Monday, December 10, 2012

ಸುಭದ್ರ ಸರ್ಕಾರ ಎಂಬ ಮಾಯಾಮೃಗದ ಬೆನ್ನಟ್ಟಿ... Dec 10 2012


`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡ ಏಕೈಕ ಪಕ್ಷ ಕಾಂಗ್ರೆಸ್. ಬಹಿರಂಗ ಘೋಷಣೆಗಳೇನೇ ಇರಲಿ, ಬೇರೆ ಯಾವ ಪಕ್ಷವೂ ಬಹುಮತ ಗಳಿಸಬಹುದೆಂಬ ನಿರೀಕ್ಷೆಯನ್ನು ಅಂತರಂಗದಲ್ಲಿ ಇಟ್ಟುಕೊಂಡ ಹಾಗೆ ಕಾಣುವುದಿಲ್ಲ.
ಹಿಂದಿನ ಯಾವ ಚುನಾವಣೆಯಲ್ಲಿಯೂ ಈ ಪರಿಸ್ಥಿತಿಯನ್ನು ನಾನು ಕಂಡಿರಲಿಲ್ಲ, ಕನಿಷ್ಠ ಎರಡು ಪಕ್ಷಗಳ ನಡುವೆ ಬಹುಮತಕ್ಕಾಗಿ ಒಂದಷ್ಟು ಪೈಪೋಟಿ ಇರುತ್ತಿತ್ತು, ಫಲಿತಾಂಶವನ್ನು ಊಹಿಸುವುದು ಕಷ್ಟವಾಗುತ್ತಿತ್ತು..' ಎಂದು ಹೇಳಿದವರು ಲಂಡನ್‌ನ ಕಾಮನ್‌ವೆಲ್ತ್ ಅಧ್ಯಯನ ಸಂಸ್ಥೆಯ ಪ್ರೊ.ಜೇಮ್ಸ ಮೇನರ್.
ಇತ್ತೀಚೆಗೆ `ಪ್ರಜಾವಾಣಿ' ಕಚೇರಿಗೆ ಬಂದು ನಮ್ಮನ್ನುದ್ದೇಶಿಸಿ ಮಾತನಾಡಿದ ಜೇಮ್ಸ ತನ್ನ ಇತ್ತೀಚಿನ ಸುತ್ತಾಟದಲ್ಲಿ ಕಂಡುಕೊಂಡ ಈ ರಾಜಕೀಯ ಒಳನೋಟವನ್ನು ನೀಡಿದರು. 1972ರಿಂದ ರಾಜ್ಯದಲ್ಲಿ ನಡೆದ ಎಲ್ಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಸಮೀಪದಿಂದ ಕಂಡಿರುವ, ಅದರ ವಿಶ್ಲೇಷಣೆಗಳನ್ನು ನಿಖರವಾಗಿ ಮಾಡಿರುವ ಮತ್ತು ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿ ಹೆಚ್ಚು ಕಡಿಮೆ ಕನ್ನಡಿಗರೇ ಆಗಿರುವ ಜೇಮ್ಸ, ಕರ್ನಾಟಕದ ರಾಜಕೀಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ರಾಜಕೀಯ ಪಂಡಿತ. ಅವರು ಹೇಳಿದ್ದನ್ನು ನಂಬಲೇ ಬೇಕು ಆದರೆ..?
ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ನೋಡಿದರೆ ಅಧಿಕಾರದ ಕಡೆಗೆ ಕಾಂಗ್ರೆಸ್ ಹಾದಿ ಸುಲಭದ್ದೆಂದು  ಅನಿಸಿಬಿಡುವುದು ಸಹಜ. ಎಚ್.ಡಿ.ಕುಮಾರಸ್ವಾಮಿಯವರ ವಚನಭಂಗದಿಂದಾಗಿ ಯಡಿಯೂರಪ್ಪನವರ ಪರ ಎದ್ದಿದ್ದ ಅನುಕುಂಪದ ಅಲೆ, ಬಳ್ಳಾರಿಯ ರೆಡ್ಡಿ ಸೋದರರ ದುಡ್ಡಿನ ಬಲ, ತಳಮಟ್ಟದಲ್ಲಿನ ಸಂಘ ಪರಿವಾರದ ಬದ್ದ ಕಾರ್ಯಕರ್ತರ ಜಾಲ ಹಾಗೂ ಪರಿಶಿಷ್ಟ ಜಾತಿಯ ಗುಂಪನ್ನು ಒಡೆದು ಮಾದಿಗರು, ಲಂಬಾಣಿ ಮತ್ತು ಬೋವಿ ಸಮುದಾಯಗಳನ್ನು ಸೆಳೆದುಕೊಂಡ `ಸೋಷಿಯಲ್ ಎಂಜಿನಿಯರಿಂಗ್'- 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಈಗ ಬಿಜೆಪಿ ನಾಯಕರು ಚೀರಿಚೀರಿ ಹೇಳಿದರೂ ಅಂದಿನ ಪರಿಸ್ಥಿತಿ ಈಗ ಇಲ್ಲವೆನ್ನುವುದು ಅವರ ಅಂತರಂಗಕ್ಕೂ ಗೊತ್ತು.
ಯಡಿಯೂರಪ್ಪನವರ ನಿರ್ಗಮನ ಮತ್ತು ರೆಡ್ಡಿ ಸೋದರರ ಜೈಲು ವಾಸದಿಂದಾಗಿ ಈ ಎರಡು ಮೂಲಗಳ ಬಲವನ್ನು ಬಿಜೆಪಿ ಕಳೆದುಕೊಂಡಿದೆ. ಬಿಜೆಪಿಯ ಸೋಲು ನಿಶ್ಚಿತ ಎಂಬುದಕ್ಕೆ ಬೇರೆ ಕಾರಣಗಳು ಬೇಕಿಲ್ಲ. ಆದರೆ ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಬಹುದೇ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಶೇಕಡಾ 1.2ರಷ್ಟು ಹೆಚ್ಚು ಮತಗಳನ್ನು ಗಳಿಸಿದ್ದರೂ ಸ್ಥಾನಗಳ ಲೆಕ್ಕದಲ್ಲಿ ಬಿಜೆಪಿಗಿಂತ 30 ಸ್ಥಾನಗಳನ್ನು ಕಡಿಮೆ ಪಡೆದಿತ್ತು.
ಚುನಾವಣಾ ಫಲಿತಾಂಶದ ಈ ಗಣಿತ ಸುಲಭದಲ್ಲಿ ಅರ್ಥವಾಗುವಂತಹದ್ದಲ್ಲ. ಮತಪ್ರಮಾಣಕ್ಕೆ ಅನುಗುಣವಾಗಿ ಸ್ಥಾನಗಳ ಲೆಕ್ಕ ಹಾಕಲಾಗುವುದಿಲ್ಲ. ಸ್ಥಾನಗಳ ಸಂಖ್ಯೆಯನ್ನು ನಿರ್ಧರಿಸುವುದು ಕೇವಲ ಮತಗಳಲ್ಲ, ಅದು ಮತಸಾಂದ್ರತೆ. ಈ ಕಾರಣದಿಂದಾಗಿಯೇ ಹಳೆಮೈಸೂರು ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಜೆಡಿ(ಎಸ್) ಶೇಕಡಾ 19.44ರಷ್ಟು ಮತಗಳಿಸಿದರೂ 28  ಸ್ಥಾನಗಳನ್ನು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಜೆಪಿ 33.93ರಷ್ಟು ಮತಗಳ ಆಧಾರದಲ್ಲಿ  110 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿರುವುದು.
ಕಾಂಗ್ರೆಸ್ ಪಕ್ಷ ಶೇಕಡಾ 35.13ರಷ್ಟು ಮತಗಳನ್ನು ಪಡೆದರೂ 80ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿರುವುದಕ್ಕೂ ಇದೇ ಕಾರಣ. ಕಾಂಗ್ರೆಸ್ ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮಾನ್ಯವಾದ ಜನ ಬೆಂಬಲ ಹೊಂದಿದ್ದರೆ, ಬಿಜೆಪಿ ಮತ್ತು ಜೆಡಿ (ಎಸ್) ನಿರ್ದಿಷ್ಟ ಪ್ರದೇಶಗಳಲ್ಲಿ ಕಾಂಗ್ರೆಸ್‌ಪಕ್ಷದ ಸರಾಸರಿ ಜನಬೆಂಬಲಕ್ಕಿಂತಲೂ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿವೆ.
ಯಡಿಯೂರಪ್ಪನವರ ನಿರ್ಗಮನದಿಂದ ಬಿಜೆಪಿ ಶಕ್ತಿ ಕುಂದಲಿರುವುದು ಖಾತರಿ. ಆದರೆ ಬಿಜೆಪಿ ಬುಟ್ಟಿಯಿಂದ ಜಿಗಿದ ಮತಗಳು ನೇರವಾಗಿ ಕಾಂಗ್ರೆಸ್ ಮಡಿಲಿಗೆ ಬೀಳುವುದೇ ಇಲ್ಲವೆ ಅದು ಯಡಿಯೂರಪ್ಪನವರ ಕಡೆಗೆ ಹೋಗಲಿದೆಯೇ ಎನ್ನುವುದು ಪ್ರಶ್ನೆ. ಬಹುಶಃ ಈ ಪ್ರಶ್ನೆಯೇ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲಿದೆ.
ಬಿಜೆಪಿಯಿಂದ ಸಿಡಿದುಹೋಗಲಿರುವುದು ಬಹುತೇಕ ಲಿಂಗಾಯತ ಮತಗಳು. ಅವುಗಳು ಯಡಿಯೂರಪ್ಪನವರ ಕಡೆಗೆ ಹೋಗುವ ಸಾಧ್ಯತೆಯೇ ಹೆಚ್ಚು. ಈ `ಮತಾಂತರ'ದಿಂದ ಯಾರಿಗೆ ಎಷ್ಟು ಲಾಭ? ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಬಹುದೇ? ಯಡಿಯೂರಪ್ಪನವರ ಪಕ್ಷವನ್ನು ನಿರ್ಣಾಯಕ ಸ್ಥಾನದಲ್ಲಿ ಕೊಂಡೊಯ್ದು ನಿಲ್ಲಿಸಬಹುದೇ?
ಯಡಿಯೂರಪ್ಪನವರೇ ಬಿಜೆಪಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಂಡರೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲಾಭವಾಗಲಾರದು. ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿಜೆಪಿಯಿಂದ ಹೊರಹೋಗುವ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುವಂತೆ ಕಾಂಗ್ರೆಸ್ ಪಕ್ಷ ಮಾಡಬೇಕಾಗುತ್ತದೆ. ಅದೇ ರೀತಿ ಬಿಜೆಪಿಯಿಂದ ಕಿತ್ತುಕೊಂಡ ಮತಗಳಿಂದಲೇ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಯಡಿಯೂರಪ್ಪನವರಿಗೂ ಸಾಧ್ಯವಾಗಲಾರದು.
ಲಿಂಗಾಯತರೆಲ್ಲರೂ ಮತಹಾಕಿದರೂ ಅದು ಶೇಕಡಾ ಹದಿನೈದರ ಪ್ರಮಾಣವನ್ನು ದಾಟುವುದಿಲ್ಲ, ಉತ್ತರ ಕರ್ನಾಟಕದ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಲಿಂಗಾಯತರ ಜನಸಂಖ್ಯೆ ಶೇಕಡಾ 20-25ರಷ್ಟಿದೆ ಎಂದಿಟ್ಟುಕೊಂಡರೂ ಅವರೆಲ್ಲರೂ ಕಣ್ಣುಮುಚ್ಚಿ ಯಡಿಯೂರಪ್ಪನವರ ಪಕ್ಷಕ್ಕೆ ಮತಹಾಕಲಿದ್ದಾರೆ ಎಂಬ ಖಾತರಿ ಇಲ್ಲ. ಕನಿಷ್ಠ ಶೇಕಡಾ 25ರಿಂದ 30ರಷ್ಟು ಮತಗಳನ್ನು ಪಡೆಯದೆ ಸ್ಥಾನಗಳನ್ನು ಗೆಲ್ಲುವುದು ಕಷ್ಟ. ಇದಕ್ಕಾಗಿ ಎಲ್ಲ ಜಾತಿ-ಧರ್ಮಗಳ ಮತದಾರರ ಬೆಂಬಲ ಅಗತ್ಯ.
ಯಡಿಯೂರಪ್ಪನವರು ಅದೇ ಪ್ರಯತ್ನದಲ್ಲಿದ್ದಾರೆ.  ಯಡಿಯೂರಪ್ಪನವರ ಬಂಡಾಯ ಬಿಜೆಪಿ ಸೋಲಿನಲ್ಲಿ ಕೊನೆಗೊಳ್ಳಬಹುದು, ಆದರೆ ಕೆಜೆಪಿ ಇಲ್ಲವೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಬಹುದು ಎಂದು ಹೇಳಲು ಸಾಧ್ಯ ಇಲ್ಲ.ಹೀಗಾದರೆ ಸುಭದ್ರ ಸರ್ಕಾರ ಸಾಧ್ಯವೇ? ಯಾವುದಾದರೂ ಒಂದು ಪಕ್ಷ 113 ಸ್ಥಾನಗಳನ್ನು ಗಳಿಸಿದರೆ ಇದು ಸಾಧ್ಯವಾಗಬಹುದು.
ಜೇಮ್ಸ ಮೇನರ್ ಪ್ರಕಾರ  ಸದ್ಯಕ್ಕೆ ಅಂತಹ ಅವಕಾಶ ಇರುವುದು ಕಾಂಗ್ರೆಸ್ ಪಕ್ಷಕ್ಕೆ. ಆದರೆ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯಾವ ಪಕ್ಷವೂ ನೂರರ ಗಡಿಯನ್ನು ದಾಟದೆ ಹೋದರೆ? ಉದಾಹರಣೆಗೆ ಕಾಂಗ್ರೆಸ್ ಪಕ್ಷ 90-95, ಬಿಜೆಪಿ 60-65, ಬಿ.ಎಸ್.ಯಡಿಯೂರಪ್ಪ 30-35, ಜೆಡಿ (ಎಸ್) 30-35 ಮತ್ತು ಬಿಎಸ್‌ಆರ್ ಪಕ್ಷ ಹಾಗೂ ಪಕ್ಷೇತರರು 10-15 ಸ್ಥಾನಗಳನ್ನು ಗಳಿಸಿದರೆ ಸುಲಭದಲ್ಲಿ ಸರ್ಕಾರ ರಚಿಸುವುದು ಸಾಧ್ಯವಾದೀತೇ? ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡುವುದು ರೂಢಿಯಾಗಿರುವ ಕಾರಣ ಮತ್ತು ರಾಜಭವನದಲ್ಲಿ ಅನುಕೂಲಕರ ರಾಜ್ಯಪಾಲರೇ ಕೂತಿರುವುದರಿಂದ  ಸರ್ಕಾರ ರಚನೆಗೆ ಆಹ್ವಾನ ಪಡೆಯುವುದು ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಅಲ್ಲ.
ಯಾರಿಗೂ ಸ್ಪಷ್ಟ ಬಹುಮತ ಇಲ್ಲದೆ ಇರುವ ಇಂತಹ ಸಂದರ್ಭದಲ್ಲಿ ಬಗೆಬಗೆಯ ಆಪರೇಷನ್‌ಗಳು ನಡೆಯಲಿರುವುದು ಖಂಡಿತ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಮತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಕಾರಣಗಳಿಂದಾಗಿ ಕಾಂಗ್ರೆಸ್ ನಡೆಸುವ `ಆಪರೇಷನ್'ಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿದ್ದರೂ ಉಳಿದ ಪಕ್ಷಗಳೂ ಕೈಕಟ್ಟಿ ಕೂರಲಾರವು.
ಯಡಿಯೂರಪ್ಪನವರು ಬಿಜೆಪಿಯನ್ನು ತೊರೆದು ಬಂದಿರಬಹುದು, ಬಿಜೆಪಿ ನಾಯಕರನ್ನು ಮನಸಾರೆ ನಿಂದಿಸಿರಬಹುದು, ಅಷ್ಟೇ ಕೆಟ್ಟದಾಗಿ ಯಡಿಯೂರಪ್ಪ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮಾತನಾಡಿರಬಹುದು. ಆದರೆ ಮುಂದಿನ ಚುನಾವಣೆಯ ಫಲಿತಾಂಶದ ನಂತರ ಪರಸ್ಪರ ಒಟ್ಟಾಗುವುದರಿಂದ ಅಧಿಕಾರ ಹಿಡಿಯುವುದು ಸಾಧ್ಯ ಎಂದು ಗೊತ್ತಾದ ಮರುಕ್ಷಣವೇ ಬಿಜೆಪಿ ನಾಯಕರು ಯಡಿಯೂರಪ್ಪನವರಿಗೆ `ನೀವೇ ಮುಖ್ಯಮಂತ್ರಿ ಅಭ್ಯರ್ಥಿ' ಎಂದು ಹೇಳಿ ಕೆಜೆಪಿಯನ್ನು ತಮ್ಮ ಪಕ್ಷದ ಜತೆ ವಿಲೀನಗೊಳಿಸಲೂ ಮನವೊಲಿಸಬಹುದು.
ಯಡಿಯೂರಪ್ಪನವರು ಒಪ್ಪದೆ ಇದ್ದರೆ (ಅಂತಹ ಆಹ್ವಾನವನ್ನು ಯಡಿಯೂರಪ್ಪ ಖಂಡಿತ ತಿರಸ್ಕರಿಸಲಾರರು) ಕೆಜೆಪಿಯನ್ನೇ ಒಡೆದು ಹಾಕಲು ಬಿಜೆಪಿ ಮುಂದಾಗಬಹುದು. ಯಡಿಯೂರಪ್ಪನವರೂ ಸುಮ್ಮನಿರಲಾರರು, ಬಿಜೆಪಿಯನ್ನು ಒಡೆದು ತಮ್ಮ ಬಲ ಹೆಚ್ಚಿಸಿಕೊಳ್ಳಲು ಅವರೂ ಪ್ರಯತ್ನ ಪಡಬಹುದು.
ಇಷ್ಟೇ ಅಲ್ಲ, ಒಂದೊಮ್ಮೆ ಕೆಜೆಪಿ 45-50, ಜೆಡಿ (ಎಸ್) 45-50  ಮತ್ತು ಬಿಎಸ್‌ಆರ್ ಪಕ್ಷ 10-15 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತೃತೀಯರಂಗದ ಪ್ರಯೋಗ ನಡೆಸಲೂ ಅವಕಾಶ ಇದೆ. ಈ ಮೂರು ಪಕ್ಷಗಳ ನಾಯಕರ ಇಲ್ಲಿಯ ವರೆಗಿನ ನಡವಳಿಕೆಗಳನ್ನು ಗಮನಿಸುತ್ತಾ ಬಂದರೆ  ಯಾವುದೇ ನಿರ್ದಿಷ್ಠ ರಾಜಕೀಯ ಸಿದ್ಧಾಂತ ಇಲ್ಲವೇ ಮೌಲ್ಯಗಳ ಬಗ್ಗೆ ಅವರಿಗೆ ಬದ್ಧತೆ ಕಂಡುಬರುವುದಿಲ್ಲ.
ಪರಸ್ಪರ ಎಷ್ಟೇ ಕೆಸರೆರಚಾಡಿಕೊಂಡರೂ ಅಧಿಕಾರ ಹಿಡಿಯಲು ಮತ್ತೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದಾದರೆ ಆಶ್ಚರ್ಯವೇನಿಲ್ಲ. ಈ ಇಬ್ಬರಿಗೂ ಶ್ರಿರಾಮುಲು ಆತ್ಮೀಯರಾಗಿರುವ ಕಾರಣ ಅವರು ಹೊಂದಿಕೊಳ್ಳುವುದು ಕಷ್ಟ ಅಲ್ಲ. ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯರಂಗ ಅಧಿಕಾರಕ್ಕೆ ಬರಬಹುದೆಂಬ ಕನಸನ್ನು ಅನೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಣುತ್ತಿರುವುದರಿಂದ ದೇವೇಗೌಡರು ಕೂಡಾ ಈ ಪ್ರಯೋಗವನ್ನು ಬೆಂಬಲಿಸಬಹುದು.
ಆದರೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಖಚಿತವಾಗಿ ನಂಬಿರುವ ಕಾಂಗ್ರೆಸ್ ನಾಯಕರು ಮನೆಹೊಸಿಲಿಗೆ ಬಂದಿರುವ ಅಧಿಕಾರವನ್ನು ಅಷ್ಟು ಸುಲಭದಲ್ಲಿ ಉಳಿದವರು ಅಪಹರಿಸಿಕೊಂಡು ಹೋಗಲು ಬಿಡಲಾರದು. ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಾಕ್ಷಣ  ಕೆಜೆಪಿ ಇಲ್ಲವೇ ಜೆಡಿ (ಎಸ್) ಜತೆ ಅದು ವ್ಯವಹಾರಕ್ಕೆ ಇಳಿಯಬಹುದು.
ಜೆಡಿ (ಎಸ್)ಗಿಂತಲೂ ಕೆಜೆಪಿಯನ್ನು ಒಲಿಸಿಕೊಳ್ಳುವುದು ಕಾಂಗ್ರೆಸ್‌ಗೆ ಸುಲಭ. ಬಿಜೆಪಿ ತೊರೆದ ನಂತರ ಅವರು `ಸೆಕ್ಯುಲರ್' ಆಗಿರುವುದರಿಂದ ಕೋಮುವಾದಿಗಳ ಜತೆ ಕೈಜೋಡಿಸಿದ ಅಪವಾದವನ್ನು ಕೂಡಾ ಎದುರಿಸಬೇಕಾಗಿಲ್ಲ. ತಲೆಮೇಲೆ ಸಿಬಿಐ ತೂಗುಕತ್ತಿಯನ್ನು ಇಟ್ಟುಕೊಂಡೇ ತಿರುಗಾಡುತ್ತಿರುವ ಯಡಿಯೂರಪ್ಪ ಬಹಳ ಬೇಗ ಕಾಂಗ್ರೆಸ್ ಹಾಕುವ ಗಾಳವನ್ನು ನುಂಗಿಬಿಡಲೂಬಹುದು. ಈ ಎಲ್ಲ ಸಾಧ್ಯತೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಬಹುಕಾಲದಿಂದ ಮರೀಚಿಕೆಯಾಗಿದ್ದ ಸುಭದ್ರ ಸರ್ಕಾರವೊಂದು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಬಹಳ ಕಾರಣಗಳು ಸಿಗುತ್ತಿಲ್ಲ.
ಜೇಮ್ಸ ಮೇನರ್ ಅವರು ರಾಜ್ಯದ ಚುನಾವಣಾ ಇತಿಹಾಸವನ್ನು ಮೆಲುಕುಹಾಕುತ್ತಾ ಕೊನೆಯಲ್ಲಿ ಕರ್ನಾಟಕದ ಜಾಗೃತ ಮತದಾರರನ್ನು ಬಾಯ್ತುಂಬಾ ಹೊಗಳಿದರು. ತನ್ನ ಅಭಿಪ್ರಾಯವನ್ನು ಸಮರ್ಥಿಸಿಕೊಳ್ಳಲು ಅವರು ಉಲ್ಲೇಖಿಸಿದ್ದು 1984ರ ಲೋಕಸಭಾ ಚುನಾವಣೆ ಮತ್ತು 1985ರ ಮಧ್ಯಂತರ ವಿಧಾನಸಭಾ ಚುನಾವಣೆಯನ್ನು.
1984ರ ಡಿಸೆಂಬರ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ ನಾಲ್ಕು ಸ್ಥಾನಗಳನ್ನಷ್ಟೇ ನೀಡಿ ರಾಜ್ಯದ ಆಡಳಿತಾರೂಢ ಜನತಾ ಪಕ್ಷಕ್ಕೆ ಮುಖಭಂಗ ಮಾಡಿದ್ದ ಮತದಾರರು, ಎರಡು ತಿಂಗಳ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ 139 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. `ಭಾರತ ಮಾತ್ರವಲ್ಲ ಬೇರೆ ಯಾವ ದೇಶದಲ್ಲಿಯೂ ಇಂತಹ ನಿದರ್ಶನ ಅಪರೂಪ' ಎಂದು ಅವರು ಬಣ್ಣಿಸಿದರು.
ಕರ್ನಾಟಕದ ಮತದಾರರು ರಾಜ್ಯಕ್ಕೊಂದು ಸುಭದ್ರ ಸರ್ಕಾರ ನೀಡುತ್ತಾರೆ ಎಂಬ ಭರವಸೆ ಅವರ ಮಾತಿನಲ್ಲಿತ್ತು.  ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳಲ್ಲಿ ಬರುವುದಾಗಿ ಜೇಮ್ಸ ಮೇನರ್ ಹೇಳಿ ಹೋಗಿದ್ದಾರೆ. ಅವರು ಇಟ್ಟಿರುವ ನಂಬಿಕೆಯನ್ನು ಕರ್ನಾಟಕದ ಜಾಗೃತ ಮತದಾರರು ಉಳಿಸಿಕೊಳ್ಳುತ್ತಾರೆಯೇ ಎಂಬುದನ್ನು ತಿಳಿದುಕೊಳ್ಳಲು ಇನ್ನು ಐದು ತಿಂಗಳು ಕಾಯಬೇಕು.

No comments:

Post a Comment