Sunday, June 26, 2016

ಹಳದಿ ಕಣ್ಣುಗಳಿಗೆ ಏನೆಲ್ಲಾ ಕಾಣುತ್ತೋ ಗೊತ್ತಿಲ್ಲ

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ಸಿದ್ದರಾಮಯ್ಯನವರು ಮೈಸೂರಿಗೆ ಹೋಗಿದ್ದಾಗ ದೇವನೂರ ಮಹದೇವ ಮನೆಗೆ ಭೇಟಿ ನೀಡಿದ್ದರು. ಅಲ್ಲಿ ಓಡಾಡುತ್ತಿದ್ದ ಮಗಳನ್ನು (ಬಹುಷ: ಮಿತಾ ಇದ್ದಿರಬಹುದು) ಕಂಡ ಸಿದ್ದರಾಮಯ್ಯನವರು ‘ಏನೇ ಹೇಳು ಮಹದೇವ, ಮನೆಯಲ್ಲೊಬ್ಬಳು ಮಗಳು ಇರ್ಬೇಕು ಕಣಯ್ಯ’ ಎಂದು ಉದ್ಘರಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಸ್ನೇಹಿತರು ತಮ್ಮ ಮಕ್ಕಳನ್ನು ಕರೆತಂದು ಪರಿಚಯಿಸಿದಾಗೆಲ್ಲ, ಮಗಳಾಗಿದ್ದರೆ ಸಿದ್ದರಾಮಯ್ಯನವರು ಭಾವುಕರಾಗಿದ್ದನ್ನು ಕಳೆದ ಮೂರು ವರ್ಷಗಳಲ್ಲಿ ಹಲವಾರು ಬಾರಿ ಕಂಡಿದ್ದೇನೆ.ಮೇಲ್ನೋಟಕ್ಕೆ ಎದುರಿಗಿದ್ದವರಲ್ಲಿ ಭೀತಿ ಹುಟ್ಟಿಸುವವರಂತೆ ಕಾಣುವ ಸಿದ್ದರಾಮಯ್ಯನವರು ಗೌರಿ (ಲಂಕೇಶ್) ಜೋರು ದನಿಯಲ್ಲಿ ವಾಗ್ವಾದಕ್ಕಿಳಿದಾಗಲೂ ನಗುತ್ತಾ ಸಮಾಧಾನದಿಂದ ಸಂತೈಸುತ್ತಿರುವುದನ್ನೂ ಕಂಡಿದ್ದೇನೆ.
ಈ ಎಲ್ಲ ಸಂದರ್ಭಗಳಲ್ಲಿಯೂ ಮತ್ತೊಬ್ಬರ ಮಕ್ಕಳಲ್ಲಿ ಮಗಳನ್ನು ಕಾಣುವ ಮಗಳಿಲ್ಲದ ತಂದೆಯ ಹಂಬಲ ನನ್ನಕಣ್ಣಿಗೆ ಕಂಡಿದೆ. ಹಳದಿ ಕಣ್ಣುಗಳಿಗೆ ಏನೆಲ್ಲಾ ಕಾಣುತ್ತೋ ಗೊತ್ತಿಲ್ಲ.
ಅಂದಹಾಗೆ ಈ ಹಳದಿ ಕಣ್ಣುಗಳ ಜತೆ ಊರೆಲ್ಲ ತಿರುಗಾಡುವ ವಿಕೃತರು ಮನೆಯೊಳಗೆ ಹೋದಾಗ ಆ ಕೊಳಕು ಕಣ್ಣುಗಳನ್ನು ಹೊರಗಿಟ್ಟು ಹೋಗುತ್ತಾರೋ, ಇಲ್ಲವೇ ಹೊತ್ತುಕೊಂಡು ಹೋಗುತ್ತಾರೋ!

No comments:

Post a Comment