Saturday, March 28, 2015

ಕರ್ನಾಟಕ ಮೂಢನಂಬಿಕೆಗಳ ಪ್ರತಿಬಂಧಕ ಮಸೂದೆ (2013) ಕುರಿತು ಚರ್ಚೆ, ಸಂವಾದ



ಚರ್ಚೆ ಮತ್ತು ಸಂವಾದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಗಳು

Thursday, March 26, 2015

ಭಿನ್ನಾಭಿಪ್ರಾಯ ಇಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ..

ಮುನೀರ್,ಸತ್ಯಾ,ಅದ್ದೆ,ಸೂಡಾ,ಮಂಜು, ಇಮಾಮ್...ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತಿದೆ, ಆದರೆ ನೀವು ಆತಂಕಪಡಬೇಕಾಗಿಲ್ಲ.. ನಮ್ಮೆಲ್ಲರದ್ದು ಸಮಾನ ಮನಸ್ಕರ ಸ್ನೇಹ. ನಾವೆಲ್ಲ ‘ರಾಮರಾಜ್ಯ’ದ ಸುಖವನ್ನು ಹಂಚಿಕೊಂಡು ಸಂಭ್ರಮಪಡಲು ಸ್ನೇಹಿತರಾದವರಲ್ಲ, ನಮ್ಮ ಸಂಕಟ,ತಳಮಳ, ಕಳಕಳಿಗಳನ್ನು ಹಂಚಿಕೊಳ್ಳಲು ಒಟ್ಟಾದವರು. ಇಂತಹ ಸ್ನೇಹದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಯಾಕೆಂದರೆ ಭಿನ್ನಾಭಿಪ್ರಾಯವಿಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ. ಭಿನ್ನಾಭಿಪ್ರಾಯ ಇಲ್ಲದೆ ಇದ್ದಲ್ಲಿ ಸ್ನೇಹ ಇರುವುದಿಲ್ಲ, ಗುಲಾಮಗಿರಿ ಇರುತ್ತದೆ. ಗೆಳೆತನದಲ್ಲಿ ಕೂಡಾ ಆಂತರಿಕವಾದ ಪ್ರಜಾಪ್ರಭುತ್ವ ಇರಬೇಕು ಎಂಬುದು ನನ್ನ ಆಶಯ.

ನನ್ನಲ್ಲೊಂದು ಕೊರಗು ಇದೆ. ವೃತ್ತಿಬದುಕಿನಲ್ಲಿ ನನಗೆ ಒಳ್ಳೆಯ ಸಂಪಾದಕರು ಸಿಕ್ಕಿದ್ದಾರೆ. ವಡ್ಡರ್ಸೆಯವರಿಂದ ವೃತ್ತಿಯ ಮೊದಲ ಪಾಠ ಕಲಿತವನು. ಕೆ.ಎನ್. ಹರಿಕುಮಾರ್ ಕಷ್ಟಕಾಲದಲ್ಲಿ ನನಗೆ ನೆರವಾದವರು. ಕೆ.ಎನ್.ಶಾಂತಕುಮಾರ್ ಬೆನ್ನಿಗೆ ನಿಂತು ನನ್ನನ್ನು ಪತ್ರಕರ್ತನಾಗಿ ಬೆಳೆಸಿದವರು. ಈ ಋಣದ ಭಾರ ನನ್ನ ಮೇಲಿದೆ. ಕನ್ನಡದಲ್ಲಿ ವೃತ್ತಿಪರವಾದ ಉತ್ಸಾಹಿ ಯುವಪತ್ರಕರ್ತರ ತಂಡವೊಂದನ್ನು ಕಟ್ಟಲು ನೆರವಾಗುವ ಮೂಲಕ ನನ್ನ ತಲೆಮೇಲಿರುವ ಋಣಭಾರವನ್ನು ಇಳಿಸಬೇಕೆಂಬ ಯೋಚನೆಯೊಂದು ದೆಹಲಿ ಬಿಟ್ಟು ಬಂದಾಗ ನನ್ನ ತಲೆಯಲ್ಲಿತ್ತು. ವಡ್ಡರ್ಸೆಯವರಂತೆ ನಾನು ಕೂಡಾ ಸ್ವಲ್ಪ ಹುಂಬ,ವ್ಯವಹಾರಿಕವಾಗಿ ಜಾಣನಲ್ಲ. ಆದ್ದರಿಂದ ಬಯಸಿದಂತೆ ನಡೆಯಲಿಲ್ಲ.

ನಮ್ಮಲ್ಲೊಂದು ಯಶಸ್ಸಿನ ಸೂತ್ರ ಇದೆ. ಅದು ನಿನಗಿಂತ ಹಿರಿಯ ಸ್ಥಾನದಲ್ಲಿರುವವರ ಭಟ್ಟಂಗಿತನ ಮಾಡು, ಕಿರಿಯರನ್ನು ತುಳಿದುಹಾಕು ಎಂದು ಹೇಳುತ್ತದೆ. ಯಾಕೆಂದರೆ ಹಿರಿಯರ ಭಟ್ಟಂಗಿತನಮಾಡಿದರೆ ಅವರು ಬಿಟ್ಟುಕೊಡುವ ಸ್ಥಾನ ನಿಮಗೆ ಸಿಗುತ್ತದೆ, ಕಿರಿಯರನ್ನು ತುಳಿದುಹಾಕುವುದರಿಂದ ಅವರು ನಿಮ್ಮನ್ನು ಮೀರಿ ಬೆಳೆದುಬಿಡುವ ಸಾಧ್ಯತೆಯನ್ನು ಹೊಸಕಿಹಾಕಿದಂತಾಗುತ್ತದೆ. ಇದನ್ನು ನಾನು ತಮಾಷೆಯಾಗಿ ‘ಪೊಲೀಸ್ ಫಾರ್ಮುಲಾ’ ಎನ್ನುತ್ತೇನೆ (ಇದೇನೆಂದು ಮುಂದೊಂದು ದಿನ ವಿವರಿಸುತ್ತೇನೆ). ನಾನು ಸದಾ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾ ಬಂದವನು. 

ನನಗಿಂತ ಹಿರಿಯರನ್ನು ಎದುರುಹಾಕಿಕೊಂಡು ಕಾದಾಡಿದ್ದೇನೆ, ಅದರಿಂದ ಕಷ್ಟ-ನಷ್ಟ ಅನುಭವಿಸಿದ್ದೇನೆ. ನನಗಿಂತ ಕಿರಿಯರು ತಪ್ಪಿದಾಗ ಸಣ್ಣಪುಟ್ಟ ಜಗಳಮಾಡಿಕೊಂಡು ತಪ್ಪಿದಾಗ ತಿದ್ದುವ ಮೂಲಕ ಅವರನ್ನು ಬೆಳೆಸಬೇಕೆಂದು ಪ್ರಾಮಾಣಿಕವಾಗಿ ಆಶಿಸಿದ್ದೇನೆ. ಇದರಿಂದಾಗಿಯೇ ನನಗಿಂತ ಕಿರಿಯರು ಅಪಾರ್ಥ ಮಾಡಿಕೊಂಡರೆ ನನಗೆ ನೋವಾಗುತ್ತದೆ.

ನಾನು ಇಷ್ಟಪಡುವ ನನಗಿಂತ ಕಿರಿಯರ ಕಿವಿ ಹಿಂಡುವ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಹಿರಿಯರಿಂದ ಕಿವಿ ಹಿಂಡಿಸಿಕೊಂಡೇ ಬೆಳೆದವನು. ಆ ಕ್ಷಣದಲ್ಲಿ ಕಿವಿ ನೋವಾದರೂ ಅದು ನಂತರದ ದಿನಗಳಲ್ಲಿ ನಾನು ದಾರಿ ತಪ್ಪುವುದನ್ನು, ತಪ್ಪು ಮಾಡಿ ನೋವು ತಿನ್ನುವುದನ್ನು ತಪ್ಪಿಸಿದೆ.

ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಬರೆದದ್ದು..

ಕಳೆದ ಕೆಲವು ದಿನಗಳಿಂದ ಒಂದು ಪ್ರಶ್ನೆ ನನ್ನನ್ನು ಕಾಡುತ್ತಿದೆ. ಐಎ ಎಸ್ ಅಧಿಕಾರಿ ಡಿ.ಕೆ.ರವಿ ಅವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಬಿಜೆಪಿ ಮತ್ತು ಜೆಡಿ (ಎಸ್ ) ಪಕ್ಷಗಳು ಒತ್ತಾಯಿಸುತ್ತಿವೆ. ಕನ್ನಡದ ಬಹುತೇಕ ಸುದ್ದಿ ಚಾನೆಲ್ ಗಳು ಈ ಬೇಡಿಕೆಯನ್ನು ಬೆಂಬಲಿಸಿ ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ರಾಜ್ಯಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲವಾದ ಕಾರಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಈ ಬೇಡಿಕೆಯ ಒಟ್ಟು ಸಾರ.ಈ ವಾದವನ್ನು ಒಪ್ಪಿಕೊಳ್ಳೋಣ. ಆದರೆ ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ, ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರ ಸರ್ಕಾರದ ಮರ್ಜಿಯಲ್ಲಿದೆಯಲ್ಲಾ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಎನ್ನುವುದಾದರೆ, ಕೇಂದ್ರ ಸರ್ಕಾರದ ‘ಪಂಜರದ ಗಿಳಿ’ ಯಾಗಿರುವ ಸಿಬಿಐ ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್ ಬಿಐ? ಇಂಟರ್ ಪೋಲ್? ವಿಶ್ವ ಸಂಸ್ಥೆ?
ಈ ಪ್ರಶ್ನೆಯನ್ನು ನನಗೆ ಪರಿಚಯ ಇರುವ ಹೋರಾಟಗಾರರನ್ನು ಮತ್ತು ಕೆಲವು ಪತ್ರಕರ್ತರನ್ನು ಕೇಳಿದೆ. ಅವರಿಂದ ಉತ್ತರ ಸಿಗಲಿಲ್ಲ.

(ಮಾರ್ಚ್ 19, 2015)
-------------------------------------------------------------------------------------------------------------------------------
‘ಕಾಂಗ್ರೆಸ್ ಏಜಂಟ’ ನೊಬ್ಬನ ಮನದ ಮಾತು (ಮಾರ್ಚ್ 20, 2015)
ಸಿಐಡಿ ಬೇಡ, ಸಿಬಿಐ ತನಿಖೆ ಮಾಡಲಿ ಎಂದು ಹೇಳುತ್ತಿರುವ ದಿವಂಗತ ಡಿ.ಕೆ.ರವಿ ಅವರ ಅಮಾಯಕ ತಂದೆ-ತಾಯಿಗಳ ಒತ್ತಾಯ ಅರ್ಥಮಾಡಿಕೊಳ್ಳುವಂತಹದ್ದು. ‘ಅದಕ್ಕಿಂತಲೂ ದೊಡ್ಡದು ಏನಾದರೂ ಇದ್ದರೆ ಅದರ ಮೂಲಕವೂ ತನಿಖೆ ನಡೆಯಲಿ’ ಎಂದು ಆ ತಾಯಿ ವಿಧಾನಸೌಧದ ಮುಂದೆ ರೋದಿಸುತ್ತಾ ಹೇಳುತ್ತಿದ್ದರು. ತನ್ನ ಮಗನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂಬುದಷ್ಟೇ ಆ ತಾಯಿಯ ಆಸೆ. ಯಾವುದು ಸಿಐಡಿ? ಯಾವುದು ಸಿಬಿಐ? ಎನ್ನುವುದು ಅವರಿಗೆ ಗೊತ್ತಿಲ್ಲ. ಬಿಜೆಪಿ ಮತ್ತು ಜೆಡಿ (ಎಸ್) ಅವರಿಗೆ ಎಲ್ಲವೂ ಗೊತ್ತಿದ್ದೂ ಸಿಬಿಐ ತನಿಖೆ ಕೇಳುತ್ತಿದ್ದಾರೆ. ಹಾಗೆ ಕೇಳಲು ಅವರಿಗೆ ಕಾರಣಗಳಿವೆ, ಅವೆಲ್ಲವೂ ಖಂಡಿತ ಡಿ.ಕೆ.ರವಿ ಮೇಲಿನ ಅಭಿಮಾನ ಇಲ್ಲವೆ ಸತ್ಯ ತಿಳಿಯಬೇಕೆಂಬ ಪ್ರಾಮಾಣಿಕ ಕಳಕಳಿಯಿಂದ ಕೂಡಿದ್ದಲ್ಲ.
‘ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಈ ಕಾರಣಕ್ಕಾಗಿ ತನಿಖೆಯನ್ನು ಸಿಬಿಐಗೆ ಕೊಡಿ’ ಎಂದು ಒತ್ತಾಯಿಸುತ್ತಿರುವವರಲ್ಲಿ ಹೆಚ್ಚಿನವರು ‘ಸಿಬಿಐ ಸರ್ವಸ್ವತಂತ್ರ’ ಎಂದು ತಿಳಿದುಕೊಂಡ ಅಮಾಯಕರು. ಆದರೆ ವಾಸ್ತವ ಹಾಗಿಲ್ಲ. ಸಿಬಿಐ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಖಾತೆಯ ನಿಯಂತ್ರಣದಲ್ಲಿದೆ. ಈ ಖಾತೆ ಪ್ರಧಾನಮಂತ್ರಿಯವರ ಕೈಯಲ್ಲಿದೆ. ಇದರ ಪರಿಣಾಮವೇ ಬಿಜೆಪಿ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆಯುವುದರೊಳಗೆ, ಸಿಬಿಐ ನ್ಯಾಯಾಲಯ ಬಿಜೆಪಿ ಅಧ್ಯಕ್ಷ ಅಮಿತ್ ಶಹಾ ಅವರನ್ನು ದೋಷಮುಕ್ತಗೊಳಿಸಿದ್ದು. ಗುಜರಾತ್ ನ ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಿತ್ ಶಹಾ ಅವರನ್ನು ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. (ವಿವರಗಳಿಗಾಗಿ ಫೆಬ್ರವರಿ 16, 2015ರ ಔಟ್ ಲುಕ್ ವಾರಪತ್ರಿಕೆ ಓದಿ). ಇದು ಬಿಜೆಪಿ ಸರ್ಕಾರದ ಕಾಲದಲ್ಲಿ ಸಿಬಿಐ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದಕ್ಕೆ ಸೂಚನೆ.
‘ಆಳುವ ಪಕ್ಷದಿಂದ ಸಿಬಿಐ ದುರ್ಬಳಕೆಯಾಗುತ್ತಿದೆ’ ಎಂಬ ವಿರೋಧಪಕ್ಷಗಳ ಆರೋಪ ಹಳೆಯದು. ಇದೇ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಸಿಬಿಐನ ದುರ್ಬಳಕೆ ಮಾಡಲು ಹಿಂಜರಿಯುವುದಿಲ್ಲ. ಇಂದಿರಾಗಾಂಧಿಯವರಿಂದ ಹಿಡಿದು ಅಟಲಬಿಹಾರಿ ವಾಜಪೇಯಿ ವರೆಗೆ ಎಲ್ಲರೂ ಇದನ್ನು ಮಾಡಿದ್ದಾರೆ. ಹೆಚ್ಚು ಕಾಲ ದೇಶವಾಳಿದವರು ಹೆಚ್ಚು ದುರುಪಯೋಗ ಮಾಡಿದ್ದಾರೆ, ಕಡಿಮೆ ಕಾಲ ಆಳಿದವರಿಂದ ಕಡಿಮೆ ದುರುಪಯೋಗವಾಗಿದೆ. ವ್ಯತ್ಯಾಸ ಪ್ರಮಾಣದಲ್ಲಿ ಮಾತ್ರ ನೀತಿಯಲ್ಲಿ ಅಲ್ಲ. ಈ ಸಿಬಿಐ ಅಸ್ತ್ರ ದುರ್ಬಳಕೆಯ ದೌರ್ಬಲ್ಯಕ್ಕೆ ಈಡಾಗದೆ ಇದ್ದಿದ್ದರೆ ಐದು ವರ್ಷಗಳ ಕಾಲ ಕನ್ನಡಿಗರೊಬ್ಬರು ಪ್ರಧಾನಿಯಾಗಿರುತ್ತಿದ್ದರೋ ಏನೋ? ಮಾನ್ಯ ದೇವೇಗೌಡರು ಹಳೆಯ ಕೊಲೆ ಆರೋಪವನ್ನು ಬಳಸಿಕೊಂಡು ಆಗಿನ ಕಾಂಗ್ರೆಸ್ ಅಧ್ಯಕ್ಷ ಸೀತರಾಂ ಕೇಸರಿ ವಿರುದ್ಧ ಸಿಬಿಐ ಅನ್ನು ಅವರ ವಿರುದ್ಧ ಛೂಬಿಟ್ಟದ್ದೇ ಅವರ ಕುರ್ಚಿಗೆ ಮುಳುವಾಗಿ ಹೋಯಿತು.
ಕಾಂಗ್ರೆಸ್ ಸಿಬಿಐ ದುರ್ಬಳಕೆ ಮಾಡಿಕೊಂಡಾಗ ಬೊಬ್ಬಿಟ್ಟವರು ಬಿಜೆಪಿ ನಾಯಕರು. ಆದರೆ ಅವರ ಕೈಗೆ ಅಧಿಕಾರ ಸಿಕ್ಕಾಗ ತಾವು ತಪ್ಪು ಅಂದದ್ದನ್ನೇ ಮಾಡಿದರು. ಎನ್ ಡಿ ಎ ಲಂಚಾವತಾರವನ್ನು ಬಯಲುಗೊಳಿಸಿದ ತೆಹೆಲ್ಕಾ ಡಾಟ್ ಕಾಮ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದು ಎನ್ ಡಿಎ. ತೆಹೆಲ್ಕಾ ವರದಿಗಾರನನ್ನು ಜೈಲಿಗೆ ತಳ್ಳಲು ಆತನ ವಿರುದ್ಧ ಚಿರತೆ ಹತ್ಯೆ ಆರೋಪವನ್ನು ಹೊರಿಸುವ ಮಟ್ಟಕ್ಕೆ ಇಳಿದಿತ್ತು ಸಿಬಿಐ.
ಇಷ್ಟು ಮಾತ್ರ ಅಲ್ಲ, ಸಿಬಿಐನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಹರಣಗೊಳಿಸುವ ಪ್ರಯತ್ನವನ್ನು ಕೂಡಾ ನಡೆಸಿದ್ದು ಎನ್ ಡಿ ಎ ಸರ್ಕಾರ. ವಿನೀತ್ ನಾರಾಯಣ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ‘ಕೇಂದ್ರ ಜಾಗೃತ ಆಯೋಗ (ಸಿವಿಸಿ)ಕ್ಕೆ ಶಾಸನಬದ್ಧ ಸ್ಥಾನಮಾನ ನೀಡಿ ಸಿಬಿಐ ಅನ್ನು ಅದರ ಮೇಲ್ವಿಚಾರಣೆಗೆ ಒಪ್ಪಿಸಬೇಕೆಂದು ಹೇಳಿತ್ತು. ಇದರ ಜತೆಗೆ ‘ಜಂಟಿ ಕಾರ್ಯದರ್ಶಿಗಳಿಗಿಂತ ಮೇಲಿನ ಅಧಿಕಾರಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಮುನ್ನ ಸರ್ಕಾರದ ಪೂರ್ವಾನುಮತಿ ಅಗತ್ಯ’ ಎಂಬ ‘ಏಕ ನಿರ್ದೇಶನ’ವನ್ನು ಸುಪ್ರೀಕೋರ್ಟ್ ರದ್ದು ಪಡಿಸಿತ್ತು. ಆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ನೂತನ ‘ಕೇಂದ್ರ ಜಾಗೃತ ಆಯೋಗ ಕಾಯಿದೆಯ ಮೂಲಕ ಹಿಂದೆ ಸುಪ್ರೀಂಕೋರ್ಟ್ ರದ್ದುಪಡಿಸಿದ್ದ ‘ಏಕನಿರ್ದೇಶನಕ್ಕೆ ಮತ್ತೆ ಜೀವ ತುಂಬಿ ಸಿಬಿಐ ಅನ್ನು ದುರ್ಬಲಗೊಳಿಸಿತ್ತು.
ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಬಿಡುಗಡೆಗೊಳಿಸುವ ಪ್ರಯತ್ನವನ್ನು 1994ರಲ್ಲಿಯೇ ಸುಪ್ರೀಂಕೋರ್ಟ್ ಜೈನ್ ಹವಾಲ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪ್ರಾರಂಭಿಸಿತ್ತು. ‘ ಕೇಂದ್ರ ಜಾಗೃತ ಆಯೋಗಕ್ಕೆ ಶಾಸನ ಬದ್ಧ ಸ್ಥಾನಮಾನ ನೀಡಿ ಸಿಬಿಐ ಉಸ್ತುವಾರಿಯನ್ನು ಅದಕ್ಕೆ ಒಪ್ಪಿಸಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸದ್ಯಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಬರುವ ಪ್ರಕರಣಗಳ ತನಿಖೆಯ ಮೇಲಷ್ಟೇ ಸಿವಿಸಿ ಯ ನಿಯಂತ್ರಣ ಇದೆ. ವಿಶೇಷ ಅಪರಾಧಗಳ ಬಗ್ಗೆ ಸಿಬಿಐ ನಡೆಸುವ ತನಿಖೆ ಮೇಲೆ ಸಿವಿಸಿಗೆ ನಿಯಂತ್ರಣ ಇಲ್ಲ.
ಇದೇ ಕಾರಣಕ್ಕೆ ಸಿಬಿಐ ಅನ್ನು ನೂತನ ‘ಲೋಕಪಾಲ’ರ ಸುಪರ್ದಿಗೆ ಒಪ್ಪಿಸಿ ಅದಕ್ಕೆ ಸ್ವಯೀಚ್ಚೆಯಿಂದ ತನಿಖೆ ನಡೆಸುವ ಅಧಿಕಾರ ನೀಡಬೇಕೆಂದು ಅಣ್ಣಾಹಜಾರೆ ತಂಡ ಒತ್ತಾಯಿಸಿತ್ತು. ಸಂಸತ್ ನಲ್ಲಿ ಅಣ್ಣಾತಂಡವನ್ನು ಬೆಂಬಲಿಸಿದ್ದ ಬಿಜೆಪಿ, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆದರೆ ಅಧಿಕಾರಕ್ಕೆ ಬಂದು ಹತ್ತು ತಿಂಗಳಾಗುತ್ತಾ ಬಂತು. ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಬಿಜೆಪಿ ಸೊಲ್ಲೆತ್ತಿಲ್ಲ. ತದ್ವಿರುದ್ಧವಾಗಿ ಅದರ ಮೇಲೆ ಒತ್ತಡ ಹೇರಿ ತನ್ನ ಪಕ್ಷದ ಅಧ್ಯಕ್ಷರನ್ನು ದೋಷಮುಕ್ತಗೊಳಿಸಿದೆ. ವಿಪರ್ಯಾಸವೆಂದರೆ, ಸಿಬಿಐ ಅನ್ನು ರಾಜಕೀಯ ನಿಯಂತ್ರಣದಿಂದ ಮುಕ್ತಗೊಳಿಸಬೇಕೆಂದು ಚಳುವಳಿಯನ್ನು ಮಾಡಿದ್ದ ಅಣ್ಣಾ ಚಳುವಳಿಯ ಉತ್ಪನ್ನವಾದ ಆಪ್ ಪಕ್ಷ ಕೂಡಾ ಈಗ ಸಿಬಿಐ ಮೇಲೆ ತನ್ನ ನಂಬಿಕೆಯನ್ನು ಸಾರಿರುವುದು.
ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಖಂಡಿತ ಸಿಬಿಐಗೆ ಒಪ್ಪಿಸಬಹುದು. ಆದರೆ ಅದಕ್ಕಿಂತ ಮೊದಲು ಸಿಬಿಐ ಚಾರಿತ್ರ್ಯವನ್ನು ತಿಳಿದುಕೊಳ್ಳುವುದು ಬೇಡವೇ? ಇದನ್ನು ಮಾಡದೆ ಕೇವಲ ಸಿಐಡಿಯ ವಿಶ್ವಾಸರ್ಹತೆಯನ್ನು ಪ್ರಶ್ನಿಸುವುದು ಪಕ್ಷಪಾತವಾಗುವುದಿಲ್ಲವೇ? ನಮ್ಮ ಪೊಲೀಸರು ಕೇವಲ ಪಿಕ್ ಪಾಕೆಟಿಗರನ್ನು ಹಿಡಿಯಲು ಮಾತ್ರ ಲಾಯಕ್, ಇಂತಹ ದೊಡ್ಡ ಪ್ರಕರಣಗಳ ಅವರಿಂದಾಗದು ಎಂದು ಹೀಗಳೆಯುವುದರಿಂದ ಅವರ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ? ಇದೇ ನಮ್ಮ ರಾಜ್ಯದ ದಕ್ಷ ಮತ್ತು ಪ್ರಾಮಾಣಿಕ ಪೊಲೀಸರಲ್ಲವೇ, ಮುಖ್ಯಮಂತ್ರಿ ಮತ್ತು ಸಚಿವರನ್ನು ಜೈಲಿಗೆ ತಳ್ಳಿದ್ದು? ಇದನ್ನು ಮರೆತು ನಮ್ಮ ಮಾನವನ್ನು ರಾಷ್ಟ್ರಮಟ್ಟದಲ್ಲಿ ನಾವೇ ಹರಾಜು ಹಾಕುತ್ತಿರುವುದು ಸರಿಯೇ? ವಿರೋಧಪಕ್ಷಗಳೇ ಸೂಚಿಸುವ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ವಿಶೇಷ ತನಿಖಾ ತಂಡವನ್ನು ರಚಿಸಲು ಸಿದ್ಧ ಎಂಬ ರಾಜ್ಯ ಸರ್ಕಾರದ ನಿಲುವನ್ನು ವಿರೋಧಪಕ್ಷಗಳು ಯಾಕೆ ಒಪ್ಪಿಕೊಳ್ಳಬಾರದು? ನನಗಂತೂ ವಿರೋಧಪಕ್ಷಗಳು ಮತ್ತು ಅವರ ಬೆಂಬಲಿಗರ ಹಟದಲ್ಲಿ ರಾಜಕೀಯ ಕಾಣಿಸುತ್ತಿದೆ. ಇದಕ್ಕಾಗಿ ನನ್ನನ್ನು ‘ಕಾಂಗ್ರೆಸ್ ಏಜಂಟ್ ‘ ಎಂದು ಹಳಿಯಿರಿ,ಬೇಸರ ಇಲ್ಲ. ನಾನಂತೂ ಕಾಲದ ಕರೆಗೆ ಓಗೊಡುವವನು.

-----------------------------------------------------------------------------------------------------------------------------
‘ಜನಾಭಿಪ್ರಾಯ’, ‘ಜನಮತ’ ದ ಹುತ್ತದ ಸುತ್ತ...... (ಮಾರ್ಚ್ 20, 2015)
ಸಿಬಿಐ ತನಿಖೆಗಾಗಿ ಒತ್ತಾಯಿಸುತ್ತಿರುವವರು ತಮ್ಮನ್ನು ಸಮರ್ಥಿಸಿಕೊಳ್ಳಲು ಇದು ‘ಜನಾಭಿಪ್ರಾಯ’, ‘ಜನಮತ’ ಎಂದೆಲ್ಲ ಹೇಳುತ್ತಿದ್ದಾರೆ. (ನನ್ನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅನೇಕ ಸ್ನೇಹಿತರು ಕೂಡಾ ಇದನ್ನು ಹೇಳಿದ್ದಾರೆ) ನನ್ನ ಪ್ರಕಾರ ನಿಜವಾದ ಜನಮತ ವ್ಯಕ್ತವಾಗುವುದು ಚುನಾವಣೆಯಲ್ಲಿ ಮಾತ್ರ. ಇದನ್ನು ಹೊರತುಪಡಿಸಿ ಜನಾಭಿಪ್ರಾಯ ಸಂಗ್ರಹಮಾಡಬೇಕಾದರೆ ಅಧಿಕೃತವಾಗಿ ಜನಮತಗಣನೆ ಚುನಾವಣೆಯ ಮಾದರಿಯಲ್ಲಿಯೇ ನಡೆಯಬೇಕು. ಇಲ್ಲದೆ ಇದ್ದರೆ ಚುನಾವಣಾ ಸುಧಾರಣೆಯ ಶಿಫಾರಸಿನಂತೆ ಚುನಾಯಿತ ಪ್ರತಿನಿಧಿಯನ್ನು ವಾಪಸು ಕರೆಸುವ ಜನಮತದ ಅಧಿಕಾರವನ್ನು ಮತದಾರರಿಗೆ ನೀಡಬೇಕು. ಇದನ್ನು ಹೊರತುಪಡಿಸಿ ಬಿಂಬಿಸುವ ಜನಮತ ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ ಅಷ್ಟೇ.

ನಮ್ಮಲ್ಲಿ ಶೇಕಡಾ 74ರಷ್ಟು ಜನರು ಸಾಕ್ಷರರು ಎಂದು ಅಧಿಕೃತ ಸಮೀಕ್ಷೆ ಹೇಳುತ್ತಿದೆ. ಅಂದರೆ ಇವರಲ್ಲಿ ಹಸ್ತಾಕ್ಷರವಷ್ಟೇ ಹಾಕಬಲ್ಲವರು, ಅರೆಶಿಕ್ಷಿತರು, ಓದಲು ಬರೆಯಲು ಬಾರದವರ ಸಂಖ್ಯೆಯೇ ಹೆಚ್ಚಿದೆ. ನಿಜವಾದ ಸಾಕ್ಷರರು, ಅಂದರೆ, ಕನಿಷ್ಠ ಪತ್ರಿಕೆ ಓದಬಲ್ಲವರು,ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸುವಷ್ಟು ಜ್ಞಾನಹೊಂದಿದವರ ಸಂಖ್ಯೆ ಅಧಿಕೃತ ಸಾಕ್ಷರರ ಅರ್ಧದಷ್ಟಾದರೂ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಇಂತಹ ವಿದ್ಯೆ ಇಲ್ಲದ ಬುದ್ದಿವಂತ ಜನರಲ್ಲಿ ಅಪಾರವಾದ ಸಾಮಾನ್ಯ ಜ್ಞಾನ ಇರುತ್ತದೆ. ಇಂತಹವರಿಗೆ ತಿಳಿಸಿ ಹೇಳಿದರೆ ಬಹುಬೇಗ ಅರ್ಥಮಾಡಿಕೊಳ್ಳುತ್ತಾರೆ, ಅಷ್ಟೇ ಸಲೀಸಾಗಿ ಇವರನ್ನು ತಪ್ಪುದಾರಿಗೆಳೆಯುವವರ ಹಿಂದೆ ಕೂಡಾ ಹೋಗುತ್ತಾರೆ.
ಜಾತಿ ವ್ಯವಸ್ಥೆಯ ವಾಸ್ತವದಲ್ಲಿ ಇಂತಹವರಲ್ಲಿ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಖ್ಯೆಯೇ ಹೆಚ್ಚು. ಹಿಂದಿನ ಪ್ರಧಾನಿ ವಿ.ಪಿ.ಸಿಂಗ್ ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಿದಾಗ ದೇಶವಿಡೀ ಹೊತ್ತಿ ಉರಿಯುತ್ತಿದೆ ಎಂಬ ಭಾವನೆಯನ್ನು ಹುಟ್ಟುಹಾಕಲಾಗಿತ್ತು. ಆ ಸಮಯದಲ್ಲಿ ಹೆಚ್ಚಿನ ಹಿಂದುಳಿದ ಜಾತಿಗಳ ಯುವಕ-ಯುವತಿಯರೇ, ‘ಇದು ದಲಿತರ ಮೀಸಲಾತಿ ನೀತಿ’ ಎಂದು ತಪ್ಪಾಗಿ ತಿಳಿದುಕೊಂಡು ಮಂಡಲ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿದ್ದುಂಟು. ಆದರೆ ಸತ್ಯ ಗೊತ್ತಾದಾಗ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರೇ ಒಂದು ಗುಂಪಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ಕಾರ್ಯದಲ್ಲಿ ಮುಂದಾದರು. ಇಂದು ಯಾರಾದರೂ ಮೀಸಲಾತಿ ವಿರುದ್ಧ ದನಿ ಎತ್ತುವ ಧೈರ್ಯ ಮಾಡಲು ಸಾಧ್ಯವೇ?
ಸಾಮಾಜಿಕ ಜಾಲತಾಣಗಳು, ಮೊಬೈಲ್ ಸಂದೇಶಗಳು ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಈಗಿನ ಕಾಲದಲ್ಲಿ ‘ಜನಾಭಿಪ್ರಾಯ’, ‘ಜನಮತ’ವನ್ನು ಸೃಷ್ಟಿಸುವುದು ಇನ್ನೂ ಸುಲಭ. ಮಂಡಲವಿರೋಧಿ ಚಳುವಳಿಯಲ್ಲಿ ತೇಲಿಹೋದ ಹಿಂದುಳಿದ ಜಾತಿಗಳಂತೆ ಈಗಲೂ ನಮ್ಮ ಯುವಕರು ಯಾರೋ ಸೃಷ್ಟಿಸುವ ‘ಜನಾಭಿಪ್ರಾಯ’, ‘ಜನಮತ’ದ ಅಲೆಯಲ್ಲಿ ತೇಲಿಹೋಗುವ ಅಪಾಯ ಇದೆ. ಸಿಐಡಿ,ಸಿಬಿಐ ಎಂದರೇನು? ಇವುಗಳ ನಡುವಿನ ವ್ಯತ್ಯಾಸಗಳೇನು? ಇದು ಯಾರ ಕೈಯಲ್ಲಿರುತ್ತದೆ? ಇದರ ದುರ್ಬಳಕೆ ಹೇಗೆ ನಡೆಸಲು ಸಾಧ್ಯ? ಇದನ್ನೆಲ್ಲ ಅರ್ಥಮಾಡಿಕೊಂಡು ಯಾರಾದರೂ ಸಿಬಿಐ ಉತ್ತಮ ಎಂದು ಹೇಳಿದರೆ ಒಪ್ಪಿಕೊಳ್ಳಬಹುದು. ಕಳೆದ ನಾಲ್ಕೈದು ದಿನಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಚಾನೆಲ್ ಗಳಲ್ಲಿ ಸಿಐಡಿ-ಸಿಬಿಐ ಬಗ್ಗೆ ವಸ್ತು ನಿಷ್ಠ ಚರ್ಚೆ ನಡೆದಿರುವುದನ್ನು ನಾನಂತೂ ನೋಡಿಲ್ಲ.
ಬದಲಾಗಿರುವ ಈ ಕಾಲದಲ್ಲಿಯೂ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳು ಮೀಸಲಾತಿ ಪರ-ವಿರೋಧ ಜನಮತ ಸಂಗ್ರಹಿಸಿದರೆ ವಿರೋಧಿಸುವ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಬಹುದು. ಆದರೆ ಯಾವುದಾದರೂ ಸರ್ಕಾರ ಇಲ್ಲವೇ ರಾಜಕೀಯ ಪಕ್ಷ ಮೀಸಲಾತಿ ವಿರುದ್ಧ ನಿಲ್ಲುವ ಧೈರ್ಯ ತೋರಿಸಲು ಸಾಧ್ಯವೇ? ಇದೇ ರೀತಿ ರಾಜ್ಯ ಬಜೆಟ್ ನ ಯೋಜನಾ ವೆಚ್ಚದಲ್ಲಿ ಶೇಕಡಾ 24ರಷ್ಟನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟಿರುವ ಇಲ್ಲವೇ ಜಾತಿ ಗಣತಿ ನಡೆಸುವ ಸರ್ಕಾರದ ನಿರ್ಧಾರದ ಬಗ್ಗೆ ಯಾವುದಾದರೂ ಪತ್ರಿಕೆ ಇಲ್ಲವೆ ಟಿವಿ ಚಾನೆಲ್ ಗಳಲ್ಲಿ ಜನಮತ ಸಂಗ್ರಹಿಸಿದರೆ ವಿರೋಧವೇ ಹೆಚ್ಚು ವ್ಯಕ್ತವಾಬಹುದು. ಯಾಕೆಂದರೆ ಸರ್ಕಾರದ ಈ ನಿರ್ಧಾರದ ಫಲಾನುಭವಿಗಳು ಪತ್ರಿಕೆಗಳಿಗೆ ಓದುಗರ ಓಲೆ ಬರೆಯುವಷ್ಟು, ಇಲ್ಲವೇ ಮೊಬೈಲ್ ಮೆಸೆಜ್ ಮೂಲಕ ತಮ್ಮ ಅಭಿಪ್ರಾಯವನ್ನು ಚಾನೆಲ್ ಗಳಿಗೆ ತಿಳಿಸುವಷ್ಟು ಪರಿಣತರಲ್ಲ. ಹಾಗೆಂದ ಮಾತ್ರಕ್ಕೆ ಆ ಜನರ ಸಂಖ್ಯೆಗೆ ಬೆಲೆಯೇ ಇಲ್ಲವೇ? ಕೂಗು ಹಾಕಿದವರಷ್ಟೇ ಜನಗಳೇ?

-------------------------------------------------------------------------------------------------------------------------------
ಸುದ್ದಿ ಸೋರಿಕೆ ಮತ್ತು ಪತ್ರಕರ್ತನೊಬ್ಬನ ಹಳವಂಡ (ಮಾರ್ಚ್ 22, 2015)
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಪತ್ರಕರ್ತರನ್ನು ಅಟ್ಟಿಸಿಕೊಂಡು ಹೋಗಿ ಸುದ್ದಿಯ ಸೋರಿಕೆ ಮಾಡುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನನ್ನ ಪತ್ರಕರ್ತ ಮಿತ್ರ ಸುದೀಪ್ತೋ ಮೊಂಡಲ್ ವರದಿ ಮಾಡಿದ್ದಾರೆ. ಈ ವರದಿಯನ್ನು ನಾಲ್ಕು ಗೋಡೆಗಳ ಮಧ್ಯೆ ಇರುವ ಡೆಸ್ಕ್ ನಲ್ಲಿ ಕೂತಿರುವ ಬಾವಿಯೊಳಗಿರುವ ಕಪ್ಪೆಯಂತಹ ಪತ್ರಕರ್ತರು ಬರೆದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೆ ಇದನ್ನು ಬರೆದದ್ದು ಜರ್ನಲಿಸ್ಟ್ ಗಳು ಆ್ಯಕ್ಟಿವಿಸ್ಟ್ ಕೂಡಾ ಆಗಬೇಕೆಂದು ಕಿರಿಯ ಪತ್ರಕರ್ತರಿಗೆ ಬೋದನೆ ಮಾಡುವ ಸುದೀಪ್ತೊ.
ವಯಸ್ಸಿನಲ್ಲಿ ಅವರಿಗಿಂತ ಹಿರಿಯನೆಂಬುದನ್ನು ಬಿಟ್ಟರೆ ಅವರಷ್ಟು ಅನುಭವ ನನಗಿಲ್ಲವೇನೋ. ಆದರೆ ನನ್ನ ಸೀಮಿತ ಜ್ಞಾನ ಮತ್ತು ಅನುಭವದ ಆಧಾರದಲ್ಲಿ ಹೇಳುವುದಾದರೆ ಸಮಾಜದಲ್ಲಿ ಅಲ್ಲೋಲಕಲ್ಲೋಲ ಮಾಡಿದ ಮಾಧ್ಯಮ ರಂಗದ ಮಹಾ ವರದಿಗಳೆಲ್ಲವೂ ಸೋರಿಕೆಯಿಂದ ಪಡೆದುಕೊಂಡ ಮಾಹಿತಿಯನ್ನು ಆಧರಿಸಿದ್ದು. ಸುದ್ದಿ ಎಲ್ಲಿಯಾದರೂ ಸೋರದಿದ್ದರೆ ವರದಿಗಾರ ಉಪವಾಸ ಬಿದ್ದು ಸಾಯಬೇಕು ಅಷ್ಟೆ. ಸಮಸ್ಯೆ ಸೋರಿಕೆಯದ್ದಲ್ಲ, ಸೋರಿಕೆಯಲ್ಲಿನ ಯಾವ ಸುದ್ದಿ ವಿಶ್ವಾಸಾರ್ಹವಾದುದು ಎಂಬ ತೀರ್ಮಾನದ್ದು. ಇದು ನೀವು ಸೋರಿಕೆಗಾಗಿ ಎಂತಹ ಮೂಲಗಳನ್ನು ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮೂಲಗಳು ನೀವು ಎಂತಹವರು ಎನ್ನುವುದನ್ನು ಅವಲಂಬಿಸಿರುತ್ತದೆ.
ಇಂದು ಜಗತ್ತಿನಾದ್ಯಂತ ಸರ್ಕಾರಿ ದಾಖಲೆಗಳನ್ನು ಸೋರಿಕೆ ಮಾಡಲಿಕ್ಕಾಗಿಯೇ ವಿಷಲ್ ಬ್ಲೋವರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ವಿಕಿಲೀಕ್ಸ್ ಗೊತ್ತಲ್ಲಾ, ಅದೇ ರೀತಿ ‘ಪ್ರೊ ಪಬ್ಲಿಕಾ’, ‘ಸನ್ ಲೈಟ್ ಫೌಂಡೇಷನ್ ‘ ಮೊದಲಾದ ವಿಷಲ್ ಬ್ಲೋವರ್ ಸಂಸ್ಥೆಗಳು ಸಕ್ರಿಯವಾಗಿವೆ. ಯಾವ ಸರ್ಕಾರ ಕೂಡಾ ತನಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಪತ್ರಿಕಾ ಹೇಳಿಕೆ ಮೂಲಕ ನೀಡುವುದಿಲ್ಲ. ‘ '...ಅಧಿಕಾರದಲ್ಲಿರುವವರು ಏನನ್ನು ಸ್ವಯೀಚ್ಚೆಯಿಂದ ತಿಳಿಸುತ್ತಾರೋ ಅದು ಜಾಹೀರಾತು, ಉಳಿದೆಲ್ಲವೂ ಸುದ್ದಿ....’ ಎನ್ನುವ ಸುದ್ದಿ ಬಗೆಗಿನ ಒಂದು ಅರ್ಥಪೂರ್ಣ ವ್ಯಾಖ್ಯಾನ ಇದೆ. ಇದನ್ನು ಪತ್ರಕರ್ತರು ಅರ್ಥಮಾಡಿಕೊಂಡರೆ ಸೋರಿಕೆಯಿಂದ ಸಮಾಜಕ್ಕೆ ಏನೂ ನಷ್ಟವಾಗಲಾರದು.
ಸುದೀಪ್ತೋ ವರದಿಯನ್ನು ನೋಡಿದ ದೆಹಲಿಯ ಜನಪ್ರಿಯ ಚಾನೆಲ್ ವೊಂದರ ಸಂಪಾದಕರು ಬೆಂಗಳೂರಿನ ಮಹಿಳಾ ವರದಿಗಾರರಿಗೆ ಪೋನ್ ಮಾಡಿ, ಪೊಲೀಸರು ಬೆನ್ನತ್ತಿರುವ ಪತ್ರಕರ್ತರ ಜತೆ ಮಾತನಾಡಿ ವರದಿ ಮಾಡಲು ಹೇಳಿದರಂತೆ. ‘...... ಯಾವ ಕಸಬುದಾರ ಪತ್ರಕರ್ತ ಸೋರಿಕೆ ಮಾಡುವ ಮೂಲವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿ ತನ್ನ ವೃತ್ತಿಯನ್ನು ಕೊಂದುಕೊಳ್ಳಲು ಸಿದ್ದನಿರುತ್ತಾನೆ ?. ಅಂತಹವರಿಗೆ ಬೇರೆ ದುರುದ್ಧೇಶ ಇದ್ದಿದ್ದರೆ ಮಾತ್ರ ಅದು ಸಾಧ್ಯ. ನಾನಂತೂ ಅದನ್ನು ಮಾಡಲಾರೆ...’ ಎಂದು ಆ ಯುವಪತ್ರಕರ್ತೆ ಹಿರಿಯ ಸಹದ್ಯೋಗಿಯ ಬಾಯಿ ಮುಚ್ಚಿಸಿದರಂತೆ. ನಾಲ್ಕೈದು ವರ್ಷಗಳ ಮಾಧ್ಯಮ ಅನುಭವದ ಈ ಯುವಪತ್ರಕರ್ತೆ ಕೊಟ್ಟಿರುವ ಉತ್ತರ ನೋಡಿ ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ನನಗೆ ಇನ್ನಷ್ಟು ಭರವಸೆಮೂಡಿತು.
---------------------------------------------------------------------------------------------------------------------------------
ಎಲ್ಲ ಲೀಕ್ ಗಳು ಊಹಾಪೋಹಗಳಲ್ಲ... (ಮಾರ್ಚ್ 24, 2015)
ಸುದೀಪ್ತೊ ಮೊಂಡಲ್ ವರದಿಯಿಂದಾಗಿ ಗೊಂದಲಕ್ಕೀಡಾದ ಕೆಲವು ಕಿರಿಯ ಪತ್ರಕರ್ತರು ನನ್ನೊಡನೆ ನಡೆಸಿದ ಮಾತುಕತೆಯೇ ಆ ಬಗ್ಗೆ ನಾನು ಪ್ರತಿಕ್ರಿಯಿಸಲು ಪ್ರೇರಣೆ. ಇಂತಹದೊಂದು ಅಕಾಡೆಮಿಕ್ ಚರ್ಚೆಯಿಂದ ಯುವಪತ್ರಕರ್ತರಿಗೆ ಒಂದು ಸ್ಪಷ್ಟತೆ ಸಿಗಲಿ ಎನ್ನುವುದು ನನ್ನ ಉದ್ದೇಶವಾಗಿತ್ತು. ವೃತ್ತಿಪರ ಜತೆ ಸ್ವಲ್ಪ ಕಿಲಾಡಿಯೂ ಆಗಿರುವ ಸುದೀಪ್ತೊ ನನ್ನ ಸ್ನೇಹಿತ. ಆತನ ವರದಿಯಲ್ಲಿ ದುರುದ್ದೇಶವಿತ್ತೆಂದು ಹೇಳುವುದು ಖಂಡಿತ ನನ್ನ ಉದ್ದೇಶ ಆಗಿರಲಿಲ್ಲ. ಕನ್ನಡ ಓದು-ಬರಹ ಬಲ್ಲವರು ತಾಳ್ಮೆಯಿಂದ ನಾನು ಬರೆದುದನ್ನು ಓದಿದರೆ ಅದು ಅರ್ಥವಾಗಬಹುದು, ಉಳಿದವರ ಬಗ್ಗೆ ನಾನು ಹೇಳಲಾರೆ.
ನಾನು ಬಳಸಿದ ‘ಹಳವಂಡ’ ಶಬ್ದವೇ ಮಾನಹಾನಿಕರ ಎಂದು ಯಾವನೋ ಒಬ್ಬ ನನ್ನ ಜತೆ ವಾದ ಮಾಡತೊಡಗಿದ್ದ. ‘ನೋಡೋ ಮಾರಾಯಾ, ಹತ್ತು ರೂಪಾಯಿ ಖರ್ಚು ಮಾಡಿ ಕನ್ನಡ ರತ್ನಕೋಶ ಕೊಂಡು ಶಬ್ದದ ಅರ್ಥ ನೋಡು. ಆ ಶಬ್ದದಲ್ಲಿ ಯಾವುದೇ ಮಾನಹಾನಿಕರವಾದುದು ಇಲ್ಲ’ ಎಂದು ಮನವರಿಕೆ ಮಾಡಿಕೊಡುವಲ್ಲಿ ನಾನು ಸುಸ್ತಾಗಿದ್ದೆ. ಇದು ನಮ್ಮಲ್ಲಿ ಕೆಲವರ ಸಮಸ್ಯೆ.ಓದಿಕೊಳ್ಳದೆ, ಅನುಭವವನ್ನು ಗಳಿಸಿಕೊಳ್ಳದೆ ಬಹುಬೇಗ ಹಿರಿಯರಾಗುವ ತವಕ. ಈ ವಿಷಯವನ್ನು ಬೆಳೆಸುವ ಉದ್ದೇಶ ನನಗಿರಲಿಲ್ಲ. ಅಲ್ಲಲ್ಲಿ ವಿಶ್ಲೇಷಣೆ, ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾತುಗಳನ್ನು ಹೇಳಬೇಕಾಗಿದೆ.
ಮೊದಲನೆಯದಾಗಿ, ದಾಖಲೆಗಳಿಲ್ಲದೆ ಲೀಕ್ ಮಾಡುತ್ತಿದ್ದಾರೆ ಎನ್ನುವುದೇ ತಪ್ಪು. ಕೊಡದಲ್ಲಿ ಏನಾದರೂ ತುಂಬಿದ್ದರೆ ಸೋರಬಹುದೇ ಹೊರತು ಖಾಲಿ ಕೊಡ ಸೋರಲಾರದು. ಆದ್ದರಿಂದ ಲೀಕ್ ಎಂದರೆ ಜತೆಯಲ್ಲಿ ದಾಖಲೆಗಳಿವೆ ಎಂದರ್ಥ. ದಾಖಲೆರಹಿತ ಸುದ್ದಿ ಊಹಾಪೋಹ, ವದಂತಿ ಆಗುತ್ತದೆ. ಇದು ಲೀಕ್ ಗೂ ಊಹಾಪೋಹಕ್ಕೂ ಇರುವ ವ್ಯತ್ಯಾಸ.
ಎರಡನೆಯದಾಗಿ, ಲೀಕ್ ಮಾಡುವವರು ಸದಾ ದಾಖಲೆಗಳನ್ನು ಕೊಡುವುದಿಲ್ಲ. ನಾನೇ ಎಷ್ಟೋ ಬಾರಿ ಕೈಯಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳದೆ ಬರೆದಿದ್ದೇನೆ, ಯಾಕೆಂದರೆ ಆ ದಾಖಲೆಗಳನ್ನು ನನ್ನ ಕಣ್ಣಲ್ಲಿ ನೋಡಿದ್ದೇನೆ. ದಾಖಲೆಗಳನ್ನು ತೋರಿಸಿದವ ನನ್ನ ನಂಬಿಕಸ್ತ ವ್ಯಕ್ತಿ ಆಗಿರುವ ಕಾರಣ ನಾನು ಅವನನ್ನು ನಂಬಿದ್ದೇನೆ, ಅವನು ನನ್ನನ್ನು ನಂಬಿರುತ್ತಾನೆ ಅಷ್ಟೆ. ಅಗತ್ಯ ಬಿದ್ದರೆ ನಾನು ನಂಬಿದ ವ್ಯಕ್ತಿ ದಾಖಲೆಗಳನ್ನು ಒದಗಿಸಬಲ್ಲ ಎಂಬ ಭರವಸೆ ಅದು. ಈ ಕಾರಣದಿಂದಾಗಿಯೇ ಇಲ್ಲಿಯ ವರೆಗೆ ನನ್ನ ವಿರುದ್ಧ ಯಾವುದೇ ಮಾನಹಾನಿ ಮೊಕದ್ದಮೆಗಳಿಲ್ಲ.
ಆದ್ದರಿಂದ ತಾನು ಬರೆಯಲಾರದ ವರದಿಗಳನ್ನು ಇನ್ನೊಬ್ಬರು ಯಾರೋ ಬರೆದ ಮಾತ್ರಕ್ಕೆ ಅವರಲ್ಲಿ ಯಾವುದೇ ದಾಖಲೆಗಳಿಲ್ಲದೆ ಕತೆ ಹೆಣೆಯುತ್ತಾರೆ ಎಂದು ಹೀಗಳೆಯುವುದು ವೃತ್ತಿಮಾತ್ಸರ್ಯ, ಇಲ್ಲವೆ ಹತಾಶೆ ಆಗುತ್ತದೆ ಅಷ್ಟೆ. ದಾಖಲೆಗಳಿಲ್ಲದೆ ಯಾರಾದರೂ ಬರೆದರೆ ಅದಕ್ಕಾಗಿ ಕಾನೂನಿನಲ್ಲಿ ಏನು ಶಿಕ್ಷೆ ಇದೆಯೋ ಅದನ್ನು ಅನುಭವಿಸುತ್ತಾರೆ .ನಾನು ಹಿಂದೆಯೇ ಹೇಳಿದ ಹಾಗೆ ಸಮಸ್ಯೆ ಲೀಕ್ ನದ್ದಲ್ಲ, ಅದರಿಂದ ಪಡೆವ ಸುದ್ದಿಯ ಸತ್ಯಾಸತ್ಯತೆಯನ್ನು ತೀರ್ಮಾನಿಸುವ ಪತ್ರಕರ್ತನ ವಿವೇಚನೆಯದ್ದು.
ಮೂರನೆಯದಾಗಿ, ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಪೊಲೀಸರು ಇಂತಹ ಊಹಾಪೋಹಗಳನ್ನು ಹಬ್ಬಿಸುವುದನ್ನು ಯಾರೂ ಅಲ್ಲಗಳೆಯಲಾರರು. ಇದು ಪತ್ರಕರ್ತರೆಲ್ಲರ ಅನುಭವ. ಎರಡು ವರ್ಷಗಳ ಹಿಂದೆ ಕೆಲವು ಪತ್ರಕರ್ತರ ಕೊಲೆ ಸಂಚಿನ ಆರೋಪದ ಮೇಲೆ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತ ಸಿದ್ದಿಕಿ ಮತ್ತು ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅದೇ ರೀತಿ ದೆಹಲಿ ಪೊಲೀಸರು ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತನನ್ನು ಪೊಲೀಸರು ಸುಳ್ಳು ಮೊಕದ್ದಮೆಯಲ್ಲಿ ಬಂಧಿಸಿ ಕೊನೆಗೆ ಬಿಡುಗಡೆ ಮಾಡಿದ್ದ ಪ್ರಕರಣವನ್ನು ಉಲ್ಲೇಖಿಸಿ ಆ ಕಾಲದಲ್ಲಿ ನಾನೊಂದು ಅಂಕಣವನ್ನು ಬರೆದಿದ್ದೆ. (‘’ಊಹಾಪೋಹದ ಮಹಾಪೂರದಲ್ಲಿ ಕೊಚ್ಚಿ ಹೋಗುವ ಮುನ್ನ’’)
ಪತ್ರಕರ್ತರ ಅನುಭವದಲ್ಲಿ ಇವೆಲ್ಲ ಸಾಮಾನ್ಯ. ಹೀಗೆಂದ ಮಾತ್ರಕ್ಕೆ ಲೀಕ್ ಗಳೆಲ್ಲವೂ ಉರಿಯುವ ಕೆಂಡ, ಅದನ್ನು ಮುಟ್ಟಲು ಹೋಗಲೇಬಾರದು ಎಂದು ತೀರ್ಮಾನಿಸಿದರೆ ಪತ್ರಕರ್ತ ಸುದ್ದಿಯ ಹಸಿವಿನಿಂದ ಸಾಯಬೇಕಾಗುತ್ತದೆ. ಅದೇ ರೀತಿ ಹಸಿವಾಗುತ್ತದೆಯೆಂದು ಕೈಗೆ ಸಿಕ್ಕಿದ್ದನ್ನೆಲ್ಲವನ್ನೂ ತಿನ್ನಲಿಕ್ಕಾಗುವುದಿಲ್ಲವಲ್ಲಾ? ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರಿನಿಂದ ಮಂಗಳೂರಿನ ವರೆಗಿನ ಹಲವಾರು ಪತ್ರಕರ್ತರಿಗೆ ದುಡ್ಡು ಹಂಚಲಾಗುತ್ತಿದೆ ಎಂಬ ಊಹಾಪೋಹ ಹುಟ್ಟಿಕೊಂಡಿತ್ತು. ಇಂತಹ ಪತ್ರಕರ್ತರ ಹೆಸರುಗಳನ್ನೊಳಗೊಂಡ ಪತ್ರವನ್ನು ಯಾರೋ ನನಗೂ ಪೋಸ್ಟ್ ಮಾಡಿದ್ದರು. ಆದರೆ ಅದೊಂದು ಅನಾಮಧೇಯ ಪತ್ರವಾಗಿದ್ದ ಕಾರಣ ಬಾಯಿಮಾತಿನಲ್ಲಿ ಎಲ್ಲರೂ ಸುದ್ದಿ ಪ್ರಸಾರ ಮಾಡಿದರೇ ಹೊರತು ಹೆಸರುಗಳನ್ನು ಯಾರೂ ಬರೆಯಲಿಲ್ಲ. ಇದಿಷ್ಟನ್ನೇ ನಾನು ಹೇಳಲು ಹೊರಟಿದ್ದು.
ನಾಲ್ಕನೆಯದಾಗಿ, ಸುದೀಪ್ತೋ ವರದಿಯಲ್ಲಿ ನನಗಿದ್ದ ಏಕೈಕ ಆಕ್ಷೇಪ ಅದು ಸಮತೂಕದ್ದಾಗಿರಲಿಲ್ಲ ಎನ್ನುವುದು. ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಎರಡು ಥಿಯರಿಗಳು ಹರಿದಾಡುತ್ತಿವೆ. ಒಂದು ಆತ್ಮಹತ್ಯೆ, ಇನ್ನೊಂದು ಕೊಲೆ. ಆತ್ಮಹತ್ಯೆ ಎಂದು ಸಾಧಿಸಲು ದಾಖಲೆಗಳನ್ನು ನೀಡದೆ ಬಾಯಿ ಮಾತಿನಲ್ಲಿ ಸುದ್ದಿಗಳನ್ನು ಹರಡುತ್ತಿರುವವರು ಪೊಲೀಸರು ಎನ್ನುವುದು ಸುದೀಪ್ತೋ ಸೇರಿದಂತೆ ಹಲವು ಪತ್ರಕರ್ತರ ಆರೋಪ. ಇದು ನಿಜವೂ ಇರಬಹುದು. ಇದೇ ರೀತಿ ಕೊಲೆ ಎಂದು ಸಾಧಿಸಲು ಯಾವುದೇ ದಾಖಲೆಗಳಿಲ್ಲದೆ ಸುದ್ದಿಗಳನ್ನು ಬಿತ್ತುತ್ತಿರುವ ಇನ್ನೊಂದು ಗುಂಪೂ ಇದೆ. ‘’ರವಿ ಮೈಮೇಲೆ ಗಾಯಗಳಿದ್ದವು’;, ಮಂಪರು ಭರಿಸುವ ಔಷಧಿ ಕೊಟ್ಟಿದ್ದಾರೆ, ಮೂಗು ಕೆಂಪಾಗಿತ್ತು, ದೇಹದಲ್ಲಿ ಸಯನೈಡ್ ಪತ್ತೆಯಾಗಿದೆ ಇಂತಹ ನೂರಾರು ಊಹಾಪೋಹಗಳು ಇದರಲ್ಲಿ ಸೇರಿವೆ. ಮೊದಲನೆಯ ಗುಂಪಿನ ಊಹಾಪೋಹಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಸುದೀಪ್ತೊ, ಜತೆಗೆ ಎರಡನೆ ಗುಂಪಿನ ಊಹಾಪೋಹಗಳನ್ನೂ ಉಲ್ಲೇಖಿಸಿದ್ದರೆ ಅವರ ವರದಿ ಪರಿಪೂರ್ಣವಾಗುತ್ತಿತ್ತು ಎಂದು ನನ್ನ ಭಾವನೆ.
ಕೊನೆಯದಾಗಿ, ‘’... ಸುದೀಪ್ತೋ ದಿನೇಶ್ ಅಮಿನ್ ಮಟ್ಟು ಜತೆ ಮಾತನಾಡಿದ್ದಾನೆ. ಸ್ಪಷ್ಟನೆ ನೀಡಲು ಲಭ್ಯವಿಲ್ಲದ ಸತ್ತಿರೋ ವ್ಯಕ್ತಿ ವಿರುದ್ಧ ಮಾನಹಾನಿ ಸುದ್ದಿ ಮಾಡಲು ಸಾಧ್ಯ ಇಲ್ಲ ಎಂದು ಸುದೀಪ್ತೊ, ದಿನೇಶ್ ಅಮಿನ್ ಮಟ್ಟುಗೆ ಸ್ಪಷ್ಟೀಕರಣ ನೀಡಿದ್ದಾನೆ. ಈ ಸ್ಪಷ್ಟೀಕರಣದ ನಂತರವೂ ಸುದೀಪ್ತೋ ವಿರುದ್ಧ ಫೇಸ್ ಬುಕ್ ನಲ್ಲಿ ಹೀಗಳೆದದ್ದು ಸರಿಯಲ್ಲ ...’’ ಎಂದು ನವೀನ್ ಸೂರಿಂಜೆ ತನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ಹೇಳಿದ್ದಾರೆ. ಸುದೀಪ್ತೋ ಪರವಾಗಿ ವಕಾಲತ್ತು ವಹಿಸಿ ಈ ರೀತಿ ತಪ್ಪು ಅಭಿಪ್ರಾಯಗಳನ್ನು ಹುಟ್ಟಿಸುವ ದರ್ದು ನವೀನ್ ಗೇನಿತ್ತೆಂದು ನನಗೆ ಗೊತ್ತಾಗುತ್ತಿಲ್ಲ. ಸುದೀಪ್ತೊ ಬಯಸಿದರೆ ನಮ್ಮ ನಡುವೆ ನಡೆದ ಸಂಭಾಷಣೆಯನ್ನು ನಾನೇ ಬಹಿರಂಗಗೊಳಿಸುವೆ. ನಮ್ಮ ನಡುವೆ ಮೆಸೆಜ್ ಗಳ ವಿನಿಮಯವೂ ಆಗಿದೆ,ಅದನ್ನೂ ತಿಳಿಸುವೆ. ಸುದೀಪ್ತೊ ಕಾಲ್ ಡಿಟೇಲ್ ಗಳನ್ನು ನನಗೆ ವಾಟ್ಸ್ ಅಪ್ ನಲ್ಲಿ ಕಳಿಸಿ, ದೃಡೀಕರಿಸುವಂತೆ ಕೇಳಿದ್ದರು. ನಾನು ನಿರಾಕರಿಸಿದ್ದೆ.
ಸುದೀಪ್ತೋ ಸೇರಿದಂತೆ ಯಾರಾದಾರೂ ಒಬ್ಬ ಪತ್ರಕರ್ತ ಮುಂದೆ ಬಂದು ‘ದಿನೇಶ್ ಅವರು ದಾಖಲೆಗಳನ್ನು ನೀಡದೆ ಊಹಾಪೋಹಗಳ ಆಧಾರದಲ್ಲಿ ಸುದ್ದಿ ಬರೆಯಲು ಹೇಳಿದ್ದಾರೆ’’ ಎಂದು ತಿಳಿಸಿದರೆ ಇಲ್ಲವೆ ಈ ಆರೋಪವನ್ನು ನವೀನ್ ಸಾಬೀತುಪಡಿಸಿದರೆ ಆ ಕ್ಷಣದಿಂದ ನಾನು ಬರವಣಿಗೆಯನ್ನು ನಿಲ್ಲಿಸಿಬಿಡುತ್ತೇನೆ. ನಾನು ಪತ್ರಕರ್ತನಾಗಿ ಸಕ್ರಿಯನಾಗಿದ್ದಾಗಲೂ ನನ್ನ ಮಾಲೀಕರಿಗೆ ನನ್ನನ್ನು ಮಾರಿಕೊಂಡಿರಲಿಲ್ಲ, ಈಗಲೂ ಸರ್ಕಾರಕ್ಕೆ ನನ್ನನ್ನು ಮಾರಿಕೊಂಡಿಲ್ಲ.

Saturday, March 14, 2015

ಜಾತಿ ಒಳಗೆ ಇಣುಕಿ

(ಪ್ರಜಾವಾಣಿಯಲ್ಲಿ ನಡೆಯುತ್ತಿರುವ 'ಜಾತಿವಾರು ಜನಗಣತಿ ಸುತ್ತ'.. ಚರ್ಚೆಗೆ ಪ್ರತಿಕ್ರಿಯೆ)ಎಸ್.ಎಂ.ಜಾಮದಾರ ಅವರ  ‘ಜಾತಿವಾರು ಜನಗಣತಿ ಸುತ್ತ...’ ಎಂಬ ಲೇಖನ (ಪ್ರ.ವಾ., ಫೆ. 19) ತಪ್ಪುದಾರಿಗೆಳೆಯುವಂತಿದೆ. ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧಾರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿ ಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಶಾಸಕಾಂಗ, ನ್ಯಾಯಾಂಗ ಹಾಗೂ  ಸಂವಿಧಾನ.  ಜಾಮದಾರರು ಇದನ್ನು ಗುರುತಿಸಲು ವಿಫಲರಾಗಿರುವುದು ಆಶ್ಚರ್ಯ.ಜಾತಿ,  ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ಕೆಲವು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ವರ್ಗಗಳು ಯಾವುವು? ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದಕ್ಕೆ  ಸಂವಿಧಾನದ 15 (3), 15 (4), 16 (4) ಮತ್ತು 46ನೇ ಪರಿಚ್ಛೇದಗಳಲ್ಲಿ ಉಲ್ಲೇಖವಿದೆ. ಜಾಮದಾರರು ಆರೋಪಿಸುವಂತೆ ಈ ಜಾತಿ ಗಣತಿ ಹಿಂದೆ ಕುತಂತ್ರ ಇರುವುದು ನಿಜವೆಂದಾದರೆ ಅವರು ಈ ಆರೋಪವನ್ನು ಸಂವಿಧಾನದ ವಿರುದ್ಧ ಮಾಡಬೇಕಾಗುತ್ತದೆ.‘ಹಿಂದಿನ ಮೂರು ಜನಗಣತಿಗಳು ಎಲ್ಲಿ ಹೋದವು? ಎರಡು ದಶಕಗಳಲ್ಲಿ ರಾಜ್ಯದ ಸಾಮಾಜಿಕ ರಚನೆಯಲ್ಲಿ ಗುರುತಿಸಲಾರದಷ್ಟು ಪರಿವರ್ತನೆಯಾಗಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.  ಹಿಂದಿನ ಜಾತಿಗಣತಿ ಮತ್ತು ಈಗ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಗಳ ನಡುವಿನ ವ್ಯತ್ಯಾಸವನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರುವುದು ಆಶ್ಚರ್ಯಕರ. ಹಿಂದಿನ ಆಯೋಗಗಳೆಲ್ಲವೂ  ಆಧರಿಸಿದ್ದು 1931ರ ಜನಗಣತಿಯ ಜಾತಿ ಪ್ರಮಾಣವನ್ನು ಜನಸಂಖ್ಯೆಯ ಹೆಚ್ಚಳದ ಪ್ರಮಾಣಕ್ಕೆ ಹಿಗ್ಗಿಸಿ ಮಾಡಿದ ಲೆಕ್ಕವನ್ನು. ಇಂತಹ ಸಮೀಕ್ಷೆಗಳಿಗೆ ಮಿತಿಗಳಿರುವುದನ್ನು ನ್ಯಾಯಾಲಯವೇ ಒಪ್ಪಿಕೊಂಡಿದೆ.ಜಾತಿಗಳನ್ನು ಜೀವಂತವಾಗಿಡಲು ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈಗಿನ ಮೀಸಲಾತಿಗೆ ಆಧಾರವಾಗಿರುವ ಜಾತಿ ಸಂಖ್ಯೆಗಳ ವೈಜ್ಞಾನಿಕತೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕ ಮೀಸಲಾತಿ ಕಲ್ಪಿಸಲಾಗಿದೆ, ನಮ್ಮಲ್ಲಿ ಜಾತಿ ನಿರ್ದಿಷ್ಟವಾದ ಯೋಜನೆಗಳಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಮಾಹಿತಿ ಇಲ್ಲದೆ ಈ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಈಗಿನ ಜನಗಣತಿಯಲ್ಲಿ ಈ ಮಾಹಿತಿ ಎಲ್ಲಿ ಲಭ್ಯ ಇದೆ?‘ಭಾರತದಲ್ಲಿ ಜಾತಿ ಎನ್ನುವುದು ಸಾಮಾಜಿಕ ವರ್ಗ. ಸಾಮಾಜಿಕ ಹಿಂದುಳಿಯುವಿಕೆಯನ್ನು ಗುರುತಿಸಲು ಜಾತಿ ಪ್ರಮುಖ ಮಾನದಂಡ. ಇದಕ್ಕಾಗಿ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು. ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು  ಕೇಂದ್ರ, ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು 23 ವರ್ಷಗಳ ಹಿಂದೆ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು.‘ನೇರ ಮೀಸಲಾತಿಗೆ ಅವಕಾಶವಿಲ್ಲದಾಗ ಉಪಜಾತಿಗಳಿಗೆ ಒಳ ಮೀಸಲಾತಿಯ ಅಸ್ತ್ರವನ್ನು ಬಳಸಿ ಮುಖ್ಯ ಜಾತಿಗಳಿಂದ ಉಪಜಾತಿಗಳನ್ನು ಬೇರ್ಪಡಿಸಿ ನಿಯಂತ್ರಿಸುವ ಹುನ್ನಾರಗಳು ನಮ್ಮ ಮುಂದಿವೆ’ ಎಂದು ಜಾಮದಾರ ಹೇಳಿದ್ದಾರೆ. ನಮ್ಮಲ್ಲಿ ಯಾವ ಜಾತಿಯೂ ಏಕಶಿಲಾ ರೂಪದ್ದಲ್ಲ, ಅದರೊಳಗೆ ನೂರಾರು ಉಪಜಾತಿಗಳಿವೆ. ಮೀಸಲಾತಿಯ ಲಾಭವನ್ನು ನಿರ್ದಿಷ್ಟ ಜಾತಿಯೊಳಗಿನ ಬಲಾಢ್ಯ ಗುಂಪುಗಳಷ್ಟೇ ಕೈವಶ ಮಾಡಿಕೊಳ್ಳುವುದರಿಂದ ಅದೇ ಜಾತಿಯೊಳಗಿನ ದುರ್ಬಲರ ಗುಂಪಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಇದೆ. ಹಾಗಿದ್ದರೆ ಸತ್ಯಾಂಶವನ್ನು ತಿಳಿದುಕೊಳ್ಳುವುದು ಬೇಡವೇ? ಸಂಖ್ಯಾ ಬಲಕ್ಕಾಗಿ ಎಲ್ಲರೂ ಬೇಕು, ಸೌಲಭ್ಯಗಳ ಪ್ರಶ್ನೆ ಎದುರಾದಾಗ ‘ಅವರಿಗೆ ಬೇಡ, ನಮಗಷ್ಟೇ ಸಾಕು’ ಎಂದು ಹೇಳುವುದು ಆಷಾಢಭೂತಿತನ.ಜಾತಿಗಣತಿ ಎನ್ನುವುದು ಆರ್ಎಸ್ಎಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಅವರು ಕಳವಳಪಟ್ಟಿದ್ದಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ,  ಕಂದಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು, ಪಡೆದುಕೊಂಡವರು ಯಾರು ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?ಬಲಿಷ್ಠ ಜಾತಿಗಳ ನಾಯಕರ ನೇತೃತ್ವದಲ್ಲಿಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ  ಎಂಬ ಆಧಾರರಹಿತ ರಾಜಕೀಯ ವಿಶ್ಲೇಷಣೆಯನ್ನು ಜಾಮದಾರ ಮುಂದಿಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮೊದಲ ಬಾರಿಗೆ ಜಾತಿ ಬಲ ಇಲ್ಲದ ದೇವರಾಜ ಅರಸು ಅಧಿಕಾರಕ್ಕೆ ಬಂದಿರುವುದನ್ನು ಅವರು ಮುಚ್ಚಿಡುತ್ತಾರೆ, ಅರಸು ಅಧಿಕಾರ ಕಳೆದುಕೊಂಡದ್ದನ್ನು ಮಾತ್ರ ಪ್ರಸ್ತಾಪಿಸುತ್ತಾರೆ. 1983ರಲ್ಲಿ ಕಾಂಗ್ರೆಸ್  ಪಕ್ಷವನ್ನು ಸೋಲಿಸಿದ್ದು ಎಸ್.ಬಂಗಾರಪ್ಪ ಮತ್ತು ಅಬ್ದುಲ್ ನಜೀರ್ ಸಾಬ್ ನೇತೃತ್ವದ ಜನತಾ ರಂಗ. 1994ರಲ್ಲಿ ಕಾಂಗ್ರೆಸ್ ಪಕ್ಷ ಸೋತದ್ದು ವೀರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ಮೋಸ ದಿಂದ ಎಂದು ಹೇಳುವವರು ಆ ಚುನಾವಣೆಯಲ್ಲಿ ಬಂಗಾರಪ್ಪ ಅವರು ವಹಿಸಿದ್ದ ಬಂಡುಕೋರನ ಪಾತ್ರ ವನ್ನು ಮರೆಯುತ್ತಾರೆ.ಜಾಮದಾರರು 1999ರ ಚುನಾವಣೆಯಲ್ಲಿ ಎಸ್. ಎಂ.ಕೃಷ್ಣ  ಅವರ ನೇತೃತ್ವದಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಕಾಂಗ್ರೆಸ್ 2004ರಲ್ಲಿ ಕೃಷ್ಣ ನೇತೃತ್ವದಲ್ಲಿ ಸೋತಿರುವುದನ್ನು ಮರೆಯುತ್ತಾರೆ. ಆಶ್ಚರ್ಯ­ವೆಂದರೆ, ಅವರ ಚುನಾವಣಾ ವಿಶ್ಲೇಷಣೆ 2004ಕ್ಕೆ ನಿಂತು ಬಿಟ್ಟಿರುವುದು. ಅವರು 2013ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿದ್ದರೆ ಅವರ ಚುನಾವಣಾ ವಿಶ್ಲೇಷಣೆ ತಾರ್ಕಿಕ  ಅಂತ್ಯ ಕಾಣುತ್ತಿತ್ತು.  2013ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದವರು ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ. ಸೋತುಹೋದ ಅವರ ಎದುರಾಳಿ ಪಕ್ಷಗಳಾದ ಜೆಡಿಎಸ್, ಕೆಜೆಪಿ ಮತ್ತು ಬಿಜೆಪಿಯ  ನಾಯಕತ್ವ ಯಾರ ಕೈಯಲ್ಲಿತ್ತು? ಯಾವುದೇ ಚುನಾವಣೆಯಲ್ಲಿ ನಿರ್ದಿಷ್ಟ ಜಾತಿ ಜನ ನೂರಕ್ಕೆ ನೂರರಷ್ಟು ಒಂದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಹಾಗೆಂದು ತಿಳಿದುಕೊಳ್ಳುವುದು ಮತದಾರರಿಗೆ ಮಾಡುವ ಅವಮಾನ ಅಷ್ಟೆ.

Tuesday, March 10, 2015

ನೇಪಥ್ಯಕ್ಕೆ ಸರಿಯುತ್ತಿರುವ ಪ್ರತಿಭಾವಂತ ಪತ್ರಕರ್ತರು

‘’ನೀವು ಮತ್ತೆ ಪತ್ರಿಕೆಗೆ ಬರೆಯುವುದಿಲ್ವಾ, ಯಾಕೆ ಅರ್ಧದಲ್ಲಿಯೇ ನಿವೃತ್ತಿ ತೆಗೆದುಕೊಂಡ್ರಿ ಸಾರ್’ - ಇದು ಕಳೆದ 19 ತಿಂಗಳಲ್ಲಿ ನನ್ನನ್ನು ಭೇಟಿಯಾದ ಬಹುತೇಕ ಮಂದಿ ಕೇಳುತ್ತಿರುವ ಸಾಮಾನ್ಯ ಪ್ರಶ್ನೆ. ಇವರಲ್ಲಿ ಬಹಳಷ್ಟು ಮಂದಿ ಅಮಾಯಕರು. ಅವರು ನನ್ನ ಬರವಣಿಗೆಗಳನ್ನು ಓದುತ್ತಾ ಬಂದವರು, ಮುಂದೆಯೂ ಓದಲು ಬಯಸುವವರು ಅಷ್ಟೆ. ಅದರಾಚೆಗೆ ಇರುವ ಮಾಧ್ಯಮಲೋಕದ ಅಂತರಂಗದ ಬಗ್ಗೆ ಅವರಿಗೇನು ಗೊತ್ತಿಲ್ಲ. ಈ ಪ್ರಶ್ನೆಯ ಹುಳು ನನ್ನನ್ನು ಸದಾ ಕೊರೆಯುತ್ತಲೇ ಇದೆ. ಇದೇ ಗುಂಗಿನಲ್ಲಿ ನನ್ನಂತೆಯೇ ಪತ್ರಿಕಾ ವೃತ್ತಿಯಿಂದ ವಿರಾಮ ಪಡೆದವರು ಯಾರೆಲ್ಲಾ ಇದ್ದಾರೆ ಎಂದು ಯೋಚನೆ ಮಾಡತೊಡಗಿದೆ.
ನನಗೆ ಮೊದಲು ಹೊಳೆದದ್ದು ಮುಂಗಾರು ಪತ್ರಿಕೆಯ ಆರು ಮಂದಿ ನನ್ನ ಹಿರಿಯ ಸಹದ್ಯೋಗಿಗಳು. ಎನ್.ಎಸ್. ಶಂಕರ್,ಇಂದೂಧರ ಹೊನ್ನಾಪುರ, ಕೆ.ರಾಮಯ್ಯ, ಕೆ.ಪುಟ್ಟಸ್ವಾಮಿ, ಮಂಗ್ಲೂರು ವಿಜಯ ಮತ್ತು ಹಸನ್ ನಯೀಂ ಸುರಕೋಡ. ಇವರಲ್ಲಿ ಇಂದೂಧರ ಅವರು ಸಂವಾದ ಪತ್ರಿಕೆಯನ್ನು ನಡೆಸುತ್ತಾ ಇನ್ನೂ ವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಉಳಿದವರೆಲ್ಲರೂ ಪತ್ರಿಕಾ ವೃತ್ತಿಯಿಂದ ದೂರ ಉಳಿದಿದ್ದಾರೆ. ಇವರೆಲ್ಲರನ್ನೂ ವೈಯಕ್ತಿಕವಾಗಿ ನಾನು ರೋಲ್ ಮಾಡೆಲ್ ಎಂದು ತಿಳಿದುಕೊಂಡವನು. ಇವರೆಲ್ಲರೂ ಪತ್ರಕರ್ತರಾಗಿ ಈಗಲೂ ಸಕ್ರಿಯರಾಗಿದ್ದರೆ ಕನ್ನಡ ಮಾಧ್ಯಮದ ದಿಕ್ಕು-ದೆಸೆ ಬೇರೆಯೇ ಆಗಿರುತ್ತಿತ್ತು.
ಇವರ ನಂತರ ನನಗೆ ನೆನಪಾದವರು ವೃತ್ತಿಯಿಂದ ನಿವೃತ್ತಿಯಾದರೂ ಬರೆಯುವ ಶಕ್ತಿ ಮತ್ತು ಆಸಕ್ತಿಯನ್ನು ಉಳಿಸಿಕೊಂಡ ಪ್ರಜಾವಾಣಿಯ ನನ್ನ ಹಿರಿಯ ಸಹದ್ಯೋಗಿಗಳು. ಇವರಲ್ಲಿ ರಾಜಾ ಶೈಲೇಶಚಂದ್ರ ಗುಪ್ತಾ, ಶಿವಾಜಿ ಗಣೇಶನ್, ಡಿ.ವಿ.ರಾಜಶೇಖರ್, ಲಕ್ಷ್ಮಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ ಪ್ರಮುಖರು. ಕನ್ನಡದಲ್ಲಿ ಹಣಕಾಸು ಕ್ಷೇತ್ರದ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲವರು ಶೈಲೇಶಚಂದ್ರ ಗುಪ್ತಾ. ಶಿವಾಜಿ ಗಣೇಶನ್ ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಅತ್ಯುನ್ನತ ಹುದ್ದೆಗೇರಿ ನಿವೃತ್ತರಾದ ಮೊದಲ ದಲಿತ ಪತ್ರಕರ್ತ. ಕನ್ನಡದಲ್ಲಿ ವಿದೇಶಾಂಗ ವ್ಯವಹಾರದ ಬಗ್ಗೆ ಸುದೀರ್ಘವಾಗಿ ಬರೆದು ಕನ್ನಡದ ಓದುಗರಿಗೆ ಹೊರಜಗತ್ತನ್ನು ಪರಿಚಯಿಸುತ್ತಾ ಬಂದವರು ಡಿ.ವಿ.ರಾಜಶೇಖರ್. ಇದೇ ರೀತಿ ಲಕ್ಷಣ ಕೊಡಸೆ ಮತ್ತು ಅಬ್ಬೂರು ರಾಜಶೇಖರ್ ಯಾವುದಾದರೂ ಒಂದು ಪತ್ರಿಕೆಯ ಸಾರಥ್ಯ ವಹಿಸುವಷ್ಟು ಪ್ರತಿಭಾವಂತರು. ಇವರಲ್ಲಿ ಗುಪ್ತಾ ಅವರು ಸಂಯುಕ್ತ ಕರ್ನಾಟಕಕ್ಕೆ ಅಂಕಣ ಬರೆಯುತ್ತಿದ್ದಾರೆ. ರಾಜಶೇಖರ್ ಇತ್ತೀಚಿನ ವರೆಗೆ ವಿಜಯಕರ್ನಾಟಕಕ್ಕೆ ಬರೆಯುತ್ತಿದ್ದರು. ಅದನ್ನು ನಿಲ್ಲಿಸಿದ ಹಾಗೆ ಕಾಣುತ್ತಿದೆ.
ಕೊನೆಯದಾಗಿ ಇವರಿಗೆಲ್ಲರಿಗಿಂತ ಕಡಿಮೆ ವಯಸ್ಸಿನ ಪತ್ರಕರ್ತರ ಇನ್ನೊಂದು ಗುಂಪಿದೆ. ಮಾತು ಮತ್ತು ಕೃತಿ ನಡುವೆ ಅಂತರ ಇಲ್ಲದಂತೆ ಬದುಕುತ್ತಾ ಬಂದ ಶಶಿಧರ್ ಭಟ್ ಪತ್ರಿಕೆ ಮತ್ತು ಚಾನೆಲ್ ಗಳೆರಡರಲ್ಲಿಯೂ ದೀರ್ಘ ಅನುಭವ ಇದ್ದವರು. ರಾಜಿ ಮನೋಭಾವದವರಲ್ಲದ ಭಟ್ರು ಸದ್ಯಕ್ಕೆ ನಿರುದ್ಯೋಗಿ. ಪ್ರಿಂಟ್ ನಿಂದ ಟಿವಿ ಪ್ರವೇಶಿಸಿ ಅಲ್ಲಿಯೂ ತನ್ನ ಛಾಪು ಮೂಡಿಸಿದ್ದ ಲಕ್ಷ್ಮಣ್ ಹೂಗಾರ್ ವೃತ್ತಿಯಿಂದ ದೂರವಾಗಿ ತೋಟ ನೋಡಿಕೊಳ್ಳುತ್ತಾ, ನೀರಾವರಿ ಹೋರಾಟ ನಡೆಸುತ್ತಾ ಆರಾಮವಾಗಿದ್ದಾರೆ(?). ಕನ್ನಡದಿಂದ ಇಂಗ್ಲೀಷ್ ಗೆ ಜಿಗಿದ ಇನ್ನೊಬ್ಬ ಗ್ರಾಮೀಣ ಪ್ರತಿಭೆ ನವೀನ್ ಅಮ್ಮೆಂಬಳ ಕೂಡಾ ಕಳೆದ ಕೆಲವು ತಿಂಗಳುಗಳಿಂದ ನಿರುದ್ಯೋಗಿ. ಇದೇ ಸಾಲಿನಲ್ಲಿ ಮುಂಗಾರು ತೊರೆದು ಲಂಕೇಶ್ ಪತ್ರಿಕೆ ಸೇರಿ ಅಲ್ಲಿಂದಲೂ ಹೊರಬಂದು ಈಗ ಮಾಧ್ಯಮಲೋಕದಿಂದ ದೂರ ಇರುವ ಟಿ.ಕೆ.ತ್ಯಾಗರಾಜ್ ಇದ್ದಾರೆ, ಜತೆಗೆ ಚಿದಂಬರ ಬೈಕಂಪಾಡಿ ಎಂಬ ಇನ್ನೊಬ್ಬ ಗೆಳೆಯ ಮಂಗಳೂರಿನಲ್ಲಿದ್ದಾನೆ.
ಇಂಗ್ಲೀಷ್ ಪತ್ರಿಕೋದ್ಯಮ ತೊರೆದು ಕನ್ನಡಕ್ಕೆ ಬಂದ ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕ ಪತ್ರಿಕೆಯಿಂದ ಬಿಡುಗಡೆ ಹೊಂದಿರುವುದು ಇತ್ತೀಚಿನ ಶಾಕಿಂಗ್ ಸುದ್ದಿ. ಇಂಗ್ಲೀಷ್ ಮತ್ತು ಕನ್ನಡಗಳೆರಡರಲ್ಲಿಯೂ ಸೊಗಸಾಗಿ ಬರೆಯಬಲ್ಲ ಮತ್ತು ಹೊಸತಲೆಮಾರಿನ ಅತ್ಯಂತ ಪ್ರತಿಭಾವಂತ ಪತ್ರಕರ್ತ ಸುಗತ ಪತ್ರಿಕಾ ವೃತ್ತಿಯಲ್ಲಿ ಮುಂದುವರಿದರೂ ಕನ್ನಡದಲ್ಲಿಯೇ ಉಳಿಯುವುದು ಅನುಮಾನ.
ಯಾಕೆ ಹೀಗಾಗುತ್ತಿದೆ? ಯಾರಲ್ಲಿಯಾದರೂ ಉತ್ತರ ಇದೆಯಾ? ಸೂಕ್ಷ್ಮವಾಗಿ ನಾನು ಉಲ್ಲೇಖಿಸಿದ ಪತ್ರಕರ್ತರೆಲ್ಲರ ಹಿನ್ನೆಲೆಯನ್ನು ನೋಡಿ ಉತ್ತರ ಸಿಗಬಹುದೇನೋ? ಇದರ ನಂತರವಾದರೂ ನನ್ನನ್ನು ಪ್ರಶ್ನಿಸುವವರು ಕಡಿಮೆಯಾಗಬಹುದೇನೋ? ‘’ಅದೆಲ್ಲ ಇರಲಿ ನೀವು ಯಾಕೆ ಪ್ರಜಾವಾಣಿ ಬಿಟ್ಟು ಬಂದ್ರಿ?’’ ಎಂದು ಮತ್ತೆ ಯಾರಾದರೂ ಕೇಳಿದರೆ ನಾನು ಉತ್ತರಿಸಲಾರೆ.

Sunday, March 8, 2015

ಮಾಧ್ಯಮ ಕ್ಷೇತ್ರದ ಕೊನೆಯ ‘ಕಸುಬುದಾರ ಸಂಪಾದಕ’

ಲಂಕೇಶ್ ಅವರ 80ನೇ ಹುಟ್ಟುಹಬ್ಬದ ದಿನವೇ ‘ಇಂಗ್ಲೀಷ್ ನ ಲಂಕೇಶ್ ‘ ಎಂದು ನನ್ನಂತಹವರು ತಿಳಿದುಕೊಂಡಿದ್ದ ಸಂಪಾದಕ ವಿನೋದ್ ಮೆಹ್ತಾ ನಮ್ಮನಗಲಿದ್ದಾರೆ. ಅವರಲ್ಲೊಂದು ಪಾಪ ನಿವೇದನೆ ಮಾಡುವುದಿತ್ತು. ಕೊನೆಗೂ ಅದಕ್ಕೆ ಅವಕಾಶ ಸಿಗಲಿಲ್ಲ. ನನ್ನ ವಯಸ್ಸಿನ ಪತ್ರಕರ್ತರೆಲ್ಲರೂ ಲಂಕೇಶ್ ಪತ್ರಿಕೆಯನ್ನು ಓದುತ್ತಾ ಬೆಳೆಯಲು ಪ್ರಯತ್ನಪಟ್ಟವರು. ಇದಕ್ಕಿಂತ ಮೊದಲು ವಿದ್ಯಾರ್ಥಿ ದಿನಗಳಲ್ಲಿಯೇ ಭಾರತದ ಪ್ಲೇ ಬಾಯ್ ಎಂದೇ ಬಣ್ಣಿಸಲಾಗುತ್ತಿದ್ದ ‘ಡೆಬೋನೇರ್’ ಪತ್ರಿಕೆಯ ಹಳೆಯ ಪ್ರತಿಗಳನ್ನು ಕದ್ದುಮುಚ್ಚಿ ಓದುತ್ತಿದ್ದರೂ ಅದರ ಸಂಪಾದಕ ವಿನೋದ್ ಮೆಹ್ತಾ ಎನ್ನುವುದು ಗೊತ್ತಿರಲಿಲ್ಲ.

ವಿನೋದ್ ಮೆಹ್ತಾ ನನ್ನ ಓದಿನ ಲೋಕ ಪ್ರವೇಶಿಸಿದ್ದು ಆಕಸ್ಮಿಕವಾಗಿ. ನಾನಾಗ ಮುಂಗಾರು ಪತ್ರಿಕೆಯಲ್ಲಿ ಸುದ್ದಿ ಸಂಪಾದಕನಾಗಿದ್ದೆ. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಭಾನುವಾರದ ದಿನ ಸುದ್ದಿಗೆ ಬರ ಇರುತ್ತದೆ.ಅಂತಹದ್ದೊಂದು ಚಿಂತಾಕ್ರಾಂತ ಸ್ಥಿತಿಯಲ್ಲಿ ಮಂಗಳೂರಿನ ನ್ಯೂಸ್ ಪೇಪರ್ ಸ್ಟಾಲ್ ನಲ್ಲಿ ‘ಸಂಡೇ ಆಬ್ಸರ್ವರ್ ‘ಕಣ್ಣಿಗೆ ಬಿತ್ತು. ಪುಟ ತಿರುಗಿಸಿದರೆ ಎಲ್ಲೆಲ್ಲೂ ‘ exclusive ವರದಿಗಳು. ಕಚೇರಿಗೆ ಬಂದವನೇ ಒಂದೆರಡನ್ನು ಕದ್ದು ಕನ್ನಡಕ್ಕೆ ಭಟ್ಟಿ ಇಳಿಸಿದ್ದೆ. ಅದರ ನಂತರ ಪ್ರತಿ ಭಾನುವಾರ ಅದೊಂದು ಸಂಪ್ರದಾಯವಾಗಿತ್ತು. ಅವರು ಸಂಡೇ ಆಬ್ಸರ್ವರ್ ಬಿಟ್ಟಾಗ ಬಹಳ ಬೇಸರವಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರು ‘ದಿ ಇಂಡಿಯನ್ ಪೋಸ್ಟ್ ‘ ಎಂಬ ಇನ್ನೊಂದು ಪತ್ರಿಕೆ ಪ್ರಾರಂಭಿಸಿದ್ದರಿಂದ ನಮ್ಮ ಭಾನುವಾರದ ಸುದ್ದಿಗೆ ತತ್ವಾರ ಬರಲಿಲ್ಲ. ಅಲ್ಲಿಂದಲೂ ಬಿಟ್ಟುಹೋದ ಮೆಹ್ತಾ ‘ದಿ ಇಂಡಿಪೆಂಡೆಂಟ್’ ಪ್ರಾರಂಭಿಸಿದರು. ಅದು ಬಹಳ ಕಾಲ ಉಳಿಯಲಿಲ್ಲ.
ಮಂಗಳೂರಿನಲ್ಲಿ ಈ ಪತ್ರಿಕೆಗಳ ಪ್ರಸಾರವೇ 50ರ ಆಜುಬಾಜಿನಲ್ಲಿದ್ದರಿಂದ ವರದಿಯ ಮೂಲ ಯಾವುದು ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ನಮ್ಮಲ್ಲಿ ಮುಂಬೈ, ದೆಹಲಿ ಡೇಟ್ ಲೈನ್ ನಲ್ಲಿ ಪ್ರಸಾರವಾಗುತ್ತಿದ್ದ ‘ exclusive ವರದಿಗಳಿಗೆ ಓದುಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಒಂದಷ್ಟು ದಿನ ಪ್ರತಿಸ್ಪರ್ಧಿ ಪತ್ರಿಕೆಗಳು ಕೂಡಾ ಬೇಸ್ತು ಬಿದ್ದದ್ದು ನಿಜ. ವಿನೋದ್ ಮೆಹ್ತಾ ಬದುಕಿದ್ದಾಗಲೇ ಭೇಟಿಯಾಗಿ ಸಾರಿ ಕೇಳಬೇಕೆಂದಿದ್ದೆ, ಆಗಲಿಲ್ಲ, ಅದಕ್ಕಾಗಿ ಈಗ ಆಕಾಶಕ್ಕೆ ಮುಖಮಾಡಿ ‘ ಈ ಕಳ್ಳನನ್ನು ಕ್ಷಮಿಸಿ’ ಎಂದು ಹೇಳುತ್ತಿರುವೆ.
ಆದರೆ ಈ ಕಳ್ಳಾಟದಲ್ಲಿ ನಾನು ವಿನೋದ್ ಮೆಹ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ. ಡೆಬೋನೇರ್, ಸಂಡೇ ಆಬ್ಸರ್ವರ್, ದಿ ಇಂಡಿಯನ್ ಪೋಸ್ಟ್, ಇಂಡಿಪೆಂಡೆಂಟ್’ ಕೊನೆಗೆ ಔಟ್ ಲುಕ್ ಪತ್ರಿಕೆಗಳ ವರೆಗೆ ಅವರ ಜತೆ ನನ್ನ ಪಯಣವೂ ಸಾಗಿ ಬಂದಿತ್ತು. ಈಗ ಇದ್ದಕ್ಕಿದ್ದ ಹಾಗೆ ನಮ್ಮನ್ನು ಅಗಲಿ ಹೋಗಿದ್ದಾರೆ. ಸಂಪಾದಕರ ಸ್ಥಾನವನ್ನು ಮ್ಯಾನೇಜರ್ ಗಳು ಆಕ್ರಮಿಸಿಕೊಳ್ಳುತ್ತಿರುವುದನ್ನು ನೋಡಿದರೆ ‘ಕಸುಬುದಾರ ಸಂಪಾದಕ’ ಎಂಬ ಕಿರೀಟ ವಿನೋದ್ ಮೆಹ್ತಾ ಅವರ ತಲೆಮೇಲೆಯೇ ಶಾಶ್ವತವಾಗಿ ಉಳಿದುಬಿಡುತ್ತೋ ಏನೋ? ಅದಕ್ಕೆ ಅವರು ಸಂಪೂರ್ಣ ಅರ್ಹರು ಕೂಡಾ.

ಲಂಕೇಶ್ ರ 80ನೇ ಹುಟ್ಟುಹಬ್ಬ ಹಾಗೂ ಗೌರಿ ಲಂಕೇಶ್ ಪತ್ರಿಕೆಯ 10ನೇ ವಾರ್ಷಿಕೋತ್ಸವ



Tuesday, February 24, 2015

ಬದಲಾಗದ ಬೀಡಿ ಈ ಸುರಕೋಡ

ಈ ಚಿತ್ರದಲ್ಲಿರುವ ಮನೆ ಗೆಳೆಯರಾದ ಹಸನ್ ನಯೀಂ ಸುರಕೋಡ ಅವರದ್ದು. ನಾನು ಇವರನ್ನು ಮೊದಲು ಭೇಟಿಯಾಗಿದ್ದು ಸುಮಾರು 30 ವರ್ಷಗಳ ಹಿಂದೆ ಮುಂಗಾರು ಪತ್ರಿಕೆಯ ಕಚೇರಿಯಲ್ಲಿ. ಆಗಲೂ ಇದೇ ಬಿಳಿ ಜುಬ್ಬಾ, ಬಿಳಿ ಪೈಜಾಮ, ಹೆಗಲಿಗೊಂದು ಚೀಲ,ತುಟಿಯಲ್ಲಿ ಹೊಗೆಯಾಡುತ್ತಿದ್ದ ಬೀಡಿ. ಪತ್ರಿಕೆ ಪ್ರಾರಂಭವಾದ ನಾಲ್ಕೇ ತಿಂಗಳಲ್ಲಿ ನಮಗೆಲ್ಲ ಗುರುಗಳಂತಿದ್ದ ಎನ್.ಎಸ್.ಶಂಕರ್, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ ಮೊದಲಾದವರೆಲ್ಲರೂ ವಡ್ಡರ್ಸೆಯವರ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಪತ್ರಿಕೆ ಬಿಟ್ಟು ಹೊರಟಿದ್ದರು. ನಾವಿನ್ನೂ ಕಣ್ಣುಬಿಡುತ್ತಿದ್ದವರು, ಹಠಾತ್ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲಾಗದೆ ಪಿಳಿಪಿಳಿ ಕಣ್ಣು ಬಿಟ್ಟು ಅಹಿತಕರವಾದ ವಿದ್ಯಮಾನಕ್ಕೆ ಸಾಕ್ಷಿಗಳಾಗಿದ್ದೆವು.

ಆಗ ನಾವು ಒಂದಷ್ಟು ಗೆಳೆಯರು ಬೈಕಂಪಾಡಿಯ ಕಚೇರಿ ಪಕ್ಕದ ಹಂಗರಗುಂಡಿಯಲ್ಲಿ ಮನೆ ಮಾಡಿಕೊಂಡಿದ್ದೆವು. ಸುರಕೋಡ ನಮ್ಮ ಜತೆಗಿದ್ದರು. ಪತ್ರಿಕೆ ಬಿಟ್ಟು ಹೊರಟು ನಿಂತ ಇತರರ ಮುಖದಲ್ಲಿನ ಆತ್ಮವಿಶ್ವಾಸ ನೋಡಿದಾಗ ಅವರ ಭವಿಷ್ಯದ ಬಗ್ಗೆ ನಮಗೆ ಚಿಂತೆಯಾಗಿರಲಿಲ್ಲ. ಆದರೆ ನಮ್ಮ ಚಿಂತೆ ಸುರಕೋಡ ಅವರ ಬಗ್ಗೆ. ಪರಸ್ಪರ ಎಲ್ಲವನ್ನೂ ಹಂಚಿಕೊಂಡ ನಮಗೆ ಸುರಕೋಡ ಅವರ ಮನೆಪರಿಸ್ಥಿತಿ ಗೊತ್ತಿತ್ತು. ಈ ಕಾರಣಕ್ಕಾಗಿ ನಾನು ಮತ್ತು ಹನೀಫ್ ಧೈರ್ಯ ಮಾಡಿ ಸುರಕೋಡ ಬಳಿ ಹೋಗಿ ‘ ಅವರೆಲ್ಲ ಹೋಗ್ಲಿ ಸಾರ್, ನೀವು ಇದ್ದು ಬಿಡಿ ‘ ಎಂದೆವು. ಅಷ್ಟು ಹೇಳಿದ್ದೇ ತಡ, ಕುಳಿತ ಚಾಪೆಯಿಂದ ಧಿಗ್ಗನೆ ಎದ್ದು ನಿಂತ ಸುರಕೋಡ ಕೈಯಲ್ಲಿದ್ದ ಮೋಟು ಬೀಡಿಯನ್ನು ಎಸೆದು ನಮ್ಮನ್ನು ಕೆಂಗಣ್ಣುಗಳಿಂದ ದಿಟ್ಟಿಸಿ ನೋಡಿ ‘ ನೀವು ವಡ್ಡರ್ಸೆಯವರ ಏಜಂಟರಾ?’ ಎಂದು ಮುಖಕ್ಕೆ ಉಗಿದಂತೆ ಹೇಳಿ ಹೊರಟುಬಿಟ್ಟರು. ಆ ಉರಿಯುವ ಕಣ್ಣುಗಳಲ್ಲಿ ಸ್ವಾಭಿಮಾನಿಯೊಬ್ಬನ ಸಾತ್ವಿಕ ಸಿಟ್ಟನ್ನು ಕಂಡು ನಾನು ಕಲ್ಲಾಗಿ ನಿಂತಿದ್ದೆ. ಆಗ ಸ್ವಲ್ಪ ಸಿಟ್ಟಾಗಿದ್ದು ನಿಜ, ಆದರೆ ನಿಧಾನವಾಗಿ ಅದು ಕರಗಿ ಸ್ನೇಹವಷ್ಟೇ ನಮ್ಮ ನಡುವೆ ಉಳಿದಿದೆ. ಬಹಳ ದಿನಗಳಿಂದ ಮನೆಗೆ ಕರೆಯುತ್ತಿದ್ದರು. ಮೊನ್ನೆ ರಾಮದುರ್ಗದಲ್ಲಿರುವ ಅವರ ಮನೆಗೆ ಹೋಗಿ ದೇವನೂರ ಮಹದೇವ ಜತೆ ಕೂತು ಹರಟುತ್ತಿದ್ದಾಗ ಹಳೆಯದ್ದೆಲ್ಲ ನೆನಪಾಯಿತು.
ಸುರಗೋಡ ಅವರದ್ದು ಈಗಲೂ ಬಡತನವನ್ನು ಹಾಸಿ ಹೊದ್ದು ಮಲಗುವ ಸ್ಥಿತಿ. ಅದನ್ನು ವಿವರಿಸ ಹೊರಟರೆ ಸ್ವಾಭಿಮಾನಿಯಾದ ಅವರಿಗೆ ನೋವಾದೀತು. ಕಷ್ಟಕಾರ್ಪಣ್ಯಗಳೇನೇ ಇದ್ದರೂ ಸುರಕೋಡ ತಾನು ನಂಬಿದ ಮೌಲ್ಯಗಳ ಜತೆ ರಾಜಿಮಾಡಿಕೊಂಡವರಲ್ಲ, ಶ್ರಮ ಇಲ್ಲದ ದುಡ್ಡಿಗಾಗಿ, ವಶೀಲಿ ಮಾಡಿ ಪಡೆಯುವ ಪ್ರಶಸ್ತಿ-ಪುರಸ್ಕಾರಕ್ಕಾಗಿ ಆಸೆ ಪಟ್ಟವರಲ್ಲ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಅವರು ಬದುಕಿನುದ್ದಕ್ಕೂ ಕಹಿಯನ್ನೇ ಉಂಡರೂ ಅದು ಅವರ ಮಾತು ಇಲ್ಲವೆ ನಡವಳಿಕೆಯಲ್ಲಿ ಎಂದೂ ವ್ಯಕ್ತವಾಗಿಲ್ಲ. ರಾಮದುರ್ಗದಲ್ಲಿ ಪ್ರಗತಿಪರವಾಗಿ ಯೋಚನೆ ಮಾಡುವ ಒಂದು ದೊಡ್ಡ (ಸಣ್ಣದ್ದಲ್ಲ) ಗುಂಪನ್ನು ಅವರು ಕಟ್ಟಿಕೊಂಡಿದ್ದಾರೆ. ಸುರಕೋಡ ಅವರ ಹಿತವನ್ನು ಬಯಸುವವರು ಇಡೀ ರಾಜ್ಯದಲ್ಲಿದ್ದಾರೆ. ಯಾರ್ಯಾರಿಗೋ 50,60, 70 ವರ್ಷಗಳ ಆಚರಣೆ ಮಾಡುತ್ತೇವೆ. ಎಲ್ಲರೂ ಸೇರಿ ಸುರಕೋಡ ಅವರ ಕಷ್ಟವನ್ನು ಸ್ವಲ್ಪ ಹಂಚಿಕೊಳ್ಳುವ ಏನಾದರೂ ಕಾರ್ಯಕ್ರಮ ಮಾಡಬಾರದೇಕೇ?

Saturday, February 21, 2015

ಅಂತರರಾಷ್ಟ್ರೀಯ ಮಾತೃಭಾಷಾ ದಿನ

ಇಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನ. ಈ ನೆನಪಲ್ಲಿ 32 ವರ್ಷಗಳ ಹಿಂದೆ (18-4-1983) ನನ್ನ ಮಾತೃಭಾಷೆ ತುಳುವಿನಲ್ಲಿ ಬರೆದಿದ್ದ
ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇದು ಕೇವಲ ಕೈಖರ್ಚಿನ ಹಣಕ್ಕಾಗಿ ಮಂಗಳೂರು ಆಕಾಶವಾಣಿಗೆ ಮಾರಿಕೊಂಡ ಕವನಗಳೆಂದಷ್ಟೇ ಹೇಳಿದರೆ, ಇದನ್ನು ನನ್ನಿಂದ ಬರೆಯಿಸಿದ ಜೀವಕ್ಕೆ ದ್ರೋಹ ಎಸಗಿದಂತಾಗುತ್ತದೆ. ಹಠಾತ್ತನೆ ನನ್ನೊಳಗಿನ ಬಾಲ ಕವಿ ನೆನೆಪಾಗಲು ಇನ್ನೂ ಒಂದು ಕಾರಣ ಇದೆ. ನಿನ್ನೆ ರಾಮದುರ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹೊರ ಬಂದಾಗ ಓಡೋಡಿ ಬಂದ ಹುಡುಗನೊಬ್ಬ ನನಗೆ ಕವಿತೆ ಬರೆಯುವ ಆಸೆ ಏನು ಮಾಡಲಿ? ಎಂದು ಪ್ರಶ್ನಿಸಿದ. ನಾನು ಅವನನ್ನು ಸಮೀಪ ಕರೆದು ‘ಚಂದದ ಹುಡುಗಿಯನ್ನು ಹುಡುಕಿ ಪ್ರೀತಿ ಮಾಡು’ ಎಂದು ಪಿಸುಗುಟ್ಟಿದೆ.
ಪ್ರೀತಿ ಮಾಡುವುದು ಹೇಗೆ? ಎಂದು ಆತ ಮರುಪ್ರಶ್ನಿಸಿದ.’ ಪ್ರೀತಿ ಮಾಡುವುದೆಂದರೆ ಮೈ ಮುಟ್ಟದೆ ಮನಸ್ಸು ಮುಟ್ಟುವ ಜರ್ನಿ’ ಎಂದೆ. ಇವನ್ಯಾವನೋ ಅರಸಿಕ ಎಂದು ಆ ಹುಡುಗ ಅಂದುಕೊಂಡನೋ ಏನೋ?

ಈಗ ಓದಿ ನನ್ನ ತುಳು ಕಬಿತೆ.....
ತುದೆ
ನಾಲೂರ ಸೀಮೆಗ್ ಬರ್ಸ ಬತ್ತ್ ದ್ ಬೊಲ್ಲ ಗುದ್ದುಂಡಲಾ
ಎನ್ನುಡಲ್ ದ ಪಡೀಲ್ ಭೂಮಿಗ್ ಬೂರುನ
ಸುಡ್ಪಿ ಸೂರ್ಯನ ಕೊದಿಪು ದೊಂಬುದ ತೂ
ಅಂಚಾನಗ, ಮದೆಟೊಂಜಿ ತುದೆಯಾದ್ ಈ ತೋಜಿಯಾ
ತರೆತುಂಬಾ ಕೊಡಿಯೊಂದಿತ್ತಿನ ಕರಕರಿತ ಕುರೆ ಮುಂಗುಲೆನ್
ಕಿನ್ಕ್ ದೆತ್ತ್ ದ್ ಪೊತ್ತಾದ್ ಪುಗೆತೊಟ್ಟುಗೆ ಪಾರ್ ಬೈದೆ ಪುಗೆಯಾದ್.
ಕಾಡ್ ಗುಡ್ಡೆ, ಕತ್ತಲೆದ ತಾದಿ ಪಿರ...ಪಿರ...
ಯಾನ್ ದುಂಬು... ದುಂಬು.. ನಿನ್ನಡೆಗ್
ಕರಿಕಂಬದ ನೆತ್ತಿಬೊಟುದ್ ಜತ್ತ್ ಮಿತರ್ನಗ
ಜೀವದುಲಯಿ ಪುಡಾಂಡ್ ಬೊಳ್ಳಿ ಬೊಲ್ಪುದ ತೋಟೆ
ಉಂತು ಗೆಂತ್ ಪನ್ಪೆ ಯಾನೇತ್ ದೂರ ನಿನ್ನಡ್ದ್
ಕನ್ನಡದಲ್ಲಿ ಈ ಕವಿತೆಯ ಕಚ್ಛಾ ಅನುವಾದ ಹೀಗೆ ಮಾಡಬಹುದು:
ನದಿ
ನಾಲ್ಕೂರ ಸೀಮೆಗ್ ಮಳೆ ಹೊಯ್ದು ನೆರೆ ಉಕ್ಕಿ ಬಂದರೂ
ನನ್ನೊಡಲ ಮರುಭೂಮಿಯಲ್ಲಿ ಸುಡುವ
ಸೂರ್ಯನ ಬೆಂಕಿ.
ಹೀಗಿದ್ದಾಗ...
ಮರೆಯಲ್ಲೊಂದು ನದಿಯಾಗಿ ನೀ ಕಂಡೆ
ತಲೆತುಂಬಾ ಮೊಳೆಯುತ್ತಿದ್ದ ಕಿರಿಕಿರಿಯ ಮೊಳಕೆಗಳನ್ನು
ಚಿವುಟಿ ತೆಗೆದು ಸುಟ್ಟು, ಹೊಗೆಯೊಟ್ಟಿಗೆ ಓಡಿ ಬಂದೆ ನಿನ್ನೆಡೆಗೆ
ಕಾಡುಗುಡ್ಡ, ಕತ್ತಲ ಹಾದಿ ಹಿಂದೆ..ಹಿಂದೆ...
ನಾನು ಮುಂದೆ...ಮುಂದೆ ನಿನ್ನೆಡೆಗೆ
ಕರಿಕಂಬದ ನೆತ್ತಿ ತಟ್ಟಿ ಹತ್ತಿ ಇಳಿದಾಗ
ಜೀವದೊಳಗೆ ಬೆಳ್ಳಿಬೆಳಕಿನ ಸ್ಪೋಟ
ಅಲ್ಲಿಯೇ ನಿಲ್ಲು, ಎಣಿಸಿ ಹೇಳುತ್ತೇನೆ
ಈಗ ನಾನೆಷ್ಟು ದೂರ ನಿನ್ನಿಂದ.

Sunday, February 15, 2015

ಗದಗ : ವಿಜಯ ಸಾಕ್ಷಿ ಪತ್ರಿಕೆ ಬಿಡುಗಡೆ

ವಿಜಯ ಸಾಕ್ಷಿ ಜಿಲ್ಲಾಮಟ್ಟದ ದಿನಪತ್ರಿಕೆ ಬಿಡುಗಡೆ



ಗದಗ ಜಿಲ್ಲಾ ಪತ್ರಕರ್ತರು

ಗದುಗಿನ ಡಂಬಳದ ತೋಂಟಾದಾರ್ಯ ಮಠಕ್ಕೆ ಭೇಟಿ

ಶ್ರೀಗಳೊಂದಿಗೆ ಚರ್ಚೆ





'ಅಂತಃಕರಣ' ಬರೆದ 5 ಪುಸ್ತಕಗಳ ಬಿಡುಗಡೆ

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ 5ನೇ ತರಗತಿಯ ಬಾಲಕ 'ಅಂತಃಕರಣ' ಬರೆದ 5 ಪುಸ್ತಕಗಳ ಬಿಡುಗಡೆ.





Friday, February 13, 2015

ದೆಹಲಿ ಬಗ್ಗೆ ಬರೆದ ಅಂಕಣ

ಬೇರೆ ಬೇರೆ ಕಾರಣಗಳಿಗಾಗಿ ಮೂರು ನಗರಗಳು ನನ್ನನ್ನು ಎಡೆಬಿಡದೆ ಕಾಡುತ್ತಿವೆ . ಮೊದಲನೆಯದು ನನ್ನ ಹುಟ್ಟೂರು ಮುಂಬೈ, ಎರಡನೆಯದು ಈಗ ವಾಸಿಸುತ್ತಿರುವ ಬೆಂಗಳೂರು ಮೂರನೆಯದು ಒಂಬತ್ತು ವರ್ಷಗಳ ನನ್ನ ಮನೆಯಾಗಿದ್ದ ದೆಹಲಿ. ಇತ್ತೀಚಿನ ದೆಹಲಿಯಲ್ಲಿನ ರಾಜಕೀಯ ಬೆಳವಣಿಗೆ ನನ್ನಲ್ಲಿ ಮತ್ತೆ ದೆಹಲಿಯ ಗುಂಗು ಹುಟ್ಟಿಸಿದೆ. ನಾನು ದೆಹಲಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇ ರಾಮಮನೋಹರ ಲೋಹಿಯಾ ಅವರು ದೆಹಲಿ ಬಗ್ಗೆ ಬರೆದ ಪ್ರಬಂಧವೊಂದರ ಮೂಲಕ. ದೆಹಲಿಯ ಬಗ್ಗೆ ಆಸಕ್ತಿಯಿದ್ದವರು ದಯವಿಟ್ಟು ಅದನ್ನು ಓದಿ. ದೆಹಲಿಗೆ ವಿದಾಯ ಹೇಳಿ ಕರ್ನಾಟಕಕ್ಕೆ ಹಿಂದಿರುಗಿದಾಗ ನಾನು ಬರೆದಿದ್ದ ಅಂಕಣವನ್ನು ಸುಮ್ಮನೆ ಆಸಕ್ತರ ಓದಿಗಾಗಿ ಇಲ್ಲಿ ಅಂಟಿಸಿರುವೆ. ದೆಹಲಿ ನನಗೆ ಈಗಲೂ ಪೂರ್ಣವಾಗಿ ಅರ್ಥವಾಗಿಲ್ಲ, ನಿಮಗೇನಾದರೂ ಅರ್ಥವಾಗುತ್ತೋ ನೋಡಿ.