Thursday, June 7, 2012

ನ್ಯಾಯ ಕೇಳುವವರಿಗೆ ಅನ್ಯಾಯದ ಅರಿವಿರಬೇಕು May 28, 2012

ಬರಪೀಡಿತ ಕರ್ನಾಟಕಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಸಂಸತ್ ಸದಸ್ಯರು ಸಂಸತ್‌ನಲ್ಲಿ ಗದ್ದಲ ಮಾಡುತ್ತಿದ್ದುದನ್ನು ನೋಡಿದವರಿಗೆ, `ಪ್ರತಿಯೊಬ್ಬರೂ ಬರಗಾಲವನ್ನು ಪ್ರೀತಿಸುತ್ತಾರೆ` ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ದಶಕಗಳ ಹಿಂದೆ ವ್ಯಂಗ್ಯವಾಗಿ ಹೇಳಿದ್ದು ನೆನಪಾಗದೆ ಇರದು.
 
ಲೋಕಸಭೆಯಲ್ಲಿ ಇಂತಹ ಪ್ರಹಸನ ನಡೆದದ್ದು ಇದೇನೂ ಮೊದಲ ಸಲವಲ್ಲ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಅನಾವೃಷ್ಟಿ ಇಲ್ಲವೇ ಅತಿವೃಷ್ಟಿ ಎದುರಾದ ಸಂದರ್ಭದಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷದ ಸರ್ಕಾರ ಇದ್ದರೆ ರಾಜ್ಯಸರ್ಕಾರ ಮೊದಲು ಮಾಡುವ ಕೆಲಸ- ಹೆಚ್ಚುವರಿ ಪರಿಹಾರಕ್ಕೆ ಮೊರೆ ಇಡುವುದು. 

ಅದರ ನಂತರ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ಯುವುದು, ಕೊನೆಗೆ `ನಾವು ಕೇಳಿದಷ್ಟು ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ` ಎಂದು ಆರೋಪಿಸುವುದು.
 
ಅನಾವೃಷ್ಟಿಯಾಗಿದ್ದರೆ ಈ ಜಗಳ ಮುಗಿಯುವ ಹೊತ್ತಿಗೆ ಮಳೆ ಬಂದಿರುತ್ತದೆ, ಅತಿವೃಷ್ಟಿಯಾಗಿದ್ದರೆ ಮಳೆ ನಿಂತಿರುತ್ತದೆ. ಅಷ್ಟರಲ್ಲಿ ಕೇಳಿದವರು ಮತ್ತು ಕೊಡುವವರು -ಇಬ್ಬರೂ ಮರೆತುಬಿಡುತ್ತಾರೆ. ಇದು ದಶಕಗಳಿಂದ ರಾಜ್ಯದ ಜನತೆ ನೋಡುತ್ತಾ ಬಂದ ಪ್ರಕೃತಿ ವಿಕೋಪ ಪರಿಹಾರದ ಪ್ರಹಸನ.

`ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ  ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕೇಳಿರುವ ನೆರವಿನ ಮೊತ್ತ ಸುಮಾರು 28 ಸಾವಿರ ಕೋಟಿ ರೂಪಾಯಿ, ಪಡೆದದ್ದು 2,800 ಕೋಟಿ ದಾಟಿಲ್ಲ` ಎನ್ನುತ್ತಾರೆ ವಿಧಾನಸೌಧದಲ್ಲಿ ಕೂತಿರುವ ಹಿರಿಯ ಅಧಿಕಾರಿಯೊಬ್ಬರು. 

ಈ ಬಾರಿಯೂ ರಾಜ್ಯ ಸರ್ಕಾರ 5,864 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಕೇಳಿದೆ. ಇಲ್ಲಿಯವರೆಗೆ ಪೈಸೆ ಹಣ ಬಂದಿಲ್ಲ, ಕೇಂದ್ರ ಸರ್ಕಾರ ನೆರವು ನೀಡಿದರೂ ಅದು ಕೇಳಿರುವ ಮೊತ್ತದ ಶೇಕಡಾ ಹತ್ತರಷ್ಟನ್ನು ದಾಟಲಾರದು. 

ಇದನ್ನು ಅನ್ಯಾಯವೆನ್ನುವುದಾದರೆ ಇದಕ್ಕೆ ಕೇಂದ್ರ ಸರ್ಕಾರ ಮಾತ್ರ ಅಲ್ಲ, ನಮ್ಮನ್ನು ಆಳುತ್ತಾ ಬಂದ ರಾಜ್ಯ ಸರ್ಕಾರಗಳು ಮತ್ತು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳೂ ಕಾರಣ. ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ಯಾವ  ರಾಜ್ಯಕ್ಕೂ ಈ ರೀತಿಯ ಅನ್ಯಾಯ ಆಗಿಲ್ಲ. 

ಯಾಕೆ ಹೀಗಾಗುತ್ತಿದೆ?ರಾಜ್ಯಕ್ಕೆ ಅನ್ಯಾಯವಾಗುತ್ತಿದೆ... ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ..` ಎಂದು ರಾಜ್ಯದ ಸಂಸದರು ಕಳೆದ ವಾರ ಲೋಕಸಭೆಯಲ್ಲಿ ಎದೆ ಬಡಿದುಕೊಂಡರು. 

ಅವರ ಭಾಷಣಕ್ಕೆ ಮುಖ್ಯ ಆಧಾರ- ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳು ಬರೆದುಕೊಟ್ಟಿರುವ ಮನವಿಪತ್ರ. ಅದರ ಆಚೆಗೆ ಹೋಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಮೂಲವನ್ನು ಶೋಧಿಸಲು ಯಾರೂ ಹೋಗಲಿಲ್ಲ.
 
ಮೂಲದಲ್ಲಿಯೇ ಅನ್ಯಾಯವನ್ನು ಸರಿಪಡಿಸದೆ ಹೋದರೆ ಪ್ರತಿ ವರ್ಷ ಆರೋಪ-ಪ್ರತ್ಯಾರೋಪಗಳ ಪ್ರಹಸನಕ್ಕೆ ರಾಜ್ಯದ ಜನತೆ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ ಅಷ್ಟೆ.

ವಿಪತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ಆರ್ಥಿಕ ಸಂಬಂಧದ ಪ್ರಮುಖ ಭಾಗ. ಈ ನೆರವಿನ ಪಾಲಿನ ತೀರ್ಮಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ಕೇಂದ್ರ ಹಣಕಾಸು ಆಯೋಗ. 

ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸಂಕಷ್ಟಗಳನ್ನು ರಾಜ್ಯ ಸರ್ಕಾರಗಳು ಸ್ವಂತ ಬಲದಿಂದ ಎದುರಿಸುವುದು ಕಷ್ಟವಾದ ಕಾರಣ ಇದಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು ಎಂಬ ಎರಡನೆ ಹಣಕಾಸು ಆಯೋಗದ ಶಿಫಾರಸಿನಿಂದಾಗಿ `ಮಾರ್ಜಿನಲ್ ಮನಿ ಸ್ಕೀಮ್` ಜಾರಿಗೆ ಬಂದಿತ್ತು. 

ಹಣಕಾಸು ಆಯೋಗದ ಆಶಯ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದ್ದು ಒಂಬತ್ತನೆ ಹಣಕಾಸು ಆಯೋಗ ವಿಪತ್ತು ಪರಿಹಾರ ನಿಧಿ (ಸಿಆರ್‌ಎಫ್) ಸ್ಥಾಪಿಸಿದ `ಇಷ್ಟರಿಂದಲೇ ನಮ್ಮ ಕಷ್ಟ ಬಗೆಹರಿಯಲಾರದು, ಇನ್ನೂ ಹೆಚ್ಚಿನ ನೆರವು ಬೇಕು` ಎಂಬ ರಾಜ್ಯ ಸರ್ಕಾರಗಳ ಮೊರೆಗೆ ಓಗೊಟ್ಟ ಹತ್ತನೆ ಹಣಕಾಸು ಆಯೋಗ `ರಾಷ್ಟ್ರೀಯ ವಿಕೋಪ ಪರಿಹಾರ ಸಂಚಿತ ನಿಧಿ` (ಎನ್‌ಸಿಸಿಎಫ್)  ಸ್ಥಾಪಿಸಿತು. 2005ರ ಪ್ರಕೃತಿ ವಿಕೋಪ ಪರಿಹಾರ ಕಾಯ್ದೆ ಜಾರಿಗೆ ಬಂದ ಮೇಲೆ ಈ ಎರಡು ನಿಧಿಗಳ ಹೆಸರು ಬದಲಾಯಿಸಲಾಗಿದೆ. 

ಸಿಆರ್‌ಎಫ್ ಎನ್ನುವುದು `ರಾಜ್ಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎಸ್‌ಡಿಆರ್‌ಎಫ್) ಮತ್ತು  ಎನ್‌ಸಿಸಿಎಫ್ ಎನ್ನುವುದು `ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎನ್‌ಡಿಆರ್‌ಎಫ್) ಆಗಿದೆ. ಹದಿನೈದನೆ ಕೇಂದ್ರ ಹಣಕಾಸು ಆಯೋಗ 2010ರಲ್ಲಿ ಮಾಡಿದ ಈ ಬದಲಾವಣೆಯಿಂದ ಪರಿಹಾರ ನಿಧಿಗಳ ಮೂಲ ರಚನೆ ಮತ್ತು ಉದ್ದೇಶದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.

ಸಿಆರ್‌ಎಫ್‌ನಂತೆ ಎಸ್‌ಡಿಆರ್‌ಎಫ್‌ಗೆ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಹಣ ನೀಡುತ್ತದೆ. ಐದು ವರ್ಷಗಳ ಅವಧಿಗೆ ಈ ನಿಧಿಯ ಒಟ್ಟು ಮೊತ್ತ ಮತ್ತು ಅದರಿಂದ ಪ್ರತಿಯೊಂದು ರಾಜ್ಯ ಪಡೆಯುವ ಪಾಲನ್ನು ನಿರ್ಧಾರ ಮಾಡುವುದು ಕೂಡಾ ಹಣಕಾಸು ಆಯೋಗ. 

ರಾಜ್ಯಗಳ ಸಾಮಾನ್ಯ ಹವಾಮಾನ, ಭೂಮಿಯ ಫಲವತ್ತತೆ, ಬರಪೀಡಿತ ಪ್ರದೇಶದ ವಿಸ್ತೀರ್ಣ, ಬರದ ಅವಧಿ, ಬರದ ಮರುಕಳಿಕೆಯ ಪ್ರಮಾಣ, ಪ್ರಕೃತಿ ವಿಕೋಪಗಳ ಇತಿಹಾಸ ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ಹಿಂದಿನ ಹತ್ತುವರ್ಷಗಳ ಅವಧಿಯಲ್ಲಿ ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ಖರ್ಚು ಮಾಡಿರುವ ಹಣ-ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತದೆ. ವಿಪತ್ತು ಪರಿಹಾರ ನಿಧಿ ಅಸ್ತಿತ್ವಕ್ಕೆ ಬಂದ ದಿನದಿಂದ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ  ಅನ್ಯಾಯವಾಗುತ್ತಾ ಬಂದಿದೆ.  

ಹದಿನೈದನೇ ಹಣಕಾಸು ಆಯೋಗ 2010-2015ರ ಐದು ವರ್ಷಗಳ ಅವಧಿಗೆ `ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ`ಗೆ (ಎಸ್‌ಡಿಆರ್‌ಎಫ್) ನಿಗದಿಪಡಿಸಿರುವ ಹಣದ ಒಟ್ಟು ಮೊತ್ತ 33,580 ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕಕ್ಕೆ ನಿಗದಿಪಡಿಸಿದ ಪಾಲಿನ ಹಣ ಕೇವಲ 889.41 ಕೋಟಿ ರೂಪಾಯಿ.

 ಈ ಅನ್ಯಾಯ ಇನ್ನಷ್ಟು ಸ್ಪಷ್ಟವಾಗಬೇಕಾದರೆ ಬೇರೆ ರಾಜ್ಯಗಳ ಪಾಲಿನ ಹಣವನ್ನು ತಿಳಿದುಕೊಳ್ಳಬೇಕು. ಒಟ್ಟು ಬರಪೀಡಿತ ಪ್ರದೇಶದ ಲೆಕ್ಕಾಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವುದು ರಾಜಸ್ತಾನ ಮತ್ತು ಕರ್ನಾಟಕ. ವಿಸ್ತೀರ್ಣದಲ್ಲಿ ರಾಜಸ್ತಾನ ದೊಡ್ಡ ರಾಜ್ಯವಾದರೂ ಜನಸಂಖ್ಯೆಯಲ್ಲಿ ಎರಡೂ ರಾಜ್ಯಗಳು ಸಮನಾಗಿವೆ. ಆದರೆ ಎಸ್‌ಡಿಆರ್‌ಎಫ್‌ನಲ್ಲಿ ರಾಜಸ್ತಾನಕ್ಕೆ ನಿಗದಿಪಡಿಸಿರುವ ಪಾಲು 3,319 ಕೋಟಿ ರೂಪಾಯಿ. 

ಜನಸಂಖ್ಯೆ ಮತ್ತು ವಿಸ್ತಿರ್ಣದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆಯಲ್ಲಿ ಕರ್ನಾಟಕ ಕ್ರಮವಾಗಿ 9 ಮತ್ತು 8ರ ಸ್ಥಾನದಲ್ಲಿದೆ. ಆದರೆ ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟೂ ಇರದ, ಜನಸಂಖ್ಯೆಯಲ್ಲಿ ಮೂರನೆ ಎರಡರಷ್ಟಿರುವ ಅಸ್ಸಾಂನ ಪಾಲು 1457.51 ಕೋಟಿ ರೂಪಾಯಿ. ಅಸ್ಸಾಂಗಿಂತಲೂ ಸಣ್ಣ ರಾಜ್ಯವಾದ ಹರಿಯಾಣದ  ಪಾಲು 1,065 ಕೋಟಿ ರೂಪಾಯಿ. 

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಕರ್ನಾಟಕದಷ್ಟೇ ಇರುವ ಮತ್ತು ಅಭಿವೃದ್ದಿ ಹೊಂದಿರುವ ರಾಜ್ಯವೆಂದೇ ಬಿಂಬಿಸಲಾಗುತ್ತಿರುವ ಗುಜರಾತ್‌ನ ಪಾಲು 2,774.54 ಕೋಟಿ ರೂಪಾಯಿ. ಉಳಿದಂತೆ ಎಸ್‌ಡಿಆರ್‌ಎಫ್‌ನಲ್ಲಿ ದೊಡ್ಡ ಪಾಲನ್ನು ಪಡೆದಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ (2,811.64 ಕೋಟಿ ರೂಪಾಯಿ), ಒರಿಸ್ಸಾ  (2,163 ಕೋಟಿ ರೂಪಾಯಿ), ತಮಿಳುನಾಡು (1,621.90 ಕೋಟಿ ರೂಪಾಯಿ) ಮೊದಲಾದ ರಾಜ್ಯಗಳು.

ಹಣಕಾಸು ಆಯೋಗ ಸಾಮಾನ್ಯವಾಗಿ ನಿಷ್ಪಕ್ಷಪಾತವಾಗಿ ಹಣ ಹಂಚಿದರೂ ಆ ಕಾಲದ ರಾಜಕೀಯ ಪರಿಸ್ಥಿತಿ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಬಲ, ಮುಖ್ಯಮಂತ್ರಿಗಳ ಆಸಕ್ತಿ, ಅಧಿಕಾರಿಗಳ ಕಾರ್ಯಕ್ಷಮತೆ ಮೊದಲಾದ ಅಂಶಗಳ ಪ್ರಭಾವ ಇದ್ದೆ ಇರುತ್ತದೆ. ಇಲ್ಲಿಯೇ ಕರ್ನಾಟಕ ಸೋತುಹೋಗಿರುವುದು. 

ಮೊದಲನೆಯದಾಗಿ, ರಾಷ್ಟ್ರೀಯ ಪಕ್ಷದ ಬಗ್ಗೆಯೇ ಒಲವು ತೋರಿಸುತ್ತಾ ಬಂದಿರುವ ಕರ್ನಾಟಕ ಮೈತ್ರಿಕೂಟದ ರಾಜಕಾರಣದಲ್ಲಿ ದನಿ ಇಲ್ಲದ ದುರ್ಬಲ ರಾಜ್ಯವಾಗಿಯೇ ಉಳಿದುಬಿಟ್ಟಿದೆ. ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಿರುಅವಧಿಯನ್ನು ಹೊರತುಪಡಿಸಿದರೆ ಕಳೆದ ಹದಿಮೂರು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತವನ್ನು ಕರ್ನಾಟಕ ಕಂಡಿಲ್ಲ. 

ಎನ್‌ಡಿಎ ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುತ್ತಾ, ಅಂತರಂಗದಲ್ಲಿ ಬ್ಲಾಕ್‌ಮೇಲ್ ಮಾಡುತ್ತಾ ಬಂದ ತೆಲುಗುದೇಶಂನ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರುವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆ ಮತ್ತು ನೆರವಿನ ರೂಪದಲ್ಲಿ 27,000 ಕೋಟಿ ರೂಪಾಯಿ ಪಡೆದಿದ್ದರು. 

ತಮಿಳುನಾಡಿನ ಒಂದಲ್ಲ ಒಂದು ಪಕ್ಷ ಕೇಂದ್ರದ ಮೈತ್ರಿಕೂಟದಲ್ಲಿ ಸ್ಥಾನ ಪಡೆಯುತ್ತಾ ಬಂದ ಕಾರಣ ಆ ರಾಜ್ಯಕ್ಕೆ ಕೂಡಾ ಅನ್ಯಾಯವಾಗಿಲ್ಲ. ಆದರೆ ಕರ್ನಾಟಕದ ಭಿಕ್ಷಾಪಾತ್ರೆಗೆ ಕೇಂದ್ರ ಸರ್ಕಾರ ಎಸೆಯುತ್ತಾ ಬಂದದ್ದು ಪುಡಿಗಾಸು ಮಾತ್ರ. ಆದರೆ ಈವರೆಗಿನ ಯಾವ ಮುಖ್ಯಮಂತ್ರಿಯೂ ಈ ಅನ್ಯಾಯವನ್ನು ಬಳಸಿಕೊಂಡು ಕೇಂದ್ರದ ವಿರುದ್ದ ರಾಜಕೀಯ ಹೋರಾಟಕ್ಕೆ ಮುಂದಾಗಲೇ ಇಲ್ಲ.

ಎರಡನೆಯದಾಗಿ ರಾಜ್ಯ ಸರ್ಕಾರದ ನಿರಾಸಕ್ತಿ. ಹಣಕಾಸು ಆಯೋಗ ವರದಿ ತಯಾರಿಸುವ ಮುನ್ನ ರಾಜ್ಯ ಸರ್ಕಾರಗಳ ಜತೆ ಅನೇಕ ಸುತ್ತಿನ ಮಾತುಕತೆ ನಡೆಸುತ್ತದೆ. ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್, ತಮಿಳುನಾಡು, ಕೇರಳ ರಾಜ್ಯಗಳು ಮೊದಲಿನಿಂದಲೂ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ತಮ್ಮ ರಾಜ್ಯಗಳ ಪ್ರಕೃತಿ ವಿಕೋಪದ ಪರಿಸ್ಥಿತಿಯ ವಿವರ ನೀಡುವುದರ ಜತೆಯಲ್ಲಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ತಮ್ಮ ಪಾಲು ಹೆಚ್ಚುಮಾಡಿಕೊಳ್ಳುತ್ತಾ ಬಂದಿವೆ. 

ಈ ರಾಜ್ಯಗಳು ನೀಡಿರುವ ಮನವಿ ಪತ್ರಗಳ ವಿವರಗಳು ಹಣಕಾಸು ಆಯೋಗದ ವರದಿಗಳಲ್ಲಿವೆ. ಆದರೆ, ಅಲ್ಲೆಲ್ಲೂ ಕರ್ನಾಟಕದ ಹೆಸರಿಲ್ಲ. ಅಂತಹ ಯಾವ ಪ್ರಯತ್ನವನ್ನೂ ಕರ್ನಾಟಕ ಇತ್ತೀಚಿನವರೆಗೆ ಮಾಡಿಲ್ಲ. 

ಮೊದಲ ಬಾರಿಗೆ ಹದಿನೈದನೆ ಹಣಕಾಸು ಆಯೋಗದ ಮುಂದೆ ಹಾಜರಾದ ರಾಜ್ಯದ ಕೆಲವು ಅಧಿಕಾರಿಗಳು  ಸ್ವಂತ ಆಸಕ್ತಿ ವಹಿಸಿ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಒಮ್ಮೆ ಹಣಕಾಸು ಆಯೋಗ `ಎಸ್‌ಡಿಆರ್‌ಎಫ್`ನ ಹಣದ ಪಾಲು ನಿರ್ಧರಿಸಿದ ನಂತರ ಐದು ವರ್ಷಗಳ ಕಾಲ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ನೆರವನ್ನು `ಎನ್‌ಡಿಆರ್‌ಎಫ್`ನಿಂದ ಮಾತ್ರ ಪಡೆಯಲು ಸಾಧ್ಯ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣ, ಈ ನಿಧಿಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡಬೇಕಾಗಿಲ್ಲ . 

ಕೇಂದ್ರದ ಗೃಹ, ಕೃಷಿ ಮತ್ತು ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನೊಳಗೊಂಡ ಉನ್ನತಾಧಿಕಾರದ ತಂಡ  ಮೊದಲು ರಾಜ್ಯ ಸರ್ಕಾರ ಸಲ್ಲಿಸುವ ಮನವಿಪತ್ರವನ್ನು ಪರಿಶೀಲಿಸುತ್ತದೆ. ಅದರ ನಂತರ ಪರಿಸ್ಥಿತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸಿ ವರದಿಯನ್ನು ಪಡೆಯುತ್ತದೆ. 

ಅದರ ಆಧಾರದಲ್ಲಿ ಹೆಚ್ಚುವರಿ ನೆರವಿನ ಮೊತ್ತವನ್ನು ನಿರ್ಧರಿಸುತ್ತದೆ. ಕೇಂದ್ರ ಮತ್ತು ರಾಜ್ಯದ ನಡುವೆ ಈಗ ನಡೆಯುತ್ತಿರುವ ಜಟಾಪಟಿ ಈ ಹಣಕ್ಕಾಗಿ. ಕರ್ನಾಟಕ ಇಲ್ಲಿಯೂ ಎಡವಿದೆ. ಬರಪರಿಸ್ಥಿತಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿದ್ದರೂ ಮಳೆ ಬೀಳುವ ಹೊತ್ತಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ದು ನೆರವಿಗಾಗಿ ರಾಜ್ಯಸರ್ಕಾರ ಮನವಿಪತ್ರ ಅರ್ಪಿಸಿದೆ. 

ಇದನ್ನು ಗೃಹಸಚಿವ ಪಿ.ಚಿದಂಬರಂ ಛೇಡಿಸಿಯೂ ಆಗಿದೆ.ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವನ್ನು ಪಡೆಯಲು ರಾಜ್ಯಸರ್ಕಾರದ ಜತೆಯಲ್ಲಿ ನಿಂತು ಪ್ರಯತ್ನ ನಡೆಸಬೇಕಾದವರು ಸಂಸತ್ ಸದಸ್ಯರು. ಸದನದ ಒಳಗೆ ಮತ್ತು ಹೊರಗೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಧಾರ ಸಹಿತವಾಗಿ ಮುಂದಿಟ್ಟು ನ್ಯಾಯ ಪಡೆಯಲು ಸಂಸದರು ನೆರವಾಗಬೇಕು. 

ಆಗಿರುವ ಅನ್ಯಾಯದ ಬಗ್ಗೆಯೇ ಅಜ್ಞಾನಿಗಳಾಗಿರುವವರು ನ್ಯಾಯಕ್ಕಾಗಿ ಹೋರಾಟ ನಡೆಸಲು ಹೇಗೆ ಸಾಧ್ಯ? ಹಾಗಿಲ್ಲದಿದ್ದರೆ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಒಬ್ಬ ಸಂಸದರಾದರೂ ಬಾಯಿ ಬಿಚ್ಚಬೇಕಿತ್ತಲ್ಲ?

No comments:

Post a Comment