Sunday, April 12, 2015

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ ...

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದು.
1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.
ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.
ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.
‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.
ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?
ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.
ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.
ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?
1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?
ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?
ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.
ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.
ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.
‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.
ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.
ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.
ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.
ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.
ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).
ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.
ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.
ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.
ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.
ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.
3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.
ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.
ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?
ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.
ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.
ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.
ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.
ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.
ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.
ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.

Thursday, April 9, 2015

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ‘ರೋಗ ಪತ್ತೆ ವಿಧಾನ’ವಿದ್ದಂತೆ: ದಿನೇಶ್ ಅಮಿನ್ ಮಟ್ಟು


 ಬೆಂಗಳೂರು: ಏ, 9:- ಜಾತಿ ಎನ್ನುವ ರೋಗಕ್ಕೆ ಮೀಸಲಾತಿ ಒಂದು ಚಿಕಿತ್ಸಾ ವಿಧಾನವಾದರೆ ಜಾತಿ ಗಣತಿ ರೋಗ ಪತ್ತೆ ವಿಧಾನ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಶ್ರೀ ದಿನೇಶ್ ಅಮಿನ್ ಮಟ್ಟು ಅವರು ಅಭಿಪ್ರಾಯಪಟ್ಟರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಕಾರಣ ಯಾವುದೇ ಪಕ್ಷ ಅಥವಾ ರಾಜಕಾರಣಿ ಅಲ್ಲ; ಸಂವಿಧಾನ, ಶಾಸಕಾಂಗ ಹಾಗೂ ಕಾರ್ಯಾಂಗ. ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ವೈಜ್ಞಾನಿಕವಾಗಿ ಅಂಕಿ ಅಂಶಗಳ ಸಂಗ್ರಹಣೆಗಾಗಿ ಈ ಸಮೀಕ್ಷೆ ನಡೆಯುತ್ತಿದೆ. ಭಾರತ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮಾಹಿತಿ ಲಭ್ಯವಿರುತ್ತವೆ. ಆದರೆ ಹಿಂದುಳಿದ ವರ್ಗದವರ ಮಾಹಿತಿ ದೊರೆಯುವುದಿಲ್ಲ. ಇದರಿಂದ ಹಿಂದುಳಿದ ಜಾತಿಗಳ ಜನರ ಅಭಿವೃದ್ಧಿಗಾಗಿ ಯೋಜನೆ ರೂಪಿಸಲು ತೊಡಕಾಗುತ್ತದೆ. ಆರ್ಥಿಕ ಬಲ ತುಂಬುವುದರಿಂದ ಜಾತೀಯತೆಯ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮೀಸಲಾತಿಯ ದುರುಪಯೋಗ ತಡೆಯುವುದು ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸುವ ಉದ್ದೇಶಗಳಿಗೆ ಅಗತ್ಯವಿರುವ ನಿಖರ ಮಾಹಿತಿ ಈ ವೈಜ್ಞಾನಿಕ ಸಮೀಕ್ಷೆಯಿಂದ ದೊರೆಯುತ್ತದೆ. ಆದ್ದರಿಂದ ಎಲ್ಲರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಖರ ಮಾಹಿತಿ ನೀಡಿ ಅರ್ಹರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಫಲ ದೊರೆಯುವಂತಾಗಲು ಸಹಕರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಹೆಚ್.ಕಾಂತರಾಜ ಅವರು ಮಾತನಾಡಿ ಜಾತಿ ನಮ್ಮ ಶತ್ರು, ಆದರೆ ಅದನ್ನು ಓಡಿಸಲು ಶತ್ರು ಯಾರೆಂದು ಅರಿಯುವುದು ಮುಖ್ಯವಾದ್ದರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅತ್ಯಂತ ಮಹತ್ವಪೂರ್ಣವಾದದ್ದು, ಸಮಾನತೆಯ ಅನುಷ್ಠಾನಕ್ಕೆ ಈ ಸಮೀಕ್ಷೆಗೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಪ್ರತಿಪಾದಿಸಿದರು.
ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ನಡೆಸಲಾಗುತ್ತಿದ್ದು, ಯಾವ ಸಮುದಾಯದವರಿಗೂ ತೊಂದರೆ ಇಲ್ಲ. ಇದು ವಾಸ್ತವಿಕ ಅಂಕಿ ಅಂಶಗಳನ್ನು ಕ್ರೋಢೀಕರಿಸುವ ಕಾರ್ಯಕ್ರಮ ಎಂದು ಅವರು ಸ್ಪಷ್ಟಪಡಿಸಿದರು. ಸಮೀಕ್ಷೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ನಾಡಿನ ಜನತೆಗೆ ಮನವಿ ಮಾಡಿದ ಅವರು ಮಾಹಿತಿ ಅಪೂರ್ಣವಾದಲ್ಲಿ ಅಂತಹ ಅಂಶಗಳ ಮರು ಪರಿಶೀಲನೆ, ಚರಿತ್ರೆ ಅರಿತು ವಿಚಾರಣೆ ಮಾಡುವ ಅಧಿಕಾರ ಆಯೋಗಕ್ಕಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷ ಡಾ: ಸಿ.ಎಸ್.ದ್ವಾರಕನಾಥ್ ಅವರು ಮಾತನಾಡಿ ಜಾತಿ ಮೂಲದ ಬಡತನಕ್ಕೆ ಪರಿಹಾರ ಕಂಡುಕೊಳ್ಳಲು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಹಕಾರಿ ಎಂದು ನುಡಿದರು. ಸಮೀಕ್ಷೆ ಮೂಲಕ ಸರ್ಕಾರದ ಸೌಲಭ್ಯಗಳಿಂದ, ಮೀಸಲಾತಿಯಿಂದ ವಂಚಿತರಾದ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿದೆ. ಹಲವಾರು ಜಾತಿಗಳು ತಮ್ಮ ಅಸ್ಥಿತ್ವ ಕಂಡುಕೊಳ್ಳಲು ಸಹ ಈ ಸಮೀಕ್ಷೆ ನೆರವಾಗಲಿದೆ. 1931ರ ನಂತರ ಜಾತಿವಾರು ಗಣತಿ ನಡೆದಿಲ್ಲ. ನ್ಯಾಯಾಲಯಗಳಲ್ಲಿ ಮೀಸಲಾತಿ ವಿರೋಧಿ ತೀರ್ಪುಗಳು ಬರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಳಿ ನಿಖರ ಮಾಹಿತಿ ಇಲ್ಲದಿರುವುದೇ ಕಾರಣ ಎಂದು ಅವರು ತಿಳಿಸಿದರು. ಈ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ರೂಪಿಸಲಾಗಿದ್ದು, ಎಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಬೆಟ್ಟಸ್ವಾಮಿ ಹಾಗೂ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ಶ್ರೀ ನಾಗರಾಜ್ ಅವರು ಉಪಸ್ಥಿತರಿದ್ದರು. ಬೆಂಗಳೂರು ನಗರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಶ್ರೀ ಪುಟ್ಟರಾಜು ಅವರು ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಶ್ರೀಮತಿ ಎಂ.ಸಹನಾ ವಂದಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಡಾ: ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಮೀಕ್ಷೆಯ ಪ್ರಚಾರಕ್ಕಾಗಿ ಸಿದ್ಧಪಡಿಸಲಾದ ಪ್ರಚಾರ ವಾಹನಕ್ಕೆ ಶ್ರೀ ಹೆಚ್.ಕಾಂತರಾಜ ಮತ್ತು ಶ್ರೀ ಡಾ:ಸಿ.ಎಸ್.ದ್ವಾರಕನಾಥ್ ಅವರು ಚಾಲನೆ ನೀಡಿದರು.
(ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

ದಾವಣಗೆರೆ : ದೇವನಗರಿ ಕಲಾವೈಭವ ಜಿಲ್ಲಾ ಉತ್ಸವದ ಸರ್ವಗೋಷ್ಠಿಗಳ ಉದ್ಘಾಟನೆ


ವಿಚಾರಗೋಷ್ಠಿಯಲ್ಲಿ ದಿನೇಶ್‌ ಅಮೀನ್‌ಮಟ್ಟು ಆತಂಕ

ಸಂಸ್ಕೃತಿ ಹೆಸರಲ್ಲಿ ಅಭಿಪ್ರಾಯ ಹೇರಿಕೆ


ದಾವಣಗೆರೆ: ಕಮ್ಯುನಿಸ್ಟ್‌ ಚಳವಳಿ, ಸಮಾಜವಾದಿ ಚಳವಳಿ ಹಾಗೂ ಕೈಗಾರೀಕರಣವನ್ನು ಜತೆಯಲ್ಲಿಟ್ಟು ನೋಡಲು ಸಾಧ್ಯವಿಲ್ಲ. ಆದರೆ, ದಾವಣಗೆರೆ ಮಾತ್ರ ಇವೆಲ್ಲವನ್ನೂ ಜತೆಯಲ್ಲಿಟ್ಟುಕೊಂಡೇ ಅಭಿವೃದ್ಧಿ ಹೊಂದಿದ ವಿಶಿಷ್ಟ ಜಿಲ್ಲೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.
ನಗರದ ಹೈಸ್ಕೂಲ್‌ ಮೈದಾನದಲ್ಲಿ ಬುಧವಾರ ‘ದೇವನಗರಿ ಕಲಾವೈಭವ’ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಗೋಷ್ಠಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಸಂಸ್ಕೃತಿ ಬಹು ಚರ್ಚಿತ ವಿಚಾರ. ಸಂಸ್ಕೃತಿಯನ್ನು ರಕ್ಷಿಸುವ ನೆಪದಲ್ಲಿ ಒಂದುವರ್ಗ ಬಲವಂತವಾಗಿ ಜನರ ಮೇಲೆ ಅವರ ಅಭಿಪ್ರಾಯಗಳನ್ನು ಹೇರುವ ಕೆಲಸ ಮಾಡುತ್ತಿದೆ. ಉಡುಗೆ–ತೊಡುಗೆ, ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವೂ ನಮ್ಮ ಇಷ್ಟಕ್ಕೆ ಅನುಸಾರವಾಗಿ ಇರಬೇಕೇ ಹೊರತು, ಬೇರೆಯವರ ಹಸ್ತಕ್ಷೇಪ ಇರಬಾರದು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
‘ಏಕ ಸಂಸ್ಕೃತಿ ಹೆಸರಲ್ಲಿ ಮತ್ತೊಂದು ಧರ್ಮವನ್ನು ಹೀಗಳೆಯುವ, ಅಸಮಾನತೆ ಸಾರುವ, ಅಸ್ಪ್ರುಶ್ಯತೆಯನ್ನು ಎತ್ತಿಹಿಡಿಯುವ, ಕಂದಾಚಾರ, ಮೌಢ್ಯಗಳನ್ನು ತುಂಬುವ  ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿವೆ. ನಮ್ಮದು ನೂರಾರು ಜಾತಿಗಳ, ಲಕ್ಷಾಂತರ ಆಚರಣೆಗಳ, ಬಹುಸಂಸ್ಕೃತಿ ಇರುವ ದೇಶ. ಅವಗಳನ್ನು ಎಂದಿಗೂ ನಾಶಮಾಡುವ ಕೆಲಸಕ್ಕೆ ಕೈಹಾಕಬಾರದು. ಸಂಸ್ಕೃತಿ ಅನುಕರಣೆ ವ್ಯಕ್ತಿಯ ವೈಯಕ್ತಿಕ ವಿಚಾರವಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಆಧುನಿಕ ಸಂಸ್ಕೃತಿ ಎಂಬ ಪರಿಕಲ್ಪನೆ ಇಂದು ನಿಜವಾದ ಅರ್ಥ ಕಳೆದುಕೊಂಡಿದೆ. ಯುವಜನತೆ, ಜೀನ್ಸ್‌ ಹಾಕುವುದು, ಮಿನಿ, ಮಿಡಿ ಧರಿಸುವುದು, ಬಾರ್, ಪಬ್‌ಗಳಿಗೆ ಹೋಗುವುದು, ನಟ, ನಟಿಯರನ್ನು ಅನುಕರಿಸುವುದೇ ಆಧುನಿಕ ಸಂಸ್ಕೃತಿ ಎಂದು ನಂಬಿದ್ದಾರೆ. ವ್ಯಕ್ತಿಯ ಆಲೋಚನೆಗಳಲ್ಲಿ ಆಧುನಿಕತೆ ಇದ್ದಾಗ ಮಾತ್ರ ಅದು ಆಧುನಿಕ ಸಂಸ್ಕೃತಿಯಾಗುತ್ತದೆ. ನಮ್ಮ ಉಡುಗೆ ತೊಡುಗೆ, ಆಹಾರ ಪದ್ಧತಿ ಬಗ್ಗೆ ನಮಗೆ ಕೀಳರಿಮೆ ಇರಬಾರದು ಎಂದು ಅಮೀನ್‌ಮಟ್ಟು ಕಿವಿಮಾತು ಹೇಳಿದರು.
ಬಂಡಾಯ ಸಾಹಿತಿ ಆರ್‌.ಜಿ.ಹಳ್ಳಿ ನಾಗರಾಜ್‌ ಮಾತನಾಡಿ, ಪಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಬದುಕಿನ ಅನಿವಾರ್ಯ ಭಾಗವಾಗಿವೆ. ಪುಟ್ಟ ಮೊಬೈಲ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ವಿಶ್ವವೇ ಒಂದು ಹಳ್ಳಿ ಎಂಬ ಪರಿಕಲ್ಪನೆಯಲ್ಲಿ ನಾವು ಬದುಕುತ್ತಿದ್ದೇವೆ. ಜಾಗತೀಕರಣ ಫಲವಾಗಿ ನಗರ ಹಾಗೂ ಹಳ್ಳಿಗಳ ಮಧ್ಯೆ ವ್ಯತ್ಯಾಸ ಇಲ್ಲವಾಗಿದೆ ಎಂದರು.
ಒಂದು ಜಿಲ್ಲೆಯ ಹಿರಿಮೆ ವೈಭವದ, ಶ್ರೀಮಂತ ಬದುಕಿನ ಮೇಲೆ ಅವಲಂಬಿತವಾಗಿರುವುದಿಲ್ಲ. ಕಲೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ಶ್ರೀಮಂತ ಕಲೆಗಳ ತವರಾಗಿದ್ದು, ಅದನ್ನು ಪೋಷಿಸಿ ಬೆಳೆಸಿಕೊಂಡುಹೋಗುವ ಕೆಲಸ ಮಾಡಬೇಕು ಎಂದರು.
‘ಜಿಲ್ಲೆಯ ಅಭಿವೃದ್ಧಿ ಮುನ್ನೋಟ’ ಎಂಬ ವಿಷಯದ ಬಗ್ಗೆ ಮಾತನಾಡಿದ ದಾವಣಗೆರೆ ವಿವಿ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ದಾವಣಗೆರೆ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ 65ರಷ್ಟು ಮಂದಿ ಕೃಷಿ ಅವಲಂಬಿಸಿದ್ದಾರೆ. ಭತ್ತ ಹಾಗೂ ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ರಾಷ್ಟ್ರದ ಆಹಾರ ಭದ್ರತೆಗೆ ಜಿಲ್ಲೆಯ ಕೊಡುಗೆ ದೊಡ್ಡದು ಎಂದರು.
ಜಾಗತೀಕರಣದ ಪ್ರಭಾವದಿಂದ ಬೌದ್ಧಿಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿದ್ದು, ಜಿಲ್ಲೆಯಲ್ಲಿ 4 ಎಂಜಿನಿಯರಿಂಗ್‌, 2 ಮೆಡಿಕಲ್‌, 2 ಡೆಂಟಲ್‌, 4 ಪಾಲಿಟೆಕ್ನಿಕ್‌ ಕಾಲೇಜು, 15 ವ್ಯಾಪಾರ ನಿರ್ವಹಣಾ ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸುವ ಮೂಲಕ ಜಿಲ್ಲೆಗೆ ಖ್ಯಾತಿ ತಂದಿದ್ದಾರೆ ಎಂದರು.
‘ಜಿಲ್ಲೆಯ ಸಾಹಿತ್ಯ–ಸಮಾಜ–ಸಾಂಸ್ಕೃತಿಕ’ ಒಳನೋಟ ಕುರಿತು ದಾವಣಗೆರೆ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ ಮಾತನಾಡಿ, ಜನಪದ ಪ್ರೀತಿಯನ್ನು ಅಪ್ಪಿಕೊಳ್ಳುವಂತಹ ಕೆಲಸ  ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉತ್ಸವಗಳು ಗ್ರಾಮೀಣ ಭಾಗಗಳಲ್ಲೂ ನಡೆಯಲಿ, ಜಗಳೂರು, ಹರಪನಹಳ್ಳಿಯಲ್ಲಿ  ಜನಪದ ಸಾಹಿತ್ಯ ಶ್ರೀಮಂತವಾಗಿದೆ. ಪ್ರಸ್ತುತ ಇಲ್ಲಿನ ದೊಡ್ಡಾಟ ಕಲೆ ನಶಿಸುತ್ತಿದ್ದು, ಯಕ್ಷಗಾನದಂತಹ ಕಲೆಯನ್ನು ವೈಭವೀಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದೊಡ್ಡಾಟ ಕಲೆಗೆ ಮರುಜೀವ ಕೊಡುವಕೆಲಸವಾಗಬೇಕು ಎಂದು ಪ್ರತಿಪಾದಿಸಿದರು. ರಾಮಚಂದ್ರಪ್ಪ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್‌.ಟಿ.ಅಂಜನ ಕುಮಾರ್‌, ಕಸಾಪ ಗೌರವ ಕಾರ್ಯದರ್ಶಿ ಬಾಮಾ ಬಸವರಾಜಯ್ಯ, ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(ಕೃಪೆ: ಪ್ರಜಾವಾಣಿ 09/04/2015)
-----------------------------------------------------------------------------------------------------------------------------

ದಾಖಲಾಗದ ಗಿರಿಣಿ ಕಾರ್ಮಿಕರ ನೋವು
.ಗಿರಿಜಾ ವೇದಿಕೆ, ದಾವಣಗೆರೆ 

ಸಂಸ್ಕೃತಿ ಎನ್ನುವುದು ಆಯ್ಕೆ ಆಗಬೇಕು. ಆದರೆ ಸಂಸ್ಕತಿಯನ್ನು ನಿಯಂತ್ರಿಸುವ ಒಂದು ಗುಂಪು ಹುಟ್ಟಿಕೊಂಡಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಹೇಳಿದರು. 

ಜಿಲ್ಲಾಡಳಿತದಿಂದ ಆರಂಭವಾದ ದೇವನಗರಿ ಕಲಾ ವೈಭವ ದಾವಣಗೆರೆ ಜಿಲ್ಲಾ ಉತ್ಸವದ ಮೊದಲ ದಿನ ಬುಧವಾರ ಆಯೋಜಿಸಿದ್ದ 'ದಾವಣಗೆರೆ ಜಿಲ್ಲೆ ಸಮಕಾಲೀನ ಸಂದರ್ಭಗಳು' ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು. 

ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿ ನಡುವೆ ಸಂಘರ್ಷ ನಡೆದಿದೆ. ಸಂಸ್ಕೃತಿ ಯನ್ನು ಬಲವಂತವಾಗಿ ಹೇರಿದರೆ ಯಾರೂ ಇಷ್ಟ ಪಡುವುದಿಲ್ಲ. ನೈತಿಕ ಪೋಲಿಸ್‌ಗಿರಿ ಹೆಸರಲ್ಲಿ ಡಿಕ್ಟೇಟ್ ಮಾಡುವುದು 

ನಡೆದಿದೆ. ನಿಷೇಧ, ನಿರ್ಬಂಧದ ಮೂಲಕ ನಮ್ಮ ಸಂಸ್ಕೃತಿ ಕಿತ್ತುಕೊಳ್ಳುವ ಮತ್ತು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಧಾರ್ಮಿಕ ಚಳವಳಿ ಜತೆಯಲ್ಲಿಯೇ ಪ್ರತಿಭಟನಾ ಚಳವಳಿಯೂ ನಡೆದಿದೆ. ಇದರಲ್ಲಿ ಬಸವ ಚಳವಳಿ ಕೂಡ ಒಂದು. ಸುಧಾರಕರು ಹೊಸ ಸಂಸ್ಕೃತಿ ಕಟ್ಟುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಏಕ ಸಂಸ್ಕೃತಿ ಯಾವಾಗಲೂ ಜನ ವಿರೋಧಿ ಎಂದರು. 

ಆಶಯ ನುಡಿಗಳನ್ನಾಡಿದ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಓಡುತ್ತಿದೆ. ಈ ವೇಗ ಕೆಲ ಅನುಕೂಲಗಳನ್ನು ಕಲ್ಪಿಸಿದರೂ ಅಷ್ಟೇ ಅನಾಹುತಗಳನ್ನೂ ಸೃಷ್ಟಿಸಿದೆ. ಒಂದೆಡೆ ಸಮಾಜ ಆರೋಗ್ಯದಿಂದ ಅನಾರೋಗ್ಯದ ಕಡೆ ಸಾಗುತ್ತಿದೆ. ಇದಕ್ಕೆ ದಾವಣಗೆರೆ ಕೂಡ ಹೊರತಲ್ಲ. ಈ ಜಾಗತೀಕರಣದಿಂದ ತಲ್ಲಣಗಳು, ಸವಾಲುಗಳು ಸೃಷ್ಟಿಯಾಗಿವೆ. ಭಯೋತ್ಪಾದನೆ, ಕೋಮುವಾದ ಹೆಚ್ಚುತ್ತಿದೆ ಎಂದರು. 

ಜಿಲ್ಲೆಯ ಅಭಿವೃದ್ಧಿ ಮನ್ನೋಟ ಕುರಿತು ವಿಷಯ ಮಂಡಿಸಿದ ಪ್ರಾಧ್ಯಾಪಕ ಡಾ.ಕೆ.ಬಿ.ರಂಗಪ್ಪ, ನೈಸರ್ಗಿಕ ಸಂಪನ್ಮೂಲಗಳ ಜತೆ ರಸ್ತೆ, ಸಾರಿಗೆ ವ್ಯವಸ್ಥೆ ಹೊಂದಿರುವ ಜಿಲ್ಲೆ ಅಭಿವೃದ್ಧಿಯ ಸಾಮರ್ಥ್ಯ ಹೊಂದಿದೆ ಎಂದು ಪ್ರತಿಪಾದಿಸಿದರು. 

ಇಂದು ಕೃಷಿ ವೆಚ್ಚ ಹೆಚ್ಚಳದಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದು ಸಾಲಕ್ಕೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇನ್ನೊಂದೆಡೆ ಕೃಷಿಯೇತರ ಬಳಕೆ ಹಿಗ್ಗುತ್ತಿದ್ದು ಭೂಮಿಯ ಸಟ್ಟಾ ವ್ಯಾಪಾರ ನಡೆಯುತ್ತಿದೆ. ಇದರಿಂದ ಆಹಾರ ಭದ್ರತೆಗೆ ಆತಂಕ ಬಂದೊದಗಿದೆ ಎಂದು ಹೇಳಿದರು. 

ಜಿಲ್ಲೆಯ ಸಾಂಸ್ಕೃತಿಕ ಒಳ ನೋಟಗಳು ಕುರಿತು ಪ್ರಾಧ್ಯಾಪಕ ಡಾ.ಎಂ.ಮಂಜಪ್ಪ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲೆಯಲ್ಲಿ ಹರಪನಹಳ್ಳಿ, ಜಗಳೂರು ಸೇರಿದಂತೆ ಎಲ್ಲರನ್ನು ಒಳಗೊಂಡ ಸಾಂಸ್ಕೃತಿಕ ಸಂಬಂಧ ಬೆಸೆಯುವ ಕೆಲಸ ಆಗಬೇಕಿದೆ ಎಂದರು. 

ದಾವಣಗೆರೆ ದೊಡ್ಡಾಟ, ಸಣ್ಣಾಟ, ರಂಗ ಚುಟುವಟಿಕೆಗಳಿಗೆ ಕ್ರಿಯಾಶೀಲವಾಗಿದ್ದ, ಕಲೆ ಪೋಷಿಸಿದ ಊರು. ಇಂದು ದೊಡ್ಡಾಟ, ಸಣ್ಣಾಟ ಹೋಗಿ ಯಕ್ಷಗಾನ ವಿಜೃಂಭಿಸುತ್ತಿದೆ. ಈ ಬಗ್ಗೆ ಚಿಂತನೆ ನಡೆಯಬೇಕು. ಇಲ್ಲಿನ ಜವಳಿ ಗಿರಣಿಗಳಿಗೆ ಬೀಗ ಬಿದ್ದ ನಂತರ ಬೀದಿಗೆ ಬಿದ್ದ ಕಾರ್ಮಿಕರ ನೋವು, ಸಂಕಟಗಳನ್ನು ಜಿಲ್ಲೆಯ ಸಾಹಿತ್ಯ ದಾಖಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಾದೇಶಿಕ ಅಸಮತೋಲನ ಇಂದಿಗೂ ಮುಂದುವರಿದಿದೆ. ಇಲ್ಲಿನ ಗಾಂಧಿನಗರದಲ್ಲಿ ಬದುಕಲು ಕೂಡ ಸಾಧ್ಯವಿಲ್ಲದ ಸ್ಥಿತಿಯಿದೆ. ಬೀದಿಗೆ ಬಿದ್ದ ಕಾರ್ಮಿಕರ ಬದುಕಿನ ಬಗ್ಗೆ ಸಮಾಜ ಮಾತನಾಡಲಿಲ್ಲ. ಈಗಲಾದರೂ ಈ ಜನರ ನೋವು, ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. 

ಡಿಸಿ ಎಸ್.ಟಿ.ಅಂಜನ್‌ಕುಮಾರ್, ಸಿಇಒ ಎಸ್.ಬಿ.ಬೊಮ್ಮನಹಳ್ಳಿ, ಡಾ.ಎಚ್.ವಿಶ್ವನಾಥ್, ಬಾ.ಮ. ಬಸವರಾಜಯ್ಯ ಇತರರು ಇದ್ದರು. 

*** ಪ್ರಗತಿಪರರು ಮಾಡುವ ತಪ್ಪು ಪ್ರಗತಿಪರರು ತಪ್ಪು ಮಾಡುತ್ತಿದ್ದಾರೆ, ನಾಸ್ತಿಕ ಆಗಿರಬೇಕು, ಯಾವುದೇ ಧರ್ಮದ ಬಂಧನದಲ್ಲಿರಬಾರದು ಎಂದೆಲ್ಲಾ ಹೇಳುತ್ತಿದ್ದಾರೆ. ನಾವು ಈ ರೀತಿ ವರ್ತಿಸಿದರೆ ಅಪ್ಪ-ಅಮ್ಮನೇ ಮನೆಗೆ ಬಿಟ್ಟುಕೊಳ್ಳುವುದಿಲ್ಲ.
ಹಾಗಾಗಿ ಈ ರೀತಿ ಹೇಳುವುದರಿಂದ ಸುಧಾರಣೆ ಸಾಧ್ಯವಿಲ್ಲ. ಇವರು ಲೋಹಿಯಾ ಚಿಂತನೆ ಗಮನಿಸಬೇಕು.ಅವರು ಕಡೇ ದಿನಗಳಲ್ಲಿ ರಾಮಚರಿತ ಪಠಿಸುತ್ತಿದ್ದರು ಎಂದು ದಿನೇಶ್‌ಅಮಿನ್‌ಮಟ್ಟು ಹೇಳಿದರು. 

*** ತಾರತಮ್ಯ ಪ್ರತಿಧ್ವನಿ ಗೋಷ್ಠಿಯಲ್ಲಿ ಎಲ್ಲ ಅತಿಥಿಗಳು ದಾವಣಗೆರೆಯ ಹಿಂದಿನ ಕಾರ್ಮಿಕ ಚಳವಳಿಯ ವೈಭವ ನೆನಪಿಸಿಕೊಂಡಿದ್ದು ವಿಶೇಷ. ಸಂವಾದದಲ್ಲೂ ಹರಪನಹಳ್ಳಿ, ಜಗಳೂರು ತಾಲೂಕುಗಳ ಅಭಿವೃದ್ಧಿ ತಾರತಮ್ಯ ಈಗಲೂ ಮುಂದುವರಿದಿದೆ. ಮಾನಸಿಕವಾಗಿ ಒಂದಾಗುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.
(ಕೃಪೆ : ವಿಜಯ ಕರ್ನಾಟಕ 09/04/2015)

Monday, March 30, 2015

ಗಂಡ-ಹೆಂಡತಿಯರಿದ್ದ ಹಾಗೆ, ಯಾರುಮೇಲು? ಯಾರು ಕೀಳು?


( ನನ್ನ ತಪ್ಪನ್ನು ಎತ್ತಿತೋರಿಸಿದವರು ಬಿಟಿವಿನಲ್ಲಿರುವ ಪತ್ರಕರ್ತ ಶ್ರೀನಾಥ ಬೆಳಚಿಕ್ಕನಹಳ್ಳಿ. ಅವರೇ ಇಚ್ಚೆ ಪಟ್ಟಿರುವ ಕಾರಣ ಹೆಸರು ಹೇಳಿದ್ದೇನೆ. ಇವರನ್ನು ಹಿಂದೊಮ್ಮೆ ಕುಪ್ಪಳ್ಳಿಯಲ್ಲಿ ಭೇಟಿ ಮಾಡಿದ್ದನ್ನು ಅವರೇ ನೆನಪುಮಾಡಿಕೊಟ್ಟರು. ಡೆಸ್ಕ್ ಜರ್ನಲಿಸ್ಟ್ ಗಳ ಬಗೆಗಿನ ನನ್ನ ಅವಸರದ ಅಭಿಪ್ರಾಯಕ್ಕೆ ಮೊದಲು ಅವರೆಲ್ಲರ ಕ್ಷಮೆಕೋರುತ್ತೇನೆ.)
    ವರದಿಗಾರರು ಮತ್ತು ಡೆಸ್ಕ್ ಜರ್ನಲಿಸ್ಟ್ ಗಳ ನಡುವಿನ ಶೀತಲ ಸಮರಕ್ಕೆ ಪತ್ರಿಕೋದ್ಯಮದಷ್ಟೇ ದೀರ್ಘವಾದ ಇತಿಹಾಸ ಇದೆ. ಇವರಿಬ್ಬರದ್ದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಗಂಡ-ಹೆಂಡತಿಯರಂತಹ ಪಾತ್ರ. ಗಂಡ ಹೊರಗೆ ಹೋಗಿ ಸಂಪಾದನೆ ಮಾಡಿ ಬರುವವ, (ಸುದ್ದಿ ಸಂಪಾದನೆ ರೀತಿ) ಹೆಂಡತಿ ಮನೆಯಲ್ಲಿದ್ದು ಅಡಿಗೆ ಮಾಡುವವಳು (ಪತ್ರಿಕೆಯನ್ನು ರೂಪಿಸುವ ರೀತಿ). ಇವರಲ್ಲಿ ಯಾರೊಬ್ಬರು ಮುಷ್ಕರ ಹೂಡಿದರೆ ಸಂಸಾರ ಬಂದ್. ಇವರಲ್ಲಿ ಯಾರು ಮೇಲು ಯಾರು ಕೀಳು ಎನ್ನುವುದನ್ನು ಹೇಳಲಾಗುತ್ತದೆಯೇ? ಅರ್ಥಮಾಡಿಕೊಂಡರೆ ಇಬ್ಬರು ಸಮಾನರು, ಅಪಾರ್ಥಮಾಡಿಕೊಂಡರೆ ಗಲಾಟೆ ಸಂಸಾರ. ಇದೇ ರೀತಿ ವರದಿಗಾರರು ಮತ್ತು ಡೆಸ್ಕ್ ಪತ್ರಕರ್ತರ ಪಾತ್ರಗಳನ್ನು ನಟ ಮತ್ತು ನಿರ್ದೇಶಕರ ಪಾತ್ರಗಳಿಗೂ ಹೋಲಿಸಬಹುದು.
     ವರದಿಗಾರರ ನೆತ್ತಿ ಮೇಲಿರುವ ದೊಡ್ಡ ಕೋಡು ಎಂದರೆ ಅವರಿಗೆ ಸಿಗುವ ಬೈಲೈನ್ ಗಳು. ಹಿಂದಿನಂತಲ್ಲ, ಇತ್ತೀಚೆಗೆ ಬೈಲೈನ್ ಗಳು ಬೇಕಾಬಿಟ್ಟಿಯಾಗಿ ಸಿಗುತ್ತವೆ. ಈಗಿನ ಕಾಲದಲ್ಲಿ ವರದಿಗಾರ ಮುಖರಹಿತ ಪತ್ರಕರ್ತನಲ್ಲ, ಅವರಲ್ಲಿ ಎಷ್ಟೋ ಮಂದಿ ಸೆಲೆಬ್ರಿಟಿಗಳು. ಅವರಿಗೆ ಜನಸಂಪರ್ಕ, ಓದುಗರ ಮೆಚ್ಚುಗೆ ಎಲ್ಲವೂ ಲಭ್ಯ. ಸಂಬಳದ ಜತೆಗೆ ಅವರಿಗೆ ಜನಪ್ರಿಯತೆ ಬೋನಸ್ ರೂಪದಲ್ಲಿ ಬರುತ್ತದೆ. ಈ ಭಾಗ್ಯ ಡೆಸ್ಕ್ ನವರಿಗಿಲ್ಲ.ವರದಿಗಾರರ ಯಶಸ್ವಿ ಅನಿಸಿಕೊಳ್ಳಲು ಬರವಣಿಗೆಯ ಶಕ್ತಿ ಜತೆ ಆತನಿಗಿರುವ ಸುದ್ದಿಮೂಲಗಳ ಸಂಪರ್ಕ ಮುಖ್ಯ. ಬರವಣಿಗೆ ಕೈಹಿಡಿಯದೆ ಇದ್ದರೂ ಸುದ್ದಿ ಸಂಗ್ರಹದ ಸಾಮರ್ಥ್ಯದ ಮೂಲಕವೇ ಜನಪ್ರಿಯ ವರದಿಗಾರರಿದ್ದವರಿದ್ದಾರೆ. ಎರಡನ್ನೂ ಮೈಗೂಡಿಸಿಕೊಂಡವರು ಹೆಚ್ಚು ಜನಪ್ರಿಯರಾಗುತ್ತಾರೆ.
   ಡೆಸ್ಕ್ ಪತ್ರಕರ್ತರೇನಿದ್ದರೂ ತೆರೆಯ ಹಿಂದಿನ ಕಲಾವಿದರು. ಅವರೆಷ್ಟೇ ಚೆನ್ನಾಗಿ ಕೆಲಸಮಾಡಿದರೂ ಜನಪ್ರಿಯತೆಯೇನಿದ್ದರೂ ಕಚೇರಿಗೆ ಸೀಮಿತ. ವರದಿಯೊಂದನ್ನು ತಿದ್ದಿ ತೀಡಿ ಹೊಸ ಅಂಶಗಳ ಜತೆ ಅಪ್ ಡೇಟ್ ಮಾಡಿ ಆಕರ್ಷಕ ತಲೆಬರಹಕೊಟ್ಟು ಪ್ರಕಟಿಸುವ ಇಂತಹ ಉಪಸಂಪಾದಕನನ್ನು ಗುರುತಿಸುವವರು ಕಡಿಮೆ. ಮೆಚ್ಚುಗೆ ಹರಿದುಹೋಗುವುದು ವರದಿಗಾರರ ಕಡೆಗೆ. ಡೆಸ್ಕ್ ನಲ್ಲಿರುವವರಿಗೆ ಜನಸಂಪರ್ಕದ ಅಗತ್ಯ ಇರುವುದಿಲ್ಲ. ಆದರೆ ಅವರು ವರದಿಗಾರರಿಗಿಂತಲೂ ಬುದ್ದಿವಂತರಾಗಿರಬೇಕಾಗುತ್ತದೆ. ಅವರಿಗೆ ಸುದ್ದಿಯ ಹಿನ್ನೆಲೆ-ಮುನ್ನೆಲೆ ಗೊತ್ತಿರಬೇಕು. ಈ ಬಲದಿಂದ ಸುದ್ದಿಯಮಹತ್ವವನ್ನು ತೀರ್ಮಾನಿಸುವ ಶಕ್ತಿಯನ್ನು ಆತ ಬೆಳೆಸಿಕೊಳ್ಳಬೇಕು. ವ್ಯಾಕರಣದ ಮೂಲಪಾಠಗಳನ್ನು ತಿಳಿದಿರಬೇಕು. ಭಾಷಾಂತರಕ್ಕೆ ಬೇಕಾದಷ್ಟು ಇಂಗ್ಲೀಷ್ ಜ್ಞಾನ ಇರಬೇಕು. ಇದರ ಜತೆಗೆ ತಂತ್ರಜ್ಞಾನದ ಅರಿವು ಇರಬೇಕು.
      ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯ ವ್ಯವಸ್ಥೆ ಇರುತ್ತದೆ. ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಗಳಲ್ಲಿ ಡೆಸ್ಕ್ ಗೆ ವರದಿಗಾರರ ವಿಭಾಗಕ್ಕೆ ಕೊಡುವಷ್ಟೇ ಮಹತ್ವ ನೀಡುತ್ತಾರೆ. ಎಷ್ಟೋ ಬಾರಿ ವರದಿಗಾರರು ಪೋನಿನಲ್ಲಿ ಸುದ್ದಿಯ ಮುಖ್ಯಾಂಶಗಳನ್ನು ಕೊಟ್ಟುಬಿಟ್ಟರೆ, ಉಪಸಂಪಾದಕ ಒಂದು ಚಂದದ ವರದಿ ಸಿದ್ದ ಪಡಿಸಿಬಿಡುತ್ತಾನೆ. ಕನ್ನಡದ ಮಟ್ಟಿಗೆ ಇನ್ನೂ ಈ ವ್ಯವಸ್ಥೆ ಎಲ್ಲ ಕಡೆ ಬಂದ ಹಾಗಿಲ್ಲ. ಭಾಷಾ ಪತ್ರಿಕೋದ್ಯಮದೊಳಗಿನ ವ್ಯವಸ್ಥೆಯಲ್ಲಿ ವರದಿಗಳನ್ನು ವರದಿಗಾರರು ಅಂತಿಮ ರೂಪದಲ್ಲಿ ಕೊಡಬೇಕೆಂದು ಡೆಸ್ಕ್ ಬಯಸುತ್ತದೆ. ‘ನಿಮ್ಮ ವರದಿಗಳನ್ನು ತಿದ್ದಿಕೊಂಡು ಕೂರಲು ನಮಗೆ ಸಮಯ ಇಲ್ಲ. ಬೇರೆ ಕೆಲಸಗಳಿರುತ್ತವೆ’ ಎಂದು ಉಪಸಂಪಾದಕರು ಗದರಿಸುತ್ತಿರುತ್ತಾರೆ. ಅದು ನಿಜ ಕೂಡಾ, ಬದಲಾದ ತಂತ್ರಜ್ಞಾನದ ಯುಗದಲ್ಲಿ ಪೇಜಿನೇಷನ್ ಹೊಣೆ ಕೂಡಾ ಉಪಸಂಪಾದಕನ ತಲೆಗೆ ಕಟ್ಟಲಾಗಿದೆ. ಜತೆಗೆ ಏಜನ್ಸಿಕಾಪಿಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಕೆಲಸವೂ ಇರುತ್ತದೆ. ಜತೆಗೆ ಅವರ ತಲೆಮೇಲೆ ಡೆಡ್ ಲೈನ್ ಕತ್ತಿ ತೂಗುತ್ತಿರುತ್ತದೆ.
      ಸಮಸ್ಯೆಯೇನೆಂದರೆ, ಬಹಳಷ್ಟು ಡೆಸ್ಕ್ ಪತ್ರಕರ್ತರಿಗೆ ವರದಿಗಾರರ ಬಗ್ಗೆ ಸಣ್ಣ ಅಸೂಯೆ ಇರುತ್ತದೆ.ಈ ವರದಿಗಾರರೆಲ್ಲರೂ ಬೆಳಿಗ್ಗೆ ಮುಖ್ಯಮಂತ್ರಿಯವರ ಜತೆ ಬ್ರೇಕ್ ಫಾಸ್ಟ್ ಮಾಡಿ, ಮಧ್ಯಾಹ್ನ ಜತೆ ಸಚಿವರ ಜತೆ ಲಂಚ್ ಮಾಡಿ, ರಾತ್ರಿ ಅಧಿಕಾರಿಗಳ ಜತೆ ಡಿನ್ನರ್ ಮಾಡುತ್ತಾ ಮಜಾಮಾಡುತ್ತಿದ್ದಾರೆ ಎನ್ನುವಂತಹ ಕಪೋಲಕಲ್ಪಿತ ಆರೋಪಗಳೂ ಕೂಡಾ ಈ ಅಸೂಯೆಗೆ ಕಾರಣ. ಎಲ್ಲ ಸಂದರ್ಭಗಳಲ್ಲಿ ಇದು ನಿಜ ಅಲ್ಲ. ವರದಿಗಾರರಿಗೆ ರಾಜಕಾರಣಿಗಳ,ಅಧಿಕಾರಿಗಳ ಪರಿಚಯ ಇರುತ್ತದೆ. ಇವರೆಲ್ಲ ಭಾರೀ ಪವರ್ ಪುಲ್ ಎನ್ನುವ ಸಾಮಾನ್ಯ ಅಭಿಪ್ರಾಯ ಡೆಸ್ಕ್ ನಲ್ಲಿದ್ದವರಿಗೆ ಇರುತ್ತದೆ. ಎಲ್ಲ ವರದಿಗಾರರು ತಮ್ಮನ್ನು ಮಾರಿಕೊಂಡಿರುವುದಿಲ್ಲ, ಒಬ್ಬ ವರದಿಗಾರ ಸಾರ್ವಜನಿಕ ವ್ಯಕ್ತಿ. ತಾನು ಬರೆದ ವರದಿ ಮರುದಿನ ಪ್ರಕಟವಾಗದೆ ಇದ್ದರೆ,ಇಲ್ಲವೇ ನಿರ್ದಯವಾದ ಕತ್ತರಿ ಪ್ರಯೋಗಕ್ಕೆ ಈಡಾದರೆ ಮರುದಿನ ಮುಖ ಎತ್ತಿ ಓಡಾಡುವುದು ಆತನನ್ನು ಮುಜುಗರಕ್ಕೀಡುಮಾಡುತ್ತದೆ.
     ಇಷ್ಟು ಮಾತ್ರವಲ್ಲ, ವರದಿಗಾರರಿಗಿರುವ ರಿಸ್ಕ್ ಡೆಸ್ಕ್ ಪತ್ರಕರ್ತರಿಗಿಲ್ಲ. ಪ್ರಭುತ್ವ ಮತ್ತು ಅಪರಾಧ ಜಗತ್ತಿನಿಂದ ಸಾವು-ನೋವಿಗೀಡಾದವರಲ್ಲಿ ಬಹುಪಾಲು ವರದಿಗಾರರೇ ಎಂಬುದನ್ನು ಕೂಡಾ ಮರೆಯಬಾರದು. ವರದಿಗಾರರಿಗೆ ಡೆಸ್ಕ್ ನಲ್ಲಿರುವ ಪತ್ರಕರ್ತರ ಬಗ್ಗೆ ಒಂದು ರೀತಿಯ ತಿರಸ್ಕಾರ ಇರುತ್ತದೆ. ಇವರಿಗೆಲ್ಲಿ ಬರೆಯಲು ಬರುತ್ತೆ?, ಇವರೇನಿದ್ದರೂ ನಾವು ಕೊಟ್ಟದ್ದನ್ನು ತುಂಬಿ ಪೇಜ್ ಮಾಡುವ ಗುಮಾಸ್ತರು, ಜತೆಯಲ್ಲಿ ಅಸೂಯೆಯಿಂದ ನಿರ್ದಯವಾಗಿ ಸುದ್ದಿಯನ್ನು ಕತ್ತರಿಸಿ ಎಸೆಯುವವರು ಎನ್ನುವ ಸಿಟ್ಟು ವರದಿಗಾರರರಲ್ಲಿರುತ್ತದೆ. ಈ ಪರಸ್ಪರ ಆರೋಪಗಳಲ್ಲಿ ಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಸತ್ಯಾಂಶ ಇದೆ.
     ಹೆಚ್ಚಿನ ಪತ್ರಿಕೆಗಳಲ್ಲಿ ಡೆಸ್ಕ್ ಎನ್ನುವುದು ನಿರ್ಲಕ್ಷಿತ ವಿಭಾಗ. ಇದಕ್ಕೆ ಮುಖ್ಯಕಾರಣ ಹೊಸದಾಗಿ ಪತ್ರಿಕೆಗೆ ಸೇರುವವರು ನಾನು ಡೆಸ್ಕ್ ನಲ್ಲಿ ಕೆಲಸಮಾಡುತ್ತೇನೆಂದು ಹೇಳಿದವರನ್ನು ನಾನು ನೋಡಿದ್ದು ಅಪರೂಪ. ಎಲ್ಲರಿಗೂ ವರದಿಗಾರರಾಗುವ, ಅದರಲ್ಲೂ ರಾಜಕೀಯ ವರದಿಗಾರರಾಗುವ ತವಕ. ಸಾಮಾನ್ಯವಾಗಿ ವರದಿಗಾರನಾಗಿ ಸರಿಯಾಗಿ ಕೆಲಸ ಮಾಡದಿದ್ದರೆ ಇಲ್ಲವೆ ಏನಾದರೂ ಭಾನಗಡಿ ಮಾಡಿದರೆ, ಸಂಪಾದಕರು ಅಂತಹವರನ್ನು ಡೆಸ್ಕ್ ಗೆ ಎತ್ತಿ ಹಾಕಿ ಎಂದು ಹೇಳುವುದೂ ಉಂಟು. ಇದರಿಂದಾಗಿ ಡೆಸ್ಕ್ ನಲ್ಲಿರುವವರು ಎಂದರೆ ಒಲ್ಲದ ಕೆಲಸ ಮಾಡುವವರು ಮತ್ತು ಶಿಕ್ಷೆಗೊಳಗಾದವರು ಎನ್ನುವ ಅಭಿಪ್ರಾಯ ಸಹಜವಾಗಿ ಮೂಡುತ್ತದೆ. ಬಹಳಷ್ಟು ಪತ್ರಿಕೆಗಳಲ್ಲಿ ಪರಸ್ಪರ ವರ್ಗಾವಣೆಗಳಿಲ್ಲ. (ಪ್ರಜಾವಾಣಿಯಂತಹ ಕೆಲವು ಪತ್ರಿಕೆಗಳಲ್ಲಿದೆ.)
ಸಾಮಾನ್ಯವಾಗಿ ಸಮಾಜ ಒಂದಿಷ್ಟು ವರದಿಗಾರರು ಮತ್ತು ಟಿವಿ ಆ್ಯಂಕರ್ ಗಳನ್ನು ನೋಡಿ ಪತ್ರಕರ್ತರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತದೆ. ಇಂತಹ ಟೀಕಾಕಾರರ ಮಾತುಗಳನ್ನು ಕೇಳಿದಾಗೆಲ್ಲ ನೋವಾಗುತ್ತದೆ, ಡೆಸ್ಕ್ ಪತ್ರಕರ್ತರ ಬಗ್ಗೆ ಅನುಕಂಪ ಮೂಡುತ್ತದೆ. ಅವರು ತಾವು ಮಾಡದ ತಪ್ಪಿಗಾಗಿ ನೇಣುಗಂಬದ ಎದುರು ನಿಂತ ನಿರಪರಾಧಿಗಳು. ಪತ್ರಿಕೆ ಇಲ್ಲವೆ ಟಿವಿ ಕಚೇರಿಗಳಲ್ಲಿರುವ ಒಟ್ಟು ಸಿಬ್ಬಂದಿಯಲ್ಲಿ ವರದಿಗಾರರ ಸಂಖ್ಯೆ ಶೇಕಡಾ ಹತ್ತರಿಂದ ಇಪ್ಪತ್ತರಿಷ್ಟಿರಬಹುದು. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸದಾ ಸುದ್ದಿಯಲ್ಲಿರುವವರು ಇದೇ ವರದಿಗಾರರು.
    ಸಮಾಜದ ಕಣ್ಣಲ್ಲಿ ಭ್ರಷ್ಟರೆನಿಸಿಕೊಂಡ ಪತ್ರಕರ್ತರ ಪಟ್ಟಿಯನ್ನು ನೋಡಿ. ಅವರಲ್ಲಿ ಮುಕ್ಕಾಲು ಪಾಲು ವರದಿಗಾರರಾಗಿರುತ್ತಾರೆ. ಉಳಿದ ಪಾಪದ ಪಾಲನ್ನು ಒಂದಿಷ್ಟು ಸಂಪಾದಕರೆನಿಸಿಕೊಂಡವರು ಮತ್ತು ಡೆಸ್ಕ್ ಪತ್ರಕರ್ತರು ಹಂಚಿಕೊಂಡಿರುವುದನ್ನು ಕಾಣಬಹುದು. ಆದರೆ ಕಚೇರಿಯೊಳಗೆ ಇರುವ ಮುಕ್ಕಾಲು ಪಾಲು ಪತ್ರಕರ್ತರು ಕೇವಲ ಸಂಬಳವನ್ನು ನಂಬಿಕೊಂಡು ಬದುಕುವವರು. ಇವರಲ್ಲಿ ಹೆಚ್ಚಿನವರು ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕತೆಯಿಂದು ಬದುಕಬೇಕೆಂದು ನಿರ್ಧಾರ ಮಾಡಿದವರು. ಇನ್ನು ಕೆಲವರು ಕೆಟ್ಟುಹೋಗಲು ಅವಕಾಶ ಇಲ್ಲದೆ ಒಳ್ಳೆಯವರಾಗಿ ಉಳಿದುಕೊಂಡವರೂ ಇರಬಹುದು. ವಿಪರ್ಯಾಸವೆಂದರೆ ಈ ಬಹುಸಂಖ್ಯಾತ ಪತ್ರಕರ್ತರ ಹೆಸರು ‘ಜಿ ಕೆಟಗರಿ’ ಇಲ್ಲವೇ ಇನ್ನಾವುದೋ ಕೆಟಗರಿಯ ಸೈಟ್ ಫಲಾನುಭವಿಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಅದೇ ರೀತಿ ಪತ್ರಕರ್ತರ ಪ್ರಾಮಾಣಿಕತೆ, ವೃತ್ತಿನಿಷ್ಠೆಯನ್ನು ಆಧರಿಸಿ ನೀಡುವ ರಾಜ್ಯೋತ್ಸವ ಇಲ್ಲವೆ ಮಾಧ್ಯಮ ಅಕಾಡೆಮಿಯ ಪ್ರಶಸ್ತಿವಿಜೇತರ ಪಟ್ಟಿಯಲ್ಲಿಯೂ ಇವರ ಹೆಸರು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಎರಡೂ ಕಡೆಗಳಲ್ಲೂ ಮೆರೆದಾಡುವವರು ವರದಿಗಾರರು. ಆರೋಪಗಳಿಗೆ ಇಬ್ಬರೂ ತಲೆಕೊಡಬೇಕಾಗುತ್ತದೆ, ಮನ್ನಣೆ-ಮಾನ್ಯತೆ ಮಾತ್ರ ವರದಿಗಾರರಿಗೆ ಹೆಚ್ಚು. ಇದು ದುರಂತ.

Saturday, March 28, 2015

ಕರ್ನಾಟಕ ಮೂಢನಂಬಿಕೆಗಳ ಪ್ರತಿಬಂಧಕ ಮಸೂದೆ (2013) ಕುರಿತು ಚರ್ಚೆ, ಸಂವಾದ



ಚರ್ಚೆ ಮತ್ತು ಸಂವಾದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳು

Thursday, March 26, 2015

ಭಿನ್ನಾಭಿಪ್ರಾಯ ಇಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ..

ಮುನೀರ್,ಸತ್ಯಾ,ಅದ್ದೆ,ಸೂಡಾ,ಮಂಜು, ಇಮಾಮ್...ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತಿದೆ, ಆದರೆ ನೀವು ಆತಂಕಪಡಬೇಕಾಗಿಲ್ಲ.. ನಮ್ಮೆಲ್ಲರದ್ದು ಸಮಾನ ಮನಸ್ಕರ ಸ್ನೇಹ. ನಾವೆಲ್ಲ ‘ರಾಮರಾಜ್ಯ’ದ ಸುಖವನ್ನು ಹಂಚಿಕೊಂಡು ಸಂಭ್ರಮಪಡಲು ಸ್ನೇಹಿತರಾದವರಲ್ಲ, ನಮ್ಮ ಸಂಕಟ,ತಳಮಳ, ಕಳಕಳಿಗಳನ್ನು ಹಂಚಿಕೊಳ್ಳಲು ಒಟ್ಟಾದವರು. ಇಂತಹ ಸ್ನೇಹದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಯಾಕೆಂದರೆ ಭಿನ್ನಾಭಿಪ್ರಾಯವಿಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ. ಭಿನ್ನಾಭಿಪ್ರಾಯ ಇಲ್ಲದೆ ಇದ್ದಲ್ಲಿ ಸ್ನೇಹ ಇರುವುದಿಲ್ಲ, ಗುಲಾಮಗಿರಿ ಇರುತ್ತದೆ. ಗೆಳೆತನದಲ್ಲಿ ಕೂಡಾ ಆಂತರಿಕವಾದ ಪ್ರಜಾಪ್ರಭುತ್ವ ಇರಬೇಕು ಎಂಬುದು ನನ್ನ ಆಶಯ.

ನನ್ನಲ್ಲೊಂದು ಕೊರಗು ಇದೆ. ವೃತ್ತಿಬದುಕಿನಲ್ಲಿ ನನಗೆ ಒಳ್ಳೆಯ ಸಂಪಾದಕರು ಸಿಕ್ಕಿದ್ದಾರೆ. ವಡ್ಡರ್ಸೆಯವರಿಂದ ವೃತ್ತಿಯ ಮೊದಲ ಪಾಠ ಕಲಿತವನು. ಕೆ.ಎನ್. ಹರಿಕುಮಾರ್ ಕಷ್ಟಕಾಲದಲ್ಲಿ ನನಗೆ ನೆರವಾದವರು. ಕೆ.ಎನ್.ಶಾಂತಕುಮಾರ್ ಬೆನ್ನಿಗೆ ನಿಂತು ನನ್ನನ್ನು ಪತ್ರಕರ್ತನಾಗಿ ಬೆಳೆಸಿದವರು. ಈ ಋಣದ ಭಾರ ನನ್ನ ಮೇಲಿದೆ. ಕನ್ನಡದಲ್ಲಿ ವೃತ್ತಿಪರವಾದ ಉತ್ಸಾಹಿ ಯುವಪತ್ರಕರ್ತರ ತಂಡವೊಂದನ್ನು ಕಟ್ಟಲು ನೆರವಾಗುವ ಮೂಲಕ ನನ್ನ ತಲೆಮೇಲಿರುವ ಋಣಭಾರವನ್ನು ಇಳಿಸಬೇಕೆಂಬ ಯೋಚನೆಯೊಂದು ದೆಹಲಿ ಬಿಟ್ಟು ಬಂದಾಗ ನನ್ನ ತಲೆಯಲ್ಲಿತ್ತು. ವಡ್ಡರ್ಸೆಯವರಂತೆ ನಾನು ಕೂಡಾ ಸ್ವಲ್ಪ ಹುಂಬ,ವ್ಯವಹಾರಿಕವಾಗಿ ಜಾಣನಲ್ಲ. ಆದ್ದರಿಂದ ಬಯಸಿದಂತೆ ನಡೆಯಲಿಲ್ಲ.

ನಮ್ಮಲ್ಲೊಂದು ಯಶಸ್ಸಿನ ಸೂತ್ರ ಇದೆ. ಅದು ನಿನಗಿಂತ ಹಿರಿಯ ಸ್ಥಾನದಲ್ಲಿರುವವರ ಭಟ್ಟಂಗಿತನ ಮಾಡು, ಕಿರಿಯರನ್ನು ತುಳಿದುಹಾಕು ಎಂದು ಹೇಳುತ್ತದೆ. ಯಾಕೆಂದರೆ ಹಿರಿಯರ ಭಟ್ಟಂಗಿತನಮಾಡಿದರೆ ಅವರು ಬಿಟ್ಟುಕೊಡುವ ಸ್ಥಾನ ನಿಮಗೆ ಸಿಗುತ್ತದೆ, ಕಿರಿಯರನ್ನು ತುಳಿದುಹಾಕುವುದರಿಂದ ಅವರು ನಿಮ್ಮನ್ನು ಮೀರಿ ಬೆಳೆದುಬಿಡುವ ಸಾಧ್ಯತೆಯನ್ನು ಹೊಸಕಿಹಾಕಿದಂತಾಗುತ್ತದೆ. ಇದನ್ನು ನಾನು ತಮಾಷೆಯಾಗಿ ‘ಪೊಲೀಸ್ ಫಾರ್ಮುಲಾ’ ಎನ್ನುತ್ತೇನೆ (ಇದೇನೆಂದು ಮುಂದೊಂದು ದಿನ ವಿವರಿಸುತ್ತೇನೆ). ನಾನು ಸದಾ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾ ಬಂದವನು. 

ನನಗಿಂತ ಹಿರಿಯರನ್ನು ಎದುರುಹಾಕಿಕೊಂಡು ಕಾದಾಡಿದ್ದೇನೆ, ಅದರಿಂದ ಕಷ್ಟ-ನಷ್ಟ ಅನುಭವಿಸಿದ್ದೇನೆ. ನನಗಿಂತ ಕಿರಿಯರು ತಪ್ಪಿದಾಗ ಸಣ್ಣಪುಟ್ಟ ಜಗಳಮಾಡಿಕೊಂಡು ತಪ್ಪಿದಾಗ ತಿದ್ದುವ ಮೂಲಕ ಅವರನ್ನು ಬೆಳೆಸಬೇಕೆಂದು ಪ್ರಾಮಾಣಿಕವಾಗಿ ಆಶಿಸಿದ್ದೇನೆ. ಇದರಿಂದಾಗಿಯೇ ನನಗಿಂತ ಕಿರಿಯರು ಅಪಾರ್ಥ ಮಾಡಿಕೊಂಡರೆ ನನಗೆ ನೋವಾಗುತ್ತದೆ.

ನಾನು ಇಷ್ಟಪಡುವ ನನಗಿಂತ ಕಿರಿಯರ ಕಿವಿ ಹಿಂಡುವ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಹಿರಿಯರಿಂದ ಕಿವಿ ಹಿಂಡಿಸಿಕೊಂಡೇ ಬೆಳೆದವನು. ಆ ಕ್ಷಣದಲ್ಲಿ ಕಿವಿ ನೋವಾದರೂ ಅದು ನಂತರದ ದಿನಗಳಲ್ಲಿ ನಾನು ದಾರಿ ತಪ್ಪುವುದನ್ನು, ತಪ್ಪು ಮಾಡಿ ನೋವು ತಿನ್ನುವುದನ್ನು ತಪ್ಪಿಸಿದೆ.

ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಬರೆದದ್ದು..

ಕಳೆದ ಕೆಲವು ದಿನಗಳಿಂದ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. ಐಎ ಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಮತ್ತು ಜೆಡಿ (ಎಸ್ ) ಪಕ್ಷಗಳು ಒತ್ತಾಯಿಸುತ್ತಿವೆ. ಕನ್ನಡದ ಬಹುತೇಕ ಸುದ್ದಿ ಚಾನೆಲ್ ಗಳು ಈ ಬೇಡಿಕೆಯನ್ನು ಬೆಂಬಲಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ರಾಜ್ಯಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲವಾದ ಕಾರಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಈ ಬೇಡಿಕೆಯ ಒಟ್ಟು ಸಾರ.ಈ ವಾದವನ್ನು ಒಪ್ಪಿಕೊಳ್ಳೋಣ. ಆದರೆ ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ, ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರ ಸರ್ಕಾರದ ಮರ್ಜಿಯಲ್ಲಿದೆಯಲ್ಲಾ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಎನ್ನುವುದಾದರೆ, ಕೇಂದ್ರ ಸರ್ಕಾರದ ‘ಪಂಜರದ ಗಿಳಿ’ ಯಾಗಿರುವ ಸಿಬಿಐ ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್ ಬಿಐ? ಇಂಟರ್ ಪೋಲ್? ವಿಶ್ವ ಸಂಸ್ಥೆ?
ಈ ಪ್ರಶ್ನೆಯನ್ನು ನನಗೆ ಪರಿಚಯ ಇರುವ ಹೋರಾಟಗಾರರನ್ನು ಮತ್ತು ಕೆಲವು ಪತ್ರಕರ್ತರನ್ನು ಕೇಳಿದೆ. ಅವರಿಂದ ಉತ್ತರ ಸಿಗಲಿಲ್ಲ.

(ಮಾರ್ಚ್ 19, 2015)
-------------------------------------------------------------------------------------------------------------------------------
‘ಕಾಂಗ್ರೆಸ್ ಏಜಂಟ’ ನೊಬ್ಬನ ಮನದ ಮಾತು (ಮಾರ್ಚ್ 20, 2015)
ಸಿಐಡಿ ಬೇಡ, ಸಿಬಿಐ ತನಿಖೆ ಮಾಡಲಿ ಎಂದು ಹೇಳುತ್ತಿರುವ ದಿವಂಗತ ಡಿ.ಕೆ.ರವಿ ಅವರ ಅಮಾಯಕ ತಂದೆ-ತಾಯಿಗಳ ಒತ್ತಾಯ ಅರ್ಥಮಾಡಿಕೊಳ್ಳುವಂತಹದ್ದು. ‘ಅದಕ್ಕಿಂತಲೂ ದೊಡ್ಡದು ಏನಾದರೂ ಇದ್ದರೆ ಅದರ ಮೂಲಕವೂ ತನಿಖೆ ನಡೆಯಲಿ’ ಎಂದು ಆ ತಾಯಿ ವಿಧಾನಸೌಧದ ಮುಂದೆ ರೋದಿಸುತ್ತಾ ಹೇಳುತ್ತಿದ್ದರು. ತನ್ನ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂಬುದಷ್ಟೇ ಆ ತಾಯಿಯ ಆಸೆ. ಯಾವುದು ಸಿಐಡಿ? ಯಾವುದು ಸಿಬಿಐ? ಎನ್ನುವುದು ಅವರಿಗೆ ಗೊತ್ತಿಲ್ಲ. ಬಿಜೆಪಿ ಮತ್ತು ಜೆಡಿ (ಎಸ್) ಅವರಿಗೆ ಎಲ್ಲವೂ ಗೊತ್ತಿದ್ದೂ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಹಾಗೆ ಕೇಳಲು ಅವರಿಗೆ ಕಾರಣಗಳಿವೆ, ಅವೆಲ್ಲವೂ ಖಂಡಿತ ಡಿ.ಕೆ.ರವಿ ಮೇಲಿನ ಅಭಿಮಾನ ಇಲ್ಲವೆ ಸತ್ಯ ತಿಳಿಯಬೇಕೆಂಬ ಪ್ರಾಮಾಣಿಕ ಕಳಕಳಿಯಿಂದ ಕೂಡಿದ್ದಲ್ಲ.
‘ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಈ ಕಾರಣಕ್ಕಾಗಿ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಒತ್ತಾಯಿಸುತ್ತಿರುವವರಲ್ಲಿ ಹೆಚ್ಚಿನವರು ‘ಸಿಬಿಐ ಸರ್ವಸ್ವತಂತ್ರ’ ಎಂದು ತಿಳಿದುಕೊಂಡ ಅಮಾಯಕರು. ಆದರೆ ವಾಸ್ತವ ಹಾಗಿಲ್ಲ. ಸಿಬಿಐ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಖಾತೆಯ ನಿಯಂತ್ರಣದಲ್ಲಿದೆ. ಈ ಖಾತೆ ಪ್ರಧಾನಮಂತ್ರಿಯವರ ಕೈಯಲ್ಲಿದೆ. ಇದರ ಪರಿಣಾಮವೇ ಬಿಜೆಪಿ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆಯುವುದರೊಳಗೆ, ಸಿಬಿಐ ನ್ಯಾಯಾಲಯ ಬಿಜೆಪಿ ಅಧ್ಯಕ್ಷ ಅಮಿತ್ ಶಹಾ ಅವರನ್ನು ದೋಷಮುಕ್ತಗೊಳಿಸಿದ್ದು. ಗುಜರಾತ್ ನ ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಿತ್ ಶಹಾ ಅವರನ್ನು ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. (ವಿವರಗಳಿಗಾಗಿ ಫೆಬ್ರವರಿ 16, 2015ರ ಔಟ್ ಲುಕ್ ವಾರಪತ್ರಿಕೆ ಓದಿ). ಇದು ಬಿಜೆಪಿ ಸರ್ಕಾರದ ಕಾಲದಲ್ಲಿ ಸಿಬಿಐ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದಕ್ಕೆ ಸೂಚನೆ.
‘ಆಳುವ ಪಕ್ಷದಿಂದ ಸಿಬಿಐ ದುರ್ಬಳಕೆಯಾಗುತ್ತಿದೆ’ ಎಂಬ ವಿರೋಧಪಕ್ಷಗಳ ಆರೋಪ ಹಳೆಯದು. ಇದೇ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐನ ದುರ್ಬಳಕೆ ಮಾಡಲು ಹಿಂಜರಿಯುವುದಿಲ್ಲ. ಇಂದಿರಾಗಾಂಧಿಯವರಿಂದ ಹಿಡಿದು ಅಟಲಬಿಹಾರಿ ವಾಜಪೇಯಿ ವರೆಗೆ ಎಲ್ಲರೂ ಇದನ್ನು ಮಾಡಿದ್ದಾರೆ. ಹೆಚ್ಚು ಕಾಲ ದೇಶವಾಳಿದವರು ಹೆಚ್ಚು ದುರುಪಯೋಗ ಮಾಡಿದ್ದಾರೆ, ಕಡಿಮೆ ಕಾಲ ಆಳಿದವರಿಂದ ಕಡಿಮೆ ದುರುಪಯೋಗವಾಗಿದೆ. ವ್ಯತ್ಯಾಸ ಪ್ರಮಾಣದಲ್ಲಿ ಮಾತ್ರ ನೀತಿಯಲ್ಲಿ ಅಲ್ಲ. ಈ ಸಿಬಿಐ ಅಸ್ತ್ರ ದುರ್ಬಳಕೆಯ ದೌರ್ಬಲ್ಯಕ್ಕೆ ಈಡಾಗದೆ ಇದ್ದಿದ್ದರೆ ಐದು ವರ್ಷಗಳ ಕಾಲ ಕನ್ನಡಿಗರೊಬ್ಬರು ಪ್ರಧಾನಿಯಾಗಿರುತ್ತಿದ್ದರೋ ಏನೋ? ಮಾನ್ಯ ದೇವೇಗೌಡರು ಹಳೆಯ ಕೊಲೆ ಆರೋಪವನ್ನು ಬಳಸಿಕೊಂಡು ಆಗಿನ ಕಾಂಗ್ರೆಸ್ ಅಧ್ಯಕ್ಷ ಸೀತರಾಂ ಕೇಸರಿ ವಿರುದ್ಧ ಸಿಬಿಐ ಅನ್ನು ಅವರ ವಿರುದ್ಧ ಛೂಬಿಟ್ಟದ್ದೇ ಅವರ ಕುರ್ಚಿಗೆ ಮುಳುವಾಗಿ ಹೋಯಿತು.
ಕಾಂಗ್ರೆಸ್ ಸಿಬಿಐ ದುರ್ಬಳಕೆ ಮಾಡಿಕೊಂಡಾಗ ಬೊಬ್ಬಿಟ್ಟವರು ಬಿಜೆಪಿ ನಾಯಕರು. ಆದರೆ ಅವರ ಕೈಗೆ ಅಧಿಕಾರ ಸಿಕ್ಕಾಗ ತಾವು ತಪ್ಪು ಅಂದದ್ದನ್ನೇ ಮಾಡಿದರು. ಎನ್ ಡಿ ಎ ಲಂಚಾವತಾರವನ್ನು ಬಯಲುಗೊಳಿಸಿದ ತೆಹೆಲ್ಕಾ ಡಾಟ್ ಕಾಮ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದು ಎನ್ ಡಿಎ. ತೆಹೆಲ್ಕಾ ವರದಿಗಾರನನ್ನು ಜೈಲಿಗೆ ತಳ್ಳಲು ಆತನ ವಿರುದ್ಧ ಚಿರತೆ ಹತ್ಯೆ ಆರೋಪವನ್ನು ಹೊರಿಸುವ ಮಟ್ಟಕ್ಕೆ ಇಳಿದಿತ್ತು ಸಿಬಿಐ.
ಇಷ್ಟು ಮಾತ್ರ ಅಲ್ಲ, ಸಿಬಿಐನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಹರಣಗೊಳಿಸುವ ಪ್ರಯತ್ನವನ್ನು ಕೂಡಾ ನಡೆಸಿದ್ದು ಎನ್ ಡಿ ಎ ಸರ್ಕಾರ. ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ‘ಕೇಂದ್ರ ಜಾಗೃತ ಆಯೋಗ (ಸಿವಿಸಿ)ಕ್ಕೆ ಶಾಸನಬದ್ಧ ಸ್ಥಾನಮಾನ ನೀಡಿ ಸಿಬಿಐ ಅನ್ನು ಅದರ ಮೇಲ್ವಿಚಾರಣೆಗೆ ಒಪ್ಪಿಸಬೇಕೆಂದು ಹೇಳಿತ್ತು. ಇದರ ಜತೆಗೆ ‘ಜಂಟಿ ಕಾರ್ಯದರ್ಶಿಗಳಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಮುನ್ನ ಸರ್ಕಾರದ ಪೂರ್ವಾನುಮತಿ ಅಗತ್ಯ’ ಎಂಬ ‘ಏಕ ನಿರ್ದೇಶನ’ವನ್ನು ಸುಪ್ರೀಕೋರ್ಟ್ ರದ್ದು ಪಡಿಸಿತ್ತು. ಆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ನೂತನ ‘ಕೇಂದ್ರ ಜಾಗೃತ ಆಯೋಗ ಕಾಯಿದೆಯ ಮೂಲಕ ಹಿಂದೆ ಸುಪ್ರೀಂಕೋರ್ಟ್ ರದ್ದುಪಡಿಸಿದ್ದ ‘ಏಕನಿರ್ದೇಶನಕ್ಕೆ ಮತ್ತೆ ಜೀವ ತುಂಬಿ ಸಿಬಿಐ ಅನ್ನು ದುರ್ಬಲಗೊಳಿಸಿತ್ತು.
ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಬಿಡುಗಡೆಗೊಳಿಸುವ ಪ್ರಯತ್ನವನ್ನು 1994ರಲ್ಲಿಯೇ ಸುಪ್ರೀಂಕೋರ್ಟ್ ಜೈನ್ ಹವಾಲ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಾರಂಭಿಸಿತ್ತು. ‘ ಕೇಂದ್ರ ಜಾಗೃತ ಆಯೋಗಕ್ಕೆ ಶಾಸನ ಬದ್ಧ ಸ್ಥಾನಮಾನ ನೀಡಿ ಸಿಬಿಐ ಉಸ್ತುವಾರಿಯನ್ನು ಅದಕ್ಕೆ ಒಪ್ಪಿಸಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸದ್ಯಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಬರುವ ಪ್ರಕರಣಗಳ ತನಿಖೆಯ ಮೇಲಷ್ಟೇ ಸಿವಿಸಿ ಯ ನಿಯಂತ್ರಣ ಇದೆ. ವಿಶೇಷ ಅಪರಾಧಗಳ ಬಗ್ಗೆ ಸಿಬಿಐ ನಡೆಸುವ ತನಿಖೆ ಮೇಲೆ ಸಿವಿಸಿಗೆ ನಿಯಂತ್ರಣ ಇಲ್ಲ.
ಇದೇ ಕಾರಣಕ್ಕೆ ಸಿಬಿಐ ಅನ್ನು ನೂತನ ‘ಲೋಕಪಾಲ’ರ ಸುಪರ್ದಿಗೆ ಒಪ್ಪಿಸಿ ಅದಕ್ಕೆ ಸ್ವಯೀಚ್ಚೆಯಿಂದ ತನಿಖೆ ನಡೆಸುವ ಅಧಿಕಾರ ನೀಡಬೇಕೆಂದು ಅಣ್ಣಾಹಜಾರೆ ತಂಡ ಒತ್ತಾಯಿಸಿತ್ತು. ಸಂಸತ್ ನಲ್ಲಿ ಅಣ್ಣಾತಂಡವನ್ನು ಬೆಂಬಲಿಸಿದ್ದ ಬಿಜೆಪಿ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಗುತ್ತಾ ಬಂತು. ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಬಿಜೆಪಿ ಸೊಲ್ಲೆತ್ತಿಲ್ಲ. ತದ್ವಿರುದ್ಧವಾಗಿ ಅದರ ಮೇಲೆ ಒತ್ತಡ ಹೇರಿ ತನ್ನ ಪಕ್ಷದ ಅಧ್ಯಕ್ಷರನ್ನು ದೋಷಮುಕ್ತಗೊಳಿಸಿದೆ. ವಿಪರ್ಯಾಸವೆಂದರೆ, ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಚಳುವಳಿಯನ್ನು ಮಾಡಿದ್ದ ಅಣ್ಣಾ ಚಳುವಳಿಯ ಉತ್ಪನ್ನವಾದ ಆಪ್ ಪಕ್ಷ ಕೂಡಾ ಈಗ ಸಿಬಿಐ ಮೇಲೆ ತನ್ನ ನಂಬಿಕೆಯನ್ನು ಸಾರಿರುವುದು.
ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಖಂಡಿತ ಸಿಬಿಐಗೆ ಒಪ್ಪಿಸಬಹುದು. ಆದರೆ ಅದಕ್ಕಿಂತ ಮೊದಲು ಸಿಬಿಐ ಚಾರಿತ್ರ್ಯವನ್ನು ತಿಳಿದುಕೊಳ್ಳುವುದು ಬೇಡವೇ? ಇದನ್ನು ಮಾಡದೆ ಕೇವಲ ಸಿಐಡಿಯ ವಿಶ್ವಾಸರ್ಹತೆಯನ್ನು ಪ್ರಶ್ನಿಸುವುದು ಪಕ್ಷಪಾತವಾಗುವುದಿಲ್ಲವೇ? ನಮ್ಮ ಪೊಲೀಸರು ಕೇವಲ ಪಿಕ್ ಪಾಕೆಟಿಗರನ್ನು ಹಿಡಿಯಲು ಮಾತ್ರ ಲಾಯಕ್, ಇಂತಹ ದೊಡ್ಡ ಪ್ರಕರಣಗಳ ಅವರಿಂದಾಗದು ಎಂದು ಹೀಗಳೆಯುವುದರಿಂದ ಅವರ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ? ಇದೇ ನಮ್ಮ ರಾಜ್ಯದ ದಕ್ಷ ಮತ್ತು ಪ್ರಾಮಾಣಿಕ ಪೊಲೀಸರಲ್ಲವೇ, ಮುಖ್ಯಮಂತ್ರಿ ಮತ್ತು ಸಚಿವರನ್ನು ಜೈಲಿಗೆ ತಳ್ಳಿದ್ದು? ಇದನ್ನು ಮರೆತು ನಮ್ಮ ಮಾನವನ್ನು ರಾಷ್ಟ್ರಮಟ್ಟದಲ್ಲಿ ನಾವೇ ಹರಾಜು ಹಾಕುತ್ತಿರುವುದು ಸರಿಯೇ? ವಿರೋಧಪಕ್ಷಗಳೇ ಸೂಚಿಸುವ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ವಿಶೇಷ ತನಿಖಾ ತಂಡವನ್ನು ರಚಿಸಲು ಸಿದ್ಧ ಎಂಬ ರಾಜ್ಯ ಸರ್ಕಾರದ ನಿಲುವನ್ನು ವಿರೋಧಪಕ್ಷಗಳು ಯಾಕೆ ಒಪ್ಪಿಕೊಳ್ಳಬಾರದು? ನನಗಂತೂ ವಿರೋಧಪಕ್ಷಗಳು ಮತ್ತು ಅವರ ಬೆಂಬಲಿಗರ ಹಟದಲ್ಲಿ ರಾಜಕೀಯ ಕಾಣಿಸುತ್ತಿದೆ. ಇದಕ್ಕಾಗಿ ನನ್ನನ್ನು ‘ಕಾಂಗ್ರೆಸ್ ಏಜಂಟ್ ‘ ಎಂದು ಹಳಿಯಿರಿ,ಬೇಸರ ಇಲ್ಲ. ನಾನಂತೂ ಕಾಲದ ಕರೆಗೆ ಓಗೊಡುವವನು.

-----------------------------------------------------------------------------------------------------------------------------
‘ಜನಾಭಿಪ್ರಾಯ’, ‘ಜನಮತ’ ದ ಹುತ್ತದ ಸುತ್ತ...... (ಮಾರ್ಚ್ 20, 2015)
ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿರುವವರು ತಮ್ಮನ್ನು ಸಮರ್ಥಿಸಿಕೊಳ್ಳಲು ಇದು ‘ಜನಾಭಿಪ್ರಾಯ’, ‘ಜನಮತ’ ಎಂದೆಲ್ಲ ಹೇಳುತ್ತಿದ್ದಾರೆ. (ನನ್ನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅನೇಕ ಸ್ನೇಹಿತರು ಕೂಡಾ ಇದನ್ನು ಹೇಳಿದ್ದಾರೆ) ನನ್ನ ಪ್ರಕಾರ ನಿಜವಾದ ಜನಮತ ವ್ಯಕ್ತವಾಗುವುದು ಚುನಾವಣೆಯಲ್ಲಿ ಮಾತ್ರ. ಇದನ್ನು ಹೊರತುಪಡಿಸಿ ಜನಾಭಿಪ್ರಾಯ ಸಂಗ್ರಹಮಾಡಬೇಕಾದರೆ ಅಧಿಕೃತವಾಗಿ ಜನಮತಗಣನೆ ಚುನಾವಣೆಯ ಮಾದರಿಯಲ್ಲಿಯೇ ನಡೆಯಬೇಕು. ಇಲ್ಲದೆ ಇದ್ದರೆ ಚುನಾವಣಾ ಸುಧಾರಣೆಯ ಶಿಫಾರಸಿನಂತೆ ಚುನಾಯಿತ ಪ್ರತಿನಿಧಿಯನ್ನು ವಾಪಸು ಕರೆಸುವ ಜನಮತದ ಅಧಿಕಾರವನ್ನು ಮತದಾರರಿಗೆ ನೀಡಬೇಕು. ಇದನ್ನು ಹೊರತುಪಡಿಸಿ ಬಿಂಬಿಸುವ ಜನಮತ ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ ಅಷ್ಟೇ.

ನಮ್ಮಲ್ಲಿ ಶೇಕಡಾ 74ರಷ್ಟು ಜನರು ಸಾಕ್ಷರರು ಎಂದು ಅಧಿಕೃತ ಸಮೀಕ್ಷೆ ಹೇಳುತ್ತಿದೆ. ಅಂದರೆ ಇವರಲ್ಲಿ ಹಸ್ತಾಕ್ಷರವಷ್ಟೇ ಹಾಕಬಲ್ಲವರು, ಅರೆಶಿಕ್ಷಿತರು, ಓದಲು ಬರೆಯಲು ಬಾರದವರ ಸಂಖ್ಯೆಯೇ ಹೆಚ್ಚಿದೆ. ನಿಜವಾದ ಸಾಕ್ಷರರು, ಅಂದರೆ, ಕನಿಷ್ಠ ಪತ್ರಿಕೆ ಓದಬಲ್ಲವರು,ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುವಷ್ಟು ಜ್ಞಾನಹೊಂದಿದವರ ಸಂಖ್ಯೆ ಅಧಿಕೃತ ಸಾಕ್ಷರರ ಅರ್ಧದಷ್ಟಾದರೂ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ವಿದ್ಯೆ ಇಲ್ಲದ ಬುದ್ದಿವಂತ ಜನರಲ್ಲಿ ಅಪಾರವಾದ ಸಾಮಾನ್ಯ ಜ್ಞಾನ ಇರುತ್ತದೆ. ಇಂತಹವರಿಗೆ ತಿಳಿಸಿ ಹೇಳಿದರೆ ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ, ಅಷ್ಟೇ ಸಲೀಸಾಗಿ ಇವರನ್ನು ತಪ್ಪುದಾರಿಗೆಳೆಯುವವರ ಹಿಂದೆ ಕೂಡಾ ಹೋಗುತ್ತಾರೆ.
ಜಾತಿ ವ್ಯವಸ್ಥೆಯ ವಾಸ್ತವದಲ್ಲಿ ಇಂತಹವರಲ್ಲಿ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಹೆಚ್ಚು. ಹಿಂದಿನ ಪ್ರಧಾನಿ ವಿ.ಪಿ.ಸಿಂಗ್ ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಿದಾಗ ದೇಶವಿಡೀ ಹೊತ್ತಿ ಉರಿಯುತ್ತಿದೆ ಎಂಬ ಭಾವನೆಯನ್ನು ಹುಟ್ಟುಹಾಕಲಾಗಿತ್ತು. ಆ ಸಮಯದಲ್ಲಿ ಹೆಚ್ಚಿನ ಹಿಂದುಳಿದ ಜಾತಿಗಳ ಯುವಕ-ಯುವತಿಯರೇ, ‘ಇದು ದಲಿತರ ಮೀಸಲಾತಿ ನೀತಿ’ ಎಂದು ತಪ್ಪಾಗಿ ತಿಳಿದುಕೊಂಡು ಮಂಡಲ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿದ್ದುಂಟು. ಆದರೆ ಸತ್ಯ ಗೊತ್ತಾದಾಗ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರೇ ಒಂದು ಗುಂಪಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ಕಾರ್ಯದಲ್ಲಿ ಮುಂದಾದರು. ಇಂದು ಯಾರಾದರೂ ಮೀಸಲಾತಿ ವಿರುದ್ಧ ದನಿ ಎತ್ತುವ ಧೈರ್ಯ ಮಾಡಲು ಸಾಧ್ಯವೇ?
ಸಾಮಾಜಿಕ ಜಾಲತಾಣಗಳು, ಮೊಬೈಲ್ ಸಂದೇಶಗಳು ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಈಗಿನ ಕಾಲದಲ್ಲಿ ‘ಜನಾಭಿಪ್ರಾಯ’, ‘ಜನಮತ’ವನ್ನು ಸೃಷ್ಟಿಸುವುದು ಇನ್ನೂ ಸುಲಭ. ಮಂಡಲವಿರೋಧಿ ಚಳುವಳಿಯಲ್ಲಿ ತೇಲಿಹೋದ ಹಿಂದುಳಿದ ಜಾತಿಗಳಂತೆ ಈಗಲೂ ನಮ್ಮ ಯುವಕರು ಯಾರೋ ಸೃಷ್ಟಿಸುವ ‘ಜನಾಭಿಪ್ರಾಯ’, ‘ಜನಮತ’ದ ಅಲೆಯಲ್ಲಿ ತೇಲಿಹೋಗುವ ಅಪಾಯ ಇದೆ. ಸಿಐಡಿ,ಸಿಬಿಐ ಎಂದರೇನು? ಇವುಗಳ ನಡುವಿನ ವ್ಯತ್ಯಾಸಗಳೇನು? ಇದು ಯಾರ ಕೈಯಲ್ಲಿರುತ್ತದೆ? ಇದರ ದುರ್ಬಳಕೆ ಹೇಗೆ ನಡೆಸಲು ಸಾಧ್ಯ? ಇದನ್ನೆಲ್ಲ ಅರ್ಥಮಾಡಿಕೊಂಡು ಯಾರಾದರೂ ಸಿಬಿಐ ಉತ್ತಮ ಎಂದು ಹೇಳಿದರೆ ಒಪ್ಪಿಕೊಳ್ಳಬಹುದು. ಕಳೆದ ನಾಲ್ಕೈದು ದಿನಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಚಾನೆಲ್ ಗಳಲ್ಲಿ ಸಿಐಡಿ-ಸಿಬಿಐ ಬಗ್ಗೆ ವಸ್ತು ನಿಷ್ಠ ಚರ್ಚೆ ನಡೆದಿರುವುದನ್ನು ನಾನಂತೂ ನೋಡಿಲ್ಲ.
ಬದಲಾಗಿರುವ ಈ ಕಾಲದಲ್ಲಿಯೂ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳು ಮೀಸಲಾತಿ ಪರ-ವಿರೋಧ ಜನಮತ ಸಂಗ್ರಹಿಸಿದರೆ ವಿರೋಧಿಸುವ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಬಹುದು. ಆದರೆ ಯಾವುದಾದರೂ ಸರ್ಕಾರ ಇಲ್ಲವೇ ರಾಜಕೀಯ ಪಕ್ಷ ಮೀಸಲಾತಿ ವಿರುದ್ಧ ನಿಲ್ಲುವ ಧೈರ್ಯ ತೋರಿಸಲು ಸಾಧ್ಯವೇ? ಇದೇ ರೀತಿ ರಾಜ್ಯ ಬಜೆಟ್ ನ ಯೋಜನಾ ವೆಚ್ಚದಲ್ಲಿ ಶೇಕಡಾ 24ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಇಲ್ಲವೇ ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರದ ಬಗ್ಗೆ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳಲ್ಲಿ ಜನಮತ ಸಂಗ್ರಹಿಸಿದರೆ ವಿರೋಧವೇ ಹೆಚ್ಚು ವ್ಯಕ್ತವಾಬಹುದು. ಯಾಕೆಂದರೆ ಸರ್ಕಾರದ ಈ ನಿರ್ಧಾರದ ಫಲಾನುಭವಿಗಳು ಪತ್ರಿಕೆಗಳಿಗೆ ಓದುಗರ ಓಲೆ ಬರೆಯುವಷ್ಟು, ಇಲ್ಲವೇ ಮೊಬೈಲ್ ಮೆಸೆಜ್ ಮೂಲಕ ತಮ್ಮ ಅಭಿಪ್ರಾಯವನ್ನು ಚಾನೆಲ್ ಗಳಿಗೆ ತಿಳಿಸುವಷ್ಟು ಪರಿಣತರಲ್ಲ. ಹಾಗೆಂದ ಮಾತ್ರಕ್ಕೆ ಆ ಜನರ ಸಂಖ್ಯೆಗೆ ಬೆಲೆಯೇ ಇಲ್ಲವೇ? ಕೂಗು ಹಾಕಿದವರಷ್ಟೇ ಜನಗಳೇ?

-------------------------------------------------------------------------------------------------------------------------------
ಸುದ್ದಿ ಸೋರಿಕೆ ಮತ್ತು ಪತ್ರಕರ್ತನೊಬ್ಬನ ಹಳವಂಡ (ಮಾರ್ಚ್ 22, 2015)
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪತ್ರಕರ್ತರನ್ನು ಅಟ್ಟಿಸಿಕೊಂಡು ಹೋಗಿ ಸುದ್ದಿಯ ಸೋರಿಕೆ ಮಾಡುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನನ್ನ ಪತ್ರಕರ್ತ ಮಿತ್ರ ಸುದೀಪ್ತೋ ಮೊಂಡಲ್ ವರದಿ ಮಾಡಿದ್ದಾರೆ. ಈ ವರದಿಯನ್ನು ನಾಲ್ಕು ಗೋಡೆಗಳ ಮಧ್ಯೆ ಇರುವ ಡೆಸ್ಕ್ ನಲ್ಲಿ ಕೂತಿರುವ ಬಾವಿಯೊಳಗಿರುವ ಕಪ್ಪೆಯಂತಹ ಪತ್ರಕರ್ತರು ಬರೆದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಇದನ್ನು ಬರೆದದ್ದು ಜರ್ನಲಿಸ್ಟ್ ಗಳು ಆ್ಯಕ್ಟಿವಿಸ್ಟ್ ಕೂಡಾ ಆಗಬೇಕೆಂದು ಕಿರಿಯ ಪತ್ರಕರ್ತರಿಗೆ ಬೋದನೆ ಮಾಡುವ ಸುದೀಪ್ತೊ.
ವಯಸ್ಸಿನಲ್ಲಿ ಅವರಿಗಿಂತ ಹಿರಿಯನೆಂಬುದನ್ನು ಬಿಟ್ಟರೆ ಅವರಷ್ಟು ಅನುಭವ ನನಗಿಲ್ಲವೇನೋ. ಆದರೆ ನನ್ನ ಸೀಮಿತ ಜ್ಞಾನ ಮತ್ತು ಅನುಭವದ ಆಧಾರದಲ್ಲಿ ಹೇಳುವುದಾದರೆ ಸಮಾಜದಲ್ಲಿ ಅಲ್ಲೋಲಕಲ್ಲೋಲ ಮಾಡಿದ ಮಾಧ್ಯಮ ರಂಗದ ಮಹಾ ವರದಿಗಳೆಲ್ಲವೂ ಸೋರಿಕೆಯಿಂದ ಪಡೆದುಕೊಂಡ ಮಾಹಿತಿಯನ್ನು ಆಧರಿಸಿದ್ದು. ಸುದ್ದಿ ಎಲ್ಲಿಯಾದರೂ ಸೋರದಿದ್ದರೆ ವರದಿಗಾರ ಉಪವಾಸ ಬಿದ್ದು ಸಾಯಬೇಕು ಅಷ್ಟೆ. ಸಮಸ್ಯೆ ಸೋರಿಕೆಯದ್ದಲ್ಲ, ಸೋರಿಕೆಯಲ್ಲಿನ ಯಾವ ಸುದ್ದಿ ವಿಶ್ವಾಸಾರ್ಹವಾದುದು ಎಂಬ ತೀರ್ಮಾನದ್ದು. ಇದು ನೀವು ಸೋರಿಕೆಗಾಗಿ ಎಂತಹ ಮೂಲಗಳನ್ನು ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮೂಲಗಳು ನೀವು ಎಂತಹವರು ಎನ್ನುವುದನ್ನು ಅವಲಂಬಿಸಿರುತ್ತದೆ.
ಇಂದು ಜಗತ್ತಿನಾದ್ಯಂತ ಸರ್ಕಾರಿ ದಾಖಲೆಗಳನ್ನು ಸೋರಿಕೆ ಮಾಡಲಿಕ್ಕಾಗಿಯೇ ವಿಷಲ್ ಬ್ಲೋವರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ವಿಕಿಲೀಕ್ಸ್ ಗೊತ್ತಲ್ಲಾ, ಅದೇ ರೀತಿ ‘ಪ್ರೊ ಪಬ್ಲಿಕಾ’, ‘ಸನ್ ಲೈಟ್ ಫೌಂಡೇಷನ್ ‘ ಮೊದಲಾದ ವಿಷಲ್ ಬ್ಲೋವರ್ ಸಂಸ್ಥೆಗಳು ಸಕ್ರಿಯವಾಗಿವೆ. ಯಾವ ಸರ್ಕಾರ ಕೂಡಾ ತನಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಪತ್ರಿಕಾ ಹೇಳಿಕೆ ಮೂಲಕ ನೀಡುವುದಿಲ್ಲ. ‘ '...ಅಧಿಕಾರದಲ್ಲಿರುವವರು ಏನನ್ನು ಸ್ವಯೀಚ್ಚೆಯಿಂದ ತಿಳಿಸುತ್ತಾರೋ ಅದು ಜಾಹೀರಾತು, ಉಳಿದೆಲ್ಲವೂ ಸುದ್ದಿ....’ ಎನ್ನುವ ಸುದ್ದಿ ಬಗೆಗಿನ ಒಂದು ಅರ್ಥಪೂರ್ಣ ವ್ಯಾಖ್ಯಾನ ಇದೆ. ಇದನ್ನು ಪತ್ರಕರ್ತರು ಅರ್ಥಮಾಡಿಕೊಂಡರೆ ಸೋರಿಕೆಯಿಂದ ಸಮಾಜಕ್ಕೆ ಏನೂ ನಷ್ಟವಾಗಲಾರದು.
ಸುದೀಪ್ತೋ ವರದಿಯನ್ನು ನೋಡಿದ ದೆಹಲಿಯ ಜನಪ್ರಿಯ ಚಾನೆಲ್ ವೊಂದರ ಸಂಪಾದಕರು ಬೆಂಗಳೂರಿನ ಮಹಿಳಾ ವರದಿಗಾರರಿಗೆ ಪೋನ್ ಮಾಡಿ, ಪೊಲೀಸರು ಬೆನ್ನತ್ತಿರುವ ಪತ್ರಕರ್ತರ ಜತೆ ಮಾತನಾಡಿ ವರದಿ ಮಾಡಲು ಹೇಳಿದರಂತೆ. ‘...... ಯಾವ ಕಸಬುದಾರ ಪತ್ರಕರ್ತ ಸೋರಿಕೆ ಮಾಡುವ ಮೂಲವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿ ತನ್ನ ವೃತ್ತಿಯನ್ನು ಕೊಂದುಕೊಳ್ಳಲು ಸಿದ್ದನಿರುತ್ತಾನೆ ?. ಅಂತಹವರಿಗೆ ಬೇರೆ ದುರುದ್ಧೇಶ ಇದ್ದಿದ್ದರೆ ಮಾತ್ರ ಅದು ಸಾಧ್ಯ. ನಾನಂತೂ ಅದನ್ನು ಮಾಡಲಾರೆ...’ ಎಂದು ಆ ಯುವಪತ್ರಕರ್ತೆ ಹಿರಿಯ ಸಹದ್ಯೋಗಿಯ ಬಾಯಿ ಮುಚ್ಚಿಸಿದರಂತೆ. ನಾಲ್ಕೈದು ವರ್ಷಗಳ ಮಾಧ್ಯಮ ಅನುಭವದ ಈ ಯುವಪತ್ರಕರ್ತೆ ಕೊಟ್ಟಿರುವ ಉತ್ತರ ನೋಡಿ ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ನನಗೆ ಇನ್ನಷ್ಟು ಭರವಸೆಮೂಡಿತು.
---------------------------------------------------------------------------------------------------------------------------------
ಎಲ್ಲ ಲೀಕ್ ಗಳು ಊಹಾಪೋಹಗಳಲ್ಲ... (ಮಾರ್ಚ್ 24, 2015)
ಸುದೀಪ್ತೊ ಮೊಂಡಲ್ ವರದಿಯಿಂದಾಗಿ ಗೊಂದಲಕ್ಕೀಡಾದ ಕೆಲವು ಕಿರಿಯ ಪತ್ರಕರ್ತರು ನನ್ನೊಡನೆ ನಡೆಸಿದ ಮಾತುಕತೆಯೇ ಆ ಬಗ್ಗೆ ನಾನು ಪ್ರತಿಕ್ರಿಯಿಸಲು ಪ್ರೇರಣೆ. ಇಂತಹದೊಂದು ಅಕಾಡೆಮಿಕ್ ಚರ್ಚೆಯಿಂದ ಯುವಪತ್ರಕರ್ತರಿಗೆ ಒಂದು ಸ್ಪಷ್ಟತೆ ಸಿಗಲಿ ಎನ್ನುವುದು ನನ್ನ ಉದ್ದೇಶವಾಗಿತ್ತು. ವೃತ್ತಿಪರ ಜತೆ ಸ್ವಲ್ಪ ಕಿಲಾಡಿಯೂ ಆಗಿರುವ ಸುದೀಪ್ತೊ ನನ್ನ ಸ್ನೇಹಿತ. ಆತನ ವರದಿಯಲ್ಲಿ ದುರುದ್ದೇಶವಿತ್ತೆಂದು ಹೇಳುವುದು ಖಂಡಿತ ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಓದು-ಬರಹ ಬಲ್ಲವರು ತಾಳ್ಮೆಯಿಂದ ನಾನು ಬರೆದುದನ್ನು ಓದಿದರೆ ಅದು ಅರ್ಥವಾಗಬಹುದು, ಉಳಿದವರ ಬಗ್ಗೆ ನಾನು ಹೇಳಲಾರೆ.
ನಾನು ಬಳಸಿದ ‘ಹಳವಂಡ’ ಶಬ್ದವೇ ಮಾನಹಾನಿಕರ ಎಂದು ಯಾವನೋ ಒಬ್ಬ ನನ್ನ ಜತೆ ವಾದ ಮಾಡತೊಡಗಿದ್ದ. ‘ನೋಡೋ ಮಾರಾಯಾ, ಹತ್ತು ರೂಪಾಯಿ ಖರ್ಚು ಮಾಡಿ ಕನ್ನಡ ರತ್ನಕೋಶ ಕೊಂಡು ಶಬ್ದದ ಅರ್ಥ ನೋಡು. ಆ ಶಬ್ದದಲ್ಲಿ ಯಾವುದೇ ಮಾನಹಾನಿಕರವಾದುದು ಇಲ್ಲ’ ಎಂದು ಮನವರಿಕೆ ಮಾಡಿಕೊಡುವಲ್ಲಿ ನಾನು ಸುಸ್ತಾಗಿದ್ದೆ. ಇದು ನಮ್ಮಲ್ಲಿ ಕೆಲವರ ಸಮಸ್ಯೆ.ಓದಿಕೊಳ್ಳದೆ, ಅನುಭವವನ್ನು ಗಳಿಸಿಕೊಳ್ಳದೆ ಬಹುಬೇಗ ಹಿರಿಯರಾಗುವ ತವಕ. ಈ ವಿಷಯವನ್ನು ಬೆಳೆಸುವ ಉದ್ದೇಶ ನನಗಿರಲಿಲ್ಲ. ಅಲ್ಲಲ್ಲಿ ವಿಶ್ಲೇಷಣೆ, ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ಮೊದಲನೆಯದಾಗಿ, ದಾಖಲೆಗಳಿಲ್ಲದೆ ಲೀಕ್ ಮಾಡುತ್ತಿದ್ದಾರೆ ಎನ್ನುವುದೇ ತಪ್ಪು. ಕೊಡದಲ್ಲಿ ಏನಾದರೂ ತುಂಬಿದ್ದರೆ ಸೋರಬಹುದೇ ಹೊರತು ಖಾಲಿ ಕೊಡ ಸೋರಲಾರದು. ಆದ್ದರಿಂದ ಲೀಕ್ ಎಂದರೆ ಜತೆಯಲ್ಲಿ ದಾಖಲೆಗಳಿವೆ ಎಂದರ್ಥ. ದಾಖಲೆರಹಿತ ಸುದ್ದಿ ಊಹಾಪೋಹ, ವದಂತಿ ಆಗುತ್ತದೆ. ಇದು ಲೀಕ್ ಗೂ ಊಹಾಪೋಹಕ್ಕೂ ಇರುವ ವ್ಯತ್ಯಾಸ.
ಎರಡನೆಯದಾಗಿ, ಲೀಕ್ ಮಾಡುವವರು ಸದಾ ದಾಖಲೆಗಳನ್ನು ಕೊಡುವುದಿಲ್ಲ. ನಾನೇ ಎಷ್ಟೋ ಬಾರಿ ಕೈಯಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳದೆ ಬರೆದಿದ್ದೇನೆ, ಯಾಕೆಂದರೆ ಆ ದಾಖಲೆಗಳನ್ನು ನನ್ನ ಕಣ್ಣಲ್ಲಿ ನೋಡಿದ್ದೇನೆ. ದಾಖಲೆಗಳನ್ನು ತೋರಿಸಿದವ ನನ್ನ ನಂಬಿಕಸ್ತ ವ್ಯಕ್ತಿ ಆಗಿರುವ ಕಾರಣ ನಾನು ಅವನನ್ನು ನಂಬಿದ್ದೇನೆ, ಅವನು ನನ್ನನ್ನು ನಂಬಿರುತ್ತಾನೆ ಅಷ್ಟೆ. ಅಗತ್ಯ ಬಿದ್ದರೆ ನಾನು ನಂಬಿದ ವ್ಯಕ್ತಿ ದಾಖಲೆಗಳನ್ನು ಒದಗಿಸಬಲ್ಲ ಎಂಬ ಭರವಸೆ ಅದು. ಈ ಕಾರಣದಿಂದಾಗಿಯೇ ಇಲ್ಲಿಯ ವರೆಗೆ ನನ್ನ ವಿರುದ್ಧ ಯಾವುದೇ ಮಾನಹಾನಿ ಮೊಕದ್ದಮೆಗಳಿಲ್ಲ.
ಆದ್ದರಿಂದ ತಾನು ಬರೆಯಲಾರದ ವರದಿಗಳನ್ನು ಇನ್ನೊಬ್ಬರು ಯಾರೋ ಬರೆದ ಮಾತ್ರಕ್ಕೆ ಅವರಲ್ಲಿ ಯಾವುದೇ ದಾಖಲೆಗಳಿಲ್ಲದೆ ಕತೆ ಹೆಣೆಯುತ್ತಾರೆ ಎಂದು ಹೀಗಳೆಯುವುದು ವೃತ್ತಿಮಾತ್ಸರ್ಯ, ಇಲ್ಲವೆ ಹತಾಶೆ ಆಗುತ್ತದೆ ಅಷ್ಟೆ. ದಾಖಲೆಗಳಿಲ್ಲದೆ ಯಾರಾದರೂ ಬರೆದರೆ ಅದಕ್ಕಾಗಿ ಕಾನೂನಿನಲ್ಲಿ ಏನು ಶಿಕ್ಷೆ ಇದೆಯೋ ಅದನ್ನು ಅನುಭವಿಸುತ್ತಾರೆ .ನಾನು ಹಿಂದೆಯೇ ಹೇಳಿದ ಹಾಗೆ ಸಮಸ್ಯೆ ಲೀಕ್ ನದ್ದಲ್ಲ, ಅದರಿಂದ ಪಡೆವ ಸುದ್ದಿಯ ಸತ್ಯಾಸತ್ಯತೆಯನ್ನು ತೀರ್ಮಾನಿಸುವ ಪತ್ರಕರ್ತನ ವಿವೇಚನೆಯದ್ದು.
ಮೂರನೆಯದಾಗಿ, ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಪೊಲೀಸರು ಇಂತಹ ಊಹಾಪೋಹಗಳನ್ನು ಹಬ್ಬಿಸುವುದನ್ನು ಯಾರೂ ಅಲ್ಲಗಳೆಯಲಾರರು. ಇದು ಪತ್ರಕರ್ತರೆಲ್ಲರ ಅನುಭವ. ಎರಡು ವರ್ಷಗಳ ಹಿಂದೆ ಕೆಲವು ಪತ್ರಕರ್ತರ ಕೊಲೆ ಸಂಚಿನ ಆರೋಪದ ಮೇಲೆ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತ ಸಿದ್ದಿಕಿ ಮತ್ತು ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅದೇ ರೀತಿ ದೆಹಲಿ ಪೊಲೀಸರು ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತನನ್ನು ಪೊಲೀಸರು ಸುಳ್ಳು ಮೊಕದ್ದಮೆಯಲ್ಲಿ ಬಂಧಿಸಿ ಕೊನೆಗೆ ಬಿಡುಗಡೆ ಮಾಡಿದ್ದ ಪ್ರಕರಣವನ್ನು ಉಲ್ಲೇಖಿಸಿ ಆ ಕಾಲದಲ್ಲಿ ನಾನೊಂದು ಅಂಕಣವನ್ನು ಬರೆದಿದ್ದೆ. (‘’ಊಹಾಪೋಹದ ಮಹಾಪೂರದಲ್ಲಿ ಕೊಚ್ಚಿ ಹೋಗುವ ಮುನ್ನ’’)
ಪತ್ರಕರ್ತರ ಅನುಭವದಲ್ಲಿ ಇವೆಲ್ಲ ಸಾಮಾನ್ಯ. ಹೀಗೆಂದ ಮಾತ್ರಕ್ಕೆ ಲೀಕ್ ಗಳೆಲ್ಲವೂ ಉರಿಯುವ ಕೆಂಡ, ಅದನ್ನು ಮುಟ್ಟಲು ಹೋಗಲೇಬಾರದು ಎಂದು ತೀರ್ಮಾನಿಸಿದರೆ ಪತ್ರಕರ್ತ ಸುದ್ದಿಯ ಹಸಿವಿನಿಂದ ಸಾಯಬೇಕಾಗುತ್ತದೆ. ಅದೇ ರೀತಿ ಹಸಿವಾಗುತ್ತದೆಯೆಂದು ಕೈಗೆ ಸಿಕ್ಕಿದ್ದನ್ನೆಲ್ಲವನ್ನೂ ತಿನ್ನಲಿಕ್ಕಾಗುವುದಿಲ್ಲವಲ್ಲಾ? ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರಿನಿಂದ ಮಂಗಳೂರಿನ ವರೆಗಿನ ಹಲವಾರು ಪತ್ರಕರ್ತರಿಗೆ ದುಡ್ಡು ಹಂಚಲಾಗುತ್ತಿದೆ ಎಂಬ ಊಹಾಪೋಹ ಹುಟ್ಟಿಕೊಂಡಿತ್ತು. ಇಂತಹ ಪತ್ರಕರ್ತರ ಹೆಸರುಗಳನ್ನೊಳಗೊಂಡ ಪತ್ರವನ್ನು ಯಾರೋ ನನಗೂ ಪೋಸ್ಟ್ ಮಾಡಿದ್ದರು. ಆದರೆ ಅದೊಂದು ಅನಾಮಧೇಯ ಪತ್ರವಾಗಿದ್ದ ಕಾರಣ ಬಾಯಿಮಾತಿನಲ್ಲಿ ಎಲ್ಲರೂ ಸುದ್ದಿ ಪ್ರಸಾರ ಮಾಡಿದರೇ ಹೊರತು ಹೆಸರುಗಳನ್ನು ಯಾರೂ ಬರೆಯಲಿಲ್ಲ. ಇದಿಷ್ಟನ್ನೇ ನಾನು ಹೇಳಲು ಹೊರಟಿದ್ದು.
ನಾಲ್ಕನೆಯದಾಗಿ, ಸುದೀಪ್ತೋ ವರದಿಯಲ್ಲಿ ನನಗಿದ್ದ ಏಕೈಕ ಆಕ್ಷೇಪ ಅದು ಸಮತೂಕದ್ದಾಗಿರಲಿಲ್ಲ ಎನ್ನುವುದು. ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಎರಡು ಥಿಯರಿಗಳು ಹರಿದಾಡುತ್ತಿವೆ. ಒಂದು ಆತ್ಮಹತ್ಯೆ, ಇನ್ನೊಂದು ಕೊಲೆ. ಆತ್ಮಹತ್ಯೆ ಎಂದು ಸಾಧಿಸಲು ದಾಖಲೆಗಳನ್ನು ನೀಡದೆ ಬಾಯಿ ಮಾತಿನಲ್ಲಿ ಸುದ್ದಿಗಳನ್ನು ಹರಡುತ್ತಿರುವವರು ಪೊಲೀಸರು ಎನ್ನುವುದು ಸುದೀಪ್ತೋ ಸೇರಿದಂತೆ ಹಲವು ಪತ್ರಕರ್ತರ ಆರೋಪ. ಇದು ನಿಜವೂ ಇರಬಹುದು. ಇದೇ ರೀತಿ ಕೊಲೆ ಎಂದು ಸಾಧಿಸಲು ಯಾವುದೇ ದಾಖಲೆಗಳಿಲ್ಲದೆ ಸುದ್ದಿಗಳನ್ನು ಬಿತ್ತುತ್ತಿರುವ ಇನ್ನೊಂದು ಗುಂಪೂ ಇದೆ. ‘’ರವಿ ಮೈಮೇಲೆ ಗಾಯಗಳಿದ್ದವು’;, ಮಂಪರು ಭರಿಸುವ ಔಷಧಿ ಕೊಟ್ಟಿದ್ದಾರೆ, ಮೂಗು ಕೆಂಪಾಗಿತ್ತು, ದೇಹದಲ್ಲಿ ಸಯನೈಡ್ ಪತ್ತೆಯಾಗಿದೆ ಇಂತಹ ನೂರಾರು ಊಹಾಪೋಹಗಳು ಇದರಲ್ಲಿ ಸೇರಿವೆ. ಮೊದಲನೆಯ ಗುಂಪಿನ ಊಹಾಪೋಹಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಸುದೀಪ್ತೊ, ಜತೆಗೆ ಎರಡನೆ ಗುಂಪಿನ ಊಹಾಪೋಹಗಳನ್ನೂ ಉಲ್ಲೇಖಿಸಿದ್ದರೆ ಅವರ ವರದಿ ಪರಿಪೂರ್ಣವಾಗುತ್ತಿತ್ತು ಎಂದು ನನ್ನ ಭಾವನೆ.
ಕೊನೆಯದಾಗಿ, ‘’... ಸುದೀಪ್ತೋ ದಿನೇಶ್ ಅಮಿನ್ ಮಟ್ಟು ಜತೆ ಮಾತನಾಡಿದ್ದಾನೆ. ಸ್ಪಷ್ಟನೆ ನೀಡಲು ಲಭ್ಯವಿಲ್ಲದ ಸತ್ತಿರೋ ವ್ಯಕ್ತಿ ವಿರುದ್ಧ ಮಾನಹಾನಿ ಸುದ್ದಿ ಮಾಡಲು ಸಾಧ್ಯ ಇಲ್ಲ ಎಂದು ಸುದೀಪ್ತೊ, ದಿನೇಶ್ ಅಮಿನ್ ಮಟ್ಟುಗೆ ಸ್ಪಷ್ಟೀಕರಣ ನೀಡಿದ್ದಾನೆ. ಈ ಸ್ಪಷ್ಟೀಕರಣದ ನಂತರವೂ ಸುದೀಪ್ತೋ ವಿರುದ್ಧ ಫೇಸ್ ಬುಕ್ ನಲ್ಲಿ ಹೀಗಳೆದದ್ದು ಸರಿಯಲ್ಲ ...’’ ಎಂದು ನವೀನ್ ಸೂರಿಂಜೆ ತನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ಹೇಳಿದ್ದಾರೆ. ಸುದೀಪ್ತೋ ಪರವಾಗಿ ವಕಾಲತ್ತು ವಹಿಸಿ ಈ ರೀತಿ ತಪ್ಪು ಅಭಿಪ್ರಾಯಗಳನ್ನು ಹುಟ್ಟಿಸುವ ದರ್ದು ನವೀನ್ ಗೇನಿತ್ತೆಂದು ನನಗೆ ಗೊತ್ತಾಗುತ್ತಿಲ್ಲ. ಸುದೀಪ್ತೊ ಬಯಸಿದರೆ ನಮ್ಮ ನಡುವೆ ನಡೆದ ಸಂಭಾಷಣೆಯನ್ನು ನಾನೇ ಬಹಿರಂಗಗೊಳಿಸುವೆ. ನಮ್ಮ ನಡುವೆ ಮೆಸೆಜ್ ಗಳ ವಿನಿಮಯವೂ ಆಗಿದೆ,ಅದನ್ನೂ ತಿಳಿಸುವೆ. ಸುದೀಪ್ತೊ ಕಾಲ್ ಡಿಟೇಲ್ ಗಳನ್ನು ನನಗೆ ವಾಟ್ಸ್ ಅಪ್ ನಲ್ಲಿ ಕಳಿಸಿ, ದೃಡೀಕರಿಸುವಂತೆ ಕೇಳಿದ್ದರು. ನಾನು ನಿರಾಕರಿಸಿದ್ದೆ.
ಸುದೀಪ್ತೋ ಸೇರಿದಂತೆ ಯಾರಾದಾರೂ ಒಬ್ಬ ಪತ್ರಕರ್ತ ಮುಂದೆ ಬಂದು ‘ದಿನೇಶ್ ಅವರು ದಾಖಲೆಗಳನ್ನು ನೀಡದೆ ಊಹಾಪೋಹಗಳ ಆಧಾರದಲ್ಲಿ ಸುದ್ದಿ ಬರೆಯಲು ಹೇಳಿದ್ದಾರೆ’’ ಎಂದು ತಿಳಿಸಿದರೆ ಇಲ್ಲವೆ ಈ ಆರೋಪವನ್ನು ನವೀನ್ ಸಾಬೀತುಪಡಿಸಿದರೆ ಆ ಕ್ಷಣದಿಂದ ನಾನು ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ. ನಾನು ಪತ್ರಕರ್ತನಾಗಿ ಸಕ್ರಿಯನಾಗಿದ್ದಾಗಲೂ ನನ್ನ ಮಾಲೀಕರಿಗೆ ನನ್ನನ್ನು ಮಾರಿಕೊಂಡಿರಲಿಲ್ಲ, ಈಗಲೂ ಸರ್ಕಾರಕ್ಕೆ ನನ್ನನ್ನು ಮಾರಿಕೊಂಡಿಲ್ಲ.

Saturday, March 14, 2015

ಜಾತಿ ಒಳಗೆ ಇಣುಕಿ

(ಪ್ರಜಾವಾಣಿಯಲ್ಲಿ ನಡೆಯುತ್ತಿರುವ 'ಜಾತಿವಾರು ಜನಗಣತಿ ಸುತ್ತ'.. ಚರ್ಚೆಗೆ ಪ್ರತಿಕ್ರಿಯೆ)ಎಸ್.ಎಂ.ಜಾಮದಾರ ಅವರ  ‘ಜಾತಿವಾರು ಜನಗಣತಿ ಸುತ್ತ...’ ಎಂಬ ಲೇಖನ (ಪ್ರ.ವಾ., ಫೆ. 19) ತಪ್ಪುದಾರಿಗೆಳೆಯುವಂತಿದೆ. ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧಾರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿ ಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಶಾಸಕಾಂಗ, ನ್ಯಾಯಾಂಗ ಹಾಗೂ  ಸಂವಿಧಾನ.  ಜಾಮದಾರರು ಇದನ್ನು ಗುರುತಿಸಲು ವಿಫಲರಾಗಿರುವುದು ಆಶ್ಚರ್ಯ.ಜಾತಿ,  ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ಕೆಲವು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ವರ್ಗಗಳು ಯಾವುವು? ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದಕ್ಕೆ  ಸಂವಿಧಾನದ 15 (3), 15 (4), 16 (4) ಮತ್ತು 46ನೇ ಪರಿಚ್ಛೇದಗಳಲ್ಲಿ ಉಲ್ಲೇಖವಿದೆ. ಜಾಮದಾರರು ಆರೋಪಿಸುವಂತೆ ಈ ಜಾತಿ ಗಣತಿ ಹಿಂದೆ ಕುತಂತ್ರ ಇರುವುದು ನಿಜವೆಂದಾದರೆ ಅವರು ಈ ಆರೋಪವನ್ನು ಸಂವಿಧಾನದ ವಿರುದ್ಧ ಮಾಡಬೇಕಾಗುತ್ತದೆ.‘ಹಿಂದಿನ ಮೂರು ಜನಗಣತಿಗಳು ಎಲ್ಲಿ ಹೋದವು? ಎರಡು ದಶಕಗಳಲ್ಲಿ ರಾಜ್ಯದ ಸಾಮಾಜಿಕ ರಚನೆಯಲ್ಲಿ ಗುರುತಿಸಲಾರದಷ್ಟು ಪರಿವರ್ತನೆಯಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.  ಹಿಂದಿನ ಜಾತಿಗಣತಿ ಮತ್ತು ಈಗ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಗಳ ನಡುವಿನ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರುವುದು ಆಶ್ಚರ್ಯಕರ. ಹಿಂದಿನ ಆಯೋಗಗಳೆಲ್ಲವೂ  ಆಧರಿಸಿದ್ದು 1931ರ ಜನಗಣತಿಯ ಜಾತಿ ಪ್ರಮಾಣವನ್ನು ಜನಸಂಖ್ಯೆಯ ಹೆಚ್ಚಳದ ಪ್ರಮಾಣಕ್ಕೆ ಹಿಗ್ಗಿಸಿ ಮಾಡಿದ ಲೆಕ್ಕವನ್ನು. ಇಂತಹ ಸಮೀಕ್ಷೆಗಳಿಗೆ ಮಿತಿಗಳಿರುವುದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ.ಜಾತಿಗಳನ್ನು ಜೀವಂತವಾಗಿಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈಗಿನ ಮೀಸಲಾತಿಗೆ ಆಧಾರವಾಗಿರುವ ಜಾತಿ ಸಂಖ್ಯೆಗಳ ವೈಜ್ಞಾನಿಕತೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ, ನಮ್ಮಲ್ಲಿ ಜಾತಿ ನಿರ್ದಿಷ್ಟವಾದ ಯೋಜನೆಗಳಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿ ಇಲ್ಲದೆ ಈ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಈಗಿನ ಜನಗಣತಿಯಲ್ಲಿ ಈ ಮಾಹಿತಿ ಎಲ್ಲಿ ಲಭ್ಯ ಇದೆ?‘ಭಾರತದಲ್ಲಿ ಜಾತಿ ಎನ್ನುವುದು ಸಾಮಾಜಿಕ ವರ್ಗ. ಸಾಮಾಜಿಕ ಹಿಂದುಳಿಯುವಿಕೆಯನ್ನು ಗುರುತಿಸಲು ಜಾತಿ ಪ್ರಮುಖ ಮಾನದಂಡ. ಇದಕ್ಕಾಗಿ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು. ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು  ಕೇಂದ್ರ, ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು 23 ವರ್ಷಗಳ ಹಿಂದೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.‘ನೇರ ಮೀಸಲಾತಿಗೆ ಅವಕಾಶವಿಲ್ಲದಾಗ ಉಪಜಾತಿಗಳಿಗೆ ಒಳ ಮೀಸಲಾತಿಯ ಅಸ್ತ್ರವನ್ನು ಬಳಸಿ ಮುಖ್ಯ ಜಾತಿಗಳಿಂದ ಉಪಜಾತಿಗಳನ್ನು ಬೇರ್ಪಡಿಸಿ ನಿಯಂತ್ರಿಸುವ ಹುನ್ನಾರಗಳು ನಮ್ಮ ಮುಂದಿವೆ’ ಎಂದು ಜಾಮದಾರ ಹೇಳಿದ್ದಾರೆ. ನಮ್ಮಲ್ಲಿ ಯಾವ ಜಾತಿಯೂ ಏಕಶಿಲಾ ರೂಪದ್ದಲ್ಲ, ಅದರೊಳಗೆ ನೂರಾರು ಉಪಜಾತಿಗಳಿವೆ. ಮೀಸಲಾತಿಯ ಲಾಭವನ್ನು ನಿರ್ದಿಷ್ಟ ಜಾತಿಯೊಳಗಿನ ಬಲಾಢ್ಯ ಗುಂಪುಗಳಷ್ಟೇ ಕೈವಶ ಮಾಡಿಕೊಳ್ಳುವುದರಿಂದ ಅದೇ ಜಾತಿಯೊಳಗಿನ ದುರ್ಬಲರ ಗುಂಪಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಇದೆ. ಹಾಗಿದ್ದರೆ ಸತ್ಯಾಂಶವನ್ನು ತಿಳಿದುಕೊಳ್ಳುವುದು ಬೇಡವೇ? ಸಂಖ್ಯಾ ಬಲಕ್ಕಾಗಿ ಎಲ್ಲರೂ ಬೇಕು, ಸೌಲಭ್ಯಗಳ ಪ್ರಶ್ನೆ ಎದುರಾದಾಗ ‘ಅವರಿಗೆ ಬೇಡ, ನಮಗಷ್ಟೇ ಸಾಕು’ ಎಂದು ಹೇಳುವುದು ಆಷಾಢಭೂತಿತನ.ಜಾತಿಗಣತಿ ಎನ್ನುವುದು ಆರ್ಎಸ್ಎಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಅವರು ಕಳವಳಪಟ್ಟಿದ್ದಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ,  ಕಂದಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು, ಪಡೆದುಕೊಂಡವರು ಯಾರು ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?ಬಲಿಷ್ಠ ಜಾತಿಗಳ ನಾಯಕರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ  ಎಂಬ ಆಧಾರರಹಿತ ರಾಜಕೀಯ ವಿಶ್ಲೇಷಣೆಯನ್ನು ಜಾಮದಾರ ಮುಂದಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮೊದಲ ಬಾರಿಗೆ ಜಾತಿ ಬಲ ಇಲ್ಲದ ದೇವರಾಜ ಅರಸು ಅಧಿಕಾರಕ್ಕೆ ಬಂದಿರುವುದನ್ನು ಅವರು ಮುಚ್ಚಿಡುತ್ತಾರೆ, ಅರಸು ಅಧಿಕಾರ ಕಳೆದುಕೊಂಡದ್ದನ್ನು ಮಾತ್ರ ಪ್ರಸ್ತಾಪಿಸುತ್ತಾರೆ. 1983ರಲ್ಲಿ ಕಾಂಗ್ರೆಸ್  ಪಕ್ಷವನ್ನು ಸೋಲಿಸಿದ್ದು ಎಸ್.ಬಂಗಾರಪ್ಪ ಮತ್ತು ಅಬ್ದುಲ್ ನಜೀರ್ ಸಾಬ್ ನೇತೃತ್ವದ ಜನತಾ ರಂಗ. 1994ರಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದು ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಮೋಸ ದಿಂದ ಎಂದು ಹೇಳುವವರು ಆ ಚುನಾವಣೆಯಲ್ಲಿ ಬಂಗಾರಪ್ಪ ಅವರು ವಹಿಸಿದ್ದ ಬಂಡುಕೋರನ ಪಾತ್ರ ವನ್ನು ಮರೆಯುತ್ತಾರೆ.ಜಾಮದಾರರು 1999ರ ಚುನಾವಣೆಯಲ್ಲಿ ಎಸ್. ಎಂ.ಕೃಷ್ಣ  ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಕಾಂಗ್ರೆಸ್ 2004ರಲ್ಲಿ ಕೃಷ್ಣ ನೇತೃತ್ವದಲ್ಲಿ ಸೋತಿರುವುದನ್ನು ಮರೆಯುತ್ತಾರೆ. ಆಶ್ಚರ್ಯ­ವೆಂದರೆ, ಅವರ ಚುನಾವಣಾ ವಿಶ್ಲೇಷಣೆ 2004ಕ್ಕೆ ನಿಂತು ಬಿಟ್ಟಿರುವುದು. ಅವರು 2013ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ್ದರೆ ಅವರ ಚುನಾವಣಾ ವಿಶ್ಲೇಷಣೆ ತಾರ್ಕಿಕ  ಅಂತ್ಯ ಕಾಣುತ್ತಿತ್ತು.  2013ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದವರು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ. ಸೋತುಹೋದ ಅವರ ಎದುರಾಳಿ ಪಕ್ಷಗಳಾದ ಜೆಡಿಎಸ್, ಕೆಜೆಪಿ ಮತ್ತು ಬಿಜೆಪಿಯ  ನಾಯಕತ್ವ ಯಾರ ಕೈಯಲ್ಲಿತ್ತು? ಯಾವುದೇ ಚುನಾವಣೆಯಲ್ಲಿ ನಿರ್ದಿಷ್ಟ ಜಾತಿ ಜನ ನೂರಕ್ಕೆ ನೂರರಷ್ಟು ಒಂದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಹಾಗೆಂದು ತಿಳಿದುಕೊಳ್ಳುವುದು ಮತದಾರರಿಗೆ ಮಾಡುವ ಅವಮಾನ ಅಷ್ಟೆ.

Tuesday, March 10, 2015

ನೇಪಥ್ಯಕ್ಕೆ ಸರಿಯುತ್ತಿರುವ ಪ್ರತಿಭಾವಂತ ಪತ್ರಕರ್ತರು

‘’ನೀವು ಮತ್ತೆ ಪತ್ರಿಕೆಗೆ ಬರೆಯುವುದಿಲ್ವಾ, ಯಾಕೆ ಅರ್ಧದಲ್ಲಿಯೇ ನಿವೃತ್ತಿ ತೆಗೆದುಕೊಂಡ್ರಿ ಸಾರ್’ - ಇದು ಕಳೆದ 19 ತಿಂಗಳಲ್ಲಿ ನನ್ನನ್ನು ಭೇಟಿಯಾದ ಬಹುತೇಕ ಮಂದಿ ಕೇಳುತ್ತಿರುವ ಸಾಮಾನ್ಯ ಪ್ರಶ್ನೆ. ಇವರಲ್ಲಿ ಬಹಳಷ್ಟು ಮಂದಿ ಅಮಾಯಕರು. ಅವರು ನನ್ನ ಬರವಣಿಗೆಗಳನ್ನು ಓದುತ್ತಾ ಬಂದವರು, ಮುಂದೆಯೂ ಓದಲು ಬಯಸುವವರು ಅಷ್ಟೆ. ಅದರಾಚೆಗೆ ಇರುವ ಮಾಧ್ಯಮಲೋಕದ ಅಂತರಂಗದ ಬಗ್ಗೆ ಅವರಿಗೇನು ಗೊತ್ತಿಲ್ಲ. ಈ ಪ್ರಶ್ನೆಯ ಹುಳು ನನ್ನನ್ನು ಸದಾ ಕೊರೆಯುತ್ತಲೇ ಇದೆ. ಇದೇ ಗುಂಗಿನಲ್ಲಿ ನನ್ನಂತೆಯೇ ಪತ್ರಿಕಾ ವೃತ್ತಿಯಿಂದ ವಿರಾಮ ಪಡೆದವರು ಯಾರೆಲ್ಲಾ ಇದ್ದಾರೆ ಎಂದು ಯೋಚನೆ ಮಾಡತೊಡಗಿದೆ.
ನನಗೆ ಮೊದಲು ಹೊಳೆದದ್ದು ಮುಂಗಾರು ಪತ್ರಿಕೆಯ ಆರು ಮಂದಿ ನನ್ನ ಹಿರಿಯ ಸಹದ್ಯೋಗಿಗಳು. ಎನ್.ಎಸ್. ಶಂಕರ್,ಇಂದೂಧರ ಹೊನ್ನಾಪುರ, ಕೆ.ರಾಮಯ್ಯ, ಕೆ.ಪುಟ್ಟಸ್ವಾಮಿ, ಮಂಗ್ಲೂರು ವಿಜಯ ಮತ್ತು ಹಸನ್ ನಯೀಂ ಸುರಕೋಡ. ಇವರಲ್ಲಿ ಇಂದೂಧರ ಅವರು ಸಂವಾದ ಪತ್ರಿಕೆಯನ್ನು ನಡೆಸುತ್ತಾ ಇನ್ನೂ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಉಳಿದವರೆಲ್ಲರೂ ಪತ್ರಿಕಾ ವೃತ್ತಿಯಿಂದ ದೂರ ಉಳಿದಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ನಾನು ರೋಲ್ ಮಾಡೆಲ್ ಎಂದು ತಿಳಿದುಕೊಂಡವನು. ಇವರೆಲ್ಲರೂ ಪತ್ರಕರ್ತರಾಗಿ ಈಗಲೂ ಸಕ್ರಿಯರಾಗಿದ್ದರೆ ಕನ್ನಡ ಮಾಧ್ಯಮದ ದಿಕ್ಕು-ದೆಸೆ ಬೇರೆಯೇ ಆಗಿರುತ್ತಿತ್ತು.
ಇವರ ನಂತರ ನನಗೆ ನೆನಪಾದವರು ವೃತ್ತಿಯಿಂದ ನಿವೃತ್ತಿಯಾದರೂ ಬರೆಯುವ ಶಕ್ತಿ ಮತ್ತು ಆಸಕ್ತಿಯನ್ನು ಉಳಿಸಿಕೊಂಡ ಪ್ರಜಾವಾಣಿಯ ನನ್ನ ಹಿರಿಯ ಸಹದ್ಯೋಗಿಗಳು. ಇವರಲ್ಲಿ ರಾಜಾ ಶೈಲೇಶಚಂದ್ರ ಗುಪ್ತಾ, ಶಿವಾಜಿ ಗಣೇಶನ್, ಡಿ.ವಿ.ರಾಜಶೇಖರ್, ಲಕ್ಷ್ಮಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ ಪ್ರಮುಖರು. ಕನ್ನಡದಲ್ಲಿ ಹಣಕಾಸು ಕ್ಷೇತ್ರದ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರು ಶೈಲೇಶಚಂದ್ರ ಗುಪ್ತಾ. ಶಿವಾಜಿ ಗಣೇಶನ್ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಗೇರಿ ನಿವೃತ್ತರಾದ ಮೊದಲ ದಲಿತ ಪತ್ರಕರ್ತ. ಕನ್ನಡದಲ್ಲಿ ವಿದೇಶಾಂಗ ವ್ಯವಹಾರದ ಬಗ್ಗೆ ಸುದೀರ್ಘವಾಗಿ ಬರೆದು ಕನ್ನಡದ ಓದುಗರಿಗೆ ಹೊರಜಗತ್ತನ್ನು ಪರಿಚಯಿಸುತ್ತಾ ಬಂದವರು ಡಿ.ವಿ.ರಾಜಶೇಖರ್. ಇದೇ ರೀತಿ ಲಕ್ಷಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ್ ಯಾವುದಾದರೂ ಒಂದು ಪತ್ರಿಕೆಯ ಸಾರಥ್ಯ ವಹಿಸುವಷ್ಟು ಪ್ರತಿಭಾವಂತರು. ಇವರಲ್ಲಿ ಗುಪ್ತಾ ಅವರು ಸಂಯುಕ್ತ ಕರ್ನಾಟಕಕ್ಕೆ ಅಂಕಣ ಬರೆಯುತ್ತಿದ್ದಾರೆ. ರಾಜಶೇಖರ್ ಇತ್ತೀಚಿನ ವರೆಗೆ ವಿಜಯಕರ್ನಾಟಕಕ್ಕೆ ಬರೆಯುತ್ತಿದ್ದರು. ಅದನ್ನು ನಿಲ್ಲಿಸಿದ ಹಾಗೆ ಕಾಣುತ್ತಿದೆ.
ಕೊನೆಯದಾಗಿ ಇವರಿಗೆಲ್ಲರಿಗಿಂತ ಕಡಿಮೆ ವಯಸ್ಸಿನ ಪತ್ರಕರ್ತರ ಇನ್ನೊಂದು ಗುಂಪಿದೆ. ಮಾತು ಮತ್ತು ಕೃತಿ ನಡುವೆ ಅಂತರ ಇಲ್ಲದಂತೆ ಬದುಕುತ್ತಾ ಬಂದ ಶಶಿಧರ್ ಭಟ್ ಪತ್ರಿಕೆ ಮತ್ತು ಚಾನೆಲ್ ಗಳೆರಡರಲ್ಲಿಯೂ ದೀರ್ಘ ಅನುಭವ ಇದ್ದವರು. ರಾಜಿ ಮನೋಭಾವದವರಲ್ಲದ ಭಟ್ರು ಸದ್ಯಕ್ಕೆ ನಿರುದ್ಯೋಗಿ. ಪ್ರಿಂಟ್ ನಿಂದ ಟಿವಿ ಪ್ರವೇಶಿಸಿ ಅಲ್ಲಿಯೂ ತನ್ನ ಛಾಪು ಮೂಡಿಸಿದ್ದ ಲಕ್ಷ್ಮಣ್ ಹೂಗಾರ್ ವೃತ್ತಿಯಿಂದ ದೂರವಾಗಿ ತೋಟ ನೋಡಿಕೊಳ್ಳುತ್ತಾ, ನೀರಾವರಿ ಹೋರಾಟ ನಡೆಸುತ್ತಾ ಆರಾಮವಾಗಿದ್ದಾರೆ(?). ಕನ್ನಡದಿಂದ ಇಂಗ್ಲೀಷ್ ಗೆ ಜಿಗಿದ ಇನ್ನೊಬ್ಬ ಗ್ರಾಮೀಣ ಪ್ರತಿಭೆ ನವೀನ್ ಅಮ್ಮೆಂಬಳ ಕೂಡಾ ಕಳೆದ ಕೆಲವು ತಿಂಗಳುಗಳಿಂದ ನಿರುದ್ಯೋಗಿ. ಇದೇ ಸಾಲಿನಲ್ಲಿ ಮುಂಗಾರು ತೊರೆದು ಲಂಕೇಶ್ ಪತ್ರಿಕೆ ಸೇರಿ ಅಲ್ಲಿಂದಲೂ ಹೊರಬಂದು ಈಗ ಮಾಧ್ಯಮಲೋಕದಿಂದ ದೂರ ಇರುವ ಟಿ.ಕೆ.ತ್ಯಾಗರಾಜ್ ಇದ್ದಾರೆ, ಜತೆಗೆ ಚಿದಂಬರ ಬೈಕಂಪಾಡಿ ಎಂಬ ಇನ್ನೊಬ್ಬ ಗೆಳೆಯ ಮಂಗಳೂರಿನಲ್ಲಿದ್ದಾನೆ.
ಇಂಗ್ಲೀಷ್ ಪತ್ರಿಕೋದ್ಯಮ ತೊರೆದು ಕನ್ನಡಕ್ಕೆ ಬಂದ ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕ ಪತ್ರಿಕೆಯಿಂದ ಬಿಡುಗಡೆ ಹೊಂದಿರುವುದು ಇತ್ತೀಚಿನ ಶಾಕಿಂಗ್ ಸುದ್ದಿ. ಇಂಗ್ಲೀಷ್ ಮತ್ತು ಕನ್ನಡಗಳೆರಡರಲ್ಲಿಯೂ ಸೊಗಸಾಗಿ ಬರೆಯಬಲ್ಲ ಮತ್ತು ಹೊಸತಲೆಮಾರಿನ ಅತ್ಯಂತ ಪ್ರತಿಭಾವಂತ ಪತ್ರಕರ್ತ ಸುಗತ ಪತ್ರಿಕಾ ವೃತ್ತಿಯಲ್ಲಿ ಮುಂದುವರಿದರೂ ಕನ್ನಡದಲ್ಲಿಯೇ ಉಳಿಯುವುದು ಅನುಮಾನ.
ಯಾಕೆ ಹೀಗಾಗುತ್ತಿದೆ? ಯಾರಲ್ಲಿಯಾದರೂ ಉತ್ತರ ಇದೆಯಾ? ಸೂಕ್ಷ್ಮವಾಗಿ ನಾನು ಉಲ್ಲೇಖಿಸಿದ ಪತ್ರಕರ್ತರೆಲ್ಲರ ಹಿನ್ನೆಲೆಯನ್ನು ನೋಡಿ ಉತ್ತರ ಸಿಗಬಹುದೇನೋ? ಇದರ ನಂತರವಾದರೂ ನನ್ನನ್ನು ಪ್ರಶ್ನಿಸುವವರು ಕಡಿಮೆಯಾಗಬಹುದೇನೋ? ‘’ಅದೆಲ್ಲ ಇರಲಿ ನೀವು ಯಾಕೆ ಪ್ರಜಾವಾಣಿ ಬಿಟ್ಟು ಬಂದ್ರಿ?’’ ಎಂದು ಮತ್ತೆ ಯಾರಾದರೂ ಕೇಳಿದರೆ ನಾನು ಉತ್ತರಿಸಲಾರೆ.