Monday, April 11, 2011

ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ

ಕತ್ತಲೆಯ ಹಾದಿಯಲ್ಲಿ ಕನಸುಗಳ ದೀಪ ಹಿಡಿದುಕೊಂಡು ಹೊರಟವರಿಗೆ ಎದುರಾಗುವ ಪ್ರತಿಯೊಂದು ನೆರಳುಗಳಲ್ಲಿಯೂ ತಮ್ಮನ್ನು ಮುನ್ನಡೆಸುವ ಅವತಾರಪುರುಷ ಕಾಣುವುದು ಸಹಜ. ಭ್ರಷ್ಟ ವ್ಯವಸ್ಥೆಯಿಂದಾಗಿ ರೋಸಿಹೋಗಿ ಹತಾಶೆಗೀಡಾದ ಜನತೆಯ ಕಣ್ಣುಗಳಿಗೆ ಸರ್ಕಾರದ ವಿರುದ್ಧ ಸಣ್ಣಗೆ ಸಿಟ್ಟುಮಾಡಿಕೊಂಡ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿ ಒಬ್ಬ ಜಯಪ್ರಕಾಶ್ ನಾರಾಯಣ್ ಕಾಣುತ್ತಾರೆ, ಕಪ್ಪು ಹಣದ ವಿರುದ್ಧ ಮಾತನಾಡುವ ಒಬ್ಬ ಸಾಮಾನ್ಯ ಯೋಗಗುರು ಬಾಬಾ ರಾಮ್‌ದೇವ್ ಅವರಲ್ಲಿ ಒಬ್ಬ ವಿನೋಬಾ ಭಾವೆ ಕಾಣುತ್ತಾರೆ, ಒಬ್ಬ  ಸಾಮಾಜಿಕ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರಲ್ಲಿ ಮಹಾತ್ಮ ಗಾಂಧೀಜಿ ಕಾಣುತ್ತಾರೆ.
ಆದರೆ ಒಬ್ಬ ಮಹಾತ್ಮ, ಒಬ್ಬ ಜೆಪಿ ಇಲ್ಲವೇ ಒಬ್ಬ ವಿನೋಬಾ ಭಾವೆ ರಾತ್ರಿ ಹಗಲಾಗುವುದರೊಳಗೆ ಸುದ್ದಿಮಾಧ್ಯಮಗಳ ಮಿಂಚುಬೆಳಕಲ್ಲಿ ಉದಿಸಿದ ತಾರೆಗಳಲ್ಲ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಆ ಮಹನೀಯರ ಹೋರಾಟದ ಬದುಕನ್ನು ಅಗೌರವಿಸಿದಂತಾಗುವುದು ಮಾತ್ರವಲ್ಲ, ಭ್ರಷ್ಟಚಾರದ ವಿರುದ್ದ ದೇಶದಾದ್ಯಂತ ಹುಟ್ಟಿಕೊಂಡಿರುವ ಜನಾಭಿಪ್ರಾಯ ತಾರ್ಕಿಕ ಅಂತ್ಯ ಕಾಣದೆ ವ್ಯರ್ಥಗೊಂಡು ಮತ್ತೊಂದು ಭ್ರಮನಿರಸನಕ್ಕೆ ದಾರಿಮಾಡಿಕೊಡುವ ಅಪಾಯವೂ ಇದೆ.
ಸರ್ಕಾರ ಮಣಿಯಲು ಕಾರಣವಾದ ‘ಕ್ರಾಂತಿಯ ಹರಿಕಾರರು’ ತಾವೇ ಎಂದು  ಮಾಧ್ಯಮಗಳು ಆಗಲೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿವೆ. ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಯಶಸ್ಸಿನಲ್ಲಿ ಅತೀ ಎನಿಸುವಷ್ಟು ಕ್ರಿಯಾಶೀಲವಾಗಿದ್ದ ಮಾಧ್ಯಮಗಳ, ಅದರಲ್ಲೂ ಹುಟ್ಟು-ಸಾವುಗಳೆರಡನ್ನೂ ಹಬ್ಬದಂತೆ ಆಚರಿಸುವ ಟಿವಿ ಚಾನೆಲ್‌ಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಅದೇ ಟಿವಿ ಚಾನೆಲ್‌ಗಳು ಆಗಲೇ ಭಿನ್ನ ರಾಗ ಹಾಡುತ್ತಿರುವ ಬಾಬಾ ರಾಮ್‌ದೇವ್ ಅವರ ಸುತ್ತ ನೆರೆದಿವೆ. ಮಾಧ್ಯಮಗಳ ಮೇಲಿನ ಅತಿ ಅವಲಂಬನೆಯ ಅಪಾಯ ಇದು.
ಒಂದು ಮಸೂದೆಯ ರಚನೆಯ ಸಮಿತಿಯಲ್ಲಿ ನಾಗರಿಕ ಸಮಾಜದ ಐವರು ಪ್ರತಿನಿಧಿಗಳು ಪಾಲ್ಗೊಳ್ಳಲು ಸರ್ಕಾರ ಒಪ್ಪಿಕೊಂಡದ್ದನ್ನೇ ದೊಡ್ಡ ಗೆಲುವೆಂದು ತಿಳಿದುಕೊಳ್ಳಬೇಕಾಗಿಲ್ಲ. ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆಯ ಆಳ-ಅಗಲಗಳ ಪರಿಚಯ ಇರುವ ಯಾರೂ ಅಷ್ಟೊಂದು ಆಶಾವಾದಿಯಾಗುವುದು ಸಾಧ್ಯ ಇಲ್ಲ. ಕರ್ನಾಟಕಕ್ಕಿಂತ ಬೇರೆ ಉದಾಹರಣೆ ಯಾಕೆ ಬೇಕು? ರಾಜ್ಯದ ಮುಖ್ಯಮಂತ್ರಿ ಮತ್ತು ಕುಟುಂಬದ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತರು ಮಾಡಬೇಕಾಗಿದ್ದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ಕೊಟ್ಟು ಕೈ ಕಟ್ಟಿಹಾಕಿಲ್ಲವೇ? ಇಲ್ಲಿ ಹೈಕೋರ್ಟ್ ಇದ್ದರೆ ಅಲ್ಲಿ ಸುಪ್ರೀಂಕೋರ್ಟ್ ಇದೆ. ನ್ಯಾಯಾಲಯಗಳು ಕೂಡಾ ಇಂದು ಸಂಶಯಾತೀತವಾಗಿ ಉಳಿದಿಲ್ಲ. ಆದ್ದರಿಂದ ಲೋಕಪಾಲರ ನೇಮಕದಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲಿದೆ ಎಂದು ಯಾರೂ ತಿಳಿದುಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ ಲೋಕಪಾಲರ ನೇಮಕಕ್ಕಿಂತಲೂ ಮೊದಲು ಈಗಿನ ಭ್ರಷ್ಟರಾಜಕೀಯ ವ್ಯವಸ್ಥೆಯ ಹುಟ್ಟಿಗೆ ಕಾರಣವಾಗಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಯಾಗಬೇಕಿತ್ತು. ಪ್ರತಿಯೊಂದು ಕಾನೂನನ್ನೂ ನಾಗರಿಕ ಸಮಾಜವೇ ರಚಿಸುವ ಇಲ್ಲವೇ ತಿದ್ದುವ ಕೆಲಸವನ್ನು ಮಾಡುವುದು ಸಾಧ್ಯ ಇಲ್ಲವಲ್ಲಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸವನ್ನು ಮಾಡಬೇಕಾಗಿರುವುದು ಶಾಸನ ರಚನೆಯ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳಲ್ಲವೇ? ಆದ್ದರಿಂದ ಶಾಸನಸಭೆಗೆ ಪ್ರಾಮಾಣಿಕರು, ಸಚ್ಚಾರಿತ್ರ್ಯಉಳ್ಳವರು ಮತ್ತು ಪ್ರಜ್ಞಾವಂತರು ಆರಿಸಿಬರುವಂತಹ ಚುನಾವಣಾ ವ್ಯವಸ್ಥೆ ಇಲ್ಲದೆ ಹೋದರೆ ಪ್ರತಿಬಾರಿ ಜನಪರವಾದ ಕಾನೂನು ರಚನೆಗೆ ಅಣ್ಣಾ ಹಜಾರೆ ಅವರು ಉಪವಾಸ ಕೂರಬೇಕಾಗುತ್ತದೆ.
ಅಂದ ಮಾತ್ರಕ್ಕೆ ಸಿನಿಕರಾಗುವ ಅಗತ್ಯ ಖಂಡಿತ ಇಲ್ಲ. ಬೇರೇನೂ ಆಗಬೇಕಾಗಿಲ್ಲ, ಸಿವಿಲ್ ಸೊಸೈಟಿ ರಚಿಸಿರುವ ‘ಜನಲೋಕಪಾಲ ಮಸೂದೆ’ ಅದರ ಮೂಲರೂಪದಲ್ಲಿಯೇ ಕಾಯಿದೆಯಾಗಿ ಅನುಷ್ಠಾನಕ್ಕೆ ಬಂದರಷ್ಟೇ ಸಾಕು. ದೇಶದ ಈಗಿನ ಜನಾಂಗ ಮಾತ್ರವಲ್ಲ ಭವಿಷ್ಯದ ಜನಾಂಗ ಕೂಡಾ ಹಜಾರೆ ಅವರಿಗೆ ಚಿರಋಣಿಯಾಗಿರುತ್ತದೆ. ಆದರೆ  ಈ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದರೆ ಮುಂದಿನ ದಾರಿ ತುಳಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹೋರಾಟಗಾರರೆಲ್ಲರೂ ಶತ್ರುಗಳನ್ನು ಸರಿಯಾಗಿಯೇ ಗುರುತಿಸಿಕೊಂಡಿರುತ್ತಾರೆ, ಆದರೆ ಯಾವಾಗಲೂ ಹೋರಾಟ ಎಡವಿ ಬೀಳುವುದು ಅದರ ನಾಯಕರು ಆರಿಸಿಕೊಳ್ಳುವ ಮಿತ್ರರ ಆಯ್ಕೆಯಲ್ಲಿ. ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಎಚ್ಚರ ವಹಿಸಬೇಕಾಗಿರುವುದು ಮಿತ್ರರ ಬಗ್ಗೆ, ಶತ್ರುಗಳ ಬಗ್ಗೆ ಅಲ್ಲ.
ಆಮರಣ ಉಪವಾಸ ಕೊನೆಗೊಳಿಸುವ ಮುನ್ನ ಅಣ್ಣಾ ಹಜಾರೆ ಅವರು ಅಲ್ಲಿ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತಿದ್ದವು. ಆ ಹೊತ್ತಿನಲ್ಲಿ ವೇದಿಕೆಯಲ್ಲಿದ್ದ ವ್ಯಕ್ತಿಯೊಬ್ಬ ಕಾಗದದ ಪೊಟ್ಟಣವೊಂದನ್ನು ಬಿಚ್ಚಿ ದೊಡ್ಡ ಕತ್ತಿಯೊಂದನ್ನು ಹೊರತೆಗೆದು ಅಣ್ಣಾ ಅವರ ಕೈಗೆ ಕೊಡಲು ಹೊರಟಿದ್ದ. ಪಕ್ಕದಲ್ಲಿದ್ದ ಸ್ವಾಮಿ ಅಗ್ನಿವೇಶ್ ತಕ್ಷಣ ಜಾಗೃತರಾಗಿ ಕತ್ತಿ ಕೊಡಲು ಬಂದವನನ್ನು ಹಿಂದಕ್ಕೆ ಸರಿಸಿದರು. ಇಲ್ಲದೆ ಹೋಗಿದ್ದರೆ ನಾವೆಲ್ಲ ಕಾಣಬಯಸುವ ‘ಮಹಾತ್ಮಗಾಂಧಿ’ ಅವರು ಕೈಯಲ್ಲಿ ಕತ್ತಿ ಹಿಡಿದ ‘ರೋಮಾಂಚಕಾರಿ’ ಕ್ಷಣಗಳನ್ನು ಟಿವಿ ಚಾನೆಲ್‌ಗಳು ನೇರಪ್ರಸಾರ ಮಾಡಿಬಿಡುತ್ತಿದ್ದವು. ಮರುದಿನದ ಪತ್ರಿಕೆಗಳಲ್ಲಿ ಅದೇ ಚಿತ್ರ ಪ್ರಕಟವಾಗುತ್ತಿತ್ತೋ ಏನೋ? ಕಣ್ಣರೆಪ್ಪೆ ಮುಚ್ಚಿ ತೆರೆದುಕೊಳ್ಳುವಷ್ಟರಲ್ಲಿ ನಡೆದುಹೋದ ಈ ಸಣ್ಣ ಘಟನೆ ಅಣ್ಣಾ ಹಜಾರೆ ಹೋರಾಟದ ಶಕ್ತಿ-ದೌರ್ಬಲ್ಯಗಳೆರಡನ್ನೂ ಹೇಳುವಂತಿತ್ತು.
ಕತ್ತಿ ಮತ್ತು ಉಪವಾಸದ ಸಂಕೇತಗಳು ಬೇರೆ. ಅವುಗಳು ಬಿಂಬಿಸುವ ವಿಚಾರಧಾರೆಗಳು ಕೂಡಾ ಬೇರೆಬೇರೆ. ಅಣ್ಣಾ ಅವರ ಪಕ್ಕದಲ್ಲಿ ಮಾವೋವಾದಿಗಳಿಗೂ ಅಹಿಂಸೆಯ ಪಾಠ ಬೋಧಿಸುತ್ತಿರುವ ಸ್ವಾಮಿ ಅಗ್ನಿವೇಶ್ ಅಂತಹವರು ಮಾತ್ರವಲ್ಲ ಬಂದೂಕಿನ ನಳಿಕೆಯ ಮೂಲಕ ಬದಲಾವಣೆಯನ್ನು ತರಬಯಸುವ ಕಾಡಲ್ಲಿರುವ ಮಾವೋವಾದಿಗಳಿಗೂ, ಅದನ್ನೇ ಉಪವಾಸದ ಮೂಲಕ ಮಾಡಲು ಹೊರಟಿರುವ ಅಣ್ಣಾ ಹಜಾರೆ ಎಂಬ ಗಾಂಧಿವಾದಿಗೂ ಇರುವ ವ್ಯತ್ಯಾಸವನ್ನೇ ಅರಿಯದ ಕುರುಡುಕಣ್ಣುಗಳ ಕತ್ತಿವೀರರೂ ಇದ್ದಾರೆ. ಸ್ವಾಮಿ ಅಗ್ನಿವೇಶ್, ಶಾಂತಿಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇರ್ಜಿವಾಲಾ, ಕಿರಣ್‌ಬೇಡಿ ಮೊದಲಾದವರ ಜತೆಯಲ್ಲಿ ಬಾಲಿವುಡ್ ತಾರೆಯರು, ಆಧ್ಯಾತ್ಮವನ್ನೇ ವ್ಯಾಪಾರ ಕೊಂಡಿರುವ ‘ದೇವಮಾನವ’ರು, ಅಧಿಕಾರ ಕಳೆದುಕೊಂಡಿರುವ ಭಗ್ನಹೃದಯಿ ರಾಜಕಾರಣಿಗಳು ಕೂಡಾ ಇದ್ದಾರೆ.
ಇವರೆಲ್ಲರ ನಡುವೆ ಅಣ್ಣಾ ಹಜಾರೆ ಅವರ ಜತೆಯಲ್ಲಿಯೇ ಆಮರಣ ಉಪವಾಸ ಕೂತ ವ್ಯಕ್ತಿಗಳ ಹೆಸರಾದರೂ ಯಾರಿಗಾದರೂ ಗೊತ್ತಿದೆಯೇ? ಯಾವ ಪತ್ರಿಕೆಗಳಲ್ಲಿಯಾದರೂ ಅವರ ಹೆಸರು ಪ್ರಕಟಗೊಂಡಿದೆಯೇ? ಯಾವುದಾದರೂ ಟಿವಿ ಚಾನೆಲ್ ಅವರ ಹೆಸರು ಹೇಳಿದೆಯೇ? ತಾನು ಉಪವಾಸ ಅಂತ್ಯಗೊಳಿಸುವ ಮೊದಲು ಅಣ್ಣಾ ಅವರು ಉಪವಾಸ ಕೂತಿದ್ದವರನ್ನು ಎಬ್ಬಿಸಿ ಅವರ ಗಲ್ಲ ಎತ್ತಿ ಹಣ್ಣಿನ ರಸ ಕುಡಿಸುತ್ತಿದ್ದಾಗಷ್ಟೇ ಆ ಅನಾಮಿಕ ಸತ್ಯಾಗ್ರಹಿಗಳ ಮುಖದರ್ಶನವಾಗಿದ್ದು. ಆಗಲೂ ಅವರ ಹೆಸರುಗಳನ್ನು ಯಾರೂ ಹೇಳಲಿಲ್ಲ.  ಆದರೆ ಮುಂಬೈನಲ್ಲಿ ವಿಮಾನದಲ್ಲಿ ಹಾರಿಬಂದು, ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ತಿಂಡಿ-ತೀರ್ಥ ಸೇವಿಸಿ ಪಿಆರ್‌ಗಳ ಮೂಲಕ ಮಾಧ್ಯಮಮಿತ್ರರಿಗೆ ತಮ್ಮ ಆಗಮನದ ವಿಷಯವನ್ನು ಮುಂಚಿತವಾಗಿಯೇ ತಿಳಿಸಿ ಅಣ್ಣಾಹಜಾರೆಯವರ ಜತೆಯಲ್ಲಿ ಒಂದಷ್ಟು ಹೊತ್ತು ಕಾಣಿಸಿಕೊಂಡು ಮಿಂಚಿದ ಬಾಲಿವುಡ್ ತಾರೆಯರ ಹೆಸರುಗಳೆಲ್ಲ ಟಿವಿ ನೋಡುವ, ಪತ್ರಿಕೆ ಓದುವ ಜನರಿಗೆಲ್ಲ ಬಾಯಿಪಾಠವಾಗಿದೆ.
ಭ್ರಷ್ಟಾಚಾರದ ವಿರುದ್ಧದ ಹೋರಾಟ ಟಿವಿ ಕ್ಯಾಮೆರಾಗಳು ಕಣ್ಣಿಟ್ಟಿರುವ ವೇದಿಕೆಗಳಿಂದ ಪ್ರಾರಂಭವಾಗುವುದಲ್ಲ, ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನೊಳಗಿಂದ ಪ್ರಾರಂಭವಾಗಬೇಕು.  ಎದೆ-ತೋಳುಗಳ ಮೇಲೆ ಅಣ್ಣಾಹಜಾರೆ ಹೆಸರು ಬರೆಸುವುದರಿಂದ, ಒಂದೆರಡು ಗಂಟೆ ಧರಣಿ ಕೂತು ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವುದರಿಂದ, ಇಲ್ಲವೇ ಬೀದಿಗಳಲ್ಲಿ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸುವುದು ಸಾಧ್ಯ ಇಲ್ಲ. ಈ ಚಿತ್ರತಾರೆಯರು ಸರ್ಕಾರಕ್ಕೆ ವಂಚನೆ ಮಾಡದೆ ಗಳಿಸಿದ ಹಣಕ್ಕೆ ಸರಿಯಾಗಿ ವರಮಾನ ತೆರಿಗೆ ಕೊಟ್ಟರೆ ಸಾಕು.
ಅಣ್ಣಾ ಹಜಾರೆ ಅವರಿಗೆ ಅದಕ್ಕಿಂತ ದೊಡ್ಡ ಬೆಂಬಲ ಬೇಕಿಲ್ಲ. ಸಾಧ್ಯವಾದರೆ ಒಂದಷ್ಟು ಒಳ್ಳೆಯ ಅಭಿರುಚಿಯ ಚಿತ್ರಗಳನ್ನು ಸಮಾಜಕ್ಕೆ ನೀಡಲಿ. ಈ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ ಎಂದು ಎದೆಮೇಲೆ ಕೈಯಿಟ್ಟು ಹೇಳುವ ಎಷ್ಟು ಮಂದಿ ಚಿತ್ರರಂಗದಲ್ಲಿದ್ದಾರೆ? ಲಂಚ ಸ್ವೀಕರಿಸುವುದಿಲ್ಲ ಮಾತ್ರವಲ್ಲ ಕೊಡುವುದೂ ಇಲ್ಲ,  ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಗೊತ್ತಿದ್ದೂ ಕಾನೂನಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದವರು ಮಾತ್ರ ವೇದಿಕೆ ಹತ್ತಿ ಎಂದು  ಹಜಾರೆ ಹೇಳಿದ್ದರೆ ಅವರು ಉಪವಾಸ ಕೂತಿದ್ದ ವೇದಿಕೆ ಮುಕ್ಕಾಲು ಪಾಲು ಖಾಲಿಯಾಗಿರುತ್ತಿತ್ತು.
ಎರಡನೆಯ ದೊಡ್ಡ ಅಪಾಯ ಇರುವುದು ಇಂತಹ ಹೋರಾಟಗಾರರನ್ನೆಲ್ಲ ಸುಲಭದಲ್ಲಿ ಸಮ್ಹೋಹನಕ್ಕೊಳಪಡಿಸುವ ರಾಜಕೀಯ ಮಾಯಾಂಗನೆಯಿಂದ. ಎಂಬತ್ತರ ದಶಕದ ಆದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದಾಗೆಲ್ಲ ಬೆಂಗಳೂರಿನ ಜನಜೀವನ ಸ್ಥಗಿತಗೊಳ್ಳುತ್ತಿತ್ತು. ಅಧಿಕಾರದಲ್ಲಿದ್ದವರು ಕೈಕಾಲು ಕಂಪಿಸುತ್ತಿದ್ದವು. ಮುಂದೆ ರೈತರದ್ದೇ ಸರ್ಕಾರ ಎಂದು ಭ್ರಮಿಸಿಕೊಂಡವರು ಆ ಕಾಲದಲ್ಲಿ ಬಹಳ ಮಂದಿ ಇದ್ದರು. ಇನ್ನೊಂದೆಡೆ ಅಲ್ಲಿಯ ವರೆಗೆ ಕೇವಲ ಮುಖರಹಿತ ಮತಬ್ಯಾಂಕ್ ಆಗಿದ್ದ ದಲಿತರು ಸಂಘಟಿತರಾಗಿ ನಡೆಸುತ್ತಿದ್ದ ಚಳವಳಿಯಿಂದ ರಾಜಕೀಯ ಪಕ್ಷಗಳು ತಮ್ಮ ನೆಲೆ ಕಳೆದುಕೊಂಡವರಂತೆ ಭೀತಿಗೊಳಗಾಗಿದ್ದವು. ಆದರೇನಾಯಿತು? ಈ ಎರಡೂ ಚಳವಳಿಗಳ ನಾಯಕರು ರಾಜಕೀಯದ ಮೋಹಪಾಶಕ್ಕೆ ಸಿಕ್ಕಿ ತಾವು ನೆಲೆಕಲೆದುಕೊಂಡಿದ್ದು ಮಾತ್ರವಲ್ಲ ಚಳವಳಿಗಳು ಕೂಡಾ ದಿಕ್ಕು ತಪ್ಪಲು ಕಾರಣರಾದರು. ಈ ಅಪಾಯವನ್ನು ಅಣ್ಣಾ ಹಜಾರೆ ಮತ್ತು ಸಂಗಡಿಗರು ಕೂಡಾ ಮುಂದಿನ ದಿನಗಳಲ್ಲಿ ಎದುರಿಸುವ ಸಾಧ್ಯತೆ ಇದೆ.
ಆಗಲೇ ‘ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಯನ್ನು ಪತ್ರಕರ್ತರು ಅಣ್ಣಾ ಹಜಾರೆ ಅವರನ್ನು ಪೆದ್ದುಪೆದ್ದಾಗಿ ಕೇಳತೊಡಗಿದ್ದಾರೆ. ಈ ರೀತಿಯ ಜನಬೆಂಬಲ ಕಂಡಾಗ ಎಂತಹ ಗಟ್ಟಿಮನಸ್ಸಿನ ನಾಯಕರ ಸಂಯಮವೂ ಕರಗುವುದು ಸಹಜ. ಅಣ್ಣಾ ಹಜಾರೆ ಅವರಲ್ಲಿ ಅಲ್ಲದಿದ್ದರೂ ಅವರ ಬೆಂಬಲಿಗರಲ್ಲಿ ರಾಜಕೀಯ ಆಕಾಂಕ್ಷೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಬಾಬಾ ರಾಮ್‌ದೇವ್ ಅವರ ಭಿನ್ನಮತದ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಅವರಿಂದಾಗಿ ತನ್ನ ರಾಜಕೀಯ ಆಕಾಂಕ್ಷೆ ಭಗ್ನಗೊಳ್ಳಬಹುದೆಂಬ ಭೀತಿಯಿಂದ ಹುಟ್ಟಿಕೊಂಡ ಹತಾಶೆಯೂ ಇರುವಂತೆ ಕಾಣುತ್ತಿದೆ.
ಆದ್ದರಿಂದ ಎಲ್ಲಿಯ ವರೆಗೆ ಅಣ್ಣಾಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ ಅಲ್ಲಿಯ ವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು. ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ  ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ದವಾಗಬೇಕು. ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿಯಾಗಲಿ, ಶಕ್ತಿಯಾಗಲಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ. ರಾಜಕೀಯ ಪಕ್ಷಗಳು ಕೂಡಾ  ಮೈಯೆಲ್ಲ ಕಣ್ಣಾಗಿ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಾ ಕೂತ ಹಾಗೆ ಕಾಣುತ್ತಿದೆ.

No comments:

Post a Comment