Monday, March 20, 2017

ಶಿವಮೊಗ್ಗ: ಸರಳ ವಿವಾಹ (ಮಂತ್ರ ಮಾಂಗಲ್ಯ)

ಜಾತಿಮೀರಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದ ಭಾಸ್ಕರ್ ಮತ್ತು ಚೈತ್ರಾ ಅವರಿಗೆ ಮಂತ್ರಮಾಂಗಲ್ಯದ ವಚನ ಬೋಧನೆ ಮಾಡುವ ಭಾಗ್ಯ ಕಳೆದ ಭಾನುವಾರ ನನಗೆ ಬಂದೊದಗಿತ್ತು.
ವಧುವರರನ್ನು ಹರಸಲು ನನ್ನ ಜತೆ ಬಾನುಮುಸ್ತಾಕ್ ಮತ್ತು ಮಲ್ಲಿಕಾರ್ಜುನ ಮೇಟಿ ಕೂಡಾ ಇದ್ದರು. ಭಾಸ್ಕರ್ ತಂದೆತಾಯಿ ಇನ್ನೂ ಮುನಿಸುಕೊಂಡಿದ್ದಾರೆ. ಅವರ ಕೊರತೆ ಕಾಡದಂತೆ ಭಾಸ್ಕರ್ ಅವರ ಮೇಸ್ಟ್ರು ಕೊಟ್ರಪ್ಪ ಹಿರೇಮಠ್ ಪತ್ನಿ ಜತೆ ಬಂದು ಮದುವೆ ನಡೆಸಿಕೊಟ್ಟರು. ಜತೆಗೆ ಪತ್ರಕರ್ತರಾದ ಟೆಲೆಕ್ಸ್ ರವಿಕುಮಾರ್ ಮತ್ತು ಅನಿತಾ ಹಾಗೂ ನಾಗೇಶ್ ಮೊದಲಾದವರ ಸ್ನೇಹಬಳಗ.
ಕಳೆದೆರಡು ವರ್ಷಗಳ ಅವಧಿಯಲ್ಲಿ ಕುವೆಂಪು ಹುಟ್ಟೂರಾದ ಶಿವಮೊಗ್ಗದಲ್ಲಿ ಅವರೇ ಹೇಳಿಕೊಟ್ಟಿರುವ ಮಂತ್ರಮಾಂಗಲ್ಯದ ಮದುವೆಗೆ ನಾನುಮೂರನೆ ಬಾರಿ ‘ಪುರೋಹಿತ’ನಾದೆ.
ಮೊದಲು ನನ್ನ ಯುವ ಪತ್ರಕರ್ತ ಮಿತ್ರ ಸುಬ್ರಹ್ಮಣ್ಯ ಮತ್ತು ನಂದಿನಿ ನಂತರ ಇನ್ನೊಬ್ಬ ಯುವಪತ್ರಕರ್ತ ಮಿತ್ರ ಪ್ರಶಾಂತ್ ಹುಲ್ಕೋಡ್ ಮತ್ತು ಮಂಜುಳಾ ಮಾಸ್ತಿಕಟ್ಟೆ, ಈಗ ಭಾಸ್ಕರ್ ಮತ್ತು ಚೈತ್ರಾ.
ಕುವೆಂಪು ನಮ್ಮನ್ನಗಲಿ ಹೋಗಿದ್ದಾರೆ ಎಂದು ಹೇಳಿದವರು ಯಾರು? ಕುವೆಂಪು ಹೇಳಿಕೊಟ್ಟಿರುವ ಆದರ್ಶಗಳ ಪಾಲನೆಯ ಮೂಲಕ ಈ ಯುವಕ-ಯುವತಿಯರು ಅವರನ್ನು ಮತ್ತೆಮತ್ತೆ ಜೀವಂತವಾಗಿಸುತ್ತಿದ್ದಾರೆ.
ಯಾವನೋ ಮತಿಗೆಟ್ಟವನು ಕುವೆಂಪು ಕವನವನ್ನು ಗೇಲಿಮಾಡಿದ ಎಂದು ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಅಂತಹವರು ಕುವೆಂಪು ಬದುಕಿದ್ದಾಗಲೂ ಅವರನ್ನು ಕಾಡಿದ್ದರು, ಮುಂದೆಯೂ ಆ ಕೆಲಸ ಮಾಡುತ್ತಾರೆ. ಅಂತಹವರನ್ನು ಸಮೀಪದ ಕಸದಬುಟ್ಟಿಗೆ ಎಸೆದು ನಾವು ಕುವೆಂಪು ಎಂಬ ಮಹಾಗುರುವಿನ ಶಿಷ್ಯರಾಗೋಣ.


No comments:

Post a Comment