Monday, August 15, 2011

ಸದಾ ಆನಂದವಾಗಿರಲು ದಾರಿಗಳು ಬಹಳ ಇಲ್ಲ

ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರದ್ದು ಒಂದು ರೀತಿಯಲ್ಲಿ ಸುಲಭದ ಕೆಲಸ, ಇನ್ನೊಂದು ರೀತಿಯಲ್ಲಿ ಕಷ್ಟದ್ದು. ಒಬ್ಬ ಕಳಂಕರಹಿತ ಮತ್ತು ದಕ್ಷ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದಾಗ ಹಿಂದಿನವರನ್ನು ಮೀರಿಸಿ ಜನಪ್ರಿಯತೆ ಗಳಿಸುವುದು ದೊಡ್ಡ ಸವಾಲು.
ಅದಕ್ಕಾಗಿ ಅವರೆಡೂ ಮೌಲ್ಯಗಳ ವಿಷಯದಲ್ಲಿ ಹೊಸಬರು ಒಂದು ತೂಕ ಹೆಚ್ಚಿರಬೇಕಾಗುತ್ತದೆ. ಇಲ್ಲದಿದ್ದರೆ ಸೋಲು ನಿಶ್ಚಿತ. ಅಧಿಕಾರಾರೂಢ ಭ್ರಷ್ಟ ಜನತಾ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್ ಅವರ ಆಡಳಿತದ ಕಿರು ಅವಧಿ ಆರೋಪಮುಕ್ತ ನಡವಳಿಕೆ ಮತ್ತು ದಕ್ಷ ಆಡಳಿತದಿಂದ ಜನಮನ ಸೆಳೆದಿತ್ತು.
ಆ ಸಾಧನೆಯ ಬಲ ಮಾತ್ರವಲ್ಲ, ಜನಪ್ರಿಯತೆಯ ತುತ್ತತುದಿಯಲ್ಲಿರುವಾಗಲೇ ಕಿತ್ತು ಹಾಕಿದ್ದರಿಂದ ಜನರ ಅನುಕಂಪ ಕೂಡಾ ಪಾಟೀಲರ ಕಡೆ ಇತ್ತು. ಇದನ್ನು ಮೀರಿ ಸರ್ಕಾರದ ವರ್ಚಸ್ಸನ್ನು ಬೆಳೆಸಬೇಕಾದ ಸವಾಲು ಹೊತ್ತು ಬಂದ ಎಸ್.ಬಂಗಾರಪ್ಪ ಪ್ರಾರಂಭದಿಂದಲೇ ಎಡವಿದರು.
ಭಿನ್ನಮತ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಆ ಸವಾಲುಗಳು ಸದಾನಂದ ಗೌಡರ ಮುಂದೆ ಇಲ್ಲ.
ಇದಕ್ಕೆ ವಿರುದ್ಧವಾಗಿ, ಕಳಂಕಿತ ಮುಖ್ಯಮಂತ್ರಿಯ ಉತ್ತರಾಧಿಕಾರಿಯಾಗಿ ಬಂದವರಿಗೆ ಕೆಲವು ಅನುಕೂಲತೆಗಳಿವೆ.
ಅವರು ಘನವಾದ ಸಾಧನೆಗಳನ್ನು ಮಾಡಬೇಕಾಗಿಲ್ಲ, ಭ್ರಷ್ಟರಾಗದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ನಗುನಗುತ್ತಾ ಇದ್ದರೂ ಜನಪ್ರಿಯನಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ಸದಾನಂದ ಗೌಡರ ಕೆಲಸ ಸುಲಭ.
ಮುಖ್ಯಮಂತ್ರಿಯಾಗಿ ಆರ್.ಗುಂಡೂರಾವ್ ನಡೆಸಿದ ದುರಾಡಳಿತದಿಂದ ಬೇಸತ್ತು ಹೋಗಿದ್ದ ಜನತೆಗೆ ಚುನಾವಣಾ ಪ್ರಚಾರದ ದಿನಗಳಲ್ಲಿ ಅಜ್ಞಾತರಾಗಿದ್ದು ದಿಢೀರನೇ ರಂಗಪ್ರವೇಶ ಮಾಡಿದ್ದ ರಾಮಕೃಷ್ಣ ಹೆಗಡೆ ಪರಮಾತ್ಮನ ಇನ್ನೊಂದು ಅವತಾರದಂತೆ ಕಂಡಿದ್ದರು.
ಮೊದಲ ಎರಡು ವರ್ಷಗಳ ಅವಧಿಯಲ್ಲಿ ಹೆಗಡೆ ಎಷ್ಟೊಂದು ಜನಪ್ರಿಯರಾಗಿದ್ದರೆಂದರೆ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ರಾಜೀನಾಮೆ ನೀಡಿ ಮರಳಿ ಚುನಾವಣೆ ಎದುರಿಸಿದಾಗ ರಾಜ್ಯದ ಜನ `ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೋ ಎಂಬಂತೆ~ ಭಾರಿ ಬಹುಮತದಿಂದ ಅವರನ್ನು ಮರಳಿ ಅಧಿಕಾರಕ್ಕೆ ತಂದರು (ಎರಡನೇ ಅವಧಿಯ ಕತೆ ಬೇರೆ).
ಆದರೆ ಈ ಅನುಕೂಲತೆ ಇರುವುದು ವಿರೋಧಿ ರಾಜಕೀಯ ಪಕ್ಷಕ್ಕೆ ಸೇರಿದ ಭ್ರಷ್ಟ ಮುಖ್ಯಮಂತ್ರಿಯ ನಿರ್ಗಮನದ ನಂತರ ಅಧಿಕಾರಕ್ಕೆ ಬಂದಾಗ ಮಾತ್ರ. ಜನರಿನ್ನೂ ಹಳೆಯ ಆಡಳಿತದ ದುಃಸ್ವಪ್ನದಿಂದ ಹೊರಬಾರದಿರುವುದರಿಂದ ಹೊಸ ಮುಖ್ಯಮಂತ್ರಿ ತೋರಿಸುವ ಕನಸುಗಳಲ್ಲಿ ಅವರು ಸುಲಭದಲ್ಲಿ ತೇಲಿ ಹೋಗುತ್ತಾರೆ.
ಜನರನ್ನು ಕಾಡುತ್ತಿರುವ ಎಲ್ಲ ಅನಿಷ್ಟಗಳಿಗೂ (ಖಾಲಿ ಖಜಾನೆ, ಅನಭಿವೃದ್ದಿ, ಹಳಿ ತಪ್ಪಿದ ಆಡಳಿತ ಇತ್ಯಾದಿ) ಹಿಂದಿನ ಸರ್ಕಾರವೇ ಕಾರಣ ಎಂದು ಹೊಸಬರು ಉಪಾಯವಾಗಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದು.

ಪ್ರಾರಂಭದ ದಿನಗಳಲ್ಲಿ ಜನ ಕೂಡಾ ಹೊಸ ಸರ್ಕಾರಕ್ಕೊಂದು `ಮಧುಚಂದ್ರ~ದ ಅವಧಿಯನ್ನು ಉದಾರವಾಗಿ ನೀಡುತ್ತಾರೆ. ವಿರೋಧಪಕ್ಷಗಳ ಆರೋಪಗಳು ಎದುರಾದರೂ ಹೊಸ ಮುಖ್ಯಮಂತ್ರಿಗಳು ಬಹಳ ಸುಲಭದಲ್ಲಿ `ನಿಮ್ಮ ಕಾಲದಲ್ಲಿ ನಡೆದಿಲ್ವೆ? ನೀವೇನು ಸಾಚಾಗಳೇ?~ ಎಂದು ಉಡಾಫೆಯಿಂದ ಪ್ರಶ್ನಿಸುತ್ತಾ ಒಂದಷ್ಟು ದಿನ ಕಾಲ ತಳ್ಳಬಹುದು.

ಈ ಅನುಕೂಲತೆ ತಮ್ಮದೇ ಪಕ್ಷದ ಮುಖ್ಯಮಂತ್ರಿ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಆ ಸ್ಥಾನಕ್ಕೆ ಬರುವವರಿಗೆ ಇರುವುದಿಲ್ಲ.
ಅವರು ಹಿಂದಿನ ಮುಖ್ಯಮಂತ್ರಿಗಳನ್ನು ಬಹಿರಂಗವಾಗಿ ದೂರುವಂತಿಲ್ಲ, ದೂರಿದರೆ ಆಕಾಶಕ್ಕೆ ಮುಖಮಾಡಿ ಉಗುಳಿದಂತೆ. ಅದನ್ನು ಮರೆತುಬಿಡುವ ಹಾಗೂ ಇಲ್ಲ, ಮರೆತರೂ ಹಿಂದಿನವರ ಪಾಪದ ಫಲ ಹಿಂಬಾಲಿಸಿಕೊಂಡು ಬರುತ್ತದೆ.
ಅದನ್ನು ಮೀರಿ ಎಚ್ಚರಿಕೆಯಿಂದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಸದಾನಂದ ಗೌಡರದ್ದು ಕಷ್ಟದ ಕೆಲಸ.
ಅವರ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿರುವುದು ಬಿ.ಎಸ್.ಯಡಿಯೂರಪ್ಪ ಎಂಬ ಅಸುರಕ್ಷತೆಯಿಂದ ಬಳಲುತ್ತಿರುವ ಹಟಮಾರಿ ನಾಯಕ ಮತ್ತು ಪಕ್ಷದ ದುರ್ಬಲ ಹೈಕಮಾಂಡ್.
ಯಡಿಯೂರಪ್ಪನವರ ಬಹಳ ದೊಡ್ಡ ಸಮಸ್ಯೆಯೆಂದರೆ ತಾನು ಯಾಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎನ್ನುವ ಸರಳವಾದ ವಿಚಾರ ಈಗಲೂ ಅರ್ಥವಾಗದೆ ಇರುವುದು.
ತನ್ನ ಪದಚ್ಯುತಿಗೆ ಕಾರಣ ತನ್ನ ತಪ್ಪುಗಳಲ್ಲ, ವಿರೋಧಿಗಳ ಪಿತೂರಿ ಎಂದು ಅವರು ಬಲವಾಗಿ ನಂಬಿರುವುದು ಮಾತ್ರ ಅಲ್ಲ, ರಾಜ್ಯದ ಜನರೂ ಹಾಗೆಯೇ ನಂಬಿದ್ದಾರೆ ಎಂದು  ತಿಳಿದುಕೊಂಡಿರುವುದು.
ಇದರಿಂದಾಗಿ ತಾನು ಅಧಿಕಾರ ಕಳೆದುಕೊಂಡರೂ ಜನಪ್ರಿಯತೆ ಕಳೆದುಕೊಂಡಿಲ್ಲ ಎನ್ನುವ ವಿಶ್ವಾಸ ಅವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿದೆ. ಇದು ಅವರ ಮುಗ್ಧತೆಯೋ, ಅಜ್ಞಾನವೋ ಗೊತ್ತಿಲ್ಲ.
ಆದರೆ ಮಾಜಿ ಮುಖ್ಯಮಂತ್ರಿಗಳ ಈ ಮನೋಭಾವ ಹಾಲಿ ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು. ಸದಾನಂದ ಗೌಡರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದಿರಬಹುದು, ಆದರೆ ಇಂದು ಅವರು ಆ ಸ್ಥಾನದಲ್ಲಿ ಕೂತಿದ್ದರೆ ಅದು ಅರ್ಹತೆಯ ಬಲದಿಂದ ಅಲ್ಲ, ಯಡಿಯೂರಪ್ಪನವರ ಬೆಂಬಲದ ಬಲದಿಂದ.
ಇದು ಯಡಿಯೂರಪ್ಪನವರಿಗಿಂತಲೂ ಚೆನ್ನಾಗಿ ಗೌಡರಿಗೆ ಗೊತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ತನ್ನ ಕೈತಪ್ಪಿಹೋಗುತ್ತಿದ್ದಾರೆ ಎಂದು ಒಂದು ಕ್ಷಣ  ಅನಿಸಿದರೂ ಯಡಿಯೂರಪ್ಪನವರು ಸುಮ್ಮನಿರುವವರಲ್ಲ.
ತನ್ನ ರಾಜಕೀಯ ಜೀವನದ ಬಹುಭಾಗವನ್ನು ವಿರೋಧ ಪಕ್ಷದ ನಾಯಕರಾಗಿಯೇ ಕಳೆದಿರುವ ಯಡಿಯೂರಪ್ಪನವರು ಕಟ್ಟುವುದಕ್ಕಿಂತಲೂ ಕೆಡವುದನ್ನು ಅನಾಯಾಸವಾಗಿ ಮಾಡಬಲ್ಲರು. ಇಂತಹವರು ಸರ್ಕಾರದ ಒಳಗಿರುವುದಕ್ಕಿಂತ ಹೊರಗಿದ್ದರೆ ಹೆಚ್ಚು ಅಪಾಯಕಾರಿ, ಯಾಕೆಂದರೆ ಹೊರಗಿದ್ದು ಅವರು ಕಳೆದುಕೊಳ್ಳುವುದು ಏನೂ ಇಲ್ಲ.
ಇಂತಹವರನ್ನು ಪಕ್ಷದ ಬಲಿಷ್ಠ ಹೈಕಮಾಂಡ್ ಮಾತ್ರ ನಿಯಂತ್ರಿಸಲು ಸಾಧ್ಯ. ವೀರೇಂದ್ರ ಪಾಟೀಲ್ ಅವರನ್ನು ಕಿತ್ತೊಗೆದಾಗ ಬಂಗಾರಪ್ಪನವರ ಬೆಂಬಲಕ್ಕೆ ರಾಜೀವ್‌ಗಾಂಧಿ ನೇತೃತ್ವದ ಶಕ್ತಿಶಾಲಿ ಕಾಂಗ್ರೆಸ್ ಹೈಕಮಾಂಡ್ ಇತ್ತು.
ಆದ್ದರಿಂದ ತಕ್ಷಣದಲ್ಲಿ ಅನಾಹುತಗಳೇನೂ ಆಗಿರಲಿಲ್ಲ. ಮನಮೋಹನ್‌ಸಿಂಗ್ ಅವರು ಕಳೆದ ಏಳು ವರ್ಷಗಳಿಂದ ಪ್ರಧಾನಿಯಾಗಿದ್ದರೆ ಅದಕ್ಕೆ ಸೋನಿಯಾಗಾಂಧಿ ನೇತೃತ್ವದ ಹೈಕಮಾಂಡ್ ಬೆಂಬಲ ಕಾರಣ.

ಅದು ಇಲ್ಲದೆ ಇದ್ದಿದ್ದರೆ ಪ್ರಣವ್ ಮುಖರ್ಜಿ, ಚಿದಂಬರಂ ಮೊದಲಾದ ಘಟಾನುಘಟಿಗಳು ಉಳಿದವರ ಜತೆ ಸೇರಿ ಬಡಪಾಯಿ ಮನಮೋಹನ್‌ಸಿಂಗ್ ಅವರನ್ನು ಎಂದೋ ಕುರ್ಚಿ ಬಿಟ್ಟು ಓಡಿಸುತ್ತಿದ್ದರು.

ರಾಜೀನಾಮೆ ನೀಡಬೇಕಾಗಿ ಬಂದ ಉಮಾಭಾರತಿ ಮರಳಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಬಯಸಿದಾಗ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ನೀಡದೆ ಬಾಬುಲಾಲ್ ಗೌರ್ ಅವರನ್ನೇ ಮುಂದುವರಿಸಿತ್ತು.
ಅದರ ನಂತರ ಶಿವರಾಜ್‌ಸಿಂಗ್ ಚೌಹಾಣ್ ಎಂಬ ಒಂದು ಕಾಲದ ಉಮಾಭಾರತಿಯವರ ಶಿಷ್ಯನನ್ನೇ ಆ ಸ್ಥಾನದಲ್ಲಿ ಕೂರಿಸಿದ್ದು ಮಾತ್ರವಲ್ಲ, ಅವರ ನೇತೃತ್ವದಲ್ಲಿ ಚುನಾವಣೆಯನ್ನೂ ಎದುರಿಸಿತು.
ಉಮಾಭಾರತಿಯವರ ಜನಪ್ರಿಯತೆ ಯಡಿಯೂರಪ್ಪನವರಿಗಿಂತ ಕಡಿಮೆ ಏನಿರಲಿಲ್ಲ. ಆದರೆ ಗುರು ಮತ್ತು ಶಿಷ್ಯನ ನಡುವೆ ನಡೆದ ಚುನಾವಣಾ ಸಮರದಲ್ಲಿ ಶಿಷ್ಯನೇ ಗೆದ್ದುಬಿಟ್ಟರು. ಇದಕ್ಕೆ ಅವರ ಬೆನ್ನಹಿಂದೆ ದೃಢವಾಗಿ ನಿಂತ ಬಿಜೆಪಿ ಹೈಕಮಾಂಡ್ ಕಾರಣ.
ಈ ಪರಿಸ್ಥಿತಿಯಲ್ಲಿ ಆತ್ಮರಕ್ಷಣೆಗಾಗಿ ಸದಾನಂದ ಗೌಡರ ಬಳಿ ಬಹಳ ಆಯ್ಕೆಗಳಿಲ್ಲ, ಇರುವುದೇ ಎರಡು. ಒಂದೋ ಯಡಿಯೂರಪ್ಪನವರಿಗೆ ಸಂಪೂರ್ಣ ಶರಣಾಗತಿ ಇಲ್ಲವೇ ಸ್ವತಂತ್ರವಾಗಿ ಕಾರ‌್ಯನಿರ್ವಹಣೆ. ಇವೆರಡೂ ಅರ್ಧಅರ್ಧ ಮಾಡುವ ಕೆಲಸಗಳಲ್ಲ. ಎರಡು ದೋಣಿಗಳಲ್ಲಿ ಕಾಲಿಡುವವರು ನೀರಲ್ಲಿ ಮುಳುಗುವ ಸಾಧ್ಯತೆಯೇ ಹೆಚ್ಚು.

ಶರಣಾಗತಿ ಎಂದರೆ ಮುಖ್ಯಮಂತ್ರಿಯಾಗಿ ಕೈಯಲ್ಲಿರಬೇಕಾದ ರಾಜಕೀಯ ಅಧಿಕಾರವನ್ನು ಬಿಟ್ಟುಕೊಡುವುದು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನಾಯಕನಾಗದವನು ಆಡಳಿತದ ಮುಖ್ಯಸ್ಥನಾಗಿ ಯಶಸ್ಸು ಕಾಣುವುದು ಕಷ್ಟ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಜೆ.ಜಯಲಲಿತಾ ಮುಖ್ಯಮಂತ್ರಿಯಾಗಿ ನೇಮಕಗೊಂಡದ್ದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದಾಗ ಆರು ತಿಂಗಳ ಅವಧಿಗೆ ಒ. ಪನ್ನೀರಸೆಲ್ವಂ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯದ ಯಾವ ಅಧಿಕಾರವೂ ಅವರಿಗೆ ಇರಲಿಲ್ಲ. ಅವರು ಜಯಲಲಿತಾ ಕೂರುತ್ತಿದ್ದ ಕುರ್ಚಿಯಲ್ಲಿಯೂ ಕೂತಿರಲಿಲ್ಲ.
ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಶಿವರಾಜ್‌ಸಿಂಗ್ ಚೌಹಾಣ್, ಜನಪ್ರಿಯ ನಾಯಕಿ ಉಮಾಭಾರತಿ ಅವರನ್ನು ಎದುರು ಹಾಕಿಕೊಂಡು ಕಳೆದ ಆರುವರ್ಷಗಳಿಂದ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಇತಿಹಾಸದ ಪುಟಗಳಲ್ಲಿ ಪನ್ನೀರಸೆಲ್ವಂ ಮತ್ತು ಶಿವರಾಜ್‌ಸಿಂಗ್ ಚೌಹಾಣ್ ಇಬ್ಬರ ಹೆಸರೂ ಇದೆ. ಇವರಲ್ಲಿ ಯಾರ ಪಕ್ಕದಲ್ಲಿ ತಮ್ಮ ಹೆಸರು ಇರಬೇಕೆಂಬುದನ್ನು ಸದಾನಂದಗೌಡರು ನಿರ್ಧರಿಸಬೇಕಾಗಿದೆ.
 ಇಷ್ಟೆಲ್ಲ ಕಸರತ್ತು ನಡೆಸಿದ ನಂತರವೂ ಸದಾನಂದ ಗೌಡರು ಇನ್ನುಳಿದ ಇಪ್ಪತ್ತೆರಡು ತಿಂಗಳುಗಳನ್ನು ಪೂರ್ಣಗೊಳಿಸಬಹುದೇ? ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಆದರೆ ಇಪ್ಪತ್ತೆರಡು ತಿಂಗಳು ಈ ಸರ್ಕಾರ ಬಾಳಿದರೆ ಅದರ ನಂತರ ಏನಾಗಬಹುದೆಂಬುದನ್ನು ಸುಲಭದಲ್ಲಿ ಊಹಿಸಬಹುದು.
ಸದಾನಂದ ಗೌಡರು ಇಪ್ಪತ್ತೆರಡು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದು ಅತ್ಯುತ್ತಮ ಆಡಳಿತವನ್ನೇ ನೀಡಿದರೆನ್ನಿ.
ಆಗಲೂ ಬಿಜೆಪಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗದು. ಚುನಾವಣೆ ಘೋಷಣೆಯಾದ ಕೂಡಲೇ ಬಿಜೆಪಿಯಲ್ಲಿ ಏನು ನಡೆಯಬಹುದೆಂಬುದನ್ನು ಈಗಲೇ ಹೇಳಿ ಬಿಡಬಹುದು, ಇದಕ್ಕೆ ಜ್ಯೋತಿಷಶಾಸ್ತ್ರವನ್ನು ಓದಬೇಕಾಗಿಲ್ಲ, ಯಡಿಯೂರಪ್ಪನವರನ್ನು ಅರ್ಥಮಾಡಿಕೊಂಡರೆ ಸಾಕು.
ಮೊದಲನೆಯದಾಗಿ ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಯಾವುದೇ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡು ದಿಢೀರನೇ ಒಂದು ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕಬಹುದು. ಅದನ್ನು ಮಾಡದೆ ಇದ್ದರೆ ಚುನಾವಣೆ ಘೋಷಣೆಯಾದ ಕೂಡಲೇ  ಕನಿಷ್ಠ 150 ಮಂದಿ ತನ್ನ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಕೇಳಬಹುದು.

ನಿರಾಕರಿಸಿದರೆ ಎಲ್ಲೆಲ್ಲಿ ತಾವೊಲ್ಲದ ಪಕ್ಷದ ಅಭ್ಯರ್ಥಿಗಳಿರುತ್ತಾರೋ ಅಲ್ಲೆಲ್ಲ ಬಂಡುಕೋರರನ್ನು ಕಣಕ್ಕಿಳಿಸಬಹದು. ಈ ಬಂಡುಕೋರರು ಗೆಲ್ಲದಿದ್ದರೂ ಅಧಿಕೃತ ಅಭ್ಯರ್ಥಿಗೆ ಹೋಗಬೇಕಾಗಿರುವ 10-20 ಸಾವಿರ ಮತಗಳನ್ನು ತಿಂದುಹಾಕುತ್ತಾರೆ.
1994ರ ವಿಧಾನಸಭಾ ಚುನಾವಣೆಯಲ್ಲಿ  ಯಡಿಯೂರಪ್ಪನವರ ಜಿಲ್ಲೆಯವರೇ ಆಗಿರುವ ಎಸ್. ಬಂಗಾರಪ್ಪನವರ ಬಂಡಾಯದಿಂದಾಗಿ ಕಾಂಗ್ರೆಸ್ ಯಾವ ರೀತಿ ಸೋಲು ಅನುಭವಿಸಿತೋ ಅದೇ ಗತಿ ಬಿಜೆಪಿಗೆ ಬರಬಹುದು (ಎಸ್.ಬಂಗಾರಪ್ಪನವರ ಕೆಸಿಪಿ ಗೆದ್ದದ್ದು ಹತ್ತೇ ಸ್ಥಾನಗಳಾದರೂ ಗಳಿಸಿದ್ದ ಮತಪ್ರಮಾಣ ಶೇ 7.31. ಕಾಂಗ್ರೆಸ್  ಶೇ 27.31ರಷ್ಟು ಮತಗಳಿಸಿತ್ತು. 
ಜನತಾ ಪಕ್ಷ ಗಳಿಸಿದ್ದ ಮತ ಪ್ರಮಾಣ ಶೇ 33.54 ಮಾತ್ರ. ಇದು ಕಾಂಗ್ರೆಸ್ ಮತ್ತು ಕೆಸಿಪಿಯ ಒಟ್ಟು ಮತ ಪ್ರಮಾಣಕ್ಕಿಂತ ಶೇ 0.98ರಷ್ಟು ಕಡಿಮೆ. ಅಂದರೆ ಬಂಗಾರಪ್ಪ ಕಾಂಗ್ರೆಸ್ ಜತೆಗಿದ್ದರೆ ಅದು ಸೋಲುತ್ತಿರಲಿಲ್ಲವೇನೋ?)
ಒಂದೊಮ್ಮೆ ಯಡಿಯೂರಪ್ಪನವರ ಒತ್ತಡಕ್ಕೆ ಹೈಕಮಾಂಡ್ ಮಣಿದು ಅವರು ಹೇಳಿದ 150 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆನ್ನಿ, ಆಗ ಅವರ ವಿರೋಧಿಗಳು ಸುಮ್ಮನಿರುತ್ತಾರಾ? ಅವರು ಅಲ್ಲಲ್ಲಿ ಬಂಡುಕೋರರನ್ನು ಕಣಕ್ಕಿಳಿಸುತ್ತಾರೆ. ಅವರೂ 10-20 ಸಾವಿರ ಮತಗಳನ್ನು ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾಗುತ್ತಾರೆ.
ಯಾವ ದೃಷ್ಟಿಯಿಂದ ನೋಡಿದರೂ ಬಿಜೆಪಿಯ ಮುಂದಿರುವುದು ಸೋಲಿನ ಹಾದಿಯೇ ಹೊರತಾಗಿ ಗೆಲುವಿನದ್ದಲ್ಲ. ಬಿಜೆಪಿಯ ಗೆಲುವಿಗೆ ಇರುವ ಒಂದೇ ದಾರಿಯೆಂದರೆ ಯಡಿಯೂರಪ್ಪನವರಿಗೆ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಿ `ನಾನು ಯಾರಿಗೂ ಟಿಕೆಟ್ ಕೇಳುವುದಿಲ್ಲ, ಗೆದ್ದು ಬಂದರೆ ಅಧಿಕಾರವನ್ನೂ ಕೇಳುವುದಿಲ್ಲ.
ಪಕ್ಷದ ನಿಷ್ಠಾವಂತ ಕಾರ‌್ಯಕರ್ತನಾಗಿ ಕೆಲಸ ಮಾಡುತ್ತೇನೆ~ ಎಂದು ಘೋಷಿಸಿ ಪ್ರಾಮಾಣಿಕವಾಗಿ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದು. ಇಷ್ಟು ವರ್ಷಗಳ ಕಾಲ ಯಡಿಯೂರಪ್ಪನವರನ್ನು ನೋಡಿದವರಿಗಾದರೂ ಅವರು ಈ ರೀತಿ ಬದಲಾಗಬಹುದು ಎಂದು ಅನಿಸುತ್ತಾ?

No comments:

Post a Comment