Monday, November 14, 2011

ಕರ್ನಾಟಕ ಹಳೆಯ ಬಿಹಾರ ಆಗುತ್ತಿದೆಯೇ?

ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭವಿಷ್ಯ ಇಲ್ಲವೇನೋ ಎಂಬ ಕಳವಳಕಾರಿ ಪರಿಸ್ಥಿತಿ ಆರು ತಿಂಗಳ ಹಿಂದಿನವರೆಗೂ ಇತ್ತು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜತೆಯಲ್ಲಿ ಪತ್ರಿಕಾರಂಗದ ಮೇಲಿನ ವಿಶ್ವಾಸವನ್ನೂ ಕಳೆದುಕೊಂಡವರಂತೆ ಜನ ಮಾತನಾಡುತ್ತಿದ್ದರು.

ಭ್ರಷ್ಟಾಚಾರದ ಗೆದ್ದಲು ಹಿಡಿದು ದುರ್ಬಲಗೊಂಡಿರುವ ಈ ನಾಲ್ಕು ಅಂಗಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಸಾಧ್ಯವೇ ಇಲ್ಲವೆನ್ನುವ ನಿರಾಶೆ ಅವರ ಮುಖದಲ್ಲಿತ್ತು.
ಕಾರ್ಯಾಂಗ ಮತ್ತು ಶಾಸಕಾಂಗದ ಬಗ್ಗೆ ಜನತೆಗೆ ಎಂದೂ ನಿರೀಕ್ಷೆ ಇರಲಿಲ್ಲ, ಆದರೆ ನಂಬಿಕೆ ಇಟ್ಟುಕೊಂಡಿದ್ದ ನ್ಯಾಯಾಂಗ ಮತ್ತು ಪತ್ರಿಕಾರಂಗದ ಬಗ್ಗೆಯೂ ಕೇಳಿಬಂದ ಭ್ರಷ್ಟಾಚಾರದ ಆರೋಪಗಳು ಜನತೆ ಭವಿಷ್ಯದ ಬಗೆಗಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದು ನಿಜ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಗೆ ವ್ಯಕ್ತವಾದ ಬೆಂಬಲಕ್ಕೆ ಜನಸಮೂಹದಲ್ಲಿದ್ದ ಈ ನಿರಾಶೆ ಮತ್ತು ಹತಾಶೆಯೂ ಕಾರಣ.
ಭ್ರಷ್ಟಾಚಾರದ ಆರೋಪದ ಮೇಲೆ ಯಾರಾದರೂ ರಾಜಕಾರಣಿಗಳು ಜೈಲಿಗೆ ಹೋಗುವುದಿದ್ದರೆ ಅದು ಬಿಹಾರ, ಜಾರ್ಖಂಡ್, ಉತ್ತರಪ್ರದೇಶಗಳಲ್ಲಿ ಮಾತ್ರ ಎಂದು ಎಲ್ಲರೂ ತಿಳಿದುಕೊಂಡಿದ್ದ ಕಾಲವೊಂದಿತ್ತು.
ಆ ನಿಯಮಕ್ಕೆ ಅಪವಾದವೆಂಬಂತೆ ಜೈಲು ಸೇರಿದವರು ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಜೆ.ಜಯಲಲಿತಾ ಮಾತ್ರ. ಉತ್ತರದ ಮೂರು ರಾಜ್ಯಗಳಲ್ಲಿ ಜೈಲಿಗೆ ಹೋಗಿರುವ ಬಹುತೇಕ ಶಾಸಕರು ಮತ್ತು ಸಂಸದರು ಅಪರಾಧ ಜಗತ್ತಿನಿಂದಲೇ ಬಂದವರಾಗಿರುವುದರಿಂದ ಅವರ ಬಂಧನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
ಮುಖ್ಯಮಂತ್ರಿಗಳಾಗಿದ್ದ ಲಾಲು ಪ್ರಸಾದ್ ಮತ್ತು ಮಧುಕೋಡಾ ಅವರ `ಖ್ಯಾತಿ~ ಜೈಲು ಸೇರುವ ಮೊದಲೇ ದೇಶದಾದ್ಯಂತ ಹರಡಿದ್ದ ಕಾರಣ ಅವರ ಬಂಧನ ಯಾರಿಗೂ ಅಚ್ಚರಿ ಉಂಟುಮಾಡಿರಲಿಲ್ಲ. ಅದನ್ನು ನ್ಯಾಯಾಂಗದ ಕ್ರಿಯಾಶೀಲತೆ ಎಂದು ಯಾರೂ ವ್ಯಾಖ್ಯಾನಿಸಲೂ ಇಲ್ಲ.

ಆದರೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈಗ ಮುಖ್ಯಮಂತ್ರಿಗಳು, ಮಂತ್ರಿಗಳು, ಹಿರಿಯ ಅಧಿಕಾರಿಗಳು, ಕಾರ್ಪೋರೇಟ್ ಕುಳಗಳು ಎಲ್ಲರೂ ಜೈಲಿನ ಅನ್ನ ತಿನ್ನತೊಡಗಿದ್ದಾರೆ. ಈ ಬದಲಾವಣೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪನೆ ಮಾಡಿರುವುದು.
ಆಡಳಿತ ಪಕ್ಷದ ಕೈಗೊಂಬೆ ಎಂಬ ತಮ್ಮ ಮೇಲಿನ ಆರೋಪವನ್ನು ಕೇಂದ್ರ ತನಿಖಾ ದಳ (ಸಿಬಿಐ) ಸುಳ್ಳೆಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದು ಕಡಿಮೆ. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಕಟ್ಟಿದ ಈ ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲು ಬಳಸಿದ್ದೇ ಹೆಚ್ಚು.

ಅದೇ ಸ್ಥಿತಿ ಮಹಾಲೇಖಪಾಲರದ್ದು (ಸಿಎಜಿ). ಸಾರ್ವಜನಿಕ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆಗಾಗಿ ಸಂವಿಧಾನಬದ್ಧ ಸಂಸ್ಥೆಯಾಗಿ ರಚನೆಗೊಂಡರೂ ಅದೊಂದು ಹಲ್ಲಿಲ್ಲದ ಸಂಸ್ಥೆಯಾಗಿಯೇ ಉಳಿದಿತ್ತು. ಅದು ನೀಡಿದ ವರದಿ ಆಧಾರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು ಅಪರೂಪ. ಅದರ ವರದಿಗಳನ್ನು ವ್ಯವಸ್ಥಿತವಾಗಿ ಮೂಲೆಗೆ ತಳ್ಳಲಾಗುತ್ತಿತ್ತು.

ಭ್ರಷ್ಟಾಚಾರ ನಿಗ್ರಹ ಕಾಯಿದೆ 1947ರಿಂದಲೇ ಜಾರಿಯಲ್ಲಿದ್ದರೂ ಅದಕ್ಕೆ ದೊಡ್ಡ ತಿಮಿಂಗಿಲಗಳನ್ನು ಹಿಡಿದು ಹಾಕುವ ಶಕ್ತಿ ಇರಲಿಲ್ಲ.  ಚುನಾವಣಾ ಅಕ್ರಮಗಳ ಬಗ್ಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಕೂಡಾ ಹಲವಾರು ಬಾರಿ ಅಸಹಾಯಕತೆಯಿಂದ ಕೈಚೆಲ್ಲಿತ್ತು.

ಸವಾಲು ಹಾಕುವ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದ `ಆಪರೇಷನ್ ಕಮಲ~ವನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಲೋಕಾಯುಕ್ತರಿದ್ದ ರಾಜ್ಯಗಳಲ್ಲಿ ಸಾಲುಸಾಲು ದಾಳಿ ನಡೆಸಿದ್ದರೂ ಎಷ್ಟು ಮಂದಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ ಎಂದು ಕೇಳಿದರೆ ಉತ್ತರ ನೀಡುವ ಸ್ಥಿತಿಯಲ್ಲಿ ಅವುಗಳೂ ಇರಲಿಲ್ಲ.
ಇವೆಲ್ಲವೂ ಆರೇಳು ತಿಂಗಳು, ಹೆಚ್ಚೆಂದರೆ ಒಂದು ವರ್ಷದ ಹಿಂದಿನ ಕತೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇದ್ದಕ್ಕಿದ್ದಂತೆ ಕ್ರಿಯಾಶೀಲವಾಗಿರುವ ನ್ಯಾಯಾಂಗ, ಆಡಳಿತ ನಡೆಸುವವರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಸಿಬಿಐ ಹೆಸರು ಹೇಳಿದಾಕ್ಷಣ ಇದೇ ಮೊದಲ ಬಾರಿ ಆಡಳಿತಾರೂಢ ಪಕ್ಷಗಳ ನಾಯಕರು ಕೂಡಾ ನಡುಗತೊಡಗಿದ್ದಾರೆ.
ಮಹಾಲೇಖಪಾಲರ ವರದಿ ಕೇಂದ್ರ ಸಚಿವರು, ಅಧಿಕಾರಿಗಳು, ಉದ್ಯಮಿಗಳು, ರಾಜಕೀಯ ನಾಯಕರು ಜೈಲು ಸೇರುವಂತೆ ಮಾಡಿದೆ. ಮುಖದಲ್ಲಿ ಅಲ್ಲಲ್ಲಿ ಕಳಂಕ ಮೆತ್ತಿಕೊಂಡಿದ್ದರೂ ಪೈಪೋಟಿಗೆ ಬಿದ್ದ ಮಾಧ್ಯಮಗಳು ಭ್ರಷ್ಟಾಚಾರದ ಹಗರಣಗಳನ್ನು ಬಚ್ಚಿಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಬಯಲು ಮಾಡುತ್ತಲೇ ಇವೆ.
ಕೇಂದ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲಿಯೂ ಈ ಬದಲಾವಣೆಯ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸತೊಡಗಿದೆ. ಅಕ್ರಮ ಗಣಿಗಾರಿಕೆಯ ಮೂಲಕ ಗಳಿಸಿದ ಹಣದಿಂದ ರಾಜ್ಯ ರಾಜಕೀಯವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದ ರೆಡ್ಡಿ ಸೋದರರಲ್ಲಿ ಒಬ್ಬರು ಜೈಲು ಸೇರಿದ್ದಾರೆ.
ಮೊದಲು ಮಹಾನಗರಪಾಲಿಕೆ ಸದಸ್ಯ, ನಂತರ ಸಚಿವರು ಕೊನೆಗೆ ಮುಖ್ಯಮಂತ್ರಿಗಳೇ ಜೈಲು ಸೇರಬೇಕಾಯಿತು. ಉಳಿದ ಸಚಿವರು ಜೈಲಿಗೆ ಹೋಗಲು ಸರತಿ ಸಾಲಲ್ಲಿ ನಿಂತಿದ್ದಾರೆ. ಲೋಕಾಯುಕ್ತ ವರದಿಯ ಕುಣಿಕೆ ಇನ್ನೆಷ್ಟು ಮಂದಿಯ ಕೊರಳಿಗೆ ಬೀಳುತ್ತದೆಯೋ ಗೊತ್ತಿಲ್ಲ.
ಇಷ್ಟಾದ ಮೇಲೆ ನ್ಯಾಯಾಲಯ, ಸಿಬಿಐ, ಸಿಎಜಿ, ಲೋಕಾಯುಕ್ತದ ಕಾರ‌್ಯನಿರ್ವಹಣೆಯ ಬಗ್ಗೆ ಯಾರೂ ಬೊಟ್ಟು ಮಾಡುವಂತಿಲ್ಲ. ಈಗ ಪ್ರಜಾಪ್ರಭುತ್ವಕ್ಕೆ ಭಾರತದ ನೆಲದಲ್ಲಿ ಭವಿಷ್ಯ ಇಲ್ಲ ಎಂಬ ಸಿನಿಕತನವನ್ನು ಯಾರೂ ವ್ಯಕ್ತಪಡಿಸಬೇಕಾಗಿಲ್ಲ. ಸಂವಿಧಾನ ವಿಫಲಗೊಂಡಿದೆ ಎಂದು ಯಾರೂ ದೂರುವಂತೆಯೂ ಇಲ್ಲ. ಅವುಗಳು ಮಾಡಬೇಕಾಗಿರುವ ಕೆಲಸವನ್ನು ಮಾಡಿವೆ.

ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವಾಗಿ ಕಾಣಬಯಸುವರು, ಪ್ರಜಾಪ್ರಭುತ್ವವನ್ನು ಪ್ರೀತಿಸುವವರು, ಸಂವಿಧಾನದ ಮೇಲೆ ಗೌರವ ಇಟ್ಟುಕೊಂಡವರೆಲ್ಲರೂ ಈ ಸಂಸ್ಥೆಗಳ ಕರ್ತವ್ಯಪ್ರಜ್ಞೆ, ನ್ಯಾಯನಿಷ್ಠುರತೆ ಮತ್ತು ಇಚ್ಛಾಶಕ್ತಿಯಿಂದ ಕೂಡಿರುವ ಕಾರ್ಯ ನಿರ್ವಹಣೆಯನ್ನು ಮೆಚ್ಚಬೇಕು, ಬೆಂಬಲ ನೀಡಬೇಕು ಅಲ್ಲವೇ. ಹಾಗಾಗುತ್ತಿದೆಯೇ?
ಭ್ರಷ್ಟಾಚಾರದ ಆರೋಪ ಹೊತ್ತವರನ್ನು ನ್ಯಾಯಾಲಯ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಕಳುಹಿಸಿದರೆ ಅವರನ್ನು ಭೇಟಿ ಮಾಡಲು ಸ್ವಾಮೀಜಿಗಳು ಗುಂಪುಗುಂಪಾಗಿ ಜೈಲಿಗೆ ಹೋಗುತ್ತಾರೆ. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದವರಿಗೆ ಅವರ ಅಭಿಮಾನಿಗಳು ವೀರೋಚಿತವಾದ ಸ್ವಾಗತ ನೀಡುತ್ತಾರೆ.

ಈ ಪರಿಸ್ಥಿತಿಯಲ್ಲಿ ನ್ಯಾಯನಿಷ್ಠುರತೆಯಿಂದ ಕೆಲಸ ನಿರ್ವಹಿಸಿದ ಲೋಕಾಯುಕ್ತದ ಒಬ್ಬ ಅಧಿಕಾರಿ ಇಲ್ಲವೇ ನ್ಯಾಯಮೂರ್ತಿಗಳ ಪರಿಸ್ಥಿತಿ ಏನಾಗಬೇಕು? ತಾಂತ್ರಿಕವಾಗಿ ಇದು ನ್ಯಾಯಾಂಗದ ನಿಂದನೆ ಅಲ್ಲದೆ ಇರಬಹುದು, ಆದರೆ ನೈತಿಕವಾಗಿ? ಪ್ರಾಮಾಣಿಕರನ್ನು ನೈತಿಕವಾಗಿ ಕುಂದಿಸಲು ಇಂತಹ ಸಮಾಜ ವಿರೋಧಿ ನಡವಳಿಕೆಗಳು ಸಾಕಲ್ಲವೇ?
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತ್ರವಲ್ಲ ಎ.ರಾಜಾ, ಸುರೇಶ್ ಕಲ್ಮಾಡಿ, ಕನಿಮೊಳಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ ಮೊದಲಾದವರು ಸೇರಿದಂತೆ ಭ್ರಷ್ಟಾಚಾರದ ಹಗರಣಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರಿರುವವರೆಲ್ಲರೂ ಅವರೇ ಹೇಳಿಕೊಂಡಂತೆ ನಿರಪರಾಧಿಗಳಾಗಿರಲೂಬಹುದು. ಆದರೆ ಸದ್ಯಕ್ಕೆ ಯಾವ ನ್ಯಾಯಾಲಯವೂ ಅವರನ್ನು ದೋಷಮುಕ್ತರನ್ನಾಗಿ ಮಾಡಿಲ್ಲ.
ಆರೋಪಿಗಳಿಗೆ ದೋಷ ಮುಕ್ತರಾಗುವ ಅವಸರ ಸಹಜ. ಆದರೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ಸ್ಥಾನದಲ್ಲಿರುವ ಧಾರ್ಮಿಕ ನಾಯಕರಿಗೆ, ಸಮಾಜದ ಗಣ್ಯರಿಗೆ ನಿರಪರಾಧಿತನದ ಸರ್ಟಿಫಿಕೇಟ್ ನೀಡುವ ಅವಸರ ಯಾಕೆ?  ಭಾರತದ ರಾಜಕೀಯದ ಆರೋಗ್ಯ ಹಾಳು ಮಾಡಿರುವುದು ದುಡ್ಡು ಮತ್ತು ಜಾತಿ ಎಂಬ ಎರಡು ರೋಗಗಳು.
`ದುಡ್ಡಿನ ಬಲದಿಂದ ಏನಾದರೂ ಮಾಡಬಲ್ಲೆ, ಸರ್ಕಾರವನ್ನು ಸ್ಥಾಪಿಸಬಲ್ಲೆ, ಅಗತ್ಯವೆನಿಸಿದರೆ ಅದನ್ನು ಉರುಳಿಸಲು ಬಲ್ಲೆ~ ಎಂದಲ್ಲವೇ ರೆಡ್ಡಿ ಸೋದರರು ಹೇಳುತ್ತಿದ್ದದ್ದು.
ಯಡಿಯೂರಪ್ಪನವರು `ಆಪರೇಷನ್ ಕಮಲ~ವನ್ನು ವಿಧಾನಸೌಧದಿಂದ ಹಾಲಿನ ಸೊಸೈಟಿವರೆಗೆ ಎಲ್ಲೆಂದರಲ್ಲಿ ನಡೆಸಿ ವಿರೋಧಿಗಳು ಅಸಹಾಯಕರಂತೆ ಬಾಯಿಬಡಿದುಕೊಳ್ಳುವಂತೆ ಮಾಡಿದ್ದು ಇದೇ ದುಡ್ಡಿನ ಬಲದಿಂದ ಅಲ್ಲವೇ?

ಆದರೆ ನ್ಯಾಯ ಪಾಲನೆಯ ಸಂಸ್ಥೆಗಳು ಮೇಲೆರಗಿದಾಗ ಚಿನ್ನದ ಸಿಂಹಾಸನದ ಮೇಲೆ ಕೂತಿದ್ದ ಜನಾರ್ದನ ರೆಡ್ಡಿಯವರಿಗೂ ತಾವು ಜೈಲು ಪಾಲಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮ್ಮನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಾಧ್ಯವಾಗದ ದುಡ್ಡು ಒಂದು ಕ್ಷಣ ನಿಷ್ಪ್ರಯೋಜಕ ಎಂದು ಅವರಿಗೆ ಅನಿಸಿರಬಹುದು.
ಯಡಿಯೂರಪ್ಪ, ಎ.ರಾಜಾ, ಸುರೇಶ್ ಕಲ್ಮಾಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ -ಇವರಲ್ಲಿ ಯಾರಿಗೂ ದುಡ್ಡಿನ ಕೊರತೆ ಇಲ್ಲ. `ದುಡ್ಡೊಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲೆ~ ಎಂದು ಬಲವಾಗಿ ನಂಬಿದವರು ಇವರೆಲ್ಲ.

ರಾಜಕಾರಣಿಗಳು ನಂಬಿದ್ದ ದುಡ್ಡಿನ ಸೊಂಟವನ್ನು ನ್ಯಾಯದ ದಂಡ ಮುರಿದುಹಾಕಿದೆ. ಕೇವಲ ದುಡ್ಡಿನ ಬಲದಿಂದಲೇ ರಾಜಕೀಯದಲ್ಲಿ ಉಳಿಯಲು-ಬೆಳೆಯಲು ಸಾಧ್ಯ ಇಲ್ಲ ಎನ್ನುವುದನ್ನು ಈಗಿನ ಬೆಳವಣಿಗೆಗಳು ಮನವರಿಕೆ ಮಾಡಿಕೊಟ್ಟಿವೆ. ಆದರೆ ಜಾತಿ?
ರಾಜಕೀಯವನ್ನು ಕಾಡುತ್ತಿರುವ ಜಾತಿಯ ರೋಗಕ್ಕೆ ಕಾನೂನಿನಲ್ಲಿಯೂ ಔಷಧಿ ಇಲ್ಲ.
ಅಸ್ಪೃಶ್ಯತೆ ಆಚರಣೆಗೆ, ಜಾತಿ ಆಧಾರದ ತಾರತಮ್ಯಗಳಿಗೆ ಕಾನೂನಿನಲ್ಲಿ ಶಿಕ್ಷೆ ಇದೆ. ಆದರೆ ಜಾತಿಯ ಕಾರಣಕ್ಕೆ ಭ್ರಷ್ಟರು, ಅಪ್ರಾಮಾಣಿಕರು, ಅನರ್ಹರು ಇಲ್ಲವೇ ಅಪರಾಧಿಗಳನ್ನು ಬೆಂಬಲಿಸುವವರಿಗೆ ಎಲ್ಲಿದೆ ಶಿಕ್ಷೆ?

ಈ ಕಾರಣದಿಂದಾಗಿಯೇ ದುಡ್ಡಿನ ಬಲದಿಂದ ಮಾಡಲಾರದ್ದನ್ನು ಜಾತಿಯ ಬಲದ ಮೂಲಕ ಮಾಡಲು  ಕರ್ನಾಟಕದ ರಾಜಕಾರಣಿಗಳು ಹೊರಟಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ರಾಜಕೀಯ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯಡಿಯೂರಪ್ಪನವರು ಆತ್ಮರಕ್ಷಣೆಗಾಗಿ ಜೋತುಬಿದ್ದಿರುವುದು ಜಾತಿ ಮೇಲೆ.
ಪಕ್ಷದೊಳಗೆ ಮತ್ತು ಹೊರಗೆ ಇರುವ ಅವರ ವಿರೋಧಿಗಳು ಕೂಡಾ ಅವರಿಗೆ ಹೆದರುತ್ತಿರುವುದು ಅವರಿಗಿದೆಯೆಂದು ಹೇಳಲಾಗುತ್ತಿರುವ ಜಾತಿ ಬೆಂಬಲಕ್ಕಾಗಿ.
ಲೋಕಾಯುಕ್ತ ವರದಿಯಲ್ಲಿ ತನ್ನ ವಿರುದ್ಧ ಆರೋಪವಿರುವುದನ್ನು ಪ್ರತಿಭಟಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಪಕ್ಷವನ್ನೂ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಶ್ರಿರಾಮುಲು ಅವರೂ ಮತ್ತೆ ಗೆದ್ದು ಬರುತ್ತೇನೆಂದು ಸವಾಲು ಹಾಕುತ್ತಿರುವುದಕ್ಕೂ ಜಾತಿ ಕಾರಣ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜಾತಿ ಜನ ಬಹುಸಂಖ್ಯೆಯಲ್ಲಿದ್ದಿದ್ದರೆ ದೇವೇಗೌಡರು ಕೂಡಾ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅದನ್ನೇ ಮಾಡುತ್ತಿದ್ದರು.
ಕರ್ನಾಟಕದ ರಾಜಕೀಯದ ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಹತ್ತುವರ್ಷಗಳ ಹಿಂದಿನ ಬಿಹಾರ ನೆನಪಾಗುತ್ತದೆ. ಜಯಪ್ರಕಾಶ್ ನಾರಾಯಣ್ ಅವರ `ಸಂಪೂರ್ಣ ಕ್ರಾಂತಿ~ಯ ಕರೆಗೆ ಓಗೊಟ್ಟು ರಾಜಕೀಯ ಪ್ರವೇಶಿಸಿದ್ದ ಲಾಲುಪ್ರಸಾದ್ ಜಾತಿವಾದಿಯೇನೂ ಆಗಿರಲಿಲ್ಲ.

ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಸಾಧನೆ ಜನ ಕೊಂಡಾಡುವಂತಿತ್ತು. ನಂತರದ ದಿನಗಳಲ್ಲಿ  ಭ್ರಷ್ಟಗೊಳ್ಳುತ್ತಾ ಹೋದ ಲಾಲು ರಾಜಕೀಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾತಿವಾದಿಯಾಗುತ್ತಾ ಹೋದರು.

ಜಾತಿ ಸಂಘರ್ಷದ ಮೂಲಕವೇ ಜಾತಿ ನಾಶ ಮಾಡಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಸಮಾಜವಾದದ ಪಾಠವನ್ನು ತಿರುಚಿದ ಲಾಲು, ರಾಜಕೀಯ ಉಳಿವಿಗಾಗಿ ಜಾತಿ ಕಲಹವನ್ನು ಬಳಸಿಕೊಂಡರು.
ಲಾಲು ಅವರ ಜಾತಿ ರಾಜಕೀಯವನ್ನು ಜಾತಿಯಿಂದಲೇ ಎದುರಿಸುವ ಪ್ರಯತ್ನಗಳು ನಡೆದವು. ಇದರಿಂದಾಗಿ ಬಿಹಾರದ ರಾಜಕೀಯವೇ ಜಾತಿಮಯವಾಗಿ ಹೋಯಿತು.
ಬಿಹಾರದ ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಅವರು `ಪ್ರತಿಕ್ರಿಯೆ~ ಆದರೇ  ಹೊರತು `ಪರಿಹಾರ~ ಆಗಲಿಲ್ಲ. ಜನ ಎಚ್ಚೆತ್ತು ಕೊಳ್ಳಲು ಹದಿನಾರು ವರ್ಷ ಬೇಕಾಯಿತು. ಅಷ್ಟರಲ್ಲಿ ಬಿಹಾರ `ಜಂಗಲ್ ರಾಜ್~ ಆಗಿತ್ತು. ಕೊನೆಗೂ ಲಾಲು ಅವರನ್ನು ಬೆಂಬಲಿಸುತ್ತಾ ಬಂದಿದ್ದ ಆ ರಾಜ್ಯದ ಜನಸಂಖ್ಯೆಯಲ್ಲಿ ಶೇ 13ರಷ್ಟಿರುವ ಯಾದವರು ತಿರುಗಿಬಿದ್ದರು.
ಲಾಲು ಇತಿಹಾಸದ ಕಸದ ಬುಟ್ಟಿ ಸೇರಿದರು. ಇತಿಹಾಸ ಪುನರಾವರ್ತನೆಯಾಗುವಾಗ ಒಮ್ಮಮ್ಮೆ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತದೆಯಂತೆ.
ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಜಾತಿ ರಾಜಕೀಯವನ್ನು ನೋಡಿದರೆ ಬಿಹಾರದ ಇತಿಹಾಸ ಕರ್ನಾಟಕದಲ್ಲಿ ಪುನರಾವರ್ತನೆಯಾಗುತ್ತಿರುವಂತೆ ಕಾಣುತ್ತಿದೆ. ಇದನ್ನು ತಡೆಯಲು ದೇಶದ ನ್ಯಾಯಪಾಲನಾ ವ್ಯವಸ್ಥೆ ಶಕ್ತಿ ಮೀರಿಪ್ರಯತ್ನ ಮಾಡುತ್ತಿದೆ, ಈಗ ಎಚ್ಚೆತ್ತುಕೊಳ್ಳಬೇಕಾಗಿರುವುದು ಜನತೆ.

Monday, November 7, 2011

ಹಾದಿ ತಪ್ಪುತ್ತಿರುವ ಭ್ರಷ್ಟಾಚಾರ ವಿರೋಧಿ ಚಳವಳಿ

..ಎಲ್ಲಿಯವರೆಗೆ ಅಣ್ಣಾ ಹಜಾರೆ ಮತ್ತು ಸಂಗಡಿಗರು ಅಧಿಕಾರ ರಾಜಕಾರಣದ ಮೋಹಪಾಶಕ್ಕೆ ಕೊರಳೊಡ್ಡದೆ ಹೋರಾಟ ಮುಂದುವರಿಸಿಕೊಂಡು ಹೋಗುತ್ತಾರೋ, ಅಲ್ಲಿಯವರೆಗೆ ಜನ ಬೆಂಬಲ ಅವರ ಹಿಂದೆ ಇರಬಹುದು.
ನೇರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಇಲ್ಲವೇ ಸಾಂಕೇತಿಕ ಸ್ಪರ್ಧೆ, ಹೊರಗಿನ ಬೆಂಬಲ, ಸಜ್ಜನರ ಪರ ಪ್ರಚಾರ ಮೊದಲಾದ ಪರೋಕ್ಷ ಕ್ರಮಗಳ ಮೂಲಕ ಅವಸರದ ರಾಜಕೀಯ ಪ್ರವೇಶದ ದೌರ್ಬಲ್ಯಕ್ಕೆ ಬಲಿಯಾದರೆ ಮತ್ತೊಂದು ಸುತ್ತಿನ ಭ್ರಮನಿರಸನಕ್ಕೆ ಜನತೆ ಸಿದ್ಧವಾಗಬೇಕಾಗಬಹುದು.
ಯಾಕೆಂದರೆ ಪರ್ಯಾಯ ರಾಜಕೀಯ ಸಂಘಟನೆಗೆ ಬೇಕಾದ ತಯಾರಿ ಮತ್ತು ಶಕ್ತಿ ಈ ಹೋರಾಟಗಾರರಲ್ಲಿ ಇದ್ದಂತಿಲ್ಲ.
ರಾಜಕೀಯ ಪಕ್ಷಗಳು ಕೂಡಾ ಈ ಒಂದು ತಪ್ಪು ಹೆಜ್ಜೆಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ~ ಎಂದು ಏಳು ತಿಂಗಳ ಹಿಂದೆ ಈ ಅಂಕಣದಲ್ಲಿ (`ರಾಜಕೀಯದಿಂದ ದೂರ ಇದ್ದಷ್ಟು ದಿನ ಇವರು ನಮ್ಮಣ್ಣ~) ಬರೆದಾಗ ಕೆಲವು ಅಣ್ಣಾ ಬೆಂಬಲಿಗರು `ಅಷ್ಟೊಂದು ಸಿನಿಕರಾಗುವುದು ಬೇಡ~ ಎಂದಿದ್ದರು.
ಅವರಲ್ಲಿ ಕೆಲವರಿಗಾದರೂ ಅಣ್ಣಾ ಹಜಾರೆ ಅವರು ಈಗ ನಿರಾಶೆ ಉಂಟು ಮಾಡಿರಬಹುದು.
ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ದ ಹೋರಾಟ ಪ್ರಾರಂಭಿಸಿದಾಗ ಪ್ರಮುಖವಾಗಿ ಎರಡು ಕಾರಣಗಳಿಂದಾಗಿ ಜನಬೆಂಬಲ ಹರಿದು ಬಂದಿತ್ತು. ಮೊದಲನೆಯದಾಗಿ ಸಾರಾಸಗಟಾಗಿ ರಾಜಕಾರಣಿಗಳನ್ನು ದ್ವೇಷಿಸುವಷ್ಟು ರಾಜಕೀಯದ ಬಗ್ಗೆ ಜನರು ಹೊಂದಿರುವ ತಿರಸ್ಕಾರ.
ಎರಡನೆಯದಾಗಿ ಭ್ರಷ್ಟಾಚಾರದ ವಿರುದ್ಧದ ಸಾರ್ವಜನಿಕ ಆಕ್ರೋಶ. ಈ ಪರಿಸ್ಥಿತಿಯಲ್ಲಿ ಪ್ರವೇಶ ಮಾಡಿದ ಅಣ್ಣಾಹಜಾರೆ ಜನರ ಕಣ್ಣಿಗೆ ತಮ್ಮನ್ನು ಸಂಕಷ್ಟಗಳಿಂದ ಪಾರು ಮಾಡಲು ಬಂದ ಅವತಾರ ಪುರುಷನಂತೆ ಕಂಡಿದ್ದರು.
ಯಾಕೆಂದರೆ ಅಣ್ಣಾ ಹಜಾರೆ ರಾಜಕಾರಣಿಯಾಗಿರಲಿಲ್ಲ ಮತ್ತು ಪ್ರಾಮಾಣಿಕರಾಗಿದ್ದರು. ಇದು ಏಳು ತಿಂಗಳ ಹಿಂದಿನ ಕತೆ, ಈಗಲೂ ಅವರು ಅಂದಿನ ಅಣ್ಣಾ ಆಗಿಯೇ ಉಳಿದಿದ್ದಾರೆಯೇ? ಅವರ ಅಭಿಮಾನಿಗಳಿಗೂ ಉತ್ತರಿಸುವುದು ಕಷ್ಟ.

ರಾಜಕಾರಣಿಗಳನ್ನು ವಿರೋಧಿಸುತ್ತಲೇ ಅಣ್ಣಾ ಹಜಾರೆ ರಾಜಕಾರಣಿಯಾದಂತಿದೆ ಮತ್ತು ಇತರರ ವಿರುದ್ಧ ಬಳಸುತ್ತಿದ್ದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತು ಕುಯ್ಯತೊಡಗಿದೆ.
ಜನಪ್ರಿಯತೆಯಿಂದ ಸಾರ್ಥಕ್ಯದ ಭಾವನೆ ಮೂಡುವುದರಿಂದ ಅದು ವೈಯಕ್ತಿಕವಾಗಿ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಾಧ್ಯವಾಗದೆ ಹೋದರೆ ಬಹಳ ಅಪಾಯಕಾರಿ.
ಸಂಭಾಳಿಸಿಕೊಳ್ಳಲಾಗದ ಜನಪ್ರಿಯತೆಯ ವ್ಯಸನಕ್ಕೆ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುತೇಕ ದೇಶಗಳ ಸಾರ್ವಜನಿಕ ಜೀವನದಲ್ಲಿ ಜನಪ್ರಿಯರಾದವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನವನ್ನು ಅಭಿಮಾನಿ ಬಳಗ ಮಾಡುತ್ತಾ ಬಂದಿದೆ.
ಅವರ ಜನಪ್ರಿಯತೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲಿಕ್ಕಾಗಿ ಪಟ್ಟಭದ್ರ ರಾಜಕಾರಣಿಗಳೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಪ್ರಮುಖವಾಗಿ ಸಮಾಜ ಸೇವಕರು, ಚಿತ್ರನಟರು, ಕ್ರೀಡಾಪಟುಗಳು, ಉದ್ಯಮಿಗಳೆಲ್ಲ ಈ ಗುಂಪಲ್ಲಿ ಬರುತ್ತಾರೆ.
ಇವರಲ್ಲಿ ಕೆಲವರು ಯಶಸ್ವಿಯೂ ಆಗಿದ್ದಾರೆ, ಆದರೆ ಗುಂಡಿಗೆ ಬಿದ್ದವರೇ ಹೆಚ್ಚು. ಅಣ್ಣಾ ಹಜಾರೆ ವಿಷಯದಲ್ಲಿಯೂ ಇದು ನಡೆದಿದೆ.
ಕಳೆದ ಏಪ್ರಿಲ್‌ನಲ್ಲಿ ಮೊದಲ ಉಪವಾಸ ಕೈಬಿಟ್ಟ ಮರುಕ್ಷಣವೇ ಅವರನ್ನು ಮುತ್ತಿಕೊಂಡ ಪತ್ರಕರ್ತರು `ನೀವು ರಾಜಕೀಯ ಪ್ರವೇಶ ಮಾಡುತ್ತೀರಾ? ನೀವು ಪ್ರಧಾನಮಂತ್ರಿಯಾಗಬೇಕೆಂದು ಜನ ಬಯಸಿದರೆ ಏನು ಮಾಡುತ್ತೀರಿ?~ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ರಾಜಕೀಯದಲ್ಲಿ ತಮಗೆ ಆಸಕ್ತಿ ಇಲ್ಲವೇ ಇಲ್ಲ ಎಂದು ಆ ಕ್ಷಣದಲ್ಲೇನೋ ಅಣ್ಣಾಹಜಾರೆ ತಲೆಕೊಡವಿಬಿಟ್ಟರು. ಆದರೆ ಅವರ ಅಕ್ಕಪಕ್ಕದಲ್ಲಿರುವ ತಲೆಗೆ ಆಗಲೇ ರಾಜಕೀಯದ ಗುಂಗಿಹುಳ ಪ್ರವೇಶ ಮಾಡಿಬಿಟ್ಟಿತ್ತು.
ಭ್ರಷ್ಟಾಚಾರದ ವಿರುದ್ದದ ಹೋರಾಟಕ್ಕೆ ದೇಶದಾದ್ಯಂತ ವ್ಯಕ್ತವಾದ ಜನಬೆಂಬಲ, ಮಾಧ್ಯಮಗಳಲ್ಲಿ, ಮುಖ್ಯವಾಗಿ 24ಗಂಟೆಗಳ ಸುದ್ದಿ ಚಾನೆಲ್‌ಗಳಲ್ಲಿ ನೀಡಲಾದ ಪ್ರಚಾರ, `ಅಣ್ಣಾ ಎಂದರೆ ಇಂಡಿಯಾ~ ಎನ್ನುವಂತಹ ಮೂರ್ಖ ಘೋಷಣೆಗಳು, `ಅಣ್ಣಾ ಸಂಸತ್‌ಗಿಂತಲೂ ದೊಡ್ಡವರು~ ಎನ್ನುವ ಅಪ್ರಬುದ್ಧ ಹೇಳಿಕೆಗಳು - ಎಂತಹ ಸಂಯಮಿಯ ಮನಸ್ಸೂ ಕೂಡಾ ಆಚೀಚೆ ಹೊಯ್ದಾಡಲು ಸಾಕು. ಇವತ್ತು `ಇಮೇಜ್ ಬಿಲ್ಡಿಂಗ್~ ಎನ್ನುವುದು ಬಹಳ ಜನಪ್ರಿಯ ದಂಧೆ.
ಅಣ್ಣಾ ಹಜಾರೆ ಜತೆಯಲ್ಲಿದ್ದವರು ಬಹಳ ವ್ಯವಸ್ಥಿತವಾಗಿ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿಧಾನವಾಗಿ ಅಣ್ಣಾ ಹಜಾರೆ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಾ ಬಂದದ್ದು, ಎಲ್ಲರ ಮೈಮೇಲೆ `ಐ ಯಾಮ್ ಅನ್ನಾ~ ಎಂಬ ಘೋಷಣೆಗಳು ಕಾಣಿಸಲಾರಂಭಿಸಿದ್ದು ಇವೆಲ್ಲವೂ ಈ ಪ್ರಯತ್ನದ ಭಾಗ.
ಆದರೆ ನಾಮಬಲದಿಂದಲೇ ರಾಜಕೀಯದಲ್ಲಿ ಯಶಸ್ವಿಯಾಗುವ ಕಾಲ ಎಂದೋ ಕಳೆದುಹೋಗಿದೆ. ಯಶಸ್ವಿ ರಾಜಕಾರಣ ಮಾಡಲು ಬದ್ಧ ಕಾರ್ಯಕರ್ತರ ಪಡೆ ಮತ್ತು ಸಂಪನ್ಮೂಲ ಬೇಕಾಗುತ್ತದೆ.

ವಾರಂತ್ಯದ ರಜೆಗಳನ್ನು ಉಪವಾಸ ಶಿಬಿರದಲ್ಲಿ ಕಳೆದುಕೊಳ್ಳುವುದೇ ಸಮಾಜಸೇವೆ ಎಂದು ತಿಳಿದುಕೊಂಡ ಬೆಂಬಲಿಗರನ್ನು ಕಟ್ಟಿಕೊಂಡು ರಾಜಕೀಯ ಮಾಡಲಾಗುವುದಿಲ್ಲ.
ಚುನಾವಣಾ ಸುಧಾರಣೆಯಾಗದ ಹೊರತು, ರಶೀದಿ ಕೊಟ್ಟು ಸಂಗ್ರಹಿಸುವ ದೇಣಿಗೆಯ ದುಡ್ಡಿನಿಂದ ಈಗಾಗಲೇ ಬೇರು ಬಿಟ್ಟಿರುವ ರಾಜಕೀಯ ಪಕ್ಷಗಳನ್ನು ಎದುರಿಸಲು ಸಾಧ್ಯವೂ ಇಲ್ಲ.
ರಾಜಕೀಯದ ಈ ವಾಸ್ತವ ಅಣ್ಣಾ ತಂಡಕ್ಕೆ ಖಂಡಿತ ಗೊತ್ತಿದೆ. ಅದಕ್ಕಾಗಿ ಅವರು `ಹವ್ಯಾಸಿ ರಾಜಕಾರಣ~ವನ್ನು ಪ್ರಾರಂಭಿಸಿದ್ದಾರೆ. ಯಾವುದೋ ಒಂದು ಚುನಾವಣೆಯಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡಿ ಒಬ್ಬ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುವುದು.
ಆ ಗೆಲುವೇ ತಮ್ಮ ಗೆಲುವು, ತಮ್ಮ ಬೇಡಿಕೆಗೆ ಸಿಕ್ಕ ಜನಮನ್ನಣೆ ಎಂದು ಹೇಳಿಕೊಂಡು ತಿರುಗಾಡುವುದು- ಇದು ಸದ್ಯಕ್ಕೆ ಅಣ್ಣಾ ತಂಡದ ಕಾರ್ಯತಂತ್ರ. ಆದರೆ ರಾಜಕಾರಣ ಎನ್ನುವುದು ಪೂರ್ಣಾವಧಿ ವೃತ್ತಿ, ಅದು ಹವ್ಯಾಸ ಅಲ್ಲ.

ಹವ್ಯಾಸಿ ರಾಜಕಾರಣಿಗಳನ್ನು ಜನ ಒಪ್ಪುವುದೂ ಇಲ್ಲ, ಯಾಕೆಂದರೆ ಅದು ಕರ್ತವ್ಯ ನಿರ್ವಹಣೆಯ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಇಲ್ಲದ ರಾಜಕಾರಣ.
ಹಿಸ್ಸಾರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ತಾವು ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ತಂಡ, ಅಲ್ಲಿ ಗೆದ್ದಿರುವ ಕುಲದೀಪ್ ವೈಷ್ಣೋವಿ ಅವರ ನಡವಳಿಕೆಗೆ ಉತ್ತರದಾಯಿಯಾಗುವುದೇ? `ಇಲ್ಲ~ ಎಂದಾದರೆ ಇದು ಪಲಾಯನವಾದವಾಗುವುದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಜನದ್ರೋಹವಾಗುವುದಿಲ್ಲವೇ?
ಅಣ್ಣಾ ಹಜಾರೆ ಅವರ ಅನಿಶ್ಚಿತ ನಿಲುವುಗಳಿಗೆ ಕೂಡಾ `ಹವ್ಯಾಸಿ ರಾಜಕಾರಣ~ ನೀಡುವ ಸ್ವಾತಂತ್ರ್ಯ ಕಾರಣ.
ಹಿಸ್ಸಾರ್ ಉಪಚುನಾವಣೆಯ ನಂತರ  ಅಣ್ಣಾ ಅವರು ದಿಢೀರ್ ಜ್ಞಾನೋದಯವಾದವರಂತೆ `ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವುದಿಲ್ಲ~ ಎಂದು ಬಿಟ್ಟರು. ದೆಹಲಿಗೆ ಬಂದವರೇ ಮತ್ತೆ ಕಾಂಗ್ರೆಸ್ ವಿರುದ್ಧದ ಪ್ರಚಾರದ ಹಳೆ ಬೆದರಿಕೆಯನ್ನೇ ಪುನರುಚ್ಚರಿಸಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಇತ್ತೀಚಿಗೆ ತಮ್ಮದೇ ತಂಡದ ಸದಸ್ಯರಾದ ಪ್ರಶಾಂತ್ ಭೂಷಣ್ ವರೆಗೆ ಕಳೆದ ಆರು ತಿಂಗಳಲ್ಲಿ ಅಣ್ಣಾ ಹಜಾರೆ ಅವರು ನೀಡುತ್ತಾ ಬಂದ ಹೇಳಿಕೆಗಳನ್ನು ಗಮನಿಸುತ್ತಾ ಬಂದರೆ ಉದ್ದಕ್ಕೂ ಗೊಂದಲಕಾರಿ ನಿಲುವುಗಳನ್ನು ಕಾಣಬಹುದು.

ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಂದ ರೋಸಿಹೋದ ಜನರಿಗೆ ಅಣ್ಣಾ ಅವರಲ್ಲಿಯೂ ಅದೇ ಬಣ್ಣಗಳು ಕಂಡರೆ ಅವರನ್ನೂ ಹಳೆಯ ರಾಜಕಾರಣಿಗಳ ಗುಂಪಿಗೆ ಸೇರಿಸಿಬಿಡುವ ಅಪಾಯ ಇದೆ, ಹಾಗಾಗುತ್ತಿದೆ.
ಇದರಿಂದ ಈಗಾಗಲೇ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಹಾನಿಯೂ ಆಗಿದೆ, ಇದು ಅಣ್ಣಾತಂಡಕ್ಕೆ ಗೊತ್ತಾಗಬೇಕು, ಅಷ್ಟೆ.ಇದರ ಜತೆಗೆ ಅಣ್ಣಾ ಹಜಾರೆಯವರು ಝಳಪಿಸುತ್ತಾ ಬಂದ ಪ್ರಾಮಾಣಿಕತೆಯ ಕತ್ತಿ ಜತೆಯಲ್ಲಿದ್ದವರ ಕತ್ತನ್ನೇ ಕುಯ್ಯತೊಡಗಿದೆ.
ಹಣದ ಮೊತ್ತ ಇಲ್ಲವೇ ಉದ್ದೇಶದ ದೃಷ್ಟಿಯಿಂದ ಅರವಿಂದ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ವಿರುದ್ಧ ಕೇಳಿ ಬಂದ ಆರೋಪಗಳು ಅಷ್ಟೊಂದು ಗಂಭೀರವಾದವೇನೂ ಅಲ್ಲ.

ಆದರೆ  ಸಾರ್ವಜನಿಕ ಜೀವನದಲ್ಲಿರಬೇಕಾದ ಪ್ರಾಮಾಣಿಕತೆಯ ಮಟ್ಟವನ್ನು ಇಷ್ಟೊಂದು ಎತ್ತರಕ್ಕೆ ಏರಿಸಿಟ್ಟವರು ಅದೇ ಮಟ್ಟದ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ.
ಚುನಾಯಿತ ಪ್ರತಿನಿಧಿಯೊಬ್ಬ ಮಾತಿನಲ್ಲಿ ಮಾತ್ರವಲ್ಲ, ಯೋಚನೆಯಲ್ಲಿಯೂ ಪ್ರಾಮಾಣಿಕವಾಗಿರಬೇಕೆಂದು ಬಯಸುತ್ತದೆ ಅಣ್ಣಾ ತಂಡ.
ಇದಕ್ಕಾಗಿಯೇ ಅಲ್ಲವೇ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂದು ಪ್ರಧಾನಿ ಸಾರ್ವಜನಿಕವಾಗಿ ಹೇಳಿದರೂ ನಂಬದೆ ಲಿಖಿತ ಹೇಳಿಕೆಗಾಗಿ ಒತ್ತಾಯಿಸಿದ್ದು.
ತೆರಿಗೆ ವಂಚನೆಯನ್ನು ಚಿತ್ರನಟನೋ, ಕೇಜ್ರಿವಾಲಾನೋ ಯಾರು ಮಾಡಿದರೂ ಅಪರಾಧವೇ. ತಾನು ತಪ್ಪನ್ನು ಮಾಡಿಲ್ಲ, ವರಮಾನ ತೆರಿಗೆ ಇಲಾಖೆಯೇ ದುರುದ್ದೇಶದಿಂದ ವರ್ತಿಸಿದೆ ಎನ್ನುವುದು ಅರವಿಂದ್ ಕೇಜ್ರಿವಾಲಾ ಅವರ ವಾದವಾಗಿದ್ದರೆ ಬಾಕಿ ಉಳಿಸಿಕೊಂಡಿರುವುದನ್ನು ಪಾವತಿ ಮಾಡದೆ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿತ್ತು.
ಕಾನೂನಿನಲ್ಲಿ ಪರಿಣತಿ ಹೊಂದಿರುವ ಕೇಜ್ರಿವಾಲಾ ಅವರಿಗೆ ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಬಾಕಿ ಪಾವತಿಸುವುದೆಂದರೆ ತಪ್ಪನ್ನು ಒಪ್ಪಿಕೊಂಡಂತಲ್ಲವೇ? ಹಾಗಿದ್ದರೆ ತನ್ನಿಂದ ತಪ್ಪಾಗಿದೆ ಎಂದಾದರೂ ಹೇಳಬಹುದಿತ್ತಲ್ಲವೇ?
ಇಷ್ಟು ಮಾತ್ರವಲ್ಲ, ಜನಲೋಕಪಾಲ ಚಳವಳಿಗಾಗಿ ಸಂಗ್ರಹಿಸಿದ್ದ ಹಣದಲ್ಲಿ ಸುಮಾರು 70-80 ಲಕ್ಷ ರೂಪಾಯಿಗಳನ್ನು ತಮ್ಮ `ಸಾರ್ವಜನಿಕ ಹಿತಾಸಕ್ತಿ ಸಂಶೋಧನಾ ಸಂಸ್ಥೆ~ಗೆ ವರ್ಗಾಯಿಸಿದ್ದಾರೆ ಎಂಬ ಆರೋಪ ಕೂಡಾ ಕೇಜ್ರಿವಾಲಾ ಅವರ ಮೇಲಿದೆ. ಈ ಸಂಸ್ಥೆಯಲ್ಲಿ ಅಣ್ಣಾ ತಂಡದ ಯಾರೂ ಸದಸ್ಯರಾಗಿಲ್ಲ.
 ಕಿರಣ್ ಬೇಡಿಯವರದ್ದೂ ಇನ್ನೊಂದು  ಕತೆ. ಕಡಿಮೆ ಟಿಕೆಟ್ ದರದ ವಿಭಾಗದಲ್ಲಿ ವಿಮಾನ ಪ್ರಯಾಣ ಮಾಡಿ ಉಳಿಸಿದ ದುಡ್ಡನ್ನು ತಾನು ನಡೆಸುತ್ತಿರುವ ಸರ್ಕಾರೇತರ ಸಂಸ್ಥೆಗೆ ದೇಣಿಗೆಯಾಗಿ ನೀಡುವುದು ಒಳ್ಳೆಯ ಕೆಲಸ.
ಆದರೆ ಸರಳ ಜೀವಿ ಅಣ್ಣಾ ಹಜಾರೆಯವರ ಅನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕಿರಣ್ ಬೇಡಿ ಅವರಿಂದ ಒಂದು ಭಾಷಣ ಮಾಡಿಸಬೇಕಾದರೆ ಪ್ರಯಾಣಕ್ಕಾಗಿಯೇ 39ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆಯೆಂಬುದು ನಿಜಕ್ಕೂ ಅಚ್ಚರಿಯ ಸುದ್ದಿ.
ಅದೂ ಅಲ್ಲದೆ, ಕಿರಣ್ ಬೇಡಿಯವರು ತನ್ನ ಸರ್ಕಾರೇತರ ಸಂಸ್ಥೆಗೆ ಹಣ ಸಂಗ್ರಹಿಸಲು ಪ್ರಯಾಣವೆಚ್ಚವನ್ನು ಅಧಿಕವಾಗಿ ವಸೂಲಿ ಮಾಡಿರುವುದು ತನ್ನಂತೆಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇಂದೋರ್‌ನ `ಅಭ್ಯಾಸ್ ಮಂಡಳ್~ನಿಂದ ಎನ್ನುವುದು ಗಮನಾರ್ಹ.
ಕಿರಣ್ ಬೇಡಿಯವರ ಭಾಷಣದಿಂದ ಅಲ್ಲಿನ ಸಮಾಜಕ್ಕೆ ಏನು ಸೇವೆ ಆಗಿದೆಯೋ ಗೊತ್ತಿಲ್ಲ, ಆದರೆ ಆ ಭಾಷಣ ಮಾಡದಿದ್ದರೆ ಉಳಿಯುತ್ತಿದ್ದ ಕನಿಷ್ಠ 50 ಸಾವಿರ ರೂಪಾಯಿಗಳಿಂದ ಆ ಸಂಸ್ಥೆ ಸಮಾಜಕ್ಕೆ ಒಂದಷ್ಟು ಸೇವೆ ಮಾಡಲು ಸಾಧ್ಯವಾಗುತ್ತಿತ್ತೋ ಏನೋ?
ಇವೆಲ್ಲವೂ ಸಣ್ಣ ವಿಚಾರಗಳು ನಿಜ, ಆದರೆ ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳ ನಡವಳಿಕೆಯಲ್ಲಿನ ಪ್ರಾಮಾಣಿಕತೆಯ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿರುವ ಅಣ್ಣಾ ತಂಡದ ಸದಸ್ಯರು ಅದನ್ನು ಪಾಲಿಸುವುದು ಬೇಡವೇ?
ತಮ್ಮ ವಿರುದ್ಧದ ಆರೋಪಗಳೆಲ್ಲವೂ ದುರುದ್ದೇಶದಿಂದ ಕೂಡಿದ್ದು ಎಂದು ಕೇಜ್ರಿವಾಲಾ ಮತ್ತು ಬೇಡಿ ಹೇಳುತ್ತಲೇ ಬಂದಿದ್ದಾರೆ. ಹಾಗಿದ್ದರೆ ಅಣ್ಣಾ ತಂಡದಿಂದ ಹೊರಬಿದ್ದಿರುವ ರಾಜಿಂದರ್‌ಸಿಂಗ್ ಮತ್ತು ಪಿ.ವಿ.ರಾಜಗೋಪಾಲ್ ಹಾಗೂ ಈಗಲೂ ತಂಡದಲ್ಲಿರುವ

ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಈ ಇಬ್ಬರು ಸದಸ್ಯರ ಬಗ್ಗೆ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನೂ ಹಾಗೆಯೇ ತಳ್ಳಿಹಾಕಲು ಸಾಧ್ಯವೇ? `ಸಾಧ್ಯ ಇಲ್ಲ~ ಎಂದಾದರೆ ದೇಶದ ಕೋಟ್ಯಂತರ ಸಾಮಾನ್ಯ ಜನ ಈಗಲೂ ಅಪಾರವಾದ ಭರವಸೆ ಇಟ್ಟುಕೊಂಡಿರುವ ಚಳವಳಿಯ ತಂಡವನ್ನು ಪುನರ್‌ರಚಿಸಿ ಅದನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿಯನ್ನಾಗಿ ಮಾಡಲು ಅಣ್ಣಾ ಹಜಾರೆಯವರು ಮುಂದಾಗಬೇಕು.
ಇದನ್ನು ಮಾಡಬೇಕಾದಾಗ ಒಂದಷ್ಟು ತಲೆ ಉರುಳಿಸಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ವಿಳಂಬ ಮಾಡಿದರೆ ಅನಾಹುತವಾದೀತು.

Monday, October 31, 2011

ನಿನ್ನೆ ದುಬೆ, ಇಂದು ಕುಲಕರ್ಣಿ, ನಾಳೆ ಯಾರು?

ಪರಮಾಪ್ತರು ಸಂಕಷ್ಟಕ್ಕೀಡಾದಾಗ ಎಂತಹ ಉಕ್ಕಿನ ಮನುಷ್ಯರೂ ಕುಗ್ಗಿಹೋಗುತ್ತಾರೆ. ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರದ್ದು ಇದೇ ಸ್ಥಿತಿ. ತಮಗೆ ರಾಜಕೀಯ ಸಲಹೆಗಾರ, ಮಾರ್ಗದರ್ಶಕ, ಗೆಳೆಯ ಎಲ್ಲವೂ ಆಗಿದ್ದ ಸುಧೀಂದ್ರ ಕುಲಕರ್ಣಿ ಅವರ ಬಂಧನದ ದು:ಖ ಬಹುಷ: ಅಡ್ವಾಣಿಯವರನ್ನು ಸಹಿಸಲಾಗದಷ್ಟು ಘಾಸಿಗೊಳಿಸಿದೆ.
ಈ ಕಾರಣದಿಂದಾಗಿಯೇ `ವೋಟಿಗಾಗಿ ನೋಟು ಪ್ರಕರಣದಲ್ಲಿ ಸುಧೀಂದ್ರ ಕುಲಕರ್ಣಿ ಮತ್ತು ಬಿಜೆಪಿ ಸಂಸದರು ಆರೋಪಿಗಳೆಂದಾದರೆ ನಾನೂ ಆರೋಪಿ, ನನ್ನನ್ನೂ ಬಂಧಿಸಿ~ ಎಂದು ಅವರು ಭಾವಾವೇಶದಿಂದ ಲೋಕಸಭೆಯಲ್ಲಿ ಗುಡುಗಿದ್ದು. ಅವರ ಈಗಿನ `ಜನಚೇತನ ಯಾತ್ರೆ~ಗೆ ಈ ಘಟನೆಯೂ ಒಂದು ಪ್ರೇರಣೆ ಎನ್ನಲಾಗುತ್ತಿದೆ.
 ವೈಯಕ್ತಿಕವಾಗಿ ನಾನೂ ಬಲ್ಲ ಕನ್ನಡಿಗರಾದ ಸುಧೀಂದ್ರ ಕುಲಕರ್ಣಿ  ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಅನುಭವ ಹೊಂದಿರುವ ಸಜ್ಜನ ಪತ್ರಕರ್ತ. ರಾಜಕೀಯದ ಮೋಹಪಾಶಕ್ಕೆ ಸಿಲುಕದೆ ಇದ್ದಿದ್ದರೆ ಅವರು ಈಗ ಯಾವುದಾದರೂ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರ ಕುರ್ಚಿಯಲ್ಲಿರುತ್ತಿದ್ದರು.
ಖಂಡಿತ ಅವರ ಸ್ಥಾನ ಸೆರೆಮನೆಯಲ್ಲ. ಮೇಲ್ನೋಟದಲ್ಲಿಯೇ  ಕುಲಕರ್ಣಿ ಬಂಧನದಲ್ಲಿನ ವಿರೋಧಾಭಾಸ ಕಾಣುತ್ತಿದೆ. `ವಿಶ್ವಾಸ ಮತಗಳಿಸಲು ದುಡ್ಡುಕೊಟ್ಟು ಮತ ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೊಳಗಾದವರು ನಿಶ್ಚಿಂತೆಯಾಗಿ ಅಧಿಕಾರದಲ್ಲಿದ್ದಾರೆ, ಇದನ್ನು ಬಯಲು ಮಾಡಲು ಹೊರಟವರು ಜೈಲಿನಲ್ಲಿದ್ದಾರೆ~ ಎಂಬ ಬಿಜೆಪಿ ನಾಯಕರ ಹೇಳಿಕೆ, `ಸೀಟಿ ಊದುವವರಿಗೆ (ವಿಷಲ್ ಬ್ಲೋವರ್ಸ್‌) ರಕ್ಷಣೆ  ಬೇಕು ಎನ್ನುವ ಅಡ್ವಾಣಿ ಅವರ ಕಳಕಳಿ, ಕುಲಕರ್ಣಿಯವರಿಗೆ ಆಗಿರುವ ಅನ್ಯಾಯ ಎಲ್ಲವೂ ಅರ್ಥಮಾಡಿಕೊಳ್ಳುವಂತಹದ್ದೇ. ಆದರೆ....
ಸರಿಯಾಗಿ ಹತ್ತು ವರ್ಷಗಳ ಹಿಂದೆ ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಪಕ್ಷದ ನಾಯಕರ ನಡೆ-ನುಡಿಗಳೆರಡೂ ಹೀಗಿರಲಿಲ್ಲವಲ್ಲಾ? ತೆಹೆಲ್ಕಾದ ತನಿಖಾ ತಂಡ ಆಗಿನ ಎನ್‌ಡಿಎ ಸರ್ಕಾರದ ರಕ್ಷಣಾ ಇಲಾಖೆಯೊಳಗಿನ ಹಗರಣಗಳ ಬೆನ್ನತ್ತಿ `ಕುಟುಕು ಕಾರ‌್ಯಾಚರಣೆ~ಯ ಮೂಲಕ ಹಿರಿಯ ಸೇನಾಧಿಕಾರಿಗಳು, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಭ್ರಷ್ಟ ಮುಖಗಳನ್ನು ಬಯಲು ಮಾಡಿತ್ತು.
ತೆಹೆಲ್ಕಾ ರಹಸ್ಯವಾಗಿ ಚಿತ್ರೀಕರಿಸಿದ್ದ ಭ್ರಷ್ಟರ ಮುಖಗಳು 2001ರ ಮಾರ್ಚ್ ಹದಿಮೂರರಂದು ಟಿವಿ ಚಾನೆಲ್‌ಗಳಲ್ಲಿ ಬಿತ್ತರಗೊಂಡಾಗ ದೇಶದ ಜನ ಬೆಚ್ಚಿಬಿದ್ದಿದ್ದರು.
ಸೇನಾಧಿಕಾರಿಗಳು ಹೆಣ್ಣು ಮತ್ತು ಹೆಂಡಕ್ಕಾಗಿ ರಕ್ಷಣಾ ಇಲಾಖೆಯನ್ನೇ ಮಾರಾಟಕ್ಕಿಡಲು ಹೊರಟಿದ್ದನ್ನು, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿಯೇ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಿರುವುದನ್ನು, ಬಿಜೆಪಿಯ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರು ಲಂಚ ಸ್ವೀಕರಿಸುತ್ತಿರುವುದನ್ನು ದೇಶದ ಜನ ಕಣ್ಣಾರೆ ನೋಡಿದರೂ ನಂಬಲಾಗದೆ ಕಣ್ಣುಜ್ಜಿಕೊಂಡಿದ್ದರು.
ಒತ್ತಡಕ್ಕೆ ಸಿಕ್ಕಿ ಜಾರ್ಜ್ ಫರ್ನಾಂಡಿಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು, ಬಯಲಾದ ಹಗರಣಗಳ ತನಿಖೆಗೆ ನ್ಯಾಯಮೂರ್ತಿ ವೆಂಕಟಸ್ವಾಮಿ ನೇತೃತ್ವದ ಆಯೋಗವನ್ನೂ ಎನ್‌ಡಿಎ ಸರ್ಕಾರ ರಚಿಸಿತ್ತು.
ವಿಚಿತ್ರವೆಂದರೆ ಹಗರಣಗಳ ಬಗ್ಗೆ ಮಾತ್ರವಲ್ಲ ತೆಹೆಲ್ಕಾ ಕಾರ‌್ಯಾಚರಣೆಯ `ಉದ್ದೇಶ~ವನ್ನೂ ತನಿಖೆ ಮಾಡಲು ಎನ್‌ಡಿಎ ಸರ್ಕಾರ ಆದೇಶ ನೀಡಿತ್ತು. ಅದರ ನಂತರದ ಸುಮಾರು ಮೂರುವರ್ಷಗಳ ಕಾಲ ಎನ್‌ಡಿಎ ಸರ್ಕಾರ ತೆಹೆಲ್ಕಾ ಸಂಸ್ಥೆಗೆ ನೀಡಿದ್ದ ಕಿರುಕಳ ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾಗಾಂಧಿ ಪತ್ರಿಕೆಗಳ ಮೇಲೆ ನಡೆಸಿದ್ದ ದಾಳಿಯನ್ನು ನೆನೆಪಿಸುವಂತಿತ್ತು.
ಸಂಸ್ಥೆಯಲ್ಲಿ ಬಂಡವಾಳ ಹೂಡಿದವರ ಮನೆಮೇಲೆ ವರಮಾನ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು, ಸೆಬಿ, ಅನುಷ್ಠಾನ ನಿರ್ದೇಶನಾಲಯ ಹೀಗೆ ಸರ್ಕಾರದ ಹಲವಾರು ಇಲಾಖೆಗಳು ಒಟ್ಟಾಗಿ ತೆಹೆಲ್ಕಾದ ಮೇಲೆ ಎರಗಿ ಬಿದ್ದಿದ್ದವು, ಅದರಲ್ಲಿದ್ದ ಕೆಲವು ಪತ್ರಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡಿ ಜೈಲಿಗೆ ತಳ್ಳಲಾಗಿತ್ತು, ಉಳಿದವರು ಪ್ರಾಣ ಬೆದರಿಕೆ ಎದುರಿಸುತ್ತಿದ್ದರು, ಸಂಸ್ಥೆ ದಿವಾಳಿಯಾಗಿತ್ತು. ತೆಹೆಲ್ಕಾ ಟೇಪ್‌ನ ವಿಶ್ವಾಸಾರ್ಹತೆಯನ್ನು ಮತ್ತೆಮತ್ತೆ ಪ್ರಶ್ನಿಸಲಾಯಿತು.
ಆಯೋಗ ತೆಹೆಲ್ಕಾ ಪರವಾಗಿಯೇ ವರದಿ ನೀಡಲಿರುವ ಗುಮಾನಿ ಬಂದಾಗ ಅದನ್ನು ಬರ್ಖಾಸ್ತುಗೊಳಿಸಿ ಮತ್ತೊಂದನ್ನು ರಚಿಸಲಾಯಿತು. ಮೂರುವರ್ಷಗಳ ನಂತರ ಹೊಸ ತನಿಖಾ ಆಯೋಗವನ್ನು ಕೂಡಾ ರದ್ದು ಮಾಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಅದರ ನಂತರ ಏನಾಯಿತೆಂದು ಯಾರಿಗೂ ಗೊತ್ತಿಲ್ಲ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದೆ ಎನ್ನುವ ಒಂದೇ ಕಾರಣಕ್ಕೆ ಎನ್‌ಡಿಎ ಸರ್ಕಾರ ಈ ರೀತಿ ಮಾಧ್ಯಮ ಸಂಸ್ಥೆಯೊಂದರ ವಿರುದ್ದ ಸೇಡು ತೀರಿಸಿಕೊಳ್ಳುತ್ತಿರುವಾಗ ಲಾಲ್‌ಕೃಷ್ಣ ಅಡ್ವಾಣಿ ಗೃಹಸಚಿವರಾಗಿದ್ದರು. ಈಗ `ಸೀಟಿ ಊದುವವರ~ ರಕ್ಷಣೆಯ ಬಗ್ಗೆ ಭಾಷಣಮಾಡುತ್ತಿರುವ ಅರುಣ್ ಜೇಟ್ಲಿ ತೆಹೆಲ್ಕಾ ವಿರುದ್ದದ ನ್ಯಾಯಾಂಗ ಹೋರಾಟದ ಮುಂಚೂಣಿಯಲ್ಲಿದ್ದರು.

ಭ್ರಷ್ಟಾಚಾರದ ಹಗರಣಗಳನ್ನು ಬಯಲು ಮಾಡುವುದು `ದೇಶದ್ರೋಹದ ಕೆಲಸ~ವೆಂದು ಆಗ ಇವರೆಲ್ಲರ ಅಭಿಪ್ರಾಯವಾಗಿತ್ತು, ಇದು `ಎನ್‌ಡಿಎ ವಿರುದ್ದದ ದೊಡ್ಡ ಸಂಚು~ ಎಂದೇ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದರು.

ಹೀಗಿರುವಾಗ ಯಾವ ನೈತಿಕ ಬಲದಿಂದ ಅಡ್ವಾಣಿಯವರು ಈಗ  `ಕುಟುಕು ಕಾರ‌್ಯಾಚಾರಣೆ~ಯಲ್ಲಿ ಭಾಗಿಯಾಗಿದ್ದ ಸ್ನೇಹಿತ ಸುಧೀಂದ್ರ ಕುಲಕರ್ಣಿ ಮತ್ತು ಪಕ್ಷದ ಸಂಸದರನ್ನು  ಸಮರ್ಥನೆ ಮಾಡಿಕೊಳ್ಳಲು ಸಾಧ್ಯ?
ಹೋಗ್ಲಿಬಿಡಿ, ತೆಹೆಲ್ಕಾಕ್ಕೇನೋ ದುಷ್ಟ ಉದ್ದೇಶ ಇದ್ದಿರಬಹುದೆಂದು ಅಂದುಕೊಳ್ಳೋಣ. ಸತ್ಯೇಂದ್ರ ದುಬೆ ಎಂಬ 31 ವರ್ಷದ ಐಐಟಿ ಪದವೀಧರ ಏನು ಅನ್ಯಾಯ ಮಾಡಿದ್ದರು? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟಿ ಜನರಲ್ ಮ್ಯಾನೆಜರ್ ಆಗಿದ್ದ ದುಬೆ ತನ್ನ ಇಲಾಖೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರಿಗೆ ರಹಸ್ಯ ಪತ್ರ ಬರೆದಿದ್ದರು. ಪ್ರಾಣ ಭಯ ಇರುವುದರಿಂದ ತನ್ನ ಹೆಸರನ್ನು ಬಹಿರಂಗಪಡಿಸಬಾರದೆಂದು ಪತ್ರದಲ್ಲಿ ವಿನಂತಿಯನ್ನೂ ಮಾಡಿದ್ದರು.
ಆದರೆ ಆ ಪತ್ರ ಪ್ರಧಾನಿ ಕಾರ‌್ಯಾಲಯದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೋಗಿ ಕೊನೆಗೆ ಯಾರ ಕೈಗೆ ಸಿಗಬಾರದಿತ್ತೋ ಅವರಿಗೆ ಸಿಕ್ಕಿತು. ಪತ್ರ ಬರೆದ ಹದಿನಾರನೇ ದಿನ ಸತ್ಯೇಂದ್ರ ದುಬೆ ಅವರನ್ನು ಗಯಾದ ಬೀದಿಯಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು.
ಅದಾದ ನಂತರ ಭುಗಿಲೆದ್ದ ಸಾರ್ವಜನಿಕ ಆಕ್ರೋಶ ಕಂಡು ಸುಪ್ರೀಂಕೋರ್ಟ್ `ಸಾರ್ವಜನಿಕ ಹಿತಾಸಕ್ತಿ ಬಹಿರಂಗ ಮತ್ತು ರಕ್ಷಣಾ ಗೊತ್ತುವಳಿ~ಯನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದರ ಅನುಷ್ಠಾನದ ಹೊಣೆಯನ್ನು ಕೇಂದ್ರ ಜಾಗೃತ ಆಯೋಗಕ್ಕೆ ವಹಿಸಿಕೊಟ್ಟಿತ್ತು.
ಆದರೆ ಅದಾದ ಒಂದು ವರ್ಷದ ನಂತರ ಭಾರತೀಯ ತೈಲನಿಗಮದ ಮ್ಯಾನೇಜರ್ ಆಗಿದ್ದ ಕೋಲಾರದ ಮಂಜುನಾಥ ಷಣ್ಮುಗಂ ಎಂಬ ಐಐಎಂ ಪದವೀಧರನನ್ನು ಉತ್ತರಪ್ರದೇಶದಲ್ಲಿ ಹತ್ಯೆ ಮಾಡಲಾಯಿತು. ಪೆಟ್ರೋಲ್ ಕಲಬೆರಕೆಯಲ್ಲಿ ತೊಡಗಿದ್ದ ದುಷ್ಕರ್ಮಿಗಳ ವಿರುದ್ದ ದನಿ ಎತ್ತಿದ್ದೇ ಆ ಯುವಕನ ಪ್ರಾಣಕ್ಕೆ ಮುಳುವಾಯಿತು.

ಮತ್ತೆ `ಸೀಟಿ ಊದುವವರ~ ರಕ್ಷಣೆಯ ಕೂಗೆದ್ದಿತ್ತು. 2001ರ ಕಾನೂನು ಆಯೋಗ ಮಾಡಿರುವ ಶಿಫಾರಸಿಗೆ ಅನುಗುಣವಾಗಿ ಕಾಯಿದೆ ರೂಪಿಸುವುದಾಗಿ ಎನ್‌ಡಿ ಸರ್ಕಾರ ಆಶ್ವಾಸನೆಯನ್ನೂ ನೀಡಿತ್ತು.
ಅದು ಅಧಿಕಾರ ಕಳೆದುಕೊಂಡಿತೇ ವಿನ: ಆಶ್ವಾಸನೆ ಈಡೇರಿಸಲೇ ಇಲ್ಲ. ಅಡ್ವಾಣಿ, ಜೇಟ್ಲಿ, ಸುಷ್ಮಾಸ್ವರಾಜ್ ಎಲ್ಲರೂ ಸೇರಿ `ಸೀಟಿ ಊದುವವರ~ ರಕ್ಷಣಾ ಕಾಯಿದೆಯೊಂದನ್ನು ಆಗ ಜಾರಿಗೆ ತಂದಿದ್ದರೆ ಬಹುಷ: ಸುಧೀಂದ್ರ ಕುಲಕರ್ಣಿಯವರು ಇಂದು ಜೈಲಿನಲ್ಲಿ ಇರುತ್ತಿರಲಿಲ್ಲವೇನೋ?
ಭ್ರಷ್ಟರೇ ಬಹುಸಂಖ್ಯೆಯಲ್ಲಿರುವುದು ನಿಜವಾದರೂ ಪ್ರಾಮಾಣಿಕರಿಗೇನು ಸಮಾಜದಲ್ಲಿ ಕೊರತೆ ಇಲ್ಲ. ಆದರೆ ಅವರು ಯಾವತ್ತೂ ಅಲ್ಪಸಂಖ್ಯಾತರು. ಇಲಾಖೆಗಳಿಗೆ ಸಂಬಂಧಿಸಿದ ಅವ್ಯವಹಾರದಲ್ಲಿ ಸಹೋದ್ಯೋಗಿಗಳ ಪಾತ್ರವೂ ಇರುವುದರಿಂದ ಮೊದಲ ಶತ್ರುಗಳು ಅವರೇ ಆಗಿರುತ್ತಾರೆ.  ಮೊದಲು `ಸೀಟಿ ಊದುವವರ~ ವಿರುದ್ಧ ಅಪಪ್ರಚಾರ ನಡೆಯುತ್ತದೆ. ಅದರ ನಂತರ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತದೆ.

ಇವೆಲ್ಲದರ ನಡುವೆ ಅವರನ್ನು ಒಂಟಿಯಾಗಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ತಂತ್ರಗಳ ಮೂಲಕವೇ ಅವರನ್ನು `ತಮ್ಮ ದಾರಿಗೆ ತರುವ~ ಪ್ರಯತ್ನ ನಡೆಯುತ್ತದೆ. ಇದಕ್ಕೆ ಕೆಲವರು ಶರಣಾಗಿ ಬದುಕುವ ದಾರಿ ಕಂಡುಕೊಳ್ಳುತ್ತಾರೆ. `ದಾರಿಗೆ ಬರದವರು~ ಒಂದೋ ಮೂಲೆ ಗುಂಪಾಗುತ್ತಾರೆ ಇಲ್ಲವೇ ಮಸಣದ ಹಾದಿ ಹಿಡಿಯುತ್ತಾರೆ.
ನಕಲಿ ಛಾಪಾ ಕಾಗದ ಹಗರಣದ ಸುಳಿವನ್ನು ಮೊದಲು ನೀಡಿದ್ದ ಮಹಾರಾಷ್ಟ್ರದ ಸ್ಟಾಂಪ್ಸ್ ಸುಪರಿಂಟೆಂಡೆಂಟ್ ರಾಧೇಶ್ಯಾಮ್ ಮೋಪಾಲ್‌ವಾಲ್, ಮುಂಬೈನ ಅಕ್ರಮ ಕಟ್ಟಡಗಳ ವಿರುದ್ದ ಸಮರಸಾರಿದ ಜಿ.ಎಸ್. ಖೈರ್ನಾರ್, 26 ವರ್ಷಗಳ ಸೇವಾವಧಿಯಲ್ಲಿ 26 ಬಾರಿ ವರ್ಗಾವಣೆಯ ಶಿಕ್ಷೆಗೊಳಗಾದ ಪುಣೆಯ ಮುನ್ಸಿಪಲ್ ಕಮಿಷನರ್ ಅರುಣ್ ಭಾಟಿಯಾ... ಹೀಗೆ  ಅನ್ಯಾಯ,ಅಕ್ರಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಯಲಿಗೆಳೆದ `ಸೀಟಿ ಊದುವವರು~ ಎಲ್ಲೋ ಮೂಲೆಗುಂಪಾಗಿ ಹೋಗಿದ್ದಾರೆ.
ದುಬೆ, ಮಂಜುನಾಥ್ ಮಾತ್ರವಲ್ಲ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಭ್ರಷ್ಟರನ್ನು ಬಯಲುಗೊಳಿಸಲು ಹೊರಟ ಭೋಪಾಲದ ಶೆಹಲಾ ಮಸೂದ್, ಗುಜರಾತ್‌ನ ಅಮಿತ್ ಜೆಟ್ವಾ, ಪುಣೆಯ ಸತೀಶ್ ಶೆಟ್ಟಿ, ಮಹಾರಾಷ್ಟ್ರದ ದತ್ತಾತ್ರೇಯ ಪಾಟೀಲ್, ಆಂಧ್ರಪ್ರದೇಶದ ಸೋಲಾ ರಂಗರಾವ್-ಇವರಲ್ಲಿ ಯಾರೂ ಈಗ ಬದುಕಿ ಉಳಿದಿಲ್ಲ. ಎಲ್ಲರೂ ಭ್ರಷ್ಟರ ಕೈಯಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ.
ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ತಂಡ ಚಳುವಳಿ ಪ್ರಾರಂಭಿಸಿದ ನಂತರ ಮತ್ತೊಮ್ಮೆ `ಸೀಟಿ ಊದುವವರ~ ರಕ್ಷಣೆಯ ಕಾನೂನಿನ ಚರ್ಚೆ ಪ್ರಾರಂಭವಾಗಿದೆ. ಅಣ್ಣಾ ತಂಡ ರಚಿಸಿರುವ `ಜನಲೋಕಪಾಲ ಮಸೂದೆ~ಯಲ್ಲಿ `ಸೀಟಿ ಊದುವವರ ರಕ್ಷಣೆಯೂ ಸೇರಿದೆ.
ಆದರೆ ಸರ್ಕಾರದ `ಲೋಕಪಾಲ ಮಸೂದೆ~ಯಲ್ಲಿ ಅದು ಸೇರಿಲ್ಲ. ಇದನ್ನು ಪ್ರತ್ಯೇಕವಾಗಿ ಜಾರಿಗೆ ತರುವುದಾಗಿ ಹೇಳಿ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಕೂಡಾ ಮಂಡನೆಯಾಗಿದೆ.
`ಅಧಿಕಾರ ದುರುಪಯೋಗ, ಭ್ರಷ್ಟಾಚಾರ ನಿರೋಧ ಕಾಯಿದೆ ಇಲ್ಲವೇ ಭಾರತೀಯ ದಂಡಸಂಹಿತೆಯಲ್ಲಿ ವ್ಯಾಖ್ಯಾನಿಸಲಾದ ಅಪರಾಧ ಮತ್ತು ದುರಾಡಳಿತ- ಈ ಮೂರು ಅಂಶಗಳಿಗೆ ಸಂಬಂಧಿಸಿದ ದೂರುಗಳನ್ನು `ಸೀಟಿ ಊದುವವರ ರಕ್ಷಣಾ ಮಸೂದೆಯಲ್ಲಿ ಸೇರಿಸಲಾಗಿದೆ.
ಇದರಲ್ಲಿಯೂ ಕಾರ್ಪೋರೇಟ್ ಕ್ಷೇತ್ರದಲ್ಲಿನ `ಸೀಟಿ ಊದುವವರನ್ನು~ ಸೇರಿಸಲಾಗಿಲ್ಲ. ಎರಡನೆ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕಾರ್ಪೋರೇಟ್ ಕ್ಷೇತ್ರವನ್ನೂ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಶಿಫಾರಸು ಮಾಡಿತ್ತು.
ಇದರ ಬಗ್ಗೆ ಅಣ್ಣಾತಂಡವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಮೌನವಾಗಿವೆ.
ಭಾರತದಲ್ಲಿ ಮಾತ್ರವಲ್ಲ, ನಾಲ್ಕು ದೇಶಗಳನ್ನು ಹೊರತುಪಡಿಸಿದರೆ ಬೇರೆಲ್ಲೂ `ಸೀಟಿ ಊದುವವರ~ ರಕ್ಷಣೆಗಾಗಿ ಕಾನೂನು ಇಲ್ಲ. 1989ರಲ್ಲಿ ಅಮೆರಿಕಾ ಮೊದಲ ಬಾರಿ ಈ ಕಾನೂನು ರೂಪಿಸಿತ್ತು.
ಅದರ ನಂತರ ಬ್ರಿಟನ್, ಅಸ್ಟೇಲಿಯಾ ಮತ್ತು ನ್ಯೂಜಿಲೇಂಡ್‌ಗಳು ಹಿಂಬಾಲಿಸಿದವು. ಈ ಕಾನೂನು ಇರುವ ಕಾರಣಕ್ಕಾಗಿಯೇ ಎನ್ರಾನ್ ಸಂಸ್ಥೆಯ ತಪ್ಪು ಲೆಕ್ಕಪತ್ರವನ್ನು ಬಯಲಿಗೆಳೆದ ಅದರ ಉಪಾಧ್ಯಕ್ಷ ಶೆರ‌್ರಾನ್ ವಾಟ್ಕಿನ್ಸ್, 9/11 ದಾಳಿ ನಡೆಸಿದ ಭಯೋತ್ಪಾದಕರ ಸುಳಿವಿನ ಮುನ್ಸೂಚನೆ ನಿರ್ಲಕ್ಷಿಸಿದ್ದನ್ನು ಪತ್ರಬರೆದು ಬಹಿರಂಗಗೊಳಿಸಿದ ಎಫ್‌ಬಿಐ ಅಟಾರ್ನಿ ಕೊಲೀನ್ ರೌಲೆ, ವರ್ಲ್ಡ್‌ಕಾಮ್ ಸುಮಾರು 3.8 ಬಿಲಿಯನ್ ಡಾಲರ್‌ನಷ್ಟು ನಷ್ಟವನ್ನು ಮುಚ್ಚಿಹಾಕಿದ್ದನ್ನು ನಿರ್ದೇಶಕ ಮಂಡಳಿಗೆ ತಿಳಿಸಿ ಸುದ್ದಿ ಮಾಡಿದ ಸಿಂಥಿಯಾ ಕೂಪರ್ ಅಮೆರಿಕಾದಲ್ಲಿ  `ತಾರಾಮೌಲ್ಯ~ ಗಳಿಸುವಷ್ಟು ಜನಪ್ರಿಯರು.
ವಿಕಿಲೀಕ್ಸ್‌ನ ಮೂಲಕ ಅಮೆರಿಕ ಸರ್ಕಾರದ ರಹಸ್ಯ ದಾಖಲೆಗಳು ಬಹಿರಂಗವಾಗಲು ಕೂಡಾ ಅನಾಮಿಕ `ಸೀಟಿ ಊದುವವರು~ ಕಾರಣ.
ಆದರೆ ಭಾರತದಲ್ಲಿ  ಇವರಿಗೆ ಯಾವ ರಕ್ಷಣೆಯೂ ಇಲ್ಲ, ಬದಲಿಗೆ ಕಿರುಕುಳ, ಜೈಲು, ಸಾವು-ನೋವುಗಳ ಕೊಡುಗೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯವರ  ಭ್ರಷ್ಟಾಚಾರದ ವಿರುದ್ಧ ದೂರು ದಾಖಲು ಮಾಡಿರುವ ಇಬ್ಬರು ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೆಳೆಯ ಸುಧೀಂದ್ರ ಕುಲಕರ್ಣಿ ಅವರಿಗಾಗಿ ಕಣ್ಣೀರು ಸುರಿಸುತ್ತಿರುವ ಲಾಲ್‌ಕೃಷ್ಣ ಅಡ್ವಾಣಿಯವರು ಇದಕ್ಕೇನನ್ನುತ್ತಾರೆ?

Monday, October 24, 2011

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ನಿರ್ಧಾರದ ಅಂಚಿಗೆ ತಳ್ಳಬಹುದೆಂದು ಈಗಲೇ ಹೇಳಲಾಗುವುದಿಲ್ಲ.
ಉಸಿರುಗಟ್ಟುತ್ತಿರುವ ತಮ್ಮವರ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಇಲ್ಲವೇ, ತಮ್ಮನ್ನು ನಿರ್ಲಕ್ಷಿಸುತ್ತಿರುವವರಿಗೆ ಎಚ್ಚರಿಕೆ ನೀಡುವ ಇಲ್ಲವೇ, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶ ಈ ಬಂಡುಕೋರ ನಡವಳಿಕೆಯಲ್ಲಿ ಇದ್ದರೂ ಇರಬಹುದು.

ಆರ್‌ಎಸ್‌ಎಸ್‌ಗೆ ಸೇರಿದಂದಿನಿಂದ ಇಂದಿನವರೆಗೆ ಸುಮಾರು ಎಪ್ಪತ್ತು ವರ್ಷಗಳ ಅವರ ಜೀವನದಲ್ಲಿ ಅಡ್ವಾಣಿಯವರು ಈ ರೀತಿ ನಡೆದುಕೊಂಡೇ ಇಲ್ಲ. ಬಹಿರಂಗವಾಗಿ ಎಂದೂ ಪಕ್ಷಕ್ಕೆ ಇಲ್ಲವೇ ಸಂಘ ಪರಿವಾರಕ್ಕೆ ಸವಾಲು ಹಾಕದ ಅಡ್ವಾಣಿಯವರು 84ರ ಇಳಿವಯಸ್ಸಿನಲ್ಲಿ ತೋರುತ್ತಿರುವ ಬಂಡುಕೋರ ನಡವಳಿಕೆ ಈ ಕಾರಣದಿಂದಲೇ ಅಚ್ಚರಿ ಮೂಡಿಸುತ್ತದೆ.
 ಪಕ್ಷದ ಹಿತದೃಷ್ಟಿಯಿಂದ ನೋಡಿದರೆ ಇದು ಅಡ್ವಾಣಿಯವರು ರಥಯಾತ್ರೆ ಹೊರಡುವ ಸಮಯ ಅಲ್ಲ. ಇದು ಬಿಜೆಪಿಗೆ ಕಷ್ಟದ ಸಮಯ. ಕಾಡುತ್ತಿರುವುದು ಭ್ರಷ್ಟಾಚಾರ ಒಂದೇ ಅಲ್ಲ, ಅಧಿಕಾರದಲ್ಲಿರುವ ಪ್ರತಿಯೊಂದು ರಾಜ್ಯದಲ್ಲಿಯೂ ಭಾರತೀಯ ಜನತಾ ಪಕ್ಷ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ರಾಷ್ಟ್ರೀಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಂಘರ್ಷ ಪಕ್ಷವನ್ನು ದುರ್ಬಲಗೊಳಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ಹೊರಟಿರುವ ಅಡ್ವಾಣಿಯವರ ರಥಯಾತ್ರೆ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದೆಯೇ ಹೊರತು ಅದರ ಪರಿಹಾರಕ್ಕೆ ಖಂಡಿತ ನೆರವಾಗುತ್ತಿಲ್ಲ.
ಭಾರತೀಯ ಜನತಾ ಪಕ್ಷ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಭಾರಿ ಭರವಸೆ ಇಟ್ಟುಕೊಂಡಿರುವ ರಾಜ್ಯ ಗುಜರಾತ್. ಆದರೆ ಕಳೆದ ಹತ್ತುವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ಮೊದಲ ಬಾರಿ ಪಕ್ಷದೊಳಗೆ ಮತ್ತು ಹೊರಗೆ ವಿರೋಧದ ಅಲೆಯನ್ನು ಎದುರಿಸುತ್ತಿದ್ದಾರೆ.
ಮೋದಿ ಅವರ ಜನಪ್ರಿಯತೆಗೆ ಹೆದರಿ ಇಲ್ಲಿಯವರೆಗೆ ಅವರ ಉದ್ಧಟತನದ ನಡವಳಿಕೆಗಳೆಲ್ಲವನ್ನೂ ಸಹಿಸುತ್ತಾ ಬಂದ ಆರ್‌ಎಸ್‌ಎಸ್ ಈಗ ಅವರನ್ನು ನಿಯಂತ್ರಿಸಲು ಹೊರಟಿದೆ.

ಸಂಘದ ಸಲಹೆಯ ಪ್ರಕಾರವೇ ಸಂಜಯ್ ಜೋಷಿ ಎಂಬ ಮೋದಿ ಅವರ ಕಟ್ಟಾವಿರೋಧಿಯನ್ನು ಅಜ್ಞಾತವಾಸದಿಂದ ಬಿಡುಗಡೆಗೊಳಿಸಿ ನಿರ್ಣಾಯಕವಾದ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಪಕ್ಷ ನೀಡಿದೆ.
ಐದು ವರ್ಷಗಳ ಹಿಂದೆ ಲೈಂಗಿಕ ಹಗರಣದ ಆರೋಪಕ್ಕೆ ಒಳಗಾಗಿ ಮೂಲೆಗೆ ತಳ್ಳಲ್ಪಟ್ಟ ಜೋಷಿ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಿಕೊಟ್ಟಿರುವುದು ಮೋದಿ ಅವರಿಗೆ ನೀಡಿರುವ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಇದರಿಂದ ಮೋದಿ ಎಷ್ಟೊಂದು ಅಸಮಾಧಾನಗೊಂಡಿದ್ದರೆಂದರೆ ದೆಹಲಿಯಲ್ಲಿ ನಡೆದ ಪಕ್ಷದ ಕಾರ‌್ಯಕಾರಿ ಸಮಿತಿ ಸಭೆಗೇ ಗೈರುಹಾಜರಾಗಿ ಬಿಟ್ಟರು. ಬಿಗಿಗೊಳ್ಳುತ್ತಿರುವ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳ ಕುಣಿಕೆಗಳು, ಸರ್ಕಾರಿ ಯಂತ್ರದ ದುರುಪಯೋಗದ ಆರೋಪಗಳು, ಸಾಧನೆಯ ಬಗೆಗಿನ ಅತಿರಂಜಿತ ಹೇಳಿಕೆಗಳ ಪೊಳ್ಳುತನಗಳು ಮೋದಿ ಅವರ ಜನಪ್ರಿಯತೆಯನ್ನು ಕುಂದಿಸುತ್ತಿವೆ.
ಅಡ್ವಾಣಿಯವರ ಸಹಜ ಸ್ವಭಾವದ ಪ್ರಕಾರ ಅವರು ಕಷ್ಟದಲ್ಲಿರುವ ಮೋದಿ ಅವರ ರಕ್ಷಣೆಗೆ ಧಾವಿಸಬೇಕಾಗಿತ್ತು. ಆದರೆ ಅಡ್ವಾಣಿ ಮೋದಿ ಮೇಲೆ ಎರಗಿ ಬಿದ್ದಿದ್ದಾರೆ. 21 ವರ್ಷಗಳ ಹಿಂದೆ ಅಡ್ವಾಣಿ ಅಯೋಧ್ಯೆಗೆ ಯಾತ್ರೆ ಹೊರಟಿದ್ದು ಗುಜರಾತ್ ರಾಜ್ಯದ ಸೋಮನಾಥಪುರದಿಂದ.

ಆ ಯಾತ್ರೆ ಪ್ರಾರಂಭದ ದಿನ ಅವರ ಎಡಬಲಕ್ಕಿದ್ದ ಇಬ್ಬರಲ್ಲಿ ಒಬ್ಬರು ಪ್ರಮೋದ್ ಮಹಾಜನ್, ಇನ್ನೊಬ್ಬರು ನರೇಂದ್ರ ಮೋದಿ. ಈ ಬಾರಿಯೂ ಅಲ್ಲಿಂದಲೇ ಯಾತ್ರೆ ಹೊರಡುವುದೆಂದು ನಿರ್ಧರಿಸಿದ್ದ ಅಡ್ವಾಣಿ ನಂತರ ಮನಸ್ಸು ಬದಲಾಯಿಸಿ ಬಿಹಾರದಲ್ಲಿರುವ ಜಯಪ್ರಕಾಶ್ ನಾರಾಯಣ್ ಜನ್ಮಸ್ಥಳವನ್ನು ಆರಿಸಿಕೊಂಡಿದ್ದಾರೆ.
ನರೇಂದ್ರ ಮೋದಿ ಕಾಲಿಡಲು ಸಾಧ್ಯವಾಗದಂತಹ ರಾಜ್ಯ ಬಿಹಾರ. ಅಲ್ಲಿರುವ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಮೋದಿಯವರ ಕಟ್ಟಾ ವಿರೋಧಿ. ಮೋದಿಯನ್ನು ದೂರ ಇಟ್ಟು ನಿತೀಶ್ ಅವರನ್ನು ಪಕ್ಕಕ್ಕಿಟ್ಟುಕೊಂಡದ್ದು ಕೇವಲ ಕಾಕತಾಳೀಯ ಇರಲಾರದು. ಈ ಮೂಲಕ ಭವಿಷ್ಯದ ರಾಜಕೀಯದ ಸೂಚನೆಯನ್ನು ಕೊಡುವ ಪ್ರಯತ್ನವನ್ನು ಅಡ್ವಾಣಿ ಮಾಡಿದ್ದಾರೆಯೇ?
ಬಿಜೆಪಿ ಅಧಿಕಾರದಲ್ಲಿರುವ ಎರಡನೇ ರಾಜ್ಯ ಮಧ್ಯಪ್ರದೇಶ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಉಮಾ ಭಾರತಿ ಮುಖ್ಯಮಂತ್ರಿಯಾದರೂ ವಿವಾದದ ಸುಳಿಗೆ ಸಿಕ್ಕಿ ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಮುಖ್ಯಮಂತ್ರಿಯಾದ ಬಾಬುಲಾಲ್ ಗೌರ್ ಕೂಡಾ ಬಹಳ ದಿನ ಅಧಿಕಾರದಲ್ಲಿ ಉಳಿಯಲಿಲ್ಲ. ಆಗ ಆ ಸ್ಥಾನಕ್ಕೆ ಬಂದವರು ಒಂದು ಕಾಲದ ಉಮಾಭಾರತಿ ಶಿಷ್ಯ ಶಿವರಾಜ್‌ಸಿಂಗ್ ಚೌಹಾಣ್.
ಸ್ವಲ್ಪಕಾಲದಲ್ಲಿಯೇ ಗುರುಶಿಷ್ಯರ ಸಂಬಂಧ ಕೆಟ್ಟುಹೋಗಿದ್ದಲ್ಲದೆ ಉಮಾಭಾರತಿಯವರು ಪಕ್ಷದಿಂದಲೇ ಉಚ್ಚಾಟನೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಮಾಭಾರತಿ ಅವರ ನೇತೃತ್ವದ ಪ್ರಾದೇಶಿಕ ಪಕ್ಷದ ವಿರುದ್ಧವೇ ಸೆಣಸಿ ಚೌಹಾಣ್ ಅವರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು.
ಮೋದಿ ಅವರಂತೆ ವಿವಾದಕ್ಕೆ ಒಡ್ಡಿಕೊಳ್ಳದೆ, ಯಡಿಯೂರಪ್ಪನವರಂತೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಆರೋಪದಲ್ಲಿಯೂ ಸಿಕ್ಕಿಹಾಕಿಕೊಳ್ಳದೆ ತನ್ನ ಪಾಡಿಗೆ ತಣ್ಣಗೆ ಕೆಲಸ ಮಾಡುತ್ತಿರುವವರು ಶಿವರಾಜ್‌ಸಿಂಗ್ ಚೌಹಾಣ್.
ಈಗ ಇದ್ದಕ್ಕಿದ್ದಂತೆ ಉಮಾಭಾರತಿ ಮರಳಿ ಪಕ್ಷ ಸೇರಿದ್ದಲ್ಲದೆ ಅಡ್ವಾಣಿಯವರ ರಥಯಾತ್ರೆಯ ಪ್ರಮುಖ ಸಾರಥಿಯಾಗಿದ್ದಾರೆ. ದೂರವೇ ಇಟ್ಟಿದ್ದ ಉಮಾಭಾರತಿಯನ್ನು ಪಕ್ಕಕ್ಕೆ ಕರೆದು ಆಕೆ ತನ್ನ ಎರಡನೇ ಮಗಳು ಎಂದು ಹೇಳುವಷ್ಟು ಮಮಕಾರವನ್ನು ಅಡ್ವಾಣಿ ತೋರಿದ್ದಾರೆ.

ಉಮಾಭಾರತಿ ಕುಣಿದಾಡಲು ಇಷ್ಟು ಸಾಕು. ರಥಯಾತ್ರೆ ಮುಗಿದ ನಂತರ ರಥದಿಂದ ಇಳಿದು ಅವರು ನೇರವಾಗಿ ಹೋಗುವುದು ಮಧ್ಯಪ್ರದೇಶಕ್ಕೆ. ಅಲ್ಲಿನ ಮುಖ್ಯಮಂತ್ರಿ ಕುರ್ಚಿ ತನ್ನದೇ ಎಂದು ಹೇಳಿ ಚೌಹಾಣ್ ಅವರನ್ನು ಕೆಳಗಿಳಿಯಲು ಹೇಳಿದರೂ ಅಚ್ಚರಿ ಇಲ್ಲ. ಆ ಹಂತಕ್ಕೆ ಹೋಗದಿದ್ದರೂ ಉಮಾಭಾರತಿಯವರ ಈ ಹೊಸ ಪಾತ್ರ ಚೌಹಾಣ್ ಅವರನ್ನು ಅಭದ್ರಗೊಳಿಸಿರುವುದು ನಿಜ.

ಕೇಂದ್ರದಲ್ಲಿ  ಪಕ್ಷ ಅಧಿಕಾರಕ್ಕೆ ಬರುವುದು ಖಾತರಿ ಇಲ್ಲದಿರುವ ಈ ಸಂದರ್ಭದಲ್ಲಿ ಉಮಾಭಾರತಿ ಮಧ್ಯಪ್ರದೇಶದ ಚುನಾವಣಾ ಅಖಾಡಕ್ಕೆ ಇಳಿಯಬಹುದು. ಕಷ್ಟಕಾಲದಲ್ಲಿ ಪಕ್ಷವನ್ನು ಸಂಭಾಳಿಸಿಕೊಂಡು ಬಂದ ಚೌಹಾಣ್‌ಗೆ ರಥಯಾತ್ರೆಯ ಸಂದರ್ಭದಲ್ಲಿ ಉಮಾಭಾರತಿಯವರನ್ನು ಕೊಡುಗೆಯಾಗಿ ನೀಡುವ ಮೂಲಕ ಅಡ್ವಾಣಿಯವರು ಏನು ಹೇಳಲು ಹೊರಟಿದ್ದಾರೆ?
ಬಿಜೆಪಿ ಅಧಿಕಾರದಲ್ಲಿರುವ ಮೂರನೇ ರಾಜ್ಯ ಕರ್ನಾಟಕ. ಈ ರಾಜ್ಯದಲ್ಲಿ ಜೈಲುಯಾತ್ರೆಗೆ ಹೊರಟವರ ಸಾಲನ್ನು ನೋಡಿದರೆ ಅವರ ಪಕ್ಷದಲ್ಲಿ ಅಳಿದುಳಿದ ಪ್ರಾಮಾಣಿಕರು ಕೂಡಾ ಹೊರಗೆ ಮುಖ ಎತ್ತಿ ಅಡ್ಡಾಡಲಾಗದ ವಾತಾವರಣ ಇದೆ. ಈ ಪರಿಸ್ಥಿತಿಯಲ್ಲಿ ರಥಯಾತ್ರೆ ಹೊರಡುವುದೆಂದರೆ ಜನರನ್ನು ಹುಡುಕಿಕೊಂಡು ಹೋಗಿ ಮುಖಾಮುಖಿಯಾಗಿ ಅವರು ಎತ್ತುವ ಪ್ರಶ್ನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದೆಂದೇ ಅರ್ಥ.

ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಚರ್ಚೆ ದೇಶವ್ಯಾಪಿ ನಡೆಯುತ್ತಿರುವುದೇ ಅಡ್ವಾಣಿಯವರ ರಥಯಾತ್ರೆಯಿಂದ ಎಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಜನ ಮಾತನಾಡುವಾಗ ತಮ್ಮವರ ಹೆಸರನ್ನೇ ಮೊದಲು ಚರ್ಚೆಯ ಮೇಜಿಗೆ ಎಳೆದುಕೊಳ್ಳುತ್ತಾರೆ ಎಂದು ಅವರಿಗೆ ಗೊತ್ತಾಗಲಿಲ್ಲವೇ? ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಬಹುದೆಂದು ಅಡ್ವಾಣಿಯವರಂತಹ ಸೂಕ್ಷ್ಮಜ್ಞರು ಊಹಿಸಿರಲಿಲ್ಲವೇ? ಇಲ್ಲ, ಇಂತಹದ್ದೊಂದು ಚರ್ಚೆ ನಡೆಯಬೇಕೆಂಬುದೇ ಅಡ್ವಾಣಿ ಅವರ ಉದ್ದೇಶವೇ?
ಪಕ್ಷದ ಮೇಲಿರುವ ದೆಹಲಿ ನಿಯಂತ್ರಣವನ್ನು ಸಡಿಲುಗೊಳಿಸಲಿಕ್ಕಾಗಿಯೇ ಆರ್‌ಎಸ್‌ಎಸ್ ಮಹಾರಾಷ್ಟ್ರದ ನಿತಿನ್ ಗಡ್ಕರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದು. ಇದನ್ನು ವಿರೋಧಿಸಿದವರು `ಡೆಲ್ಲಿ-4~ ಎಂದೇ ಕರೆಯಲಾಗುವ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತು ಅನಂತಕುಮಾರ್.
ಇವರೆಲ್ಲರನ್ನು ಒಂದು ಕಾಲದಲ್ಲಿ ಬೆಳೆಸಿದವರು ಅಡ್ವಾಣಿ. ಆದರೆ ಅವರನ್ನು ಪಕ್ಕಕ್ಕೆ ಸರಿಸುವ ಮೂಲಕ ಆರ್‌ಎಸ್‌ಎಸ್ ಅಡ್ವಾಣಿ ಯುಗ ಮುಗಿಯಿತು ಎನ್ನುವ ಸಂದೇಶವನ್ನು ನೀಡಿತ್ತು.
ಅಡ್ವಾಣಿಯವರು ರಥಯಾತ್ರೆ ಪ್ರಾರಂಭಿಸಿದಾಗ ಬಿಜೆಪಿ ಆಳ್ವಿಕೆಯ ರಾಜ್ಯಗಳ ಯಾವ ಮುಖ್ಯಮಂತ್ರಿಯೂ ಅಲ್ಲಿರಲಿಲ್ಲ.  ಮುರಳಿ ಮನೋಹರ ಜೋಷಿ, ಯಶವಂತ್‌ಸಿನ್ಹಾ, ಜಸ್ವಂತ್ ಸಿಂಗ್ ಮೊದಲಾದ ಹಿರಿಯರ ನಾಯಕರೂ ಇರಲಿಲ್ಲ. ಅಲ್ಲಿದ್ದವರು ನಿತಿನ್ ಗಡ್ಕರಿ ಅವರನ್ನು ಈಗಲೂ ಒಳಗಿಂದೊಳಗೆ ವಿರೊಧಿಸುತ್ತಿರುವ ಮತ್ತು ಆರ್‌ಎಸ್‌ಎಸ್ ಉದ್ದೇಶಪೂರ್ವಕವಾಗಿ ದೂರ ಇಟ್ಟಿರುವ  `ಡೆಲ್ಲಿ-4~ನ ಸದಸ್ಯರು.
ಅಡ್ವಾಣಿಯವರ ಹಿಂದಿನ ಐದೂ ಯಾತ್ರೆಗಳು ಭಾರತೀಯ ಜನತಾ ಪಕ್ಷದ ಒಮ್ಮತದ ತೀರ್ಮಾನವಾಗಿದ್ದವು. ಅದಕ್ಕೆ ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿದಂತೆ ಸಂಘ ಪರಿವಾರಕ್ಕೆ ಸೇರಿರುವ ಎಲ್ಲ ಸಂಘಟನೆಗಳ ಬೆಂಬಲವೂ ಇತ್ತು.

ಅಡ್ವಾಣಿಯವರ ಮೊದಲ ರಥಯಾತ್ರೆ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಸಾರಿದ ಬಿಜೆಪಿಯ ಪಾಲಂಪುರ ಕಾರ‌್ಯಕಾರಿಣಿಯ ಐತಿಹಾಸಿಕ ಗೊತ್ತುವಳಿಯಿಂದ ಪ್ರೇರಿತವಾಗಿತ್ತು. ಆದರೆ ಈಗಿನ ರಥಯಾತ್ರೆಯದ್ದು ಅಡ್ವಾಣಿಯವರ ಸ್ವಯಂಘೋಷಣೆ.
ಲೋಕಸಭೆಯಲ್ಲಿ ಅಡ್ವಾಣಿಯವರು ಇದ್ದಕ್ಕಿದ್ದಂತೆ `ಭ್ರಷ್ಟಾಚಾರದ ವಿರುದ್ಧ ಜನಜಾಗೃತಿಗೆ ಯಾತ್ರೆ ಹೊರಡಲಿದ್ದೇನೆ~ ಎಂದು ಘೋಷಿಸಿದಾಗ ಅಚ್ಚರಿಪಟ್ಟವರು ವಿರೋಧಿ ಪಕ್ಷಗಳಲ್ಲ, ಅದು ಸಂಘ ಪರಿವಾರ.
ತನ್ನ ವಿರೋಧವನ್ನು ಮುಚ್ಚಿಟ್ಟುಕೊಳ್ಳದ ಆರ್‌ಎಸ್‌ಎಸ್ ನಾಯಕರು ಅಡ್ವಾಣಿ ಅವರನ್ನು ಖುದ್ದಾಗಿ ನಾಗಪುರಕ್ಕೆ ಕರೆಸಿಕೊಂಡು ರಥಯಾತ್ರೆಯನ್ನು ಕೈಬಿಡುವಂತೆ ಹೇಳಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದೆಂಬ ಷರತ್ತು ಹಾಕಿ ಒಪ್ಪಿಗೆ ನೀಡಿದ್ದಾರೆ.
ಆರ್‌ಎಸ್‌ಎಸ್ ಇಚ್ಛೆಗೆ ವಿರುದ್ಧವಾಗಿ ಇಂತಹದ್ದೊಂದು ಪಕ್ಷದ ಕಾರ್ಯಕ್ರಮವನ್ನು ಅಡ್ವಾಣಿಯವರು ಹಮ್ಮಿಕೊಂಡಿದ್ದು ಅವರ ರಾಜಕೀಯ ಜೀವನದಲ್ಲಿಯೇ ಮೊದಲ ಬಾರಿ ಇರಬಹುದು. ಜಿನ್ನಾ ಪ್ರಕರಣದಲ್ಲಿಯೂ ಕೊನೆಗೆ ಅಡ್ವಾಣಿ ಆರ್‌ಎಸ್‌ಎಸ್ ಆದೇಶಕ್ಕೆ ಶರಣಾಗಿ ತಲೆದಂಡ ಕೊಟ್ಟಿದ್ದರು. ಆದರೆ ಯಾಕೋ ಈ ಬಾರಿ ತಿರುಗಿಬಿದ್ದಿದ್ದಾರೆ.
ದೇಶದ ಜನ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳ ಬಗ್ಗೆ ಭ್ರಮನಿರಸನಕ್ಕೀಡಾಗಿರುವ ಹೊತ್ತಿನಲ್ಲಿ ರಾಜಕೀಯ ಬಂಡಾಯಗಳಿಗೆ ನೆಲ ಹದವಾಗಿದೆ. ಸ್ವಲ್ಪ ಇತಿಹಾಸವನ್ನು ಕೆದಕಿದರೆ ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕದ ಕೊನೆಭಾಗದಲ್ಲಿಯೂ ಹೆಚ್ಚುಕಡಿಮೆ ಇಂತಹದ್ದೇ ಪರಿಸ್ಥಿತಿ ಇದ್ದುದನ್ನು ಕಾಣಬಹುದು.

ಅದನ್ನು ಬಳಸಿೊಂಡೇ ಜನತಾ, ಸಂಯುಕ್ತರಂಗ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಗಳು ಅಧಿಕಾರಕ್ಕೆ ಬಂದದ್ದು. ಎಲ್ಲ ಪಕ್ಷಗಳಲ್ಲಿಯೂ ನಡೆದ ಸಣ್ಣಸಣ್ಣ ಬಂಡಾಯಗಳ ಮೂಲಕವೇ ಹೊರಬಂದ ನಾಯಕರು ಒಟ್ಟಾಗಿ ಆಗಿನ ಪರ್ಯಾಯ ರಾಜಕೀಯವನ್ನು ರೂಪಿಸಿದ್ದರು;
ಸಕ್ರಿಯವಾಗಿದ್ದ ಯಾವುದೇ ಒಂದು ಪಕ್ಷ ಪರ್ಯಾಯವಾಗಿದ್ದಲ್ಲ. ಅಣ್ಣಾ ಹಜಾರೆ ಚಳವಳಿ ಅಂತಿಮವಾಗಿ ಇಂತಹದ್ದೊಂದು ಪರ್ಯಾಯ ರಾಜಕೀಯ ರೂಪುಗೊಳ್ಳಲು ನೆರವಾಗಬಹುದು ಎಂಬ ನಿರೀಕ್ಷೆ ಅದರ ನಾಯಕರ ಬಾಲಿಶ ನಡವಳಿಕೆಯಿಂದಾಗಿ ಹುಸಿಯಾಗತೊಡಗಿದೆ.
ಆದ್ದರಿಂದ ಅಡ್ವಾಣಿಯವರ ಬಂಡಾಯಕ್ಕೆ ದೇಶದ ಸಮಕಾಲೀನ ರಾಜಕೀಯದಲ್ಲಿ ಅವಕಾಶ ಖಂಡಿತ ಇದೆ. ಅಂತಹ ದಿಟ್ಟತನವನ್ನು ತೋರಿದರೆ ಅವರ ಮೊದಲ ರಥಯಾತ್ರೆಯ ಪರಿಣಾಮವನ್ನು ಜನ ಮರೆತುಬಿಡಬಹುದು. ಆ ಬಗ್ಗೆ ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿರುವುದರಿಂದ ಕ್ಷಮಿಸುವುದು ಕಷ್ಟವಾಗಲಾರದು.
ಆದರೆ ತನ್ನ ಬಂಡುಕೋರತನವನ್ನು ಒಂದು ತಾರ್ಕಿಕ ಅಂತ್ಯದ ಕಡೆಗೆ ಕೊಂಡೊಯ್ಯುವ ಧೈರ್ಯ ಅಡ್ವಾಣಿಯವರಲ್ಲಿದೆಯೇ ಎನ್ನುವುದು ಬಹುದೊಡ್ಡ ಪ್ರಶ್ನೆ. ಅವರ ಮುಂದೆ ಇರುವುದು ಎರಡೇ ಎರಡು ಆಯ್ಕೆ.

ಒಂದೋ ಕಣ್ಣು-ಕಿವಿ-ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಸದಸ್ಯನಾಗಿ ರಾಜಕೀಯ ನಿವೃತ್ತಿ ಜೀವನವನ್ನು ಆರಾಮವಾಗಿ ಕಳೆಯುವುದು, ಇಲ್ಲವೇ, ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾಯಕತ್ವ ನೀಡಿ ಒಂದಷ್ಟು ಹಳೆಯ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು.
`ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ~ ಎಂದು ಅಡ್ವಾಣಿಯವರು ದೇಶಕ್ಕೆ ಒಂದಲ್ಲ, ಮೂರು ಸುತ್ತು ಯಾತ್ರೆ ನಡೆಸಿದರೂ ಅದೊಂದು ಆರೋಗ್ಯ ಸುಧಾರಣೆಯ ವ್ಯಾಯಾಮವಾಗಬಹುದೇ ಹೊರತು ಅದಂದ ಯಾವ ಉದ್ದೇಶವೂ ಈಡೇರಲಾರದು.

Monday, October 17, 2011

ಯಡಿಯೂರಪ್ಪನವರೆ, ಹೀಗೇಕೆ ಮಾಡಿಕೊಂಡಿರಿ?

ಊಟ, ನಿದ್ದೆ, ಆರೋಗ್ಯವನ್ನು ಮರೆತು ಮಳೆ, ಬಿಸಿಲು, ಗಾಳಿಯೆನ್ನದೆ ಊರೂರು ಸುತ್ತಾಡಿ ಚಳವಳಿ, ಪ್ರತಿಭಟನೆ, ಪಾದಯಾತ್ರೆಗಳ ಮೂಲಕ ದಶಕಗಳ ಕಾಲ ರಾಜಕೀಯ ಹೋರಾಟ ನಡೆಸುತ್ತಾ ಬಂದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದೊಡನೆ ಭ್ರಷ್ಟಾಚಾರದಲ್ಲಿ ಮುಳುಗಿ `ರಾಜಕೀಯ ಹರಾಕಿರಿ~ ಮಾಡಿಕೊಳ್ಳುವುದು ಯಾಕೆ?

ಕೇವಲ ದುಡ್ಡಿನಿಂದ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡು ಹೋರಾಟದ ಮಾರ್ಗ ಹಿಡಿದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ನಂತರ ದುಡ್ಡಿಲ್ಲದೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದುಕೊಳ್ಳುವಷ್ಟು ಮೂರ್ಖನಾಗುವುದು ಹೇಗೆ?
ಮುಕ್ಕಾಲು ಪಾಲು ಆಯುಷ್ಯವನ್ನು ಐಷಾರಾಮಿ ಬದುಕು, ಅಧಿಕಾರ ಯಾವುದೂ ಇಲ್ಲದೆ ಕಳೆದ ರಾಜಕಾರಣಿಯೊಬ್ಬ ಅಧಿಕಾರಕ್ಕೆ ಬಂದ ಮರುಕ್ಷಣವೇ ಇವುಗಳಿಲ್ಲದೆ ಬದುಕಲಾರೆ ಎಂದು ತಿಳಿದುಕೊಂಡು ಉಳಿದ ಆಯುಷ್ಯವನ್ನು ನರಕ ಮಾಡಿಕೊಳ್ಳುವುದು ಯಾಕೆ?
ಹೋರಾಟದ ದಿನಗಳಲ್ಲಿ ಜಾತಿವಾದಿಯಾಗದೆ ಗಳಿಸಿದ ಜನಪ್ರಿಯತೆಯನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾತಿವಾದಿಯಾಗಿ ಕಳೆದುಕೊಳ್ಳುವುದು ಯಾಕೆ?
ಅನಿಶ್ಚಿತತೆಗೆ ಮತ್ತೊಂದು ಹೆಸರಾಗಿರುವ ರಾಜಕಾರಣದ ಜತೆ 25-30ವರ್ಷ ಸಂಸಾರ ಮಾಡಿದ ಅನುಭವದ ನಂತರವೂ. ತನ್ನ ಆಯುಷ್ಯದಲ್ಲಿ ಅನುಭವಿಸಲಾಗದಷ್ಟು ಸಂಪತ್ತನ್ನು ಗಳಿಸಲು ಹೊರಟು ಜೈಲು ಸೇರುವ ಮೂರ್ಖತನ ಯಾಕೆ?
ಜೈಲಿಗೆ ಹೋಗಿ ಕೂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಕ್ಕಿಂತ ಮೊದಲು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ನಂತರ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಪಕ್ಷದ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ  ಸುಮಾರು 36 ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ.
ಆ ದಿನಗಳಲ್ಲಿ ಒಂದು ಕ್ಷಣ ಅವರು ಸುಮ್ಮನೆ ಕೂತವರಲ್ಲ. ಪ್ರತಿಭಟನೆ, ಚಳವಳಿ,  ಜಾಥಾ, ಭಾಷಣ, ಘೋಷಣೆ ಎಂದು ಮೂರುಹೊತ್ತು ಆಡಳಿತ ಪಕ್ಷದ ಜತೆ ನಿತ್ಯ ಗುದ್ದಾಡಿದವರು. ರಾಜಕಾರಣಿಗಳ ವಿರುದ್ಧ ಕೇಳಿಬರುವ ಸಾಮಾನ್ಯವಾದ ಸಣ್ಣಪುಟ್ಟ ಆರೋಪಗಳನ್ನು ಬಿಟ್ಟರೆ ಅವರೊಬ್ಬ ಭ್ರಷ್ಟ ಎನ್ನುವ ಕಳಂಕ ಆಗ ಅವರಿಗೆ ಅಂಟಿರಲಿಲ್ಲ.

ಆದರೆ ಇಷ್ಟೆಲ್ಲ ಕಷ್ಟಪಟ್ಟು ಮುಖ್ಯಮಂತ್ರಿಯಾದ ಅವರು ಮೂರೇ ವರ್ಷಗಳ ಅವಧಿಯಲ್ಲಿ ಕರ್ನಾಟಕ ಕಂಡ ಅತ್ಯಂತ ಭ್ರಷ್ಟಮುಖ್ಯಮಂತ್ರಿ ಎಂಬ ಆರೋಪ ಹೊತ್ತುಕೊಂಡರು. ಈಗ ಜೈಲು ಸೇರಿದ್ದಾರೆ. ಯಡಿಯೂರಪ್ಪನವರು ಯಾಕೆ ಹೀಗೆ ಮಾಡಿಕೊಂಡರು?
ಮುಂದಿನ ಹತ್ತಿಪ್ಪತ್ತು ವರ್ಷಗಳ ನಂತರ ಮುಖ್ಯಮಂತ್ರಿಯೋ, ಸಚಿವನೋ ಜೈಲು ಸೇರಿದರೆ ಅವರಿಗೆ ಈ ಪ್ರಶ್ನೆಗಳನ್ನು ಕೇಳಲಾಗದು. ಯಾಕೆಂದರೆ ಹಿಂದಿನ ಕಾಲದ `ಹೋರಾಟದ ರಾಜಕಾರಣ~ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಅಲ್ಲ.
ಈ ಯುವರಾಜಕಾರಣಿಗಳಲ್ಲಿ ಹೆಚ್ಚಿನವರು ರಾಜಕೀಯದ ಹೆದ್ದಾರಿ ಸೇರಲು ಆಗಲೇ ಸುಲಭದ ಅಡ್ಡದಾರಿಗಳನ್ನು ಹಿಡಿದಿದ್ದಾರೆ, ಇನ್ನು ಕೆಲವರು ಆ ಪ್ರಯತ್ನದಲ್ಲಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ಅವರ ಜೀವನದ 36 ವರ್ಷಗಳ ನಂತರ ಕೇಳಿಬಂದ ಆರೋಪಗಳೆಲ್ಲ ಅಧಿಕಾರ ಹಿಡಿಯವ ಮೊದಲೇ ಈ ಯುವ ರಾಜಕಾರಣಿಗಳ ಬಗ್ಗೆ ಕೇಳಿಬರುತ್ತಿವೆ. ಬೇರೆ ಉದಾಹರಣೆಗಳು ಯಾಕೆ ಬೇಕು?
ಯಡಿಯೂರಪ್ಪನವರ ಮಕ್ಕಳೇ ಇದ್ದಾರಲ್ಲ, ಬೇಕಿದ್ದರೆ ದೇವೇಗೌಡರ ಮಕ್ಕಳನ್ನೂ ಸೇರಿಸಿಕೊಳ್ಳಬಹುದು.ಹೋರಾಟದ ರಾಜಕಾರಣದ ಮೂಲಕವೇ ನಾಯಕರಾಗಿ ಬೆಳೆದು ಈಗಲೂ ನಮ್ಮ ನಡುವೆ ಉಳಿದಿರುವವರು ಮೂವರು ರಾಜಕಾರಣಿಗಳು ಮಾತ್ರ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ.
ಈ ಮೂವರು ನಾಯಕರಿಗೆ ಅನೇಕ ಸಾಮ್ಯತೆಗಳಿವೆ. ದೀರ್ಘಕಾಲದ ರಾಜಕೀಯ ಹೋರಾಟದ ನಂತರ ಈ ಮೂವರೂ ಅಧಿಕಾರಕ್ಕೆ ಬಂದರೂ ಅದನ್ನು ಅನುಭವಿಸಿದ್ದು ಮಾತ್ರ ಅಲ್ಪ ಕಾಲ. ಮೂವರೂ ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.
ಇವರ ಅಪ್ಪ, ಅಜ್ಜ, ಮುತ್ತಾತ-ಯಾರಿಗೂ ರಾಜಕಾರಣದ ಜತೆ ದೂರದ ಸಂಬಂಧವೂ ಇರಲಿಲ್ಲ. ಈ ಮೂವರ ರಾಜಕೀಯ ಯಶಸ್ಸಿನಲ್ಲಿ ಜಾತಿಯ ಪಾತ್ರ ಇದೆ ಎನ್ನುವುದು ನಿಜ.
ಆದರೆ ಇದೇ ಕಾರಣಕ್ಕೆ ಇವರು ನಡೆಸಿಕೊಂಡು ಬಂದ ರಾಜಕೀಯ ಹೋರಾಟವನ್ನು ತಳ್ಳಿಹಾಕಲಾಗದು. ಒಕ್ಕಲಿಗರು, ಲಿಂಗಾಯತರು, ಈಡಿಗರು ತಮ್ಮ ತಮ್ಮ ಜಾತಿ ನಾಯಕರಾಗಿ ಇವರನ್ನೇ ಯಾಕೆ ಆರಿಸಿದರು ಎನ್ನುವುದನ್ನು ಕೂಡಾ ನೋಡಬೇಕಾಗುತ್ತದೆ.
ಆ ಜಾತಿಗಳಲ್ಲಿ ಬೇರೆ ನಾಯಕರಿರಲಿಲ್ಲವೇ? ಜಾತಿ ರಾಜಕಾರಣದ ಒಳಿತು-ಕೆಡುಕಗಳ ವಿಶ್ಲೇಷಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಬಹಳ ಸೂಕ್ಷ್ಮವಾಗಿ ರಾಜಕಾರಣ ಗಮನಿಸುವ ಸಮುದಾಯ ಒಬ್ಬ ವ್ಯಕ್ತಿಯಲ್ಲಿರುವ ನಾಯಕತ್ವದ ಲಕ್ಷಣಗಳ ಆಧಾರದಲ್ಲಿಯೇ ಆತನನ್ನು ತನ್ನ ನಾಯಕನಾಗಿ ಆರಿಸಿಕೊಳ್ಳುತ್ತದೆ.
ಇದರಿಂದಾಗಿಯೇ ಜಾತಿಯವರು ಗುರುತಿಸುವ ಮಟ್ಟಕ್ಕೆ ಬರುವವರೆಗೆ ಆತ ಸ್ವಂತ ಶಕ್ತಿಯಿಂದಲೇ ಬೆಳೆಯಬೇಕಾಗುತ್ತದೆ. ಯಡಿಯೂರಪ್ಪನವರನ್ನು ಲಿಂಗಾಯತ ಸಮುದಾಯ ಬೆಂಬಲಿಸುತ್ತಿರುವುದು ನಿಜ.
ಆದರೆ ಲಿಂಗಾಯತ ನಾಯಕರಾಗಿಯೇ ಅವರು ರಾಜಕೀಯ ಪ್ರಾರಂಭಿಸಿದ್ದಲ್ಲ ಎನ್ನುವುದು ಗಮನಾರ್ಹ. ಅವರಿಗೆ ಲಿಂಗಾಯತ ಬೆಂಬಲ ಇಷ್ಟೊಂದು ಆಕ್ರಮಣಕಾರಿ ರೂಪದಲ್ಲಿ ವ್ಯಕ್ತವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಮುಖ್ಯವಾಗಿ ಎಚ್.ಡಿ.ಕುಮಾರಸ್ವಾಮಿಯವರ `ವಚನ ಭ್ರಷ್ಟತೆ~ಯ ಪ್ರಕರಣದ ನಂತರ.
ಇನ್ನು ಸ್ವಲ್ಪ ಹಿಂದಕ್ಕೆ ಹೋಗುವುದಾದರೆ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಬೇಕೆಂಬ ಕಾರ‌್ಯತಂತ್ರವನ್ನು ಬಿಜೆಪಿ ಹೂಡಿದ ನಂತರ. ತನ್ನ ರಾಜಕೀಯ ಜೀವನವನ್ನು ರೈತರು,ಕೂಲಿಕಾರ್ಮಿಕರು, ಜೀತದಾಳುಗಳ ಪರ ಹೋರಾಟದ ಮೂಲಕ ಪ್ರಾರಂಭಿಸಿದ್ದ ಯಡಿಯೂರಪ್ಪ ಹೊಸ ಬೆಳವಣಿಗೆಯಿಂದಾಗಿ ಕ್ರಮೇಣ ಜಾತಿಯ ಸುಳಿಗೆ ಸಿಕ್ಕಿ ಅದಕ್ಕೆ ಶರಣಾಗಿಬಿಟ್ಟರು.
ಮಠಗಳ ಅಸ್ತಿತ್ವದಿಂದಾಗಿ ಉಳಿದ ಜಾತಿಗಳಿಗಿಂತ ಹೆಚ್ಚು ಸಂಘಟಿತ ಮತ್ತು ವ್ಯಾಪಕವಾದ ಸಾಂಸ್ಥಿಕ ರೂಪ ಲಿಂಗಾಯತ ಜಾತಿಗೆ ಇರುವುದರಿಂದ ಬೇಗ ಆ ಜಾತಿಯ ರಾಜಕೀಯ ನಾಯಕರು ಅದರ ಹಿಡಿತಕ್ಕೆ ಬಂದುಬಿಡುತ್ತಾರೆ. ಯಾಕೆಂದರೆ ಅದರಿಂದ ಇಬ್ಬರಿಗೂ ಲಾಭ ಇದೆ. 
ಬೀದಿಗೊಬ್ಬ ಲೋಕಪಾಲರನ್ನು ನೇಮಿಸಿದರೂ, ಮನೆಗೊಬ್ಬರಂತೆ ಸಮಾಜ ಸುಧಾರಕರು ಹುಟ್ಟಿದರೂ ಸದ್ಯದ ರಾಜಕಾರಣ ಹಣ ಮತ್ತು ಜಾತಿಯ ನಿಯಂತ್ರಣದಿಂದ ಸಂಪೂರ್ಣ ಬಿಡುಗಡೆ ಪಡೆಯುತ್ತದೆ ಎಂದು ನಿರೀಕ್ಷಿಸಲಾಗದು.
ಯಡಿಯೂರಪ್ಪನವರ ಸಮಸ್ಯೆ ಏನೆಂದರೆ ಅನಾಯಾಸವಾಗಿ ಒದಗಿಬಂದ ಜಾತಿ ಬೆಂಬಲವೂ ಅವರಲ್ಲಿ ಸುರಕ್ಷತೆಯ ಭಾವ ಮೂಡಿಸದಿರುವುದು. ಹೆಚ್ಚು ದುಡ್ಡಿಲ್ಲದೆ ಮಾಡಿದ ಹಳೆಯ ರಾಜಕೀಯ ಜೀವನದ ಅನುಭವವನ್ನು ಅವರು ಮರೆತೇ ಬಿಟ್ಟರು.
ಒಂದು ಸಾಮಾನ್ಯ ಅಕ್ಕಿಗಿರಣಿಯಲ್ಲಿ ಕಾರಕೂನನಾಗಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ರಾಜಕೀಯದಲ್ಲಿ ಬೆಳೆದದ್ದು ಕೇವಲ ಹಣದ ಬಲದಿಂದ ಖಂಡಿತ ಅಲ್ಲ. ಆದರೆ ಮುಖ್ಯಮಂತ್ರಿಯಾದ ತಕ್ಷಣ ದುಡ್ಡಿಲ್ಲದೆ ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಲಾರೆ ಎಂದು ಅವರು ವಿಲವಿಲನೆ ಒದ್ದಾಡಿಬಿಟ್ಟರು.
ಆಗ ಅವರಿಗೆ ಜತೆಯಾದವರು ಬಳ್ಳಾರಿಯ ಗಣಿಲೂಟಿಕೋರರು. ಪ್ರಾರಂಭದ ಹಂತದಲ್ಲಿ ತಂದುಕೊಟ್ಟ ಗೆಲುವಿನಿಂದಾಗಿ (ಆಪರೇಷನ್ ಕಮಲ) ಈ ಸಂಬಂಧ ಬಲಗೊಳ್ಳುತ್ತಾ ಹೋಯಿತು. ಸ್ನೇಹಿತರಂತೆ ಸಮೀಪ ಬಂದ ಗಣಿ ಉದ್ಯಮಿಗಳು ಯಡಿಯೂರಪ್ಪನವರಿಗೆ  ಕ್ರಮೇಣ ತಮಗೆ ಪೈಪೋಟಿ ನೀಡುವವರಂತೆ, ಕೊನೆಗೆ ರಾಜಕೀಯ ಶತ್ರುಗಳಂತೆ ಕಾಣಿಸತೊಡಗಿದರು.
ಅವರಿಗೆ ಕಂಡ ಕೊನೆಯ ರೂಪವೇ ನಿಜವಾದುದು. ಇದಾದ ನಂತರವೂ ಯಡಿಯೂರಪ್ಪನವರು ಹಣಬಲದ ರಾಜಕೀಯಕ್ಕೆ ವಿರುದ್ಧ ವಾಗಿ ಜನಬಲದ ರಾಜಕಾರಣ ಮಾಡಲು ಹೋಗದೆ ಗಣಿಲೂಟಿಕೋರರನ್ನೇ ಮಾದರಿಯಾಗಿ ಸ್ವೀಕರಿಸಿದರು.
ಕಾನೂನು, ನೀತಿ-ನಿಯಮಾವಳಿಗಳನ್ನು ಉಲ್ಲಂಘಿಸಿ ಯಡಿಯೂರಪ್ಪ ಮತ್ತು ಕುಟುಂಬ ನಡೆಸಿದ್ದಾರೆನ್ನಲಾದ ಎಲ್ಲ ಹಗರಣಗಳ ವಿನ್ಯಾಸ ಅದೇ ಬಳ್ಳಾರಿ ಮಾದರಿಯದ್ದು.
ತರಕಾರಿ ಮಾರುವವರಿಂದ ಹಿಡಿದು ವಿಮಾನ ಮಾರುವವನವರೆಗೆ ಎಲ್ಲರೂ ನಡೆಸುವುದು ವ್ಯಾಪಾರ, ಸಮಾಜ ಸೇವೆ ಅಲ್ಲ. ರಾಜಕಾರಣ ಕೂಡಾ ಅವರಿಗೆ ವ್ಯಾಪಾರವೃದ್ಧಿಯ ಇನ್ನೊಂದು ಮಾರ್ಗ ಮಾತ್ರ. ಈ ಸರಳ ಸತ್ಯವನ್ನು ಅರಿಯದ ಯಡಿಯೂರಪ್ಪ ಆಗಲೇ ಹುಲಿ ಮೇಲೆ ಸವಾರಿ ಹೊರಟಾಗಿತ್ತು, ಕೆಳಗಿಳಿಯುವಂತಿರಲಿಲ್ಲ.

ಅದು ಹೊತ್ತುಕೊಂಡು ಹೋದಲ್ಲಿಗೆ ಹೋದರು. ಕೊನೆಗೆ ಅವರಂತೆ ಇವರೂ ಜೈಲು ಸೇರಿದ್ದಾರೆ. ಯಡಿಯೂರಪ್ಪನವರೊಬ್ಬರೇ ರಾಜ್ಯ ಕಂಡ ಜಾತಿವಾದಿ ಮತ್ತು ಭ್ರಷ್ಟ ಮುಖ್ಯಮಂತ್ರಿಯೆಂದು ಈಗಲೇ ಅಂತಿಮ ನಿರ್ಧಾರಕ್ಕೆ ಬರಲಾಗದು.

ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಈವರೆಗೆ ಕೂತವರಲ್ಲಿ ಯಾರೂ ಇಂತಹ ಆರೋಪಗಳಿಂದ ಮುಕ್ತರಾಗಿಲ್ಲ. ಉಳಿದವರ ಭ್ರಷ್ಟಾಚಾರಕ್ಕೆ ಪುರಾವೆಗಳು ಸಿಕ್ಕಿಲ್ಲ ಅಷ್ಟೆ, ಅದಕ್ಕೆ ಅವರು ನಿರಪರಾಧಿಗಳು.
ಆದರೆ ಯಡಿಯೂರಪ್ಪನವರಷ್ಟು ದಡ್ಡತನದಿಂದ ಬಹಿರಂಗವಾಗಿ ಜಾತಿವಾದ ಮಾಡಿದವರು ಮತ್ತು ಮೇಲ್ನೋಟದಲ್ಲಿಯೇ ಸಾಬೀತಾಗುವಂತೆ ಕಾಣುತ್ತಿರುವ ಭ್ರಷ್ಟಾಚಾರದಲ್ಲಿ ತೊಡಗಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ.
ವ್ಯತ್ಯಾಸ ಇಷ್ಟೆ: ಒಬ್ಬ ಜಾಣ ರಾಜಕಾರಣಿ ಹಣ ಮತ್ತು ದುಡ್ಡನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುತ್ತಾನೆ, ದಡ್ಡ ರಾಜಕಾರಣಿಯನ್ನು ಇವೆರಡೂ ಬಳಸಿಕೊಳ್ಳುತ್ತವೆ.
ಬಿ.ಎಸ್.ಯಡಿಯೂರಪ್ಪನವರ ಕಳೆದ ಮೂರುವರ್ಷಗಳ ಆಡಳಿತವನ್ನು ನೋಡಿದರೆ ಅವರನ್ನು ಜಾಣ ರಾಜಕಾರಣಿ ಎಂದು ಹೇಳಲಾಗುವುದಿಲ್ಲ. ಅವರು ಜಾಣರಾಗಿದ್ದರೆ `ಆಪರೇಷನ್ ಕಮಲ~ದಂತಹ ಅನೈತಿಕ ಮತ್ತು ದುರಹಂಕಾರಿ ರಾಜಕಾರಣವನ್ನು ಮಾಡಲು ಹೋಗುತ್ತಿರಲಿಲ್ಲ.

ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ತಮ್ಮ ಸರ್ಕಾರವನ್ನು ಉರುಳಿಸಲು ಹೊರಟರೂ ಅದನ್ನು ರಾಜಕೀಯ ಹೋರಾಟದ ಮೂಲಕವೇ ಎದುರಿಸುತ್ತಿದ್ದರು. ನೈತಿಕವಾದ ಅಂತಹ ಹೋರಾಟವನ್ನು ರಾಜ್ಯದ ಜನ ಕೂಡಾ ಬೆಂಬಲಿಸುತ್ತಿದ್ದರು.
ಇದೇ ಬಿಜೆಪಿಯ ಕಾಟ ತಾಳಲಾಗದೆ 1985ರಲ್ಲಿ ಮಧ್ಯಂತರ ಚುನಾವಣೆ ಘೋಷಿಸಿದ್ದ ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯ ಜನ ಬೆಂಬಲಿಸಲಿಲ್ಲವೇ, ಹಾಗೆ. ಆದರೆ ಯಡಿಯೂರಪ್ಪನವರು ಗಣಿಲೂಟಿಕೋರರು ಹಾಕಿದ ಬೋನಿಗೆ ಬಿದ್ದು ಬಿಟ್ಟರು.
ಅವರು ಜಾಣರಾಗಿದ್ದರೆ ತನಗಿರುವ ಅಧಿಕಾರದ ಬಲದಿಂದ (ಬೇಕಿದ್ದರೆ ಜಾತಿಬಲವನ್ನೂ ಸೇರಿಸಿ) ಯಾವಾಗಲೋ ಜನಾರ್ದನ ರೆಡ್ಡಿಯವರನ್ನು ಜೈಲಿಗೆ ಕಳುಹಿಸಬಹುದಿತ್ತು. ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಕೇವಲ ರಾಜಕೀಯ ಗೂಂಡಾಗಿರಿಯಿಂದ ಕಟ್ಟಿದ ಗಣಿ ಸಾಮ್ರಾಜ್ಯದ ಬುನಾದಿ ಎಷ್ಟೊಂದು ದುರ್ಬಲ ಎನ್ನುವುದು ಈಗ  ಬಯಲಿಗೆ ಬರುತ್ತಿದೆ.
ಆರ್.ಗುಂಡೂರಾವ್ ಅವರಿಂದ ಹಿಡಿದು ಎಚ್.ಡಿ.ಕುಮಾರಸ್ವಾಮಿವರೆಗೆ ಕನಿಷ್ಠ ಹತ್ತು ಮುಖ್ಯಮಂತ್ರಿಗಳ ವಿರುದ್ಧ ವೀರಾವೇಶದಿಂದ ಹೋರಾಟ ನಡೆಸಿದ್ದ ಯಡಿಯೂರಪ್ಪ  ಭ್ರಷ್ಟ ಗಣಿ ಉದ್ಯಮಿಗಳನ್ನು ಎದುರಿಸಲಾಗದೆ ಅವರ ಎದುರು ಶರಣಾಗಿ ಬಿಟ್ಟರು.
ಅಷ್ಟು ಮಾತ್ರವಲ್ಲ ಅವರಂತೆಯೇ ಆಗಲು ಹೋಗಿ ಗಣಿಧಣಿಗಳ ಕೆಟ್ಟತನ-ದುರಾಸೆಗಳನ್ನೆಲ್ಲ ಮೈಗೂಡಿಸಿಕೊಂಡರು. ಯಡಿಯೂರಪ್ಪನವರು ಇನ್ನಷ್ಟು ಜಾಣರಾಗಿದ್ದರೆ ತನ್ನ ಲಾಲಸಿ ಮಕ್ಕಳಿಗೆ ಬುದ್ಧಿ ಹೇಳಿ ಅಧಿಕಾರದ ಪ್ರಭಾವಳಿಯಿಂದ ದೂರ ಇಡುತ್ತಿದ್ದರು.
ಹಾಗೆ ಮಾಡಿದ್ದರೆ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಈಗಿನಂತೆ ಕತ್ತಲು ಕವಿಯುತ್ತಿರಲಿಲ್ಲ. ಕನಿಷ್ಠ ತಾನು ದ್ವೇಷಿಸುವ ದೇವೇಗೌಡರ ಮಕ್ಕಳು ಹಿಡಿದ ದಾರಿಯನ್ನಾದರೂ ನೋಡಿ ಎಚ್ಚೆತ್ತುಕೊಳ್ಳಬಹುದಿತ್ತು.
ಯಡಿಯೂರಪ್ಪನವರು ಅನುಭವದಿಂದ ಪಾಠ ಕಲಿಯುವ ಕಾಲ ಮೀರಿ ಹೋಗಿದೆ. ಅವರ ಅನುಭವದಿಂದ ಉಳಿದ ರಾಜಕಾರಣಿಗಳಾದರೂ ಪಾಠ ಕಲಿತರೆ ಜೈಲು ಪಾಲಾಗುವ ಅವಮಾನದಿಂದ  ತಪ್ಪಿಸಿಕೊಳ್ಳಬಹುದು.

ದುಡ್ಡು ಮತ್ತು ಜಾತಿ ಮುಂದೆಯೂ ರಾಜಕಾರಣದ ಅನಿವಾರ‌್ಯ ಸಂಕಟಗಳಾಗಿಯೇ ಮುಂದುವರಿಯಲಿರುವ ಕಾರಣ ಇಂತಹ ಪ್ರಕರಣಗಳು ಪುನರಾವರ್ತನೆಗೊಂಡರೆ ಅಚ್ಚರಿ ಇಲ್ಲ. ಈ ಸಂಕಟಗಳನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಈ ಸಮಯದಲ್ಲಿ ನೆನೆಪಾಗುತ್ತಾರೆ.

ತನಗಿಲ್ಲದ ಜಾತಿ ಬಲವನ್ನು ಜಾತಿ ರಾಜಕಾರಣದ ಮೂಲಕ ಮತ್ತು ತನ್ನಲ್ಲಿಲ್ಲದ ಹಣವನ್ನು ಶ್ರಿಮಂತರ ಸ್ನೇಹದ ಮೂಲಕ ಪಡೆದುಕೊಂಡು ರಾಜಕಾರಣ ಮಾಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು.
ಇವೆರಡೂ ತಮ್ಮನ್ನು ಬಳಸಿಕೊಳ್ಳಲು ಅವರು ಬಿಡಲಿಲ್ಲ, ಅವುಗಳನ್ನು ಬಳಸಿಕೊಂಡು ರಾಜಕಾರಣ ಮಾಡಿದರು. ಹೋಗ್ಲಿ ಬಿಡಿ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಅರಸು ವಿಷಯ ಯಾಕೆ?

Monday, October 10, 2011

ನಾರಾಯಣ ಗುರು ತೋರಿದ ಸುಧಾರಣೆಯ ದಾರಿ

`ನಾರಾಯಣ ಗುರುಗಳು  ಮಾಡದಿರುವುದನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾಡಿ ತೋರಿಸಿದ್ದಾರೆ~ ಎಂದು ಪೂಜಾರಿ ಅಭಿಮಾನಿಗಳೊಬ್ಬರು ಮೊನ್ನೆ ಹೆಮ್ಮೆಯಿಂದ ಹೇಳುತ್ತಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆದ `ವಿಧವಾ ವಿಮೋಚನೆ~ ಕಾರ‌್ಯಕ್ರಮ ಈ ಅಭಿಮಾನಿಯ ಹೆಮ್ಮೆಗೆ ಕಾರಣ.

`ಹಿಂದೂ ಮೂಲಭೂತವಾದಿಗಳು ಪಬ್‌ಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಿದ ಹಲ್ಲೆಯಿಂದಾಗಿ ಹೋದ ಮಂಗಳೂರಿನ ಮಾನ, `ವಿಧವಾ ವಿಮೋಚನಾ~ ಕಾರ‌್ಯಕ್ರಮದಿಂದ ಬಂತು~ ಎಂದು ಇನ್ಯಾರೋ ಹೇಳುತ್ತಿದ್ದರು.

ಭಾವುಕ ಮನಸ್ಸಿನ ಈ ಪ್ರತಿಕ್ರಿಯೆಗಳಲ್ಲಿ ಅತಿರೇಕತನ ಇದ್ದರೂ ಪೂಜಾರಿಯವರು ಮಾಡಿರುವ ಕೆಲಸ ಅಭಿನಂದನೆಗೆ ಯೋಗ್ಯವಾದುದು ಎನ್ನುವುದರಲ್ಲಿ ಭಿನ್ನಾಭಿಪ್ರಾಯ ಇಲ್ಲ.

ಆದರೆ ಪೂಜಾರಿಯವರು ನಿಜಕ್ಕೂ ಸಮಾಜ ಸುಧಾರಣೆಗೆ ಹೊರಟಿದ್ದರೆ ಅವರಿಗೆ ಮಾಡಲು ಇನ್ನಷ್ಟು ಕೆಲಸಗಳಿವೆ, ಆ ದಾರಿಯಲ್ಲಿ ಮುನ್ನಡೆಯಲು ನಾರಾಯಣ ಗುರುಗಳ ತತ್ವದ ಬೆಳಕು ಕೂಡಾ ಇದೆ.
ಈಗಿನ ಕರಾವಳಿಯನ್ನು ಬಾಧಿಸುತ್ತಿರುವ ನಾನಾ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಬಂಧಿ ಕಾಯಿಲೆಗಳಿಗೆ ನಾರಾಯಣ ಗುರುಗಳ ತತ್ವಕ್ಕಿಂತ ಪರಿಣಾಮಕಾರಿಯಾದ ಔಷಧಿ ಬೇರೆ ಇಲ್ಲ.
ಪೂಜಾರಿ ಅವರ ಅಭಿಮಾನಿ ಹೇಳಿದಂತೆ ನಾರಾಯಣ ಗುರುಗಳು ನಿರ್ದಿಷ್ಟವಾಗಿ ವಿಧವೆಯರ ಬಗ್ಗೆ ಮಾತನಾಡಿರಲಿಲ್ಲ ಎನ್ನುವುದು ನಿಜ. ಇದಕ್ಕೆ ಕಾರಣ ಅವರು ಸುಧಾರಣೆಗಾಗಿ ಆಯ್ದುಕೊಂಡಿದ್ದ ಶೂದ್ರ ಸಮುದಾಯದಲ್ಲಿ ವೈಧವ್ಯ ಎನ್ನುವುದು ಬ್ರಾಹ್ಮಣ ಸಮುದಾಯದಲ್ಲಿದ್ದಷ್ಟು ದೊಡ್ಡ ಸಮಸ್ಯೆಯಾಗಿರಲಿಲ್ಲ. ಅದು ಇಂದಿಗೂ ಸತ್ಯ.

ನಾರಾಯಣ ಗುರುಗಳು ಕೇರಳದಲ್ಲಿ ಸುಧಾರಣಾವಾದಿ ಚಳವಳಿ ಪ್ರಾರಂಭಿಸಿದ್ದ ದಿನಗಳಲ್ಲಿ ಶೂದ್ರ ವರ್ಗದಲ್ಲಿ ಹೆಣ್ಣಾಗಿ ಹುಟ್ಟುವುದೇ ಶಾಪವಾಗಿತ್ತು. ಅಲ್ಲಿನ ಈಳವ ಮಹಿಳೆಯರಿಗೆ ಎದೆಯ ಮೇಲೆ ಬಟ್ಟೆ ಹಾಕಿಕೊಳ್ಳುವ ಸ್ವಾತಂತ್ರ್ಯವೂ ಇರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು ತನ್ನ ಸ್ತನಗಳನ್ನೇ ಕುಯ್ದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿತ್ತು.
ವಿಧವೆಯರು ಮಾತ್ರವಲ್ಲ, ಕೆಳವರ್ಗಕ್ಕೆ ಸೇರಿದ್ದ ಯಾವ ಮಹಿಳೆಯ ಹೂ ಮುಡಿಯುವಂತಿರಲಿಲ್ಲ. ಪ್ರಾಯಕ್ಕೆ ಬಂದ ಈಳವ ಹೆಣ್ಣುಗಳು ನಂಬೂದಿರಿಗಳ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಅಮಾನುಷ ಕಟ್ಟಳೆಗಳಿದ್ದವು.
ಇದರ ವಿರುದ್ದ ಹೋರಾಡಲು ನಿರ್ಧರಿಸಿದ್ದ ನಾರಾಯಣ ಗುರುಗಳು ಅನುಸರಿಸಿದ ಮಾರ್ಗ ಉಳಿದ ಸಮಾಜ ಸುಧಾರಕರಿಗಿಂತ ಭಿನ್ನವಾದುದು. ಅವರದ್ದು ಸಂಘರ್ಷದ ಮಾರ್ಗವಾಗಿರಲಿಲ್ಲ. ನಲ್ವತ್ತು ವರ್ಷಗಳ ಅವಧಿಯ ಸುಧಾರಣಾವಾದಿ ಚಳವಳಿಯ ಯಾವುದೇ ಸಂದರ್ಭದಲ್ಲಿ ಅವರು ಶೋಷಕರ ಹೆಸರೆತ್ತಿ ಹೋರಾಟಕ್ಕೆ ಕರೆ ನೀಡಿರಲಿಲ್ಲ.
ನೆರೆಯ ತಮಿಳಿನಾಡಿನಲ್ಲಿ ಪೆರಿಯಾರ್ ಅವರು ದೇವರ ಮೂರ್ತಿಗಳಿಗೆ ಚಪ್ಪಲಿಮಾಲೆ ಹಾಕಿ ಪ್ರತಿಭಟಿಸುತ್ತಿದ್ದಾಗ, ನಾರಾಯಣ ಗುರುಗಳು ಶೂದ್ರರಿಗಾಗಿಯೇ ದೇವಸ್ಥಾನಗಳನ್ನು ಸ್ಥಾಪಿಸಿ ಧಾರ್ಮಿಕ ಕ್ಷೇತ್ರದಲ್ಲಿ ಮೌನವಾಗಿ ಕ್ರಾಂತಿ ಮಾಡಿದ್ದರು. ಮಹಿಳಾ ಸುಧಾರಣೆಗೆ ಸಂಬಂಧಿಸಿದಂತೆ ಕೂಡಾ ಅವರು ಹೋರಾಟ ನಡೆಸಿದ್ದು `ಹೊರಗಿನವರ~ ವಿರುದ್ಧ ಅಲ್ಲ, `ಒಳಗಿನವರ~ ವಿರುದ್ಧ.
ಆ ಕಾಲದ ಕೇರಳದಲ್ಲಿ ಹೆಣ್ಣನ್ನು ಶೋಷಿಸುವ ಬಗೆಬಗೆಯ ಮೂಢ ಆಚರಣೆಗಳಿದ್ದವು. ಮೈ ನೆರೆಯುವ ಮೊದಲೇ ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ `ತಾಳಿಕೆಟ್ಟು ಕಲ್ಯಾಣಂ~ (ಬಾಲ್ಯ ವಿವಾಹಕ್ಕಿಂತಲೂ ಅಮಾನವೀಯವಾದ ಆಚರಣೆಯಲ್ಲಿ ಹೆಣ್ಣಿಗೆ ತಾಳಿ ಕಟ್ಟುವ ಗಂಡಿಗೆ ಆಕೆಯ ಮೇಲೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಬೆಳೆದ ನಂತರ ಗಂಡು ಮತ್ತು ಹೆಣ್ಣು ಅವರಿಗೆ ಇಷ್ಟಬಂದವರನ್ನು ಮದುವೆಯಾಗಬಹುದಿತ್ತು).
ಹೆಣ್ಣು ಋತುಮತಿಯಾದಾಗ ಅದನ್ನು ಪರೋಕ್ಷವಾಗಿ ಲೋಕಕ್ಕೆ ಸಾರುವ `ತಿರುಂಡಕುಳಿ~ (ದಕ್ಷಿಣ ಕನ್ನಡದ ಬಿಲ್ಲವರಲ್ಲಿ ಈ ಆಚರಣೆಗೆ `ತಲೆನೀರು~ ಎನ್ನುತ್ತಾರೆ), ಗರ್ಭಿಣಿ ಹೆಣ್ಣಿಗೆ ನಡೆಸುವ `ಪುಲುಕೂಡಿ~ (ಸೀಮಂತ) ಮೊದಲಾದ ದುಂದುವೆಚ್ಚದ ಮೂಢ ಆಚರಣೆಗಳನ್ನು ಹೆಣ್ಣಿನ ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಇಂತಹ ಪ್ರತಿಯೊಂದು ಆಚರಣೆಯಲ್ಲಿಯೂ ಹೆಣ್ಣಿನ ತಂದೆತಾಯಿಗಳು ಊರಿನವರೆಲ್ಲರನ್ನೂ ಕರೆದು ಔತಣ ನೀಡಬೇಕಾಗಿತ್ತು.

ಈ ದುಂದುವೆಚ್ಚದ ಆಚರಣೆಗಳಿಂದಾಗಿ ಹೆಣ್ಣುಮಕ್ಕಳು ಹುಟ್ಟುವುದೇ ಶಾಪ ಎಂದು ಹೆತ್ತವರು ಅಂದುಕೊಳ್ಳುತ್ತಿದ್ದರು. ಇಂತಹ ಆಚರಣೆಗಳಲ್ಲಿ ಶೋಷಕರು ಮತ್ತು ಶೋಷಿತರು ಒಂದೇ ವರ್ಗದಲ್ಲಿದ್ದರು. ನಾರಾಯಣ ಗುರುಗಳು ಮೊದಲು ಸಮರ ಸಾರಿದ್ದು ಹೆಣ್ಣಿನ ಶೋಷಣೆಯ ಇಂತಹ ಆಚರಣೆಗಳು ಮತ್ತು `ಒಳಗಿನ~ ಶೋಷಕರ ವಿರುದ್ಧ.
ಅದರ ನಂತರ ನಾರಾಯಣ ಗುರುಗಳು ಕೈಗೆತ್ತಿಕೊಂಡದ್ದು ವಿವಾಹ ವ್ಯವಸ್ಥೆಯ ಸುಧಾರಣೆಯ ಕಾರ‌್ಯವನ್ನು. ವರದಕ್ಷಿಣೆಯ ಜತೆಯಲ್ಲಿ ಮದುವೆಯ ವೆಚ್ಚವನ್ನೂ ಭರಿಸಬೇಕಾಗಿದ್ದ ಹೆಣ್ಣಿನ ತಂದೆ ತಾಯಿಗಳು ಮನೆಯಲ್ಲಿದ್ದ ಹೆಣ್ಣುಗಳ ಮದುವೆಗಳನ್ನು ಮಾಡಿ ಮುಗಿಸುವ ಹೊತ್ತಿಗೆ ಸಾಲದ ಶೂಲಕ್ಕೆ ಸಿಕ್ಕಿ ನರಳಾಡುವ ಪರಿಸ್ಥಿತಿ ಇತ್ತು.
ಇದನ್ನು ತಪ್ಪಿಸಲು ನಾರಾಯಣ ಗುರುಗಳು ಸರಳ ಮದುವೆಯ ಪ್ರಚಾರದಲ್ಲಿ ತೊಡಗಿದರು. ಇದಕ್ಕಾಗಿ ಅವರು ವಿವಾಹ ನೀತಿ ಸಂಹಿತೆಯೊಂದನ್ನು ರೂಪಿಸಿದ್ದರು. `ಮದುವೆಯನ್ನು ಸರಳವಾಗಿ, ವರದಕ್ಷಿಣೆ ಇಲ್ಲದೆ ನಡೆಸಬೇಕು.
ವರ, ವಧು, ಅವರ ತಂದೆ ತಾಯಿಗಳು, ವರ ಮತ್ತು ವಧುವಿನ ತಲಾ ಒಬ್ಬರು ಸಂಗಾತಿ, ಅರ್ಚಕ ಹಾಗೂ ಒಬ್ಬ ಸ್ಥಳೀಯ ಗಣ್ಯ ವ್ಯಕ್ತಿ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಬೇಕು. ಇವರ ಸಂಖ್ಯೆ ಹತ್ತನ್ನು ಮೀರಬಾರದು.
ಮದುವೆಗೆ ಒಂದು ತಿಂಗಳು ಮೊದಲು ಗಂಡು-ಹೆಣ್ಣು ಇಬ್ಬರು ಭೇಟಿಯಾಗಿ ವಿಚಾರ ವಿನಿಮಯಕ್ಕೆ ಅವಕಾಶ ನೀಡಬೇಕು. ಈ ಭೇಟಿಯ ಹದಿನೈದು ದಿನಗಳ ನಂತರವಷ್ಟೇ ಮದುವೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕು.
ಪ್ರತಿಯೊಂದು ಮದುವೆಯನ್ನು ನೋಂದಣಿ ಮಾಡಬೇಕು. ವರದಕ್ಷಿಣೆ ಇಲ್ಲದ ಸರಳ ಮದುವೆಯಿಂದ ಉಳಿತಾಯವಾಗುವ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಪಾಸ್‌ಬುಕ್ ಅನ್ನು ಮದುವೆಯ ದಿನ ವಧು-ವರರಿಗೆ ಕೊಡಬೇಕು....~ ಇತ್ಯಾದಿ ಅಂಶಗಳು ಆ ನೀತಿ ಸಂಹಿತೆಯಲ್ಲಿದ್ದವು.
ಒಬ್ಬ ಆಧ್ಯಾತ್ಮಿಕ ಗುರು ಲೌಕಿಕವಾದ ಸಂಗತಿಗಳ ಬಗ್ಗೆ ಇಷ್ಟೊಂದು ಸೂಕ್ಷ್ಮವಾಗಿ ಚಿಂತನೆ ನಡೆಸಿದ ಬೇರೆ ಉದಾಹರಣೆಗಳು ಅಪರೂಪ. ಇಂತಹ ಸರಳ ಮದುವೆಗಳನ್ನು ನಾರಾಯಣ ಗುರುಗಳು ತಮ್ಮ ಶ್ರೀಮಂತ ಶಿಷ್ಯರ ಮನೆಯಿಂದಲೇ ಪ್ರಾರಂಭಿಸಿದ್ದರು.
ತಾವು ರೂಪಿಸಿದ್ದ ನೀತಿ ಸಂಹಿತೆಗೆ ಅನುಗುಣವಾಗಿ ಮದುವೆ ನಡೆದರೆ ಮಾತ್ರ ಅದರಲ್ಲಿ ತಾನು ಭಾಗವಹಿಸುವುದಾಗಿ ಅವರು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಕಾರಣ ಶ್ರಿಮಂತ ಶಿಷ್ಯರು ಮಕ್ಕಳ ಮದುವೆಯನ್ನು ಸರಳವಾಗಿ ನಡೆಸುತ್ತಿದ್ದರು.
ಶ್ರಿಮಂತ ಕುಟುಂಬಗಳಲ್ಲಿಯೇ ಸರಳ ವಿವಾಹ ನಡೆಯಲಾರಂಭಿಸಿದ್ದರಿಂದ ಬಡವರು ಕೂಡಾ ಪೊಳ್ಳುಪ್ರತಿಷ್ಠೆಗೆ ಬಿದ್ದು ತಮ್ಮ ಸಾಮರ್ಥ್ಯ ಮೀರಿ ದುಂದುವೆಚ್ಚ ಮಾಡದೆ ಸರಳ ಮದುವೆಗಳನ್ನು ಅನುಕರಿಸತೊಡಗಿದರು.

ಮಹಿಳಾ ಸುಧಾರಣೆಯ ಈ ಚಳವಳಿ ಕಾವು ಪಡೆದುಕೊಳ್ಳುತ್ತಿದ್ದಂತೆಯೇ ಅವರ ಶೋಷಣೆಯ ಕಬಂಧಬಾಹುಗಳು ಸಡಿಲಗೊಳ್ಳುತ್ತಾ ಹೋದವು. ಇದು ನಾರಾಯಣ ಗುರುಗಳು ಮಹಿಳಾ ಸಬಲೀಕರಣಕ್ಕೆ ತೋರಿಸಿದ ಹೊಸ ಮಾರ್ಗ.
ಆದರೆ ಇಂದಿನ ಪರಿಸ್ಥಿತಿ ಏನಾಗಿದೆ? ಪೂಜಾರಿಯವರ ಊರಲ್ಲಿಯೇ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಯ ಆರ್ಥಿಕ ಭಾರವನ್ನು ಹೊರಲಾಗದೆ ಹೆಣ್ಣು ಹೆತ್ತವರು ಗೋಳಾಡುತ್ತಿದ್ದಾರೆ. ಇದೊಂದು ಪ್ರಮುಖ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದೆ.

ಇದರಿಂದಾಗಿ ಅನೇಕ ಯುವತಿಯರು ತಪ್ಪುದಾರಿ ತುಳಿಯುವಂತಾಗಿದೆ.
ಎರಡು ವರ್ಷಗಳ ಹಿಂದೆ ಮೋಹನ್‌ಕುಮಾರ್ ಎಂಬ ವಂಚಕ ಇಪ್ಪತ್ತಕ್ಕೂ ಹೆಚ್ಚು ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿ ಹತ್ಯೆಗೈದ ಪ್ರಕರಣವೇ ಇದಕ್ಕೆ ಸಾಕ್ಷಿ.
ಇವರಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಹಿಂದುಳಿದ ಜಾತಿಗೆ ಸೇರಿದ ಅವಿವಾಹಿತ ಹೆಣ್ಣುಗಳು. ಹೆಚ್ಚಿನವರು ಮನೆಯಲ್ಲಿ ನಾರಾಯಣ ಗುರುಗಳ ಪೋಟೋ ಇಟ್ಟುಕೊಂಡು ಪೂಜೆ ಮಾಡುವ ಕುಟುಂಬಗಳಿಗೆ ಸೇರಿದವರು.
ಈ ಪ್ರಕರಣ ಯಾವ ಸತ್ಯ ಹೇಳುತ್ತಿದೆ?  ಆ ಸತ್ಯವನ್ನು ಕಾಣಲು ಸಾಧ್ಯವಾದರೆ ಹೆಣ್ಣು ಹೆತ್ತವರನ್ನು ಕಿತ್ತು ತಿನ್ನುತ್ತಿರುವ ವರದಕ್ಷಿಣೆ ಮತ್ತು ಅದ್ಧೂರಿ ಮದುವೆಗಳ ಪಿಡುಗಿನ ನಿವಾರಣೆಗೆ ಮಾರ್ಗಗಳು ಕೂಡಾ ನಾರಾಯಣಗುರುಗಳು ರೂಪಿಸಿ ಆಚರಣೆಗೆ ತಂದ ಸರಳ ವಿವಾಹದಲ್ಲಿ ಕಾಣಲು ಸಾಧ್ಯ.
ವಿರೋಧಾಭಾಸದ ಸಂಗತಿಯೆಂದರೆ ಸರಳ ವಿವಾಹಕ್ಕೆ ನೀತಿ ಸಂಹಿತೆಯನ್ನು ರೂಪಿಸಿದ ನಾರಾಯಣ ಗುರುಗಳು ಸ್ಥಾಪಿಸಿದ್ದ ಕುದ್ರೋಳಿ ದೇವಸ್ಥಾನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಲ್ಯಾಣಮಂಟಪಗಳಲ್ಲಿಯೇ ಅದ್ಧೂರಿ ಮದುವೆಗಳು ನಡೆಯುತ್ತಿವೆ.
ವಿಧವೆಯರಿಗೆ ಮುತ್ತೈದೆ ಭಾಗ್ಯದ ಅವಕಾಶ ನೀಡಿ ಎಲ್ಲರ ಅಭಿನಂದನೆಗೆ ಪಾತ್ರರಾದ ಜನಾರ್ದನ ಪೂಜಾರಿಯವರು ಮುಂದಿನ ಹೆಜ್ಜೆಯಾಗಿ ಬಡಕುಟುಂಬಗಳ ಸಾವಿರಾರು ಯುವತಿಯರ ಬಾಳಿಗೆ ಬೆಳಕು ನೀಡುವ ಸರಳ ವಿವಾಹದ ಪ್ರಚಾರವನ್ನು ಯಾಕೆ ಕೈಗೊಳ್ಳಬಾರದು?
ಜನಾರ್ದನ ಪೂಜಾರಿಯವರು ತಮಗರಿವಿಲ್ಲದಂತೆಯೇ ನಾರಾಯಣ ಗುರುಗಳು ಮಾಡದಿರುವ ಒಂದು ಕೆಲಸ ಮಾಡಿದ್ದಾರೆ. ಪೂಜಾವಿಧಾನವನ್ನು ಸರಳಗೊಳಿಸಿದ್ದು ಮಾತ್ರವಲ್ಲ, ಪೂಜೆ ಮಾಡುವ ಅವಕಾಶವನ್ನು ಎಲ್ಲ ಜಾತಿಗಳಿಗೂ ನೀಡಿದ್ದು ನಾರಾಯಣ ಗುರುಗಳ ಧಾರ್ಮಿಕ ಸುಧಾರಣೆಯ ಪ್ರಮುಖ ಸಾಧನೆ.
ಜಾತಿಭೇದ ಇಲ್ಲದೆ ಅರ್ಚಕ ವೃತ್ತಿಯಲ್ಲಿ ತರಬೇತಿ ನೀಡಲಿಕ್ಕಾಗಿಯೇ ಅವರು ಸನ್ಯಾಸಿ ಸಂಘವನ್ನು ಸ್ಥಾಪಿಸಿದ್ದರು. ಇದರಿಂದಾಗಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವೂ ಸೇರಿದಂತೆ ನಾರಾಯಣ ಗುರುಗಳು ಸ್ಥಾಪಿಸಿದ್ದ ಎಲ್ಲ ದೇವಾಲಯಗಳಲ್ಲಿ ಶೂದ್ರ ಅರ್ಚಕರೇ ಪೂಜೆ ಮಾಡುತ್ತಿದ್ದಾರೆ.

ಇಷ್ಟೆಲ್ಲ ಮಾಡಿದ್ದ ನಾರಾಯಣ ಗುರುಗಳು ಮಹಿಳೆಯರನ್ನು ಮಾತ್ರ ಅರ್ಚಕರನ್ನಾಗಿ ಮಾಡುವ ಬಗ್ಗೆ ಯಾಕೋ ಗಮನ ನೀಡಿರಲಿಲ್ಲ. ಈಗಲೂ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅರ್ಚಕ ವೃತ್ತಿಯಿಂದ ಮಾತ್ರ ವಂಚಿತರಾಗಿದ್ದಾರೆ.
ಖಾಸಗಿಯಾಗಿ ನಡೆಯುವ ಧಾರ್ಮಿಕ ಕಾರ‌್ಯಕ್ರಮಗಳಲ್ಲಿಯೂ ಮಹಿಳೆಯರನ್ನು ಒಂದೆರಡು ಹೆಜ್ಜೆ ಹಿಂದಕ್ಕೆ ನಿಲ್ಲಿಸಲಾಗುತ್ತದೆ. ಕುದ್ರೋಳಿಯಲ್ಲಿ ವಿಧವೆಯರು ತಾತ್ಕಾಲಿಕವಾದರೂ ಮುತ್ತೈದೆ ಭಾಗ್ಯ ಪಡೆದದ್ದು ಮಾತ್ರವಲ್ಲ, ತಾವೇ ಚಂಡಿಕಾ ಹೋಮ ನಡೆಸಿ  ದೇವರ ಮೂರ್ತಿ ಇದ್ದ ರಥ ಎಳೆದುಬಿಟ್ಟರು.
ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ರಾಹ್ಮಣ-ಶೂದ್ರರೆಂಬ ಭೇದ ಇಲ್ಲದೆ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೇರುತ್ತಾ ಬಂದಿರುವ ಹಿಂದೂ ಧರ್ಮದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ.
ಪೂಜಾರಿಯವರಿಗೆ ಇಂತಹದ್ದೊಂದು ಸಾಹಸ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕುದ್ರೋಳಿ ಕ್ಷೇತ್ರ. ನಾರಾಯಣ ಗುರುಗಳು ಬಂದು ಗೋಕರ್ಣನಾಥ ಎನ್ನುವ ಹೆಸರಿಟ್ಟು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದ ಈ ಕ್ಷೇತ್ರಕ್ಕೆ ಮುಂದಿನ ವರ್ಷ ನೂರು ತುಂಬಲಿದೆ. ಅಸ್ಪೃಶ್ಯತೆಯಿಂದ ನೊಂದಿದ್ದ ಬಿಲ್ಲವ ಸಮುದಾಯದ ನಾಯಕರ ಕರೆಗೆ ಓಗೊಟ್ಟು ನಾರಾಯಣ ಗುರುಗಳು ಅಲ್ಲಿಗೆ ಬಂದಿದ್ದರು.
ಈ ಐತಿಹಾಸಿಕ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಹೊಯಿಗೆ ಬಜಾರ್ ಕೊರಗಪ್ಪನವರು. ದೇವಸ್ಥಾನ ನಿರ್ಮಾಣಕ್ಕೆ ಆರ್ಥಿಕವಾಗಿ ಹೆಚ್ಚು ನೆರವಾದವರು ಕೂಡಾ ಅವರೇ.

ಮುಸ್ಲಿಮ್ ವ್ಯಾಪಾರಿಯ ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಕೊರಗಪ್ಪನವರು ತಮ್ಮ ಶ್ರಮ ಮತ್ತು ನಿಷ್ಠೆಯಿಂದ ಮಾಲೀಕರ ವಿಶ್ವಾಸಕ್ಕೆ ಪಾತ್ರರಾಗಿ ನಂತರ ಅದೇ ಕಂಪೆನಿಯ ಸದಸ್ಯರ ಜತೆಗೂಡಿ `ಸಿ.ಅಬ್ದುಲ್ ರೆಹಮಾನ್ ಮತ್ತು ಕೊರಗಪ್ಪ ಕಂಪೆನಿ~ಯನ್ನು ಸ್ಥಾಪಿಸಿ ವ್ಯಾಪಾರಿಯಾಗಿಹೆಸರು ಗಳಿಸಿದವರು.
 ಕುದ್ರೋಳಿ ದೇವಸ್ಥಾನದ ಸ್ಥಾಪನೆಯ ರೂವಾರಿಯ ಹಿನ್ನೆಲೆ ಆ ಕಾಲದ ಕೋಮುಸೌಹಾರ್ದತೆಯ ನೋಟವನ್ನು ಕೂಡಾ ನೀಡುತ್ತದೆ. ಅದು ನಾರಾಯಣ ಗುರು ಕಂಡ ಕನಸೂ ಕೂಡಾ ಆಗಿತ್ತು.
ಆದರೆ ಇಂದೇನಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೆ ಸಂಬಂಧಿಸಿದ ಆರೋಪಪಟ್ಟಿಗಳಲ್ಲಿರುವ ಹೆಸರಿನ ಮುಂದಿರುವ ಜಾತಿ ವಿವರವನ್ನು ನೋಡಿದರೆ ಸಾಕು.
ಸಂಘರ್ಷ ಇಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದವರು ನಾರಾಯಣ ಗುರುಗಳು. ಅವರ ಇಂದಿನ ಅನುಯಾಯಿಗಳು ಕೈಯಲ್ಲಿ ಲಾಠಿ ಹಿಡಿದುಕೊಂಡು ಹೊರಟಿದ್ದಾರೆ. ಗುರು ಇದ್ದಾರೆ, ಗುರಿ ತಪ್ಪಿದೆ.

Monday, October 3, 2011

ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?

ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಷ್ಟು `ಗಾಂಧಿ ಸ್ಮರಣೆ~ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ನಡೆದಿರಲಿಕ್ಕಿಲ್ಲ. ಅಣ್ಣಾ ಹಜಾರೆಯವರ ಚಳವಳಿಯಿಂದ ಪ್ರಾರಂಭಗೊಂಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ `ಸದ್ಭಾವನಾ ಉಪವಾಸ~ದ ವರೆಗೆ ಈ ಸ್ಮರಣೆಯ ಯಾತ್ರೆ ಮುಂದುವರಿದಿದೆ.
ಅಣ್ಣಾ ಹಜಾರೆಯವರನ್ನು ಆಗಲೇ ಜನ `ದೇಶ ಕಂಡ ಎರಡನೇ ಗಾಂಧಿ~ ಎಂದು ಕೊಂಡಾಡತೊಡಗಿದ್ದಾರೆ. `ಗುಜರಾತ್‌ನ ಮಣ್ಣಿನ ಮಗ ಗಾಂಧೀಜಿಯವರೇ ನನ್ನ ಆದರ್ಶ~ ಎಂದು ನರೇಂದ್ರ ಮೋದಿ ಗುಣಗಾನ ಮಾಡುತ್ತಿದ್ದಾರೆ.

ಇವರಿಬ್ಬರಿಂದಾಗಿ ಮಾತ್ರವಲ್ಲ, ಭಾರತ ಇಂದು ಎದುರಿಸುತ್ತಿರುವ ಎರಡು ಬಹುದೊಡ್ಡ ಸಮಸ್ಯೆಗಳಾದ ಭ್ರಷ್ಟಾಚಾರ ಮತ್ತು ಕೋಮುವಾದದ ನಿರ್ಮೂಲನೆಗಾಗಿಯೂ ಗಾಂಧೀಜಿಯ ಹೊರತಾಗಿ ಬೇರೆ ದಾರಿ ಕಾಣದಿರುವುದು ಕೂಡಾ ಈ ಸ್ಮರಣೆಗೆ ಕಾರಣ ಇರಬಹುದು. ಆದರೆ ಈ ರೀತಿ ಗಾಂಧಿ ಸ್ಮರಣೆಯಲ್ಲಿ ತೊಡಗಿರುವವರೆಲ್ಲರೂ ಅವರು ತೋರಿದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆಯೇ?
ಗಾಂಧೀಜಿಯವರ ಅಹಿಂಸಾ ಹೋರಾಟದ ಮೊದಲ ಪ್ರಯೋಗ ಭೂಮಿ ಬಿಹಾರದ ಉತ್ತರತುದಿಯಲ್ಲಿರುವ ಚಂಪಾರಣ್. `ಈ ಚಳವಳಿ ನನಗೆ ದೇವರು, ಅಹಿಂಸೆ ಮತ್ತು ಸತ್ಯದ ದರ್ಶನ ಮಾಡಿಸಿತು~ ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕಿಂತ ಮೊದಲು ಗಾಂಧೀಜಿಯವರಿಗೆ ಕರಾರು ಕೂಲಿ ವಲಸೆ ರದ್ದುಗೊಳಿಸಲು ನಡೆಸಿದ್ದ ಹೋರಾಟದ ಅನುಭವ ಮಾತ್ರ ಇತ್ತು. ನಂತರದ ದಿನಗಳಲ್ಲಿ ಗಳಿಸಿದ ಜನಪ್ರಿಯತೆ ಆ ದಿನಗಳಲ್ಲಿ ಅವರಿಗೆ ಇರಲಿಲ್ಲ. ಕಾಂಗ್ರೆಸ್ ಬಗ್ಗೆಯೂ ಆ ಕಾಲದಲ್ಲಿ ಅಲ್ಲಿನ ಜನರಿಗೆ ಗೊತ್ತಿಲ್ಲದಿದ್ದ ಕಾರಣ ಪಕ್ಷವನ್ನು ದೂರ ಇಟ್ಟು ಗಾಂಧೀಜಿ ಹೋರಾಟ ನಡೆಸಿದ್ದರು. ಆದ್ದರಿಂದಲೇ ಒಬ್ಬ ಸಾಮಾನ್ಯ ಗಾಂಧೀಜಿಯನ್ನು ಚಂಪಾರಣ್ ಚಳವಳಿ ಮೂಲಕ ಕಾಣಲು ಸಾಧ್ಯ.

ಚಂಪಾರಣ್ ರೈತರು ತಮ್ಮ ತೋಟಗಳ ಮುಕ್ಕಾಲು ಪಾಲು ಜಾಗದಲ್ಲಿ ಇಂಡಿಗೋ (ನೀಲಿ)ಬೆಳೆ ಬೆಳೆಯಬೇಕೆಂಬ ಕಾನೂನಿನ (ತೀನ್ ಕಾಥಿಯಾ) ಕುಣಿಕೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅದನ್ನು ಜಾರಿಗೊಳಿಸಿದ್ದವರು ನೀಲಿ ತಯಾರಿಕೆಯ ಕಾರ್ಖಾನೆಗಳ ಬ್ರಿಟಿಷ್ ಒಡೆಯರು. ಜೀತದಾಳುಗಳಂತಿದ್ದ ರೈತರು ನೀಲಿ ಬೆಳೆಯಲ್ಲಿ ಹೆಚ್ಚಿನ ಆದಾಯ ಇಲ್ಲದೆ ಬಡತನದಲ್ಲಿ ನರಳುತ್ತಿದ್ದರೂ ದನಿ ಎತ್ತಲಾಗದಷ್ಟು ಅಸಹಾಯಕರಾಗಿದ್ದರು.
ಆ ಪ್ರದೇಶಕ್ಕೆ ಗಾಂಧೀಜಿ ಭೇಟಿ ನೀಡಿ ಮೊದಲು ಮಾಡಿದ ಕೆಲಸ `ಕಾರ್ಖಾನೆ ಮಾಲೀಕರು ನನ್ನ ಶತ್ರುಗಳಲ್ಲ, ಅವರಿಗೂ ಒಳ್ಳೆಯದನ್ನು ಬಯಸುತ್ತೇನೆ~ ಎಂದು ಘೋಷಿಸಿದ್ದು. ಚಳವಳಿ ಕಾವೇರುತ್ತಿದ್ದಂತೆಯೇ ಬ್ರಿಟಿಷ್ ಸರ್ಕಾರ ತನಿಖೆಗೆ ಆಯೋಗವನ್ನು ನೇಮಿಸಿತು.

ರೈತರ ಮೇಲೆ ನಡೆಸಲಾಗಿದ್ದ ದೌರ್ಜನ್ಯ, ಶೋಷಣೆಗಳಿಗೆ ಸಂಬಂಧಿಸಿದ ಪುರಾವೆಗಳು ಆಯೋಗದ ಮುಂದೆ ಬರತೊಡಗಿದ್ದವು. ಅವುಗಳನ್ನು ಬಳಸಿಕೊಂಡು ಕಾರ್ಖಾನೆ ಮಾಲೀಕರ ಮೇಲೆ ಕ್ರಮಕ್ಕೆ ಗಾಂಧೀಜಿ ಒತ್ತಾಯಿಸಬಹುದಿತ್ತು. ಹಾಗೆ ಮಾಡಿದ್ದರೆ ಬಹಳಷ್ಟು ಮಂದಿಗೆ ಕಠಿಣ ಶಿಕ್ಷೆಯೂ ಆಗುತ್ತಿತ್ತು.

ಆದರೆ ಹಳೆಯದನ್ನು ಕೆದಕುವುದು ತಮಗೆ ಇಷ್ಟ ಇಲ್ಲ ಎಂದು ಪ್ರಾರಂಭದಲ್ಲಿಯೇ ಹೇಳಿದ ಗಾಂಧೀಜಿ, ಅವರ ಮನಸ್ಸಿನಲ್ಲಿದ್ದ ಭಯವನ್ನು ನಿವಾರಿಸಿದ್ದರು. ಹೋರಾಟದುದ್ದಕ್ಕೂ ಅವರು ಕಾರ್ಖಾನೆಯ ಮಾಲೀಕರ ಬಗ್ಗೆ ಒಂದೇ ಒಂದು ದೂಷಣೆಯ ಮಾತುಗಳನ್ನು ಆಡಿರಲಿಲ್ಲ.
ಇದರಿಂದಾಗಿ ರೈತರು ಮಾತ್ರವಲ್ಲ, ಪ್ರಾರಂಭದಲ್ಲಿ ಗಾಂಧೀಜಿಯವರನ್ನು ಅನುಮಾನದಿಂದ ನೋಡಿದ ಕಾರ್ಖಾನೆ ಮಾಲೀಕರು ನಂತರದ ದಿನಗಳಲ್ಲಿ ಅವರ ಅಭಿಮಾನಿಗಳಾಗಿ ಬಿಟ್ಟರು. ರೈತ ವಿರೋಧಿ ಕಾನೂನು ರದ್ದಾಗಿದ್ದು ಮಾತ್ರವಲ್ಲ, ರೈತರಿಗೆ ಪರಿಹಾರವೂ ಸಿಕ್ಕಿತು. ಗೌರವಯುತವಾಗಿಯೇ ಕಾರ್ಖಾನೆ ಮಾಲೀಕರು ಊರು ಬಿಟ್ಟು ಹೋದರು.
ಮುಂದಿನ ಹೋರಾಟದುದ್ದಕ್ಕೂ ಗಾಂಧೀಜಿ ಅನುಸರಿಸಿದ್ದು ಇದೇ ಕಾರ‌್ಯತಂತ್ರವನ್ನು. ಸಂಧಾನದ ಮೇಜಿನಲ್ಲಿ ಎದುರಿಗೆ ಕೂತವರನ್ನು ಎಂದೂ ಅವರು ಶತ್ರುಗಳೆಂದು ಪರಿಗಣಿಸುತ್ತಿರಲಿಲ್ಲ. ಅವರನ್ನು ತನ್ನತ್ತ ಒಲಿಸಿಕೊಂಡು ಉದ್ದೇಶ ಸಾಧಿಸಿಬಿಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬ್ರಿಟಿಷರ ಜತೆ ಮಾತುಕತೆ ನಡೆಸಿದ ನಂತರ ಅದರ ವಿವರವನ್ನೊಳಗೊಂಡ ಪತ್ರಿಕಾ ಹೇಳಿಕೆಯನ್ನು ಬ್ರಿಟಿಷ್ ಸಂಧಾನಕಾರರಿಗೆ ತೋರಿಸಿ ಸಮ್ಮತಿ ಪಡೆದು ನಂತರವಷ್ಟೇ ಮಾಧ್ಯಮಗಳಿಗೆ ನೀಡುತ್ತಿದ್ದರಂತೆ. ಇದು ಮಾತುಕತೆಯ ಪ್ರಕ್ರಿಯೆ ಮುಂದುವರಿಸಿಕೊಂಡು ಹೋಗಲು  ನೆರವಾಗುತ್ತಿತ್ತು. ಅಹಿಂಸೆಯ ಮಾರ್ಗದಲ್ಲಿ ಯಶಸ್ಸು ನಿಧಾನ ಎನ್ನುವ ಅರಿವು ಅವರಿಗಿತ್ತು.

ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಚಳವಳಿಯನ್ನು ನೋಡಿದಾಗ ಕಾಣುವುದೇನು? ಅಣ್ಣಾಹಜಾರೆ ತಂಡ ಪ್ರಾರಂಭದಲ್ಲಿಯೇ ಚುನಾಯಿತ ಸರ್ಕಾರವನ್ನು ಶತ್ರು ಸ್ಥಾನದಲ್ಲಿಟ್ಟು ಬಿಟ್ಟಿತ್ತು. ಸಂಘರ್ಷದ ಮೂಲಕವೇ ಸಂಧಾನ ಎಂಬ ಕಾರ್ಯತಂತ್ರವನ್ನು ಅವರು ಅನುಸರಿಸಿದಂತಿತ್ತು.
ಆದ್ದರಿಂದಲೇ ಗಾಂಧೀಜಿ ಇಲ್ಲವೇ ಅವರ ಅನುಯಾಯಿಗಳು ಭಾರತೀಯರನ್ನು ಗುಲಾಮರನ್ನಾಗಿ ಮಾಡಿಕೊಂಡ ಬ್ರಿಟಿಷರ ವಿರುದ್ಧ ಬಳಸದ ಭಾಷೆಯನ್ನೆಲ್ಲ ಅಣ್ಣಾ ಹಜಾರೆ ಮತ್ತು ಅವರ ಸಂಗಾತಿಗಳು ಕೇಂದ್ರ ಸರ್ಕಾರದ ಪ್ರತಿನಿಧಿಗಳ ವಿರುದ್ಧ ಬಳಸಿದ್ದಾರೆ.
ಲೋಕಪಾಲ ಮಸೂದೆಯ ರಚನಾ ಸಮಿತಿಯ ಸಭೆ ಮುಗಿಸಿ ಹೊರಗೆ ಬಂದ ಅಣ್ಣಾ ಹಜಾರೆ ಸಂಗಾತಿಗಳು ಮೊದಲು ಮಾಡುತ್ತಿದ್ದ ಕೆಲಸ ತಮಗಾಗಿ ಕಾಯುತ್ತಿದ್ದ ಟಿವಿ ಚಾನೆಲ್‌ಗಳ ಮೈಕ್ ಮುಂದೆ ಸರ್ಕಾರವನ್ನು ದೂಷಿಸುವುದು. ಗಾಂಧೀಜಿಯವರು ಇದ್ದಿದ್ದರೆ ಹೀಗೆ ಮಾಡುತ್ತಿದ್ದರೇ? ಅಂದ ಹಾಗೆ, ಗಾಂಧೀಜಿ ತಮ್ಮ ಹೋರಾಟದ ಬದುಕಿನಲ್ಲಿ ಎರಡು ಬಾರಿ 21ದಿನಗಳ ಉಪವಾಸವೂ ಸೇರಿದಂತೆ 16 ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.
ಆದರೆ, ಅವರೆಂದೂ ಬ್ರಿಟಿಷರ ವಿರುದ್ಧ ಅದನ್ನು ಬಳಸಿಲ್ಲ. ಅವರು ಉಪವಾಸ ಸತ್ಯಾಗ್ರಹದ ಅಸ್ತ್ರವನ್ನು `ತಮ್ಮವರ~ ವಿರುದ್ಧವೇ ಪ್ರಯೋಗಿಸಿದ್ದು. ಅದು ಕೋಮು ಸೌಹಾರ್ದತೆಗಾಗಿ ಇಲ್ಲವೇ ಅಸ್ಪೃಶ್ಯತೆಯ ನಿವಾರಣೆಗಾಗಿ, ರಾಜಕೀಯ ಉದ್ದೇಶಕ್ಕಲ್ಲ.
* * * * * *
ಕಳೆದ ಹತ್ತು ವರ್ಷಗಳಲ್ಲಿ ಗಾಂಧೀಜಿಯವರನ್ನು ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚು ನೆನಪು ಮಾಡಿಕೊಂಡದ್ದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಪ್ರತಿ ಚುನಾವಣೆಯ ಭಾಷಣಗಳಲ್ಲಿ ಅವರ ಬಾಯಿಯಿಂದ ಪುಂಖಾನುಪುಂಖವಾಗಿ ಗಾಂಧಿ ಹೆಸರು ಹೊರಬೀಳುತ್ತದೆ. ಕೆಲವು ವರ್ಷಗಳ ಹಿಂದೆ ಗುಜರಾತ್‌ನ ಪತ್ರಿಕೆಗಳಲ್ಲಿ  ತನಗಿಂತ ಎತ್ತರದ ಲಾಠಿ ಹಿಡಿದ ಗಾಂಧೀಜಿಯ ಚಿತ್ರ ಹೊಂದಿದ್ದ ಸರ್ಕಾರಿ ಜಾಹೀರಾತು ಪ್ರಕಟವಾಗಿತ್ತು. ಅದರ ಶೀರ್ಷಿಕೆ  `ಲಾಠಿ~ ಆಗಿತ್ತು(ಗಾಂಧಿ ಅಲ್ಲ).

`ಲಾಠಿ ರಕ್ಷಣೆ ಮತ್ತು ಸುಭದ್ರತೆಯ ಸಂಕೇತ, ದೌರ್ಜನ್ಯ ಮತ್ತು ಹಿಂಸೆಯ ಸಂಕೇತ ಅಲ್ಲ~ ಎಂಬ ಅಡಿ ಬರಹ ಅದರಲ್ಲಿತ್ತು. ಇದು ಮೋದಿ ಕಲ್ಪನೆಯ ಗಾಂಧಿ. ಆದರೆ ಗುಜರಾತ್‌ನ ಪೋರಬಂದರ್‌ನ ಮೂರು ಮಾಳಿಗೆಗಳ ಮನೆ ಕೀರ್ತಿಮಂದಿರದಲ್ಲಿ ಪುತಲೀಬಾಯಿ ಜನ್ಮ ನೀಡಿದ್ದ ಗಾಂಧೀಜಿ ಬೇರೆಯೇ ಆಗಿದ್ದರು. ಒಬ್ಬ ದಾರ್ಶನಿಕ ಮಾತ್ರ ಕಾಣಬಲ್ಲ ಭವಿಷ್ಯದ ಚಿತ್ರವನ್ನು ಅವರು ತಮ್ಮ ಕೊನೆಯ ದಿನಗಳಲ್ಲಿ ಕಂಡಿದ್ದರು, ಅದು ಹೆಡೆ ಬಿಚ್ಚುತ್ತಿದ್ದ ಕೋಮುವಾದ ಎಂಬ ಘಟಸರ್ಪದ ಚಿತ್ರ.
ಬ್ರಿಟಿಷರ ವಿರುದ್ಧದ ಹೋರಾಟದ ಗುರಿ, ದಾರಿ ಮತ್ತು ಪರಿಣಾಮಗಳೆಲ್ಲದರ ಬಗ್ಗೆಯೂ ಅವರಿಗೆ ಸ್ಪಷ್ಟತೆ ಇತ್ತು. ಆದರೆ ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ಎದುರಾದ ಹಿಂದೂ-ಮುಸ್ಲಿಮರ ನಡುವಿನ ಕೋಮುದ್ವೇಷವನ್ನು ಕಂಡು ಅವರು ಆಘಾತಕ್ಕೀಡಾಗಿದ್ದರು.
ದೇಶ ವಿಭಜನೆಗೆ ಒತ್ತಾಯಿಸಿ ಮುಸ್ಲಿಮ್ ಲೀಗ್ `ನೇರ ಕಾರ್ಯಾಚರಣೆ~ಗೆ ಕರೆ ಕೊಟ್ಟಾಗ ಮೊದಲು ಕೋಲ್ಕತ್ತದಲ್ಲಿ, ನಂತರ ನೌಖಾಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಕಂಡ ಗಾಂಧೀಜಿ ಸ್ವತಂತ್ರ ಭಾರತದ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದರು. ಅದರ ನಂತರ ಬದುಕುವ ಆಸೆಯನ್ನೇ ಕಳೆದುಕೊಂಡವರಂತೆ ಮಾತನಾಡುತ್ತಿದ್ದರು.
ನೌಖಾಲಿಗೆ ಭೇಟಿ ನೀಡಿದ್ದಾಗ ಸ್ವಾಗತಿಸಲು ಬಂದವರನ್ನು ಉದ್ದೇಶಿಸಿ ಮಾತನಾಡಿದ್ದ ಅವರು `ನಾನಿಲ್ಲಿ ಒಂದು ವರ್ಷ ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಕಾಲ ಇರಬಲ್ಲೆ. ಆದರೆ ಜನರ ಭರವಸೆ ಮತ್ತು ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗದೆ ಹೋದರೆ ಬದುಕುಳಿಯುವುದಕ್ಕಿಂತ ಸಾವೇ ಲೇಸು~ ಎಂದು ಹೇಳಿದ್ದರು.
ಅದಕ್ಕಿಂತ ಮೊದಲು ಹಿಂಸೆಯ ಬೆಂಕಿಯಿಂದ ಧಗಧಗಿಸುತ್ತಿದ್ದ ನೌಖಾಲಿಗೆ ಹೊರಟಿದ್ದ ಅವರನ್ನು ತಡೆಯಲು ಬಂದವರ ಜತೆ ಮಾತನಾಡಿದ್ದ ಗಾಂಧೀಜಿ `ನನ್ನನ್ನು ಈ ವರೆಗೆ ಬದುಕಿಸಿದ ಮತ್ತು ಆ ಬದುಕನ್ನು ಅರ್ಥಪೂರ್ಣವಾಗಿಸಿದ್ದ ಸಿದ್ಧಾಂತದ ಸತ್ವಪರೀಕ್ಷೆಗಾಗಿ ಮತ್ತು ಹೊಸ ಕಾರ್ಯತಂತ್ರದ ಶೋಧಕ್ಕಾಗಿ ಅಲ್ಲಿಗೆ ಹೊರಟಿದ್ದೇನೆ~ ಎಂದು ಹೇಳಿದ್ದರು.
ಹಿಂದೂ-ಮುಸ್ಲಿಮ್ ಸೌಹಾರ್ದ ಅವರಿಗೆ ಇನ್ನೊಂದು ರಾಜಕೀಯ ಕಾರ‌್ಯಕ್ರಮವಾಗಿರಲಿಲ್ಲ, ಜೀವನವಿಧಾನವಾಗಿತ್ತು. ಇದರಿಂದಾಗಿಯೇ ಕೋಮುಸಾಮರಸ್ಯವನ್ನು ಅವರು ಕೊನೆಯ ದಿನಗಳಲ್ಲಿ ಜೀವನ್ಮರಣದ ಪ್ರಶ್ನೆಯಾಗಿಯೇ ಸ್ವೀಕರಿಸಿದ್ದರು.
ಸುಮಾರು ಆರು ಸಾವಿರ ಜನ ಪ್ರಾಣ ಕಳೆದುಕೊಂಡಿದ್ದ ಕೋಲ್ಕತ್ತ ಕೋಮುಗಲಭೆಯ ನಂತರ ಪ್ರತೀಕಾರ ರೂಪದಲ್ಲಿ ನೌಖಾಲಿಯಲ್ಲಿ ಪ್ರಾರಂಭವಾದ ಕೋಮು ಸೇಡಿನ ಜ್ವಾಲೆಯನ್ನು ನಂದಿಸುವುದು ಗಾಂಧೀಜಿಯವರ ಕೈಯನ್ನೂ ಮೀರಿದ್ದು ಎಂದು ಎಲ್ಲರೂ ಭಾವಿಸಿದ್ದರು.

ಕಾಂಗ್ರೆಸ್‌ನ ಉಳಿದ ನಾಯಕರೆಲ್ಲ ದೆಹಲಿಯಲ್ಲಿ ಕೂತು ಸ್ವಾತಂತ್ರ್ಯದೇವತೆಯ ಸ್ವಾಗತಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಗಾಂಧೀಜಿ ತಮ್ಮ ಕೆಲವು ಆಪ್ತರನ್ನಷ್ಟೇ ಜತೆಯಲ್ಲಿಟ್ಟುಕೊಂಡು ಗಲಭೆಪೀಡಿತ ನೌಖಾಲಿಯಲ್ಲಿ ಪಾದಯಾತ್ರೆ ನಡೆಸಿದ್ದರು.
ಏಳು ವಾರಗಳ ಕಾಲ 116 ಮೈಲು ಕ್ರಮಿಸಿ ಅಲ್ಲಿನ 47 ಗ್ರಾಮಗಳಿಗೆ ಅವರು ಭೇಟಿ ನೀಡಿದ್ದರು. ಅಸಾಧ್ಯ ಎನಿಸಿದ್ದು ಸಾಧ್ಯವಾಗಿತ್ತು. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ನೌಖಾಲಿಯಲ್ಲಿ ನಂತರದ ದಿನಗಳಲ್ಲಿ ಕೋಮುಗಲಭೆ ನಡೆಯಲಿಲ್ಲ.
ಆದರೆ ನೌಖಾಲಿಯ ಯಶಸ್ಸಿನ ಖುಷಿ ಬಹಳ ದಿನ ಗಾಂಧೀಜಿಯವರಲ್ಲಿ ಉಳಿಯಲಿಲ್ಲ. ಸ್ವಾತಂತ್ರ್ಯ ಸಿಕ್ಕ ಒಂದು ತಿಂಗಳ ಅವಧಿಯಲ್ಲಿ ಕೋಲ್ಕತ್ತ ಮತ್ತೆ ಕೋಮುಗಲಭೆಗೆ ಆಹುತಿಯಾಗಿತ್ತು. ಈ ಬಾರಿ ಅವರು `ಮಾಡು ಇಲ್ಲವೇ ಮಡಿ~ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದರಂತೆ ಆಮರಣಾಂತ ಉಪವಾಸ ಕೈಗೊಳ್ಳಲು ನಿರ್ಧರಿಸಿದರು.
ಕೇವಲ 73 ಗಂಟೆಗಳ ಉಪವಾಸದ ಮೂಲಕವೇ ಗಾಂಧೀಜಿ ಕೋಲ್ಕತ್ತದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದರು. ಕೋಲ್ಕತ್ತದ ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಬಂದು `ಇನ್ನೆಂದು ಕೋಮುಗಲಭೆಗೆ ಅವಕಾಶ ನೀಡುವುದಿಲ್ಲ, ಅಂತಹದ್ದೇನಾದರೂ ನಡೆದರೆ ಪ್ರಾಣ ಕೊಟ್ಟಾದರೂ ಅದನ್ನು ತಡೆಯುತ್ತೇವೆ~ ಎಂದು ಭರವಸೆ ನೀಡಿದ್ದರು.
ಜೀವನದ ಕೊನೆಯ ಉಪವಾಸವನ್ನೂ ಅವರು ಕೈಗೊಂಡಿದ್ದು ಕೂಡಾ ಕೋಮು ಸೌಹಾರ್ದತೆಗಾಗಿ. ಆಗ ಉಳಿದೆಲ್ಲ ಕಡೆ ಕೋಮುಗಲಭೆ ನಿಯಂತ್ರಣಕ್ಕೆ ಬರುತ್ತಿದ್ದರೂ ರಾಜಧಾನಿ ದೆಹಲಿ ಮಾತ್ರ ಹೊತ್ತಿ ಉರಿಯುತ್ತಲೇ ಇತ್ತು. ಅದೇ ವೇಳೆ ವಿಭಜನೆಯ ಕಾಲದ ಒಪ್ಪಂದದಂತೆ ತಮಗೆ ಸಂದಾಯವಾಗಬೇಕಾಗಿದ್ದ ಬಾಕಿ  55 ಕೋಟಿ ರೂಪಾಯಿ ಪಾವತಿಸುವಂತೆ ಪಾಕಿಸ್ತಾನ ಒತ್ತಾಯಿಸುತ್ತಿತ್ತು.
ಆದರೆ ಕಾಶ್ಮೀರ ವಿವಾದ ಇತ್ಯರ್ಥವಾಗದೆ ಈ ಹಣವನ್ನು ಪಾವತಿ ಮಾಡಬಾರದೆಂಬ ಒತ್ತಡ ಸರ್ಕಾರದ ಮೇಲಿತ್ತು. ಇದರಿಂದಾಗಿ ದೇಶದೊಳಗೂ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ ಕೋಮುಗಲಭೆ ಸ್ಫೋಟಗೊಳ್ಳುವ ಸೂಚನೆ ಕಂಡ ಗಾಂಧೀಜಿ ಕೋಮುಸೌಹಾರ್ದಕ್ಕಾಗಿ ಉಪವಾಸ ಪ್ರಾರಂಭಿಸಿಯೇ ಬಿಟ್ಟರು.
1924ರಲ್ಲಿ ಮೊದಲ ಉಪವಾಸ ಕೈಗೊಂಡಿದ್ದಾಗ ಅವರಿಗೆ 54 ವರ್ಷ.  ಕೊನೆಯ ಉಪವಾಸ ಕೈಗೊಂಡಿದ್ದಾಗ ಅವರಿಗೆ 78. ಕೋಲ್ಕತ್ತ ಉಪವಾಸದಿಂದಾಗಿ ಆಗಲೇ ಅವರ ಮೂತ್ರಪಿಂಡಗಳು ಹಾನಿಗೀಡಾಗಿದ್ದವು.
ಉಪವಾಸದ ಕೊನೆಯ ದಿನಗಳಲ್ಲಿ ಅವರಿಗೆ ಚಾಪೆ ಬಿಟ್ಟು ಏಳಲಾಗುತ್ತಿರಲಿಲ್ಲ, ಮಾತು ನಿಂತುಹೋಗಿತ್ತು, ವೈದ್ಯರು ಕೈಚೆಲ್ಲಿ ಬಿಟ್ಟಿದ್ದರು. ಉಳಿದದ್ದು ಯಾವುದನ್ನೂ ಲೆಕ್ಕಿಸದೆ ಗಾಂಧೀಜಿ ಸಾಯಲು ಸಿದ್ಧರಾಗಿದ್ದರು. 121ಗಂಟೆ 30 ನಿಮಿಷಗಳ ಅವಧಿಯ ಉಪವಾಸದ ನಂತರ ಸರ್ಕಾರ ಮತ್ತು ಜನತೆ ಮಣಿಯಿತು, ಅವರು ಸಾವನ್ನು ಗೆದ್ದಿದ್ದರು.
ಆದರೆ ಅದೇ ದಿನ, ಇನ್ನೊಂದು ಕಡೆಯಿಂದ ಸಾವು ಅವರ ಬೆನ್ನಟ್ಟಿಕೊಂಡು ಬರುತ್ತಿತ್ತು. ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಅಪ್ಟೆ ಮುಂಬೈನ ವೀರ್ ಸಾವರ್ಕರ್ ಮನೆಯಿಂದ ಬೀಳ್ಕೊಂಡು ಮುಂಬೈ-ದೆಹಲಿ ವಿಮಾನ ಹತ್ತಿದ್ದರು. ಸರಿಯಾಗಿ ಹದಿಮೂರು ದಿನಗಳ ನಂತರ ಗೋಡ್ಸೆ ಪಿಸ್ತೂಲಿನ ಗುಂಡು ಗಾಂಧೀಜಿ ಎದೆ ಸೀಳಿತ್ತು.
ಗಾಂಧೀಜಿಯನ್ನು ಬಲಿ ತೆಗೆದುಕೊಂಡ ಒಬ್ಬ ಮತಾಂಧನ ಗುಂಡು, ಸಾವಿಗೆ ನೆಪ ಅಷ್ಟೆ. ದೇಶ ವಿಭಜನೆಯಾದಾಗಲೇ ಅವರು ಅರ್ಧ ಸತ್ತಿದ್ದರು, ಉಳಿದರ್ಧ ಜೀವವನ್ನು ಸ್ವಾತಂತ್ರ್ಯಾನಂತರ ಭುಗಿಲೆದ್ದ ಕೋಮುಗಲಭೆ ಬಲಿ ತೆಗೆದುಕೊಂಡು ಬಿಟ್ಟಿತ್ತು. ಅದರ ನಂತರ ನೂರಾರು ಬಾರಿ ಗಾಂಧೀಜಿ ಸತ್ತಿದ್ದಾರೆ.
2002ರ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ತನ್ನ ಹುಟ್ಟೂರಾದ ಗುಜರಾತ್‌ನಲ್ಲಿಯೂ ಅವರು ಸತ್ತಿದ್ದರು. ಆ ಹೊತ್ತಿನಲ್ಲಿ ಗಾಂಧೀಜಿ ಅಲ್ಲಿದ್ದರೆ ಏನು ಮಾಡುತ್ತಿದ್ದರು? ಆಗ ಸುಮ್ಮನಿದ್ದು, ಒಂಬತ್ತು ವರ್ಷಗಳ ನಂತರ ಹವಾ ನಿಯಂತ್ರಿತ ಸಭಾಂಗಣದಲ್ಲಿ ಮೂರು ದಿನಗಳ ಉಪವಾಸ ಮಾಡುತ್ತಿದ್ದರೇ? ಹಾಗಿದ್ದರೆ ಗಾಂಧೀಜಿಯಿಂದ ನಾವು ಕಲಿತದ್ದೇನು?

Monday, September 26, 2011

ಪ್ರಧಾನಿ ಹುದ್ದೆ ಖಾಲಿಯಾಗಿಲ್ಲ, ಪೈಪೋಟಿ ಪ್ರಾರಂಭ

ತನಗೊಲಿದು ಬಂದಿದ್ದ ಪ್ರಧಾನಿ ಪಟ್ಟವನ್ನು `ತ್ಯಾಗ~ ಮಾಡಿ ಆ ಸ್ಥಾನದಲ್ಲಿ ಮನಮೋಹನ್‌ಸಿಂಗ್ ಅವರನ್ನು ಕೂರಿಸಿದಾಗ ಒಂದಷ್ಟು ಸಂಸದರು ಸೋನಿಯಾಗಾಂಧಿ ಪರ ಕಣ್ಣೀರು ಸುರಿಸಿದ್ದು ಬಿಟ್ಟರೆ ಭಿನ್ನಮತದ ಸಣ್ಣ ಸೊಲ್ಲು ಕೂಡಾ ಕೇಳಿರಲಿಲ್ಲ. ಯುಪಿಎ ಸರ್ಕಾರದ ಮೊದಲ ಅವಧಿಯುದ್ದಕ್ಕೂ ಪ್ರಧಾನಿ ಕಾರ್ಯಾ ಲಯದ ಮುಂದೆ `ಹುದ್ದೆ ಖಾಲಿ ಇಲ್ಲ~ ಎನ್ನುವ ಬೋರ್ಡ್ ಇದ್ದ ಕಾರಣ ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಗಳು ಕೂಡಾ ಆಸೆಯನ್ನು ನುಂಗಿ ಕೊಂಡು ಪಾಲಿಗೆ ಬಂದದ್ದನ್ನು ಅನುಭವಿಸಿ ಕೊಂಡು ತೆಪ್ಪಗಿದ್ದರು. ಯಾರೂ ಬಾಗಿಲು ಬಡಿಯಲು ಹೋಗಿರಲಿಲ್ಲ. ಆದರೆ ಎರಡನೇ ಅವಧಿಯ ಎರಡನೇ ವರ್ಷ ಪ್ರಾರಂಭವಾಗು ತ್ತಿದ್ದಂತೆಯೇ ಒಂದಾದರ ಮೇಲೊಂದರಂತೆ ಹಗರಣಗಳು ಹೊರ ಬರುತ್ತಿರುವುದು ಮಾತ್ರವಲ್ಲ, ಅವುಗಳಲ್ಲಿ ಹೆಚ್ಚಿನವು ಪ್ರಧಾನಿ ಕಾರ್ಯಾಲಯದ ಸುತ್ತವೇ ಸುತ್ತುತ್ತಿರುವುದು ಕಾಂಗ್ರೆಸ್‌ನಲ್ಲಿರುವ ಹಿರಿತಲೆಗಳಲ್ಲಿ ಹಳೆಯ ಆಸೆ ಚಿಗುರೊಡೆಯಲು ಕಾರಣವಾಗಿದೆ. ಇದು ಯುಪಿಎ ಸರ್ಕಾರದಲ್ಲಿ ನಡೆಯುತ್ತಿರುವ `ಆಂತರಿಕ ಯುದ್ಧ~ಕ್ಕೆ ಕಾರಣ.
ಕಾರಣ ಇನ್ನೂ ಒಂದು ಇದೆ. ಮನಮೋಹನ್‌ಸಿಂಗ್ ಈಗಿನ ಅವಧಿಯನ್ನು ಪೂರ್ಣಗೊಳಿಸಿದರೆ ರಾಹುಲ್‌ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ಮುಂದಿನ ಚುನಾವಣೆ ಯನ್ನು ಎದುರಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ದಿನ ಕಳೆಯುತ್ತಿತ್ತು. ಆದರೆ ಈ ಹುದ್ದೆ ಎರಡನೇ ಅವಧಿಯ ಮಧ್ಯದಲ್ಲಿಯೇ ಖಾಲಿಯಾಗಬಹುದೆಂಬ ಕಲ್ಪನೆ ಪಕ್ಷಕ್ಕೆ ಇರಲಿಲ್ಲ. ಅನಿರೀಕ್ಷಿತವಾದ ಇಂತಹ ಬೆಳವಣಿಗೆಯನ್ನು ಎದುರಿಸಲು ಅದರಲ್ಲಿ ಸಿದ್ಧತೆ ಇಲ್ಲ. ಹಗರಣಗಳ ಕಳಂಕದಿಂದಾಗಿ ಪಕ್ಷದ ವರ್ಚಸ್ಸು ತೀವ್ರಗತಿಯಲ್ಲಿ ಕುಸಿಯುತ್ತಿರುವ ಈ ಸಮಯದಲ್ಲಿ ರಾಹುಲ್‌ಗಾಂಧಿಯವರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ ಹೆಸರು ಕೆಡಿಸಿಕೊ ಳ್ಳುವ ಮನಸ್ಸೂ ಸೋನಿಯಾಗಾಂಧಿಯವರಿ ಗಾಗಲಿ, ಅವರ ನಿಕಟವರ್ತಿಗಳಿಗಾಗಲಿ ಇದ್ದ ಹಾಗಿಲ್ಲ. ಆದ್ದರಿಂದ ಒಂದೊಮ್ಮೆ ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಈಗ ಸಂಪುಟದಲ್ಲಿರುವವ ರಲ್ಲಿಯೇ ಯಾರನ್ನಾದರೂ ಹುಡುಕಲೇಬೇಕಾ ಗುತ್ತದೆ. ಇದರ ವಾಸನೆ ಮೂಗಿಗೆ ಬಡಿದ ನಂತರವೇ ಪರಸ್ಪರ ಕೆಸರೆರೆಚುವ `ಸೋರಿಕೆ~ಗಳು ಪ್ರಾರಂಭವಾಗಿರುವುದು.
ಸದ್ಯಕ್ಕೆ ಸ್ಪರ್ಧಾ ಕಣದಲ್ಲಿರುವವರು ಇಬ್ಬರು. ಈ ಇಬ್ಬರ ಗುಣಾವಗುಣಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. ಇಬ್ಬರೂ ಬುದ್ಧಿವಂತರು, ಅನುಭವಿಗಳು ಮತ್ತು ಮಹತ್ವಾಕಾಂಕ್ಷಿಗಳು. ಇಬ್ಬರೂ ಉತ್ತರ ಭಾರತೀಯರಲ್ಲ, ಇಬ್ಬರ ಹಿಂದಿ ಭಾಷೆಯೂ ಅಷ್ಟಕ್ಕಷ್ಟೇ. ಇಬ್ಬರೂ ಒಂದಷ್ಟು ದಿನ ಕಾಂಗ್ರೆಸ್ ಬಿಟ್ಟು ಹೋಗಿ ಮತ್ತೆ ಸೇರಿಕೊಂಡವರು. ಯುಪಿಎ ಸರ್ಕಾರ ಈಗ ಪತನದ ಅಂಚಿಗೆ ಬಂದು ನಿಂತಿದ್ದರೆ ಅದಕ್ಕೆ ಇವರಿಬ್ಬರೂ ಕಾರಣ. ಇವರಿಬ್ಬರ ರಾಜಕೀಯ ಮಹತ್ವಾಕಾಂಕ್ಷೆಗಳ ನಡುವಿನ ಸಂಘರ್ಷ ಮಾತ್ರವಲ್ಲ, ಇವರು ಹೊಂದಿರುವ ಖಾತೆಗಳ ನಿರ್ವಹಣೆಯಲ್ಲಿನ ವೈಫಲ್ಯ ಕೂಡಾ ಯುಪಿಎ- 2ರ ಭವಿಷ್ಯವನ್ನು ಮಂಕುಗೊಳಿಸಿದೆ. ನಿಯಂತ್ರ ಣಕ್ಕೆ ಸಿಗದೆ ಜ್ವಲಿಸುತ್ತಿರುವ ದೇಶದ ಎರಡು ಸಮಸ್ಯೆಗಳಾದ ಬೆಲೆ ಏರಿಕೆ ಮತ್ತು ಆಂತರಿಕ ಅಭದ್ರತೆಗೆ ಹಣಕಾಸು ಮತ್ತು ಗೃಹ ಖಾತೆಗಳನ್ನು ಹೊಂದಿರುವ ಇವರಲ್ಲದೆ ಮತ್ತೆ ಯಾರು ಹೊಣೆ? ಮೇಲ್ನೋಟಕ್ಕೆ ಈ ಇಬ್ಬರ ನಡುವೆ ಕಾಣುವ ಏಕೈಕ ವ್ಯತ್ಯಾಸವೆಂದರೆ ಒಬ್ಬರದ್ದು ಬಂಗಾಳಿ ಕಚ್ಚೆ, ಇನ್ನೊಬ್ಬರದ್ದು ಮದ್ರಾಸಿ ಪಂಚೆ. ಈ ಇಬ್ಬರಲ್ಲಿ ಒಬ್ಬರು ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಇನ್ನೊಬ್ಬರು ಗೃಹಸಚಿವ ಪಳನಿಯಪ್ಪನ್ ಚಿದಂಬರಂ.
ಚಿದಂಬರಂ ಅವರಿಗೆ ಹೋಲಿಸಿದರೆ ಪ್ರಧಾನಿ ಹುದ್ದೆಗೆ ಪ್ರಣಬ್ ಮುಖರ್ಜಿ ಹೆಚ್ಚು ಅರ್ಹರು ಎಂಬುದರಲ್ಲಿ ಅನುಮಾನ ಇಲ್ಲ. ಅವರ ಅನುಭವ, ಸಾಧನೆ ಮತ್ತು ಇಲ್ಲಿಯವರೆಗೆ ಹಗರಣಗಳಿಂದ ಮುಕ್ತವಾದ ವಿವಾದಾತೀತ ವ್ಯಕ್ತಿತ್ವ ಯಾರಲ್ಲಿಯಾದರೂ ಗೌರವ ಹುಟ್ಟಿಸು ವಂತಹದ್ದು. ಎಂತಹ ಬಿಕ್ಕಟ್ಟನ್ನಾದರೂ ಲೀಲಾ ಜಾಲವಾಗಿ ಬಗೆಹರಿಸಬಲ್ಲಂತಹ ಸಾಮರ್ಥ್ಯ ಈ `ಬಂಗಾಳಿ ದಾದಾ~ನಿಗೆ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಮುಂಬೈನ 9/11 ಭಯೋತ್ಪಾದಕರ ದಾಳಿ ನಡೆದಾಗ ಪಾಕಿಸ್ತಾನಕ್ಕೆ ಕಟುಮಾತುಗಳ ಎಚ್ಚರಿಕೆ ಕೊಟ್ಟಿದ್ದು ವಿದೇಶಾಂಗ ಸಚಿವರಲ್ಲ, ಪ್ರಣಬ್ ಮುಖರ್ಜಿ. ಅಣ್ಣಾ ಹಜಾರೆ ಚಳವಳಿಯನ್ನು ನಿಭಾಯಿಸಲಾಗದೆ ಸೋತು ಹೋಗಿದ್ದಾಗ ಕೊನೇ ಕ್ಷಣದಲ್ಲಿ ಬಿಕ್ಕಟ್ಟನ್ನು ಬಗೆಹರಿಸಿದ್ದು ಇದೇ ಪ್ರಣಬ್ ಮುಖರ್ಜಿ. ಮುಳುಗುತ್ತಿರುವಂತೆ ಕಾಣುತ್ತಿರುವ ಯುಪಿಎ ಹಡಗನ್ನು ಕೈಗೆ ಕೊಟ್ಟರೆ ಈ ಸ್ಥಿತಿಯಲ್ಲಿಯೂ ಇವರು ಅದನ್ನು ದಡ ಸೇರಿಸಿದರೆ ಅಚ್ಚರಿ ಏನಿಲ್ಲ.
ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿಯಾಗಲು ಈ ಅರ್ಹತೆಗಳು ಸಾಕಾಗುವುದಿಲ್ಲ. ಅಂತಿಮವಾಗಿ ಆ ಪಕ್ಷದಲ್ಲಿನ ಸ್ಥಾನಮಾನ ನಿರ್ಧಾರವಾ ಗುವುದು ನೆಹರೂ ಕುಟುಂಬದ ಮೇಲಿರುವ ನಿಷ್ಠೆಯ ಆಧಾರದ ಮೇಲೆ. ಈ ಒಂದು ವಿಷಯದಲ್ಲಿ ಪ್ರಣಬ್ ಮುಖರ್ಜಿ ಎಡವಿದ್ದಾರೆ. ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಪ್ರಧಾನಿ ಪಟ್ಟಕ್ಕೆ ತಮ್ಮದು ಸಹಜ ಆಯ್ಕೆ ಎಂದು ಅವರು ತಿಳಿದುಕೊಂಡಿದ್ದರು. ಇದನ್ನು ಆ ಕ್ಷಣದಲ್ಲಿ ತಮ್ಮ ಜತೆಯಲ್ಲಿದ್ದ ರಾಜೀವ್‌ಗಾಂಧಿಯವರಿಗೆ ಪ್ರಣಬ್ ಪರೋಕ್ಷವಾಗಿ ತಿಳಿಸಿದ್ದೇ ಪ್ರಮಾದವಾಗಿ ಹೋಯಿತು. ಇವರ ಮಹತ್ವಾಕಾಂಕ್ಷೆ ಕಂಡು ಬೆಚ್ಚಿಬಿದ್ದಿರಬಹುದಾದ ರಾಜೀವ್‌ಗಾಂಧಿ,  ಅವರನ್ನು ಸಂಪುಟಕ್ಕೂ ಸೇರಿಸದೆ ಹೊರಗಿಟ್ಟಿದ್ದರು. ಈ ರೀತಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಪ್ರಣಬ್ ಕೊನೆಗೆ ಪಕ್ಷವನ್ನೇ ತ್ಯಜಿಸಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‌ರಂತಹವರ ಜತೆಗೂಡಿ ಸ್ವಂತ ಪಕ್ಷ ಕಟ್ಟಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜೀವ್‌ಗಾಂಧಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯ ಇರುವಾಗಲೇ ಹೊರಗೆ ಕತ್ತು ಚಾಚಿರುವ ಪ್ರಣಬ್ ಮುಖರ್ಜಿ, ಪಕ್ಷದ ಈಗಿನ ದುರ್ಬಲ ಸ್ಥಿತಿಯಲ್ಲಿ ನಿಷ್ಠರಾಗಿ ಉಳಿಯ ಬಲ್ಲರೇ ಎಂಬ ಆತಂಕ ಸೋನಿಯಾಗಾಂಧಿ ಮತ್ತು ಅವರ ಬಂಟರಿಗೆ ಇದ್ದಂತೆ ಕಾಣುತ್ತಿದೆ.
ಪಿ.ಚಿದಂಬರಂ ಅವರೂ ಒಂದಷ್ಟು ವರ್ಷ ಕಾಂಗ್ರೆಸ್ ತೊರೆದು ಹೋದವರು. ಆದರೆ ಆ ಕಾಲದಲ್ಲಿ ಕಾಂಗ್ರೆಸ್ ಪಕ್ಷ ನೇರವಾಗಿ ನೆಹರೂ ಕುಟುಂಬದ ಸದಸ್ಯರ ಕೈಯಲ್ಲಿ ಇರಲಿಲ್ಲ ಎನ್ನುವ ಅಂಶವೊಂದು ಅವರ ರಕ್ಷಣೆಗೆ ಇದೆ. 1996ರಲ್ಲಿ ಜಯಲಲಿತಾ ಜತೆಯಲ್ಲಿನ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ತ್ಯಜಿಸಿ `ತಮಿಳು ಮಾನಿಲಾ ಕಾಂಗ್ರೆಸ್~ (ಟಿಎಂಸಿ) ಸೇರಿದ್ದರು. ಅಧಿಕಾರ ಕಳೆದುಕೊಂಡಿದ್ದ ಆ  ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ಸೀತಾರಾಮ್ ಕೇಸರಿ. ಟಿಎಂಸಿಯಿಂದ ಆಯ್ಕೆಯಾಗಿದ್ದ ಚಿದಂಬರಂ ಸಂಯುಕ್ತರಂಗದ ಸಂಪುಟದಲ್ಲಿ ಹಣಕಾಸು ಸಚಿವರೂ ಆಗಿದ್ದರು.
ಅಧಿಕಾರ ಇಲ್ಲದೆ ವನವಾಸದಲ್ಲಿದ್ದಾಗ ದೂರ ಇದ್ದ ಚಿದಂಬರಂ 2004ರ ಚುನಾವಣೆಯ ಹೊತ್ತಿಗೆ ಮತ್ತೆ ಕಾಂಗ್ರೆಸ್ ಸೇರಿಕೊಂಡವರು. ಪಕ್ಷ ನಿಷ್ಠೆಯ ವಿಷಯದಲ್ಲಿ ಪ್ರಣಬ್ ಅವರಂತೆ ಚಿದಂಬರಂ ಅವರು ನೆಹರೂ ಕುಟುಂಬಕ್ಕೆ ಸವಾಲು ಹಾಕದೆ ಇರುವ ಕಾರಣ ಈ `ನಿಷ್ಠಾಂತರ~ವನ್ನು ಸೋನಿಯಾ ಕುಟುಂಬ ಕ್ಷಮಿಸಿದ ಹಾಗಿದೆ. ಈ ಕಾರಣದಿಂದಾಗಿಯೇ ಒಂದೊಮ್ಮೆ ಮನಮೋಹನ್‌ಸಿಂಗ್ ಅವರನ್ನು ಬದಲಾವಣೆ ಮಾಡುವ ಸಂದರ್ಭ ಎದುರಾದರೆ ಪಿ. ಚಿದಂಬರಂ ಒಬ್ಬ ಪ್ರಮುಖ ಅಭ್ಯರ್ಥಿ ಎನ್ನುವ ಬಗ್ಗೆ ಚರ್ಚೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಒಳಚಾವಡಿಗಳಲ್ಲಿ ಚರ್ಚೆಯಾಗುತ್ತಿತ್ತು.
ಆದರೆ ಪ್ರಣಬ್ ಅವರಂತೆ ಚಿದಂಬರಂ ಹಗರಣಗಳಿಂದ ಮುಕ್ತರಾದವರೂ ಅಲ್ಲ. ಷೇರು ಹಗರಣದಲ್ಲಿ ಶಾಮೀಲಾಗಿದ್ದ `ಫೇರ್‌ಗ್ರೋತ್~ ಕಂಪೆನಿಯಲ್ಲಿನ ಬಂಡವಾಳ ಹೂಡಿಕೆ, ವಿವಾದಾತ್ಮಕ ವೇದಾಂತ ಗಣಿ ಕಂಪೆನಿಯ ಆಡಳಿತ ಮಂಡಳಿಯ ಸದಸ್ಯತ್ವ. ಹೀಗೆ ಹಲವಾರು ವಿವಾದಗಳಲ್ಲಿ ಚಿದಂಬರಂ ಪಾತ್ರ ಚರ್ಚೆ ಯಾಗಿದೆ. ಆದರೆ ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇಂತಹ ಎಲ್ಲ ಕಳಂಕಗಳನ್ನು ಮುಚ್ಚಿ ಹಾಕುತ್ತಾ ಬಂದಿದೆ. ಮುಂಬೈನಲ್ಲಿ 9/11 ಪಾಕ್ ಭಯೋತ್ಪಾದಕರ ದಾಳಿ ನಡೆದ ನಂತರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ಚಿದಂಬರಂ ಹೆಚ್ಚು ಕಡಿಮೆ ಒಂದು ವರ್ಷ ಎಲ್ಲರ ಕಣ್ಮಣಿಯಾಗಿದ್ದರು. ಮಾವೋವಾದಿಗಳು ಮತ್ತು ಭಯೋತ್ಪಾದನೆ ಬಗೆಗಿನ ಅವರ ನಿಲುವುಗಳನ್ನು ವಿರೋಧಪಕ್ಷವಾದ ಬಿಜೆಪಿ ಕೂಡಾ ಕೊಂಡಾ ಡಿತ್ತು. `ಕೆಟ್ಟ ಪಕ್ಷದಲ್ಲಿರುವ ಒಳ್ಳೆಯ ವ್ಯಕ್ತಿ~ ಎಂದು ಬಣ್ಣಿಸುವವರೆಗೆ ಬಿಜೆಪಿ ನಾಯಕರ `ಚಿದಂಬರ ಪ್ರೀತಿ~ ಉಕ್ಕಿ ಹರಿದಿತ್ತು.
ಬಹುಶಃ ಈ ಯಶಸ್ಸು ಮತ್ತು ಅಭಿನಂದ ನೆಗಳಿಂದಾಗಿಯೋ ಏನೋ ಚಿದಂಬರಂ ಹೆಚ್ಚು ಹೆಚ್ಚು ದುರಹಂಕಾರಿಯಾಗುತ್ತಾ ಹೋದರು. ಯುಪಿಎ ಸಂಪುಟದಲ್ಲಿ ಅವರು ಹೆಚ್ಚು ಕಡಿಮೆ ಎಲ್ಲರ ಜತೆ ಕಾಲು ಕೆರೆದು ಜಗಳ ಮಾಡಿದ್ದಾರೆ. ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಪಾಕಿಸ್ತಾನದ ಪ್ರವಾಸದಲ್ಲಿದ್ದಾಗ ಇತ್ತ ಗೃಹಖಾತೆ ಕಾರ‌್ಯದರ್ಶಿ ಜಿ.ಕೆ.ಪಿಳ್ಳೆ ಹೇಳಿಕೆ ನೀಡಿ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಐಎಸ್‌ಐ ಸಂಪೂರ್ಣ ವಾಗಿ ಪಾಲ್ಗೊಂಡಿತ್ತು ಎಂದು ಆರೋಪಿಸಿ ಮುಜುಗರಕ್ಕೀಡು ಮಾಡಿದ್ದರು.
ಪ್ರಣಬ್ ಅವರ ಬಜೆಟ್ ಬಗ್ಗೆ ಪತ್ರಿಕಾ ಸಂದರ್ಶ ನದಲ್ಲಿಯೇ ಟೀಕೆ ಮಾಡಿದ್ದರು. ಜಾತಿಗಣತಿ ಆಗಬೇಕೆಂದು ಸಂಪುಟ ಸಭೆಯಲ್ಲಿ ಪ್ರಣಬ್ ಹೇಳಿದಾಗ ಅದನ್ನು ವಿರೋಧಿಸಿದ್ದರು. ಮಾವೋವಾದಿಗಳ ದಮನಕ್ಕೆ ಸೇನೆಯನ್ನು ಬಳಸಬೇಕೆಂಬ ಚಿದಂಬರಂ ಹೇಳಿಕೆಯನ್ನು ಆಂಟನಿ ವಿರೋಧಿಸಿದ್ದರು. ಜ್ಞಾನೇಶ್ವರಿ ರೈಲು ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂಬ ಮಮತಾ ಬ್ಯಾನರ್ಜಿ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಇಂಧನ ಖಾತೆ ಸಚಿವ ಸುಶೀಲ್‌ಕುಮಾರ್ ಶಿಂಧೆ ಚೀನಾದಿಂದ ವಿದ್ಯುತ್ ಸಲಕರಣೆಗಳನ್ನು ಆಮದು ಮಾಡಿ ಕೊಳ್ಳುವುದನ್ನು ವಿರೋಧಿಸಿದ್ದರು. ತೆಲಂಗಾಣ ಚಳವಳಿಯನ್ನು ಸರಿಯಾಗಿ ಗ್ರಹಿಸಲಾಗದೆ ಕೈಗೊಂಡ ಅವಸರದ ತೀರ್ಮಾನದಿಂದಾಗಿ ಆಂಧ್ರಪ್ರದೇಶ ಕಾಂಗ್ರೆಸ್ ಕೈಬಿಟ್ಟು ಹೋಗುತ್ತಿದೆ. ಇತ್ತೀಚಿಗೆ ಅಣ್ಣಾ ಹಜಾರೆ ಅವರನ್ನು ಬಂಧಿಸುವ ಮೂರ್ಖ ತೀರ್ಮಾನ ಕೂಡಾ ಅವರದ್ದೇ. ಗೃಹಸಚಿವರಾಗಿ ಮೊದಲ ಒಂದು ವರ್ಷ ಸಾಧಿಸಿದ್ದ ಯಶಸ್ಸನ್ನು ಅದರ ನಂತರ ಮುಂದುವರಿಸಿಕೊಂಡು ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಪುಣೆಯ ಜರ್ಮನ್ ಬೇಕರಿ ಮೇಲೆ ನಡೆದ ದಾಳಿಯಿಂದ ಇತ್ತೀಚಿನ ದೆಹಲಿ ಹೈಕೋರ್ಟ್ ಆವರಣದಲ್ಲಿ ನಡೆದ ದಾಳಿಯ ವರೆಗೆ ಚಿದಂಬರಂ ಅವರ ಸರಣಿ ವೈಫಲ್ಯ ಮುಂದುವರಿದಿದೆ. ಇನ್ನೊಂದೆಡೆ ಮಾವೋ ವಾದಿಗಳ ಹಿಂಸಾಚಾರವನ್ನು ನಿಯಂತ್ರಿಸಲು ಕೂಡಾ ಅವರು ಸೋತಿದ್ದಾರೆ.
ಇದೇ ಹೊತ್ತಿಗೆ ಸರಿಯಾಗಿ 2ಜಿ ತರಂಗಾಂತರ ಹಗರಣದಲ್ಲಿ ಅವರ ಪಾತ್ರವನ್ನು ವಿವರಿಸುವ ಅಧಿಕೃತ ದಾಖಲೆ ಪತ್ರಗಳು  ಹೊರಬೀಳುತ್ತಿವೆ. ಮನಮೋಹನ್‌ಸಿಂಗ್ ಕುರ್ಚಿ ಅಲ್ಲಾಡು ತ್ತಿರುವುದಕ್ಕೂ ಈ ಸೋರಿಕೆಗೂ ಸಂಬಂಧ ಇಲ್ಲ ಎಂದು ಹೇಳುವ ಹಾಗಿಲ್ಲ. ರಾಜಕೀಯ ಬೆಳವಣಿಗೆಗಳೆಲ್ಲವೂ ಕಾಕತಾಳೀಯವಾಗಿ ನಡೆಯುವುದಿಲ್ಲ. 2ಜಿ ತರಂಗಾಂತರ ಹಗರಣದ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಡಿ ಕೆಲವು ದಾಖಲೆಗಳನ್ನು ಕೇಳಿದ್ದ ಬಿಜೆಪಿ ಕಾರ‌್ಯಕರ್ತ, ಪ್ರಧಾನಿ ಕಾರ‌್ಯಾಲಯದಿಂದ ಬಂದಿರುವ ದಾಖಲೆಗಳ ಕಂತೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆ ನಿರೀಕ್ಷೆ ಅವರಿಗೆ ಇರಲಿಲ್ಲ.
ಪ್ರಧಾನಿ ಕಾರ್ಯಾಲಯದ ಈ ಔದಾರ‌್ಯ ಸಹಜ ವಾದುದಲ್ಲ. ಇದರ ಹಿಂದೆ ಕೆಲವರು ಹಣಕಾಸು ಸಚಿವರ, ಇನ್ನು ಕೆಲವರು ಮನಮೋಹನ್‌ಸಿಂಗ್ ಅವರಿಗೆ ಆತ್ಮೀಯವಾಗಿರುವ ಅಧಿಕಾರಿಗಳ ಕೈವಾಡವನ್ನು ಕಾಣುತ್ತಿದ್ದಾರೆ. ಘಟನೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ಚಿದಂಬರಂ ನಿರ್ಗಮನ ಖಚಿತ ವಾದಂತಿದೆ. ತಮ್ಮನ್ನು ಭೇಟಿಯಾಗಲು ಬಯಸಿದ್ದ ಚಿದಂಬರಂ ಅವರಿಗೆ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವಕಾಶ ನಿರಾಕರಿಸಿರುವುದು ಇದರ ಮೊದಲ ಸೂಚನೆ.
ಮುಂದಿನ ಸರದಿ ಯಾರದ್ದು ಎನ್ನುವುದಷ್ಟೇ ಈಗಿನ ಪ್ರಶ್ನೆ. ಅದು ಮನಮೋಹನ್‌ಸಿಂಗ್ ಅವರದ್ದೇ ಆಗಿದ್ದರೆ ಪ್ರಣಬ್ ಮುಖರ್ಜಿಯವರು ವರ್ಷಗಳಿಂದ ಕಾವು ಕೊಟ್ಟು ಇಟ್ಟುಕೊಂಡಿರುವ ಕನಸು ನನಸಾದೀತು. 2ಜಿ ತರಂಗಾಂತರ ಹಗರಣ ದಿನದಿಂದ ದಿನಕ್ಕೆ ಪಡೆಯುತ್ತಿರುವ ತಿರುವು ಗಳನ್ನು ನೋಡಿದರೆ ಮುಂದಿನ ಸರದಿ ಪ್ರಣಬ್ ಮುಖರ್ಜಿ ಅವರದ್ದೂ ಆಗಬಹುದು. ಅಂತಹದ್ದೇನಾದರೂ ನಡೆದರೆ ಮನಮೋಹನ್‌ಸಿಂಗ್ ಕುರ್ಚಿ ಒಂದಷ್ಟು ಕಾಲ ಸುರಕ್ಷಿತ. ಇದಕ್ಕಲ್ಲವೇ ರಾಜಕೀಯವನ್ನು ಚದುರಂಗದಾಟ ಎನ್ನುವುದು.

Monday, September 19, 2011

ಮೋದಿ ಒಂದು ವಾಸ್ತವ, ಅವರನ್ನು ಎದುರಿಸಿ

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಮರೆಯಲ್ಲಿ ನಿಂತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಡೆ  ಕಲ್ಲು ಹೊಡೆಯುತ್ತಾ ಎಷ್ಟು ದಿನಗಳನ್ನು ಹೀಗೆ ಕಳೆಯಬಹುದು? ಗುಜರಾತ್ ನರಮೇಧ ನಡೆದು ಒಂಬತ್ತು ವರ್ಷಗಳು ಕಳೆದಿವೆ.  ಹತ್ತಾರು ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.
ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಮೋದಿ ವಿರುದ್ಧ ನೂರಾರು ಆರೋಪಗಳನ್ನು ಮಾಡಿವೆ, ಈ ದೇಶದ ಅನೇಕ ಪ್ರಮುಖ ಸಾಹಿತಿಗಳು, ಕಲಾವಿದರು, ಚಿಂತಕರು ಮತ್ತು ಸಾಮಾಜಿಕ ಸೇವಾ ಕಾರ‌್ಯಕರ್ತರು ಕೂಡಾ ಮೋದಿ ವಿರುದ್ದ ದನಿ ಎತ್ತಿದ್ದಾರೆ.
ಅಷ್ಟೇ ಆಕ್ರಮಣಕಾರಿಯಾಗಿ ನರೇಂದ್ರ ಮೋದಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ, ಎಲ್.ಕೆ.ಅಡ್ವಾಣಿ ಸೇರಿದಂತೆ ಅವರ ಪಕ್ಷದ ಪ್ರಮುಖ ನಾಯಕರು ಕೂಡಾ ಬಹಿರಂಗವಾಗಿ ಮೋದಿ ಬೆಂಬಲಕ್ಕೆ ನಿಂತು ಮಾತನಾಡಿದ್ದಾರೆ.
  ಇವೆಲ್ಲವನ್ನು ಮಾಧ್ಯಮಗಳು ಪುಟಗಟ್ಟಲೆ ಬರೆದಿವೆ, ಚಾನೆಲ್‌ಗಳು ಸಾವಿರಾರು ಗಂಟೆಗಳ ಕಾಲ ಪ್ರಸಾರ ಮಾಡಿವೆ. ಮಾಧ್ಯಮಗಳು ಸ್ವತಂತ್ರವಾಗಿ ತನಿಖೆ ನಡೆಸಿ ವರದಿಗಳನ್ನು ಪ್ರಕಟಿಸಿವೆ.
ಬಹುಶಃ ನರೇಂದ್ರ ಮೋದಿ ಅವರ `ಹಳೆಯ ಪಾಪ~ಗಳ ಬಗ್ಗೆ ಹೊಸದಾಗಿ ಹೇಳುವಂತಹದ್ದು ಈಗ ಏನೂ ಉಳಿದಿಲ್ಲ. ಅವರ ವ್ಯಕ್ತಿತ್ವದ ಒಳಿತು-ಕೆಡುಕುಗಳೆರಡೂ ಈಗ ದೇಶದ ಜನರ ಮುಂದಿವೆ. ಅವರೇ ಈಗ ತೀರ್ಮಾನ ಮಾಡಬೇಕಾಗಿದೆ.
ಯಾರು ಒಪ್ಪಲಿ ಬಿಡಲಿ, ಮೋದಿ ಅವರು ಈಗ ರಾಷ್ಟ್ರ ರಾಜಕಾರಣದ ಕಡೆ ಹೆಜ್ಜೆ ಹಾಕಿದ್ದಾರೆ. ಇಲ್ಲಿಯ ವರೆಗೆ ಯಾವ ಕಾನೂನು ಕೂಡಾ ಅವರು ಅಪರಾಧಿ ಎಂದು ತೀರ್ಪು ನೀಡದಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅರ್ಹರಾಗಿದ್ದಾರೆ.
ಆದ್ದರಿಂದ ಅವರನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಇನ್ನೂ ಅವರನ್ನು ಪತ್ರಿಕೆಗಳ ಪುಟಗಳಲ್ಲಿ ಮತ್ತು ಟಿವಿ ಚಾನೆಲ್‌ಗಳ ಚರ್ಚಾಕೂಟಗಳಲ್ಲಿ  ಹಳಿಯುತ್ತಾ ಕಾಲ ಕಳೆಯುವುದರಲ್ಲಿ ಏನೂ ಅರ್ಥ ಇಲ್ಲ. ವಿರೋಧಿಗಳ ಪಾಲಿಗೆ ಈಗ ಉಳಿದಿರುವ ಏಕೈಕ ದಾರಿ ಎಂದರೆ ಅವರನ್ನು ಮುಖಾಮುಖಿ ಎದುರಿಸುವುದು.
`ಧೈರ್ಯವಿದ್ದರೆ ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಮುಂದಿನ ಲೋಕಸಭಾ ಚುನಾವಣೆ ಎದುರಿಸಿ~ ಎಂದು ಭಾರತೀಯ ಜನತಾ ಪಕ್ಷಕ್ಕೆ ಸವಾಲು ಹಾಕುವಂತಹ ದಿಟ್ಟತನವನ್ನು ಮೋದಿ ವಿರೋಧಿ ನಾಯಕರು ತೋರಬೇಕು.
ಈ ಸವಾಲನ್ನು ಕಾಂಗ್ರೆಸ್ ಪಕ್ಷವೇ ಬಿಜೆಪಿ ಕಡೆ ಎಸೆದರೆ ಆ ಪಕ್ಷಕ್ಕೂ ಒಳ್ಳೆಯದು. ಇದಕ್ಕೆ ಕಾರಣ ಇದೆ. `ಉಳಿದವರು ಏನೇ ಹೇಳಲಿ  `ಜನತಾ ನ್ಯಾಯಾಲಯ~ ತನ್ನನ್ನು ನಿರ್ದೋಷಿ ಎಂದು ಸಾರಿದೆ~ ಎಂದು ಅನೇಕ ಬಾರಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಈ ನಿರಪರಾಧಿತನದ ಸರ್ಟಿಫಿಕೇಟನ್ನು  ಅವರು ಎದೆ ಮೇಲೆ ಹಚ್ಚಿಕೊಳ್ಳಲು ಗುಜರಾತ್ ನರಮೇಧದ ನಂತರ ಆ ರಾಜ್ಯದಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಗಳು ಹಾಗೂ ಎರಡು ಲೋಕಸಭಾ ಚುನಾವಣೆಗಳಲ್ಲಿನ ಗೆಲುವು ಕಾರಣ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮೂಲಕವೇ  ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನ ಭವಿಷ್ಯ ನಿರ್ಧಾರವಾಗುವುದು.
2002ರ ವಿಧಾನಸಭಾ ಚುನಾವಣೆಯ ಸಮೀಕ್ಷೆಗಾಗಿ ಗುಜರಾತ್ ರಾಜ್ಯದಲ್ಲಿ ನಾನು ಪ್ರವಾಸ ಮಾಡಿದ್ದೆ. ಒಂಬತ್ತು ತಿಂಗಳು ಮೊದಲು ಅದೇ ರಾಜ್ಯದಲ್ಲಿ ನಡೆದ ಕೋಮುಗಲಭೆಯ ಪ್ರತ್ಯಕ್ಷ ವರದಿಗೆಂದು ಹೋಗಿದ್ದ  ನಾನು ಕೋಮುವಾದದ ಕರಾಳ ಮುಖಗಳನ್ನು ಕಣ್ಣಾರೆ ನೋಡಿದ್ದ ಕಾರಣ  ಮೋದಿ ಒಂದು ಬಾರಿ ಸೋಲಬೇಕಿತ್ತು ಎಂದು ನನ್ನ ಒಳಮನಸ್ಸು ಹಾರೈಸುತ್ತಿತ್ತು.
ಆದರೆ ಆ ರಾಜ್ಯವನ್ನು ಹತ್ತು ದಿನಗಳ ಕಾಲ ಸುತ್ತಾಡಿದ ನಂತರ ನರೇಂದ್ರ ಮೋದಿ ಗೆಲುವು ಖಚಿತ ಎಂದು ಅರಿವಾಗಿತ್ತು. (ಹಾಗೆಯೇ ವರದಿಯನ್ನೂ ಮಾಡಿದ್ದೆ). 2002ರ ನಂತರ ನಡೆದಿರುವ ಚುನಾವಣೆಗಳಲ್ಲಿ ನರೇಂದ್ರ ಮೋದಿ ಗೆಲ್ಲಲು ಕಾರಣಗಳನ್ನು ನಾವು ಹುಡುಕಿ ತೆಗೆಯಬಹುದು.
ಆದರೆ ಮೋದಿ ಮೊದಲು ಎದುರಿಸಿದ ಚುನಾವಣೆಯ ಕಾಲದಲ್ಲಿ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ಆರೋಪಗಳು ಮಾತ್ರವಲ್ಲ, ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದಿಂದ ಹಿಡಿದು ಕೇಶುಭಾಯಿ ಪಟೇಲ್ ಬೆಂಬಲಿಗರ ವಿರೋಧದ ವರೆಗೆ ಎಲ್ಲವೂ ಮೋದಿ ವಿರುದ್ಧವೇ ಇದ್ದವು.

ಆದರೆ ಎಲ್ಲರ ಬಾಯಿ ಮುಚ್ಚಿಸುವ ರೀತಿಯಲ್ಲಿ ಮೋದಿ ಗೆಲುವು ಸಾಧಿಸಿದ್ದರು. ದೂರದಲ್ಲಿ ನಿಂತು ನೋಡುವವರಿಗೆ ಜನರ ಆಯ್ಕೆ ತಪ್ಪು ಎಂದು ಅನಿಸಬಹುದು. ಅಂತಿಮವಾಗಿ ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ನಿಯಮ.
`ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿ~ ಎಂದು ಸವಾಲು ಹಾಕುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎನ್ನುವುದು ಈಗಿನ ಮೊದಲ ಪ್ರಶ್ನೆ. ಈ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆನ್ನುವುದು ಹೆಚ್ಚು ಕಡಿಮೆ ತೀರ್ಮಾನವಾಗಿದೆ.
ರಾಹುಲ್‌ಗಾಂಧಿಗೆ ಮನಸ್ಸಿದೆಯೋ, ಇಲ್ಲವೋ ಗೊತ್ತಿಲ್ಲ, ಅದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಯುವ ನಾಯಕನನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಕಾಂಗ್ರೆಸ್‌ಪಕ್ಷಕ್ಕೆ ಅನಿವಾರ‌್ಯವಾಗಿದೆ.
ಮನಮೋಹನ್‌ಸಿಂಗ್ ಈ ಲೋಕಸಭೆಯ ಅವಧಿ ಮುಗಿಯುವ ವರೆಗೆ ಪ್ರಧಾನಿ ಪಟ್ಟದಲ್ಲಿ ಉಳಿದರೆ ಹೆಚ್ಚು. ಮುಂದಿನ ಚುನಾವಣೆಯಲ್ಲಿ ಅವರು ಖಂಡಿತ ಪ್ರಧಾನಿ ಅಭ್ಯರ್ಥಿ ಆಗಲಾರರು.
ಎರಡನೇ ಸಾಲಿನಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ವಯಸ್ಸೂ ಆಗಿದೆ, ಅವರ ಮೇಲೆ ನೆಹರೂ ಕುಟುಂಬಕ್ಕೆ ವಿಶ್ವಾಸವೂ ಕಡಿಮೆ. ಪಿ.ಚಿದಂಬರಂ ಒಬ್ಬ ವಿಫಲ ನಾಯಕ. ಎ.ಕೆ.ಆಂಟನಿ ಅವರಿಗೆ ಅವರ ಧರ್ಮವೇ ಅಡ್ಡಿಯಾಗಬಹುದು. ಆದ್ದರಿಂದ ರಾಹುಲ್ ಗಾಂಧಿ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆ ಗತಿ ಇಲ್ಲ.
ಮುಂದಿನ ಲೋಕಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ದೊಡ್ಡ ಅನುಕೂಲತೆಯೆಂದರೆ ರಾಹುಲ್ ಗಾಂಧಿಯ ಯುವ ನಾಯಕತ್ವ ಎಂದು ಅವರ ಪಕ್ಷದವರು ಮಾತ್ರವಲ್ಲ ವಿರೋಧಪಕ್ಷಗಳು ಕೂಡಾ ಹೇಳುತ್ತಿದ್ದವು.
ಬಹುಸಂಖ್ಯೆಯ ಮತದಾರರು ಯುವಜನರೇ ಆಗಿರುವುದು ಇದಕ್ಕೆ ಒಂದು ಕಾರಣವಾದರೆ, ವಿರೋಧಪಕ್ಷಗಳಲ್ಲಿ ಈ ವಯಸ್ಸಿನ ಯುವನಾಯಕರು ಇಲ್ಲದಿರುವುದು ಇನ್ನೊಂದು ಕಾರಣ.
ಆದರೆ ನರೇಂದ್ರ ಮೋದಿಯವರಂತಹ ಒಬ್ಬ ಆಕ್ರಮಣಕಾರಿ ನಾಯಕನನ್ನು ಎದುರಿಸಲು ಈ ಅನುಕೂಲತೆಯಷ್ಟೇ ಸಾಕಾದೀತೇ? ಕಳೆದ ಏಳು ವರ್ಷಗಳಿಂದ ಲೋಕಸಭಾ ಸದಸ್ಯರಾಗಿರುವ ರಾಹುಲ್ ಗಾಂಧಿ ಒದಗಿಬಂದ ಅವಕಾಶವನ್ನು ಬಳಸಿಕೊಂಡು ನಾಯಕನಾಗುವ ಅರ್ಹತೆಯನ್ನು ಸಾಬೀತುಪಡಿಸುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ.
ಒಂದೆರಡು ಬಾರಿ ಲಿಖಿತ ಪ್ರತಿ ಕೈಯಲ್ಲಿಟ್ಟುಕೊಂಡು ಮಾಡಿದ ಭಾಷಣಗಳನ್ನು ಹೊರತುಪಡಿಸಿದರೆ ಸದನದಲ್ಲಿ ನಡೆದ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಾಧಿಸಿದ್ದ ಗೆಲುವಿನ ಕಿರೀಟ ಕೂಡಾ ಬಿಹಾರ ಚುನಾವಣೆಯಲ್ಲಿ ಬಿದ್ದುಹೋಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ತನ್ನ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ತಾತ್ಕಾಲಿಕವಾಗಿ ಮಗನಿಗೆ ಬಿಟ್ಟುಕೊಟ್ಟಿದ್ದರು. ಇದನ್ನು ಬಳಸಿಕೊಳ್ಳುವ ಅವಕಾಶ ಕೂಡಾ ಅಣ್ಣಾಹಜಾರೆ ಚಳವಳಿಯಿಂದಾಗಿ ನಿರ್ಮಾಣವಾಗಿದ್ದ ರಾಜಕೀಯ ಬಿಕ್ಕಟ್ಟಿನ ಮೂಲಕ ಒದಗಿ ಬಂದಿತ್ತು.
ರಾಹುಲ್ ಪ್ರವೇಶಿಸಿ ಆಟವನ್ನೇ ಬದಲಿಸಲಿದ್ದಾರೆ ಎಂದು ಕಾಂಗ್ರೆಸ್ ಭಟ್ಟಂಗಿಗಳು ಹೇಳುತ್ತಲೇ ಇದ್ದರು, ಆದರೆ ಅವರು ಆಟದ ಅಂಗಳವನ್ನು ಪ್ರವೇಶಿಸಲೇ ಇಲ್ಲ. ಲಿಖಿತ ಭಾಷಣವೊಂದನ್ನು ಲೋಕಸಭೆಯಲ್ಲಿ ಓದಿ ಕೈತೊಳೆದುಕೊಂಡು ಬಿಟ್ಟರು. ನರೇಂದ್ರಮೋದಿ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಿದರೆ ಕಾಂಗ್ರೆಸ್ ಪಾಲಿನ ದೊಡ್ಡ ಸಮಸ್ಯೆ ಮೋದಿ ಅಲ್ಲ, ರಾಹುಲ್ ಗಾಂಧಿ.
ನರೇಂದ್ರಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಹಾಕಿದರೆ ಬಿಜೆಪಿ ಅದನ್ನು ಸ್ವೀಕರಿಸಲು ಸಿದ್ಧ ಇದೆಯೇ ಎನ್ನುವುದು ಎರಡನೇ ಪ್ರಶ್ನೆ. ಮೋದಿ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ.
ಕೆಲವು ದಿನಗಳ ಹಿಂದೆಯಷ್ಟೇ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರ ವಿರೋಧಿ ಯಾತ್ರೆ ನಡೆಸುವುದಾಗಿ ಸ್ವಇಚ್ಛೆಯ ಹೇಳಿಕೆ ನೀಡಿ ಅವರ ಪಕ್ಷದ ನಾಯಕರನ್ನೇ ಚಕಿತಗೊಳಿಸಿದ್ದರು.
ತಾನು ಪ್ರಧಾನಿ ಪಟ್ಟದ ಅಭ್ಯರ್ಥಿ ಎಂಬ ಸೂಚನೆಯನ್ನು ನೀಡುವುದಕ್ಕಾಗಿಯೇ ಈ ಯಾತ್ರೆಯ ಘೋಷಣೆ ಮಾಡಿದ್ದಾರೆಂಬ ವ್ಯಾಖ್ಯಾನಗಳು ಆ ದಿನದಿಂದಲೇ ಕೇಳಿಬರುತ್ತಿವೆ.
ಇವೆಲ್ಲವೂ ನಡೆಯುತ್ತಿರುವಾಗ ನರೇಂದ್ರ ಮೋದಿ ಅವರು ದಿಢೀರನೆ `ಸದ್ಭಾವನಾ ಉಪವಾಸ~ ಕಾರ‌್ಯಕ್ರಮ ಹಮ್ಮಿಕೊಂಡಿದ್ದಾರೆ. ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಈ ಉಪವಾಸಕ್ಕೆ ಪ್ರೇರಣೆ ಎಂದು ಹೇಳಿಕೊಂಡರೂ ಅದರಲ್ಲಿರುವ ಗುಪ್ತ ಕಾರ‌್ಯಸೂಚಿಯನ್ನು ನಿರ್ಲಕ್ಷಿಸಲಾಗದು.

ಮೂರು ದಿನಗಳ ಹಿಂದೆ ಅಡ್ವಾಣಿ ಅವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದೆಂದು ಹೇಳುತ್ತಿದ್ದ ಮಾಧ್ಯಮಗಳು ಆಗಲೇ ಆ ಸ್ಥಾನದಲ್ಲಿ ನರೇಂದ್ರ ಮೋದಿ ಅವರನ್ನು ಕೂರಿಸಿ ಚರ್ಚೆ ನಡೆಸುತ್ತಿವೆ.
ಇವೆಲ್ಲವೂ ಅನಿರೀಕ್ಷಿತ ಬೆಳವಣಿಗೆಗಳಂತೆ ಮೇಲ್ನೋಟಕ್ಕೆ ಕಂಡರೂ ಇದರ ಆಳದಲ್ಲಿ ಒಂದು ವ್ಯವಸ್ಥಿತವಾದ ಪೂರ್ವಯೋಜಿತ ಕಾರ‌್ಯತಂತ್ರ ಇರುವುದನ್ನು ಅಲ್ಲಗಳೆಯಲಾಗದು. ಇದು ಎಲ್ಲರಿಗಿಂತ ಮೊದಲು ಅಡ್ವಾಣಿಯವರಿಗೆ ಗೊತ್ತಾಗಿದೆ. ಅದಕ್ಕಾಗಿ ಅವರು ಮೋದಿ ಅವರಿಗೆ ಬೆಂಬಲ ಘೋಷಿಸಲು ಹಾರಿ ಹೋಗಿದ್ದಾರೆ.
ಇಷ್ಟು ಮಾತ್ರಕ್ಕೆ ಬಿಜೆಪಿಯಲ್ಲಿ ಮೋದಿ ಒಮ್ಮತದ ನಾಯಕ ಎಂದು ಹೇಳಲಾಗದು, ಯಾಕೆಂದರೆ ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿಲ್ಲ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಗೈರುಹಾಜರಿ ಕೂಡಾ ಎದ್ದು ಕಾಣುವಂತಿದೆ. ಬಿಜೆಪಿಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ.

ನರೇಂದ್ರಮೋದಿ ಅವರನ್ನು ಒಮ್ಮತದಿಂದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಮಾತ್ರಕ್ಕೆ ಅವರು ಆ ಸ್ಥಾನದಲ್ಲಿ ಹೋಗಿ ಕೂರಲು ಸಾಧ್ಯವಾಗಲಾರದು. ಅದು ಸಾಧ್ಯವಾಗಬೇಕಾದರೆ ಬಹುಮತ ಸಾಬೀತುಪಡಿಸಲು  ಅಗತ್ಯವಾದ 272 ಲೋಕಸಭಾ ಸ್ಥಾನಗಳನ್ನು ಸ್ವಂತ ಬಲದಿಂದ ಗೆಲ್ಲಬೇಕಾಗುತ್ತದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕನಿಷ್ಠ ಅಧಿಕಾರದ ಕನಸನ್ನಾದರೂ ಕಾಣಬೇಕಾದರೆ ಮೈತ್ರಿಕೂಟವನ್ನು ಕಟ್ಟಿಕೊಳ್ಳುವುದು ಬಿಜೆಪಿಗೆ ಅನಿವಾರ‌್ಯ. ಈಗ ಇರುವ ಮಿತ್ರಪಕ್ಷಗಳ ಜತೆಯಲ್ಲಿ ಹೊಸಮಿತ್ರರ ಕೈ ಹಿಡಿಯಬೇಕಾಗುತ್ತದೆ.
ಅಂತಹ ಸಂದರ್ಭದಲ್ಲಿ ಬಿಜೆಪಿ ಪಾಲಿನ ದೊಡ್ಡ ಸಮಸ್ಯೆ ನರೇಂದ್ರ ಮೋದಿ ಆಗಬಲ್ಲರು. ಚಂದ್ರಬಾಬು ನಾಯ್ಡು, ರಾಮ್‌ವಿಲಾಸ್ ಪಾಸ್ವಾನ್ ಮೊದಲಾದವರು ಬಿಜೆಪಿ ಸಖ್ಯ ಮುರಿದುಕೊಂಡದ್ದು ಮೋದಿಯವರ ಕಾರಣದಿಂದಲ್ಲವೇ?
ನರೇಂದ್ರ ಮೋದಿ ಅವರು ಎಷ್ಟು ದಿನಗಳ ಉಪವಾಸ ಮಾಡಿದರೂ, ಮುಸ್ಲಿಂ ನಾಯಕರನ್ನು ಕರೆಸಿ ಅಪ್ಪಿಮುದ್ದಾಡಿದರೂ ದೇಶದ ಮುಸ್ಲಿಮರು ಅವರನ್ನು ಒಪ್ಪಿಕೊಳ್ಳುವುದು ಕಷ್ಟ. ಇದರಿಂದಾಗಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿರುವ ಯಾವ ಪಕ್ಷ ಕೂಡಾ ಮೋದಿ ನಾಯಕತ್ವದ ಬಿಜೆಪಿ ಜತೆ ಕೈಜೋಡಿಸಲು ಮುಂದೆ ಬರಲಾರದು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಹಲವಾರು ಬಾರಿ ಈ ಸಂದೇಶ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಶಿವಸೇನೆ ಮತ್ತು ಅಕಾಲಿದಳಗಳಷ್ಟೇ ಎನ್‌ಡಿಎ ಜತೆ ಉಳಿದುಕೊಳ್ಳಬಹುದು.
ಈ ಮಿತ್ರರ ನೆರವಿನಿಂದಲೇ ಬಿಜೆಪಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗದು. ಈ ದೃಷ್ಟಿಯಿಂದ ನರೇಂದ್ರಮೋದಿ ಅವರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇಂತಹವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು  ಅಪಾಯಕಾರಿ ಜೂಜಾಟ.

ಅದಕ್ಕೆ ಬಿಜೆಪಿ ಸಿದ್ಧ ಇದೆಯೇ? ಕಾಂಗ್ರೆಸ್ ಕೇಳಬೇಕಾಗಿರುವುದು ಈ ಪ್ರಶ್ನೆಯನ್ನು. ಆ ಧೈರ್ಯ ಅದಕ್ಕೂ ಇಲ್ಲ. ಅದಕ್ಕಾಗಿ ಸುಮ್ಮನೆ ಮರೆಯಲ್ಲಿ ನಿಂತು ಬೊಬ್ಬೆ ಹಾಕುತ್ತಿದೆ.

Monday, September 12, 2011

ಅಡ್ವಾಣಿ ಆಗಬೇಕಾಗಿರುವುದು ಕೃಷ್ಣ, ಅರ್ಜುನ ಅಲ್ಲ

ಪ್ರಧಾನಿ ಪಟ್ಟ ಎಲ್ಲೋ ಮರೆಯಿಂದ ಕಣ್ಣು ಮಿಟುಕಿಸುತ್ತಿರುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅನಿಸಿರಬಹುದು. ಇಲ್ಲದಿದ್ದರೆ ಅವರ ಸುತ್ತ ಇರುವ ವಂದಿಮಾಗಧರು `ನಿಮ್ಮ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಇದೇ ಸಮಯ, ನುಗ್ಗಿಬಿಡಿ~ ಎಂದು 84 ವರ್ಷದ ನಾಯಕನನ್ನು ಹುರಿದುಂಬಿಸಿರಬಹುದು.
ಇಂತಹ ಒತ್ತಡಗಳು ಇಲ್ಲದೆ ಇರುತ್ತಿದ್ದರೆ ಆಗಲೇ ವಾನಪ್ರಸ್ಥಾಶ್ರಮದ ಕಡೆಗೆ ಹೊರಟಿದ್ದ ಅಡ್ವಾಣಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ರಥಯಾತ್ರೆ ಹೊರಡುವ ಘೋಷಣೆ ಮಾಡುತ್ತಿರಲಿಲ್ಲ.
ಇಷ್ಟೊಂದು ದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಬೆವರು ಸುರಿಸಿರುವ ನಾಯಕನೊಬ್ಬ ಪ್ರಧಾನಿಯಾಗುವ ಕನಸು ಕಂಡರೆ ಅದು ತಪ್ಪೇ? ಖಂಡಿತ ಅಲ್ಲ. ಆ ಪದವಿಗೇರುವ ಅರ್ಹತೆಯೂ ಅವರಿಗಿಲ್ಲವೇ? ಖಂಡಿತ ಇದೆ. ಆದರೆ ರಥಯಾತ್ರೆಗೆ ಪಡೆದಿರುವ ಪ್ರೇರಣೆ ಮತ್ತು ಘೋಷಿತ ಉದ್ದೇಶ ಎರಡರಲ್ಲಿಯೂ ಅಡ್ವಾಣಿ ಎಡವಿದಂತಿದೆ.
ಪ್ರೇರಣೆ : `ವೋಟಿಗಾಗಿ ನೋಟು~ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಸೇರಿರುವ ಇಬ್ಬರು ಮಾಜಿ ಲೋಕಸಭಾ ಸದಸ್ಯರ ಬಂಧನ. ಉದ್ದೇಶ: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ.
`ವೋಟಿಗಾಗಿ ನೋಟು~ ಹಗರಣದಲ್ಲಿ ಈ ವರೆಗೆ ಜೈಲಿಗೆ ಹೋಗಿರುವವರು ಕಾಂಗ್ರೆಸ್ ಪಕ್ಷದವರಲ್ಲದೆ ಇರಬಹುದು, ಆದರೆ ಅದು ಆ ಪಕ್ಷದ `ಪಾಪದ ಪಿಂಡ~ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ದೆಹಲಿ ಪೊಲೀಸರು ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಂತರಂಗದ ಚಾವಡಿಯ ಹಿರಿತಲೆಗಳೂ ಜೈಲು ಸೇರಬಹುದು.
 `ವಿರೋಧಪಕ್ಷಗಳ ಸದಸ್ಯರನ್ನು ಖರೀದಿಸಬೇಕಾಗಿರಲಿಲ್ಲ, ಸದನದಲ್ಲಿ ಪಡೆದ ಬಹುಮತವೇ ಇದಕ್ಕೆ ಸಾಕ್ಷಿ~ ಎಂದು ಕಾಂಗ್ರೆಸ್ ನಾಯಕರು ಈಗ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕೊನೆಗೂ ಗೆದ್ದದ್ದು ಕೇವಲ 19 ಮತಗಳಿಂದ ಎನ್ನುವುದನ್ನು ಮರೆಯಬಾರದು.

ಆ 19 ಮತಗಳಲ್ಲಿ ಹದಿಮೂರು ಮತಗಳು ವಿರೋಧಪಕ್ಷಗಳ ಸದಸ್ಯರು ನಡೆಸಿದ ಅಡ್ಡಮತದಾನದಿಂದ ಗಳಿಸಿದ್ದು. ಎಂಟು ಮಂದಿ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲ ವಿರೋಧಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ವಿಪ್ ಗೌರವಿಸಿ ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರೆ ಯುಪಿಎ ಸರ್ಕಾರ ಉಳಿಯುತ್ತಿತ್ತೇ? ಅದೊಂದು ತಾಂತ್ರಿಕವಾದ ಗೆಲುವು, ನೈತಿಕವಾದುದಲ್ಲ. ಆದರೆ ಈ ಹಗರಣದಲ್ಲಿ ಬಿಜೆಪಿ ಪಾತ್ರವೇನೂ ಕಡಿಮೆ ಇರಲಿಲ್ಲ.
ಲಾಲ್‌ಕೃಷ್ಣ ಅಡ್ವಾಣಿ ಅವರು ಸುಮಾರು ನಾಲ್ಕು ದಶಕಗಳಿಂದ ಸಂಸತ್ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ-ಗೌರವ ಪ್ರಶ್ನಾತೀತ. ಅದರ ಆಶಯಗಳಿಗೆ ಭಂಗ ಉಂಟಾದಾಗಲೆಲ್ಲ ಅವರು ಸಿಡಿದೆದ್ದವರು.
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಒಪ್ಪಿಕೊಂಡರೂ ಅವರು ಹಿಡಿದಿರುವ ಹಾದಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವಂತಹದ್ದು ಎಂಬ ಕಾರಣಕ್ಕಾಗಿ ವಿರೋಧವನ್ನು ಹೊಂದಿದ್ದವರು.
ಆದರೆ, ಇದೇ ಅಡ್ವಾಣಿಯವರು ಲೋಕಸಭೆಯಲ್ಲಿ ಎದ್ದು ನಿಂತು `ವೋಟಿಗಾಗಿ ನೋಟು~ ಹಗರಣದ `ಕುಟುಕು ಕಾರ್ಯಾಚರಣೆ~ಯ ಸೂತ್ರಧಾರ ತಾನೆಂದು ಘೋಷಿಸಿಕೊಳ್ಳುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಒಬ್ಬ ಸಂಸದನ ಮಾನ ಮತ್ತು ಪ್ರಾಣಕ್ಕೆ ಬೆದರಿಕೆ ಎದುರಾದರೆ ಆತ ಮೊದಲು ಮಾಡಬೇಕಾಗಿರುವ ಕೆಲಸ ಸಭಾಧ್ಯಕ್ಷರಿಗೆ ದೂರು ನೀಡುವುದು. ಯಾಕೆಂದರೆ ಸಂಸದರ ರಕ್ಷಣೆಯ ಭಾರವನ್ನು ಸಂವಿಧಾನವೇ ಸಭಾಧ್ಯಕ್ಷರಿಗೆ ನೀಡಿದೆ. ಈ ಹಗರಣದಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಸದರಿಗೆ ಆಮಿಷವೊಡ್ಡಿದ್ದರೆ ಅಡ್ವಾಣಿಯವರು ಮೊದಲು ಮಾಡಬೇಕಾಗಿದ್ದ ಕೆಲಸ ಅವರನ್ನು ಕರೆದೊಯ್ದು ಲೋಕಸಭಾಧ್ಯಕ್ಷರಿಗೆ ದೂರು ಕೊಡಿಸುವುದು, ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸುವುದು.
ಇದು ಸಂಸದೀಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೇಲೆ ನಂಬಿಕೆ ಇರುವ ವ್ಯಕ್ತಿ ಮಾಡಬೇಕಾದ ಕೆಲಸ. ಆದರೆ ಅಡ್ವಾಣಿಯವರು ಮಾಡಿಸಿದ್ದು `ಕುಟುಕು ಕಾರ್ಯಾಚರಣೆ~. ಅವರು ಯಾಕೆ ಇಂತಹ ಅಡ್ಡಮಾರ್ಗ ಹಿಡಿದರು? ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಮೇಲೆಯೂ ಅವರಿಗೆ ನಂಬಿಕೆ ಇರಲಿಲ್ಲವೇ? ಬೇರೆ ಏನಾದರೂ ಉದ್ದೇಶ ಇತ್ತೇ?
`ದೂರು ನೀಡಿದ್ದರೆ ಆಡಳಿತ ಪಕ್ಷವನ್ನು ಎಚ್ಚರಿಸಿದಂತಾಗುತ್ತಿತ್ತು, ಈ ಹಗರಣ ಬಯಲಿಗೆ ಬರುತ್ತಿರಲಿಲ್ಲ~ ಎಂದು ಅಡ್ವಾಣಿ ಅವರ ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಬಣ್ಣ ಬಯಲು ಮಾಡಲು ಇವರೇ ಮಾಡಿಸಿಟ್ಟುಕೊಂಡಿದ್ದ `ಕುಟುಕು ಕಾರ್ಯಾಚರಣೆ~ಯ ಸಿಡಿ ಇತ್ತಲ್ಲ?
ಲೋಕಸಭಾಧ್ಯಕ್ಷರಿಂದ ನ್ಯಾಯ ಸಿಗದೆ ಇದ್ದಾಗ ಆ ಸಿಡಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಜೆಪಿ ಹಿಡಿದದ್ದು ಅಡ್ಡಮಾರ್ಗ. ಅದು ಒಂದು ಖಾಸಗಿ ಟಿವಿ ಚಾನೆಲ್ ಜತೆ ಕೂಡಿಕೊಂಡು `ಕುಟುಕು ಕಾರ್ಯಾಚರಣೆ~ ನಡೆಸಿ, ಲೋಕಸಭೆಗೆ ಬಂದು ನೋಟಿನ ಕಂತೆಗಳನ್ನು ಲೋಕಸಭಾಧ್ಯಕ್ಷರ ಮುಂದೆ ಸುರಿದದ್ದು. ಈ ಅಡ್ಡಮಾರ್ಗವನ್ನು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಈಗ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.
ಸತ್ಯ ಸಂಗತಿ ಏನೆಂದರೆ, ಲೋಕಸಭಾಧ್ಯಕ್ಷರು ಇಲ್ಲವೇ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಬಿಜೆಪಿ `ಕುಟುಕು ಕಾರ್ಯಾಚರಣೆ~ ನಡೆಸಿ ಸದನದಲ್ಲಿ ನೋಟಿನ ಕಂತೆ ಪ್ರದರ್ಶಿಸಿದ್ದಲ್ಲ.
ವಿಶ್ವಾಸ ಮತ ಯಾಚನೆಯ ಮೊದಲೇ ಬಿಜೆಪಿ ನಾಯಕರಿಗೆ ಫಲಿತಾಂಶ ಗೊತ್ತಾಗಿ ಹೋಗಿತ್ತು. ಬಿಜೆಪಿಯ ಏಳೆಂಟು ಸದಸ್ಯರು ಸೇರಿದಂತೆ ಬೇರೆಬೇರೆ ಪಕ್ಷಗಳಿಗೆ ಸೇರಿರುವ 15-20 ಸದಸ್ಯರು ವಿಶ್ವಾಸಮತ ಗೊತ್ತುವಳಿ ಪರ ಮತ ಚಲಾಯಿಸಲು ಇಲ್ಲವೇ ಮತದಾನದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿರುವ ಸುಳಿವು ವಿರೋಧಪಕ್ಷಗಳ ನಾಯಕರಿಗೆ ಸಿಕ್ಕಿತ್ತು (ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಮಂಜುನಾಥ್ ಕುನ್ನೂರು, ಎಚ್.ಟಿ.ಸಾಂಗ್ಲಿಯಾನಾ ಮತ್ತು ಮನೋರಮಾ ಮಧ್ವರಾಜ್ ಪಕ್ಷದ ವಿಪ್ ಉಲ್ಲಂಘಿಸಿ ಗೊತ್ತುವಳಿ ಪರ ಮತ ಚಲಾಯಿಸಲಿದ್ದಾರೆ ಎಂಬ `ಸ್ಕೂಪ್~ ಸುದ್ದಿ ವಿಶ್ವಾಸಮತ ಯಾಚನೆಯ ದಿನವೇ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿತ್ತು).
ಅಂತಿಮವಾಗಿ ಬಿಜೆಪಿಯ ನಾಲ್ಕು ಸದಸ್ಯರು ಸೇರಿದಂತೆ  ಬೇರೆ ವಿರೋಧಪಕ್ಷಗಳ ಹದಿಮೂರು ಲೋಕಸಭಾ ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ಎಂಟು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿದ್ದರು.
ಈ ಫಲಿತಾಂಶವನ್ನು ನಿರೀಕ್ಷಿಸಿದ್ದ ಬಿಜೆಪಿ ನಾಯಕರು `ಯುಪಿಎ ಸರ್ಕಾರ ಪಡೆದ ಬಹುಮತ ಪವಿತ್ರವಾದುದಲ್ಲ, ಕಳಂಕಿತವಾದುದು~ ಎನ್ನುವುದನ್ನು ಸಾಬೀತುಪಡಿಸಲು ಅನುಸರಿಸಿದ ಮಾರ್ಗವೇ ಟಿವಿ ಚಾನೆಲ್ ಜತೆಗೂಡಿ ನಡೆಸಿದ್ದ `ಕುಟುಕು ಕಾರ್ಯಾಚರಣೆ~.
ಆದರೆ ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಾವು ಹಾನಿ ಮಾಡುತ್ತಿದ್ದೇವೆ ಎಂಬ ಅರಿವು ಆ ಕಾಲದಲ್ಲಿ ಅಳಿವು-ಉಳಿವುಗಳ ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಆಗಿರಲಿಲ್ಲ. ಮೂರು ವರ್ಷಗಳ ನಂತರವಾದರೂ ಅದರ ಅರಿವು ಬಿಜೆಪಿಗೆ ಆಗಿರಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಡ್ವಾಣಿ ಅವರ ಆವೇಶಭರಿತ ಹೇಳಿಕೆಯಿಂದ ನಿರಾಸೆಯಾಗಿದೆ.ಪಕ್ಷ ಮಾಡಿರುವ ತಪ್ಪನ್ನು ಸರಿಪಡಿಸಬೇಕಾಗಿದ್ದ ಈ ಹಿರಿಯ ನಾಯಕ ಆ ತಪ್ಪನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.
ಎರಡನೆಯದಾಗಿ ಅಡ್ವಾಣಿ ಅವರ ರಥಯಾತ್ರೆಯ ಘೋಷಿತ ಉದ್ದೇಶ -ಅದು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ. ಅಡ್ವಾಣಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಸಂಶಯಿಸುವುದು ಸಾಧ್ಯ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆಗೆ ಹೊರಟರೆ ಅವರ ಜತೆಯಲ್ಲಿ ಹೋಗುವವರು ಯಾರು?
ಈಗ ಹೈದರಾಬಾದ್‌ನ ಜೈಲಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋದರರನ್ನು ತಮ್ಮ ಮಕ್ಕಳ ಸಮಾನ ಎಂದು ಮೊನ್ನೆ ಮೊನ್ನೆವರೆಗೂ ಹೇಳುತ್ತಿದ್ದ ಸುಷ್ಮಾ ಸ್ವರಾಜ್ ಅವರೇ? ಗಣಿ ಅಕ್ರಮದ ಗಂಭೀರ ಆರೋಪಗಳನ್ನೊಳಗೊಂಡ ತನಿಖಾ ವರದಿಯನ್ನು ಕರ್ನಾಟಕದ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ  ಬಹಿರಂಗ ಸಭೆಯಲ್ಲಿ ಅವರ ಜತೆ ಪಾಲ್ಗೊಂಡು ಕಾಣಿಕೆಗಳನ್ನು ಸ್ವೀಕರಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ?
ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಇರುವ ಲೋಕಾಯುಕ್ತರ ನೇಮಕವನ್ನು ಏಳುವರ್ಷಗಳಿಂದ ಮುಂದೂಡುತ್ತಾ ಬಂದಿರುವ ನರೇಂದ್ರ ಮೋದಿಯವರೇ?
ಹುಡ್ಕೋ ಹಗರಣದ ಸುಳಿಯಿಂದ ಇನ್ನೂ ಮುಕ್ತರಾಗದೆ ಇರುವ ಅನಂತಕುಮಾರ್ ಅವರೇ? ಭ್ರಷ್ಟಾಚಾರದ ಹಲವು ಹಗರಣಗಳಲ್ಲಿ ಸಿಲುಕಿ ನ್ಯಾಯಾಲಯಕ್ಕೆ ಸುತ್ತುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?
ಭ್ರಷ್ಟಾಚಾರದ ಆರೋಪದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ರಮೇಶ್ ಪೋಖ್ರಿಯಾಲ್ ಅವರೇ? ಈಗಾಗಲೇ ಜೈಲಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ? ಬಂಧನದ ಭೀತಿಯಲ್ಲಿರುವ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಮತ್ತು ಶ್ರಿರಾಮುಲು ಅವರೇ? ಇವರೆಲ್ಲರನ್ನೂ ಬಲ್ಲ, ಇವರೆಲ್ಲ ನಡೆಸುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡೂ ಬಾಯಿ ಮುಚ್ಚಿಕೊಂಡು ಕೂತಿರುವ ಆರ್‌ಎಸ್‌ಎಸ್ ನಾಯಕರೇ? ಯಾರು?
ಅಚ್ಚರಿಯ ಸಂಗತಿಯೆಂದರೆ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದದ್ದು ಕಳೆದ ಒಂದೆರಡು ತಿಂಗಳುಗಳ ಅವಧಿಯಲ್ಲಲ್ಲ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನ ಮಾತನಾಡುತ್ತಿರುವ ಬಳ್ಳಾರಿಯ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆಯ ಸಂಗತಿ ತಮಗೆ ಗೊತ್ತಿರಲಿಲ್ಲ ಎಂದು ಹೇಳುವಷ್ಟು ಅಡ್ವಾಣಿಯವರು ಅಜ್ಞಾನಿಯಲ್ಲ.
`ಆಪರೇಷನ್ ಕಮಲ~ಕ್ಕೆ ಬಳಕೆಯಾಗಿದ್ದ ಹಣ, ಅದಕ್ಕಿಂತಲೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಿಂದ ರವಾನೆಯಾಗಿರುವ ನಿಧಿ ಯಾವ ಮೂಲದಿಂದ ಬಂದಿರುವುದೆಂದು ತಿಳಿಯದಷ್ಟು ಅಡ್ವಾಣಿ ಅಮಾಯಕರೂ ಅಲ್ಲ.
ಹೌದು, ಅವರು ಈಗ ಎಲ್ಲ ರೀತಿಗಳಿಂದಲೂ ಸ್ಥಾನ ವಂಚಿತರು. ಅವರು ಪಕ್ಷದ ಅಧ್ಯಕ್ಷರಲ್ಲ, ವಿರೋಧಪಕ್ಷದ ನಾಯಕರಲ್ಲ, ಅಧಿಕಾರ ಮೊದಲೇ ಇಲ್ಲ. ಆದರೆ `ಆಪರೇಷನ್ ಕಮಲ~ ನಡೆದಾಗ ವಿರೋಧಪಕ್ಷದ ನಾಯಕರಾಗಿದ್ದರಲ್ಲ? ಪ್ರಧಾನಿ ಅಭ್ಯರ್ಥಿ ಎಂದೇ ಆ ಕಾಲದಲ್ಲಿ ಪಕ್ಷ ಬಿಂಬಿಸಿತ್ತಲ್ಲ? ಅದಕ್ಕಿಂತ ಬೇರೆ ಅಧಿಕಾರ ಏನು ಬೇಕಿತ್ತು? ಆಗಲೂ ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ತಮ್ಮವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿರಲಿಲ್ಲ.
ಈ ಎಲ್ಲ ಪ್ರಶ್ನೆಗಳಿಗೆ ಅಡ್ವಾಣಿಯವರು ತಮ್ಮ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ಉತ್ತರಿಸಬೇಕಾಗುತ್ತದೆ. ಜನತೆಯ ಪ್ರಶ್ನೆಗಳನ್ನು `ರಾಜಕೀಯ ಪ್ರೇರಿತ~ ಎಂದು ಪಕ್ಕಕ್ಕೆ ತಳ್ಳಿಬಿಡಬಹುದು, ಆದರೆ ಆತ್ಮಸಾಕ್ಷಿ ಕೇಳುವ ಪ್ರಶ್ನೆಗೆ? ಉತ್ತರಿಸಬೇಕಾಗಿರುವ ಪ್ರಶ್ನೆ ಇನ್ನೂ ಒಂದು ಇದೆ.
ಅಡ್ವಾಣಿಯವರು ತಮ್ಮ ಮೊದಲ ರಥಯಾತ್ರೆ ಪ್ರಾರಂಭಿಸಿದ್ದು 21 ವರ್ಷಗಳ ಹಿಂದೆ. ಈ ಎರಡು ದಶಕಗಳ ಅವಧಿಯಲ್ಲಿ ಅಡ್ವಾಣಿ ಅವರ ವಯಸ್ಸು ಹೆಚ್ಚಿದೆ, ಭಾರತದ ಮತದಾರರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಇದಕ್ಕೆ ಅನುಗುಣವಾಗಿ ದೇಶದ ಸಾಮಾಜಿಕ-ರಾಜಕೀಯ ಚಿತ್ರ ಬದಲಾಗಿ ಹೋಗಿದೆ.

ಅಣ್ಣಾ ಹಜಾರೆ ಚಳವಳಿಯಲ್ಲಿ ಪಾಲ್ಗೊಂಡವರ ಸರಾಸರಿ ವಯಸ್ಸು 30-40ಕ್ಕಿಂತ ಹೆಚ್ಚಿರಲಾರದು. ಈ ಯುವಸಮುದಾಯ 84 ವರ್ಷದ ನಾಯಕನನ್ನು ಒಪ್ಪುವುದೇ? ಅದೂ ಎದುರಾಳಿ ಪಕ್ಷದಲ್ಲಿ 40ರ ವಯಸ್ಸಿನ ನಾಯಕನಿರುವಾಗ.
ಅಡ್ವಾಣಿಯವರದ್ದು ಈಗ `ಶ್ರಿಕೃಷ್ಣ~ನಾಗುವ ವಯಸ್ಸು, `ಅರ್ಜುನ~ನಾಗುವುದಲ್ಲ. `ಅರ್ಜುನ~ನನ್ನು ಅವರೇ ಆರಿಸಿ ರಥಕ್ಕೆ ಹತ್ತಿಸಿಕೊಳ್ಳಬೇಕು. ಸದ್ಯಕ್ಕೆ ಬಿಜೆಪಿಯಲ್ಲಿ ಅಂತಹ `ಅರ್ಜುನ~ನ ಸ್ಥಾನ ತುಂಬಬಲ್ಲವರು ಬಹಳ ಇಲ್ಲ. ಇರುವವರಲ್ಲಿ ಒಳ್ಳೆಯ ಆಯ್ಕೆ- ಅರುಣ್ ಜೇಟ್ಲಿ. ಬುದ್ಧಿವಂತ ಮತ್ತು ಕಳಂಕರಹಿತ. ಯುವಕನಲ್ಲದಿದ್ದರೂ ನಿವೃತ್ತಿ ವಯಸ್ಸಲ್ಲ. ಅಡ್ವಾಣಿಯವರೇಕೆ ಈ ಬಗ್ಗೆ ಯೋಚನೆ ಮಾಡಬಾರದು?

ಅಡ್ವಾಣಿ ಆಗಬೇಕಾಗಿರುವುದು ಕೃಷ್ಣ, ಅರ್ಜುನ ಅಲ್ಲ

ಪ್ರಧಾನಿ ಪಟ್ಟ ಎಲ್ಲೋ ಮರೆಯಿಂದ ಕಣ್ಣು ಮಿಟುಕಿಸುತ್ತಿರುವಂತೆ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರಿಗೆ ಅನಿಸಿರಬಹುದು. ಇಲ್ಲದಿದ್ದರೆ ಅವರ ಸುತ್ತ ಇರುವ ವಂದಿಮಾಗಧರು `ನಿಮ್ಮ ಜೀವಮಾನದ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಇದೇ ಸಮಯ, ನುಗ್ಗಿಬಿಡಿ~ ಎಂದು 84 ವರ್ಷದ ನಾಯಕನನ್ನು ಹುರಿದುಂಬಿಸಿರಬಹುದು.
ಇಂತಹ ಒತ್ತಡಗಳು ಇಲ್ಲದೆ ಇರುತ್ತಿದ್ದರೆ ಆಗಲೇ ವಾನಪ್ರಸ್ಥಾಶ್ರಮದ ಕಡೆಗೆ ಹೊರಟಿದ್ದ ಅಡ್ವಾಣಿ, ಇದ್ದಕ್ಕಿದ್ದಂತೆ ದಿಕ್ಕು ಬದಲಿಸಿ ರಥಯಾತ್ರೆ ಹೊರಡುವ ಘೋಷಣೆ ಮಾಡುತ್ತಿರಲಿಲ್ಲ.
ಇಷ್ಟೊಂದು ದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಬೆವರು ಸುರಿಸಿರುವ ನಾಯಕನೊಬ್ಬ ಪ್ರಧಾನಿಯಾಗುವ ಕನಸು ಕಂಡರೆ ಅದು ತಪ್ಪೇ? ಖಂಡಿತ ಅಲ್ಲ. ಆ ಪದವಿಗೇರುವ ಅರ್ಹತೆಯೂ ಅವರಿಗಿಲ್ಲವೇ? ಖಂಡಿತ ಇದೆ. ಆದರೆ ರಥಯಾತ್ರೆಗೆ ಪಡೆದಿರುವ ಪ್ರೇರಣೆ ಮತ್ತು ಘೋಷಿತ ಉದ್ದೇಶ ಎರಡರಲ್ಲಿಯೂ ಅಡ್ವಾಣಿ ಎಡವಿದಂತಿದೆ.
ಪ್ರೇರಣೆ : `ವೋಟಿಗಾಗಿ ನೋಟು~ ಹಗರಣದಲ್ಲಿ ತಮ್ಮ ಪಕ್ಷಕ್ಕೆ ಸೇರಿರುವ ಇಬ್ಬರು ಮಾಜಿ ಲೋಕಸಭಾ ಸದಸ್ಯರ ಬಂಧನ. ಉದ್ದೇಶ: ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ.
`ವೋಟಿಗಾಗಿ ನೋಟು~ ಹಗರಣದಲ್ಲಿ ಈ ವರೆಗೆ ಜೈಲಿಗೆ ಹೋಗಿರುವವರು ಕಾಂಗ್ರೆಸ್ ಪಕ್ಷದವರಲ್ಲದೆ ಇರಬಹುದು, ಆದರೆ ಅದು ಆ ಪಕ್ಷದ `ಪಾಪದ ಪಿಂಡ~ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ದೆಹಲಿ ಪೊಲೀಸರು ಇದರ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಂತರಂಗದ ಚಾವಡಿಯ ಹಿರಿತಲೆಗಳೂ ಜೈಲು ಸೇರಬಹುದು.
 `ವಿರೋಧಪಕ್ಷಗಳ ಸದಸ್ಯರನ್ನು ಖರೀದಿಸಬೇಕಾಗಿರಲಿಲ್ಲ, ಸದನದಲ್ಲಿ ಪಡೆದ ಬಹುಮತವೇ ಇದಕ್ಕೆ ಸಾಕ್ಷಿ~ ಎಂದು ಕಾಂಗ್ರೆಸ್ ನಾಯಕರು ಈಗ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಕೊನೆಗೂ ಗೆದ್ದದ್ದು ಕೇವಲ 19 ಮತಗಳಿಂದ ಎನ್ನುವುದನ್ನು ಮರೆಯಬಾರದು.

ಆ 19 ಮತಗಳಲ್ಲಿ ಹದಿಮೂರು ಮತಗಳು ವಿರೋಧಪಕ್ಷಗಳ ಸದಸ್ಯರು ನಡೆಸಿದ ಅಡ್ಡಮತದಾನದಿಂದ ಗಳಿಸಿದ್ದು. ಎಂಟು ಮಂದಿ ಮತದಾನದಲ್ಲಿ ಭಾಗವಹಿಸಿರಲಿಲ್ಲ. ಈ ಎಲ್ಲ ವಿರೋಧಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ವಿಪ್ ಗೌರವಿಸಿ ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಚಲಾಯಿಸಿದ್ದರೆ ಯುಪಿಎ ಸರ್ಕಾರ ಉಳಿಯುತ್ತಿತ್ತೇ? ಅದೊಂದು ತಾಂತ್ರಿಕವಾದ ಗೆಲುವು, ನೈತಿಕವಾದುದಲ್ಲ. ಆದರೆ ಈ ಹಗರಣದಲ್ಲಿ ಬಿಜೆಪಿ ಪಾತ್ರವೇನೂ ಕಡಿಮೆ ಇರಲಿಲ್ಲ.
ಲಾಲ್‌ಕೃಷ್ಣ ಅಡ್ವಾಣಿ ಅವರು ಸುಮಾರು ನಾಲ್ಕು ದಶಕಗಳಿಂದ ಸಂಸತ್ ಸದಸ್ಯರಾಗಿ ಕಾರ‌್ಯನಿರ್ವಹಿಸುತ್ತಾ ಬಂದಿದ್ದಾರೆ. ಸಂಸದೀಯ ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆ-ಗೌರವ ಪ್ರಶ್ನಾತೀತ. ಅದರ ಆಶಯಗಳಿಗೆ ಭಂಗ ಉಂಟಾದಾಗಲೆಲ್ಲ ಅವರು ಸಿಡಿದೆದ್ದವರು.
ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟದ ಉದ್ದೇಶವನ್ನು ಒಪ್ಪಿಕೊಂಡರೂ ಅವರು ಹಿಡಿದಿರುವ ಹಾದಿ ಸಂಸದೀಯ ಪ್ರಜಾಪ್ರಭುತ್ವದ ಬೇರುಗಳನ್ನು ದುರ್ಬಲಗೊಳಿಸುವಂತಹದ್ದು ಎಂಬ ಕಾರಣಕ್ಕಾಗಿ ವಿರೋಧವನ್ನು ಹೊಂದಿದ್ದವರು.
ಆದರೆ, ಇದೇ ಅಡ್ವಾಣಿಯವರು ಲೋಕಸಭೆಯಲ್ಲಿ ಎದ್ದು ನಿಂತು `ವೋಟಿಗಾಗಿ ನೋಟು~ ಹಗರಣದ `ಕುಟುಕು ಕಾರ್ಯಾಚರಣೆ~ಯ ಸೂತ್ರಧಾರ ತಾನೆಂದು ಘೋಷಿಸಿಕೊಳ್ಳುವ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಮೇಲೆ ತಮಗೆ ನಂಬಿಕೆ ಇಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ಒಬ್ಬ ಸಂಸದನ ಮಾನ ಮತ್ತು ಪ್ರಾಣಕ್ಕೆ ಬೆದರಿಕೆ ಎದುರಾದರೆ ಆತ ಮೊದಲು ಮಾಡಬೇಕಾಗಿರುವ ಕೆಲಸ ಸಭಾಧ್ಯಕ್ಷರಿಗೆ ದೂರು ನೀಡುವುದು. ಯಾಕೆಂದರೆ ಸಂಸದರ ರಕ್ಷಣೆಯ ಭಾರವನ್ನು ಸಂವಿಧಾನವೇ ಸಭಾಧ್ಯಕ್ಷರಿಗೆ ನೀಡಿದೆ. ಈ ಹಗರಣದಲ್ಲಿಯೂ ಕಾಂಗ್ರೆಸ್ ಸದಸ್ಯರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಬಿಜೆಪಿ ಸಂಸದರಿಗೆ ಆಮಿಷವೊಡ್ಡಿದ್ದರೆ ಅಡ್ವಾಣಿಯವರು ಮೊದಲು ಮಾಡಬೇಕಾಗಿದ್ದ ಕೆಲಸ ಅವರನ್ನು ಕರೆದೊಯ್ದು ಲೋಕಸಭಾಧ್ಯಕ್ಷರಿಗೆ ದೂರು ಕೊಡಿಸುವುದು, ಜತೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸುವುದು.
ಇದು ಸಂಸದೀಯ ಪ್ರಜಾಪ್ರಭುತ್ವ ಮತ್ತು ನೆಲದ ಕಾನೂನಿನ ಮೇಲೆ ನಂಬಿಕೆ ಇರುವ ವ್ಯಕ್ತಿ ಮಾಡಬೇಕಾದ ಕೆಲಸ. ಆದರೆ ಅಡ್ವಾಣಿಯವರು ಮಾಡಿಸಿದ್ದು `ಕುಟುಕು ಕಾರ್ಯಾಚರಣೆ~. ಅವರು ಯಾಕೆ ಇಂತಹ ಅಡ್ಡಮಾರ್ಗ ಹಿಡಿದರು? ಆಗ ಲೋಕಸಭಾ ಅಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಮೇಲೆಯೂ ಅವರಿಗೆ ನಂಬಿಕೆ ಇರಲಿಲ್ಲವೇ? ಬೇರೆ ಏನಾದರೂ ಉದ್ದೇಶ ಇತ್ತೇ?
`ದೂರು ನೀಡಿದ್ದರೆ ಆಡಳಿತ ಪಕ್ಷವನ್ನು ಎಚ್ಚರಿಸಿದಂತಾಗುತ್ತಿತ್ತು, ಈ ಹಗರಣ ಬಯಲಿಗೆ ಬರುತ್ತಿರಲಿಲ್ಲ~ ಎಂದು ಅಡ್ವಾಣಿ ಅವರ ಪಕ್ಷದ ಕೆಲವು ನಾಯಕರು ಹೇಳುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಬಣ್ಣ ಬಯಲು ಮಾಡಲು ಇವರೇ ಮಾಡಿಸಿಟ್ಟುಕೊಂಡಿದ್ದ `ಕುಟುಕು ಕಾರ್ಯಾಚರಣೆ~ಯ ಸಿಡಿ ಇತ್ತಲ್ಲ?
ಲೋಕಸಭಾಧ್ಯಕ್ಷರಿಂದ ನ್ಯಾಯ ಸಿಗದೆ ಇದ್ದಾಗ ಆ ಸಿಡಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಜೆಪಿ ಹಿಡಿದದ್ದು ಅಡ್ಡಮಾರ್ಗ. ಅದು ಒಂದು ಖಾಸಗಿ ಟಿವಿ ಚಾನೆಲ್ ಜತೆ ಕೂಡಿಕೊಂಡು `ಕುಟುಕು ಕಾರ್ಯಾಚರಣೆ~ ನಡೆಸಿ, ಲೋಕಸಭೆಗೆ ಬಂದು ನೋಟಿನ ಕಂತೆಗಳನ್ನು ಲೋಕಸಭಾಧ್ಯಕ್ಷರ ಮುಂದೆ ಸುರಿದದ್ದು. ಈ ಅಡ್ಡಮಾರ್ಗವನ್ನು ಎಲ್.ಕೆ.ಅಡ್ವಾಣಿಯವರಂತಹ ಹಿರಿಯ ನಾಯಕರು ಈಗ ಸಮರ್ಥಿಸಿಕೊಳ್ಳಲು ಹೊರಟಿದ್ದಾರೆ.
ಸತ್ಯ ಸಂಗತಿ ಏನೆಂದರೆ, ಲೋಕಸಭಾಧ್ಯಕ್ಷರು ಇಲ್ಲವೇ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಕಾರಣಕ್ಕೆ ಬಿಜೆಪಿ `ಕುಟುಕು ಕಾರ್ಯಾಚರಣೆ~ ನಡೆಸಿ ಸದನದಲ್ಲಿ ನೋಟಿನ ಕಂತೆ ಪ್ರದರ್ಶಿಸಿದ್ದಲ್ಲ.
ವಿಶ್ವಾಸ ಮತ ಯಾಚನೆಯ ಮೊದಲೇ ಬಿಜೆಪಿ ನಾಯಕರಿಗೆ ಫಲಿತಾಂಶ ಗೊತ್ತಾಗಿ ಹೋಗಿತ್ತು. ಬಿಜೆಪಿಯ ಏಳೆಂಟು ಸದಸ್ಯರು ಸೇರಿದಂತೆ ಬೇರೆಬೇರೆ ಪಕ್ಷಗಳಿಗೆ ಸೇರಿರುವ 15-20 ಸದಸ್ಯರು ವಿಶ್ವಾಸಮತ ಗೊತ್ತುವಳಿ ಪರ ಮತ ಚಲಾಯಿಸಲು ಇಲ್ಲವೇ ಮತದಾನದಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿರುವ ಸುಳಿವು ವಿರೋಧಪಕ್ಷಗಳ ನಾಯಕರಿಗೆ ಸಿಕ್ಕಿತ್ತು (ಕರ್ನಾಟಕದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದ ಮಂಜುನಾಥ್ ಕುನ್ನೂರು, ಎಚ್.ಟಿ.ಸಾಂಗ್ಲಿಯಾನಾ ಮತ್ತು ಮನೋರಮಾ ಮಧ್ವರಾಜ್ ಪಕ್ಷದ ವಿಪ್ ಉಲ್ಲಂಘಿಸಿ ಗೊತ್ತುವಳಿ ಪರ ಮತ ಚಲಾಯಿಸಲಿದ್ದಾರೆ ಎಂಬ `ಸ್ಕೂಪ್~ ಸುದ್ದಿ ವಿಶ್ವಾಸಮತ ಯಾಚನೆಯ ದಿನವೇ `ಪ್ರಜಾವಾಣಿ~ಯಲ್ಲಿ ಪ್ರಕಟವಾಗಿತ್ತು).
ಅಂತಿಮವಾಗಿ ಬಿಜೆಪಿಯ ನಾಲ್ಕು ಸದಸ್ಯರು ಸೇರಿದಂತೆ  ಬೇರೆ ವಿರೋಧಪಕ್ಷಗಳ ಹದಿಮೂರು ಲೋಕಸಭಾ ಸದಸ್ಯರು ಗೊತ್ತುವಳಿ ಪರ ಮತ ಚಲಾಯಿಸಿದ್ದರು. ಎಂಟು ಸದಸ್ಯರು ಮತದಾನದಲ್ಲಿ ಭಾಗವಹಿಸದೆ ತಮ್ಮ ಪಕ್ಷಗಳ ವಿಪ್ ಉಲ್ಲಂಘಿಸಿದ್ದರು.
ಈ ಫಲಿತಾಂಶವನ್ನು ನಿರೀಕ್ಷಿಸಿದ್ದ ಬಿಜೆಪಿ ನಾಯಕರು `ಯುಪಿಎ ಸರ್ಕಾರ ಪಡೆದ ಬಹುಮತ ಪವಿತ್ರವಾದುದಲ್ಲ, ಕಳಂಕಿತವಾದುದು~ ಎನ್ನುವುದನ್ನು ಸಾಬೀತುಪಡಿಸಲು ಅನುಸರಿಸಿದ ಮಾರ್ಗವೇ ಟಿವಿ ಚಾನೆಲ್ ಜತೆಗೂಡಿ ನಡೆಸಿದ್ದ `ಕುಟುಕು ಕಾರ್ಯಾಚರಣೆ~.
ಆದರೆ ಈ ಮೂಲಕ ಸಂಸದೀಯ ಪ್ರಜಾಪ್ರಭುತ್ವಕ್ಕೆ ತಾವು ಹಾನಿ ಮಾಡುತ್ತಿದ್ದೇವೆ ಎಂಬ ಅರಿವು ಆ ಕಾಲದಲ್ಲಿ ಅಳಿವು-ಉಳಿವುಗಳ ರಾಜಕೀಯದ ಜಿದ್ದಾಜಿದ್ದಿಯಲ್ಲಿ ಮುಳುಗಿದ್ದ ಬಿಜೆಪಿ ನಾಯಕರಿಗೆ ಆಗಿರಲಿಲ್ಲ. ಮೂರು ವರ್ಷಗಳ ನಂತರವಾದರೂ ಅದರ ಅರಿವು ಬಿಜೆಪಿಗೆ ಆಗಿರಬಹುದು ಎಂದು ನಿರೀಕ್ಷಿಸಿದ್ದವರಿಗೆ ಅಡ್ವಾಣಿ ಅವರ ಆವೇಶಭರಿತ ಹೇಳಿಕೆಯಿಂದ ನಿರಾಸೆಯಾಗಿದೆ.ಪಕ್ಷ ಮಾಡಿರುವ ತಪ್ಪನ್ನು ಸರಿಪಡಿಸಬೇಕಾಗಿದ್ದ ಈ ಹಿರಿಯ ನಾಯಕ ಆ ತಪ್ಪನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾರೆ.
ಎರಡನೆಯದಾಗಿ ಅಡ್ವಾಣಿ ಅವರ ರಥಯಾತ್ರೆಯ ಘೋಷಿತ ಉದ್ದೇಶ -ಅದು ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ. ಅಡ್ವಾಣಿಯವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಯಾರೂ ಸಂಶಯಿಸುವುದು ಸಾಧ್ಯ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆಗೆ ಹೊರಟರೆ ಅವರ ಜತೆಯಲ್ಲಿ ಹೋಗುವವರು ಯಾರು?
ಈಗ ಹೈದರಾಬಾದ್‌ನ ಜೈಲಲ್ಲಿರುವ ಗಾಲಿ ಜನಾರ್ದನ ರೆಡ್ಡಿ ಮತ್ತು ಸೋದರರನ್ನು ತಮ್ಮ ಮಕ್ಕಳ ಸಮಾನ ಎಂದು ಮೊನ್ನೆ ಮೊನ್ನೆವರೆಗೂ ಹೇಳುತ್ತಿದ್ದ ಸುಷ್ಮಾ ಸ್ವರಾಜ್ ಅವರೇ? ಗಣಿ ಅಕ್ರಮದ ಗಂಭೀರ ಆರೋಪಗಳನ್ನೊಳಗೊಂಡ ತನಿಖಾ ವರದಿಯನ್ನು ಕರ್ನಾಟಕದ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ನಂತರವೂ  ಬಹಿರಂಗ ಸಭೆಯಲ್ಲಿ ಅವರ ಜತೆ ಪಾಲ್ಗೊಂಡು ಕಾಣಿಕೆಗಳನ್ನು ಸ್ವೀಕರಿಸಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ?
ಭ್ರಷ್ಟಾಚಾರದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಇರುವ ಲೋಕಾಯುಕ್ತರ ನೇಮಕವನ್ನು ಏಳುವರ್ಷಗಳಿಂದ ಮುಂದೂಡುತ್ತಾ ಬಂದಿರುವ ನರೇಂದ್ರ ಮೋದಿಯವರೇ?
ಹುಡ್ಕೋ ಹಗರಣದ ಸುಳಿಯಿಂದ ಇನ್ನೂ ಮುಕ್ತರಾಗದೆ ಇರುವ ಅನಂತಕುಮಾರ್ ಅವರೇ? ಭ್ರಷ್ಟಾಚಾರದ ಹಲವು ಹಗರಣಗಳಲ್ಲಿ ಸಿಲುಕಿ ನ್ಯಾಯಾಲಯಕ್ಕೆ ಸುತ್ತುಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ?
ಭ್ರಷ್ಟಾಚಾರದ ಆರೋಪದಿಂದಾಗಿಯೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ರಮೇಶ್ ಪೋಖ್ರಿಯಾಲ್ ಅವರೇ? ಈಗಾಗಲೇ ಜೈಲಲ್ಲಿರುವ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ? ಬಂಧನದ ಭೀತಿಯಲ್ಲಿರುವ ಮಾಜಿ ಸಚಿವರಾದ ಕರುಣಾಕರ ರೆಡ್ಡಿ ಮತ್ತು ಶ್ರಿರಾಮುಲು ಅವರೇ? ಇವರೆಲ್ಲರನ್ನೂ ಬಲ್ಲ, ಇವರೆಲ್ಲ ನಡೆಸುತ್ತಿರುವ ಅವಾಂತರಗಳನ್ನು ಕಣ್ಣಾರೆ ಕಂಡೂ ಬಾಯಿ ಮುಚ್ಚಿಕೊಂಡು ಕೂತಿರುವ ಆರ್‌ಎಸ್‌ಎಸ್ ನಾಯಕರೇ? ಯಾರು?
ಅಚ್ಚರಿಯ ಸಂಗತಿಯೆಂದರೆ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದದ್ದು ಕಳೆದ ಒಂದೆರಡು ತಿಂಗಳುಗಳ ಅವಧಿಯಲ್ಲಲ್ಲ. ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಜನ ಮಾತನಾಡುತ್ತಿರುವ ಬಳ್ಳಾರಿಯ ರೆಡ್ಡಿ ಸೋದರರ ಅಕ್ರಮ ಗಣಿಗಾರಿಕೆಯ ಸಂಗತಿ ತಮಗೆ ಗೊತ್ತಿರಲಿಲ್ಲ ಎಂದು ಹೇಳುವಷ್ಟು ಅಡ್ವಾಣಿಯವರು ಅಜ್ಞಾನಿಯಲ್ಲ.
`ಆಪರೇಷನ್ ಕಮಲ~ಕ್ಕೆ ಬಳಕೆಯಾಗಿದ್ದ ಹಣ, ಅದಕ್ಕಿಂತಲೂ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಿಂದ ರವಾನೆಯಾಗಿರುವ ನಿಧಿ ಯಾವ ಮೂಲದಿಂದ ಬಂದಿರುವುದೆಂದು ತಿಳಿಯದಷ್ಟು ಅಡ್ವಾಣಿ ಅಮಾಯಕರೂ ಅಲ್ಲ.
ಹೌದು, ಅವರು ಈಗ ಎಲ್ಲ ರೀತಿಗಳಿಂದಲೂ ಸ್ಥಾನ ವಂಚಿತರು. ಅವರು ಪಕ್ಷದ ಅಧ್ಯಕ್ಷರಲ್ಲ, ವಿರೋಧಪಕ್ಷದ ನಾಯಕರಲ್ಲ, ಅಧಿಕಾರ ಮೊದಲೇ ಇಲ್ಲ. ಆದರೆ `ಆಪರೇಷನ್ ಕಮಲ~ ನಡೆದಾಗ ವಿರೋಧಪಕ್ಷದ ನಾಯಕರಾಗಿದ್ದರಲ್ಲ? ಪ್ರಧಾನಿ ಅಭ್ಯರ್ಥಿ ಎಂದೇ ಆ ಕಾಲದಲ್ಲಿ ಪಕ್ಷ ಬಿಂಬಿಸಿತ್ತಲ್ಲ? ಅದಕ್ಕಿಂತ ಬೇರೆ ಅಧಿಕಾರ ಏನು ಬೇಕಿತ್ತು? ಆಗಲೂ ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ತಮ್ಮವರ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿರಲಿಲ್ಲ.
ಈ ಎಲ್ಲ ಪ್ರಶ್ನೆಗಳಿಗೆ ಅಡ್ವಾಣಿಯವರು ತಮ್ಮ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ಉತ್ತರಿಸಬೇಕಾಗುತ್ತದೆ. ಜನತೆಯ ಪ್ರಶ್ನೆಗಳನ್ನು `ರಾಜಕೀಯ ಪ್ರೇರಿತ~ ಎಂದು ಪಕ್ಕಕ್ಕೆ ತಳ್ಳಿಬಿಡಬಹುದು, ಆದರೆ ಆತ್ಮಸಾಕ್ಷಿ ಕೇಳುವ ಪ್ರಶ್ನೆಗೆ? ಉತ್ತರಿಸಬೇಕಾಗಿರುವ ಪ್ರಶ್ನೆ ಇನ್ನೂ ಒಂದು ಇದೆ.
ಅಡ್ವಾಣಿಯವರು ತಮ್ಮ ಮೊದಲ ರಥಯಾತ್ರೆ ಪ್ರಾರಂಭಿಸಿದ್ದು 21 ವರ್ಷಗಳ ಹಿಂದೆ. ಈ ಎರಡು ದಶಕಗಳ ಅವಧಿಯಲ್ಲಿ ಅಡ್ವಾಣಿ ಅವರ ವಯಸ್ಸು ಹೆಚ್ಚಿದೆ, ಭಾರತದ ಮತದಾರರ ಸರಾಸರಿ ವಯಸ್ಸು ಕಡಿಮೆಯಾಗಿದೆ. ಇದಕ್ಕೆ ಅನುಗುಣವಾಗಿ ದೇಶದ ಸಾಮಾಜಿಕ-ರಾಜಕೀಯ ಚಿತ್ರ ಬದಲಾಗಿ ಹೋಗಿದೆ.

ಅಣ್ಣಾ ಹಜಾರೆ ಚಳವಳಿಯಲ್ಲಿ ಪಾಲ್ಗೊಂಡವರ ಸರಾಸರಿ ವಯಸ್ಸು 30-40ಕ್ಕಿಂತ ಹೆಚ್ಚಿರಲಾರದು. ಈ ಯುವಸಮುದಾಯ 84 ವರ್ಷದ ನಾಯಕನನ್ನು ಒಪ್ಪುವುದೇ? ಅದೂ ಎದುರಾಳಿ ಪಕ್ಷದಲ್ಲಿ 40ರ ವಯಸ್ಸಿನ ನಾಯಕನಿರುವಾಗ.
ಅಡ್ವಾಣಿಯವರದ್ದು ಈಗ `ಶ್ರಿಕೃಷ್ಣ~ನಾಗುವ ವಯಸ್ಸು, `ಅರ್ಜುನ~ನಾಗುವುದಲ್ಲ. `ಅರ್ಜುನ~ನನ್ನು ಅವರೇ ಆರಿಸಿ ರಥಕ್ಕೆ ಹತ್ತಿಸಿಕೊಳ್ಳಬೇಕು. ಸದ್ಯಕ್ಕೆ ಬಿಜೆಪಿಯಲ್ಲಿ ಅಂತಹ `ಅರ್ಜುನ~ನ ಸ್ಥಾನ ತುಂಬಬಲ್ಲವರು ಬಹಳ ಇಲ್ಲ. ಇರುವವರಲ್ಲಿ ಒಳ್ಳೆಯ ಆಯ್ಕೆ- ಅರುಣ್ ಜೇಟ್ಲಿ. ಬುದ್ಧಿವಂತ ಮತ್ತು ಕಳಂಕರಹಿತ. ಯುವಕನಲ್ಲದಿದ್ದರೂ ನಿವೃತ್ತಿ ವಯಸ್ಸಲ್ಲ. ಅಡ್ವಾಣಿಯವರೇಕೆ ಈ ಬಗ್ಗೆ ಯೋಚನೆ ಮಾಡಬಾರದು?

Monday, September 5, 2011

ರಾಳೇಗಣ ಸಿದ್ಧಿ ಮತ್ತು ರಾಮಲೀಲಾ ಮೈದಾನ

ಮಂಗಳೂರು ಸಮೀಪದ ಹಳ್ಳಿಯೊಂದರಲ್ಲಿರುವ ಸಂಬಂಧಿಕರೊಬ್ಬರು  ನನಗೆ ಪೋನ್ ಮಾಡಿ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಮನಸಾರೆ ಶಾಪ ಹಾಕುತ್ತಿದ್ದರು (ಸದ್ಯಕ್ಕೆ ಅವರ ಹೆಸರು ರಾಂಪಣ್ಣ ಎಂದಿಟ್ಟುಕೊಳ್ಳೋಣ). ಕಳೆದ ವಾರದ ನನ್ನ ಅಂಕಣವನ್ನು ಓದಿದ್ದ ರಾಂಪಣ್ಣ `ನಾವು  ನಮ್ಮ ಮಕ್ಕಳಿಂದ ಬೀದಿಗೆ ಬಿದ್ದಿರುವಂತೆ, ಆ ಮನಮೋಹನ್‌ಸಿಂಗ್ ತಮ್ಮ `ಮಕ್ಕಳಿಂದ~ ಬೀದಿಗೆ ಬೀಳಬೇಕು. ಸರಿಯಾಗಿಯೇ ಬರೆದಿದ್ದೀರಿ~ ಎಂದು ಸಿಟ್ಟು ಕಾರಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಕೃಷಿಕರಾಗಿರುವ ರಾಂಪಣ್ಣನವರಿಗೆ ಈಗ ಸುಮಾರು 70 ವರ್ಷ. ತನ್ನ ಯೌವ್ವನದ ದಿನಗಳಲ್ಲಿ ಯುವಕ ಸಂಘ ಕಟ್ಟಿ ಊರಿಗೆ ರಸ್ತೆ, ಕುಡಿಯುವ ನೀರು, ಶಾಲೆ ಬರಲು ಕಾರಣರಾದವರು ಅವರು. ಬಹಳ ಕಷ್ಟದಲ್ಲಿಯೇ ಹೊಟ್ಟೆಬಟ್ಟೆ ಕಟ್ಟಿ ಒಬ್ಬಳು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸಿದ್ದಾರೆ. ಹಿರಿಯ ಮಗ ಮುಂಬೈನಲ್ಲಿದ್ದಾನೆ, ಕಿರಿಯವನು ದೆಹಲಿಯಲ್ಲಿದ್ದಾನೆ ಮತ್ತು ಮಗಳು ಅಮೆರಿಕಾದಲ್ಲಿದ್ದಾಳೆ. ಎಲ್ಲರಿಗೂ ಅವರದ್ದೇ ಆಗಿರುವ ಸಂಸಾರ ಇದೆ. ಈಗ ಇರುವ ಪಟ್ಟಣಗಳಲ್ಲಿಯೇ ನೆಲೆ ಊರಿದ್ದಾರೆ.
ಎರಡು ವರ್ಷಗಳ ಹಿಂದೆ ಮಕ್ಕಳೆಲ್ಲ ಕೂಡಿ ತಂದೆ-ತಾಯಿಗೆ ದೊಡ್ಡ ಮನೆ ಕಟ್ಟಿಸಿಕೊಟ್ಟಿದ್ದಾರೆ. ಹಣಕ್ಕೇನೂ ಕೊರತೆ ಇಲ್ಲ, ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಮಕ್ಕಳು ತಪ್ಪದೆ ಹಣ ತುಂಬುತ್ತಾರೆ. ಆದರೇನು ಫಲ? ರಾಂಪಣ್ಣನಿಗೆ ವೃದ್ಧಾಪ್ಯಸಹಜ ಕಾಯಿಲೆಗಳೆಲ್ಲ ಇವೆ. ಹೆಂಡತಿ ಮಂಡಿನೋವಿನಿಂದಾಗಿ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ,  ಎಲ್ಲದ್ದಕ್ಕೂ ಮತ್ತೊಬ್ಬರನ್ನು ಆಶ್ರಯಿಸಬೇಕಾದ ದಯನೀಯ ಸ್ಥಿತಿ.
ಎಲ್ಲವೂ ಇದೆ. `ಹೇಗಿದ್ದೀರಿ ಅಪ್ಪಾ, ಅಮ್ಮಾ?~  ಎಂದು ಪಕ್ಕದಲ್ಲಿ ಕುಳಿತು ಕೇಳುವವರೇ ಇಲ್ಲ.  ವರ್ಷಗಳ ಹಿಂದೆ ತಮ್ಮ ಬುದ್ಧಿವಂತ ಮಕ್ಕಳ ಬಗ್ಗೆ ಹೆಮ್ಮೆಯಿಂದ ಬಾಯ್ತುಂಬ ಮಾತನಾಡುತ್ತಿದ್ದ ರಾಂಪಣ್ಣ ಈಗ ಅವರ ಹೆಸರೆತ್ತಿದರೆ ಸಿಡಿಯುತ್ತಾರೆ. `ಮುಪ್ಪಿನ ಕಾಲದಲ್ಲಿ ನಮ್ಮನ್ನು ಬೀದಿಗೆ ಹಾಕಿದ ಮಕ್ಕಳು ಇದ್ದರೇನು, ಬಿಟ್ಟರೇನು~ ಎಂದು ಕೇಳುತ್ತಿದ್ದಾರೆ. `ನನ್ನದೇ ತಪ್ಪು, ಸುಮ್ಮನೆ ಒಂದು ಡಿಗ್ರಿ ಓದಿಸಿದ್ದರೆ ಇಲ್ಲಿಯೇ ಯಾವುದಾದರೂ ಬ್ಯಾಂಕಿನಲ್ಲೋ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಂಡು ನಮ್ಮ ಬಳಿ ಇರುತ್ತಿದ್ದರು. ಏನೂ ಓದಿಸದೆ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಇಲ್ಲಿಯೇ ಕೃಷಿ ಮಾಡಿಕೊಂಡು ಬಿದ್ದಿರುತ್ತಿದ್ದರು. ಅದೇನೋ ಐಟಿ-ಬಿಟಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಈ ಕೃಷಿ ನಂಬಿ ಅವರು ಹಾಳಾಗುವುದು ಬೇಡ ಎಂದು ಎಂಜಿನಿಯರಿಂಗ್ ಓದಿಸಿ ಕೆಟ್ಟೆ. ಇವೆಲ್ಲವೂ ಮನಮೋಹನ್‌ಸಿಂಗ್ ಮಾಡಿದ ಅವಾಂತರ, ಆರ್ಥಿಕ ಉದಾರೀಕರಣ ನಡೆಯದೆ ಹೋಗಿದ್ದರೆ ನಾವು ಆಮಿಷಗೊಳಗಾಗುತ್ತಿರಲಿಲ್ಲ~ ಎಂದು ಹೇಳುತ್ತಿದ್ದಾಗ ಅವರ ಗಂಟಲು ಕಟ್ಟಿತ್ತು.
ಅವರ ಸಂಕಟಕ್ಕೆ ಇನ್ನೊಂದು ಕಾರಣ ಇತ್ತು. ಸಾಮಾನ್ಯವಾಗಿ ಚೌತಿ-ಅಷ್ಟಮಿಗೆ ಊರಿಗೆ ಬರುತ್ತಿದ್ದ ಮಕ್ಕಳು ಈ ಬಾರಿ ಬಂದಿಲ್ಲ. `ರಜೆಗಳೆಲ್ಲ ಅಣ್ಣಾ ಹಜಾರೆ ಚಳವಳಿಯಲ್ಲಿ ಕಳೆದು ಹೋಯಿತು, ಮುಂದಿನ ಬಾರಿ ಬರುತ್ತೇವೆ~ ಎಂದು ಅಮ್ಮನಿಗೆ ಪೋನ್ ಮಾಡಿದ್ದರಂತೆ. `ಅಷ್ಟೊಂದು ದೇಶಪ್ರೇಮ ಇದ್ದರೆ ಇಲ್ಲಿಯೇ ಬಂದು ಏನಾದರೂ ಉದ್ಯೋಗ-ಉದ್ಯಮ ಮಾಡಬಹುದಲ್ಲ, ದೆಹಲಿ-ಮುಂಬೈ ಎಂದು ಯಾಕೆ ಕುಣಿದಾಡುತ್ತಿದ್ದಾರೆ? ತಂದೆ-ತಾಯಿ ಮೇಲೆ, ಊರಿನ ಮೇಲೆ ಇಲ್ಲದ ಪ್ರೀತಿ ದೇಶದ ಮೇಲೆ ಏನು ಇರುತ್ತದೆ? ಎಲ್ಲ ಢೋಂಗಿ~-ಮಕ್ಕಳಿಗೆ ಹೇಳಲಾಗದ್ದನ್ನು ರಾಂಪಣ್ಣ ನನ್ನೊಡನೆ ಹೇಳಿ ಕೋಪ ತೀರಿಸಿಕೊಂಡರು.
ಅವರ ಹೊಟ್ಟೆ ಉರಿ ಹೆಚ್ಚಿಸಿರುವುದು ನೆರೆಯಲ್ಲಿಯೇ ಇನ್ನೊಂದು ರೈತ ಕುಟುಂಬ. ಆ ಕುಟುಂಬದ ಯಜಮಾನನಿಗೂ ಮೂವರು ಮಕ್ಕಳು. ಅವರಲ್ಲಿ ಯಾರಿಗೂ ಶಿಕ್ಷಣ ತಲೆಗೆ ಹತ್ತಿಲ್ಲ. ಒಬ್ಬ ಮಗ ಊರಲ್ಲಿಯೇ ಇದ್ದು ಗದ್ದೆ-ತೋಟ ನೋಡಿಕೊಳ್ಳುತ್ತಿದ್ದಾನೆ. ಇನ್ನೊಬ್ಬ ಆಟೋರಿಕ್ಷಾ ಓಡಿಸುತ್ತಿದ್ದಾನೆ. ಊರಿನ ಯುವಕ ಸಂಘಕ್ಕೆ ಈಗ ಅವನೇ ಅಧ್ಯಕ್ಷ. ಮಗಳು ಸಮೀಪದ ಊರಿನ ರೈತನನ್ನೇ ಮದುವೆಯಾಗಿದ್ದಾಳೆ. ಮನೆ ತುಂಬಾ ಮಕ್ಕಳು, ಮೊಮ್ಮಕ್ಕಳ ಗೌಜಿ-ಗದ್ದಲ. ಮೂರೂ ಹೊತ್ತು ದುಡ್ಡಿಗಾಗಿ ಕಿತ್ತಾಟ, ತಂದೆ-ಮಕ್ಕಳ ಬಡಿದಾಟ, ಅತ್ತೆ-ಸೊಸೆಯರ ಕಾದಾಟ ಎಲ್ಲವೂ ನಡೆಯುತ್ತಿವೆ. ಅವರೆಲ್ಲರೂ ಬಂದು ರಾಂಪಣ್ಣನವರ ಬಳಿ ದೂರು ಹೇಳುತ್ತಿರುತ್ತಾರೆ. ಇದನ್ನೆಲ್ಲ ಕೇಳಿಕೇಳಿ ರಾಂಪಣ್ಣ ಇನ್ನಷ್ಟು ಖಿನ್ನರಾಗುತ್ತಾರೆ. ಅವರಿಗಾಗಿ ಅಲ್ಲ, ತಮಗಾಗಿ. `ನಮ್ಮ ಸ್ಮಶಾನದಂತಹ ಮನೆಗಿಂತ ಆ ಜಗಳದ ಮನೆಯೇ ವಾಸಿ ಅಲ್ಲವೇ?~ ಎಂದು ಅವರು ಕೇಳುತ್ತಿದ್ದರು. 
ಬೇರೆ ಊರುಗಳಲ್ಲಿ ಇಂತಹ ಕುಟುಂಬಗಳ ಸಂಖ್ಯೆ ಸ್ವಲ್ಪ ಕಡಿಮೆ ಇರಬಹುದು. ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಕ್ಕೆ ಹೋದರೆ ಈ ರೀತಿ ಮಕ್ಕಳನ್ನೇ ಶಪಿಸುತ್ತಾ ಕೂತಿರುವ ನೂರಾರು ತಂದೆ-ತಾಯಿಗಳನ್ನು ಕಾಣಬಹುದು. ಒಂದು ಕಾಲದಲ್ಲಿ ಬಡತನ, ಅಂಧಶ್ರದ್ಧೆ, ಅನಾನುಕೂಲತೆಗಳ ನಡುವೆಯೂ ಜೀವಂತವಾಗಿದ್ದ ಹಳ್ಳಿಗಳು ಈಗ ಬಯಲು ವೃದ್ಧಾಶ್ರಮದಂತೆ ಕಾಣುತ್ತಿವೆ. ವರ್ಷಕ್ಕೊಮ್ಮೆಯೋ, ಎರಡು ವರ್ಷಗಳಿಗೊಮ್ಮೆಯೋ ವಾರದ ರಜೆಯಲ್ಲಿ ಮಕ್ಕಳು-ಮೊಮ್ಮಕ್ಕಳು ಬಂದಾಗ ಗಿಜಿಗುಡುತ್ತಿರುವ ಮನೆಗಳು ಅವರ ನಿರ್ಗಮನದೊಂದಿಗೆ  ಮತ್ತೆ ಭಣಗುಡುತ್ತವೆ.  ವರ್ಷಕ್ಕೆ ಎರಡರಿಂದ ಹತ್ತು ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುತ್ತಿರುವ ಇಂದಿನ ನವ ಮಧ್ಯಮ ವರ್ಗದ ಸದಸ್ಯರು ಇವರು. ಉದ್ಯೋಗವನ್ನರಸಿಕೊಂಡು ಹಳ್ಳಿ ತೊರೆದು ಪಟ್ಟಣ ಸೇರಿದವರು. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದ್ದು ಇದೇ ವರ್ಗ.
 ಶ್ರಿಮಂತರು ಮತ್ತು ಬಡವರ ಬಗ್ಗೆ ನಡೆದಷ್ಟು ಚರ್ಚೆ ಮಧ್ಯಮವರ್ಗದ ಬಗ್ಗೆ ನಮ್ಮಲ್ಲಿ ನಡೆದಿಲ್ಲ. ಅವರೊಂದು ರೀತಿಯಲ್ಲಿ ಮುಖ ಇಲ್ಲದ, ದನಿ ಇಲ್ಲದ, ಧೈರ್ಯವೂ ಇಲ್ಲದ ವಿಚಿತ್ರ ಜನವರ್ಗ ಎಂದೇ ಅವರನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಅಣ್ಣಾ ಚಳವಳಿಯ ನಂತರ ಈ ಮಧ್ಯಮ ವರ್ಗ ಮುಖ ಎತ್ತಿ, ದನಿ ಎತ್ತರಿಸಿ ಮಾತನಾಡತೊಡಗಿರುವ ಕಾರಣದಿಂದಾಗಿಯೇ ಅವರ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.  ಮಧ್ಯಮ ವರ್ಗ ಎಂದಾಕ್ಷಣ ನಮ್ಮಲ್ಲಿ ಬಹಳಷ್ಟು ಮಂದಿ ಅದನ್ನು ಮೇಲ್ಜಾತಿ ಜತೆ ಸಮೀಕರಿಸುತ್ತಾರೆ. ನಾನು ಗೌರವಿಸುವ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿಯವರು ಕಳೆದ ವಾರದ ನನ್ನ ಅಂಕಣಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿಯೂ ಎಲ್ಲೋ ಈ ಅಭಿಪ್ರಾಯ ಇದೆ. ಆದರೆ ನನ್ನ ಅಭಿಪ್ರಾಯ ಅದಾಗಿರಲಿಲ್ಲ. ಈ ಐದು ಕೋಟಿ ಜನಸಂಖ್ಯೆಯ ಮಧ್ಯಮವರ್ಗ ಇದೆಯಲ್ಲಾ, ಇದೊಂದು ಬೇರೆಯೇ ಜಾತಿ. ಇದರಲ್ಲಿರುವವರು ಮನು ಮಹಾಶಯ ಸೃಷ್ಟಿಸಿದ್ದ ವರ್ಣಾಶ್ರಮ ವ್ಯವಸ್ಥೆಯಲ್ಲಿರುವ ಜಾತಿಗಳಿಗೆ ಸೇರಿದವರಲ್ಲ. ಇವರೆಲ್ಲ ಆರ್ಥಿಕ ಉದಾರೀಕರಣ ಸೃಷ್ಟಿಸಿದ ಆಧುನಿಕ `ವರ್ಣಾಶ್ರಮ ವ್ಯವಸ್ಥೆ~ಯಲ್ಲಿನ ಜಾತಿಗಳಿಗೆ ಸೇರಿದವರು. ಇವರು ಮೇಲ್ಜಾತಿ ಕುಟುಂಬಗಳಲ್ಲಿ ಮಾತ್ರವಲ್ಲ, ಕೆಳಜಾತಿ ಕುಟುಂಬಗಳಲ್ಲಿಯೂ ಇದ್ದಾರೆ, ಬ್ರಾಹ್ಮಣ-ಅಬ್ರಾಹ್ಮಣ ಎಲ್ಲ ಜಾತಿಗಳಲ್ಲಿಯೂ ಇದ್ದಾರೆ. ಎಲ್ಲರ ಮನೆಯಲ್ಲಿಯೂ ಇದ್ದಾರೆ.  `ನಾವೆಲ್ಲ  ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ನಡೆಸುತ್ತಿದ್ದ ಚಳವಳಿಯ ಕಾಲದಲ್ಲಿ ಅತ್ತ ಸುಳಿಯದ ನನ್ನ ಮಗಳು  ಮೊನ್ನೆ ಫ್ರೀಡಮ್ ಪಾರ್ಕ್‌ಗೆ ಹೋಗಿ ಕೂತಿದ್ದಳು~ ಎಂದು ಇತ್ತೀಚೆಗೆ ಸಿಕ್ಕ ಹಿರಿಯ ಹೋರಾಟಗಾರರೊಬ್ಬರು ವಿಷಾದದಿಂದ ಹೇಳುತ್ತಿದ್ದರು. `ನಮ್ಮ ಜತೆ ಗುರುತಿಸಿಕೊಳ್ಳಲು ಏನೋ ಕೀಳರಿಮೆ, ಫ್ರೀಡಮ್‌ಪಾರ್ಕ್‌ನಲ್ಲಿ ಹೋಗಿ ಕೂತರೆ ಸಿಗುವ ಸಾಮಾಜಿಕ ಮಾನ್ಯತೆಯೇ ಬೇರೆ ಎನ್ನುವುದು ಅವಳಿಗೆ ತಿಳಿದಿದೆ~ ಎನ್ನುತ್ತಿದ್ದರು ಅವರು.
`ಅಣ್ಣಾ ಚಳವಳಿ ನವ ಮಧ್ಯಮವರ್ಗದ ಅಂತರಾತ್ಮವನ್ನು ಬಡಿದೆಬ್ಬಿಸಿದೆ, ಅವರು ಜಾಗೃತರಾಗಿದ್ದಾರೆ, ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ~ ಎಂದೆಲ್ಲ ಹೇಳಲಾಗುತ್ತಿದೆ. ನಿಜವಾಗಿಯೂ ಅಂತಹ ಪರಿವರ್ತನೆ ನಡೆದಿದ್ದರೆ ಅದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸೋಣ. ಆದರೆ ನಾವು ಇಲ್ಲಿಯವರೆಗೆ ಈ ವರ್ಗದಲ್ಲಿ ಕಂಡ ಹೆಚ್ಚಿನವರು ಅತೀ ಎನಿಸುವಷ್ಟು ಭೌತಿಕವಾದಿಗಳು, ಸ್ವಾರ್ಥಿಗಳು ಮತ್ತು ಆಳದಲ್ಲಿ ಆತ್ಮವಂಚಕರಾಗಿರುವವರು. ಬದುಕು ಎಂದರೆ ತನ್ನ ಮನೆ, ಮಡದಿ, ಮಕ್ಕಳು ಅಷ್ಟೆ. ಅದರಾಚೆಗೆ ಇರುವ ಸಮಾಜದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಇವರಿಗೆ ತಂದೆ-ತಾಯಿಯನ್ನು ನೋಡಿಕೊಳ್ಳುವುದೆಂದರೆ ಅವರ ಬ್ಯಾಂಕ್ ಖಾತೆಗೆ ಒಂದಷ್ಟು ದುಡ್ಡು ಹಾಕುವುದು. ಇನ್ನೂ ಕಿರಿಕಿರಿ ಮಾಡಿದರೆ ಎಲ್ಲಾದರೂ ವೃದ್ಧಾಶ್ರಮಕ್ಕೆ ಕೊಂಡೊಯ್ದು ಸೇರಿಸುವುದು. ಇವರ ಸಮಾಜ ಸೇವೆ ಕೂಡಾ ವಾರಾಂತ್ಯದ ಒಂದು ಔಟಿಂಗ್ ಅಷ್ಟೆ. ತಾವು ಬಹಳ ಪ್ರಗತಿಶೀಲರು, ಉದಾರ ಮನೋಭಾವದವರು ಎಂದು ಸಮಾಜದಲ್ಲಿ ತೋರಿಸಿಕೊಳ್ಳುವ ಇವರು ಪಕ್ಕದಲ್ಲಿ ಮಲಗಿದ್ದ ಹೆಂಡತಿಯ ಮೊಬೈಲ್‌ಗೆ ನಡುರಾತ್ರಿಯಲ್ಲಿ ಸಹೋದ್ಯೋಗಿಯ ಎಸ್‌ಎಂಎಸ್ ಬಂದರೆ ನಿದ್ದೆಗೆಡಿಸಿಕೊಳ್ಳುತ್ತಾರೆ.
ಇಂತಹದ್ದೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದವರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವರದಿಯಾಗಿರುವ ಕೌಟುಂಬಿಕ ಹಿಂಸೆ ಮತ್ತು ವಿವಾಹ ವಿಚ್ಛೇದನ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಯಾರೆಂದು ಅಧ್ಯಯನ ಮಾಡಿದರೆ ಈ ನವ ಮಧ್ಯಮ ವರ್ಗದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಜಾತಿ ಎಲ್ಲಿದೆ ಎಂದು ಉಡಾಫೆಯಿಂದ ಪ್ರಶ್ನಿಸುವ ಇವರ ಜಾತ್ಯತೀತ ನಿಲುವಿನ ಹಿಂದಿನ ಆತ್ಮವಂಚನೆಯನ್ನು ತಿಳಿದುಕೊಳ್ಳಬೇಕಾದರೆ ಭಾನುವಾರ ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೆಟ್ರಿಮೋನಿಯಲ್ ಪುಟ ಓದಬೇಕು.
ಈ ಜನವರ್ಗ ಅಣ್ಣಾ ಹಜಾರೆ ಅವರಿಂದ ಕಲಿತದ್ದೇನು, ಕೇವಲ ಭ್ರಷ್ಟಾಚಾರದ ವಿರುದ್ಧದ ಹೋರಾಟವೇ? ಅಣ್ಣಾ ಎಂದರೆ ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟ ಅಣ್ಣಾ ಹಜಾರೆ ಅವರಿಗೆ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟಿರಬಹುದು. ಆದರೆ ಅವರ ಬದುಕಿನ ಬಹುದೊಡ್ಡ ಸಾಧನೆ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಹುಟ್ಟೂರು ರಾಳೇಗಣಸಿದ್ಧಿಯಲ್ಲಿ ಮಾಡಿರುವ ಗ್ರಾಮ ಸುಧಾರಣೆ. ಮನಸ್ಸು ಮಾಡಿದ್ದರೆ ಅವರು ಕೂಡಾ ಮಾಜಿ ಸೈನಿಕನಿಗೆ ಸರ್ಕಾರ ನೀಡುವ ಜಮೀನನ್ನು ಪಡೆದು ನಿಶ್ಚಿಂತೆಯಿಂದ ಇರಬಹುದಿತ್ತು. ಆದರೆ ಅವರು ಯೋಚನೆ ಮಾಡಿದ್ದೇ ಬೇರೆ. ಅಣ್ಣಾನ ಪ್ರವೇಶವಾಗುವ ವರೆಗೆ ರಾಳೇಗಣಸಿದ್ಧಿ ಬಡತನ, ಅನಕ್ಷರತೆ, ಮೂಢನಂಬಿಕೆಗಳಿಂದ ಕೂಡಿದ ದೇಶದ ಸಾವಿರಾರು ಗ್ರಾಮಗಳಲ್ಲಿ ಒಂದಾಗಿತ್ತು. ಇಂದು ಅದು ಕಳ್ಳರು, ಕುಡುಕರು, ಭ್ರಷ್ಟರು, ಸೋಮಾರಿಗಳು, ಅನಕ್ಷರಸ್ಥರು ಇಲ್ಲದ ಆದರ್ಶ ಗ್ರಾಮ. ಮದುವೆ ಬೇಡ, ಕುಟುಂಬ ಬೇಡ ಎಂದು ಭೌತಿಕ ಜಗತ್ತಿನ ಎಲ್ಲ ಸುಖಗಳನ್ನು ತೊರೆದು ಗ್ರಾಮ ಸುಧಾರಣೆಗೆ 38ನೇ ವಯಸ್ಸಿನಲ್ಲಿ ತಮ್ಮನ್ನು ಅರ್ಪಿಸಿಕೊಂಡಾಗ ಮುಂದೊಂದು ದಿನ ಇಷ್ಟೊಂದು ಖ್ಯಾತಿ ಪಡೆಯಲಿದ್ದೇನೆ ಎಂದು ಅಣ್ಣಾ ಅವರಿಗೆ ಖಂಡಿತ ತಿಳಿದಿರಲಿಕ್ಕಿಲ್ಲ.
ಸ್ವಾರ್ಥವಿಲ್ಲದೆ, ಪ್ರತಿಫಲದ ಅಪೇಕ್ಷೆ ಇಲ್ಲದೆ ಅವರು ಕೆಲಸ ಮಾಡಿದರು. ನೇರ ನಡೆ-ನುಡಿಯ ಮೇಲೆ ನಂಬಿಕೆ ಇಟ್ಟು ಬದುಕಿದರು.
ನಿಜವಾದ ಅಣ್ಣಾ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಇರಲಿಲ್ಲ, ಅವರು ರಾಳೇಗಣ ಸಿದ್ಧಿಯ ಮನೆ ಮನೆಗಳಲ್ಲಿದ್ದಾರೆ. ಆ ಅಣ್ಣಾನನ್ನು ಬಿಟ್ಟು ಈ ಅಣ್ಣಾನನ್ನು ನೋಡಲಾಗುವುದೇ ಇಲ್ಲ, ನೋಡುವುದು ಸರಿಯೂ ಅಲ್ಲ. ಯುವಜನತೆ ಆದರ್ಶ ಎಂದು ಸ್ವೀಕರಿಸಬೇಕಾಗಿರುವುದು ಮತ್ತು ಕಾಯಾ, ವಾಚಾ ಮನಸಾ ಅನುಸರಿಸಬೇಕಾಗಿರುವುದು ಕೇವಲ ರಾಮಲೀಲಾ ಮೈದಾನದ ಅಣ್ಣಾನನ್ನಲ್ಲ. ಅದಕ್ಕಿಂತಲೂ ಮುಖ್ಯವಾಗಿ ರಾಳೇಗಣಸಿದ್ಧಿಯ ಅಣ್ಣಾನನ್ನು. ಇಳಿ ವಯಸ್ಸಿನಲ್ಲಿ ಮಕ್ಕಳ ಮುಖ ನೋಡಲು ಹಲುಬುತ್ತಿರುವ ರಾಂಪಣ್ಣನಂತಹವರು ಕೂಡಾ ಬಯಸುತ್ತಿರುವುದು ಇದನ್ನೇ. ರಾಮಲೀಲಾ ಮೈದಾನದ ಅಣ್ಣಾ ಅವರನ್ನು ಅನುಸರಿಸಿದವರು ಕತ್ತಲ ಹೊತ್ತಿನಲ್ಲಿ ರಸ್ತೆಬದಿ ಕ್ಯಾಂಡಲ್ ಹಚ್ಚಿ ಟಿವಿ ಪರದೆ ಮೇಲೆ ಕಾಣಿಸಿಕೊಳುತ್ತಾರೆ, ರಾಳೇಗಣಸಿದ್ಧಿಯ ಅಣ್ಣಾ ಅವರನ್ನು ಆದರ್ಶ ಎಂದು ಸ್ವೀಕರಿಸಿದವರು ಕತ್ತಲು ತುಂಬಿರುವ ಹಳ್ಳಿಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಬೆಳಕು ನೀಡುತ್ತಿರುವ ಹರೀಶ್ ಹಂದೆಯಂತಹವರಾಗುತ್ತಾರೆ. ನಮಗೆ ಬೇಕಾಗಿರುವುದು ಕ್ಯಾಂಡಲ್‌ವಾಲಾಗಳಲ್ಲ, ಹರೀಶ್ ಹಂದೆಯಂತಹವರು, ಅಲ್ಲವೇ?