Monday, August 6, 2012

ರಾಜಕೀಯದ ಬೋನಿಗೆ ಬಿದ್ದ `ಚಳವಳಿ ಹುಲಿ' August 06, 2012

ನಮ್ಮ ನಡುವಿನ ಭ್ರಷ್ಟರಾಜಕಾರಣಿಗಳಿಗೆ ಹೋಲಿಸಿದರೆ ಅಣ್ಣಾ ತಂಡದ ಸದಸ್ಯರು ಪ್ರಾಮಾಣಿಕರು ಮತ್ತು ಯೋಗ್ಯರು. ಅವರ ಮೇಲೆ ಕೆಲವು ಆರೋಪಗಳು ಇವೆ, ನಿಜ. ಇವೆಲ್ಲವೂ ಈ ದೇಶದ ಬಹುಸಂಖ್ಯಾತ ಪ್ರಜೆಗಳು ಒಂದಲ್ಲ ಒಂದು ಸಂದರ್ಭದಲ್ಲಿ ಬಲಿಯಾಗುವ ಸಾಮಾನ್ಯ ದೌರ್ಬಲ್ಯಗಳು. 

ಇವೆಲ್ಲದರ ಹೊರತಾಗಿಯೂ ಅಣ್ಣಾ ಹಜಾರೆ ರಾಜಕೀಯ ಪಕ್ಷ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತಕ್ಕೆ ಬೇಕಾಗಿರುವ 272  ಪ್ರಾಮಾಣಿಕ ಸದಸ್ಯರನ್ನು ಗೆಲ್ಲಿಸಿ ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚಿಸಲು ಸಾಧ್ಯವಾದರೆ...ಅದಕ್ಕಿಂತ ದೊಡ್ಡ ಭಾಗ್ಯ ಭಾರತೀಯರಿಗೆ ಇನ್ನೇನು ಬೇಕು? ಆದರೆ ಇದು ಸಾಧ್ಯವೇ ಎನ್ನುವುದಷ್ಟೇ ಪ್ರಶ್ನೆ.

ಹುಲಿಯಾಗಿರಲಿ, ಇಲಿಯಾಗಿರಲಿ ಯಾವುದೂ ಕೂಡಾ ತನ್ನನ್ನು ಹಿಡಿಯಲಿಕ್ಕಾಗಿಯೇ ಬೋನು ಇಟ್ಟಿದ್ದಾರೆ ಎಂದು ಗೊತ್ತಿದ್ದೂ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಕ್ಷಿಪ್ರ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಮೂಲಕ ದೇಶದಲ್ಲಿ ಸಂಚಲನ ಉಂಟುಮಾಡಿದ್ದ ಅಣ್ಣಾ ಚಳವಳಿ ಎಂಬ `ಹುಲಿ`ಯನ್ನು ರಾಜಕೀಯದ ಬೋನಿಗೆ ಹಾಕಲು ಯುಪಿಎ ಸರ್ಕಾರ ಒಂದು ವರ್ಷದಿಂದ ಸತತವಾಗಿ ಪ್ರಯತ್ನ ಮಾಡುತ್ತಿತ್ತು. 

ಇದಕ್ಕಾಗಿ `ರಾಜಕೀಯಕ್ಕೆ ಇಳಿದು ನೋಡಿ`, `ಚುನಾವಣೆಯಲ್ಲಿ ಸ್ಪರ್ಧಿಸಿ ನೋಡಿ` ಎಂದು ಕೇಂದ್ರ ಸಚಿವರು ಅಣ್ಣಾತಂಡವನ್ನು ಕೆಣಕುತ್ತಲೇ ಇದ್ದರು. ಇದರಿಂದ ಪ್ರಚೋದನೆಗೊಳಗಾದವರಂತೆ ಅಣ್ಣಾತಂಡದ ಕೆಲವು ಸದಸ್ಯರು ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿ, ಹೆಚ್ಚುಕಡಿಮೆ ಬೋನಿನ ಹತ್ತಿರಹೋಗಿ ಒಳಗೆ ಬೀಳದೆ ತಪ್ಪಿಸಿಕೊಂಡಿದ್ದರು. 

ಈಗ `ಚಳವಳಿಯ ಹುಲಿ` ಬೋನಿಗೆ ಬಿದ್ದಿದೆ. ಇದರಿಂದ ಆಡಳಿತಾರೂಢ ಯುಪಿಎಗೆ ಮಾತ್ರವಲ್ಲ, ಬಹಿರಂಗವಾಗಿ ಅಣ್ಣಾ ಚಳವಳಿಯನ್ನು ಬೆಂಬಲಿಸುತ್ತಾ, ಆಂತರ್ಯದಲ್ಲಿ ಅದನ್ನು ದ್ವೇಷಿಸುತ್ತಾ ಇದ್ದ ವಿರೋಧಪಕ್ಷಗಳಿಗೂ ಖುಷಿಯಾಗಿದೆ. ಬೋನಿನಲ್ಲಿ ಬಿದ್ದಿರುವುದು ಗೊತ್ತಿಲ್ಲದಂತೆ `ಚಳವಳಿಯ ಹುಲಿ` ಮಾತ್ರ `ಭ್ರಷ್ಟ ರಾಜಕಾರಣಿಗಳ ಎದೆ ಸೀಳುತ್ತೇನೆ` ಎಂದು ಆರ್ಭಟಿಸುತ್ತಿದೆ. 

ಬೋನಿಗೆ ಬಿದ್ದಿರುವ ಹುಲಿಗೆ ಯಾರು ಹೆದರುತ್ತಾರೆ? ರಾಜಕೀಯವನ್ನು `ಫಟಿಂಗರ ಕೊನೆಯ ತಾಣ` ಎಂದು ಹೇಳುತ್ತಾ ಬಂದಿರುವ ಅಣ್ಣಾ ತಂಡ ಈಗ ಅದೇ ತಾಣವನ್ನು ಅರಸಿಕೊಂಡು ಬಂದ ಹಾಗಾಗಿದೆ. ಇನ್ನು ಮುಂದೆ ಅವರು `ಫಟಿಂಗರ` ಸಮಕ್ಕೆ ನಿಂತು ಸೆಣಸಾಡಬೇಕಾಗಿದೆ.

ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಂಡ ದಿನದಿಂದಲೇ ಅಣ್ಣಾ ತಂಡ ತನ್ನ ಮೊದಲ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಣ್ಣಾತಂಡ ದೇಶದ ಜನತೆಯ ಕಣ್ಣಮುಂದೆ ಮೂಡಿಸಿರುವ `ಆದರ್ಶ ಸ್ವರೂಪಿ ರಾಜಕೀಯ ಪಕ್ಷ`ವನ್ನು ನಿರ್ವಹಿಸಲು ನಿಸ್ವಾರ್ಥ, ಪ್ರಾಮಾಣಿಕ ಮತ್ತು ಸೇವಾನಿಷ್ಠ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಬೇಕಾಗುತ್ತಾರೆ. 

ಈ ಕೆಲಸಕ್ಕಾಗಿ ಅಣ್ಣಾ ಹಜಾರೆಯವರ ರೀತಿಯಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಎಷ್ಟು ಮಂದಿ ಮುಂದೆ ಬರಬಹುದು? ದೇಶಪ್ರೇಮ ಸಾಬೀತುಪಡಿಸಲು ವಾರಾಂತ್ಯದ ರಜೆಯ ಕಾಲದಲ್ಲಿ ಉಪವಾಸ ಸತ್ಯಾಗ್ರಹದ ಶಿಬಿರಕ್ಕೆ ಬಂದು ಜೈಕಾರ ಹಾಕಿದರೆ ಸಾಕು ಎಂದು ತಿಳಿದುಕೊಂಡವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು `ದೇಶಸೇವೆ`ಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆಯೇ? ರಾಜಕೀಯ ಪಕ್ಷವೆಂದರೆ ಹನ್ನೊಂದು ಮಂದಿಯ ಕ್ರಿಕೆಟ್ ತಂಡ ಅಲ್ಲ, ಬೀದಿಯಲ್ಲಿದ್ದವರೆನ್ನೆಲ್ಲ ಸೇರಿಸಿಕೊಳ್ಳುವ ಗಣೇಶೋತ್ಸವ ಸಮಿತಿಯೂ ಅಲ್ಲ. 

ಅದರಲ್ಲಿ ಎಲ್ಲ ಜಾತಿ, ಧರ್ಮ, ವರ್ಗ ಮತ್ತು ಪ್ರದೇಶಗಳಿಗೆ ಪ್ರಾತಿನಿಧ್ಯ ಇರಬೇಕಾಗುತ್ತದೆ. ಪ್ರಾತಿನಿಧ್ಯ ಎಂದರೆ ಮೀಸಲಾತಿ ಅಲ್ಲ, ಅದು ಸಮಾನ ಅವಕಾಶ. ಇಂತಹ ಪ್ರಾತಿನಿಧ್ಯ ಅಣ್ಣಾತಂಡದಲ್ಲಿ ಇಲ್ಲ ಎನ್ನುವುದು ಕೂಡಾ ಅದರ ವಿರುದ್ಧದ ಒಂದು ಆರೋಪ.

ಅಣ್ಣಾತಂಡದ ಎರಡನೆಯ ಪರೀಕ್ಷೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎದುರಾಗಲಿದೆ. ಸಂಸತ್‌ನೊಳಗೆ ಕಾಲಿಡುವ ಸದಸ್ಯರ ಅರ್ಹತೆ ಮತ್ತು ಪ್ರಾಮಾಣಿಕತೆ ಬಗ್ಗೆ ಅಣ್ಣಾ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ  ಸಾರ್ವಜನಿಕ ವೇದಿಕೆ ಮತ್ತು ಟಿವಿ ಸ್ಟುಡಿಯೋಗಳಲ್ಲಿ ಗಂಟೆಗಟ್ಟಲೆ ಭಾಷಣ ಬಿಗಿದಿದೆ. 

ಆಡಿದ್ದನ್ನು ಮಾಡಿತೋರಿಸಬೇಕಾದರೆ ಅವರು ಈಗ `22 ಕ್ಯಾರೆಟ್` ಶುದ್ಧದ 543 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಅಣ್ಣಾಹಜಾರೆ ಅವರಿಗೆ ಚಳವಳಿ ಕಾಲದಲ್ಲಿ ತನ್ನ ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಳ್ಳಲು ಸರಿಯಾಗಿ ನಾಲ್ಕು ಪ್ರಾಮಾಣಿಕ ಕಾರ್ಯಕರ್ತರು ಸಿಕ್ಕಿಲ್ಲ.
 
ಈಗ ಇದ್ದವರ ಮೇಲೆಯೂ ಆರೋಪಗಳಿರುವಾಗ ಪ್ರಾಮಾಣಿಕ ಅಭ್ಯರ್ಥಿಗಳನ್ನು ಎಲ್ಲಿಂದ ತರುತ್ತೀರಿ? ಅಂತಹವರನ್ನು ಸೃಷ್ಟಿ ಮಾಡಲು ಅಣ್ಣಾಹಜಾರೆ `ಬ್ರಹ್ಮ`ನೂ ಅಲ್ಲ, ಹೊರಗಿನಿಂದ ಆಮದು ಮಾಡಿಕೊಳ್ಳಲು ಅವರು ಸರಕೂ ಅಲ್ಲ. ಅಣ್ಣಾತಂಡ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯ ಮಟ್ಟವನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದು ನಿಲ್ಲಿಸಿರುವ ಕಾರಣ, ನಾಳೆ  ಮಾಧ್ಯಮದವರು ಸೇರಿದಂತೆ ಸಾರ್ವಜನಿಕರು ದುರ್ಬೀನು ಹಿಡಿದುಕೊಂಡು ಅಣ್ಣಾ ಪಕ್ಷದವರ ಜಾತಕ ಜಾಲಾಡಿಸುತ್ತಾರೆ.

ಮೂರನೆಯ ಪರೀಕ್ಷೆಯನ್ನು ಚುನಾವಣೆಯ ಖರ್ಚಿಗೆ ದುಡ್ಡು ಹೊಂದಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಅಣ್ಣಾತಂಡ ಎದುರಿಸಬೇಕಾಗುತ್ತದೆ.  ಆಯೋಗದ ನಿಯಮದ ಪ್ರಕಾರ ಲೋಕಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 25 ಲಕ್ಷ ರೂಪಾಯಿ ಮತ್ತು ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿ 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಖರ್ಚು ಮಾಡುವ ಹಾಗಿಲ್ಲ. 

ಕಳೆದ 25 ವರ್ಷಗಳಲ್ಲಿ ಯಾವುದಾದರೂ ಅಭ್ಯರ್ಥಿ ಈ ಮಿತಿಯೊಳಗೆ ಹಣ ಖರ್ಚು ಮಾಡಿ ಗೆದ್ದ ಉದಾಹರಣೆಗಳು ಇವೆಯೇ? ಕ್ರೂರ ವಾಸ್ತವವನ್ನು ಒಪ್ಪಿಕೊಂಡು ಅಣ್ಣಾಪಕ್ಷದ ಅಭ್ಯರ್ಥಿಗಳು  ಆಯೋಗ ವಿಧಿಸಿರುವ ಮಿತಿಯನ್ನು ಮೀರಿ ಖರ್ಚು ಮಾಡಿದರೆ ಈಗ ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ರಾಜಕಾರಣಿಗಳಿಗೂ ಇವರಿಗೂ ಏನು ವ್ಯತ್ಯಾಸ ಉಳಿಯಲಿದೆ? 

ನಾಲ್ಕನೆಯ ಪರೀಕ್ಷೆ ಎದುರಾಗಲಿರುವುದು ರಾಜಕೀಯ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲಿ. ಇಲ್ಲಿಯವರೆಗೆ ಅಣ್ಣಾತಂಡದ ಏಕೈಕ ಕಾರ್ಯಕ್ರಮ- ಜನಲೋಕಪಾಲರ ನೇಮಕ. ಇದರ ಜತೆಯಲ್ಲಿ ಇತ್ತೀಚೆಗೆ ಕೇಂದ್ರದ 14 ಸಚಿವರ ವಿರುದ್ಧ ತನಿಖೆ ನಡೆಯಬೇಕೆಂಬ ಇನ್ನೊಂದು ಬೇಡಿಕೆ ಸೇರಿಸಿಕೊಂಡಿದೆ. 

ಇವೆರಡನ್ನು ಬಿಟ್ಟರೆ ಚುನಾವಣಾ ಸುಧಾರಣೆ, ಭೂಸ್ವಾಧೀನ ಕಾಯಿದೆಯಲ್ಲಿ ಬದಲಾವಣೆ ಮೊದಲಾದ ವಿಷಯಗಳು ಆಗಾಗ ಭಾಷಣಗಳಲ್ಲಿ ಪ್ರಸ್ತಾಪವಾಗುತ್ತಿದ್ದವು ಅಷ್ಟೆ. ಜನಲೋಕಪಾಲರ ನೇಮಕದ ಒಂದು ಕಾರ್ಯಸೂಚಿಯನ್ನು ಇಟ್ಟುಕೊಂಡು ರಾಜಕೀಯ ಪಕ್ಷವನ್ನು ಕಟ್ಟಲಾಗುವುದಿಲ್ಲ.
 
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ಅಸ್ಸಾಂನಿಂದ ಮಹಾರಾಷ್ಟ್ರದ ವರೆಗೆ ನೂರಾರು ಸಮಸ್ಯೆಗಳಿವೆ. ಅವುಗಳೆಲ್ಲವೂ ಕಾನೂನಿನ ಮೂಲಕವೇ ಇತ್ಯರ್ಥಗೊಳ್ಳುವಂತಹದ್ದಲ್ಲ, ಅವುಗಳಲ್ಲಿ ಕೆಲವು ಬಿಕ್ಕಟ್ಟುಗಳ ಬಗ್ಗೆ  ಸೈದ್ಧಾಂತಿಕ ನಿಲುವು ಮುಖ್ಯವಾಗುತ್ತದೆ.

ಮೀಸಲಾತಿ, ಮಾವೋವಾದಿ ಚಟುವಟಿಕೆ, ಕಾಶ್ಮೆರದಲ್ಲಿನ ಭಯೋತ್ಪಾದನೆ, ಈಶಾನ್ಯ ರಾಜ್ಯದ ಪ್ರತ್ಯೇಕತಾವಾದಿಗಳು, ಅಲ್ಪಸಂಖ್ಯಾತರು, ದಲಿತರು, ರೈತರು, ಕಾರ್ಮಿಕರು, ಜಲ-ನೆಲ-ಭಾಷೆಯ ತಂಟೆ ತಕರಾರುಗಳು...ಇಂತಹ ನೂರಾರು ಸಮಸ್ಯೆಗಳ ಬಗ್ಗೆ ತನ್ನ ನಿಲುವನ್ನು ರಾಜಕೀಯ ಪಕ್ಷ ಸ್ಪಷ್ಟಪಡಿಸಬೇಕಾಗುತ್ತದೆ. 

ಕಳೆದ 3-4 ದಶಕಗಳ ದೇಶದ ಇತಿಹಾಸವನ್ನು ನೋಡಿದರೆ ಎರಡು ಪ್ರಮುಖ ವಿಷಯಗಳು ನಮ್ಮ ರಾಜಕೀಯವನ್ನು ಪ್ರಭಾವಿಸುತ್ತಾ ಮತ್ತು ಅದರ ದಿಕ್ಕು-ದೆಸೆ ಬದಲಾಯಿಸುತ್ತಾ ಬಂದುದನ್ನು ಕಾಣಬಹುದು. ಮೊದಲನೆಯದು ಭ್ರಷ್ಟಾಚಾರ, ಎರಡನೆಯದು ಅಷ್ಟೇ ಮಹತ್ವದ ವಿಷಯವಾದ ಕೋಮುವಾದ.
 
ಈ ಎರಡನೆ ವಿಷಯದ ಬಗ್ಗೆ ಪ್ರಾರಂಭದಿಂದಲೂ ಅಣ್ಣಾ ತಂಡದ್ದು ಎಡೆಬಿಡಂಗಿ ನಿಲುವು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಬಗ್ಗೆ ಪರ ಇಲ್ಲವೆ ವಿರುದ್ಧದ ಸ್ಪಷ್ಟ ನಿಲುವನ್ನು ಕೈಗೊಳ್ಳಲು ಈ ವರೆಗೂ ಸಾಧ್ಯವಾಗಲಿಲ್ಲ ಎನ್ನುವುದು ಇದಕ್ಕೆ ನಿದರ್ಶನ. ಇಷ್ಟು ಮಾತ್ರವಲ್ಲ, ಕಾಶ್ಮೆರದ ಉಗ್ರಗಾಮಿಗಳ ಬಗೆಗಿನ ಪ್ರಶಾಂತ್ ಭೂಷಣ್ ನಿಲುವನ್ನು ಅಣ್ಣಾಹಜಾರೆ ಅವರೇ ಒಪ್ಪಿಕೊಳ್ಳುವುದಿಲ್ಲ. 

ಯೋಗಗುರು ರಾಮದೇವ್ ಪ್ರತಿಪಾದಿಸುತ್ತಿರುವ ಆರ್ಥಿಕ ನೀತಿಯನ್ನು ಅರವಿಂದ್ ಕೇಜ್ರಿವಾಲ್ ಒಪ್ಪಲಾರರು, ಕಿರಣ್ ಬೇಡಿ ಹೇಳುತ್ತಿರುವ ಯಾವ ವಿಚಾರವನ್ನೂ ತಂಡದಲ್ಲಿ ಯಾರೂ ಒಪ್ಪುವುದಿಲ್ಲ. ಇರುವ ನಾಲ್ಕುಮಂದಿಯಲ್ಲಿಯೇ ಈ ರೀತಿಯ ಭಿನ್ನಾಭಿಪ್ರಾಯಗಳಿರುವಾಗ ಪಕ್ಷಕ್ಕೆ ಎಲ್ಲಿಂದ ಸೈದ್ಧಾಂತಿಕ ಸ್ಪಷ್ಟತೆ ಬರಲು ಸಾಧ್ಯ?
ಐದನೆಯ ಪರೀಕ್ಷೆ ಎದುರಾಗಲಿರುವುದು ಅಣ್ಣಾತಂಡದ ಕಾರ್ಯಶೈಲಿಯ ವಿಷಯದಲ್ಲಿ. 

ಈಗಿನ ನಮ್ಮ ರಾಜಕೀಯ ಪಕ್ಷಗಳನ್ನು ಬಾಧಿಸುತ್ತಾ ಬಂದಿರುವುದು ಕೇವಲ ಭ್ರಷ್ಟಾಚಾರ ಅಲ್ಲ. ವ್ಯಕ್ತಿಪೂಜೆ, ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಹೈಕಮಾಂಡ್ ಸಂಸ್ಕೃತಿ, ಸರ್ವಾಧಿಕಾರಿ ಧೋರಣೆ, ಗುಪ್ತಕಾರ್ಯಸೂಚಿ ಇತ್ಯಾದಿ ರೋಗಗಳೂ ರಾಜಕೀಯ ಪಕ್ಷಗಳ ಮೇಲಿನ ಜನರ ನಂಬಿಕೆ ಕಡಿಮೆಯಾಗಲು ಕಾರಣ. 

ಕಳೆದ ಒಂದುವರ್ಷದ ಅವಧಿಯ ಅಣ್ಣಾತಂಡದ ಕಾರ್ಯಶೈಲಿಯನ್ನು ನೋಡಿದರೆ ಈ ಎಲ್ಲ ರೋಗಗಳ ಸೋಂಕು ಅದಕ್ಕೂ ತಗಲಿದ ಹಾಗಿದೆ. `ಅಣ್ಣಾ ಎಂದರೆ ಇಂಡಿಯಾ`, `ಐ ಯಾಮ್ ಅಣ್ಣಾ`, `ಅಣ್ಣಾ ಸಂಸತ್‌ಗಿಂತ ದೊಡ್ಡವರು` ಇತ್ಯಾದಿ ಘೋಷಣೆ ಅಣ್ಣಾ ಬೆಂಬಲಿಗರ ಮನಸ್ಸಿನ ಆಳದಲ್ಲಿರುವ ವ್ಯಕ್ತಿಪೂಜೆಯ ದೌರ್ಬಲ್ಯವನ್ನು ತೋರಿಸುತ್ತದೆ. 

ಅಣ್ಣಾತಂಡದ ಬೆರಳೆಣಿಕೆಯ ಸದಸ್ಯರೇ ಕೂಡಿ ಚಳವಳಿಯ ರೂಪುರೇಖೆ ಬಗ್ಗೆ ತೀರ್ಮಾನ ಕೈಗೊಂಡು ಇತರರ ಮೇಲೆ ಹೇರುತ್ತಿರುವುದನ್ನು ವಿರೋಧಿಸಿ ಪ್ರಾರಂಭದಲ್ಲಿ ಜತೆಗಿದ್ದ ಹಲವು ಸದಸ್ಯರು ಬಿಟ್ಟುಹೋಗಿದ್ದರು. 

ಎಷ್ಟೋ ಬಾರಿ ದೆಹಲಿಯಲ್ಲಿರುವ ಅಣ್ಣಾತಂಡದ ನಾಲ್ಕೈದು ಸದಸ್ಯರು ಕೂಡಿಕೈಗೊಳ್ಳುವ ತೀರ್ಮಾನಕ್ಕೆ ಬೆಂಗಳೂರಿನಲ್ಲಿರುವ ನಿವೃತ್ತನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆಯವರು ವಿರೋಧ ವ್ಯಕ್ತಪಡಿಸಿದ್ದುಂಟು. ಹಲವು ಬಾರಿ ಅಣ್ಣಾಹಜಾರೆಯವರೂ ಅಸಮಾಧಾನ ವ್ಯಕ್ತಪಡಿಸಿದ್ದರು. 

ಅಣ್ಣಾಹಜಾರೆಯವರ ಸರ್ವಾಧಿಕಾರಿ ಧೋರಣೆಯ ಕಾರ್ಯಶೈಲಿ ಈಗ ಲೋಕಪ್ರಸಿದ್ಧ, ಅವರ ಕರ್ಮಭೂಮಿಯಾಗಿರುವ ರಾಳೆಗಣಸಿದ್ದಿಗೆ ಹೋದರೆ ಇದರ ಪ್ರತ್ಯಕ್ಷದರ್ಶನ ಮಾಡಿಕೊಂಡು ಬರಬಹುದು. `ಮರಕ್ಕೆ ಕಟ್ಟಿ ಹೊಡೆದು ಬುದ್ದಿ ಕಲಿಸುವ` ಅಣ್ಣಾ ಮಾರ್ಗ, ಮನಪರಿವರ್ತನೆಯ ಮೂಲಕ ಸುಧಾರಣೆಯನ್ನು ತರುವ ಗಾಂಧಿಮಾರ್ಗಕ್ಕಿಂತ ಭಿನ್ನವಾದುದು. 

ಸಾಮಾನ್ಯವಾಗಿ ರಾಜಕೀಯ ನಾಯಕನ ವೈಯಕ್ತಿಕ ಗುಣಾವಗುಣಗಳು ಪಕ್ಷದ ನೀತಿ-ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷ ಕಟ್ಟುವ ತೀರ್ಮಾನ ಪ್ರಕಟಿಸಿದ ತಕ್ಷಣ ಎದುರಾಗಿರುವ ದೊಡ್ಡ ಆರೋಪ ಗುಪ್ತಕಾರ್ಯಸೂಚಿಯದ್ದು. ಒಂದು ಸಾಮಾಜಿಕ ಚಳವಳಿಯಾಗಿ ಬೆಳೆಯುತ್ತಾ ಬಂದ ಅಣ್ಣಾ ಚಳವಳಿ ರಾಜಕೀಯ ಪಕ್ಷದ ರೂಪಧಾರಣೆ ಮಾಡಿರುವುದು ಕೇವಲ ಆಕಸ್ಮಿಕವೇ, ಇದಕ್ಕೆ ಬೇರೆ ಏನಾದರೂ ಒತ್ತಡಗಳಿತ್ತೇ? ಇಲ್ಲವೆ ಇವೆಲ್ಲವೂ ಪೂರ್ವನಿಯೋಜಿತ ಕಾರ್ಯತಂತ್ರವೇ? ಎನ್ನುವ ಪ್ರಶ್ನೆಗಳು ಎದ್ದಿವೆ. 

ಇಂತಹದ್ದೊಂದು ಗುಪ್ತಕಾರ್ಯಸೂಚಿಯನ್ನು ಅವರು ಮೊದಲೇ ಹೊಂದಿದ್ದರು ಎಂಬ ಆರೋಪಗಳು ಕೂಡಾ ಕೇಳಿಬರುತ್ತಿವೆ. ಇದು ಸುಳ್ಳೇ ಇರಬಹುದು, ಆದರೆ ಚುನಾವಣಾ ಕಣದಲ್ಲಿ ನಿಂತು ಬೇರೆ ಪಕ್ಷಗಳ ವಿರುದ್ಧ, ಉದಾಹರಣೆಗೆ ಬಿಜೆಪಿ ವಿರುದ್ಧ `ಗುಪ್ತಕಾರ್ಯಸೂಚಿ`ಯ ಆರೋಪ ಮಾಡಿದಾಗ ಪ್ರತಿಯಾಗಿ ಅವರೂ ಈ ಆರೋಪ ಮಾಡಬಹುದಲ್ಲವೇ?

ಕೊನೆಯದಾಗಿ ಮಾಧ್ಯಮಗಳು ಒಡ್ಡುವ ಪರೀಕ್ಷೆಯನ್ನೂ ಅಣ್ಣಾತಂಡ ಎದುರಿಸಬೇಕಾಗಿದೆ. ಮಾಧ್ಯಮಗಳೇ ಅಣ್ಣಾಚಳವಳಿಯನ್ನು ಈಗಿನ ಮಟ್ಟಕ್ಕೆ ಒಯ್ದು ನಿಲ್ಲಿಸಿದ್ದು ಎಂಬ ಆರೋಪ ಇದೆ. ಮಾಧ್ಯಮದ ಅತಿಅವಲಂಬನೆ ಹೇಗೆ ತಿರುಗುಬಾಣ ಆಗಬಹುದು ಎನ್ನುವುದಕ್ಕೂ ಈ ಚಳವಳಿ ಒಳ್ಳೆಯ ಉದಾಹರಣೆ. 


ಅಣ್ಣಾಹಜಾರೆ ಅವರ ಎರಡು ಉಪವಾಸಗಳು ಮತ್ತು ಅದಕ್ಕೆ ಪೂರ್ವಭಾವಿಯಾಗಿ ನಡೆದ ಚಟುವಟಿಕೆಗಳನ್ನು ಮಾಧ್ಯಮಗಳು ಮುಖ್ಯವಾಗಿ ಟಿವಿ ಚಾನೆಲ್‌ಗಳು ದಿನದ ಇಪ್ಪತ್ತನಾಲ್ಕು ಗಂಟೆ ಕಾಲ ಪ್ರಸಾರ ಮಾಡಿ ಜನಪ್ರಿಯಗೊಳಿಸಿದ್ದು ನಿಜ. ಆದರೆ ಆ `ಮಧುಚಂದ್ರ`ದ ದಿನಗಳು ಈಗ ಮುಗಿದುಹೋಗಿವೆ. 

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ನಂತರ ಮಾಧ್ಯಮ ರಂಗವನ್ನು ಕೂಡಾ ಅಣ್ಣಾತಂಡ ತನ್ನ ಶತ್ರುಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಬಿಟ್ಟಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಷ್ಟೇ ಪೈಪೋಟಿಯಿಂದ ಮಾಧ್ಯಮಗಳು ನೂರು ಕಣ್ಣುಗಳನ್ನು ಬಿಟ್ಟುಕೊಂಡು ನಿಂತಿವೆ. ಇದನ್ನು ಎದುರಿಸಲು ಅಣ್ಣಾತಂಡ ಮೈಯೆಲ್ಲ ಕಣ್ಣಾಗಿ ಇರಬೇಕಾಗುತ್ತದೆ.

Monday, July 30, 2012

`ಸಂದೇಶ' ಮರೆತು `ಸಂದೇಶವಾಹಕ'ರ ಬೆನ್ನತ್ತಿರುವ ಪೊಲೀಸರು July 30, 2012

`ನಗರದಲ್ಲಿ ನಡೆಯುವ ಅಪರಾಧಗಳ ಮಾಹಿತಿ ನಮಗೆ ಗೊತ್ತಾಗದೆ ಪತ್ರಕರ್ತರಿಗೆ ಹೇಗೆ ಗೊತ್ತಾಗುತ್ತದೆ?` ಎಂದು ಯಾರಾದರೂ ಪೊಲೀಸರು ಕೇಳಿದರೆ ಅವರು ತಮಗೆ ಗೊತ್ತಿಲ್ಲದೆಯೇ ತಾವು ಅದಕ್ಷರೆಂದು ಒಪ್ಪಿಕೊಂಡ ಹಾಗೆ. ಈಗ ದಕ್ಷಿಣ ಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಂತ್ ಕುಮಾರ್‌ಸಿಂಗ್ ಈ ಪ್ರಶ್ನೆ ಕೇಳಿದ್ದಾರೆ. ಅಷ್ಟು ಮಾತ್ರವಲ್ಲ ಕಳೆದ ಶನಿವಾರ ಪಡೀಲ್‌ನ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಹುಡುಗಿಯರೂ ಸೇರಿದಂತೆ ಹನ್ನೆರಡು ಮಂದಿ ನಿರಪರಾಧಿಗಳ ಮೇಲೆ ಹಲ್ಲೆ ನಡೆಸಿದ ಪಾಶವೀ ಕೃತ್ಯವನ್ನು ಚಿತ್ರೀಕರಿಸಿಕೊಂಡ ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂದೇಶವನ್ನು ಪಕ್ಕಕ್ಕಿಟ್ಟು ಸಂದೇಶವಾಹಕರ ತಲೆಗೆ ಬಂದೂಕು ಇಡುವುದು ಪೊಲೀಸರ ಹಳೆಯ ಚಾಳಿ. ಅರಣ್ಯದಲ್ಲಿಯೇ ಹೋಗಿ ಟೆಂಟ್‌ಹಾಕಿದ್ದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾವಿರಾರು ಪೊಲೀಸರ ಕಣ್ಣಿಗೆ ಬೀಳದ ಪಾತಕಿ ವೀರಪ್ಪನ್‌ನನ್ನು ತಮಿಳುನಾಡಿನ `ನಕ್ಕೀರನ್`ಪತ್ರಿಕೆಯ ಸಂಪಾದಕ ಸಲೀಸಾಗಿ ಅತ್ತೆಮನೆಯಂತೆ ಹೋಗಿ ಸಂದರ್ಶನ ಮಾಡಿಬರುತ್ತಿದ್ದರು. ಆಗಲೂ ಪೊಲೀಸರು ಈ ಪ್ರಶ್ನೆ ಕೇಳಿದ್ದರು. 

ಶೋಧಕಾರ್ಯಕ್ಕೆ ಅನುಕೂಲವಾಗುವ ಅತ್ಯಾಧುನಿಕ ಸಲಕರಣೆಗಳ ಜತೆ ಈ ಕೆಲಸಕ್ಕಾಗಿಯೇ ವಿಶೇಷ ತರಬೇತಿ ಪಡೆದ ಪೊಲೀಸರು ಪತ್ತೆಹಚ್ಚಲಾಗದ ನಕ್ಸಲೀಯ ನಾಯಕರನ್ನು ಆಂಧ್ರಪ್ರದೇಶ, ಒರಿಸ್ಸಾ, ಛತ್ತೀಸ್‌ಘಡ, ಪಶ್ಚಿಮ ಬಂಗಾಳಗಳಲ್ಲಿ ಈಗಲೂ ಪತ್ರಕರ್ತರು ಹೋಗಿ ಮಾತನಾಡಿಸಿಕೊಂಡು ಬರುತ್ತಿದ್ದಾರೆ. ಅಲ್ಲಿಯ ಪೊಲೀಸರು ಕೂಡಾ ಇದೇ ಪ್ರಶ್ನೆ ಕೇಳುತ್ತಿದ್ದಾರೆ. ನಕ್ಸಲೀಯರನ್ನು ಸಂದರ್ಶಿಸಿದ ಪತ್ರಕರ್ತರನ್ನು ಮಾತ್ರವಲ್ಲ ನಕ್ಸಲೀಯರ ಪ್ರಭಾವ ಇರುವ ಪ್ರದೇಶಕ್ಕೆ ಭೇಟಿ ನೀಡಿ ಲೇಖನ ಬರೆದಿದ್ದ ಪ್ರಖ್ಯಾತ ಲೇಖಕಿ ಅರುಂಧತಿ ರಾಯ್ ವಿರುದ್ಧವೂ ಮೊಕದ್ದಮೆ ದಾಖಲಿಸುವ ಪ್ರಯತ್ನ ಮಾಡಿತ್ತು. ಇಂತಹ ಘಟನೆಗಳು ನೂರಾರು ಇವೆ.

ಪತ್ರಕರ್ತರೆಲ್ಲರೂ ಸಂಭಾವಿತರಿರಲಾರರು, ಟಿಆರ್‌ಪಿಗಾಗಿ ಕಿಡಿಗೇಡಿತನ ಮಾಡುತ್ತಿರುವ ಟಿವಿ ಚಾನೆಲ್‌ಗಳು ಅತಿರಂಜನೆ, ರೋಚಕತೆಯ ಬೆನ್ನುಹತ್ತಿ ಪತ್ರಿಕಾವೃತ್ತಿಯ ಮೂಲವ್ಯಾಖ್ಯೆಯನ್ನೇ ಬದಲಿಸಲು ಹೊರಟಿರುವುದೂ ನಿಜ. ಆದರೆ ಪೊಲೀಸರು ತಮ್ಮ ಅದಕ್ಷತೆಯನ್ನು ಮುಚ್ಚಿಕೊಳ್ಳಲು ಪತ್ರಕರ್ತರ `ಅಧಿಕಪ್ರಸಂಗ`ವನ್ನು ಗುರಾಣಿಯಾಗಿ ಬಳಸುತ್ತಿರುವುದು ಅಕ್ಷಮ್ಯ. ಮಂಗಳೂರು ನಗರದ ಉದಾಹರಣೆಯನ್ನೇ ತೆಗೆದುಕೊಂಡರೆ ಅಲ್ಲಿರುವುದು ಹೆಚ್ಚು ಪೊಲೀಸರೋ, ಪತ್ರಕರ್ತರೋ? ಅಲ್ಲಿನ ನಗರ ವ್ಯಾಪ್ತಿಯಲ್ಲಿ ಕನಿಷ್ಠ 25 ಪೊಲೀಸ್‌ಠಾಣೆಗಳಿರಬಹುದು, ಒಂದೊಂದು ಠಾಣೆಯಲ್ಲಿ ಕನಿಷ್ಠ 50 ಸಿಬ್ಬಂದಿ ಇರಬಹುದು. ಅಂದರೆ ಅಂದಾಜು 1250 ಪೊಲೀಸರಿದ್ದಾರೆ. ನಗರದಲ್ಲಿರುವ ಹಿರಿಯ-ಕಿರಿಯ ವರದಿಗಾರರನ್ನು ಒಟ್ಟು ಸೇರಿಸಿದರೂ ಸಂಖ್ಯೆ 50 ದಾಟಲಾರದು. ಈ 50 ಪತ್ರಕರ್ತರಿಗೆ ಅಪರಾಧಿ ಕೃತ್ಯಗಳು ತಕ್ಷಣ ಗೊತ್ತಾಗುವುದಿದ್ದರೆ, ಮೊಬೈಲ್, ವಾಕಿಟಾಕಿ, ಕಾರು-ಜೀಪು ಮತ್ತು ಶಸ್ತ್ರಾಸ್ತ್ರಗಳ ಜತೆಯಲ್ಲಿ ಮಾಹಿತಿ ಸಂಗ್ರಹಕ್ಕಾಗಿಯೇ ಇರುವ ಗುಪ್ತಚರ ವಿಭಾಗವನ್ನೂ ಹೊಂದಿರುವ 1250 ಸಿಬ್ಬಂದಿ ಸಾಮರ್ಥ್ಯದ ಪೊಲೀಸರಿಗೆ ಯಾಕೆ ಗೊತ್ತಾಗುತ್ತಿಲ್ಲ? 

ನಿರ್ದಿಷ್ಟವಾಗಿ ಶನಿವಾರ ಮಂಗಳೂರಿನಲ್ಲಿ ನಡೆದ ಘಟನೆಯ ಉದಾಹರಣೆಯನ್ನೇ ನೋಡುವುದಾದರೆ, ಘಟನೆ ನಡೆದ ಸ್ಥಳಕ್ಕೆ ಹೋಗಿದ್ದ ಟಿವಿ ಚಾನೆಲ್‌ನ ವರದಿಗಾರ ಮೊದಲು ಮಾಡಿದ್ದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಫೋನ್. ಅದರ ನಂತರ ಇನ್ನೊಂದು ಚಾನೆಲ್‌ನ ವರದಿಗಾರ ಕೂಡಾ ಅದೇ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ನ ಮೊಬೈಲ್‌ಗೆ ಪೋನ್ ಮಾಡಿದ್ದರು. ಆ ಅಧಿಕಾರಿ ಎತ್ತಲಿಲ್ಲವಂತೆ. (ಎಸ್‌ಪಿಯವರು ಮೊಬೈಲ್‌ನ ಕಾಲ್ ವಿವರ ತರಿಸಿಕೊಂಡು ತನಿಖೆ ನಡೆಸಲಿ) ಘಟನೆ ನಡೆದ ಸ್ಥಳಕ್ಕೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೆಚ್ಚೆಂದರೆ 2-3ಕಿ.ಮೀ.ದೂರ. ಇಂತಹ ಘಟನೆಗಳು ನಡೆದಾಗ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ಫೋನ್ ಮಾಡಿರುತ್ತಾರೆ. ಹೀಗಿದ್ದರೂ ಪೊಲೀಸರು ಸ್ಥಳಕ್ಕೆ ಹೋಗಲು ಅಷ್ಟೊಂದು ವಿಳಂಬ ಮಾಡಿದ್ದು ಯಾಕೆ? ಇಂತಹ ಘಟನೆಗಳು ನಡೆದಾಗ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂದು ಗೊತ್ತಿದ್ದರೂ ಮೊದಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಯಾಕೆ ಕಳುಹಿಸಿಲ್ಲ? 

ದುಷ್ಕರ್ಮಿಗಳು ಹುಡುಗಿಯ ಎದೆಯ ಮೇಲೆ ಕೈಹಾಕುತ್ತಿದ್ದಾಗ ಅಲ್ಲಿಯೇ ಎದುರಿಗಿದ್ದ ಪೊಲೀಸರು ಕಣ್ಣುಕಣ್ಣುಬಿಟ್ಟು ನಿಂತಿದ್ದರಲ್ಲಾ, ಇದಕ್ಕೇನು ಅನ್ನುತ್ತೀರಿ ಪೊಲೀಸ್ ವರಿಷ್ಠಾಧಿಕಾರಿಯವರೇ? ಈ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿದ ಯಾರಿಗೂ ಬರಿಗೈಯಲ್ಲಿಯಾದರೂ ಹೋಗಿ ಆ ದುಷ್ಕರ್ಮಿಗಳ ಮುಸುಡಿಗೆ ಗುದ್ದುವ ಎಂದಾಗುತ್ತದೆ, ಪೊಲೀಸರು ಕೈಯಲ್ಲಿದ್ದ ಲಾಠಿಯನ್ನೂ ಎತ್ತದೆ ನಿಂತಲ್ಲೇ ಕಲ್ಲಾಗಿದ್ದರಲ್ಲಾ?  ದಾಳಿಯಲ್ಲಿ ಪಾಲ್ಗೊಂಡವರೆಲ್ಲರ ಚಿತ್ರಗಳನ್ನು ಟಿವಿ ಚಾನೆಲ್‌ಗಳು ಪ್ರಸಾರಮಾಡಿವೆ. ಆದರೆ ಇಲ್ಲಿಯ ವರೆಗೆ ಬಂಧಿಸಿರುವುದು ಕೇವಲ ಎಂಟು ಮಂದಿಯನ್ನು. ಉಳಿದವರನ್ನು ಬಂಧಿಸಲು ಯಾಕೆ ಸಾಧ್ಯವಾಗಿಲ್ಲ?

ಪೊಲೀಸರು ಪತ್ರಕರ್ತರ ಮೇಲೆ ಹೊರಿಸುತ್ತಿರುವ ಆರೋಪ ಆತ್ಮರಕ್ಷಣೆಯ ಹತಾಶ ಪ್ರಯತ್ನ ಅಷ್ಟೆ. ವಾಸ್ತವ ಸಂಗತಿ ಏನೆಂದರೆ ದಕ್ಷಿಣಕನ್ನಡದಲ್ಲಿ ಪೊಲೀಸ್ ಇಲಾಖೆಯೇ ಇಲ್ಲ. ಯಾಕೆಂದರೆ ಅಲ್ಲಿ ಆಡಳಿತಾರೂಢ ಪಕ್ಷ ಮತ್ತು ಸಂಘ ಪರಿವಾರದ ನಾಯಕರ ಮಧ್ಯಪ್ರವೇಶದಿಂದಾಗಿ ದಕ್ಷತೆ, ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡುವ ಪೊಲೀಸರಿಗೆ ಜಾಗವೇ ಇಲ್ಲದಂತಾಗಿದೆ. ಈಗ ಸಿಬಿಐಗೆ ವರ್ಗಾವಣೆಯಾಗಿರುವ ಸುಬ್ರಹ್ಮಣ್ಯೇಶ್ವರ ರಾವ್ ಎಂಬುವವರು ಸುಮಾರು ಎರಡೂವರೆ ವರ್ಷಗಳ ಕಾಲ ದಕ್ಷಿಣಕನ್ನಡದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರ ಕಾಲದಲ್ಲಿ ಹಿಂದೂ ಸಂಸ್ಕೃತಿಯ `ಮಾನ ಉಳಿಸುವ` ಹಾವಳಿ ಕಡಿಮೆ ಇತ್ತು. ಆದರೆ ಅವರಿಗೆ ಬಹಳ ದಿನ ಅಲ್ಲಿ ಉಳಿಯಲು ಆಗಲಿಲ್ಲ. ಸಂಘ ಪರಿವಾರದ ಸದಸ್ಯರ ವಿರುದ್ಧ ಕ್ರಮ ಕೈಗೊಂಡ ಸುಳ್ಯ ಪೊಲೀಸ್ ಠಾಣೆಯ ಅಧಿಕಾರಿಯ ಬೆಂಬಲಕ್ಕೆ ನಿಂತ ಕಾರಣಕ್ಕಾಗಿ ಆಡಳಿತಾರೂಢ ಪಕ್ಷಕ್ಕೆ ಸೇರಿದ ಸ್ಥಳೀಯ ರಾಜಕಾರಣಿಗಳ ಕಣ್ಣುಕೆಂಪಾಯಿತು. ಕೊನೆಗೆ ಅವರ ವರ್ಗಾವಣೆಯಾಯಿತು. ಈಗ ಹಿಂದೂ ಹುಡುಗಿಯ ಜತೆ ಮಾತನಾಡುತ್ತಿರುವ ಮುಸ್ಲಿಮ್ ಹುಡುಗರನ್ನು ಬೇಟೆಯಾಡುವ ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಿದೆ. `ಈ ರೀತಿ ಪಾರ್ಟಿಗಳು ನಡೆಯುತ್ತಿರುವ ಸ್ಥಳಕ್ಕೆ ನುಗ್ಗಿ ದಾಂಧಲೆಗಳು ವಾರಕ್ಕೆ ಒಂದೆರಡಾದರೂ ಅಲ್ಲಿ ನಡೆಯುತ್ತಿವೆ. ಆದರೆ ಪೊಲೀಸರು ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳದಿರುವ ಕಾರಣ ಅವುಗಳನ್ನೂ ವರದಿ ಮಾಡಲೂ ಆಗುತ್ತಿಲ್ಲ` ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು.

ಸಾರ್ವಜನಿಕರು ತಮಗೆ ತಿಳಿದಿರುವ ಮಾಹಿತಿಯನ್ನು ಪೊಲೀಸರಿಗೆ ತಿಳಿಸದೆ ಪತ್ರಕರ್ತರಿಗೆ ಪೋನ್ ಮಾಡಿ ಯಾಕೆ ತಿಳಿಸುತ್ತಾರೆ ಎನ್ನುವುದನ್ನು ಕಂಡು ಹಿಡಿಯಲು ವಿಶೇಷ ತನಿಖೆಯ ಅಗತ್ಯ ಇಲ್ಲ. ಯಾಕೆಂದರೆ ದಕ್ಷಿಣ ಕನ್ನಡದ ಸಾಮಾನ್ಯ ಜನ ಪೊಲೀಸರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿದ ಬಜರಂಗದಳದ ಸದಸ್ಯರು ಅಲ್ಲಿದ್ದ ಹುಡುಗಿಯರ ಕೂದಲು ಹಿಡಿದು ಎಳೆದಾಡಿದರು, ಹುಡುಗರ ಮೇಲೆ ಹಲ್ಲೆ ನಡೆಸಿದರು. ಆ ದುಷ್ಕೃತ್ಯದಲ್ಲಿ ತೊಡಗಿದ್ದವರಿಗೇನಾದರೂ ಶಿಕ್ಷೆಯಾಯಿತೇ? ಆ ಆರೋಪಿಗಳಲ್ಲಿ ಎಷ್ಟು ಮಂದಿ ಈಗ ಜೈಲಲ್ಲಿದ್ದಾರೆ? ಯಾವುದೋ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದ ಹುಡುಗ-ಹುಡುಗಿಯನ್ನು ಪೊಲೀಸ್‌ಠಾಣೆಗೆ ಎಳೆದೊಯ್ದಾಗ, ಕಾನೂನು ಕೈಗೆತ್ತಿಕೊಂಡ ಪುಂಡರ ವಿರುದ್ಧ ದೂರು ದಾಖಲು ಮಾಡದೆ, ಆ ಹುಡುಗ-ಹುಡುಗಿಯ ಮೇಲೆ ಸುಳ್ಳು ಆರೋಪ ಹೊರಿಸಿದರೆ ಸಾರ್ವಜನಿಕರಿಗಾದರೂ ಪೊಲೀಸರ ಮೇಲೆ ಎಲ್ಲಿಂದ ನಂಬಿಕೆ ಬರಬೇಕು? 
ಮಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಮ್ ಯುವಕರಲ್ಲಿ ತಮ್ಮದೇ ಆಗಿರುವ  `ಗುಪ್ತಚರ ವ್ಯವಸ್ಥೆ` ಇದೆ. ಹಿಂದೂ ಹುಡುಗಿಯ ಜತೆಗಿರುವ ಮುಸ್ಲಿಮ್ ಹುಡುಗರನ್ನು ಹುಡುಕಿಕೊಂಡು ಹಿಂದೂ ಯುವಕರು ಅಡ್ಡಾಡುತ್ತಿದ್ದರೆ, ಅವರನ್ನು ಹಿಂಬಾಲಿಸಿಕೊಂಡೇ  ಇರುವ ಮುಸ್ಲಿಮ್ ಯುವಕರ ಗುಂಪು ಕೂಡಾ ಇದೆ. ಇದೇ ರೀತಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಹಿಂಬಾಲಿಸುತ್ತಿದ್ದ ಮುಸ್ಲಿಮ್ ಯುವಕರಿಗೆ, ಅವರು ನಡೆಸಲು ಯೋಜಿಸಿರುವ `ಆಪರೇಷನ್ ಹೋಮ್-ಸ್ಟೇ`ಯ ಸುಳಿವು ಸಿಕ್ಕಿದೆ. ತಕ್ಷಣ ಅವರು ತಮಗೆ ಪರಿಚಯ ಇದ್ದ ಕೆಲವು ಚಾನೆಲ್ ವರದಿಗಾರರಿಗೆ ಸುದ್ದಿ ರವಾನಿಸಿದ್ದಾರೆ. ಪೊಲೀಸರಿಗೆ ತಿಳಿಸುವುದರಿಂದ ಏನೂ ಆಗಲಾರದು ಎಂದು ತೀರ್ಮಾನಕ್ಕೆ ಬರಲು ಅವರ ಅನುಭವ ಕಾರಣ ಇರಬಹುದು. ಇದು ದಕ್ಷಿಣ ಕನ್ನಡದ ಪೊಲೀಸ್ ವ್ಯವಸ್ಥೆ ತಲುಪಿರುವ ಸ್ಥಿತಿ. ಅಪರಾಧ ಪತ್ತೆಯಲ್ಲಿ ನೆರವಾಗುವುದು ಲಾಠಿ, ಬಂದೂಕು, ಗುಂಡುಗಳಲ್ಲ. ಅದು ಸಾರ್ವಜನಿಕವಾಗಿ ಪೊಲೀಸರು ಗಳಿಸುವ ವಿಶ್ವಾಸ. ಅದನ್ನು ಕಳೆದುಕೊಂಡರೆ ಹೀಗಾಗುತ್ತದೆ. 

ಪತ್ರಕರ್ತರು ಮತ್ತು ಪೊಲೀಸರು ಹಲವಾರು ವಿಷಯಗಳಲ್ಲಿ ಸಮಾನ ದುಃಖಿಗಳು. ಅದೇ ರೀತಿ ಕರ್ತವ್ಯನಿರ್ವಹಣೆಯ ಹಾದಿಯಲ್ಲಿ ಸಹಪ್ರಯಾಣಿಕರು. ಎಷ್ಟೋ ಅಪರಾಧಗಳ ಪತ್ತೆಕಾರ್ಯದಲ್ಲಿ ಪತ್ರಕರ್ತರು ಪೊಲೀಸರಿಗೆ ನೆರವಾಗಿದ್ದುಂಟು, ಅದೇ ರೀತಿ ಪತ್ರಕರ್ತರು ಯಾವುದಾದರೂ ಅಪಾಯದ ಸುಳಿಗೆ ಸಿಲುಕಬಹುದೆಂಬ ಸುಳಿವು ಸಿಕ್ಕಾಗ ಪೊಲೀಸರು ಎಚ್ಚರಿಸಿ ಕಾಪಾಡಿದ್ದುಂಟು. ಅಂತಹ ಸಂಬಂಧ ಇದ್ದ ಕಾಲದಲ್ಲಿ ಪತ್ರಕರ್ತರಿಗೆ ಬೇಕಾಗಿದ್ದ ಅಪರಾಧಗಳ ಸುದ್ದಿಯ ಮೂಲ ಪೊಲೀಸರು ಮಾತ್ರ ಆಗಿದ್ದರು. ಎಲ್ಲ ಸಂಬಂಧಗಳಂತೆ ಪೊಲೀಸರು ಮತ್ತು ಪತ್ರಕರ್ತರ ಸಂಬಂಧ ಕೂಡಾ ಬದಲಾಗಿದೆ. ಊರಲ್ಲಿ ನಡೆಯುವ ಅಪರಾಧಗಳ ಬಗ್ಗೆ ಕ್ರೈಮ್ ಬೀಟ್‌ನ ವರದಿಗಾರರು ಸಂಜೆ ಹೊತ್ತು ಕಂಟ್ರೋಲ್ ರೂಮ್‌ಗೆ ಫೋನ್ ಮಾಡಿ ಸುದ್ದಿ ಸಂಗ್ರಹಿಸುವ ಕಾಲ ಎಂದೋ ಸರಿದುಹೋಗಿದೆ. ಈಗ ಪೊಲೀಸರೇ ಟಿ.ವಿಯನ್ನು ನೋಡಿಕೊಂಡು ಅಪರಾಧಗಳ ಸುದ್ದಿ ಸಂಗ್ರಹಿಸುತ್ತಾರೆ. 

ಪೊಲೀಸ್ ವ್ಯವಸ್ಥೆಗೆ ಹಿಡಿದಿರುವ `ನಿಷ್ಕ್ರಿಯತೆಯ ರೋಗ`ದ ಮೂಲ ಭ್ರಷ್ಟ ಮತ್ತು ಸ್ವಾರ್ಥ ರಾಜಕಾರಣದಲ್ಲಿದೆ.  ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಪೊಲೀಸರು ಕಾನೂನಿಗೆ ನಿಷ್ಠರಾಗಿ ಕರ್ತವ್ಯ ನಿರ್ವಹಿಸುವ ಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಮುಖ್ಯ ಕಾರಣ  ದೇಶದಲ್ಲಿ ಈಗ ಜಾರಿಯಲ್ಲಿರುವ ಬ್ರಿಟಿಷರು 1861ರಲ್ಲಿ ರಚಿಸಿದ್ದ ಪೊಲೀಸ್ ಕಾಯ್ದೆ. ಆ ಕಾಲದಲ್ಲಿ `ಸಿಪಾಯಿ ದಂಗೆ`ಯಿಂದ ಭೀತಿಗೀಡಾಗಿದ್ದ ಬ್ರಿಟಿಷರು ತಮಗೆ `ರಾಜಕೀಯವಾಗಿ ಉಪಯೋಗವಾಗಬಲ್ಲ` ರೀತಿಯಲ್ಲಿ ಪೊಲೀಸ್ ವ್ಯವಸ್ಥೆ ಕಟ್ಟಲು ರೂಪಿಸಿದ ಕಾಯ್ದೆ ಈಗಿನ ರಾಜಕಾರಣಿಗಳಿಗೆ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಲು ಹೇಳಿಮಾಡಿಸಿದಂತಿದೆ. ಇದರ ಸುಧಾರಣೆಗಾಗಿ ಧರ್ಮವೀರ, ಜ್ಯುಲಿಯೊ ರೆಬಿರೋ ಹಾಗೂ ಪದ್ಮನಾಭಯ್ಯ ಅವರ ನೇತೃತ್ವದ ಆಯೋಗಗಳು ಪ್ರತ್ಯೇಕವಾಗಿ ಮೂರು ವರದಿಗಳನ್ನು ನೀಡಿವೆ. ಎನ್‌ಡಿಎ ಸರ್ಕಾರ ಹಿರಿಯ ವಕೀಲ ಸೋಲಿ ಸೊರಾಬ್ಜಿ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿತ್ತು. ಕ್ರಿಮಿನಲ್ ನ್ಯಾಯವ್ಯವಸ್ಥೆಯ ಸುಧಾರಣೆಗಾಗಿ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರೂ ಒಂದು ವರದಿ ನೀಡಿದ್ದರು. ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವುದು ಈ ಎಲ್ಲ ಸಮಿತಿ-ಆಯೋಗಗಳ ವರದಿಗಳ ಮೂಲ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ ಯಾವ ರಾಜ್ಯ ಸರ್ಕಾರ ಕೂಡಾ ಇದನ್ನು ಜಾರಿಗೆ ತರಲು ಆಸಕ್ತಿ ತೋರುತ್ತಿಲ್ಲ.

ಈ ವರದಿಗಳನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್ ಪೊಲೀಸ್ ಸುಧಾರಣೆಗಾಗಿ ಕೆಲವು ಸಲಹೆಗಳನ್ನು ನೀಡಿ 2006ರ ಅಂತ್ಯದೊಳಗೆ ಅವುಗಳನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಇದನ್ನು ನೇರವಾಗಿ ವಿರೋಧಿಸಲಾಗದ ರಾಜಕೀಯ ಪಕ್ಷಗಳು `ಇದು ಒಕ್ಕೂಟ ವ್ಯವಸ್ಥೆಗೆ ಕೊಡಲಿಯೇಟು`, `ನ್ಯಾಯಾಂಗದ ಅತಿಕ್ರಮಣಕಾರಿ ನಿಲುವು` ಇತ್ಯಾದಿ ಜನಪ್ರಿಯ ಆರೋಪಗಳ ಮೂಲಕ ವಿರೋಧಿಸುತ್ತಾ ಕಾಲ ತಳ್ಳುತ್ತಿವೆ. ಪೊಲೀಸರಿಗೆ ತಮ್ಮ ಅಸಹಾಯಕತೆಯ ಕಾರಣಗಳು ಗೊತ್ತಿದ್ದರೂ ಅದನ್ನು ಹೇಳಲಾಗದೆ ತಮ್ಮ ನಿಷ್ಕ್ರಿಯತೆಯನ್ನು ಮುಚ್ಚಿಕೊಳ್ಳಲು ಹೊಸ ಹೊಸ ಬಲಿಪಶುಗಳನ್ನು ಹುಡುಕುತ್ತಿರುತ್ತಾರೆ. ಮಂಗಳೂರಿನ ಪೊಲೀಸರ ಕೈಗೆ ಪತ್ರಕರ್ತರು ಸಿಕ್ಕಿದ್ದಾರೆ, ಆದರೆ ಇದು ಕೈಸುಡುವ ಕೆಂಡ ಎಂದು ಅವರಿಗೂ ಗೊತ್ತು.

Thursday, July 26, 2012

ಹಳೆಯ ಕನಸಿನ ಚುಂಗು ಹಿಡಿದು ಹೊರಟಿರುವ ಪವಾರ್ July 23, 2012

ಬಹುಕಾಲದಿಂದ ದೇಶದ ರಾಜಕೀಯ ಅಖಾಡದಲ್ಲಿರುವ ಶರದ್ ಪವಾರ್, ಮುಲಾಯಂಸಿಂಗ್ ಯಾದವ್, ಎಚ್.ಡಿ.ದೇವೇಗೌಡರಂತಹ  ಹಳೆಯ ಜಟ್ಟಿಗಳು ಸುಮ್ಮನೆ ಕೆಮ್ಮುವುದಿಲ್ಲ, ಆಕಳಿಸುವುದೂ ಇಲ್ಲ. ಮೇಲ್ನೋಟಕ್ಕೆ ಸಹಜವಾಗಿ ಕಾಣುವ ಕೆಮ್ಮು-ಆಕಳಿಕೆಗಳ ಆಳದಲ್ಲಿ ರಾಜಕೀಯ ಹವಾಮಾನದ ಮುನ್ಸೂಚನೆಗಳಿರುತ್ತವೆ.

ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದ ಕಾರಣದಿಂದಾಗಿ ಮನೆಯೊಳಗೆ ಉಳಿದುಕೊಂಡಿದ್ದ ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಇದ್ದಕ್ಕಿದ್ದಂತೆ ಲವಲವಿಕೆಯಿಂದ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿರುವುದಕ್ಕೂ, ಬಿಜೆಪಿಯ ಅತೃಪ್ತ ಶಾಸಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನೆ ಮುಂದೆ ಕ್ಯೂ ನಿಲ್ಲುವುದಕ್ಕೂ ಪರಸ್ಪರ ಸಂಬಂಧ ಮೇಲ್ನೋಟಕ್ಕೆ ಕಾಣಿಸದೆ ಇರಬಹುದು.

ಆದರೆ ಗೌಡರ ರಾಜಕೀಯ ನಡೆಗಳನ್ನು ನೋಡುತ್ತಾ ಬಂದವರಿಗೆ ಅವರ ಆರೋಗ್ಯ ಸುಧಾರಣೆ ಮತ್ತು ರಾಜಕೀಯ ಬೆಳವಣಿಗೆಗಳಿಗೂ ಸಂಬಂಧ ಕಲ್ಪಿಸುವುದು ಕಷ್ಟವಲ್ಲ. ಅದೇ ರೀತಿ ಕೇಂದ್ರ ಸಚಿವ ಶರದ್ ಪವಾರ್.

ಸಂಪುಟದಲ್ಲಿ ಎರಡನೇ ಸ್ಥಾನ ನೀಡದೆ ಇರುವುದರಿಂದ ಅತೃಪ್ತರಾಗಿ ಸರ್ಕಾರದಿಂದಲೇ ಹೊರಬರುವ ಘೋಷಣೆಯನ್ನು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮಾಡಿದೆ.

ಒಂದು ಕಾಲದಲ್ಲಿ ದೇಶದ ಪ್ರಧಾನಿಯಾಗಬೇಕೆಂದು ಹಂಬಲಿಸಿದ್ದ, ಅದಕ್ಕೆ ಬೇಕಾಗಿರುವ ಎಲ್ಲ ತಂತ್ರ-ಕುತಂತ್ರಗಳನ್ನು ಮಾಡಿ ವಿಫಲಗೊಂಡ ಪವಾರ್ ಈಗ ಸಂಪುಟದಲ್ಲಿ ಯಕಶ್ಚಿತ್ ಎರಡನೆ ಸ್ಥಾನಕ್ಕಾಗಿ ಕಾಂಗ್ರೆಸ್ ಜತೆ ಸಂಬಂಧ ಕಡಿದುಕೊಳ್ಳುವ ಮಟ್ಟಕ್ಕೆ ಹೋಗುವ  ಅವರ ನಿರ್ಧಾರವನ್ನು ಮುಖಬೆಲೆಯಲ್ಲಿಯೇ ಒಪ್ಪಿಕೊಳ್ಳುವುದು ಕಷ್ಟ.

`ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡುವುದಿದ್ದರೆ ಆ ಸ್ಥಾನದಲ್ಲಿಯೇ ನನ್ನನ್ನೇ ಕೂರಿಸಿ` ಎನ್ನುವ ಹಾಗಿದೆ ಪವಾರ್ ಬೇಡಿಕೆ. ಮೈತ್ರಿಕೂಟದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಸದಸ್ಯ ಬಲ ಹೊಂದಿರುವ ಪಕ್ಷ ನೇತೃತ್ವ ವಹಿಸುವ ಸಾಮಾನ್ಯ ಸಂಪ್ರದಾಯ ಪವಾರ್ ಅವರಿಗೆ ತಿಳಿಯದೆ ಇರಲು ಸಾಧ್ಯವೇ ಇಲ್ಲ.

ಸಂಪುಟದಲ್ಲಿ ಎರಡನೆ ಸ್ಥಾನವಾಗಲಿ, ಪ್ರಧಾನಿಯವರ ಗೈರುಹಾಜರಿಯಲ್ಲಿ ಉಸ್ತುವಾರಿ ನೋಡಿಕೊಳ್ಳುವವರ ಸ್ಥಾನವಾಗಲಿ ಅಧಿಕೃತ ಸ್ಥಾನಮಾನ ಅಲ್ಲ. ಎರಡನೆ ಸ್ಥಾನದಲ್ಲಿರುವವರೇ ಅಧಿಕಾರದಲ್ಲಿರುವ ಪ್ರಧಾನಿಯ ಉತ್ತರಾಧಿಕಾರಿ ಆಗುವುದಿಲ್ಲ.

ಲೋಕಸಭೆ ಇಲ್ಲವೆ ವಿಧಾನಸಭಾ ಸದಸ್ಯರಾಗದೆ ಇರುವವರು ಕೂಡಾ ಆರು ತಿಂಗಳ ಕಾಲ ಪ್ರಧಾನಿ ಇಲ್ಲವೆ ಮುಖ್ಯಮಂತ್ರಿಯಾಗಲು ಸಾಧ್ಯವಿರುವಷ್ಟು ಉದಾರವಾದಿ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಪ್ರಧಾನಿಯಾಗುವವರು ಯಾರೆನ್ನುವುದೇ ಖಾತರಿ ಇಲ್ಲದೆ ಇರುವ ವಾತಾವರಣದಲ್ಲಿ ಸಂಪುಟದಲ್ಲಿ ಎರಡನೆ ಸ್ಥಾನವನ್ನು ಕಟ್ಟಿಕೊಂಡು ಏನು ಮಾಡುತ್ತೀರಿ?

ಪವಾರ್  ನಿರ್ಧಾರದ  ಬಗ್ಗೆ ಸಂಶಯ ಮೂಡಲು ಇನ್ನೊಂದು ಕಾರಣವೂ ಇದೆ. ಕಾಂಗ್ರೆಸ್ ಪಕ್ಷದ ಇಚ್ಛೆಗೆ ವಿರುದ್ಧವಾಗಿ ರಾಷ್ಟ್ರಪತಿ ಅಭ್ಯರ್ಥಿಯಾಗಲು ಹೊರಟ ಪಿ.ಎ.ಸಂಗ್ಮಾ ತಮ್ಮ ಬಹುಕಾಲದ ಸಂಗಾತಿ ಎನ್ನುವುದನ್ನೇ ಲೆಕ್ಕಿಸದೆ ಪಕ್ಷದಿಂದ ಉಚ್ಚಾಟಿಸಿದವರು ಪವಾರ್.

ಕನಿಷ್ಠ ಅವರನ್ನು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲು ಕಾಂಗ್ರೆಸ್‌ಮೇಲೆ ಒತ್ತಡ ಹೇರಬಹುದಿತ್ತು, ಕಾಂಗ್ರೆಸ್ ಬಳಿ ಕೂಡಾ ಆ ಸ್ಥಾನಕ್ಕೆ ಸರಿಯಾದ ಅಭ್ಯರ್ಥಿಗಳಿರಲಿಲ್ಲ, ಅದಕ್ಕಲ್ಲವೇ ಅನ್ಸಾರಿ ಅವರಿಗೆ ಮತ್ತೊಂದು ಅವಕಾಶ ನೀಡಿದ್ದು? ಪವಾರ್ ಹಾಗೆ ಮಾಡಿದ್ದರೆ ಅದು ಖಂಡಿತ ಸ್ವಾರ್ಥ ಎಂದು ಯಾರಿಗೂ ಅನಿಸುತ್ತಿರಲಿಲ್ಲ.

ಸಂಗ್ಮಾ ಅವರ ಬೆಂಬಲಕ್ಕೆ ಪವಾರ್ ದೃಢವಾಗಿ ನಿಂತಿದ್ದರೆ ರಾಷ್ಟ್ರಪತಿ ಚುನಾವಣೆಯ ಗಣಿತವೇ ಬದಲಾಗಿ ಯುಪಿಎ ಈಗಿನಷ್ಟು ಬಲಿಷ್ಠವಾಗಿ ಹೊರಹೊಮ್ಮುತ್ತಿರಲಿಲ್ಲ. ಅಂತಹ ಸಮಯದಲ್ಲಿ ಯುಪಿಎಗೆ ಸಂಪೂರ್ಣವಾಗಿ ಶರಣಾದ ಪವಾರ್ ಇನ್ನೇನು ಚುನಾವಣೆ ಮುಗಿಯುವ ಹೊತ್ತಿಗೆ ಗುಟುರು ಹಾಕುತ್ತಿರುವುದಕ್ಕೆ ಕೇವಲ ನಂಬರ್ 2 ಸ್ಥಾನವೊಂದೇ ಕಾರಣ ಇರಲಾರದು.

ಅದೇನು ಎಂಬುದನ್ನು ಪವಾರ್ ಅವರು ಬಹಿರಂಗಪಡಿಸಬೇಕು. ಮೈತ್ರಿಕೂಟ ಸರ್ಕಾರ ಎಂದ ಮಾತ್ರಕ್ಕೆ ಆರಿಸಿ ಕಳುಹಿಸಿದ ಮತದಾರರನ್ನು ಕತ್ತಲಲ್ಲಿಟ್ಟು ಎಲ್ಲವನ್ನೂ ಮುಚ್ಚಿದ ಕೋಣೆಯೊಳಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದಿಲ್ಲ.

ರಾಜಕೀಯವಾಗಿ ತನ್ನನ್ನು ಬೆಳೆಸಿದ್ದ ವಸಂತದಾದಾ ಪಾಟೀಲ್ ಎಂಬ ಗುರುವಿಗೆ ತಿರುಮಂತ್ರ ಹೇಳಿ 38ನೇ ವರ್ಷಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ಶರದ್ ಪವಾರ್ ಅವರ ಈಗಿನ ನಿರ್ಧಾರವನ್ನು, ಅವರ ಹಿಂದಿನ ಎಲ್ಲ ರಾಜಕೀಯ ನಿರ್ಧಾರಗಳ ಜತೆಯಲ್ಲಿಟ್ಟು ನೋಡಿದರೆ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. `ಪಕ್ಷಾಂತರ, ಭ್ರಷ್ಟಾಚಾರ, ವಿಶ್ವಾಸದ್ರೋಹ, ಸ್ವಜನ ಪಕ್ಷಪಾತ, ಆತ್ಮವಂಚನೆ, ಕರ್ತವ್ಯಲೋಪ...

ಹೀಗೆ ರಾಜಕಾರಣಿಗಳಿಗೆ ಇರುವ ಎಲ್ಲ ದುರ್ಗುಣಗಳನ್ನು ಹೊಂದಿಯೂ, ಅವುಗಳಿಂದ ಯಾವ ಹಿನ್ನಡೆಯನ್ನೂ ಅನುಭವಿಸದೆ ದಶಕಗಳ ಕಾಲ ರಾಜಕೀಯ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯ ಇದೆ, ಅದಕ್ಕಾಗಿ ಶರದ್‌ಚಂದ್ರ ಗೋವಿಂದರಾವ್ ಪವಾರ್ ಆಗಬೇಕು` ಎಂದು ನಾನು ಹಿಂದೆ ಇದೇ ಅಂಕಣದಲ್ಲಿ (17,ಜನವರಿ 2011) ಬರೆದಿದ್ದೆ.

ಈ ಮಾತುಗಳು ಈಗಲೂ ಅವರಿಗೆ ಅನ್ವಯಿಸುತ್ತವೆ. ಅರ್ಧ ಶತಮಾನದಷ್ಟು ಸುದೀರ್ಘವಾದ ತಮ್ಮ ರಾಜಕೀಯ ಜೀವನದಲ್ಲಿ ಶರದ್ ಪವಾರ್ ಭಾರತದ ಇಂದಿನ ರಾಜಕಾರಣಿ ಸಾಮಾನ್ಯವಾಗಿ ಮಾಡುತ್ತಿರುವ ಯಾವ ಕೆಟ್ಟ ಕೆಲಸವನ್ನು ಮಾಡದೆ ಬಿಟ್ಟಿಲ್ಲ, ಅವರು ಎದುರಿಸದ ಆರೋಪಗಳೇ ಇಲ್ಲ.

ಆದರೆ ಇದ್ಯಾವುದೂ ಅವರನ್ನು ಒಟ್ಟು ಏಳು ವರ್ಷಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದನ್ನು, ಒಟ್ಟು ಹತ್ತು ವರ್ಷಗಳ ಕಾಲ ಕೇಂದ್ರ ಸಚಿವರಾಗುವುದನ್ನು, ಬಿಸಿಸಿಐ,ಐಸಿಸಿ ಅಧ್ಯಕ್ಷರಾಗುವುದನ್ನು ತಡೆಯಲಿಲ್ಲ.

ಇದು ಶರದ್ ಪವಾರ್. ಹೆಚ್ಚು ಕಡಿಮೆ ಅವರಷ್ಟೇ ದೀರ್ಘ ಅವಧಿಯ ರಾಜಕಾರಣ ನಡೆಸಿದ್ದ ಎಸ್.ಬಂಗಾರಪ್ಪ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪನವರು ಅನುಭವಿಸಿದ ಅಧಿಕಾರದ ಅವಧಿ ಎಷ್ಟು?

ಬೆಂಬಲಿಗರು ಅಭಿಮಾನದಿಂದ `ಸಾಹೇಬ್` ಎಂದು ಕರೆಯುವ ಶರದ್ ಪವಾರ್ ಅವರ ರಾಜಕೀಯ ಪ್ರಾಣವಾಯು ಮಹಾರಾಷ್ಟ್ರದಲ್ಲಿದೆ. ಅಲ್ಲಿ ತನ್ನ ನಿಯಂತ್ರಣ ಸಡಿಲಗೊಳ್ಳುತ್ತಿದೆ ಎಂದು ಅನಿಸಿದ ಕೂಡಲೇ ಅವರು ಅಧೀರರಾಗುತ್ತಾರೆ.

ತಮ್ಮದೇ ಬೆಂಬಲಿಗ ಸುಧಾಕರ್ ನಾಯಕ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ದೇಶ ಆಳುವ ಆಸೆಯೊಂದಿಗೆ ದೆಹಲಿಗೆ ಹೋಗಿದ್ದ ಪವಾರ್, ಯಾಕೋ ಶಿಷ್ಯ ನಿಯಂತ್ರಣ ತಪ್ಪಿಹೋಗುತ್ತಿದ್ದಾನೆ ಎಂದು ಅನಿಸಿದ ಕೂಡಲೇ ಮತ್ತೆ ಮಹಾರಾಷ್ಟ್ರಕ್ಕೆ ಓಡಿಹೋಗಿ ಮುಖ್ಯಮಂತ್ರಿಯಾದವರು.

1992ರ ಮುಂಬೈ ಕೋಮುಗಲಭೆ ಅಷ್ಟೊಂದು ಅತಿರೇಕಕ್ಕೆ ಹೋಗಲು ಯಾರು ಕಾರಣಕರ್ತರು ಎನ್ನುವುದನ್ನು ಯಾರಾದರೂ ತನಿಖೆ ನಡೆಸಿದರೆ ಪವಾರ್ ತಮ್ಮ ಜಾತ್ಯತೀತ ನಿಲುವನ್ನು ಸಮರ್ಥಿಸಿಕೊಳ್ಳಲು ಪರದಾಡಬೇಕಾಗಬಹುದು.

ವಿಲಾಸ್‌ರಾವ್ ದೇಶ್‌ಮುಖ್, ಸುಶೀಲ್‌ಕುಮಾರ್ ಶಿಂಧೆ, ಅಶೋಕ್ ಚವಾಣ್ ಹೀಗೆ ಯಾರೂ ಕೂಡಾ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಲ್ಲಿ ನೆಲೆ ಊರುವುದನ್ನು ಈ `ಸಾಹೇಬ್` ಸಹಿಸುವುದಿಲ್ಲ.

ಈಗ ಅವರ ಕಣ್ಣು  ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಪೃಥ್ವಿರಾಜ್ ಚವಾಣ್ ಎಂಬ ಇನ್ನೊಬ್ಬ ಮರಾಠನ ಮೇಲೆ ಬಿದ್ದಿದೆ.  ಹಳಿತಪ್ಪಿಹೋಗಿದ್ದ ಮಹಾರಾಷ್ಟ್ರದ ಆಡಳಿತವನ್ನು ಪ್ರಚಾರದ ಹಪಾಹಪಿ ಇಲ್ಲದೆ ಸದ್ದಿಲ್ಲದ ರೀತಿಯಲ್ಲಿ ಸರಿದಾರಿಗೆ ತರಲು ಪ್ರಯತ್ನಿಸುತ್ತಿರುವ ಚವಾಣ್ ಇತ್ತೀಚೆಗೆ ಎನ್‌ಸಿಪಿ ಸಚಿವರ ಭ್ರಷ್ಟಾಚಾರದ ಬೆನ್ನಿಗೆ ಬಿದ್ದಿದ್ದಾರೆ.

ಶರದ್ ಪವಾರ್ ಮತ್ತು ಅವರ ಬೆಂಬಲಿಗರಿಗೆ ತಮ್ಮ ಕಪಾಟಿನ ತುಂಬ ಇರುವ ಅಸ್ಥಿಪಂಜರಗಳ ಬಗ್ಗೆ ಭಯ ಇದೆ. ಕರ್ನಾಟಕವನ್ನು ಮೀರಿಸುವ ಭೂಹಗರಣಗಳು ಅಲ್ಲಿ ನಡೆದಿವೆ.

ಪವಾರ್ ಮಗಳು ಮತ್ತು ಅಳಿಯ ಅವರನ್ನೊಳಗೊಂಡ ಕೃಷ್ಣಾ ಕಣಿವೆ ಅಭಿವೃದ್ಧಿ ನಿಗಮದ ಮೇಲಿನ ಆರೋಪಗಳ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಬಹಳಷ್ಟು ವರ್ಷಗಳಿಂದ ಮಹಾರಾಷ್ಟ್ರ ರಾಜಕೀಯವನ್ನು ರಿಯಲ್ ಎಸ್ಟೇಟ್ ಕುಳಗಳು ಮತ್ತು ಸಹಕಾರಿ ಕ್ಷೇತ್ರದ ತಿಮಿಂಗಲಗಳ ಲಾಬಿ ನಿಯಂತ್ರಿಸುತ್ತಿವೆ.

ಈ ಲಾಬಿಗಳಿಗೆ ಸಮೀಪವಾಗಿರುವವರು ಶರದ್‌ಪವಾರ್. ಸುಮಾರು ಹನ್ನೆರಡು ಕೋಟಿ ರೂಪಾಯಿ ಠೇವಣಿ ಹೊಂದಿರುವ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಪವಾರ್ ಕುಟುಂಬದ ಮುಷ್ಟಿಯೊಳಗಿದೆ.

ಈ ಬ್ಯಾಂಕ್‌ನ ಸದಸ್ಯತ್ವ ಹೊಂದಿರುವ 169 ಸಕ್ಕರೆ ಕಾರ್ಖಾನೆಗಳಲ್ಲಿ 95 ಪವಾರ್ ನಿಯಂತ್ರಣದಲ್ಲಿದೆಯಂತೆ. ಇತ್ತೀಚೆಗೆ ಅವ್ಯವಹಾರದ ಆರೋಪಕ್ಕೆ ಈಡಾಗಿದ್ದ ಈ ಸಹಕಾರಿ ಬ್ಯಾಂಕ್‌ಗೆ ಮುಖ್ಯಮಂತ್ರಿ ಚವಾಣ್ ಅವರು ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ.

ಮೈತ್ರಿಕೂಟದ ಸರ್ಕಾರದುದ್ದಕ್ಕೂ ಎನ್‌ಸಿಪಿ ಬಳಿಯೇ ಇರುವ ನೀರಾವರಿ ಖಾತೆಯಲ್ಲಿನ ಭ್ರಷ್ಟಾಚಾರವನ್ನು ಇತ್ತೀಚೆಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಬಯಲುಗೊಳಿಸಿದ ನಂತರ ಚವಾಣ್ ಅವರು ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸುವ ಸನ್ನಾಹದಲ್ಲಿದ್ದಾರೆ.

ಇದು ಶರದ್‌ಪವಾರ್ ಸಿಡಿಮಿಡಿಗೊಳ್ಳಲು ಮುಖ್ಯವಾದ ಕಾರಣ.
ಶರದ್ ಪವಾರ್ ಪ್ರಾರಂಭದಿಂದಲೂ ಕೃಷಿ ಕ್ಷೇತ್ರದ ಜತೆ ತಮ್ಮನ್ನು ಗುರುತಿಸಿಕೊಂಡವರು. ಅವರ ಆಸಕ್ತಿ ಮತ್ತು ಸಾಧನೆಗೆ ಸ್ವಕ್ಷೇತ್ರವಾದ ಬಾರಾಮತಿ ಸಾಕ್ಷಿ.

ಕೃಷಿ, ವಾಣಿಜ್ಯ, ಕೈಗಾರಿಕೆ ಮತ್ತು ಶಿಕ್ಷಣದ ಕೇಂದ್ರವಾಗಿ ಪವಾರ್ ಈ ಕ್ಷೇತ್ರವನ್ನು ಬೆಳೆಸಿದ್ದಾರೆ. ಈ ಅನುಭವದ ಹಿನ್ನೆಲೆಯಲ್ಲಿಯೇ ಪ್ರಧಾನಿ ಮನಮೋಹನ್‌ಸಿಂಗ್ ಪವಾರ್ ಅವರಿಗೆ ಕೃಷಿ ಖಾತೆಯನ್ನು ನೀಡಿದ್ದು.

ಗ್ರಾಮೀಣ ಮೂಲಸೌಕರ್ಯ, ನೀರಾವರಿ, ದಾಸ್ತಾನು ಮಳಿಗೆಗಳ ಸೌಲಭ್ಯ, ಗ್ರಾಮೀಣ ರಸ್ತೆ ಸಂಪರ್ಕ ಮತ್ತು ಸ್ಥಳೀಯ ಕೃಷಿ ಮಾರುಕಟ್ಟೆಯ ಕೊರತೆಗಳಿಂದ ಬಳಲುತ್ತಿರುವ ಕೃಷಿ ಕ್ಷೇತ್ರ, ಪವಾರ್ ಈ ಖಾತೆಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಹೇಗಿತ್ತೋ, ಅದಕ್ಕಿಂತಲೂ ಹೆಚ್ಚು ಕೆಟ್ಟು ಹೋಗಿದೆ.

ಇದರ ಜತೆಗೆ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ಬರದ ಕರಿನೆರಳು, ಕುಸಿಯುತ್ತಿರುವ ಕೃಷಿ ಉತ್ಪಾದನೆ, ಏರುತ್ತಲೇ ಇರುವ ಕೃಷಿ ಕ್ಷೇತ್ರದ ಹಣದುಬ್ಬರ ಯುಪಿಎ ಸರ್ಕಾರದ ತಲೆನೋವನ್ನು ಇನ್ನಷ್ಟು ಹೆಚ್ಚಿಸಿದೆ.

ಬರ ಪರಿಸ್ಥಿತಿ ಬಗ್ಗೆ ಅವರು ನೀಡುತ್ತಿರುವ ಉಡಾಫೆತನದ ಹೇಳಿಕೆಗಳು ನೊಂದ ರೈತವರ್ಗ ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ಕರ್ತವ್ಯಲೋಪದ ಈ ಅಪವಾದದಿಂದ ತಪ್ಪಿಸಿಕೊಳ್ಳುವುದು ಕೂಡಾ ಸಂಪುಟದಿಂದ ಹೊರಗೆ ಹೋಗುವ ಪವಾರ್ ಅವರ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ.

ಪವಾರ್ ಅವರ ಮೆದು ಬಂಡಾಯಕ್ಕೆ ಇನ್ನೂ ಒಂದು ಕಾರಣ ಇದ್ದ ಹಾಗಿದೆ. ಪ್ರಧಾನಿ ಪಟ್ಟದ ಮೇಲಿನ ವ್ಯಾಮೋಹ ಅವರನ್ನು ಇನ್ನೂ ಬಿಟ್ಟಿಲ್ಲ. ಆಂತರಿಕ ಬಿಕ್ಕಟ್ಟಿನಿಂದಾಗಿ ದುರ್ಬಲಗೊಳ್ಳುತ್ತಿರುವ ಪ್ರಮುಖ ವಿರೋಧಪಕ್ಷವಾದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಹೊರಹೊಮ್ಮುವ ಸಾಧ್ಯತೆ ಕ್ಷೀಣವಾಗುತ್ತಿರುವುದು ಪವಾರ್ ಅವರಂತಹ ಪ್ರಾದೇಶಿಕ ಪಕ್ಷಗಳ ಪಾಳೆಯಗಾರರ ಎದೆಯೊಳಗೆ ಆಸೆಯ ಕಿಚ್ಚು ಹಚ್ಚಿದೆ.

ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯ ಚುನಾವಣೆಯ ನಂತರ ತೃತೀಯರಂಗಕ್ಕೆ ಸೇರಿದ ಪಕ್ಷಗಳು ಸೇರಿ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬೆಂಬಲದೊಡನೆ ಸರ್ಕಾರ ರಚನೆಯ ಪ್ರಯತ್ನ ಮಾಡಿದರೆ ಅದರ ನಾಯಕನ ಸ್ಥಾನದಲ್ಲಿ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಲು ಪವಾರ್ ಈಗಲೇ ತಾಲೀಮು ನಡೆಸುತ್ತಿದ್ದಾರೆ.

ಶಿವಸೇನೆಯಿಂದ ಹಿಡಿದು ಕಮ್ಯುನಿಸ್ಟರ ವರೆಗೆ ಎಲ್ಲ ಪಕ್ಷಗಳ ನಾಯಕರ ಜತೆಯಲ್ಲಿಯೂ ಸೌಹಾರ್ದಯುತ ಸಂಬಂಧ ಉಳಿಸಿಕೊಂಡು ಬಂದಿರುವ ತನ್ನ ಅಜಾತಶತ್ರುವಿನ ವ್ಯಕ್ತಿತ್ವ ಜೀವಮಾನದ ಆಸೆಯನ್ನು ಈಡೇರಿಸಿಕೊಳ್ಳಲು ನೆರವಾಗಬಹುದು ಎಂದು ಅವರು ನಂಬಿದಂತಿದೆ. ರಾಜಕಾರಣಿಗಳ ಮನೆಮುಂದೆ ಸದಾ ಜೀನು ಹೊದ್ದುಕೊಂಡು ನಿಂತಿರುವ ಆಸೆಯ ಕುದುರೆ ಪವಾರ್ ಅವರನ್ನು ಕರೆಯುತ್ತಿದೆ.

Monday, July 16, 2012

ಪಾತ್ರಧಾರಿಗಳನ್ನಷ್ಟೇ ಅಲ್ಲ, ಸೂತ್ರಧಾರರನ್ನೂ ನೋಡಿ July 16, 2012

ಕರ್ನಾಟಕದಲ್ಲಿ ಬಿಜೆಪಿ ರಾಜಕಾರಣ ತಲುಪಿರುವ ಅಧೋಗತಿಗೆ ಹೊಣೆಗಾರರು ಯಾರು ಎಂಬ ಪ್ರಶ್ನೆ ಕೇಳಿದರೆ ಜನ ಪೈಪೋಟಿಯಿಂದ ಹೆಸರುಗಳನ್ನು ಪಟ್ಟಿಮಾಡಿ ಹೇಳಬಲ್ಲರು. ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ರೆಡ್ಡಿ ಸೋದರರು, ಪಕ್ಷಾಂತರಿ ಶಾಸಕರು,ಅನಂತಕುಮಾರ್, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ..... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ಇವರೆಲ್ಲ ತೆರೆಯ ಮುಂದೆ ಕಾಣುತ್ತಿರುವ ಪಾತ್ರಧಾರಿಗಳು. ಇವರ ಹೆಸರೆತ್ತಿ ಮನಸಾರೆ ಬೈದುಬಿಡಬಹುದು, ಸ್ವಲ್ಪ ಧೈರ್ಯಮಾಡಿದರೆ ಕಲ್ಲೆತ್ತಿ ಹೊಡೆಯಲೂಬಹುದು. ಅಂತಹ ಸಾಹಸ ಮಾಡುವ ಧೈರ್ಯ ಇಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಇವರನ್ನು ಮಣ್ಣುಮುಕ್ಕಿಸಿ ಸೇಡು ತೀರಿಸಿಕೊಳ್ಳಬಹುದು. 

ಆದರೆ ನೇಪಥ್ಯದಲ್ಲಿ ಕೂತು ಈ ಪಾತ್ರಗಳನ್ನು ಆಡಿಸುತ್ತಿರುವ ಸೂತ್ರಧಾರರನ್ನು ಏನು ಮಾಡುವುದು? ಇವರು ಯಾರ ಕಣ್ಣಿಗೂ ಕಾಣುವುದಿಲ್ಲ, ಇವರ ಅಂತರಂಗದ ಪಿಸುಮಾತುಗಳು ಹೊರಗಿರುವ ಯಾರಿಗೂ ಕೇಳಿಸುತ್ತಿಲ್ಲ, ಇವರು ವಿಧಾನಸಭೆ ಪ್ರವೇಶಿಸದೆಯೂ ಅಧಿಕಾರವನ್ನು ಅನುಭವಿಸಬಲ್ಲರು, ಜಾತಿವಾದಿ ಎಂದು ಕರೆಸಿಕೊಳ್ಳದೆಯೇ ಜಾತಿಯ ರಾಜಕಾರಣ ಮಾಡಬಲ್ಲರು, ಭ್ರಷ್ಟರನ್ನು ಪೋಷಿಸುತ್ತಲೇ ಪ್ರಾಮಾಣಿಕರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಓಡಾಡಬಲ್ಲರು.
 
ಇವರನ್ನು ಕಾಣಬೇಕಾದರೆ ಸಂಘ ಪರಿವಾರದ ಗರ್ಭಗುಡಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಪ್ರವೇಶಿಸಬೇಕು. ಸಂಘ ಪರಿವಾರದ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್ ತನ್ನನ್ನು ಸಾಂಸ್ಕೃತಿಕ ಸಂಘಟನೆ ಎಂದು ಕರೆಸಿಕೊಂಡರೂ ಸಂಸ್ಕೃತಿಯೇತರ ಚಟುವಟಿಕೆಗಳಿಗಾಗಿ ಅದು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟುಹಾಕಿದೆ.
 
ರಾಜಕೀಯಕ್ಕಾಗಿ ಬಿಜೆಪಿ (ಮೊದಲು ಜನಸಂಘ), ಧರ್ಮಕ್ಕಾಗಿ ವಿಎಚ್‌ಪಿ, ಹಿಂದೂ ಜಾಗರಣ ಮಂಚ, ಬಜರಂಗದಳ ಇತ್ಯಾದಿ,  ವಿದ್ಯಾರ್ಥಿಗಳಿಗಾಗಿ ಎಬಿವಿಪಿ, ಕಾರ್ಮಿಕರಿಗಾಗಿ ಬಿಎಂಎಸ್...ಹೀಗೆ ತರಹೇವಾರಿ ಸಂಘಟನೆಗಳು. ಇದರ ಜತೆಗೆ ನೂರಾರು ಸ್ವಯಂಸೇವಾ ಸಂಸ್ಥೆಗಳು. 

ಈ ಎಲ್ಲ ಅಂಗಸಂಸ್ಥೆಗಳ ಯಜಮಾನನ ಸ್ಥಾನದಲ್ಲಿ ಕೂತಿರುವುದು ಆರ್‌ಎಸ್‌ಎಸ್, ಒಂದು ರೀತಿಯಲ್ಲಿ ಇದು ಪರಿವಾರದ ಹೈಕಮಾಂಡ್. ಪರಿವಾರಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿರ್ಧಾರಗಳು ಇತ್ಯರ್ಥವಾಗುವುದು ಇದೇ ಗರ್ಭಗುಡಿಯಲ್ಲಿ. ಇದು ತನ್ನ ಆದೇಶಗಳನ್ನು ಪತ್ರಿಕಾಗೋಷ್ಠಿ ಕರೆದು ಇಲ್ಲವೇ ಪತ್ರಿಕಾ ಹೇಳಿಕೆಗಳ ಮೂಲಕ ಜಾರಿಗೊಳಿಸುವುದಿಲ್ಲ. 

ಅದೇನಿದ್ದರೂ ಕಣ್ಸನ್ನೆ, ಕೈಸನ್ನೆಯ  ಮೂಲಕವೇ ನಡೆಯುತ್ತದೆ. ಈ ಸಂಘಟನೆಯಲ್ಲಿ ಪ್ರಾಮಾಣಿಕತೆ, ತ್ಯಾಗ, ಸಾರ್ವಜನಿಕ ಸೇವೆ ಮತ್ತು ಸರಳ-ಶಿಸ್ತುಬದ್ಧ ಜೀವನಕ್ಕೆ ಅರ್ಪಿಸಿಕೊಂಡ ಅನೇಕ ಹಿರಿಯ ಜೀವಗಳಿದ್ದವು. ಆರ್‌ಎಸ್‌ಎಸ್ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡವರು ಕೂಡಾ ವೈಯಕ್ತಿಕವಾಗಿ ಅವರಿಗೆ ಗೌರವದಿಂದ ತಲೆಬಾಗುತ್ತಿದ್ದರು. 

ಆದರೆ ಇಂದಿನ ಆರ್‌ಎಸ್‌ಎಸ್‌ನಲ್ಲಿ ಹಳೆಯ ತಲೆಮಾರಿನ ನಾಯಕರು ಪಳೆಯುಳಿಕೆಯಂತೆ ಅಲ್ಲಲ್ಲಿ ಕಾಣುತ್ತಿದ್ದಾರೆಯೇ ಹೊರತು ಬಹುಸಂಖ್ಯಾತ ನಾಯಕರು ಬೇರೆ ದಾರಿ ಹಿಡಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆರ್‌ಎಸ್‌ಎಸ್ ತನ್ನ ಮೂಲ ಕ್ಷೇತ್ರಗಳಾದ ಧರ್ಮ ಮತ್ತು ಸಂಸ್ಕೃತಿಯನ್ನು ಪಕ್ಕಕ್ಕಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೋರುತ್ತಿರುವ ಅತಿಯಾದ ಆಸಕ್ತಿ. 

1925ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘ 1949ರಲ್ಲಿ ಒಪ್ಪಿಕೊಂಡ ಲಿಖಿತ ಸಂವಿಧಾನದ ಪ್ರಕಾರ ನೇರವಾಗಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.  `ಹಿಂದೂ `ಸಮಾಜ`ದೊಳಗಿನ ವಿಭಿನ್ನ ಗುಂಪುಗಳನ್ನು ಸಂಘಟಿಸುವುದು ಮತ್ತು ಅದನ್ನು `ಧರ್ಮ` ಮತ್ತು ಸಂಸ್ಕೃತಿಯ ಆಧಾರದಲ್ಲಿ ಪುನರುಜ್ಚೀವನಗೊಳಿಸಿ ಆ ಮೂಲಕ `ಭರತವರ್ಷ`ದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವುದು ಸಂಘದ ಗುರಿ ಮತ್ತು ಉದ್ದೇಶ...` ಎಂದು ಆರ್‌ಎಸ್‌ಎಸ್ ಒಪ್ಪಿಕೊಂಡಿರುವ ಸಂವಿಧಾನದ ಮೂರನೆ ಪರಿಚ್ಛೇದ ಹೇಳುತ್ತದೆ. 

`ಸಂಘಕ್ಕೆ ರಾಜಕೀಯ ಉದ್ದೇಶ ಇಲ್ಲ, ಇದು ಶುದ್ಧವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬದ್ಧವಾದ ಸಂಸ್ಥೆ` ಎಂದು ಪರಿಚ್ಛೇದ 4ರಲ್ಲಿ ಉದ್ದೇಶವನ್ನು ಇನ್ನಷ್ಟು ಸ್ಪಷ್ಟಪಡಿಸಲಾಗಿದೆ. ಇಷ್ಟು ಹೇಳಿದ ನಂತರ ಮುಂದುವರಿಯುತ್ತಾ `...ಸಂಘದ ಸದಸ್ಯರು ರಾಜಕೀಯ ಪಕ್ಷ ಸೇರುವುದಕ್ಕೆ ಅಭ್ಯಂತರ ಇಲ್ಲ...ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್‌ಎಸ್‌ಎಸ್ ಸ್ವತಂತ್ರವಾಗಿದೆ` (ಪ್ಯಾರಾ 18 ಮತ್ತು 19) ಎಂದು ಹೇಳಿ ಆರ್‌ಎಸ್‌ಎಸ್ ತನ್ನ ಸಂವಿಧಾನದಲ್ಲಿಯೇ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ. ಈ ದ್ವಂದ್ವವನ್ನು ಆರ್‌ಎಸ್‌ಎಸ್ ಇತಿಹಾಸದುದ್ದಕ್ಕೂ ಅದರ ನಡವಳಿಕೆಯಲ್ಲಿ ಕಾಣಬಹುದು.

 ಸಂವಿಧಾನದಲ್ಲಿ ಅವಕಾಶ ಇರುವಂತೆ ಆರ್‌ಎಸ್‌ಎಸ್ ನೇರವಾಗಿ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿಲ್ಲ, ಬದಲಿಗೆ 1951ರಲ್ಲಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿತು. ಇದರ ನಂತರವೂ ಹಿಂದಿನ ಜನಸಂಘ ಇಲ್ಲವೇ ಈಗಿನ ಬಿಜೆಪಿ ತಮ್ಮ  ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅದು ಒಪ್ಪಿಕೊಳ್ಳುವುದಿಲ್ಲ.

  ಆದರೆ ವಾಜಪೇಯಿ-ಅಡ್ವಾಣಿಯವರಿಂದ ಹಿಡಿದು ಯಡಿಯೂರಪ್ಪ-ಶೆಟ್ಟರ್ ವರೆಗೆ ಎಲ್ಲರೂ ಆರ್‌ಎಸ್‌ಎಸ್‌ನಿಂದಲೇ ಬಂದವರು ಮತ್ತು ಅದಕ್ಕೆ ನಿಷ್ಠರಾಗಿರುವವರು. ಬಿಜೆಪಿಯ ಸಂಘಟನೆಯಲ್ಲಿ ಮಾತ್ರ ಆರ್‌ಎಸ್‌ಎಸ್‌ನಿಂದ ಎರವಲು ಸೇವೆಯ ರೂಪದಲ್ಲಿ ಬಂದ ಸ್ವಯಂಸೇವಕರಿರುತ್ತಾರೆ. 

ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ರಾಜಕೀಯ ಪಕ್ಷದಲ್ಲಿಯೂ ಆರ್‌ಎಸ್‌ಎಸ್ ಜತೆ ತನ್ನನ್ನು ಗುರುತಿಸಿಕೊಳ್ಳುವ ನಾಯಕರಿಲ್ಲ. ಇದೇ ರೀತಿ ಬೇರೆ ರಾಜಕೀಯ ಪಕ್ಷಗಳಿಗೆ ಸೇರಿದ ಯಾವ ನಾಯಕರನ್ನೂ ಕೂಡಾ ಆರ್‌ಎಸ್‌ಎಸ್ `ನಮ್ಮವನು` ಎಂದು ಒಪ್ಪಿಕೊಳ್ಳುವುದೂ ಇಲ್ಲ.

ಆರ್‌ಎಸ್‌ಎಸ್ ಮತ್ತು ಬಿಜೆಪಿ ಎಂದರೆ ಬೇರೆಬೇರೆ ಅಲ್ಲ, ಅದು ಒಂದೇ ನಾಣ್ಯದ ಎರಡು ಮುಖಗಳು. ಹೀಗಿರುವಾಗ ಬಿಜೆಪಿಯ ಎಲ್ಲ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳಿಗೆ ಆರ್‌ಎಸ್‌ಎಸ್ ಕೂಡಾ ಹೊಣೆ. 

ಈ ಜವಾಬ್ದಾರಿಯಿಂದ ಅದು ನುಣುಚಿಕೊಳ್ಳಲಾಗುವುದಿಲ್ಲ. ಹೊಲಸು ರಾಜಕಾರಣದ ಮೂಲಕ ಗಳಿಸುವ ರಾಜಕೀಯ ಅಧಿಕಾರ ಬೇಕು, ಆದರೆ ಅದರ ನೈತಿಕ ಹೊಣೆಗಾರಿಕೆ ಬೇಡ ಎನ್ನುವುದು ಆರ್‌ಎಸ್‌ಎಸ್‌ನ ಆತ್ಮವಂಚನೆಯ ಮುಖವನ್ನಷ್ಟೇ ಅನಾವರಣಗೊಳಿಸುತ್ತದೆ. ದೇಶದ ಎದುರು ರಾಜ್ಯದ ಜನತೆ ತಲೆತಗ್ಗಿಸಬೇಕಾಗಿ ಬಂದಿರುವ ಇಂದಿನ ನೀತಿಭ್ರಷ್ಟ ರಾಜಕಾರಣದ ಮೂಲ `ಆಪರೇಷನ್ ಕಮಲ` ಎಂಬ ಅನೈತಿಕ ರಾಜಕಾರಣದಲ್ಲಿದೆ.
 
ಶಾಖೆಗಳಲ್ಲಿ ಸೇರುವ ಸ್ವಯಂಸೇವಕರಿಗೆ ಪ್ರಾಮಾಣಿಕತೆಯ ಪಾಠ ಹೇಳುವ ಆರ್‌ಎಸ್‌ಎಸ್ ನಾಯಕರಿಂದ ಇದನ್ನು ತಡೆಯಲು ಸಾಧ್ಯ ಇರಲಿಲ್ಲವೇ? ಈ ರೀತಿಯ ಮಾರ್ಗದರ್ಶನ ನೀಡಲಿಕ್ಕಾಗಿಯೇ ಅಲ್ಲವೇ, ಸಂಘ ತನ್ನ ಪ್ರತಿನಿಧಿಯನ್ನು ಪಕ್ಷದ ಸಂಘಟನೆಗೆ ಎರವಲು ಸೇವೆ ಮೂಲಕ ಕಳುಹಿಸುವುದು. 

ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದಾಗ ಸಂಘಟನಾ ಕಾರ್ಯದರ್ಶಿ ಎಂಬ ಆ ಮಹಾನುಭಾವರು ಏನು ಮಾಡುತ್ತಿದ್ದರು? ದೇಶ ಭಕ್ತಿ ಎಂದರೆ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಮಾಡಿ, ಮುಸ್ಲಿಮರ ವಿರುದ್ಧ ಘೋಷಣೆ ಕೂಗುವುದು ಮಾತ್ರವೇ? ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವುದು ಕೂಡಾ ದೇಶಭಕ್ತಿ ಅಲ್ಲವೇ?

ವಿಚಿತ್ರವೆಂದರೆ ಸಚ್ಚಾರಿತ್ರ್ಯ ಮತ್ತು ಮೌಲ್ಯಾಧರಿತ ರಾಜಕಾರಣದ ಬಗ್ಗೆ ಉಪನ್ಯಾಸ ನೀಡುವ ಆರ್‌ಎಸ್‌ಎಸ್ ನಾಯಕರಿಗೆ ಈಗ ಜೈಲಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡಾಗ ಯಾವ ಮುಜುಗರವೂ ಆಗಲಿಲ್ಲ.  ತಾವು ಖಾಸಗಿಯಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳಿಗೆ ಬಳ್ಳಾರಿಯ ಗಣಿಲೂಟಿಕೋರರಿಂದ  ಕೈತುಂಬಾ ದೇಣಿಗೆ ಪಡೆಯುತ್ತಿದ್ದಾಗ ಸಂಘದ ನಾಯಕರಿಗೆ ಯಾವ ಆತ್ಮಸಾಕ್ಷಿಯೂ  ಕಾಡಲಿಲ್ಲ.
 
ಯಡಿಯೂರಪ್ಪ ಒಬ್ಬ ರಾಜಕಾರಣಿ, ಅಡ್ಡಮಾರ್ಗದಿಂದ ಗಳಿಸಿದ ಹಣವನ್ನು ದೇಣಿಗೆ ಪಡೆದು ಅವರು ರಾಜಕಾರಣ ಮಾಡಿದಾಗ  ತಪ್ಪು ಎಂದು ಹೇಳಬಹುದು, ಆದರೆ ಅಸಹಜ ಎಂದು ಹೇಳಲಾಗುವುದಿಲ್ಲ. ಆದರೆ ಆರ್‌ಎಸ್‌ಎಸ್? ತನ್ನ ಆರು ಅಂಗ ಸಂಸ್ಥೆಗಳು ಮತ್ತು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದೆ ಎಂಬ ಆರೋಪವನ್ನು ಆರ್‌ಎಸ್‌ಎಸ್ ನಿರಾಕರಿಸುವ ಸ್ಥಿತಿಯಲ್ಲಿದೆಯೇ? ಇದು ಅನೈತಿಕ ಎಂದು ಅನಿಸಲಿಲ್ಲವೇ? 

ವಾಸ್ತವ ಸಂಗತಿ ಏನೆಂದರೆ ಆರ್‌ಎಸ್‌ಎಸ್‌ಗೆ ಕೂಡಾ ರಾಜಕೀಯ ಅಧಿಕಾರ ಬೇಕು ಮತ್ತು ಅದರ ಮೂಲಕ ಸುಲಭದಲ್ಲಿ ಬರುವ  ಸುಖ-ಸಂತೋಷಗಳನ್ನು ಅನುಭವಿಸಬೇಕು. 

ತನ್ನ ಮಾತಿಗೆ ಗೋಣು ಆಡಿಸುವ ನಾಯಕರನ್ನಷ್ಟೇ ಅದು ಸಹಿಸಿಕೊಳ್ಳುತ್ತದೆ, ನಿರಾಕರಿಸಿದರೆ ಅದು ವಾಜಪೇಯಿ-ಅಡ್ವಾಣಿ ಇರಲಿ, ಯಡಿಯೂರಪ್ಪ - ಸದಾನಂದಗೌಡರಿರಲಿ ಯಾರ ಗೋಣು ಮುರಿಯಲೂ ಹಿಂದೆಮುಂದೆ ನೋಡುವುದಿಲ್ಲ. ಯಡಿಯೂರಪ್ಪನವರ ಪದಚ್ಯುತಿಗೆ ಆರ್‌ಎಸ್‌ಎಸ್ ಒತ್ತಡ ಹೇರಲು ಭ್ರಷ್ಟಾಚಾರದ ಆರೋಪಗಳಷ್ಟೇ ಕಾರಣ ಅಲ್ಲ, ರಾಜ್ಯದ ಒಂದು ಪ್ರಬಲ ಕೋಮಿಗೆ ಸೇರಿದ ನಾಯಕನೊಬ್ಬ ತಮ್ಮ ನಿಯಂತ್ರಣವನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅಸುರಕ್ಷತೆಯೂ ಕಾರಣ. 

ಅದೇ ರೀತಿ ಯಡಿಯೂರಪ್ಪನವರು ಸದಾನಂದಗೌಡರ ತಲೆದಂಡ ಕೇಳಿದ್ದನ್ನು ಬೆಂಬಲಿಸಲು  ಗೌಡರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎನ್ನುವ ಅಸಮಾಧಾನವೂ ಕಾರಣ. 

ಇಲ್ಲದೆ ಇದ್ದರೆ  ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದ ಜನತೆ ಪಕ್ಷಭೇಧ ಮರೆತು ಸಜ್ಜನ, ಪ್ರಾಮಾಣಿಕ ಎಂದು ಕೊಂಡಾಡುತ್ತಿದ್ದ ಮುಖ್ಯಮಂತ್ರಿಯ ಬದಲಾವಣೆಗೆ ಆರ್‌ಎಸ್‌ಎಸ್ ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಗೌಡರು ಶಾಖೆಗಳಲ್ಲಿ ಹೇಳಿಕೊಟ್ಟಿದ್ದ ಪಾಠಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾ ಬಂದರೂ ಆರ್‌ಎಸ್‌ಎಸ್ ಯಾಕೆ ಅವರ ಕೈಬಿಟ್ಟಿತು? ಉಳಿದೆಲ್ಲ ಕಳಂಕಿತ ಕಡತಗಳ ಜತೆಯಲ್ಲಿ ಆರ್‌ಎಸ್‌ಎಸ್ ನಾಯಕರ ಶಿಫಾರಸನ್ನೊಳಗೊಂಡ ಕಡತಗಳನ್ನೂ ಗೌಡರು ಪಕ್ಕಕ್ಕೆ ತೆಗೆದಿಟ್ಟರೇ? ಈಗಿನ ಆರ್‌ಎಸ್‌ಎಸ್ ಅಖಂಡ ಹಿಂದುತ್ವಕ್ಕೆ ಅರ್ಪಿಸಿಕೊಂಡ ಸಂಸ್ಥೆಯಾಗಿ ಉಳಿದಿಲ್ಲ. 

ಅಲ್ಲಿಯೂ ಜಾತಿ, ಪ್ರಾದೇಶಿಕತೆ, ಸ್ವಾರ್ಥ, ದ್ವೇಷ, ಅಸೂಯೆಗಳಿವೆ. ಮುಖ್ಯಮಂತ್ರಿ ಕುರ್ಚಿಯಿಂದ ಯಡಿಯೂರಪ್ಪನವರು ಇಳಿದದ್ದು, ಗೌಡರು ಹತ್ತಿದ್ದು, ಈಗ ಗೌಡರು ಇಳಿದು ಶೆಟ್ಟರ್ ಹತ್ತಿದ್ದು ಹೊರನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ನಡೆದಿಲ್ಲ. ಇದರ ಹಿಂದೆ ಸೂತ್ರಹಿಡಿದು ಆಡಿಸುತ್ತಿರುವವರು  ಮೈ.ಚ.ಜಯದೇವ, ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು  ದತ್ತಾತ್ರೇಯ ಹೊಸಬಾಳೆ ಎಂಬ ಆರ್‌ಎಸ್‌ಎಸ್‌ನ ಮೂವರು ಪ್ರಮುಖ ನಾಯಕರು. ಇವರಲ್ಲಿ ಅತ್ಯಂತ ವಿವಾದಾತ್ಮಕ ನಾಯಕರಾದ ಪ್ರಭಾಕರ ಭಟ್ಟರು ಈಗ ಕುಂದಾಪುರದ ಸಜ್ಜನ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿಯವರ ಸಾತ್ವಿಕ ಸಿಟ್ಟಿಗೆ ಈಡಾಗಿದ್ದಾರೆ.

ರಾಜ್ಯದಂತೆ ಕೇಂದ್ರದಲ್ಲಿಯೂ ಈ ಅಧಿಕಾರದ ಆಟ ಸಾಗಿದೆ.  ವಾಜಪೇಯಿ-ಅಡ್ವಾಣಿಯವರಂತಹ ಹಿರಿಯ ಮತ್ತು ಜನಪ್ರಿಯ ನಾಯಕರಿದ್ದಾಗ ಬಾಲ ಮುದುಡಿಕೊಂಡಿದ್ದ ಆರ್‌ಎಸ್‌ಎಸ್ ಅವರು ನೇಪಥ್ಯಕ್ಕೆ ಸರಿಯುತ್ತಿದ್ದಂತೆಯೇ ಇಡೀ ಪಕ್ಷವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿದೆ. 

ಎಲ್.ಕೆ.ಅಡ್ವಾಣಿಯವರಂತಹ  ಹಿರಿಯ ನಾಯಕನ ವಿರುದ್ಧ ನಿತಿನ್ ಗಡ್ಕರಿಯವರಂತಹ ಯಃಕಶ್ಚಿತ್ ನಾಯಕನನ್ನು ಎತ್ತಿಕಟ್ಟಿದೆ. ನರೇಂದ್ರಮೋದಿಯವರನ್ನು ಮಣಿಸಲು ಹೋಗಿ ಸಾಧ್ಯವಾಗದೆ ಸದ್ಯಕ್ಕೆ ಅವರಿಗೆ ಶರಣಾಗಿದೆ. 

ಹೇಳುವವರು-ಕೇಳುವವರು ಇಲ್ಲದ ಪುಂಡುಪೋಕರಿಯಂತೆ ಬಿಜೆಪಿ ಬೆಳೆಯಲು ದುರ್ಬಲ ಹೈಕಮಾಂಡ್ ಕಾರಣ ಎಂಬ ಆರೋಪ ಪಕ್ಷದ ಒಳಗೆ ಮತ್ತು ಹೊರಗೆ ಕೇಳಿಬರುತ್ತಿದೆ. ಅದು ದುರ್ಬಲಗೊಳ್ಳಲು ಮುಖ್ಯ ಕಾರಣ- ಪರ್ಯಾಯ ಹೈಕಮಾಂಡ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದು ರಾಜಕೀಯ ರಂಗಸ್ಥಳದ ನೇಪಥ್ಯದಲ್ಲಿ  ಸೂತ್ರ ಹಿಡಿದುಕೊಂಡು ನಿಂತಿದೆ. ನಾಟಕ ಕೆಟ್ಟರೆ ಪಾತ್ರಧಾರಿಗಳಿಗೆ ಜನ ಕಲ್ಲು ಹೊಡೆಯುತ್ತಾರೆ, ಮರೆಯಲ್ಲಿ ನಿಂತ ಸೂತ್ರಧಾರರು ಸುರಕ್ಷಿತ

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ July 09, 2012


ದಿನಾಂಕ: ಜೂನ್ 2, 2008, ಸ್ಥಳ: ದೆಹಲಿಯ  `26, ತುಘಲಕ್ ಕ್ರೆಸೆಂಟ್`ನಲ್ಲಿರುವ ಲೋಕಸಭಾ ಸದಸ್ಯ ಅನಂತಕುಮಾರ್ ಮನೆ. ಕರ್ನಾಟಕದಲ್ಲಿ ಬಿಜೆಪಿಯ ವಿಜಯೋತ್ಸವದ ಕಾವು ಇನ್ನೂ ಆರಿರಲಿಲ್ಲ, ಆಗಲೇ ಭಿನ್ನಮತದ ಕಿಡಿ ಹಾರಿತ್ತು.

`ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ` ಎಂದು ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದರು,  `ಸಚಿವನನ್ನಾಗಿ ಮಾಡಿದರೆ ಸರಿ, ವಿಧಾನಸಭಾ ಅಧ್ಯಕ್ಷ ಖಂಡಿತ ಆಗಲಾರೆ` ಎಂದು ಶೆಟ್ಟರ್ ಹಟ ಹಿಡಿದು ಕೂತಿದ್ದರು.

ಅನಂತ ಕುಮಾರ್‌ಮನೆಯಲ್ಲಿ  ಆ ದಿನ ಸಂಜೆ ಶೆಟ್ಟರ್ ಹೆಚ್ಚುಕಡಿಮೆ `ಗೃಹಬಂಧನ`ದಲ್ಲಿದ್ದರು. ಅಲ್ಲಿದ್ದ ಇತರರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಥಿಂಕ್‌ಟ್ಯಾಂಕ್ ಸದಸ್ಯ ವಾಮನಾಚಾರ್ ಮತ್ತು ಸಂಸದ ಪ್ರಹ್ಲಾದ ಜೋಷಿ. ಮಧ್ಯಾಹ್ನವೇ ಎಲ್.ಕೆ.ಅಡ್ವಾಣಿ ಮನೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿತ್ತು.

ಸಂಜೆಯ ಮಾತುಕತೆಯ ಫಲಿತಾಂಶ ತಿಳಿಯಲು ಗೇಟ್ ಬಳಿ ಕಾಯುತ್ತಿದ್ದ ಪತ್ರಕರ್ತರ ಒತ್ತಾಯಕ್ಕೆ ಮಣಿದು ಹೊರ ಬಂದ ಶೆಟ್ಟರ್ ಅವರ ಕಳಾಹೀನ ಮುಖವೇ ಒಳಗೆ ನಡೆಯುತ್ತಿದ್ದುದನ್ನು ಹೇಳಿತ್ತು. `ಎಲ್ಲವೂ ಪಕ್ಷದ ಹಿರಿಯ ನಾಯಕರ ಕೈಯಲ್ಲಿದೆ, ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ` ಎಂದು ಚುಟುಕಾಗಿ ಪ್ರತಿಕ್ರಿಯಿಸಿ  ಮರುಪ್ರಶ್ನೆಗೂ ಕಿವಿಗೊಡದೆ ಅವರು ಮನೆಯೊಳಗೆ ಹೋಗಿ ಸೇರಿಕೊಂಡಿದ್ದರು.

ಮಧ್ಯರಾತ್ರಿ ಹೊತ್ತಿಗೆ ನನಗೆ ಪೋನ್‌ಗೆ ಸಿಕ್ಕ ಶೆಟ್ಟರ್ `ಪಕ್ಷದ ವರಿಷ್ಠರ ಆದೇಶಕ್ಕೆ ತಲೆಬಾಗಿದ್ದೇನೆ` ಎಂದಷ್ಟೇ ಹೇಳಿ ಮಾತು ಮುಗಿಸಲು ಪ್ರಯತ್ನಿಸಿದ್ದರು. ಇನ್ನಷ್ಟು ಕಾಡಿದಾಗ ಕಳೆದೆರಡು ವರ್ಷಗಳಲ್ಲಿ ತಮಗೆ ಆಗಿರುವ ಅನ್ಯಾಯ-ಅವಮಾನಗಳ ವಿವರಗಳನ್ನೆಲ್ಲ ಬಿಚ್ಚಿಟ್ಟಿದ್ದರು. ಯಡಿಯೂರಪ್ಪನವರು ವಿಶೇಷ ಆಸಕ್ತಿ ವಹಿಸಿ ಜೆಡಿ (ಯು)ನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಮಾತ್ರವಲ್ಲ ಮೊದಲ ಕಂತಿನಲ್ಲಿಯೇ ಅವರನ್ನು ಸಚಿವರನ್ನಾಗಿ ಮಾಡಿದ್ದು ಶೆಟ್ಟರ್ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿತ್ತು. ಹುಬ್ಬಳ್ಳಿ-ಧಾರವಾಡದ ಭಾಗದಲ್ಲಿ  ಪ್ರತಿಸ್ಪರ್ಧಿಯೊಬ್ಬನನ್ನು ಹುಟ್ಟುಹಾಕಿ ತಮ್ಮ ವರ್ಚಸ್ಸನ್ನು ಕುಂದಿಸುವ ದುರುದ್ದೇಶದಿಂದಲೇ ಹೀಗೆ  ಮಾಡಲಾಗಿದೆ ಎಂದು ಅವರು ತಿಳಿದುಕೊಂಡಿದ್ದರು. `ಅವರೇ (ಯಡಿಯೂರಪ್ಪ) ಲೀಡರ್, ನಾನಲ್ಲ.

ಅದನ್ನು ನಾನು ಮಾತ್ರವಲ್ಲ ರಾಜ್ಯದ ಮತದಾರರು ಒಪ್ಪಿಕೊಂಡಿದ್ದಾರೆ.  ಹೀಗಿದ್ದರೂ ನನ್ನ ಮೇಲೆ ಯಾಕೆ ದ್ವೇಷ ಸಾಧಿಸುತ್ತಾರೋ? ಅವರಿಗೆ ಯಾಕೆ ಇಷ್ಟೊಂದು `ಇನ್‌ಸೆಕ್ಯುರಿಟಿ`ಯೋ ಗೊತ್ತಿಲ್ಲ` ಎಂದು ಅವರು ನೋವಿನಿಂದ ಹೇಳಿದ್ದರು. ಅದರ ನಂತರ ನಡೆದುದೆಲ್ಲವೂ ಈಗ ಇತಿಹಾಸ.

ಆ ನಾಟಕೀಯ ವಿದ್ಯಮಾನ ನಡೆದು ಸರಿಯಾಗಿ ನಾಲ್ಕುವರ್ಷಗಳು ಕಳೆದಿವೆ. ಇತಿಹಾಸದ ಚಕ್ರ ಈಗ  ಸುತ್ತು ಪೂರ್ಣಗೊಳಿಸಿದೆ. ಅದೇ ಅನಂತಕುಮಾರ್ ಮನೆಯ `ರಂಗಸ್ಥಳ` ಮತ್ತು ಹೆಚ್ಚುಕಡಿಮೆ ಅದೇ ಪಾತ್ರಧಾರಿಗಳು. ಆದರೆ ನಾಟಕದ ಕತೆ ಮಾತ್ರ ಸಂಪೂರ್ಣ ತದ್ವಿರುದ್ಧ. ಶೆಟ್ಟರ್ ಅವರನ್ನು ಸಂಪುಟಕ್ಕೂ ಸೇರಿಸಬಾರದೆಂದು ರಚ್ಚೆಹಿಡಿದು ಕೂತಿದ್ದ ಯಡಿಯೂರಪ್ಪನವರು  ಅವರನ್ನು ಮುಖ್ಯಮಂತ್ರಿ ಮಾಡಲೇ ಬೇಕೆಂಬ  ಜಿದ್ದಾಜಿದ್ದಿ ನಡೆಸಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ತನ್ನ `ದೇವಪಿತ` (ಗಾಡ್‌ಫಾದರ್)ನಂತೆ ಅವತರಿಸಿರುವ ಯಡಿಯೂರಪ್ಪನವರ ಬಗ್ಗೆ ಶೆಟ್ಟರ್ ಮನಸ್ಸಲ್ಲಿ ಈಗ ಏನಿದೆ ಎನ್ನುವುದು ಗೊತ್ತಿಲ್ಲ. ಈ ಇತಿಹಾಸದ ಬೆಳಕಿನಿಂದ ವರ್ತಮಾನದ ವಿದ್ಯಮಾನಗಳನ್ನು ನೋಡಿದರೆ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ನುಡಿಯುವುದು ಬಹಳ ಕಷ್ಟದ ಕೆಲಸ ಅಲ್ಲ.

ವರ್ತಮಾನಕ್ಕೆ ಬರೋಣ. ಡಿ.ವಿ.ಸದಾನಂದ ಗೌಡರನ್ನು ಬದಲಾಯಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ  ಬಿಜೆಪಿಯೊಳಗಿನ ಬಿಕ್ಕಟ್ಟು ಶಾಶ್ವತ ಪರಿಹಾರ ಕಾಣಲಿದೆ ಎಂದು ಯಾರಾದರೂ ಹೇಳಿದರೆ ಅವರನ್ನು ಸುಳ್ಳುಗಾರರೆಂದೂ,  ಈ ಹೇಳಿಕೆಯನ್ನು ಯಾರಾದರೂ ನಂಬುತ್ತೇನೆ ಎಂದು ಹೇಳಿದರೆ ಅವರನ್ನು ಮೂರ್ಖರೆಂದೂ ಕರೆಯಬೇಕಾಗುತ್ತದೆ. ಸಮಸ್ಯೆಯನ್ನು ಬಗೆಹರಿಸಲು ಹೊರಡುವವರು ಮೊದಲು ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಡಯಾಗ್ನಿಸಿಸ್ ತಪ್ಪು ಆಗಿಬಿಟ್ಟರೆ ಚಿಕಿತ್ಸೆಯೂ ತಪ್ಪಾಗಿ ರೋಗ ಉಲ್ಬಣಗೊಳ್ಳುತ್ತದೆಯೇ ಹೊರತು ಗುಣವಾಗುವುದಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವುದು ಈ `ರಾಂಗ್ ಡಯಾಗ್ನಿಸಿಸ್`. ಆ ಪಕ್ಷದ ಸಮಸ್ಯೆ ಸದಾನಂದ ಗೌಡ, ಈಶ್ವರಪ್ಪ, ಶೆಟ್ಟರ್..ಇವರ‌್ಯಾರೂ ಅಲ್ಲ. ಅದರ ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಗಾಯಕ್ಕೆ ಔಷಧ ಹಚ್ಚದೆ ನೋವುನಿವಾರಕ ಗುಳಿಗೆ ನೀಡಿ ಮಲಗಿಸಿದ ಹಾಗೆ ಆಗುತ್ತದೆ, ಗಾಯ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಗೌಡರ ಪದಚ್ಯುತಿ, ಶೆಟ್ಟರ್ ನೇಮಕ, ಜತೆಗೊಬ್ಬ ಉಪಮುಖ್ಯಮಂತ್ರಿ, ಸಂಪುಟ ಪುನರ‌್ರಚನೆ ಮೊದಲಾದ ಯಾವುದೇ ಔಷಧಿಯಿಂದ ಬಿಜೆಪಿಯನ್ನು ಕಾಡುತ್ತಿರುವ ಭಿನ್ನಮತದ ರೋಗವನ್ನು ಕನಿಷ್ಠ ಮುಂದಿನ ಚುನಾವಣೆವರೆಗೂ ಗುಣಪಡಿಸಲು ಸಾಧ್ಯವಾಗಲಾರದು. ಇವೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ.

ನಾಲ್ಕು ವರ್ಷಗಳ ಹಿಂದೆ ಯಡಿಯೂರಪ್ಪನವರು ಒಂದು ರಾಜ್ಯ ಗೆದ್ದುಕೊಂಡು ಬಂದ ವೀರನಾಯಕನಾಗಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವ ಅವಕಾಶವನ್ನು ತಂದುಕೊಟ್ಟ ಅವರು ಪಕ್ಷದ ಪಾಲಿನ ಭಾಗ್ಯವಿಧಾತರಾಗಿದ್ದರು. ರಾಜಕೀಯ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದ ಆ ದಿನಗಳಲ್ಲಿ `ನೂರು ಶೆಟ್ಟರ್, ಸಾವಿರ ಈಶ್ವರಪ್ಪ, ಲಕ್ಷ ಅನಂತಕುಮಾರ್‌ನಂತಹವರು ಎದುರುನಿಂತರೂ ನಿಭಾಯಿಸಿಕೊಂಡುಹೋಗಬಲ್ಲೆ` ಎಂಬ ಆತ್ಮವಿಶ್ವಾಸವನ್ನು ಅವರು ಪ್ರದರ್ಶಿಸಬೇಕಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಶೆಟ್ಟರ್ ಅವರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಂಟಕವಾಗಬಲ್ಲ ಶತ್ರು ಕಾಣತೊಡಗಿದ್ದ. ವಿರೋಧ ಪಕ್ಷದ ನಾಯಕರಾಗಿ ಆತ್ಮವಿಶ್ವಾಸದಿಂದ ರಾಜಕೀಯ ಮಾಡುತ್ತಾ ಬಂದಿದ್ದ ಯಡಿಯೂರಪ್ಪನವರು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಹೊತ್ತಿಗೆ ಅಸುರಕ್ಷತೆಯ ಭಾವನೆಯಿಂದ ನರಳತೊಡಗಿದ್ದೇ ಅವರ, ಪಕ್ಷದ ಮತ್ತು ರಾಜ್ಯದ ಜನತೆಯ ಪಾಲಿನ ದುರಂತ.

ಅಂದು ಅವರನ್ನು ಕಾಡಿದ ಅಸುರಕ್ಷತೆಯ ಹಳವಂಡ ಮುಂದುವರಿಯುತ್ತಲೇ ಬಂದು ಈಗ ಸದಾನಂದ ಗೌಡರ ತಲೆದಂಡ ಕೇಳುತ್ತಿದೆ. ತಲೆಗೆ ಹತ್ತಿರುವ ಅದರ ಸವಾರಿ ಇಲ್ಲಿಗೆ ನಿಂತುಬಿಡುತ್ತದೆ ಎಂದು ಹೇಳುವ ಹಾಗಿಲ್ಲ. ಸದಾನಂದ ಗೌಡರು ರಹಸ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾದವರು, ಆ ದೃಷ್ಟಿಯಿಂದ ನೋಡಿದರೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪನವರಲ್ಲ. ಆದರೆ ಅವರ ಬೆಂಬಲ ಇಲ್ಲದೆ ಇದ್ದರೆ ಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದೂ ನಿಜ.

ಯಡಿಯೂರಪ್ಪನವರಿಗೆ ಇಂತಹದ್ದೊಂದು ನಂಬಿಕೆ ಗೌಡರ ಮೇಲೆ ಹುಟ್ಟಲು ಕಾರಣ ಇಬ್ಬರ ನಡುವಿನ ದೀರ್ಘಕಾಲದ ಒಡನಾಟ. ಈ ರೀತಿ ತಮಗೆ ವಿಧೇಯರಾಗಿದ್ದ, ಒಕ್ಕಲಿಗರೆಂದು ಕರೆಸಿಕೊಂಡರೂ ಪೂರ್ಣರೂಪದ ಒಕ್ಕಲಿಗರಲ್ಲದ, ಸೌಮ್ಯ ಸ್ವಭಾವದ ಸದಾನಂದ ಗೌಡರನ್ನೇ ಯಡಿಯೂರಪ್ಪನವರು ನಂಬಲಿಲ್ಲ ಎಂದ ಮೇಲೆ, ತಮ್ಮಂತೆಯೇ ಜಾತಿ ಬಲ ಹೊಂದಿರುವ, ಯಾರಿಗೂ ಪೂರ್ಣವಾಗಿ ವಿಧೇಯರಾಗಿ ಉಳಿಯದೆ ಇರುವ,  ಹಳೆಯ ದ್ವೇಷದ ಸೇಡು ತೀರಿಸಿಕೊಳ್ಳಲು ಅವಕಾಶ ಇರುವಂತಹ ಜಗದೀಶ್ ಶೆಟ್ಟರ್ ಅವರನ್ನು ಸಹಿಸಿಕೊಳ್ಳಬಹುದೇ?  ಇದು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವಂತಹ ಪ್ರಶ್ನೆ.
ಅಧಿಕಾರದ ಕುರ್ಚಿಯ ಮಹತ್ವವೇ ಅಂತಹದ್ದು. ಅದರ ಮೇಲೇರಿ ಕೂತವನ ತಲೆಯಲ್ಲಿ ಅಲ್ಲಿಯ ವರೆಗೆ ಇಲ್ಲದ ಆಸೆ-ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತವೆ, ಎಂತಹ ಪುಕ್ಕಲು
ಸ್ವಭಾವದವರ ಎದೆಯಲ್ಲಿಯೂ ಸ್ಥಾನದ ಬಲ ಒಂದಷ್ಟು ಧೈರ್ಯವನ್ನು ತುಂಬುತ್ತದೆ. ಇಂದಿರಾಗಾಂಧಿ ಹೇಳಿದರೆ ಪೊರಕೆ ಎತ್ತಿಕೊಂಡು ಗುಡಿಸಬಲ್ಲೆ ಎಂದು ಹೇಳಿದ್ದ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರೇ ರಾಜೀವ್‌ಗಾಂಧಿಯವರನ್ನು ಪದಚ್ಯುತಿಗೊಳಿಸಲು ಹೊರಟಿಲ್ಲವೇ ಹಾಗೆ. ಜಗದೀಶ್ ಶೆಟ್ಟರ್ ಅವರಿಗೆ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಂಡರೂ  ಸಮರ್ಥಿಸಿಕೊಳ್ಳಲು ಕಾರಣಗಳಿವೆ, ಅಂತಹ ಅವಕಾಶವೂ ಒದಗಿ ಬಂದಿದೆ. ಸಚಿವನಾಗುವ ಸಾಧ್ಯತೆ ಇದ್ದಾಗಲೂ ಯಡಿಯೂರಪ್ಪ ಬಿಡಲಿಲ್ಲ, ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗಲೂ ತಪ್ಪಿಸಿದ್ದರು. ರಾಜಕೀಯವಾಗಿ ಮುಗಿಸಿಬಿಡಬೇಕೆಂದು ಸ್ಥಳೀಯವಾಗಿ ಪ್ರತಿಸ್ಪರ್ಧಿಗಳನ್ನು ಸೃಷ್ಟಿಸಿ ಬೆಳೆಸಿದರು.

ಇವೆಲ್ಲವನ್ನೂ ಶೆಟ್ಟರ್ ಹೊಟ್ಟೆಯಲ್ಲಿ ಹಾಕಿಕೊಂಡು ಯಡಿಯೂರಪ್ಪನವರ ಆಜ್ಞಾನುವರ್ತಿಯಾಗಿ ಸರ್ಕಾರವನ್ನು ನಡೆಸಿಕೊಂಡು ಹೋದರೆ ಪಕ್ಷಕ್ಕೆ ನೆಮ್ಮದಿ, ಅನಿಶ್ಚಿತ ರಾಜಕಾರಣದಿಂದ ಬೇಸತ್ತುಹೋದ ರಾಜ್ಯದ ಜನತೆಗೂ ಶಾಂತಿ. ಶೆಟ್ಟರ್ ಅಷ್ಟೊಂದು ವಿಶಾಲ ಹೃದಯಿಗಳಾಗದೆ ಮುಯ್ಯಿ ತೀರಿಸಿಕೊಳ್ಳಲು ಹೊರಟರೆ ಅದಕ್ಕೂ ಅವಕಾಶ ಇದೆ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜರ್ಝರಿತರಾಗಿರುವ ಈಗಿನ ಯಡಿಯೂರಪ್ಪ, ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿಯೇ ಕೂತು ದೆಹಲಿಯಲ್ಲಿದ್ದ ಶೆಟ್ಟರ್ ಅವರನ್ನು ಮಣಿಸಿದ ಯಡಿಯೂರಪ್ಪ ಅಲ್ಲ. ಕೈ ತಪ್ಪಿಹೋಗಿರುವ ಅಧಿಕಾರ, ಮೈ ತುಂಬಾ ಹರಡಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು ಮತ್ತು ಹೆಚ್ಚುತ್ತಿರುವ ರಾಜಕೀಯ ಶತ್ರುಗಳಿಂದಾಗಿ ಅವರೊಬ್ಬ ದುರ್ಬಲ ನಾಯಕ. ಶತ್ರು ದುರ್ಬಲನಾಗಿದ್ದಾಗ ಕ್ಷಮಿಸುವವರು ಕಡಿಮೆ.

ಚುನಾವಣೆಗೆ ಹನ್ನೊಂದು ತಿಂಗಳು ಇರುವಾಗ ಮುಖ್ಯಮಂತ್ರಿಯಾದವರ ಕಣ್ಣು ಸಹಜವಾಗಿ ಚುನಾವಣೆಯ ನಂತರದ ಐದು ವರ್ಷಗಳ ಮೇಲಿರುತ್ತದೆ. ಒದಗಿಬಂದಿರುವ ಅವಕಾಶವನ್ನು ಕಳೆದುಕೊಳ್ಳುವಷ್ಟು ಶೆಟ್ಟರ್ ದಡ್ಡರಿರಲಾರರು. ರಾಜಕೀಯವಾಗಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಅನುಕೂಲತೆಗಳು ಶೆಟ್ಟರ್ ಅವರಿಗಿದೆ. ಅವರು ಬಿಜೆಪಿಯ ಶಕ್ತಿಕೇಂದ್ರವಾದ ಉತ್ತರ ಕರ್ನಾಟಕದಿಂದ ಬಂದವರು, ಲಿಂಗಾಯತರಲ್ಲಿ ಹೆಚ್ಚು ಶ್ರಿಮಂತರಾಗಿರುವ ಬಣಜಿಗ ಪಂಗಡಕ್ಕೆ ಸೇರಿದವರು, ಕಾನೂನು ಕಲಿತು ಒಂದಷ್ಟು ವರ್ಷ ವಕೀಲಿ ವೃತ್ತಿ ಮಾಡಿದವರು, ಯಡಿಯೂರಪ್ಪನವರಿಗೆ ಹೋಲಿಸಿದರೆ ಇನ್ನೂ ಯುವಕರು, ಇಷ್ಟು ಮಾತ್ರವಲ್ಲ ಸಂಘಪರಿವಾರದ ಜತೆ ಪ್ರಾರಂಭದಿಂದಲೂ ಗುರುತಿಸಿಕೊಂಡು ಬಂದ ಕುಟುಂಬದ ಸದಸ್ಯರಾಗಿರುವ ಕಾರಣ ಅವರ ಪಕ್ಷನಿಷ್ಠೆ ಪ್ರಶ್ನಾತೀತವಾದುದು. ಈ ಯಾವ ಅನುಕೂಲತೆಗಳೂ ಯಡಿಯೂರಪ್ಪನವರಿಗೆ ಇರಲಿಲ್ಲ. 

ಬಿ.ಎಸ್.ಯಡಿಯೂರಪ್ಪನವರ ದೊಡ್ಡ ರಾಜಕೀಯ ಬಲ-ಜಾತಿ. ಮುಖ್ಯಮಂತ್ರಿಗಳಾದ ನಂತರ ತಮ್ಮ ಸ್ಥಾನಕ್ಕೆ ಅಪಾಯ ಎದುರಾದಾಗೆಲ್ಲ ಅವರು ಲಿಂಗಾಯತ ಮಠಗಳ ಮೂಲಕ ಬಳಸಿಕೊಂಡಿದ್ದು ಜಾತಿಗಳನ್ನು. ಜಾತಿ ಎನ್ನುವುದು ಬೆಂಕಿ ಇದ್ದ ಹಾಗೆ, ಅದರ ಜತೆಗೆ ಆಟವಾಡಲು ಗೊತ್ತಿರಬೇಕು ಇಲ್ಲದೆ ಇದ್ದರೆ ಅದೇ ಬೆಂಕಿ ಸುಟ್ಟು ಹಾಕುತ್ತದೆ. ಬಿಹಾರದಲ್ಲಿ ಲಾಲುಪ್ರಸಾದ್ ಇದೇ ಜಾತಿ ಕಾರ್ಡ್ ಬಳಸಿ ಹದಿನಾರು ವರ್ಷಗಳ ಕಾಲ ಆ ರಾಜ್ಯವನ್ನು ಆಳಿದರು. ನಿತೀಶ್‌ಕುಮಾರ್ ಬಂದು ಅದೇ ಜಾತಿಕಾರ್ಡಿನ ಮಗ್ಗುಲು ಬದಲಿಸಿ ಆಡಿದ ಆಟಕ್ಕೆ ಲಾಲು ಮಣ್ಣುಮುಕ್ಕಿದರು. ಜಗದೀಶ್ ಶೆಟ್ಟರ್ ಅವರ ಮುಂದೆ ಯಡಿಯೂರಪ್ಪನವರು ಆಡುತ್ತಾ ಬಂದ ಜಾತಿಯ ಆಟದ ಮಾದರಿ ಇದೆ. ಅದನ್ನೇ ಇಟ್ಟುಕೊಂಡು ಆಡುವುದು ಅವರಿಗೂ ಕಷ್ಟವೇನಲ್ಲ. ಯಡಿಯೂರಪ್ಪನವರಷ್ಟು ಜಾತಿ-ಮಠಗಳ ಮೋಹಿಯಲ್ಲದೆ ಇದ್ದರೂ ಶೆಟ್ಟರ್ ನಾಳೆಯಿಂದ ರಾಜ್ಯದ ಪ್ರಮುಖ ಮಠಗಳಿಗೆ ಹೋಗಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದ ಕೂಡಲೇ ಯಡಿಯೂರಪ್ಪನವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಖಂಡಿತ. ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಅನಂತಕುಮಾರ್ ಮತ್ತು ದೇವೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಬಿಟ್ಟರೆ ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.

ಬದಲಾಗುತ್ತಿರುವ ವೃತ್ತಿಯ ಚಕ್ರವ್ಯೂಹದಲ್ಲಿ ಪತ್ರಕರ್ತ July 02, 2012

ನಾಲ್ಕು ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ, ಪತ್ರಕರ್ತ ಯುದ್ಧಭೂಮಿಯ ಚಕ್ರವ್ಯೂಹ ದಲ್ಲಿದ್ದಾನೆ. ಭ್ರಷ್ಟ, ಅಪ್ರಾಮಾಣಿಕ,  ಸ್ವಾರ್ಥಿ, ...ಇತ್ಯಾದಿ ಟೀಕಾಸ್ತ್ರಗಳು ಆತನನ್ನು ಒಂದೇ ಸಮನೆ ಇರಿಯುತ್ತಿವೆ.  

ವೈಯಕ್ತಿಕ ನೆಲೆಯಲ್ಲಿ ಈ ಆರೋಪಗಳನ್ನು ನಿರಾಕರಿಸಬಹುದಾದರೂ ತಾವು ಭಾಗವಾಗಿರುವ ಇಡೀ ಸಮುದಾಯವನ್ನು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಆತನೂ ಇಲ್ಲ. 

ಹೆಚ್ಚೆಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿರೋಧಪಕ್ಷದ ನಾಯಕರನ್ನು ಉಡಾಫೆಯಿಂದ ಕೇಳಿದಂತೆ `ನೀವೇನು ಸಾಚಾನಾ?` ಎಂದು ಪ್ರಶ್ನಿಸಿ ಬಾಯಿಮುಚ್ಚಿಸಬಹುದು. 

ಎಲ್ಲ ವೃತ್ತಿಗಳಂತೆ ಪತ್ರಿಕೆಗಳಲ್ಲಿಯೂ ಒಂದಷ್ಟು `ಕಪ್ಪುಕುರಿ`ಗಳು ಹಿಂದೆಯೂ ಇದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಉಳಿದವರನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವಷ್ಟರ ಮಟ್ಟಿಗೆ ಈ `ಕಪ್ಪುಕುರಿ`ಗಳ ಸಂಖ್ಯೆ ಬೆಳೆಯುತ್ತಿದೆ. ಪತ್ರಕರ್ತನ ಆದರ್ಶದ ಹಾದಿ ತಪ್ಪಿದ್ದೆಲ್ಲಿ?

ಪತ್ರಕರ್ತನದ್ದು ಏಕವ್ಯಕ್ತಿ ಪ್ರದರ್ಶನ ಅಲ್ಲ, ಸಾಮೂಹಿಕ ಪ್ರಯತ್ನದ ಮೂಲಕವೇ ಪತ್ರಿಕೆ ರೂಪುಗೊಳ್ಳುವುದು. ಬದಲಾಗುತ್ತಿರುವ ಈ `ಸಮೂಹ`ವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಮಾತ್ರ ಪತ್ರಕರ್ತರಲ್ಲಿನ ಬದಲಾವಣೆಯನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಪತ್ರಕರ್ತರ ತಲೆಮೇಲೆ ಆತನ ಮಾಲೀಕರಿರುತ್ತಾರೆ, ಕಣ್ಣೆದುರಿನಲ್ಲಿ ಪತ್ರಿಕೆಯ ಓದುಗರಿರುತ್ತಾರೆ, ಅಕ್ಕಪಕ್ಕದಲ್ಲಿ ಸಹೋದ್ಯೋಗಿಗಳಿರುತ್ತಾರೆ, ಬೆನ್ನಹಿಂದೆ ಕಟ್ಟಿಕೊಂಡ ಸಂಸಾರ ಇರುತ್ತದೆ, ಇವುಗಳ ಮಧ್ಯೆ ಆತ ಇರುತ್ತಾನೆ, ಆತನೊಳಗೆ ಸದಾ ಪ್ರಶ್ನಿಸುವ, ಎಚ್ಚರಿಸುವ, ಕುಟುಕುವ, ಬುದ್ಧಿಹೇಳುವ ಆತ್ಮಸಾಕ್ಷಿ ಇರುತ್ತದೆ.

ಮುಖ್ಯವಾಗಿ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣ ಯುಗ ಪ್ರಾರಂಭವಾದ ನಂತರದ ಎರಡು ದಶಕಗಳಲ್ಲಿ ಪತ್ರಕರ್ತನ ಸುತ್ತಮುತ್ತ ಇರುವ ಈ ಎಲ್ಲ ಪಾತ್ರಧಾರಿಗಳು ಗುರುತಿಸಲಾಗದಷ್ಟು ಬದಲಾಗಿ ಹೋಗಿದ್ದಾರೆ. ಬದಲಾಗುತ್ತಲೇ ಇರುವ ಈ ಪಾತ್ರಧಾರಿಗಳ ಒತ್ತಡಗಳ ನಡುವೆ ಪತ್ರಕರ್ತ ತನ್ನ ಆತ್ಮಸಾಕ್ಷಿಯ ಕರೆಗೆ ಓಗೊಡುತ್ತಾ ಕೆಲಸಮಾಡಬೇಕಾಗಿದೆ.

ಮೊದಲನೆಯದಾಗಿ  ಮಾಲೀಕ ವರ್ಗ.  169 ವರ್ಷಗಳ ಹಿಂದೆ ಕಲ್ಲಚ್ಚನ್ನು ಕೊರೆದು ಅಚ್ಚುಮೊಳೆ ಮಾಡಿ ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ` ಪ್ರಕಟಿಸಿದ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ನ ಕಾಲದಿಂದ ಪತ್ರಿಕಾವೃತ್ತಿ ಬಹುದೂರ ಸಾಗಿ ಬಂದಿದೆ. ನಿಧಾನವಾಗಿ ವಾಣಿಜ್ಯೀಕರಣಗೊಳ್ಳುತ್ತಾ ಬಂದ ಈ ವೃತ್ತಿ ಈಗ ಪೂರ್ಣಪ್ರಮಾಣದ ಉದ್ಯಮವಾಗಿ ಪರಿವರ್ತನೆಗೊಂಡಿದೆ.
 
ಬದಲಾದ ಪರಿಸ್ಥಿತಿಯಲ್ಲಿ ಹೊಸ ಆಟಗಾರರು ಮೈದಾನ ಪ್ರವೇಶ ಮಾಡಿದ್ದಾರೆ, ಆಟ ಬದಲಾದಾಗ ಅದರ ನಿಯಮಾವಳಿಗಳೂ ಬದಲಾಗುತ್ತವೆ. ಹಳೆಯ ಆಟಗಾರರು ಹಳೆಯ ನಿಯಮಗಳ ಪ್ರಕಾರವೇ ಆಡುತ್ತೇನೆಂದು ಹೊರಟರೆ ಮೈದಾನದಿಂದ ಹೊರಬೀಳಬೇಕಾಗುತ್ತದೆ. ಉದ್ಯಮವನ್ನು ಸಮಾಜ ಸೇವಾ ಸಂಸ್ಥೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುವುದಿಲ್ಲ, ಅಂತಹ ದುಸ್ಸಾಹಸ ಮಾಡಿದವರು  ದಿವಾಳಿಯಾಗಬೇಕಾಗುತ್ತದೆ.

ಉದ್ಯಮದ ರೂಪ ಪಡೆದ ನಂತರ ಮಾಧ್ಯಮದ ಕಚೇರಿಯೊಳಗಿನ ಸಂಪಾದಕೀಯ ಮತ್ತು ಜಾಹೀರಾತು ವಿಭಾಗಗಳ ನಡುವಿನ ಗೆರೆ  ತೆಳ್ಳಗಾಗುತ್ತಿದೆ.  ಮುದ್ರಣ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಯ ಮುಖಬೆಲೆಯನ್ನು, ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಹೆಚ್ಚಿಸಲಾರದ ಮಾಲೀಕರು  ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ.
 
ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಮಾಧ್ಯಮಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಈ ವ್ಯವಸ್ಥೆ ಮಾಧ್ಯಮರಂಗವನ್ನು ಸದಾ ಉದ್ಯಮಿಗಳು ಮತ್ತು ಸರ್ಕಾರದ ಋಣಭಾರದಲ್ಲಿರುವಂತೆ ಮಾಡಿದೆ.
 
ಈ ಅನಾರೋಗ್ಯಕಾರಿ ವಾತಾವರಣದಲ್ಲಿಯೇ ಕಾಸಿಗಾಗಿ ಸುದ್ದಿಯಂತಹ ಲಾಲಸೆ, ರಾಡಿಯಾ ಟೇಪ್‌ನಂತಹ ವೃತ್ತಿದ್ರೋಹಗಳು ಹುಟ್ಟಿಕೊಂಡಿರುವುದು.  ಪತ್ರಿಕೋದ್ಯಮ  ಅತ್ತ ಪೂರ್ಣಪ್ರಮಾಣದಲ್ಲಿ ಉದ್ಯಮವಾಗಿಯೂ ಬೆಳೆಯದೆ, ಇತ್ತ ಆದರ್ಶ ವೃತ್ತಿಯಾಗಿಯೂ ಉಳಿಯದೆ ತ್ರಿಶಂಕು ಸ್ಥಿತಿಯಲ್ಲಿದೆ. ಇದನ್ನು ಓದುಗರಿಗೆ ಅರ್ಥಮಾಡಿಕೊಡಲು ಪತ್ರಿಕೆಯ ಮಾಲೀಕರಿಗೂ ಸಾಧ್ಯವಾಗಿಲ್ಲ.

 ವೃತ್ತಿಯಿಂದ ಉದ್ಯಮವಾಗಿ ಬದಲಾವಣೆಗೊಂಡ ಈ ಕ್ಷೇತ್ರಕ್ಕೆ ಈಗ ರಾಜಕಾರಣಿಗಳು ಪ್ರವೇಶಿಸುತ್ತಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರಗಳ ಬಹುತೇಕ ಟಿವಿ ಚಾನೆಲ್‌ಗಳು ರಾಜಕಾರಣಿಗಳ ಒಡೆತನದಲ್ಲಿವೆ,ಪತ್ರಿಕೆಗಳು ಕೂಡಾ ಇದಕ್ಕೆ ಹೊರತಲ್ಲ. 

ಇದು ಉದ್ಯಮಿಗಳ ಪ್ರವೇಶಕ್ಕಿಂತಲೂ ಅಪಾಯಕಾರಿ ಬೆಳವಣಿಗೆ. ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಬುನಾದಿ. ರಾಜಕಾರಣಿಗಳ ಒಡೆತನದಲ್ಲಿರುವ ಮಾಧ್ಯಮಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಜನಾಭಿಪ್ರಾಯವನ್ನೇ ಉತ್ಪಾದಿಸುವ ಪ್ರಯತ್ನ ನಡೆಸಿವೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸಾವಿನ ನಂತರ ಅವರ ಒಡೆತನದ ಟಿವಿಚಾನೆಲ್ ಸೃಷ್ಟಿಸಿದ್ದ ಸಮೂಹ ಸನ್ನಿ ಇದಕ್ಕೆ ಉತ್ತಮ ಉದಾಹರಣೆ. ತಮಿಳುನಾಡು, ಕರ್ನಾಟಕಗಳು ಇದರಲ್ಲಿ ಹಿಂದೆ ಬಿದ್ದಿಲ್ಲ. 

ಪತ್ರಿಕಾಮಂಡಳಿಯ ಏರ್‌ಕಂಡೀಷನ್ ಕಚೇರಿಯೊಳಗೆ ಕೂತಿರುವ ಅದರ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಂತೆ `ಐಶ್ಚರ್ಯ ರೈ ಅವರಿಗೆ ಮಗು ಹುಟ್ಟಿದ್ದನ್ನು ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳಿಗೆ, ಪೋಷಕಾಂಶಗಳ ಕೊರತೆಯಿಂದ ಸಾಯುತ್ತಿರುವ ಮಕ್ಕಳು ಸುದ್ದಿಯೇ ಅಲ್ಲ` ಎಂದು ಚುಚ್ಚುವುದು ಸುಲಭ. ಆದರೆ ವಾಸ್ತವ ಬೇರೆಯಾಗಿದೆ.
 
ಐಶ್ಚರ್ಯರೈ ಕನಿಷ್ಠ ಒಂದು ಡಜನ್ ಉತ್ಪನ್ನಗಳಿಗೆ ಮಾಡೆಲ್, ಆಕೆಯ ಸುದ್ದಿ ಪ್ರಕಟಿಸಿದರೆ ಜಾಹೀರಾತು ಬರುತ್ತದೆ, ಬಡ ಮಕ್ಕಳ ಬಗ್ಗೆ ಬರೆದರೆ ಏನು ಸಿಗುತ್ತದೆ? ಇನ್ನೂ ಉಳಿದುಕೊಂಡಿರುವ ಒಂದಷ್ಟು ಸಹೃದಯಿಗಳು ಅಯ್ಯ ಪಾಪ  ಎಂದು ಉದ್ಗರಿಸಬಹುದು ಅಷ್ಟೆ.
 
ಇಂತಹ ಸ್ಥಿತಿಗೆ ಮಾಧ್ಯಮಕ್ಷೇತ್ರವನ್ನು ತಳ್ಳಿದ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಬಗೆಯ ಬಗ್ಗೆ ನ್ಯಾ.ಖಟ್ಜು ಯೋಚನೆ ಮಾಡಿದರೆ ಅವರು ಬಯಸುವಂತೆ ಪತ್ರಿಕೆಗಳು,ಟಿವಿಚಾನೆಲ್‌ಗಳು ವರದಿ ಮಾಡಲು ಸಾಧ್ಯವಾಗಬಹುದು.

ಎರಡನೆಯದಾಗಿ ಪತ್ರಕರ್ತನ ಮುಂದಿರುವ ಓದುಗರು ಮತ್ತು ಟಿವಿ ವೀಕ್ಷಕರು. ಪ್ರಜ್ಞಾವಂತ ಓದುಗರೇ ಪತ್ರಿಕೆಯ ಶಕ್ತಿ, ಅಂತಹವರನ್ನೊಳಗೊಂಡ ಜಾಗೃತ ಸಮಾಜದಲ್ಲಿ ಮಾತ್ರ ಪತ್ರಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. 

ಶಿಕ್ಷಣ, ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯಿಂದಾಗಿ 2-3ದಶಕಗಳ ಹಿಂದಿನ ಓದುಗರಿಗಿಂತ ಈಗಿನವರು ಹೆಚ್ಚು ಪ್ರಜ್ಞಾವಂತರು. ಟಿವಿಚಾನೆಲ್‌ಗಳು ಹಳ್ಳಿಮನೆಗಳನ್ನೂ ಪ್ರವೇಶಿಸಿದ ನಂತರ ಅನಕ್ಷರಸ್ಥರು ಕೂಡಾ  ಸಮಕಾಲೀನ ವಿದ್ಯಮಾನಗಳನ್ನು ನೋಡಿ, ಕೇಳಿ ತಿಳಿದುಕೊಳ್ಳಬಲ್ಲರು. 

ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್ ಯಾವ ಸುದ್ದಿಯನ್ನೂ ಬಚ್ಚಿಡುವ ಸ್ಥಿತಿಯಲ್ಲಿ ಇಲ್ಲ. ಒಬ್ಬರು ಬಚ್ಚಿಟ್ಟರೆ ಇನ್ನೊಬ್ಬರು ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಎಲ್ಲವೂ ಬಟಾಬಯಲು. ಆದರೆ ಈ ಜನಜಾಗೃತಿಯ ಪ್ರತಿಬಿಂಬ ಓದುಗ ಸಮುದಾಯದ ನೀತಿ-ನಿರ್ಧಾರಗಳಲ್ಲಿ ಹುಡುಕಲು ಹೊರಟರೆ ನಿರಾಶೆಯಾಗುತ್ತದೆ.

ಇದಕ್ಕೆ ಉತ್ತಮ ಉದಾಹರಣೆ ರಾಜ್ಯದ ಬಿಜೆಪಿ ನಡೆಸಿದ `ಆಪರೇಷನ್ ಕಮಲ`ದ ನಂತರದ ಬೆಳವಣಿಗೆಗಳು. ಪಕ್ಷಾಂತರ ಮಾಡಿದ ಶಾಸಕರು ಯಾವ ಆಮಿಷಕ್ಕೆ ಬಲಿಯಾಗಿದ್ದರು ಎನ್ನುವುದನ್ನು ಎಲ್ಲ ಮಾಧ್ಯಮಗಳು ಕೂಗಿಕೂಗಿ ಹೇಳಿದ್ದವು. ಆ ಶಾಸಕರ ಬಗ್ಗೆ ಮತದಾರರಿಗೆ ಸಂಪೂರ್ಣ ಮಾಹಿತಿ ಇತ್ತು.
 
ಹೀಗಿದ್ದರೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಅವರು ಮತ್ತೆ ಅದೇ ಪಕ್ಷಾಂತರಿ ಶಾಸಕರನ್ನು ಉಪಚುನಾವಣೆಯಲ್ಲಿ ಆರಿಸಿಕಳುಹಿಸುತ್ತಾರೆ. ವಿಜ್ಞಾನದ ಪದವೀಧರರೇ ಟಿವಿ ಚಾನೆಲ್‌ಗಳಲ್ಲಿ ಕಾಣಿಸಿಕೊಳ್ಳುವ ಜ್ಯೋತಿಷಿ-ಬಾಬಾಗಳ ಮುಂದೆ ಬಾಯಿಬಿಟ್ಟು ಕೂತಿರುತ್ತಾರೆ, ಎಂಜಲೆಲೆಯ ಮೇಲೆ ಉರುಳಾಡುತ್ತಿರುತ್ತಾರೆ. 

ಸ್ವಜಾತಿ ರಾಜಕಾರಣಿಯ ಪರ ವಾದಕ್ಕೆ ನಿಲ್ಲುತ್ತಾರೆ. ಪತ್ರಿಕೆ ಜನಪರವಾಗಿರಬೇಕೆಂದು ಬೋಧನೆ ಮಾಡುವ ಈ ಓದುಗರು ಮಾರುಕಟ್ಟೆಯಲ್ಲಿ ಇನ್ನೊಂದು ಪತ್ರಿಕೆ ಎಂಟಾಣೆ ಕಡಿಮೆಮಾಡಿದರೆ ಆ ಕಡೆ ಓಡುತ್ತಾರೆ.
 
ಅನೈತಿಕ ಪೈಪೋಟಿಯ ದರ ಸಮರ ಅಂತಿಮವಾಗಿ ಜನರ ಜತೆಯಲ್ಲಿರಬೇಕಾದ ಪತ್ರಿಕೆಯನ್ನು ಜಾಹೀರಾತುದಾರರ ಕಾಲಬುಡಕ್ಕೆ ಕೊಂಡೊಯ್ದು ಅಡ್ಡಬೀಳಿಸುತ್ತದೆ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ. ಹತ್ತು ರೂಪಾಯಿ ಉತ್ಪಾದನಾವೆಚ್ಚದ ಪತ್ರಿಕೆ ಏಳು ರೂಪಾಯಿ ಕೊಡುವ ಜಾಹಿರಾತುದಾರರ ಬದಲಿಗೆ ಮೂರು ರೂಪಾಯಿಯನ್ನಷ್ಟೇ ಕೊಡುವ ಓದುಗನಿಗೆ ಹೇಗೆ ನಿಷ್ಠೆಯಿಂದಿರಲು ಸಾಧ್ಯ?
ಮೂರನೆಯದಾಗಿ ಅಕ್ಕಪಕ್ಕದಲ್ಲಿರುವ ಸಹೋದ್ಯೋಗಿಗಳು. 

25 ವರ್ಷಗಳ ಹಿಂದೆ ನನ್ನಂತಹವರು ಈ ವೃತ್ತಿ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯನ್ನು ಪಾಲಿಸುವುದು ದೊಡ್ಡ ಸವಾಲು ಆಗಿರಲೇ ಇಲ್ಲ. ರಾತ್ರಿಪಾಳಿ ಮುಗಿಸಿ ಪ್ರೆಸ್‌ನಲ್ಲಿಯೇ ನ್ಯೂಸ್‌ಪ್ರಿಂಟ್ ಎಳೆದುಕೊಂಡು ಮಲಗಿದಾಗ, ಪಕ್ಕದಲ್ಲಿ ಹಾಗೆಯೇ ಮಲಗಿದ್ದ ಹತ್ತು ಮಂದಿ ಸಹೋದ್ಯೋಗಿಗಳಿರುತ್ತಿದ್ದರು.
 
ಕ್ಯಾಂಟೀನ್‌ನಲ್ಲಿ ಸಾಲ ಕೇಳಲು ಮುಜುಗರ ಆಗುತ್ತಿರಲಿಲ್ಲ, ಯಾಕೆಂದರೆ ಸಾಲದ ಪಟ್ಟಿಯಲ್ಲಿ ಆಗಲೇ ಸಹೋದ್ಯೋಗಿಗಳ ಹೆಸರುಗಳು ರಾರಾಜಿಸುತ್ತಿರುತ್ತಿತ್ತು. ಆದರೆ ಕಾಲ ತ್ವರಿತ ಗತಿಯಲ್ಲಿ ಬದಲಾಗಿ ಹೋಗಿದೆ. 

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ಜಾಹೀರಾತು ಮತ್ತು ಏರುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಪತ್ರಿಕಾ ಸಂಸ್ಥೆಗಳು, ಟಿವಿ ಚಾನೆಲ್‌ಗಳು ನಿರೀಕ್ಷಿತ ರೀತಿಯಲ್ಲಿ ಲಾಭ ಗಳಿಸಲಾಗುತ್ತಿಲ್ಲ. ಆದರೆ ಅವುಗಳಲ್ಲಿ ಕೆಲಸ ಮಾಡುವ ಕೆಲವು ಉದ್ಯೋಗಿಗಳ ಶ್ರಿಮಂತಿಕೆ ಏರುತ್ತಲೇ ಇದೆ.  

ಆದಾಯ ಮೀರಿದ ಆಸ್ತಿಗಳಿಸಿದ ಆರೋಪ ಸರ್ಕಾರಿ ನೌಕರರ ಮೇಲೆ ಮಾತ್ರವಲ್ಲ ಕೆಲವು ಪತ್ರಕರ್ತರ ಮೇಲೂ ಇದೆ. ನೌಕರರ ಮನೆ ಮೇಲೆ ದಾಳಿ ನಡೆಸುವ ಲೋಕಾಯುಕ್ತರು ಪತ್ರಕರ್ತರ ಮೇಲೂ ನಡೆಸಬಹುದಲ್ಲವೇ ಎಂದು ಜನ ಕೇಳುತ್ತಿರುವುದು ಇದೇ ಕಾರಣಕ್ಕೆ. 

ಇಂತಹ ವ್ಯವಸ್ಥೆಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕೆನ್ನುವವರು ಬದುಕುವ ಕಲೆ ಗೊತ್ತಿಲ್ಲದ ಹುಚ್ಚರು ಎಂದು ಅನಿಸಿಕೊಳ್ಳುತ್ತಾರೆ ಅಷ್ಟೆ. ಭ್ರಷ್ಟರಾಗುವುದಕ್ಕೆ ಸಮರ್ಥನೆಗಳನ್ನು ಹುಡುಕಿಕೊಂಡು ಹೊರಟರೆ ಊರೆಲ್ಲ ಉದಾಹರಣೆಗಳು ಸಿಗುತ್ತವೆ. ಪ್ರಾಮಾಣಿಕವಾಗಿ ಉಳಿಯಬಯಸುವ ಪತ್ರಕರ್ತ ಸಮರ್ಥನೆಗಳನ್ನು ತನ್ನೊಳಗೆ ಹುಡುಕಬೇಕು. ಇಡೀ ಜಗತ್ತು ಭ್ರಷ್ಟಗೊಂಡರೂ ನಾನು ಭ್ರಷ್ಟನಾಗಲಾರೆ ಎಂಬ ತೀರ್ಮಾನಕ್ಕೆ ಬರಲು ಆತನಿಗೆ ಸಾಧ್ಯವಾಗಬೇಕು.

ಕೊನೆಯದಾಗಿ ಪತ್ರಕರ್ತ ಬೆನ್ನಿಗೆ ಕಟ್ಟಿಕೊಂಡ ಸಂಸಾರ.  ಈತ ಒಂದು ಆದರ್ಶ ವೃತ್ತಿಯಲ್ಲಿದ್ದಾನೆ ಎನ್ನುವ ಕಾರಣಕ್ಕೆ ಯಾರೂ ಮನೆಬಾಡಿಗೆ ಕಡಿಮೆ ಮಾಡುವುದಿಲ್ಲ, ಕಿರಾಣಿ ಅಂಗಡಿಯವ ಪುಕ್ಕಟೆಯಾಗಿ ಅಕ್ಕಿ-ಬೇಳೆ ತಂದುಹಾಕುವುದಿಲ್ಲ. ಈತನ ಮನೆಯ ಒಂದು ಪಕ್ಕದಲ್ಲಿ ಇನ್ಫೋಸಿಸ್‌ನ ಉದ್ಯೋಗಿ ಇರುತ್ತಾನೆ, ಇನ್ನೊಂದು ಪಕ್ಕದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಇರುತ್ತಾನೆ. 

ಪ್ರತಿಯೊಬ್ಬನ ಸಂಸಾರದ ಬಹುಪಾಲು ಬೇಕುಬೇಡಗಳು ನೆರೆಹೊರೆಯವರನ್ನು ನೋಡಿಯೇ ನಿರ್ಧಾರವಾಗುವುದು. ಆಧುನಿಕ ಬದುಕಿನಲ್ಲಿ ಬಹುಪಾಲು ಗಳಿಕೆ ವ್ಯಯವಾಗುತ್ತಿರುವುದು ಸಾಮಾಜಿಕವಾದ ಹುಸಿ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವ ವ್ಯಸನಕ್ಕಾಗಿ. ಇದನ್ನು ಮೀರಿಹೋಗುವ ಇಲ್ಲವೇ ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿಯೂ ಇಲ್ಲ. 

ಇವೆಲ್ಲವನ್ನೂ ಯೋಚನೆ ಮಾಡುತ್ತಾ ಹೋದರೆ ಈ ವೃತ್ತಿ ಸಾಕಪ್ಪ ಸಾಕು ಎಂಬ ತೀರ್ಮಾನಕ್ಕೆ ಬರಲು ಹತ್ತು ಕಾರಣಗಳು ಸುಲಭದಲ್ಲಿ ಸಿಗುತ್ತವೆ, ಆದರೆ ಪತ್ರಿಕೆಯನ್ನು ಬಿಡಿಸಿಕೊಂಡು ಕೂತರೆ ಇದೇ ವೃತ್ತಿಯಲ್ಲಿ ಮುಂದುವರಿಯಲು ನೂರು ಕಾರಣಗಳು ಪುಟಪುಟಗಳಲ್ಲಿ ಸಿಗುತ್ತವೆ. 

ಸಮಾಜ ಎಷ್ಟೇ ಕೆಟ್ಟುಹೋದರೂ ಪ್ರಾಮಾಣಿಕರಿಗೆ, ಮಾನವಂತರಿಗೆ ಬದುಕಲು ಜಾಗ ಇದ್ದೇ ಇರುತ್ತದೆ.  ಅದೇ ರೀತಿ ಮಾಧ್ಯಮ ಕ್ಷೇತ್ರ ಎಷ್ಟೇ ಕೆಟ್ಟುಹೋದರೂ ಜನಪರ ಪತ್ರಿಕೋದ್ಯಮಕ್ಕೆ ಜಾಗ ಇದ್ದೇ ಇರುತ್ತದೆ. ಅದು ಸ್ವಲ್ಪ ಕಡಿಮೆಯಾಗಿರಬಹುದು ಅಷ್ಟೆ. 

ಉದ್ಯಮವಾದ ವೃತ್ತಿ, ಬದಲಾಗಿ ಹೋಗಿರುವ ಓದುಗರು, ಸಹೋದ್ಯೋಗಿಗಳು, ಸಂಸಾರದ ಒತ್ತಡದ ನಡುವೆಯೂ ವೃತ್ತಿನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆನ್ನುವವರಿಗೆ  ಅವಕಾಶ ಇದೆ.
 
ಸಮಸ್ಯೆ ಅವಕಾಶದ್ದು ಅಲ್ಲವೇ ಅಲ್ಲ, ಅದನ್ನು ಬಳಸಿಕೊಳ್ಳುವ ಪತ್ರಕರ್ತರದ್ದು. ಹಳ್ಳಿಗಳಿಗೆ ಹೋಗಿ ಬರಪರಿಸ್ಥಿತಿಯ ವರದಿ ಮಾಡಿಕೊಂಡು ಬರುತ್ತೇನೆ ಎಂದೋ, ಮಲದ ಗುಂಡಿಗೆ ಬಿದ್ದು ಸಾಯುತ್ತಿರುವ ಪೌರಕಾರ್ಮಿಕರ ಬಗ್ಗೆ ಬರೆಯುತ್ತೇನೋ ಎಂದೋ ಒಬ್ಬ ವರದಿಗಾರ ಆಸಕ್ತಿ ತೋರಿದರೆ ಸಾಮಾನ್ಯವಾಗಿ ಯಾವ ಸಂಪಾದಕರೂ ಬೇಡ ಎಂದು ಹೇಳಲಾರರು. 

ಆ ರೀತಿಯ ಆಸಕ್ತಿಯನ್ನು ತೋರಿಸುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ.

Thursday, June 28, 2012

ಪ್ರಜಾಪ್ರಭುತ್ವಕ್ಕೆ ಸಮ್ಮಿಶ್ರ ಸರ್ಕಾರಗಳಷ್ಟೇ ಕಂಟಕ ಅಲ್ಲ June 25, 2012

`ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು ಮೂಲೆಗುಂಪಾಗಲು ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಅಧಿಕಾರ ಕೇಂದ್ರಗಳು ದುರ್ಬಲಗೊಳ್ಳುತ್ತಾ ಬರಲು ಸಮ್ಮಿಶ್ರ ಸರ್ಕಾರಗಳು ಕಾರಣ` ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ವಿಷಾದದ ದನಿಯಲ್ಲಿ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭೆಯ ವಜ್ರಮಹೋತ್ಸವ ಸಮಾರಂಭದಲ್ಲಿ  ನೀಡಿದ ಪ್ರಧಾನ ಭಾಷಣದಲ್ಲಿ ಅವರ ಈ ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ಷ್ಮಮನಸ್ಸಿನ ನ್ಯಾಯಮೂರ್ತಿಗಳಿಗೆ ತಾನು ಹೇಳಿದ್ದು ಅತಿಯಾಯಿತು ಎಂದು ಅನಿಸಿತೋ ಏನೋ, `ಪ್ರಧಾನಿ ಮತ್ತು ಮುಖ್ಯಮಂತ್ರಿ ಸ್ಥಾನ ದುರ್ಬಲಗೊಳ್ಳಲು ಅದೊಂದೇ ಕಾರಣ ಅಲ್ಲ` ಎನ್ನುವ ಸಮಜಾಯಿಷಿ ನೀಡಿ  ಈ ವಿವಾದಾತ್ಮಕ ವಿಷಯವನ್ನು ಬೆಳೆಸಲುಹೋಗದೆ ಅಲ್ಲಿಗೆ ಮುಗಿಸಿಬಿಟ್ಟಿದ್ದರು.

ಬಹಳಷ್ಟು ದೆಹಲಿ ಕೇಂದ್ರಿತ ರಾಜಕೀಯ ಪಂಡಿತರು ಮಾತ್ರವಲ್ಲ ಆಗಾಗ ನಮ್ಮ `ಜನಸಾಮಾನ್ಯರು` ಕೂಡಾ ರಾಜಕೀಯ ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ನಿಟ್ಟುಸಿರಿನ ರೂಪದಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಇನ್ನೂ ಮುಂದುವರಿದು ` ಸಣ್ಣಪುಟ್ಟ ಪಕ್ಷಗಳದ್ದು ಅತಿಯಾಯಿತು, ಸಮ್ಮಿಶ್ರ ಸರ್ಕಾರಕ್ಕಿಂತ ರಾಷ್ಟ್ರೀಯ ಪಕ್ಷದ ಆಡಳಿತವೇ ಪರಿಹಾರ` ಎಂದೋ ಇಲ್ಲವೇ `ಬಲಿಷ್ಠ ಹೈಕಮಾಂಡ್ ಬೇಕು` ಎಂಬ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಕೆಲವರು ಇನ್ನಷ್ಟು ಮುಂದೆ ಹೋಗಿ `ತುರ್ತುಪರಿಸ್ಥಿತಿಯ ದಿನಗಳೇ ಚೆನ್ನಾಗಿತ್ತು` ಎಂಬ ಅತಿರೇಕದ ಪ್ರತಿಕ್ರಿಯೆಯನ್ನೂ ನೀಡುತ್ತಾರೆ. ಇದನ್ನೆಲ್ಲ ಕೇಳಿದಾಕ್ಷಣ `ಹೌದಲ್ಲಾ, ನಮ್ಮ ರಾಜಕೀಯ ವ್ಯವಸ್ಥೆಗೆ ಹಿಡಿದ ರೋಗದ ಮೂಲವೇ ಸಿಕ್ಕಿಬಿಟ್ಟಿತಲ್ಲಾ` ಎಂದು ಅನಿಸುವುದು ಕೂಡಾ ಸಹಜ.

 ಇತಿಹಾಸದ ದಾರಿಯಲ್ಲಿ ಸ್ವಲ್ಪ ಹಿಂದಕ್ಕೆ ಹೋಗಿ ಎಪ್ಪತ್ತರ ದಶಕದಲ್ಲಿ ನಡೆದ ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳೋಣ. ಏಕಪಕ್ಷದ ಆಡಳಿತದ ಅಂತ್ಯವೇ ಅಂದಿನ ರಾಜಕೀಯ ಮತ್ತು ಸಾರ್ವಜನಿಕ ಹೋರಾಟದ ಮುಖ್ಯ ಘೋಷಣೆಯಾಗಿತ್ತಲ್ಲವೇ? ಇಂದಿರಾಗಾಂಧಿ ನಾಯಕತ್ವದಲ್ಲಿ ಸರ್ವಾಧಿಕಾರಿಯ ರೂಪ ಪಡೆದ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದ್ದುದು ಮಾತ್ರವಲ್ಲ ಸಂವಿಧಾನವನ್ನೇ ತಿರುಚಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿತ್ತಲ್ಲವೇ?

ಏಕಪಕ್ಷದ ಈ `ದಾದಾಗಿರಿ`ಯಿಂದಾಗಿ ಸಂವಿಧಾನದ ಆಶಯವಾದ ಒಕ್ಕೂಟ ವ್ಯವಸ್ಥೆಯೇ ಮುರಿದುಬೀಳುತ್ತಿದೆ ಎಂದಲ್ಲವೇ ರಾಜ್ಯ ಸರ್ಕಾರಗಳು ಆರೋಪಿಸುತ್ತಿದ್ದುದು? ಈ ಹೈಕಮಾಂಡ್ (ಇದರ ನಿಜವಾದ ಅರ್ಥ ಏನೆಂದು ಈಗಲೂ ಯಾರಿಗೂ ತಿಳಿದಿಲ್ಲ) ಸಂಸ್ಕೃತಿಯಿಂದಾಗಿ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವವೇ ನಾಶವಾಗಿ ಉಸಿರುಗಟ್ಟಿದ್ದಕ್ಕಲ್ಲವೇ, ಬಾಬು ಜಗಜೀವನ್‌ರಾಂ, ಚಂದ್ರಶೇಖರ್ ಮೊದಲಾದ ಹಿರಿಯ ನಾಯಕರು `ವಿಭೀಷಣ`ರಾಗಿ ಕಾಂಗ್ರೆಸ್ ತೊರೆದು ವಿರೋಧಿಪಾಳಯ ಸೇರಿಕೊಂಡಿದ್ದು? ಈಗ ಒಮ್ಮಿಂದೊಮ್ಮೆಲೇ ಈ ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವದ ರಕ್ಷಕನಂತೆ ಅನಿಸಿಕೊಳ್ಳಲು ಏನು ಕಾರಣ?
ಸಮ್ಮಿಶ್ರ ಸರ್ಕಾರಗಳು ಅಸ್ತಿತ್ವಕ್ಕೆ ಬಂದದ್ದೇ  ಏಕಪಕ್ಷದ ಸ್ವೇಚ್ಛಾಚಾರಕ್ಕೆ ಪ್ರತಿಕ್ರಿಯೆ ರೂಪದಲ್ಲಿ.

ಚುನಾವಣೆಯ ಕಣದಲ್ಲಿ ಪ್ರತ್ಯೇಕವಾಗಿ ನಡೆಸುವ ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷದ ಆಧಿಪತ್ಯವನ್ನು ಮುರಿಯಲು ಸಾಧ್ಯ ಇಲ್ಲ ಎನ್ನುವ ಜ್ಞಾನೋದಯವೇ 1977ರಲ್ಲಿ ಪ್ರಾರಂಭಗೊಂಡ ಮೈತ್ರಿಕೂಟದ ರಾಜಕೀಯಕ್ಕೆ ಪ್ರೇರಣೆ. ಕಾಂಗ್ರೆಸ್ (ಒ), ಬಿಎಲ್‌ಡಿ,ಜನಸಂಘ ಮತ್ತು ಸೋಷಿಯಲಿಷ್ಟ್ ಪಕ್ಷಗಳು ವಿಲೀನಗೊಂಡು ಜನತಾಪಕ್ಷ ರಚನೆಗೊಂಡ ಕಾರಣ ಶುದ್ಧ ಅರ್ಥದಲ್ಲಿ ಅದನ್ನು ಮೈತ್ರಿಕೂಟ ಎಂದು ಹೇಳಲಾಗುವುದಿಲ್ಲ.

ಆದರೆ ಕಾಂಗ್ರೆಸ್ ಪಕ್ಷದಿಂದ ಹೊರಬಂದ ಜಗಜೀವನ್‌ರಾಂ ಅವರು ಪ್ರಜಾತಾಂತ್ರಿಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಕಟ್ಟಿಕೊಂಡು ಜನತಾಪಕ್ಷದ ಜತೆ ಸೇರಿಕೊಂಡ ಕಾರಣಕ್ಕೆ ಅದನ್ನು ಮೈತ್ರಿಕೂಟ ಎನ್ನಬಹುದಷ್ಟೆ.

ಆ ಕಾಲದ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರದ ವಿರುದ್ಧದ ಜನತೆಯ ಸಿಟ್ಟು ಮತ್ತು ಮೈತ್ರಿಕೂಟದ ಪರವಾದ ಜನಾಭಿಪ್ರಾಯ ಹೇಗಿತ್ತೆಂದರೆ ಬಿಹಾರ, ಉತ್ತರಪ್ರದೇಶ,ಪಂಜಾಬ್, ಹಿಮಾಚಲಪ್ರದೇಶ, ಹರ್ಯಾಣ ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದು ಸ್ಥಾನ ದಕ್ಕಿತ್ತು. 400 ಸದಸ್ಯರು ಅದೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆ ದಿನದಿಂದಲೇ ರಾಷ್ಟ್ರೀಯ ಪಕ್ಷದ ಆಟ ಮುಗಿದು ಸಮ್ಮಿಶ್ರ ಸರ್ಕಾರದ ಹೊಸ ಶಕೆ ಪ್ರಾರಂಭವಾಗಿತ್ತು.

ಅದರ ನಂತರದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷ 1980 (353ಸ್ಥಾನ) ಮತ್ತು 1984 (415)ರಲ್ಲಿ ಮಾತ್ರ ಸ್ವಂತಬಲದಿಂದ ಸರ್ಕಾರ ರಚನೆಮಾಡುವಷ್ಟು ಬಹುಮತ ಗಳಿಸಿತ್ತು ನಿಜ. ಆದರೆ ಆ ಅವಕಾಶ ಸ್ವಾಭಾವಿಕವಾದ ಜನಾಭಿಪ್ರಾಯದಿಂದ ಒದಗಿಬಂದುದಲ್ಲ. 

ತಮ್ಮ ಆಯ್ಕೆಯೇ ಇಷ್ಟುಬೇಗ ಕೆಟ್ಟುಹೋಯಿತಲ್ಲಾ ಎಂಬ ಜನಾಕ್ರೋಶ 1980ರ ಫಲಿತಾಂಶಕ್ಕೆ ಕಾರಣವಾದರೆ, 1984ರ ದೈತ್ಯಬಹುಮತಕ್ಕೆ ಇಂದಿರಾಗಾಂಧಿ ಹತ್ಯೆಯ ವಿರುದ್ಧ ಭುಗಿಲೆದ್ದ ಅನುಕಂಪದ ಅಲೆ ಕಾರಣ. 1991ರಲ್ಲಿ ರಾಜೀವ್‌ಗಾಂಧಿ ಹತ್ಯೆಯ ನಂತರದ ಅನುಕಂಪದ ಅಲೆಯ ಹೊರತಾಗಿಯೂ ಕಾಂಗ್ರೆಸ್ ಗಳಿಸಿದ್ದು 232 ಸ್ಥಾನಗಳನ್ನು ಮಾತ್ರ. 1984ರ ನಂತರ ಕಾಂಗ್ರೆಸ್ ಪಕ್ಷಕ್ಕೆ ಸ್ವಂತಬಲದಿಂದ ಸರ್ಕಾರ ರಚಿಸುವ ಅವಕಾಶವೇ ಸಿಗಲೇ ಇಲ್ಲ.

ಅದಕ್ಕೆ ಪರ್ಯಾಯ ರೂಪದಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಉದಿಸಿಬಂದರೂ ಅದಕ್ಕೆಂದೂ 200ರ ಸಂಖ್ಯೆಯನ್ನೂ ದಾಟಲಾಗಿಲ್ಲ. 1998 ಮತ್ತು 1999ರಲ್ಲಿ ಪಡೆದ ತಲಾ182 ಸ್ಥಾನಗಳೇ ಗರಿಷ್ಠ. ಇವೆಲ್ಲ ಹೇಳುತ್ತಿರುವುದು ದೇಶದ ಮತದಾರರು ರಾಷ್ಟ್ರೀಯ ಪಕ್ಷಗಳಿಂದ ದೂರ ಸರಿಯುತ್ತಿದ್ದಾರೆ ಎಂದಲ್ಲವೇ?

ಪ್ರಜಾಪ್ರಭುತ್ವ ವ್ಯವಸ್ಥೆ ಜನಾಭಿಪ್ರಾಯದ ಬುನಾದಿಯ ಮೇಲೆ ನಿಂತಿರುವಂತಹದ್ದು. ಅಂತಿಮವಾಗಿ ಆಳುವವರು ಯಾರು ಎಂದು ನಿರ್ಧರಿಸುವವರು ಮತದಾರರು. ಇದರಿಂದಾಗಿಯೇ `ಜನ ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವ ವ್ಯಂಗ್ಯ ಹುಟ್ಟಿಕೊಂಡಿರುವುದು. ಹೌದು ನಮ್ಮ ಮತದಾರರಲ್ಲಿ ಅಶಿಕ್ಷಿತರು, ಅರೆಶಿಕ್ಷಿತರು, ದುರ್ಬಲರು,ಬಡವರು ಬಹುಸಂಖ್ಯೆಯಲ್ಲಿದ್ದಾರೆ, ಚುನಾವಣೆಯ ಮೇಲೆ ಜಾತಿ, ದುಡ್ಡು ಮತ್ತು ತೋಳ್ಭಲದ ಪ್ರಭಾವ ಕೂಡಾ ಇದೆ.

ಆದರೆ ಈ ವರ್ಗದ ಮತದಾರರೆಲ್ಲರೂ ಕೇವಲ ಪ್ರಾದೇಶಿಕ ಇಲ್ಲವೇ ಸಣ್ಣ ಪಕ್ಷಗಳಿಗೆ ಮತಹಾಕುವವರೆಂದು ಹೇಳಲಾಗುವುದಿಲ್ಲ. ಅವರ ಆಯ್ಕೆ ತಪ್ಪು ಎಂದು ತೀರ್ಪು ನೀಡುವುದೂ ಸರಿಯಾಗಲಾರದು. ಮೈತ್ರಿಕೂಟ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಷರಾ ಬರೆದು ಮೂಲೆಗೆ ತಳ್ಳಿಬಿಡಲು ಆಗುವುದಿಲ್ಲ. ಇಂತಹ ಒಂದು ಜನಾಭಿಪ್ರಾಯ ರೂಪುಗೊಳ್ಳಲು ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು.

ಭಾರತದಲ್ಲಿ ಏಕಶಿಲಾ ರೂಪದ ಸಾಮಾಜಿಕ ವ್ಯವಸ್ಥೆ ಇಲ್ಲ, ನಮ್ಮದು ಬಹುಭಾಷೆ, ಬಹುಜಾತಿ ಮತ್ತು ಬಹುಸಂಸ್ಕೃತಿಯ ದೇಶ. ಇದು `ರಾಷ್ಟ್ರೀಯ` ಎನ್ನುವ ಪರಿಕಲ್ಪನೆಗೆ ವಿರುದ್ದವಾಗಿರುವಂತಹ ವ್ಯವಸ್ಥೆ . ಇಲ್ಲಿ ಎಲ್ಲವನ್ನೂ ರಾಷ್ಟ್ರೀಯ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಲಿಕ್ಕಾಗುವುದಿಲ್ಲ. ನೆಲ-ಜಲ-ಭಾಷೆಯ ಜತೆ ಭಾವನಾತ್ಮಕ ಸಂಬಂಧ ಹೊಂದಿರುವ ರಾಜ್ಯದ ಒಬ್ಬ ಮತದಾರನಿಗೆ ದೇಶಪ್ರೇಮದ ಜತೆಯಲ್ಲಿ ಪ್ರಾದೇಶಿಕ ಆಶೋತ್ತರಗಳು ಕೂಡಾ ಮುಖ್ಯ. ಇಲ್ಲಿ ಒಬ್ಬ ಮತದಾರ ಏಕಕಾಲಕ್ಕೆ ಭಾರತೀಯನಾಗಿಯೂ ಜತೆಗೆ ಒಬ್ಬ ಕನ್ನಡಿಗ, ತೆಲುಗ, ಬಂಗಾಳಿ, ಮರಾಠಿ, ಮಲೆಯಾಳಿಯಾಗಿಯೂ ಯೋಚಿಸುತ್ತಿರುತ್ತಾನೆ.

ಪ್ರಾದೇಶಿಕ ಅಸ್ಮಿತೆ ಅವನ ಜೀವನಕ್ರಮವಾಗಿರುತ್ತದೆ. ಸತ್ತೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆತನ ಬೇಡಿಕೆ ದೆಹಲಿಯಲ್ಲಿ ಕೂತವರಿಗೆ ಪ್ರಾಂತೀಯ ಭಾವನೆ  ಎಂದು ಅನಿಸಿದರೂ ಅದನ್ನು ತನ್ನ ಹಕ್ಕು ಎಂದು ಆತ ತಿಳಿದುಕೊಂಡಿರುತ್ತಾನೆ. ಎಲ್ಲವೂ ದೂರದ ದೆಹಲಿಯಲ್ಲಿ ತೀರ್ಮಾನವಾಗುವುದು ಸ್ವಾಭಿಮಾನಿಯಾದ ಆತನನ್ನು ಕೆರಳಿಸುತ್ತದೆ. ಈ ರೀತಿಯ ಪ್ರಾದೇಶಿಕತೆಯ ಭಾವನೆಯನ್ನು ಕೆಲವು ಪಕ್ಷಗಳು  ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳುತ್ತಿರುವುದು ನಿಜ, ಆದರೆ ಇಂತಹ ಪರಿಸ್ಥಿತಿಯ ನಿರ್ಮಾಣಕ್ಕೆ ಯಾರು ಹೊಣೆ?

ಸ್ವಂತ ಬಹುಮತ ಪಡೆದ ಏಕಪಕ್ಷದ ಆಡಳಿತ ಇಲ್ಲವೇ ದ್ವಿಪಕ್ಷೀಯ ರಾಜಕೀಯ ವ್ಯವಸ್ಥೆಯಿಂದ ಪ್ರಜಾಪ್ರಭುತ್ವ ಸುಭದ್ರವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮೊದಲು ಪ್ರಯತ್ನಿಸಿದ್ದೇ ದೈತ್ಯಬಹುಮತದ  ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಅಲ್ಲವೇ? ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳ ಗರಿಷ್ಠ ದುರ್ಬಳಕೆ ನಡೆಸಿದ್ದು ಕೂಡಾ ಇದೇ ಪಕ್ಷ.

ಆಪರೇಷನ್ ಕಮಲದಿಂದ ಹಿಡಿದು ಸಭಾಧ್ಯಕ್ಷರ ಸ್ಥಾನದ ದುರುಪಯೋಗದ ವರೆಗೆ ನಡೆದ ಎಲ್ಲ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳಿಗೆ  ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಭಾಷಣ ಮಾಡಿದ ಕರ್ನಾಟಕದ ವಿಧಾನಸಭೆ ಸಾಕ್ಷಿಯಾಗಿದೆ. ಇವೆಲ್ಲವನ್ನೂ ನಡೆಸಿದ್ದು ಇನ್ನೊಂದು ರಾಷ್ಟ್ರೀಯ ಪಕ್ಷವಾದ ಬಿಜೆಪಿ. ಇದಕ್ಕೆಲ್ಲ ಯಾವ ಸಮ್ಮಿಶ್ರ ಸರ್ಕಾರದ ಒತ್ತಡ ಇತ್ತು?

ರಾಷ್ಟ್ರೀಯ ಪಕ್ಷದ ಜನಪ್ರಿಯ ಘೋಷಣೆಯಾದ ಸುಭದ್ರ ಸರ್ಕಾರವೊಂದರಿಂದಲೇ ಪ್ರಜಾಪ್ರಭುತ್ವ ಆರೋಗ್ಯಕರವಾಗಿ ಉಳಿಯುವುದು ಸಾಧ್ಯ ಇಲ್ಲ. ರಾಜಕೀಯ ಸುಭದ್ರತೆಯೊಂದೇ ಉತ್ತಮ ಆಡಳಿತದ ಮಾನದಂಡ ಕೂಡಾ ಅಲ್ಲ. ಸುಭದ್ರ ಸರ್ಕಾರವೆಲ್ಲ ಜನಪರವಾಗಿ ಕೆಲಸ ಮಾಡಿದೆ ಎಂದು ಹೇಳಲಾಗುವುದಿಲ್ಲ.

ಹಾಗೆ ಹೇಳುವುದಾದರೆ ಸ್ವತಂತ್ರಭಾರತದ ಮೊದಲ 25ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕಬೇಕಾಗಿತ್ತಲ್ಲವೇ? ಇದಕ್ಕೆ ವಿರುದ್ದವಾಗಿ ಅಧಿಕಾರ ಉಳಿಸಿಕೊಳ್ಳಲು ಸಣ್ಣ ಪಕ್ಷಗಳ ಬೆಂಬಲವನ್ನು ನಂಬಲೇಬೇಕಾದ ಅಭದ್ರ ರಾಜಕೀಯ ವಾತಾವರಣದಲ್ಲಿಯೂ ಜನಪರವಾಗಿ ಆಡಳಿತ ನಡೆಸಿದ ಸರ್ಕಾರಗಳಿವೆ.

1983ರಿಂದ 1985ರ ವರೆಗಿನ ರಾಮಕೃಷ್ಣ ಹೆಗಡೆ  ನೇತೃತ್ವದ ಕರ್ನಾಟಕ ಸರ್ಕಾರ 18 ಸದಸ್ಯ ಬಲದ ಬಿಜೆಪಿ ಬೆಂಬಲವನ್ನು ನೆಚ್ಚಿಕೊಂಡಿತ್ತು. ಅನಿಶ್ಚಿತ ರಾಜಕೀಯದ ನಡುವೆಯೂ ಆ ಎರಡು ವರ್ಷಗಳ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತವನ್ನು ಮಧ್ಯಂತರ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ನೀಡಲು ಹೆಗಡೆಯವರಿಗೆ ಸಾಧ್ಯವಾಗಲಿಲ್ಲ ಎನ್ನುವುದು ಗಮನಾರ್ಹ. ಯುಪಿಎ ಮೊದಲ ಅವಧಿಯಲ್ಲಿ ಎಡಪಕ್ಷಗಳ ಬೆಂಬಲವನ್ನು ನಂಬಿಕೊಂಡಿತ್ತು.

ಆ ದಿನಗಳಲ್ಲಿ ದಿನನಿತ್ಯದ ಆಡಳಿತದಲ್ಲಿ ಎಡಪಕ್ಷಗಳು ನಿರಂತರವಾಗಿ ಮಾಡುತ್ತಿದ್ದ ಮಧ್ಯಪ್ರವೇಶ `ಬ್ಲಾಕ್‌ಮೇಲ್` ಎಂದು ಅನಿಸಿದ್ದು ನಿಜ. ಆದರೆ ಆ ಒತ್ತಡದ ರಾಜಕೀಯದಿಂದಾಗಿಯೇ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ಕಂಪೆನಿಗಳು ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ ಎಂಬುದನ್ನು ಮರೆಯುವುದು ಹೇಗೆ? ಕಾಂಗ್ರೆಸ್ ಅಂದುಕೊಂಡಂತೆ ಖಾಸಗೀಕರಣ ನಡೆದುಹೋಗಿದ್ದರೆ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಸಿಕ್ಕಿ ದಿವಾಳಿಯಾದ ಅಮೆರಿಕಾ ಬ್ಯಾಂಕುಗಳ ಸ್ಥಿತಿ ನಮ್ಮ ಬ್ಯಾಂಕು ಮತ್ತು ವಿಮಾಕಂಪೆನಿಗಳಿಗೂ ಬರುತ್ತಿತ್ತು.

ವಿರೋಧಪಕ್ಷಗಳು ಆಂತರಿಕ ಬಿಕ್ಕಟ್ಟಿಗೆ ಸಿಕ್ಕಿ ನಿಷ್ಕ್ರೀಯವಾಗಿರುವ ಈಗಿನ ದಿನಗಳಲ್ಲಿ ಆಂತರಿಕವಾದ ಇಂತಹ ಒತ್ತಡ-ಒತ್ತಾಯಗಳ ರಾಜಕೀಯವೇ  ಎಷ್ಟೋ ಬಾರಿ ರಾಷ್ಟ್ರೀಯ ಪಕ್ಷಗಳು ಜನಪರವಾದ ಆಡಳಿತ ನೀಡಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ಕಾರಣವಾಗುತ್ತಿದೆ.  ಸಣ್ಣ ಪಕ್ಷಗಳ ಚೌಕಾಶಿ ರಾಜಕಾರಣವೇ ರಾಜಕೀಯ ಬಿಕ್ಕಟ್ಟುಗಳಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಅದರ ಆಳದಲ್ಲಿ ರಾಷ್ಟ್ರೀಯ ಪಕ್ಷಗಳು ನಡೆಸುವ ಒಳ ಆಟಗಳಿರುತ್ತವೆ ಎನ್ನುವುದನ್ನು ಮರೆಯಬಾರದು.

ಮಮತಾ ಬ್ಯಾನರ್ಜಿ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಎಡಪಕ್ಷಗಳ ಕಡೆ ಕಣ್ಣುಮಿಟುಕಿಸುವುದು, ಮಾಯಾವತಿಯವರನ್ನು ಹಣಿಯಲು ಮುಲಾಯಂಸಿಂಗ್ ಜತೆ ಒಳಒಪ್ಪಂದ ಮಾಡಿಕೊಳ್ಳುವುದು, ಪಿಡಿಪಿ ಬೇಡ ಎಂದಾದರೆ ನ್ಯಾಷನಲ್ ಕಾನ್‌ಫರೆನ್ಸ್ ಪಕ್ಷವನ್ನು ಸೇರಿಸಿಕೊಳ್ಳುವುದು...ಹೀಗೆ ಸಣ್ಣ ಪಕ್ಷಗಳ ನಡುವಿನ ಭಿನ್ನಮತದ ಬೆಂಕಿಗೆ ಗಾಳಿಹಾಕುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಆಟವನ್ನು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಾಡುತ್ತಲೇ ಬಂದಿವೆ.

ಸಣ್ಣಪಕ್ಷಗಳಿಗೆ ಬುದ್ಧಿಹೇಳುವ ಮೊದಲು ಈ ರಾಷ್ಟ್ರೀಯ ಪಕ್ಷಗಳು ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು. ಪ್ರಜಾಪ್ರಭುತ್ವದ ರಕ್ಷಣೆಯ ದೊಡ್ಡಭಾರ ದೊಡ್ಡಪಕ್ಷಗಳ ಹೆಗಲ ಮೇಲೂ ಇದೆ.

Saturday, June 23, 2012

ವಿವಾದದ ಗಾಳಿಗೆ ಸಿಕ್ಕಿರುವ ಸಂವಿಧಾನದ `ತುರ್ತು ದೀಪ' June 18, 2012

ದೆಹಲಿಯ ರೈಸಿನಾಹಿಲ್‌ನ ತುದಿಯ ಸುಮಾರು 450 ಎಕರೆ ಉದ್ಯಾನದ ನಡುವಿನ ಐದು ಎಕರೆ ಜಾಗದಲ್ಲಿ ತಲೆ ಎತ್ತಿನಿಂತಿರುವ ರಾಷ್ಟ್ರಪತಿ ಭವನವನ್ನು ಭಾವುಕ ಕಣ್ಣುಗಳಿಂದ ನೋಡಿದರೆ ಅರಮನೆಯಂತೆ ಕಾಣುತ್ತದೆ. 

ವಿಶಾಲವಾದ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೆರಿ ನೆಲಗಂಬಳಿ, ಅಪರೂಪದ ತೈಲಚಿತ್ರಗಳು, ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು,ಛಜ್ಚಾಗಳು, ಜಾಲರಿ, ಕಲ್ಲು ಗಂಟೆಗಳು...ಹೀಗೆ 20,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕೆಂಪು ಮರಳುಗಲ್ಲಿನ ಕಟ್ಟಡದಲ್ಲಿ ಅರಮನೆಯ ಎಲ್ಲ ವೈಭವಗಳೂ ಇವೆ.

ಅರಮನೆಯಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಅದರೊಳಗಿನ ನಿವಾಸಿಯನ್ನು ಅರಸ ಎಂದು ಹೇಳುವ ಹಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸನಿಗೆ ಜಾಗ ಇಲ್ಲ. ಅಲ್ಲಿರುವವರು ಸಂವಿಧಾನದ ಮನೆಯ ಕಾವಲುಗಾರ. ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರದು ಅತೀ ಉನ್ನತ, ಗೌರವಪೂರ್ಣ ಮತ್ತು ಪ್ರತಿಷ್ಠೆಯ ಸ್ಥಾನ. 

ಅವರೇ ಸರ್ಕಾರದ ಅಧಿಕೃತ ಯಜಮಾನರು. ಕೇಂದ್ರ ಸರ್ಕಾರದ ಕಾರ್ಯಾಂಗ ಅಧಿಕಾರದ ದಂಡವನ್ನು ಸಂವಿಧಾನ  ಅವರ ಕೈಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರಪತಿಯವರ ನಾಮಸ್ಮರಣೆಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಪ್ರಧಾನಮಂತ್ರಿಯನ್ನು ಮಾತ್ರವಲ್ಲ, ಪ್ರಧಾನಿ ಸಲಹೆ ಮೇರೆಗೆ ಸಚಿವರ ನೇಮಕಾ ಕೂಡಾ ಅವರದ್ದೇ ........

ರಾಷ್ಟ್ರಪತಿ ಸ್ಥಾನದ ಸುತ್ತಲಿನ ಈ ಪ್ರಭಾವಳಿ ಕಂಡು ಮೈಮರೆಯುವ ಮುನ್ನ ಸಂವಿಧಾನದ ಪುಟಗಳನ್ನು ತಿರುವಿಹಾಕಬೇಕು. `ಕೇಂದ್ರ ಸರ್ಕಾರ ತನ್ನ ಕಾರ್ಯಾಂಗ ಅಧಿಕಾರವನ್ನು ಸಂವಿಧಾನಕ್ಕೆ ಅನುಗುಣವಾಗಿ ರಾಷ್ಟ್ರಪತಿಯವರ ಮೂಲಕ ಕಾರ್ಯಗತಗೊಳಿಸಬೇಕು` ಎಂದು ಸಂವಿಧಾನ ಹೇಳಿದೆ. `

ರಾಷ್ಟ್ರಪತಿಗಳು ಸಚಿವ ಮಂಡಳಿಯ ನೆರವು ಮತ್ತು ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು` ಎಂದು ಸಂವಿಧಾನದ 74 (1)ನೇ ಪರಿಚ್ಛೇದ ಹೇಳಿದೆ. `ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾದರೂ ಅವರು ಸಚಿವ ಮಂಡಳಿಯ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ` ಎಂದು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.

ಅಂದರೆ ರಾಷ್ಟ್ರಪತಿಗಳು ಆಡಳಿತಾರೂಢರ ಕೈಯಲ್ಲಿನ `ರಬ್ಬರ್ ಸ್ಟಾಂಪ್` ಎನ್ನುವ ಕೊಂಕುನುಡಿ ನಿಜವೇ? ಇದಕ್ಕೆ ಉತ್ತರ ರೈಸಿನಾಹಿಲ್‌ನ ನಿವಾಸಿಯಾದ ದೇಶದ ಪ್ರಥಮ ಪ್ರಜೆಯ ನಡೆ-ನುಡಿಯಲ್ಲಿದೆ. ಅರಸೊತ್ತಿಗೆಯಲ್ಲಿ ಸಿಂಹಾಸನವೇ ಮುಖ್ಯ, ಅದರ ಮೇಲೆ ಪಾದುಕೆಗಳನ್ನಿಟ್ಟುಬೇಕಾದರೂ ಬೇರೆಯವರು ರಾಜ್ಯಭಾರ ಮಾಡಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಲ್ಲ, ಇಲ್ಲಿ ಆಸನಕ್ಕೆ ಗೌರವ ಬರುವುದು ಆಸೀನರಾಗುವ ವ್ಯಕ್ತಿಯಿಂದ. ಸಾಂವಿಧಾನಿಕ ಹುದ್ದೆಗಳ ಹಕ್ಕು-ಬಾಧ್ಯತೆಗಳನ್ನು ಸಂವಿಧಾನದಲ್ಲಿ ಬಿಡಿಸಿ ಹೇಳಲಾಗಿಲ್ಲ. ಆ ಸ್ಥಾನದಲ್ಲಿ ಕೂರುವವರು ಇರುವ ನೀತಿ-ನಿಯಮಾವಳಿಗಳನ್ನು ತನ್ನ ವಿವೇಚನೆಯಿಂದ ಬಳಸಿಕೊಂಡು ವ್ಯಾಖ್ಯಾನಿಸಬೇಕಾಗುತ್ತದೆ. 

ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುವ ಪರಿಸ್ಥಿತಿಯನ್ನು ಪ್ರತಿಯೊಬ್ಬ ರಾಷ್ಟ್ರಪತಿಗಳು ಎದುರಿಸುತ್ತಾರೆ. ಈ ಕಾರ್ಯನಿರ್ವಹಣೆಯ ಮೇಲೆ ಇತಿಹಾಸದ ಪುಟಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಗಳು ದಾಖಲಾಗುತ್ತವೆ. ಎದುರಾದ ಬಿಕ್ಕಟ್ಟುಗಳನ್ನು ಮೀರಿ ನಿಂತವರೂ ಇದ್ದಾರೆ, ಜಾರಿಬಿದ್ದವರೂ ಇದ್ದಾರೆ.

ಭಾರತದ ರಾಷ್ಟ್ರಪತಿಗಳ ಹೆಸರಿನ ಕೆಳಗೆ ಎರಡು ಸಂದರ್ಭಗಳಲ್ಲಿ ಕೆಂಪುಗೆರೆ ಕಾಣಿಸಿಕೊಳ್ಳುತ್ತದೆ. ಮೊದಲನೆಯದು ಕೇಂದ್ರದಲ್ಲಿ ಚುನಾವಣೆಯ ನಂತರ ನಡೆಯುವ ಸರ್ಕಾರ ರಚನೆಯ ಪ್ರಕ್ರಿಯೆ, ಎರಡನೆಯದು ರಾಜ್ಯಗಳಲ್ಲಿನ ಚುನಾಯಿತ ಸರ್ಕಾರದ ವಿಸರ್ಜನೆ.

ರಾಜಕೀಯ ಪಿತೂರಿಯಿಂದಾಗಿ ಮೂರನೆ ಸಂದರ್ಭ ಕೂಡಾ ಸೃಷ್ಟಿಯಾಗುವುದುಂಟು. ಉದಾಹರಣೆಗೆ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಕಿತ್ತುಹಾಕಲು ಆಗಿನ ರಾಷ್ಟ್ರಪತಿ ಜೈಲ್‌ಸಿಂಗ್ ಪ್ರಯತ್ನ.

ಮೊದಲಿನ ಎರಡೂ ಸಂದರ್ಭಗಳಲ್ಲಿಯೂ ರಾಷ್ಟ್ರಪತಿಗಳು ಅಸಹಾಯಕರೇನಲ್ಲ, ಅವರು ಕೇಂದ್ರಸರ್ಕಾರದ `ರಬ್ಬರ್ ಸ್ಟಾಂಪ್` ಆಗಿಯೇ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇಲ್ಲ. ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸರ್ವಸ್ವತಂತ್ರರು. 

ಆಗ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ನಿಯಂತ್ರಿಸುವ ಸಚಿವಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವ ಕಾರಣ ಅವರ ಮೇಲೆ ಶಾಸಕಾಂಗದ ಒತ್ತಡ ಇರುವುದಿಲ್ಲ. ಮೈತ್ರಿಕೂಟದ ಇಂದಿನ ಹೊಸ ರಾಜಕೀಯ ಯುಗದಲ್ಲಿ ಇದೊಂದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಿದವರೆಲ್ಲರೂ ನಿರಾಶೆಗೊಳಿಸಿಲ್ಲ.

1996ರಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಅಟಲಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಲು ಕಾರಣಗಳಿದ್ದವು. ಆಗಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಹಾಗೆ ನಡೆದುಕೊಂಡಿದ್ದರೆ ಅವರೊಬ್ಬ `ಕಾಂಗ್ರೆಸ್ ಏಜಂಟ್` ಎಂಬ ಆರೋಪ ಖಂಡಿತ ಕೇಳಿಬರುತ್ತಿತ್ತು. ಅವರು ಹಾಗೆ ಮಾಡದೆ ಅವಕಾಶ ನೀಡಿದರೂ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಲ್ಲಿಯೇ ಪತನಗೊಂಡಿತ್ತು. 

ಅದರ ನಂತರ ಹದಿಮೂರು ತಿಂಗಳ ಕಾಲ ಪ್ರಧಾನಿಯಾದ ವಾಜಪೇಯಿ ಅವರು ಸರ್ಕಾರ ರಚನೆಯ ಅವಕಾಶ ಕೋರಿದಾಗಲೂ ನಿರಾಕರಿಸಲು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಬಳಿಯೂ ಕಾರಣಗಳಿದ್ದವು. 

`ಆ ಸಂದರ್ಭದ ರಾಜಕೀಯ ಮೈತ್ರಿಯಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಇಲ್ಲ` ಎಂದು ಹೇಳಿ ಅವಕಾಶ ನಿರಾಕರಿಸಬಹುದಿತ್ತು. ಅವರೂ ಹಾಗೆ ಮಾಡದೆ ಅವಕಾಶ ನೀಡಿದರು. `ಅಭದ್ರತೆಯ ಭೀತಿ` ನಿಜ ಎಂಬಂತೆ ಕೊನೆಗೆ ಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ವಾಪಸು ಪಡೆದು ಸರ್ಕಾರ ಉರುಳಿಸಿದ್ದರು. 

ಅದೇ ನಾರಾಯಣನ್ ಪೂರ್ವಾಶ್ರಮದಲ್ಲಿ ಅಪ್ಪಟ ಕಾಂಗ್ರೆಸಿಗರೇ ಆಗಿದ್ದರೂ ಸೋನಿಯಾಗಾಂಧಿ 272 ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿದ್ದನ್ನು ಒಪ್ಪಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ.

ರಾಷ್ಟ್ರಪತಿಗಳ ತಲೆಮೇಲೆ ಸದಾ ತೂಗುತ್ತಿರುವ ಇನ್ನೊಂದು ವಿವಾದದ ಕತ್ತಿ-ಸಂವಿಧಾನದ 356ನೇ ಪರಿಚ್ಛೇದದ ಮೂಲಕ ನಡೆಯುವ ವಿಧಾನಸಭೆಗಳ ವಿಸರ್ಜನೆ. ಸ್ವತಂತ್ರಭಾರತದಲ್ಲಿ ನೂರಕ್ಕೂ ಹೆಚ್ಚು ಬಾರಿ ಈ ಅಸ್ತ್ರದ ಪ್ರಯೋಗ ನಡೆದಿದೆ.ಕೇಂದ್ರದ ಆಡಳಿತಾರೂಢ ಪಕ್ಷ ರಾಜಭವನದಲ್ಲಿ ಕೂರಿಸಿರುವ `ಕೈಗೊಂಬೆ` ರಾಜ್ಯಪಾಲರ ಮೂಲಕ ವರದಿಗಳನ್ನು ತರಿಸಿ ರಾತೋರಾತ್ರಿ ರಾಜ್ಯಸರ್ಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಉದಾಹರಣೆಗಳಿವೆ. 

ಇಂತಹ ಸಂದರ್ಭಗಳಲ್ಲಿ ಈಗಿನ ರಾಷ್ಟ್ರಪತಿಗಳು ಹಿಂದಿನವರಷ್ಟು ಅಸಹಾಯಕರಲ್ಲ. ಜನತಾ ಸರ್ಕಾರ 1978ರಲ್ಲಿ ಸಂವಿಧಾನದ 74ನೇ ಪರಿಚ್ಛೇದಕ್ಕೆ ಮಾಡಿದ 44ನೆ ತಿದ್ದುಪಡಿಯಿಂದಾಗಿ ರಾಷ್ಟ್ರಪತಿಗಳು ಸಚಿವ ಸಂಪುಟದ ತೀರ್ಮಾನವನ್ನು ಮೊದಲ ಬಾರಿ ತಿರಸ್ಕರಿಸಬಹುದು. ಆದರೆ ಸಚಿವ ಸಂಪುಟ ಮತ್ತೊಂದು ಬಾರಿ ಅಂಗೀಕರಿಸಿ ಕಳುಹಿಸಿದರೆ ಒಪ್ಪಿಗೆಯ ಮುದ್ರೆ ಒತ್ತುವುದು ಅನಿವಾರ್ಯ.

ಈ ತಿದ್ದುಪಡಿಯನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮೊದಲು ಚಲಾಯಿಸಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ಸರ್ಕಾರದ ವಿಸರ್ಜನೆಗೆ ಐ.ಕೆ.ಗುಜ್ರಾಲ್ ಸರ್ಕಾರ ಮಾಡಿದ್ದ ತೀರ್ಮಾನವನ್ನು ಅವರು ತಿರಸ್ಕರಿಸಿದ್ದರು. ಮರುವರ್ಷ ವಾಜಪೇಯಿ ಸಂಪುಟ ಬಿಹಾರದ ಲಾಲುಯಾದವ್ ಸರ್ಕಾರದ ವಿಸರ್ಜನೆಗೆ ಕೈಗೊಂಡ ತೀರ್ಮಾನವನ್ನು ಕೂಡಾ ಅವರು ಒಪ್ಪಿಕೊಳ್ಳಲಿಲ್ಲ. 

ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ತನ್ನ ತೀರ್ಮಾನವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಹಟಮಾರಿ ಧೋರಣೆ ತೋರಿಸದೆ ದೇಶದ ಪ್ರಥಮ ಪ್ರಜೆಯ ಗೌರವಕ್ಕೆ ಕುಂದುಬರದಂತೆ ನೋಡಿಕೊಂಡಿತ್ತು.

ಪೂರ್ವಾಶ್ರಮದಲ್ಲಿ ರಾಜಕಾರಣಿಗಳಲ್ಲದ ರಾಷ್ಟ್ರಪತಿಗಳು ತೋರಿದ ಈ ದಿಟ್ಟತನವನ್ನು ರಾಜಕಾರಣಿಯಲ್ಲದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ತೋರಲಿಲ್ಲ. ರಾಷ್ಟ್ರಪತಿ ಸ್ಥಾನದ ಘನತೆ ಉಳಿಸಿಕೊಂಡೇ ಸಾಮಾನ್ಯರನ್ನು ತಲುಪುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದ ಕಲಾಂ ಅವರು ತಾನು ಕೂತ ಕುರ್ಚಿಯ ನಿಜವಾದ ಕರ್ತವ್ಯ ನಿರ್ವಹಿಸುವಾಗ ಮಾತ್ರ ಎಡವಿಬಿದ್ದಿದ್ದರು. 

2005ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ರಾಷ್ಟ್ರಪತಿಗಳ ಆಳ್ವಿಕೆ ಹೇರಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಎನ್‌ಡಿಎ ಸರ್ಕಾರ ರಚಿಸಲು ಮುಂದಾದಾಗ ಅಲ್ಲಿ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿದ್ದರು.

ಇದನ್ನು ಅಷ್ಟೇ ಅವಸರದಲ್ಲಿ ಮಧ್ಯರಾತ್ರಿಯ ಸಭೆಯಲ್ಲಿ ಪರಿಶೀಲಿಸಿ ಕೇಂದ್ರ ಸಚಿವ ಸಂಪುಟ ನೀಡಿದ ಒಪ್ಪಿಗೆಗೆ ಅಬ್ದುಲ್ ಕಲಾಂ ಅವರು ದೂರದ ರಷ್ಯಾದಲ್ಲಿಯೇ ಕೂತು ಅಂಕಿತ ಹಾಕಿಬಿಟ್ಟಿದ್ದರು. ಈ ನಿರ್ಧಾರವನ್ನು ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್  ಅಕ್ರಮ ಎಂದು ಸಾರಿತ್ತು. ಇದು ಕಲಾಂ ಅವರ ಅಧಿಕಾರವಧಿಯ ಕಪ್ಪು ಚುಕ್ಕೆ.

ಸಂವಿಧಾನದ ರಚನೆಕಾರರಿಗೆ ಉಳಿದೆಲ್ಲ ಸಾಂವಿಧಾನಿಕ ಹುದ್ದೆಗಳಂತೆ ರಾಷ್ಟ್ರಪತಿ ಕೂಡಾ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಾಗಿಯೇ ಆ ಹುದ್ದೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲು ಹೋಗದೆ ಗೌರವದ ಸ್ಥಾನ ನೀಡಿ ಸುಮ್ಮನಾಗಿದ್ದರು. ಏಕಪಕ್ಷದ ಆಳ್ವಿಕೆಯ ಬಿಗಿ ಸಡಿಲುಗೊಂಡು ಮೈತ್ರಿಕೂಟಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಂತೆಯೇ ರಾಷ್ಟ್ರಪತಿಗಳ ಮುಂದಿನ ಸವಾಲುಗಳು ಇನ್ನಷ್ಟು ಕಠಿಣವಾಗತೊಡಗಿವೆ. 

`ರಾಷ್ಟ್ರಪತಿ ಸ್ಥಾನ ಎನ್ನುವುದು `ತುರ್ತುಕಾಲದ ದೀಪ` ಇದ್ದ ಹಾಗೆ, ಬಿಕ್ಕಟ್ಟು ಉದ್ಭವವಾದಾಗ ಅದು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ. ಅದು ನಿವಾರಣೆಯಾಗುತ್ತಿದ್ದ ಹಾಗೆ ಆರಿಹೋಗುತ್ತದೆ` ಎಂದು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹೇಳಿದ್ದರು. ಆದರೆ ಮೈತ್ರಿಕೂಟಗಳ ಯುಗದಲ್ಲಿ ರಾಷ್ಟ್ರಪತಿಗಳ ಸ್ಥಾನ ಕೇವಲ `ತುರ್ತುಕಾಲದ ದೀಪ`ವಾಗಿ ಉಳಿದಿಲ್ಲ. ಇದು ನಿತ್ಯ ಉರಿಯುತ್ತಲೇ ಇರಬೇಕಾದ `ದೀಪ`ವಾಗಿ ಹೋಗಿದೆ.

 ರಾಜಕೀಯ ವಿವಾದದ ಗಾಳಿಗೆ ಸಿಕ್ಕಿ ಸಂವಿಧಾನದ ಈ  `ದೀಪ` ಆರಿಹೋಗದಂತೆ ಕಾಪಾಡಬೇಕಾದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಎದುರಿಸುವ ರೀತಿಯಲ್ಲಿ ರಾಷ್ಟ್ರಪತಿ ಸ್ಥಾನವನ್ನು ಬಲಪಡಿಸಬೇಕು. ಇದರ ಜತೆಯಲ್ಲಿ ರಾಷ್ಟ್ರಪತಿಗಳು  ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. 

ಇಂತಹದ್ದೊಂದು ವಿವಾದಕ್ಕೆ  ಪ್ರಣವ್ ಮುಖರ್ಜಿ ಅವರೇ ಕಾರಣವಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ರಾಷ್ಟ್ರಪತಿಯವರ ಸಾವಿನ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ಅನಿರೀಕ್ಷಿತವಾಗಿ ಸಾವಿಗೀಡಾದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಂವಿಧಾನದಲ್ಲಿ ಉತ್ತರ ಇಲ್ಲ. 

ಈ ಕಾರಣದಿಂದಾಗಿಯೇ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಡೆದಾಗ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ರಾಜೀವ್‌ಗಾಂಧಿಯವರನ್ನು ನೇರವಾಗಿ ಪ್ರಧಾನಿಯಾಗಿ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. `ರಾಷ್ಟ್ರಪತಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕಾಗಿ ಕಾಯಬೇಕಾಗಿತ್ತು, ಅಲ್ಲಿಯ ವರೆಗೆ ಸಂಪುಟದ ಅತ್ಯಂತ ಹಿರಿಯ ನಾಯಕನನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಬಹುದಿತ್ತು....`ಎಂಬೀತ್ಯಾದಿ ಟೀಕೆಗಳು ಆ ಕಾಲದಲ್ಲಿ ಕೇಳಿಬಂದಿದ್ದವು. 

ಆ ಟೀಕೆಗೆ  ಪ್ರಣವ್ ಮುಖರ್ಜಿ ಅವರು ರಾಜೀವ್‌ಗಾಂಧಿಯವರಿಗೆ ನೀಡಿದ್ದ ಸಲಹೆ ಪ್ರೇರಣೆಯಾಗಿತ್ತು.ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಕೊಲ್ಕೊತ್ತಾ ಪ್ರವಾಸದಲ್ಲಿದ್ದ ರಾಜೀವ್‌ಗಾಂಧಿಯವರ ಜತೆಯಲ್ಲಿದ್ದ ಪ್ರಣವ್ ಮುಖರ್ಜಿ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈ ಸಲಹೆ ನೀಡಿದ್ದರು. 

ಆ ಕಾಲದಲ್ಲಿ ಸಂಪುಟದ ಅತ್ಯಂತ ಹಿರಿಯ ನಾಯಕ ಪ್ರಣವ್ ಅವರೇ ಆಗಿದ್ದ ಕಾರಣ ಆ ಸಲಹೆಯನ್ನು ರಾಜೀವ್‌ಗಾಂಧಿ ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಈ ತಪ್ಪುತಿಳುವಳಿಕೆ ಅಂತಿಮವಾಗಿ ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಕಾರಣವಾಗಿತ್ತು. 

ಈಗ ಅವರೇ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ಪಕ್ಷದ ಅಧಿಕೃತ ಅಭ್ಯರ್ಥಿ. ರಾಷ್ಟ್ರಪತಿ ಸ್ಥಾನದ ಮಹತ್ವವನ್ನು ಅರಿತಿರುವ ಪ್ರಣವ್ ಮುಖರ್ಜಿ `ರಬ್ಬರ್ ಸ್ಟಾಂಪ್` ಆಗಲಾರರೆಂದೇ ಎಲ್ಲರ ನಿರೀಕ್ಷೆ. ಇದು ಕಾಂಗ್ರೆಸ್ ಪಕ್ಷದ ಭೀತಿ ಕೂಡಾ ಆಗಿರಬಹುದು.