Thursday, April 9, 2015

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ‘ರೋಗ ಪತ್ತೆ ವಿಧಾನ’ವಿದ್ದಂತೆ: ದಿನೇಶ್ ಅಮಿನ್ ಮಟ್ಟು


 ಬೆಂಗಳೂರು: ಏ, 9:- ಜಾತಿ ಎನ್ನುವ ರೋಗಕ್ಕೆ ಮೀಸಲಾತಿ ಒಂದು ಚಿಕಿತ್ಸಾ ವಿಧಾನವಾದರೆ ಜಾತಿ ಗಣತಿ ರೋಗ ಪತ್ತೆ ವಿಧಾನ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಶ್ರೀ ದಿನೇಶ್ ಅಮಿನ್ ಮಟ್ಟು ಅವರು ಅಭಿಪ್ರಾಯಪಟ್ಟರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಕಾರಣ ಯಾವುದೇ ಪಕ್ಷ ಅಥವಾ ರಾಜಕಾರಣಿ ಅಲ್ಲ; ಸಂವಿಧಾನ, ಶಾಸಕಾಂಗ ಹಾಗೂ ಕಾರ್ಯಾಂಗ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವೈಜ್ಞಾನಿಕವಾಗಿ ಅಂಕಿ ಅಂಶಗಳ ಸಂಗ್ರಹಣೆಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಭಾರತ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮಾಹಿತಿ ಲಭ್ಯವಿರುತ್ತವೆ. ಆದರೆ ಹಿಂದುಳಿದ ವರ್ಗದವರ ಮಾಹಿತಿ ದೊರೆಯುವುದಿಲ್ಲ. ಇದರಿಂದ ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ತೊಡಕಾಗುತ್ತದೆ. ಆರ್ಥಿಕ ಬಲ ತುಂಬುವುದರಿಂದ ಜಾತೀಯತೆಯ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮೀಸಲಾತಿಯ ದುರುಪಯೋಗ ತಡೆಯುವುದು ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸುವ ಉದ್ದೇಶಗಳಿಗೆ ಅಗತ್ಯವಿರುವ ನಿಖರ ಮಾಹಿತಿ ಈ ವೈಜ್ಞಾನಿಕ ಸಮೀಕ್ಷೆಯಿಂದ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡಿ ಅರ್ಹರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತಾಗಲು ಸಹಕರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಹೆಚ್.ಕಾಂತರಾಜ ಅವರು ಮಾತನಾಡಿ ಜಾತಿ ನಮ್ಮ ಶತ್ರು, ಆದರೆ ಅದನ್ನು ಓಡಿಸಲು ಶತ್ರು ಯಾರೆಂದು ಅರಿಯುವುದು ಮುಖ್ಯವಾದ್ದರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾದದ್ದು, ಸಮಾನತೆಯ ಅನುಷ್ಠಾನಕ್ಕೆ ಈ ಸಮೀಕ್ಷೆಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಪ್ರತಿಪಾದಿಸಿದರು.
ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲಾಗುತ್ತಿದ್ದು, ಯಾವ ಸಮುದಾಯದವರಿಗೂ ತೊಂದರೆ ಇಲ್ಲ. ಇದು ವಾಸ್ತವಿಕ ಅಂಕಿ ಅಂಶಗಳನ್ನು ಕ್ರೋಢೀಕರಿಸುವ ಕಾರ್ಯಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಸಮೀಕ್ಷೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ನಾಡಿನ ಜನತೆಗೆ ಮನವಿ ಮಾಡಿದ ಅವರು ಮಾಹಿತಿ ಅಪೂರ್ಣವಾದಲ್ಲಿ ಅಂತಹ ಅಂಶಗಳ ಮರು ಪರಿಶೀಲನೆ, ಚರಿತ್ರೆ ಅರಿತು ವಿಚಾರಣೆ ಮಾಡುವ ಅಧಿಕಾರ ಆಯೋಗಕ್ಕಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷ ಡಾ: ಸಿ.ಎಸ್.ದ್ವಾರಕನಾಥ್ ಅವರು ಮಾತನಾಡಿ ಜಾತಿ ಮೂಲದ ಬಡತನಕ್ಕೆ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಹಕಾರಿ ಎಂದು ನುಡಿದರು. ಸಮೀಕ್ಷೆ ಮೂಲಕ ಸರ್ಕಾರದ ಸೌಲಭ್ಯಗಳಿಂದ, ಮೀಸಲಾತಿಯಿಂದ ವಂಚಿತರಾದ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿದೆ. ಹಲವಾರು ಜಾತಿಗಳು ತಮ್ಮ ಅಸ್ಥಿತ್ವ ಕಂಡುಕೊಳ್ಳಲು ಸಹ ಈ ಸಮೀಕ್ಷೆ ನೆರವಾಗಲಿದೆ. 1931ರ ನಂತರ ಜಾತಿವಾರು ಗಣತಿ ನಡೆದಿಲ್ಲ. ನ್ಯಾಯಾಲಯಗಳಲ್ಲಿ ಮೀಸಲಾತಿ ವಿರೋಧಿ ತೀರ್ಪುಗಳು ಬರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ನಿಖರ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಅವರು ತಿಳಿಸಿದರು. ಈ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಎಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಬೆಟ್ಟಸ್ವಾಮಿ ಹಾಗೂ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಶ್ರೀ ಪುಟ್ಟರಾಜು ಅವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಸಹನಾ ವಂದಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ: ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಮೀಕ್ಷೆಯ ಪ್ರಚಾರಕ್ಕಾಗಿ ಸಿದ್ಧಪಡಿಸಲಾದ ಪ್ರಚಾರ ವಾಹನಕ್ಕೆ ಶ್ರೀ ಹೆಚ್.ಕಾಂತರಾಜ ಮತ್ತು ಶ್ರೀ ಡಾ:ಸಿ.ಎಸ್.ದ್ವಾರಕನಾಥ್ ಅವರು ಚಾಲನೆ ನೀಡಿದರು.
(ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

No comments:

Post a Comment