಂಡಂತೆ ಕಾಣುತ್ತಿರುವುದು ನಿಜ.
ಆದರೆ ಅಣ್ಣಾಹಜಾರೆ ಮತ್ತು ಕೇಜ್ರಿವಾಲ್ ಜತೆಗೂಡಿ ನಡೆಸಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದುದು `ಸಾಮಾನ್ಯ ಜನತೆ' ಅಲ್ಲ, ಅದು `ಮಧ್ಯಮ ವರ್ಗ'. ಒಂದು ಕಾಲದಲ್ಲಿ `ಆಮ್‌ಆದ್ಮಿ' ಗುಂಪಿನಲ್ಲಿಯೇ ಇದ್ದ `ಮಧ್ಯಮ ವರ್ಗ' ಆರ್ಥಿಕ ಉದಾರೀಕರಣದ ಯುಗದ ನಂತರ ಸಿಡಿದು ಹೊರಬಂದಿದೆ. ಈಗ ಇವೆರಡೂ ಒಂದೇ ಎಂದು ಹೇಳಲಾಗುವುದಿಲ್ಲ.
ಈ `ಮಧ್ಯಮ ವರ್ಗ' ಬೀದಿಗಿಳಿದು ಬೆವರು ಸುರಿಸಿ ಕೇಜ್ರಿವಾಲ್ ಪಕ್ಷಕ್ಕಾಗಿ ದುಡಿಯುವವರಲ್ಲ. ಇವರಲ್ಲಿ ಹೆಚ್ಚಿನವರು `ಆರಾಮ ಕುರ್ಚಿಯ ದೇಶಭಕ್ತರು'. ಇವರು ಚುನಾವಣೆಯ ದಿನ ಮನೆಯಿಂದ ಹೊರಬಂದು ಮತಚಲಾಯಿಸಿದರೆ ಅದೇ ದೊಡ್ಡ ದೇಶಸೇವೆ.
ಕೇಜ್ರಿವಾಲ್ ಪಕ್ಷದ ಭವಿಷ್ಯದ ಕಾರ್ಯಸೂಚಿಯ ನೋಟವನ್ನು ನೀಡುವ `ಮುನ್ನೋಟದ ದಾಖಲೆ'ಯನ್ನು ಓದಿದರೆ ಅದು ಸಂಪೂರ್ಣವಾಗಿ `ಆಮ್ ಆದ್ಮಿ'ಯ ಪರವಾಗಿಯೇ ಇದ್ದಂತೆ ಕಾಣುತ್ತಿದೆ. `ಅಭಿವೃದ್ಧಿಗೆ `ಬಂಡವಾಳದ ತರ್ಕ' ಮತ್ತು `ಮುಕ್ತ ಮಾರುಕಟ್ಟೆ'ಯ ನೀತಿ ಅಲ್ಲ, `ಸಮಾನತೆ' ಮತ್ತು ಸಮಾಜದ ಕಟ್ಟಕಡೆಯ ಮನುಷ್ಯನ ಕಲ್ಯಾಣ' ಪ್ರೇರಣೆಯಾಗಬೇಕು' ಎಂದು ಪಕ್ಷದ `ಮುನ್ನೋಟದ ದಾಖಲೆ' ಹೇಳಿದೆ.
ಈ ದಾಖಲೆಯ ಆಧಾರದ ಆರ್ಥಿಕ ನೀತಿಯನ್ನು ಕೇಜ್ರಿವಾಲ್ ಬೆಂಬಲಕ್ಕೆ ನಿಂತಿರುವ ಆರ್ಥಿಕ ಉದಾರೀಕರಣದ ಉತ್ಪನ್ನವಾದ `ಮಧ್ಯಮವರ್ಗ' ಒಪ್ಪುತ್ತದೆಯೇ? ಇದು ಕೇಜ್ರಿವಾಲ್ ರಾಜಕೀಯದಲ್ಲಿ ಮೇಲ್ನೋಟಕ್ಕೆ ಕಾಣುವ ವೈರುದ್ಧ್ಯ, ಬಹುಶಃ ಮುಂದಿನ ದಿನಗಳಲ್ಲಿ ಅವರು ಎದುರಿಸಬೇಕಾಗಿರುವ ಬಿಕ್ಕಟ್ಟು ಕೂಡಾ.
ಇಷ್ಟು ಮಾತ್ರ ಅಲ್ಲ, `ಆಮ್‌ಆದ್ಮಿ ಪಾರ್ಟಿ'ಯ ರಾಜಕೀಯ ಸಿದ್ಧಾಂತ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಸಮಾಜವಾದದಿಂದ ಹಿಡಿದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರೆಗೆ ಹಲವಾರು `ಸೈದ್ಧಾಂತಿಕ ಶಾಲೆಗಳ ವಿದ್ಯಾರ್ಥಿಗಳು' ಈ ಪಕ್ಷದಲ್ಲಿದ್ದಾರೆ. ಚುನಾವಣೆ ಎನ್ನುವುದು ಕೇವಲ ಜನಲೋಕಪಾಲ ಮಸೂದೆಗಾಗಿ ನಡೆಯುವ ಜನಮತಗಣನೆ ಅಲ್ಲ.
ದೇಶದ ಮುಂದಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನೀತಿ ಮಾತ್ರ ಅಲ್ಲ, ಖಾಸಗೀಕರಣ, ಮೀಸಲಾತಿ, ವಿದೇಶಿ ನೀತಿ, ಆಂತರಿಕ ಭದ್ರತೆ, ಕೇಂದ್ರ-ರಾಜ್ಯ ಸಂಬಂಧ, ನೆಲ-ಜಲ-ಭಾಷೆಯ ಬಗೆಗಿನ ವಿವಾದಗಳು, ಕಾಶ್ಮೆರದ ಬಿಕ್ಕಟ್ಟು, ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ.
ಕೇಜ್ರಿವಾಲ್ ಮತ್ತು ಸ್ನೇಹಿತರು ಇಲ್ಲಿಯ ವರೆಗೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಜನಲೋಕಪಾಲ ಮಸೂದೆಯ ಹೊರತಾಗಿ ಉಳಿದ ವಿಷಯಗಳ ಬಗ್ಗೆ ಮಾತನಾಡಿದ್ದೇ ಕಡಿಮೆ.ಅರವಿಂದ್ ಕೇಜ್ರಿವಾಲ್ ಮತ್ತು ಸಂಗಡಿಗರ ಮುಂದೆ ಇರುವ ಇನ್ನೊಂದು ಸವಾಲು `ನುಡಿದಂತೆ ನಡೆಯುವುದು'. ಇಂದಿನ ರಾಜಕಾರಣಕ್ಕೆ ಅಂಟಿರುವ ಮಹಾರೋಗ ಎಂದರೆ ಆತ್ಮವಂಚನೆ.
ಬಹಳಷ್ಟು ರಾಜಕಾರಣಿಗಳು ಬಹಿರಂಗವಾಗಿಯೇ ಇದನ್ನು ಒಪ್ಪಿಕೊಳ್ಳುತ್ತಾರೆ. ಶಾಸಕರು ಮತ್ತು ಸಂಸದರಾಗಿ ಅವರು ಕೈಗೊಳ್ಳುವ ಪ್ರಮಾಣವಚನ ಮತ್ತು ಚುನಾವಣಾ ಕಾಲದಲ್ಲಿ ಮತದಾರರಿಗೆ ನೀಡುವ ಆಶ್ವಾಸನೆಗಳಿಗೂ ಅದರ ನಂತರದ ಅವರ ನಡವಳಿಕೆಗಳಿಗೂ ಸಂಬಂಧವೇ ಇಲ್ಲ.
ಕೇಜ್ರಿವಾಲ್ ಮತ್ತು ಸಂಗಡಿಗರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜಕಾರಣದ ಸಾರ ಮಾತ್ರವಲ್ಲ ಅದರ ವಿನ್ಯಾಸದ ಬದಲಾವಣೆ ಬಗ್ಗೆ ಬಾಯಿತುಂಬಾ ಮಾತನಾಡಿದ್ದಾರೆ, ನೀತಿ ಪಾಠವನ್ನು ಅಗತ್ಯಕ್ಕಿಂತ ಹೆಚ್ಚೇ ಮಾಡಿದ್ದಾರೆ. ಆ ಮಟ್ಟದ ಆದರ್ಶ ರಾಜಕಾರಣವನ್ನು ಮಾಡುವುದು ಪ್ರಾಯೋಗಿಕವಾಗಿ ಅಷ್ಟೊಂದು ಸುಲಭವೇ?
`ಆಮ್ ಆದ್ಮಿ ಪಕ್ಷ'ದ ಪಕ್ಷದ ಪ್ರಣಾಳಿಕೆ ರಚನೆಯಿಂದ ಹಿಡಿದು, ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ ಹೀಗೆ ಪ್ರತಿಯೊಂದು ಹೆಜ್ಜೆಯನ್ನೂ ರಾಜಕೀಯ ವಿರೋಧಿಗಳು ಮಾತ್ರವಲ್ಲ, ಮತದಾರರೂ ಗಮನಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರೆಲ್ಲ ಈಗ ರಾಜಕಾರಣಿಗಳು. ರಾಜಕೀಯ ಪಕ್ಷ ಕಟ್ಟುವ ನಿರ್ಧಾರವನ್ನು ಕೈಗೊಂಡ ಮರುಗಳಿಗೆಯಲ್ಲಿ ಒಬ್ಬ ಸಾಮಾಜಿಕ ಕಾರ್ಯಕರ್ತನಿಗೆ ಇದ್ದ ರಕ್ಷಣೆ ಮತ್ತು ಸಾರ್ವಜನಿಕ ಅನುಕಂಪವನ್ನು ಅವರು ಕಳೆದುಕೊಂಡು ಉಳಿದೆಲ್ಲ ರಾಜಕಾರಣಿಗಳ ಜತೆ ಬೀದಿಯಲ್ಲಿ ಬಂದು ನಿಂತಿದ್ದಾರೆ. ಯಾರೂ ಯಾವ ರಿಯಾಯಿತಿಯನ್ನೂ ಅವರಿಗೆ ಕೊಡುವುದಿಲ್ಲ.
ಈಗ ಅವರು ಸಹೋದ್ಯೋಗಿ ರಾಜಕಾರಣಿಗಳ ಜತೆಯಲ್ಲಿ ರಾಜಕಾರಣದಲ್ಲಿ ಸಾಮಾನ್ಯವಾಗಿರುವ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ತೊಡಗಬೇಕಾಗುತ್ತದೆ.
ನಮ್ಮೆಲ್ಲ ನೀತಿಗೆಟ್ಟ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಮೂಲವಾಗಿರುವ ದೋಷಪೂರ್ಣ ಚುನಾವಣಾ ವ್ಯವಸ್ಥೆಯಲ್ಲಿಯೇ ಕೇಜ್ರಿವಾಲ್ ಪಕ್ಷ ಪಾಲ್ಗೊಳ್ಳಲು ಹೊರಟಿದೆ. ಚುನಾವಣಾ ಸುಧಾರಣೆಗಳಾಗದೆ ನೀತಿ ಬದ್ಧ ರಾಜಕಾರಣ ಸಾಧ್ಯವೇ ಇಲ್ಲ ಎನ್ನುವಷ್ಟು ಭೀಕರವಾಗಿರುವ ವ್ಯವಸ್ಥೆಯಲ್ಲಿ ಬಹಳ ಬೇಗ ಕೇಜ್ರಿವಾಲ್ ತಂಡದ ಪ್ರಾಮಾಣಿಕತೆ ಮತ್ತು ನೈತಿಕನಿಷ್ಠೆ ಕರಗಿಹೋಗುವ ಅಪಾಯ ಇದೆ.
ಶುದ್ಧ 22 ಕ್ಯಾರೆಟ್‌ನಷ್ಟು ಪ್ರಾಮಾಣಿಕ ಮತ್ತು ಅರ್ಹ ಅಭ್ಯರ್ಥಿಗಳ ಆಯ್ಕೆ ಮಾಡಿಬಿಟ್ಟರೆ ಕೇಜ್ರಿವಾಲ್ ಪಕ್ಷ ಅರ್ಧ ಗೆದ್ದಂತೆ. ಜಾತಿ, ದುಡ್ಡು ಮತ್ತು ತೋಳ್ಬಲದ ಪ್ರಭಾವಕ್ಕೀಡಾಗಿರುವ ಇಂದಿನ ರಾಜಕಾರಣದಲ್ಲಿ ಇದು ಸಾಧ್ಯವೇ? ಕಾನೂನು ಪ್ರಕಾರ ನೂರು ಕೊಲೆಗಳನ್ನು ಮಾಡಿದ ಪಾತಕಿಗೆ ಸಂಬಂಧಿಸಿದ ಮೇಲ್ಮನವಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೆ ಆತ ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಅದೇ ರೀತಿ ಬೇನಾಮಿಯಾಗಿ ರಾಶಿರಾಶಿ ಕಪ್ಪುಹಣವನ್ನು ಹೊಂದಿದ್ದರೂ ವರಮಾನ ಇಲಾಖೆಗೆ ಸಲ್ಲಿಸಿರುವ ಲೆಕ್ಕ ಕಾನೂನು ಪ್ರಕಾರ ಸರಿ ಎಂದಾದರೆ ಆತನೂ ಸ್ಪರ್ಧೆಗೆ ಅರ್ಹ. ರಾಜಕೀಯ ಪಕ್ಷಗಳ ಈ ನಡವಳಿಕೆಯಲ್ಲಿ ಕಾನೂನು ಪ್ರಕಾರ ತಪ್ಪು ಹುಡುಕಲಾಗದೆ ಇದ್ದರೂ ಇದನ್ನು ನೈತಿಕವಾಗಿ ಸರಿ ಎಂದು ಹೇಳಲಾಗದು. ಕೇಜ್ರಿವಾಲ್ ಪಕ್ಷ ಕೂಡಾ ಈ ವ್ಯತ್ಯಾಸವನ್ನು ಹೀಗೆಯೇ ಗುರುತಿಸುತ್ತದೆಯೇ?
ಗೆಲ್ಲುವ ಅರ್ಹತೆಯೊಂದಿದ್ದರೆ ಕಾನೂನು ಪ್ರಕಾರ ಅಪರಾಧ ಅಲ್ಲದ ಆರೋಪಗಳು ಕ್ಷಮ್ಯ ಎಂದು ಹೇಳುತ್ತದೆಯೇ? ಚುನಾವಣಾ ಆಯೋಗ ಹೇರಿರುವ ಪ್ರಚಾರ ವೆಚ್ಚದ ಮಿತಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಹೋಗುತ್ತದೆಯೇ?
ಇಂತಹ ಅನೇಕ ಸವಾಲುಗಳು `ಆಮ್ ಆದ್ಮಿ ಪಾರ್ಟಿ' ಮುಂದೆ ಇವೆ. `ಕೇಜ್ರಿವಾಲ್ ಮೊದಲೇ ರಾಜಕೀಯದ ಗುಪ್ತ ಕಾರ್ಯಸೂಚಿ ಹೊಂದಿದ್ದರು. ಇದಕ್ಕಾಗಿಯೇ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು, ಅಣ್ಣಾಹಜಾರೆಯವರನ್ನು ಬಳಸಿಕೊಂಡರು..'ಇತ್ಯಾದಿ ಆರೋಪಗಳು ಕೂಡಾ ಇವೆ.
ತಂಡದ ಸದಸ್ಯರ ಮೈಗೆ ಅಂಟಿಕೊಂಡಿರುವ ಸಣ್ಣಪುಟ್ಟ ಕಳಂಕಗಳೂ ಇವೆ. ಇವುಗಳೆಲ್ಲದರ ಹೊರತಾಗಿಯೂ ದೇಶದ ಮತದಾರರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸಿದರೆ ಅದರಿಂದ ಖಂಡಿತ ದೇಶದಲ್ಲಿ ಹೊಸ ರಾಜಕೀಯದ ಶಕೆ ಪ್ರಾರಂಭವಾಗಲಿದೆ.
ಸಾಮಾನ್ಯವಾಗಿ ಮತದಾರರು ಅದರಲ್ಲಿಯೂ ನಗರವಾಸಿ ಮತ್ತು ಶಿಕ್ಷಿತರು ಚುನಾವಣಾ ಸಮಯದಲ್ಲಿ `ಒಳ್ಳೆಯ ಅಭ್ಯರ್ಥಿಗಳು ಎಲ್ಲಿದ್ದಾರೆ? ಕೆಟ್ಟವರು ಮತ್ತು ಅತಿಕೆಟ್ಟವರ ನಡುವೆಯೇ ಆಯ್ಕೆ ಮಾಡಬೇಕಾಗಿದೆಯಲ್ಲವೇ' ಎಂದು ವ್ಯವಸ್ಥೆಯನ್ನು ಹಳಿಯುತ್ತಾ ಅರ್ಹ ಅಭ್ಯರ್ಥಿಗಳೇನಾದರೂ ಕಣದಲ್ಲಿದ್ದರೆ ಅವರಿಗೆ ಮತಹಾಕಿಬಿಟ್ಟು ಗೆಲ್ಲಿಸಬಹುದಿತ್ತು ಎಂಬ ಆದರ್ಶದ ಮಾತುಗಳಿಂದ ಕಾಲಹರಣ ಮಾಡುತ್ತಾ ಬಂದಿದ್ದಾರೆ.
ಇಲ್ಲಿಯ ವರೆಗೆ ಇವರಾಡುವ ಮಾತುಗಳಲ್ಲಿನ ಪ್ರಾಮಾಣಿಕತೆಯನ್ನು ಪರೀಕ್ಷೆಗೊಡ್ಡುವ ಬಿಡಿಬಿಡಿ ಅವಕಾಶಗಳು ಅಲ್ಲಿ ಇಲ್ಲಿ ಕಾಣಿಸಿಕೊಂಡಿದ್ದರೂ ರಾಷ್ಟ್ರವ್ಯಾಪಿ ಪರ್ಯಾಯ ರಾಜಕೀಯದ ಅವಕಾಶ ಎಪ್ಪತರ ದಶಕದ ನಂತರ ಎದುರಾಗಿರಲಿಲ್ಲ. ಅಂತಹ ಮಾದರಿ ರಾಜಕೀಯ ಪಕ್ಷವನ್ನು ಕೇಜ್ರಿವಾಲ್ ತಂಡ ಮತದಾರರ ಮುಂದೆ ಕಟ್ಟಿ ನಿಲ್ಲಿಸಿದೆ.
ಈಗ ಈ ಪಕ್ಷವನ್ನು ಗೆಲ್ಲಿಸುವ ಹೊಣೆ ಅವರನ್ನು ಬೆಂಬಲಿಸುತ್ತಿದ್ದ, ಅವರ ಸಭೆಗಳಿಗೆ `ಸ್ವಯಂಪ್ರೇರಿತರಾಗಿ' ಲಕ್ಷಲಕ್ಷ ಸಂಖ್ಯೆಯಲ್ಲಿ ಸೇರುತ್ತಿದ್ದ `ಜಾಗೃತ, ಪ್ರಾಮಾಣಿಕ, ದೇಶಭಕ್ತ' ಜನತೆಯದ್ದು. ಇವರು `ಆಮ್ ಆದ್ಮಿ ಪಾರ್ಟಿ'ಯನ್ನು ಗೆಲ್ಲಿಸುತ್ತಾರಾ?

Monday, November 19, 2012

ಪತ್ರಕರ್ತ ಸಾಕ್ಷಿಯಾಗಬೇಕೆ, ರಕ್ಷಕನಾಗಬೇಕೆ? Nov 19 2012


ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಪರಾಧವನ್ನು ಅವನೇನು ಮಾಡಿರಲಿಲ್ಲ. ವೃತ್ತಿಯಲ್ಲಿ ಆತ ಒಬ್ಬ ಪತ್ರಿಕಾ ಛಾಯಾಗ್ರಾಹಕನಾಗಿದ್ದ. ಜಗತ್ತಿನ ಅತಿದೊಡ್ಡ ಪತ್ರಿಕೆಗಳು ಆತನ ಪೋಟೋಗಳನ್ನು ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದವು. ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

ಎಲ್ಲಕ್ಕಿಂತಲೂ ಮುಖ್ಯವಾಗಿ ಆತನ ವಯಸ್ಸು ಕೇವಲ ಮೂವತ್ತಮೂರು ಆಗಿತ್ತು. ಆ ವಯಸ್ಸಿಗೆ ಸಿಕ್ಕ ಯಶಸ್ಸು, ಮನ್ನಣೆಯನ್ನು ಗಮನಿಸಿದರೆ ವೃತ್ತಿಯಲ್ಲಿ ಆತನ ಭವಿಷ್ಯ ಉಜ್ವಲವಾಗಿತ್ತು ಎನ್ನುವುದಕ್ಕೆ ಅನುಮಾನವೇ ಇರಲಿಲ್ಲ. ಹೀಗಿದ್ದರೂ ಬದುಕುವ ಆಸೆಯನ್ನೇ ಕಳೆದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಆತನ ಹೆಸರು ಕೆವಿನ್ ಕಾರ್ಟರ್.
ಇಷ್ಟು ಹೇಳಿದರೆ ಬಹಳಷ್ಟು ಮಂದಿಗೆ ಗುರುತು ಹತ್ತಲಾರದು. ಆತ ಜಗತ್ತಿಗೆ ಪರಿಚಯವಾಗಿದ್ದೇ ಒಂದು ಫೋಟೊದ ಮೂಲಕ. ದಕ್ಷಿಣ ಆಫ್ರಿಕಾದವನಾಗಿದ್ದ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋಗಿದ್ದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ. ತಕ್ಷಣ ಆತನೊಳಗಿದ್ದ ಕಸಬುದಾರ ಛಾಯಾಗ್ರಾಹಕ ಜಾಗೃತನಾಗುತ್ತಾನೆ.
ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.
ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು  ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.
ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ~ ಮತ್ತು `ದಿ ಮೇಲ್ ಆ್ಯಂಡ್ ಗಾರ್ಡಿಯನ್~ ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರ  ಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.  ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಆದರೆ ಬಹಳಷ್ಟು ಓದುಗರು ನೋವು, ದುಃಖ, ಆಕ್ರೋಶಗಳಿಂದ ಪ್ರತಿಕ್ರಿಯಿಸಿದ್ದರು. ಕೆಲವರು ಛಾಯಾಗ್ರಾಹಕನ ಅಸಂವೇದನಾಶೀಲತೆಯನ್ನು ಟೀಕಿಸಿದ್ದರು. `..ಒಬ್ಬ ಛಾಯಾಗ್ರಾಹಕ ಕೇವಲ ಒಂದು ಫೋಟೊ ಸಂಪಾದನೆಯನ್ನಷ್ಟೇ ನೋಡದೆ, ಮೊದಲು ಹದ್ದನ್ನು ಅಲ್ಲಿಂದ ಓಡಿಸಿ ಮಗುವನ್ನು ರಕ್ಷಿಸಬೇಕಿತ್ತು. ವೃತ್ತಿ ಏನೇ ಇರಲಿ ಆತ ಮೊದಲು ಮನುಷ್ಯನಾಗಬೇಕು..~ ಎಂದೆಲ್ಲ ಜನ ಪ್ರತಿಕ್ರಿಯಿಸಿದ್ದರು.
ಕೆಲವು ಪತ್ರಿಕೆಗಳು ಕಾರ್ಟರ್ ಕೂಡಾ ಒಬ್ಬ ರಣಹದ್ದು ಎಂದು ಬಣ್ಣಿಸಿ `ಎರಡು ಹದ್ದುಗಳ ನಡುವೆ ಮಗು ಇತ್ತು~ ಎಂದು ಬರೆದಿದ್ದವು. ಕೊನೆಗೆ `ನೂಯಾರ್ಕ್ ಟೈಮ್ಸ~ನ ಸಂಪಾದಕರು ವಿವರಣೆ ಕೊಡಬೇಕಾಯಿತು.
ಸತ್ಯಸಂಗತಿ ಏನೆಂದರೆ ಫೋಟೊ ತೆಗೆದ ಕೂಡಲೇ ಕಾರ್ಟರ್ ಹದ್ದನ್ನು ಅಲ್ಲಿಂದ ಓಡಿಸಿ ಆ ಹೆಣ್ಣುಮಗುವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದ. ಅದರ ನಂತರ ಮಗುವಿನ ಗತಿಯೇನಾಯಿತು ಎನ್ನುವುದು ಆತನಿಗೂ ತಿಳಿದಿರಲಿಲ್ಲ. ಬರಗಾಲಪೀಡಿತ ಸೂಡಾನ್‌ನಲ್ಲಿ ಮುಕ್ತಪತ್ರಿಕಾ ಸ್ವಾತಂತ್ರ್ಯ ಇರಲಿಲ್ಲ.
ಅಲ್ಲಿದ್ದ ಬರಪೀಡಿತ ಮನುಷ್ಯರ ಫೋಟೊ ತೆಗೆಯುವುದು ಅಲ್ಲಿನ ಪ್ರಭುತ್ವಕ್ಕೆ ಇಷ್ಟದ ಕೆಲಸವೂ ಆಗಿರಲಿಲ್ಲ. ಬರಪೀಡಿತ ವ್ಯಕ್ತಿಗಳು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುವುದರಿಂದ ಅವರನ್ನು ಮುಟ್ಟುವುದಕ್ಕೆ ನಿರ್ಬಂಧ ಕೂಡಾ ಇತ್ತು. ಒಂದು ಫೋಟೊವನ್ನಷ್ಟೇ ನೋಡಿ ಕಾರ್ಟರ್ ಮನುಷ್ಯನೇ ಅಲ್ಲ ಎಂದು ತೀರ್ಮಾನಿಸಿದ ಅಮಾಯಕ ಜನರಿಗೆ ಈ ಎಲ್ಲ ವಿವರಗಳು ಗೊತ್ತಿರುವ ಸಾಧ್ಯತೆಗಳು ಕಡಿಮೆ. ಇದು ಎಲ್ಲ  ಕಾಲದ ಸತ್ಯ.
`ಆ ಬಾಲಕಿಯ ಫೋಟೊ ತೆಗೆದ ನಂತರ ಕಾರ್ಟರ್ ಮನಸ್ಸು ಕಲಕಿಹೋಗಿತ್ತು. ಆತ ಸಮೀಪದ ಮರವೊಂದರ ನೆರಳಲ್ಲಿ ಕೂತು ಸಿಗರೇಟ್ ಸೇದುತ್ತಾ ದೇವರ ಹತ್ತಿರ ಮಾತನಾಡಿದ್ದ. ಅವನು ಎಷ್ಟೊಂದು ದುಃಖಿತನಾಗಿದ್ದನೆಂದರೆ `ನನಗೆ ನನ್ನ ಮಗಳನ್ನು ಆಲಿಂಗಿಸಬೇಕೆನಿಸುತ್ತದೆ~ ಎಂದು ಬಡಬಡಿಸುತ್ತಿದ್ದ~ ಎಂದು ಆ ಸಮಯದಲ್ಲಿ ಕಾರ್ಟರ್ ಜತೆಯಲ್ಲಿದ್ದ ಸ್ನೇಹಿತ ಸಿಲ್ವಾ ನಂತರದ ದಿನಗಳಲ್ಲಿ ಬರೆದಿದ್ದ.
ಈ ವಿವಾದಗಳ ನಂತರವೂ ಆ ಚಿತ್ರಕ್ಕಾಗಿ ಕೆವಿನ್ ಕಾರ್ಟರ್  ಪ್ರತಿಷ್ಠಿತ `ಪುಲಿಟ್ಜರ್~ ಪ್ರಶಸ್ತಿ ಪಡೆಯುತ್ತಾನೆ. ರಾಯಿಟರ್ ಸುದ್ದಿ ಸಂಸ್ಥೆಯಲ್ಲಿ ಆಕರ್ಷಕ ಸಂಬಳದ ಉದ್ಯೋಗ ಪಡೆಯುತ್ತಾನೆ. ಆದರೆ ಆತ ಎಂದೂ ಸಂತೋಷವಾಗಿರಲಿಲ್ಲ.
ಕೆವಿನ್ ಕಾರ್ಟರ್‌ನ ಬದುಕನ್ನು ಸಾವು ಕೊನೆಗೊಳಿಸಿದರೂ, ಆ ಸಾವಿನಿಂದ ಹುಟ್ಟಿಕೊಂಡ ಅನೇಕ ಪ್ರಶ್ನೆಗಳು ಇಂದು ಕೂಡಾ ಮಾಧ್ಯಮಕ್ಷೇತ್ರದ ಮುಂದೆ ಇವೆ. `ಒಬ್ಬ ಪತ್ರಕರ್ತ ಸಾಕ್ಷಿಯಾಗಬೇಕೇ, ಇಲ್ಲವೇ ರಕ್ಷಕನಾಗಬೇಕೇ?~ ಎನ್ನುವುದು ಮೊದಲ ಪ್ರಶ್ನೆ. 
ಮಂಗಳೂರಿನ `ಸ್ಟೇಹೋಂ~ ಮೇಲೆ ದಾಳಿ ನಡೆಸಿ ಅಲ್ಲಿದ್ದ ಯುವಕ - ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ದುಷ್ಕರ್ಮಿಗಳ ಕೃತ್ಯವನ್ನು ವರದಿ ಮಾಡಿದ್ದ ಸುದ್ದಿವಾಹಿನಿಯ ವರದಿಗಾರ ನವೀನ್ ಸೂರಿಂಜೆಯ ಬಂಧನ ಕೆವಿನ್ ಕಾರ್ಟರ್ ಬಿಟ್ಟುಹೋಗಿರುವ ಪ್ರಶ್ನೆಗಳನ್ನು ಮತ್ತೆ ಕೇಳುವಂತೆ ಮಾಡಿದೆ.
ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕಾಛಾಯಾಗ್ರಾಹಕ ರಘು ರಾಯ್ ಇತ್ತೀಚಿನ ಇಂತಹ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುತ್ತಾ `ಶೂಟ್ ಮಾಡಿ ಚಿತ್ರ ಪಡೆಯುವುದು ಅದರ ಮೂಲಕ ಘಟನೆಗೆ ಸಾಕ್ಷ್ಯ ಒದಗಿಸುವುದು ಅಷ್ಟೇ ಒಬ್ಬ ಕ್ಯಾಮೆರಾಮೆನ್ ಕೆಲಸ~ ಎಂದಿದ್ದರು. ಎಲ್ಲರೂ ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ.
ಇದಕ್ಕೆ ರೋಚಕತೆಯ ಬೆನ್ನುಹತ್ತಿ ದಾರಿ ತಪ್ಪುತ್ತಿರುವ ಕೆಲವು ಸುದ್ದಿವಾಹಿನಿಗಳು ಮುಖ್ಯ ಕಾರಣ. `ಪತ್ರಿಕಾ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಇಂತಹ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕು~ ಎಂದು ಜನ ಬಹಿರಂಗವಾಗಿಯೇ ಮಾತನಾಡತೊಡಗಿದ್ದಾರೆ. ವೃತ್ತಿನಿಷ್ಠ ಮಾಧ್ಯಮಗಳನ್ನು ಎಂದೂ ಬಯಸದ ಪ್ರಭುತ್ವ, ಹಾದಿ ತಪ್ಪಿರುವ ಕೆಲವು ಸುದ್ದಿವಾಹಿನಿಗಳನ್ನು ಉಲ್ಲೇಖಿಸಿ ಒಟ್ಟು ಪತ್ರಿಕಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ.
ಅದು  ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರದಿಂದ ಕರ್ನಾಟಕದ ಬಿಜೆಪಿ ಸರ್ಕಾರದವರೆಗೆ ಎಲ್ಲೆಡೆ ವ್ಯವಸ್ಥಿತವಾಗಿ ಪ್ರಾರಂಭವಾಗಿದೆ. ಆದುದರಿಂದ `ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗ~ ಮತ್ತು `ಪತ್ರಿಕಾ ಸ್ವಾತಂತ್ರ್ಯದ ಹರಣ~ವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಚರ್ಚೆ ನಡೆಸಬೇಕಾಗಿದೆ. ಇವೆರಡನ್ನೂ ಸಾಮಾನ್ಯೀಕರಿಸುವುದರಿಂದ ಅಪಾಯ ಪತ್ರಕರ್ತರಿಗೆ ಮಾತ್ರ ಅಲ್ಲ, ಪ್ರಜಾಪ್ರಭುತ್ವಕ್ಕೂ ಇದೆ.
ಪತ್ರಕರ್ತರು, ಪತ್ರಿಕಾಛಾಯಾಗ್ರಾಹಕರು ಮತ್ತು ಕ್ಯಾಮೆರಾಮೆನ್‌ಗಳು `ಸಾಕ್ಷಿಗಳಾಗಬೇಕೆ, ರಕ್ಷಕರಾಗಬೇಕೆ?~ ಎನ್ನುವುದು ಇತ್ತೀಚಿನವರೆಗೆ ಕೇವಲ ನೈತಿಕ ಪ್ರಶ್ನೆಯಾಗಿತ್ತು. ಆದುದರಿಂದ ರಕ್ಷಕರಾಗದೆ ಸಾಕ್ಷಿಗಳಾಗಲಷ್ಟೇ ಹೊರಟವರನ್ನು ಪೊಲೀಸರು ಬಂಧಿಸುತ್ತಿರಲಿಲ್ಲ.
ಈಗಲೂ ಇದನ್ನು ನೈತಿಕ ಪ್ರಶ್ನೆಯಾಗಿಯೇ ಇಟ್ಟುಕೊಂಡು ಚರ್ಚೆ ನಡೆಯಲಿ, ನಡೆಯಲೇಬೇಕು. ಆದರೆ ಪೊಲೀಸರು ಈಗ ಇದನ್ನು ಕಾನೂನಿನ ಪ್ರಶ್ನೆಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. `ಪತ್ರಕರ್ತರಿಗೆ `ಸಾಕ್ಷಿದಾರನ ಕರ್ತವ್ಯ~ವಷ್ಟೇ ಮುಖ್ಯ ಅಲ್ಲ, ಆತನಿಗೆ `ರಕ್ಷಕನ ಜವಾಬ್ದಾರಿ~ಯೂ ಇರಬೇಕು, ಪತ್ರಕರ್ತನೊಬ್ಬ ರಕ್ಷಕನಾಗದೆ ಕೇವಲ ಸಾಕ್ಷಿಯಾದರೆ ಆತ ಅಪರಾಧಿ~ ಎಂದು ಪೊಲೀಸರು ಹೇಳುತ್ತಿದ್ದಾರೆ. 
ತನ್ನ ವರದಿ ಇಲ್ಲವೇ ಚಿತ್ರವನ್ನು ಸಾಕ್ಷಿಯಾಗಿ ಒದಗಿಸುವ ಮೂಲಕವೇ ಪತ್ರಕರ್ತ ರಕ್ಷಕನಾಗುತ್ತಾನೆ ಎಂಬುದನ್ನು ಪೊಲೀಸರು ಮರೆತಿದ್ದಾರೆ. ನವೀನ್ ಮತ್ತು ಗೆಳೆಯರು `ಹೋಂಸ್ಟೇ~ ದಾಳಿಯನ್ನು ಮಾಧ್ಯಮಗಳ ಮೂಲಕ ಬಯಲುಗೊಳಿಸದೆ ಇದ್ದಿದ್ದರೆ ಅಲ್ಲಿನ ಕೋಮುವಾದಿಗಳ ಅಟ್ಟಹಾಸ ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿತ ಬಯಲಾಗುತ್ತಿರಲಿಲ್ಲ. ಈ ದುಷ್ಕೃತ್ಯವನ್ನು ಸಾಕ್ಷಿಸಮೇತ ಬಯಲುಗೊಳಿಸುವ ಮೂಲಕ ನವೀನ್ ಮತ್ತು ಗೆಳೆಯರು ಮುಂದೆ ಇನ್ನಷ್ಟು ಯುವಕ-ಯುವತಿಯರು ಈ ರೀತಿಯ ದಾಳಿಗೊಳಗಾಗದಂತೆ ರಕ್ಷಿಸಿದ್ದಾರೆ.
`ಒಬ್ಬ ವೃತ್ತಿನಿಷ್ಠ, ಸಂವೇದನಾಶೀಲ ಮತ್ತು ಪ್ರಾಮಾಣಿಕನಾದ ಪತ್ರಕರ್ತ ಇಲ್ಲವೇ ಪತ್ರಿಕಾಛಾಯಾಗ್ರಾಹಕ ಯಾವ ದೇಶ ಇಲ್ಲವೇ ಕಾಲದಲ್ಲಿ  ಸಂತೋಷ-ನೆಮ್ಮದಿಯಿಂದ ಬದುಕಲು ಸಾಧ್ಯವೇ?~ ಎನ್ನುವ ಎರಡನೆ ಪ್ರಶ್ನೆಯನ್ನು ಕೂಡಾ ಕೆವಿನ್ ಕಾರ್ಟರ್ ಬಿಟ್ಟುಹೋಗಿದ್ದಾನೆ. ಆತನ ಆತ್ಮಹತ್ಯೆಗೆ ಸೂಡಾನ್ ಬಾಲಕಿಯ ಫೋಟೊವೊಂದೇ ಕಾರಣ ಅಲ್ಲ.

ವರ್ಣದ್ವೇಷ ಅದರ ಉತ್ತುಂಗದಲ್ಲಿರುವ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ವರ್ಗದ ಬಿಳಿಯರ ಕುಟುಂಬದಲ್ಲಿ ಹುಟ್ಟಿದ್ದ ಕಾರ್ಟರ್ ಬಾಲ್ಯದಿಂದಲೇ ಕಪ್ಪುಜನಾಂಗದವರ ಮೇಲೆ ಬಿಳಿಯರು ನಡೆಸುತ್ತಿದ್ದ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದವ. ಅವಕಾಶ ಸಿಕ್ಕಿದಾಗಲೆಲ್ಲ ಅದರ ವಿರುದ್ಧ ಪ್ರತಿಭಟನೆ ನಡೆಸಿದವ. `ದಿ ಬ್ಯಾಂಗ್ ಬ್ಯಾಂಗ್ ಕ್ಲಬ್~ ಎಂದು ಕರೆಯಲಾಗುತ್ತಿದ್ದ ನಾಲ್ಕು ಬಿಳಿಯ ಪತ್ರಿಕಾಛಾಯಾಗ್ರಾಹಕರ ಸಂಘಟನೆಯಲ್ಲಿ ಕಾರ್ಟರ್ ಒಬ್ಬನಾಗಿದ್ದ.
ದಕ್ಷಿಣ ಆಫ್ರಿಕಾದಲ್ಲಿ ಬಿಳಿಯ ದುಷ್ಕರ್ಮಿಗಳು ಕಪ್ಪುಜನಾಂಗಕ್ಕೆ ಸೇರಿದ ವ್ಯಕ್ತಿಗಳ ಕುತ್ತಿಗೆಗೆ ಟಯರ್‌ಗಳನ್ನು ತೂಗುಹಾಕಿ ಬೆಂಕಿಹಚ್ಚಿ ಸಾಯಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ `ನೆಕ್ಲೆಸಿಂಗ್~ ಎಂದು ಕರೆಯುತ್ತಿದ್ದರು. ಇಂತಹ ಮೊದಲ ಘಟನೆಯ ಚಿತ್ರ ತೆಗೆದು ಪತ್ರಿಕೆಯಲ್ಲಿ ಪ್ರಕಟಣೆಗೆ ಕೊಟ್ಟವ ಕಾರ್ಟರ್. ಈ ರೀತಿಯ ಹಲವಾರು ಅಮಾನುಷ ಘಟನೆಗಳ ಚಿತ್ರಗಳನ್ನು ಕಾರ್ಟರ್ ತೆಗೆದಿದ್ದ. ವೃತ್ತಿಜೀವನದಲ್ಲಿ ಎದುರಿಸಿದ ಇಂತಹ ಘಟನೆಗಳಿಂದ ಆತ ನೊಂದುಹೋಗಿದ್ದ.
 ಅಷ್ಟೊತ್ತಿಗೆ ಆತನ ಜೀವದ ಗೆಳೆಯ ಮತ್ತು `ದಿ ಬ್ಯಾಂಗ್‌ಬ್ಯಾಂಗ್ ಕ್ಲಬ್~ನ ಸದಸ್ಯ ಕೆನ್ ಊಸ್ಟರ್‌ಬ್ರೋಕ್ ಫೋಟೊ ತೆಗೆಯುತ್ತಿದ್ದಾಗಲೇ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಸಾವಿನ ಸಮಯದಲ್ಲಿ ಗೆಳೆಯನ ಸಮೀಪವೇ ಕಾರ್ಟರ್ ಇದ್ದ. ಆತನ ಮನೋಕ್ಲೇಶಕ್ಕೆ ಈ ಘಟನೆ ಕೂಡಾ ಕಾರಣ. ನಂತರದ ದಿನಗಳಲ್ಲಿ ಕುಡಿತದ ದಾಸನಾಗಿ ಹೋಗಿದ್ದ, ಮಾದಕ ವ್ಯಸನಿಯೂ ಆಗಿದ್ದ.
ಕೊನೆಕೊನೆಗೆ ತಾನು ತೆಗೆದ ಚಿತ್ರಗಳೆಲ್ಲವೂ ಎದ್ದುಬಂದು ಆತನನ್ನು ಕಾಡತೊಡಗಿ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದ್ದವು.  ಸಾಯುವ ಮೊದಲು ಬರೆದಿಟ್ಟಿದ ಪತ್ರ ಕೂಡಾ ಇದನ್ನೇ ಹೇಳುತ್ತಿದೆ:  `....ಹತ್ಯೆಗಳು... ಹೆಣಗಳು.. ಕೋಪ, ನೋವು... ಹಸಿವು ಮತ್ತು ಗಾಯದಿಂದ ನರಳುತ್ತಿರುವ ಮಕ್ಕಳು... ಹಿಂಸಾವಿನೋದಿ ಹುಚ್ಚು ಪೊಲೀಸರು... -ಈ ಎಲ್ಲ ನೆನಪುಗಳು ನನ್ನನ್ನು ಕಾಡುತ್ತಿವೆ. ನಾನು ನನ್ನ ಗೆಳೆಯ ಕೆನ್‌ನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ಆದೃಷ್ಟಶಾಲಿಯಾಗಿದ್ದರೆ ಆತನ ಭೇಟಿಯಾಗಬಹುದು....~ ಎಂದು ಕಾರ್ಟರ್ ಆ ಪತ್ರದಲ್ಲಿ ಬರೆದಿದ್ದ. 
 ಪತ್ರಕರ್ತರು ಸಂವೇದನಾಶೀಲರಾಗಿರಕೆಂದು ಸಮಾಜ ಬಯಸುತ್ತದೆ, ಸರ್ಕಾರವೂ ಅದನ್ನೇ ಹೇಳುತ್ತಿದೆ. ಆದರೆ ರಾಕ್ಷಸ ರೂಪ ಪಡೆಯುತ್ತಿರುವ ಸರ್ಕಾರ ಮತ್ತು ಸಂವೇದನೆಯನ್ನೇ ಕಳೆದುಕೊಳ್ಳುತ್ತಿರುವ ಸಮಾಜದ ಮಧ್ಯೆ ಪತ್ರಕರ್ತ ಸಂವೇದನಾಶೀಲನಾಗಿ ಉಳಿಯಲು ಹೇಗೆ ಸಾಧ್ಯ? ಬಹಳಷ್ಟು ಸಂದರ್ಭಗಳಲ್ಲಿ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಹೊರಟ ಪತ್ರಕರ್ತ ಹತಾಶನಾಗುತ್ತಾನೆ, ಸಿನಿಕನಾಗುತ್ತಾನೆ, ದುರ್ಬಲ ಮನಸ್ಸಿನವನಾಗಿದ್ದರೆ ಕೊನೆಗೆ ಕೆವಿನ್ ಕಾರ್ಟರ್‌ನಂತೆ ಆತ್ಮಹತ್ಯೆ ಮಾಡಿಕೊಳ್ಳಬಹುದು.
ಮತ್ತೆ ಮೊದಲಿನ ಪ್ರಶ್ನೆಗೆ ಬರುವುದಾದರೆ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಅಪರಾಧ ಮಾಡಿದ್ದ? ಇದನ್ನೇ ಇನ್ನು ಸ್ವಲ್ಪ ಬದಲಾಯಿಸಿ ಕೇಳುವುದಾದರೆ ನವೀನ್ ಸೂರಿಂಜೆ ಎಂಬ ಪತ್ರಕರ್ತ ಬಂಧನಕ್ಕೊಳಗಾಗುವಂತಹ ಯಾವ ಅಪರಾಧ ಮಾಡಿದ್ದ? ಅಪರಾಧ ಮಾಡದೆ ಇದ್ದಿದ್ದರೆ ಬಂಧಿತ ಪತ್ರಕರ್ತನ ವೃದ್ದ ತಂದೆ-ತಾಯಿಯ ನೋವು ನಮ್ಮದು ಕೂಡಾ ಎಂದು ಸಮಾಜಕ್ಕೆ ಯಾಕೆ ಅನಿಸುವುದಿಲ್ಲ?

Monday, November 12, 2012

ಬಂಗಾರಪ್ಪನವರ ಹಾದಿಯಲ್ಲಿ ಯಡಿಯೂರಪ್ಪ Nov 12 2012


ಸಾರೆಕೊಪ್ಪ ಬಂಗಾರಪ್ಪ ಮತ್ತು ಬೂಕನಕೆರೆ ಯಡಿಯೂರಪ್ಪನವರ ನಡುವೆ ಶಿವಮೊಗ್ಗ ಎನ್ನುವ ರಾಜಕೀಯ ಕರ್ಮಭೂಮಿಯ ಸಾಮ್ಯತೆ ಒಂದೇ ಅಲ್ಲ, ಇನ್ನೂ ಹಲವು ಇವೆ.
ರಾಜಕೀಯ ಮಹತ್ವಾಕಾಂಕ್ಷೆ, ನೇರಮಾತು, ಮುಂಗೋಪ, ಅತ್ಯುಗ್ರ ಸ್ವಾಭಿಮಾನ, ಬಂಡುಕೋರ ಮನಸ್ಸು, ನಂಬಿದವರನ್ನು ಕಷ್ಟಕಾಲದಲ್ಲಿಯೂ ಕೈಬಿಡದ ಸ್ನೇಹನಿಷ್ಠೆ  ಮತ್ತು ಭ್ರಷ್ಟಾಚಾರ ಎಂಬುದು ರಾಜಕೀಯ ಕ್ಷೇತ್ರದ ಅನಿವಾರ್ಯ ಕರ್ಮ ಎಂದು ಭಾವಿಸುವ ಅಸೂಕ್ಷ್ಮತೆಯಂತಹ ಗುಣಗಳು ಶಿವಮೊಗ್ಗ ಜಿಲ್ಲೆಯ ಇವರಿಬ್ಬರ ವ್ಯಕ್ತಿತ್ವದಲ್ಲಿ ಕಾಣಬಹುದು.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಗಳಿಸಿರುವ ಗರಿಷ್ಠ ಯಶಸ್ಸಿನ ದಾಖಲೆ (ಶೇಕಡಾ ಏಳೂವರೆಯಷ್ಟು ಮತ ಮತ್ತು ಹತ್ತು ಶಾಸಕರು) ಎಸ್.ಬಂಗಾರಪ್ಪನವರ ಹೆಸರಲ್ಲಿದೆ. ಯಡಿಯೂರಪ್ಪನವರು ಈ ದಾಖಲೆಯನ್ನು ಮುರಿಯಬಹುದೇ?
ಯಡಿಯೂರಪ್ಪನವರಿಗೆ ಇನ್ನೂ ಬಿಜೆಪಿಯನ್ನು ಬಿಟ್ಟುಹೋಗುವ ಮನಸ್ಸಿಲ್ಲ, ಪಕ್ಷಕ್ಕೂ ಪ್ರೀತಿಗಿಂತ ಹೆಚ್ಚಾಗಿ ಭಯದಿಂದ ಅವರನ್ನು ಉಳಿಸಿಕೊಳ್ಳಬೇಕೆಂಬ ಆಸೆ ಇದೆ. ಎರಡೂ ಪಾಳಯಗಳಲ್ಲಿ ಈ ತಳಮಳ ಮುಂದುವರಿದಿದೆ.

ಪಕ್ಷ ಸ್ಥಾಪಿಸಿ ಪದಾಧಿಕಾರಿಗಳ ನೇಮಕ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯಿತೆಂದು ಹೇಳಲಾಗುವುದಿಲ್ಲ. ಯಡಿಯೂರಪ್ಪನವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವರೆಗೆ ಯಾವುದೂ ಅಂತಿಮ ಅಲ್ಲ, ಅದರ ನಂತರವೂ ಅಲ್ಲ. ಭಯಗ್ರಸ್ತ ಬಿಜೆಪಿ ಯಡಿಯೂರಪ್ಪನವರ ಷರತ್ತುಗಳನ್ನು ಒಪ್ಪಿಬಿಟ್ಟರೆ ಅವರು ಹೊಸ ಪಕ್ಷವನ್ನೇ ಬಿಜೆಪಿಯಲ್ಲಿ ವಿಲೀನಗೊಳಿಸಲೂಬಹುದು.

ಈಗಾಗಲೇ ಅವರು ರಾಜ್ಯ ಸರ್ಕಾರವನ್ನು `ಮೈತ್ರಿ ಸರ್ಕಾರ~ ಎಂದಿದ್ದಾರೆ. ಆದುದರಿಂದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವರೆಗೆ ಯಡಿಯೂರಪ್ಪನವರ ಬಂಡಾಯದ ಬಗ್ಗೆ ಕೊನೆಯ ಮಾತನ್ನು ಬರೆಯಲಾಗದು.
ಉಭಯ ಬಣಗಳ ಪ್ರಯತ್ನಗಳೆಲ್ಲವೂ ವಿಫಲಗೊಂಡು ಕೊನೆಗೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮೂಲಕ ಚುನಾವಣೆಯನ್ನು ಎದುರಿಸಿದರೆ ಏನಾಗಬಹುದು? ಮೊದಲನೆಯದಾಗಿ ಬಿಜೆಪಿ ಜತೆ ಸಂಬಂಧ ಕಡಿದುಕೊಂಡಾಕ್ಷಣ ಈ ವರೆಗೆ `ಕಮ್ಯುನಲ್~ ಆಗಿದ್ದ ಯಡಿಯೂರಪ್ಪನವರು  `ಸೆಕ್ಯುಲರ್~ ಆಗಿಬಿಡುತ್ತಾರೆ. 
ತಮಾಷೆಯಂತೆ ಕಂಡರೂ ಇದು ದೇಶದ ರಾಜಕೀಯ ವಾಸ್ತವ. ಗುಜರಾತ್‌ನ ಶಂಕರ್‌ಸಿಂಗ್ ವಘೇಲಾ ಅವರಿಂದ ಹಿಡಿದು ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ವರೆಗೆ ರಾಷ್ಟ್ರರಾಜಕಾರಣದಲ್ಲಿ ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ,  ಇದರ ಲಾಭ ಖಂಡಿತ ಅವರಿಗೆ ಸಿಗಲಿದೆ.
`ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪನವರ ಕೈಬಲಪಡಿಸಬೇಕಾಗುತ್ತದೆ~ ಎಂದು ಈಗಾಗಲೇ ನಮ್ಮ ಅನೇಕ ಜಾತ್ಯತೀತ ಚಿಂತಕರು ಖಾಸಗಿಯಾಗಿ ಹೇಳುತ್ತಿರುವ ಮಾತುಗಳು ಬಹಿರಂಗವಾಗಿ ಕೇಳಿಬರಬಹುದು. ಕಳೆದ 40 ವರ್ಷಗಳಿಂದ ಸಂಘ ಪರಿವಾರದ ಜತೆ ಸಂಬಂಧ ಹೊಂದಿದ್ದರೂ ಯಡಿಯೂರಪ್ಪನವರಿಗೆ ಕೋಮುವಾದಿ ಎಂಬ ಕಳಂಕ ಇಲ್ಲ. 
ಬಿಜೆಪಿಯನ್ನು `ರಾಮನಾಮ~ದ ಮೂಲಕ ಕಟ್ಟಲು ರಾಷ್ಟ್ರನಾಯಕರು ಪ್ರಯತ್ನಿಸುತ್ತಿದ್ದಾಗ ರಾಜ್ಯದಲ್ಲಿ ರೈತಪರ ಹೋರಾಟದ ಮೂಲಕ ಪಕ್ಷವನ್ನು ಬೆಳೆಸಿದವರು ಯಡಿಯೂರಪ್ಪ. ಆದುದರಿಂದ  ಈ `ರೂಪಾಂತರ~ ಅವರಿಗೆ ಕಷ್ಟ ಅಲ್ಲ.
ಎರಡನೆಯದಾಗಿ ಜಾತಿ ಬಲ. ಮುಖ್ಯಮಂತ್ರಿಯಾಗುವ ವರೆಗಿನ ತನ್ನ ರಾಜಕೀಯ ಜೀವನದಲ್ಲಿ ಯಡಿಯೂರಪ್ಪ ಕಟ್ಟಾಜಾತಿವಾದಿಯಂತೆ ನಡೆದುಕೊಂಡಿರಲಿಲ್ಲ. ಅಂತಹ ಆರೋಪ ಅವರ ರಾಜಕೀಯ ವಿರೋಧಿಗಳು ಕೂಡಾ ಮಾಡಿದ್ದು ಕಡಿಮೆ.
ಆದರೆ ಮುಖ್ಯಮಂತ್ರಿಯಾದ ನಂತರ ಬಹಿರಂಗವಾಗಿ ಲಿಂಗಾಯತ ಮಠಗಳ ಜತೆ ಗುರುತಿಸಿಕೊಂಡ ರೀತಿ, ಬಜೆಟ್‌ನಲ್ಲಿ ನೀಡಿದ `ಉಡುಗೊರೆ~ಗಳು ಮತ್ತು  ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾಗಲೂ ಲಿಂಗಾಯತ ಸ್ವಾಮಿಗಳು ಅವರನ್ನು ಸಮರ್ಥಿಸಿಕೊಂಡ ವರ್ತನೆ ಎಲ್ಲವೂ ಸೇರಿ ಯಡಿಯೂರಪ್ಪನವರಿಗೆ ಜಾತಿವಾದಿ ಎಂಬ ಹಣೆಪಟ್ಟಿ ತಂದುಕೊಟ್ಟಿತು.
ಜಾತಿಯನ್ನು ಅವರು ಖಂಡಿತ ರಾಜಕೀಯವಾಗಿ ಬಳಸಿಕೊಂಡಿದ್ದಾರೆ, ಜಾತಿ ಬೆಂಕಿ ಇದ್ದಹಾಗೆ, ಆರಿಸಲು ಹೋದಾಗಲೂ ಕೈಗೆ ತಗಲಿಬಿಡುತ್ತದೆ. ಅಂತಹದ್ದರಲ್ಲಿ ಅದೇ `ಜಾತಿ ಬೆಂಕಿ~ಯ ಜತೆ ಆಟವಾಡಲು ಹೋದ ಯಡಿಯೂರಪ್ಪನವರು ಜಾತಿವಾದಿ ಎಂಬ ಆರೋಪ ಹೊತ್ತಿರುವುದು ಸಹಜವೇ ಆಗಿದೆ.
ಹಿಂದೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಧನಂಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಹಿಂದುಳಿದ ಜಾತಿಗೆ ಸೇರಿರುವ ಎಂ.ಡಿ.ಲಕ್ಷ್ಮಿನಾರಾಯಣ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ಮೂಲಕ ಹೊಸ ಪಕ್ಷಕ್ಕೆ ಜಾತ್ಯತೀತ ಸ್ವರೂಪವನ್ನು ನೀಡಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ.
ಇದರಿಂದ ಲಿಂಗಾಯತರ ಬೆಂಬಲ ಕಡಿಮೆಯಾಗಲಾರದು ಎಂದು ಅವರಿಗೆ ಗೊತ್ತು. ನಿಜವಾದ ಜಾತಿನಾಯಕನಲ್ಲಿ ಸ್ವಜಾತಿ ಮತದಾರರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿ ಇರುತ್ತದೆ. ಸದ್ಯ ದೇಶದ ರಾಜಕಾರಣದಲ್ಲಿ ಅಂತಹ ಶಕ್ತಿ ಹೊಂದಿರುವವರು ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ. 
ಬ್ರಾಹ್ಮಣ ಅಭ್ಯರ್ಥಿಗೂ ದಲಿತರ ಮತಗಳನ್ನು ವರ್ಗಾವಣೆ ಮಾಡುವ ಶಕ್ತಿಯೇ ಮಾಯಾವತಿಯವರ ಈ ಯಶಸ್ಸಿಗೆ ಕಾರಣ. ಯಡಿಯೂರಪ್ಪನವರ ಬಗ್ಗೆ ಲಿಂಗಾಯತರಲ್ಲಿರುವ ಕುರುಡು ಅಭಿಮಾನ ನೋಡಿದರೆ ಅವರೂ ಇಂತಹ ಶಕ್ತಿ ಹೊಂದಿರುವಂತೆ ಕಾಣುತ್ತಿದೆ.
ಮೂರನೆಯ ಅನುಕೂಲತೆ ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸುವ ಸ್ವಾತಂತ್ರ್ಯ. ಹಲವು ರಾಜ್ಯಗಳಲ್ಲಿ ಪಕ್ಷದ ಸಂಘಟನೆಗಳನ್ನು ಹೊಂದಿರುವ ರಾಷ್ಟ್ರೀಯ ಪಕ್ಷಗಳು ರಾಜ್ಯ-ರಾಜ್ಯಗಳ ನಡುವಿನ ನೆಲ-ಜಲ-ಗಡಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿಟ್ಟನಿಲುವನ್ನು ಕೈಗೊಳ್ಳುವುದು ಸಾಧ್ಯ ಇಲ್ಲ.

ಮೈತ್ರಿರಾಜಕಾರಣದ ಯುಗದಲ್ಲಿ ಇದು ಇನ್ನೂ ಕಷ್ಟ. ಆದರೆ ಪ್ರಾದೇಶಿಕ ಪಕ್ಷಕ್ಕೆ ಈ ಸಮಸ್ಯೆ ಇಲ್ಲ, ಅದು ಸ್ವತಂತ್ರ ನಿಲುವನ್ನು ಕೈಗೊಳ್ಳಬಹುದು. ಇತ್ತೀಚಿನ ಕಾವೇರಿ ವಿವಾದದಲ್ಲಿ ಎಚ್.ಡಿ.ದೇವೇಗೌಡರು ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಉಪಾಯದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದಕ್ಕೆ ಉದಾಹರಣೆ.
ಪ್ರಾದೇಶಿಕ ಪಕ್ಷಗಳ ರಾಜಕಾರಣ ಇರುವ ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದ ಚೌಕಾಸಿ ರಾಜಕಾರಣ ದುರ್ಬಲ ಎಂದು ಅನಿಸಿಕೊಳ್ಳಲು  ರಾಷ್ಟ್ರೀಯ ಪಕ್ಷಗಳ ಬಗ್ಗೆ ಕರ್ನಾಟಕದ ಜನರ ಒಲವೇ ಕಾರಣ ಎನ್ನುವ ಅಭಿಪ್ರಾಯ ಇದೆ. ಇಂತಹ ಹೊತ್ತಿನಲ್ಲಿಯೇ ಯಡಿಯೂರಪ್ಪನವರ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಿದೆ.
ನಾಲ್ಕನೆಯದಾಗಿ, ಬಿಜೆಪಿಯಿಂದ ನಿರ್ಗಮಿಸುವ ಮೂಲಕ ಆಡಳಿತಾರೂಡ ಪಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅದು ಎದುರಿಸಲಿರುವ ಆಡಳಿತವಿರೋಧಿ ಅಲೆಯಿಂದಲೂ ಯಡಿಯೂರಪ್ಪನವರು ಸ್ಪಲ್ಪಮಟ್ಟಿಗೆ ಮುಕ್ತರಾಗಲಿದ್ದಾರೆ.  `ನಾನು ಮಂಡಿಸಿದ ಬಜೆಟ್‌ನ ಆಶಯಗಳು ಈಡೇರಿಲ್ಲ, ನನ್ನ ಕಾರ್ಯಕ್ರಮಗಳನ್ನು ನಂತರ ಬಂದವರು ಹಾಳು ಮಾಡಿದ್ದಾರೆ~ ಎಂಬ ಆರೋಪಗಳನ್ನು ಅವರು ಈಗಾಗಲೇ ಮಾಡುತ್ತಿದ್ದಾರೆ. ಜನ ಇದನ್ನು ನೂರಕ್ಕೆ ನೂರರಷ್ಟು ನಂಬಲಾರರು. ಆದರೆ ಇಂತಹ ಆರೋಪಗಳನ್ನು ಮಾಡುವ ಸ್ವಾತಂತ್ರ್ಯ ಅವರಿಗೆ ಹೊಸ ಪಕ್ಷದಿಂದ ಸಿಗಲಿದೆ.
ಕೊನೆಯದಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತುಕೂಡಾ ಪ್ರಾದೇಶಿಕ ಪಕ್ಷದಲ್ಲಿ ನಿಶ್ಚಿಂತೆಯಿಂದ ನಾಯಕರಾಗಿ ಮುಂದುವರಿಯಲು ಯಡಿಯೂರಪ್ಪನವರಿಗೆ ಸಾಧ್ಯ. ಇದು ರಾಷ್ಟ್ರೀಯ ಪಕ್ಷಗಳಲ್ಲಿ ಕಷ್ಟ. ಈ ಕಾರಣದಿಂದಾಗಿಯೇ ಅಲ್ಲವೇ, ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳುವಂತಾಗಿದ್ದು?
ಅಶೋಕ್ ಚವಾಣ್, ಸುರೇಶ್ ಕಲ್ಮಾಡಿ ಮೊದಲಾದವರು ಅಧಿಕಾರ ಕಳೆದುಕೊಂಡದ್ದು ಕೂಡಾ ಇದೇ ಕಾರಣದಿಂದಾಗಿ. ಯಡಿಯೂರಪ್ಪನವರ ಮೇಲಿನ ಆರೋಪಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಅದು ಯಾವ ದಾರಿ ಹಿಡಿಯಲಿದೆಯೋ ಗೊತ್ತಿಲ್ಲ. ಇದರ ಹೊರತಾಗಿಯೂ ಒಂದೊಮ್ಮೆ ಅವರು ಚುನಾವಣೆಯ ನಂತರ ಅಧಿಕಾರಕ್ಕೆ ಬರುವಂತಹ ಸಂದರ್ಭ ಕೂಡಿಬಂದರೆ ಅವರ ಮೇಲಿನ ಭ್ರಷ್ಟಾಚಾರದ ಕಳಂಕ ಅದಕ್ಕೆ ಅಡ್ಡಿಯಾಗುವುದಿಲ್ಲ.
ಲಾಲುಪ್ರಸಾದ್ ತನ್ನ ಪತ್ನಿಯನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಜೈಲಿಗೆ ಹೋಗಿ ಬರಲಿಲ್ಲವೇ? ಮಾಯಾವತಿ, ಜಯಲಲಿತಾ ಮೊದಲಾದವರು ಆರೋಪಗಳ ವಿಚಾರಣೆ ನಡೆಯುತ್ತಿರುವಾಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲಿಲ್ಲವೇ?
ಇಷ್ಟೆಲ್ಲ ಅನುಕೂಲತೆಗಳಿದ್ದರೂ ಅಂತಿಮವಾಗಿ ಯಡಿಯೂರಪ್ಪನವರು ಬಯಸಿದ್ದು ಸಿಗಬಹುದೇ? ಇದು ಕಷ್ಟ.
ಮೊದಲನೆಯದಾಗಿ ಹೊಸ ಪಕ್ಷಕ್ಕೆ ಎಷ್ಟೇ ಅನುಕೂಲತೆಗಳಿದ್ದರೂ ಕೂಡಾ ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತವನ್ನಾಗಲಿ, ಇಲ್ಲವೆ ಅತ್ಯಧಿಕ ಸ್ಥಾನಗಳನ್ನು ಗಳಿಸುವುದಾಗಲಿ ಸಾಧ್ಯವೇ ಇಲ್ಲ. ರಾಜಕೀಯವನ್ನೇ ಉಸಿರಾಡುತ್ತಾ ಬಂದ ಯಡಿಯೂರಪ್ಪನವರಿಗೂ ಇದು ತಿಳಿದಿರಬಹುದು.
ಈ ರೀತಿಯ ಬಂಡುಕೋರ ಪಕ್ಷಗಳು ಮಾತೃಪಕ್ಷವನ್ನು ಸುಲಭದಲ್ಲಿ ಸೋಲಿಸಬಹುದು, ಆದರೆ ತಾನು ಗೆಲ್ಲಲಾಗುವುದಿಲ್ಲ. ಮತ್ತೆ ಬಂಗಾರಪ್ಪನವರ ರಾಜಕಾರಣವನ್ನೇ ಉಲ್ಲೇಖಿಸುವುದಾದರೆ ಅವರ `ಕರ್ನಾಟಕ ಕಾಂಗ್ರೆಸ್ ಪಕ್ಷ~ದಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅವರು ಅಧಿಕಾರಕ್ಕೆ ಬರಲಾಗಲಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕಾಗಿಯೇ ಇಷ್ಟೆಲ್ಲ ಬಡಿದಾಡಿ ಕೊನೆಗೆ ಅದೇ ಸಿಗದೆ ಹೋದರೆ ಹೊಸ ಪಕ್ಷ ರಚಿಸಿ ಏನು ಫಲ ಎಂಬ ಪ್ರಶ್ನೆ ಇಂದಲ್ಲ ನಾಳೆ ಯಡಿಯೂರಪ್ಪನವರಲ್ಲಿ ಹುಟ್ಟಿಕೊಳ್ಳಬಹುದು. ಬಿಜೆಪಿಯಲ್ಲಿಯೇ ಉಳಿದುಬಿಟ್ಟರೆ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಹೆಚ್ಚಿದೆ, ಅದು ಹೊಸ ಪಕ್ಷದಲ್ಲಿ ಖಂಡಿತ ಅವರಿಗೆ ಇಲ್ಲ.
ಎರಡನೆಯದಾಗಿ ಯಡಿಯೂರಪ್ಪನವರು ಬಿಜೆಪಿಯಲ್ಲಿರುವ ವರೆಗೆ ನಿಷ್ಠೆ ತೋರಿಸುತ್ತಿರುವ ಬೆಂಬಲಿಗರಲ್ಲಿ ಹೆಚ್ಚಿನವರು ಹೊಸ ಪಕ್ಷ ಸೇರುವುದು ಕಷ್ಟ. ಇದರ ಸುಳಿವನ್ನರಿತಿರುವ ಯಡಿಯೂರಪ್ಪನವರು `ತಳಮಟ್ಟದಿಂದಲೇ ಪಕ್ಷವನ್ನು ಕಟ್ಟುತ್ತೇನೆ, ನಾಯಕರನ್ನು ತಯಾರು ಮಾಡುತ್ತೇನೆ~ ಎಂದು ಹೇಳುತ್ತಿದ್ದರೂ ಅದು ಸುಲಭದ ಮಾತಲ್ಲ.
ಅಷ್ಟೊಂದು ಕಾಲಾವಕಾಶವೂ ಅವರಿಗಿಲ್ಲ. ಒಂದಷ್ಟು ನಾಯಕರು ಯಡಿಯೂರಪ್ಪನವರ ಜತೆಯಲ್ಲಿ ಉಳಿದು ಚುನಾವಣೆಯಲ್ಲಿ ಗೆದ್ದರೂ, ಅವರೆಲ್ಲ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಬಂಗಾರಪ್ಪನವರ ಪಕ್ಷದಿಂದ ಹತ್ತುಮಂದಿ ಆಯ್ಕೆಯಾದರೂ ಕೊನೆಗೆ ಅವರೂ ಸೇರಿದಂತೆ ಉಳಿದವರು ಇಬ್ಬರು ಮಾತ್ರ. 
ಸದಸ್ಯಬಲ ಸಂಖ್ಯೆ ಕಡಿಮೆ ಇದ್ದಾಗ ಪಕ್ಷವನ್ನು ಒಡೆಯುವುದು ಸುಲಭ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಬಹುಮತ ಬರುವ ಸಾಧ್ಯತೆ ಈ ಕ್ಷಣದಲ್ಲಿ ಕಾಣುವುದಿಲ್ಲವಾದ ಕಾರಣ ಚುನಾವಣೋತ್ತರ ಧ್ರುವೀಕರಣಗಳು ಅನಿವಾರ್ಯವಾಗಿ ನಡೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಂಗಾರಪ್ಪನವರಂತೆ ಯಡಿಯೂರಪ್ಪನವರೂ ಕೊನೆಗೆ ಒಂಟಿಯಾಗಿ ಉಳಿದುಬಿಡಬಹುದು.
ಮೂರನೆಯದಾಗಿ ಲೆಕ್ಕಾಚಾರ ತಪ್ಪಿದರೆ ರಾಜಕೀಯವಾಗಿ ಜಾತಿ ಎಷ್ಟು ಲಾಭ ತಂದುಕೊಡುತ್ತೋ, ಅಷ್ಟೇ ನಷ್ಟವನ್ನುಂಟು ಮಾಡುತ್ತದೆ. ಯಡಿಯೂರಪ್ಪನವರು ನಂಬಿಕೊಂಡಿರುವುದು ಲಿಂಗಾಯತ ಜಾತಿಯನ್ನು.
ಕಳೆದ ನಾಲ್ಕುವರೆ ವರ್ಷಗಳ ರಾಜ್ಯದ ರಾಜಕಾರಣದಲ್ಲಿ ಈ ಜಾತಿಯ ಪ್ರಭಾವವನ್ನು ಯಾರೂ ನಿರಾಕರಿಸಲಾರರು. ಮುಖ್ಯಮಂತ್ರಿ ಮತ್ತು ಸಚಿವರ ಆಯ್ಕೆಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ವರೆಗೆ ಜಾತಿ ಪ್ರಧಾನ ಪಾತ್ರ ವಹಿಸಿದೆ. ಇದು ಒಕ್ಕಲಿಗ, ಬ್ರಾಹಣ ಮೊದಲಾದ ಇತರ ಮೇಲ್ಜಾತಿಗಳಲ್ಲಿ ಅಸೂಯೆ ಮತ್ತು ಆಕ್ರೋಶವನ್ನು ಮತ್ತು ಕೆಳಜಾತಿಗಳಲ್ಲಿ ಅಭದ್ರತೆಯನ್ನು ಹುಟ್ಟಿಸಿದೆ. ಈ ಎರಡೂ ಗುಂಪುಗಳು ತಮ್ಮ ಒಟ್ಟು ಮತಗಳಿಂದ ಲಿಂಗಾಯತ ಅಭ್ಯರ್ಥಿಗಳು ಸೋಲುವ ಸಾಧ್ಯತೆ ಇದ್ದ ಕಡೆ ಒಟ್ಟಾಗಲೂ ಬಹುದು.
ಇದೇ ವೇಳೆ ಬಿಜೆಪಿ ಈಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ, `ಬಿಜೆಪಿ ಲಿಂಗಾಯತರಿಗೆ ಅನ್ಯಾಯಮಾಡಿದೆ~ ಎಂಬ ಯಡಿಯೂರಪ್ಪನವರ ಆರೋಪ ಮೊನಚುಕಳೆದುಕೊಳ್ಳಬಹುದು. ಈ ಭಯದಿಂದಲ್ಲವೇ, `ಶೆಟ್ಟರ್ ಸರ್ಕಾರವನ್ನು ಉರುಳಿಸುವುದಿಲ್ಲ~ ಎಂದು ಯಡಿಯೂರಪ್ಪ ಹೇಳುತ್ತಿರುವುದು?
ನಾಲ್ಕನೆಯದಾಗಿ ವೈಯಕ್ತಿಕವಾಗಿ ಅನ್ಯಾಯಕ್ಕೀಡಾಗಿದ್ದೇನೆ ಎಂದು ಹೇಳಿಕೊಂಡು ಪ್ರಾದೇಶಿಕ ಪಕ್ಷ ಕಟ್ಟಿದವರು ಯಶಸ್ಸು ಕಂಡದ್ದು ಕಡಿಮೆ.  ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಿಗೆ ದ್ರಾವಿಡ ಚಳವಳಿ ಪ್ರೇರಣೆ, `ಕಾಂಗ್ರೆಸ್ ಪಕ್ಷ ತೆಲುಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿದೆ~ ಎಂಬ ಪ್ರಚಾರದ ಬಲದಿಂದಲೇ ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದು.
ದಲಿತರಿಗೆ ಅನ್ಯಾಯವಾಗಿದೆ ಎಂದು ಹೇಳಿಯೇ ಕಾನ್ಶಿರಾಮ್ ಮತ್ತು ಮಾಯಾವತಿ ಬಿಎಸ್‌ಪಿ ಕಟ್ಟಿದ್ದು. ಇವೆಲ್ಲ ಯಶಸ್ಸಿನ ಮಾದರಿಗಳು. ಕರ್ನಾಟಕದಲ್ಲಿರುವುದು  ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಗುಂಡೂರಾವ್, ಮತ್ತು ಎಸ್.ಬಂಗಾರಪ್ಪ ಮೊದಲಾದವರ ವೈಫಲ್ಯದ ಮಾದರಿಗಳು ಮಾತ್ರ.
ಅವರಿಗೆ ಸಿಗದ ಯಶಸ್ಸು ಯಡಿಯೂರಪ್ಪನವರಿಗೆ ಸಿಗುತ್ತಾ? ಕನಿಷ್ಠ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರಿಗೆ ಸಿಕ್ಕ ಯಶಸ್ಸಾದರೂ ಸಿಗಬಹುದೇ? ಇದನ್ನು ನೋಡಲು ಯಡಿಯೂರಪ್ಪನವರು ಮೊದಲು ಬಿಜೆಪಿ ತ್ಯಜಿಸಬೇಕು, ಹೊಸಪಕ್ಷ ಸೇರಬೇಕು, ಚುನಾವಣೆ ಎದುರಿಸಬೇಕು...ದಾರಿ ದೂರ ಇದೆ, ಸ್ಪಷ್ಟವೂ ಇಲ್ಲ.

Monday, November 5, 2012

ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ Nov 05 2012


ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಾನು ಹೋದಲ್ಲೆಲ್ಲಾ `ಇಸ್ ಪ್ರದೇಶ್ ಕಾ ಭವಿಷ್ಯ್ ಆಫ್ ಕಾ ಹಾಥ್ ಮೇ ಹೈ~ ಎಂದು ಕೈ ಎತ್ತಿ ಎತ್ತಿ ಹೇಳುತ್ತಿದ್ದರು. ರಾಹುಲ್ ಲಖನೌದ ಸಾರ್ವಜನಿಕ ಸಭೆಯಲ್ಲಿ ಇದೇ ರೀತಿ ಹೇಳುತ್ತಿದ್ದಾಗ ಪಕ್ಕದಲ್ಲಿದ್ದ ಪತ್ರಕರ್ತ ಗೆಳೆಯನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಕಣ್ಣುಮಿಟುಕಿಸಿ ನಕ್ಕಿದ್ದ.
`2007ರ ಚುನಾವಣೆಯ ಕಾಲದಲ್ಲಿ ನಾನಿಲ್ಲಿ ಬಂದಿದ್ದಾಗಲೂ ನೀವೆಲ್ಲ ಹೀಗೆಯೇ ಹೇಳಿದ್ದ ನೆನಪು, ಆದರೆ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಗೆದ್ದರೂ ರಾಹುಲ್ ಭವಿಷ್ಯ ಮಂಕಾಗಲಿಲ್ಲವಲ್ಲಾ? ಆತ ಈಗಲೂ ನಾಯಕನಲ್ಲವೇ?~ ಎಂದು ಆ ಗೆಳೆಯನನ್ನು ಕಿಚಾಯಿಸಿದ್ದೆ. ಹೌದು ಇದು ವಂಶಪರಂಪರೆಯ ಶಕ್ತಿ.
ಯಾವಾಗಲೂ ಹೀಗೆ, ಮೇಲೇರುವುದು ಸುಲಭ, ಏರಿರುವ ಎತ್ತರವನ್ನು ಉಳಿಸಿಕೊಳ್ಳುವುದು ಕಷ್ಟ. ರಾಹುಲ್‌ಗಾಂಧಿ ಈಗ ಎದುರಿಸುತ್ತಿರುವುದು ಈ ಕಷ್ಟವನ್ನು. ನಿರೀಕ್ಷೆಯ ಭಾರದಿಂದ ಆಗಲೇ ಅವರು ಬಗ್ಗಿಹೋಗಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲ, ಇಡೀ ದೇಶದ ಕಣ್ಣು ರಾಹುಲ್‌ಗಾಂಧಿ ಕಡೆಗಿದೆ. ಇನ್ನೇನು ಕೇಂದ್ರ ಸಚಿವ ಸಂಪುಟ ಸೇರಿಯೇ ಬಿಡುತ್ತಾರೆ ಎಂಬ ಊಹಾಪೋಹ ಪುನರ‌್ರಚನೆಯ ಹಿಂದಿನ ಕ್ಷಣದ ವರೆಗೂ ಕೇಳಿಬಂದಿತ್ತು. ಈ ಬಾರಿಯೂ ಅವರು ಧೈರ್ಯ ತೋರಲಿಲ್ಲ. ಹಾಗಾಗದಿದ್ದರೂ ಸಣ್ಣಖಾತೆಗಳನ್ನು ಹೊಂದಿದ್ದ ಯುವಸಚಿವರಿಗೆ ನೀಡಲಾಗಿರುವ ಬಡ್ತಿಯನ್ನೇ `ಸಂಪುಟಕ್ಕೆ ಯುವ ರಕ್ತ~ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಮಾಧ್ಯಮಗಳ ಕಣ್ಣಿಗೆ `ರಾಹುಲ್ ಮೊಹರು~  ಕಾಣುತ್ತಿದೆ. ಭಾರತದ ಯಾವ ಯುವ ರಾಜಕಾರಣಿಗೆ ಈ ಅನುಕೂಲತೆಗಳು ಒದಗಿ ಬಂದಿವೆ? ಆದರೆ  ಇವುಗಳನ್ನೆಲ್ಲ ಬಳಸಿಕೊಂಡು ರಾಹುಲ್‌ಗಾಂಧಿ ಬೆಳೆದಿದ್ದಾರೆಯೇ ಎನ್ನುವುದು ಪ್ರಶ್ನೆ. ರಾಜಕೀಯದಲ್ಲಿ ಅನುಕೂಲತೆಗಳನ್ನೇ ಬಳಸಿಕೊಳ್ಳಲಾಗದವರು ಅನಾನೂಕುಲತೆಗಳನ್ನು ಹೇಗೆ ಎದುರಿಸಲು ಸಾಧ್ಯ?
ರಾಹುಲ್‌ಗಾಂಧಿಯ ರಾಜಕೀಯ ಪ್ರವೇಶದ ನಂತರದ ಎಂಟುವರ್ಷಗಳ ಅವಧಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ` ಈ ಯುವ ನಾಯಕ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ~ ಎಂದು ಅನಿಸಿಬಿಡುತ್ತದೆ. ಉತ್ತರಪ್ರದೇಶದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು `ಈ ಬಾರಿ ನೀವು ಅಲ್ಲಿಗೆ ಹೋಗಿದ್ದಾಗ ರಾಹುಲ್‌ನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಯಿತೇ?~ಎಂದು ಬಹಳ ನಿರೀಕ್ಷೆಯಿಂದ ನನ್ನನ್ನು ಕೇಳಿದ್ದರು. ಆಗಿನ್ನೂ ಚುನಾವಣೆಯ ಫಲಿತಾಂಶ ಪ್ರಕಟವಾಗಿರಲಿಲ್ಲ.
 `ಚುನಾವಣೆಗೆ ಮೊದಲೇ ನಡೆಸಿದ್ದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಹಿಸಿದ್ದ ಪಾತ್ರ, ಆಕ್ರಮಣಕಾರಿ ಪ್ರಚಾರ ಶೈಲಿ, ಕೆಲವೆಡೆ ಸಡಿಲಗೊಂಡರೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳು ಇವೆಲ್ಲವನ್ನೂ ನೋಡಿದಾಗ ಕೊನೆಗೂ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿತ್ತು.
ಆದರೆ ಒಬ್ಬ ರಾಜಕೀಯ ನಾಯಕನ ನಿಜವಾದ ಬಣ್ಣ ಗೊತ್ತಾಗುವುದು ಚುನಾವಣೆಯಲ್ಲಿ ಸೋತಾಗ ನಡೆದುಕೊಳ್ಳುವ ರೀತಿಯಿಂದ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ಕುಗ್ಗಿಹೋಗದೆ ಮರುದಿನದಿಂದಲೇ ಪಕ್ಷ ಸಂಘಟನೆಗಾಗಿ ಉತ್ತರಪ್ರದೇಶದಲ್ಲಿ ಓಡಾಡಿದರೆ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಮತದಾನ ಮುಗಿದ ಮರುದಿನವೇ ದಣಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿದರೆ ಆತ ಗಂಭೀರವಾಗಿಲ್ಲ ಎಂದು ಹೇಳಬೇಕಾಗುತ್ತದೆ~ ಎಂದು ಅವರಿಗೆ ಉತ್ತರಿಸಿದ್ದೆ. ಫಲಿತಾಂಶ ಪ್ರಕಟವಾದ ಕೆಲವು ದಿನಗಳ ನಂತರ ರಾಹುಲ್ ಯಾವುದೋ ದೇಶಕ್ಕೆ ಹೋಗಿ ಹಲವು ದಿನಗಳನ್ನು ಹಾಯಾಗಿ ಕಳೆದು ಬಂದಿದ್ದರು. ನನಗೆ ನಿರಾಶೆಯಾಗಿರಲಿಲ್ಲ, ಯುವನಾಯಕನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ನ ಆ ಹಿರಿಯರಿಗೆ ನಿರಾಶೆಯಾಗಿತ್ತು.
ರಾಜಕೀಯ ಎನ್ನುವುದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಳ್ಳಬೇಕಾದ ಗಂಭೀರ ವೃತ್ತಿ. ಐದು ದಿನ ಕೆಲಸ ಮಾಡಿ ವಾರಾಂತ್ಯದ ಎರಡು ದಿನಗಳನ್ನು ಎಲ್ಲಿಯೋ ಮೋಜಿನ ತಾಣದಲ್ಲಿ ಕಳೆದು ದಣಿವಾರಿಸಿಕೊಳ್ಳುವ ಕಾರ್ಪೋರೇಟ್ ಉದ್ಯೋಗ ಅಲ್ಲ. ಖಾದಿ ಜುಬ್ಬಾಪೈಜಾಮ ಧರಿಸಿ ಹಳ್ಳಿಗಳಲ್ಲಿ ತಿರುಗಾಡಿ, ದಲಿತರ ಮನೆಗಳಲ್ಲಿ ಒಂದು ತುಂಡು ರೊಟ್ಟಿ ತಿಂದು ನಂತರ ದೆಹಲಿಗೆ ಹೋಗಿ ಟೀಶರ್ಟ್, ಜೀನ್ಸ್‌ಪ್ಯಾಂಟ್ ಧರಿಸಿ `ಪೇಜ್ ತ್ರಿ~ಪಾರ್ಟಿಗೆ ಹೋಗಿ ಕುಣಿಯುವುದರಿಂದ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲ. ಭಾರತದ ಮತದಾರರ ಮನಸ್ಥಿತಿ ಕೂಡಾ ಭಿನ್ನ.
ಇಲ್ಲಿನ ಮತದಾರರು ಆತ್ಮವಿಶ್ವಾಸದಿಂದ ಕೂಡಿದ  ಆಕ್ರಮಣಕಾರಿ ನಡವಳಿಕೆಯ ಮತ್ತು ಕ್ಷಿಪ್ರನಿರ್ಧಾರ ಕೈಗೊಳ್ಳುವ ಧೈರ್ಯವಂತ ನಾಯಕರನ್ನು ಇಷ್ಟಪಡುತ್ತಾರೆ. ಅಂತರ್ಮುಖಿಯಾದ, ಸೌಮ್ಯಸ್ವಭಾವದ ಮತ್ತು ನಿರ್ಧಾರಕೈಗೊಳ್ಳಲು ಹಿಂಜರಿಯುವ ಪುಕ್ಕಲುತನದ ನಾಯಕರು ಅವರ ಆಯ್ಕೆ ಅಲ್ಲ.  ಒಂದೆರಡು ಕಡೆ  ಜುಬ್ಬಾದ ತೋಳುಗಳನ್ನು ಮೇಲೆತ್ತಿ ವೀರಾವೇಶದ ಭಾಷಣ ಮಾಡಿದ ಕೂಡಲೇ ಯಾರೂ ನಾಯಕರಾಗುವುದಿಲ್ಲ. ರಾಹುಲ್‌ಗಾಂಧಿ ತಾನೊಬ್ಬ ಕಸುಬುದಾರ ರಾಜಕಾರಣಿಯೆಂದು ಇನ್ನೂ ಸಾಬೀತುಪಡಿಸಿಲ್ಲ.
ರಾಹುಲ್‌ಗಾಂಧಿಗೆ ಹೋಲಿಸಿದರೆ ತಾಯಿ ಸೋನಿಯಾಗಾಂಧಿಯೇ ನಿಜವಾದ ನಾಯಕಿಯಂತೆ ಕಾಣುತ್ತಾರೆ. ಗಂಡ ರಾಜಕೀಯ ಪ್ರವೇಶ ಮಾಡುವುದರ ವಿರುದ್ಧ `ಹುಲಿಯಂತೆ ಹೋರಾಟ~ ಮಾಡಿದ್ದ ಸೋನಿಯಾಗಾಂಧಿ ಅನಿವಾರ್ಯವಾಗಿ ಪ್ರವೇಶ ಮಾಡಿದ ರಾಜಕೀಯದಲ್ಲಿ ಉಳಿಯಲು ಅದೇ ರೀತಿಯ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪಕ್ಷ ಎದುರಿಸಿದ ಸೋಲಿನ ಸರಮಾಲೆ, ವಿದೇಶಿ ಮಹಿಳೆ ಎಂಬ ಚುಚ್ಚುನುಡಿ, ನಾಡಿನ ಭಾಷೆ-ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಭಾವನೆ... ಇವೆಲ್ಲದರ ವಿರುದ್ಧ ಹೋರಾಡುತ್ತಲೇ ಬಂದಿರುವ ಸೋನಿಯಾಗಾಂಧಿ ಇತ್ತೀಚೆಗೆ ತನ್ನ  ಅನಾರೋಗ್ಯದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಮಗ ಅಮ್ಮನಿಂದಾದರೂ ಪ್ರೇರಣೆ ಪಡೆಯಬಾರದೇ?
ಸಂಪುಟ ಸೇರಲು ಪ್ರಧಾನಿ ಮನಮೋಹನ್‌ಸಿಂಗ್ ನೀಡುತ್ತಲೇ ಇರುವ ಆಹ್ಹಾನದ ನಿರಾಕರಣೆಯಲ್ಲಿಯೂ ಪೂರ್ಣಪ್ರಮಾಣದ ರಾಜಕೀಯ ನಾಯಕನ ಪಾತ್ರವಹಿಸಲು ಹಿಂದೇಟು ಹಾಕುತ್ತಿರುವ ರಾಹುಲ್‌ಗಾಂಧಿಯ ದೌರ್ಬಲ್ಯವನ್ನು ಕಾಣಬಹುದು. ಯುಪಿಎ ಎರಡನೆ ಅವಧಿಯಲ್ಲಿಯಾದರೂ ರಾಹುಲ್ ಸಂಪುಟ ಸೇರಿ ಅನುಭವ ಗಳಿಸಿಕೊಳ್ಳಬಹುದಿತ್ತು. ರಾಜೀವ್‌ಗಾಂಧಿ ತನ್ನೆಲ್ಲ ಒಳ್ಳೆಯತನ ಮತ್ತು ಜನಪರ ಕಾಳಜಿಯ ಹೊರತಾಗಿಯೂ ವಿಫಲಗೊಳ್ಳಲು ಕಾರಣ ಅನುಭವದ ಕೊರತೆ ಎನ್ನುವುದನ್ನು ರಾಹುಲ್ ಅರ್ಥಮಾಡಿಕೊಂಡಿಲ್ಲ. ಈ ಕೊರತೆಯನ್ನು ನೀಗಿಸಲು ಗೆಳೆಯರ ಗುಂಪಿನ ಮೊರೆಹೋದ ರಾಜೀವ್‌ಗಾಂಧಿ ಅವರ ಮಾತುಕೇಳಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದರು.
ಅವರಿಗೆ ಎರಡನೆ ಅವಧಿ ಸಿಕ್ಕಿಬಿಟ್ಟಿದ್ದರೆ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಗುತ್ತಿದ್ದರೇನೋ? ಪ್ರಧಾನಿಯಾದ ನಂತರ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಮಾತನಾಡಿದ್ದ ರಾಜೀವ್ `ಪಕ್ಷದಲ್ಲಿ ಅಧಿಕಾರದ ದಲ್ಲಾಳಿಗಳಿದ್ದಾರೆ~ ಎಂದು ಹೇಳಿ ಸೇರಿದ್ದವರನ್ನು ಬೆಚ್ಚಿಬೀಳಿಸಿದ್ದರು. ಅಂತಹ ದಿಟ್ಟತನವನ್ನು ಪ್ರದರ್ಶಿಸಿದ್ದಕ್ಕಾಗಿಯೇ ಅರುಣ್‌ಶೌರಿಯವರಂತಹ ನೆಹರೂ ಕುಟುಂಬದ ಕಟುಟೀಕಾಕಾರ ಪತ್ರಕರ್ತರೂ ಒಂದಷ್ಟು ಕಾಲ ರಾಜೀವ್‌ಗಾಂಧಿ ಅಭಿಮಾನಿಗಳಾಗಿಬಿಟ್ಟಿದ್ದರು.
ಬಹಳಷ್ಟು ಮಂದಿ ರಾಹುಲ್‌ಗಾಂಧಿಯನ್ನು ಅಪ್ಪ ರಾಜೀವ್‌ಗಾಂಧಿಗೆ ಹೋಲಿಸುತ್ತಾರೆ. ರೂಪವೊಂದನ್ನು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳು ಕಡಿಮೆ ಎಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ರಾಜೀವ್ ತಾನು ಪ್ರೀತಿಸಿದ್ದ ಕ್ರಿಶ್ಚಿಯನ್ ಧರ್ಮದ ವಿದೇಶಿ ಹುಡುಗಿಯನ್ನು 21ನೇ ವರ್ಷಕ್ಕೆ ಮದುವೆಯಾಗುವ ಧೈರ್ಯ ತೋರಿಸಿದ್ದರು. 26ನೇ ವರ್ಷಕ್ಕೆ ರಾಹುಲ್‌ಗಾಂಧಿ ಹುಟ್ಟಿಯೇ ಬಿಟ್ಟಿದ್ದರು. ನಲ್ವತ್ತೆರಡು ದಾಟಿದರೂ ರಾಹುಲ್‌ಗಾಂಧಿಗೆ ತನ್ನ ಮದುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.   ರಾಜಕೀಯ ಪ್ರವೇಶ ರಾಜೀವ್‌ಗಾಂಧಿಯವರ ಜೀವನದ ಉದ್ದೇಶವಾಗಿರಲಿಲ್ಲ.
ಸೋದರ ಸಂಜಯ್‌ಗಾಂಧಿ ಸಾವಿನ ನಂತರ ತಾಯಿಗೆ ನೆರವಾಗಲು ಒಲ್ಲದ ಮನಸ್ಸಿನಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಆದರೆ ರಾಜಕೀಯದಲ್ಲಿ ನೆಹರೂ ಕುಟುಂಬದ ಪರಂಪರೆಯನ್ನು ಉಳಿಸಿಕೊಳ್ಳಲು ಇಂದಲ್ಲ ನಾಳೆ ರಾಜಕೀಯ ಪ್ರವೇಶಿಸುವುದು ಅನಿವಾರ್ಯ ಎಂದು ರಾಹುಲ್‌ಗಾಂಧಿಗೆ ಗೊತ್ತಿತ್ತು. ರಾಜೀವ್ ಗಾಂಧಿಯಂತೆ ರಾಜಕೀಯ ಮಾರ್ಗದರ್ಶನ ನೀಡಲು ಇಂದಿರಾಗಾಂಧಿಯಂತಹ ತಾಯಿ ರಾಹುಲ್‌ಗೆ ಇರಲಿಲ್ಲ ನಿಜ, ಆದರೆ ಮಾನಸಿಕವಾಗಿ ಸಿದ್ಧಗೊಳ್ಳಲು ಅವರಿಗೆ ಬೇಕಾದಷ್ಟು ಕಾಲಾವಕಾಶ ಇತ್ತು. ರಾಜೀವ್‌ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು 37ನೇ ವರ್ಷದಲ್ಲಿ, ಅವರಿಗಿಂತ ಮೂರುವರ್ಷ ಕಡಿಮೆ ವಯಸ್ಸಿನಲ್ಲಿಯೇ ರಾಹುಲ್ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ನಿರಂತರ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಾಯಿಬಿಟ್ಟು ಹೇಳಬೇಕಾಗಿಲ್ಲ ಕೇವಲ ಸನ್ನೆಯ ಮೂಲಕವೇ ಸರ್ಕಾರಕ್ಕೆ ಆದೇಶವನ್ನು ನೀಡುವಂತಹ ಸ್ಥಾನದಲ್ಲಿ ರಾಹುಲ್‌ಗಾಂಧಿ ಇದ್ದಾರೆ. ಆದರೆ ಮಾಡಿದ್ದೇನು?
ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆ. ಆದರೆ ಕೇವಲ ಅದರ ಬಲದಿಂದಲೇ ರಾಜಕೀಯದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಷ್ಟು ಇಂದಿನ ಮತದಾರರು ಉದಾರಿಗಳಲ್ಲ. ವಂಶದ ಬಲದಿಂದ ರಂಗಪ್ರವೇಶವಷ್ಟೇ ಸಲೀಸು, ಆದರೆ ರಂಗದ ಮೇಲೆ ಉಳಿಸುವುದು ಸಾಧನೆ ಮಾತ್ರ. ಅದರಲ್ಲಿ ಸೋತುಹೋದರೆ ಜೈಕಾರ ಹಾಕಿದ ಅದೇ ಜನ ಮುಖತಿರುಗಿಸಿಬಿಡುತ್ತಾರೆ. ಇದಕ್ಕಾಗಿಯೇ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವಂತಹ ನಾಯಕ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಇತರರನ್ನು ಬೆರಗುಗೊಳಿಸುವಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅದರ ಮೂಲಕವೇ ತಾನೊಬ್ಬ ನಾಯಕನೆಂಬುದನ್ನು ಸಾಬೀತುಪಡಿಸಬೇಕು. ರಾಮಮನೋಹರ ಲೋಹಿಯಾ ಅವರಿಂದ `ಗೂಂಗಿಗುಡಿಯಾ~ ಎಂದು ಗೇಲಿಮಾಡಿಸಿಕೊಂಡ ಇಂದಿರಾಗಾಂಧಿ,  `ದುರ್ಗಿ~ ಎಂದು ಅಟಲಬಿಹಾರಿ ವಾಜಪೇಯಿ ಅವರಿಂದ ಅಭಿಮಾನದಿಂದ ಕರೆಸಿಕೊಳ್ಳುವವರೆಗೆ ಸವೆಸಿದ್ದ ರಾಜಕೀಯ ಪಯಣದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಂಜಯ್ ಮತ್ತು ರಾಜೀವ್ ಕೂಡಾ ಇಂತಹ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಭಾರತವನ್ನು ಇಪ್ಪತ್ತೊಂದನೆ ಶತಮಾನಕ್ಕೆ ಕೊಂಡೊಯ್ಯುವ ಮಾತನ್ನು ಪ್ರವಾದಿಯಂತೆ ರಾಜೀವ್ ಹೇಳಿದಾಗ ಗೇಲಿಮಾಡಿದವರೇ ಹೆಚ್ಚು. ಆ ಕನಸು ಒಂದು ತಲೆಮಾರಿನ ಆಯುಷ್ಯದೊಳಗೆಯೇ ನಿಜವಾದಾಗ ರಾಜೀವ್‌ಗಾಂಧಿಯವರ ದೂರಾಲೋಚನೆಯನ್ನು ಶ್ಲಾಘಿಸದಿರಲು ಹೇಗೆ ಸಾಧ್ಯ?
ಒಂದೆರಡು ಲಿಖಿತ ಭಾಷಣಗಳನ್ನು ಓದಿರುವುದನ್ನು ಬಿಟ್ಟರೆ ಲೋಕಸಭೆಯ ಯಾವ ಚರ್ಚೆಯಲ್ಲಿಯೂ ಓರಗೆಯ ಇತರ ಯುವನಾಯಕರಂತೆ ರಾಹುಲ್ ಭಾಗವಹಿಸಿಲ್ಲ.  ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್‌ಗಳಿಗೆ ಪೂರ್ಣಪ್ರಮಾಣದ ಸಂದರ್ಶನವನ್ನು ನೀಡಿಲ್ಲ. ಒಂದಷ್ಟು ಚುನಾವಣಾ ಭಾಷಣಗಳು,ಪತ್ರಿಕಾ ವರದಿಗಳು ಮತ್ತು ಟಿವಿ ಬೈಟ್‌ಗಳ ಹೊರತಾಗಿ ರಾಹುಲ್ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಬೇರೆದಾರಿ ಇಲ್ಲ.
ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಮುತ್ತಿಕೊಂಡಿರುವ ಈಗಿನ ದಿನಮಾನದಲ್ಲಿ ಅದರಿಂದ ದೂರ ಓಡುವವ ಹೇಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ನಾಯಕನಾಗಲು ಸಾಧ್ಯವೋ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ, ಸಾಮಾಜಿಕ ಜಾಲತಾಣಗಳು ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟದಿಂದಾಗಿ ಭಾರತದ ರಾಜಕೀಯ ಕ್ಷೇತ್ರ ಅನಿವಾರ್ಯವಾಗಿ ಪಾರದರ್ಶಕತೆಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೇಬೇಕಾಗಿದೆ. ಕಳೆದ ಒಂದು ವಾರದಿಂದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಾಯಿ-ಮಗನ ವಿರುದ್ಧ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಮಾಡಿದ್ದಾರೆ.
ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲಿಗರಿಂದ ಉತ್ತರ ಕೊಡಿಸಿ ರಾಹುಲ್‌ಗಾಂಧಿ ಎಷ್ಟು ದಿನ ದಂತಗೋಪುರದಲ್ಲಿ ಉಳಿಯಲು ಸಾಧ್ಯ? ಉಳಿದ ಕ್ಷೇತ್ರಗಳಂತೆ ರಾಜಕೀಯದಲ್ಲಿಯೂ ತನ್ನ ಶಿಲುಬೆಯನ್ನು ತಾನೇ ಹೊರಬೇಕು.
ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್‌ಗಾಂಧಿ ಕಳೆದುಕೊಂಡಿದ್ದಾರೆ. ಈಗ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ರಾಜಕೀಯ ಜೀವನವನ್ನು ರಾಹುಲ್‌ಗಾಂಧಿ ನಿಜಕ್ಕೂ ಗಂಭೀರವಾಗಿ ಸ್ವೀಕರಿಸಲು ನಿರ್ಧರಿಸಿದ್ದರೆ ಅಲಂಕಾರಿಕ ಹುದ್ದೆಗಳಲ್ಲಿ ಕೂರುವುದಲ್ಲ, ತಾಯಿಗೆ ನಿವೃತ್ತಿಯನ್ನು ದಯಪಾಲಿಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು.  ಜವಾಹರಲಾಲ್ ನೆಹರೂ 40ನೇ ವರ್ಷಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಬಿಟ್ಟಿದ್ದರು.ಆ ಧೈರ್ಯ ರಾಹುಲ್‌ಗಾಂಧಿಯಲ್ಲಿದೆಯೇ?