Monday, December 19, 2011

ಕನ್ನಡಿಗರು ಒಲ್ಲದ ಪ್ರಾದೇಶಿಕ ರಾಜಕಾರಣ

ಕರ್ನಾಟಕದ ಇಬ್ಬರು ರಾಜಕೀಯ ನಾಯಕರು ಇತ್ತೀಚೆಗೆ ಪ್ರಾದೇಶಿಕ ಪಕ್ಷ ರಚನೆಯ ಕನಸು ಕಾಣತೊಡಗಿದ್ದಾರೆ. ಒಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇನ್ನೊಬ್ಬರು ಮಾಜಿ ಸಚಿವ ಶ್ರಿರಾಮುಲು.
ರಾಜ್ಯದ ನೆಲ-ಜಲ-ಭಾಷೆಯನ್ನು ಪ್ರೀತಿಸುವ, ಪೋಷಿಸುವ ಮತ್ತು ರಕ್ಷಿಸುವಂತಹ ಪ್ರಾದೇಶಿಕ ಪಕ್ಷವೊಂದರ ಕನಸನ್ನು ಕಂಡಿರುವ ಮತ್ತು ಈಗಲೂ ಕಾಣುತ್ತಿರುವ ಕನ್ನಡಿಗರು ಬಹುಸಂಖ್ಯೆಯಲ್ಲಿ ನಮ್ಮಲ್ಲಿದ್ದಾರೆ.
ಪ್ರಾದೇಶಿಕ ಪಕ್ಷಗಳ ಹಿಡಿತದ ರಾಜ್ಯಗಳನ್ನು `ನೆರೆಮನೆ~ಗಳಾಗಿ ಹೊಂದಿರುವ ಕರ್ನಾಟಕ, ಬಲಿಷ್ಠ ಪ್ರಾದೇಶಿಕ ಪಕ್ಷದ ಕೊರತೆಯಿಂದಾಗಿ ಗಡಿತಂಟೆ, ನೀರು ಹಂಚಿಕೆ, ಕೇಂದ್ರದ ಸಂಪನ್ಮೂಲದಲ್ಲಿನ ಪಾಲಿನಂತಹ ಸೂಕ್ಷ್ಮ ವಿಚಾರಗಳಲ್ಲಿ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು ಕೂಡಾ ಸುಳ್ಳಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೆರೆಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ, ಎನ್‌ಸಿಪಿ, ತೆಲುಗುದೇಶಂನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ರಾಜ್ಯಗಳ ಹಿತರಕ್ಷಣೆಗಾಗಿ ಬಳಸಿಕೊಳ್ಳುತ್ತಾ ಬಂದಿರುವ ನಿದರ್ಶನಗಳೂ ನಮ್ಮ ಕಣ್ಣಮುಂದೆ ಇವೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ಬಗೆಗಿನ ಕನ್ನಡಿಗರ ಒಲವು ಕರ್ನಾಟಕದ ಮುನ್ನಡೆಗೆ ಕಾಲ್ತೊಡಕಾಗಿ ಹೋಯಿತೇನೋ ಎಂಬ ಚಿಂತೆ ಭಾಷಾಂಧ ಕನ್ನಡಿಗರನ್ನು ಮಾತ್ರವಲ್ಲ, ಹೃದಯ ವೈಶಾಲ್ಯದ ಕನ್ನಡಿಗರನ್ನೂ ಒಮ್ಮಮ್ಮೆ ಕಾಡುತ್ತಿರುವುದು ಸತ್ಯ.
ಆದರೆ ರಾಜ್ಯದ ರಾಜಕೀಯ ಪರಂಪರೆಯನ್ನು ನೋಡಿದರೆ ಇಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಗಳಿಸಿರುವ ಉದಾಹರಣೆಗಳು ಸಿಗುವುದಿಲ್ಲ.
ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೆರೆದಾಡುತ್ತಿದ್ದರೂ ರಾಜ್ಯದ ಜನತೆ ಮಾತ್ರ ಇಲ್ಲಿಯ ವರೆಗೆ ಅದರ ಪ್ರಭಾವಕ್ಕೊಳಗಾಗದೆ ದೂರವೇ ಉಳಿದುಬಿಟ್ಟಿದ್ದಾರೆ.
ಇದಕ್ಕೆ ಪ್ರಾದೇಶಿಕ ಪಕ್ಷ ಕಟ್ಟಲು ಪ್ರಯತ್ನಿಸಿದ ರಾಜಕೀಯ ನಾಯಕರ ಆತ್ಮವಂಚನೆಯ ನಡವಳಿಕೆಗಳೂ ಕಾರಣ. ಇಂತಹದ್ದರಲ್ಲಿ ಯಡಿಯೂರಪ್ಪ ಮತ್ತು ಶ್ರಿರಾಮುಲು ಅವರು ರಾಜಕೀಯ ಬ್ಲಾಕ್‌ಮೇಲ್‌ಗಷ್ಟೇ `ಪ್ರಾದೇಶಿಕ ಪಕ್ಷದ ಗುಮ್ಮ~ನನ್ನು ಬಳಸದೆ ನಿಜಕ್ಕೂ ಅದನ್ನು ಕಟ್ಟಲು ಹೊರಟರೆ ಯಶಸ್ಸು ಕಾಣಬಹುದೇ?
ಪ್ರಾದೇಶಿಕ ಪಕ್ಷ ರಚನೆಯ ಹಲವಾರು ಅವಕಾಶಗಳು ಬಂದು ಹೋಗಿರುವುದನ್ನು ಕರ್ನಾಟಕ ರಾಜಕಾರಣದ ಇತಿಹಾಸ ಹೇಳುತ್ತಿದೆ. ಅಂತಹ ಮೊದಲ ಅವಕಾಶ ದೇವರಾಜ ಅರಸು ಅವರಿಗೆ ಒದಗಿ ಬಂದಿತ್ತು.

ಕಾಂಗ್ರೆಸ್ ವಿರುದ್ಧದ ರಾಜಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಜನ ಬೆಂಬಲ ಸಿಗದೆ ಇದ್ದರೂ ವಿಚಲಿತರಾಗದ ಅರಸು ಅವರು ತಮ್ಮ ಕೊನೆಯ ದಿನಗಳಲ್ಲಿ `ಕ್ರಾಂತಿರಂಗ~ವನ್ನು ಕಟ್ಟಿದ್ದರು. ಆದರೆ, ಅದನ್ನು ಮುನ್ನಡೆಸಲು ಅವರು ಉಳಿಯಲಿಲ್ಲ.
ಅವರು ಬದುಕಿದ್ದರೆ ಪ್ರಾದೇಶಿಕ ಪಕ್ಷವನ್ನು ರಾಜ್ಯ ಪಡೆಯುತ್ತಿತ್ತೋ ಏನೋ? ಹೀಗೆ ಅಂದುಕೊಳ್ಳಲು ಕಾರಣ ಇದೆ. ಕರ್ನಾಟಕದ ಬಹುಸಂಖ್ಯಾತ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು, ಅದರ ವಿರೋಧಿ ಪಕ್ಷಗಳ ಬಗ್ಗೆ ಒಲವು ತೋರಿಸಿದ್ದೇ ಎಪ್ಪತ್ತರ ದಶಕದ ಅಂತ್ಯ ಮತ್ತು ಎಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ.
1983ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದದ್ದೇ ಇದಕ್ಕೆ ಸಾಕ್ಷಿ. ಆಗ ಅರಸು ಬದುಕಿದ್ದರೆ ಅವರೇ ಅದಕ್ಕೆ ನಾಯಕರಾಗುತ್ತಿದ್ದರು. ಜನತಾ ಪಕ್ಷದ ಜತೆ ಕ್ರಾಂತಿರಂಗ ವಿಲೀನಗೊಳ್ಳದೆ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಆಗ ಅವಕಾಶ ಇತ್ತು.
ಎರಡನೇ ಅವಕಾಶ ಗೋಕಾಕ್ ಚಳವಳಿಯ ನಂತರದ ದಿನಗಳಲ್ಲಿ ಸೃಷ್ಟಿಯಾಗಿತ್ತು. ರೈತ, ದಲಿತ ಮತ್ತು ಭಾಷಾ ಚಳವಳಿಗಳಿಂದ ಪಕ್ವಗೊಂಡಿದ್ದ ರಾಜ್ಯದ ರಾಜಕಾರಣ ಪ್ರಾದೇಶಿಕ ಪಕ್ಷದ ಹುಟ್ಟನ್ನು ಎದುರು ನೋಡುತ್ತಿದ್ದ ಕಾಲ ಅದು. ಬಹುಶಃ ನಟ ರಾಜಕುಮಾರ್ ರಾಜಕೀಯ ಪ್ರವೇಶಿಸಲು ಒಪ್ಪಿಕೊಂಡಿದ್ದರೆ  ಪ್ರಾದೇಶಿಕ ಪಕ್ಷ ರಚನೆಯಾಗುತ್ತಿತ್ತು.

ಆದರೆ ವರನಟ ನಿರಾಕರಿಸಿದ ಕಾರಣ ಅದು ಸಾಧ್ಯವಾಗದೆ ಹೋಯಿತು. ಅದರ ಲಾಭ ಪಡೆದದ್ದು ಜನತಾರಂಗ ಎಂಬ ಮೈತ್ರಿಕೂಟಕ್ಕೆ. ಈ ಕೂಟಕ್ಕೆ ಸಂಪೂರ್ಣವಾಗಿ ಪ್ರಾದೇಶಿಕ ಪಕ್ಷದ ರೂಪ ಇರಲಿಲ್ಲ.
ಅದರೊಳಗಿದ್ದ ಕ್ರಾಂತಿರಂಗ ಪ್ರಾದೇಶಿಕ ಪಕ್ಷವಾದರೂ, ಒಟ್ಟು ಜನತಾರಂಗ ಎನ್ನುವುದು ಕ್ರಾಂತಿರಂಗ, ಜನತಾ ಪಕ್ಷ ಮತ್ತು ಎಡಪಕ್ಷಗಳು ಕೂಡಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಕಟ್ಟಿದ ಮೈತ್ರಿಕೂಟವಾಗಿತ್ತು.
ಮೂರನೆಯ ಅವಕಾಶ ಕೂಡಿಬಂದದ್ದು ಮಾತ್ರವಲ್ಲ, ಅದನ್ನು ಬಳಸಿಕೊಂಡು ಸೀಮಿತ ರೂಪದಲ್ಲಿಯಾದರೂ ಯಶಸ್ಸು ಗಳಿಸಿದ್ದು ಎಸ್. ಬಂಗಾರಪ್ಪನವರು.
1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೊರಬಂದ ಬಂಗಾರಪ್ಪನವರು ಕಟ್ಟಿದ `ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) 1994ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಏಳುವರೆಯಷ್ಟು ಮತಗಳನ್ನು ಗಳಿಸಿ ಹತ್ತುಸ್ಥಾನಗಳನ್ನು ಗೆದ್ದಿತ್ತು.
ಕರ್ನಾಟಕದ ಪ್ರಾದೇಶಿಕ ಪಕ್ಷಗಳ ಮಟ್ಟಿಗೆ ಈಗಲೂ ಇದೇ ದಾಖಲೆ. ಬೇರೆ ಯಾವ ಪ್ರಾದೇಶಿಕ ಪಕ್ಷವೂ ಚುನಾವಣೆಯಲ್ಲಿ ಇಷ್ಟು ಯಶಸ್ಸನ್ನೂ ಗಳಿಸಿಲ್ಲ.
ಆದರೆ ಬಂಗಾರಪ್ಪನವರ ಈ ಸಾಧನೆ ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೇ ಹೊರತು ಅದರಿಂದ ಅವರ ಪಕ್ಷಕ್ಕಾಗಲಿ, ರಾಜ್ಯದ ಜನರಿಗಾಗಲಿ ಲಾಭವಾಗಲಿಲ್ಲ.
ಪ್ರಾದೇಶಿಕ ಪಕ್ಷ ಕಟ್ಟುವ ಛಾತಿ ಇದ್ದ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ `ಕರ್ನಾಟಕ ವಿಕಾಸ ವೇದಿಕೆ~ಯನ್ನು ಕಟ್ಟಿ ಊರೂರೂ ಅಲೆಯತೊಡಗಿದಾಗ ಕರ್ನಾಟಕದ ಬಹುದಿನಗಳ ಆಸೆಯೊಂದು ಈಡೇರುತ್ತದೆಯೇನೋ ಎಂಬ ನಿರೀಕ್ಷೆ ಹುಟ್ಟಿತ್ತು.
ಆದರೆ ಅವರೂ ರಾಷ್ಟ್ರೀಯ ಪಕ್ಷದ ಹುಚ್ಚಿಗೆ ಬಿದ್ದು ಕೊನೆಗೆ ಜನತಾಪಕ್ಷದ ಜತೆಯೇ ಲೀನರಾದರು. ಪ್ರಾದೇಶಿಕ ಪಕ್ಷದ ನಾಯಕನಾಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪ್ರಧಾನಿ ಪಟ್ಟಕ್ಕೇರಿದ ನಂತರ ರಾಷ್ಟ್ರ ರಾಜಕಾರಣದ ದೌರ್ಬಲ್ಯದಿಂದ ಅವರು ಹೊರಗೆ ಬರಲೇ ಇಲ್ಲ.
ರಾಷ್ಟ್ರೀಯ ನಾಯಕರಾಗಿಯೇ ಉಳಿಯುವ ಹಂಬಲ ಮತ್ತು ಮೈತ್ರಿಕೂಟದ ಯುಗದಲ್ಲಿ ಮತ್ತೊಮ್ಮೆ ಅನಿರೀಕ್ಷಿತ ಬೆಳವಣಿಗೆ ಘಟಿಸಬಹುದೆಂಬ ದುರಾಸೆ ಇದಕ್ಕೆ ಕಾರಣ ಇರಬಹುದು. ಆದ್ದರಿಂದ ಎಚ್.ಡಿ.ಕುಮಾರಸ್ವಾಮಿ ಪ್ರಾದೇಶಿಕ ಪಕ್ಷ ಕಟ್ಟುವ ಆಸಕ್ತಿ ತೋರಿದರೂ ದೇವೇಗೌಡರು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಲೇ ಇಲ್ಲ.
ದೇವೇಗೌಡರು ಪ್ರಧಾನಿಯಾದ ನಂತರ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟನೆ ಮಾಡಿದಾಗ ಮತ್ತೆ ಪ್ರಾದೇಶಿಕ ಪಕ್ಷದ ಚರ್ಚೆ ಪ್ರಾರಂಭವಾಗಿತ್ತು. ಹೆಗಡೆ ಅವರು ಕಟ್ಟಿದ `ನವನಿರ್ಮಾಣ ವೇದಿಕೆ~ಗೆ ರಾಜ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಬೆಂಬಲವೂ ವ್ಯಕ್ತವಾಗಿತ್ತು.
ನಾಯಕತ್ವದ ಕೊರತೆಯಿಂದ ಕೊರಗುತ್ತಿದ್ದ ರಾಜ್ಯದ ಲಿಂಗಾಯತ ಸಮುದಾಯ ಹೆಗಡೆ ಅವರಲ್ಲಿ ತಮ್ಮ ನಾಯಕನನ್ನು ಕಾಣುತ್ತಾ ಬಂದದ್ದು ಕೂಡಾ ಈ ಜನಬೆಂಬಲಕ್ಕೆ ಒಂದು ಕಾರಣ.

ಆದರೆ ಹೆಗಡೆಯವರಿಗೆ ಪ್ರಾದೇಶಿಕ ಪಕ್ಷದ ಬಗ್ಗೆ ನಂಬಿಕೆಯೇ ಇರಲಿಲ್ಲ. ಅದನ್ನು ಕಟ್ಟಿ ಬೆಳೆಸುವ ಶ್ರಮಜೀವಿಯೂ ಅವರು ಆಗಿರಲಿಲ್ಲ. ಆದ್ದರಿಂದ `ನವನಿರ್ಮಾಣ ವೇದಿಕೆ~ಯನ್ನು  `ಲೋಕಶಕ್ತಿ~ ಎಂಬ ರಾಜಕೀಯ ಪಕ್ಷವಾಗಿ ಪರಿವರ್ತಿಸುವಾಗಲೂ ಅದಕ್ಕೆ ರಾಷ್ಟ್ರೀಯ ಪಕ್ಷದ ರೂಪು ಕೊಟ್ಟು ಅದನ್ನು ಎಡಬಿಡಂಗಿ ಮಾಡಿಬಿಟ್ಟರು.
ಈ ಸಾಲಿನಲ್ಲಿ ಕೊನೆಯ ಅವಕಾಶ ಒದಗಿಬಂದದ್ದು ಸಿದ್ದರಾಮಯ್ಯನವರಿಗೆ. ಆದರೆ ಆಟದ ಕಣಕ್ಕೆ ಇಳಿಯುವ ಮೊದಲೇ ಅವರು ಸೋಲೊಪ್ಪಿಕೊಂಡು `ಗೆಲ್ಲುವ ತಂಡ~ ಎಂದು ನಂಬಿ ಕಾಂಗ್ರೆಸ್ ಸೇರಿಕೊಂಡುಬಿಟ್ಟರು.
ಅವರು ಕಾಂಗ್ರೆಸ್ ಸೇರಿದ್ದ ದಿನ ಎಐಸಿಸಿ ಕಚೇರಿ ಸಭಾಂಗಣದಲ್ಲಿ ಪಕ್ಷದ ನಾಯಕರನ್ನು ಎಡಬಲದಲ್ಲಿ ಕೂರಿಸಿಕೊಂಡು ತೋರಿದ್ದ ಆತ್ಮವಿಶ್ವಾಸವನ್ನು ಸಂಸತ್‌ಭವನದ ಎದುರಿನ ಬೋಟ್‌ಕ್ಲಬ್‌ನಲ್ಲಿ ತನ್ನ ಕಾಲಮೇಲೆ ನಿಂತು ತೋರಿಸಿದ್ದರೆ ಲಾಲು, ಮುಲಾಯಂ, ಪವಾರ್, ಕರುಣಾನಿಧಿ, ಚಂದ್ರಬಾಬು ನಾಯ್ಡು ಅವರಂತೆ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗುತ್ತಿರುವ ಪ್ರಾದೇಶಿಕ ಪಕ್ಷದ ನಾಯಕರಾಗುತ್ತಿದ್ದರು.
ಆದರೆ ಸಿದ್ದರಾಮಯ್ಯನವರು `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ, ಅದಕ್ಕಾಗಿ ಸೋನಿಯಾಜಿ ಕೈ ಬಲಪಡಿಸಲು ಕಾಂಗ್ರೆಸ್ ಸೇರಿದ್ದೇನೆ~ ಎಂದು ಹೇಳಿ ಶರಣಾಗಿಬಿಟ್ಟರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಶವಪೆಟ್ಟಿಗೆಗೆ ಕೊನೆಯ ಮೊಳೆ ಬಿದ್ದದ್ದೇ ಆಗ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಊರಲು ಯಾಕೆ ಆಗುತ್ತಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ಗುಂಡೂರಾವ್ ದುರಾಡಳಿತದ ವಿರುದ್ಧದ ಚಳವಳಿಗಳ ದಿನಗಳಲ್ಲಿ ಸೃಷ್ಟಿಯಾಗಿದ್ದ ಅವಕಾಶವೊಂದನ್ನು ಹೊರತುಪಡಿಸಿದರೆ ಉಳಿದೆಲ್ಲ ಸಂದರ್ಭಗಳಲ್ಲಿ ಪ್ರಾದೇಶಿಕ ಪಕ್ಷಗಳ ರಚನೆಯ ಪ್ರಯತ್ನಗಳು ತಾವಿದ್ದ ಪಕ್ಷದಿಂದ ಅನ್ಯಾಯ-ಅಪಮಾನಕ್ಕೀಡಾದ ಕಾರಣಕ್ಕೆ ಸಿಡಿದು ಹೊರಬಂದ ರಾಜಕೀಯ ನಾಯಕರಿಂದ ನಡೆದುದು.
ರಾಜ್ಯದ ಹಿತಕ್ಕೆ ಆಗಿರುವ ಅನ್ಯಾಯ ಇಲ್ಲವೇ ರಾಜ್ಯದ ಜನರಿಗೆ ಆಗಿರುವ ಅಪಮಾನಕ್ಕಲ್ಲ ಎನ್ನುವುದು ಮುಖ್ಯ ಕಾರಣ. ಅರಸು, ಬಂಗಾರಪ್ಪ, ದೇವೇಗೌಡ, ಹೆಗಡೆ, ಸಿದ್ದರಾಮಯ್ಯ- ಈ ಎಲ್ಲರ ವಿಷಯದಲ್ಲಿಯೂ ಇದು ಸತ್ಯ.
ಇದಕ್ಕೆ ಎರಡು ಅಪವಾದಗಳೆಂದರೆ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರು ರೈತಸಂಘದ ರಾಜಕೀಯ ಮುಖವಾಗಿ ಕಟ್ಟಿದ `ಕನ್ನಡ ನಾಡು~ ಮತ್ತು ಸಾಹಿತಿ ಪಿ.ಲಂಕೇಶ್ ಅವರು ವೈಯಕ್ತಿಕ ರಾಜಕೀಯ ಪ್ರಯೋಗದ ರೀತಿಯಲ್ಲಿ ಕಟ್ಟಿದ `ಪ್ರಗತಿರಂಗ~.
ಈ ಎರಡೂ ಪ್ರಯತ್ನಗಳಿಗೆ ರಾಜ್ಯದ ಎಲ್ಲ ಜನವರ್ಗಗಳ ಪ್ರಾತಿನಿಧಿಕ ಬೆಂಬಲವೂ ಇರದಿದ್ದ ಕಾರಣ ಅವುಗಳು ಕೂಡಾ ವಿಫಲ ಪ್ರಯೋಗಗಳಾಗಿ ಕಣ್ಣುಮುಚ್ಚಿದವು.
ಭಾಷೆ-ಪ್ರದೇಶಕ್ಕೆ ಸಂಬಂಧಿಸಿದಂತೆ ಅಂಧರಾಗಿ ಯೋಚಿಸದ ಮತ್ತು ಅತಿ ಎನಿಸುವಷ್ಟು ಉದಾರಿಗಳಾಗಿರುವ ಕನ್ನಡಿಗರ ಸ್ವಭಾವವೂ ಪ್ರಾದೇಶಿಕ ಪಕ್ಷದ ರಾಜಕಾರಣಕ್ಕೆ ವಿರುದ್ಧವಾಗಿದೆ.
ದುಡುಕು ಸ್ವಭಾವದವರಂತೆ ಕಾಣುವ ಬಿ.ಎಸ್.ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ರಚನೆಯ ಪ್ರಶ್ನೆ ಬಂದಾಗೆಲ್ಲ ಅಚ್ಚರಿ ಮೂಡುವಷ್ಟು ಎಚ್ಚರಿಕೆಯಿಂದ ವರ್ತಿಸುತ್ತಾ ಬಂದಿರಲು ಇದೂ ಕಾರಣ ಇರಬಹುದು.
ಈಗಲೂ ಅವರ ಸುತ್ತ ಇರುವ ಸಚಿವರು ಮತ್ತು ಸಂಸದರು `ಒಂದು ಕೈ ನೋಡಿಯೇ ಬಿಡುವ~ ಎಂದು ತೊಡೆ ತಟ್ಟುತ್ತಿದ್ದರೂ ಯಡಿಯೂರಪ್ಪನವರು ತಾನಿರುವ ಪಕ್ಷದ ಬಗ್ಗೆ ತನ್ನ ಬದ್ಧತೆಯನ್ನು ಸಾರುತ್ತಾ ಆ  ನಿರ್ಧಾರವನ್ನು ಉಪಾಯದಿಂದಲೇ ಮುಂದೂಡುತ್ತಾ ಬಂದಿದ್ದಾರೆ.
ಹಿಂದಿನ ಕೆಲವು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಅವರು ಕಾಂಗ್ರೆಸ್ ಮತ್ತು ಜೆಡಿ (ಎಸ್) ಪಕ್ಷದ ಜತೆ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದರೆಂಬ ಗಾಳಿಸುದ್ದಿ ಹರಡಿತ್ತೇ ಹೊರತು ಪ್ರಾದೇಶಿಕ ಪಕ್ಷ ರಚನೆಯ ಆಲೋಚನೆ ಗಾಳಿಯಲ್ಲಿಯೂ ತೇಲಿ ಬಂದಿರಲಿಲ್ಲ.

ಈಗಲೂ ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಬಹುದೆಂಬ ಸುದ್ದಿಯೇ ಹರಿದಾಡುತ್ತಿದೆ.ಆದರೆ ಬಿ.ಎಸ್.ಯಡಿಯೂರಪ್ಪನವರು ಪ್ರಾದೇಶಿಕ ಪಕ್ಷವನ್ನು ಕಟ್ಟಿದರೆ ಅವರದ್ದೂ ಸೇರಿದಂತೆ ಹಲವರ ಸಮಸ್ಯೆಗಳು ಏಕಕಾಲಕ್ಕೆ ಪರಿಹಾರ ಕಾಣಬಹುದು.
ಪಕ್ಷದಿಂದ ತಮಗೆ ಅನ್ಯಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಸಂಕಟ ಪಡುತ್ತಿದ್ದರೆ, ಇವರನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಅವರ ಪಕ್ಷದ ನಾಯಕರು ತೊಳಲಾಡುತ್ತಿದ್ದಾರೆ. ಈ `ಕೊಡೆ-ಬಿಡೆ~ಗಳ ಬಿಕ್ಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ರಾಜಕೀಯ ಅತಂತ್ರದಿಂದ ರಾಜ್ಯದ ಜನ ಬೇಸತ್ತುಹೋಗಿದ್ದಾರೆ.
ಎಲ್ಲರ ಸಂಕಟಗಳ ನಿವಾರಣೆಗೆ ಇರುವ ಏಕೈಕ ಪರಿಹಾರ ಎಂದರೆ ಭಾರತೀಯ ಜನತಾ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಗೌರವಯುತವಾಗಿ ಪಕ್ಷದಿಂದ ಬೀಳ್ಕೊಟ್ಟು ಪ್ರಾದೇಶಿಕ ಪಕ್ಷ ಕಟ್ಟಲು ಅವರಿಗೆ ದಾರಿ ಮಾಡಿಕೊಡುವುದು.
ಇದರಿಂದ ಎಲ್ಲರ ಸಮಸ್ಯೆ ಪರಿಹಾರವಾಗುತ್ತದೆ. ಒಂದೊಮ್ಮೆ ಯಡಿಯೂರಪ್ಪನವರ ಪ್ರಾದೇಶಿಕ ಪಕ್ಷ ಯಶಸ್ಸು ಕಂಡರೆ ರಾಜ್ಯದ ಬಹುದಿನಗಳ ಕನಸೊಂದು ಈಡೇರಿದಂತಾಗುತ್ತದೆ. ಯಶಸ್ಸು ಕಾಣದೆ ಇದ್ದರೆ ಅವರು ತಮಗಿದೆ ಎಂದು ತಿಳಿದುಕೊಂಡಿರುವ ಜನಬೆಂಬಲದ ಬಗೆಗಿನ ಭ್ರಮೆಗಳಾದರೂ ಹರಿದುಹೋಗುತ್ತವೆ.
ಇದರಿಂದ ಅವರಿಗೆ, ಪಕ್ಷಕ್ಕೆ ಮತ್ತು ಜನತೆಗೆ ಎಲ್ಲರಿಗೂ ನೆಮ್ಮದಿ. ಇಲ್ಲಿಯ ವರೆಗೆ ಪ್ರಾದೇಶಿಕ ಪಕ್ಷ ಕಟ್ಟಲೆತ್ನಿಸಿದ ಹಿರಿಯ ರಾಜಕೀಯ ನಾಯಕರು ಕಲಿತದ್ದು ಇದೇ ಪಾಠ ಅಲ್ಲವೇ? ಈ ಪಾಠ ಯಡಿಯೂರಪ್ಪನವರ ಹಳೆಯ ಸಹೋದ್ಯೋಗಿ ಶ್ರಿರಾಮಲು ಅವರಿಗೂ ಅನ್ವಯವಾಗುತ್ತದೆ.

Monday, December 12, 2011

ಬಳ್ಳಾರಿ ರಿಪಬ್ಲಿಕ್ ವಿಸ್ತರಣೆಗೆ ಶ್ರೀರಾಮುಲು ನಾಯಕತ್ವ?

ಭಾರತದಲ್ಲಿ ಜಾತ್ಯತೀತ ನಾಯಕರಾಗುವುದು ಬಹಳ ಸುಲಭದ ಕೆಲಸ. ಮೊದಲು ಬಿಜೆಪಿಯಲ್ಲಿದ್ದು ಜಾತ್ಯತೀತರನ್ನೆಲ್ಲ ವಿರೋಧಿಸಬೇಕು, ನಂತರ ಆ ಪಕ್ಷವನ್ನು ವಿರೋಧಿಸಿ ಹೊರಗೆ ಬರಬೇಕು. ಅಲ್ಲಿಗೆ ಅವರು ಪ್ರಶ್ನಾತೀತ ಜಾತ್ಯತೀತ ನಾಯಕರು.
ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದ ರಾಜಕಾರಣದಲ್ಲಿ ನಮ್ಮ ಹಲವಾರು ತಥಾಕಥಿತ ಸೆಕ್ಯುಲರ್ ನಾಯಕರ ನಡವಳಿಕೆಯನ್ನು ಗಮನಿಸಿದರೆ ಅದರಲ್ಲಿ ಇಂತಹ ಆತ್ಮವಂಚನೆಯ ರಾಜಕೀಯವನ್ನು ಕಾಣಬಹುದು.
ಗುಜರಾತ್‌ನ  `ಕೋಮುವಾದಿ~ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎದುರಾಗಿ ಕಾಂಗ್ರೆಸ್ ತಂದು ನಿಲ್ಲಿಸಿದ್ದು ಶಂಕರ್‌ಸಿಂಗ್ ವಘೇಲಾ ಎಂಬ ಬಿಜೆಪಿಯ ಮಾಜಿ ನಾಯಕನನ್ನು.

ಮಹಾರಾಷ್ಟ್ರದಲ್ಲಿ ಬಾಳ ಠಾಕ್ರೆ ಮತ್ತು ಕುಟುಂಬಕ್ಕೆ ಸವಾಲು ಹಾಕುತ್ತಿರುವವರು ಈಗ ಕಾಂಗ್ರೆಸ್‌ನಲ್ಲಿರುವ ಶಿವಸೇನೆಯ ಮಾಜಿ ನಾಯಕ ಸಂಜಯ್ ನಿರುಪಮ್. ಗುಜರಾತ್, ಮಹಾರಾಷ್ಟ್ರಗಳಲ್ಲಿ ಈಗಲೂ ಈ ವಲಸೆ ನಡೆಯುತ್ತಲೇ ಇದೆ.

ಇಷ್ಟು ಮಾತ್ರವಲ್ಲ, ಈಗಿನ ಜಾತ್ಯತೀತರ ಶಿಬಿರದಲ್ಲಿರುವ ಮಾಯಾವತಿ, ಎಂ.ಕರುಣಾನಿಧಿ, ಚಂದ್ರಬಾಬು ನಾಯ್ಡು, ನವೀನ್ ಪಟ್ನಾಯಕ್, ರಾಮ್‌ವಿಲಾಸ್ ಪಾಸ್ವಾನ್, ಎಚ್.ಡಿ.ಕುಮಾರಸ್ವಾಮಿ ಮೊದಲಾದವರೆಲ್ಲರೂ ಬಿಜೆಪಿಯ `ಕೋಮುವಾದದ ರಾಜಕೀಯ~ದಲ್ಲಿ ಮುಳುಗಿ ಎದ್ದು ಬಂದವರೇ ಆಗಿದ್ದಾರೆ.
ಇವರಲ್ಲಿ ಯಾರೂ ಕೂಡಾ ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿ ಬೀಳಲಾರರು ಎಂಬ ಬಗ್ಗೆ ಖಾತರಿ ಇಲ್ಲ. ಸದ್ಯಕ್ಕೆ ಇವರೆಲ್ಲ ಜಾತ್ಯತೀತರು. ಈ ಗುಂಪಿಗೆ ಕರ್ನಾಟಕದ ಕೊಡುಗೆ ಬಳ್ಳಾರಿಯ ಶ್ರಿರಾಮುಲು.
ಬಳ್ಳಾರಿ ಉಪಚುನಾವಣೆಯ ಗೆಲುವಿನಲ್ಲಿ ಕೆಲವರು ಸೆಕ್ಯುಲರ್ ನಾಯಕನೊಬ್ಬ ಉದಯವನ್ನು, ಇನ್ನು ಕೆಲವರು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಭಾಗ್ಯವಿಧಾತನ ಅವತಾರವನ್ನು ಕಾಣತೊಡಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾತ್ಯತೀತ ಜನತಾದಳಕ್ಕೆ ಶ್ರಿರಾಮುಲು ಅವರನ್ನು ಸ್ವಾಗತಿಸಲು ಆರತಿತಟ್ಟೆ ಹಿಡಿದುಕೊಂಡು ಕಾಯುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯೇತರ `ಅಹಿಂದ~ ನಾಯಕರು ಬಿಜೆಪಿಯ `ಲಂಕೆಯನ್ನು ಧ್ವಂಸ~ ಮಾಡಲು ಹೊರಟಿರುವ ಶ್ರಿರಾ(ಮ)ಮುಲು ಸೇನೆಗೆ ಭರ್ತಿಯಾಗಲು ಸರತಿಯ ಸಾಲಲ್ಲಿ ನಿಂತಿದ್ದಾರೆ. ರಾಜ್ಯದ ಸೆಕ್ಯುಲರ್  ಮತ್ತು `ಅಹಿಂದ~ ನಾಯಕರ ಸದ್ಯದ ಕಣ್ಮಣಿ ಶ್ರಿರಾಮುಲು.
ಬಿಜೆಪಿಯ ಸಂಗದಲ್ಲಿದ್ದ ರಾಷ್ಟ್ರೀಯ ನಾಯಕರು ಅದರಿಂದ ಹೊರಗೆ ಬಂದಾಗ ಹೇಳಿಕೊಳ್ಳಲಿಕ್ಕಾದರೂ ಸರಿಯಾದ ಕಾರಣಗಳನ್ನು ಇಟ್ಟುಕೊಂಡಿದ್ದರು. ಶ್ರಿರಾಮುಲು ಬಿಜೆಪಿ ತೊರೆಯಲು ಏನು ಕಾರಣ? ಹಿಂದಿನ ಮೂರು ವರ್ಷಗಳಲ್ಲಿ ನಡೆಸದ ಕೋಮುವಾದಿ ಚಟುವಟಿಕೆಗಳನ್ನು ಬಿಜೆಪಿ ಕಳೆದೆರಡು ತಿಂಗಳಲ್ಲಿ ನಡೆಸಿದೆಯೇ?
ಹಿಂದುಳಿದ ಜಾತಿ ಜನರಿಗೆ ಇತ್ತೀಚೆಗೆ ಏನಾದರೂ ಅನ್ಯಾಯ ಮಾಡಿದೆಯೇ? ದಲಿತರ ಮೇಲೆ ದೌರ್ಜನ್ಯ ಪ್ರಾರಂಭಿಸಿದೆಯೇ?  ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಪ್ರಾರಂಭ ಮಾಡಿದ ಮೊದಲ ಕೆಲಸ ಹಿಂದುಳಿದ ವರ್ಗಗಳ ಆಯೋಗದ ಮೇಲೆ ದಾಳಿ.

ಅದರ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕನಾಥ್ ಅವರನ್ನು ಕಿತ್ತುಹಾಕಲು ನಿರಂತರವಾಗಿ ಅದು ಪ್ರಯತ್ನ ನಡೆಸಿತು. ರಾಜ್ಯದಲ್ಲಿ ಜಾತಿಗಣತಿ ನಡೆಸಲಿಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದರೂ ಆ ಕೆಲಸ ಪ್ರಾರಂಭಿಸಲು ಅವಕಾಶವನ್ನೇ ನೀಡಲಿಲ್ಲ. ದ್ವಾರಕಾನಾಥ್ ಅವರು ಕಷ್ಟಪಟ್ಟು ತಯಾರಿಸಿದ ವರದಿಯ ಗತಿ ಏನಾಯಿತೋ ಗೊತ್ತಿಲ್ಲ.
ಇವೆಲ್ಲವೂ ನಡೆಯುತ್ತಿರುವಾಗ ಶ್ರಿರಾಮುಲು ಬಳ್ಳಾರಿ ಮತ್ತು ಬೆಂಗಳೂರು ನಡುವೆ ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಾ ಬಿಜೆಪಿಯಲ್ಲಿಯೇ ಇದ್ದರಲ್ಲವೇ? ಅವರೆಂದಾದರೂ ಇದರ ವಿರುದ್ಧ ದನಿ ಎತ್ತಿದ್ದರೇ? ಈಗ ಪ್ರತಿನಿಧಿಸಲು ಹೊರಟ `ಅಹಿಂದ~ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ಕೊಡಲು ಮುಂದಾಗಿದ್ದರೇ?

ಕನಿಷ್ಠ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಡೆಸ್ನಾನದ ಮೇಲೆ ಹೇರಲಾದ ನಿಷೇಧವನ್ನು ಬಿಜೆಪಿ ಸರ್ಕಾರ ವಾಪಸು ಪಡೆದುದನ್ನಾದರೂ ಶ್ರೀರಾಮುಲು ಎಲ್ಲಾದರೂ ವಿರೋಧಿಸಿದ್ದಾರೆಯೇ?
ಹಾಗಿದ್ದರೆ ಅವರು ಬಿಜೆಪಿ ತೊರೆಯಲು ಏನು ಕಾರಣ? ಶ್ರಿರಾಮುಲು ಅವರೇ ಹೇಳಿಕೊಂಡ ಕಾರಣ- ಲೋಕಾಯುಕ್ತ ವರದಿಯಲ್ಲಿನ ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡ ನಂತರ ಅವರನ್ನು ಸಂಪುಟದಿಂದ ಕೈಬಿಟ್ಟದ್ದು.

ಇದರಿಂದ ಜಾತ್ಯತೀತ ಮೌಲ್ಯದ ಮಾನಭಂಗ ಹೇಗಾಯಿತೋ, ರಾಜ್ಯದ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ ಸ್ವಾಭಿಮಾನಕ್ಕೆ ಹೇಗೆ ಧಕ್ಕೆಯಾಯಿತೋ, ಅವರು ಇದ್ದಕ್ಕಿದ್ದಂತೆ ವಾಲ್ಮೀಕಿ, ಏಕಲವ್ಯ, ಕರ್ಣ ಮೊದಲಾದ ಪುರಾಣಪುರುಷರ ಅಪರವತಾರ ಹೇಗಾದರೋ ಗೊತ್ತಾಗುತ್ತಿಲ್ಲ.
ಒಂದೊಮ್ಮೆ ಶ್ರಿರಾಮುಲು ಅವರ ಈಗಿನ ಜಾತ್ಯತೀತ ರಾಜಕೀಯ ನಿಲುವು ಪ್ರಾಮಾಣಿಕವಾದುದು ಎಂದೇ ತಿಳಿದುಕೊಂಡರೂ ಅವರ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೇಗೆ ಮನ್ನಿಸಲು ಸಾಧ್ಯ?

ನಗ್ನ ಸತ್ಯ ಏನೆಂದರೆ ಶ್ರಿರಾಮುಲು ಅವರು ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಮೊದಲಾದವರಂತೆ ಒಬ್ಬ ಕಳಂಕಿತರು, ಭ್ರಷ್ಟಾಚಾರದ ಆರೋಪಗಳನ್ನು ತಲೆಮೇಲೆ ಹೊತ್ತುಕೊಂಡವರು.
ಬಿಜೆಪಿಯನ್ನು ತೊರೆದು ಹೊರಬಂದ ಮಾತ್ರಕ್ಕೆ ಇವರಿಗೆ ಮೆತ್ತಿಕೊಂಡ ಭ್ರಷ್ಟಾಚಾರದ ಕಳಂಕ ಏಕಾಏಕಿ ತೊಡೆದುಹೋಗಲಾರದು. ಬಳ್ಳಾರಿಯ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿದ ಮತ್ತು ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿದ ಆರೋಪದಿಂದ ಮುಕ್ತಿ ಪಡೆಯಲಾರರು.
ದೇಶದ ಜಾತ್ಯತೀತ ಮತ್ತು `ಅಹಿಂದ~ ನಾಯಕರು ಕೂಡಾ ಮಾಡುತ್ತಾ ಬಂದಿರುವುದು ಇದೇ ತಪ್ಪನ್ನು. ಲಾಲುಪ್ರಸಾದ್ ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗೆಲ್ಲ ಅದು ಜಾತ್ಯತೀತ ನಾಯಕನೊಬ್ಬನನ್ನು ದಮನಮಾಡುವ ಕೋಮುವಾದಿಗಳ ಸಂಚು ಎಂದೇ ಆರೋಪಿಸುತ್ತಿದ್ದರು.

ಮುಲಾಯಂ ಸಿಂಗ್, ಮಾಯಾವತಿ ಸೇರಿದಂತೆ ಬಹುತೇಕ ಸೆಕ್ಯುಲರ್ ಭ್ರಷ್ಟರು  ಒಂದು ಸಂದರ್ಭದಲ್ಲಿ ತಮ್ಮ ಹುಳುಕನ್ನು ಬಚ್ಚಿಡಲು ಈ ಆರೋಪ ಮಾಡುತ್ತಾ ಬಂದಿದ್ದಾರೆ. ಇದನ್ನು ನೋಡಿದರೆ ಕೋಮುವಾದ ಮಾತ್ರವಲ್ಲ, ಭ್ರಷ್ಟಾಚಾರ ಹೆಚ್ಚಾಗಲು ಕೂಡಾ ಬಿಜೆಪಿ ಕಾರಣ ಎನ್ನಬಹುದೇನೋ?

ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ಕರ್ನಾಟಕ ಕೋಮುವಾದದ ಬೆಂಕಿಯಲ್ಲಿ ಸುಟ್ಟುಹೋಗಲಿದೆ ಎಂಬ ಕಾರಣವನ್ನೇ ತನ್ನ ವಚನಭಂಗಕ್ಕೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಲ್ಲವೇ? ಆ ಮೂಲಕ ಜಾತ್ಯತೀತನೆಂಬ ಕಿರೀಟವನ್ನು ಮರಳಿ ಮುಡಿಗೇರಿಸಿಕೊಂಡದ್ದಲ್ಲವೇ?
ಭ್ರಷ್ಟಾಚಾರದ ಭಾಗವಾಗಿರುವ ಅಕ್ರಮ ಗಣಿಗಾರಿಕೆಯಿಂದ ಪ್ರಜ್ಞಾಪೂರ್ವಕವಾಗಿ ದೂರ ಸರಿಯುವ ಪಶ್ಚಾತ್ತಾಪದ ಆಶಯವನ್ನು ತೋರಿಕೆಗಾಗಿಯಾದರೂ ಶ್ರಿರಾಮುಲು ವ್ಯಕ್ತಪಡಿಸಿದ್ದರೆ ಅವರ ಹಿಂದೆ ಹೊರಟವರಿಗೆ ಕನಿಷ್ಠ ಗೌರವವಾದರೂ ಇರುತ್ತಿತ್ತು.

ಈಗಲೂ ಶ್ರಿರಾಮುಲು ಅವರ ನಿಷ್ಠೆ ತನ್ನ ಮತದಾರರರು ಇಲ್ಲವೇ ಬೆಂಬಲಿಗರಾದ ಜಾತ್ಯತೀತ ನಾಯಕರ ಮೇಲೆ ಅಲ್ಲ, ಅದು ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿ ಜನಾರ್ದನ ರೆಡ್ಡಿಯವರ ಮೇಲೆ.
ಚುನಾವಣೆಯಲ್ಲಿ ಗೆದ್ದ ಮರುಕ್ಷಣದಲ್ಲಿ ಅವರು ಸ್ಮರಿಸಿಕೊಂಡದ್ದು ಅಂಬೇಡ್ಕರ್ ಇಲ್ಲವೇ ದೇವರಾಜ ಅರಸು ಅವರನ್ನಲ್ಲ. ಈ ಭೂಮಿ ಇರುವಷ್ಟು ದಿನ ರಾಜ್ಯದ ಹಿಂದುಳಿದ ಜಾತಿ ಜನ ಕೃತಜ್ಞರಾಗಬೇಕಾಗಿರುವ ಲಕ್ಷ್ಮಣ ಜಿ. ಹಾವನೂರು ಅವರನ್ನೂ ಅಲ್ಲ. ಅವರು ಸ್ಮರಿಸಿಕೊಂಡದ್ದು ಜನಾರ್ದನ ರೆಡ್ಡಿಯವರನ್ನು.

`ಜನಾರ್ದನ ರೆಡ್ಡಿಯವರ ಸಲಹೆಯನ್ನು ಪಡೆದು ನನ್ನ ಮುಂದಿನ ರಾಜಕೀಯದ ನಿರ್ಧಾರ ಕೈಗೊಳ್ಳುತ್ತೇನೆ~ ಎಂದಲ್ಲವೇ ಚುನಾವಣೆಯಲ್ಲಿ ಗೆಲುವಿನ ಮರುಕ್ಷಣದಲ್ಲಿ ಶ್ರಿರಾಮುಲು ಹೇಳಿದ್ದು.
`ಸೆರೆಮನೆಯಲ್ಲಿರುವ ಒಬ್ಬ ವಿಚಾರಣಾಧೀನ ಕೈದಿಯ ಮಾರ್ಗದರ್ಶನದಲ್ಲಿ ರಾಜಕೀಯ ಮಾಡುತ್ತೇನೆ~ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಅಕ್ರಮ ಗಣಿಗಾರಿಕೆಯ ಆರೋಪಿ ಶ್ರಿರಾಮುಲು ಅವರನ್ನು ನಾಯಕನೆಂದು ಒಪ್ಪಿಕೊಳ್ಳುವುದಾದರೆ, ನಾಳೆ ಬಿಜೆಪಿಯ ಶಾಸಕರು ಕೂಡಿ ಭ್ರಷ್ಟಾಚಾರದ ಆರೋಪಗಳನ್ನು ಇನ್ನೂ ಎದುರಿಸುತ್ತಿರುವ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಯಾವ ನೈತಿಕತೆಯ ಮೇಲೆ ವಿರೋಧಿಸಲು ಸಾಧ್ಯ?
`ಯಾವ ರಾಜಕಾರಣಿ ಭ್ರಷ್ಟನಾಗಿರಲಿಲ್ಲ~ ಎಂದು ಶ್ರಿರಾಮುಲು ಅಭಿಮಾನಿಗಳು ಕೇಳಬಹುದು. ಹಿಂದುಳಿದ ವರ್ಗಗಳ ನಾಯಕನೆಂದು ಹೇಳುವ ದೇವರಾಜ ಅರಸು ಅವರು ಭ್ರಷ್ಟಾಚಾರ ನಡೆಸಿಲ್ಲವೇ ಎಂದು ಉಡಾಫೆಯಾಗಿ ಕೇಳಿ ಬಾಯಿಮುಚ್ಚಿಸುವ ಪ್ರಯತ್ನವನ್ನೂ ಕೆಲವರು ಮಾಡುತ್ತಿದ್ದಾರೆ.
ಜಾತಿಯ ಬಲ ಇಲ್ಲದ ಅರಸು ಭ್ರಷ್ಟಾಚಾರಕ್ಕೆ ಕೈ ಹಾಕಬೇಕಾಗಿ ಬಂದದ್ದು ಭ್ರಷ್ಟ ಶಾಸಕರ ಬೆಂಬಲವನ್ನು ಉಳಿಸಿಕೊಳ್ಳಲಿಕ್ಕಾಗಿ ಮತ್ತು ಅದರ ಮೂಲಕ ಗಳಿಸುವ ರಾಜಕೀಯ ಅಧಿಕಾರದಿಂದ ಭೂ ಸುಧಾರಣೆ, ಮೀಸಲಾತಿ, ಜೀತಪದ್ಧತಿ ನಿರ್ಮೂಲನೆ, ಋಣ ಪರಿಹಾರ, ಮಲಹೊರುವ ಪದ್ಧತಿ ನಿಷೇಧದಂತಹ ಸಾಮಾಜಿಕ ನ್ಯಾಯದ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಲಿಕ್ಕಾಗಿ.

ಆ ಶಾಸಕರು (ಅವರಲ್ಲಿ ಹೆಚ್ಚಿನವರು ಹಿಂದುಳಿದ ಜಾತಿಯವರು) ಭ್ರಷ್ಟರಾಗದೆ ಇದ್ದಿದ್ದರೆ ಅರಸು ಖಂಡಿತ ಭ್ರಷ್ಟರಾಗುತ್ತಿರಲಿಲ್ಲ. ಅರಸು ವೈಯಕ್ತಿಕವಾಗಿ ಭ್ರಷ್ಟರಾಗಿದ್ದರು ಎನ್ನುವುದಕ್ಕೆ ಗ್ರೋವರ್ ಆಯೋಗಕ್ಕೂ ಪುರಾವೆಗಳು ಸಿಗಲಿಲ್ಲ ಎನ್ನುವುದನ್ನು ನಮ್ಮ ಅನೇಕ ಇತಿಹಾಸಕಾರರು ಮತ್ತು ರಾಜಕೀಯ ವಿಶ್ಲೇಷಕರು ಮರೆತೇ ಬಿಡುತ್ತಾರೆ.

ನಿಜ, ರಾಜಕಾರಣಿಗಳು ಆಗಲೂ ಭ್ರಷ್ಟರಾಗಿದ್ದರು, ಈಗಲೂ ಅದಕ್ಕೆ ಹೊರತಲ್ಲ.. ಆದರೆ, ಅವರು ಭ್ರಷ್ಟರಾದರೆ ಅವರನ್ನು ನಿವಾರಿಸಿಕೊಳ್ಳಲು ಚುನಾವಣೆಯ ಅಸ್ತ್ರ ಇದೆ. ಆದರೆ ಈ ಅಸ್ತ್ರ ಪ್ರಯೋಗ ಮಾಡಬೇಕಾದ ಮತದಾರರೇ ಭ್ರಷ್ಟರಾದರೇ?
ಕರ್ನಾಟಕ ರಾಜಕಾರಣಕ್ಕೆ `ಬಳ್ಳಾರಿ ರಿಪಬ್ಲಿಕ್~ನ ಮಹಾ ಕೊಡುಗೆ ಇದು. ಅದು ಬಳ್ಳಾರಿ ಮಾತ್ರವಲ್ಲ, ರಾಜ್ಯದ ಮತದಾರರನ್ನೇ ಭ್ರಷ್ಟಗೊಳಿಸಲು ಹೊರಟಿದೆ. ಚುನಾವಣೆ ಕಾಲದಲ್ಲಿ ಹಿಂದೆಯೂ ಹಣ-ಹೆಂಡ ಹಂಚಲಾಗುತ್ತಿತ್ತು.

ಆದರೆ, ಅದನ್ನು ಕೊಟ್ಟವರಿಗೆಲ್ಲ, ಅದನ್ನು ಪಡೆದವರು ಮತಹಾಕುತ್ತಾರೆ ಎನ್ನುವ ಖಾತರಿ ಇರಲಿಲ್ಲ. ಯಾಕೆಂದರೆ ಆ ಆಮಿಷಗಳು ಒಂದು ದಿನದ ಮೋಜು-ಜೂಜಿಗಷ್ಟೇ ಸಾಕಾಗುತ್ತಿತ್ತು. ಆದರೆ, ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ಮತದಾರರಿಗೆ ಒಡ್ಡಲಾಗುತ್ತಿರುವ ಆಮಿಷಗಳಿಗೆ ಮಿತಿಯೇ ಇಲ್ಲದಂತಾಗಿದೆ.

ಬಳ್ಳಾರಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶವೊಂದನ್ನು ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಚುನಾವಣಾ ಕಾಲದಲ್ಲಿ ಈ ರೀತಿಯ ಹಣದ ಹೊಳೆ ಹರಿದಿಲ್ಲ. `ಆಪರೇಷನ್ ಕಮಲ~ ಎಂಬ ಅನೈತಿಕ ರಾಜಕಾರಣವೇ `ಬಳ್ಳಾರಿ ರಿಪಬ್ಲಿಕ್~ನ ಕಪ್ಪುಹಣದಿಂದಲೇ ಪ್ರಾರಂಭವಾಗಿದ್ದಲ್ಲವೇ?
ಕಳೆದ ವಿಧಾನಸಭಾ ಚುನಾವಣಾ ಕಾಲದಲ್ಲಿ ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರೊಬ್ಬರು ಮನೆಕೆಲಸದಾಕೆ ಬರುತ್ತಿಲ್ಲ ಎಂದು ಒದ್ದಾಡುತ್ತಿದ್ದರು. ಚುನಾವಣಾ ಕಾಲದಲ್ಲಿ ಹತ್ತು ದಿನ ರಜೆ ಹಾಕಿ ಆಕೆ ಪ್ರಚಾರಕ್ಕೆ ಹೋಗಿದ್ದಳಂತೆ.

ಮತದಾನದ ಮರುದಿನ ಬಂದ ಆಕೆ `ಹತ್ತು ದಿನಗಳಲ್ಲಿ ನಾವು ನಾಲ್ಕು ಮಂದಿ 30 ಸಾವಿರ ರೂಪಾಯಿ ದುಡಿದೆವು, ಇನ್ನು ಮುಂದೆಯೂ ಅಣ್ಣಾವ್ರ ದುಡ್ಡು ಕೊಡುತ್ತೇನೆ ಎಂದಿದ್ದಾರೆ ~ ಎಂದು ಹೇಳಿದಳಂತೆ. ಅವಳಂತಹವರ ನಂಬಿಕೆಯೇನು ಹುಸಿಯಾಗಿಲ್ಲ.
ಬಳ್ಳಾರಿ ಜಿಲ್ಲೆಯನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸುವವರು ಕೇವಲ ಶಾಸಕರಲ್ಲ, ಅವರೆಲ್ಲ ಆಧುನಿಕ `ರಾಬಿನ್ ಹುಡ್~ಗಳು. ಮಗಳ ಮದುವೆಗೆ, ಮಗನ ಓದಿಗೆ, ಗಂಡನ ಕಾಯಿಲೆಗೆ ದುಡ್ಡು ಕೇಳಲು ಹೋದರೆ ಸಾಮಾನ್ಯವಾಗಿ ಅವರು ಬರಿಗೈಯಲ್ಲಿ ಹಿಂದಕ್ಕೆ ಕಳುಹಿಸುವುದಿಲ್ಲ.
ರಾಜ್ಯದ ಬೊಕ್ಕಸಕ್ಕೆ ದ್ರೋಹವೆಸಗಿ ಅಕ್ರಮ ಗಣಿಗಾರಿಕೆಯಿಂದ ಸಂಪಾದನೆ ಮಾಡಿದ ನೂರಾರು ಕೋಟಿ ರೂಪಾಯಿ ಹಣದಲ್ಲಿ ಒಂದಷ್ಟು ಸಾವಿರ ರೂಪಾಯಿಗಳನ್ನು ನಮಗೆ ಹಂಚಲಾಗುತ್ತಿದೆ ಎಂದು ಈ ಮುಗ್ಧ ಮತದಾರರಿಗೆ ಗೊತ್ತಿಲ್ಲ.

ಗೊತ್ತಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. `ರಸ್ತೆ, ಶಾಲೆ, ಆಸ್ಪತ್ರೆ ಯಾರಿಗೆ ಬೇಕ್ರಿ? ಅವರು ಕೊಟ್ಟಿದ್ದಾರೆ, ನೀವೇನು ಕೊಡ್ತೀರಿ?~ ಎಂದು ಮತದಾರರೇ ಕೈಚಾಚಿ ನಿಂತರೆ, ಅಲ್ಲಿಗೆ ಪ್ರಜಾಪ್ರಭುತ್ವದ ತಿಥಿ. ಇದನ್ನೇ `ಬನಾನ ರಿಪಬ್ಲಿಕ್~ ಎನ್ನುವುದು.
ರಾಜ್ಯದ ಜಾತ್ಯತೀತ ಮತ್ತು ಅಹಿಂದ ನಾಯಕರು ಈಗ `ಬನಾನ ರಿಪಬ್ಲಿಕ್~ನ ಸಾಮ್ರಾಜ್ಯವನ್ನು `ಸ್ವಾಭಿಮಾನಿ ನಾಯಕ~ನ ನೇತೃತ್ವದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸುವ ಅವಸರದಲ್ಲಿದ್ದಾರೆ. ಅವಸರದ ಕೆಲಸ ಯಾವತ್ತೂ ಅಪಘಾತಕ್ಕೆ ದಾರಿ ಎಂದು ಇವರಿಗೆ ಹೇಳುವವರು ಯಾರು?

Monday, December 5, 2011

ರಾಜಕೀಯದ ಎಂಜಲಲ್ಲಿ ಅಮಾಯಕರ ಉರುಳುಸೇವೆ

ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನ ಗೆರೆ ತೀರಾ ತೆಳ್ಳನೆಯದು. ನಂಬಿಕೆಯ ಹಾದಿಯಲ್ಲಿ ಹೋಗುತ್ತಿರುವವರು ತುಸು ಹೆಜ್ಜೆ ತಪ್ಪಿದರೆ ಮೂಢನಂಬಿಕೆಯ ಕಂದಕಕ್ಕೆ ಜಾರಿಬಿಡುವ ಅಪಾಯ ಇದೆ.

ನಂಬಿಕೆ ಪ್ರಜ್ಞಾಪೂರ್ವಕವಾದ ನಡವಳಿಕೆ, ಮೂಢನಂಬಿಕೆ ಪ್ರಜ್ಞೆ ಇಲ್ಲದೆ ಮಾಡಿಕೊಳ್ಳುವ ಅಪಘಾತ. ಆದುದರಿಂದಲೇ ನಂಬಿಕೆ ಎಂದರೆ ಬದುಕು, ಮೂಢನಂಬಿಕೆ ಎಂದರೆ ಒಮ್ಮಮ್ಮೆ  ಸಾವು ಕೂಡಾ.

ನಂಬಿಕೆಯ ಹಾದಿಯಲ್ಲಿ ನಡೆಯುವವರನ್ನು ಮೂಢನಂಬಿಕೆಯ ಗುಂಡಿಗೆ ತಳ್ಳಲು ಕಾಯುತ್ತಿರುವವರು ಎಲ್ಲ ಧರ್ಮಗಳಲ್ಲಿ ಇರುತ್ತಾರೆ, ಹಿಂದೂ ಧರ್ಮದಲ್ಲಿ ಹೊಟ್ಟೆಪಾಡಿಗಾಗಿ ಅಮಾಯಕರ ದಾರಿ ತಪ್ಪಿಸುವ  ಕೆಲಸವನ್ನು ಮಾಡುತ್ತಾ ಬಂದವರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ.
ಖೊಟ್ಟಿ ಜ್ಯೊತಿಷಿಗಳು, ವಂಚಕ ಪೂಜಾರಿಗಳು, ಮಾಟ ಗಾರರು, ಮಂತ್ರವಾದಿಗಳು, ಕೈಮದ್ದು ಹಾಕುವವರು, ತಥಾಕಥಿತ ವಿದ್ವಾಂಸರು -ಇಂತಹವರ ದೊಡ್ಡ ವರ್ಗವೇ ಇದೆ. ಅವರಿಗಿಂತಲೂ ಅಪಾಯಕಾರಿಯಾದ ಹೊಸ ಪೀಳಿಗೆಯೊಂದು ಈಗ ಸೇರಿಕೊಂಡಿದೆ, ಇದು ರಾಜಕಾರಣಿಗಳದ್ದು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವುದು ನಂಬಿಕೆ-ಮೂಢನಂಬಿಕೆಗಳ ನಡುವಿನ ಸಂಘರ್ಷ ಅಲ್ಲವೇ ಅಲ್ಲ, ಅದು ಎಂಜಲು ರಾಜಕೀಯ. ರಕ್ತದ ರುಚಿಹತ್ತಿದ ಹುಲಿಯಂತೆ ಧರ್ಮದ ಹೆಸರಲ್ಲಿ ನಡೆಯುವ ವಿವಾದದ ರಾಜಕೀಯ ಲಾಭದ ರುಚಿ ಏನೆಂದು ಈ `ಎಂಜಲು ರಾಜಕೀಯ~ದಲ್ಲಿ ತೊಡಗಿರುವವರಿಗೆ ಗೊತ್ತಾಗಿಹೋಗಿದೆ.
ಅದಕ್ಕೆ ಹೀಗಾಗುತ್ತಿದೆ. `ಅಯ್ಯ ದಕ್ಷಿಣ ಕನ್ನಡದ ಬುದ್ಧಿವಂತರು ಹೀಗ್ಯಾಕೆ ಮತಾಂಧರಾಗಿ ಹೋದರು? ಎಂದು ಸಾಮಾನ್ಯವಾಗಿ ಅಚ್ಚರಿಪಡುತ್ತಿರುವವರಿಗೆ ಆ ಜಿಲ್ಲೆಯ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದ ಅರಿವು ಸರಿಯಾಗಿಲ್ಲ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 75ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಮೂಲನಿವಾಸಿಗಳಾದ ಕೊರಗರು, ಮಲೆಕುಡಿಯರು, ಬಿಲ್ಲವರು, ಮೊಗವೀರರು, ಬಂಟರು, ಗೌಡರು ಯಾರೇ ಇರಲಿ,  ಅವರ‌್ಯಾರೂ ವೈದಿಕ ಸಂಸ್ಕೃತಿ-ಸಂಪ್ರದಾಯವನ್ನು ಆಚರಣೆ ಮಾಡಿಕೊಂಡು ಬಂದವರಲ್ಲ. ಅವರ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಗುಡ್ಡಗಾಡು ಜನಾಂಗದ ಕೆಲವು ಗುಣಲಕ್ಷಣಗಳಿವೆ.

ಅಲ್ಲಿಯೂ ರಾಮ, ಕೃಷ್ಣ, ಶಿವನ ದೇವಾಲಯಗಳಿವೆ ನಿಜ, ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭೂತದ ಸಾನಗಳು, ನಾಗನ ಬನಗಳು, ಗರೋಡಿಗಳು ಇವೆ.
ಈ ಮೂಲ ನಿವಾಸಿಗಳ `ದೇವರು~ಗಳೇನೇ ಇದ್ದರೂ ಕೋಡ್ದಬ್ಬು, ಜುಮಾದಿ, ಪಂಜುರ್ಲಿ, ನಾಗಬ್ರಹ್ಮ, ಸಿರಿ, ಕೋಟಿ ಚೆನ್ನಯ, ಕಾಂತಬಾರೆ ಬುದಭಾರೆಗಳು. ಈ ಭೂತ-ದೈವ್ವಗಳೆಲ್ಲ ಅನ್ಯಾಯದ ವಿರುದ್ದ ಹೋರಾಡಿ ಹುತಾತ್ಮರಾದ ಹಿಂದಿನ ತಲೆಮಾರುಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರು. 
ಪ್ರತಿ ಊರಿಗೆ ಮಾತ್ರವಲ್ಲ ಪ್ರತಿ ಕುಟುಂಬಕ್ಕೂ ಒಂದು ಭೂತ, ನಾಗ ಇರುತ್ತದೆ. ಕಷ್ಟ ಬಂದಾಗ ಅದಕ್ಕೆ ಹರಕೆಹೊರುತ್ತಾರೆ, ಇಷ್ಟಾರ್ಥ ನೆರವೇರದಿದ್ದಾಗ ಮನೆಯವನಿಗೆ ಬೈದ ಹಾಗೆ ಬೈಯ್ಯುತ್ತಾರೆ, ಫಲಸಿಕ್ಕಿದಾಗ ಉಣ್ಣುವ, ತಿನ್ನುವ, ಉಡುವ ಎಲ್ಲವನ್ನೂ ಅರ್ಪಿಸಿ ಕಣ್ಣುತೇವ ಮಾಡಿಕೊಳ್ಳುತ್ತಾರೆ.
ಈಗ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿಗಳ ರೀತಿ ಈ ಭೂತಗಳು ಯಾವ ಕುಟುಂಬವನ್ನು ಒಡೆದಿಲ್ಲ, ದ್ವೇಷ ಬಿತ್ತಿಲ್ಲ, ಜಗಳ ತಂದು ಹಾಕಿಲ್ಲ. ಅವುಗಳು ನಿಜವಾದ ರಕ್ಷಕರು ಮತ್ತು ಕೌಟುಂಬಿಕ ಸಲಹೆಗಾರರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆಯುವ ಭೂತದ ಕೋಲದ ಕೊನೆಯ ಘಟ್ಟ ಬೆಳಗಿನ ಜಾವ ನಡೆಯುವ ಹರಕೆ ಕಾರ‌್ಯಕ್ರಮ. ಅಲ್ಲಿ ಊರಿನ ಜನ ಬಂದು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತೋಡಿಕೊಂಡು ಭೂತ ನೀಡುವ ಅಭಯದಿಂದ ಪರಿಹಾರ ಪಡೆದುಕೊಳ್ಳುತ್ತಾರೆ.
ಕಾಯಿಲೆ ಬಿದ್ದವರು ಪಂಜುರ್ಲಿ ನೀಡುವ ಪ್ರಸಾದದಿಂದ `ಗುಣಮುಖ~ರಾಗುತ್ತಾರೆ, ಮಕ್ಕಳಾಗದ ದಂಪತಿಗೆ  ಕೋರ‌್ದಬ್ಬು ನೀಡುವ ಕರಿಗಂಧವನ್ನು ತಿಂದ ನಂತರ `ಮಕ್ಕಳಾಗುತ್ತವೆ~, ಮಗಳಿಗೆ ಮದುವೆಯಾಗಲು `ಸಂಬಂಧಕೂಡಿ~ ಬರುತ್ತವೆ.
ಕಚ್ಚಾಡಿಕೊಂಡ ಅಣ್ಣ-ತಮ್ಮಂದಿರು ಭೂತ ನಡೆಸಿದ ಪಂಚಾಯಿತಿಯಿಂದ ಒಂದಾಗುತ್ತಾರೆ, ಪರಊರಿಗೆ ಹೋದ ಮಕ್ಕಳು ಊರಿನ ಭೂತ ಹಾಕಿದ ಒಂದು ಬೆದರಿಕೆಯಿಂದ ಓಡಿ ಬಂದು ತಂದೆ-ತಾಯಿ ಕಾಲು ಹಿಡಿಯುತ್ತಾರೆ.
ಇನ್ನೂ ಬುದ್ಧಿ ಬಲಿಯದೆ ಇದ್ದ ಬಾಲ್ಯದ ದಿನಗಳಲ್ಲಿ ಇದು ಭೂತದ ಕಾರಣೀಕ ಎಂದು ಎಲ್ಲರಂತೆ ನಮ್ಮಂತವಹರೂ ತಿಳಿದುಕೊಂಡಿದ್ದೆವು. ಬುದ್ಧಿ ಬೆಳೆದ ಹಾಗೆ ಇದರ ಹಿಂದಿನ ಗುಟ್ಟುಗಳೆಲ್ಲ ಒಂದೊಂದಾಗಿ ಅರಿವಾಗತೊಡಗಿತ್ತು.
ಈಗಲೂ ಇದು ನಡೆಯುತ್ತಿದೆ. ಆದರೆ ಜನೋಪಕಾರಿಯಾದ ಮತ್ತು ಸಮಾಜಕ್ಕೆ ಅಪಾಯಕಾರಿಯಲ್ಲದ ಇಂತಹ ನಂಬಿಕೆಗಳ ಪೊಳ್ಳುತನವನ್ನು ಯಾರೂ ಪ್ರಶ್ನಿಸಲು ಹೋಗುವುದಿಲ್ಲ. ಯಾವ ವಿಚಾರವಾದಿಯೂ ಬಂದು ಇದನ್ನು ತಡೆಯುವುದಿಲ್ಲ, ಇದನ್ನು ಮೂಢನಂಬಿಕೆ ಎಂದು ಹೀಯಾಳಿಸುವುದಿಲ್ಲ.
ಯಾಕೆಂದರೆ ಅಲ್ಲಿ ಭಕ್ತರ ಶೋಷಣೆ ಇರುವುದಿಲ್ಲ. ಇಷ್ಟೆಲ್ಲ ಸೇವೆಗೆ ಭೂತ ಕೇಳುತಿದ್ದದ್ದು ಏನು? `ಒಂದು ಚೆಂಡು ಮಲ್ಲಿಗೆ~ ಒಂದು ಗೊನೆ ಎಳೆನೀರು, ಒಂದು ಹಾಳೆ ಪಿಂಗಾರ  ಇನ್ನೂ ಹೆಚ್ಚೆಂದರೆ ಇನ್ನೊಂದು ಕೋಲ-ನೇಮದ ಸೇವೆ. ಅಲ್ಲಿ ಶೋಷಣೆ ಇಲ್ಲ, ಯಾರ ಆತ್ಮಗೌರವವನ್ನೂ ಅದು ಕೆಣಕುವುದಿಲ್ಲ. ಭೂತದ ಪಾತ್ರಧಾರಿಯಾದ ದಲಿತ ಸಮುದಾಯಕ್ಕೆ ಸೇರಿದ ಪಂಬದ ಇಲ್ಲವೇ ನಲ್ಕೆಯವನ ಮುಂದೆ ಮೇಲ್ಜಾತಿ-ಕೆಳಜಾತಿ ಎನ್ನದೆ ಎಲ್ಲರೂ ಕೈಮುಗಿದು ತಲೆತಗ್ಗಿಸಿ ನಿಲ್ಲುತ್ತಾರೆ.
ಆದರೆ ಈ ಭೂತದ ಕೋಲ-ನೇಮಗಳು ಕೂಡಾ ಹಿಂದಿನಷ್ಟು ಸರಳವಾಗಿ ಉಳಿದಿಲ್ಲ, ಇವುಗಳು ವಾಣಿಜ್ಯೀಕರಣಗೊಳ್ಳಲು ತೊಡಗಿ ಬಹಳ ದಿನಗಳಾಗಿವೆ. ಪಾಡ್ದನ-ಭಜನೆ ಹಾಡುಗಳಿಗೆ, ತೆಂಬರೆ-ದುಡಿಗಳ ವಾದನಕ್ಕೆ ಹೆಜ್ಜೆ ಹಾಕುತ್ತಿದ್ದ ಭೂತಗಳು ಈಗ ಜನಪ್ರಿಯ ಚಿತ್ರಗೀತೆಗಳಿಗೆ ಕುಣಿಯತೊಡಗಿವೆ.

ವೇಷಭೂಷಣ, ಕೋಲದ ದೊಂಪ, ಅಲಂಕಾರ ಎಲ್ಲವೂ ಬದಲಾಗುತ್ತಾ ಬಂದಿದೆ. ಇದೇ ಹೊತ್ತಿಗೆ ಸರಿಯಾಗಿ  `ಅವಿಭಜಿತ ದಕ್ಷಿಣ ಕನ್ನಡ~ವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡಲು ಹೊರಟವರು ಶೂದ್ರ ಸಮುದಾಯದ ಆರಾಧಾನ ಕೇಂದ್ರಗಳಾದ ಈ ಭೂತ, ದೈವ್ವ, ನಾಗಗಳ ಲೋಕವನ್ನು ಪ್ರವೇಶಿಸಿದ್ದಾರೆ.
ಕೋಲ ನಡೆಯುವ ಸ್ಥಳಗಳಲ್ಲಿ ಭಗವಧ್ವಜಗಳು, ಹಿಂದುಗಳ ಏಕತೆ ಸಾರುವ ಬ್ಯಾನರ್‌ಗಳು ರಾರಾಜಿಸತೊಡಗಿವೆ. ಈಗ  ಭೂತಗಳು ಕೂಡಾ ಒಮ್ಮಮ್ಮೆ ಹಿಂದುಗಳ ಏಕತೆ ಬಗ್ಗೆ ಭಾಷಣ ಮಾಡಿಬಿಡುವುದುಂಟು. ಮುಂಬೈ ಕಡೆಯಿಂದ ಹರಿದುಬರುತ್ತಿರುವ ಹಣದ ಹೊಳೆಯನ್ನು ಬಳಸಿಕೊಂಡು  ಸಾನ-ಗರೋಡಿ, ನಾಗಬನಗಳ ಜೀರ್ಣೋದ್ಧಾರ ನಡೆಯುತ್ತಿದೆ. ಅಮಾಯಕ ಭೂತ, ದೈವ್ವ, ನಾಗಗಳು ಕೂಡಾ ಯಾವುದೋ `ಅದೃಶ್ಯ ಶಕ್ತಿ~ಗಳ ಕೈಗೊಂಬೆಗಳಾಗಿ ಕುಣಿಯತೊಡಗಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನದ ವೈಭವೀಕರಣ ಇದೇ ಕಾರ‌್ಯಸೂಚಿಯ ಮುಂದುವರಿದ ಭಾಗ. ಇತ್ತೀಚಿನ ವರ್ಷಗಳವರೆಗೂ ಧರ್ಮಸ್ಥಳದ ಮಂಜುನಾಥ ದರ್ಶನ ಮಾಡಲಿಕ್ಕೆ ಹೋದವರು ಸುಬ್ರಹ್ಮಣ್ಯಕ್ಕೆ ಹೋಗಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಅದರ ಚಹರೆಯೇ ಬದಲಾಗಿ ಹೋಯಿತು.
ರವಿಶಾಸ್ತ್ರಿ, ಸಚಿನ ತೆಂಡೂಲ್ಕರ್ ಮೊದಲಾದ ಕ್ರಿಕೆಟಿಗರು, ಸಿನಿಮಾನಟರು, ಗಣ್ಯರು ದಂಡು ಕಟ್ಟಿ ಹೋಗತೊಡಗಿದರು. ಭ್ರಷ್ಟರಾಜಕಾರಣಿಗಳು ತಮ್ಮ ಪಾಪದ ಭಾರ ಇಳಿಸಿಕೊಳ್ಳಲು ಅಲ್ಲಿಗೆ ಬಂದು ತುಲಾಭಾರ ನಡೆಸತೊಡಗಿದರು. ಇವೆಲ್ಲವೂ ಆಕಸ್ಮಿಕವಾಗಿ ನಡೆದ ಬೆಳವಣಿಗೆಗಳಲ್ಲ, ಇಂತಹ `ಹುಚ್ಚುತನಗಳಲ್ಲಿಯೂ ಒಂದು ಕ್ರಮ~ ಇರುತ್ತದೆ.
ಇಂತಹ ಗೊಡ್ಡು ಆಚರಣೆಗಳನ್ನು ವಿರೋಧಿಸುತ್ತಿರುವವರೆಲ್ಲರೂ `ಹಿಂದೂ ವಿರೋಧಿ~ಗಳು ಮತ್ತು ಸಮರ್ಥಿಸುತ್ತಿರುವವರು `ಹಿಂದೂ ಧರ್ಮದ ರಕ್ಷಕ~ರು ಬ್ರಾಂಡ್ ಮಾಡುತ್ತಾ, ತಮ್ಮ ಬಳಗವನ್ನು ವಿಸ್ತರಿಸುತ್ತಾ ಹೋಗುವ ಹುನ್ನಾರ ಇದು. ಸಿದ್ಧಾಂತ ಮತ್ತು ಕಾರ‌್ಯಕ್ರಮಗಳ ಆಧಾರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ನಡೆಯಬೇಕಾದ ಹೋರಾಟ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದೇವಸ್ಥಾನ, ಭೂತಗಳ ಸಾನ, ನಾಗನ ಬನಗಳ ಅಂಗಳಗಳಲ್ಲಿ ನಡೆಯುತ್ತಿದೆ.
ಮಡೆಸ್ನಾನದ ಸಮೂಹಸನ್ನಿಯನ್ನು ಅರ್ಥಮಾಡಿಕೊಳ್ಳಲು ಕುಕ್ಕೆ ಸುಬ್ರಹ್ಮಣ್ಯ ಇರುವ ಸುಳ್ಯ ಮೀಸಲು ವಿಧಾನಸಭಾ ಕ್ಷೇತ್ರವನ್ನು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಿಂದ ಅಧ್ಯಯನ ಮಾಡಿದರೆ ಸಾಕು. ಈ ಕ್ಷೇತ್ರವನ್ನು ಬಿಜೆಪಿಗೆ ಸೇರಿರುವ ಟಿ.
ಅಂಗರ ಅವರು ಕಳೆದ ಐದು ಅವಧಿಗಳಲ್ಲಿ ಪ್ರತಿನಿಧಿಸುತ್ತಾ ಬಂದಿದ್ದಾರೆ. ಊಳಿಗಮಾನ್ಯ ವ್ಯವಸ್ಥೆಯ ಬೇರುಗಳು ಇನ್ನೂ ಬಲವಾಗಿರುವ ಈ ಕ್ಷೇತ್ರದಲ್ಲಿ ಅಂಗರ ಅವರು ತಮ್ಮದೇ ಸಮುದಾಯದ ಜನ ಎಂಜಲೆಲೆ ಮೇಲೆ ಉರುಳಾಡತ್ತಿದ್ದರೂ ತಪ್ಪು ಎಂದು ಬಹಿರಂಗವಾಗಿ ಹೇಳಲಾರದಷ್ಟು ಅಸಹಾಯಕರು.

ಅವರು ಮಾತ್ರವಲ್ಲ ಅವರ ವಿರುದ್ಧ ಸ್ಪರ್ಧಿಸುತ್ತಾ ಬಂದ ಬೇರೆ ಪಕ್ಷದವರೂ ಮಡೆಸ್ನಾನದ ವಿರುದ್ಧ ತಪ್ಪಿಯೂ ಮಾತನಾಡುವುದಿಲ್ಲ.  ದಲಿತರೊಬ್ಬರು ಅಧ್ಯಕ್ಷರು ಮತ್ತು ಹಿಂದುಳಿದ ಜಾತಿ ನಾಯಕರೊಬ್ಬರು ವಿರೋಧಪಕ್ಷದ ನಾಯಕರಾಗಿರುವ ರಾಜ್ಯ ಕಾಂಗ್ರೆಸ್ ವಹಿಸಿರುವ ಮೌನಕ್ಕೆ ಏನನ್ನಬೇಕು?
ವೈದ್ಯರು, ಆಸ್ಪತ್ರೆ, ಆಧುನಿಕ ಔಷಧಿಗಳ್ಯಾವುದೂ ಇಲ್ಲದ ಕಾಲದಲ್ಲಿ ಅಸಹಾಯಕ ಜನ ಇಂತಹ ನಂಬಿಕೆಗಳನ್ನು ಹೊಂದಿರಬಹುದು. ಈಗಲೂ ಹಳ್ಳಿಗಳಲ್ಲಿ ಜ್ವರಬಂದರೆ ತಾಯತ ಕಟ್ಟುವ, ಮಂತ್ರಹಾಕುವ `ಚಿಕಿತ್ಸೆ~ ನೀಡಲಾಗುತ್ತದೆ.
ಇವುಗಳ ಮೇಲಿನ ನಂಬಿಕೆಯಿಂದ ಹುಟ್ಟುವ ಆತ್ಮವಿಶ್ವಾಸ ಸಣ್ಣ-ಪುಟ್ಟರೋಗಗಳನ್ನು ಗುಣಪಡಿಸುತ್ತದೆ ಕೂಡಾ. ಆದರೆ ಇದನ್ನು ಸಮರ್ಥಿಸಿಕೊಳ್ಳಲಾದೀತೇ? ಎಂಜಲೆಲೆ ಯಾರದ್ದೇ ಇರಲಿ ಅದರಲ್ಲಿ ಬೇಕಾದರೆ ಉಂಡವರೇ ಉರುಳಾಡಲಿ, ಆಗಲೂ ಅದು ತಪ್ಪು. ಎಂಜಲು ಮೈಗೆ ಅಂಟುವುದರಿಂದ ರೋಗ ಗುಣವಾಗುವುದು ಒತ್ತಟ್ಟಿಗಿರಲಿ ರೋಗ ಅಂಟಿಕೊಳ್ಳದಿದ್ದರೆ ಸಾಕು.

ಯಾಕೆಂದರೆ ಎಂಜಲಿನ ಮೂಲಕ ಹರಡುವ ರೋಗಗಳೂ ಇವೆ. ಉಡಾಫೆ ಮಾತುಗಳಿಂದ ಆಗಾಗ ಮನರಂಜನೆ ನೀಡುತ್ತಿರುವ ಸಚಿವ ರೇಣುಕಾಚಾರ್ಯರಂತಹವರು ಇದನ್ನು ಸಮರ್ಥಿಸಿ ಮಾತನಾಡಿದ್ದರೆ ನಕ್ಕು ಸುಮ್ಮನಿರಬಹುದಿತ್ತು.

ಆದರೆ ವೈದ್ಯಕೀಯ ವಿಜ್ಞಾನವನ್ನು ವ್ಯಾಸಂಗ ಮಾಡಿರುವ ಡಾ.ವಿ.ಎಸ್.ಆಚಾರ್ಯ ಅವರಂತಹವರೇ ಸಮರ್ಥನೆಗೆ ಇಳಿದುಬಿಟ್ಟರೇ? `ಎಂಜಲೆಲೆ ಮೇಲೆ ಉರುಳಾಡುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ~ ಎಂದು ಭಾರತೀಯ ವೈದ್ಯಕೀಯ ಮಂಡಳಿ ಮುಂದೆ ಹೇಳುವ ಧೈರ್ಯ ಡಾ.ಆಚಾರ್ಯರಲ್ಲಿದೆಯೇ? ಇಷ್ಟು ಸುಲಭದ ಚಿಕಿತ್ಸೆಯ ಉಪಾಯಗಳಿದ್ದರೆ ಜನರ ತೆರಿಗೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿಹಾಕುತ್ತಿರುವ ಆರೋಗ್ಯ ಇಲಾಖೆ, ಒಬ್ಬರು ಸಚಿವರು, ಸರ್ಕಾರಿ ಆಸ್ಪತ್ರೆಗಳು, ವೈದ್ಯರು, ವೈದ್ಯಕೀಯ ಕಾಲೇಜುಗಳು ಯಾಕೆ ಬೇಕು? ಆಚಾರ್ಯರು ಯಾಕೆ ಎಂಬಿಬಿಎಸ್ ಓದಿ ವೈದ್ಯರಾಗಬೇಕಿತ್ತು?
ಬೆತ್ತಲೆಸೇವೆ, ದೇವದಾಸಿ ಪದ್ಧತಿ, ಸತಿಸಹಗಮನ, ಅಜಲು ಪದ್ಧತಿ ಮೊದಲಾದವುಗಳೆಲ್ಲ ಧರ್ಮದ ಪೋಷಾಕು ತೊಟ್ಟ ನಂಬಿಕೆಯ ಹೆಸರಲ್ಲಿಯೇ ನಡೆಯುತ್ತಿದ್ದ ಕಂದಾಚಾರಗಳು. ಅವುಗಳನ್ನು ನಡೆಸುತ್ತಿದ್ದವರ‌್ಯಾರೂ ಸರ್ಕಾರಕ್ಕೆ ಅರ್ಜಿ ಹಾಕಿ ನಿಷೇಧ ಹೇರಲು ಕೋರಿಲ್ಲ.
ಜಾಗೃತ ಸಮುದಾಯದ ಒತ್ತಡಕ್ಕೆ ಮಣಿದು ಸರ್ಕಾರವೇ ನಿಷೇಧಿಸಿದ್ದು. ಜನಮತಗಣನೆ ನಡೆಸಿ ಇಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಾಧ್ಯವೇ ಇಲ್ಲ, ಅಂತಹ ನಿದರ್ಶನಗಳೂ ದೇಶದಲ್ಲೆಲ್ಲೂ ಇಲ್ಲ. ಸಮಾಜದಲ್ಲಿ ಅಸ್ಪೃಶ್ಯತೆ ಕಡಿಮೆಯಾಗಿರುವುದು ಅದನ್ನು ಆಚರಿಸುವವರಲ್ಲಿ ಉಂಟಾಗಿರುವ ಜ್ಞಾನೋದಯದಿಂದಲೇ ಅಲ್ಲ, ಅದಕ್ಕೆ ಮುಖ್ಯ ಕಾರಣ ಸರ್ಕಾರ ಜಾರಿಗೆ ತಂದಿರುವ ಕಾನೂನು. ಮೂಢನಂಬಿಕೆಗಳ ವಿರುದ್ಧದ ಹೋರಾಟವನ್ನು ಜಾಗೃತ ಜನಸಮುದಾಯ ಮತ್ತು ಕಾನೂನು ಜತೆಜತೆಯಾಗಿ ನಡೆಸಬೇಕಾಗುತ್ತದೆ.
ಭಾರತದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದುದು ಅದಕ್ಕೆ ಎದುರಾಗಿ ಬಂದ ಸುಧಾರಣಾವಾದಿ ಚಳವಳಿಗಳ ಪರಂಪರೆ. ಬುದ್ಧ ಬಸವನಿಂದ ಪ್ರಾರಂಭಗೊಂಡು ಜ್ಯೋತಿಬಾ ಪುಲೆ, ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ, ಲೋಹಿಯಾ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ ಮೊದಲಾದವರ  ವರೆಗೆ ನಡೆದುಕೊಂಡು ಬಂದ ಈ ಚಳವಳಿಗಳಲ್ಲಿ ಪ್ರತಿಭಟನೆಯ ಭಿನ್ನ ಅಭಿವ್ಯಕ್ತಿಗಳನ್ನು ಕಾಣಬಹುದು.
ಧರ್ಮ ಸಮಾಜವನ್ನು ಜಡಗೊಳಿಸಿದಾಗೆಲ್ಲ ಅದಕ್ಕೆ ಚಲನಶೀಲತೆಯನ್ನು ತಂದುಕೊಟ್ಟದ್ದು ಈ ಚಳುವಳಿಗಳು. ಸನಾತನ ಎಂದು ಹೇಳಿಕೊಳ್ಳುವ ಹಿಂದೂ ಧರ್ಮ ಉಳಿದುಕೊಂಡದ್ದೇ ಈ ಸುಧಾರಣಾವಾದಿ ಚಳವಳಿಗಳು ಕೆಟ್ಟದ್ದನ್ನು ಕಳಚಿಕೊಂಡು ಒಳ್ಳೆಯದನ್ನು ಪಡೆದುಕೊಂಡು ಬೆಳೆಯಲು ನೀಡುತ್ತಾ ಬಂದ ಒತ್ತಾಸೆಯ ಮೂಲಕ. `ತಾಲೀಬಾನಿಕರಣ~ದ ಮೂಲಕ ಧರ್ಮ ಬೆಳೆಯಲಾರದು.
ಇದು ನಡೆಯದಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ಸಿ.ಆರ್.ರಾಜಗೋಪಾಲಾಚಾರಿ ಅವರು ಕೇರಳದಲ್ಲಿ ನಾರಾಯಣಗುರು ಚಳವಳಿ ನಡೆಯುತ್ತಿದ್ದ ಕಾಲದಲ್ಲಿ ತಿರುವಾಂಕೂರು ಸಂಸ್ಥಾನದ ದಿವಾನರಿಗೆ ಬರೆದ ಪತ್ರದಲ್ಲಿ ಉತ್ತರ ಇದೆ. ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದುದನ್ನು ಕಂಡ ರಾಜಗೋಪಾಲಾಚಾರಿ ಅವರು ದಿವಾನರಿಗೆ ಪತ್ರಬರೆದು `ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಇದ್ದರೆ ಕೇರಳದಲ್ಲಿ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರೈಸ್ತಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು~ ಎಂದು ಎಚ್ಚರಿಸಿದ್ದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂ ಧರ್ಮದಿಂದ ಮತಾಂತರ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ದಾಂದಲೆ ಮಾಡುತ್ತಿರುವವರೇ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದೇ `ಹಿಂದೂ~ಗಳನ್ನು  ಎಂಜಲೆಲೆಯಲ್ಲಿ ಉರುಳಾಡಿಸುತ್ತಿರುವುದು ಎಂತಹ ವ್ಯಂಗ್ಯ ಅಲ್ಲವೇ?

Monday, November 28, 2011

ನಾಯಕನೊಬ್ಬ ಖಳನಾಯಕನಾಗುತ್ತಾ ಹೋದ ದುರಂತ ಕತೆ

ಅಧಿಕಾರದಲ್ಲಿದ್ದಾಗ ರಾಜಕಾರಣಿಗಳು ಭ್ರಷ್ಟರೆನಿಸಿಕೊಂಡು, ಕಳಂಕ ಹಚ್ಚಿಕೊಂಡು ಜನಪ್ರಿಯತೆ ಕಳೆದುಕೊಳ್ಳುವುದು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಜನಪ್ರಿಯರಾಗಿದ್ದವರು ವಿರೋಧಪಕ್ಷದಲ್ಲಿದ್ದಾಗ ಹೆಸರು ಕೆಡಿಸಿಕೊಂಡು ಜನರ ದೂಷಣೆಗೊಳಗಾಗುವುದು ಅಷ್ಟೇನೂ ಸಾಮಾನ್ಯ ಅಲ್ಲ.
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎರಡನೆಯ `ಅಸಾಮಾನ್ಯ~ರ ಗುಂಪಿಗೆ ಸೇರಿದವರು. ಮುಖ್ಯಮಂತ್ರಿಯಾಗಲು ತಂದೆಯ ವಿರುದ್ಧವೇ `ಬಂಡಾಯ~ ಎದ್ದವರು, ತಮ್ಮ ಪಕ್ಷದ ಜಾತ್ಯತೀತ ನೀತಿಯನ್ನೇ ಗೇಲಿ ಮಾಡಿದ್ದವರು  ಮತ್ತು ತಮ್ಮ ಪಕ್ಷ ವಿರೋಧಿಸುತ್ತಾ ಬಂದ ಬಿಜೆಪಿ ಜತೆಗೇ ಕೈಜೋಡಿಸಿದ್ದವರು ಕುಮಾರಸ್ವಾಮಿ.
ಮುಖ್ಯಮಂತ್ರಿಯಾದ ನಂತರ ಈ ಮೂರು ಕಾರಣಗಳಿಗಾಗಿ ಅವರು ಜನಪ್ರಿಯತೆ ಕಳೆದುಕೊಳ್ಳಬೇಕಿತ್ತು. ಕುಮಾರಣ್ಣನ ನಡೆ ಬಗ್ಗೆ ದೊಡ್ಡಗೌಡರ ಬೆಂಬಲಿಗರು ಅಸಮಾಧಾನಗೊಳ್ಳಬೇಕಿತ್ತು.

ಅವರ ಆತ್ಮವಂಚನೆಯ ಮಾತಿನ ಬಗ್ಗೆ ಜನ ಅವರನ್ನು ದೂಷಿಸಬೇಕಿತ್ತು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಆ ಪಕ್ಷದ ವಿರೋಧಿಗಳೆಲ್ಲ ಜೆಡಿ (ಎಸ್)ವಿರೋಧಿಗಳಾಗಬೇಕಿತ್ತು.
ಅಂತಹದ್ದೇನೂ ಆಗಲೇ ಇಲ್ಲ, ಅವರ ಪಕ್ಷದ  ಕಾರ್ಯಕರ್ತರು ಮತ್ತು ರಾಜ್ಯದ ಜನತೆ ಕುಮಾರಸ್ವಾಮಿ ಬಗ್ಗೆ ಉದಾರವಾಗಿ ನಡೆದುಕೊಂಡಿದ್ದರು. ಅವರು ಇಪ್ಪತ್ತು ತಿಂಗಳ ಅವಧಿಯ ಜನಪ್ರಿಯ ಮುಖ್ಯಮಂತ್ರಿ.
ಅಭೂತಪೂರ್ವ ಸಾಧನೆ ಮಾಡಿ ಅವರು ಈ ಜನಪ್ರಿಯತೆ ಗಳಿಸಿದ್ದಲ್ಲ. ದ್ವೇಷಾಸೂಯೆ ಇಲ್ಲದ ಅವರ ಆ ಕಾಲದ ನಡವಳಿಕೆ, ಸಾಮಾನ್ಯ ಜನರ ಜತೆಗೆ ಅವರು ಒಂದಾಗುತ್ತಿದ್ದ ರೀತಿ, ತಪ್ಪು ಮಾತನಾಡಿದರೂ ಅದನ್ನು ತಿದ್ದಿಕೊಳ್ಳುತ್ತಿದ್ದ ವಿನಯವಂತಿಕೆ, ಜನಪರವಾದ ಕೆಲಸಗಳನ್ನು ಮಾಡಿ ಜನಪ್ರೀತಿ ಗಳಿಸಬೇಕೆಂಬ ಅವರ ತುಡಿತ -ಇವೆಲ್ಲವೂ ಅವರನ್ನು ಜನಪ್ರಿಯ ಮಾಡಿತ್ತು.
ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಮುಖ್ಯಮಂತ್ರಿಗಳೆನಿಸಿದವರು ಇಬ್ಬರು. ಒಬ್ಬರು ರಾಮಕೃಷ್ಣ ಹೆಗಡೆ, ಇನ್ನೊಬ್ಬರು ಎಸ್.ಎಂ.ಕೃಷ್ಣ. ಶಿಕ್ಷಣ, ಓದು, ಅನುಭವ, ಚಿಂತನೆ, ಸಂಪರ್ಕ- ಇವು ಯಾವುದರಲ್ಲಿಯೂ ಕುಮಾರಸ್ವಾಮಿಯವರನ್ನು ಅವರಿಬ್ಬರಿಗೆ ಹೋಲಿಸಲಾಗದು.
ಅವರಿಬ್ಬರೂ ನಗರದ `ಜಂಟಲ್‌ಮೆನ್~ಗಳಾದರೆ, ಕುಮಾರಸ್ವಾಮಿ `ಹಳ್ಳಿ ಹೈದ~. ಜಾಗತೀಕರಣದ ನಂತರದ ದಿನಗಳಲ್ಲಿ ಆಳುವ ದೊರೆಗಳೆಲ್ಲ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ತಮ್ಮ ವಿರುದ್ಧವೇ ಸಂಚು ಮಾಡುತ್ತಿದ್ದಾರೆ ಎಂಬ ಕೊರಗು ಮತ್ತು ಆತಂಕದಲ್ಲಿರುವ ಹಳ್ಳಿಜನರಲ್ಲಿ ಕುಮಾರಸ್ವಾಮಿ `ನಮ್ಮವ~ನೆಂಬ ಭಾವನೆ ಹುಟ್ಟಿಸಿದ್ದು ನಿಜ.
ಇವೆಲ್ಲಕ್ಕಿಂತಲೂ ಹೆಚ್ಚಾಗಿ ಪ್ರತೀಕಾರ ಮತ್ತು ಸಂಘರ್ಷದ ರಾಜಕೀಯಕ್ಕೆ ಹೆಸರಾದ ದೇವೇಗೌಡರ ನಡವಳಿಕೆಗೆ ವಿರುದ್ಧವಾದ ಸ್ನೇಹಶೀಲ ಗುಣವೂ ಅವರನ್ನು ಜನಪ್ರಿಯ ಮಾಡಿತ್ತು.
ಜನ ಮೆಚ್ಚಿದ್ದು ಕುಮಾರಸ್ವಾಮಿ ದೇವೇಗೌಡರ ಮಗ ಎಂಬ ಕಾರಣಕ್ಕಲ್ಲ, ಮಗನಾದರೂ ಅವರ ಹಾಗೆ ಇಲ್ಲ ಎನ್ನುವ ಕಾರಣಕ್ಕೆ. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲಿ ಎಂದೂ ದೇವೇಗೌಡರ ಸಭೆಗೆ ಸೇರದಷ್ಟು ಜನ ಕುಮಾರಸ್ವಾಮಿ ಸಭೆಗೆ ಸೇರುತ್ತಿದ್ದರು.
ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡದೆ, ದೀರ್ಘವಾದ ರಾಜಕೀಯ ಅನುಭವವೂ ಇಲ್ಲದೆ ಕ್ಷಿಪ್ರಗತಿಯಲ್ಲಿ ಇಷ್ಟೊಂದು ಜನಪ್ರಿಯರಾದ ಮುಖ್ಯಮಂತ್ರಿಯನ್ನು ಕರ್ನಾಟಕ ಎಂದೂ ಕಂಡಿಲ್ಲ.
ರಾಜ್ಯದ ಬಹಳಷ್ಟು ಪ್ರಜ್ಞಾವಂತರು ಕುಮಾರಸ್ವಾಮಿಯವರಲ್ಲಿ ಭವಿಷ್ಯದ ನಾಯಕನನ್ನು ಕಂಡಿದ್ದರು.
ಇಂತಹ ಮುಖ್ಯಮಂತ್ರಿಯಾಗಿದ್ದ ಎಚ್. ಡಿ.ಕುಮಾರಸ್ವಾಮಿಯವರ ಬಗ್ಗೆ ಈಗ ಯಾರಾದರೂ ಜನಾಭಿಪ್ರಾಯ ಸಂಗ್ರಹ ಮಾಡಿದರೆ ಬಹುಶಃ  ಅವರ ಜನಪ್ರಿಯತೆಯ ಸೂಚ್ಯಂಕ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಿಂತಲೂ ಕೆಳಗಿರಬಹುದು.
ಹಾಲಿ ಆಗಿದ್ದಾಗ ಶಿಖರದಲ್ಲಿದ್ದ ಜನಪ್ರಿಯತೆ ಮಾಜಿ ಆದ ಮೇಲೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಕರ್ನಾಟಕದ ಆಡಳಿತಾರೂಢರು ದೇಶದಲ್ಲಿಯೇ ಅತೀ ಭ್ರಷ್ಟರು ಎಂಬ ಅಭಿಪ್ರಾಯ ಇರುವ ಕಾಲದಲ್ಲಿ ವಿರೋಧಪಕ್ಷದ ನಾಯಕನೊಬ್ಬ ಈ ರೀತಿ ಜನಪ್ರಿಯತೆ ಕಳೆದುಕೊಳ್ಳುವುದು ಭಾರತದ ರಾಜಕಾರಣದಲ್ಲಿಯೇ ಅಪರೂಪದ ಪ್ರಸಂಗ.
ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗೆಲ್ಲ `ಅಪ್ಪನಿಗಿಂತ ಮಗ ವಾಸಿ~ ಎನ್ನುತ್ತಿದ್ದವರೇ ಈಗ `ಮಗನಿಗಿಂತ ಅಪ್ಪನೇ ವಾಸಿ~ ಎನ್ನುವಂತಾಗಿದೆ.
ಯಾಕೆ ಹೀಗಾಯಿತು?
ಅಧಿಕಾರ ಹಸ್ತಾಂತರ ಮಾಡದೆ ವಚನ ಭ್ರಷ್ಟನೆಂದು ಅನಿಸಿಕೊಂಡಾಗಲೂ ಯಾರೂ ಕುಮಾರಸ್ವಾಮಿಯವರನ್ನು ಅಧಿಕಾರಲಾಲಸಿ ಎಂದು ದೂರಲಿಲ್ಲ, `ಅಪ್ಪನ ಹಟಕ್ಕೆ ಕಟ್ಟುಬಿದ್ದು ಅವರು ಹೀಗೆ ಮಾಡಬೇಕಾಯಿತು~ ಎಂದು ಅನುಕಂಪ ವ್ಯಕ್ತಪಡಿಸಿದವರೇ ಹೆಚ್ಚು.
ಆದರೆ ತಮ್ಮ ಬಗ್ಗೆ ಜನತೆ ಹೊಂದಿದ್ದ ಅಭಿಪ್ರಾಯ ತಪ್ಪೆನ್ನುವುದನ್ನು ಕುಮಾರಸ್ವಾಮಿಯವರೇ ನಂತರದ ದಿನಗಳಲ್ಲಿ ಸಾಬೀತುಪಡಿಸುತ್ತಾ ಬಂದಿದ್ದಾರೆ.
ಅಧಿಕಾರ ಹಸ್ತಾಂತರ ಮಾಡದೆ ಇದ್ದಾಗ ಅವರನ್ನು ಅಧಿಕಾರ ಲಾಲಸಿ ಎಂದು ಹೇಳದವರು ಈಗ ಅದನ್ನು ಹೇಳುತ್ತಿದ್ದಾರೆ. ಇದಕ್ಕೆ ವಿರೋಧ ಪಕ್ಷದ ನಾಯಕನಾಗಿ ಅವರು ನಡೆದುಕೊಳ್ಳುತ್ತಿರುವ ರೀತಿ ಕಾರಣ.
ಅಧಿಕಾರದಲ್ಲಿದ್ದವರನ್ನು ಕೆಳಗಿಳಿಸುವುದೇ ವಿರೋಧಪಕ್ಷಗಳ ಕೆಲಸ ಅಲ್ಲ, ಆ ರೀತಿಯ ವರ್ತನೆಯನ್ನು ಐದು ವರ್ಷಗಳ ಅವಧಿಗೆ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಜನ ಇಷ್ಟಪಡುವುದಿಲ್ಲ.
ವಿರೋಧಪಕ್ಷಗಳು ಆಡಳಿತಾರೂಢರನ್ನು ಎಚ್ಚರಿಸಬೇಕು, ಟೀಕಿಸಬೇಕು ಮತ್ತು ತಿದ್ದುವ ಪ್ರಯತ್ನ ಮಾಡಬೇಕು. ಮಿತಿ ಮೀರಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಸುವ ಕಸರತ್ತಿಗೆ ಕೈ ಹಾಕಬೇಕು.
ಅಧಿಕಾರಕ್ಕೆ ಬಂದ ಬಿಜೆಪಿಯವರನ್ನು ಸಾವರಿಸಿಕೊಳ್ಳಲು ಬಿಡದೆ ಕುಮಾರಸ್ವಾಮಿ ಅವರ ಮೇಲೆ ದಾಳಿಗೆ ಇಳಿದಿದ್ದರು. ಸರ್ಕಾರ ರಚನೆಯ ಮೊದಲೇ ಅದನ್ನು ಉರುಳಿಸುವ ಕಾರ್ಯಾಚರಣೆಯನ್ನು ಅವರು ಪ್ರಾರಂಭಿಸಿದ್ದರು.
ಪುಕ್ಕಲತನದಿಂದಲೋ, ಒಳ್ಳೆಯತನದಿಂದಲೋ ಕಾಂಗ್ರೆಸ್ ನಾಯಕರು ಆಗ ಅವರ ಜತೆ ಕೈಜೋಡಿಸದೆ ಇದ್ದ ಕಾರಣ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಅದರ ನಂತರ ಮತ್ತೆ ಬಿಜೆಪಿ ಭಿನ್ನಮತೀಯರನ್ನು ಅವರು ಎತ್ತಿಕಟ್ಟಿದರು, ಹೋಟೆಲ್, ರೆಸಾರ್ಟ್ ವಾಸ, ತೀರ್ಥಯಾತ್ರೆ ಎಂದು ಊರೆಲ್ಲ ಸುತ್ತಾಡಿಸಿದರು.
ಕುಮಾರಸ್ವಾಮಿಯವರ ಯಾವ ಪ್ರಯತ್ನವೂ ಜವಾಬ್ದಾರಿಯುತ ವಿರೋಧಪಕ್ಷದ ನಾಯಕ ಮಾಡಬೇಕಾದ ಎಚ್ಚರಿಸುವ, ಟೀಕಿಸುವ ಇಲ್ಲವೇ ತಿದ್ದುವ ಪ್ರಯತ್ನ ಆಗಿರಲಿಲ್ಲ. ಸರ್ಕಾರ ಉರುಳಿಸುವುದೇ ಆಗಿತ್ತು. ಅಲ್ಲಿಂದಲೇ ಅವರ ಜನಪ್ರಿಯತೆ ಕುಸಿಯತೊಡಗಿದ್ದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳನ್ನು ಮಾಡತೊಡಗಿದ ನಂತರದ ದಿನಗಳಲ್ಲಿ ಕುಮಾರಸ್ವಾಮಿಯವರು ಇನ್ನಷ್ಟು ತ್ವರಿತಗತಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳತೊಡಗಿದರು.
ಅವರು ಮಾಡಿದ ಆರೋಪಗಳೆಲ್ಲವೂ ನಿರಾಧಾರವಾದುವೇನಲ್ಲ. ಅವುಗಳಲ್ಲಿ ಕೆಲವು ಆರೋಪಗಳು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರನ್ನು ಕಷ್ಟಕ್ಕೆ ಸಿಲುಕಿಸಲೂಬಹುದು.
ಆದರೆ ಆರೋಪಗಳನ್ನು ಮಾಡುವವರು ಕಳಂಕಿತರಾಗಿದ್ದಾಗ ಮಾಡಿದ ಆರೋಪಗಳು ದುರ್ಬಲವಾಗುತ್ತವೆ. ಜನ ಆರೋಪ ಮಾಡುವವರ ಪ್ರಾಮಾಣಿಕತೆಯನ್ನು ಪ್ರಶ್ನಿಸತೊಡಗುತ್ತಾರೆ.
ಬಹುಶಃ ಕುಮಾರಸ್ವಾಮಿಯವರು ಬಯಲುಗೊಳಿಸಿದ ಹಗರಣಗಳನ್ನು ಬೇರೆ ಯಾರಾದರೂ ಹೊರಹಾಕಿದ್ದರೆ ಪರಿಣಾಮ ಬೇರೆಯೇ ಆಗುತ್ತಿತ್ತು.
ಆದರೆ ಕುಮಾರಸ್ವಾಮಿಯವರು ತಾವು ಪ್ರಾಮಾಣಿಕರು, ಶುದ್ಧಹಸ್ತರು ಎಂದು ಎಷ್ಟೇ ಎದೆಬಡಿದುಕೊಂಡರೂ ರಾಜ್ಯದ ಜನತೆ ಹಾಗೆಂದು ತಿಳಿದಿಲ್ಲ. ಕಾನೂನಿನ ಬಲೆಯಲ್ಲಿ ಅವರನ್ನು ಕೆಡವಿಹಾಕುವುದು ಸಾಧ್ಯವಾಗದೆ ಹೋಗಬಹುದು.
ಆದರೆ ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ ಅವರ ಮತ್ತು ಕುಟುಂಬದ ಆಸ್ತಿ ಇದ್ದಕ್ಕಿದ್ದಂತೆ ವೃದ್ಧಿಸಿದ್ದನ್ನು ನೈತಿಕವಾಗಿ ಸಮರ್ಥಿಸಿಕೊಳ್ಳುವುದು ಅವರಿಗೂ ಕಷ್ಟ.
ಇದರಿಂದಾಗಿ ಯಡಿಯೂರಪ್ಪನವರಿಗೂ ಕಳಂಕಿತ ಕುಮಾರಸ್ವಾಮಿಯವರನ್ನು ಎದುರಿಸುವುದು ಸುಲಭವಾಗಿ ಹೋಯಿತು. ದಿನ ಕಳೆದಂತೆ ಜನ ಕೂಡಾ `ಇವರೇನು ಸಾಚಾನಾ?~ ಎಂದೇ ಮಾತನಾಡಿಕೊಳ್ಳತೊಡಗಿದರು.
ಇದರಿಂದಾಗಿಯೇ ಯಡಿಯೂರಪ್ಪನವರ ಪದಚ್ಯುತಿಗೆ ಅವರು ತೋರಿದ ಆತುರವನ್ನು ಕಂಡ ಜನ ಅವರನ್ನು `ಅಧಿಕಾರ ಲಾಲಸಿ~ ಎಂದು ಕರೆಯುವಂತಾಯಿತು.
ಅದಕ್ಕೆ ಸರಿಯಾಗಿ ಲೋಕಾಯುಕ್ತರು ಕೂಡಾ ತಮ್ಮ ವರದಿಯಲ್ಲಿ ಅವರ ಅಧಿಕಾರ ಕಾಲದ ಗಣಿ ಅಕ್ರಮಗಳನ್ನು ಬಯಲಿಗೆಳೆದರು. ಯಾವಾಗ ಆರೋಪಿಯ ಕಟಕಟೆಯಲ್ಲಿ ತಾನು ಕೂಡಾ ಯಡಿಯೂರಪ್ಪನವರ ಜತೆಯಲ್ಲಿ ನಿಲ್ಲಬೇಕಾಯಿತೋ, ಅದರ ನಂತರ ಅವರ ಮಾತಿನ ವರಸೆ ಬದಲಾಗಿಹೋಯಿತು.

`ಜೈಲಿಗೆ ಕಳುಹಿಸಿಯೇ ಸಿದ್ಧ~ ಎಂದು ತೊಡೆತಟ್ಟುತ್ತಿದ್ದ ಅವರು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ಬಗ್ಗೆ ಅನುಕಂಪದ ಮಳೆ ಹರಿಸತೊಡಗಿದರು.

ಉಕ್ಕಿ ಹರಿದ ಅನುಕಂಪ ಅವರನ್ನು ಪರಪ್ಪನ ಅಗ್ರಹಾರದ ವರೆಗೂ ಕರೆದುಕೊಂಡು ಹೋಯಿತು. ಅದರ ನಂತರ ಇಬ್ಬರು ಆರೋಪಿಗಳು ಕೂಡಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಮೇಲೆ ನಾಲಿಗೆ ಸಡಿಲ ಬಿಟ್ಟು ದಾಳಿ ಮಾಡತೊಡಗಿದರು.
ನ್ಯಾ.ಹೆಗ್ಡೆ ವಿರುದ್ದ ಮಾಡಿದ ಆಧಾರರಹಿತ ಆರೋಪಗಳು ಬೂಮರಾಂಗ್ ಆಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಜನ ಚರ್ಚೆ ನಡೆಸುವಂತಾಯಿತು.

ಆದರೆ ಇದ್ಯಾವುದರಿಂದಲೂ ಕುಮಾರಸ್ವಾಮಿಯವರು ಬುದ್ಧಿ ಕಲಿತಂತೆ ಇಲ್ಲ. ಸಹವಾಸ ದೋಷವೋ, ಸುಲಭದಲ್ಲಿ ಅನುಭವಿಸಿದ ಅಧಿಕಾರದ ಮೇಲೆ ಹುಟ್ಟಿದ ಲಾಲಸೆಯೋ, ಕನಸುಗಳು ಭಗ್ನಗೊಂಡ ಕಾರಣದಿಂದ ಉಂಟಾದ ಹತಾಶೆಯೋ -ರಾಜ್ಯದ ರಾಜಕೀಯದಲ್ಲಿ ಎತ್ತರಕ್ಕೆ ಏರಬಹುದೆಂದು ಜನ ನಿರೀಕ್ಷಿಸಿದ್ದ ಕುಮಾರಸ್ವಾಮಿಯವರು ಜಾರಿ ಬೀಳುತ್ತಿದ್ದಾರೆ.
ಈಗ ರಾಜಕೀಯ ಆತ್ಮವಂಚನೆಯ ಕ್ಲೈಮ್ಯಾಕ್ಸ್ ಎಂಬಂತೆ ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರಿರಾಮುಲು ಅವರಿಗೆ ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ.
ಯಾರು ಈ ಶ್ರಿರಾಮುಲು? ಲೋಕಾಯುಕ್ತರ ವರದಿ ಪ್ರಕಾರ ಯಡಿಯೂರಪ್ಪ ಅವರಂತೆ ಶ್ರಿರಾಮುಲು ಕೂಡಾ ಒಬ್ಬ ಆರೋಪಿ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಹೈದರಾಬಾದ್‌ನ ಸೆರೆಮನೆಯಲ್ಲಿರುವ ಗಾಲಿ ಜನಾರ್ದನ ರೆಡ್ಡಿಯವರ ಆಪ್ತ ಸ್ನೇಹಿತ.

ಬಳ್ಳಾರಿಯಲ್ಲಿ ಪ್ರಾಕೃತಿಕ ಸಂಪತ್ತಿನ ಲೂಟಿ ಮಾಡಿದ ಮತ್ತು ರಾಜ್ಯ ರಾಜಕೀಯವನ್ನು ವ್ಯಾಪಾರೀಕರಣಗೊಳಿಸಿ ಅಧೋಗತಿಗಿಳಿಸಿದ ಆರೋಪಗಳನ್ನು ಹೊತ್ತವರು ಜನಾರ್ದನ ರೆಡ್ಡಿ.
ಕುಮಾರಸ್ವಾಮಿ ವಿರುದ್ಧ 150 ಕೋಟಿ ರೂಪಾಯಿಗಳ ಗಣಿಕಪ್ಪ ಪಡೆದಿರುವ ಗಂಭೀರ ಆರೋಪವನ್ನು ಜನಾರ್ದನ ರೆಡ್ಡಿ ಮಾಡಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿದೆ.
ದೇವೇಗೌಡ ಮತ್ತು ಕುಟುಂಬದ ಸದಸ್ಯರನ್ನು ಮೊನ್ನೆಮೊನ್ನೆ ವರೆಗೂ ಅವರು ಸಾರ್ವಜನಿಕವಾಗಿ ಏಕವಚನದಲ್ಲಿ ನಿಂದಿಸುತ್ತಿದ್ದುದನ್ನು ಜನ ಕೇಳಿದ್ದಾರೆ. ಶ್ರಿರಾಮುಲು ಅವರೂ ಅದಕ್ಕೆ ದನಿಗೂಡಿಸುತ್ತಾ ಬಂದವರು.
ಎರಡೂ ಕುಟುಂಬಗಳು ಬೀದಿಯಲ್ಲಿ ನಿಂತು ತೀರಾ ಕೆಳಮಟ್ಟದಲ್ಲಿ ಕಚ್ಚಾಡಿವೆ. ಇವೆಲ್ಲವೂ ಕಳೆದ 4-5 ವರ್ಷಗಳ ಅವಧಿಯಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಬೆಳವಣಿಗೆ. ಇಂತಹ ಜನಾರ್ದನ ರೆಡ್ಡಿ ತನ್ನ ಪಾಲಿನ ದೇವರು ಎನ್ನುತ್ತಾರೆ ಶ್ರಿರಾಮುಲು.
ರೆಡ್ಡಿ ಸೋದರರ ಎಲ್ಲ ಕೆಲಸಗಳಲ್ಲಿಯೂ ಶ್ರಿರಾಮುಲು ಪಾತ್ರಧಾರಿ. ಇಂತಹವರಿಗೆ ಕುಮಾರಸ್ವಾಮಿಯವರ ಪಕ್ಷ ಬೆಂಬಲ ಘೋಷಿಸಿದೆ.
ನ್ಯಾಯ-ಅನ್ಯಾಯದ ಪರಾಮರ್ಶೆ, ಜನರ ಹಿತದ ಮಾತು ಒತ್ತಟ್ಟಿಗಿರಲಿ, ಕನಿಷ್ಠ ಆತ್ಮಾಭಿಮಾನ ಉಳ್ಳವರು ಇಂತಹ ರಾಜಿ ಮಾಡಿಕೊಳ್ಳಲಾರರು.`ನಾಯಕನಾಗಲಾರೆ, ಖಳನಾಯಕನಾಗುವೆ~ ಎಂದು ಹೊರಟವರನ್ನು ಏನು ಮಾಡಲು ಸಾಧ್ಯ?
ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಅಧಿಕಾರ ಹಸ್ತಾಂತರದ ವಿವಾದದ ಸಂದರ್ಭದಲ್ಲಿ `ಯಯಾತಿ ಮತ್ತು ಪುರು ಎಂಬ ತಂದೆ- ಮಗನ ನೆನಪಿನಲ್ಲಿ...~ ಎಂಬ ಅಂಕಣವೊಂದನ್ನು ಬರೆದಿದ್ದೆ. 
ಶಾಪಗ್ರಸ್ತನಾಗಿ ಅಕಾಲ ವೃದ್ದಾಪ್ಯ ಪಡೆದ ಯಯಾತಿ ತನ್ನ ಮಗ ಪುರುವಿಗೆ ಶಾಪ ವರ್ಗಾಯಿಸಿ ಯೌವ್ವನವನ್ನು ಪಡೆದ ಕತೆ ಮಹಾಭಾರತದಲ್ಲಿದೆ.
`ಬಿಜೆಪಿ ಜತೆ ಮೈತ್ರಿಮಾಡಿಕೊಂಡ ಮಗನಿಂದಾಗಿ ಶಾಪಗ್ರಸ್ತನಾದೆ~ ಎಂದು ತಿಳಿದುಕೊಂಡಿದ್ದ ದೇವೇಗೌಡರು ವಯಸ್ಸಿಗೆ ಮೀರಿದ ವೃದ್ಧಾಪ್ಯದಿಂದ ಬಳಲುತ್ತಿರುವ `ಯಯಾತಿ~ಯಂತೆ ವರ್ತಿಸತೊಡಗಿದ್ದರು.

ಇಪ್ಪತ್ತು ತಿಂಗಳ ನಂತರ ಶಾಪಕ್ಕೆ ಮುಕ್ತಿ ಪಡೆಯ ಬಯಸಿದ ಗೌಡರು ಅಧಿಕಾರ ಹಸ್ತಾಂತರ ಮಾಡದಂತೆ ಮಗನ ಮನವೊಲಿಸುವಲ್ಲಿ ಸಫಲರಾಗಿದ್ದರು.
ಅಲ್ಲಿಯ ವರೆಗೆ `ಯಯಾತಿ~ಯಂತೆ ವೃದ್ಧಾಪ್ಯದಿಂದ ಬಳಲುತ್ತಿದ್ದ ಗೌಡರು ನಂತರ ಯುವಕರಂತೆ ಅಬ್ಬರಿಸತೊಡಗಿದ್ದರು. ಅಲ್ಲಿಯ ವರೆಗೆ ಯೌವ್ವನ ಸಹಜ ಉತ್ಸಾಹದಲ್ಲಿ ಬೀಗುತ್ತಿದ್ದ ಕುಮಾರಸ್ವಾಮಿ ಅಪ್ಪನ ವೃದ್ದಾಪ್ಯವನ್ನು ಪಡೆದ `ಪುರು~ವಿನಂತೆ ಬಾಡಿಹೋಗಿದ್ದರು.

ಮಹಾಭಾರತದಲ್ಲಿರುವ ಕತೆಯ ಪ್ರಕಾರ ಪುರು ಪಶ್ಚಾತ್ತಾಪಕ್ಕೀಡಾದ ತಂದೆಯಿಂದ ಯೌವ್ವನವನ್ನು ಮರಳಿ ಪಡೆಯುತ್ತಾನೆ.

ಆದರೆ ಅಧಿಕಾರ ಹಸ್ತಾಂತರಕ್ಕೆ ನಿರಾಕರಿಸಿದ ನಂತರ ಯೌವ್ವನವನ್ನು ಕಳೆದುಕೊಂಡಂತೆ ಬಳಲಿಹೋಗಿದ್ದ ಕುಮಾರಸ್ವಾಮಿ ಮರಳಿ ಅದನ್ನು ಪಡೆಯಲೇ ಇಲ್ಲ.

Monday, November 21, 2011

ನ್ಯಾ. ಖಟ್ಜು ಹೇಳಿದ್ದು ಮತ್ತು ಹೇಳದೆ ಉಳಿದದ್ದು...

ಭ್ರಷ್ಟರು, ಪತ್ನಿ ಪೀಡಕರು, ಎನ್‌ಕೌಂಟರ್ ಮಾಡುವ ಪೊಲೀಸರು, ಮರ್ಯಾದಾ ಹತ್ಯೆಕೋರರು -ಎಲ್ಲರನ್ನೂ `ಸಮೀಪದ ಲೈಟ್‌ಕಂಬ~ಕ್ಕೆ ನೇತುಹಾಕಿ ಗಲ್ಲುಶಿಕ್ಷೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದ ದಿನಗಳಲ್ಲಿ ಹೇಳಿ ವಿವಾದ ಸೃಷ್ಟಿಸಿದ್ದವರು ಮಾರ್ಕಾಂಡೇಯ ಖಟ್ಜು.

ಪತ್ರಕರ್ತರ ಬಗ್ಗೆ ಯಾಕೋ ಅವರು ಸ್ವಲ್ಪ ಕರುಣೆ ತೋರಿಸಿದ್ದಾರೆ, `ಅಜ್ಞಾನಿ~ ಮತ್ತು `ಸಮಾಜದ್ರೋಹಿ~ ಪತ್ರಕರ್ತರನ್ನು ಗಲ್ಲಿಗೇರಿಸಬೇಕೆಂದು ಹೇಳಲಿಲ್ಲ, `ಕೆಟ್ಟ~ ಪತ್ರಕರ್ತರು ಬದುಕಿಕೊಂಡಿದ್ದಾರೆ. ಒಂದು ಟಿವಿ ಚಾನೆಲ್‌ಗೆ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ನ್ಯಾ.ಖಟ್ಜು ನೀಡಿದ್ದ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಪತ್ರಕರ್ತರನ್ನು ಕೆರಳಿಸಿವೆ.
ಕೈಯಲ್ಲಿದ್ದ ಲೇಖನಿ ನಿಜಕ್ಕೂ ಖಡ್ಗವೇ ಆಗಿದ್ದರೆ ಖಟ್ಜು ಅವರ ತಲೆ ಇಷ್ಟೊತ್ತಿಗೆ ಹೋಳುಹೋಳಾಗುತ್ತಿತ್ತು. ಅವರೂ ಬದುಕಿಕೊಂಡಿದ್ದಾರೆ. ನ್ಯಾ.ಖಟ್ಜು ಬಗ್ಗೆ ಪತ್ರಕರ್ತರಿಗೆ ಇಷ್ಟೊಂದು ಕೋಪ ಯಾಕೆ? ಸುಳ್ಳು ಹೇಳಿದ್ದಕ್ಕೋ, ಅಪ್ರಿಯವಾದ ಸತ್ಯ ಹೇಳಿದ್ದಕ್ಕೋ?
ನೀವು ಸಮಾಜದಲ್ಲಿ ಅತಿ ಹೆಚ್ಚು ದ್ವೇಷಿಸುವವರು ಯಾರು ಎಂದು ಪ್ರಶ್ನಿಸಿ ಅಮೆರಿಕದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆ ನಡೆದಿತ್ತು. ಜನತೆ ದ್ವೇಷಿಸುವ ವ್ಯಕ್ತಿಗಳ ಮೊದಲ ಸಾಲಲ್ಲಿ ರಾಜಕಾರಣಿಗಳಿದ್ದರು, ಎರಡನೇ ಸಾಲಿನಲ್ಲಿ ಪತ್ರಕರ್ತರಿದ್ದರು (ಅತ್ಯಂತ ಪ್ರೀತಿಸುವವರ ಮೊದಲ ಸಾಲಿನಲ್ಲಿ ದಾದಿಯರಿದ್ದರು).

ಭಾರತವೂ ಸೇರಿದಂತೆ ಯಾವ ದೇಶದಲ್ಲಿ ಇಂತಹ ಸಮೀಕ್ಷೆ ನಡೆಸಿದರೂ ಹೆಚ್ಚುಕಡಿಮೆ ಇದೇ ಮಾದರಿಯ ಫಲಿತಾಂಶ ಹೊರಹೊಮ್ಮಬಹುದು. ನ್ಯಾ.ಖಟ್ಜು ಹೇಳಿಕೆ ಬಗ್ಗೆ ನಮ್ಮಲ್ಲಿಯೇ ಸಮೀಕ್ಷೆ ನಡೆದರೆ ಅವರ ಪರವಾಗಿ ಮತ ಚಲಾಯಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿರಬಹುದೇನೋ?

ಆದ್ದರಿಂದ ನ್ಯಾ.ಖಟ್ಜು ಅವರ ಕಟುಮಾತುಗಳು ಪತ್ರಕರ್ತರ ಆತ್ಮಾವಲೋಕನಕ್ಕೆ ಕಾರಣವಾಗಬೇಕಿತ್ತು, ಆದರೆ ಅವರು ಪ್ರತೀಕಾರಕ್ಕೆ ಹೊರಟಿದ್ದಾರೆ. ಪತ್ರಿಕಾ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಅವರನ್ನು ಕಿತ್ತುಹಾಕಬೇಕೆಂಬ ಕೂಗು ಕೇಳತೊಡಗಿದೆ.
ನ್ಯಾ.ಖಟ್ಜು ಅವರು ಬಿಟ್ಟ ಬಾಣ ಗುರಿತಪ್ಪಲು ವೈಯಕ್ತಿಕವಾಗಿ ಅವರೂ ಕಾರಣ. ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೆ ಇದ್ದರೆ ಮಾತು ಸೋತುಹೋಗುತ್ತದೆ, ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ.
ಕೇಂದ್ರದ ಮಾಜಿ ಕಾನೂನು ಸಚಿವರ ಮೊಮ್ಮಗ ಮತ್ತು ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ಮಗನಾದ ನ್ಯಾ.ಖಟ್ಜು ಅವರಂತಹ `ಬುದ್ಧಿಜೀವಿ ನ್ಯಾಯಮೂರ್ತಿ~ಗಳನ್ನು ಇತ್ತೀಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಕಂಡಿಲ್ಲ.

ಬಾಯಿಬಿಟ್ಟರೆ ಮಿರ್ಜಾ ಗಾಲಿಬ್, ಫಯಾಜ್ ಅಹ್ಮದ್ ಫಯಾಜ್ ಅವರಂತಹ ಕವಿಗಳ ಪದ್ಯಗಳನ್ನು ನಿರರ್ಗಳವಾಗಿ ಉದಹರಿಸುವ ಖಟ್ಜು ಅವರಿಗೆ  ಮಾತಿನ ಮೇಲೆ ಮಾತ್ರ ಲಗಾಮಿಲ್ಲ.

ಅದೇ ಅವರ ದೌರ್ಬಲ್ಯ.  ಸುಪ್ರೀಂ ಕೋರ್ಟ್‌ನಲ್ಲಿ ಅವರು ನಡೆಸಿರುವ ಕೆಲವು ಪ್ರಕರಣಗಳ ವಿಚಾರಣೆಗಳ ಸಂದರ್ಭದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಾನು ಕಿವಿಯಾರೆ ಕೇಳಿ ಬೆಚ್ಚಿ ಬಿದ್ದಿದ್ದೇನೆ.

ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟೀಕರಣವನ್ನೂ ನೀಡಿತ್ತು. ಆದರೆ ತಮ್ಮ ಮಾತಿನ ಅತಿರೇಕತನಗಳೆಲ್ಲ ವಿಚಾರಣಾ ಸಂದರ್ಭದ ಅಭಿಪ್ರಾಯಗಳಿಗಷ್ಟೇ ಸೀಮಿತಗೊಳಿಸುತ್ತಿದ್ದ ಅವರು, ತೀರ್ಪುಗಳಲ್ಲಿ ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ.

ಅವರ ಈ `ಜಾಣತನ~ದ ಕಾರಣದಿಂದಾಗಿಯೇ ಜನಪರ ಕಾಳಜಿಯ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿತ್ತು, `ಪ್ರಚಾರಪ್ರಿಯರು~ ಎನ್ನುವ ಆರೋಪವನ್ನು ಅವರು ಎದುರಿಸುವಂತಾಗಿತ್ತು.
ಪತ್ರಕರ್ತರ ಅಜ್ಞಾನವಾಗಲಿ, ವರದಿಗಾರಿಕೆಯಲ್ಲಿ ಮುಖ್ಯವಾಗಿ ಕೋಮುಗಲಭೆಗಳು ನಡೆದ ಸಂದರ್ಭದಲ್ಲಿ ಅವರು ತೋರಿಸುವ ಬೇಜವಾಬ್ದಾರಿತನಗಳಾಗಲಿ, ಸಿನಿಮಾ, ಕ್ರಿಕೆಟ್, ಜ್ಯೋತಿಷಗಳಿಗೆ ನೀಡಲಾಗುತ್ತಿರುವ ಅತಿ ಪ್ರಾಮುಖ್ಯತೆಯಾಗಲಿ, ಯಾವುದೂ ಹೊಸತಲ್ಲ.
ಬಹಿರಂಗವಾಗಿ ಬೀದಿಗಳಲ್ಲಿ ಮತ್ತು ಅಂತರಂಗದಲ್ಲಿ ಮಾಧ್ಯಮಗಳ ಕಚೇರಿಯೊಳಗೆ ಈ ವಿಷಯದ ಚರ್ಚೆ ನಡೆಯುತ್ತಲೇ ಇದೆ. ನ್ಯಾ.ಖಟ್ಜು ಅವರು ಎರಡು ತಪ್ಪುಗಳನ್ನು ಮಾಡಿದ್ದಾರೆ.
ಮೊದಲನೆಯದಾಗಿ ಎಲ್ಲ ಪತ್ರಕರ್ತರನ್ನು ಒಂದೇ ಸಾಲಲ್ಲಿ ನಿಲ್ಲಿಸಿ ಕತ್ತಿಬೀಸಿದ್ದಾರೆ, ಎರಡನೆಯದಾಗಿ ಬೀಸು ಹೇಳಿಕೆಗಳ ಮೂಲಕ ಆರೋಪಗಳನ್ನಷ್ಟೇ ಮಾಡಿದ್ದಾರೆ, ಅದರ ಹಿಂದಿನ ಕಾರಣಗಳನ್ನು ಚರ್ಚಿಸಲು ಹೋಗಿಲ್ಲ.
ಯಾರೂ ಹುಟ್ಟುಜ್ಞಾನಿಯಾಗಿರುವುದಿಲ್ಲ, ಹುಟ್ಟಿನೊಂದಿಗೆ ಬರುವುದು ಅಜ್ಞಾನ ಮಾತ್ರ. ಜ್ಞಾನವನ್ನು ಸಂಪಾದನೆ ಮಾಡಬೇಕಾಗುತ್ತದೆ. ಇದನ್ನು ಪತ್ರಕರ್ತರಿಗೆ ಸೀಮಿತಗೊಳಿಸಿ ಹೇಳುವುದಾದರೆ ಪತ್ರಕರ್ತರ ಜ್ಞಾನಸಂಪಾದನೆಯ ದಾರಿಯಲ್ಲಿಯೇ ದೋಷ ಇದೆ.
ಪತ್ರಕರ್ತರನ್ನು ನೇಮಿಸಿಕೊಳ್ಳಲು ಹೊರಟ ಎಲ್ಲ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರ ಅನುಭವ ಇದು. ಇತ್ತೀಚಿನ ದಿನಗಳಲ್ಲಿ ಪ್ರವೃತ್ತಿಯಿಂದ ಪತ್ರಕರ್ತರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದೊಂದು ಹೊಟ್ಟೆಪಾಡಿನ ವೃತ್ತಿ ಎಂದು ತಿಳಿದುಕೊಂಡವರೇ ಹೆಚ್ಚು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಕಲಿತು ಬಂದ ವಿದ್ಯಾರ್ಥಿಗಳ ಅರ್ಹತೆಯನ್ನೇ ಮಾನದಂಡವನ್ನಾಗಿಟ್ಟುಕೊಂಡು ಅವರಿಗೆ ಬೋಧನೆ ಮಾಡಿದವರ ಸಾಧನೆಯ ಮೌಲ್ಯಮಾಪನ ಮಾಡಿದರೆ ಶೇಕಡಾ 90ರಷ್ಟು ಪತ್ರಿಕೋದ್ಯಮದ ಗುರುಗಳು ಕೆಲಸ ಕಳೆದುಕೊಳ್ಳಬೇಕಾಗಬಹುದು.
ಬೋಧಿಸುವವರ ಅಜ್ಞಾನ, ನಿರಾಸಕ್ತಿ, ಪ್ರಾಯೋಗಿಕ ಅನುಭವದ ಕೊರತೆ  ಮತ್ತು ಕಾಲದ ಜತೆ ಹೆಜ್ಜೆಹಾಕಲಾಗದ ಜಿಡ್ಡುಗಟ್ಟಿದ ಮನಃಸ್ಥಿತಿ ಕೂಡಾ `ಅಜ್ಞಾನಿ~ ಪತ್ರಕರ್ತರ ಸಂತತಿಗೆ ಒಂದು ಕಾರಣ. ಇದರಲ್ಲಿ ಓಬಿರಾಯನ ಕಾಲದ ಪಠ್ಯಕ್ರಮದ ಕೊಡುಗೆಯೂ ಇದೆ. ಇದಕ್ಕೆ ಬಲಿಯಾಗುತ್ತಿರುವವರು ಮಾತ್ರ ಬಡಪಾಯಿ ವಿದ್ಯಾರ್ಥಿಗಳು.
ಮಾಧ್ಯಮ ಕ್ಷೇತ್ರದ  ಬಗ್ಗೆ ಸ್ವತಃ `ಅಜ್ಞಾನಿ~ಯಾಗಿರುವ ನ್ಯಾ.ಖಟ್ಜು ಅವರಿಗೆ ಇದೆಲ್ಲ ತಿಳಿದಿರಲಿಕ್ಕಿಲ್ಲ, ಮಾಧ್ಯಮರಂಗ ಮೈಯೊಡ್ಡುತ್ತಿರುವ ಕ್ಷಿಪ್ರಗತಿಯ ಬದಲಾವಣೆಗಳನ್ನೂ ಅವರು ಸರಿಯಾಗಿ ಗ್ರಹಿಸಿಲ್ಲ.
ಕಾನೂನು, ತತ್ವಜ್ಞಾನ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ  ಮೊದಲಾದ ಎಲ್ಲ ವಿಷಯಗಳಲ್ಲಿಯೂ ನ್ಯಾಯಮೂರ್ತಿಗಳಿಗೆ ಹೇಗೆ ಪಾಂಡಿತ್ಯ ಬೇಕಾಗುವುದಿಲ್ಲವೋ ಹಾಗೆ ಪತ್ರಕರ್ತರು ಕೂಡಾ ಆ ಎಲ್ಲ ವಿಷಯಗಳಲ್ಲಿ ಪಂಡಿತರಾಗಬೇಕಾಗಿಲ್ಲ. ಅವರ ಕೆಲಸ ಸಂಶೋಧನಾ ಪ್ರಬಂಧ ಮಂಡನೆ ಅಲ್ಲ.

ವರದಿ, ವಿಶ್ಲೇಷಣೆ, ಲೇಖನಗಳ ಬರವಣಿಗೆ ಅಷ್ಟೇ ಅವರ ಕೆಲಸ. ಅದಕ್ಕೆ ಬೇಕಾದಷ್ಟು ಜ್ಞಾನವನ್ನು ಅವರು ಹೊಂದಿದ್ದರೆ ಸಾಕು. ಅಷ್ಟೂ ಇಲ್ಲದೆ ಇದ್ದವರು ಇರುವುದೂ ನಿಜ. ಬಾಡಿಗೆ ಬರಹಗಾರರನ್ನು ಇಟ್ಟುಕೊಂಡು ಪತ್ರಕರ್ತರೆಂದು, ಅಂಕಣಕಾರರೆಂದು ಮೆರೆಯುತ್ತಿರುವ ಹಿರಿಯ ಪತ್ರಕರ್ತರೂ ನಮ್ಮಲ್ಲಿದ್ದಾರೆ.
 ಮಾಧ್ಯಮ ಸಂಸ್ಥೆಗಳಲ್ಲಿ ಕೂಡಾ `ಪ್ರತಿಭೆಗಿಂತಲೂ ಹೆಚ್ಚಾಗಿ ರಾಜಕಾರಣಿಗಳ ಜತೆಗಿನ `ಸಂಪರ್ಕ~ದ ಆಧಾರದಲ್ಲಿ ಪತ್ರಕರ್ತರನ್ನು ನೇಮಿಸಿಕೊಳ್ಳುವ ಕೆಟ್ಟಚಾಳಿಯೂ ಬೆಳೆಯುತ್ತಿದೆ. ಇದರ ಜತೆಗೆ ಒಂದಷ್ಟು ಸಕಾರಾತ್ಮಕವಾದ ಬೆಳವಣಿಗೆಗಳು ನಡೆಯುತ್ತಿವೆ.
ಮೊಳೆ ಜೋಡಿಸುವುದರಿಂದ ಹಿಡಿದು ಪತ್ರಿಕೆ ವಿತರಿಸುವವರೆಗೆ ಎಲ್ಲವನ್ನೂ ಒಬ್ಬರೇ ಮಾಡುತ್ತಿದ್ದ ಮತ್ತು ಎಲ್ಲ ವಿಷಯಗಳನ್ನು ಒಬ್ಬರೇ ವರದಿ ಮಾಡುತ್ತಿದ್ದ ಕಾಲ ಸರಿದುಹೋಗಿದೆ. ಈಗ `ಸ್ಪೆಷಲೈಷೇಶನ್~ಗಳ ಕಾಲ. ನಿರ್ದಿಷ್ಟವಾದ ವಿಭಾಗಕ್ಕೆ ಅಗತ್ಯವಾದ ವಿಷಯವನ್ನು ಅಭ್ಯಾಸ ಮಾಡಿದವರನ್ನೇ ನೇಮಿಸಲಾಗುತ್ತಿದೆ.
ಆದ್ದರಿಂದ ಸಮೂಹ ಮಾಧ್ಯಮ ಅಧ್ಯಯನ ಮಾಡಿದವರು ಮಾತ್ರವಲ್ಲ, ಸಾಹಿತ್ಯ, ಇತಿಹಾಸ, ಕಾನೂನು ಮತ್ತು ಎಂಬಿಎ ಪದವೀಧರರು, ವೈದ್ಯರು, ಎಂಜಿನಿಯರ್‌ಗಳು ಕೂಡಾ ಪತ್ರಕರ್ತರಾಗಿ ನೇಮಕಗೊಳ್ಳುತ್ತಿದ್ದಾರೆ.

ನ್ಯಾಯಾಂಗದಲ್ಲಿ ಇಂತಹ ಅವಕಾಶ ಇಲ್ಲದೆ ಇರುವುದರಿಂದ ನ್ಯಾಯಮೂರ್ತಿಗಳು ಎಲ್ಲವನ್ನೂ ಓದಿಕೊಂಡಿರಬೇಕಾಗುತ್ತದೆ. ಇದು ನ್ಯಾ.ಖಟ್ಜು ಅವರ ಅನುಭವದ ಮಿತಿ.
ನ್ಯಾ.ಖಟ್ಜು ಅವರು ನೀಡಿರುವ ಸಂದರ್ಶನವನ್ನು ಅವರು ಹೇಳಿರುವ ವಿಷಯಕ್ಕಲ್ಲ, ಹೇಳದೆ ಇರುವ ವಿಷಯಕ್ಕಾಗಿ ಆಕ್ಷೇಪಿಸಬೇಕಾಗುತ್ತದೆ. ಅವರು ಅಗತ್ಯವಾಗಿ ಚರ್ಚೆಯಾಗಬೇಕಾಗಿರುವ ಮುಖ್ಯ ವಿಷಯವನ್ನೇ ಕೈಬಿಟ್ಟಿದ್ದಾರೆ..

`ಭ್ರಷ್ಟರನ್ನು ಗಲ್ಲಿಗೇರಿಸಿ~ ಎಂದು ಒಂದು ಕಾಲದಲ್ಲಿ ಗುಡುಗಿದ್ದ ನ್ಯಾ.ಖಟ್ಜು ಅವರು ಅಜ್ಞಾನಿ ಪತ್ರಕರ್ತರ ಮೇಲೇರಿ ಹೋಗುವ ಭರದಲ್ಲಿ (ಇಲ್ಲವೇ ಉದ್ದೇಶಪೂರ್ವಕವಾಗಿ) ಮಾಧ್ಯಮರಂಗದ ಭ್ರಷ್ಟಾಚಾರವನ್ನು ಮರೆತೇ ಬಿಟ್ಟಿದ್ದಾರೆ. ಮಾಧ್ಯಮರಂಗ ಮತ್ತು ಸಮಾಜಕ್ಕೆ ಇಂದು ಯಾರಿಂದಾದರೂ ಹೆಚ್ಚು ಅನ್ಯಾಯವಾಗುತ್ತಿದ್ದರೆ ಅದು ಅಜ್ಞಾನಿ ಪತ್ರಕರ್ತರಿಂದಲ್ಲ, ಅದು ಭ್ರಷ್ಟ ಪತ್ರಕರ್ತರಿಂದ ಎನ್ನುವುದು ಕಟು ವಾಸ್ತವ.

ಕಾಸು ಪಡೆದು ಸುದ್ದಿ ಪ್ರಕಟಿಸುತ್ತಿದ್ದ, ರಾಡಿಯಾ ಟೇಪ್ ಹಗರಣ ಬಯಲು ಮಾಡಿದಂತೆ ರಾಜಕೀಯ ಸಂಪರ್ಕ ಬಳಸಿಕೊಂಡು ಕಾರ್ಪೋರೇಟ್ ದೊರೆಗಳ ದಲ್ಲಾಳಿಗಿರಿ ಮಾಡುತ್ತಿದ್ದ  ಮತ್ತು ಗಣಿ ಲೂಟಿಕೋರರಿಂದ ಕಾಣಿಕೆ ಪಡೆದಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಪತ್ರಕರ್ತರು ಖಂಡಿತ `ಅಜ್ಞಾನಿ~ಗಳು ಅಲ್ಲವೇ ಅಲ್ಲ, ಅವರೆಲ್ಲ ಪರಮ ಬುದ್ಧಿವಂತರು.

ನ್ಯಾ. ಖಟ್ಜು ಅವರ ನಿರೀಕ್ಷೆಯಂತೆ ಅವರೆಲ್ಲ ರಾಜಕೀಯ ಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರಗಳಲ್ಲಿ ಪಾರಂಗತರಾದವರು. ಮಾಧ್ಯಮರಂಗ ಇಂದು ಎದುರಿಸುತ್ತಿರುವ ಮಾರಣಾಂತಿಕ ರೋಗ ಭ್ರಷ್ಟಾಚಾರದ್ದು. ಗಲ್ಲು ಶಿಕ್ಷೆ ವಿಧಿಸುವುದನ್ನು ಹೊರತುಪಡಿಸಿ ನ್ಯಾ. ಖಟ್ಜು ಅವರಲ್ಲಿ ಈ ರೋಗ ಗುಣಪಡಿಸುವ ಬೇರೆ ಔಷಧಿಯೇನಾದರೂ ಇದೆಯೇ?
ಮಾಧ್ಯಮರಂಗವನ್ನು ಶುಚಿಗೊಳಿಸಬೇಕೆಂಬ ಪ್ರಾಮಾಣಿಕವಾದ ಉದ್ದೇಶ ನ್ಯಾ.ಖಟ್ಜು ಅವರಲ್ಲಿದ್ದರೆ ಅದನ್ನು ತೋರಿಸುವ ಒಂದು ಅವಕಾಶ ಅವರ ಮುಂದಿದೆ. `ಕಾಸಿಗಾಗಿ ಸುದ್ದಿ~ ಹಗರಣದ ಬಗ್ಗೆ ತನಿಖೆ ನಡೆಸಲು ಭಾರತೀಯ ಪತ್ರಿಕಾ ಮಂಡಳಿಯೇ ನೇಮಿಸಿದ್ದ ಉಪಸಮಿತಿ ನೀಡಿರುವ ವರದಿ ಅವರ ಮೇಜಿನ ಮೇಲಿದೆ. ಅದರಲ್ಲಿ ಅಪರಾಧ ಎಸಗಿದ ಪತ್ರಿಕಾ ಸಂಸ್ಥೆಗಳ ಹೆಸರೂ ಸೇರಿದಂತೆ ಎಲ್ಲ ವಿವರಗಳೂ ಇವೆ.

ಪತ್ರಿಕಾ ಮಂಡಳಿಯ ಹಿಂದಿನ ಅಧ್ಯಕ್ಷರಿಗೆ ಅದನ್ನು ಮುಟ್ಟಿನೋಡುವ ಧೈರ್ಯವೂ ಇರಲಿಲ್ಲ, ಶಕ್ತಿಶಾಲಿ ಪತ್ರಿಕಾಸಂಸ್ಥೆಗಳ ಮಾಲೀಕರ ಒತ್ತಡಕ್ಕೆ ಮಣಿದು ಅವರು ಆ ವರದಿಯನ್ನು ಮುಚ್ಚಿಟ್ಟಿದ್ದರು.

ನ್ಯಾ.ಖಟ್ಜು ಅಂತಹ ಒತ್ತಡಕ್ಕೆ ಮಣಿಯುವವರಲ್ಲವಾದ ಕಾರಣ ವರದಿ ಆಧಾರದಲ್ಲಿ ಅವರು ಕ್ರಮ ಕೈಗೊಂಡರೆ ಮಾಧ್ಯಮರಂಗಕ್ಕೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಜತೆಗೆ ರಾಡಿಯಾ ಟೇಪ್ ಹಗರಣ ಮತ್ತು ಗಣಿಲೂಟಿಕೋರರಿಂದ ಲಂಚ ಪಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಿ.
ನ್ಯಾ.ಖಟ್ಜು ಅವರು ಪ್ರಸ್ತಾಪಿಸಿರುವ ಎರಡನೇ ಮುಖ್ಯ ವಿಷಯ-ಸುದ್ದಿ ಪ್ರಕಟಣೆ ಮತ್ತು ಪ್ರಸಾರದಲ್ಲಿ ಮಾಧ್ಯಮಗಳು ತೋರಿಸುವ ಆದ್ಯತೆಗೆ ಸಂಬಂಧಿಸಿದ್ದು. ಅವರ ಆರೋಪದಲ್ಲಿ ಹುರುಳಿದೆ.

ಆದರೆ ಪೌಷ್ಟಿಕಾಂಶದ ಕೊರತೆಯಿಂದ ಸಾಯುತ್ತಿರುವ ಮಕ್ಕಳ ಬಗೆಗಿನ ಸುದ್ದಿಗಿಂತ ಐಶ್ಚರ್ಯ ರೈಗೆ ಮಗುವಾಗಿದ್ದು ದೊಡ್ಡ ಸುದ್ದಿಯಾಗುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ನ್ಯಾ.ಖಟ್ಜು ಅವರು ಯೋಚಿಸಿದಂತಿಲ್ಲ. ಎರಡನೆಯ ಸುದ್ದಿಗೆ ದೊಡ್ಡ ಸಂಖ್ಯೆಯ ಓದುಗ-ನೋಡುಗ ಜನವರ್ಗ ಇದೆ.

ಆದ್ದರಿಂದಲೇ ಅಂತಹ ಸುದ್ದಿಗಳಿಗಾಗಿ ಜಾಹೀರಾತು ಹರಿದು ಬರುತ್ತದೆ. ಒಂದು ಪತ್ರಿಕೆಯ ಶೇಕಡಾ 80ರಷ್ಟು ಆದಾಯ ಜಾಹೀರಾತಿನಿಂದಲೇ ಬರುತ್ತಿರುವುದರಿಂದ ಪತ್ರಿಕೆಯ ಮಾಲೀಕರಿಗೆ ಸಹಜವಾಗಿಯೇ ಐಶ್ಚರ‌್ಯ ರೈನ ಮಗುವೇ ಮುಖ್ಯವಾಗುತ್ತದೆ ಹೊರತು ಬಡಮಕ್ಕಳಲ್ಲ.
ಕೇವಲ ಪ್ರಚಾರಕ್ಕಾಗಿ ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ನ್ಯಾ.ಖಟ್ಜು ಅವರಂತಹ ಪ್ರಾಜ್ಞರು ಜಾಹೀರಾತಿನ  ವಿಷವರ್ತುಲದೊಳಗೆ ಸಿಕ್ಕಿಹಾಕಿಕೊಂಡಿರುವ ಮಾಧ್ಯಮಗಳ ಬಿಡುಗಡೆಗೆ ದಾರಿ ತೋರಿಸಬೇಕು.
ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟಮಾಡುವುದು ಕಾನೂನು ಪ್ರಕಾರ ಅಪರಾಧ. ಇದನ್ನು ಪತ್ರಿಕೆಗಳಿಗೂ ಯಾಕೆ ಅನ್ವಯಿಸಬಾರದು? ಈಗ ಪತ್ರಿಕೆಗಳ ಮುಖಬೆಲೆಗೂ ಅದರ ಉತ್ಪಾದನಾ ವೆಚ್ಚಕ್ಕೂ ಸಂಬಂಧವೇ ಇಲ್ಲದಂತಹ ಸ್ಥಿತಿ ಇದೆ.

ಇದನ್ನು ತಡೆಯಲು ನ್ಯಾಯಮೂರ್ತಿಗಳು ಒಂದು ಕಾನೂನನ್ನು ರಚಿಸಿ ಸರ್ಕಾರಕ್ಕೆ ಯಾಕೆ ಕಳುಹಿಸಬಾರದು? ಅನಾರೋಗ್ಯಕರವಾದ ದರಸಮರಕ್ಕೆ ಸಿಕ್ಕಿ ಮಾಧ್ಯಮ ಕ್ಷೇತ್ರ ದಾರಿ ತಪ್ಪುವುದನ್ನಾದರೂ ಇದರಿಂದ ತಪ್ಪಿಸಲು ಸಾಧ್ಯ.
ಮಾಧ್ಯಮ ಕ್ಷೇತ್ರದ ಕೆಂಗಣ್ಣಿಗೆ ಕಾರಣವಾದ ನ್ಯಾ.ಖಟ್ಜು ಅವರ ಹೇಳಿಕೆಯ ಮೂರನೆಯ ಅಂಶ- ಅವರು ಸರ್ಕಾರವನ್ನು ಕೇಳಿರುವ ಮಾಧ್ಯಮದ ಮೇಲಿನ ನಿಯಂತ್ರಣಾಧಿಕಾರ.  ಭಾರತೀಯ ಪತ್ರಿಕಾ ಮಂಡಳಿಯನ್ನು `ಹಲ್ಲಿಲ್ಲದ ಸಂಸ್ಥೆ~ ಎಂದು ಹಂಗಿಸುವ ಪತ್ರಕರ್ತರೇ ಇನ್ನೊಂದೆಡೆ ಅದಕ್ಕೆ ಹೆಚ್ಚಿನ ಅಧಿಕಾರ ನೀಡುವುದನ್ನು ವಿರೋಧಿಸುತ್ತಿರುವುದು ವಿಪರ್ಯಾಸದಂತೆ ಕಾಣುತ್ತಿರುವುದು ನಿಜ.

ಈ ಭೀತಿಗೂ ಕಾರಣ ಇದೆ. ಸ್ವಯಂ ಸರ್ಕಾರವೇ ನೇಮಿಸುವ ವ್ಯಕ್ತಿಯ ಕೈಗೆ ಕೊಡುವ ನಿಯಂತ್ರಣದ ಅಧಿಕಾರ ಪರೋಕ್ಷವಾಗಿ ಸರ್ಕಾರದ ಕೈಗೆ ಕೊಟ್ಟಂತಾಗುತ್ತದೆ. ಆದರೆ ಇದಕ್ಕೆ ಸ್ವಯಂ ನಿಯಂತ್ರಣ ಕೂಡಾ ಪರಿಹಾರ ಅಲ್ಲ, ಸ್ವಯಂನಿಯಂತ್ರಣ ವೈಯಕ್ತಿಕವಾಗಿ ಇಲ್ಲವೇ ಸಾಮಾಹಿಕವಾಗಿ ಯಶಸ್ವಿಯಾಗಿದ್ದು ಕಡಿಮೆ.

ಸುಲಭದ ಒಂದು ಪರಿಹಾರ ಇದೆ. ಶೀಘ್ರದಲ್ಲಿ ನೇಮಕಗೊಳ್ಳಲಿರುವ ಜನಲೋಕಪಾಲರ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳು ಸ್ವ ಇಚ್ಛೆಯಿಂದ ಯಾಕೆ ತಮ್ಮನ್ನು ಒಪ್ಪಿಸಿಕೊಳ್ಳಬಾರದು?

Monday, November 14, 2011

ಕರ್ನಾಟಕ ಹಳೆಯ ಬಿಹಾರ ಆಗುತ್ತಿದೆಯೇ?

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲವೇನೋ ಎಂಬ ಕಳವಳಕಾರಿ ಪರಿಸ್ಥಿತಿ ಆರು ತಿಂಗಳ ಹಿಂದಿನವರೆಗೂ ಇತ್ತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗದ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡವರಂತೆ ಜನ ಮಾತನಾಡುತ್ತಿದ್ದರು.

ಭ್ರಷ್ಟಾಚಾರದ ಗೆದ್ದಲು ಹಿಡಿದು ದುರ್ಬಲಗೊಂಡಿರುವ ಈ ನಾಲ್ಕು ಅಂಗಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯವೇ ಇಲ್ಲವೆನ್ನುವ ನಿರಾಶೆ ಅವರ ಮುಖದಲ್ಲಿತ್ತು.
ಕಾರ್ಯಾಂಗ ಮತ್ತು ಶಾಸಕಾಂಗದ ಬಗ್ಗೆ ಜನತೆಗೆ ಎಂದೂ ನಿರೀಕ್ಷೆ ಇರಲಿಲ್ಲ, ಆದರೆ ನಂಬಿಕೆ ಇಟ್ಟುಕೊಂಡಿದ್ದ ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆಯೂ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಜನತೆ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ನಿಜ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಕ್ತವಾದ ಬೆಂಬಲಕ್ಕೆ ಜನಸಮೂಹದಲ್ಲಿದ್ದ ಈ ನಿರಾಶೆ ಮತ್ತು ಹತಾಶೆಯೂ ಕಾರಣ.
ಭ್ರಷ್ಟಾಚಾರದ ಆರೋಪದ ಮೇಲೆ ಯಾರಾದರೂ ರಾಜಕಾರಣಿಗಳು ಜೈಲಿಗೆ ಹೋಗುವುದಿದ್ದರೆ ಅದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶಗಳಲ್ಲಿ ಮಾತ್ರ ಎಂದು ಎಲ್ಲರೂ ತಿಳಿದುಕೊಂಡಿದ್ದ ಕಾಲವೊಂದಿತ್ತು.
ಆ ನಿಯಮಕ್ಕೆ ಅಪವಾದವೆಂಬಂತೆ ಜೈಲು ಸೇರಿದವರು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾತ್ರ. ಉತ್ತರದ ಮೂರು ರಾಜ್ಯಗಳಲ್ಲಿ ಜೈಲಿಗೆ ಹೋಗಿರುವ ಬಹುತೇಕ ಶಾಸಕರು ಮತ್ತು ಸಂಸದರು ಅಪರಾಧ ಜಗತ್ತಿನಿಂದಲೇ ಬಂದವರಾಗಿರುವುದರಿಂದ ಅವರ ಬಂಧನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಮತ್ತು ಮಧುಕೋಡಾ ಅವರ `ಖ್ಯಾತಿ~ ಜೈಲು ಸೇರುವ ಮೊದಲೇ ದೇಶದಾದ್ಯಂತ ಹರಡಿದ್ದ ಕಾರಣ ಅವರ ಬಂಧನ ಯಾರಿಗೂ ಅಚ್ಚರಿ ಉಂಟುಮಾಡಿರಲಿಲ್ಲ. ಅದನ್ನು ನ್ಯಾಯಾಂಗದ ಕ್ರಿಯಾಶೀಲತೆ ಎಂದು ಯಾರೂ ವ್ಯಾಖ್ಯಾನಿಸಲೂ ಇಲ್ಲ.

ಆದರೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈಗ ಮುಖ್ಯಮಂತ್ರಿಗಳು, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಕಾರ್ಪೋರೇಟ್ ಕುಳಗಳು ಎಲ್ಲರೂ ಜೈಲಿನ ಅನ್ನ ತಿನ್ನತೊಡಗಿದ್ದಾರೆ. ಈ ಬದಲಾವಣೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪನೆ ಮಾಡಿರುವುದು.
ಆಡಳಿತ ಪಕ್ಷದ ಕೈಗೊಂಬೆ ಎಂಬ ತಮ್ಮ ಮೇಲಿನ ಆರೋಪವನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದು ಕಡಿಮೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಕಟ್ಟಿದ ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿದ್ದೇ ಹೆಚ್ಚು.

ಅದೇ ಸ್ಥಿತಿ ಮಹಾಲೇಖಪಾಲರದ್ದು (ಸಿಎಜಿ). ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಸಂವಿಧಾನಬದ್ಧ ಸಂಸ್ಥೆಯಾಗಿ ರಚನೆಗೊಂಡರೂ ಅದೊಂದು ಹಲ್ಲಿಲ್ಲದ ಸಂಸ್ಥೆಯಾಗಿಯೇ ಉಳಿದಿತ್ತು. ಅದು ನೀಡಿದ ವರದಿ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಅಪರೂಪ. ಅದರ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲಾಗುತ್ತಿತ್ತು.

ಭ್ರಷ್ಟಾಚಾರ ನಿಗ್ರಹ ಕಾಯಿದೆ 1947ರಿಂದಲೇ ಜಾರಿಯಲ್ಲಿದ್ದರೂ ಅದಕ್ಕೆ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಹಾಕುವ ಶಕ್ತಿ ಇರಲಿಲ್ಲ.  ಚುನಾವಣಾ ಅಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಕೂಡಾ ಹಲವಾರು ಬಾರಿ ಅಸಹಾಯಕತೆಯಿಂದ ಕೈಚೆಲ್ಲಿತ್ತು.

ಸವಾಲು ಹಾಕುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದ `ಆಪರೇಷನ್ ಕಮಲ~ವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತರಿದ್ದ ರಾಜ್ಯಗಳಲ್ಲಿ ಸಾಲುಸಾಲು ದಾಳಿ ನಡೆಸಿದ್ದರೂ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಕೇಳಿದರೆ ಉತ್ತರ ನೀಡುವ ಸ್ಥಿತಿಯಲ್ಲಿ ಅವುಗಳೂ ಇರಲಿಲ್ಲ.
ಇವೆಲ್ಲವೂ ಆರೇಳು ತಿಂಗಳು, ಹೆಚ್ಚೆಂದರೆ ಒಂದು ವರ್ಷದ ಹಿಂದಿನ ಕತೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಕ್ರಿಯಾಶೀಲವಾಗಿರುವ ನ್ಯಾಯಾಂಗ, ಆಡಳಿತ ನಡೆಸುವವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸಿಬಿಐ ಹೆಸರು ಹೇಳಿದಾಕ್ಷಣ ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಗಳ ನಾಯಕರು ಕೂಡಾ ನಡುಗತೊಡಗಿದ್ದಾರೆ.
ಮಹಾಲೇಖಪಾಲರ ವರದಿ ಕೇಂದ್ರ ಸಚಿವರು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಜೈಲು ಸೇರುವಂತೆ ಮಾಡಿದೆ. ಮುಖದಲ್ಲಿ ಅಲ್ಲಲ್ಲಿ ಕಳಂಕ ಮೆತ್ತಿಕೊಂಡಿದ್ದರೂ ಪೈಪೋಟಿಗೆ ಬಿದ್ದ ಮಾಧ್ಯಮಗಳು ಭ್ರಷ್ಟಾಚಾರದ ಹಗರಣಗಳನ್ನು ಬಚ್ಚಿಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಬಯಲು ಮಾಡುತ್ತಲೇ ಇವೆ.
ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಈ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಹಣದಿಂದ ರಾಜ್ಯ ರಾಜಕೀಯವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸೋದರರಲ್ಲಿ ಒಬ್ಬರು ಜೈಲು ಸೇರಿದ್ದಾರೆ.
ಮೊದಲು ಮಹಾನಗರಪಾಲಿಕೆ ಸದಸ್ಯ, ನಂತರ ಸಚಿವರು ಕೊನೆಗೆ ಮುಖ್ಯಮಂತ್ರಿಗಳೇ ಜೈಲು ಸೇರಬೇಕಾಯಿತು. ಉಳಿದ ಸಚಿವರು ಜೈಲಿಗೆ ಹೋಗಲು ಸರತಿ ಸಾಲಲ್ಲಿ ನಿಂತಿದ್ದಾರೆ. ಲೋಕಾಯುಕ್ತ ವರದಿಯ ಕುಣಿಕೆ ಇನ್ನೆಷ್ಟು ಮಂದಿಯ ಕೊರಳಿಗೆ ಬೀಳುತ್ತದೆಯೋ ಗೊತ್ತಿಲ್ಲ.
ಇಷ್ಟಾದ ಮೇಲೆ ನ್ಯಾಯಾಲಯ, ಸಿಬಿಐ, ಸಿಎಜಿ, ಲೋಕಾಯುಕ್ತದ ಕಾರ‌್ಯನಿರ್ವಹಣೆಯ ಬಗ್ಗೆ ಯಾರೂ ಬೊಟ್ಟು ಮಾಡುವಂತಿಲ್ಲ. ಈಗ ಪ್ರಜಾಪ್ರಭುತ್ವಕ್ಕೆ ಭಾರತದ ನೆಲದಲ್ಲಿ ಭವಿಷ್ಯ ಇಲ್ಲ ಎಂಬ ಸಿನಿಕತನವನ್ನು ಯಾರೂ ವ್ಯಕ್ತಪಡಿಸಬೇಕಾಗಿಲ್ಲ. ಸಂವಿಧಾನ ವಿಫಲಗೊಂಡಿದೆ ಎಂದು ಯಾರೂ ದೂರುವಂತೆಯೂ ಇಲ್ಲ. ಅವುಗಳು ಮಾಡಬೇಕಾಗಿರುವ ಕೆಲಸವನ್ನು ಮಾಡಿವೆ.

ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ಕಾಣಬಯಸುವರು, ಪ್ರಜಾಪ್ರಭುತ್ವವನ್ನು ಪ್ರೀತಿಸುವವರು, ಸಂವಿಧಾನದ ಮೇಲೆ ಗೌರವ ಇಟ್ಟುಕೊಂಡವರೆಲ್ಲರೂ ಈ ಸಂಸ್ಥೆಗಳ ಕರ್ತವ್ಯಪ್ರಜ್ಞೆ, ನ್ಯಾಯನಿಷ್ಠುರತೆ ಮತ್ತು ಇಚ್ಛಾಶಕ್ತಿಯಿಂದ ಕೂಡಿರುವ ಕಾರ್ಯ ನಿರ್ವಹಣೆಯನ್ನು ಮೆಚ್ಚಬೇಕು, ಬೆಂಬಲ ನೀಡಬೇಕು ಅಲ್ಲವೇ. ಹಾಗಾಗುತ್ತಿದೆಯೇ?
ಭ್ರಷ್ಟಾಚಾರದ ಆರೋಪ ಹೊತ್ತವರನ್ನು ನ್ಯಾಯಾಲಯ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಕಳುಹಿಸಿದರೆ ಅವರನ್ನು ಭೇಟಿ ಮಾಡಲು ಸ್ವಾಮೀಜಿಗಳು ಗುಂಪುಗುಂಪಾಗಿ ಜೈಲಿಗೆ ಹೋಗುತ್ತಾರೆ. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದವರಿಗೆ ಅವರ ಅಭಿಮಾನಿಗಳು ವೀರೋಚಿತವಾದ ಸ್ವಾಗತ ನೀಡುತ್ತಾರೆ.

ಈ ಪರಿಸ್ಥಿತಿಯಲ್ಲಿ ನ್ಯಾಯನಿಷ್ಠುರತೆಯಿಂದ ಕೆಲಸ ನಿರ್ವಹಿಸಿದ ಲೋಕಾಯುಕ್ತದ ಒಬ್ಬ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳ ಪರಿಸ್ಥಿತಿ ಏನಾಗಬೇಕು? ತಾಂತ್ರಿಕವಾಗಿ ಇದು ನ್ಯಾಯಾಂಗದ ನಿಂದನೆ ಅಲ್ಲದೆ ಇರಬಹುದು, ಆದರೆ ನೈತಿಕವಾಗಿ? ಪ್ರಾಮಾಣಿಕರನ್ನು ನೈತಿಕವಾಗಿ ಕುಂದಿಸಲು ಇಂತಹ ಸಮಾಜ ವಿರೋಧಿ ನಡವಳಿಕೆಗಳು ಸಾಕಲ್ಲವೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರವಲ್ಲ ಎ.ರಾಜಾ, ಸುರೇಶ್ ಕಲ್ಮಾಡಿ, ಕನಿಮೊಳಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಸೇರಿದಂತೆ ಭ್ರಷ್ಟಾಚಾರದ ಹಗರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿರುವವರೆಲ್ಲರೂ ಅವರೇ ಹೇಳಿಕೊಂಡಂತೆ ನಿರಪರಾಧಿಗಳಾಗಿರಲೂಬಹುದು. ಆದರೆ ಸದ್ಯಕ್ಕೆ ಯಾವ ನ್ಯಾಯಾಲಯವೂ ಅವರನ್ನು ದೋಷಮುಕ್ತರನ್ನಾಗಿ ಮಾಡಿಲ್ಲ.
ಆರೋಪಿಗಳಿಗೆ ದೋಷ ಮುಕ್ತರಾಗುವ ಅವಸರ ಸಹಜ. ಆದರೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಧಾರ್ಮಿಕ ನಾಯಕರಿಗೆ, ಸಮಾಜದ ಗಣ್ಯರಿಗೆ ನಿರಪರಾಧಿತನದ ಸರ್ಟಿಫಿಕೇಟ್ ನೀಡುವ ಅವಸರ ಯಾಕೆ?  ಭಾರತದ ರಾಜಕೀಯದ ಆರೋಗ್ಯ ಹಾಳು ಮಾಡಿರುವುದು ದುಡ್ಡು ಮತ್ತು ಜಾತಿ ಎಂಬ ಎರಡು ರೋಗಗಳು.
`ದುಡ್ಡಿನ ಬಲದಿಂದ ಏನಾದರೂ ಮಾಡಬಲ್ಲೆ, ಸರ್ಕಾರವನ್ನು ಸ್ಥಾಪಿಸಬಲ್ಲೆ, ಅಗತ್ಯವೆನಿಸಿದರೆ ಅದನ್ನು ಉರುಳಿಸಲು ಬಲ್ಲೆ~ ಎಂದಲ್ಲವೇ ರೆಡ್ಡಿ ಸೋದರರು ಹೇಳುತ್ತಿದ್ದದ್ದು.
ಯಡಿಯೂರಪ್ಪನವರು `ಆಪರೇಷನ್ ಕಮಲ~ವನ್ನು ವಿಧಾನಸೌಧದಿಂದ ಹಾಲಿನ ಸೊಸೈಟಿವರೆಗೆ ಎಲ್ಲೆಂದರಲ್ಲಿ ನಡೆಸಿ ವಿರೋಧಿಗಳು ಅಸಹಾಯಕರಂತೆ ಬಾಯಿಬಡಿದುಕೊಳ್ಳುವಂತೆ ಮಾಡಿದ್ದು ಇದೇ ದುಡ್ಡಿನ ಬಲದಿಂದ ಅಲ್ಲವೇ?

ಆದರೆ ನ್ಯಾಯ ಪಾಲನೆಯ ಸಂಸ್ಥೆಗಳು ಮೇಲೆರಗಿದಾಗ ಚಿನ್ನದ ಸಿಂಹಾಸನದ ಮೇಲೆ ಕೂತಿದ್ದ ಜನಾರ್ದನ ರೆಡ್ಡಿಯವರಿಗೂ ತಾವು ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಾಗದ ದುಡ್ಡು ಒಂದು ಕ್ಷಣ ನಿಷ್ಪ್ರಯೋಜಕ ಎಂದು ಅವರಿಗೆ ಅನಿಸಿರಬಹುದು.
ಯಡಿಯೂರಪ್ಪ, ಎ.ರಾಜಾ, ಸುರೇಶ್ ಕಲ್ಮಾಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ -ಇವರಲ್ಲಿ ಯಾರಿಗೂ ದುಡ್ಡಿನ ಕೊರತೆ ಇಲ್ಲ. `ದುಡ್ಡೊಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲೆ~ ಎಂದು ಬಲವಾಗಿ ನಂಬಿದವರು ಇವರೆಲ್ಲ.

ರಾಜಕಾರಣಿಗಳು ನಂಬಿದ್ದ ದುಡ್ಡಿನ ಸೊಂಟವನ್ನು ನ್ಯಾಯದ ದಂಡ ಮುರಿದುಹಾಕಿದೆ. ಕೇವಲ ದುಡ್ಡಿನ ಬಲದಿಂದಲೇ ರಾಜಕೀಯದಲ್ಲಿ ಉಳಿಯಲು-ಬೆಳೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈಗಿನ ಬೆಳವಣಿಗೆಗಳು ಮನವರಿಕೆ ಮಾಡಿಕೊಟ್ಟಿವೆ. ಆದರೆ ಜಾತಿ?
ರಾಜಕೀಯವನ್ನು ಕಾಡುತ್ತಿರುವ ಜಾತಿಯ ರೋಗಕ್ಕೆ ಕಾನೂನಿನಲ್ಲಿಯೂ ಔಷಧಿ ಇಲ್ಲ.
ಅಸ್ಪೃಶ್ಯತೆ ಆಚರಣೆಗೆ, ಜಾತಿ ಆಧಾರದ ತಾರತಮ್ಯಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ಜಾತಿಯ ಕಾರಣಕ್ಕೆ ಭ್ರಷ್ಟರು, ಅಪ್ರಾಮಾಣಿಕರು, ಅನರ್ಹರು ಇಲ್ಲವೇ ಅಪರಾಧಿಗಳನ್ನು ಬೆಂಬಲಿಸುವವರಿಗೆ ಎಲ್ಲಿದೆ ಶಿಕ್ಷೆ?

ಈ ಕಾರಣದಿಂದಾಗಿಯೇ ದುಡ್ಡಿನ ಬಲದಿಂದ ಮಾಡಲಾರದ್ದನ್ನು ಜಾತಿಯ ಬಲದ ಮೂಲಕ ಮಾಡಲು  ಕರ್ನಾಟಕದ ರಾಜಕಾರಣಿಗಳು ಹೊರಟಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯಡಿಯೂರಪ್ಪನವರು ಆತ್ಮರಕ್ಷಣೆಗಾಗಿ ಜೋತುಬಿದ್ದಿರುವುದು ಜಾತಿ ಮೇಲೆ.
ಪಕ್ಷದೊಳಗೆ ಮತ್ತು ಹೊರಗೆ ಇರುವ ಅವರ ವಿರೋಧಿಗಳು ಕೂಡಾ ಅವರಿಗೆ ಹೆದರುತ್ತಿರುವುದು ಅವರಿಗಿದೆಯೆಂದು ಹೇಳಲಾಗುತ್ತಿರುವ ಜಾತಿ ಬೆಂಬಲಕ್ಕಾಗಿ.
ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಆರೋಪವಿರುವುದನ್ನು ಪ್ರತಿಭಟಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಪಕ್ಷವನ್ನೂ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶ್ರಿರಾಮುಲು ಅವರೂ ಮತ್ತೆ ಗೆದ್ದು ಬರುತ್ತೇನೆಂದು ಸವಾಲು ಹಾಕುತ್ತಿರುವುದಕ್ಕೂ ಜಾತಿ ಕಾರಣ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜಾತಿ ಜನ ಬಹುಸಂಖ್ಯೆಯಲ್ಲಿದ್ದಿದ್ದರೆ ದೇವೇಗೌಡರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದನ್ನೇ ಮಾಡುತ್ತಿದ್ದರು.
ಕರ್ನಾಟಕದ ರಾಜಕೀಯದ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹತ್ತುವರ್ಷಗಳ ಹಿಂದಿನ ಬಿಹಾರ ನೆನಪಾಗುತ್ತದೆ. ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ~ಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶಿಸಿದ್ದ ಲಾಲುಪ್ರಸಾದ್ ಜಾತಿವಾದಿಯೇನೂ ಆಗಿರಲಿಲ್ಲ.

ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಸಾಧನೆ ಜನ ಕೊಂಡಾಡುವಂತಿತ್ತು. ನಂತರದ ದಿನಗಳಲ್ಲಿ  ಭ್ರಷ್ಟಗೊಳ್ಳುತ್ತಾ ಹೋದ ಲಾಲು ರಾಜಕೀಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾತಿವಾದಿಯಾಗುತ್ತಾ ಹೋದರು.

ಜಾತಿ ಸಂಘರ್ಷದ ಮೂಲಕವೇ ಜಾತಿ ನಾಶ ಮಾಡಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಸಮಾಜವಾದದ ಪಾಠವನ್ನು ತಿರುಚಿದ ಲಾಲು, ರಾಜಕೀಯ ಉಳಿವಿಗಾಗಿ ಜಾತಿ ಕಲಹವನ್ನು ಬಳಸಿಕೊಂಡರು.
ಲಾಲು ಅವರ ಜಾತಿ ರಾಜಕೀಯವನ್ನು ಜಾತಿಯಿಂದಲೇ ಎದುರಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಬಿಹಾರದ ರಾಜಕೀಯವೇ ಜಾತಿಮಯವಾಗಿ ಹೋಯಿತು.
ಬಿಹಾರದ ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಅವರು `ಪ್ರತಿಕ್ರಿಯೆ~ ಆದರೇ  ಹೊರತು `ಪರಿಹಾರ~ ಆಗಲಿಲ್ಲ. ಜನ ಎಚ್ಚೆತ್ತು ಕೊಳ್ಳಲು ಹದಿನಾರು ವರ್ಷ ಬೇಕಾಯಿತು. ಅಷ್ಟರಲ್ಲಿ ಬಿಹಾರ `ಜಂಗಲ್ ರಾಜ್~ ಆಗಿತ್ತು. ಕೊನೆಗೂ ಲಾಲು ಅವರನ್ನು ಬೆಂಬಲಿಸುತ್ತಾ ಬಂದಿದ್ದ ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ 13ರಷ್ಟಿರುವ ಯಾದವರು ತಿರುಗಿಬಿದ್ದರು.
ಲಾಲು ಇತಿಹಾಸದ ಕಸದ ಬುಟ್ಟಿ ಸೇರಿದರು. ಇತಿಹಾಸ ಪುನರಾವರ್ತನೆಯಾಗುವಾಗ ಒಮ್ಮಮ್ಮೆ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತದೆಯಂತೆ.
ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಜಾತಿ ರಾಜಕೀಯವನ್ನು ನೋಡಿದರೆ ಬಿಹಾರದ ಇತಿಹಾಸ ಕರ್ನಾಟಕದಲ್ಲಿ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ತಡೆಯಲು ದೇಶದ ನ್ಯಾಯಪಾಲನಾ ವ್ಯವಸ್ಥೆ ಶಕ್ತಿ ಮೀರಿಪ್ರಯತ್ನ ಮಾಡುತ್ತಿದೆ, ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ಜನತೆ.

Monday, November 7, 2011

ಹಾದಿ ತಪ್ಪುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿ

..ಎಲ್ಲಿಯವರೆಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ, ಅಲ್ಲಿಯವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು.
ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ಧವಾಗಬೇಕಾಗಬಹುದು.
ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿ ಮತ್ತು ಶಕ್ತಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ.
ರಾಜಕೀಯ ಪಕ್ಷಗಳು ಕೂಡಾ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ~ ಎಂದು ಏಳು ತಿಂಗಳ ಹಿಂದೆ ಈ ಅಂಕಣದಲ್ಲಿ (`ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ~) ಬರೆದಾಗ ಕೆಲವು ಅಣ್ಣಾ ಬೆಂಬಲಿಗರು `ಅಷ್ಟೊಂದು ಸಿನಿಕರಾಗುವುದು ಬೇಡ~ ಎಂದಿದ್ದರು.
ಅವರಲ್ಲಿ ಕೆಲವರಿಗಾದರೂ ಅಣ್ಣಾ ಹಜಾರೆ ಅವರು ಈಗ ನಿರಾಶೆ ಉಂಟು ಮಾಡಿರಬಹುದು.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಪ್ರಾರಂಭಿಸಿದಾಗ ಪ್ರಮುಖವಾಗಿ ಎರಡು ಕಾರಣಗಳಿಂದಾಗಿ ಜನಬೆಂಬಲ ಹರಿದು ಬಂದಿತ್ತು. ಮೊದಲನೆಯದಾಗಿ ಸಾರಾಸಗಟಾಗಿ ರಾಜಕಾರಣಿಗಳನ್ನು ದ್ವೇಷಿಸುವಷ್ಟು ರಾಜಕೀಯದ ಬಗ್ಗೆ ಜನರು ಹೊಂದಿರುವ ತಿರಸ್ಕಾರ.
ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಆಕ್ರೋಶ. ಈ ಪರಿಸ್ಥಿತಿಯಲ್ಲಿ ಪ್ರವೇಶ ಮಾಡಿದ ಅಣ್ಣಾಹಜಾರೆ ಜನರ ಕಣ್ಣಿಗೆ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಲು ಬಂದ ಅವತಾರ ಪುರುಷನಂತೆ ಕಂಡಿದ್ದರು.
ಯಾಕೆಂದರೆ ಅಣ್ಣಾ ಹಜಾರೆ ರಾಜಕಾರಣಿಯಾಗಿರಲಿಲ್ಲ ಮತ್ತು ಪ್ರಾಮಾಣಿಕರಾಗಿದ್ದರು. ಇದು ಏಳು ತಿಂಗಳ ಹಿಂದಿನ ಕತೆ, ಈಗಲೂ ಅವರು ಅಂದಿನ ಅಣ್ಣಾ ಆಗಿಯೇ ಉಳಿದಿದ್ದಾರೆಯೇ? ಅವರ ಅಭಿಮಾನಿಗಳಿಗೂ ಉತ್ತರಿಸುವುದು ಕಷ್ಟ.

ರಾಜಕಾರಣಿಗಳನ್ನು ವಿರೋಧಿಸುತ್ತಲೇ ಅಣ್ಣಾ ಹಜಾರೆ ರಾಜಕಾರಣಿಯಾದಂತಿದೆ ಮತ್ತು ಇತರರ ವಿರುದ್ಧ ಬಳಸುತ್ತಿದ್ದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತು ಕುಯ್ಯತೊಡಗಿದೆ.
ಜನಪ್ರಿಯತೆಯಿಂದ ಸಾರ್ಥಕ್ಯದ ಭಾವನೆ ಮೂಡುವುದರಿಂದ ಅದು ವೈಯಕ್ತಿಕವಾಗಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗದೆ ಹೋದರೆ ಬಹಳ ಅಪಾಯಕಾರಿ.
ಸಂಭಾಳಿಸಿಕೊಳ್ಳಲಾಗದ ಜನಪ್ರಿಯತೆಯ ವ್ಯಸನಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುತೇಕ ದೇಶಗಳ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾದವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನವನ್ನು ಅಭಿಮಾನಿ ಬಳಗ ಮಾಡುತ್ತಾ ಬಂದಿದೆ.
ಅವರ ಜನಪ್ರಿಯತೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಿಕ್ಕಾಗಿ ಪಟ್ಟಭದ್ರ ರಾಜಕಾರಣಿಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಪ್ರಮುಖವಾಗಿ ಸಮಾಜ ಸೇವಕರು, ಚಿತ್ರನಟರು, ಕ್ರೀಡಾಪಟುಗಳು, ಉದ್ಯಮಿಗಳೆಲ್ಲ ಈ ಗುಂಪಲ್ಲಿ ಬರುತ್ತಾರೆ.
ಇವರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ, ಆದರೆ ಗುಂಡಿಗೆ ಬಿದ್ದವರೇ ಹೆಚ್ಚು. ಅಣ್ಣಾ ಹಜಾರೆ ವಿಷಯದಲ್ಲಿಯೂ ಇದು ನಡೆದಿದೆ.
ಕಳೆದ ಏಪ್ರಿಲ್‌ನಲ್ಲಿ ಮೊದಲ ಉಪವಾಸ ಕೈಬಿಟ್ಟ ಮರುಕ್ಷಣವೇ ಅವರನ್ನು ಮುತ್ತಿಕೊಂಡ ಪತ್ರಕರ್ತರು `ನೀವು ರಾಜಕೀಯ ಪ್ರವೇಶ ಮಾಡುತ್ತೀರಾ? ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?~ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲವೇ ಇಲ್ಲ ಎಂದು ಆ ಕ್ಷಣದಲ್ಲೇನೋ ಅಣ್ಣಾಹಜಾರೆ ತಲೆಕೊಡವಿಬಿಟ್ಟರು. ಆದರೆ ಅವರ ಅಕ್ಕಪಕ್ಕದಲ್ಲಿರುವ ತಲೆಗೆ ಆಗಲೇ ರಾಜಕೀಯದ ಗುಂಗಿಹುಳ ಪ್ರವೇಶ ಮಾಡಿಬಿಟ್ಟಿತ್ತು.
ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ದೇಶದಾದ್ಯಂತ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳಲ್ಲಿ, ಮುಖ್ಯವಾಗಿ 24ಗಂಟೆಗಳ ಸುದ್ದಿ ಚಾನೆಲ್‌ಗಳಲ್ಲಿ ನೀಡಲಾದ ಪ್ರಚಾರ, `ಅಣ್ಣಾ ಎಂದರೆ ಇಂಡಿಯಾ~ ಎನ್ನುವಂತಹ ಮೂರ್ಖ ಘೋಷಣೆಗಳು, `ಅಣ್ಣಾ ಸಂಸತ್‌ಗಿಂತಲೂ ದೊಡ್ಡವರು~ ಎನ್ನುವ ಅಪ್ರಬುದ್ಧ ಹೇಳಿಕೆಗಳು - ಎಂತಹ ಸಂಯಮಿಯ ಮನಸ್ಸೂ ಕೂಡಾ ಆಚೀಚೆ ಹೊಯ್ದಾಡಲು ಸಾಕು. ಇವತ್ತು `ಇಮೇಜ್ ಬಿಲ್ಡಿಂಗ್~ ಎನ್ನುವುದು ಬಹಳ ಜನಪ್ರಿಯ ದಂಧೆ.
ಅಣ್ಣಾ ಹಜಾರೆ ಜತೆಯಲ್ಲಿದ್ದವರು ಬಹಳ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಧಾನವಾಗಿ ಅಣ್ಣಾ ಹಜಾರೆ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಾ ಬಂದದ್ದು, ಎಲ್ಲರ ಮೈಮೇಲೆ `ಐ ಯಾಮ್ ಅನ್ನಾ~ ಎಂಬ ಘೋಷಣೆಗಳು ಕಾಣಿಸಲಾರಂಭಿಸಿದ್ದು ಇವೆಲ್ಲವೂ ಈ ಪ್ರಯತ್ನದ ಭಾಗ.
ಆದರೆ ನಾಮಬಲದಿಂದಲೇ ರಾಜಕೀಯದಲ್ಲಿ ಯಶಸ್ವಿಯಾಗುವ ಕಾಲ ಎಂದೋ ಕಳೆದುಹೋಗಿದೆ. ಯಶಸ್ವಿ ರಾಜಕಾರಣ ಮಾಡಲು ಬದ್ಧ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲ ಬೇಕಾಗುತ್ತದೆ.

ವಾರಂತ್ಯದ ರಜೆಗಳನ್ನು ಉಪವಾಸ ಶಿಬಿರದಲ್ಲಿ ಕಳೆದುಕೊಳ್ಳುವುದೇ ಸಮಾಜಸೇವೆ ಎಂದು ತಿಳಿದುಕೊಂಡ ಬೆಂಬಲಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡಲಾಗುವುದಿಲ್ಲ.
ಚುನಾವಣಾ ಸುಧಾರಣೆಯಾಗದ ಹೊರತು, ರಶೀದಿ ಕೊಟ್ಟು ಸಂಗ್ರಹಿಸುವ ದೇಣಿಗೆಯ ದುಡ್ಡಿನಿಂದ ಈಗಾಗಲೇ ಬೇರು ಬಿಟ್ಟಿರುವ ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವೂ ಇಲ್ಲ.
ರಾಜಕೀಯದ ಈ ವಾಸ್ತವ ಅಣ್ಣಾ ತಂಡಕ್ಕೆ ಖಂಡಿತ ಗೊತ್ತಿದೆ. ಅದಕ್ಕಾಗಿ ಅವರು `ಹವ್ಯಾಸಿ ರಾಜಕಾರಣ~ವನ್ನು ಪ್ರಾರಂಭಿಸಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುವುದು.
ಆ ಗೆಲುವೇ ತಮ್ಮ ಗೆಲುವು, ತಮ್ಮ ಬೇಡಿಕೆಗೆ ಸಿಕ್ಕ ಜನಮನ್ನಣೆ ಎಂದು ಹೇಳಿಕೊಂಡು ತಿರುಗಾಡುವುದು- ಇದು ಸದ್ಯಕ್ಕೆ ಅಣ್ಣಾ ತಂಡದ ಕಾರ್ಯತಂತ್ರ. ಆದರೆ ರಾಜಕಾರಣ ಎನ್ನುವುದು ಪೂರ್ಣಾವಧಿ ವೃತ್ತಿ, ಅದು ಹವ್ಯಾಸ ಅಲ್ಲ.

ಹವ್ಯಾಸಿ ರಾಜಕಾರಣಿಗಳನ್ನು ಜನ ಒಪ್ಪುವುದೂ ಇಲ್ಲ, ಯಾಕೆಂದರೆ ಅದು ಕರ್ತವ್ಯ ನಿರ್ವಹಣೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದ ರಾಜಕಾರಣ.
ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತಾವು ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ತಂಡ, ಅಲ್ಲಿ ಗೆದ್ದಿರುವ ಕುಲದೀಪ್ ವೈಷ್ಣೋವಿ ಅವರ ನಡವಳಿಕೆಗೆ ಉತ್ತರದಾಯಿಯಾಗುವುದೇ? `ಇಲ್ಲ~ ಎಂದಾದರೆ ಇದು ಪಲಾಯನವಾದವಾಗುವುದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಜನದ್ರೋಹವಾಗುವುದಿಲ್ಲವೇ?
ಅಣ್ಣಾ ಹಜಾರೆ ಅವರ ಅನಿಶ್ಚಿತ ನಿಲುವುಗಳಿಗೆ ಕೂಡಾ `ಹವ್ಯಾಸಿ ರಾಜಕಾರಣ~ ನೀಡುವ ಸ್ವಾತಂತ್ರ್ಯ ಕಾರಣ.
ಹಿಸ್ಸಾರ್ ಉಪಚುನಾವಣೆಯ ನಂತರ  ಅಣ್ಣಾ ಅವರು ದಿಢೀರ್ ಜ್ಞಾನೋದಯವಾದವರಂತೆ `ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಿಲ್ಲ~ ಎಂದು ಬಿಟ್ಟರು. ದೆಹಲಿಗೆ ಬಂದವರೇ ಮತ್ತೆ ಕಾಂಗ್ರೆಸ್ ವಿರುದ್ಧದ ಪ್ರಚಾರದ ಹಳೆ ಬೆದರಿಕೆಯನ್ನೇ ಪುನರುಚ್ಚರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಇತ್ತೀಚಿಗೆ ತಮ್ಮದೇ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್ ವರೆಗೆ ಕಳೆದ ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ನೀಡುತ್ತಾ ಬಂದ ಹೇಳಿಕೆಗಳನ್ನು ಗಮನಿಸುತ್ತಾ ಬಂದರೆ ಉದ್ದಕ್ಕೂ ಗೊಂದಲಕಾರಿ ನಿಲುವುಗಳನ್ನು ಕಾಣಬಹುದು.

ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಂದ ರೋಸಿಹೋದ ಜನರಿಗೆ ಅಣ್ಣಾ ಅವರಲ್ಲಿಯೂ ಅದೇ ಬಣ್ಣಗಳು ಕಂಡರೆ ಅವರನ್ನೂ ಹಳೆಯ ರಾಜಕಾರಣಿಗಳ ಗುಂಪಿಗೆ ಸೇರಿಸಿಬಿಡುವ ಅಪಾಯ ಇದೆ, ಹಾಗಾಗುತ್ತಿದೆ.
ಇದರಿಂದ ಈಗಾಗಲೇ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹಾನಿಯೂ ಆಗಿದೆ, ಇದು ಅಣ್ಣಾತಂಡಕ್ಕೆ ಗೊತ್ತಾಗಬೇಕು, ಅಷ್ಟೆ.ಇದರ ಜತೆಗೆ ಅಣ್ಣಾ ಹಜಾರೆಯವರು ಝಳಪಿಸುತ್ತಾ ಬಂದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತನ್ನೇ ಕುಯ್ಯತೊಡಗಿದೆ.
ಹಣದ ಮೊತ್ತ ಇಲ್ಲವೇ ಉದ್ದೇಶದ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ವಿರುದ್ಧ ಕೇಳಿ ಬಂದ ಆರೋಪಗಳು ಅಷ್ಟೊಂದು ಗಂಭೀರವಾದವೇನೂ ಅಲ್ಲ.

ಆದರೆ  ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಯ ಮಟ್ಟವನ್ನು ಇಷ್ಟೊಂದು ಎತ್ತರಕ್ಕೆ ಏರಿಸಿಟ್ಟವರು ಅದೇ ಮಟ್ಟದ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ.
ಚುನಾಯಿತ ಪ್ರತಿನಿಧಿಯೊಬ್ಬ ಮಾತಿನಲ್ಲಿ ಮಾತ್ರವಲ್ಲ, ಯೋಚನೆಯಲ್ಲಿಯೂ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತದೆ ಅಣ್ಣಾ ತಂಡ.
ಇದಕ್ಕಾಗಿಯೇ ಅಲ್ಲವೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಪ್ರಧಾನಿ ಸಾರ್ವಜನಿಕವಾಗಿ ಹೇಳಿದರೂ ನಂಬದೆ ಲಿಖಿತ ಹೇಳಿಕೆಗಾಗಿ ಒತ್ತಾಯಿಸಿದ್ದು.
ತೆರಿಗೆ ವಂಚನೆಯನ್ನು ಚಿತ್ರನಟನೋ, ಕೇಜ್ರಿವಾಲಾನೋ ಯಾರು ಮಾಡಿದರೂ ಅಪರಾಧವೇ. ತಾನು ತಪ್ಪನ್ನು ಮಾಡಿಲ್ಲ, ವರಮಾನ ತೆರಿಗೆ ಇಲಾಖೆಯೇ ದುರುದ್ದೇಶದಿಂದ ವರ್ತಿಸಿದೆ ಎನ್ನುವುದು ಅರವಿಂದ್ ಕೇಜ್ರಿವಾಲಾ ಅವರ ವಾದವಾಗಿದ್ದರೆ ಬಾಕಿ ಉಳಿಸಿಕೊಂಡಿರುವುದನ್ನು ಪಾವತಿ ಮಾಡದೆ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.
ಕಾನೂನಿನಲ್ಲಿ ಪರಿಣತಿ ಹೊಂದಿರುವ ಕೇಜ್ರಿವಾಲಾ ಅವರಿಗೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಬಾಕಿ ಪಾವತಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತಲ್ಲವೇ? ಹಾಗಿದ್ದರೆ ತನ್ನಿಂದ ತಪ್ಪಾಗಿದೆ ಎಂದಾದರೂ ಹೇಳಬಹುದಿತ್ತಲ್ಲವೇ?
ಇಷ್ಟು ಮಾತ್ರವಲ್ಲ, ಜನಲೋಕಪಾಲ ಚಳವಳಿಗಾಗಿ ಸಂಗ್ರಹಿಸಿದ್ದ ಹಣದಲ್ಲಿ ಸುಮಾರು 70-80 ಲಕ್ಷ ರೂಪಾಯಿಗಳನ್ನು ತಮ್ಮ `ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆ~ಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೂಡಾ ಕೇಜ್ರಿವಾಲಾ ಅವರ ಮೇಲಿದೆ. ಈ ಸಂಸ್ಥೆಯಲ್ಲಿ ಅಣ್ಣಾ ತಂಡದ ಯಾರೂ ಸದಸ್ಯರಾಗಿಲ್ಲ.
 ಕಿರಣ್ ಬೇಡಿಯವರದ್ದೂ ಇನ್ನೊಂದು  ಕತೆ. ಕಡಿಮೆ ಟಿಕೆಟ್ ದರದ ವಿಭಾಗದಲ್ಲಿ ವಿಮಾನ ಪ್ರಯಾಣ ಮಾಡಿ ಉಳಿಸಿದ ದುಡ್ಡನ್ನು ತಾನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗೆ ದೇಣಿಗೆಯಾಗಿ ನೀಡುವುದು ಒಳ್ಳೆಯ ಕೆಲಸ.
ಆದರೆ ಸರಳ ಜೀವಿ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕಿರಣ್ ಬೇಡಿ ಅವರಿಂದ ಒಂದು ಭಾಷಣ ಮಾಡಿಸಬೇಕಾದರೆ ಪ್ರಯಾಣಕ್ಕಾಗಿಯೇ 39ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆಯೆಂಬುದು ನಿಜಕ್ಕೂ ಅಚ್ಚರಿಯ ಸುದ್ದಿ.
ಅದೂ ಅಲ್ಲದೆ, ಕಿರಣ್ ಬೇಡಿಯವರು ತನ್ನ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಪ್ರಯಾಣವೆಚ್ಚವನ್ನು ಅಧಿಕವಾಗಿ ವಸೂಲಿ ಮಾಡಿರುವುದು ತನ್ನಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಂದೋರ್‌ನ `ಅಭ್ಯಾಸ್ ಮಂಡಳ್~ನಿಂದ ಎನ್ನುವುದು ಗಮನಾರ್ಹ.
ಕಿರಣ್ ಬೇಡಿಯವರ ಭಾಷಣದಿಂದ ಅಲ್ಲಿನ ಸಮಾಜಕ್ಕೆ ಏನು ಸೇವೆ ಆಗಿದೆಯೋ ಗೊತ್ತಿಲ್ಲ, ಆದರೆ ಆ ಭಾಷಣ ಮಾಡದಿದ್ದರೆ ಉಳಿಯುತ್ತಿದ್ದ ಕನಿಷ್ಠ 50 ಸಾವಿರ ರೂಪಾಯಿಗಳಿಂದ ಆ ಸಂಸ್ಥೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿತ್ತೋ ಏನೋ?
ಇವೆಲ್ಲವೂ ಸಣ್ಣ ವಿಚಾರಗಳು ನಿಜ, ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ನಡವಳಿಕೆಯಲ್ಲಿನ ಪ್ರಾಮಾಣಿಕತೆಯ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿರುವ ಅಣ್ಣಾ ತಂಡದ ಸದಸ್ಯರು ಅದನ್ನು ಪಾಲಿಸುವುದು ಬೇಡವೇ?
ತಮ್ಮ ವಿರುದ್ಧದ ಆರೋಪಗಳೆಲ್ಲವೂ ದುರುದ್ದೇಶದಿಂದ ಕೂಡಿದ್ದು ಎಂದು ಕೇಜ್ರಿವಾಲಾ ಮತ್ತು ಬೇಡಿ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೆ ಅಣ್ಣಾ ತಂಡದಿಂದ ಹೊರಬಿದ್ದಿರುವ ರಾಜಿಂದರ್‌ಸಿಂಗ್ ಮತ್ತು ಪಿ.ವಿ.ರಾಜಗೋಪಾಲ್ ಹಾಗೂ ಈಗಲೂ ತಂಡದಲ್ಲಿರುವ

ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಈ ಇಬ್ಬರು ಸದಸ್ಯರ ಬಗ್ಗೆ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನೂ ಹಾಗೆಯೇ ತಳ್ಳಿಹಾಕಲು ಸಾಧ್ಯವೇ? `ಸಾಧ್ಯ ಇಲ್ಲ~ ಎಂದಾದರೆ ದೇಶದ ಕೋಟ್ಯಂತರ ಸಾಮಾನ್ಯ ಜನ ಈಗಲೂ ಅಪಾರವಾದ ಭರವಸೆ ಇಟ್ಟುಕೊಂಡಿರುವ ಚಳವಳಿಯ ತಂಡವನ್ನು ಪುನರ್‌ರಚಿಸಿ ಅದನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯನ್ನಾಗಿ ಮಾಡಲು ಅಣ್ಣಾ ಹಜಾರೆಯವರು ಮುಂದಾಗಬೇಕು.
ಇದನ್ನು ಮಾಡಬೇಕಾದಾಗ ಒಂದಷ್ಟು ತಲೆ ಉರುಳಿಸಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ವಿಳಂಬ ಮಾಡಿದರೆ ಅನಾಹುತವಾದೀತು.

Monday, October 31, 2011

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.
ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ~ ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ~ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.
 ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ  ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.
ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ  ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ~ ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ  ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....
ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ~ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.
ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.
ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.
ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.
ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ~ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.
ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.
ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ~ ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ~ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು~ ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ  `ಕುಟುಕು ಕಾರ‌್ಯಾಚಾರಣೆ~ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು  ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?
ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.
ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.
ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ~ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.
ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ~ ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.
ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ~ ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?
ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ.  ಮೊದಲು `ಸೀಟಿ ಊದುವವರ~ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ~ ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು~ ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.
ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ  ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು~ ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.
ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ~ ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ~ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.
ಆದರೆ ಸರ್ಕಾರದ `ಲೋಕಪಾಲ ಮಸೂದೆ~ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.
`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.
ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು~ ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.
ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ~ ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.
ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ  `ತಾರಾಮೌಲ್ಯ~ ಗಳಿಸುವಷ್ಟು ಜನಪ್ರಿಯರು.
ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು~ ಕಾರಣ.
ಆದರೆ ಭಾರತದಲ್ಲಿ  ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ  ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?

Monday, October 24, 2011

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ನಿರ್ಧಾರದ ಅಂಚಿಗೆ ತಳ್ಳಬಹುದೆಂದು ಈಗಲೇ ಹೇಳಲಾಗುವುದಿಲ್ಲ.
ಉಸಿರುಗಟ್ಟುತ್ತಿರುವ ತಮ್ಮವರ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಇಲ್ಲವೇ, ತಮ್ಮನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡುವ ಇಲ್ಲವೇ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಈ ಬಂಡುಕೋರ ನಡವಳಿಕೆಯಲ್ಲಿ ಇದ್ದರೂ ಇರಬಹುದು.

ಆರ್‌ಎಸ್‌ಎಸ್‌ಗೆ ಸೇರಿದಂದಿನಿಂದ ಇಂದಿನವರೆಗೆ ಸುಮಾರು ಎಪ್ಪತ್ತು ವರ್ಷಗಳ ಅವರ ಜೀವನದಲ್ಲಿ ಅಡ್ವಾಣಿಯವರು ಈ ರೀತಿ ನಡೆದುಕೊಂಡೇ ಇಲ್ಲ. ಬಹಿರಂಗವಾಗಿ ಎಂದೂ ಪಕ್ಷಕ್ಕೆ ಇಲ್ಲವೇ ಸಂಘ ಪರಿವಾರಕ್ಕೆ ಸವಾಲು ಹಾಕದ ಅಡ್ವಾಣಿಯವರು 84ರ ಇಳಿವಯಸ್ಸಿನಲ್ಲಿ ತೋರುತ್ತಿರುವ ಬಂಡುಕೋರ ನಡವಳಿಕೆ ಈ ಕಾರಣದಿಂದಲೇ ಅಚ್ಚರಿ ಮೂಡಿಸುತ್ತದೆ.
 ಪಕ್ಷದ ಹಿತದೃಷ್ಟಿಯಿಂದ ನೋಡಿದರೆ ಇದು ಅಡ್ವಾಣಿಯವರು ರಥಯಾತ್ರೆ ಹೊರಡುವ ಸಮಯ ಅಲ್ಲ. ಇದು ಬಿಜೆಪಿಗೆ ಕಷ್ಟದ ಸಮಯ. ಕಾಡುತ್ತಿರುವುದು ಭ್ರಷ್ಟಾಚಾರ ಒಂದೇ ಅಲ್ಲ, ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಭಾರತೀಯ ಜನತಾ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಾಷ್ಟ್ರೀಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷ ಪಕ್ಷವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಹೊರಟಿರುವ ಅಡ್ವಾಣಿಯವರ ರಥಯಾತ್ರೆ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆಯೇ ಹೊರತು ಅದರ ಪರಿಹಾರಕ್ಕೆ ಖಂಡಿತ ನೆರವಾಗುತ್ತಿಲ್ಲ.
ಭಾರತೀಯ ಜನತಾ ಪಕ್ಷ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಭಾರಿ ಭರವಸೆ ಇಟ್ಟುಕೊಂಡಿರುವ ರಾಜ್ಯ ಗುಜರಾತ್. ಆದರೆ ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪಕ್ಷದೊಳಗೆ ಮತ್ತು ಹೊರಗೆ ವಿರೋಧದ ಅಲೆಯನ್ನು ಎದುರಿಸುತ್ತಿದ್ದಾರೆ.
ಮೋದಿ ಅವರ ಜನಪ್ರಿಯತೆಗೆ ಹೆದರಿ ಇಲ್ಲಿಯವರೆಗೆ ಅವರ ಉದ್ಧಟತನದ ನಡವಳಿಕೆಗಳೆಲ್ಲವನ್ನೂ ಸಹಿಸುತ್ತಾ ಬಂದ ಆರ್‌ಎಸ್‌ಎಸ್ ಈಗ ಅವರನ್ನು ನಿಯಂತ್ರಿಸಲು ಹೊರಟಿದೆ.

ಸಂಘದ ಸಲಹೆಯ ಪ್ರಕಾರವೇ ಸಂಜಯ್ ಜೋಷಿ ಎಂಬ ಮೋದಿ ಅವರ ಕಟ್ಟಾವಿರೋಧಿಯನ್ನು ಅಜ್ಞಾತವಾಸದಿಂದ ಬಿಡುಗಡೆಗೊಳಿಸಿ ನಿರ್ಣಾಯಕವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ.
ಐದು ವರ್ಷಗಳ ಹಿಂದೆ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಮೂಲೆಗೆ ತಳ್ಳಲ್ಪಟ್ಟ ಜೋಷಿ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿರುವುದು ಮೋದಿ ಅವರಿಗೆ ನೀಡಿರುವ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರಿಂದ ಮೋದಿ ಎಷ್ಟೊಂದು ಅಸಮಾಧಾನಗೊಂಡಿದ್ದರೆಂದರೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ‌್ಯಕಾರಿ ಸಮಿತಿ ಸಭೆಗೇ ಗೈರುಹಾಜರಾಗಿ ಬಿಟ್ಟರು. ಬಿಗಿಗೊಳ್ಳುತ್ತಿರುವ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕುಣಿಕೆಗಳು, ಸರ್ಕಾರಿ ಯಂತ್ರದ ದುರುಪಯೋಗದ ಆರೋಪಗಳು, ಸಾಧನೆಯ ಬಗೆಗಿನ ಅತಿರಂಜಿತ ಹೇಳಿಕೆಗಳ ಪೊಳ್ಳುತನಗಳು ಮೋದಿ ಅವರ ಜನಪ್ರಿಯತೆಯನ್ನು ಕುಂದಿಸುತ್ತಿವೆ.
ಅಡ್ವಾಣಿಯವರ ಸಹಜ ಸ್ವಭಾವದ ಪ್ರಕಾರ ಅವರು ಕಷ್ಟದಲ್ಲಿರುವ ಮೋದಿ ಅವರ ರಕ್ಷಣೆಗೆ ಧಾವಿಸಬೇಕಾಗಿತ್ತು. ಆದರೆ ಅಡ್ವಾಣಿ ಮೋದಿ ಮೇಲೆ ಎರಗಿ ಬಿದ್ದಿದ್ದಾರೆ. 21 ವರ್ಷಗಳ ಹಿಂದೆ ಅಡ್ವಾಣಿ ಅಯೋಧ್ಯೆಗೆ ಯಾತ್ರೆ ಹೊರಟಿದ್ದು ಗುಜರಾತ್ ರಾಜ್ಯದ ಸೋಮನಾಥಪುರದಿಂದ.

ಆ ಯಾತ್ರೆ ಪ್ರಾರಂಭದ ದಿನ ಅವರ ಎಡಬಲಕ್ಕಿದ್ದ ಇಬ್ಬರಲ್ಲಿ ಒಬ್ಬರು ಪ್ರಮೋದ್ ಮಹಾಜನ್, ಇನ್ನೊಬ್ಬರು ನರೇಂದ್ರ ಮೋದಿ. ಈ ಬಾರಿಯೂ ಅಲ್ಲಿಂದಲೇ ಯಾತ್ರೆ ಹೊರಡುವುದೆಂದು ನಿರ್ಧರಿಸಿದ್ದ ಅಡ್ವಾಣಿ ನಂತರ ಮನಸ್ಸು ಬದಲಾಯಿಸಿ ಬಿಹಾರದಲ್ಲಿರುವ ಜಯಪ್ರಕಾಶ್ ನಾರಾಯಣ್ ಜನ್ಮಸ್ಥಳವನ್ನು ಆರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಕಾಲಿಡಲು ಸಾಧ್ಯವಾಗದಂತಹ ರಾಜ್ಯ ಬಿಹಾರ. ಅಲ್ಲಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮೋದಿಯವರ ಕಟ್ಟಾ ವಿರೋಧಿ. ಮೋದಿಯನ್ನು ದೂರ ಇಟ್ಟು ನಿತೀಶ್ ಅವರನ್ನು ಪಕ್ಕಕ್ಕಿಟ್ಟುಕೊಂಡದ್ದು ಕೇವಲ ಕಾಕತಾಳೀಯ ಇರಲಾರದು. ಈ ಮೂಲಕ ಭವಿಷ್ಯದ ರಾಜಕೀಯದ ಸೂಚನೆಯನ್ನು ಕೊಡುವ ಪ್ರಯತ್ನವನ್ನು ಅಡ್ವಾಣಿ ಮಾಡಿದ್ದಾರೆಯೇ?
ಬಿಜೆಪಿ ಅಧಿಕಾರದಲ್ಲಿರುವ ಎರಡನೇ ರಾಜ್ಯ ಮಧ್ಯಪ್ರದೇಶ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಉಮಾ ಭಾರತಿ ಮುಖ್ಯಮಂತ್ರಿಯಾದರೂ ವಿವಾದದ ಸುಳಿಗೆ ಸಿಕ್ಕಿ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಮುಖ್ಯಮಂತ್ರಿಯಾದ ಬಾಬುಲಾಲ್ ಗೌರ್ ಕೂಡಾ ಬಹಳ ದಿನ ಅಧಿಕಾರದಲ್ಲಿ ಉಳಿಯಲಿಲ್ಲ. ಆಗ ಆ ಸ್ಥಾನಕ್ಕೆ ಬಂದವರು ಒಂದು ಕಾಲದ ಉಮಾಭಾರತಿ ಶಿಷ್ಯ ಶಿವರಾಜ್‌ಸಿಂಗ್ ಚೌಹಾಣ್.
ಸ್ವಲ್ಪಕಾಲದಲ್ಲಿಯೇ ಗುರುಶಿಷ್ಯರ ಸಂಬಂಧ ಕೆಟ್ಟುಹೋಗಿದ್ದಲ್ಲದೆ ಉಮಾಭಾರತಿಯವರು ಪಕ್ಷದಿಂದಲೇ ಉಚ್ಚಾಟನೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾಭಾರತಿ ಅವರ ನೇತೃತ್ವದ ಪ್ರಾದೇಶಿಕ ಪಕ್ಷದ ವಿರುದ್ಧವೇ ಸೆಣಸಿ ಚೌಹಾಣ್ ಅವರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು.
ಮೋದಿ ಅವರಂತೆ ವಿವಾದಕ್ಕೆ ಒಡ್ಡಿಕೊಳ್ಳದೆ, ಯಡಿಯೂರಪ್ಪನವರಂತೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪದಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ತನ್ನ ಪಾಡಿಗೆ ತಣ್ಣಗೆ ಕೆಲಸ ಮಾಡುತ್ತಿರುವವರು ಶಿವರಾಜ್‌ಸಿಂಗ್ ಚೌಹಾಣ್.
ಈಗ ಇದ್ದಕ್ಕಿದ್ದಂತೆ ಉಮಾಭಾರತಿ ಮರಳಿ ಪಕ್ಷ ಸೇರಿದ್ದಲ್ಲದೆ ಅಡ್ವಾಣಿಯವರ ರಥಯಾತ್ರೆಯ ಪ್ರಮುಖ ಸಾರಥಿಯಾಗಿದ್ದಾರೆ. ದೂರವೇ ಇಟ್ಟಿದ್ದ ಉಮಾಭಾರತಿಯನ್ನು ಪಕ್ಕಕ್ಕೆ ಕರೆದು ಆಕೆ ತನ್ನ ಎರಡನೇ ಮಗಳು ಎಂದು ಹೇಳುವಷ್ಟು ಮಮಕಾರವನ್ನು ಅಡ್ವಾಣಿ ತೋರಿದ್ದಾರೆ.

ಉಮಾಭಾರತಿ ಕುಣಿದಾಡಲು ಇಷ್ಟು ಸಾಕು. ರಥಯಾತ್ರೆ ಮುಗಿದ ನಂತರ ರಥದಿಂದ ಇಳಿದು ಅವರು ನೇರವಾಗಿ ಹೋಗುವುದು ಮಧ್ಯಪ್ರದೇಶಕ್ಕೆ. ಅಲ್ಲಿನ ಮುಖ್ಯಮಂತ್ರಿ ಕುರ್ಚಿ ತನ್ನದೇ ಎಂದು ಹೇಳಿ ಚೌಹಾಣ್ ಅವರನ್ನು ಕೆಳಗಿಳಿಯಲು ಹೇಳಿದರೂ ಅಚ್ಚರಿ ಇಲ್ಲ. ಆ ಹಂತಕ್ಕೆ ಹೋಗದಿದ್ದರೂ ಉಮಾಭಾರತಿಯವರ ಈ ಹೊಸ ಪಾತ್ರ ಚೌಹಾಣ್ ಅವರನ್ನು ಅಭದ್ರಗೊಳಿಸಿರುವುದು ನಿಜ.

ಕೇಂದ್ರದಲ್ಲಿ  ಪಕ್ಷ ಅಧಿಕಾರಕ್ಕೆ ಬರುವುದು ಖಾತರಿ ಇಲ್ಲದಿರುವ ಈ ಸಂದರ್ಭದಲ್ಲಿ ಉಮಾಭಾರತಿ ಮಧ್ಯಪ್ರದೇಶದ ಚುನಾವಣಾ ಅಖಾಡಕ್ಕೆ ಇಳಿಯಬಹುದು. ಕಷ್ಟಕಾಲದಲ್ಲಿ ಪಕ್ಷವನ್ನು ಸಂಭಾಳಿಸಿಕೊಂಡು ಬಂದ ಚೌಹಾಣ್‌ಗೆ ರಥಯಾತ್ರೆಯ ಸಂದರ್ಭದಲ್ಲಿ ಉಮಾಭಾರತಿಯವರನ್ನು ಕೊಡುಗೆಯಾಗಿ ನೀಡುವ ಮೂಲಕ ಅಡ್ವಾಣಿಯವರು ಏನು ಹೇಳಲು ಹೊರಟಿದ್ದಾರೆ?
ಬಿಜೆಪಿ ಅಧಿಕಾರದಲ್ಲಿರುವ ಮೂರನೇ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲಿ ಜೈಲುಯಾತ್ರೆಗೆ ಹೊರಟವರ ಸಾಲನ್ನು ನೋಡಿದರೆ ಅವರ ಪಕ್ಷದಲ್ಲಿ ಅಳಿದುಳಿದ ಪ್ರಾಮಾಣಿಕರು ಕೂಡಾ ಹೊರಗೆ ಮುಖ ಎತ್ತಿ ಅಡ್ಡಾಡಲಾಗದ ವಾತಾವರಣ ಇದೆ. ಈ ಪರಿಸ್ಥಿತಿಯಲ್ಲಿ ರಥಯಾತ್ರೆ ಹೊರಡುವುದೆಂದರೆ ಜನರನ್ನು ಹುಡುಕಿಕೊಂಡು ಹೋಗಿ ಮುಖಾಮುಖಿಯಾಗಿ ಅವರು ಎತ್ತುವ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದೆಂದೇ ಅರ್ಥ.

ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಚರ್ಚೆ ದೇಶವ್ಯಾಪಿ ನಡೆಯುತ್ತಿರುವುದೇ ಅಡ್ವಾಣಿಯವರ ರಥಯಾತ್ರೆಯಿಂದ ಎಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಜನ ಮಾತನಾಡುವಾಗ ತಮ್ಮವರ ಹೆಸರನ್ನೇ ಮೊದಲು ಚರ್ಚೆಯ ಮೇಜಿಗೆ ಎಳೆದುಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾಗಲಿಲ್ಲವೇ? ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಬಹುದೆಂದು ಅಡ್ವಾಣಿಯವರಂತಹ ಸೂಕ್ಷ್ಮಜ್ಞರು ಊಹಿಸಿರಲಿಲ್ಲವೇ? ಇಲ್ಲ, ಇಂತಹದ್ದೊಂದು ಚರ್ಚೆ ನಡೆಯಬೇಕೆಂಬುದೇ ಅಡ್ವಾಣಿ ಅವರ ಉದ್ದೇಶವೇ?
ಪಕ್ಷದ ಮೇಲಿರುವ ದೆಹಲಿ ನಿಯಂತ್ರಣವನ್ನು ಸಡಿಲುಗೊಳಿಸಲಿಕ್ಕಾಗಿಯೇ ಆರ್‌ಎಸ್‌ಎಸ್ ಮಹಾರಾಷ್ಟ್ರದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದು. ಇದನ್ನು ವಿರೋಧಿಸಿದವರು `ಡೆಲ್ಲಿ-4~ ಎಂದೇ ಕರೆಯಲಾಗುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್.
ಇವರೆಲ್ಲರನ್ನು ಒಂದು ಕಾಲದಲ್ಲಿ ಬೆಳೆಸಿದವರು ಅಡ್ವಾಣಿ. ಆದರೆ ಅವರನ್ನು ಪಕ್ಕಕ್ಕೆ ಸರಿಸುವ ಮೂಲಕ ಆರ್‌ಎಸ್‌ಎಸ್ ಅಡ್ವಾಣಿ ಯುಗ ಮುಗಿಯಿತು ಎನ್ನುವ ಸಂದೇಶವನ್ನು ನೀಡಿತ್ತು.
ಅಡ್ವಾಣಿಯವರು ರಥಯಾತ್ರೆ ಪ್ರಾರಂಭಿಸಿದಾಗ ಬಿಜೆಪಿ ಆಳ್ವಿಕೆಯ ರಾಜ್ಯಗಳ ಯಾವ ಮುಖ್ಯಮಂತ್ರಿಯೂ ಅಲ್ಲಿರಲಿಲ್ಲ.  ಮುರಳಿ ಮನೋಹರ ಜೋಷಿ, ಯಶವಂತ್‌ಸಿನ್ಹಾ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರ ನಾಯಕರೂ ಇರಲಿಲ್ಲ. ಅಲ್ಲಿದ್ದವರು ನಿತಿನ್ ಗಡ್ಕರಿ ಅವರನ್ನು ಈಗಲೂ ಒಳಗಿಂದೊಳಗೆ ವಿರೊಧಿಸುತ್ತಿರುವ ಮತ್ತು ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ದೂರ ಇಟ್ಟಿರುವ  `ಡೆಲ್ಲಿ-4~ನ ಸದಸ್ಯರು.
ಅಡ್ವಾಣಿಯವರ ಹಿಂದಿನ ಐದೂ ಯಾತ್ರೆಗಳು ಭಾರತೀಯ ಜನತಾ ಪಕ್ಷದ ಒಮ್ಮತದ ತೀರ್ಮಾನವಾಗಿದ್ದವು. ಅದಕ್ಕೆ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಸಂಘ ಪರಿವಾರಕ್ಕೆ ಸೇರಿರುವ ಎಲ್ಲ ಸಂಘಟನೆಗಳ ಬೆಂಬಲವೂ ಇತ್ತು.

ಅಡ್ವಾಣಿಯವರ ಮೊದಲ ರಥಯಾತ್ರೆ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಸಾರಿದ ಬಿಜೆಪಿಯ ಪಾಲಂಪುರ ಕಾರ‌್ಯಕಾರಿಣಿಯ ಐತಿಹಾಸಿಕ ಗೊತ್ತುವಳಿಯಿಂದ ಪ್ರೇರಿತವಾಗಿತ್ತು. ಆದರೆ ಈಗಿನ ರಥಯಾತ್ರೆಯದ್ದು ಅಡ್ವಾಣಿಯವರ ಸ್ವಯಂಘೋಷಣೆ.
ಲೋಕಸಭೆಯಲ್ಲಿ ಅಡ್ವಾಣಿಯವರು ಇದ್ದಕ್ಕಿದ್ದಂತೆ `ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗೆ ಯಾತ್ರೆ ಹೊರಡಲಿದ್ದೇನೆ~ ಎಂದು ಘೋಷಿಸಿದಾಗ ಅಚ್ಚರಿಪಟ್ಟವರು ವಿರೋಧಿ ಪಕ್ಷಗಳಲ್ಲ, ಅದು ಸಂಘ ಪರಿವಾರ.
ತನ್ನ ವಿರೋಧವನ್ನು ಮುಚ್ಚಿಟ್ಟುಕೊಳ್ಳದ ಆರ್‌ಎಸ್‌ಎಸ್ ನಾಯಕರು ಅಡ್ವಾಣಿ ಅವರನ್ನು ಖುದ್ದಾಗಿ ನಾಗಪುರಕ್ಕೆ ಕರೆಸಿಕೊಂಡು ರಥಯಾತ್ರೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದೆಂಬ ಷರತ್ತು ಹಾಕಿ ಒಪ್ಪಿಗೆ ನೀಡಿದ್ದಾರೆ.
ಆರ್‌ಎಸ್‌ಎಸ್ ಇಚ್ಛೆಗೆ ವಿರುದ್ಧವಾಗಿ ಇಂತಹದ್ದೊಂದು ಪಕ್ಷದ ಕಾರ್ಯಕ್ರಮವನ್ನು ಅಡ್ವಾಣಿಯವರು ಹಮ್ಮಿಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿ ಇರಬಹುದು. ಜಿನ್ನಾ ಪ್ರಕರಣದಲ್ಲಿಯೂ ಕೊನೆಗೆ ಅಡ್ವಾಣಿ ಆರ್‌ಎಸ್‌ಎಸ್ ಆದೇಶಕ್ಕೆ ಶರಣಾಗಿ ತಲೆದಂಡ ಕೊಟ್ಟಿದ್ದರು. ಆದರೆ ಯಾಕೋ ಈ ಬಾರಿ ತಿರುಗಿಬಿದ್ದಿದ್ದಾರೆ.
ದೇಶದ ಜನ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳ ಬಗ್ಗೆ ಭ್ರಮನಿರಸನಕ್ಕೀಡಾಗಿರುವ ಹೊತ್ತಿನಲ್ಲಿ ರಾಜಕೀಯ ಬಂಡಾಯಗಳಿಗೆ ನೆಲ ಹದವಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿದರೆ ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಕೊನೆಭಾಗದಲ್ಲಿಯೂ ಹೆಚ್ಚುಕಡಿಮೆ ಇಂತಹದ್ದೇ ಪರಿಸ್ಥಿತಿ ಇದ್ದುದನ್ನು ಕಾಣಬಹುದು.

ಅದನ್ನು ಬಳಸಿೊಂಡೇ ಜನತಾ, ಸಂಯುಕ್ತರಂಗ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಗಳು ಅಧಿಕಾರಕ್ಕೆ ಬಂದದ್ದು. ಎಲ್ಲ ಪಕ್ಷಗಳಲ್ಲಿಯೂ ನಡೆದ ಸಣ್ಣಸಣ್ಣ ಬಂಡಾಯಗಳ ಮೂಲಕವೇ ಹೊರಬಂದ ನಾಯಕರು ಒಟ್ಟಾಗಿ ಆಗಿನ ಪರ್ಯಾಯ ರಾಜಕೀಯವನ್ನು ರೂಪಿಸಿದ್ದರು;
ಸಕ್ರಿಯವಾಗಿದ್ದ ಯಾವುದೇ ಒಂದು ಪಕ್ಷ ಪರ್ಯಾಯವಾಗಿದ್ದಲ್ಲ. ಅಣ್ಣಾ ಹಜಾರೆ ಚಳವಳಿ ಅಂತಿಮವಾಗಿ ಇಂತಹದ್ದೊಂದು ಪರ್ಯಾಯ ರಾಜಕೀಯ ರೂಪುಗೊಳ್ಳಲು ನೆರವಾಗಬಹುದು ಎಂಬ ನಿರೀಕ್ಷೆ ಅದರ ನಾಯಕರ ಬಾಲಿಶ ನಡವಳಿಕೆಯಿಂದಾಗಿ ಹುಸಿಯಾಗತೊಡಗಿದೆ.
ಆದ್ದರಿಂದ ಅಡ್ವಾಣಿಯವರ ಬಂಡಾಯಕ್ಕೆ ದೇಶದ ಸಮಕಾಲೀನ ರಾಜಕೀಯದಲ್ಲಿ ಅವಕಾಶ ಖಂಡಿತ ಇದೆ. ಅಂತಹ ದಿಟ್ಟತನವನ್ನು ತೋರಿದರೆ ಅವರ ಮೊದಲ ರಥಯಾತ್ರೆಯ ಪರಿಣಾಮವನ್ನು ಜನ ಮರೆತುಬಿಡಬಹುದು. ಆ ಬಗ್ಗೆ ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಕ್ಷಮಿಸುವುದು ಕಷ್ಟವಾಗಲಾರದು.
ಆದರೆ ತನ್ನ ಬಂಡುಕೋರತನವನ್ನು ಒಂದು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ಯುವ ಧೈರ್ಯ ಅಡ್ವಾಣಿಯವರಲ್ಲಿದೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಅವರ ಮುಂದೆ ಇರುವುದು ಎರಡೇ ಎರಡು ಆಯ್ಕೆ.

ಒಂದೋ ಕಣ್ಣು-ಕಿವಿ-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸದಸ್ಯನಾಗಿ ರಾಜಕೀಯ ನಿವೃತ್ತಿ ಜೀವನವನ್ನು ಆರಾಮವಾಗಿ ಕಳೆಯುವುದು, ಇಲ್ಲವೇ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾಯಕತ್ವ ನೀಡಿ ಒಂದಷ್ಟು ಹಳೆಯ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು.
`ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ~ ಎಂದು ಅಡ್ವಾಣಿಯವರು ದೇಶಕ್ಕೆ ಒಂದಲ್ಲ, ಮೂರು ಸುತ್ತು ಯಾತ್ರೆ ನಡೆಸಿದರೂ ಅದೊಂದು ಆರೋಗ್ಯ ಸುಧಾರಣೆಯ ವ್ಯಾಯಾಮವಾಗಬಹುದೇ ಹೊರತು ಅದಂದ ಯಾವ ಉದ್ದೇಶವೂ ಈಡೇರಲಾರದು.

Monday, October 17, 2011

ಯಡಿಯೂರಪ್ಪನವರೆ, ಹೀಗೇಕೆ ಮಾಡಿಕೊಂಡಿರಿ?

ಊಟ, ನಿದ್ದೆ, ಆರೋಗ್ಯವನ್ನು ಮರೆತು ಮಳೆ, ಬಿಸಿಲು, ಗಾಳಿಯೆನ್ನದೆ ಊರೂರು ಸುತ್ತಾಡಿ ಚಳವಳಿ, ಪ್ರತಿಭಟನೆ, ಪಾದಯಾತ್ರೆಗಳ ಮೂಲಕ ದಶಕಗಳ ಕಾಲ ರಾಜಕೀಯ ಹೋರಾಟ ನಡೆಸುತ್ತಾ ಬಂದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದೊಡನೆ ಭ್ರಷ್ಟಾಚಾರದಲ್ಲಿ ಮುಳುಗಿ `ರಾಜಕೀಯ ಹರಾಕಿರಿ~ ಮಾಡಿಕೊಳ್ಳುವುದು ಯಾಕೆ?

ಕೇವಲ ದುಡ್ಡಿನಿಂದ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಹೋರಾಟದ ಮಾರ್ಗ ಹಿಡಿದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ನಂತರ ದುಡ್ಡಿಲ್ಲದೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದುಕೊಳ್ಳುವಷ್ಟು ಮೂರ್ಖನಾಗುವುದು ಹೇಗೆ?
ಮುಕ್ಕಾಲು ಪಾಲು ಆಯುಷ್ಯವನ್ನು ಐಷಾರಾಮಿ ಬದುಕು, ಅಧಿಕಾರ ಯಾವುದೂ ಇಲ್ಲದೆ ಕಳೆದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ಮರುಕ್ಷಣವೇ ಇವುಗಳಿಲ್ಲದೆ ಬದುಕಲಾರೆ ಎಂದು ತಿಳಿದುಕೊಂಡು ಉಳಿದ ಆಯುಷ್ಯವನ್ನು ನರಕ ಮಾಡಿಕೊಳ್ಳುವುದು ಯಾಕೆ?
ಹೋರಾಟದ ದಿನಗಳಲ್ಲಿ ಜಾತಿವಾದಿಯಾಗದೆ ಗಳಿಸಿದ ಜನಪ್ರಿಯತೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾತಿವಾದಿಯಾಗಿ ಕಳೆದುಕೊಳ್ಳುವುದು ಯಾಕೆ?
ಅನಿಶ್ಚಿತತೆಗೆ ಮತ್ತೊಂದು ಹೆಸರಾಗಿರುವ ರಾಜಕಾರಣದ ಜತೆ 25-30ವರ್ಷ ಸಂಸಾರ ಮಾಡಿದ ಅನುಭವದ ನಂತರವೂ. ತನ್ನ ಆಯುಷ್ಯದಲ್ಲಿ ಅನುಭವಿಸಲಾಗದಷ್ಟು ಸಂಪತ್ತನ್ನು ಗಳಿಸಲು ಹೊರಟು ಜೈಲು ಸೇರುವ ಮೂರ್ಖತನ ಯಾಕೆ?
ಜೈಲಿಗೆ ಹೋಗಿ ಕೂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ  ಸುಮಾರು 36 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ.
ಆ ದಿನಗಳಲ್ಲಿ ಒಂದು ಕ್ಷಣ ಅವರು ಸುಮ್ಮನೆ ಕೂತವರಲ್ಲ. ಪ್ರತಿಭಟನೆ, ಚಳವಳಿ,  ಜಾಥಾ, ಭಾಷಣ, ಘೋಷಣೆ ಎಂದು ಮೂರುಹೊತ್ತು ಆಡಳಿತ ಪಕ್ಷದ ಜತೆ ನಿತ್ಯ ಗುದ್ದಾಡಿದವರು. ರಾಜಕಾರಣಿಗಳ ವಿರುದ್ಧ ಕೇಳಿಬರುವ ಸಾಮಾನ್ಯವಾದ ಸಣ್ಣಪುಟ್ಟ ಆರೋಪಗಳನ್ನು ಬಿಟ್ಟರೆ ಅವರೊಬ್ಬ ಭ್ರಷ್ಟ ಎನ್ನುವ ಕಳಂಕ ಆಗ ಅವರಿಗೆ ಅಂಟಿರಲಿಲ್ಲ.

ಆದರೆ ಇಷ್ಟೆಲ್ಲ ಕಷ್ಟಪಟ್ಟು ಮುಖ್ಯಮಂತ್ರಿಯಾದ ಅವರು ಮೂರೇ ವರ್ಷಗಳ ಅವಧಿಯಲ್ಲಿ ಕರ್ನಾಟಕ ಕಂಡ ಅತ್ಯಂತ ಭ್ರಷ್ಟಮುಖ್ಯಮಂತ್ರಿ ಎಂಬ ಆರೋಪ ಹೊತ್ತುಕೊಂಡರು. ಈಗ ಜೈಲು ಸೇರಿದ್ದಾರೆ. ಯಡಿಯೂರಪ್ಪನವರು ಯಾಕೆ ಹೀಗೆ ಮಾಡಿಕೊಂಡರು?
ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರ ಮುಖ್ಯಮಂತ್ರಿಯೋ, ಸಚಿವನೋ ಜೈಲು ಸೇರಿದರೆ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗದು. ಯಾಕೆಂದರೆ ಹಿಂದಿನ ಕಾಲದ `ಹೋರಾಟದ ರಾಜಕಾರಣ~ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಅಲ್ಲ.
ಈ ಯುವರಾಜಕಾರಣಿಗಳಲ್ಲಿ ಹೆಚ್ಚಿನವರು ರಾಜಕೀಯದ ಹೆದ್ದಾರಿ ಸೇರಲು ಆಗಲೇ ಸುಲಭದ ಅಡ್ಡದಾರಿಗಳನ್ನು ಹಿಡಿದಿದ್ದಾರೆ, ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ಅವರ ಜೀವನದ 36 ವರ್ಷಗಳ ನಂತರ ಕೇಳಿಬಂದ ಆರೋಪಗಳೆಲ್ಲ ಅಧಿಕಾರ ಹಿಡಿಯವ ಮೊದಲೇ ಈ ಯುವ ರಾಜಕಾರಣಿಗಳ ಬಗ್ಗೆ ಕೇಳಿಬರುತ್ತಿವೆ. ಬೇರೆ ಉದಾಹರಣೆಗಳು ಯಾಕೆ ಬೇಕು?
ಯಡಿಯೂರಪ್ಪನವರ ಮಕ್ಕಳೇ ಇದ್ದಾರಲ್ಲ, ಬೇಕಿದ್ದರೆ ದೇವೇಗೌಡರ ಮಕ್ಕಳನ್ನೂ ಸೇರಿಸಿಕೊಳ್ಳಬಹುದು.ಹೋರಾಟದ ರಾಜಕಾರಣದ ಮೂಲಕವೇ ನಾಯಕರಾಗಿ ಬೆಳೆದು ಈಗಲೂ ನಮ್ಮ ನಡುವೆ ಉಳಿದಿರುವವರು ಮೂವರು ರಾಜಕಾರಣಿಗಳು ಮಾತ್ರ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ.
ಈ ಮೂವರು ನಾಯಕರಿಗೆ ಅನೇಕ ಸಾಮ್ಯತೆಗಳಿವೆ. ದೀರ್ಘಕಾಲದ ರಾಜಕೀಯ ಹೋರಾಟದ ನಂತರ ಈ ಮೂವರೂ ಅಧಿಕಾರಕ್ಕೆ ಬಂದರೂ ಅದನ್ನು ಅನುಭವಿಸಿದ್ದು ಮಾತ್ರ ಅಲ್ಪ ಕಾಲ. ಮೂವರೂ ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.
ಇವರ ಅಪ್ಪ, ಅಜ್ಜ, ಮುತ್ತಾತ-ಯಾರಿಗೂ ರಾಜಕಾರಣದ ಜತೆ ದೂರದ ಸಂಬಂಧವೂ ಇರಲಿಲ್ಲ. ಈ ಮೂವರ ರಾಜಕೀಯ ಯಶಸ್ಸಿನಲ್ಲಿ ಜಾತಿಯ ಪಾತ್ರ ಇದೆ ಎನ್ನುವುದು ನಿಜ.
ಆದರೆ ಇದೇ ಕಾರಣಕ್ಕೆ ಇವರು ನಡೆಸಿಕೊಂಡು ಬಂದ ರಾಜಕೀಯ ಹೋರಾಟವನ್ನು ತಳ್ಳಿಹಾಕಲಾಗದು. ಒಕ್ಕಲಿಗರು, ಲಿಂಗಾಯತರು, ಈಡಿಗರು ತಮ್ಮ ತಮ್ಮ ಜಾತಿ ನಾಯಕರಾಗಿ ಇವರನ್ನೇ ಯಾಕೆ ಆರಿಸಿದರು ಎನ್ನುವುದನ್ನು ಕೂಡಾ ನೋಡಬೇಕಾಗುತ್ತದೆ.
ಆ ಜಾತಿಗಳಲ್ಲಿ ಬೇರೆ ನಾಯಕರಿರಲಿಲ್ಲವೇ? ಜಾತಿ ರಾಜಕಾರಣದ ಒಳಿತು-ಕೆಡುಕಗಳ ವಿಶ್ಲೇಷಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಬಹಳ ಸೂಕ್ಷ್ಮವಾಗಿ ರಾಜಕಾರಣ ಗಮನಿಸುವ ಸಮುದಾಯ ಒಬ್ಬ ವ್ಯಕ್ತಿಯಲ್ಲಿರುವ ನಾಯಕತ್ವದ ಲಕ್ಷಣಗಳ ಆಧಾರದಲ್ಲಿಯೇ ಆತನನ್ನು ತನ್ನ ನಾಯಕನಾಗಿ ಆರಿಸಿಕೊಳ್ಳುತ್ತದೆ.
ಇದರಿಂದಾಗಿಯೇ ಜಾತಿಯವರು ಗುರುತಿಸುವ ಮಟ್ಟಕ್ಕೆ ಬರುವವರೆಗೆ ಆತ ಸ್ವಂತ ಶಕ್ತಿಯಿಂದಲೇ ಬೆಳೆಯಬೇಕಾಗುತ್ತದೆ. ಯಡಿಯೂರಪ್ಪನವರನ್ನು ಲಿಂಗಾಯತ ಸಮುದಾಯ ಬೆಂಬಲಿಸುತ್ತಿರುವುದು ನಿಜ.
ಆದರೆ ಲಿಂಗಾಯತ ನಾಯಕರಾಗಿಯೇ ಅವರು ರಾಜಕೀಯ ಪ್ರಾರಂಭಿಸಿದ್ದಲ್ಲ ಎನ್ನುವುದು ಗಮನಾರ್ಹ. ಅವರಿಗೆ ಲಿಂಗಾಯತ ಬೆಂಬಲ ಇಷ್ಟೊಂದು ಆಕ್ರಮಣಕಾರಿ ರೂಪದಲ್ಲಿ ವ್ಯಕ್ತವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿಯವರ `ವಚನ ಭ್ರಷ್ಟತೆ~ಯ ಪ್ರಕರಣದ ನಂತರ.
ಇನ್ನು ಸ್ವಲ್ಪ ಹಿಂದಕ್ಕೆ ಹೋಗುವುದಾದರೆ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಬೇಕೆಂಬ ಕಾರ‌್ಯತಂತ್ರವನ್ನು ಬಿಜೆಪಿ ಹೂಡಿದ ನಂತರ. ತನ್ನ ರಾಜಕೀಯ ಜೀವನವನ್ನು ರೈತರು,ಕೂಲಿಕಾರ್ಮಿಕರು, ಜೀತದಾಳುಗಳ ಪರ ಹೋರಾಟದ ಮೂಲಕ ಪ್ರಾರಂಭಿಸಿದ್ದ ಯಡಿಯೂರಪ್ಪ ಹೊಸ ಬೆಳವಣಿಗೆಯಿಂದಾಗಿ ಕ್ರಮೇಣ ಜಾತಿಯ ಸುಳಿಗೆ ಸಿಕ್ಕಿ ಅದಕ್ಕೆ ಶರಣಾಗಿಬಿಟ್ಟರು.
ಮಠಗಳ ಅಸ್ತಿತ್ವದಿಂದಾಗಿ ಉಳಿದ ಜಾತಿಗಳಿಗಿಂತ ಹೆಚ್ಚು ಸಂಘಟಿತ ಮತ್ತು ವ್ಯಾಪಕವಾದ ಸಾಂಸ್ಥಿಕ ರೂಪ ಲಿಂಗಾಯತ ಜಾತಿಗೆ ಇರುವುದರಿಂದ ಬೇಗ ಆ ಜಾತಿಯ ರಾಜಕೀಯ ನಾಯಕರು ಅದರ ಹಿಡಿತಕ್ಕೆ ಬಂದುಬಿಡುತ್ತಾರೆ. ಯಾಕೆಂದರೆ ಅದರಿಂದ ಇಬ್ಬರಿಗೂ ಲಾಭ ಇದೆ. 
ಬೀದಿಗೊಬ್ಬ ಲೋಕಪಾಲರನ್ನು ನೇಮಿಸಿದರೂ, ಮನೆಗೊಬ್ಬರಂತೆ ಸಮಾಜ ಸುಧಾರಕರು ಹುಟ್ಟಿದರೂ ಸದ್ಯದ ರಾಜಕಾರಣ ಹಣ ಮತ್ತು ಜಾತಿಯ ನಿಯಂತ್ರಣದಿಂದ ಸಂಪೂರ್ಣ ಬಿಡುಗಡೆ ಪಡೆಯುತ್ತದೆ ಎಂದು ನಿರೀಕ್ಷಿಸಲಾಗದು.
ಯಡಿಯೂರಪ್ಪನವರ ಸಮಸ್ಯೆ ಏನೆಂದರೆ ಅನಾಯಾಸವಾಗಿ ಒದಗಿಬಂದ ಜಾತಿ ಬೆಂಬಲವೂ ಅವರಲ್ಲಿ ಸುರಕ್ಷತೆಯ ಭಾವ ಮೂಡಿಸದಿರುವುದು. ಹೆಚ್ಚು ದುಡ್ಡಿಲ್ಲದೆ ಮಾಡಿದ ಹಳೆಯ ರಾಜಕೀಯ ಜೀವನದ ಅನುಭವವನ್ನು ಅವರು ಮರೆತೇ ಬಿಟ್ಟರು.
ಒಂದು ಸಾಮಾನ್ಯ ಅಕ್ಕಿಗಿರಣಿಯಲ್ಲಿ ಕಾರಕೂನನಾಗಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ರಾಜಕೀಯದಲ್ಲಿ ಬೆಳೆದದ್ದು ಕೇವಲ ಹಣದ ಬಲದಿಂದ ಖಂಡಿತ ಅಲ್ಲ. ಆದರೆ ಮುಖ್ಯಮಂತ್ರಿಯಾದ ತಕ್ಷಣ ದುಡ್ಡಿಲ್ಲದೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಲಾರೆ ಎಂದು ಅವರು ವಿಲವಿಲನೆ ಒದ್ದಾಡಿಬಿಟ್ಟರು.
ಆಗ ಅವರಿಗೆ ಜತೆಯಾದವರು ಬಳ್ಳಾರಿಯ ಗಣಿಲೂಟಿಕೋರರು. ಪ್ರಾರಂಭದ ಹಂತದಲ್ಲಿ ತಂದುಕೊಟ್ಟ ಗೆಲುವಿನಿಂದಾಗಿ (ಆಪರೇಷನ್ ಕಮಲ) ಈ ಸಂಬಂಧ ಬಲಗೊಳ್ಳುತ್ತಾ ಹೋಯಿತು. ಸ್ನೇಹಿತರಂತೆ ಸಮೀಪ ಬಂದ ಗಣಿ ಉದ್ಯಮಿಗಳು ಯಡಿಯೂರಪ್ಪನವರಿಗೆ  ಕ್ರಮೇಣ ತಮಗೆ ಪೈಪೋಟಿ ನೀಡುವವರಂತೆ, ಕೊನೆಗೆ ರಾಜಕೀಯ ಶತ್ರುಗಳಂತೆ ಕಾಣಿಸತೊಡಗಿದರು.
ಅವರಿಗೆ ಕಂಡ ಕೊನೆಯ ರೂಪವೇ ನಿಜವಾದುದು. ಇದಾದ ನಂತರವೂ ಯಡಿಯೂರಪ್ಪನವರು ಹಣಬಲದ ರಾಜಕೀಯಕ್ಕೆ ವಿರುದ್ಧ ವಾಗಿ ಜನಬಲದ ರಾಜಕಾರಣ ಮಾಡಲು ಹೋಗದೆ ಗಣಿಲೂಟಿಕೋರರನ್ನೇ ಮಾದರಿಯಾಗಿ ಸ್ವೀಕರಿಸಿದರು.
ಕಾನೂನು, ನೀತಿ-ನಿಯಮಾವಳಿಗಳನ್ನು ಉಲ್ಲಂಘಿಸಿ ಯಡಿಯೂರಪ್ಪ ಮತ್ತು ಕುಟುಂಬ ನಡೆಸಿದ್ದಾರೆನ್ನಲಾದ ಎಲ್ಲ ಹಗರಣಗಳ ವಿನ್ಯಾಸ ಅದೇ ಬಳ್ಳಾರಿ ಮಾದರಿಯದ್ದು.
ತರಕಾರಿ ಮಾರುವವರಿಂದ ಹಿಡಿದು ವಿಮಾನ ಮಾರುವವನವರೆಗೆ ಎಲ್ಲರೂ ನಡೆಸುವುದು ವ್ಯಾಪಾರ, ಸಮಾಜ ಸೇವೆ ಅಲ್ಲ. ರಾಜಕಾರಣ ಕೂಡಾ ಅವರಿಗೆ ವ್ಯಾಪಾರವೃದ್ಧಿಯ ಇನ್ನೊಂದು ಮಾರ್ಗ ಮಾತ್ರ. ಈ ಸರಳ ಸತ್ಯವನ್ನು ಅರಿಯದ ಯಡಿಯೂರಪ್ಪ ಆಗಲೇ ಹುಲಿ ಮೇಲೆ ಸವಾರಿ ಹೊರಟಾಗಿತ್ತು, ಕೆಳಗಿಳಿಯುವಂತಿರಲಿಲ್ಲ.

ಅದು ಹೊತ್ತುಕೊಂಡು ಹೋದಲ್ಲಿಗೆ ಹೋದರು. ಕೊನೆಗೆ ಅವರಂತೆ ಇವರೂ ಜೈಲು ಸೇರಿದ್ದಾರೆ. ಯಡಿಯೂರಪ್ಪನವರೊಬ್ಬರೇ ರಾಜ್ಯ ಕಂಡ ಜಾತಿವಾದಿ ಮತ್ತು ಭ್ರಷ್ಟ ಮುಖ್ಯಮಂತ್ರಿಯೆಂದು ಈಗಲೇ ಅಂತಿಮ ನಿರ್ಧಾರಕ್ಕೆ ಬರಲಾಗದು.

ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಈವರೆಗೆ ಕೂತವರಲ್ಲಿ ಯಾರೂ ಇಂತಹ ಆರೋಪಗಳಿಂದ ಮುಕ್ತರಾಗಿಲ್ಲ. ಉಳಿದವರ ಭ್ರಷ್ಟಾಚಾರಕ್ಕೆ ಪುರಾವೆಗಳು ಸಿಕ್ಕಿಲ್ಲ ಅಷ್ಟೆ, ಅದಕ್ಕೆ ಅವರು ನಿರಪರಾಧಿಗಳು.
ಆದರೆ ಯಡಿಯೂರಪ್ಪನವರಷ್ಟು ದಡ್ಡತನದಿಂದ ಬಹಿರಂಗವಾಗಿ ಜಾತಿವಾದ ಮಾಡಿದವರು ಮತ್ತು ಮೇಲ್ನೋಟದಲ್ಲಿಯೇ ಸಾಬೀತಾಗುವಂತೆ ಕಾಣುತ್ತಿರುವ ಭ್ರಷ್ಟಾಚಾರದಲ್ಲಿ ತೊಡಗಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ.
ವ್ಯತ್ಯಾಸ ಇಷ್ಟೆ: ಒಬ್ಬ ಜಾಣ ರಾಜಕಾರಣಿ ಹಣ ಮತ್ತು ದುಡ್ಡನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾನೆ, ದಡ್ಡ ರಾಜಕಾರಣಿಯನ್ನು ಇವೆರಡೂ ಬಳಸಿಕೊಳ್ಳುತ್ತವೆ.
ಬಿ.ಎಸ್.ಯಡಿಯೂರಪ್ಪನವರ ಕಳೆದ ಮೂರುವರ್ಷಗಳ ಆಡಳಿತವನ್ನು ನೋಡಿದರೆ ಅವರನ್ನು ಜಾಣ ರಾಜಕಾರಣಿ ಎಂದು ಹೇಳಲಾಗುವುದಿಲ್ಲ. ಅವರು ಜಾಣರಾಗಿದ್ದರೆ `ಆಪರೇಷನ್ ಕಮಲ~ದಂತಹ ಅನೈತಿಕ ಮತ್ತು ದುರಹಂಕಾರಿ ರಾಜಕಾರಣವನ್ನು ಮಾಡಲು ಹೋಗುತ್ತಿರಲಿಲ್ಲ.

ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ತಮ್ಮ ಸರ್ಕಾರವನ್ನು ಉರುಳಿಸಲು ಹೊರಟರೂ ಅದನ್ನು ರಾಜಕೀಯ ಹೋರಾಟದ ಮೂಲಕವೇ ಎದುರಿಸುತ್ತಿದ್ದರು. ನೈತಿಕವಾದ ಅಂತಹ ಹೋರಾಟವನ್ನು ರಾಜ್ಯದ ಜನ ಕೂಡಾ ಬೆಂಬಲಿಸುತ್ತಿದ್ದರು.
ಇದೇ ಬಿಜೆಪಿಯ ಕಾಟ ತಾಳಲಾಗದೆ 1985ರಲ್ಲಿ ಮಧ್ಯಂತರ ಚುನಾವಣೆ ಘೋಷಿಸಿದ್ದ ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯ ಜನ ಬೆಂಬಲಿಸಲಿಲ್ಲವೇ, ಹಾಗೆ. ಆದರೆ ಯಡಿಯೂರಪ್ಪನವರು ಗಣಿಲೂಟಿಕೋರರು ಹಾಕಿದ ಬೋನಿಗೆ ಬಿದ್ದು ಬಿಟ್ಟರು.
ಅವರು ಜಾಣರಾಗಿದ್ದರೆ ತನಗಿರುವ ಅಧಿಕಾರದ ಬಲದಿಂದ (ಬೇಕಿದ್ದರೆ ಜಾತಿಬಲವನ್ನೂ ಸೇರಿಸಿ) ಯಾವಾಗಲೋ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಬಹುದಿತ್ತು. ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಕೇವಲ ರಾಜಕೀಯ ಗೂಂಡಾಗಿರಿಯಿಂದ ಕಟ್ಟಿದ ಗಣಿ ಸಾಮ್ರಾಜ್ಯದ ಬುನಾದಿ ಎಷ್ಟೊಂದು ದುರ್ಬಲ ಎನ್ನುವುದು ಈಗ  ಬಯಲಿಗೆ ಬರುತ್ತಿದೆ.
ಆರ್.ಗುಂಡೂರಾವ್ ಅವರಿಂದ ಹಿಡಿದು ಎಚ್.ಡಿ.ಕುಮಾರಸ್ವಾಮಿವರೆಗೆ ಕನಿಷ್ಠ ಹತ್ತು ಮುಖ್ಯಮಂತ್ರಿಗಳ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿದ್ದ ಯಡಿಯೂರಪ್ಪ  ಭ್ರಷ್ಟ ಗಣಿ ಉದ್ಯಮಿಗಳನ್ನು ಎದುರಿಸಲಾಗದೆ ಅವರ ಎದುರು ಶರಣಾಗಿ ಬಿಟ್ಟರು.
ಅಷ್ಟು ಮಾತ್ರವಲ್ಲ ಅವರಂತೆಯೇ ಆಗಲು ಹೋಗಿ ಗಣಿಧಣಿಗಳ ಕೆಟ್ಟತನ-ದುರಾಸೆಗಳನ್ನೆಲ್ಲ ಮೈಗೂಡಿಸಿಕೊಂಡರು. ಯಡಿಯೂರಪ್ಪನವರು ಇನ್ನಷ್ಟು ಜಾಣರಾಗಿದ್ದರೆ ತನ್ನ ಲಾಲಸಿ ಮಕ್ಕಳಿಗೆ ಬುದ್ಧಿ ಹೇಳಿ ಅಧಿಕಾರದ ಪ್ರಭಾವಳಿಯಿಂದ ದೂರ ಇಡುತ್ತಿದ್ದರು.
ಹಾಗೆ ಮಾಡಿದ್ದರೆ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಈಗಿನಂತೆ ಕತ್ತಲು ಕವಿಯುತ್ತಿರಲಿಲ್ಲ. ಕನಿಷ್ಠ ತಾನು ದ್ವೇಷಿಸುವ ದೇವೇಗೌಡರ ಮಕ್ಕಳು ಹಿಡಿದ ದಾರಿಯನ್ನಾದರೂ ನೋಡಿ ಎಚ್ಚೆತ್ತುಕೊಳ್ಳಬಹುದಿತ್ತು.
ಯಡಿಯೂರಪ್ಪನವರು ಅನುಭವದಿಂದ ಪಾಠ ಕಲಿಯುವ ಕಾಲ ಮೀರಿ ಹೋಗಿದೆ. ಅವರ ಅನುಭವದಿಂದ ಉಳಿದ ರಾಜಕಾರಣಿಗಳಾದರೂ ಪಾಠ ಕಲಿತರೆ ಜೈಲು ಪಾಲಾಗುವ ಅವಮಾನದಿಂದ  ತಪ್ಪಿಸಿಕೊಳ್ಳಬಹುದು.

ದುಡ್ಡು ಮತ್ತು ಜಾತಿ ಮುಂದೆಯೂ ರಾಜಕಾರಣದ ಅನಿವಾರ‌್ಯ ಸಂಕಟಗಳಾಗಿಯೇ ಮುಂದುವರಿಯಲಿರುವ ಕಾರಣ ಇಂತಹ ಪ್ರಕರಣಗಳು ಪುನರಾವರ್ತನೆಗೊಂಡರೆ ಅಚ್ಚರಿ ಇಲ್ಲ. ಈ ಸಂಕಟಗಳನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಈ ಸಮಯದಲ್ಲಿ ನೆನೆಪಾಗುತ್ತಾರೆ.

ತನಗಿಲ್ಲದ ಜಾತಿ ಬಲವನ್ನು ಜಾತಿ ರಾಜಕಾರಣದ ಮೂಲಕ ಮತ್ತು ತನ್ನಲ್ಲಿಲ್ಲದ ಹಣವನ್ನು ಶ್ರಿಮಂತರ ಸ್ನೇಹದ ಮೂಲಕ ಪಡೆದುಕೊಂಡು ರಾಜಕಾರಣ ಮಾಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು.
ಇವೆರಡೂ ತಮ್ಮನ್ನು ಬಳಸಿಕೊಳ್ಳಲು ಅವರು ಬಿಡಲಿಲ್ಲ, ಅವುಗಳನ್ನು ಬಳಸಿಕೊಂಡು ರಾಜಕಾರಣ ಮಾಡಿದರು. ಹೋಗ್ಲಿ ಬಿಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಅರಸು ವಿಷಯ ಯಾಕೆ?

Monday, October 10, 2011

ನಾರಾಯಣ ಗುರು ತೋರಿದ ಸುಧಾರಣೆಯ ದಾರಿ

`ನಾರಾಯಣ ಗುರುಗಳು  ಮಾಡದಿರುವುದನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾಡಿ ತೋರಿಸಿದ್ದಾರೆ~ ಎಂದು ಪೂಜಾರಿ ಅಭಿಮಾನಿಗಳೊಬ್ಬರು ಮೊನ್ನೆ ಹೆಮ್ಮೆಯಿಂದ ಹೇಳುತ್ತಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ `ವಿಧವಾ ವಿಮೋಚನೆ~ ಕಾರ‌್ಯಕ್ರಮ ಈ ಅಭಿಮಾನಿಯ ಹೆಮ್ಮೆಗೆ ಕಾರಣ.

`ಹಿಂದೂ ಮೂಲಭೂತವಾದಿಗಳು ಪಬ್‌ಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಿದ ಹಲ್ಲೆಯಿಂದಾಗಿ ಹೋದ ಮಂಗಳೂರಿನ ಮಾನ, `ವಿಧವಾ ವಿಮೋಚನಾ~ ಕಾರ‌್ಯಕ್ರಮದಿಂದ ಬಂತು~ ಎಂದು ಇನ್ಯಾರೋ ಹೇಳುತ್ತಿದ್ದರು.

ಭಾವುಕ ಮನಸ್ಸಿನ ಈ ಪ್ರತಿಕ್ರಿಯೆಗಳಲ್ಲಿ ಅತಿರೇಕತನ ಇದ್ದರೂ ಪೂಜಾರಿಯವರು ಮಾಡಿರುವ ಕೆಲಸ ಅಭಿನಂದನೆಗೆ ಯೋಗ್ಯವಾದುದು ಎನ್ನುವುದರಲ್ಲಿ ಭಿನ್ನಾಭಿಪ್ರಾಯ ಇಲ್ಲ.

ಆದರೆ ಪೂಜಾರಿಯವರು ನಿಜಕ್ಕೂ ಸಮಾಜ ಸುಧಾರಣೆಗೆ ಹೊರಟಿದ್ದರೆ ಅವರಿಗೆ ಮಾಡಲು ಇನ್ನಷ್ಟು ಕೆಲಸಗಳಿವೆ, ಆ ದಾರಿಯಲ್ಲಿ ಮುನ್ನಡೆಯಲು ನಾರಾಯಣ ಗುರುಗಳ ತತ್ವದ ಬೆಳಕು ಕೂಡಾ ಇದೆ.
ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
ಪೂಜಾರಿ ಅವರ ಅಭಿಮಾನಿ ಹೇಳಿದಂತೆ ನಾರಾಯಣ ಗುರುಗಳು ನಿರ್ದಿಷ್ಟವಾಗಿ ವಿಧವೆಯರ ಬಗ್ಗೆ ಮಾತನಾಡಿರಲಿಲ್ಲ ಎನ್ನುವುದು ನಿಜ. ಇದಕ್ಕೆ ಕಾರಣ ಅವರು ಸುಧಾರಣೆಗಾಗಿ ಆಯ್ದುಕೊಂಡಿದ್ದ ಶೂದ್ರ ಸಮುದಾಯದಲ್ಲಿ ವೈಧವ್ಯ ಎನ್ನುವುದು ಬ್ರಾಹ್ಮಣ ಸಮುದಾಯದಲ್ಲಿದ್ದಷ್ಟು ದೊಡ್ಡ ಸಮಸ್ಯೆಯಾಗಿರಲಿಲ್ಲ. ಅದು ಇಂದಿಗೂ ಸತ್ಯ.

ನಾರಾಯಣ ಗುರುಗಳು ಕೇರಳದಲ್ಲಿ ಸುಧಾರಣಾವಾದಿ ಚಳವಳಿ ಪ್ರಾರಂಭಿಸಿದ್ದ ದಿನಗಳಲ್ಲಿ ಶೂದ್ರ ವರ್ಗದಲ್ಲಿ ಹೆಣ್ಣಾಗಿ ಹುಟ್ಟುವುದೇ ಶಾಪವಾಗಿತ್ತು. ಅಲ್ಲಿನ ಈಳವ ಮಹಿಳೆಯರಿಗೆ ಎದೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು ತನ್ನ ಸ್ತನಗಳನ್ನೇ ಕುಯ್ದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿತ್ತು.
ವಿಧವೆಯರು ಮಾತ್ರವಲ್ಲ, ಕೆಳವರ್ಗಕ್ಕೆ ಸೇರಿದ್ದ ಯಾವ ಮಹಿಳೆಯ ಹೂ ಮುಡಿಯುವಂತಿರಲಿಲ್ಲ. ಪ್ರಾಯಕ್ಕೆ ಬಂದ ಈಳವ ಹೆಣ್ಣುಗಳು ನಂಬೂದಿರಿಗಳ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಅಮಾನುಷ ಕಟ್ಟಳೆಗಳಿದ್ದವು.
ಇದರ ವಿರುದ್ದ ಹೋರಾಡಲು ನಿರ್ಧರಿಸಿದ್ದ ನಾರಾಯಣ ಗುರುಗಳು ಅನುಸರಿಸಿದ ಮಾರ್ಗ ಉಳಿದ ಸಮಾಜ ಸುಧಾರಕರಿಗಿಂತ ಭಿನ್ನವಾದುದು. ಅವರದ್ದು ಸಂಘರ್ಷದ ಮಾರ್ಗವಾಗಿರಲಿಲ್ಲ. ನಲ್ವತ್ತು ವರ್ಷಗಳ ಅವಧಿಯ ಸುಧಾರಣಾವಾದಿ ಚಳವಳಿಯ ಯಾವುದೇ ಸಂದರ್ಭದಲ್ಲಿ ಅವರು ಶೋಷಕರ ಹೆಸರೆತ್ತಿ ಹೋರಾಟಕ್ಕೆ ಕರೆ ನೀಡಿರಲಿಲ್ಲ.
ನೆರೆಯ ತಮಿಳಿನಾಡಿನಲ್ಲಿ ಪೆರಿಯಾರ್ ಅವರು ದೇವರ ಮೂರ್ತಿಗಳಿಗೆ ಚಪ್ಪಲಿಮಾಲೆ ಹಾಕಿ ಪ್ರತಿಭಟಿಸುತ್ತಿದ್ದಾಗ, ನಾರಾಯಣ ಗುರುಗಳು ಶೂದ್ರರಿಗಾಗಿಯೇ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮೌನವಾಗಿ ಕ್ರಾಂತಿ ಮಾಡಿದ್ದರು. ಮಹಿಳಾ ಸುಧಾರಣೆಗೆ ಸಂಬಂಧಿಸಿದಂತೆ ಕೂಡಾ ಅವರು ಹೋರಾಟ ನಡೆಸಿದ್ದು `ಹೊರಗಿನವರ~ ವಿರುದ್ಧ ಅಲ್ಲ, `ಒಳಗಿನವರ~ ವಿರುದ್ಧ.
ಆ ಕಾಲದ ಕೇರಳದಲ್ಲಿ ಹೆಣ್ಣನ್ನು ಶೋಷಿಸುವ ಬಗೆಬಗೆಯ ಮೂಢ ಆಚರಣೆಗಳಿದ್ದವು. ಮೈ ನೆರೆಯುವ ಮೊದಲೇ ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ `ತಾಳಿಕೆಟ್ಟು ಕಲ್ಯಾಣಂ~ (ಬಾಲ್ಯ ವಿವಾಹಕ್ಕಿಂತಲೂ ಅಮಾನವೀಯವಾದ ಆಚರಣೆಯಲ್ಲಿ ಹೆಣ್ಣಿಗೆ ತಾಳಿ ಕಟ್ಟುವ ಗಂಡಿಗೆ ಆಕೆಯ ಮೇಲೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಬೆಳೆದ ನಂತರ ಗಂಡು ಮತ್ತು ಹೆಣ್ಣು ಅವರಿಗೆ ಇಷ್ಟಬಂದವರನ್ನು ಮದುವೆಯಾಗಬಹುದಿತ್ತು).
ಹೆಣ್ಣು ಋತುಮತಿಯಾದಾಗ ಅದನ್ನು ಪರೋಕ್ಷವಾಗಿ ಲೋಕಕ್ಕೆ ಸಾರುವ `ತಿರುಂಡಕುಳಿ~ (ದಕ್ಷಿಣ ಕನ್ನಡದ ಬಿಲ್ಲವರಲ್ಲಿ ಈ ಆಚರಣೆಗೆ `ತಲೆನೀರು~ ಎನ್ನುತ್ತಾರೆ), ಗರ್ಭಿಣಿ ಹೆಣ್ಣಿಗೆ ನಡೆಸುವ `ಪುಲುಕೂಡಿ~ (ಸೀಮಂತ) ಮೊದಲಾದ ದುಂದುವೆಚ್ಚದ ಮೂಢ ಆಚರಣೆಗಳನ್ನು ಹೆಣ್ಣಿನ ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಇಂತಹ ಪ್ರತಿಯೊಂದು ಆಚರಣೆಯಲ್ಲಿಯೂ ಹೆಣ್ಣಿನ ತಂದೆತಾಯಿಗಳು ಊರಿನವರೆಲ್ಲರನ್ನೂ ಕರೆದು ಔತಣ ನೀಡಬೇಕಾಗಿತ್ತು.

ಈ ದುಂದುವೆಚ್ಚದ ಆಚರಣೆಗಳಿಂದಾಗಿ ಹೆಣ್ಣುಮಕ್ಕಳು ಹುಟ್ಟುವುದೇ ಶಾಪ ಎಂದು ಹೆತ್ತವರು ಅಂದುಕೊಳ್ಳುತ್ತಿದ್ದರು. ಇಂತಹ ಆಚರಣೆಗಳಲ್ಲಿ ಶೋಷಕರು ಮತ್ತು ಶೋಷಿತರು ಒಂದೇ ವರ್ಗದಲ್ಲಿದ್ದರು. ನಾರಾಯಣ ಗುರುಗಳು ಮೊದಲು ಸಮರ ಸಾರಿದ್ದು ಹೆಣ್ಣಿನ ಶೋಷಣೆಯ ಇಂತಹ ಆಚರಣೆಗಳು ಮತ್ತು `ಒಳಗಿನ~ ಶೋಷಕರ ವಿರುದ್ಧ.
ಅದರ ನಂತರ ನಾರಾಯಣ ಗುರುಗಳು ಕೈಗೆತ್ತಿಕೊಂಡದ್ದು ವಿವಾಹ ವ್ಯವಸ್ಥೆಯ ಸುಧಾರಣೆಯ ಕಾರ‌್ಯವನ್ನು. ವರದಕ್ಷಿಣೆಯ ಜತೆಯಲ್ಲಿ ಮದುವೆಯ ವೆಚ್ಚವನ್ನೂ ಭರಿಸಬೇಕಾಗಿದ್ದ ಹೆಣ್ಣಿನ ತಂದೆ ತಾಯಿಗಳು ಮನೆಯಲ್ಲಿದ್ದ ಹೆಣ್ಣುಗಳ ಮದುವೆಗಳನ್ನು ಮಾಡಿ ಮುಗಿಸುವ ಹೊತ್ತಿಗೆ ಸಾಲದ ಶೂಲಕ್ಕೆ ಸಿಕ್ಕಿ ನರಳಾಡುವ ಪರಿಸ್ಥಿತಿ ಇತ್ತು.
ಇದನ್ನು ತಪ್ಪಿಸಲು ನಾರಾಯಣ ಗುರುಗಳು ಸರಳ ಮದುವೆಯ ಪ್ರಚಾರದಲ್ಲಿ ತೊಡಗಿದರು. ಇದಕ್ಕಾಗಿ ಅವರು ವಿವಾಹ ನೀತಿ ಸಂಹಿತೆಯೊಂದನ್ನು ರೂಪಿಸಿದ್ದರು. `ಮದುವೆಯನ್ನು ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆಸಬೇಕು.
ವರ, ವಧು, ಅವರ ತಂದೆ ತಾಯಿಗಳು, ವರ ಮತ್ತು ವಧುವಿನ ತಲಾ ಒಬ್ಬರು ಸಂಗಾತಿ, ಅರ್ಚಕ ಹಾಗೂ ಒಬ್ಬ ಸ್ಥಳೀಯ ಗಣ್ಯ ವ್ಯಕ್ತಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬೇಕು. ಇವರ ಸಂಖ್ಯೆ ಹತ್ತನ್ನು ಮೀರಬಾರದು.
ಮದುವೆಗೆ ಒಂದು ತಿಂಗಳು ಮೊದಲು ಗಂಡು-ಹೆಣ್ಣು ಇಬ್ಬರು ಭೇಟಿಯಾಗಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಬೇಕು. ಈ ಭೇಟಿಯ ಹದಿನೈದು ದಿನಗಳ ನಂತರವಷ್ಟೇ ಮದುವೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು.
ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಬೇಕು. ವರದಕ್ಷಿಣೆ ಇಲ್ಲದ ಸರಳ ಮದುವೆಯಿಂದ ಉಳಿತಾಯವಾಗುವ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಪಾಸ್‌ಬುಕ್ ಅನ್ನು ಮದುವೆಯ ದಿನ ವಧು-ವರರಿಗೆ ಕೊಡಬೇಕು....~ ಇತ್ಯಾದಿ ಅಂಶಗಳು ಆ ನೀತಿ ಸಂಹಿತೆಯಲ್ಲಿದ್ದವು.
ಒಬ್ಬ ಆಧ್ಯಾತ್ಮಿಕ ಗುರು ಲೌಕಿಕವಾದ ಸಂಗತಿಗಳ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿ ಚಿಂತನೆ ನಡೆಸಿದ ಬೇರೆ ಉದಾಹರಣೆಗಳು ಅಪರೂಪ. ಇಂತಹ ಸರಳ ಮದುವೆಗಳನ್ನು ನಾರಾಯಣ ಗುರುಗಳು ತಮ್ಮ ಶ್ರೀಮಂತ ಶಿಷ್ಯರ ಮನೆಯಿಂದಲೇ ಪ್ರಾರಂಭಿಸಿದ್ದರು.
ತಾವು ರೂಪಿಸಿದ್ದ ನೀತಿ ಸಂಹಿತೆಗೆ ಅನುಗುಣವಾಗಿ ಮದುವೆ ನಡೆದರೆ ಮಾತ್ರ ಅದರಲ್ಲಿ ತಾನು ಭಾಗವಹಿಸುವುದಾಗಿ ಅವರು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಕಾರಣ ಶ್ರಿಮಂತ ಶಿಷ್ಯರು ಮಕ್ಕಳ ಮದುವೆಯನ್ನು ಸರಳವಾಗಿ ನಡೆಸುತ್ತಿದ್ದರು.
ಶ್ರಿಮಂತ ಕುಟುಂಬಗಳಲ್ಲಿಯೇ ಸರಳ ವಿವಾಹ ನಡೆಯಲಾರಂಭಿಸಿದ್ದರಿಂದ ಬಡವರು ಕೂಡಾ ಪೊಳ್ಳುಪ್ರತಿಷ್ಠೆಗೆ ಬಿದ್ದು ತಮ್ಮ ಸಾಮರ್ಥ್ಯ ಮೀರಿ ದುಂದುವೆಚ್ಚ ಮಾಡದೆ ಸರಳ ಮದುವೆಗಳನ್ನು ಅನುಕರಿಸತೊಡಗಿದರು.

ಮಹಿಳಾ ಸುಧಾರಣೆಯ ಈ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆಯೇ ಅವರ ಶೋಷಣೆಯ ಕಬಂಧಬಾಹುಗಳು ಸಡಿಲಗೊಳ್ಳುತ್ತಾ ಹೋದವು. ಇದು ನಾರಾಯಣ ಗುರುಗಳು ಮಹಿಳಾ ಸಬಲೀಕರಣಕ್ಕೆ ತೋರಿಸಿದ ಹೊಸ ಮಾರ್ಗ.
ಆದರೆ ಇಂದಿನ ಪರಿಸ್ಥಿತಿ ಏನಾಗಿದೆ? ಪೂಜಾರಿಯವರ ಊರಲ್ಲಿಯೇ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಯ ಆರ್ಥಿಕ ಭಾರವನ್ನು ಹೊರಲಾಗದೆ ಹೆಣ್ಣು ಹೆತ್ತವರು ಗೋಳಾಡುತ್ತಿದ್ದಾರೆ. ಇದೊಂದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ.

ಇದರಿಂದಾಗಿ ಅನೇಕ ಯುವತಿಯರು ತಪ್ಪುದಾರಿ ತುಳಿಯುವಂತಾಗಿದೆ.
ಎರಡು ವರ್ಷಗಳ ಹಿಂದೆ ಮೋಹನ್‌ಕುಮಾರ್ ಎಂಬ ವಂಚಕ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಹತ್ಯೆಗೈದ ಪ್ರಕರಣವೇ ಇದಕ್ಕೆ ಸಾಕ್ಷಿ.
ಇವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಹಿಂದುಳಿದ ಜಾತಿಗೆ ಸೇರಿದ ಅವಿವಾಹಿತ ಹೆಣ್ಣುಗಳು. ಹೆಚ್ಚಿನವರು ಮನೆಯಲ್ಲಿ ನಾರಾಯಣ ಗುರುಗಳ ಪೋಟೋ ಇಟ್ಟುಕೊಂಡು ಪೂಜೆ ಮಾಡುವ ಕುಟುಂಬಗಳಿಗೆ ಸೇರಿದವರು.
ಈ ಪ್ರಕರಣ ಯಾವ ಸತ್ಯ ಹೇಳುತ್ತಿದೆ?  ಆ ಸತ್ಯವನ್ನು ಕಾಣಲು ಸಾಧ್ಯವಾದರೆ ಹೆಣ್ಣು ಹೆತ್ತವರನ್ನು ಕಿತ್ತು ತಿನ್ನುತ್ತಿರುವ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಗಳ ಪಿಡುಗಿನ ನಿವಾರಣೆಗೆ ಮಾರ್ಗಗಳು ಕೂಡಾ ನಾರಾಯಣಗುರುಗಳು ರೂಪಿಸಿ ಆಚರಣೆಗೆ ತಂದ ಸರಳ ವಿವಾಹದಲ್ಲಿ ಕಾಣಲು ಸಾಧ್ಯ.
ವಿರೋಧಾಭಾಸದ ಸಂಗತಿಯೆಂದರೆ ಸರಳ ವಿವಾಹಕ್ಕೆ ನೀತಿ ಸಂಹಿತೆಯನ್ನು ರೂಪಿಸಿದ ನಾರಾಯಣ ಗುರುಗಳು ಸ್ಥಾಪಿಸಿದ್ದ ಕುದ್ರೋಳಿ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಲ್ಯಾಣಮಂಟಪಗಳಲ್ಲಿಯೇ ಅದ್ಧೂರಿ ಮದುವೆಗಳು ನಡೆಯುತ್ತಿವೆ.
ವಿಧವೆಯರಿಗೆ ಮುತ್ತೈದೆ ಭಾಗ್ಯದ ಅವಕಾಶ ನೀಡಿ ಎಲ್ಲರ ಅಭಿನಂದನೆಗೆ ಪಾತ್ರರಾದ ಜನಾರ್ದನ ಪೂಜಾರಿಯವರು ಮುಂದಿನ ಹೆಜ್ಜೆಯಾಗಿ ಬಡಕುಟುಂಬಗಳ ಸಾವಿರಾರು ಯುವತಿಯರ ಬಾಳಿಗೆ ಬೆಳಕು ನೀಡುವ ಸರಳ ವಿವಾಹದ ಪ್ರಚಾರವನ್ನು ಯಾಕೆ ಕೈಗೊಳ್ಳಬಾರದು?
ಜನಾರ್ದನ ಪೂಜಾರಿಯವರು ತಮಗರಿವಿಲ್ಲದಂತೆಯೇ ನಾರಾಯಣ ಗುರುಗಳು ಮಾಡದಿರುವ ಒಂದು ಕೆಲಸ ಮಾಡಿದ್ದಾರೆ. ಪೂಜಾವಿಧಾನವನ್ನು ಸರಳಗೊಳಿಸಿದ್ದು ಮಾತ್ರವಲ್ಲ, ಪೂಜೆ ಮಾಡುವ ಅವಕಾಶವನ್ನು ಎಲ್ಲ ಜಾತಿಗಳಿಗೂ ನೀಡಿದ್ದು ನಾರಾಯಣ ಗುರುಗಳ ಧಾರ್ಮಿಕ ಸುಧಾರಣೆಯ ಪ್ರಮುಖ ಸಾಧನೆ.
ಜಾತಿಭೇದ ಇಲ್ಲದೆ ಅರ್ಚಕ ವೃತ್ತಿಯಲ್ಲಿ ತರಬೇತಿ ನೀಡಲಿಕ್ಕಾಗಿಯೇ ಅವರು ಸನ್ಯಾಸಿ ಸಂಘವನ್ನು ಸ್ಥಾಪಿಸಿದ್ದರು. ಇದರಿಂದಾಗಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವೂ ಸೇರಿದಂತೆ ನಾರಾಯಣ ಗುರುಗಳು ಸ್ಥಾಪಿಸಿದ್ದ ಎಲ್ಲ ದೇವಾಲಯಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ.

ಇಷ್ಟೆಲ್ಲ ಮಾಡಿದ್ದ ನಾರಾಯಣ ಗುರುಗಳು ಮಹಿಳೆಯರನ್ನು ಮಾತ್ರ ಅರ್ಚಕರನ್ನಾಗಿ ಮಾಡುವ ಬಗ್ಗೆ ಯಾಕೋ ಗಮನ ನೀಡಿರಲಿಲ್ಲ. ಈಗಲೂ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅರ್ಚಕ ವೃತ್ತಿಯಿಂದ ಮಾತ್ರ ವಂಚಿತರಾಗಿದ್ದಾರೆ.
ಖಾಸಗಿಯಾಗಿ ನಡೆಯುವ ಧಾರ್ಮಿಕ ಕಾರ‌್ಯಕ್ರಮಗಳಲ್ಲಿಯೂ ಮಹಿಳೆಯರನ್ನು ಒಂದೆರಡು ಹೆಜ್ಜೆ ಹಿಂದಕ್ಕೆ ನಿಲ್ಲಿಸಲಾಗುತ್ತದೆ. ಕುದ್ರೋಳಿಯಲ್ಲಿ ವಿಧವೆಯರು ತಾತ್ಕಾಲಿಕವಾದರೂ ಮುತ್ತೈದೆ ಭಾಗ್ಯ ಪಡೆದದ್ದು ಮಾತ್ರವಲ್ಲ, ತಾವೇ ಚಂಡಿಕಾ ಹೋಮ ನಡೆಸಿ  ದೇವರ ಮೂರ್ತಿ ಇದ್ದ ರಥ ಎಳೆದುಬಿಟ್ಟರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ-ಶೂದ್ರರೆಂಬ ಭೇದ ಇಲ್ಲದೆ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೇರುತ್ತಾ ಬಂದಿರುವ ಹಿಂದೂ ಧರ್ಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ.
ಪೂಜಾರಿಯವರಿಗೆ ಇಂತಹದ್ದೊಂದು ಸಾಹಸ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕುದ್ರೋಳಿ ಕ್ಷೇತ್ರ. ನಾರಾಯಣ ಗುರುಗಳು ಬಂದು ಗೋಕರ್ಣನಾಥ ಎನ್ನುವ ಹೆಸರಿಟ್ಟು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದ ಈ ಕ್ಷೇತ್ರಕ್ಕೆ ಮುಂದಿನ ವರ್ಷ ನೂರು ತುಂಬಲಿದೆ. ಅಸ್ಪೃಶ್ಯತೆಯಿಂದ ನೊಂದಿದ್ದ ಬಿಲ್ಲವ ಸಮುದಾಯದ ನಾಯಕರ ಕರೆಗೆ ಓಗೊಟ್ಟು ನಾರಾಯಣ ಗುರುಗಳು ಅಲ್ಲಿಗೆ ಬಂದಿದ್ದರು.
ಈ ಐತಿಹಾಸಿಕ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಹೊಯಿಗೆ ಬಜಾರ್ ಕೊರಗಪ್ಪನವರು. ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕವಾಗಿ ಹೆಚ್ಚು ನೆರವಾದವರು ಕೂಡಾ ಅವರೇ.

ಮುಸ್ಲಿಮ್ ವ್ಯಾಪಾರಿಯ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಕೊರಗಪ್ಪನವರು ತಮ್ಮ ಶ್ರಮ ಮತ್ತು ನಿಷ್ಠೆಯಿಂದ ಮಾಲೀಕರ ವಿಶ್ವಾಸಕ್ಕೆ ಪಾತ್ರರಾಗಿ ನಂತರ ಅದೇ ಕಂಪೆನಿಯ ಸದಸ್ಯರ ಜತೆಗೂಡಿ `ಸಿ.ಅಬ್ದುಲ್ ರೆಹಮಾನ್ ಮತ್ತು ಕೊರಗಪ್ಪ ಕಂಪೆನಿ~ಯನ್ನು ಸ್ಥಾಪಿಸಿ ವ್ಯಾಪಾರಿಯಾಗಿಹೆಸರು ಗಳಿಸಿದವರು.
 ಕುದ್ರೋಳಿ ದೇವಸ್ಥಾನದ ಸ್ಥಾಪನೆಯ ರೂವಾರಿಯ ಹಿನ್ನೆಲೆ ಆ ಕಾಲದ ಕೋಮುಸೌಹಾರ್ದತೆಯ ನೋಟವನ್ನು ಕೂಡಾ ನೀಡುತ್ತದೆ. ಅದು ನಾರಾಯಣ ಗುರು ಕಂಡ ಕನಸೂ ಕೂಡಾ ಆಗಿತ್ತು.
ಆದರೆ ಇಂದೇನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದ ಆರೋಪಪಟ್ಟಿಗಳಲ್ಲಿರುವ ಹೆಸರಿನ ಮುಂದಿರುವ ಜಾತಿ ವಿವರವನ್ನು ನೋಡಿದರೆ ಸಾಕು.
ಸಂಘರ್ಷ ಇಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಅವರ ಇಂದಿನ ಅನುಯಾಯಿಗಳು ಕೈಯಲ್ಲಿ ಲಾಠಿ ಹಿಡಿದುಕೊಂಡು ಹೊರಟಿದ್ದಾರೆ. ಗುರು ಇದ್ದಾರೆ, ಗುರಿ ತಪ್ಪಿದೆ.

Monday, October 3, 2011

ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?

ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಷ್ಟು `ಗಾಂಧಿ ಸ್ಮರಣೆ~ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ನಡೆದಿರಲಿಕ್ಕಿಲ್ಲ. ಅಣ್ಣಾ ಹಜಾರೆಯವರ ಚಳವಳಿಯಿಂದ ಪ್ರಾರಂಭಗೊಂಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ `ಸದ್ಭಾವನಾ ಉಪವಾಸ~ದ ವರೆಗೆ ಈ ಸ್ಮರಣೆಯ ಯಾತ್ರೆ ಮುಂದುವರಿದಿದೆ.
ಅಣ್ಣಾ ಹಜಾರೆಯವರನ್ನು ಆಗಲೇ ಜನ `ದೇಶ ಕಂಡ ಎರಡನೇ ಗಾಂಧಿ~ ಎಂದು ಕೊಂಡಾಡತೊಡಗಿದ್ದಾರೆ. `ಗುಜರಾತ್‌ನ ಮಣ್ಣಿನ ಮಗ ಗಾಂಧೀಜಿಯವರೇ ನನ್ನ ಆದರ್ಶ~ ಎಂದು ನರೇಂದ್ರ ಮೋದಿ ಗುಣಗಾನ ಮಾಡುತ್ತಿದ್ದಾರೆ.

ಇವರಿಬ್ಬರಿಂದಾಗಿ ಮಾತ್ರವಲ್ಲ, ಭಾರತ ಇಂದು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಗಳಾದ ಭ್ರಷ್ಟಾಚಾರ ಮತ್ತು ಕೋಮುವಾದದ ನಿರ್ಮೂಲನೆಗಾಗಿಯೂ ಗಾಂಧೀಜಿಯ ಹೊರತಾಗಿ ಬೇರೆ ದಾರಿ ಕಾಣದಿರುವುದು ಕೂಡಾ ಈ ಸ್ಮರಣೆಗೆ ಕಾರಣ ಇರಬಹುದು. ಆದರೆ ಈ ರೀತಿ ಗಾಂಧಿ ಸ್ಮರಣೆಯಲ್ಲಿ ತೊಡಗಿರುವವರೆಲ್ಲರೂ ಅವರು ತೋರಿದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆಯೇ?
ಗಾಂಧೀಜಿಯವರ ಅಹಿಂಸಾ ಹೋರಾಟದ ಮೊದಲ ಪ್ರಯೋಗ ಭೂಮಿ ಬಿಹಾರದ ಉತ್ತರತುದಿಯಲ್ಲಿರುವ ಚಂಪಾರಣ್. `ಈ ಚಳವಳಿ ನನಗೆ ದೇವರು, ಅಹಿಂಸೆ ಮತ್ತು ಸತ್ಯದ ದರ್ಶನ ಮಾಡಿಸಿತು~ ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕಿಂತ ಮೊದಲು ಗಾಂಧೀಜಿಯವರಿಗೆ ಕರಾರು ಕೂಲಿ ವಲಸೆ ರದ್ದುಗೊಳಿಸಲು ನಡೆಸಿದ್ದ ಹೋರಾಟದ ಅನುಭವ ಮಾತ್ರ ಇತ್ತು. ನಂತರದ ದಿನಗಳಲ್ಲಿ ಗಳಿಸಿದ ಜನಪ್ರಿಯತೆ ಆ ದಿನಗಳಲ್ಲಿ ಅವರಿಗೆ ಇರಲಿಲ್ಲ. ಕಾಂಗ್ರೆಸ್ ಬಗ್ಗೆಯೂ ಆ ಕಾಲದಲ್ಲಿ ಅಲ್ಲಿನ ಜನರಿಗೆ ಗೊತ್ತಿಲ್ಲದಿದ್ದ ಕಾರಣ ಪಕ್ಷವನ್ನು ದೂರ ಇಟ್ಟು ಗಾಂಧೀಜಿ ಹೋರಾಟ ನಡೆಸಿದ್ದರು. ಆದ್ದರಿಂದಲೇ ಒಬ್ಬ ಸಾಮಾನ್ಯ ಗಾಂಧೀಜಿಯನ್ನು ಚಂಪಾರಣ್ ಚಳವಳಿ ಮೂಲಕ ಕಾಣಲು ಸಾಧ್ಯ.

ಚಂಪಾರಣ್ ರೈತರು ತಮ್ಮ ತೋಟಗಳ ಮುಕ್ಕಾಲು ಪಾಲು ಜಾಗದಲ್ಲಿ ಇಂಡಿಗೋ (ನೀಲಿ)ಬೆಳೆ ಬೆಳೆಯಬೇಕೆಂಬ ಕಾನೂನಿನ (ತೀನ್ ಕಾಥಿಯಾ) ಕುಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅದನ್ನು ಜಾರಿಗೊಳಿಸಿದ್ದವರು ನೀಲಿ ತಯಾರಿಕೆಯ ಕಾರ್ಖಾನೆಗಳ ಬ್ರಿಟಿಷ್ ಒಡೆಯರು. ಜೀತದಾಳುಗಳಂತಿದ್ದ ರೈತರು ನೀಲಿ ಬೆಳೆಯಲ್ಲಿ ಹೆಚ್ಚಿನ ಆದಾಯ ಇಲ್ಲದೆ ಬಡತನದಲ್ಲಿ ನರಳುತ್ತಿದ್ದರೂ ದನಿ ಎತ್ತಲಾಗದಷ್ಟು ಅಸಹಾಯಕರಾಗಿದ್ದರು.
ಆ ಪ್ರದೇಶಕ್ಕೆ ಗಾಂಧೀಜಿ ಭೇಟಿ ನೀಡಿ ಮೊದಲು ಮಾಡಿದ ಕೆಲಸ `ಕಾರ್ಖಾನೆ ಮಾಲೀಕರು ನನ್ನ ಶತ್ರುಗಳಲ್ಲ, ಅವರಿಗೂ ಒಳ್ಳೆಯದನ್ನು ಬಯಸುತ್ತೇನೆ~ ಎಂದು ಘೋಷಿಸಿದ್ದು. ಚಳವಳಿ ಕಾವೇರುತ್ತಿದ್ದಂತೆಯೇ ಬ್ರಿಟಿಷ್ ಸರ್ಕಾರ ತನಿಖೆಗೆ ಆಯೋಗವನ್ನು ನೇಮಿಸಿತು.

ರೈತರ ಮೇಲೆ ನಡೆಸಲಾಗಿದ್ದ ದೌರ್ಜನ್ಯ, ಶೋಷಣೆಗಳಿಗೆ ಸಂಬಂಧಿಸಿದ ಪುರಾವೆಗಳು ಆಯೋಗದ ಮುಂದೆ ಬರತೊಡಗಿದ್ದವು. ಅವುಗಳನ್ನು ಬಳಸಿಕೊಂಡು ಕಾರ್ಖಾನೆ ಮಾಲೀಕರ ಮೇಲೆ ಕ್ರಮಕ್ಕೆ ಗಾಂಧೀಜಿ ಒತ್ತಾಯಿಸಬಹುದಿತ್ತು. ಹಾಗೆ ಮಾಡಿದ್ದರೆ ಬಹಳಷ್ಟು ಮಂದಿಗೆ ಕಠಿಣ ಶಿಕ್ಷೆಯೂ ಆಗುತ್ತಿತ್ತು.

ಆದರೆ ಹಳೆಯದನ್ನು ಕೆದಕುವುದು ತಮಗೆ ಇಷ್ಟ ಇಲ್ಲ ಎಂದು ಪ್ರಾರಂಭದಲ್ಲಿಯೇ ಹೇಳಿದ ಗಾಂಧೀಜಿ, ಅವರ ಮನಸ್ಸಿನಲ್ಲಿದ್ದ ಭಯವನ್ನು ನಿವಾರಿಸಿದ್ದರು. ಹೋರಾಟದುದ್ದಕ್ಕೂ ಅವರು ಕಾರ್ಖಾನೆಯ ಮಾಲೀಕರ ಬಗ್ಗೆ ಒಂದೇ ಒಂದು ದೂಷಣೆಯ ಮಾತುಗಳನ್ನು ಆಡಿರಲಿಲ್ಲ.
ಇದರಿಂದಾಗಿ ರೈತರು ಮಾತ್ರವಲ್ಲ, ಪ್ರಾರಂಭದಲ್ಲಿ ಗಾಂಧೀಜಿಯವರನ್ನು ಅನುಮಾನದಿಂದ ನೋಡಿದ ಕಾರ್ಖಾನೆ ಮಾಲೀಕರು ನಂತರದ ದಿನಗಳಲ್ಲಿ ಅವರ ಅಭಿಮಾನಿಗಳಾಗಿ ಬಿಟ್ಟರು. ರೈತ ವಿರೋಧಿ ಕಾನೂನು ರದ್ದಾಗಿದ್ದು ಮಾತ್ರವಲ್ಲ, ರೈತರಿಗೆ ಪರಿಹಾರವೂ ಸಿಕ್ಕಿತು. ಗೌರವಯುತವಾಗಿಯೇ ಕಾರ್ಖಾನೆ ಮಾಲೀಕರು ಊರು ಬಿಟ್ಟು ಹೋದರು.
ಮುಂದಿನ ಹೋರಾಟದುದ್ದಕ್ಕೂ ಗಾಂಧೀಜಿ ಅನುಸರಿಸಿದ್ದು ಇದೇ ಕಾರ‌್ಯತಂತ್ರವನ್ನು. ಸಂಧಾನದ ಮೇಜಿನಲ್ಲಿ ಎದುರಿಗೆ ಕೂತವರನ್ನು ಎಂದೂ ಅವರು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ. ಅವರನ್ನು ತನ್ನತ್ತ ಒಲಿಸಿಕೊಂಡು ಉದ್ದೇಶ ಸಾಧಿಸಿಬಿಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಜತೆ ಮಾತುಕತೆ ನಡೆಸಿದ ನಂತರ ಅದರ ವಿವರವನ್ನೊಳಗೊಂಡ ಪತ್ರಿಕಾ ಹೇಳಿಕೆಯನ್ನು ಬ್ರಿಟಿಷ್ ಸಂಧಾನಕಾರರಿಗೆ ತೋರಿಸಿ ಸಮ್ಮತಿ ಪಡೆದು ನಂತರವಷ್ಟೇ ಮಾಧ್ಯಮಗಳಿಗೆ ನೀಡುತ್ತಿದ್ದರಂತೆ. ಇದು ಮಾತುಕತೆಯ ಪ್ರಕ್ರಿಯೆ ಮುಂದುವರಿಸಿಕೊಂಡು ಹೋಗಲು  ನೆರವಾಗುತ್ತಿತ್ತು. ಅಹಿಂಸೆಯ ಮಾರ್ಗದಲ್ಲಿ ಯಶಸ್ಸು ನಿಧಾನ ಎನ್ನುವ ಅರಿವು ಅವರಿಗಿತ್ತು.

ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಚಳವಳಿಯನ್ನು ನೋಡಿದಾಗ ಕಾಣುವುದೇನು? ಅಣ್ಣಾಹಜಾರೆ ತಂಡ ಪ್ರಾರಂಭದಲ್ಲಿಯೇ ಚುನಾಯಿತ ಸರ್ಕಾರವನ್ನು ಶತ್ರು ಸ್ಥಾನದಲ್ಲಿಟ್ಟು ಬಿಟ್ಟಿತ್ತು. ಸಂಘರ್ಷದ ಮೂಲಕವೇ ಸಂಧಾನ ಎಂಬ ಕಾರ್ಯತಂತ್ರವನ್ನು ಅವರು ಅನುಸರಿಸಿದಂತಿತ್ತು.
ಆದ್ದರಿಂದಲೇ ಗಾಂಧೀಜಿ ಇಲ್ಲವೇ ಅವರ ಅನುಯಾಯಿಗಳು ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡ ಬ್ರಿಟಿಷರ ವಿರುದ್ಧ ಬಳಸದ ಭಾಷೆಯನ್ನೆಲ್ಲ ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳ ವಿರುದ್ಧ ಬಳಸಿದ್ದಾರೆ.
ಲೋಕಪಾಲ ಮಸೂದೆಯ ರಚನಾ ಸಮಿತಿಯ ಸಭೆ ಮುಗಿಸಿ ಹೊರಗೆ ಬಂದ ಅಣ್ಣಾ ಹಜಾರೆ ಸಂಗಾತಿಗಳು ಮೊದಲು ಮಾಡುತ್ತಿದ್ದ ಕೆಲಸ ತಮಗಾಗಿ ಕಾಯುತ್ತಿದ್ದ ಟಿವಿ ಚಾನೆಲ್‌ಗಳ ಮೈಕ್ ಮುಂದೆ ಸರ್ಕಾರವನ್ನು ದೂಷಿಸುವುದು. ಗಾಂಧೀಜಿಯವರು ಇದ್ದಿದ್ದರೆ ಹೀಗೆ ಮಾಡುತ್ತಿದ್ದರೇ? ಅಂದ ಹಾಗೆ, ಗಾಂಧೀಜಿ ತಮ್ಮ ಹೋರಾಟದ ಬದುಕಿನಲ್ಲಿ ಎರಡು ಬಾರಿ 21ದಿನಗಳ ಉಪವಾಸವೂ ಸೇರಿದಂತೆ 16 ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.
ಆದರೆ, ಅವರೆಂದೂ ಬ್ರಿಟಿಷರ ವಿರುದ್ಧ ಅದನ್ನು ಬಳಸಿಲ್ಲ. ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು `ತಮ್ಮವರ~ ವಿರುದ್ಧವೇ ಪ್ರಯೋಗಿಸಿದ್ದು. ಅದು ಕೋಮು ಸೌಹಾರ್ದತೆಗಾಗಿ ಇಲ್ಲವೇ ಅಸ್ಪೃಶ್ಯತೆಯ ನಿವಾರಣೆಗಾಗಿ, ರಾಜಕೀಯ ಉದ್ದೇಶಕ್ಕಲ್ಲ.
* * * * * *
ಕಳೆದ ಹತ್ತು ವರ್ಷಗಳಲ್ಲಿ ಗಾಂಧೀಜಿಯವರನ್ನು ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚು ನೆನಪು ಮಾಡಿಕೊಂಡದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಪ್ರತಿ ಚುನಾವಣೆಯ ಭಾಷಣಗಳಲ್ಲಿ ಅವರ ಬಾಯಿಯಿಂದ ಪುಂಖಾನುಪುಂಖವಾಗಿ ಗಾಂಧಿ ಹೆಸರು ಹೊರಬೀಳುತ್ತದೆ. ಕೆಲವು ವರ್ಷಗಳ ಹಿಂದೆ ಗುಜರಾತ್‌ನ ಪತ್ರಿಕೆಗಳಲ್ಲಿ  ತನಗಿಂತ ಎತ್ತರದ ಲಾಠಿ ಹಿಡಿದ ಗಾಂಧೀಜಿಯ ಚಿತ್ರ ಹೊಂದಿದ್ದ ಸರ್ಕಾರಿ ಜಾಹೀರಾತು ಪ್ರಕಟವಾಗಿತ್ತು. ಅದರ ಶೀರ್ಷಿಕೆ  `ಲಾಠಿ~ ಆಗಿತ್ತು(ಗಾಂಧಿ ಅಲ್ಲ).

`ಲಾಠಿ ರಕ್ಷಣೆ ಮತ್ತು ಸುಭದ್ರತೆಯ ಸಂಕೇತ, ದೌರ್ಜನ್ಯ ಮತ್ತು ಹಿಂಸೆಯ ಸಂಕೇತ ಅಲ್ಲ~ ಎಂಬ ಅಡಿ ಬರಹ ಅದರಲ್ಲಿತ್ತು. ಇದು ಮೋದಿ ಕಲ್ಪನೆಯ ಗಾಂಧಿ. ಆದರೆ ಗುಜರಾತ್‌ನ ಪೋರಬಂದರ್‌ನ ಮೂರು ಮಾಳಿಗೆಗಳ ಮನೆ ಕೀರ್ತಿಮಂದಿರದಲ್ಲಿ ಪುತಲೀಬಾಯಿ ಜನ್ಮ ನೀಡಿದ್ದ ಗಾಂಧೀಜಿ ಬೇರೆಯೇ ಆಗಿದ್ದರು. ಒಬ್ಬ ದಾರ್ಶನಿಕ ಮಾತ್ರ ಕಾಣಬಲ್ಲ ಭವಿಷ್ಯದ ಚಿತ್ರವನ್ನು ಅವರು ತಮ್ಮ ಕೊನೆಯ ದಿನಗಳಲ್ಲಿ ಕಂಡಿದ್ದರು, ಅದು ಹೆಡೆ ಬಿಚ್ಚುತ್ತಿದ್ದ ಕೋಮುವಾದ ಎಂಬ ಘಟಸರ್ಪದ ಚಿತ್ರ.
ಬ್ರಿಟಿಷರ ವಿರುದ್ಧದ ಹೋರಾಟದ ಗುರಿ, ದಾರಿ ಮತ್ತು ಪರಿಣಾಮಗಳೆಲ್ಲದರ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು. ಆದರೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎದುರಾದ ಹಿಂದೂ-ಮುಸ್ಲಿಮರ ನಡುವಿನ ಕೋಮುದ್ವೇಷವನ್ನು ಕಂಡು ಅವರು ಆಘಾತಕ್ಕೀಡಾಗಿದ್ದರು.
ದೇಶ ವಿಭಜನೆಗೆ ಒತ್ತಾಯಿಸಿ ಮುಸ್ಲಿಮ್ ಲೀಗ್ `ನೇರ ಕಾರ್ಯಾಚರಣೆ~ಗೆ ಕರೆ ಕೊಟ್ಟಾಗ ಮೊದಲು ಕೋಲ್ಕತ್ತದಲ್ಲಿ, ನಂತರ ನೌಖಾಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಕಂಡ ಗಾಂಧೀಜಿ ಸ್ವತಂತ್ರ ಭಾರತದ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದರು. ಅದರ ನಂತರ ಬದುಕುವ ಆಸೆಯನ್ನೇ ಕಳೆದುಕೊಂಡವರಂತೆ ಮಾತನಾಡುತ್ತಿದ್ದರು.
ನೌಖಾಲಿಗೆ ಭೇಟಿ ನೀಡಿದ್ದಾಗ ಸ್ವಾಗತಿಸಲು ಬಂದವರನ್ನು ಉದ್ದೇಶಿಸಿ ಮಾತನಾಡಿದ್ದ ಅವರು `ನಾನಿಲ್ಲಿ ಒಂದು ವರ್ಷ ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಕಾಲ ಇರಬಲ್ಲೆ. ಆದರೆ ಜನರ ಭರವಸೆ ಮತ್ತು ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗದೆ ಹೋದರೆ ಬದುಕುಳಿಯುವುದಕ್ಕಿಂತ ಸಾವೇ ಲೇಸು~ ಎಂದು ಹೇಳಿದ್ದರು.
ಅದಕ್ಕಿಂತ ಮೊದಲು ಹಿಂಸೆಯ ಬೆಂಕಿಯಿಂದ ಧಗಧಗಿಸುತ್ತಿದ್ದ ನೌಖಾಲಿಗೆ ಹೊರಟಿದ್ದ ಅವರನ್ನು ತಡೆಯಲು ಬಂದವರ ಜತೆ ಮಾತನಾಡಿದ್ದ ಗಾಂಧೀಜಿ `ನನ್ನನ್ನು ಈ ವರೆಗೆ ಬದುಕಿಸಿದ ಮತ್ತು ಆ ಬದುಕನ್ನು ಅರ್ಥಪೂರ್ಣವಾಗಿಸಿದ್ದ ಸಿದ್ಧಾಂತದ ಸತ್ವಪರೀಕ್ಷೆಗಾಗಿ ಮತ್ತು ಹೊಸ ಕಾರ್ಯತಂತ್ರದ ಶೋಧಕ್ಕಾಗಿ ಅಲ್ಲಿಗೆ ಹೊರಟಿದ್ದೇನೆ~ ಎಂದು ಹೇಳಿದ್ದರು.
ಹಿಂದೂ-ಮುಸ್ಲಿಮ್ ಸೌಹಾರ್ದ ಅವರಿಗೆ ಇನ್ನೊಂದು ರಾಜಕೀಯ ಕಾರ‌್ಯಕ್ರಮವಾಗಿರಲಿಲ್ಲ, ಜೀವನವಿಧಾನವಾಗಿತ್ತು. ಇದರಿಂದಾಗಿಯೇ ಕೋಮುಸಾಮರಸ್ಯವನ್ನು ಅವರು ಕೊನೆಯ ದಿನಗಳಲ್ಲಿ ಜೀವನ್ಮರಣದ ಪ್ರಶ್ನೆಯಾಗಿಯೇ ಸ್ವೀಕರಿಸಿದ್ದರು.
ಸುಮಾರು ಆರು ಸಾವಿರ ಜನ ಪ್ರಾಣ ಕಳೆದುಕೊಂಡಿದ್ದ ಕೋಲ್ಕತ್ತ ಕೋಮುಗಲಭೆಯ ನಂತರ ಪ್ರತೀಕಾರ ರೂಪದಲ್ಲಿ ನೌಖಾಲಿಯಲ್ಲಿ ಪ್ರಾರಂಭವಾದ ಕೋಮು ಸೇಡಿನ ಜ್ವಾಲೆಯನ್ನು ನಂದಿಸುವುದು ಗಾಂಧೀಜಿಯವರ ಕೈಯನ್ನೂ ಮೀರಿದ್ದು ಎಂದು ಎಲ್ಲರೂ ಭಾವಿಸಿದ್ದರು.

ಕಾಂಗ್ರೆಸ್‌ನ ಉಳಿದ ನಾಯಕರೆಲ್ಲ ದೆಹಲಿಯಲ್ಲಿ ಕೂತು ಸ್ವಾತಂತ್ರ್ಯದೇವತೆಯ ಸ್ವಾಗತಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಗಾಂಧೀಜಿ ತಮ್ಮ ಕೆಲವು ಆಪ್ತರನ್ನಷ್ಟೇ ಜತೆಯಲ್ಲಿಟ್ಟುಕೊಂಡು ಗಲಭೆಪೀಡಿತ ನೌಖಾಲಿಯಲ್ಲಿ ಪಾದಯಾತ್ರೆ ನಡೆಸಿದ್ದರು.
ಏಳು ವಾರಗಳ ಕಾಲ 116 ಮೈಲು ಕ್ರಮಿಸಿ ಅಲ್ಲಿನ 47 ಗ್ರಾಮಗಳಿಗೆ ಅವರು ಭೇಟಿ ನೀಡಿದ್ದರು. ಅಸಾಧ್ಯ ಎನಿಸಿದ್ದು ಸಾಧ್ಯವಾಗಿತ್ತು. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ನೌಖಾಲಿಯಲ್ಲಿ ನಂತರದ ದಿನಗಳಲ್ಲಿ ಕೋಮುಗಲಭೆ ನಡೆಯಲಿಲ್ಲ.
ಆದರೆ ನೌಖಾಲಿಯ ಯಶಸ್ಸಿನ ಖುಷಿ ಬಹಳ ದಿನ ಗಾಂಧೀಜಿಯವರಲ್ಲಿ ಉಳಿಯಲಿಲ್ಲ. ಸ್ವಾತಂತ್ರ್ಯ ಸಿಕ್ಕ ಒಂದು ತಿಂಗಳ ಅವಧಿಯಲ್ಲಿ ಕೋಲ್ಕತ್ತ ಮತ್ತೆ ಕೋಮುಗಲಭೆಗೆ ಆಹುತಿಯಾಗಿತ್ತು. ಈ ಬಾರಿ ಅವರು `ಮಾಡು ಇಲ್ಲವೇ ಮಡಿ~ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದರಂತೆ ಆಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿದರು.
ಕೇವಲ 73 ಗಂಟೆಗಳ ಉಪವಾಸದ ಮೂಲಕವೇ ಗಾಂಧೀಜಿ ಕೋಲ್ಕತ್ತದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದರು. ಕೋಲ್ಕತ್ತದ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಬಂದು `ಇನ್ನೆಂದು ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ, ಅಂತಹದ್ದೇನಾದರೂ ನಡೆದರೆ ಪ್ರಾಣ ಕೊಟ್ಟಾದರೂ ಅದನ್ನು ತಡೆಯುತ್ತೇವೆ~ ಎಂದು ಭರವಸೆ ನೀಡಿದ್ದರು.
ಜೀವನದ ಕೊನೆಯ ಉಪವಾಸವನ್ನೂ ಅವರು ಕೈಗೊಂಡಿದ್ದು ಕೂಡಾ ಕೋಮು ಸೌಹಾರ್ದತೆಗಾಗಿ. ಆಗ ಉಳಿದೆಲ್ಲ ಕಡೆ ಕೋಮುಗಲಭೆ ನಿಯಂತ್ರಣಕ್ಕೆ ಬರುತ್ತಿದ್ದರೂ ರಾಜಧಾನಿ ದೆಹಲಿ ಮಾತ್ರ ಹೊತ್ತಿ ಉರಿಯುತ್ತಲೇ ಇತ್ತು. ಅದೇ ವೇಳೆ ವಿಭಜನೆಯ ಕಾಲದ ಒಪ್ಪಂದದಂತೆ ತಮಗೆ ಸಂದಾಯವಾಗಬೇಕಾಗಿದ್ದ ಬಾಕಿ  55 ಕೋಟಿ ರೂಪಾಯಿ ಪಾವತಿಸುವಂತೆ ಪಾಕಿಸ್ತಾನ ಒತ್ತಾಯಿಸುತ್ತಿತ್ತು.
ಆದರೆ ಕಾಶ್ಮೀರ ವಿವಾದ ಇತ್ಯರ್ಥವಾಗದೆ ಈ ಹಣವನ್ನು ಪಾವತಿ ಮಾಡಬಾರದೆಂಬ ಒತ್ತಡ ಸರ್ಕಾರದ ಮೇಲಿತ್ತು. ಇದರಿಂದಾಗಿ ದೇಶದೊಳಗೂ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ ಕೋಮುಗಲಭೆ ಸ್ಫೋಟಗೊಳ್ಳುವ ಸೂಚನೆ ಕಂಡ ಗಾಂಧೀಜಿ ಕೋಮುಸೌಹಾರ್ದಕ್ಕಾಗಿ ಉಪವಾಸ ಪ್ರಾರಂಭಿಸಿಯೇ ಬಿಟ್ಟರು.
1924ರಲ್ಲಿ ಮೊದಲ ಉಪವಾಸ ಕೈಗೊಂಡಿದ್ದಾಗ ಅವರಿಗೆ 54 ವರ್ಷ.  ಕೊನೆಯ ಉಪವಾಸ ಕೈಗೊಂಡಿದ್ದಾಗ ಅವರಿಗೆ 78. ಕೋಲ್ಕತ್ತ ಉಪವಾಸದಿಂದಾಗಿ ಆಗಲೇ ಅವರ ಮೂತ್ರಪಿಂಡಗಳು ಹಾನಿಗೀಡಾಗಿದ್ದವು.
ಉಪವಾಸದ ಕೊನೆಯ ದಿನಗಳಲ್ಲಿ ಅವರಿಗೆ ಚಾಪೆ ಬಿಟ್ಟು ಏಳಲಾಗುತ್ತಿರಲಿಲ್ಲ, ಮಾತು ನಿಂತುಹೋಗಿತ್ತು, ವೈದ್ಯರು ಕೈಚೆಲ್ಲಿ ಬಿಟ್ಟಿದ್ದರು. ಉಳಿದದ್ದು ಯಾವುದನ್ನೂ ಲೆಕ್ಕಿಸದೆ ಗಾಂಧೀಜಿ ಸಾಯಲು ಸಿದ್ಧರಾಗಿದ್ದರು. 121ಗಂಟೆ 30 ನಿಮಿಷಗಳ ಅವಧಿಯ ಉಪವಾಸದ ನಂತರ ಸರ್ಕಾರ ಮತ್ತು ಜನತೆ ಮಣಿಯಿತು, ಅವರು ಸಾವನ್ನು ಗೆದ್ದಿದ್ದರು.
ಆದರೆ ಅದೇ ದಿನ, ಇನ್ನೊಂದು ಕಡೆಯಿಂದ ಸಾವು ಅವರ ಬೆನ್ನಟ್ಟಿಕೊಂಡು ಬರುತ್ತಿತ್ತು. ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ ಮುಂಬೈನ ವೀರ್ ಸಾವರ್ಕರ್ ಮನೆಯಿಂದ ಬೀಳ್ಕೊಂಡು ಮುಂಬೈ-ದೆಹಲಿ ವಿಮಾನ ಹತ್ತಿದ್ದರು. ಸರಿಯಾಗಿ ಹದಿಮೂರು ದಿನಗಳ ನಂತರ ಗೋಡ್ಸೆ ಪಿಸ್ತೂಲಿನ ಗುಂಡು ಗಾಂಧೀಜಿ ಎದೆ ಸೀಳಿತ್ತು.
ಗಾಂಧೀಜಿಯನ್ನು ಬಲಿ ತೆಗೆದುಕೊಂಡ ಒಬ್ಬ ಮತಾಂಧನ ಗುಂಡು, ಸಾವಿಗೆ ನೆಪ ಅಷ್ಟೆ. ದೇಶ ವಿಭಜನೆಯಾದಾಗಲೇ ಅವರು ಅರ್ಧ ಸತ್ತಿದ್ದರು, ಉಳಿದರ್ಧ ಜೀವವನ್ನು ಸ್ವಾತಂತ್ರ್ಯಾನಂತರ ಭುಗಿಲೆದ್ದ ಕೋಮುಗಲಭೆ ಬಲಿ ತೆಗೆದುಕೊಂಡು ಬಿಟ್ಟಿತ್ತು. ಅದರ ನಂತರ ನೂರಾರು ಬಾರಿ ಗಾಂಧೀಜಿ ಸತ್ತಿದ್ದಾರೆ.
2002ರ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ತನ್ನ ಹುಟ್ಟೂರಾದ ಗುಜರಾತ್‌ನಲ್ಲಿಯೂ ಅವರು ಸತ್ತಿದ್ದರು. ಆ ಹೊತ್ತಿನಲ್ಲಿ ಗಾಂಧೀಜಿ ಅಲ್ಲಿದ್ದರೆ ಏನು ಮಾಡುತ್ತಿದ್ದರು? ಆಗ ಸುಮ್ಮನಿದ್ದು, ಒಂಬತ್ತು ವರ್ಷಗಳ ನಂತರ ಹವಾ ನಿಯಂತ್ರಿತ ಸಭಾಂಗಣದಲ್ಲಿ ಮೂರು ದಿನಗಳ ಉಪವಾಸ ಮಾಡುತ್ತಿದ್ದರೇ? ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?