Thursday, March 3, 2016

ಲೈಪು ಅಂದರೆ ಹೀಗೆಯೇ.... ಮತ್ತು ಹೀಗೆಯೇ ಇರಬೇಕು.

ಎಷ್ಟೋ ಸಂದರ್ಭಗಳಲ್ಲಿ ಅರ್ಥವಿಲ್ಲದ ಮೌನ ದುಮ್ಮಾನಕ್ಕೆ ಕಾರಣವಾಗಿ ಮನಸ್ಸು ಭಾರವಾಗುವುದುಂಟು. ಈ ವಾರದ ಅಗ್ನಿ ವಾರಪತ್ರಿಕೆಯನ್ನು ಓದಿದಾಗ ಮನಸ್ಸಿನ ಭಾರವನ್ನು ಇಳಿಸಬೇಕೆನಿಸಿತು.
ಲೇಖಕ ಮತ್ತು ಪತ್ರಕರ್ತ ಅಗ್ನಿ ಶ್ರೀಧರ್ ಅವರ ಅನುಭವ, ಓದಿನ ವಿಸ್ತಾರ, ಒಳನೋಟಗಳ ಜತೆಗೆ ಸಮಾನತೆ ಮತ್ತು ಜಾತ್ಯತೀತ ನಿಲುವಿನ ಬಗೆಗಿನ ನಿಷ್ಠುರವಾದ ಅವರ ಬದ್ದತೆ ಬಗ್ಗೆ ನನಗೆ ವಿಶೇಷವಾದ ಅಭಿಮಾನ. ಅಗ್ನಿ ಪತ್ರಿಕೆಯ ಸಂಪಾದಕರಾದ ಇಂದೂಧರ್ ಹೊನ್ನಾಪುರ ಅವರೂ ಅಷ್ಟೇ ಆಪ್ತರು ನನಗೆ. ಮುಂಗಾರು ಪತ್ರಿಕೆಗೆ ನಾನು ಸೇರಿದಾಗ ಇಂದೂಧರ ಹೊನ್ನಾಪುರ ಅವರು ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ನಮ್ಮನ್ನು ಬೆಳೆಸಿದವರು.

ಕೆಲವು ವಾರಗಳ ಹಿಂದೆ ಲೇಖನವೊಂದರ ಸಂಬಂಧ ಹುಟ್ಟಿದ ಭಿನ್ನಾಭಿಪ್ರಾಯದಿಂದ ನಾನು ಮತ್ತು ಈ ಹಿರಿಯರಿಬ್ಬರು ಮನಸ್ಸು ಕಹಿಮಾಡಿಕೊಳ್ಲಬೇಕಾಯಿತು. ಭಾವುಕನಾಗಿ ಪ್ರತಿಕ್ರಿಯಿಸಿದೆ ಎಂದು ನನಗೂ ಆ ಮೇಲೆ ಅನಿಸಿತ್ತು. ಅವರಿಗೂ ಅನಿಸಿರಲೂಬಹುದು. ಮನಸ್ಸುಗಳೇನು ಮುರಿದು ಹೋಗಿರಲಿಲ್ಲ, ಅಲ್ಲಿಯೇ ಮುದುಡಿಕೊಂಡಿತ್ತು. ಇದರಿಂದ ನಮಗಿಂತಲೂ ಹೆಚ್ಚು ನೊಂದುಕೊಂಡವರು ನಮ್ಮ ಹಿರಿಯ-ಕಿರಿಯ ಸ್ನೇಹಿತರು.
ಕೆಲವು ವಾರಗಳ ಹಿಂದೆ ಯಥಾ ಪ್ರಕಾರ ಸಂಘ ಪರಿವಾರ ನನ್ನ ಮೇಲೆ ಮುಗಿಬಿದ್ದಾಗಲೂ ಅಗ್ನಿ ನನಗೆ ಬೆಂಬಲ ಸೂಚಿಸಿ ವೈಯಕ್ತಿಕ ಸಂಬಂಧವನ್ನು ಮೀರಿದ್ದು ಪತ್ರಿಕಾಧರ್ಮ ಎನ್ನುವುದನ್ನು ಹೇಳಿತ್ತು. ಈ ಬಾರಿ ಇಂದೂಧರ ಅವರು ಸಂಪಾದಕೀಯದಲ್ಲಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಚೇತನಾ ತೀರ್ಥಹಳ್ಳಿ ಮತ್ತು ನನ್ನೊಂದಿಗೆ ಅಗ್ನಿ ಬಳಗ ಇದೆ ಎಂದು ಬರೆದಿದ್ದಾರೆ.
ಇದನ್ನು ಓದಿದ ನಂತರ ನಾಲ್ಕು ಸಾಲು ಬರೆದು ಮನಸ್ಸನ್ನು ಹಗುರಮಾಡಿಕೊಳ್ಳಬೇಕೆನಿಸಿತು. ವಿರೋಧಿಗಳು ಬೆನ್ನತ್ತಿರುವ ಈ ಕಾಲದಲ್ಲಿ ಜಗಳಕ್ಕೆಲ್ಲಿದೆ ಪುರುಸೊತ್ತು? ಇದು ಸಮಾನ ಮನಸ್ಕರೆಲ್ಲ ಪರಸ್ಪರ ಪ್ರೀತಿಸುವ, ಅರ್ಥಮಾಡಿಕೊಳ್ಳುವ ಹೊತ್ತು.
ಜಗಳವೇ ಇಲ್ಲದ ಸ್ನೇಹ ಬಹಳ ಕೃತಕವಾದುದು, ಆದರೆ ಜಗಳವಾಡುವಾಗಲೂ ಒಳಗೆ ಸ್ನೇಹದ ಒರತೆ ಜಿನುಗುತ್ತಿರುವುದು ಪರಸ್ಪರರ ಗಮನಕ್ಕೆ ಬರಬೇಕು. ಅಂತಹ ಸ್ನೇಹ ಯಾರು ಹುಳಿ ಹಿಂಡಿದರೂ ಗಟ್ಟಿಯಾಗಿ ಉಳಿಯುತ್ತದೆ. ಥ್ಯಾಂಕ್ಯೂ ಶ್ರೀಧರ್ ಮತ್ತು ಇಂದೂಧರ್. ನಮ್ಮ ಜಗಳದ ನಡುವೆ ಸಿಕ್ಕಿಹಾಕಿಕೊಂಡಿದ್ದ ಗೆಳೆಯ ಮಂಜುನಾಥ ಅದ್ದೆಯವರೂ ಈಗ ನಿರಾಳ.

Wednesday, March 2, 2016

ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು..

ಕಳೆದ ಶನಿವಾರ ಉಡುಪಿಯಲ್ಲಿ ಕೆಮ್ಮಲಜೆ ಜಾನಪದ ಪ್ರಕಾಶನ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಿದ ನನ್ನ ಮಾತುಗಳ ಆಯ್ದ ಭಾಗಗಳ ಪ್ರಕಟಿತ ವರದಿಯನ್ನು ಆಧರಿಸಿ ತಥಾಕಥಿತ ‘ದೇಶಪ್ರೇಮಿ’ಗಳು ನನ್ನನ್ನು ದೇಶದ್ರೋಹದ ಆರೋಪದಲ್ಲಿ ಗಲ್ಲಿಗೇರಿಸಲು ಹೊರಟಿದ್ದಾರೆ. ಇತ್ತೀಚೆಗೆ ಇಂತಹ ಕೀಟಳೆಗಳು ಸಾಮಾನ್ಯವಾಗತೊಡಗಿರುವ ಕಾರಣ ಪ್ರತಿಕ್ರಿಯಿಸಬಾರದೆಂದು ಸುಮ್ಮನಿದ್ದೆ. ಆದರೆ ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು ಅಲ್ಲಿ ಮಾತನಾಡಿದ್ದನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದ್ದೇನೆ:
1. “ ...ನಾವೆಲ್ಲ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇವೆ. ಆದರೆ ಅದನ್ನು ಉಳಿಸುವವರು ಯಾರು? ಜಾನಪದ ಸಂಸ್ಕೃತಿಯ ಸಂಶೋಧಕರೇ? ಇಲ್ಲವೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಕಲಾವಿದರೇ? ಜಾನಪದ ಸಂಶೋಧಕರಿಗೆ ಸರ್ಕಾರವೇ ಸುಭದ್ರವಾದ ಉದ್ಯೋಗ ನೀಡಿ ಸಂಶೋದನೆಗೆ ಅನುವು ಮಾಡಿಕೊಡುತ್ತದೆ. ಆದರೆ ಜಾನಪದ ಕಲಾವಿದರ ಸ್ಥಿತಿ ಏನು? ಭೂತಾರಾಧನೆಯೂ ಜಾನಪದ ಸಂಸ್ಕೃತಿಯ ಭಾಗ. ಈ ಭೂತ ಕಟ್ಟುವವರು ದಲಿತ ಸಮುದಾಯಕ್ಕೆ ಸೇರಿದವರು. ಭೂತಾರಾಧನೆಯ ಸಂಸ್ಕೃತಿಯನ್ನು ಉಳಿಸಬೇಕೆಂದು ಈ ದಲಿತ ಕಲಾವಿದರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ, ಉದ್ಯೋಗಕ್ಕೆ ಸೇರಿಸದೆ ಭೂತ ಕಟ್ಟುವ ಕಲಾವಿದರನ್ನಾಗಿಯೇ ಉಳಿಸಬೇಕೆಂಬುದು ತೀರಾ ಅಮಾನವೀಯವಾದುದು. ದಲಿತ ತಂದೆ-ತಾಯಿ ಕೂಡಾ ತಮ್ಮ ಮಕ್ಕಳು ಡಾಕ್ಟರ್,ಎಂಜನಿಯರ್ ಆಗಬೇಕೆಂದು ಬಯಸಿದರೆ ತಪ್ಪೇ?
2. ಇದೇ ರೀತಿ ಇತ್ತೀಚೆಗೆ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ಧಾರ್ಮಿಕ ನಾಯಕರು ಕರೆಕೊಡುತ್ತಾ ಇದ್ದಾರೆ. ಆದರೆ ಈ ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಪೊಲೀಸ್ ಕೇಸ್ ಹಾಕಿಸಿಕೊಂಡು ಜೈಲು ಸೇರುತ್ತಿರುವವರು ಶೂದ್ರರು ಮತ್ತು ಬಡವರು. ಧರ್ಮ ರಕ್ಷಣೆಗಾಗಿ ಕರೆನೀಡುತ್ತಿರುವ ನಾಯಕರ ಮಕ್ಕಳು ಡಾಕ್ಟರ್, ಎಂಜನಿಯರ್ ಗಳಾಗುತ್ತಾ ದೇಶ-ವಿದೇಶದಲ್ಲಿ ಆರಾಮವಾಗಿದ್ದಾರೆ. ಇದು ಯಾವ ಧರ್ಮ ರಕ್ಷಣೆ?
3. ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಕೂಡಾ ಇದ್ದಕ್ಕಿದ್ದ ಹಾಗೆ ಎಲ್ಲರಲ್ಲಿಯೂ ಉಕ್ಕಿ ಹರಿಯತೊಡಗಿದೆ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದೇಶಪ್ರೇಮದ ಬಗ್ಗೆ ಭಯಂಕರ ಭಾಷಣ ಮಾಡುತ್ತಿರುವವರ ಕುಟುಂಬದಲ್ಲಿ ಯಾರೂ ಸೇನೆ ಸೇರುವುದಿಲ್ಲ, ವೈದ್ಯಕೀಯ, ಎಂಜನಿಯರಿಂಗ್ ಕಾಲೇಜುಗಳನ್ನು ಸೇರುತ್ತಾರೆ. ಕೊನೆಗೂ ಸೇನೆ ಸೇರಿ ಪ್ರಾಣ ಕಳೆದುಕೊಳ್ಳುವವರು ಬಡವರ ಮಕ್ಕಳೇ ಆಗಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಗೌರವ ಸೂಚಿಸುತ್ತಲೇ ಒಂದು ಮಾತು ಹೇಳುವುದಾದರೆ ಈ ರೀತಿ ಹುತಾತ್ಮರಾದವರು ಸೇನೆ ಸೇರಲು ಬಡತನವೂ ಕಾರಣ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
4. ಜಾನಪದ ಸಂಸ್ಕೃತಿಯನ್ನು ಉಳಿಸಲು, ಧರ್ಮವನ್ನು ರಕ್ಷಿಸಲು ಮತ್ತು ದೇಶವನ್ನು ರಕ್ಷಿಸಲು ಬಡವರೇ ಯಾಕೆ ಬೇಕು?
- ಇದು ನಾನು ಅಲ್ಲಿ ಎತ್ತಿದ ಮುಖ್ಯ ಪ್ರಶ್ನೆ .ಈ ಮಾತನ್ನು ಇದೇ ಮೊದಲ ಬಾರಿ ನಾನು ಹೇಳುತ್ತಿಲ್ಲ. ಕಾರ್ಗಿಲ್ ಯುದ್ದದ ಸಮಯದಲ್ಲಿ ಹುತಾತ್ಮ ಯೋಧರ ಶವದ ಪೆಟ್ಟಿಗೆಗಳು ರಾಜ್ಯದ ಬಡವರ ಮನೆಗೆ ಹೋದಾಗಲೂ ಬರೆದಿದ್ದೆ. ಸಂಸತ್ ಮೇಲೆ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಹುತಾತ್ಮರಾದ ಭದ್ರತಾ ಪಡೆಗಳ ಕುಟುಂಬ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾಗಲೂ ಬರೆದಿದ್ದೆ. ಮುಂಬೈನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಪ್ರಾಣಕಳೆದುಕೊಂಡಾಗಲೂ ಬರೆದಿದ್ದೆ. ಇವೆಲ್ಲವೂ ಹುತಾತ್ಮರಾದವರಿಗೆ ನಾನು ಸಲ್ಲಿಸುವ ಗೌರವ ಎಂದೇ ನಾನು ತಿಳಿದುಕೊಂಡಿದ್ದೇನೆ. ಇದನ್ನೇ ದೇಶದ್ರೋಹ ಎನ್ನುವುದಾದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ.

Wednesday, February 24, 2016

‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....

ದೇಶದ ಗಡಿ ಕಾಯುತ್ತಿರುವ ಯೋಧರು ವೀರ ಮರಣವನ್ನಪ್ಪಿದಾಗ ಉಕ್ಕಿ ಹರಿಯುವ ದೇಶಪ್ರೇಮದ ಪ್ರವಾಹವನ್ನು ಕಂಡಾಗಲೆಲ್ಲ ನಾನೇ ಹಿಂದೆ ‘ಪ್ರಜಾವಾಣಿ’ ಯಲ್ಲಿ ಬರೆದಿದ್ದ ಅಂಕಣವೊಂದು ನನ್ನನ್ನು ಕಾಡತೊಡಗುತ್ತದೆ.ಇದು ಮುಂಬೈನ ತಾಜ್ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆದಿದ್ದ ಸಂದರ್ಭದಲ್ಲಿ ಬರೆದದ್ದು.
ಹನುಮಂತ ಕೊಪ್ಪದ ಮತ್ತು ಆತನ ಜತೆಯಲ್ಲಿಯೇ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ವೀರ ಮರಣವನ್ನಪ್ಪಿರುವ ಯೋಧರಿಗಾಗಿ ನಾವೆಲ್ಲ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಕೂಡಾ ಹುತಾತ್ಮ ಯೋದರು ಮತ್ತು ಅವರ ಕುಟುಂಬದ ಬಗ್ಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ .
-------- --------------- --------------------- --------------------------------------------------------------
‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....
ಭಾರತದಲ್ಲಿ ದೇಶಭಕ್ತಿಯಷ್ಟು ಸುಲಭದಲ್ಲಿ ಬೇರೇನನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲವೇನೋ? ಇದಕ್ಕಾಗಿ ಎಷ್ಟೊಂದು ಮಾರ್ಗಗಳು? ಎಸ್‌ಎಂಎಸ್ ಕಳುಹಿಸಬಹುದು, ಟೀಶರ್ಟ್ ಮೇಲೆ ದೇಶಭಕ್ತಿಯ ಘೋಷಣೆಗಳನ್ನು ಪ್ರಿಂಟ್ ಹಾಕಿಸಿಕೊಳ್ಳಬಹುದು,ಕೈಕೈ ಹಿಡಿದು ಮಾನವಸರಪಳಿ ಕಟ್ಟಿಕೊಳ್ಳಬಹುದು, ಭಾರತದ ಭೂಪಟಕ್ಕೆ ದೇವತೆಯ ಚಿತ್ರಅಂಟಿಸಿ ಹೂಮಾಲೆ ಹಾಕಿ ಮೆರವಣಿಗೆ ಮಾಡಬಹುದು,ಗೋಡೆ ಬರಹಗಳನ್ನುಬರೆಯಬಹುದು, ಪತ್ರಿಕೆಗಳವಾಚಕರ ವಾಣಿ ವಿಭಾಗಕ್ಕೆ ಬೆಂಕಿಕಾರುವ ಪತ್ರಬರೆಯಬಹುದು, ಟಿವಿಚಾನೆಲ್‌ಗಳ ಮೈಕ್ ಮುಂದೆ ನಿಂತು ರಾಜಕಾರಣಿಗಳಿಗೆ, ಪಾಕಿಸ್ತಾನಕ್ಕೆ,ಸಾಧ್ಯವಾದರೆ ಮುಸ್ಲಿಮರಿಗೆ ಮನಸಾರೆ ಬೈದುಬಿಡಬಹುದು, ಜತೆಗೆ, ಈಎಲ್ಲಾ ‘ದೇಶಭಕ್ತಿ’ಯ ಕೆಲಸಮಾಡದವರು ದೇಶದ್ರೋಹಿಗಳೆಂದು ಹೀಯಾಳಿಸಬಹುದು, ಇವೆಲ್ಲಕ್ಕಿಂತ ಸುಲಭದ ಮಾರ್ಗವೆಂದರೆ ಕತ್ತಲಾಗುತ್ತ್ತಿದ್ದಂತೆಯೇ ನಾಲ್ಕುಬೀದಿ ಸೇರುವಸ್ಥಳದಲ್ಲಿಗೆಳೆಯ-ಗೆಳತಿಯರೊಂದಿಗೆಕೂಡಿ ರೂಪಾಯಿಗೆ ನಾಲ್ಕು ಸಿಗುವಒಂದಷ್ಟು ಕ್ಯಾಂಡಲ್‌ಗಳನ್ನು ಹೊತ್ತಿಸಬಹುದು (ವಿ.ಸೂ.:ದಯವಿಟ್ಟುಟಿವಿ ಚಾನೆಲ್‌ಗಳಿಗೆ ಮೊದಲೇ ಕಾರ್ಯಕ್ರಮದ ಬಗ್ಗೆ ತಿಳಿಸಿ,ಡ್ರೆಸ್-ಮೇಕಪ್ ಕ್ಯಾಮೆರಾ ಕಣ್ಣಿಗೆ ಒಪ್ಪುವಂತಿರಲಿ).ಅಲ್ಲಿಗೆ ದೇಶಭಕ್ತರೆಂದು ಸಾಬೀತಾಗಿ ಹೋಯಿತು, ಮನೆಗೆಹೋಗಿ ಹೊಟ್ಟೆತುಂಬಾ ಊಟ ಮಾಡಿ ಸೊಂಪಾಗಿ ನಿದ್ದೆ ಮಾಡಬಹುದು.
ಕಳೆದ ಹದಿನೆಂಟುದಿನಗಳಲ್ಲಿ ದೇಶದ ಬಹುತೇಕ ‘ಜಾಗೃತನಾಗರಿಕರು’ ಮಾಡಿದ್ದು ಇದನ್ನೇಅಲ್ಲವೇ? ಮೊನ್ನೆಸಂಸತ್ ಭವನದ ಪಕ್ಕದ ವಿಜಯ ಚೌಕ್ ನಲ್ಲಿ ಒಬ್ಬ ಯುವಕ ‘ಮೇರಾಏಕ್ ಬೈಟ್ ಲೇ ಲೋ’ ಎಂದು ಟಿವಿಚಾನೆಲ್‌ಗಳ ವರದಿಗಾರರರನ್ನು ಗೋಗರೆಯುತ್ತ್ತಿದ್ದ. ‘ಯಾಕಯ್ಯಾ’ಎಂದು ಕೇಳಿದರೆ ಎದುರಿಗಿದ್ದ ಸಂಸತ್ ಭವನದ ಕಡೆ ತೋರಿಸಿ ‘ಮುಜೇ ನೇತಾಲೋಗೊಂಕೋ ಗಾಲಿ ದೇನಾ ಹೈ’ಎಂದು ಕಿರುಚಾಡತೊಡಗಿದ. ‘ಅವರೇನುಮಾಡಿದ್ದಾರೆ?’ ಎಂದು ಪ್ರಶ್ನಿಸಿದರೆ ಹಿಂದಿ ಶಬ್ದಕೋಶದಲ್ಲಿರುವ ಎಲ್ಲ ಬೈಗುಳಗಳನ್ನು ಕಾರಿದ.‘ನೀನೇನು ಮಾಡಿದೆ’ ಎಂದು ಕೆಣಕಿದರೆ ‘ಉನ್ಹೇ ಗಾಲಿ ದೇನೇಕೆ ಲಿಯೇ ಮುಂಬೈ ಸೇ ಆಯಾ ಹ್ಹೂಂ,ಯೆ ಕಮ್ ಹೈ ಕ್ಯಾ?’ಎಂದು ಮರುಪ್ರಶ್ನಿಸಿದ. ಅವನನ್ನು ಪಕ್ಕಕ್ಕೆ ಕರೆದು ‘ನೋಡು, ಮುಂಬೈದಾಳಿಯಲ್ಲಿ ಹದಿನಾಲ್ಕು ಪೊಲೀಸರುಸತ್ತಿದ್ದಾರಲ್ಲಾ, ಅವರಹೆಸರು ಹೇಳು’ ಎಂದರೆ ಮೊದಲ ಬಾರಿ ಆತ ದೆಹಲಿ ಚಳಿಯಲ್ಲಿಯೂ ಬೆವರತೊಡಗಿದ,ತಡವರಿಸತೊಡಗಿದ.‘..ಕರಕರೆಸಾಬ್,ಕಾಮ್ಟೆಸಾಬ್, ಸಾಲಸ್ಕರ್ಸಾ ಬ್......ಒಂಬ್ಲೆ....’ಅದರ ನಂತರ ಒಂದು ಹೆಸರೂ ಅವನ ಬಾಯಿಯಿಂದ ಹೊರಡಲಿಲ್ಲ.
ಎಂತಹ ಮೂರ್ಖ ಯುವಕ ಅಂತೀರಾ? ಹಾಗಿದ್ದರೆ ಹುತಾತ್ಮರಾದ ಉಳಿದ ಹತ್ತು ಪೊಲೀಸರ ಹೆಸರು ನೆನಪಿಗೆ ಬರುತ್ತಾ ನೋಡಿ. ಬಹುಶಃ ಹುತಾತ್ಮ ಪೊಲೀಸರಕುಟುಂಬವರ್ಗ, ಸಹದ್ಯೋಗಿಗಳು ಮತ್ತು ಸ್ನೇಹಿತರನ್ನು ಹೊರತುಪಡಿಸಿ ಉಳಿದವರಲ್ಲಿ ಯಾರಿಗೂ ಅವರ ಹೆಸರುನೆನಪಲ್ಲಿ ಉಳಿದಿಲ್ಲ. ಮರಾಠಿಪತ್ರಿಕೆಗಳನ್ನು ಹೊರತುಪಡಿಸಿ ಬೇರೆ ಪತ್ರಿಕೆಗಳು ಕೂಡಾ ಅವರ ಫೋಟೋಗಳನ್ನು ಸರಿಯಾಗಿ ಪ್ರಕಟಿಸಲಿಲ್ಲ, ಅವರ ಸಾವಿನಿಂದಾಗಿ ಅವರ ಕುಟುಂಬಕ್ಕಾದ ಕಷ್ಟ-ನಷ್ಟದಚಿತ್ರವನ್ನು ನೀಡಿಲ್ಲ. ಟಿವಿಕ್ಯಾಮೆರಾಗಳ ಮುಂದೆ ಪೊಲೀಸರ ತ್ಯಾಗವನ್ನು ಕೊಂಡಾಡಿದವರು,ಕಣ್ಣೀರು ಸುರಿಸಿ ಮೇಕಪ್ ಸರಿಪಡಿಸಿಕೊಂಡವರು ಯಾರೂ ಈ ‘ಅನಾಮಿಕ ಹುತಾತ್ಮರು’ ಯಾರು? ಅವರೆಲ್ಲಿದ್ದಾರೆ? ಮನೆ ಯಜಮಾನನ ಸಾವಿನ ನಂತರ ಅವರ ಮನೆ ಸ್ಥಿತಿ ಏನಾಗಿದೆ?ಎಂದು ತಿಳಿದುಕೊಳ್ಳುವಪ್ರಯತ್ನ ಮಾಡಿಲ್ಲ.
೨೬/೧೧ ಘಟನೆಯ ಮರುಗಳಿಗೆಯಲ್ಲಿಯೇ ರಾಜ್ ಠಾಕ್ರೆಯನ್ನು ಗೇಲಿ ಮಾಡಿ’ಮುಂಬೈಯನ್ನು ರಕ್ಷಿಸಿದವರು ಉತ್ತರ, ದಕ್ಷಿಣದರಾಜ್ಯಗಳ ಯೋಧರು, ಮರಾಠಿಗಳಲ್ಲ’ಎನ್ನುವ ಅರ್ಥದ ಎಸ್‌ಎಂಎಸ್‌ಗಳು ಹರಿದಾಡತೊಡಗಿದವು. ಸತ್ಯಸಂಗತಿ ಏನೆಂದರೆ ಹುತಾತ್ಮ ಪೊಲೀಸರಾದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಜಯವಂತ್ ಪಾಟೀಲ್,ಮುಖೇಶ್ ಯಾಧವ್, ಪ್ರಕಾಶ್ ಮೋರೆ, ಆರ್.ಎಸ್.ಶಿಂಧೆ,ಶಶಾಂಕ್ ಶಿಂಧೆ, ವಿಜಯ್ ಖಾಂಡೇಕರ್, ಎ.ಆರ್.ಚಿಂತೇ, ಅಂಬಾದಾಸ್ ಪವಾರ್, ಬಿ.ಸಿ.ಬೋಂಸ್ಲೆ ಮೊದಲಾದವರೆಲ್ಲರೂ ಮರಾಠಿಗರು.ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವ ಪ್ರಮುಖ ಸಾಕ್ಷಿಯಾಗಿರುವ ಭಯೋತ್ಪಾದಕ ಅಜ್ಮಲ್ ಕಸಬ್ ಬಂಧನಕ್ಕೆ ಕಾರಣರಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ತುಕರಾಮ್ ಒಂಬ್ಲೆ ಕೂಡಾ ಮರಾಠಿಗ. ತನ್ನ ಗುಂಡಿಗೆಗೆ ಕಸಬ್ ಗುಂಡು ಹೊಡೆಯುತ್ತಿದ್ದರೂ ಲೆಕ್ಕಿಸದೆ ಆತನನ್ನು ಹಿಡಿದಕೈಯ್ಯನ್ನು ಸಡಿಲಿಸದೆ ಪ್ರಾಣಬಿಟ್ಟವರು ಒಂಬ್ಲೆ.
ಪ್ರಾಣ ಕಳೆದುಕೊಂಡರೇನಾಯಿತು,ಸರ್ಕಾರ ಪರಿಹಾರನೀಡುವುದಿಲ್ಲವೇ? ಎಂದುಕೇಳಬಹುದು. ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ ಕಳೆದ ಶನಿವಾರಕ್ಕೆ ಏಳುವರ್ಷಗಳಾಯಿತು. ಆ ಘಟನೆಯಲ್ಲಿ ಗುಂಡಿಗೆ ಎದೆಕೊಟ್ಟು ನಮ್ಮ ಜನಪ್ರತಿನಿಧಿಗಳನ್ನು ಉಳಿಸಿದವರು ಭದ್ರತಾಪಡೆಯ ಏಳು ಅಧಿಕಾರಿಗಳು. ಅವರಲ್ಲೊಬ್ಬರು ಎಎಸ್‌ಐ ನಾನಕ್ ಚಂದ್. ಹುತಾತ್ಮರಾದವರೆಲ್ಲರಿಗೂ ಪರಿಹಾರದ ಜತೆ ಪೆಟ್ರೋಲ್ ಪಂಪ್ ಲೈಸೆನ್ಸ್ ನೀಡುವುದಾಗಿ ಆಗಿನ ಕೇಂದ್ರ ಸರ್ಕಾರ ಘೋಷಿಸಿತ್ತು.
ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿ,ಸಾಲಮಾಡಿ ದುಡ್ಡು ತಂದು ಲಂಚಕೊಟ್ಟ ನಂತರ (ಪತ್ರಿಕೆಗಳಿಗೆನಿನ್ನೆ ಆ ಕುಟುಂಬವೇ ಹೇಳಿಕೊಂಡಿದೆ) ಕಳೆದ ವರ್ಷ ಸೋನೆಪತ್‌ನಲ್ಲಿರುವ ಕುಟುಂಬಕ್ಕೆ ದೂರದ ಗುಡ್‌ಗಾಂವ್‌ನ ಎಲ್ಲೋ ಮೂಲೆಯಲ್ಲಿ ಪೆಟ್ರೋಲ್ ಪಂಪ್ ಮಂಜೂರು ಮಾಡಲಾಗಿದೆ. ಆ ನಿವೇಶನದಲ್ಲಿ ನೀರು-ಚರಂಡಿವ್ಯವಸ್ಥೆ ಯಾವುದೂ ಸರಿ ಇಲ್ಲ. ಮತ್ತೊಬ್ಬ ಭದ್ರತಾ ಸಹಾಯಕ ಮಾಥುರ್‌ ಸಿಂಗ್ ಕುಟುಂಬಕ್ಕೆಕೇಂದ್ರ ಸರ್ಕಾರ ಹತ್ತು ಲಕ್ಷರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡುಬಿಟ್ಟಿದೆ.ದೆಹಲಿಯಲ್ಲಿಯೇ ಈ ಗತಿಯಾದರೆ ಉಳಿದ ಕಡೆ ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾದ ಪೊಲೀಸರ ಗತಿ ಏನಾಗಿರಬಹುದು?
ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ ನಂತರ ಇದ್ದಕ್ಕಿದ್ದಂತೆ ಎಲ್ಲರೂ ಪೊಲೀಸರು ಮತ್ತು ಸೇನೆಯನ್ನು ಕೊಂಡಾಡತೊಡಗಿದ್ದಾರೆ.ಭಯೋತ್ಪಾದಕರನ್ನು ಹೊಡೆದುರುಳಿಸಿದ ಎನ್‌ಎಸ್‌ಜಿ ಕಮಾಂಡೋಗಳ ಬಗ್ಗೆ ಪ್ರೀತಿ-ಅಭಿಮಾನಉಕ್ಕಿ ಹರಿಯತೊಡಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಆರನೇ ವೇತನ ಆಯೋಗದ ವರದಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಈ ಎರಡೂ ವರ್ಗಗಳು ಗೋಳಾಡುತ್ತಿದ್ದಾಗ ಇದೇ ಜನತೆಯಿಂದ ಕನಿಷ್ಠ ಅನುಕಂಪವ್ಯಕ್ತವಾಗಿಲ್ಲ. ಆಗ ಎಸ್‌ಎಂಎಸ್, ಮಾನವಸರಪಳಿ,ಕ್ಯಾಂಡಲ್‌ಲೈಟ್....ಎಲ್ಲಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗಲಿಲ್ಲ. ಯಾರೋ ಪೊಲೀಸ್ ಅಧಿಕಾರಿಯೊಬ್ಬ ಕಾನ್‌ಸ್ಟೇಬಲ್‌ಗಳಿಗೆ ವೇತನಆಯೋಗದಿಂದ ಎಷ್ಟ್ಲೆಲಾ ಅನ್ಯಾಯವಾಗಿದೆಎಂದು ಪತ್ರಿಕೆಗೆ ಲೇಖನ ಬರೆದರೆ ಮೇಲಾಧಿಕಾರಿಗಳು ಆತನಿಂದ ವಿವರಣೆಬಯಸಿ ನೋಟೀಸ್ ನೀಡಿರದ್ದರು.
ಭಾರತದ ಎನ್‌ಎಸ್‌ಜಿ ಮತ್ತು ಈ ಪಡೆಗೆ ಸ್ಫೂರ್ತಿಯಾಗಿರುವ ಬ್ರಿಟನ್‌ನ ‘ಸ್ಪೆಷಲ್ ಏರ್ ರ್ಸ್ಕಾಡ್ರನ್’ (ಎಸ್‌ಎಎಸ್)ನತರಬೇತಿ ಮತ್ತು ಸಂಬಳ-ಸವಲತ್ತುಗಳನ್ನು ಹೋಲಿಸಿ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಅದರ ಪ್ರಕಾರ ಎನ್‌ಎಸ್‌ಜಿ ಕಮಾಂಡೋದಲ್ಲಿನ ಯೋಧನಿಗೆ ಮಾಸಿಕ ಹದಿನೈದು ಸಾವಿರಮತ್ತು ಅಧಿಕಾರಿಗೆ ೪೫,೦೦೦ರೂಪಾಯಿ ಸಂಬಳ ನೀಡಲಾಗುತ್ತಿದೆ.
ಆದರೆ ಬ್ರಿಟನ್‌ನ ಎಸ್‌ಎಎಸ್ ಯೋಧ ಮಾಸಿಕ ೩೨ ಲಕ್ಷರೂಪಾಯಿ ಮತ್ತು ಮೇಜರ್ ೫೧ ಲಕ್ಷರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂದರೆ ಹುತಾತ್ಮರಾದ ಎನ್‌ಎಸ್‌ಜಿ ಹವಲ್ದಾರ್ ಗಜೇಂದ್ರಸಿಂಗ್‌ಗೆ ಸಿಗುತ್ತ್ತಿದ್ದ ತಿಂಗಳ ಸಂಬಳ ಕೇವಲ ಹದಿನೈದು ಸಾವಿರರೂಪಾಯಿ. ದೇಶದಿಂದ ದೇಶಕ್ಕೆ ಜೀವದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸ? ಪ್ರಾಣದಹಂಗಿಲ್ಲದ ಶಸ್ತ್ರಧಾರಿ ಭಯೋತ್ಪಾದಕನ ಎದುರು ಯೋಧನೊಬ್ಬ ನಿಂತಿದ್ದಾನೆ ಎಂದಿಟ್ಟುಕೊದುಳ್ಳಿ. ಅದು ಇಬ್ಬರಲ್ಲಿ ಒಬ್ಬನ ಸಾವು ನಿರ್ಧಾರವಾಗುವ ಕ್ಷಣಗಳು. ಆಗ ಬಂದೂಕು ಹಿಡಿದ ಯೋಧನ ಮನಸ್ಸುಒಂದು ಕ್ಷಣ ತಾನಿಲ್ಲದ ತನ್ನಕುಟುಂಬದ ಸ್ಥಿತಿಯನ್ನು ನೆನೆಸಿಕೊಂಡರೆ,ಅನಾಥರಾಗಲಿರುವ ತಾಯಿ-ಹೆಂಡತಿ-ಮಕ್ಕಳಚಿತ್ರ ಕಣ್ಣಮುಂದೆ ಸುಳಿದರೆ ಆತನ ಕೈಗಳು ಕಂಪಿಸಲಿಕ್ಕಿಲ್ಲವೇ ? ಮನಸ್ಸು ತೊಯ್ದಾಡದೇ?
ಮುಂಬೈ ಮೇಲೆ ಭಯೋತ್ಪಾದಕರುದಾಳಿ ನಡೆಸಿದ ನಂತರದ ದಿನಗಳಲ್ಲಿ ಭಾರತ ಸರ್ಕಾರ ಏನು ಮಾಡಬೇಕೆಂಬಬಗ್ಗೆ ಪುಂಖಾನುಪುಂಖ ಸಲಹೆಗಳುಕೇಳಿಬರುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ. ಆದರೆ ಅಂತಹ ಯುದ್ಧದಲ್ಲಿ ಪ್ರಾಣಕಳೆದುಕೊಳ್ಳುವವರು ಯಾರು? ಸೇನೆ ಸೇರುವಾಗಲೇ ಸಾವುಕಾದಿದೆ ಎಂದು ಸೈನಿಕರಿಗೆ ಗೊತ್ತಿರುತ್ತದೆ ಎಂದು ಹೇಳಬಹುದು,ವೈರಿ ಗುಂಡಿಗೆ ಬಲಿಯಾದರೆ ದೇಶಕ್ಕೆ ಮಾಡಿದ ಬಲಿದಾನ ಎಂದು ಅವರ ದೇಶಪ್ರೇಮವನ್ನು ವೈಭವೀಕರಿಸಲೂಬಹುದು. ಹುತಾತ್ಮ ಯೋಧರೆಲ್ಲರ ಬಲಿದಾನವನ್ನು ಗೌರವಿಸುತ್ತಲೇ ಹೇಳಬಹುದಾದರೆ ಬಹುತೇಕ ಯುವಕರುಸೇನೆ ಸೇರುವುದಕ್ಕೆ ಕಾರಣ ನಿರುದ್ಯೋಗವೇ ಹೊರತು ದೇಶಪ್ರೇಮವಲ್ಲ. ಈಗಲೂಸೇನೆ ಭರ್ತಿಗೆ ಸಂದರ್ಶನ ನಡೆದಾಗಲೆಲ್ಲಾನೂಕುನುಗ್ಗಲಿನಿಂದ ಸಾವಿಗೀಡಾಗುವ ಘಟನೆಗಳು ನಡೆಯುತ್ತಿರುವುದು ಇದೇ ಕಾರಣಕ್ಕೆ.
ಟಿವಿ ಸ್ಟುಡಿಯೋದಲ್ಲಿ ಕೂತು ಯುದ್ಧ ಘೋಷಿಸುವ ಸಿನಿಮಾ ತಾರೆಯರು,ಉದ್ಯಮಿಗಳು, ಬುದ್ಧಿಜೀವಿಗಳು, ಯುದ್ಧ ತಜ್ಞರು ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ರಣರಂಗದಿಂದ ರವಾನೆಯಾದ ಹುತಾತ್ಮ ಯೋಧರ ಶವಪೆಟ್ಟಿಗೆಗಳು ‘ಕ್ಯಾಂಡಲ್‌ವಾಲಾ’ಗಳ ಮನೆಗಾಗಲಿ, ನಸುಕಿನಲ್ಲಿಯೇ ಹುಡುಗರನ್ನು ಎಬ್ಬಿಸಿ ಲಾಠಿ ತಿರುಗಿಸಲು ಹೇಳಿಕೊಡುವ ಮೂಲಕ ಹಿಂದೂಗಳ ರಕ್ಷಣೆಗೆ ಯುವಕರನ್ನು ಅಣಿಗೊಳಿಸುವ ‘ದೇಶಪ್ರೇಮಿ’ಗಳ ಮನೆಗಳಿಗಾಗಲಿ ಹೋಗಿರಲಿಲ್ಲ. ಅವೆಲ್ಲವೂ ಹೋಗಿರುವುದು ಯಾವುದೋ ಹಳ್ಳಿಯ ಬಡ ರೈತ-ಕೂಲಿಕಾರ್ಮಿಕರಮನೆಗಳಿಗೆ. ಕಾರ್ಗಿಲ್ ಯುದ್ಧದಲ್ಲಿ ಮಡಿದವರಲ್ಲಿ ಕರ್ನಾಟಕದ ಯೋಧರೂ ಇದ್ದರು. ಶವಪೆಟ್ಟಿಗೆಗಳನ್ನು ಅವರ ಮನೆಗೆ ತಲುಪಿಸಿದ ನಂತರ ತಿರುಗಿ ಆ ಮನೆ ಕಡೆ ಯಾರಾದರೂ ನೋಡಿದ್ದಾರಾ?

Monday, February 15, 2016

'ಎಲ್ರಿ ನಿಮ್ಮ ಹೆಂಡತಿ?'

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿದ್ದ ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಲು ಹೋದಾಕ್ಷಣ ಹಿರಿಯ-ಕಿರಿಯ ಗೆಳೆಯ-ಗೆಳತಿಯರೆಲ್ಲ ದಬಾಯಿಸುವಂತೆ ಕೇಳಿದ್ದು ಇದೊಂದೇ ಪ್ರಶ್ನೆ.
ಯಾವುದಕ್ಕೂ ಯಾವಾಗಲೂ ಒತ್ತಾಯಿಸಲು ಹೋಗದ ನಾನು ಹೆಂಡತಿಯನ್ನು ಬರುವಂತೆ ಒತ್ತಾಯಿಸಲಾರದೆ ನಾನೊಬ್ಬನೇ ಬಂದಿದ್ದರೂ ಗೆಳೆಯರು ಕೇಳಿದ ಪ್ರಶ್ನೆಯಿಂದ ಗಿಲ್ಟ್ ಅನುಭವಿಸಿದ್ದು ನಿಜ. ಇದಕ್ಕೆ ಸಣ್ಣ ಪರಿಹಾರ ಎಂಬಂತೆ ನನ್ನ ಜತೆ ಇರುವ ಹೆಂಡತಿಯ ಪೊಟೋ ಹುಡುಕಿ ಇಲ್ಲಿ ಹಾಕಿದ್ದೇನೆ.
ನನ್ನನ್ನು ಕಟ್ಟಿಕೊಂಡು ಕಳೆದ 24 ವರ್ಷಗಳಿಂದ ನಾನು ಮೈಮೇಲೆ ಎಳೆದುಕೊಳ್ಳುವ ತರಲೆ-ತಾಪತ್ರಯಗಳ ಜತೆ ಏಗುತ್ತಾ ಬಂದ ಈಕೆಯ ಹೆಸರು ಸುಜಾತ. ಕ್ರಿಸ್ ಮಸ್ ದಿನ ಸಂಜೆ ಮದುವೆಯಾಗಿದ್ದ ಕಾರಣ ರಾಮ,ಕೃಷ್ಣ, ಶಿವನ ಜತೆಯಲ್ಲಿ ಕ್ರಿಸ್ತನ ಆಶೀರ್ವಾದವೂ ಇದ್ದುದ್ದಕ್ಕೋ ಏನೋ ದಾಂಪತ್ಯ ಸುಖಮಯವಾಗಿದೆ.
(ಈ ಪೋಟೋ ಕಾಪು ದೀಪಸ್ಥಂಭದ ತುದಿಯಲ್ಲಿ ನಿಲ್ಲಿಸಿ ನನ್ನ ಮಗಳು ತೆಗೆದದ್ದು)

Sunday, January 31, 2016

ಸಹಬಾಳ್ವೆ ಸಾಗರ

ಮಂಗಳೂರಿನಲ್ಲಿ ನಡೆದ 'ಸಹಬಾಳ್ವೆ ಸಾಗರ' ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಮಾತನಾಡುತ್ತಾ, 'ಕೋಮುವಾದವನ್ನು ಎದುರಿಸಲು ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿದೆ' ಎಂದರು. ಸಮಾರಂಭದ ಕೊನೆಯಲ್ಪಿ ಪ್ರದರ್ಶನಗೊಂಡ ಪ್ರತಿಭಾ ನಿರ್ದೇಶನದ,'ಕೊಂದವರ್ಯಾರು' ನಾಟಕ. ಯೋಗೇಂದ್ರ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರದಂತಿತ್ತು.



Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Tuesday, January 19, 2016

ಹಸಿವು ವೈಯಕ್ತಿಕವಾದುದು, ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು.

ಹಸಿವಿಗಿಂತ ಅವಮಾನದ ನೋವು ಭೀಕರವಾದುದು. ಹಸಿವು-ಅವಮಾನಗಳನ್ನೇ ಉಂಡು ಬೆಳೆದ ಹಿರಿಯ ಜೀವಗಳು ಅವುಗಳನ್ನು ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಇದರಿಂದಾಗಿ ಸುಲಭದಲ್ಲಿ ಜೀವ ಬಿಟ್ಟುಕೊಡುವುದಿಲ್ಲ. ಇಲ್ಲದೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಹೆಣಗಳು ಸಾಲುಸಾಲು ಬೀಳಬೇಕಿತ್ತು, ರೈತರದ್ದಲ್ಲ. ಹುಟ್ಟಿನಿಂದಲೇ ಹಸಿವು ಮತ್ತು ಅವಮಾನವನ್ನು ಸಹಿಸಿಕೊಂಡು ಬಂದ ದಲಿತರು ರೈತರ ಹಾಗೆ ದುರ್ಬಲ ಮನಸ್ಸಿನವರಾಗಿದ್ದಿದ್ದರೆ ನಾವೆಲ್ಲ ನಿತ್ಯ ದಲಿತರ ಆತ್ಮಹತ್ಯೆಯ ಲೆಕ್ಕ ಹಾಕಿಕೊಂಡು ಕೂರಬೇಕಿತ್ತು.
ಹಸಿವು ವೈಯಕ್ತಿಕವಾದುದು, ಅದನ್ನು ಸಹಿಸಿಕೊಳ್ಳಬಹುದು. ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು. ಒಮ್ಮೊಮ್ಮೆ ಮುಖಮುಚ್ಚಿಕೊಳ್ಳಲು ಜಾಗವೇ ಸಿಗುವುದಿಲ್ಲ. ಹೊಸಪೀಳಿಗೆಯ ರೋಹಿತ ವೇಮುಲನಂತಹ ಸೂಕ್ಷ್ಮವಾದ ಹೂಮನಸ್ಸಿನ ಜೀವಗಳು ಬಹುಬೇಗ ಅವಮಾನದಿಂದ ಬಾಡಿಹೋಗುತ್ತವೆ, ಒಮ್ಮೊಮ್ಮೆ ಉದುರಿಹೋಗಿ ನಮ್ಮನ್ನೆಲ್ಲ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ ಅಣಕಿಸುತ್ತಿರುತ್ತವೆ.
ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.

Friday, January 8, 2016

ಪ್ರತಿಕ್ರಿಯಿಸಲು ಮೂರು ಕಾರಣ

ಪ್ರಿಯ ಪ್ರೇಮ ಶೇಖರ್ ಅವರೆ,
ಬೊಳುವಾರು ಅವರ ಹಳೆಯ ಲೇಖನದ ಬಗ್ಗೆ ಪ್ರತಿಕ್ರಿಯಿಸಲು ಎರಡು ದಿನ ತೆಗೆದುಕೊಂಡಿರುವ ನೀವು ಕೊನೆಗೂ ಮೂಲ ಲೇಖನವನ್ನು ಓದದೆ ತಮ್ಮೆಲ್ಲ ಶಬ್ದ ಭಂಡಾರವನ್ನು ನನ್ನ ಹೀಯಾಳಿಕೆ, ತೆಗಳಿಕೆ ಮತ್ತು ಬುದ್ದಿವಾದ ನೀಡಲು ಹಾಗೂ ಪರಿವಾರದ ಹಳೆಯ ಸರಕುಗಳನ್ನು ರಿಸೈಕಲ್ ಮಾಡಲು ಬರಿದುಮಾಡಿದ್ದೀರಿ.ನಿಮ್ಮಲ್ಲಿದ್ದಿರಬಹುದಾದ ಜ್ಞಾನ ಭಂಡಾರವನ್ನು ಬಳಸಿಯೇ ಇಲ್ಲ.
-ಇಷ್ಟು ಹೇಳಿ ಸುಮ್ಮನಾಗಬಹುದಿತ್ತೋ ಏನೋ?
ಆದರೆ ನಿಮ್ಮ ಹಿರಿತನಕ್ಕೆ ಸೂಕ್ತ ಗೌರವ ಕೊಡಬೇಕಾದುದು ನನ್ನ ಧರ್ಮ. ಪ್ರತಿಕ್ರಿಯಿಸಲು ಹೊಸದಾಗಿ ಓದಬೇಕಾದುದು ಏನೂ ಇಲ್ಲ. ಬರೆಯಲು ಸಮಯ ಬೇಕು. ಪುರುಸೊತ್ತು ಮಾಡಿಕೊಂಡು ನಿಮಗೆ ಪ್ರೇಮಪೂರ್ವಕವಾಗಿಯೇ ಉತ್ತರಿಸುತ್ತೇನೆ. ನಮಸ್ಕಾರ
Date: 05-01-2016
---------------------------------------------------------------------------------------------------------------------------------
Date: 07-01-2016
ಪ್ರೀತಿಯ ಪ್ರೇಮಶೇಖರ್, ನಿಮ್ಮ ಸ್ಟೇಟಸ್ ಗೆ ಪ್ರತಿಕ್ರಿಯಿಸಬೇಕೇ ಬೇಡವೇ ಎಂಬ ಬಗ್ಗೆ ನಾನೂ ಗೊಂದಲದಲ್ಲಿದ್ದೆ. ಇದಕ್ಕೆ ಮೂರು ಕಾರಣಗಳು:
1. ನಮ್ಮ ಚರ್ಚೆಗೆ ಕಾರಣವಾಗಿರುವ ಬೊಳುವಾರು ಲೇಖನವನ್ನು ನೀವು ಓದಿಲ್ಲ, ಯಾಕೆಂದರೆ ಅದರ ಪ್ರತಿ ನಿಮ್ಮಲ್ಲಿಲ್ಲ, ನನ್ನನ್ನು ಕೇಳಿದ್ದರೆ ಅದನ್ನು ಕಳಿಸಿಕೊಡುತ್ತಿದ್ದೆ. ಅದನ್ನು ಓದಿ ಅರಗಿಸಿಕೊಂಡು ನೀವೇ ಇತರರಿಗೆ ಬೋದಿಸುತ್ತಿರುವಂತೆ ‘ಅರಿವಿನ ವಿಕಾಸ ಮಾಡಿಕೊಂಡು’ ಸಾವಧಾನವಾಗಿ ಪ್ರತಿಕ್ರಿಯಿಸಬಹುದಿತ್ತು. ಆದರೆ ನಿಮಗೆಷ್ಟು ಅವಸರವಿತ್ತೆಂದರೆ ನಾನು ಅಂಟಿಸಿದ್ದ ಒಂದು ಪುಟದ ಪೋಟೋ ಪ್ರತಿಯ ಅಸ್ಪಷ್ಟ ಸಾಲುಗಳನ್ನು ಓದಿ ನೀವು ವಾಗ್ವಾದದ ಅಂಗಳಕ್ಕೆ ಹಾರಿಬಿಟ್ಟಿದ್ದೀರಿ. ಇದರಿಂದಾಗಿ ಸ್ಪರ್ಧೆ ಯಾವುದೆಂದು ಗೊತ್ತಿಲ್ಲದೆ ಅಖಾಡಕ್ಕೆ ಹಾರಿ ಎಡವಿಬಿಟ್ಟ ಕುಸ್ತಿಪಟುವಿನಂತೆ ನೀವು ಕಾಣುತ್ತಿದ್ದೀರಿ. ಒಂದು ಅವಕಾಶ ಸಿಕ್ಕಿತಲ್ಲಾ, ಏನಾದರೂ ಮಾಡಿ ಈ ನನ್ಮಗನಿಗೆ ಗುದ್ದಿ ಬಿಡಬೇಕು, ಈ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಈತನನ್ನು ವಿನಾಕಾರಣ ದ್ವೇಷಿಸುವ ಪಡ್ಡೆ ಹುಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಕಿಡಿಗೇಡಿತನದ ಆಲೋಚನೆಯೊಂದು ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಕಂಡೆ. ಅದರಲ್ಲಿ ನೀವು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿದ್ದೀರಿ. ಇಂತಹ ಯಶಸ್ಸು ಇನ್ನಷ್ಟು ನಿಮ್ಮ ಪಾಲಾಗಲಿ. ಯಾವುದನ್ನೂ ಬಚ್ಚಿಟ್ಟುಕೊಳ್ಳದೆ ನಿಮ್ಮನ್ನು ನೀವು ಇಷ್ಟುಚೆನ್ನಾಗಿ ಪರಿಚಯಿಸಿಕೊಂಡಿರುವಾಗ ನಾನೇನು ಪ್ರತಿಕ್ರಿಯಿಸಲಿ?
2. ಬೊಳುವಾರು ಬರೆದಿರುವುದು ಇಸ್ಲಾಂ ಹೇಗೆ ಪ್ರಪಂಚದಾದ್ಯಂತ ಪಸರಿಸಿತು ಎಂಬ ವಿಷಯದ ಮೇಲಿನ ಸಂಶೋಧನಾತ್ಮಕ ಪ್ರಬಂದ ಅಲ್ಲ. ‘ ಮುಸ್ಲಿಮನೆಂಬ ಪೂರ್ವಗ್ರಹದ ಕನ್ನಡಕವನ್ನು ಕಿತ್ತುಹಾಕಿ ಇತರರಂತೆ ನನ್ನನ್ನೂ ನಿಮ್ಮವನಂತೆ ಕಾಣಿರಿ’ ಎಂದು ಬೇಡಿಕೊಳ್ಳುತ್ತಿರುವ ಸಾಮಾನ್ಯ ‘ಮಹಮ್ಮದ’ ನ ಮನಸ್ಸಿನ ತಳಮಳ ಅದು. “ ....ಸೋಮನಾಥ ದೇವಾಲಯವನ್ನು ಆರ್ಥಿಕ ದಾಹದಿಂದ ಸೂರೆಗೈದ ಘಜನಿ ಮಹಮ್ಮದನನ್ನು ಮೂರ್ತಿ ಭಂಜಕನೆಂದು, ಹಿಂದೂ ಧರ್ಮದ ವಿರೋಧಿಯೆಂದು ವೈಭವೀಕರಿಸುತ್ತಾ, ಘಜನಿ ಎನ್ನುವುದು ಮರವೋ, ಕುದುರೆಯೋ ಎಂದು ಗೊತ್ತಿರದ ಬಡ ಬೀಡಿಕಾರ್ಮಿಕನ ಮಗ ‘ಮಹಮ್ಮದ’ ನನ್ನು ಕೂಡಾ ತೋಳಕುರಿಮರಿ ನೀರು ನ್ಯಾಯದಲ್ಲಿ ಇಂದಿನ ಮುಂದಿನ ಎಲ್ಲ ತಲೆಮಾರುಗಳನ್ನು ಮೋಸ ಗೊಳಿಸುತ್ತಿದ್ದಾರೆ...’’ ಎನ್ನುವ ಸಾಲುಗಳೇ ‘ಮುಸ್ಲಿಮನಾಗಿರುವುದೆಂದರೆ’ ಲೇಖನ ಎತ್ತಿದ್ದ ಮೂಲ ಪ್ರಶ್ನೆ. ಇದಕ್ಕೆ ನೀವು ಉತ್ತರಿಸಿಲ್ಲ.
ನೀವೇ ಬರೆದಂತೆ ಇಸ್ಲಾಂ ಕತ್ತಿ ಹಿಡಿದುಕೊಂಡೇ ಧರ್ಮ ಪ್ರಸಾರ ಮಾಡಿತೆಂದು ಒಪ್ಪಿಕೊಳ್ಳುವ. ನೀವು ಏನು ಮಾಡಬೇಕೆಂದಿದ್ದೀರಿ? ನಿಮಗೆ ಪರಿಚಯವೇ ಇಲ್ಲದ ‘ಮಹಮ್ಮದ’ ನನ್ನು ಬಿಟ್ಟುಬಿಡಿ, ನಿಮ್ಮ ಗೆಳೆಯರಾದ ಬೊಳುವಾರು ಇಲ್ಲವೇ ಜೆ ಎನ್ ಯು ನಲ್ಲಿ ನಿಮ್ಮ ರೂಮ್ ಮೇಟ್ ಆಗಿದ್ದ ಮುಜಫರ್ ಅಸ್ಸಾದಿ ಅವರ ತಲೆ ಕಡಿಯುತ್ತೀರಾ? ಇಂತಹ ಮನಸ್ಥಿಯವರ ಜತೆ ಏನು ಚರ್ಚೆ ಮಾಡಲಿ?
3. ಇಸ್ಲಾಂ ಧರ್ಮದ ಪ್ರಸಾರದ ಬಗ್ಗೆ ನೀವು ಹೇಳಿರುವುದರಲ್ಲಿ ಸಾಸಿವೆಯಷ್ಟಾದರೂ ಹೊಸತಿದೆಯೇ? ಹತ್ತು ಕಡಿಮೆ ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರು ಇದನ್ನೇ ಹೇಳುತ್ತಾ ಬಂದಿದ್ದಾರೆ. ಅದಕ್ಕಿಂತ ಮೊದಲು ಅದನ್ನು ಹಿಂದೂ ಮಹಸಭಾದ ನಾಯಕರು ಹೇಳಿದ್ದರು. ಅವರು ಹೇಳದಿರುವ ಒಂದು ಸಾಲು ನಿಮ್ಮ ಬರಹದಲ್ಲಿ ಎಲ್ಲಿದೆ ಎಂದು ತಿಳಿಸಿ? ಹೊಸ ಅರಿವಿನ ಬೆಳಕು ತಪ್ಪಿಯೂ ಒಳಸೂಸಬಾರದೆಂಬ ಹಟದಿಂದ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿಕೊಂಡು ಹಳೆಯ ಕಂತೆ ಪುರಾಣಗಳನ್ನು ಉರುಹಾಕಿಕೊಂಡು ಕೂತಿರುವವರ ಜತೆ ಚರ್ಚೆ ನಡೆಸಿ ಯಾರಿಗಾದರೂ ಏನು ಲಾಭ?
ಈ ಮೂರು ಕಾರಣಗಳಿಗಾಗಿ ಪ್ರತಿಕ್ರಿಯಿಸುವುದೇ ಬೇಡ ಎಂದಾಗಿತ್ತು. ಆದರೆ ನಮ್ಮ ಯುವಸಮುದಾಯದ ಬಹುದೊಡ್ಡ ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಅವರಲ್ಲಿ ಹೆಚ್ಚಿನವರು ಕುರುಡು ಭಕ್ತರು. ಸೂತ್ರಧಾರಿಗಳು ಹೇಳಿದಂತೆ ಕುಣಿಯುತ್ತಿರುವ ಪಾತ್ರಧಾರಿಗಳು. ಅವರೆಲ್ಲ ಮೆಳ್ಳೆಗಣ್ಣಿನ ಇತಿಹಾಸಕಾರರು ಹೇಳಿರುವುದೇ ನಿಜ ಎಂದು ತಿಳಿದು ಅದನ್ನೇ ಉರುಹೊಡೆದು ತಮ್ಮ ಆಯುಧಗಳನ್ನಾಗಿ ಮಾಡಿಕೊಂಡು ಕಂಡಕಂಡವರ ಮೇಲೆ ಎರಗುವವರು. ಕನಿಷ್ಠ ಅಂತಹವರಲ್ಲಿ ಕೆಲವರದ್ದಾದರೂ ಅರಿವಿನ ವಿಕಾಸವಾಗಲಿ ಎನ್ನುವುದಕ್ಕಾಗಿಯಾದರೂ ಪ್ರತಿಕ್ರಿಯಿಸಬೇಕೆಂದು ಅನಿಸಿತು. ನನ್ನ ಪ್ರತಿಕ್ರಿಯೆಗಾಗಿ ನಿಮ್ಮ ಚಡಪಡಿಕೆ ಕೂಡಾ ನನ್ನ ನಿರ್ಧಾರದ ಬದಲಾವಣೆಗೆ ಕಾರಣ.
ನೇರವಾಗಿ ವಿಷಯಕ್ಕೆ ಬರೋಣ ಅಂತಿದ್ದೆ. ಆದರೆ ನಿಮ್ಮ ಉತ್ತರದಲ್ಲಿದ್ದ ಪೀಠಿಕೆಯನ್ನು ನಿರ್ಲಕ್ಷಿಸಿದ್ದರೆ ನಿಮ್ಮ ಹಿರಿತನವನ್ನು ಅಗೌರವಿಸಿದಂತಾಗುತ್ತದೆ ಎಂದು ಮೊದಲು ಅದಕ್ಕೆ ಪ್ರತಿಕ್ರಿಯಿಸುವೆ. ನಿಜ ಹೇಳಬೇಕೆಂದರೆ ‘ ನಿಮ್ಮ ಓದು ಸೀಮಿತ ‘ ಎಂಬ ನನ್ನ ಬಗೆಗಿನ ನಿಮ್ಮ ತೀರ್ಪು ಓದಿದಾಗ ಹೆಚ್ಚೇನೂ ಓದದ ನನ್ನಜ್ಜನ ನೆನಪಾಯಿತು. ಆತ ಮಾತುಮಾತಿಗೆ ‘’ನಿನಗೇನೋ ಗೊತ್ತೋ? ನಾನು...’’ ಎಂದೇ ಮಾತು ಪ್ರಾರಂಭಿಸುತ್ತಿದ್ದದ್ದು. ಈ ಹಿರೀಕ ಏನೋ ನನಗೆ ಗೊತ್ತಿಲ್ಲದ್ದನ್ನು ಹೇಳುತ್ತಾನೆ ಎಂದು ಬೊಗಸೆಯೊಡ್ಡಿ ನಿಂತರೆ ಅದು ಖಾಲಿ ಖಾಲಿ. 50-60 ವರ್ಷಗಳಿಂದ ಹೇಳುತ್ತಾ ಬಂದುದನ್ನೇ ಅವನು ರಿಸೈಕಲ್ ಮಾಡುತ್ತಿದ್ದ.
ನಿಜ ಹೇಳಬೇಕೆಂದರೆ ನೀವು ಅಂಕಣಕಾರ ಪ್ರೇಮಶೇಖರ ಎಂದು ನನಗೆ ಗೊತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುವವರಿಗೆ ನಾವೆಲ್ಲ ಸೆಲೆಬ್ರೆಟಿಗಳು, ಹೆಸರು ಕೇಳಿದ ಕ್ಷಣ ಜನ ಗುರುತಿಸುತ್ತಾರೆ ಎಂಬ ಭ್ರಮೆ ಇರುತ್ತದೆ. ವಾಸ್ತವದಲ್ಲಿ ಹಾಗಿರುವುದಿಲ್ಲ ಎನ್ನುವುದನ್ನು ಸುಮಾರು ಮೂರು ದಶಕಗಳ ವೃತ್ತಿ ಅನುಭವದಿಂದ ಹೇಳುತ್ತಿದ್ದೇನೆ. ಜನರಿಗೆ ನಮ್ಮಂತಹವರನ್ನು ನೆನಪಲ್ಲಿಟ್ಟುಕೊಳ್ಳಲು ಪುರುಸೊತ್ತಿರುವುದಿಲ್ಲ. ಪಾಪ ಅವರಿಗೆ ತಲೆಕೆಡಿಸಿಕೊಳ್ಳಲು ಅವರದ್ದೇ ಸುಖ-ದು:ಖಗಳಿರುತ್ತವೆ. ನನ್ನ ಹೆಸರಿನ ಮಟ್ಟು ತೆಗೆದು ಗೂಗಲ್ ಗೆ ಹಾಕಿದರೆ ಅದೇ ಹೆಸರಿನ ನೂರು ಹೆಸರು ಬರುತ್ತದೆ. ನಿಮ್ಮದು ಅದೇ ರೀತಿಯ ಸಾಮಾನ್ಯ ಹೆಸರು.
ನಿಮ್ಮ ಪ್ರತಿಕ್ರಿಯೆಯನ್ನು ನಾನು ಓದಿದ್ದು ನಿಮ್ಮ ಸ್ಟೇಟಸ್ ನಲ್ಲಿಯಲ್ಲ. ಯಾರೋ ಮೋಹನಗೌಡ ಎಂಬವರೊಬ್ಬರು ಅದನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಅಂಟಿಸಿಕೊಂಡಿದ್ದರು. ಕೊನೆಯಲ್ಲಿ ಪ್ರೇಮಶೇಖರ ಎಂದಿತ್ತು. ನನಗೆ ನೀವು ಬರೆದ ವಿಷಯವಷ್ಟೇ ಪ್ರಮುಖವಾಗಿದ್ದ ಕಾರಣ ನಿಮ್ಮ ಹೆಸರಿನ ಸಂಶೋಧನೆಗೆ ಹೋಗಲಿಲ್ಲ, ಬೇಸರವಾಗಿದ್ದರೆ ಕ್ಷಮಿಸಿ. ನಾನು ಲೇಖಕನ ವ್ಯಕ್ತಿತ್ವವನ್ನು ಆತನ ಲೇಖನಗಳ ಮೂಲಕವೇ ಅರ್ಥಮಾಡಿಕೊಳ್ಳುತ್ತಾ ಬಂದವನು, ಹೆಸರು, ಅದಕ್ಕಿರುವ ಬಾಲ-ಬಿರುದಾವಳಿಗಳ ಮೂಲಕ ಅಲ್ಲ. ಕೆಲವರು ಇರುವುದು ಒಂದು ರೀತಿ, ಬರೆಯುವುದೇ ಇನ್ನೊಂದು ರೀತಿ. ನೀವು ಅವರ ಸಾಲಿಗೆ ಸೇರಿದವರಲ್ಲ ಎಂದು ನಾನು ನಂಬಿದ್ದೇನೆ.
ನಿಮ್ಮ ಪ್ರತಿಕ್ರಿಯೆ ಓದಿದ ನಂತರ ನಿಮ್ಮ ಅಪೇಕ್ಷೆಯಂತೆ ನೀವು ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆಗ ನನಗೆ ತಿಳಿದುಬಂದುದ್ದೆಲ್ಲವನ್ನೂ ಹೇಳಿ ನಿಮ್ಮ ಮನಸ್ಸಿಗೆ ನೋಯಿಸುವುದು ನನಗೆ ಇಷ್ಟ ಇಲ್ಲ. ನನ್ನ ಗೆಳೆಯರಾದ ಮುಜಫರ್ ಅಸ್ಸಾದಿ, ಅಶೋಕ ಶೆಟ್ಟರ್ , ಡೆಕ್ಕನ್ ಹೆರಾಲ್ಡ್ ನ ಕೆ.ಸುಬ್ರಹ್ಮಣ್ಯ ಮೊದಲಾದವರೆಲ್ಲರೂ ನಿಮಗೂ ಗೆಳೆಯರು ಎಂಬುದನ್ನು ತಿಳಿದುಕೊಂಡೆ. ಅವರೆಲ್ಲರ ಜತೆ ನಾನು ನಿಮ್ಮ ಬಗ್ಗೆ ಚರ್ಚಿಸಲು ಹೋಗಲಿಲ್ಲ. ಆದರೆ ಪಾಂಡಿಚೇರಿಯಲ್ಲಿ ನಿಮ್ಮ ಶಿಷ್ಯನಾಗಿದ್ದೆ ಎಂದು ಹೇಳಿಕೊಂಡವನೊಬ್ಬ ಫೇಸ್ ಬುಕ್ ನಲ್ಲಿ ಮೆಜೆಜ್ ಕಳಿಸಿದ್ದ. ಅವನು ವ್ಯಕ್ತಪಡಿಸಿರುವ ನೋವು, ಆಕ್ರೋಶ ಗುರುವೆನಿಸಿಕೊಂಡ ಯಾರಿಗೂ ಶೋಭೆ ತರುವಂತಹದ್ದಲ್ಲ. ಆ ಮೇಲೆ ನಿಮ್ಮ ಬರವಣಿಗೆಗಳನ್ನೂ ಒಂದಷ್ಟು ತಿರುವಿಹಾಕಿದೆ. ಗೌರಿ ಎನ್ನುವ ಒಬ್ಬ ಹೆಣ್ಣುಮಗಳನ್ನು ‘ಗೋರಿ’ ಎಂದು ಗೇಲಿಮಾಡುವ ವಿಕೃತಿ ಬಗ್ಗೆ ಏನು ಹೇಳಲಿ?
ನಿಮ್ಮ ಇನ್ನೊಂದು ಪ್ರಶ್ನೆ/ಸಲಹೆಗೆ ಕೂಡಾ ಉತ್ತರಿಸಬೇಕಾಗಿದೆ. ಇದನ್ನು ಬಹಳಷ್ಟು ಖಾಂಜಿಪೀಂಜಿಗಳು ಆಗಾಗ ಕೇಳುತ್ತಿರುತ್ತಾರೆ.. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಮಾಧ್ಯಮ ಸಲಹೆಗಾರರು ದನದ ಮಾಂಸ ತಿನ್ನುತ್ತಾರೆ ಎಂದು ಶಾಸಕ ಸಿ.ಟಿ.ರವಿ ವಿಧಾನಸಭೆಯಲ್ಲಿಯೇ ಹೇಳಿದ್ದರು. ಅವರೇನೋ ಆಗಾಗ ಇಂತಹ ಜೋಕ್ ಮಾಡುತ್ತಿರುತ್ತಾರೆ. ತಿಳಿದವರಾದ ನೀವು ಹೇಳಿ, ಸರ್ಕಾರದ ಸಂಬಳ ಪಡೆಯುತ್ತಿರುವವರು ಬಾಯಿಮುಚ್ಚಿಕೊಂಡಿರಬೇಕು, ದನದ ಮಾಂಸ ತಿನ್ನುವುದಿರಲಿ, ಅದರ ಬಗ್ಗೆ ಮಾತನಾಡಬಾರದು ಎಂದು ಸಂವಿಧಾನದ ಯಾವ ಪರಿಚ್ಛೇದ ಇಲ್ಲವೇ ಅಪರಾಧ ದಂಡ ಸಂಹಿತೆಯ ಯಾವ ಸೆಕ್ಷನ್ ಹೇಳಿದೆ? ಇದನ್ನು ನೀವು ತಿಳಿಸಿದರೆ ನಾನು ಸ್ವಯೀಚ್ಚೆಯಿಂದ ಗಲ್ಲುಗಂಬಕ್ಕೇರುತ್ತೇನೆ.
ನಮ್ಮ ಸಚಿವರು ಕೂಡಾ ಜನತೆಯ ತೆರಿಗೆಯ ಹಣದಿಂದ ಸಂಬಳ-ಸೌಲಭ್ಯ ಪಡೆದುಕೊಳ್ಳುವವರು. ನಿಮ್ಮ ಲಾಜಿಕ್ ಪ್ರಕಾರ ಅವರು ಕೂಡಾ ಒಂದು ಪಕ್ಷದ ವಿರುದ್ದ ಇಲ್ಲ ಪರ ಮಾತನಾಡಬಾರದೇ? ಹಿಂದಿನ ಸರ್ಕಾರ ನೇಮಿಸಿದ್ದ ಸೆನೆಟ್, ಅಕಾಡೆಮಿಕ್ ಕೌನ್ಸಿಲರ್ ಸದಸ್ಯರಾಗಿದ್ದವರು, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಮುಜುಗರ ಇಲ್ಲದ ಅಧಿಕಾರ ಅನುಭವಿಸುತ್ತಾ ಯಾವ ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೋ ಅದೇ ಸರ್ಕಾರವನ್ನು ಸಾರ್ವಜನಿಕವಾಗಿ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರಲ್ಲಾ ಅದು ಯಾವ ನೈತಿಕತೆಯ ಸಂಹಿತೆಯಲ್ಲಿ ಬರುತ್ತೆ? ಧಾರ್ಮಿಕ ಸಾಮರಸ್ಯವನ್ನು ಕೆಡಿಸುವುದೇ ತಮ್ಮ ಉದ್ಯೋಗ ಮಾಡಿಕೊಂಡಿರುವ ಕೇಸರಿ ಪಡೆಯ ನಾಯಕರ ಅಕ್ಕಪಕ್ಕದಲ್ಲಿ ಪೋಲಿಸ್ ಇಲಾಖೆ ನೀಡಿರುವ ಅಂಗರಕ್ಷಕರಿದ್ದಾರಲ್ಲಾ ಅವರಿಗೆ ಯಾರ ತೆರಿಗೆ ಹಣದಿಂದ ಸಂಬಳ ಕೊಡುತ್ತಿರುವುದು ಸ್ವಾಮಿ? ಫೇಸ್ ಬುಕ್ ನಲ್ಲಿ ಕೆಲವು ಪಡ್ಡೆ ಹುಡುಗರು ಟಿಆರ್ ಪಿಗಾಗಿ ಏನೇನೋ ಮಕ್ಕಳ ಕತೆ ಬರೆಯುತ್ತಿರುತ್ತಾರೆ ಅದನ್ನು ನಿಮ್ಮಂತಹವರು ಗಂಭೀರವಾಗಿ ತೆಗೆದುಕೊಳ್ಳುವುದೇ?
ಈಗ ನಿಮ್ಮ ಪ್ರತಿಕ್ರಿಯೆಯ ಕೇಂದ್ರಕ್ಕೆ ಬರುತ್ತೇನೆ. ಅರೆ, ಆಗಲೇ 800 ಶಬ್ದಗಳಾಗಿವೆ. ಒಂದೇ ಗುಟುಕಿಗೆ ಓದಿ ಅರಗಿಸಿಕೊಳ್ಳುವುದು ನಿಮಗೂ ಕಷ್ಟ. ಮುಂದಿನದ್ದನ್ನು ಎರಡನೆ ಕಂತಿನಲ್ಲಿ ಬರೆಯುತ್ತೇನೆ. (ಸದ್ಯ ಮುಖ್ಯಮಂತ್ರಿಗಳ ‘ತಲೆಕೆಡಿಸುವ’ ಸಲಹೆಗಳನ್ನು ತುರ್ತಾಗಿ ನೀಡಬೇಕಾಗಿದೆ) ಸದ್ಯಕ್ಕೆ ಇದನ್ನು ಓದಿರಿ. ನೀವು ಮುಂಬೈನಲ್ಲಿದ್ದೀರಿ ಎಂದು ನಿಮ್ಮ ಗೆಳೆಯ ಅಶೋಕ್ ಶೆಟ್ಟರ್ ಬರೆದಿರುವುದನ್ನು ಓದಿದೆ.. ನಾನು ಅಲ್ಲಿಯೇ ಹುಟ್ಟಿದವನು. ನನಗೆ ಅಲ್ಲಿ ಒಂದಿಷ್ಟು ಗೆಳೆಯರಿದ್ದಾರೆ. ಸಹಾಯ ಬೇಕಿದ್ದರೆ ತಿಳಿಸಿ. ವೈಯಕ್ತಿಕ ಸ್ನೇಹ ಬೇರೆ, ಸೈದ್ಧಾಂತಿಕ ಜಗಳ ಬೇರೆ. ಸದ್ಯದಲ್ಲಿಯೇ ನಿಮ್ಮ ಓದಿಗಾಗಿ ನನ್ನ ಪ್ರತಿಕ್ರಿಯೆಯ ಎರಡನೆ ಕಂತು ನಿಮ್ಮನ್ನು ತಲುಪಲಿದೆ. ನಮಸ್ಕಾರ.

Sunday, January 3, 2016

ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ

ಬೊಳುವಾರು ಅವರ ಹಳೆಯ ಲೇಖನವೊಂದನ್ನು ಉಲ್ಲೇಖಿಸಿ ನಾನು ಬರೆದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ) ‘ಮೂವತ್ತಾಲ್ಕು ವರ್ಷಗಳಲ್ಲಿ ನೇತ್ರಾವತಿಯಲ್ಲಿ ಸಾಕಷ್ಟು ನೀರು ಹರಿದಿದೆ..ಬೊಳುವಾರು ಅವರು ಬೆಳೆಯುತ್ತಾ ಹೋಗಿದ್ದಾರೆ.. ಅದನ್ನು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ,ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ, ಬೊಳುವಾರರನ್ನು ಅಂದಿನ ದಿನಗಳಿಗೆ ಕಟ್ಟಿಹಾಕಲು ನೋಡುತ್ತಿದ್ದಾರೆ..... ಎಂದೆಲ್ಲ ಬರೆದಿದ್ದಾರೆ. ಇದನ್ನು ಮೋಹನ ಗೌಡ ಎನ್ನುವವರು ನನ್ನ ವಾಲ್ ಗೆ ಅಂಟಿಸಿದ್ದಾರೆ.
ಅವರ ಬಡಬಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಬೊಳುವಾರು ಬರೆದಿದ್ದ ಲೇಖನದ ಕೆಲವು ಸಾಲುಗಳನ್ನು ಓದಿರಿ:
- ಕಾನೂನು ಶಾಸ್ತ್ರದಲ್ಲಿ ಅಪರಾಧ ಸಿದ್ದವಾಗುವ ತನಕ ಆರೋಪಿ ಅಪರಾಧಿಯೆನ್ನಿಸಲಾರ, ಆದರೆ ಭಾರತದಲ್ಲಿ ಆಕಸ್ಮಿಕವಾಗಿ ಹುಟ್ಟಿ ಬದುಕನ್ನು ಅನಿವಾರ್ಯವಾಗಿ ಎದುರಿಸಬೇಕಾಗಿರುವ ಪ್ರತಿಯೊಬ್ಬಮುಸ್ಲಿಮನೂ ತನ್ನ ನಿರಪರಾಧಿ ಸಾಬೀತಾಗುವ ತನಕ ಅಪರಾಧಿಯೇ ಆಗಿ ಉಳಿಯಬೇಕಾಗಿದೆ.
- ಮುಸ್ಲಿಮರು ಜನ್ಮತ: ಕ್ರೂರಿಗಳು, ಪ್ರತಿಯೊಂದು ಮನೆಯಲ್ಲೂ ಮಾರಕ ಆಯುಧಗಳಿವೆ, ಪ್ರತಿಯೊಂದು ಮಸೀದಿಯೂ ಶಸ್ತ್ರಾಗಾರ, ಮುಸ್ಲಿಮರೆಲ್ಲ ನಾಲ್ಕು ಮದುವೆಯಾಗಿ ನಲವತ್ತು ಮಕ್ಕಳನ್ನು ಹುಟ್ಟಿಸುತ್ತಾರಾದ್ದರಿಮದ ಅವರ ಜನಸಂಖ್ಯೆ ಅಧಿಕವಾಗುತ್ತದೆ. ಅವರು ಕುಟುಂಬ ಯೋಜನೆಗೆ ತಯಾರಾಗಿಲ್ಲ, ರಾಷ್ಟ್ರೀಯ ಜನಪ್ರವಾಹದೊಂದಿಗೆ ಬೆರೆಯುವುದಿಲ್ಲ. ಅವರು ಪಾಕಿಸ್ತಾನದ ಏಜಂಟರು. ಭಾರತ ಪಾಕಿಸ್ತಾನ ವಿರುದ್ಧ ಹಾಕಿಯಲ್ಲಿ ಸೋತಾಗ ರೇಡಿಯೋಗೆ ಹೂಮಾಲೆ ಹಾಕಿದರು ಇತ್ಯಾದಿ ಪುಟಗಟ್ಟಲೆ ಬರೆಯಬಹುದಾದ ಸಂದಿಗ್ದತೆಯಿಂದ ಭಾರತೀಯ ಮುಸ್ಲಿಮನು ಸಣ್ಣವನಾಗುವುದು ಅನಿವಾರ್ಯವಾಗಿದೆ.
- ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕಪಟ್ಟವೇರಿ ದವರೆಲ್ಲ ಮೇಲ್ವರ್ಗದಿಂದ ಬಂದವರು (ಅಂಬೇಡ್ಕರ್,ರಾಮ್ ಮೊದಲಾದವರು ಕೆಲವು ಅಪವಾದಗಳು, ಅಪವಾದಗಳು ವಾದವನ್ನು ಬಲಪಡಿಸುತ್ತದೆ). ಎಲ್ಲ ಕಾಲದಲ್ಲಿ ಮತ್ತು ಎಲ್ಲ ದೇಶಗಳಲ್ಲಿ ನಡೆದುಬಂದ ಸಂಪ್ರದಾಯ ಇದು. ರಾಜರುಗಳನ್ನು ಮೆಚ್ಚಿಕೊಳ್ಳುವವರು, ನೆಚ್ಚಿಕೊಳ್ಳುವವರು ಮತ್ತು ವಿರೋಧಿಸುವವರು ಕೂಡಾ ಮೇಲ್ವರ್ಗದಿಂದಲೇ ಬಂದವರಾಗಿರುತ್ತಾರೆ....ವಿದ್ಯೆ,ಬುದ್ದಿವಂತಿಕೆಗಳನ್ನು ತಮ್ಮ ಗುತ್ತಿಗೆಯನ್ನಾಗಿ ಮಾಡಿಕೊಳ್ಳುವ ಮೇಲ್ವರ್ಗದವರಿಗೆ ಯಾವುದೇ ಕಠಿಣ ಶ್ರಮ ಅಸಾಧ್ಯವಾಗಿರುವುದರಿಂದ ಅವರಿಗೆ ರಾಜಾಶ್ರಯ, ರಾಜನಂಟು, ಬದುಕಿನ ಅನಿವಾರ್ಯತೆಯೂ ಆಗಿರುತ್ತದೆ.
- ಭಾರತಕ್ಕೆ ಬ್ರಿಟಿಷರು ವ್ಯಾಪಾರಕ್ಕಾಗಿ (ಬ್ರಿಟಿಷರು ಭಾರತಕ್ಕೆ ವ್ಯಾಪಾರದ ನಿಮಿತ್ತ ಬಂದವರೆಂದೂ, ಮುಸ್ಲಿಮರು ಆಕ್ರಮಣ ಮಾಡಿದವರೆಂದೂ ಬರೆದಿರುವ ಚರಿತ್ರೆ ಪುಸ್ತಕಗಳನ್ನೇ ನಮ್ಮ ಮಕ್ಕಳು ಓದುತ್ತಿದ್ದಾರೆ) ಬಂದಾಗ ಅವರಿಗೆ ದುಂಬಾಲು ಬಿದ್ದು ಸರಕಾರಿ ಕೆಲಸಗಳನ್ನು ದಕ್ಕಿಸಿಕೊಂಡು ಐ ಎ ಎಸ್ ಆಗಿ ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಬಾರ್ ಅಟ್ ಲಾ ಓದಿಸಿದವರೂ ಭಾರತದೊಳಗೆ ಇಸ್ಲಾಂ ಆಕ್ರಮಣ ಮಾಡಿದಾಗ ಅವರ ಬೆನ್ನುಬಿದ್ದು ಪದವಿಯ ಆಸೆಗಾಗಿ ಮತಾಂತರಗೊಂಡು, ದಿವಾನರುಗಳಾಗಿ, ಜಮೀನ್ದಾರರಾಗಿ ಮೆರೆದವರೂ ಇದೇ ಮೇಲ್ವರ್ಗದ ಮಂದಿಗಳು ಮಾತ್ರ......
- ಭಾರತದ ಮುಸ್ಲಿಮರು ವಿಭಜನೆಯ ಪಿಂಡದ ಹೊರೆಯೊಂದಿಗೆ ಉಳಿಯಬೇಕೆಂದು ಬಯಸುವ ರಾಜಕೀಯ ಹಿಂದೂವಾದಿಗಳು ಚರಿತ್ರೆಯ ಪುಟಗಳನ್ನು ತಮ್ಮ ಕಣ್ಣಿನ ಅಳತೆಯಲ್ಲಿಯೇ ಓದುತ್ತಾ ಭಾಷ್ಯ ಬರೆಯುತ್ತಿದ್ದಾರೆ. ‘ಹಿಂದೂ’ ಎಂಬ ಪದವನ್ನು ಒಂದು ಜಾತಿಯ ಪದವಲ್ಲ, ಒಂದು ಪ್ರಾದೇಶಿಕ ಪದ ಎಂಬೀತ್ಯಾದಿ ಬರೆಯುತ್ತಾ ಎರಡು ಪ್ಯಾರಾ ಬರೆಯುವುದರಲ್ಲಿಯೇ ಗಲಿಬಿಲಿಗೊಂಡು ಗೊಂದಲದಲ್ಲಿಯೇ ಮುಕ್ತಾಯಗೊಳಿಸುತ್ತಾರೆ.
- ‘ನೀನು ಮಸೀದಿಗೆ ಹೋಗುವುದೇ ಇಲ್ವಾ?’ ಎಂಬ ಪ್ರಶ್ನೆಯಲ್ಲಿಯೇ ಖುಷಿಗೊಳ್ಳುವ ಗೆಳೆಯ ಗೋಪಾಲ ಅವನ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಬಹಳ ಜೋಪಾನವಾಗಿ ತಂದುಕೊಡುತ್ತಾನೆ....’ಇಷ್ಟೆಲ್ಲ ಮಾತನಾಡುವ ನೀನು ನಿನ್ನ ತಾಯಿಯ ಹೆಣವನ್ನು ಮಸೀದಿಗೆ ಯಾಕೆ ಕೊಂಡುಹೋಗಿ ದಪನಮಾಡಿದೆ ಎಂದು ನನ್ನೊಡನೆ ಪ್ರಶ್ನಿಸಿದ ಸುರೇಶ ಕಿಣಿಯೊಡನೆ ‘ಮತ್ತೇನುಮಾಡಬೇಕು?’ ಎಂದು ಪ್ರಶ್ನಿಸಿದರೆ ಸ್ಮಶಾನದಲ್ಲಿ ಸುಡಬೇಕಿತ್ತು ಎನ್ನುತ್ತಾನೆ.
- ಮುಸ್ಲಿಮನು ರಾಷ್ಟ್ರೀಯವಾದಿ ಆಗುವುದೆಂದರೆ ‘ಹಿಂದು’ ಆಗುವುದುಮಾತ್ರ . ಇಂತಹ ಸಣ್ಣ ಯೋಚನೆಯ ಹಿಂದೂಗಳದ್ದೇ ದೊಡ್ಡ ಗುಂಪಾಗಿರುವುದರಿಂದಲೇ ದೇಶದ ಮುಸ್ಲಿಮರು ಮತ್ತಷ್ಟು ಜಾತಿಯವಾದಿಯಾಗುತ್ತಾರೆ. ಹತ್ತರಲ್ಲಿ ಹನ್ನೊಂದಾಗದಿದ್ದರೆ, ಎರಡು ಕಡೆಗಳಿಂದಲೂ ಉಗಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
- ಗಜನಿ ವಿಗ್ರಹಗಳನ್ನು ಒಡೆದದ್ದು ಸೋಮನಾಥನ ಮೇಲಿನ ವೈರದಿಂದಲ್ಲ, ಅದರೊಳಗಿದ್ದ ಮಣಗಟ್ಟಲೆ ಬಂಗಾರವನ್ನು ದೋಚಲಿಕ್ಕಾಗಿ ಹಾಗೂ ಅಂದು ಗಜನಿಯ ಸೈನ್ಯದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು ಎನ್ನುವುದು ಇತಿಹಾಸದ ನಿಜಸಂಗತಿಗಳು.
- ಇಷ್ಟೆಲ್ಲ ಹೇಳಿದ ಮಹಮದರು ಕೊನೆಗೆ ‘’ ರಾಷ್ಟ್ರೀಯ ಜನಪ್ರವಾಹದಿಂದ ಮುಸ್ಲಿಮರು ಹೊರಗುಳಿಯಬೇಕಾಗಿ ಬಂದಿರುವ ನಮ್ಮ ದೇಶದ ವ್ಯವಸ್ಥೆ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸುವುದಕ್ಕೆ ಅನುಕೂಲವಾಗಬಲ್ಲ ಕೆಲವು ಪ್ರಾಮಾಣಿಕ ನಿಜಗಳನ್ನು ಹೇಳಲು ಪ್ರಯತ್ನಿಸಿದ್ದೇನೆ ಅಷ್ಟೆ. ಮುಂದಿನ ತಲೆಮಾರು ಕೂಡಾ ನಮ್ಮಂತೆ ಮೋಸ ಹೋಗದಿರಲು ನಾವೇನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಬೇಕು’’ ಎಂದು ಲೇಖನವನ್ನು ಕೊನೆಗೊಳಿಸುತ್ತಾರೆ.
ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ. ನೀವಂತೂ ಬದಲಾಗಿದಂತೆ ಕಾಣುವುದಿಲ್ಲ. ಇನ್ನೂ ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ. ಯಾವುದು ಬದಲಾಗಿದೆ?
ಹೌದು, ಆ ಲೇಖನದ ಲೇಖಕರು ಬದಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂಬ ಅನುಮಾನವನ್ನು ಗೆಳೆಯರು ವ್ಯಕ್ತಪಡಿಸುತ್ತಿರುವುದು ನಿಜ. ಅದಕ್ಕಲ್ಲವೇ ಈ ಚರ್ಚೆ ನಡೆಯುತ್ತಿರುವುದು. ಸೂಕ್ಷ್ಮವಾಗಿ ನೋಡಿದರೆ ಅಂತಹದ್ದೊಂದು ಸೂಚನೆ ಆ ಲೇಖನದಲ್ಲಿಯೂ ಕಾಣುತ್ತದೆ.

Saturday, January 2, 2016

34 ವರ್ಷಗಳ ಹಿಂದಿನ ಒಂದು ಬರಹ

ಪ್ರಿಯ ಬೊಳುವಾರ್,
ಹೊಸ ವರ್ಷ ಚಂದದ ಹೊಸ ಮನಸ್ಸುಗಳನ್ನು ತರಲಿ ಎಂದು ಹಾರೈಸಿದಕ್ಕೆ ಥ್ಯಾಂಕ್ಸ್. ಆದರೆ ಇಂತಹ ಒಳ್ಳೆಯ ಮನಸ್ಸು-ಬುದ್ದಿ ಮೂರು ದಶಕಗಳ ಹಿಂದೆ ನಿಮ್ಮಿಂದಲೇ ನನಗೆ ಪ್ರಾಪ್ತಿಯಾಗಿದ್ದು ಎನ್ನುವುದು ನಿಮಗೂ ತಿಳಿದಿಲ್ಲ. 1981ರ ಆಗಸ್ಟ್ 23ರ ಸುಧಾ ವಾರಪತ್ರಿಕೆಯಲ್ಲಿ ‘ಮಹಮದ’ ಎಂಬ ಹೆಸರಲ್ಲಿ ‘ಮುಸ್ಲಿಮನಾಗಿರುವುದೆಂದರೆ...’ ಎಂಬ ಲೇಖನ ಪ್ರಕಟವಾಗಿತ್ತು. (ಅದು ಪ್ರಕಟವಾಗಿದ್ದು ನೀವು ಅಂದುಕೊಂಡಂತೆ 42 ವರ್ಷಗಳ ಹಿಂದೆ ಅಲ್ಲ 34 ವರ್ಷಗಳ ಹಿಂದೆ)



ಆ ಲೇಖನವನ್ನು ಆ ಕಾಲದಲ್ಲಿ ನಾನು ಓದದೆ ಹೋಗಿದ್ದರೆ ಕರಾವಳಿಯ ಈಗಿನ ವಕ್ರಬುದ್ದಿಯ ಸಂತಾನದ ವಿದ್ಯಾರ್ಥಿಗಳ ಶಾಲೆಯಲ್ಲಿ ನಾನು ಮುಖ್ಯೋಪಾಧ್ಯಾಯನಾಗಿರುತ್ತಿದ್ದೆ. (ಪುಂಡರ ಗುರು ಎನ್ನಿ). ನನಗೆ ಆಗ 22ರ ಹರಯ. ಆಗಲೇ ಹೆಜಮಾಡಿಯ ಭಟ್ರು ಒಬ್ಬರು ಮುಂಜಾನೆಯ ಆರ್ ಎಸ್ ಎಸ್ ಬೈಠಕ್ ಗೆ ಬರಲು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಇನ್ನೂ ಗಾಂಧಿ,ಅಂಬೇಡ್ಕರ್, ಲೋಹಿಯಾ ಅವರನ್ನು ಗಂಭೀರವಾಗಿ ಓದಿರಲಿಲ್ಲ, ದಾರಿ ತಪ್ಪುತ್ತಿದ್ದೆನೋ ಏನೋ? ಅಂತಹ ಸಮಯದಲ್ಲಿ ನನ್ನ ಕಣ್ಣು ತೆರೆಸಿದ ಲೇಖನ ನಿಮ್ಮದು. ಮುಸ್ಲಿಮ್ ಸಮುದಾಯವನ್ನು ಧರ್ಮದ ಪೂರ್ವಗ್ರಹ ಬಿಟ್ಟು ಅರ್ಥಮಾಡಿಕೊಳ್ಳಲು ನೆರವಾದ ಲೇಖನ ಅದು.
ಅದರ ನಂತರದ ನನ್ನ ಬರವಣಿಗೆ-ಭಾಷಣಗಳಲ್ಲಿ ಆ ಲೇಖನದ ಅಂಶಗಳು ಅನೇಕಬಾರಿ ಬಂದುಹೋಗಿವೆ. ಇದರಿಂದಾಗಿಯೇ ನಾನು ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಒಂದೆ ಅಲ್ಲ ಎಂದು ಹೇಳಿ ನಿಮ್ಮ ಸ್ನೇಹಿತರಿಂದ ಅಂಡೆಪಿರ್ಕಿ ಎಂದು ಅನಿಸಿಕೊಂಡದ್ದು. ಆ ಲೇಖನ ಅಷ್ಟೊಂದು ನನ್ನನ್ನು ತಟ್ಟದೆ ಹೋಗಿದ್ದರೆ ಇಲ್ಲಿಂದ ದಿಲ್ಲಿ ವರೆಗೆ ಊರೂರು ಸುತ್ತಿದರೂ ಆ ಲೇಖನದ ಮಾಸಿದ ಪ್ರತಿಯನ್ನು 34 ವರ್ಷ ನಾನ್ಯಾಕೆ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದೆ ಸಾರ್ ?
ಆದರೆ ಆ ಲೇಖನದ ಲೇಖಕ ನೀವಿರಬಹುದೆಂಬ ಅನುಮಾನ ಇದ್ದಿದ್ದರೂ, ಅದು ಖಾತರಿಯಾಗಿದ್ದು ಆ ಮೇಲೆ ಯಾವುದೋ ಒಂದು ದಿನ ನೀವಾಗಿ ತಿಳಿಸಿದಾಗ. ಆ ಲೇಖನ ಬರೆದಿದ್ದ ದಿನಗಳಲ್ಲಿ ನೀವು ಕರಾವಳಿಯ ಬಂಡುಕೋರ ಮುಸ್ಲಿಮ್ ಲೇಖಕ. ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿಗಳನ್ನು ಎದುರುಹಾಕಿಕೊಂಡ ನೀವು ಕೊನೆಗೆ ಒಂದಷ್ಟು ದಿನ ಜೈಲು ಕೂಡಾ ಸೇರಬೇಕಾಯಿತು. ನಿಮ್ಮ ಕುಟುಂಬದವರು ಎದುರಿಸಿದ ಕಷ್ಟಗಳೂ ನನಗೆ ಗೊತ್ತು. ಅವೆಲ್ಲ ನಡೆದು ಕೆಲವು ವರ್ಷಗಳ ನಂತರ ನೀವು ಇದ್ದಕ್ಕಿದ್ದ ಹಾಗೆ ಸಾರ್ವಜನಿಕ ಬದುಕಿನಿಂದ ಮರೆಯಾಗಿಬಿಟ್ಟಿರಿ.
ಈ ರೀತಿ ತೆರೆಮರೆಗೆ ಸರಿದ ನಿಮ್ಮ ಮತ್ತು ಇತರ ಗೆಳೆಯರ ಬಗ್ಗೆ ಆಗಾಗ ಚರ್ಚೆ-ಸಂವಾದಗಳಲ್ಲಿ ಪ್ರಸ್ತಾಪವಾಗುತ್ತದೆ. ಅಂತಹ ಸಂದರ್ಭದಲ್ಲೆಲ್ಲ ನಾನು ನಿಮ್ಮ ಪರವಾಗಿ ವಕಾಲತು ಮಾಡುತ್ತಾ ಬಂದವನು. “ ಸಮಾಜ ಸುಧಾರಣೆಯ ಕೆಲಸ ರಿಲೇ ಓಟ ಇದ್ದ ಹಾಗೆ. ಬೊಳುವಾರು ಮತ್ತು ಗೆಳೆಯರು ಅವರಿಂದಾದಷ್ಟು ದೂರ ಓಡಿದ್ದಾರೆ. ಈಗ ನಿವೃತ್ತಿಯಾಗಿದ್ದಾರೆ. ರಿಲೇ ಓಟದ ಬೇಟನ್ ಅನ್ನು ಈಗ ಹೊಸತಲೆಮಾರಿನವರು ಕೈಗೆ ತೆಗೆದುಕೊಂಡು ಓಡಬೇಕು” ಎಂದು ನಾನು ಹೇಳುತ್ತಿರುತ್ತೇನೆ. ಮುಸ್ಲಿಮ್ ಧರ್ಮದಲ್ಲಿದ್ದ ಪ್ರಗತಿಪರ ಲೇಖಕ-ಲೇಖಕಿಯರು ಬಾಬರಿ ಮಸೀದಿ ಧ್ವಂಸದ ನಂತರ ಯಾಕೆ ಅನಿವಾರ್ಯವಾಗಿ ಮೌನವಾಗಬೇಕಾಯಿತು ಎನ್ನುವುದನ್ನು ಕೂಡಾ ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ಈಗಲೂ ಈ ಅಭಿಪ್ರಾಯಕ್ಕೆ ನಾನು ಬದ್ದ.
ಆದರೆ ಮಾತನಾಡಬೇಕಾಗಿದ್ದ ಕಾಲದಲ್ಲಿ ವಿರಾಗಿಯಂತೆ ಮೌನವಾಗಿದ್ದ ನೀವು ಈಗ ಮನುಷ್ಯ ಕುಲದ ಶತ್ರುಗಳ ಪರವಾಗಿ ಮಾತನಾಡಲು ಹೋರಾಟಗಾರರಂತೆ ತೋಳೇರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ನಿಮಗೆ ಯಾರನ್ನಾದರೂ ಸುಧಾರಣೆಮಾಡಬೇಕೆಂಬ ಪ್ರಾಮಾಣಿಕವಾದ ಇಚ್ಚೆ ಇದ್ದರೆ ಸೌಹಾರ್ದ ಬದುಕಿನ ಕನಸು ಕಟ್ಟಿಕೊಂಡ 22ರ ಹರಯದ ರಾಮ-ರಹೀಮರು ನಿಮ್ಮ ಸುತ್ತವೇ ಇದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿ. ಅವರಿಗೆ 32 ವರ್ಷದ ಹಿಂದಿನ ಬೊಳುವಾರು ಬೇಕಾಗಿದೆ. 

ಇದರಿಂದೆಲ್ಲ ಏನು ಉಪಯೋಗ ಎಂದು ಕೇಳುತ್ತೀರಾ? ನನ್ನನ್ನೊಮ್ಮೆ ನೋಡಿ. ನಿಮ್ಮ ಒಂದು ಲೇಖನದಿಂದ ಬದಲಾದವನು ನಾನು. ನಮ್ಮವರೆಂದು ಅನಿಸಿಕೊಳ್ಳಲು ನಿಮ್ಮ ಮನಸ್ಸು ಒಪ್ಪದೆ ಇದ್ದರೆ ನಿಮ್ಮ ಪಾಡಿಗೆ ನೀವು ವಿಶ್ರಾಂತ ಜೀವನ ಕಳೆಯುತ್ತಾ ಆರಾಮವಾಗಿರಿ. ನಮ್ಮ ಮನದೊಳಗಿನ ನಿಮ್ಮ ಹಳೆಯ ಬಿಂಬವಾದರೂ ಸುರಕ್ಷಿತವಾಗಿರುತ್ತದೆ. ಆದರೆ,ದಯವಿಟ್ಟು ನಮ್ಮೆದೆಗೆ ಗುರಿ ಇಟ್ಟಿರುವ ಬೇಟೆಗಾರರ ಬತ್ತಳಿಕೆಯ ಬಾಣವಾಗಬೇಡಿ,
ದ್ವೇಷಿಸಬೇಕಾದುದನ್ನು ದ್ವೇಷಿಸಬೇಕಾದಷ್ಟು ದ್ವೇಷಿಸದೆ ಇದ್ದರೆ, ಪ್ರೀತಿಸಬೇಕಾದುದನ್ನು ಪ್ರೀತಿಸಬೇಕಾದಷ್ಟು ಪ್ರೀತಿಸಲಾಗುವುದಿಲ್ಲ ಎಂದು ತಿಳಿದುಕೊಂಡವನು ನಾನು. ಕೋಮುವಾದಿಗಳನ್ನು ದ್ವೇಷಿಸದೆ ಇದ್ದರೆ ಜಾತ್ಯತೀತರನ್ನು ಪ್ರೀತಿಸುವುದು ಹೇಗೆ ಬೊಳುವಾರ್? ಓದು,ವಯಸ್ಸು,ಅನುಭವ ಎಲ್ಲದರಲ್ಲಿಯೂ ನಿಮ್ಮಿಂದ ಚಿಕ್ಕವನಾದ ನಾನು ತಿಳಿದುಕೊಂಡಿರುವುದು ತಪ್ಪಿರಲೂಬಹುದು. ತಪ್ಪೆನಿಸಿದರೆ ಹೊಟ್ಟೆಗೆ ಹಾಕಿಕೊಳ್ಳಿ, ಸರಿಯೆನಿಸಿದರೆ ತಲೆಗೆ ಹಾಕಿಕೊಳ್ಳಿ,

Friday, January 1, 2016

ಸ್ಪೂರ್ತಿಯಾಗುವ ಈ ಇಬ್ಬರು ಹೋರಾಟಗಾರರು

ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.
‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.

ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. "ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.
ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.
ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.

ಹೊಸ ವರ್ಷದ ಶುಭಾಶಯಗಳು

ಸಜ್ಜನರ ದನಿ ಮೊಳಗಲಿ...
ದುರ್ಜನರ ಸದ್ದಡಗಲಿ...
ಹೊಸ ವರ್ಷದ ಶುಭಾಶಯಗಳು..

Wednesday, December 30, 2015

'ನಾನವನಲ್ಲ, ನಾನವನಲ್ಲ'

'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್ನನ್ನು ದಾರಿಹೋಕನೊಬ್ಬ ಕೇಳಿದನಂತೆ:
'ಮತ್ತೆ ನೀನು ಯಾರು?
ನಾನು 'ರೋತಾ'
'ರೋತಾ'?

'ಹೌದು, ಹಿ..ಹಿ... ಎನ್ನುವುದನ್ನೇ ಇತ್ತೀಚೆಗೆ ಮರೆತುಬಿಟ್ಟಿದ್ದೇನೆ'' ಎಂದನಂತೆ ಪಡ್ಡೆಹುಡುಗ.

Sunday, December 27, 2015

ಸಾಮಾಜಿಕ ಜಾಲತಾಣ ಮತ್ತು `ಭಕ್ತ'ರು

ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಾಲಗಂಗಾಧರ್ ಕೃಪಾಪೋಷಿತ ಸಿಎಸ್ಎಲ್ ಸಿ ಮುಚ್ಚಲಾಯಿತು, ಕಾಮಿ ಸ್ವಾಮಿಯೊಬ್ಬನಿಂದ ಪೀಡಿತರಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ಕೊಟ್ಟರು, ಮೂಢನಂಬಿಕೆ ನಿಷೇಧ ಕಾಯಿದೆಗೆ ಒತ್ತಾಯಿಸಿ ಜಾಥಾ ನಡೆಯಿತು, ಡಾ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಿತು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಾಸು ಮಾಡಿದರು ಮತ್ತು ಸಹಮನಸ್ಕರು ಅವರನ್ನು ಬೆಂಬಲಿಸಿ ಸಭೆ ನಡೆಸಿದರು, ಟೌನ್ ಹಾಲ್ ಮುಂದೆ ಯಾರೋ ಬೀಫ್ ತಿಂದರು, ಮುಖ್ಯಮಂತ್ರಿಗಳು ‘ನಾನು ಬೀಪ್ ತಿಂದರೆ ಕೇಳಲು ನೀವು ಯಾರು’ ಎಂದು ಪ್ರಶ್ನಿಸಿದರು, ಮಂಗಳೂರಿನಲ್ಲಿ ಸಮಾನಮನಸ್ಕ ಯುವಕ-ಯುವತಿಯರು ಕೂಡಿ ಜನನುಡಿ ನಡೆಸಿದರು. ಮಂಗಳೂರಿನ ಹೋರಾಟಗಾರ್ತಿ ವಿದ್ಯಾ ದಿನಕರ್ ‘ದಿಲ್ ವಾಲೆ’ ಚಿತ್ರಪ್ರದರ್ಶನವನ್ನು
ಬಲತ್ಕಾರವಾಗಿ ತಡೆಹಿಡಿದಿದ್ದನ್ನು ವಿರೋಧಿಸಿ ಪೊಲೀಸರಿಗೆ ದೂರು ಕೊಟ್ಟರು, ಇದೇಕಾರಣಕ್ಕೆ ಅವರ ಮೇಲೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮಾತುಗಳ ಮೂಲಕ ವಾಗ್ದಾಳಿ ನಡೆದಾಗ ವಿದ್ಯಾ ಇನ್ನೊಂದು ದೂರು ಕೊಟ್ಟರು, ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಪ್ರಚಾರ ನಡೆಯಿತು. ಇವೆಲ್ಲದರ ಹಿಂದೆ ಇರುವ ವ್ಯಕ್ತಿ ಯಾರು ಗೊತ್ತೇ? ಅದೇ ಕಾಣೆ ಮೀನು ತಿನ್ನುವ ನಾನು. ಸಾಕ್ಷಿ ಬೇಕಿದ್ದರೆ ಫೇಸ್ ಬುಕ್ ನಲ್ಲಿ ಈ ‘ಭಕ್ತ’ ರ ಸ್ಟೇಟಸ್ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವ ‘ಹುಚ್ಚ ವೆಂಕಟ್’ ಗಳ ಪ್ರತಿಕ್ರಿಯೆ ನೋಡಿ.
ಮೇಲೆ ಉಲ್ಲೇಖಿಸಿರುವ ಎಲ್ಲ ಘಟನೆಗಳನ್ನು ಹೃತ್ಪೂರ್ವಕವಾಗಿ ನಾನು ಬೆಂಬಲಿಸುತ್ತೇನೆ, ಇವುಗಳ ಸೂತ್ರಧಾರ ನಾನೇ ಆಗಿದ್ದರೆ ನನ್ನ ಜನ್ಮ ಪಾವನವಾಗುತ್ತಿತ್ತು. ಸುಮ್ಮನೆ ಬಾಯಿಮುಚ್ಚಿಕೊಂಡು ಈ ಎಲ್ಲ ಸಾಧನೆಗಳ ಗರಿಯನ್ನು ನಾನೇ ಯಾಕೆ ಮುಡಿದುಕೊಳ್ಳಬಾರದು ಎಂದು ಕೂಡಾ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಒಳಗಿಂದ ಪ್ರಶ್ನಿಸುತ್ತಿರುವ ಆತ್ಮಸಾಕ್ಷಿಗೆ ಸತ್ಯ ಹೇಳಬೇಕಲ್ಲಾ?
ಸಿಎಸ್ ಎಲ್ ಸಿ ಮುಚ್ಚಲು ದೊಡ್ಡ ಹೋರಾಟವೇ ನಡೆದಿದೆ, ಹಲವಾರು ಹಿರಿಯರು, ಯುವಕರು ಇದಕ್ಕಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ, ನಾನಾ ಬಗೆಯ ಕಿರುಕುಳಗಳನ್ನು ಎದುರಿಸಿದ್ದಾರೆ. ಕೊನೆಗೂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಟೌನ್ ಹಾಲ್ ಮುಂದಿನ ಪ್ರತಿಭಟನೆಗಳಿರಲಿ, ಮಂಗಳೂರಿನಲ್ಲಿ ನಡೆದ ಜನನುಡಿಯಿರಲಿ ಇಲ್ಲವೇ ಇನ್ಯಾವುದೋ ಹೋರಾಟ ಇರಲಿ ಇದರ ಹಿಂದೆ ಕೂಡಾ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕೆಂಬ ಬದ್ದತೆಯ ಜತೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ-ನೆರವಾಗಬೇಕೆಂಬ ಕಾಳಜಿಯ ನೂರಾರು ಯುವಕ-ಯುವತಿಯರ ಶ್ರಮವಿದೆ. ಮುನೀರ್,ಅನಂತನಾಯಕ್, ನವೀನ್, ಭಾಸ್ಕರಪ್ರಸಾದ್, ದಿನೇಶ್ ಕುಮಾರ್, ದಯಾನಂದ್, ಹರ್ಷ, ಶ್ರೀಧರ್ ಪ್ರಭು, ಶ್ರೀನಿವಾಸ್,ಪ್ರಭಾ, ಅಕ್ಷತಾ, ಸುಭಾಷ್, ಕಿರಣ್ , ಚೇತನಾ, ಬಸವರಾಜ್, ಇರ್ಷಾದ್, ಪ್ರಶಾಂತ್, ಲಿಂಗರಾಜು, ಮೊದಲಾದವರು ಬದುಕಿನಲ್ಲಿ ಅನ್ಯಾಯ-ಅಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳದೆ ಇದೇಕಾರಣಕ್ಕೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡವರನ್ನು ಎದುರುಹಾಕಿಕೊಂಡವರು. ನವೀನ್ ಹೇಳಿರುವ ಹಾಗೆ ಎಸ್ ಇ ಝಡ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ವಿದ್ಯಾ ದಿನಕರ್ ಇಲ್ಲದೆ ಇದ್ದರೆ ಮಂಗಳೂರು ಭೋಪಾಲ್ ಆಗುತ್ತಿತ್ತು. ಮುನೀರ್ ಗೆ ಇರುವ ಪ್ರಾಣಬೆದರಿಕೆ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ.
ಈ ಯುವ ಹೋರಾಟಗಾರರ ಮುಂದೆ ನಾನು ಏನೂ ಅಲ್ಲ. ನಾನಿದ್ದರೂ, ಇಲ್ಲದೆ ಇದ್ದಿದ್ದರೂ ಇವರ ಹೋರಾಟ ಈಗಿನಂತೆಯೇ ಮುಂದುವರಿಯುತ್ತಿತ್ತು. ನನ್ನ ಬಲ-ಬೆಂಬಲದ ಅಗತ್ಯ ಇವರಿಗಿಲ್ಲ. ಈ ಯುವಕ-ಯುವತಿಯರು ನಡೆಸುವ ಹಲವಾರು ಸಾಹಸಗಳ ಬಗ್ಗೆ ನನಗೆ ಗೊತ್ತೇ ಇರುವುದಿಲ್ಲ. ಈ ನನ್ನ ಮಾತುಗಳು ಪಲಾಯನವಾದವೆಂದು ತಿಳಿದುಕೊಳ್ಳಬಾರದೆಂಬ ಕಾರಣಕ್ಕಾಗಿ ಮಾತ್ರ ಈ ಕೊನೆ ಮಾತು: ಈ ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ಅವರ ಮೇಲೆ ಭರವಸೆಯೂ ಇದೆ. ಕಷ್ಟದ ಸಮಯದಲ್ಲಿ ಇವರ ಹಿಂದೆ ಅಲ್ಲ, ಮುಂದೆ ಇರುತ್ತೇನೆ. ಇದಕ್ಕಾಗಿ ಯಾವ ಬೆಲೆ ತೆರಲೂ ಕೂಡಾ ಸಿದ್ದನಿದ್ದೇನೆ. ಬದುಕಿನಲ್ಲಿ ಕಳೆದುಕೊಳ್ಳಲು ಹೆದರುವಷ್ಟು ಯಾವುದೂ ದೊಡ್ಡದಿರುವುದಿಲ್ಲ.