Tuesday, May 1, 2012

ಕಮರಿಹೋದ ಅಣ್ಣಾ ಚಳವಳಿ ಎಂಬ ಕನಸು April 09, 2012


ಭ್ರಷ್ಟಾಚಾರ ವಿರೋಧಿಸಿ ನಡೆದ ದೇಶದ ಮೂರನೇ ಹೋರಾಟದ ಗರ್ಭಪಾತವಾಗಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಎಂಬತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವನಾಥ್ ಪ್ರತಾಪ್ ಸಿಂಗ್ ನೇತೃತ್ವದಲ್ಲಿ ನಡೆದ ಚಳವಳಿಗಳು ಕೂಡಾ  ಭ್ರಷ್ಟಾಚಾರ ನಿರ್ಮೂಲನೆಯ ಗುರಿಯನ್ನೇ ಹೊಂದಿದ್ದವು.

ಆ ಎರಡೂ ಚಳವಳಿಗಳು ಅಂತಿಮವಾಗಿ ಚುನಾವಣೆಯಲ್ಲಿ ಭ್ರಷ್ಟರ ಸೋಲಿನ ಮೂಲಕ ಸತ್ತೆಯ ಬದಲಾವಣೆಯಲ್ಲಿ ಕೊನೆಗೊಂಡಿದ್ದವು. ತನ್ನ ನೇತೃತ್ವದ ಚಳವಳಿಗೆ ವರ್ಷ ತುಂಬಿದ ಸಂದರ್ಭದಲ್ಲಿ ಮಾತನಾಡಿರುವ ಅಣ್ಣಾ ಹಜಾರೆ ಅವರೂ ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ನಿರ್ಣಾಯಕ ಹೋರಾಟ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಹಿಂದಿನ ಎರಡು ಭ್ರಷ್ಟಾಚಾರ ವಿರೋಧಿ ಚಳವಳಿಗಳ ಜತೆ ಕೆಲವು ಅತ್ಯುತ್ಸಾಹಿಗಳು ಹೋಲಿಸುತ್ತಾ ಬಂದ ಅಣ್ಣಾ ಹಜಾರೆ ಚಳವಳಿ ಮುಂದೆ ಹೆಜ್ಜೆ ಇಡಲಾಗದೆ ನಡು ಹಾದಿಯಲ್ಲಿಯೇ ಏದುಸಿರು ಬಿಡುತ್ತಿರುವುದನ್ನು ನೋಡಿದರೆ ಬಹಳ ದೂರ ಸಾಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಕಳೆದ ವರ್ಷದ ಏಪ್ರಿಲ್ ಐದರಂದು ದೇಶಕ್ಕೆ ಅಷ್ಟೇನೂ ಪರಿಚಿತರಲ್ಲದ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದಾಗ ಹರಿದುಬಂದ ಜನಬೆಂಬಲವನ್ನು ಮುಗ್ಧ ಕಣ್ಣುಗಳಿಂದ ನೋಡಿದವರಲ್ಲಿ ಹೆಚ್ಚಿನವರು ಆಗಲೇ ಲೋಕಪಾಲರ ನೇಮಕವಾಗಿಯೇ ಬಿಟ್ಟಿತು ಎಂಬ ಸಂಭ್ರಮದಲ್ಲಿದ್ದರು.

ಒಂದು ವರ್ಷ ಕಳೆದ ಮೇಲೂ ಲೋಕಪಾಲರ ನೇಮಕದ ಮಸೂದೆಯನ್ನು ಸಂಸತ್ ಅಂಗೀಕರಿಸಿಲ್ಲ, ಅದಕ್ಕೆ ಅಂಗೀಕಾರ ದೊರೆಯುವ ಭರವಸೆಯೂ ಇಲ್ಲ. ಸದ್ಯಕ್ಕೆ ಇದು ಮುಗಿದ ಅಧ್ಯಾಯ.

ಇದನ್ನು ಇನ್ನೊಂದು `ಸ್ವಾತಂತ್ರ್ಯ ಹೋರಾಟ` ಎಂದು ಬಣ್ಣಿಸುತ್ತಾ ಅರಬ್ ರಾಷ್ಟ್ರಗಳಲ್ಲಿ ನಡೆದ ಕ್ರಾಂತಿ ಇಲ್ಲಿಯೂ ನಡೆದೇ ಬಿಟ್ಟಿತು ಎಂಬ ಭ್ರಮೆಯನ್ನು ಸೃಷ್ಟಿಸಿದ್ದ ಮಾಧ್ಯಮಗಳು, ಮುಖ್ಯವಾಗಿ ಟಿವಿ ಚಾನೆಲ್‌ಗಳು, ಕೂಡಾ ಅಣ್ಣಾಹಜಾರೆ ಚಳವಳಿಯನ್ನು ಮರೆತುಬಿಟ್ಟಿವೆ. ವರ್ಷದ ಹಿಂದೆ ಹರಿದು ಬಂದ ಜನಸಾಗರ ಈಗ ಬೇಸಿಗೆಯ ಕಾಲದ ನದಿಯಂತಾಗಿದೆ.

ಅಣ್ಣಾ ಹಜಾರೆ ಉಪವಾಸ ಕೂತರೆ ಜಂತರ್‌ಮಂತರ್ ಮುಂದೆಯೇ ಜನಸೇರುತ್ತಿಲ್ಲ, ರಾಮಲೀಲಾ ಮೈದಾನವನ್ನು ತುಂಬುವುದು ಇನ್ನೂ ಕಷ್ಟ. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದವರು ಆಗಲೇ ಮೌನವಾಗಿದ್ದಾರೆ.

ಇವೆಲ್ಲವನ್ನೂ ನೋಡಿಯೋ ಏನೋ, ತಮ್ಮ ಬೇಡಿಕೆ ಈಡೇರಿಕೆಗೆ `ಒಂದು ದಿನ ಇಲ್ಲವೇ ಒಂದು ಗಂಟೆಯನ್ನೂ ಕೊಡಲಾರೆ` ಎಂದು ಗುಡುಗುತ್ತಿದ್ದ ಅಣ್ಣಾ ಹಜಾರೆ ಅವರು ಈಗ ಒಂದೂವರೆ ವರ್ಷಗಳ ದೀರ್ಘ ಗಡುವನ್ನು ನೀಡಿದ್ದಾರೆ.

ಜೆ.ಪಿ. ಮತ್ತು ವಿ.ಪಿ. ನೇತೃತ್ವದ ಚಳವಳಿಗಳ ಹರಹು ಮತ್ತು ತೀವ್ರತೆ ಗುರಿ ಮುಟ್ಟುವವರೆಗೆ ಹೆಚ್ಚಾಗುತ್ತಾ ಹೋಗಿತ್ತೇ ಹೊರತು ಕಡಿಮೆಯಾಗಿರಲಿಲ್ಲ. ಆದರೆ, ಅಣ್ಣಾ ಚಳವಳಿ ನಡುಹಾದಿಯಲ್ಲಿಯೇ ಸೊರಗಿಹೋಗುತ್ತಿದೆ. ಒಂದು ಚಳವಳಿಯ ಸೋಲು-ಗೆಲುವು ಅದರ ಉದ್ದೇಶ, ಸಂಘಟನೆಯ ಬಲ ಮತ್ತು ಹೋರಾಟದ ದಾರಿಯನ್ನು ಅವಲಂಬಿಸಿರುತ್ತದೆ.

ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಅಣ್ಣಾ ಮತ್ತು ಅವರ ತಂಡದ ಸದಸ್ಯರು ಎಷ್ಟೇ ಭಾಷಣ ಮಾಡಿದರೂ ಉದ್ದೇಶವನ್ನು ಮಾತ್ರ ಲೋಕಪಾಲರ ನೇಮಕಕ್ಕೆ ಸೀಮಿತಗೊಳಿಸುತ್ತಾ ಬಂದಿದ್ದಾರೆ.

ಬಹುಮುಖ್ಯವಾದ ಚುನಾವಣಾ ಸುಧಾರಣೆ ಬಗ್ಗೆಯೂ ಅವರು ಹೆಚ್ಚು ಮಾತನಾಡುತ್ತಿಲ್ಲ. ಲೋಕಪಾಲರ ನೇಮಕವಾದ ಕೂಡಲೇ ಸಾರ್ವಜನಿಕ ಜೀವನದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಯಾಗಿ ಬಿಡುತ್ತದೆ ಎಂಬ ಭ್ರಮೆ ಅವರಿಗೂ ಇರಲಾರದು. ಆದರೆ ಅವರ ಮಾತುಗಳು ಮಾತ್ರ ಆ ಭ್ರಮೆಯನ್ನು ಹುಟ್ಟಿಸುವ ರೀತಿಯಲ್ಲಿಯೇ ಇವೆ. ಇದು ಬಹಳ ಸರಳೀಕೃತ ಅಭಿಪ್ರಾಯ.

ತಾವು ತಿಳಿದುಕೊಂಡಿರುವ ಭ್ರಷ್ಟಾಚಾರದ ಅರ್ಥ ಏನು ಎಂಬುದನ್ನು ಅಣ್ಣಾ ತಂಡ ಈ ವರೆಗೆ ಬಿಡಿಸಿ ಹೇಳಿಲ್ಲ. ಭ್ರಷ್ಟಾಚಾರ ಎಂದರೆ ಕೇವಲ ಸಾರ್ವಜನಿಕ ಹಣದ ದುರುಪಯೋಗ ಇಲ್ಲವೇ ಹಣದ ಸೋರಿಕೆ ಮಾತ್ರವೇ? ತಾಲ್ಲೂಕು ಕಚೇರಿಯ ಗುಮಾಸ್ತ ಪಡೆಯುವ ಲಂಚ ಮತ್ತು  ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದಲ್ಲಾಳಿಗಳಿಂದ ಪಡೆಯುವ ಕಮಿಷನ್ ಎರಡನ್ನೂ ಒಂದೇ ಗುಂಪಿನಲ್ಲಿ ಸೇರಿಸಬಹುದೇ?

ಅಧಿಕಾರದ ದುರುಪಯೋಗ, ಸ್ವಜನ ಪಕ್ಷಪಾತ ಮತ್ತು ವಶೀಲಿ ಕೂಡಾ ಭ್ರಷ್ಟಾಚಾರದ ವ್ಯಾಪ್ತಿಗೆ ಬರುತ್ತವೆಯೇ? ಅಧಿಕಾರದ ದುರುಪಯೋಗವೂ ಭ್ರಷ್ಟಾಚಾರದ ವ್ಯಾಖ್ಯೆಯಲ್ಲಿ ಸೇರಿಕೊಳ್ಳುವುದಿದ್ದರೆ ಯಾವ ಅಧಿಕಾರ? ರಾಜಕಾರಣದ ಮೂಲಕ ಗಳಿಸಿದ್ದೇ ಇಲ್ಲವೇ ಶ್ರೇಣಿಕೃತ ಸಮಾಜ ಮತ್ತು ಆರ್ಥಿಕ ಅಸಮಾನತೆಯ ವ್ಯವಸ್ಥೆಯ ನೆರವಿನಿಂದ ಪಡೆದುಕೊಂಡದ್ದೇ?

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ವ್ಯಾಖ್ಯಾನಿಸುವುದು ಸರಿಯೇ? ಅದನ್ನು ನೈತಿಕ ದೃಷ್ಟಿಯಿಂದಲೂ ನೋಡುವುದು ಬೇಡವೇ?- ಈ ಪ್ರಶ್ನೆಗಳಿಗೆ ಅಣ್ಣಾ ತಂಡದ ಸದಸ್ಯರಲ್ಲಿ ಉತ್ತರ ಇಲ್ಲ, ಹುಡುಕಲು ಹೋದರೆ ಸಿಗುವ ಉತ್ತರ ಚಳವಳಿಗೆ ಇನ್ನಷ್ಟು ಮುಜುಗರ ಉಂಟುಮಾಡಬಹುದು.

ಇದಕ್ಕಾಗಿ `ಮೊದಲು ಲೋಕಪಾಲರು ಬರಲಿ` ಎಂಬ ಮಂತ್ರವನ್ನಷ್ಟೇ ಅವರು ಪಠಿಸುತ್ತಿದ್ದಾರೆ. ಬಹುಮುಖಗಳ ರಕ್ಕಸನಂತೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಕೇವಲ ಲೋಕಪಾಲರ ನೇಮಕದಿಂದ ನಾಶಮಾಡಬಹುದೆಂದು ಅಣ್ಣಾ ತಂಡ ಈಗಲೂ ತಿಳಿದುಕೊಂಡಿರುವುದೇ ಅವರ ಕಾಲಿನಡಿಯ ನೆಲ ಕುಸಿಯುತ್ತಿರುವುದಕ್ಕೆ ಕಾರಣ.

ಇನ್ನು ಸಂಘಟನೆ. ಚಳವಳಿಗೆ ಅಗತ್ಯವಾದ ಸಂಘಟನೆಯನ್ನು ಕಟ್ಟುವುದರಲ್ಲಿಯೂ ಅಣ್ಣಾ ತಂಡ ಸೋತಿದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ಜತೆ ಸೇರಿಕೊಂಡಿರುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಅವರಿಂದಲೇ ಪ್ರಾರಂಭವಾದುದಲ್ಲ. ಅದು ಭ್ರಷ್ಟಾಚಾರ ಇಲ್ಲವೇ ಸರ್ವಾಧಿಕಾರದ ವಿರುದ್ಧದ ಹೋರಾಟ ಆಗಿಯೂ ಪ್ರಾರಂಭವಾಗಿರಲಿಲ್ಲ.

ಅಹ್ಮದಾಬಾದ್‌ನ ಎಲ್.ಡಿ.ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ದ 1973ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ ಸಣ್ಣಮಟ್ಟದ ಪ್ರತಿಭಟನೆ ಬೆಳೆಯುತ್ತಾ ಹೋಗಿ ನಂತರದ ದಿನಗಳಲ್ಲಿ ಸ್ವತಂತ್ರಭಾರತದ ಅತ್ಯಂತ ಬಲಿಷ್ಠ ರಾಜಕೀಯ ನಾಯಕಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು.

ಅಣ್ಣಾ ತಂಡದ ರೀತಿಯಲ್ಲಿ ಅಹ್ಮದಾಬಾದ್‌ನ ವಿದ್ಯಾರ್ಥಿಗಳಿಗೂ ತಮ್ಮ ಹೋರಾಟಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಎಳೆಯರಾದರೂ ಪರಿಸ್ಥಿತಿಯನ್ನು ಬಹುಬೇಗ ಅರ್ಥಮಾಡಿಕೊಂಡ ವಿದ್ಯಾರ್ಥಿ ನಾಯಕರು ಒಂದೇ ತಿಂಗಳ ಅವಧಿಯಲ್ಲಿ ತಮ್ಮ ಹೋರಾಟಕ್ಕೆ ಸಾರ್ವಜನಿಕವಾದ ರೂಪ ಕೊಟ್ಟರು.

1973ರ ಜನವರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಹ್ಮದಾಬಾದ್ ಬಂದ್‌ಗೆ ಕರೆಕೊಟ್ಟಾಗ ಅವರ ಮುಖ್ಯ ಘೋಷಣೆ ಬೆಲೆ ಏರಿಕೆ ವಿರುದ್ಧವಾಗಿತ್ತು, ಕ್ಯಾಂಟೀನ್ ಬಿಲ್ ಹೆಚ್ಚಳದ ವಿರುದ್ಧದ ಪ್ರತಿಭಟನೆ ನೇಪಥ್ಯಕ್ಕೆ ಸರಿದುಹೋಗಿತ್ತು.

ಎಪ್ಪತ್ತರ ದಶಕದ ಸಮಾಜ ಭ್ರಷ್ಟಾಚಾರ, ಬೆಲೆ ಏರಿಕೆ, ಆಹಾರ ಸಾಮಗ್ರಿಗಳ ಕೊರತೆ, ಸರ್ಕಾರಿ ನೌಕರರ ಸಂಬಳದ ಮೇಲೆ ಮಿತಿ ಹೇರಿಕೆ ಮೊದಲಾದ ಕಾರಣಗದಾಗಿ ಒಳಗಿಂದೊಳಗೆ ಕುದಿಯುತ್ತಿತ್ತು. ಅದು ಸಿಡಿಯಲು ಬೇಕಾದ ದಾರಿಯನ್ನಷ್ಟೇ ನವನಿರ್ಮಾಣ ಚಳವಳಿ ಮಾಡಿಕೊಟ್ಟಿತ್ತು.

ಅಣ್ಣಾ ಹಜಾರೆ ಉಪವಾಸ ಪ್ರಾರಂಭಿಸಿದಾಗ ದೇಶದಲ್ಲಿ ಎಪ್ಪತ್ತರ ದಶಕದ ಪರಿಸ್ಥಿತಿಯೇ ಇತ್ತು, ಈಗಲೂ ಇದೆ. ಒಂದಾದ ಮೇಲೆ ಒಂದರಂತೆ ಭ್ರಷ್ಟಾಚಾರದ ಹಗರಣಗಳು ಬಯಲಾಗತೊಡಗಿವೆ, ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ, ಉದ್ಯೋಗದ ಅವಕಾಶಗಳು ಕಡಿಮೆಯಾಗತೊಡಗಿವೆ.

ಜನ ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳ ಗಂಗೋತ್ರಿ ಭ್ರಷ್ಟಾಚಾರದಲ್ಲಿಯೇ ಇದೆ. ಆದ್ದರಿಂದಲೇ ಅಣ್ಣಾ ಹಜಾರೆ ಚಳವಳಿಗೆ ಜನ ಪ್ರಾಮಾಣಿಕವಾಗಿಯೇ ಸ್ಪಂದಿಸಿದ್ದರು. ಆದರೆ, ಅದನ್ನು ಬಳಸಿಕೊಳ್ಳಲು ಚಳವಳಿಯ ನಾಯಕರು ಸೋತುಹೋದರು.

ನವನಿರ್ಮಾಣ ಚಳವಳಿಯ ನೇತೃತ್ವ ವಹಿಸಲು ಜೆಪಿ ಅಹ್ಮದಾಬಾದ್‌ಗೆ ಹೋಗಿದ್ದಾಗ ಆಗಲೇ ವಿದ್ಯಾರ್ಥಿ ಚಳವಳಿಗಾರರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಚಿಮಣ್ ಬಾಯ್ ಪಟೇಲ್ ಸರ್ಕಾರವನ್ನು ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮಾಡಿಬಿಟ್ಟಿದ್ದರು.

ಆ ಚಳವಳಿಗಾರರಿಗೆ ಜೆಪಿಯ ಅಗತ್ಯಕ್ಕಿಂತ ಹೆಚ್ಚಾಗಿ ಜೆಪಿಗೆ ಆ ಚಳವಳಿಯ ಅಗತ್ಯ ಇತ್ತು.  `ನಾನು ಎರಡು ವರ್ಷಗಳ ಕಾಲ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ರಾಜಕೀಯ ಸಹಮತ ಮೂಡಿಸಲು ಪ್ರಯತ್ನಪಟ್ಟು ಸೋತುಹೋಗಿದ್ದೆ.

ಆಗ ನನ್ನ ಕಣ್ಣಿಗೆ ಬಿದ್ದ ಗುಜರಾತ್ ವಿದ್ಯಾರ್ಥಿಗಳು ನನಗೆ ದಾರಿ ತೋರಿಸಿದ್ದರು` ಎಂದು ಜೆಪಿಯವರೇ ವಿನಯಪೂರ್ವಕವಾಗಿ ಬರೆದುಕೊಂಡಿದ್ದಾರೆ. `ಅಣ್ಣಾ ಹಜಾರೆ ಅವರು ಸಂಸತ್‌ಗಿಂತಲೂ ಮೇಲು` ಎಂಬ ಅರವಿಂದ ಕೇಜ್ರಿವಾಲ್ ಅವರ ಮೂರ್ಖ ಹೇಳಿಕೆ ನೆನಪಾಗುತ್ತಿದೆಯೇ?

 ಒಂದು ಚಳವಳಿ ಯಶಸ್ವಿಯಾಗಬೇಕಾದರೆ ಅದರ ನೇತೃತ್ವ ವಹಿಸುವ ಸಂಘಟನೆಯ ಮೇಲೆ ಸಾಮಾನ್ಯ ಜನರಿಗೂ ನಂಬಿಕೆ ಇರಬೇಕಾಗುತ್ತದೆ. ಅಣ್ಣಾ ತಂಡದ ನಡೆ ಮೊದಲ ದಿನದಿಂದಲೇ ನಿಗೂಢವಾಗಿತ್ತು. ಪ್ರಾರಂಭದಲ್ಲಿಯೇ ಬೇರೆಬೇರೆ ಕಾರಣಗಳಿಗಾಗಿ ಅಲ್ಲಿಂದ ಹೊರನಡೆದವರು ಯೋಗಗುರು ರಾಮ್‌ದೇವ್; ನಂತರ ಸ್ವಾಮಿ ಅಗ್ನಿವೇಶ್, ರಾಜೀಂದರ್‌ಸಿಂಗ್, ವೇಣುಗೋಪಾಲ್ ಮೊದಲಾದವರು ಬಿಟ್ಟುಹೋದರು.

ಆಗಲೇ ಅಣ್ಣಾ ತಂಡದ ಉಳಿದ ಕೆಲವು ಸದಸ್ಯರ ಮೇಲೆ ಆರೋಪಗಳು ಕೇಳಿ ಬರತೊಡಗಿದ್ದವು. ಅದು ಮುಖ್ಯವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದವು. ಅಷ್ಟು ಹೊತ್ತಿಗೆ ಇಡೀ ದೇಶದಲ್ಲಿ ಚಳವಳಿ ಪಸರಿಸಿತ್ತು.

`ಜನ ಸ್ವಂತ ಇಚ್ಛೆಯಿಂದ ಬರುತ್ತಿದ್ದಾರೆ` ಎಂದು ಹೇಳಿಕೊಂಡರೂ ಜನ ಸೇರಿಸುವುದು, ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಜೋಡಿಸುವುದು, ಸಂಪನ್ಮೂಲ ಕ್ರೋಡೀಕರಿಸುವುದು ಸುಲಭದ ಕೆಲಸ ಅಲ್ಲ.

ನೋಡುನೋಡುತ್ತಿದ್ದಂತೆಯೇ ಭ್ರಷ್ಟ ರಾಜಕಾರಣಿಗಳು, ದುಷ್ಟ ಆಲೋಚನೆಯ ಉದ್ಯಮಿಗಳು, ಆಷಾಢಭೂತಿ ಧರ್ಮಗುರುಗಳು, ಶಿಕ್ಷಣದ ವ್ಯಾಪಾರಿಗಳು, ರೋಗಿಗಳನ್ನು ಸುಲಿಯುವ ವೈದ್ಯರು, ಕಕ್ಷಿದಾರರನ್ನು ಕಾಡಿಸುವ ವಕೀಲರು ಹೀಗೆ ಎಲ್ಲರೂ ಸೇರಿಕೊಳ್ಳತೊಡಗಿದ್ದರು.

ಯಾರು ಪ್ರಾಮಾಣಿಕರು, ಯಾರು ಭ್ರಷ್ಟರು? ಎನ್ನುವುದನ್ನು ಗುರುತಿಸಲಾಗದ ಅಯೋಮಯ ಸ್ಥಿತಿ. ಸೇರಿದವರಲ್ಲಿ ನಿಜವಾದ ಕಾಳಜಿ ಹೊಂದಿದ್ದವರು ಎಷ್ಟು ಮಂದಿ ಇದ್ದರೆನ್ನುವುದನ್ನು ಹುಡುಕುವುದೇ ಕಷ್ಟವಾಗಿತ್ತು. ಜೆಪಿ ಪ್ರವೇಶಕ್ಕೆ ಮುನ್ನವೇ ಗುಜರಾತ್‌ನಲ್ಲಿ ತಾರಕಕ್ಕೇರಿದ್ದ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 80 ಮಂದಿ ಪೊಲೀಸ್ ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದರು.

ಅಂತಹ ಒಂದು ಗೋಲಿಬಾರ್ ನಡೆದಿದ್ದರೆ ಸತ್ಯಾಗ್ರಹದ ಶಿಬಿರದಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಅಣ್ಣಾ ಚಳವಳಿಗೆ ಏಟು ನೀಡಿದ್ದೇ ಅವರ ಸಂಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಹುಟ್ಟಿಕೊಳ್ಳತೊಡಗಿದ್ದ ಇಂತಹ ಗುಮಾನಿಗಳು.

ಇದನ್ನು ಇನ್ನಷ್ಟು ಬಲಪಡಿಸಿದ್ದು ಹರಿಯಾಣದ ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಣ್ಣಾ ತಂಡ ನಡೆಸಿದ್ದ ಪ್ರಚಾರ. ಅದರ ನಂತರ ನಡೆದ ಉತ್ತರಪ್ರದೇಶದ ಚುನಾವಣೆಯಲ್ಲಿ ಅಣ್ಣಾ ತಂಡದ ಸದಸ್ಯರನ್ನು ಯಾರೂ ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ.

ಕೊನೆಯದಾಗಿ ಹೋರಾಟದ ದಾರಿ. ಉದ್ದೇಶ ಉದಾತ್ತವಾಗಿದ್ದರೂ ಸಂಘಟನೆ  ಬಲವಾಗಿದ್ದರೂ ಹೋರಾಟದ ದಾರಿಯಲ್ಲಿ ಎಡವಿದರೆ ಚಳವಳಿ ಗುರಿಮುಟ್ಟುವುದು ಕಷ್ಟ. ಉಪವಾಸ ಬಹಳ ಪರಿಣಾಮಕಾರಿ ಹೋರಾಟದ ಅಸ್ತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಪವಾಸದ ಮೊದಲ ಉದ್ದೇಶ ಸ್ವಂತ ಆತ್ಮಾವಲೋಕನ, ಎರಡನೆಯದು, ಎದುರಾಳಿಯ ಆತ್ಮಪರಿವರ್ತನೆ.

ಈ ಉದ್ದೇಶಗಳಿಲ್ಲದ ಉಪವಾಸ `ಬ್ಲಾಕ್‌ಮೇಲ್` ಆಗುತ್ತದೆ. ಅದಕ್ಕಾಗಿಯೇ ಗಾಂಧೀಜಿಯವರು ಹದಿನಾರು ಬಾರಿ ಉಪವಾಸ ಮಾಡಿದ್ದರೂ ಆ ಅಸ್ತ್ರವನ್ನು ಅವರೆಂದೂ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳಲಿಲ್ಲ. ಅವರು ಬಳಸಿದ್ದೆಲ್ಲವೂ ಆತ್ಮಶುದ್ಧಿ ಮತ್ತು ಆತ್ಮಪರಿವರ್ತನೆಗಾಗಿ.

ಉಪವಾಸದ ಮೂಲಕ ಉದ್ದೇಶ ಸಾಧಿಸುವುದಕ್ಕಿಂತ ಹೆಚ್ಚಾಗಿ ಹುತಾತ್ಮನಾಗುವ ಆಸೆಯೇ ಹೆಚ್ಚಿದೆಯೋ ಏನೋ ಎಂದು ಅನಿಸುವ ರೀತಿಯಲ್ಲಿ ಅಣ್ಣಾ ಹಜಾರೆ ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು ಸದಾ ಝಳಪಿಸುತ್ತಿರುತ್ತಾರೆ.

ಆದರೆ ಆತ್ಮಾವಲೋಕನಕ್ಕೆ ಅವರು ತಯಾರಿಲ್ಲ, ಆತ್ಮಪರಿವರ್ತನೆಗೆ ತಮ್ಮನ್ನು ಒಡ್ಡಿಕೊಳ್ಳುವಷ್ಟು ಅಧಿಕಾರರೂಢರು ಸೂಕ್ಷ್ಮಮತಿಗಳಾಗಿಲ್ಲ. ಈ ಸ್ಥಿತಿಯಲ್ಲಿ ಉಪವಾಸ ಕೇವಲ `ಬ್ಲಾಕ್‌ಮೇಲ್` ಆಗುವ ಅಪಾಯ ಇದೆ.
ಕೊನೆಗೂ ಇದರ ಅರಿವು ಅಣ್ಣಾ ಹಜಾರೆ ಅವರಿಗೂ ಆಗುತ್ತಿದೆಯೇನೋ? ಇತ್ತೀಚೆಗೆ ಅವರು ಆತ್ಮಾವಲೋಕನದ ಧಾಟಿಯಲ್ಲಿ `ದೇಶ ಸುತ್ತಿ ಜನಜಾಗೃತಿಗೊಳಿಸುವ` ಮಾತುಗಳನ್ನಾಡುತ್ತಿದ್ದಾರೆ. ಜಂತರ್ ಮಂತರ್‌ಗೆ ಹೋಗುವ ಮೊದಲು ಈ ಕೆಲಸ ಮಾಡಿದ್ದರೆ ಅವರ ಕೈಗೆ ತಮ್ಮ ಕನಸುಗಳನ್ನೆಲ್ಲ ಕೊಟ್ಟವರು ಭಗ್ನಹೃದಯಿಗಳಾಗುತ್ತಿರಲಿಲ್ಲ.

No comments:

Post a Comment