Wednesday, July 1, 2015

ಬಾಪು ನಾಡಿನಲ್ಲಿ ಸತ್ಯವನ್ನು ಶೋಧಿಸುತ್ತಾ.... ( ಅನಾವರಣ, ಪ್ರಜಾವಾಣಿ, ಏಪ್ರಿಲ್ 12, 2010)

ನರೇಂದ್ರಮೋದಿ ರಾಜ್ಯಭಾರದ ಇತಿಹಾಸದ ಹೊಟ್ಟೆ ಬಗೆಯುವುದು ಕೂಡಾ ಬೀಭತ್ಸವಾದುದು. ದೇವರನ್ನು ನಂಬುವವರಾಗಿದ್ದರೆ ‘ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ’ ಎಂದು ಹಾರೈಸಿ ಸುಮ್ಮನಿರುವುದರಲ್ಲಿಯೇ ಮನಃಶಾಂತಿ ಇದೆ. ಆದರೆ ಇತಿಹಾಸದ ಹೊಟ್ಟೆಯಿಂದಲೇ ವರ್ತಮಾನ ಹುಟ್ಟಿರುವುದರಿಂದ ಇತಿಹಾಸವನ್ನು ಮರೆಯುವುದೂ ಕಷ್ಟ.
ಇತಿಹಾಸಕ್ಕೆ ಸಾಕ್ಷಿಯಾದವರಿಗೆ ಅದು ಇನ್ನೂ ಕಷ್ಟ. ಮರೆಯಬೇಕೆನಿಸಿದರೂ ಸಮಯ-ಸಂದರ್ಭ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ‘ಎರಡು ಸಾವಿರ ಜನರ ಸಾವಿಗೆ ವಿಷಾದವಾದರೂ ಬೇಡವೇ’ ಎಂಬ ನನ್ನ ಅಂಕ-ಣಕ್ಕೆ(ಮಾರ್ಚ್.29)ಹಿರಿಯಪತ್ರಕರ್ತ ಎಚ್. ಎನ್.ಆನಂದ್ ಅವರು ನೀಡಿರುವ ಪ್ರತಿಕ್ರಿಯೆ ಇಂತಹದ್ದೊಂದು ಸಂದರ್ಭವನ್ನು ಸೃಷ್ಟಿಸಿದೆ.

‘ಗುಜರಾತ್ ಕೋಮುಗಲಭೆಯಲ್ಲಿ ಹತ್ಯೆಗೀಡಾದ ಕೌಸರ್‌ಬಾನು ಹೊಟ್ಟೆಯಲ್ಲಿದ್ದ ಭ್ರೂಣ ಸುರಕ್ಷಿತವಾಗಿತ್ತು ಎಂದು ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದ ಸರ್ಕಾರಿ ವೈದ್ಯ ಡಾ.ಜೆ.ಎಸ್ಕನೋರಿಯಾ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಹೇಳಿದ್ದಾರೆ. ನೀವು ಬೇರೆಯೇ ಬರೆದಿದ್ದೀರಿ. ಯಾರನ್ನು ನಂಬುವುದು?’ ಎನ್ನುವುದು ಆನಂದ್ ಅವರಲ್ಲಿ ಹುಟ್ಟಿರುವ ಜಿಜ್ಞಾಸೆ.
‘ಕರ್ನಾಟಕಕ್ಕಿಂತ ಹೆಚ್ಚು ಗುಜರಾತ್ ಸುತ್ತಿರುವ, 2002ರ ಕೋಮುಗಲಭೆ ಮಾತ್ರವಲ್ಲ ಅಲ್ಲಿನ ಎರಡು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ಪ್ರತ್ಯಕ್ಷವಾಗಿ ತೆರಳಿ ವರದಿ ಮಾಡಿ ಆ ರಾಜ್ಯವನ್ನು ತಕ್ಕಮಟ್ಟಿಗೆ ತಿಳಿದುಕೊಂಡಿರುವ ನಿಮ್ಮ ಹಳೆಯ ಸಹೋದ್ಯೋಗಿಯಾದ ನನ್ನನ್ನೇ ನಂಬಿಬಿಡಿ ಸಾರ್’ ಎಂದು ಅವರಿಗೆ ನಮ್ರನಾಗಿ ಉತ್ತರಿಸಿ ಸುಮ್ಮನಿರಬಹುದಿತ್ತೋ ಏನೋ?
ಆದರೆ ಈ ರೀತಿ ಹುಟ್ಟಿಕೊಂಡ ಪ್ರಶ್ನೆಗಳಿಂದ ತೊಳಲಾಡುತ್ತಿರುವ ಇತರರ ಮನಃಶಾಂತಿಗಾಗಿಯಾದರೂ ಗುಜರಾತ್ ಕೋಮುಗಲಭೆಯ ರಕ್ತಸಿಕ್ತ ಇತಿಹಾಸದ ಪುಟಗಳನ್ನು ತಿರುವಿಹಾಕಿ ಕೆಲವು ಸತ್ಯಗಳನ್ನು ಅನಾವರಣಗೊಳಿಸಬೇಕಾಗಿದೆ.ಮೋದಿಯವರ ಬಗ್ಗೆ ಬರೆದ ಅಂಕಣಕ್ಕೆ ಪ್ರತಿಕ್ರಯಿಸಿದ ಕಿರಿಯ ಮಹಿಳಾ ಸಹದ್ಯೋಗಿಯೊಬ್ಬರು ‘ನೀವು ಬಿಲ್ಕಿಸ್ ಬಾನು ಬಗ್ಗೆಯೂ ಬರೆಯಬೇಕಿತ್ತು’ ಎಂದಿದ್ದರು. ನಮ್ಮ ಬಹಳಷ್ಟು ಜಾಗೃತ, ಸ್ವಾಭಿಮಾನಿ ಮತ್ತು ಸಾಹಸಿ ಹೆಣ್ಣುಮಗಳ ಪಾಲಿನ ‘ಹೀರೊಯಿನ್’ ಈ ಬಿಲ್ಕಿಸ್ ಬಾನು.
ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ಹೆದರಿ ಊರು ಬಿಟ್ಟು ಓಡಿಹೋಗುತ್ತಿದ್ದವರನ್ನು ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳು ನಡುದಾರಿಯಲ್ಲಿ ಅಡ್ಡಹಾಕಿ ಬಿಲ್ಕಿಸ್ಬಾನು ಮತ್ತು ಆಕೆಯ ತಾಯಿ ಸೇರಿದಂತೆ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೈಗೆ ಸಿಕ್ಕವರನ್ನೆಲ್ಲ ಸಾಯಿಸಿದ್ದರು. ಊರುಬಿಟ್ಟ ಹದಿನಾರು ಮಂದಿಯಲ್ಲಿ ಉಳಿದುಕೊಂಡವರು ಮೂವರು ಮಾತ್ರ. ದುರ್ಬಲ ಮನಸ್ಸಿನ ಹೆಣ್ಣುಮಕ್ಕಳಾದರೆ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ? ಆದರೆ ಮೈ-ಮನಸ್ಸು ತುಂಬಾ ಗಾಯಗಳಾಗಿದ್ದರೂ ಹಿಂಜರಿಯದ ಬಿಲ್ಕಿಸ್‌ಬಾನು ಬದುಕುಳಿದ ತನ್ನ ಮೂರುವರ್ಷದ ಮಗನನ್ನು ಕಟ್ಟಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.
ಅನಕ್ಷರಸ್ಥೆಯಾದ ಬಿಲ್ಕಿಸ್‌ಬಾನು ಹೇಳಿದ್ದೇ ಒಂದು, ಪೊಲೀಸರು ಬರೆದುಕೊಂಡದ್ದೇ ಇನ್ನೊಂದು. ಎರಡು ದಿನಗಳ ನಂತರ ಪತ್ರಿಕೆ¬ಯೊಂದು ಬಿಲ್ಕಿಸ್‌ಬಾನು ಕುಟುಂಬದ ಎಂಟು ಸದಸ್ಯರ ಕೊಳೆತುಹೋದ ಶವಗಳ ಚಿತ್ರ ಪ್ರಕಟಿಸಿದಾಗ ಪೊಲೀಸರು ಹೋಗಿ ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಕೆಲವು ತಿಂಗಳುಗಳ ನಂತರ ಪೊಲೀಸರು ‘ನಡೆದಿದ್ದು ನಿಜ, ಪತ್ತೆಯಾಗಿಲ್ಲ’ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಿದ್ದರು. ಅದನ್ನು ಒಪ್ಪದ ಬಿಲ್ಕಿಸ್‌ಬಾನು ಈ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸುಪ್ರೀಂ-ಕೋರ್ಟ್‌ಗೆ ಮೊರೆ ಹೋದರು. ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ ಸುಪ್ರೀಂಕೋರ್ಟ್ ಅದರ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಉಸ್ತುವಾರಿಯ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.
ಹೂತಿದ್ದ ಶವಗಳನ್ನೆಲ್ಲ ಹೊರತೆಗೆಸಿ ಮರು ಮರಣೋತ್ತರ ಪರೀಕ್ಷೆ ನಡೆಸಿದ ಸಿಬಿಐ ‘ಆರು ಮಂದಿ ಪೊಲೀಸರು ಹಾಗೂ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ವೈದ್ಯರು ಷಾಮೀಲಾಗಿ ಆರೋಪಿಗಳನ್ನು ಬಚಾವು ಮಾಡಲು ಸಾಕ್ಷ್ಯಗಳನ್ನೆಲ್ಲಾ ನಾಶಮಾಡಿದ್ದಾರೆ’ ಎಂದು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ 20 ಆರೋಪಿಗಳಲ್ಲಿ ಹನ್ನೊಂದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಬಿಲ್ಕಿಸ್‌ಬಾನು ಕುಟುಂಬದ ಮೃತ ಸದಸ್ಯರ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ಸರ್ಕಾರಿ ವೈದ್ಯರನ್ನು ನಂಬುವುದಾದರೆ ಕೌಸರ್ಬಾನು ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ.ಕನೋರಿಯಾ ಅವರನ್ನೂ ನಂಬಬಹುದೇನೋ? ಆದರೆ ಸುಪ್ರೀಂಕೋರ್ಟ್ ಕೂಡಾ ಗುಜರಾತ್‌ನ ಸರ್ಕಾರಿ ವೈದ್ಯರು ಮತ್ತು ಪೊಲೀಸರನ್ನು ಮಾತ್ರವಲ್ಲ ಅಲ್ಲಿನ ಮುಖ್ಯಮಂತ್ರಿಯವರನ್ನೇ ನಂಬಲಿಲ್ಲ. ಇದಕ್ಕಾಗಿಯೇ ಅಲ್ಲವೇ ಬೆಸ್ಟ್ ಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣಗಳನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು.
ಕೋಮುಗಲಭೆಯ ಕಾಲದಲ್ಲಿ ದಾಖಲಾಗಿದ್ದ 4,252 ಪ್ರಕರಣಗಳಲ್ಲಿ 2000 ಪ್ರಕರಣಗಳನ್ನು ಪೊಲೀಸರು ಕೈಬಿಟ್ಟಿದ್ದರೆನ್ನುವುದು ಗಮನಾರ್ಹ. ಈ ರೀತಿ ಮುಚ್ಚಿಹಾಕಲಾದ ಪ್ರಕರಣಗಳ ಮರುತನಿಖೆ ನಡೆಸುವಂತೆ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಇದಕ್ಕಾಗಿಯೇ ವಿಶೇಷ ತನಿಖಾ ದಳವನ್ನು ರಚಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಾಗಿದ್ದು ಇದೇ ತನಿಖಾದಳದ ಮುಂದೆ. ಒಂದು ರಾಜ್ಯದ ಸರ್ಕಾರವನ್ನೇ ಸುಪ್ರೀಂಕೋರ್ಟ್ ನಂಬದಿರುವಾಗ ಅಲ್ಲಿನ ಒಬ್ಬ ಸರ್ಕಾರಿ ವೈದ್ಯನನ್ನು ನಂಬುವುದು ಹೇಗೆ ಸಾಧ್ಯ?
ಗುಜರಾತ್‌ನಲ್ಲಿ ಆಮಿಷ ಇಲ್ಲವೇ ಬೆದರಿಕೆ ಮೂಲಕ ಹೇಗೆ ಸಾಕ್ಷಿಗಳ ಬಾಯಿ ಮುಚ್ಚಿಸಲಾಗುತ್ತಿದೆ ಎನ್ನುವುದಕ್ಕೆ ಬೆಸ್ಟ್‌ಬೇಕರಿ ಹತ್ಯಾಕಾಂಡ ಒಳ್ಳೆಯ ಉದಾಹರಣೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಜಾಹೀರಾ ಶೇಖ್ ಬರೋಡಾ ಸೆಷನ್ಸ್ ನ್ಯಾಯಾಲಯದ ಮುಂದೆ ತಿರುಗಿಬಿದ್ದಿದ್ದಳು. (ಸುಳ್ಳು ಸಾಕ್ಷಿ ಹೇಳಲು ಆಕೆಗೆ ಹದಿನೆಂಟು ಲಕ್ಷ ರೂಪಾಯಿ ನೀಡಿದ್ದಾಗಿ ಬಿಜೆಪಿ ಶಾಸಕ ಮಧು ಶ್ರೀವಾಸ್ತವ ತೆಹೆಲ್ಕಾ ಪತ್ರಿಕೆಯ ‘ಕುಟುಕು ಕಾರ್ಯಾರಚಾರಣೆ’ಯಲ್ಲಿ ಒಪ್ಪಿಕೊಂಡಿದ್ದರು).
ಅಲ್ಲಿ ಸುಳ್ಳುಹೇಳಿದ್ದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡ ಜಾಹೀರಾ ಶೇಖ್, ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ತನ್ನ ಮೂಲ ಹೇಳಿಕೆಯನ್ನೇ ಸಮರ್ಥಿಸಿಕೊಂಡಳು. ಆದರೆ ಇದನ್ನು ನಂಬದ ವಿಶೇಷ ನ್ಯಾಯಾಲಯ ಗುಜರಾತ್‌ನ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದ ಎಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತಲ್ಲದೆ ಜಾಹೀರಾಳನ್ನು ‘ಸುಳ್ಳು ಸಾಕ್ಷಿ’ (ಪರ್ಜುರ್)ಯ ಅಪರಾಧಕ್ಕಾಗಿ ಜೈಲಿಗೆ ಕಳುಹಿಸಿತು.
ಗುಜರಾತ್ ಕೋಮುಗಲಭೆಯ ಪ್ರಕರಣಗಳನ್ನು ಕೆದಕುತ್ತಾ ಹೋದರೆ ಅಲ್ಲಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ಷಾಮೀಲಾಗಿ ನ್ಯಾಯಕ್ಕೆ ಬಗೆದ ಇಂತಹ ದ್ರೋಹದ ಕತೆಗಳು ಒಂದೊಂದಾಗಿ ಹೊರಬೀಳುತ್ತವೆ.ಗುಜರಾತ್‌ನ ಅಂದಿನ ಪರಿಸ್ಥಿತಿ ಹೇಗಿತ್ತೆಂದರೆ ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ ವೃತ್ತಿಧರ್ಮ ಪಾಲನೆ ಮಾಡಲು ಹೊರಟರೂ ಅದು ಸಾಧ್ಯ ಇರಲಿಲ್ಲ. ಇದಕ್ಕೆ ಕೋಮುಗಲಭೆಯ ಕಾಲದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್.ಬಿ.ಶ್ರೀಕುಮಾರ್ ಸಾಕ್ಷಿ.
ಕೋಮುಗಲಭೆಯ ಕಾಲದಲ್ಲಿ ಇಡೀ ಆಡಳಿತ ವ್ಯವಸ್ಥೆ ಹೇಗೆ ಮುಸ್ಲಿಮರ ವಿರುದ್ಧವಾಗಿತ್ತೆಂಬ ಬಗ್ಗೆ ಶ್ರೀಕುಮಾರ್ ಗಲಭೆ ನಡೆದ ಮೂರು ತಿಂಗಳ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರಲ್ಲಿ ಹೇಳಿದದನ್ನೇ ಕೋಮುಗಲಭೆಯ ತನಿಖೆಗೆ ನೇಮಿಸಲಾಗಿದ್ದ ನಾನಾವತಿ-ಶಹಾ ಆಯೋಗದ ಮುಂದೆ ಶ್ರೀಕುಮಾರ್ ಹೇಳಿದರೆ ಏನು ಗತಿ ಎಂದು ಗಾಬರಿಯಾದ ಸರ್ಕಾರ ಅವರ ಮೇಲೆ ನಾನಾಬಗೆಯ ಒತ್ತಡ ಹೇರಿತ್ತು.
ಗೃಹ ಕಾರ್ಯ ದರ್ಶಿ ಜಿ.ಸಿ.ಮುರ್ಮು ಮತ್ತು ಸರ್ಕಾರಿ ವಕೀಲ ಅರವಿಂದ್ ಪಾಂಡ್ಯ ಅವರು ಶ್ರೀಕುಮಾರ್ ಅವರನ್ನು ಕರೆಸಿ ನಾನಾವತಿ ಆಯೋಗದ ಮುಂದೆ ‘ಏನು ಹೇಳಬೇಕು ಮತ್ತು ಏನು ಹೇಳಬಾರದು’ ಎಂಬ ಬಗ್ಗೆ ಬೋಧನೆ ಮಾಡಿದ್ದರು. ಹೇಳಿದಂತೆ ಕೇಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎನ್ನುವ ಬೆದರಿಕೆಯೂ ಬೋಧನೆಯಲ್ಲಿತ್ತು. ಇದನ್ನೆಲ್ಲ ಮೊದಲೇ ನಿರೀಕ್ಷಿಸಿದ್ದ ಶ್ರೀಕುಮಾರ್ ಆ ಸಂಭಾಷಣೆಯನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡು ನಂತರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದಾಗ ನರೇಂದ್ರಮೋದಿ ಸರ್ಕಾರ ಬತ್ತಲಾಗಿತ್ತು.
ಬೆಸ್ಟಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣ ಸೇರಿದಂತೆ ಪೊಲೀಸರು ಕೈಬಿಟ್ಟ ಪ್ರಕರಣಗಳ ಮರುತನಿಖೆಗೆ ಆದೇಶ ನೀಡಿದವರು ಸುಪ್ರೀಂಕೋರ್ಟ್‌ನ ಆಗಿನ ಮುಖ್ಯನ್ಯಾಯಮೂರ್ತಿ ವಿ.ಎನ್.ಖರೆ ಅವರು. ಕೋಮು-ಗಲಭೆಯಲ್ಲಿ ಬಲಿಯಾದವರಿಗೆ ಒಂದಷ್ಟು ನ್ಯಾಯಸಿಕ್ಕಿದ್ದರೆ ಅದು ಈ ಖರೆ ಎಂಬ ಪುಣ್ಯಾತ್ಮನಿಂದಾಗಿ. ‘ಗುಜರಾತ್ ಸರ್ಕಾರ ಮತ್ತು ಪ್ರಾಸಿಕ್ಯೂಷನ್ ಮೇಲೆ ನನಗೆ ನಂಬಿಕೆ ಉಳಿದಿಲ್ಲ. ನೀವು ಜನರನ್ನು ರಕ್ಷಿಸಬೇಕು, ತಪ್ಪಿತಸ್ಥರನ್ನು ಶಿಕ್ಷಿಸಬೇಕು.
ಇದಲ್ಲದೆ ಮತ್ತೆ ಯಾವುದು ರಾಜಧರ್ಮ? ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ, ಅದೇನು ಸ್ವಂತ ಆಸ್ತಿಯಲ್ಲ. ಜನರಿಗೆ ರಕ್ಷಣೆ ನೀಡಲಾಗದಿದ್ದರೆ ನೀವು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ...’ ಎಂದು 2003ರ ಸೆಪ್ಟೆಂಬರ್ ಹನ್ನೆರಡರಂದು ಮುಖ್ಯನ್ಯಾಯಮೂರ್ತಿಗಳು ತುಂಬಿದ ನ್ಯಾಯಾಲಯದಲ್ಲಿ ನರೇಂದ್ರಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಿವೃತ್ತಿಯಾದ ನಂತರ ಅವರು ಬರೆಯುತ್ತಾರೆ: ‘....ಸರ್ಕಾರವೊಂದಕ್ಕೆ ಮೂರು ಜವಾಬ್ದಾರಿಗಳಿರುತ್ತವೆ.ಮೊದಲನೆಯದು ಜನತೆಗೆ ಜಾತಿ-ಧರ್ಮದ ಭೇದವಿಲ್ಲದೆ ರಕ್ಷಣೆ ನೀಡುವುದು, ಎರಡನೆಯದು ಕಾನೂನು ಮುರಿದವರನ್ನು ಶಿಕ್ಷಿಸುವುದು ಮೂರನೆಯದು ಅನ್ಯಾಯ ಹಿಂಸೆಗೆ ಬಲಿಯಾದವರಿಗೆ ಪರಿಹಾರ ಕಲ್ಪಿಸುವುದು. ರಸ್ತೆ ನಿರ್ಮಿಸುವುದು, ಶಿಕ್ಷಣ ನೀಡುವುದು ಎಲ್ಲವೂ ಮುಖ್ಯ ಎನ್ನುವುದು ಸರಿ, ರಕ್ಷಣೆ ಇಲ್ಲದ ಜನತೆ ಈ ಸೌಲಭ್ಯಗಳನ್ನು ಕಟ್ಟಿಕೊಂಡು ಏನು ಮಾಡಬೇಕು?’
ಕೊನೆಯದಾಗಿ ವಿವಾದಾತ್ಮಕ ಕೌಸರ್‌ಬಾನು ಹತ್ಯೆ ಪ್ರಕರಣ. ಇದರಲ್ಲಿ ಮುಖ್ಯ ಆರೋಪಿಗಳು ಇಬ್ಬರು. ಒಬ್ಬ ರತಿಲಾಲ್ ರಾಥೋಡ್ ಅಲಿಯಾಸ್ ಭವಾನಿಸಿಂಗ್ ಎಂಬ ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್, ಇನ್ನೊಬ್ಬ ಬಾಬು ಬಜರಂಗಿ ಎಂಬ ವಿಶ್ವಹಿಂದೂ ಪರಿಷತ್ ನಾಯಕ. ಎರಡು ವರ್ಷಗಳ ಹಿಂದೆ ‘ಕುಟುಕು ಕಾರ್ಯಾಚರಣೆ’ಯಲ್ಲಿ ತೊಡಗಿದ್ದ ತೆಹೆಲ್ಕಾ ಪತ್ರಿಕೆಯ ವರದಿಗಾರನೆದುರು ಬಾಬು ಬಜರಂಗಿ ನರೋಡಾ ಪಾಟಿಯಾದಲ್ಲಿನ ತನ್ನ ‘ಸಾಹಸ’ಗಳನ್ನು ಕೊಚ್ಚಿಕೊಂಡಿದ್ದ. ‘. ಏಕ್ ವೋ ಪ್ರೆಗ್ನೆಂಟ್ ತಿ, ಉಸ್ಕೊ ಹಮೆ ಚೀರ್ ದೀಯಾ ತಾ...’ ಎಂದು ಹೇಳಿಕೊಂಡಿದ್ದ.
ಹಾಗಿದ್ದರೆ ಡಾ.ಕನೋರಿಯಾ ಮರಣೋತ್ತರ ಪರೀಕ್ಷೆ ನಡೆಸಿದ್ದು ಯಾರದ್ದು? ನಿಜವಾಗಿ ನಡೆದದ್ದೇನು ಎಂದು ಇನ್ನೊಬ್ಬ ಆರೋಪಿಯಾದ ಭವಾನಿಸಿಂಗ್‌ನನ್ನಾದರೂ ಕೇಳೋಣವೆಂದರೆ ಆತನನ್ನು ಎಲ್ಲಿ ಹುಡುಕುವುದು? ಐದು ವರ್ಷಗಳ ಹಿಂದೆ ಗಾಂಧಿನಗರದ ನರ್ಮದಾ ಕಾಲುವೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಪಾಪ ಪ್ರಜ್ಞೆಯಿಂದಾಗಿ ಹುಚ್ಚನಂತೆ ಆಡುತ್ತಿದ್ದ ಭವಾನಿಸಿಂಗ್ ಆತ್ಮಹತ್ಯೆ ಮಾಡಿಕೊಂಡ ಎನ್ನುವವರಿದ್ದಾರೆ. ಅದು ಆತ್ಮಹತ್ಯೆ ಅಲ್ಲ, ತಪ್ಪೊಪ್ಪಿಗೆ ಮಾಡಬಹುದೆಂಬ ಭಯದಿಂದ ಆತನನ್ನು ಸಾಯಿಸಲಾಗಿದೆ ಎಂದು ಹೇಳುವವರೂ ಇದ್ದಾರೆ. ಸತ್ಯ ಸಾವು ಕಂಡರಲ್ಲವೇ ಸುಳ್ಳು ಬದುಕುವುದು. ಸತ್ಯಕ್ಕೆ ಸಾವಿಲ್ಲ ಎಂದವರು ಯಾರು?

Tuesday, June 30, 2015

ಕೌಸರ್ ಬಾನು ನೆನಪಲ್ಲಿ ಕರಗಿಹೋದ ಸೆಲ್ಪಿ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಯ ಮೇರೆಗೆ ನಮ್ಮ ಅನೇಕ ಸ್ನೇಹಿತರು ಮಗಳ ಜತೆ ತೆಗೆಸಿಕೊಂಡ ಸೆಲ್ಪಿಗಳನ್ನು ನೋಡಿದಾಗ ಖುಷಿಯಾಗುತ್ತದೆ.ಈ ಚಿತ್ರಗಳನ್ನೆಲ್ಲ ನೋಡುತ್ತಿದ್ದಾಗ ನನಗೂ ನನಗಿರುವ ಒಬ್ಬಳೇ ಮಗಳ ಜತೆ ಸೆಲ್ಪಿ ತೆಗೆದು ಪ್ರಧಾನಿಯವರಿಗೆ ಕಳುಹಿಸಿಕೊಡಬೇಕೆನಿಸಿತು. ಹಾಗೆಂದು ಯೋಚಿಸಿದಾಕ್ಷಣ ನುಗ್ಗಿಬಂದು ದಾಳಿಮಾಡುತ್ತಿವೆ ಹಾಳು ನೆನಪುಗಳು. ನಮ್ಮ ಬಹಳಷ್ಟು ಯುವಜನರು ಯಾಕೆ ಇಷ್ಟೊಂದು ಖುಷಿಯಲ್ಲಿರುತ್ತಾರೆಂದರೆ ಅವರಿಗೆ ಇತಿಹಾಸದ ನೆನಪುಗಳಿರುವುದಿಲ್ಲ. ನನ್ನಂತಹ ಸ್ವಲ್ಪ ಹಿರಿಯರು ಅವರಂತೆ ಸದಾ ನಗುನಗುತ್ತಾ ಖುಷಿಖುಷಿಯಾಗಿರಲು ಸಾಧ್ಯವಾಗದೆ ‘ಸಿನಿಕ’ರೆಂದು ಕರೆಸಿಕೊಳ್ಳುತ್ತಾ ನರಳಾಡುತ್ತಿರುವುದು ಯಾಕೆಂದರೆ ನಮ್ಮಲ್ಲಿ ಕಾಡುವ ನೆನಪುಗಳಿರುತ್ತವೆ.
ಸೆಲ್ಪಿ ಸಂಭ್ರಮದಲ್ಲಿ ನಮ್ಮ ಅನೇಕ ಸ್ನೇಹಿತರು ಮೈಮರೆತಿರುವಾಗ ಯಾವುದೋ ನೆನಪುಗಳ ಕಾಟದಿಂದಾಗಿ ನಿದ್ದೆಬಾರದೆ ಬೆಳಗಾವಿಯ ಹೊಟೇಲ್ ನ ಹಾಸಿಗೆಯಲ್ಲಿ ಹೊರಳಾಡಿ ಮುಂಜಾನೆ ನಾಲ್ಕುಗಂಟೆಗೆ ಎದ್ದು ಇದನ್ನು ಬರೆಯಲುಕೂತಿರುವೆ.
ಸೆಲ್ಪಿ ಸಂಭ್ರಮದ ನಡುವೆ ನನ್ನನ್ನು ಕಾಡುತ್ತಿರುವ ಮಹಿಳೆ ಆಗಿನ್ನೂ 22ರ ಹರಯದವಳಾಗಿದ್ದ ಹೀನಾ ಕೌಸರ್ ಅಲಿಯಾಸ್ ಕೌಸರ್ ಬಾನು. ಆಕೆಯ ಹೊಟ್ಟೆಯಲ್ಲಿದ್ದ ಮಗು ಬದುಕಿದ್ದರೆ ಕಳೆದ ಭಾನುವಾರಕ್ಕೆ ಅದಕ್ಕೆ ಹದಿಮೂರು ವರ್ಷ ಐದು ತಿಂಗಳಾಗುತ್ತಿತ್ತು, ಕೌಸರ್ ಬಾನು ಕೂಡಾ ತನ್ನ ಮಗಳ ಜತೆ ಸೆಲ್ಪಿ ತೆಗೆದು ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡುತ್ತಿದ್ದಳೋ ಏನೋ? ಆದರೆ ಹಾಗಾಗಲಿಲ್ಲ.
‘ಚೋಟಾ ಕರ್ನಾಟಕ’ ಎಂದೇ ಕರೆಯಲಾಗುವ ಅಹ್ಮದಾಬಾದ್ ನ ನರೋಡಾ ಪಾಟಿಯಾದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ರಿಕ್ಷಾಚಾಲಕ ಫಿರೋಜ್ ಮತ್ತು ಕೌಸರ್ ಬಾನು ಬಡತನದಲ್ಲಿಯೂ ನೆಮ್ಮದಿಯಾಗಿದ್ದರು. 2002ರ ಫೆಬ್ರವರಿ 28ರಂದು ಗುಜರಾತ್ ನಲ್ಲಿ ಕೋಮುಹಿಂಸಾಚಾರ ಭುಗಿಲೆದ್ದಾಗ ಫಿರೋಜ್ ಮನೆಯಲ್ಲಿರಲಿಲ್ಲ. ‘ಸೀಮಂತ’ಕ್ಕೆ ಬಂದಿದ್ದ ಕೌಸರ್ ತಂದೆ,ಸಹೋದರ್ ಜಾಹಿದ್, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಆ ದಿನ ನರೋಡಾ ಪಾಟಿಯಾದ ಫಿರೋಜ್ ಮನೆಗೆ ನುಗ್ಗಿದ್ದ ದುರುಳರು ಮನೆಯಲ್ಲಿದ್ದವರನ್ನೆಲ್ಲ ಹೊರಗೆಳೆದು ತಂದಿದ್ದಾರೆ. ದುರುದ್ದೇಶವಿಟ್ಟುಕೊಂಡಿದ್ದ ದುರುಳರು ಕೌಸರ್ ತುಂಬು ಗರ್ಭಿಣಿಯೆಂದು ಗೊತ್ತಾದಾಗ ಇನ್ನಷ್ಟು ಕೆರಳಿರಬಹುದು. ಆ ಸಿಟ್ಟಿನಲ್ಲಿಯೇ ಆಕೆಯ ಹೊಟ್ಟೆಯನ್ನು ಸೀಳಿದ್ದಾರೆ, ಆ ಇರಿತಕ್ಕೆ ಭ್ರೂಣ ಹೊರಬಂದಿದೆ. ಅದರ ನಂತರ ಆಕೆಯನ್ನು ಬೆಂಕಿಗೆ ಎಸೆದಿದ್ದಾರೆ. 

ಓಡೋಡುತ್ತಾ ಬಂದ ಗಂಡ ಕಂಡದ್ದು ಹೆಂಡತಿಯ ಅರ್ಧಸುಟ್ಟ ನಗ್ನದೇಹ. ಆ ಹಿಂಸಾಕಾಂಡದಲ್ಲಿ ಫಿರೋಜ್ ತಂಗಿ, ಮಾವ, ಕೌಸರ್ ಬಾನು ಸೋದರನ ಪತ್ನಿ ಮತ್ತು ಇಬ್ಬರು ಮಕ್ಕಳು ಕೂಡಾ ಪ್ರಾಣ ಕಳೆದುಕೊಂಡಿದ್ದರು. ಈ ಕುಟುಂಬ ಕರ್ನಾಟಕ ಮೂಲದ್ದು. ಅಹ್ಮದಾಬಾದ್ ನಲ್ಲಿಯೇ ಇದ್ದ ಕೌಸರ್ ಬಾನು ತಂದೆ ಪ್ರಾಣ ಬೆದರಿಕೆಯ ಕಾರಣದಿಂದಾಗಿ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಹಿಂದಿರುಗಿದ್ದರು. ... ಇಷ್ಟೆಲ್ಲ ನಡೆಯುತ್ತಿರುವಾಗ ಗುಜರಾತ್ ಎಂಬ ರಾಜ್ಯದಲ್ಲಿ, ಈಗಿನ “ಬೇಟಿ ಬಚಾವೋ’ ಆಂದೋಲನದ ನೇತರಾರರೂ ಮತ್ತು ಈ ದೇಶದ ಪ್ರಧಾನಿಗಳೂ ಆಗಿರುವ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು. 'ರಾಜಧರ್ಮ' ಪಾಲಿಸು ಎಂದು ಅವರ ಪಕ್ಷದ ಹಿರಿಯರೂ ಮತ್ತು ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಕೂಗಿಕೂಗಿ ಹೇಳುತ್ತಿದ್ದರೂ ಮೋದಿ ಕಿವುಡಾಗಿದ್ದರು.

ಈ ನೆನಪುಗಳನ್ನು ಹೊತ್ತುಕೊಂಡು ನಾನು ನನ್ನ ಮಗಳೊಂದಿಗೆ ಸೆಲ್ಪಿ ತೆಗೆಸಿ ಪ್ರಧಾನಿಗೆ ಹೇಗೆ ಕಳುಹಿಸಲಿ? ನನ್ನ ಸ್ನೇಹಿತರ ಸೆಲ್ಪಿ ಸಂಭ್ರಮದಲ್ಲಿ ಹೇಗೆ ಕೂಡಿಕೊಳ್ಳಲಿ. ತುರ್ತಾಗಿ ನನಗೆ ನೆಮ್ಮದಿಯ ನಿದ್ದೆ ಬೇಕಾಗಿದೆ. ಗುಡ್ ಮಾರ್ನಿಂಗ್.

Thursday, June 18, 2015

ಸಾಂಸ್ಕೃತಿಕ ರಾಜಕಾರಣ

ಪ್ರಜೆಗಳ ಆರೋಗ್ಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ನಾಡಿನ ಪ್ರಭುಗಳು ಯೋಗ ದಿನ ಆಚರಿಸಲು ಹೊರಟರೆ ಅದಕ್ಕೆ ಧರ್ಮ, ಪಕ್ಷಗಳನ್ನು ತಳಕುಹಾಕಿ ಯಾಕೆ ರಾಡಿ ಮಾಡ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೇಲ್ನೋಟಕ್ಕೆ ಈ ಪ್ರಶ್ನೆ ಸದಾಶಯವನ್ನೊಳಗೊಂಡಂತೆ ಕಂಡರೂ, ಹೀಗೆ ಪ್ರಶ್ನಿಸುವವರೆಲ್ಲರೂ ಈ ಸದಾಶಯವನ್ನು ಮಾತ್ರ ಹೊಂದಿದ್ದಾರೆಂದು ಅನಿಸದಿರುವ ಕಾರಣದಿಂದಾಗಿಯೇ ವಿವಾದ ಹುಟ್ಟಿಕೊಂಡಿದೆ. ಕತ್ತಿ ಅದರಷ್ಟಕ್ಕೆ ಅಪಾಯಕಾರಿಯಾದುದಲ್ಲ, ಅದರ ಒಳಿತು-ಕೆಡುಕುಗಳು ಕತ್ತಿ ಕೈಗೆತ್ತಿಕೊಂಡವನ ಉದ್ದೇಶ-ದುರುದ್ದೇಶಗಳನ್ನು ಅವಲಂಬಿಸಿರುತ್ತದೆ. ಕತ್ತಿಯಿಂದ ಪೈರನ್ನಾದರೂ ಕೊಯ್ಯಬಹುದು, ಮನುಷ್ಯನ ಕತ್ತನ್ನಾದರೂ ಕೊಯ್ಯಬಹುದು.
ಯೋಗವು ವೈದ್ಯಕೀಯ ವಿಜ್ಞಾನದ ಭಾಗ ಎನ್ನುವುದರ ಬಗ್ಗೆ ಯಾರ ತಕರಾರೂ ಇಲ್ಲ. ಎಲ್ಲ ಧರ್ಮ, ಪಂಥ, ವರ್ಗದವರೂ ಯೋಗಾಭ್ಯಾಸ ಮಾಡುತ್ತಾರೆ. ಇದು ಹಲವು ರೋಗಗಳಿಗೆ ಯಶಸ್ವಿ ಚಿಕಿತ್ಸೆ ಎನಿಸಿಕೊಂಡಿರುವುದೂ  ಸಾಬೀತಾಗಿದೆ. ಆದರೆ ಯೋಗಾಭ್ಯಾಸದ ಪ್ರಚಾರಕ್ಕೆ ಹೊರಟವರು ಜನತೆಯ ಆರೋಗ್ಯ ಸುಧಾರಣೆ ದೃಷ್ಟಿಯನ್ನು ಮಾತ್ರ ಹೊಂದಿದ್ದಾರೆಯೇ ಎನ್ನುವುದಷ್ಟೇ ಈಗಿನ ಪ್ರಶ್ನೆ. ಘರ್ ವಾಪಸಿ, ಲವ್ ಜಿಹಾದ್, ನೈತಿಕ ಪೊಲೀಸ್‌ಗಿರಿ, ಜ್ಯೋತಿಷ, ವಾಸ್ತು ಬಗ್ಗೆ ಬೊಬ್ಬಿಡುವವರು ಯೋಗದ ಬಗ್ಗೆ ಮಾತನಾಡುವುದನ್ನು ಕಂಡಾಗ ಸಹಜವಾಗಿಯೇ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಈ ಅನುಮಾನ ನಿರಾಧಾರವಾದುದು ಕೂಡಾ ಅಲ್ಲ.
ಬಹಿರಂಗವಾಗಿ ಪಕ್ಷ ರಾಜಕಾರಣವನ್ನು, ಗುಪ್ತವಾಗಿ ಸಾಂಸ್ಕೃತಿಕ ರಾಜಕಾರಣವನ್ನು ನಡೆಸುತ್ತಿರುವ ಬಿಜೆಪಿಗೆ ಎರಡು ಬಗೆಯ ಅಜೆಂಡಾಗಳಿವೆ. ಈ ಪಕ್ಷದ ಬಹಿರಂಗ ಅಜೆಂಡಾ ಲೋಕಸಭಾ ಚುನಾವಣೆಗೆ ಮುನ್ನ  ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಅಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ನವದೆಹಲಿಯಲ್ಲಿರುವ ‘ಏಮ್ಸ್’ ಮಾದರಿಯ ಆಸ್ಪತ್ರೆಗಳಿಂದ ಹಿಡಿದು ಸೊಳ್ಳೆ ನಿಯಂತ್ರಣ ಮಿಷನ್ ಸ್ಥಾಪನೆವರೆಗೆ ಹಲವಾರು ಆಶ್ವಾಸನೆಗಳಿವೆ. ಎಲ್ಲಿಯೂ ಯೋಗ ದಿನಾಚರಣೆ ಇಲ್ಲವೆ ಯೋಗ ಪ್ರಚಾರದ ಉಲ್ಲೇಖ ಇಲ್ಲ. ಅದು ಇರುವುದು ಬಿಜೆಪಿಯ ಗುಪ್ತ ಅಜೆಂಡಾದ ಬುಟ್ಟಿಯಲ್ಲಿ.
ಬಿಜೆಪಿಯ  ಗುಪ್ತ ಸಾಂಸ್ಕೃತಿಕ ರಾಜಕಾರಣಕ್ಕೆ ಅದು ತನ್ನದೆಂದು ಹೇಳಿಕೊಳ್ಳುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಪ್ರೇರಣೆ. ಈ ಸಾಂಸ್ಕೃತಿಕ ರಾಷ್ಟ್ರೀಯತೆ ಬಹುಸಂಸ್ಕೃತಿಯನ್ನು ಒಪ್ಪುವುದಿಲ್ಲ.  ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸಾವರ್ಕರ್ ಪ್ರತಿಪಾದಿಸಿದ್ದ ಹಿಂದುತ್ವವೇ ಸ್ಫೂರ್ತಿ. ‘ಮುಸ್ಲಿಮ್ ಇಲ್ಲವೆ ಕ್ರೈಸ್ತರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೇ ಪ್ಯಾಲೆಸ್ಟೀನ್‌ನಲ್ಲಿದೆ. ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಸಾವರ್ಕರ್ ತಮ್ಮ ‘ಹಿಂದುತ್ವ’ ಪುಸ್ತಕದಲ್ಲಿ ಬರೆದಿದ್ದಾರೆ.
ಈ ವ್ಯಾಖ್ಯಾನವನ್ನು ಒಪ್ಪುವ ಪಕ್ಷ ಮತ್ತು ಸಂಘಟನೆ ಯೋಗಾಭ್ಯಾಸದ ಬಗ್ಗೆ ಪ್ರಚಾರದಲ್ಲಿ ತೊಡಗಿದಾಗ ಬೇರೆ ಧರ್ಮೀಯರಲ್ಲಿ ಆತಂಕ ಸಹಜ. ಸಾವರ್ಕರ್ ಅವರ ಹಿಂದುತ್ವದ ವ್ಯಾಖ್ಯಾನವನ್ನು ಒಪ್ಪುವುದಿಲ್ಲ ಎಂದಾದರೆ  ಮತ್ತು ‘ಭಾರತದ ನೆಲದಲ್ಲಿ ಹುಟ್ಟಿದವರೆಲ್ಲರೂ ಭಾರತೀಯರು’ ಎನ್ನುವ ಮಹಾತ್ಮ ಗಾಂಧೀಜಿ ವ್ಯಾಖ್ಯಾನವನ್ನು ಒಪ್ಪುವುದಾದರೆ, ಬೇರೆ ಧರ್ಮಗಳಲ್ಲಿಲ್ಲದ ಯೋಗವನ್ನು ಭಾರತೀಯ ಸಂಸ್ಕೃತಿ ಎಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ?  ಯೋಗಾಭ್ಯಾಸ ಮಾತ್ರವಲ್ಲ, ಆಯುರ್ವೇದ, ಶಾಸ್ತ್ರೀಯ ಸಂಗೀತ ಎಲ್ಲವೂ ಧರ್ಮಾತೀತವಾದವು. ಆದರೆ ಇವುಗಳನ್ನು ರಾಜಕೀಯ ಉದ್ದೇಶಕ್ಕಾಗಿ ಸಾಂಸ್ಕೃತಿಕ ರಾಜಕಾರಣದ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಹೊರಟಾಗಲೇ ವಿವಾದಗಳು ಹುಟ್ಟಿಕೊಳ್ಳುವುದು.
ಯೋಗವನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗವಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಹಿಂದೂ ಧರ್ಮದೊಳಗೂ ಭಿನ್ನಾಭಿಪ್ರಾಯಗಳಿವೆ. ಬೇರೆ ಧರ್ಮಗಳನ್ನು ಬಿಟ್ಟುಬಿಡಿ ದೇಶದ ಜನಸಂಖ್ಯೆಯಲ್ಲಿ ಶೇಕಡ 80ರಷ್ಟಿರುವ ಹಿಂದೂಗಳಲ್ಲಿ ಎಷ್ಟು ಮಂದಿ ಯೋಗವನ್ನು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ತಿಳಿದುಕೊಂಡಿದ್ದಾರೆ. ತಾತ-ಮುತ್ತಾತರನ್ನು ಬಿಟ್ಟುಬಿಡಿ, ನನ್ನ ತಂದೆ-ತಾಯಿ ಕೂಡಾ ಯೋಗದ ಬಗ್ಗೆ ಮನೆಯಲ್ಲಿ ಮಾತನಾಡಿದ್ದನ್ನು ನಾನು ಕೇಳಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಮತ್ತು ಟಿ.ವಿ. ಚಾನೆಲ್‌ಗಳ ಮೂಲಕ ಯೋಗ ಜನಪ್ರಿಯವಾಗಿರುವುದು ನಿಜ.
ಇದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದು ಕೂಡಾ ಈ ಜನಪ್ರಿಯತೆಗೆ ಕಾರಣ ಇರಬಹುದು. ಇಷ್ಟು ಮಾತ್ರಕ್ಕೆ ಯೋಗವನ್ನು ನಮ್ಮ ಸಂಸ್ಕೃತಿ-ಪರಂಪರೆ ಭಾಗ ಎನ್ನಲಾದೀತೇ? ಅವೈದಿಕ ಪರಂಪರೆಯಲ್ಲಿ ಮೈಮುರಿದು, ಬೆವರು ಸುರಿಸಿ ದುಡಿಯುವ ಶ್ರಮ ಸಂಸ್ಕೃತಿ ಇದೆಯೇ ಹೊರತು ಏಕಾಂತದಲ್ಲಿ ಕೂತು ಕಣ್ಣುಮುಚ್ಚಿ, ಕಾಲುಮಡಚಿ ನಡೆಸುವ ಯಾವ ಕಸರತ್ತುಗಳೂ ಇಲ್ಲ  ಎನ್ನುವುದೂ ಸತ್ಯ. ಶ್ರಮಜೀವಿಯಾದ ರೈತ-ಕಾರ್ಮಿಕರಿಗೆ ಈಗಲೂ ಯೋಗದ ಅಗತ್ಯ ಇಲ್ಲ. ಯೋಗ ಜನಪ್ರಿಯವಾಗಿರುವುದು ಶ್ರಮ ಸಂಸ್ಕೃತಿಯಿಂದ ದೂರವಾಗುತ್ತಿರುವ ನಗರಗಳಲ್ಲಿ.
ಕೇಂದ್ರ ಸರ್ಕಾರದ ಯೋಗ ದಿನಾಚರಣೆ ಗುರಿ ನಮ್ಮ ಶಾಲೆಗಳು. ಮಕ್ಕಳ ಆರೋಗ್ಯಕ್ಕೆ ಯೋಗ ನೆರವಾಗುತ್ತದೆ ಎಂದು ತಥಾಕಥಿತ ಆರೋಗ್ಯ ತಜ್ಞರು ಹೇಳುತ್ತಿರುವಾಗ ಆ ಮಕ್ಕಳು ಹಿರಿಯರ ಅಜ್ಞಾನಕ್ಕೆ ಮುಸಿಮುಸಿ ನಗುತ್ತಿವೆ. ಯಾವ ಮಕ್ಕಳೂ ಕಣ್ಣುಮುಚ್ಚಿ, ಕಾಲುಮಡಚಿ, ಬಾಯಿಮುಚ್ಚಿ ಬಹಳ ಹೊತ್ತು ಕೂರುವುದನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗೇ ಮಕ್ಕಳಿಗೆ ಅತಿ ಶಿಸ್ತಿನ ತರಗತಿಗಳು ಜೈಲುಗಳೆಂದು ಅನಿಸುವುದು. ಮಕ್ಕಳಿಗೆ ಕುಣಿಯುತ್ತಾ, ಕುಪ್ಪಳಿಸುತ್ತಾ, ಓಡುತ್ತಾ, ಆಡುತ್ತಾ ಇರುವುದೇ ಖುಷಿ.
ಇದರಿಂದಲೇ ಅವುಗಳಿಗೆ ಆರೋಗ್ಯ. ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಯಾವುದೇ ಸರ್ಕಾರ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಮೊದಲು ಎಲ್ಲ ಶಾಲೆಗಳಿಗೆ ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಬೇಕು, ಆಸಕ್ತಿ ಇರುವ ದೈಹಿಕ ಶಿಕ್ಷಣಾಧಿಕಾರಿಗಳನ್ನು ನೇಮಿಸಬೇಕು, ಕ್ರೀಡಾ ಸಲಕರಣೆ ಒದಗಿಸಬೇಕು. ಹೆಚ್ಚು ದೈಹಿಕ ಕಸರತ್ತಿನ ಅಗತ್ಯ ಇಲ್ಲದ, ಜೂಜು-ಮೋಜುಗಳಿಂದ ಮಕ್ಕಳ ಮನಸ್ಸು ಕೆಡಿಸುವ ಕ್ರಿಕೆಟ್ ಆಟದ ಎದುರು ಕಬಡ್ಡಿ, ಹಾಕಿ  ಸೇರಿದಂತೆ  ಭಾರತೀಯ ಕ್ರೀಡೆಗಳೆಲ್ಲ ಮೂಲೆಗುಂಪಾಗಿವೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದಲೇ ಯೋಗಾಭ್ಯಾಸ ಅಗತ್ಯ ಎನ್ನುವ ಬಿಜೆಪಿ ಸರ್ಕಾರದ ಸಮರ್ಥನೆ ಆತ್ಮವಂಚನೆಯಿಂದ ಕೂಡಿದೆ ಎನ್ನುವುದಕ್ಕೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಪೌಷ್ಟಿಕಾಂಶದ ಕೊರತೆಯಿಂದ ನಿಮಿಷಕ್ಕೊಂದು ಮಗು ಸಾಯುತ್ತಿರುವ ಭಾರತದಲ್ಲಿ ಸರ್ಕಾರದ ಆದ್ಯತೆ ಏನಿರಬೇಕು? ಯೋಗಾಭ್ಯಾಸವೇ? ಪೌಷ್ಟಿಕಾಂಶ ಆಹಾರವೇ? ಅನ್ನಭಾಗ್ಯ, ಕ್ಷೀರಭಾಗ್ಯವನ್ನು ಗೇಲಿ ಮಾಡುವ, ಬಹುಸಂಖ್ಯಾತ ಮಕ್ಕಳು ಬಯಸುವ ಪೋಷಕಾಂಶ ಭರಿತ ಮೊಟ್ಟೆಯನ್ನು ಶಾಲೆಗಳಲ್ಲಿ ನೀಡುವುದನ್ನು ಧಾರ್ಮಿಕ ಕಾರಣಕ್ಕಾಗಿ ವಿರೋಧಿಸುವವರು, ಮಕ್ಕಳ ಆರೋಗ್ಯಕ್ಕಾಗಿ ಯೋಗ ಎಂದು ಪ್ರತಿಪಾದಿಸುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿಲ್ಲವೇ?

Monday, June 15, 2015

ಸರಳ ವಿವಾಹ

ಪ್ರಜಾವಾಣಿಯ ಹಿರಿಯ ವರದಿಗಾರರಾದ,ನನ್ನ ಕಿರಿಯ ಮಿತ್ರ ವಿ.ಎಸ್.ಸುಬ್ರಹ್ಮಣ್ಯ ಮಂತ್ರಮಾಂಗಲ್ಯ ವಚನ ಸ್ವೀಕಾರದ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಮದುವೆ ನಡೆದದ್ದು ಕುಪ್ಪಳ್ಳಿಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ ಹುಂಚಿಕೊಪ್ಪ ಎನ್ನುವ ಮಲೆನಾಡಿನ ಸೆರಗಿನಲ್ಲಿರುವ ಕುಗ್ರಾಮದಲ್ಲಿ. ಇದು ತನ್ನೂರಿನ ಮಣ್ಣಿನ ಮಗ ಕುವೆಂಪು ಅವರಿಗೆ ಹೊಸತಲೆಮಾರು ಸಲ್ಲಿಸಿದ ಗೌರವವೂ ಹೌದು. ಬೋದಿಸುವುದಷ್ಟೇ ತಮ್ಮ ಕೆಲಸ ಬೋದಿಸಿದ್ದನ್ನು ಪಾಲಿಸುವುದಲ್ಲ ಎಂದು ಎಲ್ಲರಂತೆ ಪತ್ರಕರ್ತರೂ ತಿಳಿದುಕೊಂಡಿರುವ ಕಾಲದಲ್ಲಿ ಸುಬ್ರಹ್ಮಣ್ಯ ಮತ್ತು ನಂದಿನಿ ನಿರ್ಧಾರ ಮಾದರಿಯಾಗಿದೆ. ಈ ಸಮಾರಂಭದಲ್ಲಿ ಮಂತ್ರಮಾಂಗಲ್ಯದ ವಚನ ಬೋಧನೆಯನ್ನು ನನ್ನಿಂದ ಮಾಡಿಸಿದ ಕುಟುಂಬದ ಹಿರಿಯರಿಗೆ ನಾನು ಕೃತಜ್ಞನಾಗಿದ್ದೇನೆ

Monday, June 8, 2015

Lecture on contemporary cultural shuffles in Karnataka Sangha


News and pics: Rons Bantwal
Daijiworld Media Network – Mumbai (EP)
Mumbai, June 8: “Cultural shuffles always occur in development oriented society. The undivided Dakshina Kannada district is the cradle of several cultures. However there is cultural domination these days which is dangerous” lamented Chief media advisor to the Chief Minister of Karnataka and senior journalist Dinesh Amin Mattu.





He was addressing 'Sahitya Chintana 20', programme recently held by Karnataka Sangha, Mumbai at their Samarasa Bhavana in Mahim west.
Amin who gave a lecture on Contemporary cultural shuffles said that there are several definitions for culture. “It is a subject for debate. It is not easy to reflect culture. Culture is a definition of love of language and life of values. Conflict is not a part of our culture. So may the Indian culture be free from friction”, he suggested.
Dr Vyasaraya Ninjuru, advocate Vasanth Kalakoti, Mamatha Rao, Dr S K Bhavani, Dr Sunitha M Shetty, Mohan Marnad, Sushila Devadiga, Harish K Hejmadi, S T Vijayakumar Thingalaya, Surekha Devadiga, Sadaya, Gopala Trasi and others participated in the discussion programme held later.
Former president of the Sangha, Manohar M Kori presented a shawl and memento to Mattu and honored him. Honorary secretary of the Sangha, Omdas Kannangar welcomed, gave a key note address and compered the programme. Dr Bharathkumar Polipu proposed Vote of thanks.
                                                                                                               (Source: Daijiworld webiste)

Wednesday, May 13, 2015

ಹಳ್ಳೀಗಾಡಿನ ಪ್ರತಿಭೆ ಕೇಶವ ವಿಟ್ಲ

ನಮ್ಮಂತಹ ಅಬ್ಬೆಪಾರಿಗಳನ್ನೆಲ್ಲ ಗುರುವಾಗಿ ಸಲುಹಿದ ವಡ್ಡರ್ಸೆ ರಘುರಾಮ ಶೆಟ್ಟಿಯವರ 'ಕ್ಯಾಮೆರಾ' ಕಣ್ಣಿಗೆ ಬಿದ್ದ ಹಳ್ಳಿಗಾಡಿನ ಪ್ರತಿಭೆ ಕೇಶವ ವಿಟ್ಲ. ಆ ಕಾಲದ ಬಾಲಪ್ರತಿಭೆ ಇಂದು ಅಂತರರಾಷ್ಟ್ರೀಯ ಪೋಟೋಗ್ರಾಪರ್ ಗಳ ಹೆಗಲಿಗೆ ಸಮನಾಗಿ ನಿಲ್ಲುವಂತಹ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾನೆ.
ವಡ್ಡರ್ಸೆಯವರು ಯಾರ ತಲೆಗೆ ಕೈ ಇಟ್ಟಿದ್ದರೋ ಅವರ್ಯಾರೂ ಕಳೆದು ಹೋಗಿಲ್ಲ. ವೃತ್ತಿಯಲ್ಲಿ ಕಸುಬುಗಾರಿಕೆ, ಹೊಸ ಸವಾಲುಗಳನ್ನು ಹುಡುಕಿಕೊಂಡು ಹೋಗುವ ಸಾಹಸ ಮತ್ತು ಜನಪರವಾದ ಕಾಳಜಿ ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಕಾಣಬಹುದಾದ ಸಾಮಾನ್ಯ ಗುಣಗಳು. ಇವೆಲ್ಲ ಗುಣಲಕ್ಷಣಗಳು ಈ ವಿಟ್ಲ ನೆಂಬ 'ಬಾಲಕ'ನಲ್ಲಿದೆ.
ಇಂದು ಈತನ ಮಹತ್ವಾಕಾಂಕ್ಷೆಯ ಚಿತ್ರಪುಸ್ತಕ ಬಿಡುಗಡೆ. ಈ ಪುಸ್ತಕ ನಮ್ಮನ್ನು ಬೆರಗಿನ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತನ್ನ ಬಾಲಚೇಷ್ಠೆಯ ನಡುವೆಯೂ ಹತ್ತು ವರ್ಷಗಳ ಕಾಲ ನಡೆಸಿದ ತಪಸ್ಸಿನ ಫಲ ಈ ಪುಸ್ತಕ. ಇಂದು ಸಂಜೆ ನಾಲ್ಕು ಗಂಟೆಗೆ ಚಿತ್ರಕಲಾ ಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಬಿಡುಗಡೆಗೊಳಿಸಲಿದ್ದಾರೆ. ಬನ್ನಿ, ಈ ಸಾಹಸಿಯನ್ನು ಹರಸಿ ಬೆಂಬಲಿಸಿ.

Sunday, May 10, 2015

ಅಮ್ಮನ ದಿನ

   ಒಂದಿಷ್ಟು ತ್ಯಾಗದ ಗುಣ ಇಲ್ಲದ ಯಾವ ಪ್ರೀತಿಯೂ ಪರಿಪೂರ್ಣವಾದುದಲ್ಲ. ತಮ್ಮ ಅಮ್ಮ-ಅಪ್ಪನಿಗೆ ಇಂತಹ ಪ್ರೀತಿ ನೀಡಿದವರು/ನೀಡುತ್ತಿರುವವರು ಕೆಟ್ಟವರಾಗಿರಲು ಸಾಧ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಮನುಷ್ಯನನ್ನು ಅರ್ಥಮಾಡಿಕೊಳ್ಳಲು ನಾನೇ ರೂಪಿಸಿಕೊಂಡ ಈ ಸರಳ ಸೂತ್ರ ನನ್ನ ಸಂಪರ್ಕಕ್ಕೆ ಬಂದ ಬಹುಪಾಲು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು ನನಗೆ ನೆರವಾಗಿದೆ.
   ಪ್ರೀತಿ ಎಂದರೆ ನಮ್ಮಲ್ಲಿದ್ದುದನ್ನು ಕೊಡುವುದಲ್ಲ,ನಾವು ಪ್ರೀತಿಸುವವರ ಅವಶ್ಯಕತೆ ಏನಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಅದನ್ನು ಕೊಡುವುದು. ಈಗ ನನ್ನೂರಿಗೆ ಹೋದರೆ ಬಹಳ ಬದಲಾವಣೆಯಾಗಿದೆ. ಬಾಲ್ಯದಲ್ಲಿ ನಾನು ಕಂಡಿದ್ದ ಬಡತನದ ಬೇಗೆ ಕಾಣುವುದಿಲ್ಲ. ಆದರೆ ಇಡೀ ಊರು ವೃದ್ಧಾಶ್ರಮದಂತೆ ಕಾಣುತ್ತಿದೆ.
   ಊರಿನಲ್ಲಿ ನನ್ನ ಪರಿಚಯದ ನಿವೃತ್ತ ಶಿಕ್ಷಕರ ಕುಟುಂಬವೊಂದಿದೆ. ಅವರ ಮಗಳು-ಅಳಿಯ ಅಮೆರಿಕಾದಲ್ಲಿದ್ದಾರೆ.ಮಗ-ಸೊಸೆ ಇಂಗ್ಲಂಡ್ ನಲ್ಲಿದ್ದಾರೆ. ಇಬ್ಬರು ಮಕ್ಕಳನ್ನು ಎಂಜಿನಿಯರ್ ಮಾಡಲು ಈ ಶಿಕ್ಷಕ ದಂಪತಿಗಳು ಬಹಳ ಕಷ್ಟಪಟ್ಟಿದ್ದಾರೆ. ಮಕ್ಕಳು ಕೆಟ್ಟವರೇನಲ್ಲ. ತಿಂಗಳುತಿಂಗಳು ದುಡ್ಡು ಕಳುಹಿಸುತ್ತಾರೆ. ಆಗಾಗ ಸ್ಕೈಪ್ ನಲ್ಲಿಮಾತನಾಡುತ್ತಾರೆ. ಮೊಮ್ಮಕ್ಕಳನ್ನು ಟಿವಿ ಪರದೆಯಲ್ಲಿ ತೋರಿಸುತ್ತಾರೆ. 2-3 ವರ್ಷಕ್ಕೊಮ್ಮೆ ಊರಿಗೂ ಬರುತ್ತಾರೆ. ಇದನ್ನೇ ಹೆತ್ತವರನ್ನು ಪ್ರೀತಿಸುವುದು ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ ತಂದೆ-ತಾಯಿ ಬಯಸುವ ಪ್ರೀತಿ ಇದೇನಾ?
ಇಳಿವಯಸ್ಸಿಗೆ ಸಹಜವಾದ ಕಾಯಿಲೆಗಳಿಂದ ಬಳಲುತ್ತಿರುವ ಆ ತಂದೆ-ತಾಯಿಯನ್ನು ಇತ್ತೀಚೆಗೆ ನಾನು ಊರಿಗೆ ಹೋಗಿದ್ದಾಗ ಭೇಟಿ ಮಾಡಿದ್ದೆ. ನಡುಗುವಕೈಗಳಿಂದ ಅವರು ನನ್ನನ್ನು ಹಿಡಿದುಕೊಂಡು ‘ನಮ್ಮ ಮಗನನ್ನು ಎಂಜಿನಿಯರಿಂಗ್ ಮಾಡದೆ ಬಿಇಡ್ ಓದಿಸಿ ಶಿಕ್ಷಕನನ್ನಾಗಿ ಮಾಡಬೇಕಾಗಿತ್ತು. ಇಲ್ಲಿಯೇ ಎಲ್ಲೋ ಹತ್ತಿರದಲ್ಲಿರುತ್ತಿದ್ದ, ನಮ್ಮಕಷ್ಟಕ್ಕೆ ಆಗುತ್ತಿದ್ದ’ ಎಂದು ನಿಟ್ಟುಸಿರು ಬಿಟ್ಟಿದ್ದರು.
   ವೃದ್ಧಾಪ್ಯ, ಅನಾರೋಗ್ಯ,ಒಂಟಿತನ, ಅಸಹಾಯಕತೆಯಿಂದ ನಡುಗುತ್ತಿರುವ ಕೈಗಳಿಗೆ ಬೇಕಾಗಿರುವುದು ದುಡ್ಡಲ್ಲ ಆಸರೆಗಾಗಿಹಿಡಿದುಕೊಳ್ಳಲು ಒಂದು ದೃಡವಾದ ಹೆಗಲು.
   ಸಜ್ಜನರೆನಿಸಿಕೊಂಡವರೂ ಸೇರಿದಂತೆ ನಮ್ಮ ಬಹುಪಾಲು ಯುವಕ-ಯುವತಿಯರು ನಗರದಲ್ಲಿರುವ ತಮ್ಮ ಮನೆಯಲ್ಲಿ ತಂದೆತಾಯಿಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅವರ ಖಾಸಗಿತನಕ್ಕೆ ಭಂಗ ಉಂಟಾಗುತ್ತದೆ ಎನ್ನುವ ಭಯ ಅವರಿಗೆ. ಅಮ್ಮನಿಗೆ ಡಿಮಾಂಡ್ ಇದೆ, ಅಪ್ಪನಿಗೆ ಇಲ್ಲ. ಇದಕ್ಕೆ ಕಾರಣ ಅಮ್ಮನ ಮೇಲಿನ ವಿಶೇಷ ಪ್ರೀತಿ ಅಲ್ಲ. ಅಮ್ಮನಾದರೆ ಅಡುಗೆ ಮಾಡಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಈಕಾಲದಲ್ಲಿ ನಂಬಿಕಸ್ತ ಮನೆಯಾಳು ಹುಡುಕುವ ಕಷ್ಟ ತಪ್ಪಿತ್ತಲ್ಲಾ ಎನ್ನುವ ಸಮಾಧಾನ ಅವರಿಗೆ. ಆದರೆ ಅಪ್ಪನಿಗೆ ಡಿಮಾಂಡ್ ಇಲ್ಲ. ಸುಮ್ಮನೆ ಮನೆಯಲ್ಲಿ ಪಿರಿಪಿರಿ-ಕಿರಿಕಿರಿ ಎನ್ನುವ ತಾತ್ಸಾರ.
  ‘ಅಮ್ಮನ ದಿನ’ದಂದು ಇದೆಲ್ಲ ನೆನಪಾಯಿತು. ಇದೇ ನೆನಪಲ್ಲಿ ನಾನು ‘ಪೀಕೂ’ ಫಿಲ್ಮ್ ನೋಡಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ.

Sunday, April 12, 2015

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ ...

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದು.
1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.
ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.
ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.
‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.
ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?
ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.
ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.
ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?
1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?
ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?
ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.
ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.
ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.
‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.
ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.
ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.
ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.
ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.
ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).
ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.
ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.
ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.
ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.
ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.
3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.
ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.
ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?
ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.
ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.
ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.
ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.
ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.
ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.
ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.

Thursday, April 9, 2015

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ‘ರೋಗ ಪತ್ತೆ ವಿಧಾನ’ವಿದ್ದಂತೆ: ದಿನೇಶ್ ಅಮಿನ್ ಮಟ್ಟು


 ಬೆಂಗಳೂರು: ಏ, 9:- ಜಾತಿ ಎನ್ನುವ ರೋಗಕ್ಕೆ ಮೀಸಲಾತಿ ಒಂದು ಚಿಕಿತ್ಸಾ ವಿಧಾನವಾದರೆ ಜಾತಿ ಗಣತಿ ರೋಗ ಪತ್ತೆ ವಿಧಾನ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಶ್ರೀ ದಿನೇಶ್ ಅಮಿನ್ ಮಟ್ಟು ಅವರು ಅಭಿಪ್ರಾಯಪಟ್ಟರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಕಾರಣ ಯಾವುದೇ ಪಕ್ಷ ಅಥವಾ ರಾಜಕಾರಣಿ ಅಲ್ಲ; ಸಂವಿಧಾನ, ಶಾಸಕಾಂಗ ಹಾಗೂ ಕಾರ್ಯಾಂಗ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವೈಜ್ಞಾನಿಕವಾಗಿ ಅಂಕಿ ಅಂಶಗಳ ಸಂಗ್ರಹಣೆಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಭಾರತ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮಾಹಿತಿ ಲಭ್ಯವಿರುತ್ತವೆ. ಆದರೆ ಹಿಂದುಳಿದ ವರ್ಗದವರ ಮಾಹಿತಿ ದೊರೆಯುವುದಿಲ್ಲ. ಇದರಿಂದ ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ತೊಡಕಾಗುತ್ತದೆ. ಆರ್ಥಿಕ ಬಲ ತುಂಬುವುದರಿಂದ ಜಾತೀಯತೆಯ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮೀಸಲಾತಿಯ ದುರುಪಯೋಗ ತಡೆಯುವುದು ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸುವ ಉದ್ದೇಶಗಳಿಗೆ ಅಗತ್ಯವಿರುವ ನಿಖರ ಮಾಹಿತಿ ಈ ವೈಜ್ಞಾನಿಕ ಸಮೀಕ್ಷೆಯಿಂದ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡಿ ಅರ್ಹರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತಾಗಲು ಸಹಕರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಹೆಚ್.ಕಾಂತರಾಜ ಅವರು ಮಾತನಾಡಿ ಜಾತಿ ನಮ್ಮ ಶತ್ರು, ಆದರೆ ಅದನ್ನು ಓಡಿಸಲು ಶತ್ರು ಯಾರೆಂದು ಅರಿಯುವುದು ಮುಖ್ಯವಾದ್ದರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾದದ್ದು, ಸಮಾನತೆಯ ಅನುಷ್ಠಾನಕ್ಕೆ ಈ ಸಮೀಕ್ಷೆಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಪ್ರತಿಪಾದಿಸಿದರು.
ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲಾಗುತ್ತಿದ್ದು, ಯಾವ ಸಮುದಾಯದವರಿಗೂ ತೊಂದರೆ ಇಲ್ಲ. ಇದು ವಾಸ್ತವಿಕ ಅಂಕಿ ಅಂಶಗಳನ್ನು ಕ್ರೋಢೀಕರಿಸುವ ಕಾರ್ಯಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಸಮೀಕ್ಷೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ನಾಡಿನ ಜನತೆಗೆ ಮನವಿ ಮಾಡಿದ ಅವರು ಮಾಹಿತಿ ಅಪೂರ್ಣವಾದಲ್ಲಿ ಅಂತಹ ಅಂಶಗಳ ಮರು ಪರಿಶೀಲನೆ, ಚರಿತ್ರೆ ಅರಿತು ವಿಚಾರಣೆ ಮಾಡುವ ಅಧಿಕಾರ ಆಯೋಗಕ್ಕಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷ ಡಾ: ಸಿ.ಎಸ್.ದ್ವಾರಕನಾಥ್ ಅವರು ಮಾತನಾಡಿ ಜಾತಿ ಮೂಲದ ಬಡತನಕ್ಕೆ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಹಕಾರಿ ಎಂದು ನುಡಿದರು. ಸಮೀಕ್ಷೆ ಮೂಲಕ ಸರ್ಕಾರದ ಸೌಲಭ್ಯಗಳಿಂದ, ಮೀಸಲಾತಿಯಿಂದ ವಂಚಿತರಾದ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿದೆ. ಹಲವಾರು ಜಾತಿಗಳು ತಮ್ಮ ಅಸ್ಥಿತ್ವ ಕಂಡುಕೊಳ್ಳಲು ಸಹ ಈ ಸಮೀಕ್ಷೆ ನೆರವಾಗಲಿದೆ. 1931ರ ನಂತರ ಜಾತಿವಾರು ಗಣತಿ ನಡೆದಿಲ್ಲ. ನ್ಯಾಯಾಲಯಗಳಲ್ಲಿ ಮೀಸಲಾತಿ ವಿರೋಧಿ ತೀರ್ಪುಗಳು ಬರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ನಿಖರ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಅವರು ತಿಳಿಸಿದರು. ಈ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಎಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಬೆಟ್ಟಸ್ವಾಮಿ ಹಾಗೂ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಶ್ರೀ ಪುಟ್ಟರಾಜು ಅವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಸಹನಾ ವಂದಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ: ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಮೀಕ್ಷೆಯ ಪ್ರಚಾರಕ್ಕಾಗಿ ಸಿದ್ಧಪಡಿಸಲಾದ ಪ್ರಚಾರ ವಾಹನಕ್ಕೆ ಶ್ರೀ ಹೆಚ್.ಕಾಂತರಾಜ ಮತ್ತು ಶ್ರೀ ಡಾ:ಸಿ.ಎಸ್.ದ್ವಾರಕನಾಥ್ ಅವರು ಚಾಲನೆ ನೀಡಿದರು.
(ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

ದಾವಣಗೆರೆ : ದೇವನಗರಿ ಕಲಾವೈಭವ ಜಿಲ್ಲಾ ಉತ್ಸವದ ಸರ್ವಗೋಷ್ಠಿಗಳ ಉದ್ಘಾಟನೆ


ವಿಚಾರಗೋಷ್ಠಿಯಲ್ಲಿ ದಿನೇಶ್‌ ಅಮೀನ್‌ಮಟ್ಟು ಆತಂಕ

ಸಂಸ್ಕೃತಿ ಹೆಸರಲ್ಲಿ ಅಭಿಪ್ರಾಯ ಹೇರಿಕೆ


ದಾವಣಗೆರೆ: ಕಮ್ಯುನಿಸ್ಟ್‌ ಚಳವಳಿ, ಸಮಾಜವಾದಿ ಚಳವಳಿ ಹಾಗೂ ಕೈಗಾರೀಕರಣವನ್ನು ಜತೆಯಲ್ಲಿಟ್ಟು ನೋಡಲು ಸಾಧ್ಯವಿಲ್ಲ. ಆದರೆ, ದಾವಣಗೆರೆ ಮಾತ್ರ ಇವೆಲ್ಲವನ್ನೂ ಜತೆಯಲ್ಲಿಟ್ಟುಕೊಂಡೇ ಅಭಿವೃದ್ಧಿ ಹೊಂದಿದ ವಿಶಿಷ್ಟ ಜಿಲ್ಲೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.
ನಗರದ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ‘ದೇವನಗರಿ ಕಲಾವೈಭವ’ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಂಸ್ಕೃತಿ ಬಹು ಚರ್ಚಿತ ವಿಚಾರ. ಸಂಸ್ಕೃತಿಯನ್ನು ರಕ್ಷಿಸುವ ನೆಪದಲ್ಲಿ ಒಂದುವರ್ಗ ಬಲವಂತವಾಗಿ ಜನರ ಮೇಲೆ ಅವರ ಅಭಿಪ್ರಾಯಗಳನ್ನು ಹೇರುವ ಕೆಲಸ ಮಾಡುತ್ತಿದೆ. ಉಡುಗೆ–ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವೂ ನಮ್ಮ ಇಷ್ಟಕ್ಕೆ ಅನುಸಾರವಾಗಿ ಇರಬೇಕೇ ಹೊರತು, ಬೇರೆಯವರ ಹಸ್ತಕ್ಷೇಪ ಇರಬಾರದು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
‘ಏಕ ಸಂಸ್ಕೃತಿ ಹೆಸರಲ್ಲಿ ಮತ್ತೊಂದು ಧರ್ಮವನ್ನು ಹೀಗಳೆಯುವ, ಅಸಮಾನತೆ ಸಾರುವ, ಅಸ್ಪ್ರುಶ್ಯತೆಯನ್ನು ಎತ್ತಿಹಿಡಿಯುವ, ಕಂದಾಚಾರ, ಮೌಢ್ಯಗಳನ್ನು ತುಂಬುವ  ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿವೆ. ನಮ್ಮದು ನೂರಾರು ಜಾತಿಗಳ, ಲಕ್ಷಾಂತರ ಆಚರಣೆಗಳ, ಬಹುಸಂಸ್ಕೃತಿ ಇರುವ ದೇಶ. ಅವಗಳನ್ನು ಎಂದಿಗೂ ನಾಶಮಾಡುವ ಕೆಲಸಕ್ಕೆ ಕೈಹಾಕಬಾರದು. ಸಂಸ್ಕೃತಿ ಅನುಕರಣೆ ವ್ಯಕ್ತಿಯ ವೈಯಕ್ತಿಕ ವಿಚಾರವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಆಧುನಿಕ ಸಂಸ್ಕೃತಿ ಎಂಬ ಪರಿಕಲ್ಪನೆ ಇಂದು ನಿಜವಾದ ಅರ್ಥ ಕಳೆದುಕೊಂಡಿದೆ. ಯುವಜನತೆ, ಜೀನ್ಸ್‌ ಹಾಕುವುದು, ಮಿನಿ, ಮಿಡಿ ಧರಿಸುವುದು, ಬಾರ್, ಪಬ್‌ಗಳಿಗೆ ಹೋಗುವುದು, ನಟ, ನಟಿಯರನ್ನು ಅನುಕರಿಸುವುದೇ ಆಧುನಿಕ ಸಂಸ್ಕೃತಿ ಎಂದು ನಂಬಿದ್ದಾರೆ. ವ್ಯಕ್ತಿಯ ಆಲೋಚನೆಗಳಲ್ಲಿ ಆಧುನಿಕತೆ ಇದ್ದಾಗ ಮಾತ್ರ ಅದು ಆಧುನಿಕ ಸಂಸ್ಕೃತಿಯಾಗುತ್ತದೆ. ನಮ್ಮ ಉಡುಗೆ ತೊಡುಗೆ, ಆಹಾರ ಪದ್ಧತಿ ಬಗ್ಗೆ ನಮಗೆ ಕೀಳರಿಮೆ ಇರಬಾರದು ಎಂದು ಅಮೀನ್‌ಮಟ್ಟು ಕಿವಿಮಾತು ಹೇಳಿದರು.
ಬಂಡಾಯ ಸಾಹಿತಿ ಆರ್‌.ಜಿ.ಹಳ್ಳಿ ನಾಗರಾಜ್‌ ಮಾತನಾಡಿ, ಪಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಅನಿವಾರ್ಯ ಭಾಗವಾಗಿವೆ. ಪುಟ್ಟ ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ವಿಶ್ವವೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ನಾವು ಬದುಕುತ್ತಿದ್ದೇವೆ. ಜಾಗತೀಕರಣ ಫಲವಾಗಿ ನಗರ ಹಾಗೂ ಹಳ್ಳಿಗಳ ಮಧ್ಯೆ ವ್ಯತ್ಯಾಸ ಇಲ್ಲವಾಗಿದೆ ಎಂದರು.
ಒಂದು ಜಿಲ್ಲೆಯ ಹಿರಿಮೆ ವೈಭವದ, ಶ್ರೀಮಂತ ಬದುಕಿನ ಮೇಲೆ ಅವಲಂಬಿತವಾಗಿರುವುದಿಲ್ಲ. ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ಶ್ರೀಮಂತ ಕಲೆಗಳ ತವರಾಗಿದ್ದು, ಅದನ್ನು ಪೋಷಿಸಿ ಬೆಳೆಸಿಕೊಂಡುಹೋಗುವ ಕೆಲಸ ಮಾಡಬೇಕು ಎಂದರು.
‘ಜಿಲ್ಲೆಯ ಅಭಿವೃದ್ಧಿ ಮುನ್ನೋಟ’ ಎಂಬ ವಿಷಯದ ಬಗ್ಗೆ ಮಾತನಾಡಿದ ದಾವಣಗೆರೆ ವಿವಿ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ದಾವಣಗೆರೆ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ 65ರಷ್ಟು ಮಂದಿ ಕೃಷಿ ಅವಲಂಬಿಸಿದ್ದಾರೆ. ಭತ್ತ ಹಾಗೂ ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ರಾಷ್ಟ್ರದ ಆಹಾರ ಭದ್ರತೆಗೆ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.
ಜಾಗತೀಕರಣದ ಪ್ರಭಾವದಿಂದ ಬೌದ್ಧಿಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿದ್ದು, ಜಿಲ್ಲೆಯಲ್ಲಿ 4 ಎಂಜಿನಿಯರಿಂಗ್‌, 2 ಮೆಡಿಕಲ್‌, 2 ಡೆಂಟಲ್‌, 4 ಪಾಲಿಟೆಕ್ನಿಕ್‌ ಕಾಲೇಜು, 15 ವ್ಯಾಪಾರ ನಿರ್ವಹಣಾ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸುವ ಮೂಲಕ ಜಿಲ್ಲೆಗೆ ಖ್ಯಾತಿ ತಂದಿದ್ದಾರೆ ಎಂದರು.
‘ಜಿಲ್ಲೆಯ ಸಾಹಿತ್ಯ–ಸಮಾಜ–ಸಾಂಸ್ಕೃತಿಕ’ ಒಳನೋಟ ಕುರಿತು ದಾವಣಗೆರೆ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ ಮಾತನಾಡಿ, ಜನಪದ ಪ್ರೀತಿಯನ್ನು ಅಪ್ಪಿಕೊಳ್ಳುವಂತಹ ಕೆಲಸ  ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉತ್ಸವಗಳು ಗ್ರಾಮೀಣ ಭಾಗಗಳಲ್ಲೂ ನಡೆಯಲಿ, ಜಗಳೂರು, ಹರಪನಹಳ್ಳಿಯಲ್ಲಿ  ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಪ್ರಸ್ತುತ ಇಲ್ಲಿನ ದೊಡ್ಡಾಟ ಕಲೆ ನಶಿಸುತ್ತಿದ್ದು, ಯಕ್ಷಗಾನದಂತಹ ಕಲೆಯನ್ನು ವೈಭವೀಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡಾಟ ಕಲೆಗೆ ಮರುಜೀವ ಕೊಡುವಕೆಲಸವಾಗಬೇಕು ಎಂದು ಪ್ರತಿಪಾದಿಸಿದರು. ರಾಮಚಂದ್ರಪ್ಪ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ ಕುಮಾರ್‌, ಕಸಾಪ ಗೌರವ ಕಾರ್ಯದರ್ಶಿ ಬಾಮಾ ಬಸವರಾಜಯ್ಯ, ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ಕೃಪೆ: ಪ್ರಜಾವಾಣಿ 09/04/2015)
-----------------------------------------------------------------------------------------------------------------------------

ದಾಖಲಾಗದ ಗಿರಿಣಿ ಕಾರ್ಮಿಕರ ನೋವು
.ಗಿರಿಜಾ ವೇದಿಕೆ, ದಾವಣಗೆರೆ 

ಸಂಸ್ಕೃತಿ ಎನ್ನುವುದು ಆಯ್ಕೆ ಆಗಬೇಕು. ಆದರೆ ಸಂಸ್ಕತಿಯನ್ನು ನಿಯಂತ್ರಿಸುವ ಒಂದು ಗುಂಪು ಹುಟ್ಟಿಕೊಂಡಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. 

ಜಿಲ್ಲಾಡಳಿತದಿಂದ ಆರಂಭವಾದ ದೇವನಗರಿ ಕಲಾ ವೈಭವ ದಾವಣಗೆರೆ ಜಿಲ್ಲಾ ಉತ್ಸವದ ಮೊದಲ ದಿನ ಬುಧವಾರ ಆಯೋಜಿಸಿದ್ದ 'ದಾವಣಗೆರೆ ಜಿಲ್ಲೆ ಸಮಕಾಲೀನ ಸಂದರ್ಭಗಳು' ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. 

ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿ ನಡುವೆ ಸಂಘರ್ಷ ನಡೆದಿದೆ. ಸಂಸ್ಕೃತಿ ಯನ್ನು ಬಲವಂತವಾಗಿ ಹೇರಿದರೆ ಯಾರೂ ಇಷ್ಟ ಪಡುವುದಿಲ್ಲ. ನೈತಿಕ ಪೋಲಿಸ್‌ಗಿರಿ ಹೆಸರಲ್ಲಿ ಡಿಕ್ಟೇಟ್ ಮಾಡುವುದು 

ನಡೆದಿದೆ. ನಿಷೇಧ, ನಿರ್ಬಂಧದ ಮೂಲಕ ನಮ್ಮ ಸಂಸ್ಕೃತಿ ಕಿತ್ತುಕೊಳ್ಳುವ ಮತ್ತು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಧಾರ್ಮಿಕ ಚಳವಳಿ ಜತೆಯಲ್ಲಿಯೇ ಪ್ರತಿಭಟನಾ ಚಳವಳಿಯೂ ನಡೆದಿದೆ. ಇದರಲ್ಲಿ ಬಸವ ಚಳವಳಿ ಕೂಡ ಒಂದು. ಸುಧಾರಕರು ಹೊಸ ಸಂಸ್ಕೃತಿ ಕಟ್ಟುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಏಕ ಸಂಸ್ಕೃತಿ ಯಾವಾಗಲೂ ಜನ ವಿರೋಧಿ ಎಂದರು. 

ಆಶಯ ನುಡಿಗಳನ್ನಾಡಿದ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಓಡುತ್ತಿದೆ. ಈ ವೇಗ ಕೆಲ ಅನುಕೂಲಗಳನ್ನು ಕಲ್ಪಿಸಿದರೂ ಅಷ್ಟೇ ಅನಾಹುತಗಳನ್ನೂ ಸೃಷ್ಟಿಸಿದೆ. ಒಂದೆಡೆ ಸಮಾಜ ಆರೋಗ್ಯದಿಂದ ಅನಾರೋಗ್ಯದ ಕಡೆ ಸಾಗುತ್ತಿದೆ. ಇದಕ್ಕೆ ದಾವಣಗೆರೆ ಕೂಡ ಹೊರತಲ್ಲ. ಈ ಜಾಗತೀಕರಣದಿಂದ ತಲ್ಲಣಗಳು, ಸವಾಲುಗಳು ಸೃಷ್ಟಿಯಾಗಿವೆ. ಭಯೋತ್ಪಾದನೆ, ಕೋಮುವಾದ ಹೆಚ್ಚುತ್ತಿದೆ ಎಂದರು. 

ಜಿಲ್ಲೆಯ ಅಭಿವೃದ್ಧಿ ಮನ್ನೋಟ ಕುರಿತು ವಿಷಯ ಮಂಡಿಸಿದ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ನೈಸರ್ಗಿಕ ಸಂಪನ್ಮೂಲಗಳ ಜತೆ ರಸ್ತೆ, ಸಾರಿಗೆ ವ್ಯವಸ್ಥೆ ಹೊಂದಿರುವ ಜಿಲ್ಲೆ ಅಭಿವೃದ್ಧಿಯ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಪಾದಿಸಿದರು. 

ಇಂದು ಕೃಷಿ ವೆಚ್ಚ ಹೆಚ್ಚಳದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದು ಸಾಲಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇನ್ನೊಂದೆಡೆ ಕೃಷಿಯೇತರ ಬಳಕೆ ಹಿಗ್ಗುತ್ತಿದ್ದು ಭೂಮಿಯ ಸಟ್ಟಾ ವ್ಯಾಪಾರ ನಡೆಯುತ್ತಿದೆ. ಇದರಿಂದ ಆಹಾರ ಭದ್ರತೆಗೆ ಆತಂಕ ಬಂದೊದಗಿದೆ ಎಂದು ಹೇಳಿದರು. 

ಜಿಲ್ಲೆಯ ಸಾಂಸ್ಕೃತಿಕ ಒಳ ನೋಟಗಳು ಕುರಿತು ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಯಲ್ಲಿ ಹರಪನಹಳ್ಳಿ, ಜಗಳೂರು ಸೇರಿದಂತೆ ಎಲ್ಲರನ್ನು ಒಳಗೊಂಡ ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೆಲಸ ಆಗಬೇಕಿದೆ ಎಂದರು. 

ದಾವಣಗೆರೆ ದೊಡ್ಡಾಟ, ಸಣ್ಣಾಟ, ರಂಗ ಚುಟುವಟಿಕೆಗಳಿಗೆ ಕ್ರಿಯಾಶೀಲವಾಗಿದ್ದ, ಕಲೆ ಪೋಷಿಸಿದ ಊರು. ಇಂದು ದೊಡ್ಡಾಟ, ಸಣ್ಣಾಟ ಹೋಗಿ ಯಕ್ಷಗಾನ ವಿಜೃಂಭಿಸುತ್ತಿದೆ. ಈ ಬಗ್ಗೆ ಚಿಂತನೆ ನಡೆಯಬೇಕು. ಇಲ್ಲಿನ ಜವಳಿ ಗಿರಣಿಗಳಿಗೆ ಬೀಗ ಬಿದ್ದ ನಂತರ ಬೀದಿಗೆ ಬಿದ್ದ ಕಾರ್ಮಿಕರ ನೋವು, ಸಂಕಟಗಳನ್ನು ಜಿಲ್ಲೆಯ ಸಾಹಿತ್ಯ ದಾಖಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಾದೇಶಿಕ ಅಸಮತೋಲನ ಇಂದಿಗೂ ಮುಂದುವರಿದಿದೆ. ಇಲ್ಲಿನ ಗಾಂಧಿನಗರದಲ್ಲಿ ಬದುಕಲು ಕೂಡ ಸಾಧ್ಯವಿಲ್ಲದ ಸ್ಥಿತಿಯಿದೆ. ಬೀದಿಗೆ ಬಿದ್ದ ಕಾರ್ಮಿಕರ ಬದುಕಿನ ಬಗ್ಗೆ ಸಮಾಜ ಮಾತನಾಡಲಿಲ್ಲ. ಈಗಲಾದರೂ ಈ ಜನರ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. 

ಡಿಸಿ ಎಸ್.ಟಿ.ಅಂಜನ್‌ಕುಮಾರ್, ಸಿಇಒ ಎಸ್.ಬಿ.ಬೊಮ್ಮನಹಳ್ಳಿ, ಡಾ.ಎಚ್.ವಿಶ್ವನಾಥ್, ಬಾ.ಮ. ಬಸವರಾಜಯ್ಯ ಇತರರು ಇದ್ದರು. 

*** ಪ್ರಗತಿಪರರು ಮಾಡುವ ತಪ್ಪು ಪ್ರಗತಿಪರರು ತಪ್ಪು ಮಾಡುತ್ತಿದ್ದಾರೆ, ನಾಸ್ತಿಕ ಆಗಿರಬೇಕು, ಯಾವುದೇ ಧರ್ಮದ ಬಂಧನದಲ್ಲಿರಬಾರದು ಎಂದೆಲ್ಲಾ ಹೇಳುತ್ತಿದ್ದಾರೆ. ನಾವು ಈ ರೀತಿ ವರ್ತಿಸಿದರೆ ಅಪ್ಪ-ಅಮ್ಮನೇ ಮನೆಗೆ ಬಿಟ್ಟುಕೊಳ್ಳುವುದಿಲ್ಲ.
ಹಾಗಾಗಿ ಈ ರೀತಿ ಹೇಳುವುದರಿಂದ ಸುಧಾರಣೆ ಸಾಧ್ಯವಿಲ್ಲ. ಇವರು ಲೋಹಿಯಾ ಚಿಂತನೆ ಗಮನಿಸಬೇಕು.ಅವರು ಕಡೇ ದಿನಗಳಲ್ಲಿ ರಾಮಚರಿತ ಪಠಿಸುತ್ತಿದ್ದರು ಎಂದು ದಿನೇಶ್‌ಅಮಿನ್‌ಮಟ್ಟು ಹೇಳಿದರು. 

*** ತಾರತಮ್ಯ ಪ್ರತಿಧ್ವನಿ ಗೋಷ್ಠಿಯಲ್ಲಿ ಎಲ್ಲ ಅತಿಥಿಗಳು ದಾವಣಗೆರೆಯ ಹಿಂದಿನ ಕಾರ್ಮಿಕ ಚಳವಳಿಯ ವೈಭವ ನೆನಪಿಸಿಕೊಂಡಿದ್ದು ವಿಶೇಷ. ಸಂವಾದದಲ್ಲೂ ಹರಪನಹಳ್ಳಿ, ಜಗಳೂರು ತಾಲೂಕುಗಳ ಅಭಿವೃದ್ಧಿ ತಾರತಮ್ಯ ಈಗಲೂ ಮುಂದುವರಿದಿದೆ. ಮಾನಸಿಕವಾಗಿ ಒಂದಾಗುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.
(ಕೃಪೆ : ವಿಜಯ ಕರ್ನಾಟಕ 09/04/2015)

Monday, March 30, 2015

ಗಂಡ-ಹೆಂಡತಿಯರಿದ್ದ ಹಾಗೆ, ಯಾರುಮೇಲು? ಯಾರು ಕೀಳು?


( ನನ್ನ ತಪ್ಪನ್ನು ಎತ್ತಿತೋರಿಸಿದವರು ಬಿಟಿವಿನಲ್ಲಿರುವ ಪತ್ರಕರ್ತ ಶ್ರೀನಾಥ ಬೆಳಚಿಕ್ಕನಹಳ್ಳಿ. ಅವರೇ ಇಚ್ಚೆ ಪಟ್ಟಿರುವ ಕಾರಣ ಹೆಸರು ಹೇಳಿದ್ದೇನೆ. ಇವರನ್ನು ಹಿಂದೊಮ್ಮೆ ಕುಪ್ಪಳ್ಳಿಯಲ್ಲಿ ಭೇಟಿ ಮಾಡಿದ್ದನ್ನು ಅವರೇ ನೆನಪುಮಾಡಿಕೊಟ್ಟರು. ಡೆಸ್ಕ್ ಜರ್ನಲಿಸ್ಟ್ ಗಳ ಬಗೆಗಿನ ನನ್ನ ಅವಸರದ ಅಭಿಪ್ರಾಯಕ್ಕೆ ಮೊದಲು ಅವರೆಲ್ಲರ ಕ್ಷಮೆಕೋರುತ್ತೇನೆ.)
    ವರದಿಗಾರರು ಮತ್ತು ಡೆಸ್ಕ್ ಜರ್ನಲಿಸ್ಟ್ ಗಳ ನಡುವಿನ ಶೀತಲ ಸಮರಕ್ಕೆ ಪತ್ರಿಕೋದ್ಯಮದಷ್ಟೇ ದೀರ್ಘವಾದ ಇತಿಹಾಸ ಇದೆ. ಇವರಿಬ್ಬರದ್ದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಗಂಡ-ಹೆಂಡತಿಯರಂತಹ ಪಾತ್ರ. ಗಂಡ ಹೊರಗೆ ಹೋಗಿ ಸಂಪಾದನೆ ಮಾಡಿ ಬರುವವ, (ಸುದ್ದಿ ಸಂಪಾದನೆ ರೀತಿ) ಹೆಂಡತಿ ಮನೆಯಲ್ಲಿದ್ದು ಅಡಿಗೆ ಮಾಡುವವಳು (ಪತ್ರಿಕೆಯನ್ನು ರೂಪಿಸುವ ರೀತಿ). ಇವರಲ್ಲಿ ಯಾರೊಬ್ಬರು ಮುಷ್ಕರ ಹೂಡಿದರೆ ಸಂಸಾರ ಬಂದ್. ಇವರಲ್ಲಿ ಯಾರು ಮೇಲು ಯಾರು ಕೀಳು ಎನ್ನುವುದನ್ನು ಹೇಳಲಾಗುತ್ತದೆಯೇ? ಅರ್ಥಮಾಡಿಕೊಂಡರೆ ಇಬ್ಬರು ಸಮಾನರು, ಅಪಾರ್ಥಮಾಡಿಕೊಂಡರೆ ಗಲಾಟೆ ಸಂಸಾರ. ಇದೇ ರೀತಿ ವರದಿಗಾರರು ಮತ್ತು ಡೆಸ್ಕ್ ಪತ್ರಕರ್ತರ ಪಾತ್ರಗಳನ್ನು ನಟ ಮತ್ತು ನಿರ್ದೇಶಕರ ಪಾತ್ರಗಳಿಗೂ ಹೋಲಿಸಬಹುದು.
     ವರದಿಗಾರರ ನೆತ್ತಿ ಮೇಲಿರುವ ದೊಡ್ಡ ಕೋಡು ಎಂದರೆ ಅವರಿಗೆ ಸಿಗುವ ಬೈಲೈನ್ ಗಳು. ಹಿಂದಿನಂತಲ್ಲ, ಇತ್ತೀಚೆಗೆ ಬೈಲೈನ್ ಗಳು ಬೇಕಾಬಿಟ್ಟಿಯಾಗಿ ಸಿಗುತ್ತವೆ. ಈಗಿನ ಕಾಲದಲ್ಲಿ ವರದಿಗಾರ ಮುಖರಹಿತ ಪತ್ರಕರ್ತನಲ್ಲ, ಅವರಲ್ಲಿ ಎಷ್ಟೋ ಮಂದಿ ಸೆಲೆಬ್ರಿಟಿಗಳು. ಅವರಿಗೆ ಜನಸಂಪರ್ಕ, ಓದುಗರ ಮೆಚ್ಚುಗೆ ಎಲ್ಲವೂ ಲಭ್ಯ. ಸಂಬಳದ ಜತೆಗೆ ಅವರಿಗೆ ಜನಪ್ರಿಯತೆ ಬೋನಸ್ ರೂಪದಲ್ಲಿ ಬರುತ್ತದೆ. ಈ ಭಾಗ್ಯ ಡೆಸ್ಕ್ ನವರಿಗಿಲ್ಲ.ವರದಿಗಾರರ ಯಶಸ್ವಿ ಅನಿಸಿಕೊಳ್ಳಲು ಬರವಣಿಗೆಯ ಶಕ್ತಿ ಜತೆ ಆತನಿಗಿರುವ ಸುದ್ದಿಮೂಲಗಳ ಸಂಪರ್ಕ ಮುಖ್ಯ. ಬರವಣಿಗೆ ಕೈಹಿಡಿಯದೆ ಇದ್ದರೂ ಸುದ್ದಿ ಸಂಗ್ರಹದ ಸಾಮರ್ಥ್ಯದ ಮೂಲಕವೇ ಜನಪ್ರಿಯ ವರದಿಗಾರರಿದ್ದವರಿದ್ದಾರೆ. ಎರಡನ್ನೂ ಮೈಗೂಡಿಸಿಕೊಂಡವರು ಹೆಚ್ಚು ಜನಪ್ರಿಯರಾಗುತ್ತಾರೆ.
   ಡೆಸ್ಕ್ ಪತ್ರಕರ್ತರೇನಿದ್ದರೂ ತೆರೆಯ ಹಿಂದಿನ ಕಲಾವಿದರು. ಅವರೆಷ್ಟೇ ಚೆನ್ನಾಗಿ ಕೆಲಸಮಾಡಿದರೂ ಜನಪ್ರಿಯತೆಯೇನಿದ್ದರೂ ಕಚೇರಿಗೆ ಸೀಮಿತ. ವರದಿಯೊಂದನ್ನು ತಿದ್ದಿ ತೀಡಿ ಹೊಸ ಅಂಶಗಳ ಜತೆ ಅಪ್ ಡೇಟ್ ಮಾಡಿ ಆಕರ್ಷಕ ತಲೆಬರಹಕೊಟ್ಟು ಪ್ರಕಟಿಸುವ ಇಂತಹ ಉಪಸಂಪಾದಕನನ್ನು ಗುರುತಿಸುವವರು ಕಡಿಮೆ. ಮೆಚ್ಚುಗೆ ಹರಿದುಹೋಗುವುದು ವರದಿಗಾರರ ಕಡೆಗೆ. ಡೆಸ್ಕ್ ನಲ್ಲಿರುವವರಿಗೆ ಜನಸಂಪರ್ಕದ ಅಗತ್ಯ ಇರುವುದಿಲ್ಲ. ಆದರೆ ಅವರು ವರದಿಗಾರರಿಗಿಂತಲೂ ಬುದ್ದಿವಂತರಾಗಿರಬೇಕಾಗುತ್ತದೆ. ಅವರಿಗೆ ಸುದ್ದಿಯ ಹಿನ್ನೆಲೆ-ಮುನ್ನೆಲೆ ಗೊತ್ತಿರಬೇಕು. ಈ ಬಲದಿಂದ ಸುದ್ದಿಯಮಹತ್ವವನ್ನು ತೀರ್ಮಾನಿಸುವ ಶಕ್ತಿಯನ್ನು ಆತ ಬೆಳೆಸಿಕೊಳ್ಳಬೇಕು. ವ್ಯಾಕರಣದ ಮೂಲಪಾಠಗಳನ್ನು ತಿಳಿದಿರಬೇಕು. ಭಾಷಾಂತರಕ್ಕೆ ಬೇಕಾದಷ್ಟು ಇಂಗ್ಲೀಷ್ ಜ್ಞಾನ ಇರಬೇಕು. ಇದರ ಜತೆಗೆ ತಂತ್ರಜ್ಞಾನದ ಅರಿವು ಇರಬೇಕು.
      ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯ ವ್ಯವಸ್ಥೆ ಇರುತ್ತದೆ. ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಗಳಲ್ಲಿ ಡೆಸ್ಕ್ ಗೆ ವರದಿಗಾರರ ವಿಭಾಗಕ್ಕೆ ಕೊಡುವಷ್ಟೇ ಮಹತ್ವ ನೀಡುತ್ತಾರೆ. ಎಷ್ಟೋ ಬಾರಿ ವರದಿಗಾರರು ಪೋನಿನಲ್ಲಿ ಸುದ್ದಿಯ ಮುಖ್ಯಾಂಶಗಳನ್ನು ಕೊಟ್ಟುಬಿಟ್ಟರೆ, ಉಪಸಂಪಾದಕ ಒಂದು ಚಂದದ ವರದಿ ಸಿದ್ದ ಪಡಿಸಿಬಿಡುತ್ತಾನೆ. ಕನ್ನಡದ ಮಟ್ಟಿಗೆ ಇನ್ನೂ ಈ ವ್ಯವಸ್ಥೆ ಎಲ್ಲ ಕಡೆ ಬಂದ ಹಾಗಿಲ್ಲ. ಭಾಷಾ ಪತ್ರಿಕೋದ್ಯಮದೊಳಗಿನ ವ್ಯವಸ್ಥೆಯಲ್ಲಿ ವರದಿಗಳನ್ನು ವರದಿಗಾರರು ಅಂತಿಮ ರೂಪದಲ್ಲಿ ಕೊಡಬೇಕೆಂದು ಡೆಸ್ಕ್ ಬಯಸುತ್ತದೆ. ‘ನಿಮ್ಮ ವರದಿಗಳನ್ನು ತಿದ್ದಿಕೊಂಡು ಕೂರಲು ನಮಗೆ ಸಮಯ ಇಲ್ಲ. ಬೇರೆ ಕೆಲಸಗಳಿರುತ್ತವೆ’ ಎಂದು ಉಪಸಂಪಾದಕರು ಗದರಿಸುತ್ತಿರುತ್ತಾರೆ. ಅದು ನಿಜ ಕೂಡಾ, ಬದಲಾದ ತಂತ್ರಜ್ಞಾನದ ಯುಗದಲ್ಲಿ ಪೇಜಿನೇಷನ್ ಹೊಣೆ ಕೂಡಾ ಉಪಸಂಪಾದಕನ ತಲೆಗೆ ಕಟ್ಟಲಾಗಿದೆ. ಜತೆಗೆ ಏಜನ್ಸಿಕಾಪಿಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಕೆಲಸವೂ ಇರುತ್ತದೆ. ಜತೆಗೆ ಅವರ ತಲೆಮೇಲೆ ಡೆಡ್ ಲೈನ್ ಕತ್ತಿ ತೂಗುತ್ತಿರುತ್ತದೆ.
      ಸಮಸ್ಯೆಯೇನೆಂದರೆ, ಬಹಳಷ್ಟು ಡೆಸ್ಕ್ ಪತ್ರಕರ್ತರಿಗೆ ವರದಿಗಾರರ ಬಗ್ಗೆ ಸಣ್ಣ ಅಸೂಯೆ ಇರುತ್ತದೆ.ಈ ವರದಿಗಾರರೆಲ್ಲರೂ ಬೆಳಿಗ್ಗೆ ಮುಖ್ಯಮಂತ್ರಿಯವರ ಜತೆ ಬ್ರೇಕ್ ಫಾಸ್ಟ್ ಮಾಡಿ, ಮಧ್ಯಾಹ್ನ ಜತೆ ಸಚಿವರ ಜತೆ ಲಂಚ್ ಮಾಡಿ, ರಾತ್ರಿ ಅಧಿಕಾರಿಗಳ ಜತೆ ಡಿನ್ನರ್ ಮಾಡುತ್ತಾ ಮಜಾಮಾಡುತ್ತಿದ್ದಾರೆ ಎನ್ನುವಂತಹ ಕಪೋಲಕಲ್ಪಿತ ಆರೋಪಗಳೂ ಕೂಡಾ ಈ ಅಸೂಯೆಗೆ ಕಾರಣ. ಎಲ್ಲ ಸಂದರ್ಭಗಳಲ್ಲಿ ಇದು ನಿಜ ಅಲ್ಲ. ವರದಿಗಾರರಿಗೆ ರಾಜಕಾರಣಿಗಳ,ಅಧಿಕಾರಿಗಳ ಪರಿಚಯ ಇರುತ್ತದೆ. ಇವರೆಲ್ಲ ಭಾರೀ ಪವರ್ ಪುಲ್ ಎನ್ನುವ ಸಾಮಾನ್ಯ ಅಭಿಪ್ರಾಯ ಡೆಸ್ಕ್ ನಲ್ಲಿದ್ದವರಿಗೆ ಇರುತ್ತದೆ. ಎಲ್ಲ ವರದಿಗಾರರು ತಮ್ಮನ್ನು ಮಾರಿಕೊಂಡಿರುವುದಿಲ್ಲ, ಒಬ್ಬ ವರದಿಗಾರ ಸಾರ್ವಜನಿಕ ವ್ಯಕ್ತಿ. ತಾನು ಬರೆದ ವರದಿ ಮರುದಿನ ಪ್ರಕಟವಾಗದೆ ಇದ್ದರೆ,ಇಲ್ಲವೇ ನಿರ್ದಯವಾದ ಕತ್ತರಿ ಪ್ರಯೋಗಕ್ಕೆ ಈಡಾದರೆ ಮರುದಿನ ಮುಖ ಎತ್ತಿ ಓಡಾಡುವುದು ಆತನನ್ನು ಮುಜುಗರಕ್ಕೀಡುಮಾಡುತ್ತದೆ.
     ಇಷ್ಟು ಮಾತ್ರವಲ್ಲ, ವರದಿಗಾರರಿಗಿರುವ ರಿಸ್ಕ್ ಡೆಸ್ಕ್ ಪತ್ರಕರ್ತರಿಗಿಲ್ಲ. ಪ್ರಭುತ್ವ ಮತ್ತು ಅಪರಾಧ ಜಗತ್ತಿನಿಂದ ಸಾವು-ನೋವಿಗೀಡಾದವರಲ್ಲಿ ಬಹುಪಾಲು ವರದಿಗಾರರೇ ಎಂಬುದನ್ನು ಕೂಡಾ ಮರೆಯಬಾರದು. ವರದಿಗಾರರಿಗೆ ಡೆಸ್ಕ್ ನಲ್ಲಿರುವ ಪತ್ರಕರ್ತರ ಬಗ್ಗೆ ಒಂದು ರೀತಿಯ ತಿರಸ್ಕಾರ ಇರುತ್ತದೆ. ಇವರಿಗೆಲ್ಲಿ ಬರೆಯಲು ಬರುತ್ತೆ?, ಇವರೇನಿದ್ದರೂ ನಾವು ಕೊಟ್ಟದ್ದನ್ನು ತುಂಬಿ ಪೇಜ್ ಮಾಡುವ ಗುಮಾಸ್ತರು, ಜತೆಯಲ್ಲಿ ಅಸೂಯೆಯಿಂದ ನಿರ್ದಯವಾಗಿ ಸುದ್ದಿಯನ್ನು ಕತ್ತರಿಸಿ ಎಸೆಯುವವರು ಎನ್ನುವ ಸಿಟ್ಟು ವರದಿಗಾರರರಲ್ಲಿರುತ್ತದೆ. ಈ ಪರಸ್ಪರ ಆರೋಪಗಳಲ್ಲಿ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಸತ್ಯಾಂಶ ಇದೆ.
     ಹೆಚ್ಚಿನ ಪತ್ರಿಕೆಗಳಲ್ಲಿ ಡೆಸ್ಕ್ ಎನ್ನುವುದು ನಿರ್ಲಕ್ಷಿತ ವಿಭಾಗ. ಇದಕ್ಕೆ ಮುಖ್ಯಕಾರಣ ಹೊಸದಾಗಿ ಪತ್ರಿಕೆಗೆ ಸೇರುವವರು ನಾನು ಡೆಸ್ಕ್ ನಲ್ಲಿ ಕೆಲಸಮಾಡುತ್ತೇನೆಂದು ಹೇಳಿದವರನ್ನು ನಾನು ನೋಡಿದ್ದು ಅಪರೂಪ. ಎಲ್ಲರಿಗೂ ವರದಿಗಾರರಾಗುವ, ಅದರಲ್ಲೂ ರಾಜಕೀಯ ವರದಿಗಾರರಾಗುವ ತವಕ. ಸಾಮಾನ್ಯವಾಗಿ ವರದಿಗಾರನಾಗಿ ಸರಿಯಾಗಿ ಕೆಲಸ ಮಾಡದಿದ್ದರೆ ಇಲ್ಲವೆ ಏನಾದರೂ ಭಾನಗಡಿ ಮಾಡಿದರೆ, ಸಂಪಾದಕರು ಅಂತಹವರನ್ನು ಡೆಸ್ಕ್ ಗೆ ಎತ್ತಿ ಹಾಕಿ ಎಂದು ಹೇಳುವುದೂ ಉಂಟು. ಇದರಿಂದಾಗಿ ಡೆಸ್ಕ್ ನಲ್ಲಿರುವವರು ಎಂದರೆ ಒಲ್ಲದ ಕೆಲಸ ಮಾಡುವವರು ಮತ್ತು ಶಿಕ್ಷೆಗೊಳಗಾದವರು ಎನ್ನುವ ಅಭಿಪ್ರಾಯ ಸಹಜವಾಗಿ ಮೂಡುತ್ತದೆ. ಬಹಳಷ್ಟು ಪತ್ರಿಕೆಗಳಲ್ಲಿ ಪರಸ್ಪರ ವರ್ಗಾವಣೆಗಳಿಲ್ಲ. (ಪ್ರಜಾವಾಣಿಯಂತಹ ಕೆಲವು ಪತ್ರಿಕೆಗಳಲ್ಲಿದೆ.)
ಸಾಮಾನ್ಯವಾಗಿ ಸಮಾಜ ಒಂದಿಷ್ಟು ವರದಿಗಾರರು ಮತ್ತು ಟಿವಿ ಆ್ಯಂಕರ್ ಗಳನ್ನು ನೋಡಿ ಪತ್ರಕರ್ತರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತದೆ. ಇಂತಹ ಟೀಕಾಕಾರರ ಮಾತುಗಳನ್ನು ಕೇಳಿದಾಗೆಲ್ಲ ನೋವಾಗುತ್ತದೆ, ಡೆಸ್ಕ್ ಪತ್ರಕರ್ತರ ಬಗ್ಗೆ ಅನುಕಂಪ ಮೂಡುತ್ತದೆ. ಅವರು ತಾವು ಮಾಡದ ತಪ್ಪಿಗಾಗಿ ನೇಣುಗಂಬದ ಎದುರು ನಿಂತ ನಿರಪರಾಧಿಗಳು. ಪತ್ರಿಕೆ ಇಲ್ಲವೆ ಟಿವಿ ಕಚೇರಿಗಳಲ್ಲಿರುವ ಒಟ್ಟು ಸಿಬ್ಬಂದಿಯಲ್ಲಿ ವರದಿಗಾರರ ಸಂಖ್ಯೆ ಶೇಕಡಾ ಹತ್ತರಿಂದ ಇಪ್ಪತ್ತರಿಷ್ಟಿರಬಹುದು. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸದಾ ಸುದ್ದಿಯಲ್ಲಿರುವವರು ಇದೇ ವರದಿಗಾರರು.
    ಸಮಾಜದ ಕಣ್ಣಲ್ಲಿ ಭ್ರಷ್ಟರೆನಿಸಿಕೊಂಡ ಪತ್ರಕರ್ತರ ಪಟ್ಟಿಯನ್ನು ನೋಡಿ. ಅವರಲ್ಲಿ ಮುಕ್ಕಾಲು ಪಾಲು ವರದಿಗಾರರಾಗಿರುತ್ತಾರೆ. ಉಳಿದ ಪಾಪದ ಪಾಲನ್ನು ಒಂದಿಷ್ಟು ಸಂಪಾದಕರೆನಿಸಿಕೊಂಡವರು ಮತ್ತು ಡೆಸ್ಕ್ ಪತ್ರಕರ್ತರು ಹಂಚಿಕೊಂಡಿರುವುದನ್ನು ಕಾಣಬಹುದು. ಆದರೆ ಕಚೇರಿಯೊಳಗೆ ಇರುವ ಮುಕ್ಕಾಲು ಪಾಲು ಪತ್ರಕರ್ತರು ಕೇವಲ ಸಂಬಳವನ್ನು ನಂಬಿಕೊಂಡು ಬದುಕುವವರು. ಇವರಲ್ಲಿ ಹೆಚ್ಚಿನವರು ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕತೆಯಿಂದು ಬದುಕಬೇಕೆಂದು ನಿರ್ಧಾರ ಮಾಡಿದವರು. ಇನ್ನು ಕೆಲವರು ಕೆಟ್ಟುಹೋಗಲು ಅವಕಾಶ ಇಲ್ಲದೆ ಒಳ್ಳೆಯವರಾಗಿ ಉಳಿದುಕೊಂಡವರೂ ಇರಬಹುದು. ವಿಪರ್ಯಾಸವೆಂದರೆ ಈ ಬಹುಸಂಖ್ಯಾತ ಪತ್ರಕರ್ತರ ಹೆಸರು ‘ಜಿ ಕೆಟಗರಿ’ ಇಲ್ಲವೇ ಇನ್ನಾವುದೋ ಕೆಟಗರಿಯ ಸೈಟ್ ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದೇ ರೀತಿ ಪತ್ರಕರ್ತರ ಪ್ರಾಮಾಣಿಕತೆ, ವೃತ್ತಿನಿಷ್ಠೆಯನ್ನು ಆಧರಿಸಿ ನೀಡುವ ರಾಜ್ಯೋತ್ಸವ ಇಲ್ಲವೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿವಿಜೇತರ ಪಟ್ಟಿಯಲ್ಲಿಯೂ ಇವರ ಹೆಸರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಎರಡೂ ಕಡೆಗಳಲ್ಲೂ ಮೆರೆದಾಡುವವರು ವರದಿಗಾರರು. ಆರೋಪಗಳಿಗೆ ಇಬ್ಬರೂ ತಲೆಕೊಡಬೇಕಾಗುತ್ತದೆ, ಮನ್ನಣೆ-ಮಾನ್ಯತೆ ಮಾತ್ರ ವರದಿಗಾರರಿಗೆ ಹೆಚ್ಚು. ಇದು ದುರಂತ.

Saturday, March 28, 2015

ಕರ್ನಾಟಕ ಮೂಢನಂಬಿಕೆಗಳ ಪ್ರತಿಬಂಧಕ ಮಸೂದೆ (2013) ಕುರಿತು ಚರ್ಚೆ, ಸಂವಾದ



ಚರ್ಚೆ ಮತ್ತು ಸಂವಾದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳು